‘ನಿರ್ದಯಿ’- ಶ್ರೀವತ್ಸ ದೇಸಾಯಿಯವರ ಭಾವಗೀತೆ

ಪೀಠಿಕೆ:
ನವರಸಗಳಲ್ಲಿ ಒಂದು ಶೃಂಗಾರ. ಅದರ ಒಂದು ಪ್ರಕಾರ ವಿರಹ ಎನ್ನುತ್ತಾರೆ ಕೆಲವರು.
ಪ್ರೇಮ-ಪ್ರಣಯ ಇದ್ದಲ್ಲಿ ವಿರಹ ಇರಲೇ ಬೇಕಲ್ಲವೆ?
ಇಂಗ್ಲಿಷಿನಲ್ಲಿ ಒಂದು ಮಾತು ಇದೆ: Absence makes the heart grow fonder.
ಅಗಲುವಿಕೆಯಿಂದ ಎದೆ ಇನ್ನೂ ತುಂಬಿ ಬರುತ್ತದೆ, ಅಂತ.

ಈ ಹಾಡಿನ ಸನ್ನಿವೇಶ ಹೀಗಿದೆ:
ಇಲ್ಲಿ ಪ್ರೇಮಿಗಳು ಅಗಲಿದ್ದಾರೆ. ಆಕೆ ದೂರ ಸರಿದಿದ್ದಾಳೆ; ಬಲು ದೂರ. ಆಕೆ ಯಾವ ಊರಿಗೆ ಹೋಗಿರಬಹುದು?
ಆತ ದೂರುತ್ತ ಪ್ರಶ್ನಿಸುತ್ತಾನೆ: ನೀನಲ್ಲವೇ ನಿರ್ದಯಿ?

(ಕನ್ನಡ ಬಳಗ, ಯು.ಕೆ ದ ಯುಗಾದಿ ಸಂಭ್ರಮದಲ್ಲಿ ಬಿಡುಗಡೆಯಾದ ‘ಪ್ರೀತಿಯೆಂಬ ಚುಂಬಕ’ ಧ್ವನಿಮುದ್ರಿಕೆ (CD) ಯಲ್ಲಿ ಕೆಳಗಿನ ಕವನ ಸೇರ್ಪಡೆಯಾಗಿದೆ)

                               -ಶ್ರೀವತ್ಸ ದೇಸಾಯಿ

nirdayi-1

ನಿರ್ದಯಿ

ನಾನಲ್ಲ, ನೀನಲ್ಲವೆ ನಿರ್ದಯಿ?
ನನ್ನನ್ನೇ ನಿನಗಿತ್ತೆ ನನ್ನವಳೆಂದೆಣಿಸಿ
ನನ್ನಲ್ಲೀಗ ಬರೀ ನೆನಪುಗಳ ರಾಶಿ
ನನ್ನ ತಪ್ಪಿದ್ದರೆ ಮರಳಿ ಬಾ ಕ್ಷಮಿಸಿ

ನಿಮ್ಮೂರಲ್ಲಿ ಹುಟ್ಟು-ಸಾವಿಲ್ಲಂತೆ
ಎಲ್ಲೆಲ್ಲೂ ಹಸಿರಂತೆ, ಅದು ನಂದನವಂತೆ
ಅದಕ್ಕೆ ತಾನೆ ನೀನು ನನ್ನನ್ನು ಮರೆತೆ?
ನನ್ನ ಬಳಿಯಿಲ್ಲ ಸತ್ತ ಕನಸುಗಳಿಗೆ ಕೊರತೆ!

ಕೇಳುತಿದೆ ಇಡದ ಹೆಜ್ಜೆಗಳ ಸದ್ದು
ಕಾಡುತಿವೆ ಸತತ ನೆನಪುಗಳು ಎದ್ದು
ಕಳಿಸಿಲ್ವೆ ಹೋದಾಗ ಕೊಟ್ಟು ಮುತ್ತು
ನನ್ನನ್ನಳಿಸಿದ ನೀನಲ್ಲವೆ ನಿರ್ದಯಿ?

-ಶ್ರೀವತ್ಸ ದೇಸಾಯಿ

ನೂರು ನಮನ (✍ವಿಜಯನರಸಿಂಹ ಅವರ ಪ್ರೇಮ ಕವನ )

(ಮಲ್ಲಿಗೆ ಹೂ ಅಂದರೆ ಹೆಣ್ಣುಮಕ್ಕಳಿಗೆ ಪಂಚಪ್ರಾಣ, ಉದ್ದ ಜಡೆ ಇರುವವರು ಬೀಗು-ಜಂಭದಿಂದ ಮುಡಿಯುತ್ತಾರೆ.ಮೋಟ ಜಡೆಯವರು ಅದಕ್ಕೆ ತಕ್ಕಷ್ಟು ಸಣ್ಣದಾದ ಒಂದು ಮೊಳದಷ್ಡೋ ಅಥವಾ ಸ್ವಲ್ಪ ಜಾಸ್ತಿಯೋ ಮುಡಿದು ನಾವೇನೂ ಕಮ್ಮಿ ಇಲ್ಲ ಎಂದು ತೋರ್ಪಡಿಸುತ್ತಾರೆ. ಇದೆಲ್ಲವೂ ಹಬ್ಬದ ದಿನಗಳಂದೋ ಇಲ್ಲವೇ ಮದುವೆ ಸಮಾರಂಭದಂದೋ ನೋಡುವ ಸಾಮಾನ್ಯ ದೃಶ್ಯ.

ಅಂತಹ ಸ್ತ್ರೀ-ಜಟ  ಸೌಂದರ್ಯವರ್ಧಕ  ಮೇರುಸುಮವಾದ ಮಲ್ಲಿಗೆ  ದಂಪತಿಗಳ ಬಾಳಿನಲ್ಲಿ  ನವಿರು ಪ್ರೇಮ ಪರಿಮಳವನ್ನು ಸೂಸುವ ಸುರಸುಮವೂ ಹೌದು. ಇದಕ್ಕೆ ಸಾಕ್ಷಿ ನಮ್ಮೆಲ್ಲರ ಮೆಚ್ಚಿನ ಒಲವಿನ ಕವಿ ಎಂದೇ ಖ್ಯಾತರಾದ ಕೆ.ಎಸ್.ನರಸಿಂಹಸ್ವಾಮಿಯವರ ‘ಮೈಸುರು ಮಲ್ಲಿಗೆ’ ಕೃತಿ.

ಅಂತಹ ದಿವ್ಯ ಮಲ್ಲಿಗೆ ನಮ್ಮೆಲ್ಲರ ಬಾಳಲ್ಲೂ ಆನಂದವನ್ನು ತಂದಿರುತ್ತಾಳೆ. ಅಂತಹದೊಂದು ಪ್ರೇಮಾಂಕುರ ಸಂದರ್ಭದ ಕವಿತೆಯಿದು ‘ನೂರು ನಮನ’. ಇಲ್ಲಿ ಮಲ್ಲಿಗೆಯನ್ನು ಕಟ್ಟಿ ಮಾರವವಳಿಗೆ ನಮನ ಸಲ್ಲಿಸಲೇಬೇಕೆಂದು ಅನಿಸಿತು.)

Mallige_3

ನೂರು ನಮನ

ಮಾಗಿ ಚಳಿಯ ಸಂಜೆಗೊಂದು

ಸಣ್ಣಗೆ ಸುರಿದ ಸೋನೆಯೊಂದು

ರಮ್ಯ ಭಾವಗಳೇಳುತ ಮನದಿ

ಗಮ್ಯ ಗಾಲಿಗಳು ಪಾದ ತಳದಿ

ನಲ್ಲೆಯ ನೋಡುವ ಕಾತರದ ಕಾಟ

ಮಲ್ಲೆಯ ಮಾರುವವಳತ್ತ ಓಟ

 

ಎಲೆಯಡಿಕೆ ಜಿಗಿವ ಕೆಂಪು ಬಾಯಿ

ಸರಸರನೆ ಆಡುವ ಅಳತೆಯ ಕೈ

ಚಿನ್ನದ ಮಲ್ಲೆಯ ಚೆಂದದ ಮಾಲೆ

ತಣ್ಣನೆ ಬಟ್ಟೆಯ ಹೊದಿಸಿ ಮೇಲೆ

ಬರುವವರು ನಿನ್ನ ಮಾಲೀಕರದಾರೊ

ಕೊಂಡು ನಿನ್ನ ಮುಡಿವರು ಯಾರೊ

ನೀನು ನನ್ನ ಬಾಳ ದೊಡ್ಡ ಮಲ್ಲಿಗೆ

ಬೆಳಗು ಅಲ್ಲೂ ಕರೆದೊಯ್ಯುವಲ್ಲಿಗೆ

 

ಪೋಣಿಸುವ ಕೈಗಳಿಗೆ ಜೀವನ

ಮುಡಿದ ಮುಡಿಯಲ್ಲಿ ಚೇತನ

ಸುಮವಯಸ್ಸು ನಿನಗೆರಡೇದಿನ

ಸಮಮನಸ್ಸು ನಿನ್ನದು ಅನುದಿನ

ಕೊಂಡವರೆದೆಗೆ ನೀನು ಸೇತುವೆ

ಪ್ರೀತಿ ಪರಿಮಳವೆರಡನೂ ಸೂಸುವೆ

ನನ್ನ ಮುದ್ದು ಮಲ್ಲಿಗೆ ಎಂದುದು

ಅವಳೆದೆಯ ಭಾವವಂತಹುದು

 

‘ಚೌಕಾಸಿಯೇನಮ್ಮ  ನಿನ್ನಲ್ಲಿ

ನನಗೆರಡು ಮೊಳ ತಾ ಇಲ್ಲಿ’

ಎನುತ ಒಯ್ದೆ ಮನೆಗೆ ಹರುಷದಿ

ಘಮವದೆಂತು ಓಡಿತು ಕ್ಷಣದಿ?

‘ಮಲ್ಲಿಗೆ ತಂದರೇನು ರಾಯರಿಂದು?’

ಎಂದವಳ ಮಾತೇ ಮತ್ತು ತಂದು

ಮಲ್ಲಿಗೆ ಕೊಟ್ಟವಳ ನೆನದು ಮನ

ಸಲ್ಲಿಸಿತು ಇಲ್ಲಿಂದಲೇ ನೂರು ನಮನ

 

✍ವಿಜಯನರಸಿಂಹ

 

(Picture credits to Google &  Dr.Srivatsa Desai)