ಈ ವಾರ ನಿಮ್ಮೆದುರು ಅನಿವಾಸಿಗಳಿಗೆ ಈಗಾಗಲೇ ಪರಿಚಯವಿರುವ ಇಬ್ಬರು ಕವಿಗಳ ಕವನಗಳು. ಇಬ್ಬರೂ ಪ್ರತಿಭಾವಂತರು, ಭಾವುಕರು. ಇವರ ಹೆಚ್ಚಿನ ಪರಿಚಯ ಅನಿವಾಸಿ ವೇದಿಕೆಯ ಓದುಗರಿಗೆ ಬೇಕಿಲ್ಲ. ರಾಮ ಮಂದಿರದಲ್ಲಿ ಶ್ರೀ ರಾಮನ ಪ್ರಾಣಪ್ರತಿಷ್ಠೆಯಾಗಿ ಸುಮಾರು ನಾಲ್ಕು ವಾರಗಳಾದವು. ಯಾವುದೇ ದೃಷ್ಟಿಕೋನದಿಂದ ನೋಡಿದರೂ ಇದೊಂದು ಐತಿಹಾಸಿಕ ಘಟನೆ. ಅನಿವಾಸಿಯಲ್ಲಿ ಈ ಬಗ್ಗೆ ಯಾವುದೇ ಕವನ, ಲೇಖನ ಪ್ರಕಟಣೆಯಾಗಿಲ್ಲ. ಗುರುಪ್ರಸಾದ್ ಪಟ್ವಾಲ್ ನನಗೆ ಖಾಸಗಿಯಾಗಿ ಈ ವಿಷಯದ ಬಗ್ಗೆ ತಾವು ಬರೆದ ಕವನ ಹಂಚಿಕೊಂಡಿದ್ದರು. ಇದನ್ನು ಯಾವುದೇ ವಿಚಾರಧಾರೆಯ ದೃಷ್ಟಿಯಿಂದ ನೋಡದೆ, ಆಧ್ಯಾತ್ಮಿಕವಾಗಿ ಅವಲೋಕಿಸಿದಾಗ ಕವಿಯ ಒಳಮನಸ್ಸನ್ನು ಹೊಕ್ಕಲು ಸಾಧ್ಯವೆಂದೆಣಿಸುತ್ತೇನೆ. ಯಕ್ಷಗಾನ ಕಲಾವಿದರಾದ ಗುರು ಅವರ ಕವನದಲ್ಲೂ ನಾಟ್ಯದಂತೆ ಭಾವ, ಸಂಕೇತಗಳು, ಯಕ್ಷಗಾನದ ಪದಗಳಲ್ಲಿ ಬಳಸುವ ಶಬ್ದಗಳು ಪ್ರತಿಫಲಿಸುವುದು ವಿಶೇಷ.
ಭಣಭಣವಾಗಿರುವ ಮರ-ಗಿಡಗಳಲ್ಲಿ ಒಂದೆರಡು ವಾರಗಳಿಂದ ಏನೋ ಚೇತರಿಕೆ ಕಾಣುತ್ತಿದೆ. ಹೆಪ್ಪುಗಟ್ಟಿದ ಭೂಮಿಯೊಡೆದು ಕ್ರೋಕಸ್ ಹೂವುಗಳು ಅರಳುತ್ತಾ ಓಕುಳಿ ಆಟವನ್ನು ಪ್ರಾರಂಭಿಸಿವೆ. ಚಳಿಗಾಲದ ಖಿನ್ನತೆಯನ್ನು ನೀಗಲು ಮೃದು ಮನದ, ಬೆಚ್ಚನೆ ಹಿತ ಕೊಡುವ ಜೀವಗಳೊಡನೆ ಸಂಭಾಷಣೆಯ ಅವಕಾಶ ಅಗತ್ಯವಲ್ಲವೇ? ವಿಜಯನರಸಿಂಹ ತಮ್ಮ ಕವನದಲ್ಲಿ ಅರಳಿರುವ ಪುಷ್ಪಗಳೊಡನೆ ಸಂವಾದಿಸಿ, ಅದೆಷ್ಟೋ ವಿಷಯಗಳನ್ನು ಹಂಚಿ, ಮನ ಹಗುರ ಮಾಡಿಕೊಳ್ಳುವ ತವಕವನ್ನು ಮೌನವಾಗಿಯೇ ತೆರೆದಿಟ್ಟಿದ್ದಾರೆ.
ರಾಮ ರಾಮ
ಈ ಭವ್ಯ ರಾಮ ಮಂದಿರ
ಬೇಕೆಂದನೆ ಆ ದಿವ್ಯ ರಾಮ ಚಂದಿರ
ಮನೆ ಮನೆಯಲ್ಲೂ ನಾನಿರುವೆನೆಂದ ಮನ ಮನದಲ್ಲೂ ನಾ ನಗುವೆನೆಂದ ಮನೆಗೊಂದು ಇಟ್ಟಿಗೆ ಕಂಭ ಕೇಳ್ದನೇ ಮನದೊಳಗೆ ಇದ ನೋಡಿ ನಕ್ಕನೇ
ಅಮ್ಮ ನೊಂದ ಮಾತಿಗೆ ರಾಜ್ಯ ಕೊಟ್ಟ ಅಗಸನೆಂದ ನೀತಿಗೆ ಹೆಂಡತಿ ಬಿಟ್ಟ ರಹೀಮನಿಗೆಂದು ಬಿಟ್ಟ ಸ್ಥಾನ ಕೇಳ್ದನೇ ಮನದೊಳಗೆ ಇದ ನೋಡಿ ನಕ್ಕನೇ
ಕಾವಿ ಕೇಸರಿ ದರ್ಪದಿ ಆವನೆಂದೂ ಉಡಲಿಲ್ಲ ಭಸ್ಮ ಕುಂಕುಮಾದಿ ಹಣೆಯಲ್ಲಿ ಧರಿಸಿಲ್ಲ ಈ ವೇಷ ಈ ರೋಷ ಅವ ಕೇಳ್ದನೇ ಮನದೊಳಗೆ ಇದ ನೋಡಿ ನಕ್ಕನೇ
ಡಾ. ಗುರುಪ್ರಸಾದ್ ಪಟ್ವಾಲ್
——————————————————————————————————————–
ಆನಂದದ ಬೇನೆ
ನನ್ನ ಕಣ್ ಹೃನ್ಮನಗಳನು ಸೂಜಿಗಲ್ಲಿನಂತೆ ಸೆಳೆಯುವ ಸುಂದರ ಸುಮಗಳೇ
(ಚಿತ್ರಕೃಪೆ: ವಿಜಯನರಸಿಂಹ)
ನಿಮ್ಮನು ದಿನವೂ ನೋಡುತಿರುವಾಸೆ
ನಿಮ್ಮೊಂದಿಗೆ ದಿನವೂ ಮಾತಾಡುವಾಸೆ
ನನ್ನ ನಿತ್ಯದ ಆಗು ಹೋಗುಗಳನು ನಿಮಗೆ ಹೇಳುವಾಸೆ
ನನ್ನ ಇಷ್ಟ ಕಷ್ಟಗಳನು ನಿಮಗೆ ತಿಳಿಸುವಾಸೆ
ನನ್ನ ಸುಖ ದುಃಖಗಳನು ಹಂಚಿಕೊಳುವಾಸೆ
ನನ್ನ ಪ್ರತಿಯೊಂದು ನಿರ್ಧಾರದ ಪರಿಣಾಮಗಳನು ಕಡೆಯುವಾಸೆ
ನನ್ನ ಚಿಂತೆಗಳ ಕಾರಣಗಳನು ನಿಮ್ಮೊಂದಿಗೆ ಮಂಥಿಸುವಾಸೆ
ನನ್ನ ಸುತ್ತಲಿನ ಜಗದ ಜನರ ಕುಟಿಲತೆಯನ್ನು ಕುಟುಕುವಾಸೆ
ನನ್ನೊಳಗಿನ ಎಲ್ಲ ಭಾವಗಳನು ತಿಳಿನೀರಿನ ಕೊಳದ ರೀತಿ ನಿಮಗೆ ತೋರುವಾಸೆ
(ಚಿತ್ರಕೃಪೆ: ರಾಮ್)
ನನ್ನ ತಪ್ಪುಗಳನು ತಿದ್ದಿಕೊಳುವ ಬಗೆಗಳನು ನಿಮ್ಮಿಂದ ಕೇಳುವಾಸೆ
ನನ್ನ ಭೂತ, ವರ್ತಮಾನ, ಭವಿತವ್ಯಗಳನು ತೆರೆದಿಡುವಾಸೆ
ಆದರೆ ನಿಮ್ಮ ಸುಂದರ ನಗೆ ಮೊಗಗಳು ನನ್ನನ್ನು ಮೂಕನಾಗಿಸಿಬಿಡುತ್ತವೆ
ಕಳೆದೆರೆಡು ವಾರಗಳಿಂದ ಶುರುವಾದ ಅನಿವಾಸಿಯಲ್ಲಿ ಕವನಗಳ ಸುರಿಮಳೆ ಇನ್ನೂ ನಿಲ್ಲುವ ಹಾಗೆ ಕಾಣುತ್ತಿಲ್ಲ. ಈ ವಾರವೂ ಕೂಡ ಇತ್ತೀಚೆ ಜರುಗಿದ ಅನಿವಾಸಿ ವೈದ್ಯ ಕವಿಗೋಷ್ಠಿಯ ಎರಡು ಕವನಗಳಿವೆ; ಅದಕ್ಕೆ ಪೂರಕವಾಗಿ ನಾನು ಅನುವಾದಿಸಿದ ಕವನವನ್ನೂ ಪ್ರಕಟಿಸುತ್ತಿದ್ದೇನೆ. ಜೊತೆಗೆ ತುಂಬ ದಿನಗಳಾದ ಮೇಲೆ ಮತ್ತೆ ಪ್ರೇಮಲತ ಅವರು ಅನಿವಾಸಿಗೆ ಕವನವೊಂದನ್ನು ಕಳಿಸಿದ್ದಾರೆ. ಪ್ರತಿಕ್ರಿಯೆಗಳನ್ನು ಮಾತ್ರ ಮರೆಯಬೇಡಿ. – ಕೇಶವ
ಇದು ತರವೇ? – ಡಾ ಪ್ರೇಮಲತ
ಕನ್ನಡ ಸಾಹಿತ್ಯದಲ್ಲಿ ದಿಟ್ಟವಾದ ಹೆಜ್ಜೆಗುರುತು ಮೂಡಿಸಿದ ಕೆಲವೇ ಕೆಲವು ಅನಿವಾಸಿ ಕನ್ನಡಿಗರಲ್ಲಿ ಡಾ ಪ್ರೇಮಲತ ಮುಖ್ಯವಾಗಿ ಕಾಣುತ್ತಾರೆ. ಯು ಕೆ ಯಲ್ಲಿದ್ದು ಕಥಾಸಂಕಲನಗಳನ್ನು ಪ್ರಕಟಿಸಿದವರು ಇವರೊಬ್ಬರೆ. ಇವರು ಬರೆಯುವ ಕವಿತೆಗಳು ತುಂಬ ಉತ್ಕಟ, ಒಂದೇ ಉಸುರಿಗೆ ಬರೆದಂತೆ ಇರುತ್ತವೆ, ಹೊಸ ಪ್ರತಿಮೆಗಳನ್ನು ಹಠಾತ್ತಾಗಿ ತರುತ್ತಾರೆ, ಹಳೆಯ ಪ್ರತಿಮೆಗಳನ್ನು ಒಡೆಯುತ್ತಾರೆ. ಅವರ ಕವನ ಸಂಕಲನವೊಂದು ಬೇಗ ಬರಲಿ ಎಂದು ಹಾರೈಸುತ್ತ, ಅವರ ಒಂದು ಕವಿತೆ ನಿಮ್ಮ ಓದಿಗೆ.
ಚಿತ್ರರಚನೆ: ಸಂಪಾದಕರ ಆದೇಶದ ಮೇಲೆ ಕೃತಕ ಬುದ್ಧಿಮತ್ತೆ ರಚಿಸಿದ್ದು
ಯಾವಾಗ.. ಯಾಕೆ.. ಹುಟ್ಟಿತೋ ಪ್ರೀತಿ ಇವನಿಗೆಂದು ಎಲ್ಲಿ ಹುದುಗಿತ್ತೋ ತಿಳಿದಿದ್ದರೆ ಮನ ಬರಿದುಮಾಡಿಕೊಂಡೇ ಭೇಟಿ ಮಾಡುತ್ತಿದ್ದೆ
ಹಗಲು, ರಾತ್ರಿ ಕಣ್ಣೆವೆ ಬಿಚ್ಚಿಕೊಂಡೇ ಕಾಣುವ ಕನಸುಗಳಲಿ ಇವನು ತುಂಬಿಕೊಳ್ಳುವನೆಂದು ಗೊತ್ತಿದ್ದರೆ ಕಟ್ಟಿಹಾಕಿ, ಹೊರದೂಡಲು ಅನುವಾಗುತ್ತಿದ್ದೆ
ಹೃದಯ ಕಂಗೆಡಿಸಿರುವ ಮರುಳ ಮನಸಿನ ಪ್ರೀತಿ ನನ್ನಲಿ ಮಾತ್ರ ಮನೆಮಾಡಿ, ಇಡಿಯಾಗಿ ದಹಿಸಿ ಇವನ ಹಾಯಾಗಿರಲು ಬಿಡುವುದಾದರೂ ತರವೇ?
ಎದುರಿಲ್ಲದೆ, ಕೈಗೆ ಸಿಗದೆ, ಮೈ ಹಿಂಡುವ ಇವನ ಮನಕೂ ನನ್ನಂಥದೇ ಬಾಣ ತಗುಲಿ ಘಾಸಿಯಾಗಲಿ ಎಂದು ಬಯಸಿ, ದೀಪ ಹಚ್ಚಿಡಬಹುದೇ?
ಬರುವಾಗ ಬರಲೇನೆಂದು ಕೇಳಿ ಬರಲಿಲ್ಲ ಹಿಂತಿರುಗಿಬಿಡೆಂದರೆ ಕೇಳುವುದೂ ಇಲ್ಲ ಈ ಪ್ರೀತಿಯ ಹೊರದಬ್ಬಲು ನನ್ನ ತರ್ಕಕೆ ಶಕ್ತಿಯಿಲ್ಲ
ಈ ವಾರದ ಅನಿವಾಸಿಯಲ್ಲಿ ಡಾ. ಗುರುಪ್ರಸಾದ್ ಪಟ್ವಾಲ್ ಬರೆದ, ಪ್ರಾಸಬದ್ಧವಾದ, ನವೋದಯ ಕಾಲದ ಕವನಗಳನ್ನು ನೆನಪಿಸುವ ಅನಿವಾಸಿಗಳ ಪಾಡಿನ ಕವಿತೆಯಿದೆ. ಡಾ. ಗುರುಪ್ರಸಾದ್ ಅನಿವಾಸಿಗೆ ಹೊಸಬರಲ್ಲ. ವೃತ್ತಿಯಿಂದ ವೈದ್ಯರು, ಪ್ರವೃತ್ತಿಯಿಂದ ಯಕ್ಷಗಾನ ಪ್ರವೀಣರು. ಗಾಯಕರು ಮತ್ತು ನಾಟಕಕಾರರು. ಇನ್ನೂ ಹೀಗೇ ಹೆಚ್ಚು ಹೆಚ್ಚು ಕವನಗಳನ್ನು ಬರೆಯಬೇಕೆಂದು ಆಶಿಸುತ್ತೇನೆ.
ಚಿತ್ರರಚನೆ: ಸಂಪಾದಕರ ಆದೇಶದ ಮೇಲೆ ಕೃತಕ ಬುದ್ಧಿಮತ್ತೆ ರಚಿಸಿದ್ದು
ಮರದ ಕೊಂಬೆಯಲಿ ಕೂತು ಅಣಕಿಸಿದಳಾ ಹಕ್ಕಿ ಇಂಚರದಲೇ ಹೇಳಿದಳು ಮಾತನು ನನ್ನೆದೆಯನು ಕುಕ್ಕಿ ನಿನ್ನನೆಲ್ಲೋ ನೋಡಿಹೆ ನಿಮ್ಮೂರಿಂದಲೇ ನಾ ಬಂದಿಹೆ ಕೇಳಿದಳು ಆ ಸಪ್ತ ಸಾಗರ ನೀ ದಾಟಿ ಬಂದು ಹಂಗಿಸಿದಳು ಅರಿತೆಯಾ ನೀ ಯಾರು ಎಂದು ನಾ ಹಾರಿದೆ ಕಾಳನ್ನರಸಿ ನೀ ಓಡಿದೆ ಏನನ್ನರಸಿ
ತೆಂಗು ಮತ್ತಲಿ ನಲಿದಿದೆ ತೆರೆಯ ಅಲೆಯ ಸಂಗೀತಕೆ ಇಂದಿಗೂ ಅಷ್ಟೇ ಸೊಬಗು ನೋಡುವ ಬವಣೆ ನಿನಗೇತಕೆ ಆಡಿದ ಬಯಲು ಓಡುತ ನಲಿದಿಹ ಗದ್ದೆಯ ಅಂಚು ಕಾಯುತಿದೆ ಬೆಳಕ ಚೆಲ್ಲಲು ಮುಂಗಾರಿನ ಕೋಲ್ಮಿಂಚು ಹಬ್ಬದಿ ಅಪ್ಪನೊಡೆ ಕೊಯ್ದ ಆ ಬತ್ತದ ತೆನೆ ಅಮ್ಮ ಹಾಲಿಟ್ಟು ಮರೆತಳು ಉಕ್ಕಿತು ನೆನೆಪಿನೆ ಕೆನೆ
ಮಂಗ ಬಾಳೆ ಕೀಳಲು ಅಟ್ಟಿದಳಮ್ಮ ಕೂಗಿ ಮಗ ಬಂದರೆ ತಿಂದಾನು ಕಾಯುವಳು ಮಾಗಿ ಅಷ್ಟಮಿಯ ಉಂಡೆಯಿಲ್ಲ ಚೌತಿಗೆ ಕೊಟ್ಟೆ ಕಡಬಿಲ್ಲ ಆ ಮರೆತ ಲೋಕದ ಅವಧಾನಕ್ಕೆ ನಿನಗಿಂದು ಬಿಡುವಿಲ್ಲ ಮನೆ ಮುಂದೆ ನಲಿಯರಿಂದು ಹುಲಿ ವೇಷದ ಗುಂಪು ಸಂಜೆಗೆಂಪಲಿ ನಿನ್ನ ನೆನಪೇ ಅವಳೊಡಲಿನ ತಂಪು
ನಿಮ್ಮೂರಿನ ಮುಂಗಾರಿನ ಹೊನ್ನೀರಲಿ ನೀ ಚಿಗುರಿ ನಿನ್ನೆಲ್ಲಿಗೆ ಕೊಂಡೊಯ್ದಿತೋ ತಿರುಗುವ ಕಾಲದ ಬುಗುರಿ ಇದಾವ ಪಂಜರ ಈ ಮಾಯೆ ನಾನೊಲ್ಲೆ ಇದ ಮುರಿಯೆ ನೀ ಅರಿವೆ ನಾ ನಿನ್ನ ಬಲ್ಲೆ ಇಲ್ಲಿ ನನಗೊಂದು ಮರ ನನಗಾವುದೋ ದೇಶ ಅಲ್ಲಿ ನಿನ್ನೊಲವಿನ ರಂಗಸ್ಥಳ ಕಾದಿದೆ ನಿನ್ನ ಪ್ರವೇಶ
—————————————————————
ಚಳಿಗಾಲದ ಚಿತ್ರಗಳು – ಡಾ ರಾಮಶರಣ ಲಕ್ಷ್ಮೀನಾರಾಯಣ
ಇತ್ತೀಚೆಗೆ ಜರುಗಿದ ಅನಿವಾಸಿ ವೈದ್ಯರ ಕವಿಗೋಷ್ಠಿಯಲ್ಲಿ ಡಾ ರಾಮಶರಣ ಲಕ್ಷ್ಮೀನಾರಾಯಣ ಅವರು ಎರಡು ಕವನಗಳನ್ನು ವಾಚಿಸಿದರು. ಅವುಗಳಲ್ಲಿ ಒಂದು ಕವನ ನಿಮ್ಮ ಓದಿಗೆ. ರಾಮಶರಣ ಅನಿವಾಸಿಯ ಸಕ್ರಿಯ ಸದಸ್ಯರು. ಲೇಖನ ಮತ್ತು ಸಂಘಟನೆಯಲ್ಲಿ ಎತ್ತಿದ ಕೈ. ಆಗಾಗ ಕವನಗಳನ್ನೂ ಬರೆಯುತ್ತಾರೆ. ತುಂಬ ಓದಿಕೊಂಡಿದ್ದಾರೆ ಮತ್ತು ಚಿಂತಕ.
ಚಿತ್ರರಚನೆ: ಸಂಪಾದಕರ ಆದೇಶದ ಮೇಲೆ ಕೃತಕ ಬುದ್ಧಿಮತ್ತೆ ರಚಿಸಿದ್ದು
ಹಸಿರಿಲ್ಲದ ರೆಂಬೆಗಳು, ಕಳೆ ಇಲ್ಲದ ತೋಟಗಳು ಮಂಜಿನ ಹಾದಿಯಲಿ ಕಪ್ಪು ಜಾಕೆಟ್ಟಿನ ಕಂದಮ್ಮಗಳು ಕರ್ಟನ್ ತೆರೆಯದ ಮುಚ್ಚಿದ ಕಿಟಕಿಗಳು ಹಗಲಲ್ಲೇ ದೀಪ ಹತ್ತಿಸಿ-ಹರಿಯುವ ಕಾರುಗಳು
ಇರುಳೆಲ್ಲ ಹಗಲಾಯಿತು ಹಿಮಗನ್ನಡಿಯಲ್ಲಿ ಐಸ್ ರಿಂಕಿನ ಅನುಭವವದು ನೆಲಗನ್ನಡಿಯಲ್ಲಿ ಮಳೆರಾಯನು ಧಾವಿಸುವ ಬಿರುಗಾಳಿಯ ಬೆನ್ನೇರಿ ಎಲ್ಲೆಡೆ ಹಾಹಾಕಾರ ತೊರೆ ನದಿಗಳು ಉಕ್ಕೇರಿ
—————————————————————-
ನೀರುಮುಳುಕ – ಕೇಶವ ಕುಲಕರ್ಣಿ
ಕ್ಯಾಥಲೀನ್ ಜೇಮೀ ಬರೆದಿರುವ ದ ಡಿಪ್ಪರ್ ಎನ್ನುವ ಕವನದ ಭಾವಾನುವಾದದ ಸಣ್ಣ ಪ್ರಯತ್ನ. ಕ್ಯಾಥಲೀನ್ ಜೇಮೀ ಸ್ಕಾಟ್-ಲ್ಯಾಂಡಿನ ಕವಿ. ಡಿಪ್ಪರ್ ಅಥವಾ ನೀರುಮುಳುಕ ನೀರಿನ ಆಸುಪಾಸಿನಲ್ಲೇ ಇರಿವ ಪುಟ್ಟ ಹಕ್ಕಿ. ಕ್ಯಾಥಲೀನ್ ಜೇಮೀ ಅವರು ಈ ಕವನವನ್ನು ಅನುವಾದಿಸಿ ಅನಿವಾಸಿಯಲ್ಲಿ ಪ್ರಕಟಿಸಲು ಅನುಮತಿಯನ್ನು ಕೊಟ್ಟಿದ್ದಾರೆ. ಮೇಲಿನ ಎರಡು ಕವನಗಳಲ್ಲಿ, ಒಂದರಲ್ಲಿ ಹಕ್ಕಿಯಿದೆ, ಇನ್ನೊಂದರಲ್ಲಿ ಚಳಿಗಾಲವಿದೆ. ನಾನು ಆರಿಸಿಕೊಂಡಿರುವ ಈ ಕವನ ಚಳಿಗಾಲದಲ್ಲೂ ಹಾಡುವ ಹಕ್ಕಿಯ ಬಗ್ಗೆ. ಕೆಲವೇ ಸಾಲುಗಳಲ್ಲಿ ಒಂದು ಚಿಕ್ಕ ದೃಶ್ಯವನ್ನೇ ರೂಪಕವಾಗಿಸುವಂಥ ಹತ್ತಾರು ಅರ್ಥಗಳನ್ನು ಹೊಮ್ಮಿಸುವ ಕವನವಿದೆ. ಮೂಲ ಕವಿತೆಯ ಕೊಂಡಿ ಇಲ್ಲಿದೆ: https://www.poetryfoundation.org/poetrymagazine/poems/42188/the-dipper
ಚಿತ್ರರಚನೆ: ಸಂಪಾದಕರ ಆದೇಶದ ಮೇಲೆ ಕೃತಕ ಬುದ್ಧಿಮತ್ತೆ ರಚಿಸಿದ್ದು
ಹೆಪ್ಪುಗಟ್ಟುವಂಥ ಚಳಿಗಾಲ ನಡೆದೆ ದೇವದಾರುಗಳ ಕಾಡಿನಲ್ಲಿ ಕಂಡೆ ಜಲಪಾತದಡಿಯಲ್ಲಿ ಒಂಟಿ ಹಕ್ಕಿ.
ಹಸಿಬಂಡೆ ಮೇಲೆ ಹೊಳೆಯುತ್ತಿತ್ತು ಹುಚ್ಚು ನೀರು ಸೋಕಿದಾಗ ಹೊರ ಹಿಂಡಿತು ಕೊರಳಿಂದ ಮೈಮರೆತಂತೆ ನಿಲ್ಲದ ಗಾನ
ಕೊಟ್ಟೆನೆನಲು ನನ್ನದಲ್ಲದು ಹೇಗೆ ಪುಸಲಾಯಿಸಲಿ ಕೈಗೆ ಸಿಗೆಂದು ಅದಕ್ಕೆ ನೀರನಾಳವೂ ಗೊತ್ತು ನೆಲದ ಮೇಲೆ ನಿಂತು ಕೊರಳೆತ್ತಲೂ