ಕಿರುಗಥೆಗಳು

ಇತ್ತೀಚಿಗೆ ಕಿರುಗಥೆಗಳ ಸಂಗ್ರಹವೊಂದನ್ನು ಓದುತ್ತಿದ್ದೆ. ಹಿಂದೊಮ್ಮೆ ಅನಿವಾಸಿ ಅಂಗಳದಲ್ಲಿನ ಕಾರ್ಯಕ್ರಮಕ್ಕೆ ಕಿರುಗಥೆಯನ್ನು ಬರೆದ ನೆನಪು ಬಂತು. ಈ ಪ್ರಕಾರದಲ್ಲಿ ಮತ್ತೆ ಯಾಕೆ ಪ್ರಯತ್ನ ಮಾಡಬಾರದು ಎಂಬ ವಿಚಾರ ಬಂತು. ಅನಿವಾಸಿಯಲ್ಲೇ ಹಂಚಿಕೊಂಡರೆ, ಸಹೃದಯರ ಪ್ರತಿಕ್ರಿಯೆ ಸಿಗುತ್ತದೆ, ನನ್ನ ಸಂಪಾದಕತ್ವದ ಉಪಯೋಗವನ್ನು ಪಡೆದುಕೊಂಡಂತೆಯೂ ಆಗುತ್ತದೆ: ಒಂದು ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಹುಂಬತನ ಇದು. ಅದಕ್ಕೆ ಸರಿಯಾಗಿ ಎರಡು ಕಿರುಗಥೆಗಳನ್ನು ಈ ವಾರ ನಿಮ್ಮ ಮುಂದಿಟ್ಟಿದ್ದೇನೆ. ಗುರಿ ತಲುಪಿಯಾವೇ? ತಲುಪಿದರೂ ಬಿಟ್ಟರೂ, ಕಲ್ಲು ನೆಲಕ್ಕೇ ಬೀಳಬೇಕಲ್ಲವೇ? ಬಿದ್ದರೆ ಕಲ್ಲು, ನನ್ನ ಮೂಗಲ್ಲ ಎಂಬ ಸಮಾಧಾನವಿದೆ, ನಿಮ್ಮ ಸಮಯ ಹಾಳು ಮಾಡಿದ್ದೇನೆಯೇ ಎಂಬ ಆತಂಕವೂ ಇದೆ.

ವಿಪರ್ಯಾಸ 

ಆತನಿಗೆ ಫುಟ್ ಬಾಲ್ ತುಂಬಾ ಇಷ್ಟ. ಇಂಜಿನಿಯರಿಂಗ್ ಕಾಲೇಜು ತಂಡದ ಮುಖ್ಯ ಆಟಗಾರ ಆತ. ಸ್ನೇಹಪರನಾದ್ದರಿಂದ ಸಹಪಾಠಿಗಳಲ್ಲಿ ಜನಪ್ರಿಯನೂ ಆಗಿದ್ದ. ಡಿಗ್ರಿ ಮುಗಿಸುವಷ್ಟರಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಆಫ್ ಸೈಟ್ ಕೆಲಸ ಎಂದು ಆತನನ್ನು ಕಂಪನಿ ಇಂಗ್ಲೆಂಡಿಗೆ ಕಳಿಸಿತ್ತು. ಫುಟ್ ಬಾಲ್ ಸೆಳೆತ ಆತನನ್ನು ಆಫೀಸಿನ ಫೈವ್-ಅ-ಸೈಡ್ ತಂಡಕ್ಕೆ ಸೇರಿಸಿತ್ತು. ವಾರಕ್ಕೆರಡು ಬಾರಿ ಹತ್ತಿರದ ಸ್ಪೋರ್ಟ್ಸ್ ಸೆಂಟರಿನಲ್ಲಿ ಆಫೀಸಿನ ತಂಡದೊಂದಿಗೆ ಸ್ಪರ್ಧಿಸುತ್ತಿದ್ದ. ಒಟ್ಟಿನಲ್ಲಿ ಅಪ್ಪ-ಅಮ್ಮನ ಕನಸಿನಂತೆ ಇಂಜಿನಿಯರ್ ಆಗಿ, ಒಳ್ಳೇ ಕೆಲಸ ಸೇರಿ, ಬಿಡುವಿನಲ್ಲಿ ತನ್ನ ಪ್ರೀತಿಯ ಹವ್ಯಾಸದಲ್ಲೂ ತೊಡಗಿಕೊಂಡು ಸಂತೃಪ್ತನಾಗಿದ್ದ. ನಿಸ್ವಾರ್ಥವಾಗಿ ಸಾಮಾಜಿಕ ಕಾರ್ಯ ಮಾಡುವ ಕಳಕಳಿಯಿಂದ ಮನೆಯ ಹತ್ತಿರದ ಚ್ಯಾರಿಟಿ ಅಂಗಡಿಯಲ್ಲಿ ವಾರಾಂತ್ಯದಲ್ಲಿ ಸಹಾಯವನ್ನೂ ಮಾಡುತ್ತಿದ್ದ.

ಈತ ಕೂಡ ಆತ ಬೆಳೆದ ಮಹಾನಗರದ ಇನ್ನೊಂದು ಮೂಲೆಯಲ್ಲಿ ಬೆಳೆದಿದ್ದ. ತುಂಬಾ ಬುದ್ಧಿವಂತನಾದ ಈತ ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ, ಎಂಬಿಎ ಮುಗಿಸಿ ಲಂಡನ್ನಿನ ಇನ್ವೆಸ್ಟ್ಮೆಂಟ್ ಬ್ಯಾಂಕ್ ಸೇರಿದ್ದ. ಸಾಕಷ್ಟು ಹಣ ಮಾಡುತ್ತಿದ್ದರೂ ಹಗಲಿರುಳೂ ಇರುತ್ತಿದ್ದ ಕೆಲಸದಿಂದ ಸುಖವಾಗಿ ಎರಡು ತುತ್ತು ಅನ್ನ ತಿನ್ನಲು, ಸರಿಯಾಗಿ ನಿದ್ದೆ ಮಾಡಲೂ ಈತನಿಗೆ ಸಮಯ ಸಿಗುತ್ತಿರಲಿಲ್ಲ. ಆಯಾಸವಾಗದಂತೆ ತನ್ನ ಸಹೋದ್ಯೋಗಿಗಳಂತೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಭ್ಯಾಸವಾಗಿ ತಳಕ್ಕೆ ತಳ್ಳುವ ಸುಳಿಯಲ್ಲಿ ಸಿಲುಕಿದ್ದ. ಒತ್ತಡದಲ್ಲಿ ಈತನ ಮತಿ ಭ್ರಮಣೆ ಆಗುತ್ತಿತ್ತು. ಅಂದು ಆಫೀಸಿನವರೆಲ್ಲ ವಿರಾಮಕ್ಕಾಗಿ ಹತ್ತಿರದ ಶೂಟಿಂಗ್ ಕ್ಲಬ್ಬಿಗೆ ಹೋಗಿದ್ದರು. ಎಲ್ಲರ ಗಮನ ವಿಧ ವಿಧವಾದ ಬಂದೂಕುಗಳು, ಅವನ್ನು ಲೋಡ್ ಮಾಡುವಲ್ಲಿ ವ್ಯಸ್ತವಾಗಿತ್ತು. ಪಕ್ಕದಲ್ಲಿದ್ದ ಬಂದೂಕನ್ನು ಎತ್ತಿಕೊಂಡು ಈತ ಬಿರಬಿರನೆ ಹೊರಗೆ ಓಡಿದ. ಹೊರಬಂದವನಿಗೆ ಎದುರು ಕಂಡಿದ್ದು ಒಂದು ಚಿಕ್ಕ ಚ್ಯಾರಿಟಿ ಅಂಗಡಿ. ನುಗ್ಗಿದವನೇ ಅಲ್ಲಿದ್ದವರ ಮೇಲೆ ಗುಂಡು ಹಾರಿಸಿ ಅಲ್ಲಿದವರನ್ನೆಲ್ಲ ಕೊಂದು, ತನ್ನ ಮೇಲೆ ಗುಂಡು ಹಾರಿಸಿಕೊಂಡು ಹತನಾದ. ಅಂಗಡಿಯಲ್ಲಿ ಆತನೂ ಇದ್ದ.

ಹೊಣೆ 

ಅದೊಂದು ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಇದೊಂದು ಆಸ್ಪತ್ರೆ. ಅಲ್ಲಿಗೆ ಬರುವ ಆರೋಗ್ಯವಿರುವ, ಆರೋಗ್ಯವಿಲ್ಲದ ರೋಗಿಗಳು, ಸಿಬ್ಬಂದಿಗಳೆಲ್ಲ ಸರಕಾರಕ್ಕೆ ಕೇವಲ ಅಂಕಿ-ಅಂಶಗಳು. ಆ ಆಸ್ಪತ್ರೆಯಲ್ಲಿ ಅವನು ಒಂದು ವಿಭಾಗದ ಮುಖ್ಯಸ್ಥ. ಅವನ ಡಾಕ್ಟರಿಕೆಯ ಜೊತೆಗೆ ಕೈಕೆಳಗಿನ ವೈದ್ಯರ, ನರ್ಸಗಳ, ಕಾರಕೂನರ, ಆಯಾಗಳ ಕಿರಿಕಿರಿ ಸಹಿಸುವುದಲ್ಲದೇ, ಮೇಲಿನ ಅಧಿಕಾರಿಗಳ ಅಧಿಕಾರಿಕೆಯನ್ನೂ ಅನುಭವಿಸಬೇಕಿತ್ತು. ಅವನಿಗೆ ಡಾಕ್ಟರಿಕೆ ಮಾಡಲು ಸಮಯವಿತ್ತೋ; ಹೇಳಿಸಿಕೊಂಡು, ಪರಿಚಾರಿಕೆ ಮಾಡಿದ ಮೇಲೆ ಉತ್ಸಾಹ ಉಳಿದಿತ್ತೋ; ಆ ಭಗವಂತನೇ ಬಲ್ಲ! ಅವನ ಮ್ಯಾನೇಜರಿಕೆಗೆ ಸಹಾಯ ಮಾಡಲು ಅವಳು ಜೂನಿಯರ್ ವ್ಯವಸ್ಥಾಪಿಕೆ. ವಾರಕ್ಕೊಂದೆರಡು ಸಮಸ್ಯೆ ಹುಡುಕಿ, ಅದಕ್ಕೆ ಪರಿಹಾರದ ದಾರಿಯನ್ನು ಪತ್ತೆಹಚ್ಚುವುದು ತನ್ನ ಕರ್ತವ್ಯವೆಂದು ಅವಳು ಮನದಟ್ಟು ಮಾಡಿಕೊಂಡಂತಿತ್ತು. ಅವತ್ತು ಆಕೆ ಹೊಸ ಸಮಸ್ಯೆಯೊಂದನ್ನು ಪತ್ತೆ ಹಚ್ಚಿದ್ದಳು. ಕ್ಯಾನ್ಸರ್ ವಿಭಾಗದವರು ಕೊಡುವ ಮದ್ದೊಂದು ಮೂಳೆ ಸವಕಳಿ ಮಾಡಿ, ಮೂಳೆ ಮುರಿತದ ಸಾಧ್ಯತೆ ಜಾಸ್ತಿ ಮಾಡುತ್ತಿತ್ತು. ಆ ವ್ಯತಿರಿಕ್ತತೆಯ ಸಾಧ್ಯತೆ ಹಾಗೂ ಚಿಕಿತ್ಸೆಯ ಪರಿಣತಿ ಅವನ ವಿಭಾಗದ ಅತಿ ಚಿಕ್ಕ ವಿಶೇಷತೆಯಲ್ಲೊಂದು. ಅವನ ಸಹೋದ್ಯೋಗಿಯೊಬ್ಬ ಕೆಲಸಕ್ಕೆ ಸೇರಿದ ಹೊಸತರಲ್ಲಿ ಹುಮ್ಮಸ್ಸಿನಿಂದ ಕ್ಯಾನ್ಸರ್ ತಜ್ಞರಿಗೆ ಈ ವ್ಯತಿರಿಕ್ತತೆಯ ಮಾಹಿತಿ ನೀಡಿ, ಹಣಕಾಸಿನ ವ್ಯವಸ್ಥೆಯನ್ನು ಯೋಚಿಸದೇ ಮೂಳೆ ಸ್ಕ್ಯಾನಿಂಗ್ ಹಾಗೂ  ಚಿಕಿತ್ಸೆಯ ವ್ಯವಸ್ಥೆ ಮಾಡಿದ್ದ, ಮಾಡಿ ತನ್ನ ಪ್ರಭಾವಳಿಯನ್ನು ಹೆಚ್ಚಿಸಿಕೊಂಡಿದ್ದ. ಈಗ ಈ ಸೇವೆಯ ಬೇಡಿಕೆ ಮಿತಿಮೀರಿ, ವಿಭಾಗದ ಇತರ ಮುಖ್ಯ ಕಾರ್ಯಗಳಿಗೆ ಕುತ್ತು ತಂದಿತ್ತು. ಇದನ್ನು ಸರಿಯಾಗಿಸುವುದು ಹೇಗೆ ಎಂಬುದು ಅವಳ ಸಮಸ್ಯೆ.  ಹೊಸ ಸಿಬ್ಬಂದಿಯನ್ನು ನೇಮಿಸೋಣ ಎಂಬುದು ಅವನ ಪರಿಹಾರ. ಅದಕ್ಕೆ ಹಣವೆಲ್ಲಿ ಎಂಬುದು ಅವಳ ಪ್ರಶ್ನೆ. ಇದು ನಮ್ಮ ವಿಭಾಗದ ಮೂಲಭೂತ ಕರ್ತವ್ಯವಲ್ಲ, ಕೇವಲ ನಿನ್ನ ಸಹೋದ್ಯೋಗಿಯ ದತ್ತಿ ಕಾರ್ಯ. ನಿಮಗೆ ನಿಮ್ಮ ಮುಖ್ಯ ರೋಗಿಗಳ ಹೊಣೆ ತುಂಬಾ ಇದೆ, ಅದನ್ನು ಪೂರೈಸಲು ಸಮಯವೂ ಇಲ್ಲ, ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಲು ಹಣವೂ ಇಲ್ಲ. ಕ್ಯಾನ್ಸರ್ ವಿಭಾಗ ಈ ಸೇವೆಗೆ ತಕ್ಕುದಾದ ಹಣವನ್ನು ಸಂದಾಯ ಮಾಡದೇ ನಾವು ಇದನ್ನು ಮುಂದುವರೆಸುವಂತಿಲ್ಲ ಎಂದು ತಾಕೀತು ಮಾಡಿದಳು.

ನಮಗೆ ಸ್ಕ್ಯಾನಿಂಗ್ ವಿಶ್ಲೇಷಣೆಯ ಪರಿಣತಿ ಇಲ್ಲ, ಮೂಳೆ ಸವಕಳಿ ತಡೆಯುವ ಮದ್ದಿನ ಬಗ್ಗೆ ಸರಿಯಾದ ಮಾಹಿತಿಯಿಲ್ಲ, ಜೊತೆಗೆ ನಮ್ಮಲ್ಲಿ ಕೂಡ ಸಂದಾಯ ಮಾಡಲು ಹಣವೂ ಇಲ್ಲ. ನೀವು ಈ ರೀತಿ ಸರಾಗವಾಗಿ ನಡೆದಿದ್ದ ಸೇವೆಯನ್ನು ಥಟ್ಟಂತ ತಡೆದರೆ, ರೋಗಿಗಳಿಗೆ ಹಾನಿಯಾದರೆ ಯಾರು ಹೊಣೆ ಎಂದು ಕ್ಯಾನ್ಸರ್ ನವರು ತಗಾದೆ ತೆಗೆದರು. ಈ ವಿಷಯದ ಪರಿಹಾರಕ್ಕಾಗಿ ಸಂಬಂಧಪಟ್ಟವರನ್ನು ಸೇರಿಸಿ ಮೀಟಿಂಗ್ ನಡೆಸಿದರು. ಆಗ, ಮೂಳೆ ಮುರಿತದ ತಡೆಗೆ ಬೇಕಾದ ಮದ್ದನ್ನು ಕ್ಯಾನ್ಸರ್ ತಜ್ಞರು ಬೇರೊಂದು ಕಾರಣಕ್ಕಾಗಿ ಉಪಯೋಗಿಸುತ್ತಾರೆಂದೂ, ಅದರ ಬಗ್ಗೆ ಅವರಿಗೆ ಬೇಕಾದ ಮಾಹಿತಿಯಿದೆ ಎಂದು ಅರಿವಾಯಿತು. ನೀವು ಮದ್ದಿನ ಬಗ್ಗೆ ಮಾಹಿತಿಯಿಲ್ಲ ಎಂದು ಬೇಕಂತಲೇ ಸುಳ್ಳು ಹೇಳಿದ್ದಿರಿ ಎಂದು ಜಟಾಪಟಿ ಆಯಿತು. ವಿಭಾಗಗಳ ನಡುವಿನ ಕಗ್ಗಂಟನ್ನು ಬಿಡಿಸಲು ಅವನು, ಅವನ ಸಹೋದ್ಯೋಗಿ ಹಾಗೂ ಕ್ಯಾನ್ಸರ್ ವಿಭಾಗದ ಮುಖ್ಯ್ಸತ ಸೇರಿ ಒಂದು ಮಾರ್ಗದರ್ಶಿಕೆಯನ್ನು ತಯಾರಿಸುವುದೆಂದು ನಿರ್ಧರಿಸಿದರು. ಅಂತೂ ಹಗ್ಗ ಜಗ್ಗಾಟ ನಿಂತು ಮಾರ್ಗದರ್ಶಿಕೆ ತಯಾರಾಗಲು ಆರು ತಿಂಗಳುಗಳಾದವು. ಅಷ್ಟರಲ್ಲಿ ಕ್ಯಾನ್ಸರ್ ಮುಖ್ಯಸ್ಥನಿಗೇ ಕ್ಯಾನ್ಸರ್ ಬಂದು ರಜದ ಮೇಲೆ ಹೋಗಿಬಿಟ್ಟ.

ಹೊಸ ಮಾರ್ಗದರ್ಶಿಕೆಯನ್ನು ಅನುಮೋದಿಸಿ ಜಾರಿಗೆ ತರಲು ಎಲ್ಲ ಕ್ಯಾನ್ಸರ್ ತಜ್ಞರನ್ನು ಒಟ್ಟುಗೂಡಿಸಿ ಇನ್ನೊಂದು ಸಭೆ ಕರೆಯಲಾಯಿತು. ಮಾರ್ಗದರ್ಶಿಕೆ ಕೇಂದ್ರದ ನಿಯಮಾವಳಿಗೆ ಅನುಸಾರವಾಗಿದ್ದು ನಮ್ಮ ರೋಗಿಗಳ ಸುರಕ್ಷತೆಗೆ ಅವಶ್ಯ. ಆದರೆ ತುಂಬಾ ಕ್ಲಿಷ್ಟವಾಗಿದೆ, ನಮ್ಮೊಂದಿಗೆ ಸಮಾಲೋಚಿಸದೇ ತಯಾರಿಸಲಾಗಿದೆ, ಇದನ್ನು ಅಳವಡಿಸಲು ನಮ್ಮಲ್ಲಿ ಸಮಯವಿಲ್ಲ ಎಂದು ಅವರೆಲ್ಲ ಗಲಾಟೆ ಮಾಡಿದರು. ಇನ್ನೇನು ಇದರ ರೂವಾರಿಯಾದ ಮುಖ್ಯಸ್ಥ ಕೆಲಸಕ್ಕೆ ವಾಪಸಾಗುತ್ತಾನೆ. ಅವನು ಬಂದ ಮೇಲೆ ಇದನ್ನು ಚರ್ಚಿಸೋಣ. ಅಲ್ಲಿಯವರೆಗೂ ಇಲ್ಲಿಯವರೆಗೂ ನಡೆದ ಹಾಗೇ ಮುಂದುವರೆಸೋಣ ಎಂದು ವರಾತ ಹಚ್ಚಿದರು. ನಮ್ಮ ತಜ್ಞರಿಗೆ ಈ ಸೇವೆಯನ್ನು ಮುಂದುವರಿಸಲು ಸಮಯವಿಲ್ಲ. ಅವರಿಗೆ ಇದಕ್ಕಿಂತಲೂ ಮುಖ್ಯವಾದ ಕೆಲಸಗಳಿವೆ. ಈ ಸೇವೆಗೆ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಬೇಕಾಗುತ್ತದೆ. “Show me the money” ಎಂದು ಜೂನಿಯರ್ ವ್ಯವಸ್ಥಾಪಕಿ “ಜೆರಿ ಮೆಗ್ವಾಯರ್” ಸಿನಿಮಾದಲ್ಲಿ ಕ್ಯೂಬಾ ಗೂಡಿಂಗ್ ಮಾಡಿದಂತೆ ಸೊಂಟ ಕುಣಿಸಿದಳು. ವಿಷಯವನ್ನೂ ನೆನೆಗುದಿಯಲ್ಲೇ ಇದೆ. ಆಗಾಗ ಮುಂಗೈಯನ್ನೋ, ಬೆನ್ನು ಮೂಳೆಯನ್ನೋ, ಸೊಂಟವನ್ನೋ ಮುರಿದುಕೊಂಡ ಕ್ಯಾನ್ಸರ್ ರೋಗಿಗಳು ಆಸ್ಪತ್ರೆಗೆ ಬರುತ್ತಿರುತ್ತಾರೆ. ಈ ವ್ಯತಿರಿಕ್ತ ಘಟನೆಗಳನ್ನು ಆಸ್ಪತ್ರೆಯ ಸಂಖ್ಯಾ ಶಾಸ್ತ್ರಜ್ಞ ದಾಖಲಿಸುತ್ತಿದ್ದಾನೆ.

  • ರಾಮ್

ಮೂರು ದಿನಗಳು – ಶಿವ ಮೇಟಿ ಬರೆದ ಪತ್ತೇದಾರಿ ಕಥೆ

ಪ್ರಿಯ ಓದುಗರೇ,
ಮತ್ತೊಂದು ಪತ್ತೇದಾರಿ ಕಥೆ, ಇದು. ನನ್ನ ಪತ್ತೇದಾರಿ ಕಥೆಯ ನಾಯಕನಾದ ಸಿ ಐ ಡಿ ವಿಕ್ರಮನ ಎರಡನೆಯ ಸಾಹಸವನ್ನು ನಿಮ್ಮ ಮುಂದೆ ಕಥೆಯ ರೂಪದಲ್ಲಿ ಇಟ್ಟಿರುವೆ. ಓದಿ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವಿರೆಂದು ಭಾವಿಸಿರುವೆ. ನಿಮ್ಮ ಅನಿಸಿಕೆ ನನಗೆ ಅಮೃತ, ಕುಡಿದು ತಿದ್ದಿಕೊಳ್ಳಲು ಸಹಾಯ!
ಇಂತಿ ಸಂಪಾದಕ



ಹೆಂಡತಿಯೊಂದಿಗೆ ವಿಶ್ರಾಂತಿಗೆಂದು, ಕೇರಳದಲ್ಲಿರುವ ವೈಥ್ರಿ ರೆಸಾರ್ಟಿಗೆ ಹೋಗುವ ತಯ್ಯಾರಿಯಲ್ಲಿದ್ದನು ವಿಕ್ರಂ. ಅಷ್ಟರಲ್ಲಿಯೇ ಅವನ ಮೊಬೈಲ್ ರಿಂಗ್ ಆಗತೊಡಗಿತು, ಹೆಡ್ ಕ್ವಾರ್ಟರ್ಸ್ನಿಂದ ಕರೆ,”ವಿಕ್ರಂ, ತಕ್ಷಣವೇ ಕಚೇರಿಗೆ ಬಾ, ತುರ್ತು ಕೆಲಸವಿದೆ”ಎಂದು ಬಾಸ್ ಫೋನಿನಲ್ಲಿ ಆದೇಶ ಕೊಟ್ಟಿದ್ದರು.
“ಸಾರ್! ನಾನು ರಜಾದ ಮೇಲಿರುವೆ, ವಿಶ್ರಾಂತಿಗೆಂದು ಕೇರಳಕ್ಕೆ ಹೊರಟಿರುವೆ”
“ವಿಶ್ರಾಂತಿ ಆ ಮೇಲೆ, ಮಹತ್ವದ ಕೆಲಸ, ಈಗಲೇ ಬರಲೇ ಬೇಕು” ಎಂದು ಹೇಳಿ ಫೋನು ಇಟ್ಟು ಬಿಟ್ಟರು. ವಿಕ್ರಂ,ಸಿಡಿಮಿಡಿಗೊಂಡ ಹೆಂಡತಿಯನ್ನು ಸಮಾಧಾನಪಡಿಸಿ, ಪ್ಯಾಲೇಸ್ ರಸ್ತೆಯ, ಕಾರ್ಲ್ಟನ್ ಹೌಸಿನಲ್ಲಿರುವ ಸಿ ಐ ಡಿ ಮುಖ್ಯ ಕಚೇರಿಯನ್ನು ತಲುಪಿದಾಗ ಬೆಳಗಿನ ಹನ್ನೊಂದು ಗಂಟೆಯಾಗಿತ್ತು. ಬಾಸ್ ಯಾಕೋ ಉದ್ವೇಗದಲ್ಲಿರುವಂತೆ ಕಂಡುಬಂದರು
“ವಿಕ್ರಂ, ನೀನು ಟಿವಿಯಲ್ಲಿ ಆಗಲೇ ಕೇಳಿರಬಹುದು, ಪಟ್ಟಣದ ಪ್ರತಿಷ್ಠಿತ ವ್ಯಕ್ತಿಯೊಬ್ಬನು ನಿನ್ನೆ ಸಂಜೆಯಿಂದ ಕಾಣೆಯಾಗಿದ್ದಾನೆ. ಬಿಡದಿಯ ಪೊಲೀಸ್ ಪಡೆಗೆ ಈ ಕೇಸಿನ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಹತ್ವದ ಸುಳಿವು ದೊರೆತಿಲ್ಲ. ವಿರೋಧ ಪಕ್ಷಗಳ ಒತ್ತಡದಿಂದ ಈ ಕೇಸು ಈಗ ನಮಗೆ ವರ್ಗಾವಣೆಯಾಗಿದೆ. ನಮಗೆ ಇರುವುದು ಕೇವಲ ಮೂರು ದಿನಗಳು ಮಾತ್ರ, ಇಲ್ಲವಾದರೆ ಕೇಸು ಸಿ ಬಿ ಐ ಗೆ ಹೋಗುವ ಸಾಧ್ಯತೆ ಇದೆ. ನನ್ನಿಂದ ನಿನಗೆ ಎಲ್ಲ ಸಹಾಯವಿದೆ. ನೀನು ಇದರಲ್ಲಿ ಯಶಸ್ವಿಯಾಗುತ್ತಿ ಎಂಬ ಭರವಸೆ ನನಗೆ ಇದೆ. ಗುಡ್ ಲಕ್.” ಎಂದು ಹೇಳಿ ಅವನನ್ನು ಬೀಳ್ಕೊಟ್ಟರು.
ಎರಡು ಗಂಟೆಗಳಲ್ಲಿ ವಿಕ್ರಮನ ಕಾರು ಬಿಡದಿಯ ಪೊಲೀಸ್ ಠಾಣೆಯನ್ನು ತಲುಪಿತ್ತು. ಮುಖ್ಯ ತನಿಖಾಧಿಕಾರಿ ಇನ್ಸ್ಪೆಕ್ಟರ್
ಪಾಟೀಲ್ ಕೈ ಕುಲುಕಿ ಸ್ವಾಗತಿಸಿಕೊಂಡರು.
“ಪಾಟೀಲರೇ ಈ ವ್ಯಕ್ತಿಯ ಬಗ್ಗೆ ವಿವರಗಳನ್ನು ಕೇಳಬಹುದೇ?”
“ಸಾರ್ ! ಕಾಣೆಯಾದ ವ್ಯಕ್ತಿಯ ಹೆಸರು ಖೇತನ್ ರೆಡ್ಡಿ. ವಯಸು ನಲವತ್ತು. ಹತ್ತು ವರುಷಗಳ ಹಿಂದೆ ಬಿ ಬಿ ಎಂ ಪಿ ಯಲ್ಲಿ ಒಬ್ಬ ಸಾಮಾನ್ಯ ನೌಕರ, ಈಗ ಪ್ರತಿಷ್ಠಿತ ರೆಡ್ಡಿ ಡೆವೆಲಪರ್ಸ್ ಕಾರ್ಪೊರೇಷನ್ನಿನ ಮಾಲೀಕ. ರಿಯಲ್ ಎಸ್ಟೇಟ್ ದಂಧೆಯಲ್ಲಿ ಎತ್ತಿದ ಕೈ. ಎಷ್ಟೋ ರಾಜಕಾರಣಿಗಳೊಂದಿಗೆ ನಿಕಟ ಸಂಬಂಧ. ಬರುವ ಮೇಯರ್ ಚುನಾವಣೆಯ್ಲಲಿ ಬಹುಶಃ ವಿರೋಧ ಪಕ್ಷದ ಅಭ್ಯರ್ಥಿ”
“ಅವನ ವೈಯಕ್ತಿಕ ಜೀವನದ ಬಗ್ಗೆ ಏನಾದರು ಮಾಹಿತಿ ಇದೆಯೇ?”
“ಇಲ್ಲಿಯವರೆಗೆ ನಮಗೆ ದೊರೆತ ಮಾಹಿತಿಯ ಪ್ರಕಾರ,
ಮಿಸ್ಟರ್ ರೆಡ್ಡಿ ಐಷಾರಾಮಿ ಜೀವಿ. ಫ್ಯಾನ್ಸಿ ಕಾರು, ಹೈಫೈ ಕ್ಲಬ್ಬ್ಸ್ ಮತ್ತು ವಿದೇಶಿ ಬ್ರಾಂಡಿನ ಮದ್ಯಗಳ ಬಗ್ಗೆ ತುಂಬಾ ಒಲವು. ಮೊದಲನೆಯ ಹೆಂಡತಿಯೊಡನೆ ಐದು ವರ್ಷಗಳ ಹಿಂದೆ ಡೈವೋರ್ಸ್ ಆಗಿದೆ, ಅವಳಿಗೆ ಮೂರು ವರ್ಷದ ಮಗು ಇದೆ. ಎರಡು ವರ್ಷಗಳ ಮುಂಚೆ ಎರಡನೆಯ ಮದುವೆ ಆಗಿದೆ. ಗಂಡ ಹೆಂಡರ ನಡುವೆ ಹನ್ನೆರಡು ವರ್ಷಗಳ ಅಂತರವಿದೆ. ಯಾವುದೊ ಕ್ಲಬ್ಬಿನಲ್ಲಿ ಪರಿಚಯವಾಗಿ ಮದುವೆಯಾಗಿದ್ದಾರಂತೆ . ಎರಡನೆಯ ಹೆಂಡತಿ ಮುಂಬೈಯಿನ ಮೂಲದವಳು, ಅವಳ ಅಣ್ಣ ಡಾಕ್ಟರ್ ಗುಪ್ತಾ, ರೆಡ್ಡಿಯ ಸ್ನೇಹಿತನಂತೆ, ಬಿಡದಿಯ ಹೊರವಲಯದಲ್ಲೊಂದು ಸಣ್ಣ ಆಸ್ಪತ್ರೆಯನ್ನು ನಡೆಸುತ್ತಿದ್ದಾನೆ.
“ಹಾಗಾದರೆ, ಕಾಣೆಯಾಗಿರುವ ಕಂಪ್ಲೇಂಟ್ ರಿಜಿಸ್ಟರ್ ಆಗಿದ್ದು ಹೇಗೆ?”
“ನಿನ್ನೆ ರಾತ್ರಿ ಸುಮಾರು ಒಂಭತ್ತು ಗಂಟೆಗೆ ಅಣ್ಣನೊಂದಿಗೆ ಅವನ ಹೆಂಡತಿ ಸ್ಟೇಷನ್ಗೆ ಬಂದಿದ್ದಳು. ‘ಜೀವನದಲ್ಲಿ ಜಿಗುಪ್ಸೆ ಆಗಿದೆ, ನನ್ನನ್ನು ಹುಡುಕುವ ಪ್ರಯತ್ನ ಬೇಡಾ’ ಎಂದು ಗಂಡನಿಂದ ಅವಳ ಮೊಬೈಲ್ಗೆ ಬಂದ ಮೆಸೇಜ್ ತೋರಿಸಿದಳು. ಮೆಸೇಜ್
ಪರಿಶೀಲಿಸಿದ ಮೇಲೇನೆ ಕಂಪ್ಲೇಂಟ್ ದಾಖಲಿಸಿಕೊಂಡಿದ್ದೀವಿ ಸಾರ್.”
“ಸರಿ! ಇಲ್ಲಿಯವರೆಗೆ ಏನೇನು ತನಿಖೆ ಆಗಿದೆ?” ಎಂದು ಕೇಳಿದ ವಿಕ್ರಂ.
“ಅವನ ಜೊತೆಗೇನೆ ಕಾಣೆಯಾಗಿರುವ ಕಾರಿನ ನಂಬರನ್ನು, ಅವನ ಫೋಟೋವನ್ನು ಎಲ್ಲ ಸ್ಟೇಷನ್ಗಳಿಗೆ ರವಾನೆ ಮಾಡಿದ್ದೇವೆ, ಅವನ ಮನೆಯಲ್ಲಿದ್ದವರಿಂದ ಕೆಲವು ಸ್ಟೇಟ್ಮೆಂಟ್ ಸಂಗ್ರಹಿಸಿದ್ದೇವೆ. ಅವನಿಗೆ, ಆಸ್ತಿಯ ಮೇಲೆ ತೆರಿಗೆ ಅಧಿಕಾರಿಗಳ ದಾಳಿಯ ಭಯವಿತ್ತೆಂದೂ, ಪರ್ಸನಲ್ ಸೆಕ್ರೆಟರಿ ರಾಣಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿರುವನೆಂದು ಮತ್ತು ಅವಳೇ ಈ ಕೃತ್ಯದಲ್ಲಿ ಭಾಗಿಯಾಗಿರಬಹುದೆಂದು ಹೆಂಡತಿ ಮೋನಿಕಾಳ ಅನಿಸಿಕೆ. ಗಂಡ ಹೆಂಡರ ನಡುವಿನ ಸಂಬಂಧ ಹದಗೆಟ್ಟು ಅವರಿಬ್ಬರ ನಡುವೆ ದಿನಾಲೂ ಜಗಳವಾಗುತ್ತಿತ್ತೆಂದು ಮತ್ತು ಮೋನಿಕಾ ನಿನ್ನೆ ಮನೆಯಲ್ಲಿ ಇರಲಿಲ್ಲವೆಂದು, ಆಗಾಗ್ಯೆ ಡಾ. ಗುಪ್ತಾ ಮನೆಗೆ ಬರುತ್ತಿದ್ದನೆಂದು, ಅಡಿಗೆಯ ಕೆಲಸದ ಲಕ್ಶ್ಮಿಯ ಹೇಳಿಕೆ. ನಿನ್ನೆ ಸಂಜೆ ಏಳು ಗಂಟೆಗೆ ರೆಡ್ಡಿ ಮನೆ ಬಿಟ್ಟನೆಂದೂ ಮತ್ತು ಬರುವುದು ಲೇಟ್
ಆಗಬಹುದೆಂದು ಹೇಳಿ ಹೋದನೆಂಬುವುದು ಮನೆಗೆಲಸದ ಹುಡುಗ ರಾಜುವಿನ ಸ್ಟೇಟ್ಮೆಂಟ್. ನಿನ್ನೆ ಸಾಯಂಕಾಲ ಸುಮಾರು ಏಳು ಗಂಟೆಗೆ ರೆಡ್ಡಿಯ ಮನೆಯಲ್ಲಿ ತಾನು ಅವನನ್ನು ಭೇಟಿಯಾಗಿರುವದಾಗಿಯು, ರೆಡ್ಡಿಯ ಹಳೆಯ ಬ್ಯುಸಿನೆಸ್ ಪಾರ್ಟ್ನರ್
ಅನಿಲ್, ದೊಡ್ಡ ಮೊತ್ತದ ಹಣ ಕೊಡಬೇಕಾಗಿತ್ತೆಂದು ಮತ್ತು ಇತ್ತಿತ್ತಲಾಗಿ ಅವರಿಬ್ಬರ ನಡುವೆ ಜಗಳ ನಡೆಯುವುದು ಸಾಮಾನ್ಯವಾಗಿತ್ತೆಂದು, ಮೋನಿಕಾ ಹೇಳಿದಂತೆ ರಾಣಿಯ ಜೊತೆಗೆ ಸಂಬಂಧವಿರುವುದು ಸತ್ಯವೆಂದೂ, ರಾಣಿ ಅಥವಾ ಅನಿಲನೇ ಇದಕ್ಕೆಲ್ಲ ಕಾರಣ ಎಂಬುವುದು ಮೋನಿಕಾಳ ಅಣ್ಣ ಡಾ.ಗುಪ್ತಾನ ವಾದ. ರೆಡ್ಡಿಯ ಮೊಬೈಲ್ ಸ್ವಿಚ್ ಆಫ್ ಆಗಿದೆ, ಇಲ್ಲಿಯವರೆಗೂ ಏನೂ ಸುಳಿವು ಸಿಕ್ಕಿಲ್ಲ. ರಾಣಿಯನ್ನು ಸಂಪರ್ಕಿಸಿ ಸ್ಟೇಷನ್ಗೆ ವಿಚಾರಣೆಗೆ ಬರಲು ಹೇಳಿದ್ದೇವೆ, ಇಷ್ಟರಲ್ಲಿಯೇ ಬರಬಹುದು. ಆದರೆ, ಅನಿಲನನ್ನು ಟ್ರೇಸ್ ಮಾಡಲು ಆಗುತ್ತಿಲ್ಲಾ. ಕಾಂಪ್ಲಿಕೇಟೆಡ್ ಕೇಸ್ ಇದ್ದಂಗೆ ಇದೆ ಸಾರ್”ಎಂದು ವರದಿ ಒಪ್ಪಿಸಿದನು ಇನ್ಸ್ಪೆಕ್ಟರ್ ಪಾಟೀಲ್.
“ಎಸ್! ಇಟ್ ಇಸ್ ಕಾಂಪ್ಲಿಕೇಟೆಡ್. ಐಷಾರಾಮಿ ಜೀವನ ನಡೆಸುತ್ತಿದ್ದ ಮನುಷ್ಯ, ಜಿಗುಪ್ಸೆಯಿಂದ ಕಾಣೆಯಾಗುವ ಚಾನ್ಸ್ ತೀರಾ ಕಡಿಮೆ. ನನಗೆ ಅನಿಸಿದಂತೆ ಎರಡು ಸಾಧ್ಯತೆಗಳು, ಕಿಡ್ನಾಪ್ ಇಲ್ಲಾ ಕೊಲೆ.
ಕಾನ್ಸ್ಟೇಬಲ್ ತಂದಿಟ್ಟಿದ್ದ ಬಿಸಿ ಚಹಾ ಹೀರುತ್ತಾ ವಿಕ್ರಂ ಏನನ್ನೋ ಯೋಚಿಸುತ್ತಿರುವಾಗಲೇ ಹರೆಯ ವಯಸ್ಸಿನ ಆಕರ್ಷಿತ ಹೆಣ್ಣೊಬ್ಬಳು ಪೇದೆಯ ಜೊತೆಗೆ ಇವರಿದ್ದ ಕೋಣೆಗೆ ಬಂದಳು.
“ಸಾರ್! ನನ್ನ ಹೆಸರು ರಾಣಿ. ಮಿ. ರೆಡ್ಡಿಯವರ ಪಿ.ಎ. ವಿಷಯ ಕೇಳಿ ನನಗೂ ತುಂಬಾ ಬೇಜಾರಾಗಿದೆ. ನೀವು ಕರೆಸಿದಂತೆ, ನಿಮಗೆ ಈ ಕೇಸಿನಲ್ಲಿ ಸಹಾಯ ಮಾಡಲು ಬಂದಿರುವೆ”
ವಿಕ್ರಂ ಅವಳ ಬಾಡಿದ ಮುಖವನ್ನೇ ನೋಡುತ್ತಾ,
“ಮೇಡಂ, ವಿಚಾರಣೆಗೆ ಬಂದಿದ್ದಕ್ಕೆ ಧನ್ಯವಾದಗಳು. ಏನನ್ನೂ ಮರೆಮಾಚದೆ ಸತ್ಯವನ್ನು ಹೇಳಿದರೆ ನಮಗೂ ಅನುಕೂಲ, ನಿಮಗೂ ಒಳ್ಳೆಯದು. ರೆಡ್ಡಿಯವರ ಜೊತೆಗೆ ನೀವು ಎಷ್ಟು ವರ್ಷಗಳಿಂದ ಕೆಲಸಾ ಮಾಡುತ್ತಿರುವಿರಿ? ಅವನ ಜೊತೆಗೆ ನಿಮ್ಮ ಆಕ್ರಮ ಸಂಬಂಧವಿದೆಯೆಂಬ ಅವನ ಹೆಂಡತಿಯ ಹೇಳಿಕೆಗೆ ನಿಮ್ಮ ಉತ್ತರವೇನು ? ನಿಮ್ಮ ಅನಿಸಿಕೆಯಲ್ಲಿ ಯಾರಾದರು ಶಂಕಿತರಿದ್ದಾರೆಯೇ? ಐ ಜಸ್ಟ್ ವಾಂಟ್ ಆನ್ ಹಾನೆಸ್ಟ್ ಆನ್ಸರ್”. ‘ಸಾರ್, ನಾನು ರೆಡ್ಡಿಯವರ ಪಿ. ಎ. ಆಗಿ ಕೆಲಸಾ ಮಾಡ್ತಿರುವುದು ಕಳೆದ ಮೂರು ವರ್ಷಗಳಿಂದ. ಕಳೆದ ಎರಡು ದಿನಗಳಿಂದ ರಜೆ ಮೇಲಿದ್ದಿದ್ದರಿಂದ ಆಫೀಸಿಗೆ ಹೋಗಿಲ್ಲ. ಅವರ ಜೊತೆಗೆ ಅಕ್ರಮ ಅಲ್ಲಾ ಅನ್ಯೋನ್ಯ ಸಂಬಂಧವಿದೆ. ಎಷ್ಟೋ ಸಲ ಜೊತೆಗೂಡಿ ಹೊರಗಡೆಗೆ ಊಟಕ್ಕೆ ಹೋಗಿದ್ದೇನೆ, ತಾಸುಗಂಟಲೇ ಅವರ ಜೊತೆಗೆ ಹರಟೆ ಹೊಡಿದಿದ್ದೇನೆ. ನಾನು ಕೊಳ್ಳುತ್ತಿರುವ ಹೊಸ ಫ್ಲಾಟ್ಗೆ ಆರ್ಥಿಕ ಸಹಾಯ ಕೇಳಿದ್ದೇನೆ. ಯಾಕೋ ಅವರು ಇತ್ತೀಚಿಗೆ ಬಹಳೇ ಚಿಂತಿತರಾಗಿದ್ದರು. ಕುಡಿತ, ಕ್ಲಬ್ಬಿನ ಭೇಟಿ ಹೆಚ್ಚಾಗಿತ್ತು. ಡಾ.ಗುಪ್ತಾ ಒಳ್ಳೆಯ ಮನುಷ್ಯನಲ್ಲ, ಇಬ್ಬರ ನಡುವೆ ಒಳ್ಳೆಯ ಸಂಬಂಧ ಉಳಿದಿಲ್ಲಾ, ಇವರಿಂದ ಆಗಾಗ್ಯೆ ಎಷ್ಟೋ ಸಾಲ ತೆಗೆದುಕೊಂಡು ಇನ್ನೂ ಹಿಂದಿರುಗಿಸಿಲ್ಲ. ಇದರಲ್ಲಿ ಅವನದೇ ಕೈವಾಡವಿರಬಹುದು ಎಂಬುವುದು ನನ್ನ ಸಂಶಯ.‘

ಇಂತಾ ಕೇಸುಗಳಲ್ಲಿ ಒಬ್ಬರಮೇಲೊಬ್ಬರು ಅಪವಾದ ಮಂಡಿಸುವುದು ಸಹಜ ಎಂಬ ಅರಿವಿದ್ದ ವಿಕ್ರಂ , “ನಿಮ್ಮ ಹೇಳಿಕೆಗೆ ಧನ್ಯವಾದಗಳು, ರೆಡ್ಡಿ ಮತ್ತು ನಿಮ್ಮ ನಡುವೆ ನಡೆದ ಮಾತುಕತೆಯನ್ನು ಶೋಧಿಸಲು ನಿಮ್ಮ ಮೊಬೈಲ್
ಫೋನು ನಮಗೆ ಬೇಕು”
“ಸಾರ್ ! ನನ್ನ ಹಳೆಯ ಮೊಬೈಲ್ ಕಳೆದು ಮೂರು ದಿನವಾಗಿದೆ. ಕಂಪ್ಲೇಂಟ್ ಕೂಡಾ ಕೊಟ್ಟಾಗಿದೆ, ಈಗಿರುವುದು ಹೊಸ ಮೊಬೈಲ್, ನೀವು ತೆಗೆದುಕೊಳ್ಳಬಹುದು”
“ವಾಟ್ ಎ ಕೋ ಇನ್ಸಿಡೆಂಟ್”
“ಈ ಕೇಸು ಮುಗಿಯುವವರೆಗೂ ಸಂಶಯದ ದೃಷ್ಟಿಯಿಂದ ನಿಮ್ಮನ್ನು ಅರೆಸ್ಟ್ ಮಾಡಲಾಗುವುದು”.
“ಸತ್ಯ ಹೇಳಿದವರಿಗೆ ಉಳಿವಿಲ್ಲ ಎಂಬುವುದಕ್ಕೆ ಇದೊಂದು ಉದಾಹರಣೆ. ಮೀಡಿಯಾದ ಮುಂದೆ ನಿಮ್ಮ ಕೆಲಸವನ್ನು ತೋರಿಸಿಸಲು ಇದೊಂದು ಉಪಾಯ ಎಂದು ನನಗೆ ಚನ್ನಾಗಿ ಗೊತ್ತು. ಯು ವಿಲ್ ರಿಪೆಂಟ್ ಫಾರ್ ಇಟ್”
“ಪಾಟೀಲರೇ ಇವಳನ್ನು ಬಂಧನದಲ್ಲಿರಿಸಿ, ಹೆಸರು ಮಾತ್ರ ಗುಪ್ತವಾಗಿರಲಿ, ಅವಳ ಮೊಬೈಲನ್ನು ಮಿ. ಜೋಸ್ ಗೆ ಪರಿಶೀಲನೆಗೆ ರವಾನೆ ಮಾಡಿ, ಅನಿಲನ ಮೇಲೆ ವಾರೆಂಟ್ ಕಳಿಸಿ. ಈಗ ನಾನು ತಕ್ಷಣವೇ ಅವನ ಆಫೀಸಿಗೆ ಹೋಗಬೇಕು” ಎಂದು ಆದೇಶ ಕೊಟ್ಟನು ವಿಕ್ರಂ. ಕೆಲವೇ ನಿಮಿಷಗಳಲ್ಲಿ ಪೊಲೀಸ್ ಜೀಪು, ಬಿಡದಿಯ ಇಂಡಸ್ಟ್ರಿಯಲ್ ಎಸ್ಟೇಟ್ ಹತ್ತಿರವಿದ್ದ ಅವನ ಆಫೀಸನ್ನು ಸೇರಿತ್ತು. ಗೇಟಿನಲ್ಲಿದ್ದ ಗಾರ್ಡಿನಿಂದ ಆಫೀಸಿನ ಕೀಲಿಯನ್ನು ತೆರೆಸಿ, ನೇರವಾಗಿ ರೆಡ್ಡಿಯ ಚೇಂಬರ್ನೊಳಗೆ ಹೋಗಿ, ಸೂಕ್ಷ್ಮವಾಗಿ ಕಣ್ಣಾಡಿಸಿದನು. ಶೆಲ್ಫಿನಲ್ಲಿ ಅಚ್ಚು ಕಟ್ಟಾಗಿ ಫೈಲುಗಳನ್ನು ಜೋಡಿಸಲಾಗಿತ್ತು, ಟೇಬಲ್ ಮೇಲಿನ ಕುಂಡೆಯಲ್ಲಿದ ಹೂವುಗಳು ಇನ್ನೂ ತಾಜಾ
ಅನಿಸುತ್ತಿದ್ದವು. ಟೇಬಲಿನ ಮೇಲಿನ ಡ್ರಾವರನ್ನು ತೆಗೆದಾಗ ಕಂಡಿದ್ದು ಆಧುನಿಕ ಶೈಲಿಯ ಪಿಸ್ತೂಲು, ಕೆಳಗಡೆ ಡ್ರಾವರಿನಲ್ಲಿ ಸಿಕ್ಕಿದ್ದು ರಾಣಿಯ ಹೆಸರಿನಲ್ಲಿ ಬರೆದಿದ್ದ ಹತ್ತು ಲಕ್ಷ ರೂಪಾಯಿಗಳ ಚೆಕ್ಕು. ರಾಣಿಯ ಕುರಿತು ಕೊಟ್ಟ ಮೋನಿಕಾಳ ಹೇಳಿಕೆ ಬಹುತೇಕ ನಿಜವೆನಿಸಿತು ವಿಕ್ರಮಿನಿಗೆ. ‘ಹಾಗಾದರೆ ಈ ಪಿಸ್ತೂಲ್ ಏಕೆ? ಅವನಿಗೆ ಯಾರಿಂದಲಾದರೂ ಪ್ರಾಣ ಭೀತಿಯಿತ್ತೇ?’ ಅಥವಾ ‘ಸ್ವಯಂ ರಕ್ಷಣೆಗೆ ಇಟ್ಟುಕೊಂಡಿರಬಹುದೇ?’ ಎಂದು ಯೋಚಿಸತೊಡಗಿದನು.
ಕ್ರೈಂ ಬ್ರಾಂಚಿನ ಟೆಕ್ನಿಕಲ್ ಟೀಮಿನ ಅವಶ್ಯಕತೆ ಇದೆ ಎನಿಸಿ, ಮುಖ್ಯಸ್ಥ ಜೋಸ್ ಗೆ ಕರೆ ಮಾಡಿದನು. “ಮಿ. ಜೋಸ್, ನನಗೆ ಸಹಾಯ ಬೇಕಾಗಿದೆ. ಈಗ ನಾನು ಕಳಿಸುವ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ, ನನಗೆ ಈ ಮೊಬೈಲಿನಿಂದ ಬಂದ ಕೊನೆಯ ಟೆಕ್ಸ್ಟ್ ಮೆಸೇಜಿನ ವೇಳೆ ಮತ್ತು ಸ್ಥಳದ ಅವಶ್ಯಕತೆ ಇದೆ. ಪ್ಲೀಸ್ ಡು ಇಟ್ ಆಸ್ ಕ್ವಿಕ್ಲಿ ಆಸ್ ಪಾಸಿಬಲ್, ಹಾಗೆಯೇ ಪಾಟೀಲ್ ಕಳಿಸಿ ಕೊಡುವ ಮೊಬೈಲಿನಲ್ಲಿನ ಸಂದೇಶಗಳನ್ನು ಮತ್ತು ಕರೆಗಳನ್ನು ರಿಟ್ರೀವ್ ಮಾಡಲು ಪ್ರಯತ್ನ ಮಾಡಿ ಅರ್ಜೆಂಟ್ ಪ್ಲೀಸ್” ಎಂದು ಹೇಳಿ, ರೆಡ್ಡಿಯ ಮೊಬೈಲ್ ನಂಬರನ್ನು ಕಳುಹಿಸಿ, ಮುಂದಿನ ಯೋಜನೆಯ ಬಗ್ಗೆ ಚಿಂತಿಸತೊಡಗಿದನು. ವಿಕ್ರಂನಿಗೆ, ಡಾ. ಗುಪ್ತಾ ಮತ್ತು ಮೋನಿಕಾಳ ಮೇಲೆಯೂ ನಿಗಾ ಇಡುವುದು ಒಳ್ಳೆಯದೆನಿಸಿತು. ಅಷ್ಟರಲ್ಲಿಯೇ ಜೋಸ್ ನಿಂದ ಕರೆ ಬಂತು,
“ಮಿ. ವಿಕ್ರಂ ಅವನ ಮೊಬೈಲ್ನಿಂದ ಕೊನೆಯ ಮೆಸೇಜ್ ಹೋಗಿದ್ದು
ಸಾಯಂಕಾಲ ೭. ೩೦ ಗಂಟೆಯಲ್ಲಿ, ಬಿಡದಿಯ ಹತ್ತಿರದ ನೆಲ್ಲಿಗುಡ್ಡೆ ಕೆರೆಯ ಪ್ರದೇಶದಿಂದ, ಅನೇಬಲ್ ಟು ಟ್ರೇಸ್ ದಿ ಫೋನ್
ಫರ್ದರ್, ಸಾರೀ” ಎಂದು ಫೋನಿಟ್ಟನು. ಆಗಲೇ ಸಾಯಂಕಾಲ ಆರು ಗಂಟೆಯಾಗಿತ್ತು.” ಒಹ್! ನೋ,
ಪಾಟೀಲರೇ ಜೀಪ್ ರೆಡಿ ಮಾಡಿ ತಕ್ಷಣವೇ ನೆಲ್ಲಿಗುಡ್ಡೆ ಕೆರೆಗೆ ಹೋಗಬೇಕು”.
“ಸಾರ್, ಹೊರಗೆ ವಿಪರೀತ ಮಳೆ ಸುರಿಯುತ್ತಿದೆ, ಈ ಪರಿಸ್ಥಿತಿಯಲ್ಲಿ ಅಲ್ಲೇನು ಸಿಗುತ್ತದೆ?”
“ಪ್ರಮುಖವಾದ ಸುಳಿವು, ಶೀಘ್ರದಲ್ಲಿಯೇ ನಿಮಗೆ ಗೊತ್ತಾಗುತ್ತದೆ.”
ವಿಕ್ರಮನ ಆದೇಶದಂತೆ ಜೀಪು ಹದಿನೈದು ಕಿಲೋಮೀಟರ್ ದೂರದಲ್ಲಿದ್ದ ನೆಲ್ಲಿಗುಡ್ಡೆ ಕೆರೆಯನ್ನು ತಲುಪಿತ್ತು. ಯಾವಾಗೂ ಜನ ಜಂಗುಳಿಯಿಂದ ತುಂಬಿರುತ್ತಿದ್ದ ಕೆರೆಯ ಪ್ರದೇಶ, ಸುರಿಯುತ್ತಿದ್ದ ಧಾರಾಕಾರವಾದ ಮಳೆಯಿಂದಾಗಿ ನಿರ್ಜನವಾಗಿತ್ತು. ಸುರಿಯುತ್ತಿದ್ದ ಮಳೆಯಲ್ಲಿಯೂ ಜೀಪಿನಿಂದ್ ಕೆಳಗಿಳಿದು, ಏನನ್ನೋ ಹುಡುಕುತ್ತಲಿದ್ದ ವಿಕ್ರಮನನ್ನು ಪಾಟೀಲ್ ಹಿಂಬಾಲಿಸುತ್ತಿದ್ದನು. ಅನತಿ ದೂರದಲ್ಲಿ ಅವರಿಗೆ ಕಂಡಿದ್ದು ಮಿ. ರೆಡ್ಡಿಯ ಕಾರು.
“ಗಾಟ್ ಇಟ್” ಎಂದು ಉದ್ಘಾರವೆತ್ತಿದನು ವಿಕ್ರಂ.
ವಿಕ್ರಮನ ಚುರುಕು ಬುದ್ದಿಗೆ ಮನದಲ್ಲಿಯೇ ಅಭಿನಂದನೆ ವ್ಯಕ್ತಪಡಿಸಿ ಅವನ ಜೊತೆಗೆ ಕಾರಿನತ್ತ ಧಾವಿಸಿದನು ಪಾಟೀಲ. ಕಾರು ಹೊರಗಡೆಯಿಂದ ಲಾಕ್ ಆಗಿತ್ತು, ಒಳಗಡೆ ಯಾರೂ ಇರಲಿಲ್ಲ, ಮೊಬೈಲ್ ಫೋನಿನ ಸುಳಿವೂ ಇರಲಿಲ್ಲ.
“ಅಂದರೆ , ರೆಡ್ಡಿ ಇಲ್ಲಿಯವರೆಗೂ ಬಂದು ಮಾಯವಾಗಿದ್ದಾನೆ. ಕೆರೆಯನ್ನು ಶೋಧ ಮಾಡಲು ಬೋಟಿಂಗ್ ಟೀಮಿನ ಅವಶ್ಯಕತೆ ಇದೆ”
“ಸಾರ್, ಈ ರಾತ್ರಿಯಲ್ಲಿ ಸುರಿಯುತ್ತಿರುವ ಮಳೆಯಲ್ಲಿ ಈಗ ಇದು ಸಾಧ್ಯವಿಲ್ಲ . ಪೊಲೀಸರಿಗೆ ಕಾರನ್ನು ಗಾರ್ಡ್ ಮಾಡಲು ಹೇಳಿ ನಾಳೆ ಬೆಳಿಗ್ಗೆ ಬರೋಣ” ಎಂದು ಸಲಹೆ ಕೊಟ್ಟನು ಪಾಟೀಲ. ಅವನ ಯೋಚನೆ ಸರಿ ಎನಿಸಿ ಮನೆಗೆ ಹಿಂದುರಿಗಿದನು ವಿಕ್ರಂ.
ಸುರಿಯುತ್ತಿದ್ದ ಮಳೆಯು ಬೆಳಗಿನ ವೇಳೆಗೆ ತಣ್ಣಗಾಗಿತ್ತು. ಪೊಲೀಸ್ ಪಡೆಯೊಂದಿಗೆ ವಿಕ್ರಮನು ಕೆರೆಯನ್ನು ತಲುಪಿದಾಗ ಹತ್ತು ಗಂಟೆಯಾಗಿತ್ತು. ಅಷ್ಟರಲ್ಲಿಯೇ ರಾತ್ರಿ ಕಾರು ಕಾವಲಿಗೆಂದು ಇದ್ದ ಪೇದೆಗಳು ಕೆರೆಯಲ್ಲೊಂದು ಹೆಣ ತೇಲಾಡುತ್ತಿದೆಯೆಂದು ಹೇಳಿದರು. ಬೋಟಿಂಗ್ ಟೀಮಿನವರು ಹೆಣವನ್ನು ಹೊರ ತರುವದರಲ್ಲಿ ಯಶಸ್ವಿಯಾಗಿದ್ದರು. ಅಷ್ಟೇನು ಬದಲಾವಣೆಯಾಗದಿದ್ದ ದೇಹ , ದೇಹದ ಮೇಲಿದ್ದ ಬಟ್ಟೆ, ಬಟ್ಟೆಯ ಜೇಬಿನಲ್ಲಿದ್ದ ಕಾರ್ ಕೀ ಮತ್ತು ಮೊಬೈಲ್ನಿಂದ ಅದು ರೆಡ್ಡಿಯ ದೇಹವೆಂದೇ ಖಚಿತವಾಯ್ತು. ವಿಕ್ರಂ ದೇಹವನ್ನು ಅರ್ಜೆಂಟ್ ಪೋಸ್ಟ್ ಮಾರ್ಟಮ್ ಗೆ ರವಾನೆ ಮಾಡಲು ತಿಳಿಸಿ, ಮೋನಿಕಾ ಮತ್ತು ಡಾ. ಗುಪ್ತಾಗೆ ಸ್ಟೇಷನಗೆ ಬರ ಹೇಳಿ, ಪಾಟೀಲ್ ನೊಂದಿಗೆ ಕಾರಿನ ಬಾಗಿಲನ್ನು ತೆರೆದು ಸೂಕ್ಷ್ಮ ವೀಕ್ಷಣೆಯನ್ನು ಮಾಡಿದನು. ಕಾರಿನ ಒಳಗಾಗಲಿ ಅಥವಾ ಹೊರಗಾಗಲಿ ಏನೂ ಪುರಾವೆ ಸಿಗಲಿಲ್ಲ. ಸುರಿದ ಮಳೆಯಿಂದ ಕಾರಿನ ಹೊರಗಡೆ ಯಾವುದೇ ಹೆಜ್ಜೆ
ಗುರುತುಗಳೂ ಕಾಣಿಸಲಿಲ್ಲ. ಸ್ಟೀಯರಿಂಗಿನ ಮೇಲಿನ ಫಿಂಗರ್ ಪ್ರಿಂಟ್ ತೆಗೆದುಕೊಂಡ ಮೇಲೆ ಕಾರನ್ನು ಠಾಣೆಗೆ ತರಲು ಹೇಳಿ ಪಾಟೀಲನೊಂದಿಗೆ ಸ್ಟೇಷನಗೆ ಮರಳಿದನು ವಿಕ್ರಂ.
ಕೊನೆಗೂ ಅನಿಲನನ್ನು ಹುಡುಕಿ, ಅರೆಸ್ಟ್ ಮಾಡಿ, ಠಾಣೆಗೆ ತರುವಲ್ಲಿ ಪೊಲೀಸ್ ಪಡೆಯವರು ಯಶಸ್ವಿಯಾಗಿದ್ದರು. ರೆಡ್ಡಿಗೆ ಇಪ್ಪತ್ತು ಲಕ್ಷ ಹಣ ಕೊಡುವದಿತ್ತೆಂದು , ಅವರಿಬ್ಬರ ನಡುವೆ ಜಗಳವಾಗುತ್ತಿದ್ದಿದ್ದು ನಿಜವೆಂದು ಹಾಗು ಅವನು ಕಾಣೆಯಾದ ವಿಷಯದಲ್ಲಿ ತನಗೇನೂ ಸಂಬಂಧವಿಲ್ಲವೆಂದು ಹೇಳಿಕೆ ಕೊಟ್ಟಿದ್ದನು ಅನಿಲ್. ಮೋನಿಕಾ ಮತ್ತು ಡಾ. ಗುಪ್ತ ವಿಕ್ರಮನ ಆದೇಶದಂತೆ ಸ್ಟೇಷನಗೆ ಬಂದಿದ್ದರು.
ಅವರೆಲ್ಲರಿಂದ ಮತ್ತೊಮ್ಮೆ ಮರು ಹೇಳಿಕೆ ಪಡೆದು, ಎಲ್ಲರ ಮೊಬೈಲುಗಳನ್ನು ಪಡೆದು, ಮಿ. ಜೋಸ್ ಗೆ ರವಾನಿಸಿ ಮೆಸೇಜ್ ಅನಲೈಸಿಂಗ್ ಮತ್ತು ರಿಟ್ರೀವಿಂಗ್ ಮಾಡಲು ಹೇಳಿ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತ ಕುಳಿತನು ವಿಕ್ರಂ.
ಮರಣೋತ್ತರ ಪರೀಕ್ಷೆಯ ಪ್ರಕಾರ … ದೇಹದ ಮೇಲೆ ಯಾವುದೇ ಗಾಯಗಳಿಲ್ಲವೆಂದೂ, ಪುಪ್ಪುಸದಲ್ಲಿ ನೀರು ಮತ್ತು ಪಾಚಿ ಇರುವುದರಿಂದ ಕೆರೆಯಲ್ಲಿ ಬಿದ್ದಾಗ ಅವನು ಜೀವಂತನಿದ್ದನೆಂದೂ, ಶರೀರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆರಾಯಿನ್ ಪತ್ತೆಯಾಗಿದ್ದರಿಂದ ಸಾಯುವ ಮುನ್ನ ಅವನು ಡ್ರಗ್ಗಿನ ಪ್ರಭಾವದಲ್ಲಿ ಇದ್ದ ಎಂಬುವುದು ಖಚಿತವೆಂದೂ, ಒಟ್ಟಿನಲ್ಲಿ ಇದೊಂದು ಬಹುಶಃ ಆತ್ಮಹತ್ಯೆ ಎಂದು ರಿಪೋರ್ಟ್ ಸೂಚಿಸಿತ್ತು. ಯಾಕೋ ವಿಕ್ರಮನ ಮನಸು ಇನ್ನೂ ಬೇರೆ ಏನನ್ನೋ ಯೋಚಿಸತೊಡಗಿತ್ತು. ಅವನಿಗೆ ಕಾರನ್ನು ಇನ್ನೊಮ್ಮೆ ಪರೀಕ್ಷಿಸಬೇಕೆನಿಸಿ ಕಾರಿನತ್ತ ಹೋದನು. ಸ್ಟೀಯರಿಂಗ್ ಮೇಲೆ ಸ್ಪಷ್ಟವಾದ ಫಿಂಗರ್ ಪ್ರಿಂಟ್ ಮೂಡಿಲ್ಲ ಎಂಬ ವರದಿಯನ್ನು ನೋಡಿ ಅವನಿಗೆ ಇನ್ನೂ ಕುತೂಹಲ ಮೂಡಿತ್ತು. ಹಾಗಾದರೆ ಸ್ಟೀಯರಿಂಗನ್ನು ಯಾರಾದರೂ ತೊಳೆದಿರಬಹುದೇ ? ಅವನ ಜೊತೆಗೆ ಕಾರಿನಲ್ಲಿ ಬೇರೆ ಯಾರಾದರೂ ಇದ್ದಿರಬಹುದೇ? ಎಂದು ಯೋಚಿಸತೊಡಗಿದನು.
ಒಂದು ಕ್ಷಣ ಸ್ಟೀಯರಿಂಗಿಗೆ ಲ್ಯೂಮಿನಾಲ್ ಲೇಪಿಸಿ ನೋಡಬೇಕೆನಿಸಿತು. ತನ್ನ ಕಾರಿನ ಬಾಟಲಿನಲ್ಲಿದ್ದ ಲ್ಯೂಮಿನಾಲನ್ನು ತಂದು ಸ್ಟೀಯರಿಂಗಿಗೆ ಲೇಪಿಸಿದ ತಕ್ಷಣವೇ ಗುಪ್ತವಾಗಿದ್ದ ಒಂದು ರಕ್ತದ ಕಲೆಯು ಹೊಳೆಯತೊಡಗಿತು. ಉಳಿದ ದ್ರವ್ಯವನ್ನು ಅವನು ಸೀಟುಗಳ ಮೇಲೆಯೂ ಮತ್ತು ಡಿಕ್ಕಿಯಲ್ಲಿಯೂ ಲೇಪಿಸಿದನು. ಡಿಕ್ಕಿಯ ಮೂಲೆಯಲ್ಲೂ ಒಂದು ಸಣ್ಣ ರಕ್ತದ ಕಲೆಯು ಹೊಳೆಯತೊಡಗಿತು.
ತಾನು ಯೋಚಿಸಿದ್ದು ಸರಿ ಎನಿಸಿ ತಕ್ಷಣವೇ ಫಾರೆನ್ಸಿಕ್ ಸ್ಕ್ರೀನಿಂಗ್ ಟೀಮನ್ನು ಕರೆಯಿಸಿ, ರಕ್ತದ ಕಲೆಯಿಂದ ಸ್ಯಾಂಪಲ್
ಸಂಗ್ರಹಿಸಿ, ಅರ್ಜೆಂಟ್ ಡಿ ಏನ್ ಎ ಅನಲೈಸಿಂಗಿಗೆ ಕಳುಹಿಸಿದನು. ಡಿಕ್ಕಿಯಲ್ಲಿದ್ದ ರಕ್ತದ ಕಲೆಯು ರೆಡ್ಡಿಯದೆಂದು ಆದರೆ ಸ್ಟೀಯರಿಂಗ್ ಮೇಲೆ ಇದ್ದ ರಕ್ತವು ಬೇರೆಯವರದೆಂದು ರಿಪೋರ್ಟ್ ಬಂದಿತು. ತಕ್ಷಣವೇ ವಿಕ್ರಂ ಅಂದುಕೊಂಡನು ಅಂದರೆ ,
ರೆಡ್ಡಿಯನ್ನು ಡಿಕ್ಕಿಯಲ್ಲಿ ಹಾಕಿ ಬೇರೆ ಯಾರೋ ಕಾರನ್ನು ಡ್ರೈವ್ ಮಾಡಿರುವರು. ಹಾಗಾದರೆ ಆ ಬೇರೆಯವನು ಯಾರು ? ಎಂದು ಯೋಚಿಸತೊಡಗಿದನು.
ತಕ್ಷಣವಾಗಿ ಅವನಿಗೆ ಶಂಕೆ ಬಂದಿದ್ದು ರಾಣಿ, ಅನಿಲ್, ಮೋನಿಕಾ ಮತ್ತು ಡಾ. ಗುಪ್ತಾರ ಮೇಲೆ. ವೈದ್ಯರ ಸಹಾಯದಿಂದ ಅವರೆಲ್ಲರ ರಕ್ತವನ್ನು ಸಂಗ್ರಹಿಸಿ ಫಾರೆನ್ಸಿಕ್ ಲ್ಯಾಬ್ ಗೆ ಕಳುಹಿಸಿದನು. ಆಶ್ಚರ್ಯವೆಂಬುವಂತೆ ಸ್ಟೀಯರಿಂಗ್ ಮೇಲೆ ಇದ್ದ ರಕ್ತವು ಡಾ. ಗುಪ್ತಾನದೆಂದು ಪರೀಕ್ಷೆಯಿಂದ ಖಚಿತವಾಗಿತ್ತು. ಡಾ. ಗುಪ್ತಾನನ್ನು ಅರೆಸ್ಟ್ ಮಾಡಿ ಠಾಣೆಗೆ ಕರೆತಂದಾಗಿತ್ತು. ವಿಕ್ರಂ ಅವನಿಗೆ ಜೋರಾಗಿ ಹೇಳುತ್ತಿದ್ದನು,
ಡಾ. ಗುಪ್ತಾ ನೀವಾಗಿಯೇ ತಪ್ಪನ್ನು ಒಪ್ಪಿಕೊಂಡರೆ ಒಳ್ಳೆಯದು ಇಲ್ಲವಾದರೆ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಗುಪ್ತಾನಿಗೆ ಬೇರೆ ಹಾದಿ ಇಲ್ಲವೆನಿಸಿತು.
“ಹೌದು ಸಾರ್! ನಾನು ಮಾಡಿದ ಪ್ಲಾನ್ ಪರ್ಫೆಕ್ಟ್ ಅಂತಾ ಅಂದುಕೊಂಡಿದ್ದೆ ಆದರೆ ಅದು ಸುಳ್ಳಾಯಿತು. ಆಸ್ಪತ್ರೆಯಲ್ಲಾದ ನಷ್ಟದಿಂದ, ಐಷಾರಾಮದ ಜೀವನ ಶೈಲಿಯಿಂದ ಹಣದ ಉಬ್ಬರವಾಗಿತ್ತು. ರೆಡ್ಡಿಯಿಂದ ಆಗಾಗ್ಯೆ ತೆಗೆದುಕೊಂಡ ಸಾಲದ ಮೊತ್ತ ಐವತ್ತು ಲಕ್ಷವನ್ನು ದಾಟಿತ್ತು. ಅವನು ಇತ್ತಿತ್ತಲಾಗಿ ಹಣ ಮರಳಿಸಲು ಭಯಂಕರ ಕಿರುಕುಳ ಕೊಡತೊಡಗಿದ್ದನು, ಅದನ್ನು ತಡೆದುಕೊಳ್ಳಲಾಗದೇ ಅವನನ್ನೇ ಮುಗಿಸಿ ಬಿಡುವ ಯೋಚನೆಯನ್ನು ಹಾಕಿದೆ. ಡೀಪ್ ಫೇಕ್ ಟೆಕ್ನಾಲಜಿ ಉಪಯೋಗಿಸಿ ರಾಣಿ ಮತ್ತು ರೆಡ್ಡಿ ಜೊತೆಗೂಡಿದ ಸುಳ್ಳು ಫೋಟೋಗಳನ್ನು ಮೋನಿಕಾಗೆ ಕಳುಹಿಸಿ, ಅವಳಲ್ಲಿ ಅವನ ಬಗ್ಗೆ ಸಂಶಯ ಹುಟ್ಟಿಸಿದೆ. ಎರಡು ದಿನಗಳ ಹಿಂದೆ ಮೋನಿಕಾಳನ್ನು ನನ್ನ ಮನೆಗೆ ಕರೆತಂದೆ. ರೆಡ್ಡಿಗೆ ಹೆರಾಯಿನ್ ಬಗ್ಗೆ ಒಲವಿದ್ದದ್ದು ನನಗೆ ಮೊದಲಿನಿಂದಲೂ ಗೊತ್ತಿತ್ತು. ಕೆಲವು ಸಲ ಇಬ್ಬರೂ ಸೇರಿ ಸವಿದಿದ್ದೆವು. ಮೊನ್ನೆ ಅವನಿಗೆ ಫೋನು ಮಾಡಿ, ಅವನ ಮನೆಯಲ್ಲಿ ಇಪ್ಪತ್ತು ಲಕ್ಷ ಹಣ
ಹಿಂತಿರುಗಿಸುವದಾಗಿಯೂ ಮತ್ತು ಕೂಡಿ ಹೆರಾಯಿನ್ ಸೇವಿಸುವದಾಗಿಯೂ ತಿಳಿಸಿದ್ದೆ. ಈ ಪ್ಲಾನಿನನಲ್ಲಿ ಹಣದಾಸೆ ಹಚ್ಚಿ ಮನೆಗೆಲಸದ ಹುಡುಗ ರಾಜುನನ್ನು ಉಪಯೋಗಿಸಿದೆ. ಮನೆಯಲ್ಲಿಯ ಎಲ್ಲ ಸಿ ಸಿ ಟಿವಿಗಳನ್ನು
ಅವನ ಕೈಯಿಂದ ಆಫ್ ಮಾಡಿಸಿದ್ದೆ. ನನ್ನನ್ನು ನಂಬಿ ಆರೂವರೆ ಗಂಟೆಗೆ ರೆಡ್ಡಿ ಮನೆಗೆ ಬಂದಿದ್ದ. ಅವನ ರಕ್ತನಾಳದಲ್ಲಿ ಅಪಾಯಕರ ಪ್ರಮಾಣದ ಹೆರಾಯಿನ್ ನನ್ನು ಇಂಜೆಕ್ಟ್ ಮಾಡಿದ್ದೆ. ಕೆಲವೇ ನಿಮಿಷಗಳಲ್ಲಿ ಅವನು ಮೂರ್ಛೆ ಹೋಗಿದ್ದ. ರಾಜುವಿನ ಸಹಾಯದಿಂದ ಅವನನ್ನು ಅವನ ಕಾರಿನ ಡಿಕ್ಕಿಯಲ್ಲಿ ಹಾಕಿದ್ದೆ. ಕುಳಿತ ಸ್ಥಳವನ್ನು ಸ್ವಚ್ಛಗೊಳಿಸುವ ಅವಸರದಲ್ಲಿ ನನಗೆ ದುರದೃಷ್ಟವಶಾತ್ ನೀಡಲ್ ಸ್ಟಿಕ್ ಇಂಜುರಿ ಆಗಿತ್ತು.
ರಾಜುನ ಜೊತೆಗೆ ಕಾರನ್ನು ಓಡಿಸಿ ಹತ್ತಿರದ ನೆಲ್ಲಿಗುಡ್ಡೆ ಕೆರೆಗೆ ಬಂದು ರಾಜುನ ಸಹಾಯದಿಂದ ಮೂರ್ಛೆಗೊಂಡಿದ್ದ ರೆಡ್ಡಿಯನ್ನು ಕೆರೆಯಲ್ಲಿ ತಳ್ಳಿದೆ. ತಳ್ಳುವ ಮುಂಚೆ ಅವನದೇ ಮೊಬೈಲ್ನಿಂದ ಮೋನಿಕಾಗೆ ಮೆಸೇಜ್ ಕಳುಹಿಸಿದ್ದೆ ಹಾಗೂ ಫಿಂಗರ್ ಪ್ರಿಂಟ್ ಅಳಿಸಲು ಸ್ಟೀಯರಿಂಗನ್ನು ಬಟ್ಟೆಯಿಂದ ತಿಕ್ಕಿ, ಕಾರನ್ನು ಲಾಕ್ ಮಾಡಿ, ಕಾರ ಕೀ ಮತ್ತು ಮೊಬೈಲ್ ಅನ್ನು ಅವನ ಜೇಬಿನಲ್ಲಿ ಹಾಕಿದ್ದೆ. ಮಳೆ ಸುರಿಯುತ್ತಿದ್ದರಿಂದ ಜನರು ಯಾರೂ ಇರಲಿಲ್ಲ. ಟ್ಯಾಕ್ಸಿ ಹಿಡಿದುಕೊಂಡು ಮನೆ ಸೇರಿ, ಮೋನಿಕಾಳನ್ನು ಕರೆದುಕೊಂಡು ಸ್ಟೇಷನ್ ಗೆ ಬಂದಿದ್ದೆ. ಇದು ಕೊಲೆಯಲ್ಲ ಆತ್ಮಹತ್ಯೆ ಅಂತ ತೋರಿಸುವುದೇ ನನ್ನ ಉದ್ದೇಶವಾಗಿತ್ತು. ಮುಂದೆ
ಏನಾಯಿತಂತ ನಿಮಗೇ ಗೊತ್ತಲ್ಲ” ಎಂದು ಎಲ್ಲವನ್ನೂ ವಿವರಿಸಿ ತಲೆ ತಗ್ಗಿಸಿ ನಿಂತುಕೊಂಡನು.
“ದುರದೃಷ್ಟವಶಾತ್ ನಿಮ್ಮ ಬೆರಳಲ್ಲಾದ ನೀಡಲ್ ಸ್ಟಿಕ್ ಇಂಜುರಿಯಿಂದ ಸ್ಟೀಯರಿಂಗ್ ಮೇಲೆ ಹಾಗು ಹೆರಾಯಿನ ಸೇವಿಸಿದ ರೆಡ್ಡಿಯ ರಕ್ತನಾಳದಿಂದ ಡಿಕ್ಕಿಯಲ್ಲಿ ಅಂಟಿದ ಸಣ್ಣ ರಕ್ತದ ಕಲೆ ನಿಮ್ಮ ಕಣ್ಣಿಗೆ ಕಾಣದೇ ಹೋಯಿತಲ್ಲವೇ?”
ವಿಕ್ರಂ ವೇಳೆಯನ್ನು ನೋಡಿಕೊಂಡನು, ಮೂರು ದಿನಗಳಿಗೆ ಇನ್ನೂ ಮೂರು ತಾಸು ಬಾಕಿ ಇತ್ತು!

ಡಾ. ಶಿವಶಂಕರ ಮೇಟಿ