ತಬ್ಬಲಿಯು ನೀನಾದೆ ಮಗನೆ: ಹೀಗೊಂದು ಮೆಲುಕು

TABBALIYU-NEENAADE-MAGANE (1)‘ತಬ್ಬಲಿಯು ನೀನಾದೆ ಮಗನೆ’, ಈ ಸಲ ಬೆಂಗಳೂರಿಗೆ ಹೋದಾಗ ತಂದ ಡಿವಿಡಿಗಳಲ್ಲಿ ಅದೂ ಒಂದು. ನಸೀರುದ್ದೀನ್ ಷಹಾ(ಶಾಸ್ತ್ರಿ)ನ ಪ್ರಬುದ್ಧ ನಟನೆ, ದಟ್ಟವಾದ ಚಿತ್ರಕತೆ, ಸಿನಿಮೀಯತೆಯಿಲ್ಲದ controlled ನಿರ್ದೇಶನ ಮತ್ತು ಸಂಕೀರ್ಣ ಕತೆ – ಮತ್ತೆ ನಮ್ಮನ್ನು ಅಂದಿನ ಕನ್ನಡದ ಸುಂದರ ಚಿತ್ರಗಳ ಕಾಲಕ್ಕೆ ಕರೆದುಕೊಂಡು ಹೋಗುತ್ತವೆ.

ಶಿಕ್ಶ್ಷಿತ-ಪಾಶ್ಚ್ಯಾತ್ಯ-ಆಧುನಿಕ-ಬಂಡವಾಳಶಾಹಿತನ ಮತ್ತು ಅಶಿಕ್ಷಿತ-ಭಾರತೀಯ-ಸನಾತನ-ಸಮಾಜವಾದಗಳ ನಡುವಿನ ಸಂಕೀರ್ಣ ತಿಕ್ಕಾಟವೇ ಕತೆಯ ವಸ್ತು. ಚಿತ್ರ ಗೋವಿನ ಹಾಡಿನಿಂದ ಶುರುವಾಗುತ್ತದೆ ಮತ್ತು ಚಿತ್ರದ undercurrent ಸಂಕೇತವೂ ಆಗುತ್ತದೆ.

ಅಮೇರಿಕದಲ್ಲಿ ಓದಿ, ಅಲ್ಲಿಯವಳನ್ನೇ ಮದುವೆಯಾಗಿ, ತನ್ನ ಹಳ್ಳಿಯಲ್ಲಿ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ಧೃಡನಿಶ್ಚಯದಿಂದ ಭಾರತಕ್ಕೆ ನಾಯಕ ಮರಳುತ್ತಾನೆ. ತಂದೆ ಸತ್ತಾಗ ತಲೆ ಬೋಳಿಸಿಕೊಳ್ಳುವುದರಿಂದ ಶುರುವಾಗುವ ಈ ಘರ್ಷಣೆ, ನಾಯಕನ ಹೆಂಡತಿ ಹಳ್ಳಿಗೆ ಬರುವುದು, ನಾಯಕನ ತಾಯಿಯ ಮರಣ, ನಾಯಕನ ಹೆಂಡತಿ ಗೋಮಾಂಸ ತಿನ್ನುವುದು – ಈ ದೃಶ್ಯಗಳಲ್ಲಿ ಬಿಚ್ಹಿಕೊಳ್ಳುತ್ತ, ನಾಯಕನ ಮಗುವಿಗೆ ಹಾಲು ಬೇಕಾಗುವ ದೃಶ್ಯದಲ್ಲಿ ಪರಾಕಾಷ್ಟೆ ತಲುಪುತ್ತದೆ.

ಇದೆಲ್ಲದರಿಂದ ಬೇಸತ್ತು, ಹಳ್ಳಿಯನ್ನು ಬಿಟ್ಟು ಮರಳಿ ಅಮೇರಿಕಕ್ಕೆ ಹೋಗುವ ನಿರ್ಧಾರ ಮಾಡುತ್ತಾನೆ ನಾಯಕ. ಅಂತ್ಯದಲ್ಲಿ, ಮರಳಿ ಮಣ್ಣಿಗೆ ಮರಳುವ ನಿಶ್ಚಯದಿಂದ ತನ್ನ ಮಾರಿದ ಗೋವುಗಳನ್ನು ಗುರುತಿಸಲಾಗದೇ ಗೋವಿಗಳ ಹೆಸರುಗಳನ್ನು ಕೂಗುವ ವ್ಯರ್ಥ ಪ್ರಯತ್ನದಲ್ಲಿ ಚಿತ್ರ ಮುಗಿಯುತ್ತದೆ. ಗೋವಿನ ಹಾಡಿನಲ್ಲಿ ಗೊಲ್ಲ ಕೂಗಿದರೆ ಎಲ್ಲ ಹಸುಗಳೂ ಬಂದು ನಿಲ್ಲುತ್ತವೆ, ಇಲ್ಲಿ ನಾಯಕನಿಗೆ ತನ್ನ ಹಸುಗಳು ಯಾವುವು, ಅವುಗಳ ಹಿಸರು ಗೊತ್ತಿಲ್ಲ, ಸುಮ್ಮನೇ ‘ಗಂಗೇ, ತುಂಗೇ…’ ಎಂದು ಕೂಗುತ್ತಾನೆ; ಚಿತ್ರದ ಆರಂಭದ ಗೋವಿನ ಹಾಡು, ಚಿತ್ರದ ಅಂತ್ಯದಲ್ಲಿ ಸಫಲಗೊಳ್ಳುತ್ತದೆ.

ನಾನಿಲ್ಲಿ ಈ ಚಿತ್ರವನ್ನು ಕಾದಂಬರಿಯ ಜೊತೆ ಹೋಲಿಸಿ ನೋಡುವುದಿಲ್ಲ. ಬಹುಷಃ ಚಿತ್ರ ಕಾದಂಬರಿಗಿಂತ ಹೆಚ್ಚು ದಟ್ಟವಾಗಿದೆ, ಸಂಕೀರ್ಣವಾಗಿದೆ. ಚಿತ್ರದ ನಿರ್ದೇಶನ ತುಂಬ ಸಂಯಮದಿಂದ ಪ್ರಬುದ್ಧವಾಗುತ್ತ ಸಾಗುತ್ತದೆ. ಸಂಕಲನ, ಸಂಗೀತ ಅಷ್ಟಕ್ಕಷ್ಟೇ. ಚಿತ್ರದ ನಾಯಕನ ಹೊಸ ಮನೆ ಕೃತಕವಾಗಿ ಕಂಡರೂ, ಭಾರತದ ಹಳ್ಳಿಯಲ್ಲಿ ಪಶ್ಚಿಮದ ಆಧುನಿಕತೆಯನ್ನು ತರಲು ಹೆಣಗುವ ನಾಯಕನ ಮನಸ್ಥಿತಿಯ ಕನ್ನಡಿಯಂತಿದೆ.

ಹಳ್ಳಿಯ ಹೊರಾಂಗಣ ಚಿತ್ರಣದಲ್ಲಿ ಎಲ್ಲೂ ಹಳ್ಳಿಯ ಅಥವಾ ನಿಸರ್ಗದ romantisism ಇಲ್ಲ; ಬದಲಿಗೆ ಹಳ್ಳಿಯ ದಾರಿದ್ರ್ಯ, ಬಿಸಿಲಿನ ಬೇಗೆ ಕಣ್ಣಿಗೆ ರಾಚುತ್ತದೆ. ಚಿತ್ರದ ಮಾತುಗಳು ಚಿತ್ರದ ಶಕ್ತಿ: ಶಾಸ್ತ್ರಿ ಮತ್ತು ನಾಯಕನ ಮಾತುಗಳಲ್ಲೇ ಭಾರತೀಯತೆ-ಪಾಶ್ಚ್ಯಾತತೆ, ಸಂಪ್ರದಾಯ-ನವ್ಯತೆ, ಸಮಾಜವಾದ-ಬಂಡವಾಳಶಾಹಿ, ಸನಾತನತೆ-ಆಧುನಿಕತೆಗಳ ಗೊಂದಲ, ಘರ್ಷಣೆಗಳ ಜೊತೆಜೊತೆಗೆ ಮನುಷ್ಯ ಸಹಜವಾದ ಈರ್ಷೆ, ದ್ವೇಷ, ಸ್ನೇಹ, ಮಾನವೀಯತೆಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ.

ನಸೀರುದ್ದೀನ್ ಷಹಾ ಶಾಸ್ತ್ರಿಯ ಎಲ್ಲ ಗುಣಗಳನ್ನೂ, ಒಂಚೂರೂ ಸಿನಿಮೀಯತೆಯಿಲ್ಲದೇ ನಟಿಸುತ್ತಾನೆ, ಅಷ್ಟೇ ಚೆನ್ನಾಗಿ ಸುಂದರಕೃಷ್ಣ ಅರಸ್ ಧ್ವನಿ ಕೊಟ್ಟಿದಾನೆ. ಮಾನು ಕೆಲವೊಮ್ಮೆ ಎಡವಿದ್ದಾನೆ; ಸುಂದರರಾಜ್ ಪಾತ್ರ ಸ್ವಲ್ಪ loud ಆಯಿತು; ನಾಯಕನ ತಾಯಿಯ ಪಾತ್ರ ಮೂಕತನದಲ್ಲಿ ಮೂಲ ಕಾದಂಬರಿಯಂತೆ ಇದ್ದರೂ, ಕೃತಕವೆನಿಸುತ್ತದೆ; ನಾಯಕನ ಹೆಂಡತಿಯ ಪಾತ್ರ overall OK, ಆದರೆ ಇನ್ನೂ ಜೀವವಿರಬೇಕಿತ್ತು.ಛಾಯಗ್ರಹಣ ಚಿತ್ರಕ್ಕೆ ತುಂಬ ಪೂರಕವಾಗಿದೆ.

ಚಿತ್ರ ನಾಯಕ ಹಳ್ಳಿಯನ್ನು ಬಿಡುವ ನಿರ್ಧಾರ ಮಾಡುವವರೆಗೂ ವಾಸ್ತವಿಕವಾಗಿದೆ, ಅಲ್ಲಿಂದ ಮುಂದೆ ಕತೆ ಇದ್ದಕ್ಕಿದ್ದಂತೆ ಕೃತಕವಾಗಿತ್ತದೆ; ಆದರ್ಶೀಕರಣದತ್ತ, ಭಾರತೀಯತೆಯ ‘ವಿಜಯ (?)’ದತ್ತ ಸಾಗುತ್ತದೆ. ನನ್ನ ದೃಷ್ಟಿಯಲ್ಲಿ ನಾಯಕ ತಬ್ಬಲಿಯಾಗುವುದು ನಿಜ, ಆದರೆ ಚಿತ್ರದಲ್ಲಿರುವ ಹಾಗಲ್ಲ. ವಾಸ್ತವಿಕವಾಗಿ ನೋಡಿದರೆ ನಾಯಕನ ಸ್ಥಿತಿಯಲ್ಲಿ ಯಾರೂ ಹಳ್ಳಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ, ನಾಯಕನ ಹೆಂಡತಿಗಂತೂ ಅಸಾಧ್ಯ.

ನನ್ನ ಪ್ರಕಾರ ಚಿತ್ರದ ಅಂತ್ಯ: ಚಿತ್ರ/ ಕಾದಂಬರಿಯಲ್ಲಿ ನಡೆಯುವಂತೆ ನಾಯಕ-ನಾಯಕನ ಹೆಂಡತಿ (ಆಧುನಿಕತೆ-ಪಾಶ್ಚ್ಯಾತ್ಯ-ಶಿಕ್ಷಿತ) ತಮ್ಮ ಮಗುವಿಗಾಗಿ ಗೋವಿನ ಕೆಚ್ಚಲನ್ನು ಹುಡುಕಿಕೊಂಡು ಹೋಗುವುದಿಲ್ಲ (this scene is extremely unnatural unscientific) ಮತ್ತು ಹಳ್ಳಿ (ಸನಾತನ-ಭಾರತೀಯತೆ-ಮೌಢ್ಯ)ಗರ ಮುಂದೆ ಸೋಲನ್ನೂ ಒಪ್ಪಿಕೊಳ್ಳುವುದಿಲ್ಲ. ಆದರೆ ತನ್ನ ಆಸ್ಠಿಯನ್ನೆಲ್ಲ ಮಾರುವ ನಿರ್ಧಾರ ಮಾಡುತ್ತಾನೆ. ನಾಯಕಿಗೆ ದಿನ ಕಳೆದಂತೆ ಇದೆಲ್ಲ ಅಸಹನೀಯವಾಗುತ್ತದೆ. ಆಕೆ ನಾಯಕನನ್ನು ತೊರೆದು (divorce) ಮರಳಿ ಅಮೇರಿಕಕ್ಕೆ ಹೋಗುತ್ತಾಳೆ; ಹಳ್ಳಿಯ ಜನ ಇದು ತಮ್ಮ ವಿಜಯವೆಂದುಕೊಂಡು ನಾಯಕನಿಗೆ ಹಳ್ಳಿಯಲ್ಲಿ ಉಳಿಯಲು ಅಂಗಲಾಚುತ್ತಿರುವಾಗ ನಾಯಕ ಹಳ್ಳಿಯನ್ನು ತೊರೆದು ಹೋಗುವ ದೃಶ್ಯದಲ್ಲಿ ಚಿತ್ರ ಮುಗಿಯುತ್ತದೆ. ನಾಯಕ, ನಾಯಕನ ಹೆಂಡತಿ-ಮಗು ಮತ್ತು ಹಳ್ಳಿ, ಮೂವರೂ ತಬ್ಬಲಿಗಳಾಗುತ್ತಾರೆ. ನೀವೇನೆನ್ನುತೀರಿ?

3 thoughts on “ತಬ್ಬಲಿಯು ನೀನಾದೆ ಮಗನೆ: ಹೀಗೊಂದು ಮೆಲುಕು

  1. ಹಳೆಯ ಚಲನಚಿತ್ರದ ವಿಮರ್ಶೆ ಚೆನ್ನಾಗಿದೆ.
    ೪೦ ವರ್ಷಗಳ ಹಿಂದೆ ಬರೆದ ಕತೆಯಲ್ಲಿ ಮತ್ತು ಅದನ್ನಾದರಿಸಿದ ಚಲನಚಿತ್ರದಲ್ಲಿ ಇವತ್ತು ಹಲವು ಕುಂದುಗಳನ್ನು ಕಾಣಬಹುದು.ಪುಸ್ತಕಗಳನ್ನು ಓದುವಾಗ ಕೂಡ ಕಾಲದ ಕ್ರಮದಲ್ಲಿ ಆದ ಬದಲಾವಣೆಗಳು, ಆ ಕೃತಿಯ ಕೆಲವು ಆಯಾಮಗಳನ್ನು ಮೊಟಕುಗೊಳಿಸುತ್ತವೆ. ಎಲ್ಲ ಕಾಲನ ಮಹಿಮೆ!!!
    ಇದೇ ರೀತಿ ಇತ್ತೀಚೆಗೆ ನಾವು ತಂದು ವೀಕ್ಶಿಸಿದ ಬೆಟ್ಟದ ಜೀವ, ಗ್ರಹಣ, ಗುಲಾಬಿ ಟಾಕೀಸು ಇತ್ಯಾದಿ ಹಲವು ಚಲನಚಿತ್ರಗಳಲ್ಲಿ ಕೂಡ
    ಬದಲಾವಣೆಗಳು ಸೂಕ್ತವೆನಿಸುತ್ತವೆ. ಮೂಲ ಬರಹಗಾರರು,ಚಿತ್ರ ನಿರ್ಮಾಪಕರು ಕೂಡ ಇವತ್ತು ಹಲವು ಬದಲಾವಣೆಗಳನ್ನು ಸೂಚಿಸಬಹುದು!!!
    ಈ ಲೇಖನದ ಮಹತ್ವ ಅಂದರೆ ಆ ಕಾಲದ ಅತ್ಯುತ್ತಮ ಕೃತಿ/ಚಲನಚಿತ್ರವನ್ನು ಮತ್ತೆ ನೆನಪಿಸಿರುವುದು. ಅದರ ವಿಮರ್ಶೆ ಮಾಡಿ ಮತ್ತೆ ಹೊಸ ಗಾಳಿಯನ್ನು ಒತ್ತಿರುವುದು. ಹೊಸ ಅಲೆಯನ್ನು ಎಬ್ಬಿಸಿ ಕ್ರಾಂತಿ ಹುಟ್ಟಿಸಿದ ಪ್ರತಿಭಾವಂತ ಕಲಾಕಾರರ ನೆನಪನ್ನು ಕೆದಕಿರುವುದು. ಕಾಲಾನುಕ್ರಮದಲ್ಲಿ ಹಳೆಯ ಕೃತಿಗಳ ವಿಮರ್ಶೆ ನಡೆಯದಿದ್ದರೆ, ಮುನ್ನೆಡೆಯಿರುವುದಿಲ್ಲ. ಅತ್ಯುತ್ತಮ ಪ್ರಯತ್ನ ಕೇಶವರೆ. ಮತ್ತಷ್ಟು ಬರೆಯಿರಿ.

    Like

  2. ಕೇಶವ್ ಅವರ ಲೇಖನಿಯಿಂದ ಮತ್ತೊಂದು ಆಸಕ್ತಿಪೂರ್ಣವಾದ ಲೇಖನ. ತಬ್ಬಲಿಯು ನೀನಾದೆ ಮಗನೆ ಕಾದಂಬರಿಯ ಹಿನ್ನೆಲೆಯನ್ನು ಭೈರಪ್ಪನವರು ತಮ್ಮ ಆತ್ಮಕಥೆ ಭಿತ್ತಿಯಲ್ಲಿ ವಿವರಿಸುತ್ತಾರೆ. ಗುಜರಾತಿನ ಆನಂದ್ ಪಟ್ಟಣದಲ್ಲಿರುವ ಅಮೂಲ್ ಹಾಲಿನ ಡೈರಿಗೆ ಅವರು ಭೇಟಿಯಿತ್ತ ಸಂದರ್ಭದಲ್ಲಿ, ಅವರು ಅಲ್ಲಿ ಗೋವುಗಳಿಗೆ ನಡೆಸಿದ್ದ ಕೃತಕ ಗರ್ಭಧಾರಣೆಯ ಕ್ರಮಗಳು, ಮತ್ತು ಹಾಲನ್ನು ಹಿಂಡಲು ಬಳಸುತ್ತಿದ್ದ ವಿಧಾನ ಎರಡನ್ನೂ ಕಂಡಾಗ ಅವರ ಮನದಲ್ಲಿ ಎದ್ದ ಭಾವನೆಗಳ ಫಲವೇ “ತಬ್ಬಲಿಯು ನೀನಾದೆ ಮಗನೆ“ ಕಾದಂಬರಿ. ೬೦ ರ ದಶಕದಲ್ಲಿ ಭೈರಪ್ಪನವರ ಬರವಣಿಗೆಯ ಆರಂಭದ ದಿನಗಳಲ್ಲಿ ಬರೆದ ಈ ಕಥೆಯಲ್ಲಿ, ಪಾಶ್ಚಿಮಾತ್ಯ ಮತ್ತು ಸನಾತನ ಭಾರತ ಸಂಸ್ಕೃತಿ ಮತ್ತು ನಂಬಿಕೆಗಳ ತಿಕ್ಕಾಟವನ್ನು ಹೊರತರಲು ನಡೆಸಿರುವ ಪ್ರಯತ್ನ. ಗೋವಿಗೆ ಭಾರತದಲ್ಲಿರುವ ಒಂದು ಅಪೂರ್ವವಾದ ಸ್ಥಾನವನ್ನು ಎತ್ತಿ ಹಿಡಿಯುವ ಪ್ರಯತ್ನ. ಮತ್ತು ಅದಕ್ಕೆದಿರಾದವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಒತ್ತಿ ಹೇಳುವ ಪ್ರಯಾಸ ಇಲ್ಲಿ ಕಂಡು ಬರುತ್ತದೆ. ಚಲನಚಿತ್ರವನ್ನು ೭೦ರ ದಶಕದ ಕೊನೆಯಲ್ಲಿ ತಯಾರಿಸಿದ್ದು, ಆ ಹೊತ್ತಿಗಾಗಲೇ ನಮ್ಮ ದೇಶದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದ ಸಮಯ. ನಮ್ಮ ಕಾಲೇಜಿನ ಆರಂಭದ ದಿನಗಳಲ್ಲಿ ಬಂದ ಈ ಚಿತ್ರವನ್ನು ನಾನು ನೋಡಿದ್ದು, ೨೦೦೦ ಇಸವಿಯ ನಂತರವೇ. ಕೇಶವ ಬರೆದಿರುವಂತೆ, ಚಿತ್ರದ ಅಂತ್ಯ ಸ್ವಲ್ಪ ಅವಾಸ್ತವಿಕ. ಗೋವನ್ನು ಪೂಜಿಸುವ ಸಂಸ್ಕೃತಿಯಲ್ಲಿ ಬೆಳೆದ ನಾಯಕ, ಗೋವನ್ನು ಭಕ್ಷಿಸುವ ಸಮಾಜದ ಹೆಣ್ಣನ್ನು ಮದುವೆಯಾದರೆ, ನಡೇಯಬಹುದಾದ ಅನಾಹುತಗಳನ್ನು ನಿರ್ದೇಶಕ ಕಾರ್ನಾಡರು ಪರಿಣಾಮಕಾರಿಯಾಗಿ ಹೊರತಂದಿದ್ದರೂ ಕೂಡಾ, ಅಲ್ಲಲ್ಲಿ ಎಡವಿದ್ದಾರೆ. ವೆಂಕಟರಮಣ ಶಾಸ್ತ್ರಿಯಾಗಿ ನಾಸಿರುದ್ದೀನರ ಅಭಿನಯ ಚಿತ್ರದ ಜೀವಾಳ. ನಾಯಕಿಗೆ ದೇವಸ್ಥಾನದಲ್ಲಿ ತೀರ್ಥ ಕೊಡುವಾಗ ಆಕೆ ಅದನ್ನು ತೆಗೆದುಕೊಳ್ಳಲು ಹಿಂಜರಿದಾಗ, ಆಕೆಗೆ ಪ್ರಸಾದವನ್ನು ಕೊಡಲು ತಿರಸ್ಕರಿಸುವ ಸನ್ನಿವೇಶವನ್ನು ಬಹಳ ಚೆನ್ನಾಗಿ ಚಿತ್ರೀಕರಿಸಿದ್ದಾರೆ. ಇಲ್ಲಿ ನಂಬಿಕೆಗಳ ತಿಕ್ಕಾಟವನ್ನು ಬಹಳ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಸುಂದರಕೃಷ್ಣ ಅರಸ ಧ್ವನಿ , ನಾಸಿರುದ್ದೀನರಿಗೆ ಚೆನ್ನಾಗಿ ಹೊಂದಿಕೆಯಾಗಿದೆ. ನಾಯಕನ ಪಾತ್ರವನ್ನು ಮಾನುವಿಗೆ ಬದಲಾಗಿ, ಸುಂದರಕೃಷ್ಣ ಅರಸ್ ಮಾಡಿದ್ದರೇ ಚೆನ್ನಾಗಿರುತ್ತಿತ್ತು. ಪೌಲಾ ಲಿಂಡ್ಸೆಯ ಬದಲಾಗಿ, ಅಂದು ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದ, ಶಶಿಕಪೂರ್ ಪತ್ನಿ ದಿ. ಜೆನ್ನಿಫ಼ರ್ ಕಪೂರ್ ಆ ಪಾತ್ರಕ್ಕೆ ಉತ್ತಮ ನ್ಯಾಯ ದೊರಕಿಸುತ್ತಿದ್ದಳು ಎಂದು ನನ್ನ ಅಭಿಪ್ರಾಯ. ಚಿತ್ರಕ್ಕೆ ತಮ್ಮದೇ ಅಂತ್ಯವನ್ನು ಸೂಚಿಸಿರುವ ಕೇಶವ್ ಅವರ ಸಲಹೆ ವಾಸ್ತವತೆಗೆ ಹತ್ತಿರವಾಗಿದೆ. ಒಟ್ಟಾರೆ ಅದೊಂದು ಉತ್ತಮ ಚಿತ್ರವೆನ್ನುವುದರಲ್ಲಿ ಅನುಮಾನವೇ ಇಲ್ಲಾ. ಅಂದು ಭೈರಪ್ಪನವರ ಕಾದಂಬರಿಗಳನ್ನು ಚಲನಚಿತ್ರಗಳಾಗಿ ಚಿತ್ರಿಸಿ, ನಿರ್ದೇಶಿಸಿ, ನಟಿಸಿಯೂ ಇದ್ದ ಕಾರ್ನಾಡರು, ಇಂದು ಭೈರಪ್ಪನವರ ಕಡು ವಿರೋಧಿ ! ವ್ಯಕ್ತಿತ್ವಗಳ ಸಂಘರ್ಷಣೆ! ಕೇಶವ್ ಉತ್ತಮ ಚಲನ ಚಿತ್ರದ ನೆನಪನ್ನು ಮತ್ತೊಮ್ಮೆ ನಮಗಿತ್ತದ್ದಕ್ಕೆ ಧನ್ಯವಾದಗಳು. ನಿಮ್ಮ ವಿಮರ್ಷೆಯೂ ಸುಂದರವಾಗಿದೆ.
    ಉಮಾ ವೆಂಕಟೇಶ್

    Like

  3. Keshavarige namadkargalu. Neevu yee chitrapatada vimarshavannu odida mele navellaru nodale beku yendi anisuttide. Nimage yinnondu beradu
    Kodalu icchisuve. Top Film critic! Yekendare
    Neevu chitrisida pratiyondu vishay samalochane yinda vadagudide. Shubhashayagalu. Namma KSSVV yalli vividh , nipuNa vyaktigaLinda yinnu hechige pragatyaguvadaralli sandehavilla.
    Aravind

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.