ಮೂರು ದಿನಗಳು – ಶಿವ ಮೇಟಿ ಬರೆದ ಪತ್ತೇದಾರಿ ಕಥೆ

ಪ್ರಿಯ ಓದುಗರೇ,
ಮತ್ತೊಂದು ಪತ್ತೇದಾರಿ ಕಥೆ, ಇದು. ನನ್ನ ಪತ್ತೇದಾರಿ ಕಥೆಯ ನಾಯಕನಾದ ಸಿ ಐ ಡಿ ವಿಕ್ರಮನ ಎರಡನೆಯ ಸಾಹಸವನ್ನು ನಿಮ್ಮ ಮುಂದೆ ಕಥೆಯ ರೂಪದಲ್ಲಿ ಇಟ್ಟಿರುವೆ. ಓದಿ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವಿರೆಂದು ಭಾವಿಸಿರುವೆ. ನಿಮ್ಮ ಅನಿಸಿಕೆ ನನಗೆ ಅಮೃತ, ಕುಡಿದು ತಿದ್ದಿಕೊಳ್ಳಲು ಸಹಾಯ!
ಇಂತಿ ಸಂಪಾದಕ



ಹೆಂಡತಿಯೊಂದಿಗೆ ವಿಶ್ರಾಂತಿಗೆಂದು, ಕೇರಳದಲ್ಲಿರುವ ವೈಥ್ರಿ ರೆಸಾರ್ಟಿಗೆ ಹೋಗುವ ತಯ್ಯಾರಿಯಲ್ಲಿದ್ದನು ವಿಕ್ರಂ. ಅಷ್ಟರಲ್ಲಿಯೇ ಅವನ ಮೊಬೈಲ್ ರಿಂಗ್ ಆಗತೊಡಗಿತು, ಹೆಡ್ ಕ್ವಾರ್ಟರ್ಸ್ನಿಂದ ಕರೆ,”ವಿಕ್ರಂ, ತಕ್ಷಣವೇ ಕಚೇರಿಗೆ ಬಾ, ತುರ್ತು ಕೆಲಸವಿದೆ”ಎಂದು ಬಾಸ್ ಫೋನಿನಲ್ಲಿ ಆದೇಶ ಕೊಟ್ಟಿದ್ದರು.
“ಸಾರ್! ನಾನು ರಜಾದ ಮೇಲಿರುವೆ, ವಿಶ್ರಾಂತಿಗೆಂದು ಕೇರಳಕ್ಕೆ ಹೊರಟಿರುವೆ”
“ವಿಶ್ರಾಂತಿ ಆ ಮೇಲೆ, ಮಹತ್ವದ ಕೆಲಸ, ಈಗಲೇ ಬರಲೇ ಬೇಕು” ಎಂದು ಹೇಳಿ ಫೋನು ಇಟ್ಟು ಬಿಟ್ಟರು. ವಿಕ್ರಂ,ಸಿಡಿಮಿಡಿಗೊಂಡ ಹೆಂಡತಿಯನ್ನು ಸಮಾಧಾನಪಡಿಸಿ, ಪ್ಯಾಲೇಸ್ ರಸ್ತೆಯ, ಕಾರ್ಲ್ಟನ್ ಹೌಸಿನಲ್ಲಿರುವ ಸಿ ಐ ಡಿ ಮುಖ್ಯ ಕಚೇರಿಯನ್ನು ತಲುಪಿದಾಗ ಬೆಳಗಿನ ಹನ್ನೊಂದು ಗಂಟೆಯಾಗಿತ್ತು. ಬಾಸ್ ಯಾಕೋ ಉದ್ವೇಗದಲ್ಲಿರುವಂತೆ ಕಂಡುಬಂದರು
“ವಿಕ್ರಂ, ನೀನು ಟಿವಿಯಲ್ಲಿ ಆಗಲೇ ಕೇಳಿರಬಹುದು, ಪಟ್ಟಣದ ಪ್ರತಿಷ್ಠಿತ ವ್ಯಕ್ತಿಯೊಬ್ಬನು ನಿನ್ನೆ ಸಂಜೆಯಿಂದ ಕಾಣೆಯಾಗಿದ್ದಾನೆ. ಬಿಡದಿಯ ಪೊಲೀಸ್ ಪಡೆಗೆ ಈ ಕೇಸಿನ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಹತ್ವದ ಸುಳಿವು ದೊರೆತಿಲ್ಲ. ವಿರೋಧ ಪಕ್ಷಗಳ ಒತ್ತಡದಿಂದ ಈ ಕೇಸು ಈಗ ನಮಗೆ ವರ್ಗಾವಣೆಯಾಗಿದೆ. ನಮಗೆ ಇರುವುದು ಕೇವಲ ಮೂರು ದಿನಗಳು ಮಾತ್ರ, ಇಲ್ಲವಾದರೆ ಕೇಸು ಸಿ ಬಿ ಐ ಗೆ ಹೋಗುವ ಸಾಧ್ಯತೆ ಇದೆ. ನನ್ನಿಂದ ನಿನಗೆ ಎಲ್ಲ ಸಹಾಯವಿದೆ. ನೀನು ಇದರಲ್ಲಿ ಯಶಸ್ವಿಯಾಗುತ್ತಿ ಎಂಬ ಭರವಸೆ ನನಗೆ ಇದೆ. ಗುಡ್ ಲಕ್.” ಎಂದು ಹೇಳಿ ಅವನನ್ನು ಬೀಳ್ಕೊಟ್ಟರು.
ಎರಡು ಗಂಟೆಗಳಲ್ಲಿ ವಿಕ್ರಮನ ಕಾರು ಬಿಡದಿಯ ಪೊಲೀಸ್ ಠಾಣೆಯನ್ನು ತಲುಪಿತ್ತು. ಮುಖ್ಯ ತನಿಖಾಧಿಕಾರಿ ಇನ್ಸ್ಪೆಕ್ಟರ್
ಪಾಟೀಲ್ ಕೈ ಕುಲುಕಿ ಸ್ವಾಗತಿಸಿಕೊಂಡರು.
“ಪಾಟೀಲರೇ ಈ ವ್ಯಕ್ತಿಯ ಬಗ್ಗೆ ವಿವರಗಳನ್ನು ಕೇಳಬಹುದೇ?”
“ಸಾರ್ ! ಕಾಣೆಯಾದ ವ್ಯಕ್ತಿಯ ಹೆಸರು ಖೇತನ್ ರೆಡ್ಡಿ. ವಯಸು ನಲವತ್ತು. ಹತ್ತು ವರುಷಗಳ ಹಿಂದೆ ಬಿ ಬಿ ಎಂ ಪಿ ಯಲ್ಲಿ ಒಬ್ಬ ಸಾಮಾನ್ಯ ನೌಕರ, ಈಗ ಪ್ರತಿಷ್ಠಿತ ರೆಡ್ಡಿ ಡೆವೆಲಪರ್ಸ್ ಕಾರ್ಪೊರೇಷನ್ನಿನ ಮಾಲೀಕ. ರಿಯಲ್ ಎಸ್ಟೇಟ್ ದಂಧೆಯಲ್ಲಿ ಎತ್ತಿದ ಕೈ. ಎಷ್ಟೋ ರಾಜಕಾರಣಿಗಳೊಂದಿಗೆ ನಿಕಟ ಸಂಬಂಧ. ಬರುವ ಮೇಯರ್ ಚುನಾವಣೆಯ್ಲಲಿ ಬಹುಶಃ ವಿರೋಧ ಪಕ್ಷದ ಅಭ್ಯರ್ಥಿ”
“ಅವನ ವೈಯಕ್ತಿಕ ಜೀವನದ ಬಗ್ಗೆ ಏನಾದರು ಮಾಹಿತಿ ಇದೆಯೇ?”
“ಇಲ್ಲಿಯವರೆಗೆ ನಮಗೆ ದೊರೆತ ಮಾಹಿತಿಯ ಪ್ರಕಾರ,
ಮಿಸ್ಟರ್ ರೆಡ್ಡಿ ಐಷಾರಾಮಿ ಜೀವಿ. ಫ್ಯಾನ್ಸಿ ಕಾರು, ಹೈಫೈ ಕ್ಲಬ್ಬ್ಸ್ ಮತ್ತು ವಿದೇಶಿ ಬ್ರಾಂಡಿನ ಮದ್ಯಗಳ ಬಗ್ಗೆ ತುಂಬಾ ಒಲವು. ಮೊದಲನೆಯ ಹೆಂಡತಿಯೊಡನೆ ಐದು ವರ್ಷಗಳ ಹಿಂದೆ ಡೈವೋರ್ಸ್ ಆಗಿದೆ, ಅವಳಿಗೆ ಮೂರು ವರ್ಷದ ಮಗು ಇದೆ. ಎರಡು ವರ್ಷಗಳ ಮುಂಚೆ ಎರಡನೆಯ ಮದುವೆ ಆಗಿದೆ. ಗಂಡ ಹೆಂಡರ ನಡುವೆ ಹನ್ನೆರಡು ವರ್ಷಗಳ ಅಂತರವಿದೆ. ಯಾವುದೊ ಕ್ಲಬ್ಬಿನಲ್ಲಿ ಪರಿಚಯವಾಗಿ ಮದುವೆಯಾಗಿದ್ದಾರಂತೆ . ಎರಡನೆಯ ಹೆಂಡತಿ ಮುಂಬೈಯಿನ ಮೂಲದವಳು, ಅವಳ ಅಣ್ಣ ಡಾಕ್ಟರ್ ಗುಪ್ತಾ, ರೆಡ್ಡಿಯ ಸ್ನೇಹಿತನಂತೆ, ಬಿಡದಿಯ ಹೊರವಲಯದಲ್ಲೊಂದು ಸಣ್ಣ ಆಸ್ಪತ್ರೆಯನ್ನು ನಡೆಸುತ್ತಿದ್ದಾನೆ.
“ಹಾಗಾದರೆ, ಕಾಣೆಯಾಗಿರುವ ಕಂಪ್ಲೇಂಟ್ ರಿಜಿಸ್ಟರ್ ಆಗಿದ್ದು ಹೇಗೆ?”
“ನಿನ್ನೆ ರಾತ್ರಿ ಸುಮಾರು ಒಂಭತ್ತು ಗಂಟೆಗೆ ಅಣ್ಣನೊಂದಿಗೆ ಅವನ ಹೆಂಡತಿ ಸ್ಟೇಷನ್ಗೆ ಬಂದಿದ್ದಳು. ‘ಜೀವನದಲ್ಲಿ ಜಿಗುಪ್ಸೆ ಆಗಿದೆ, ನನ್ನನ್ನು ಹುಡುಕುವ ಪ್ರಯತ್ನ ಬೇಡಾ’ ಎಂದು ಗಂಡನಿಂದ ಅವಳ ಮೊಬೈಲ್ಗೆ ಬಂದ ಮೆಸೇಜ್ ತೋರಿಸಿದಳು. ಮೆಸೇಜ್
ಪರಿಶೀಲಿಸಿದ ಮೇಲೇನೆ ಕಂಪ್ಲೇಂಟ್ ದಾಖಲಿಸಿಕೊಂಡಿದ್ದೀವಿ ಸಾರ್.”
“ಸರಿ! ಇಲ್ಲಿಯವರೆಗೆ ಏನೇನು ತನಿಖೆ ಆಗಿದೆ?” ಎಂದು ಕೇಳಿದ ವಿಕ್ರಂ.
“ಅವನ ಜೊತೆಗೇನೆ ಕಾಣೆಯಾಗಿರುವ ಕಾರಿನ ನಂಬರನ್ನು, ಅವನ ಫೋಟೋವನ್ನು ಎಲ್ಲ ಸ್ಟೇಷನ್ಗಳಿಗೆ ರವಾನೆ ಮಾಡಿದ್ದೇವೆ, ಅವನ ಮನೆಯಲ್ಲಿದ್ದವರಿಂದ ಕೆಲವು ಸ್ಟೇಟ್ಮೆಂಟ್ ಸಂಗ್ರಹಿಸಿದ್ದೇವೆ. ಅವನಿಗೆ, ಆಸ್ತಿಯ ಮೇಲೆ ತೆರಿಗೆ ಅಧಿಕಾರಿಗಳ ದಾಳಿಯ ಭಯವಿತ್ತೆಂದೂ, ಪರ್ಸನಲ್ ಸೆಕ್ರೆಟರಿ ರಾಣಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿರುವನೆಂದು ಮತ್ತು ಅವಳೇ ಈ ಕೃತ್ಯದಲ್ಲಿ ಭಾಗಿಯಾಗಿರಬಹುದೆಂದು ಹೆಂಡತಿ ಮೋನಿಕಾಳ ಅನಿಸಿಕೆ. ಗಂಡ ಹೆಂಡರ ನಡುವಿನ ಸಂಬಂಧ ಹದಗೆಟ್ಟು ಅವರಿಬ್ಬರ ನಡುವೆ ದಿನಾಲೂ ಜಗಳವಾಗುತ್ತಿತ್ತೆಂದು ಮತ್ತು ಮೋನಿಕಾ ನಿನ್ನೆ ಮನೆಯಲ್ಲಿ ಇರಲಿಲ್ಲವೆಂದು, ಆಗಾಗ್ಯೆ ಡಾ. ಗುಪ್ತಾ ಮನೆಗೆ ಬರುತ್ತಿದ್ದನೆಂದು, ಅಡಿಗೆಯ ಕೆಲಸದ ಲಕ್ಶ್ಮಿಯ ಹೇಳಿಕೆ. ನಿನ್ನೆ ಸಂಜೆ ಏಳು ಗಂಟೆಗೆ ರೆಡ್ಡಿ ಮನೆ ಬಿಟ್ಟನೆಂದೂ ಮತ್ತು ಬರುವುದು ಲೇಟ್
ಆಗಬಹುದೆಂದು ಹೇಳಿ ಹೋದನೆಂಬುವುದು ಮನೆಗೆಲಸದ ಹುಡುಗ ರಾಜುವಿನ ಸ್ಟೇಟ್ಮೆಂಟ್. ನಿನ್ನೆ ಸಾಯಂಕಾಲ ಸುಮಾರು ಏಳು ಗಂಟೆಗೆ ರೆಡ್ಡಿಯ ಮನೆಯಲ್ಲಿ ತಾನು ಅವನನ್ನು ಭೇಟಿಯಾಗಿರುವದಾಗಿಯು, ರೆಡ್ಡಿಯ ಹಳೆಯ ಬ್ಯುಸಿನೆಸ್ ಪಾರ್ಟ್ನರ್
ಅನಿಲ್, ದೊಡ್ಡ ಮೊತ್ತದ ಹಣ ಕೊಡಬೇಕಾಗಿತ್ತೆಂದು ಮತ್ತು ಇತ್ತಿತ್ತಲಾಗಿ ಅವರಿಬ್ಬರ ನಡುವೆ ಜಗಳ ನಡೆಯುವುದು ಸಾಮಾನ್ಯವಾಗಿತ್ತೆಂದು, ಮೋನಿಕಾ ಹೇಳಿದಂತೆ ರಾಣಿಯ ಜೊತೆಗೆ ಸಂಬಂಧವಿರುವುದು ಸತ್ಯವೆಂದೂ, ರಾಣಿ ಅಥವಾ ಅನಿಲನೇ ಇದಕ್ಕೆಲ್ಲ ಕಾರಣ ಎಂಬುವುದು ಮೋನಿಕಾಳ ಅಣ್ಣ ಡಾ.ಗುಪ್ತಾನ ವಾದ. ರೆಡ್ಡಿಯ ಮೊಬೈಲ್ ಸ್ವಿಚ್ ಆಫ್ ಆಗಿದೆ, ಇಲ್ಲಿಯವರೆಗೂ ಏನೂ ಸುಳಿವು ಸಿಕ್ಕಿಲ್ಲ. ರಾಣಿಯನ್ನು ಸಂಪರ್ಕಿಸಿ ಸ್ಟೇಷನ್ಗೆ ವಿಚಾರಣೆಗೆ ಬರಲು ಹೇಳಿದ್ದೇವೆ, ಇಷ್ಟರಲ್ಲಿಯೇ ಬರಬಹುದು. ಆದರೆ, ಅನಿಲನನ್ನು ಟ್ರೇಸ್ ಮಾಡಲು ಆಗುತ್ತಿಲ್ಲಾ. ಕಾಂಪ್ಲಿಕೇಟೆಡ್ ಕೇಸ್ ಇದ್ದಂಗೆ ಇದೆ ಸಾರ್”ಎಂದು ವರದಿ ಒಪ್ಪಿಸಿದನು ಇನ್ಸ್ಪೆಕ್ಟರ್ ಪಾಟೀಲ್.
“ಎಸ್! ಇಟ್ ಇಸ್ ಕಾಂಪ್ಲಿಕೇಟೆಡ್. ಐಷಾರಾಮಿ ಜೀವನ ನಡೆಸುತ್ತಿದ್ದ ಮನುಷ್ಯ, ಜಿಗುಪ್ಸೆಯಿಂದ ಕಾಣೆಯಾಗುವ ಚಾನ್ಸ್ ತೀರಾ ಕಡಿಮೆ. ನನಗೆ ಅನಿಸಿದಂತೆ ಎರಡು ಸಾಧ್ಯತೆಗಳು, ಕಿಡ್ನಾಪ್ ಇಲ್ಲಾ ಕೊಲೆ.
ಕಾನ್ಸ್ಟೇಬಲ್ ತಂದಿಟ್ಟಿದ್ದ ಬಿಸಿ ಚಹಾ ಹೀರುತ್ತಾ ವಿಕ್ರಂ ಏನನ್ನೋ ಯೋಚಿಸುತ್ತಿರುವಾಗಲೇ ಹರೆಯ ವಯಸ್ಸಿನ ಆಕರ್ಷಿತ ಹೆಣ್ಣೊಬ್ಬಳು ಪೇದೆಯ ಜೊತೆಗೆ ಇವರಿದ್ದ ಕೋಣೆಗೆ ಬಂದಳು.
“ಸಾರ್! ನನ್ನ ಹೆಸರು ರಾಣಿ. ಮಿ. ರೆಡ್ಡಿಯವರ ಪಿ.ಎ. ವಿಷಯ ಕೇಳಿ ನನಗೂ ತುಂಬಾ ಬೇಜಾರಾಗಿದೆ. ನೀವು ಕರೆಸಿದಂತೆ, ನಿಮಗೆ ಈ ಕೇಸಿನಲ್ಲಿ ಸಹಾಯ ಮಾಡಲು ಬಂದಿರುವೆ”
ವಿಕ್ರಂ ಅವಳ ಬಾಡಿದ ಮುಖವನ್ನೇ ನೋಡುತ್ತಾ,
“ಮೇಡಂ, ವಿಚಾರಣೆಗೆ ಬಂದಿದ್ದಕ್ಕೆ ಧನ್ಯವಾದಗಳು. ಏನನ್ನೂ ಮರೆಮಾಚದೆ ಸತ್ಯವನ್ನು ಹೇಳಿದರೆ ನಮಗೂ ಅನುಕೂಲ, ನಿಮಗೂ ಒಳ್ಳೆಯದು. ರೆಡ್ಡಿಯವರ ಜೊತೆಗೆ ನೀವು ಎಷ್ಟು ವರ್ಷಗಳಿಂದ ಕೆಲಸಾ ಮಾಡುತ್ತಿರುವಿರಿ? ಅವನ ಜೊತೆಗೆ ನಿಮ್ಮ ಆಕ್ರಮ ಸಂಬಂಧವಿದೆಯೆಂಬ ಅವನ ಹೆಂಡತಿಯ ಹೇಳಿಕೆಗೆ ನಿಮ್ಮ ಉತ್ತರವೇನು ? ನಿಮ್ಮ ಅನಿಸಿಕೆಯಲ್ಲಿ ಯಾರಾದರು ಶಂಕಿತರಿದ್ದಾರೆಯೇ? ಐ ಜಸ್ಟ್ ವಾಂಟ್ ಆನ್ ಹಾನೆಸ್ಟ್ ಆನ್ಸರ್”. ‘ಸಾರ್, ನಾನು ರೆಡ್ಡಿಯವರ ಪಿ. ಎ. ಆಗಿ ಕೆಲಸಾ ಮಾಡ್ತಿರುವುದು ಕಳೆದ ಮೂರು ವರ್ಷಗಳಿಂದ. ಕಳೆದ ಎರಡು ದಿನಗಳಿಂದ ರಜೆ ಮೇಲಿದ್ದಿದ್ದರಿಂದ ಆಫೀಸಿಗೆ ಹೋಗಿಲ್ಲ. ಅವರ ಜೊತೆಗೆ ಅಕ್ರಮ ಅಲ್ಲಾ ಅನ್ಯೋನ್ಯ ಸಂಬಂಧವಿದೆ. ಎಷ್ಟೋ ಸಲ ಜೊತೆಗೂಡಿ ಹೊರಗಡೆಗೆ ಊಟಕ್ಕೆ ಹೋಗಿದ್ದೇನೆ, ತಾಸುಗಂಟಲೇ ಅವರ ಜೊತೆಗೆ ಹರಟೆ ಹೊಡಿದಿದ್ದೇನೆ. ನಾನು ಕೊಳ್ಳುತ್ತಿರುವ ಹೊಸ ಫ್ಲಾಟ್ಗೆ ಆರ್ಥಿಕ ಸಹಾಯ ಕೇಳಿದ್ದೇನೆ. ಯಾಕೋ ಅವರು ಇತ್ತೀಚಿಗೆ ಬಹಳೇ ಚಿಂತಿತರಾಗಿದ್ದರು. ಕುಡಿತ, ಕ್ಲಬ್ಬಿನ ಭೇಟಿ ಹೆಚ್ಚಾಗಿತ್ತು. ಡಾ.ಗುಪ್ತಾ ಒಳ್ಳೆಯ ಮನುಷ್ಯನಲ್ಲ, ಇಬ್ಬರ ನಡುವೆ ಒಳ್ಳೆಯ ಸಂಬಂಧ ಉಳಿದಿಲ್ಲಾ, ಇವರಿಂದ ಆಗಾಗ್ಯೆ ಎಷ್ಟೋ ಸಾಲ ತೆಗೆದುಕೊಂಡು ಇನ್ನೂ ಹಿಂದಿರುಗಿಸಿಲ್ಲ. ಇದರಲ್ಲಿ ಅವನದೇ ಕೈವಾಡವಿರಬಹುದು ಎಂಬುವುದು ನನ್ನ ಸಂಶಯ.‘

ಇಂತಾ ಕೇಸುಗಳಲ್ಲಿ ಒಬ್ಬರಮೇಲೊಬ್ಬರು ಅಪವಾದ ಮಂಡಿಸುವುದು ಸಹಜ ಎಂಬ ಅರಿವಿದ್ದ ವಿಕ್ರಂ , “ನಿಮ್ಮ ಹೇಳಿಕೆಗೆ ಧನ್ಯವಾದಗಳು, ರೆಡ್ಡಿ ಮತ್ತು ನಿಮ್ಮ ನಡುವೆ ನಡೆದ ಮಾತುಕತೆಯನ್ನು ಶೋಧಿಸಲು ನಿಮ್ಮ ಮೊಬೈಲ್
ಫೋನು ನಮಗೆ ಬೇಕು”
“ಸಾರ್ ! ನನ್ನ ಹಳೆಯ ಮೊಬೈಲ್ ಕಳೆದು ಮೂರು ದಿನವಾಗಿದೆ. ಕಂಪ್ಲೇಂಟ್ ಕೂಡಾ ಕೊಟ್ಟಾಗಿದೆ, ಈಗಿರುವುದು ಹೊಸ ಮೊಬೈಲ್, ನೀವು ತೆಗೆದುಕೊಳ್ಳಬಹುದು”
“ವಾಟ್ ಎ ಕೋ ಇನ್ಸಿಡೆಂಟ್”
“ಈ ಕೇಸು ಮುಗಿಯುವವರೆಗೂ ಸಂಶಯದ ದೃಷ್ಟಿಯಿಂದ ನಿಮ್ಮನ್ನು ಅರೆಸ್ಟ್ ಮಾಡಲಾಗುವುದು”.
“ಸತ್ಯ ಹೇಳಿದವರಿಗೆ ಉಳಿವಿಲ್ಲ ಎಂಬುವುದಕ್ಕೆ ಇದೊಂದು ಉದಾಹರಣೆ. ಮೀಡಿಯಾದ ಮುಂದೆ ನಿಮ್ಮ ಕೆಲಸವನ್ನು ತೋರಿಸಿಸಲು ಇದೊಂದು ಉಪಾಯ ಎಂದು ನನಗೆ ಚನ್ನಾಗಿ ಗೊತ್ತು. ಯು ವಿಲ್ ರಿಪೆಂಟ್ ಫಾರ್ ಇಟ್”
“ಪಾಟೀಲರೇ ಇವಳನ್ನು ಬಂಧನದಲ್ಲಿರಿಸಿ, ಹೆಸರು ಮಾತ್ರ ಗುಪ್ತವಾಗಿರಲಿ, ಅವಳ ಮೊಬೈಲನ್ನು ಮಿ. ಜೋಸ್ ಗೆ ಪರಿಶೀಲನೆಗೆ ರವಾನೆ ಮಾಡಿ, ಅನಿಲನ ಮೇಲೆ ವಾರೆಂಟ್ ಕಳಿಸಿ. ಈಗ ನಾನು ತಕ್ಷಣವೇ ಅವನ ಆಫೀಸಿಗೆ ಹೋಗಬೇಕು” ಎಂದು ಆದೇಶ ಕೊಟ್ಟನು ವಿಕ್ರಂ. ಕೆಲವೇ ನಿಮಿಷಗಳಲ್ಲಿ ಪೊಲೀಸ್ ಜೀಪು, ಬಿಡದಿಯ ಇಂಡಸ್ಟ್ರಿಯಲ್ ಎಸ್ಟೇಟ್ ಹತ್ತಿರವಿದ್ದ ಅವನ ಆಫೀಸನ್ನು ಸೇರಿತ್ತು. ಗೇಟಿನಲ್ಲಿದ್ದ ಗಾರ್ಡಿನಿಂದ ಆಫೀಸಿನ ಕೀಲಿಯನ್ನು ತೆರೆಸಿ, ನೇರವಾಗಿ ರೆಡ್ಡಿಯ ಚೇಂಬರ್ನೊಳಗೆ ಹೋಗಿ, ಸೂಕ್ಷ್ಮವಾಗಿ ಕಣ್ಣಾಡಿಸಿದನು. ಶೆಲ್ಫಿನಲ್ಲಿ ಅಚ್ಚು ಕಟ್ಟಾಗಿ ಫೈಲುಗಳನ್ನು ಜೋಡಿಸಲಾಗಿತ್ತು, ಟೇಬಲ್ ಮೇಲಿನ ಕುಂಡೆಯಲ್ಲಿದ ಹೂವುಗಳು ಇನ್ನೂ ತಾಜಾ
ಅನಿಸುತ್ತಿದ್ದವು. ಟೇಬಲಿನ ಮೇಲಿನ ಡ್ರಾವರನ್ನು ತೆಗೆದಾಗ ಕಂಡಿದ್ದು ಆಧುನಿಕ ಶೈಲಿಯ ಪಿಸ್ತೂಲು, ಕೆಳಗಡೆ ಡ್ರಾವರಿನಲ್ಲಿ ಸಿಕ್ಕಿದ್ದು ರಾಣಿಯ ಹೆಸರಿನಲ್ಲಿ ಬರೆದಿದ್ದ ಹತ್ತು ಲಕ್ಷ ರೂಪಾಯಿಗಳ ಚೆಕ್ಕು. ರಾಣಿಯ ಕುರಿತು ಕೊಟ್ಟ ಮೋನಿಕಾಳ ಹೇಳಿಕೆ ಬಹುತೇಕ ನಿಜವೆನಿಸಿತು ವಿಕ್ರಮಿನಿಗೆ. ‘ಹಾಗಾದರೆ ಈ ಪಿಸ್ತೂಲ್ ಏಕೆ? ಅವನಿಗೆ ಯಾರಿಂದಲಾದರೂ ಪ್ರಾಣ ಭೀತಿಯಿತ್ತೇ?’ ಅಥವಾ ‘ಸ್ವಯಂ ರಕ್ಷಣೆಗೆ ಇಟ್ಟುಕೊಂಡಿರಬಹುದೇ?’ ಎಂದು ಯೋಚಿಸತೊಡಗಿದನು.
ಕ್ರೈಂ ಬ್ರಾಂಚಿನ ಟೆಕ್ನಿಕಲ್ ಟೀಮಿನ ಅವಶ್ಯಕತೆ ಇದೆ ಎನಿಸಿ, ಮುಖ್ಯಸ್ಥ ಜೋಸ್ ಗೆ ಕರೆ ಮಾಡಿದನು. “ಮಿ. ಜೋಸ್, ನನಗೆ ಸಹಾಯ ಬೇಕಾಗಿದೆ. ಈಗ ನಾನು ಕಳಿಸುವ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ, ನನಗೆ ಈ ಮೊಬೈಲಿನಿಂದ ಬಂದ ಕೊನೆಯ ಟೆಕ್ಸ್ಟ್ ಮೆಸೇಜಿನ ವೇಳೆ ಮತ್ತು ಸ್ಥಳದ ಅವಶ್ಯಕತೆ ಇದೆ. ಪ್ಲೀಸ್ ಡು ಇಟ್ ಆಸ್ ಕ್ವಿಕ್ಲಿ ಆಸ್ ಪಾಸಿಬಲ್, ಹಾಗೆಯೇ ಪಾಟೀಲ್ ಕಳಿಸಿ ಕೊಡುವ ಮೊಬೈಲಿನಲ್ಲಿನ ಸಂದೇಶಗಳನ್ನು ಮತ್ತು ಕರೆಗಳನ್ನು ರಿಟ್ರೀವ್ ಮಾಡಲು ಪ್ರಯತ್ನ ಮಾಡಿ ಅರ್ಜೆಂಟ್ ಪ್ಲೀಸ್” ಎಂದು ಹೇಳಿ, ರೆಡ್ಡಿಯ ಮೊಬೈಲ್ ನಂಬರನ್ನು ಕಳುಹಿಸಿ, ಮುಂದಿನ ಯೋಜನೆಯ ಬಗ್ಗೆ ಚಿಂತಿಸತೊಡಗಿದನು. ವಿಕ್ರಂನಿಗೆ, ಡಾ. ಗುಪ್ತಾ ಮತ್ತು ಮೋನಿಕಾಳ ಮೇಲೆಯೂ ನಿಗಾ ಇಡುವುದು ಒಳ್ಳೆಯದೆನಿಸಿತು. ಅಷ್ಟರಲ್ಲಿಯೇ ಜೋಸ್ ನಿಂದ ಕರೆ ಬಂತು,
“ಮಿ. ವಿಕ್ರಂ ಅವನ ಮೊಬೈಲ್ನಿಂದ ಕೊನೆಯ ಮೆಸೇಜ್ ಹೋಗಿದ್ದು
ಸಾಯಂಕಾಲ ೭. ೩೦ ಗಂಟೆಯಲ್ಲಿ, ಬಿಡದಿಯ ಹತ್ತಿರದ ನೆಲ್ಲಿಗುಡ್ಡೆ ಕೆರೆಯ ಪ್ರದೇಶದಿಂದ, ಅನೇಬಲ್ ಟು ಟ್ರೇಸ್ ದಿ ಫೋನ್
ಫರ್ದರ್, ಸಾರೀ” ಎಂದು ಫೋನಿಟ್ಟನು. ಆಗಲೇ ಸಾಯಂಕಾಲ ಆರು ಗಂಟೆಯಾಗಿತ್ತು.” ಒಹ್! ನೋ,
ಪಾಟೀಲರೇ ಜೀಪ್ ರೆಡಿ ಮಾಡಿ ತಕ್ಷಣವೇ ನೆಲ್ಲಿಗುಡ್ಡೆ ಕೆರೆಗೆ ಹೋಗಬೇಕು”.
“ಸಾರ್, ಹೊರಗೆ ವಿಪರೀತ ಮಳೆ ಸುರಿಯುತ್ತಿದೆ, ಈ ಪರಿಸ್ಥಿತಿಯಲ್ಲಿ ಅಲ್ಲೇನು ಸಿಗುತ್ತದೆ?”
“ಪ್ರಮುಖವಾದ ಸುಳಿವು, ಶೀಘ್ರದಲ್ಲಿಯೇ ನಿಮಗೆ ಗೊತ್ತಾಗುತ್ತದೆ.”
ವಿಕ್ರಮನ ಆದೇಶದಂತೆ ಜೀಪು ಹದಿನೈದು ಕಿಲೋಮೀಟರ್ ದೂರದಲ್ಲಿದ್ದ ನೆಲ್ಲಿಗುಡ್ಡೆ ಕೆರೆಯನ್ನು ತಲುಪಿತ್ತು. ಯಾವಾಗೂ ಜನ ಜಂಗುಳಿಯಿಂದ ತುಂಬಿರುತ್ತಿದ್ದ ಕೆರೆಯ ಪ್ರದೇಶ, ಸುರಿಯುತ್ತಿದ್ದ ಧಾರಾಕಾರವಾದ ಮಳೆಯಿಂದಾಗಿ ನಿರ್ಜನವಾಗಿತ್ತು. ಸುರಿಯುತ್ತಿದ್ದ ಮಳೆಯಲ್ಲಿಯೂ ಜೀಪಿನಿಂದ್ ಕೆಳಗಿಳಿದು, ಏನನ್ನೋ ಹುಡುಕುತ್ತಲಿದ್ದ ವಿಕ್ರಮನನ್ನು ಪಾಟೀಲ್ ಹಿಂಬಾಲಿಸುತ್ತಿದ್ದನು. ಅನತಿ ದೂರದಲ್ಲಿ ಅವರಿಗೆ ಕಂಡಿದ್ದು ಮಿ. ರೆಡ್ಡಿಯ ಕಾರು.
“ಗಾಟ್ ಇಟ್” ಎಂದು ಉದ್ಘಾರವೆತ್ತಿದನು ವಿಕ್ರಂ.
ವಿಕ್ರಮನ ಚುರುಕು ಬುದ್ದಿಗೆ ಮನದಲ್ಲಿಯೇ ಅಭಿನಂದನೆ ವ್ಯಕ್ತಪಡಿಸಿ ಅವನ ಜೊತೆಗೆ ಕಾರಿನತ್ತ ಧಾವಿಸಿದನು ಪಾಟೀಲ. ಕಾರು ಹೊರಗಡೆಯಿಂದ ಲಾಕ್ ಆಗಿತ್ತು, ಒಳಗಡೆ ಯಾರೂ ಇರಲಿಲ್ಲ, ಮೊಬೈಲ್ ಫೋನಿನ ಸುಳಿವೂ ಇರಲಿಲ್ಲ.
“ಅಂದರೆ , ರೆಡ್ಡಿ ಇಲ್ಲಿಯವರೆಗೂ ಬಂದು ಮಾಯವಾಗಿದ್ದಾನೆ. ಕೆರೆಯನ್ನು ಶೋಧ ಮಾಡಲು ಬೋಟಿಂಗ್ ಟೀಮಿನ ಅವಶ್ಯಕತೆ ಇದೆ”
“ಸಾರ್, ಈ ರಾತ್ರಿಯಲ್ಲಿ ಸುರಿಯುತ್ತಿರುವ ಮಳೆಯಲ್ಲಿ ಈಗ ಇದು ಸಾಧ್ಯವಿಲ್ಲ . ಪೊಲೀಸರಿಗೆ ಕಾರನ್ನು ಗಾರ್ಡ್ ಮಾಡಲು ಹೇಳಿ ನಾಳೆ ಬೆಳಿಗ್ಗೆ ಬರೋಣ” ಎಂದು ಸಲಹೆ ಕೊಟ್ಟನು ಪಾಟೀಲ. ಅವನ ಯೋಚನೆ ಸರಿ ಎನಿಸಿ ಮನೆಗೆ ಹಿಂದುರಿಗಿದನು ವಿಕ್ರಂ.
ಸುರಿಯುತ್ತಿದ್ದ ಮಳೆಯು ಬೆಳಗಿನ ವೇಳೆಗೆ ತಣ್ಣಗಾಗಿತ್ತು. ಪೊಲೀಸ್ ಪಡೆಯೊಂದಿಗೆ ವಿಕ್ರಮನು ಕೆರೆಯನ್ನು ತಲುಪಿದಾಗ ಹತ್ತು ಗಂಟೆಯಾಗಿತ್ತು. ಅಷ್ಟರಲ್ಲಿಯೇ ರಾತ್ರಿ ಕಾರು ಕಾವಲಿಗೆಂದು ಇದ್ದ ಪೇದೆಗಳು ಕೆರೆಯಲ್ಲೊಂದು ಹೆಣ ತೇಲಾಡುತ್ತಿದೆಯೆಂದು ಹೇಳಿದರು. ಬೋಟಿಂಗ್ ಟೀಮಿನವರು ಹೆಣವನ್ನು ಹೊರ ತರುವದರಲ್ಲಿ ಯಶಸ್ವಿಯಾಗಿದ್ದರು. ಅಷ್ಟೇನು ಬದಲಾವಣೆಯಾಗದಿದ್ದ ದೇಹ , ದೇಹದ ಮೇಲಿದ್ದ ಬಟ್ಟೆ, ಬಟ್ಟೆಯ ಜೇಬಿನಲ್ಲಿದ್ದ ಕಾರ್ ಕೀ ಮತ್ತು ಮೊಬೈಲ್ನಿಂದ ಅದು ರೆಡ್ಡಿಯ ದೇಹವೆಂದೇ ಖಚಿತವಾಯ್ತು. ವಿಕ್ರಂ ದೇಹವನ್ನು ಅರ್ಜೆಂಟ್ ಪೋಸ್ಟ್ ಮಾರ್ಟಮ್ ಗೆ ರವಾನೆ ಮಾಡಲು ತಿಳಿಸಿ, ಮೋನಿಕಾ ಮತ್ತು ಡಾ. ಗುಪ್ತಾಗೆ ಸ್ಟೇಷನಗೆ ಬರ ಹೇಳಿ, ಪಾಟೀಲ್ ನೊಂದಿಗೆ ಕಾರಿನ ಬಾಗಿಲನ್ನು ತೆರೆದು ಸೂಕ್ಷ್ಮ ವೀಕ್ಷಣೆಯನ್ನು ಮಾಡಿದನು. ಕಾರಿನ ಒಳಗಾಗಲಿ ಅಥವಾ ಹೊರಗಾಗಲಿ ಏನೂ ಪುರಾವೆ ಸಿಗಲಿಲ್ಲ. ಸುರಿದ ಮಳೆಯಿಂದ ಕಾರಿನ ಹೊರಗಡೆ ಯಾವುದೇ ಹೆಜ್ಜೆ
ಗುರುತುಗಳೂ ಕಾಣಿಸಲಿಲ್ಲ. ಸ್ಟೀಯರಿಂಗಿನ ಮೇಲಿನ ಫಿಂಗರ್ ಪ್ರಿಂಟ್ ತೆಗೆದುಕೊಂಡ ಮೇಲೆ ಕಾರನ್ನು ಠಾಣೆಗೆ ತರಲು ಹೇಳಿ ಪಾಟೀಲನೊಂದಿಗೆ ಸ್ಟೇಷನಗೆ ಮರಳಿದನು ವಿಕ್ರಂ.
ಕೊನೆಗೂ ಅನಿಲನನ್ನು ಹುಡುಕಿ, ಅರೆಸ್ಟ್ ಮಾಡಿ, ಠಾಣೆಗೆ ತರುವಲ್ಲಿ ಪೊಲೀಸ್ ಪಡೆಯವರು ಯಶಸ್ವಿಯಾಗಿದ್ದರು. ರೆಡ್ಡಿಗೆ ಇಪ್ಪತ್ತು ಲಕ್ಷ ಹಣ ಕೊಡುವದಿತ್ತೆಂದು , ಅವರಿಬ್ಬರ ನಡುವೆ ಜಗಳವಾಗುತ್ತಿದ್ದಿದ್ದು ನಿಜವೆಂದು ಹಾಗು ಅವನು ಕಾಣೆಯಾದ ವಿಷಯದಲ್ಲಿ ತನಗೇನೂ ಸಂಬಂಧವಿಲ್ಲವೆಂದು ಹೇಳಿಕೆ ಕೊಟ್ಟಿದ್ದನು ಅನಿಲ್. ಮೋನಿಕಾ ಮತ್ತು ಡಾ. ಗುಪ್ತ ವಿಕ್ರಮನ ಆದೇಶದಂತೆ ಸ್ಟೇಷನಗೆ ಬಂದಿದ್ದರು.
ಅವರೆಲ್ಲರಿಂದ ಮತ್ತೊಮ್ಮೆ ಮರು ಹೇಳಿಕೆ ಪಡೆದು, ಎಲ್ಲರ ಮೊಬೈಲುಗಳನ್ನು ಪಡೆದು, ಮಿ. ಜೋಸ್ ಗೆ ರವಾನಿಸಿ ಮೆಸೇಜ್ ಅನಲೈಸಿಂಗ್ ಮತ್ತು ರಿಟ್ರೀವಿಂಗ್ ಮಾಡಲು ಹೇಳಿ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತ ಕುಳಿತನು ವಿಕ್ರಂ.
ಮರಣೋತ್ತರ ಪರೀಕ್ಷೆಯ ಪ್ರಕಾರ … ದೇಹದ ಮೇಲೆ ಯಾವುದೇ ಗಾಯಗಳಿಲ್ಲವೆಂದೂ, ಪುಪ್ಪುಸದಲ್ಲಿ ನೀರು ಮತ್ತು ಪಾಚಿ ಇರುವುದರಿಂದ ಕೆರೆಯಲ್ಲಿ ಬಿದ್ದಾಗ ಅವನು ಜೀವಂತನಿದ್ದನೆಂದೂ, ಶರೀರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆರಾಯಿನ್ ಪತ್ತೆಯಾಗಿದ್ದರಿಂದ ಸಾಯುವ ಮುನ್ನ ಅವನು ಡ್ರಗ್ಗಿನ ಪ್ರಭಾವದಲ್ಲಿ ಇದ್ದ ಎಂಬುವುದು ಖಚಿತವೆಂದೂ, ಒಟ್ಟಿನಲ್ಲಿ ಇದೊಂದು ಬಹುಶಃ ಆತ್ಮಹತ್ಯೆ ಎಂದು ರಿಪೋರ್ಟ್ ಸೂಚಿಸಿತ್ತು. ಯಾಕೋ ವಿಕ್ರಮನ ಮನಸು ಇನ್ನೂ ಬೇರೆ ಏನನ್ನೋ ಯೋಚಿಸತೊಡಗಿತ್ತು. ಅವನಿಗೆ ಕಾರನ್ನು ಇನ್ನೊಮ್ಮೆ ಪರೀಕ್ಷಿಸಬೇಕೆನಿಸಿ ಕಾರಿನತ್ತ ಹೋದನು. ಸ್ಟೀಯರಿಂಗ್ ಮೇಲೆ ಸ್ಪಷ್ಟವಾದ ಫಿಂಗರ್ ಪ್ರಿಂಟ್ ಮೂಡಿಲ್ಲ ಎಂಬ ವರದಿಯನ್ನು ನೋಡಿ ಅವನಿಗೆ ಇನ್ನೂ ಕುತೂಹಲ ಮೂಡಿತ್ತು. ಹಾಗಾದರೆ ಸ್ಟೀಯರಿಂಗನ್ನು ಯಾರಾದರೂ ತೊಳೆದಿರಬಹುದೇ ? ಅವನ ಜೊತೆಗೆ ಕಾರಿನಲ್ಲಿ ಬೇರೆ ಯಾರಾದರೂ ಇದ್ದಿರಬಹುದೇ? ಎಂದು ಯೋಚಿಸತೊಡಗಿದನು.
ಒಂದು ಕ್ಷಣ ಸ್ಟೀಯರಿಂಗಿಗೆ ಲ್ಯೂಮಿನಾಲ್ ಲೇಪಿಸಿ ನೋಡಬೇಕೆನಿಸಿತು. ತನ್ನ ಕಾರಿನ ಬಾಟಲಿನಲ್ಲಿದ್ದ ಲ್ಯೂಮಿನಾಲನ್ನು ತಂದು ಸ್ಟೀಯರಿಂಗಿಗೆ ಲೇಪಿಸಿದ ತಕ್ಷಣವೇ ಗುಪ್ತವಾಗಿದ್ದ ಒಂದು ರಕ್ತದ ಕಲೆಯು ಹೊಳೆಯತೊಡಗಿತು. ಉಳಿದ ದ್ರವ್ಯವನ್ನು ಅವನು ಸೀಟುಗಳ ಮೇಲೆಯೂ ಮತ್ತು ಡಿಕ್ಕಿಯಲ್ಲಿಯೂ ಲೇಪಿಸಿದನು. ಡಿಕ್ಕಿಯ ಮೂಲೆಯಲ್ಲೂ ಒಂದು ಸಣ್ಣ ರಕ್ತದ ಕಲೆಯು ಹೊಳೆಯತೊಡಗಿತು.
ತಾನು ಯೋಚಿಸಿದ್ದು ಸರಿ ಎನಿಸಿ ತಕ್ಷಣವೇ ಫಾರೆನ್ಸಿಕ್ ಸ್ಕ್ರೀನಿಂಗ್ ಟೀಮನ್ನು ಕರೆಯಿಸಿ, ರಕ್ತದ ಕಲೆಯಿಂದ ಸ್ಯಾಂಪಲ್
ಸಂಗ್ರಹಿಸಿ, ಅರ್ಜೆಂಟ್ ಡಿ ಏನ್ ಎ ಅನಲೈಸಿಂಗಿಗೆ ಕಳುಹಿಸಿದನು. ಡಿಕ್ಕಿಯಲ್ಲಿದ್ದ ರಕ್ತದ ಕಲೆಯು ರೆಡ್ಡಿಯದೆಂದು ಆದರೆ ಸ್ಟೀಯರಿಂಗ್ ಮೇಲೆ ಇದ್ದ ರಕ್ತವು ಬೇರೆಯವರದೆಂದು ರಿಪೋರ್ಟ್ ಬಂದಿತು. ತಕ್ಷಣವೇ ವಿಕ್ರಂ ಅಂದುಕೊಂಡನು ಅಂದರೆ ,
ರೆಡ್ಡಿಯನ್ನು ಡಿಕ್ಕಿಯಲ್ಲಿ ಹಾಕಿ ಬೇರೆ ಯಾರೋ ಕಾರನ್ನು ಡ್ರೈವ್ ಮಾಡಿರುವರು. ಹಾಗಾದರೆ ಆ ಬೇರೆಯವನು ಯಾರು ? ಎಂದು ಯೋಚಿಸತೊಡಗಿದನು.
ತಕ್ಷಣವಾಗಿ ಅವನಿಗೆ ಶಂಕೆ ಬಂದಿದ್ದು ರಾಣಿ, ಅನಿಲ್, ಮೋನಿಕಾ ಮತ್ತು ಡಾ. ಗುಪ್ತಾರ ಮೇಲೆ. ವೈದ್ಯರ ಸಹಾಯದಿಂದ ಅವರೆಲ್ಲರ ರಕ್ತವನ್ನು ಸಂಗ್ರಹಿಸಿ ಫಾರೆನ್ಸಿಕ್ ಲ್ಯಾಬ್ ಗೆ ಕಳುಹಿಸಿದನು. ಆಶ್ಚರ್ಯವೆಂಬುವಂತೆ ಸ್ಟೀಯರಿಂಗ್ ಮೇಲೆ ಇದ್ದ ರಕ್ತವು ಡಾ. ಗುಪ್ತಾನದೆಂದು ಪರೀಕ್ಷೆಯಿಂದ ಖಚಿತವಾಗಿತ್ತು. ಡಾ. ಗುಪ್ತಾನನ್ನು ಅರೆಸ್ಟ್ ಮಾಡಿ ಠಾಣೆಗೆ ಕರೆತಂದಾಗಿತ್ತು. ವಿಕ್ರಂ ಅವನಿಗೆ ಜೋರಾಗಿ ಹೇಳುತ್ತಿದ್ದನು,
ಡಾ. ಗುಪ್ತಾ ನೀವಾಗಿಯೇ ತಪ್ಪನ್ನು ಒಪ್ಪಿಕೊಂಡರೆ ಒಳ್ಳೆಯದು ಇಲ್ಲವಾದರೆ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಗುಪ್ತಾನಿಗೆ ಬೇರೆ ಹಾದಿ ಇಲ್ಲವೆನಿಸಿತು.
“ಹೌದು ಸಾರ್! ನಾನು ಮಾಡಿದ ಪ್ಲಾನ್ ಪರ್ಫೆಕ್ಟ್ ಅಂತಾ ಅಂದುಕೊಂಡಿದ್ದೆ ಆದರೆ ಅದು ಸುಳ್ಳಾಯಿತು. ಆಸ್ಪತ್ರೆಯಲ್ಲಾದ ನಷ್ಟದಿಂದ, ಐಷಾರಾಮದ ಜೀವನ ಶೈಲಿಯಿಂದ ಹಣದ ಉಬ್ಬರವಾಗಿತ್ತು. ರೆಡ್ಡಿಯಿಂದ ಆಗಾಗ್ಯೆ ತೆಗೆದುಕೊಂಡ ಸಾಲದ ಮೊತ್ತ ಐವತ್ತು ಲಕ್ಷವನ್ನು ದಾಟಿತ್ತು. ಅವನು ಇತ್ತಿತ್ತಲಾಗಿ ಹಣ ಮರಳಿಸಲು ಭಯಂಕರ ಕಿರುಕುಳ ಕೊಡತೊಡಗಿದ್ದನು, ಅದನ್ನು ತಡೆದುಕೊಳ್ಳಲಾಗದೇ ಅವನನ್ನೇ ಮುಗಿಸಿ ಬಿಡುವ ಯೋಚನೆಯನ್ನು ಹಾಕಿದೆ. ಡೀಪ್ ಫೇಕ್ ಟೆಕ್ನಾಲಜಿ ಉಪಯೋಗಿಸಿ ರಾಣಿ ಮತ್ತು ರೆಡ್ಡಿ ಜೊತೆಗೂಡಿದ ಸುಳ್ಳು ಫೋಟೋಗಳನ್ನು ಮೋನಿಕಾಗೆ ಕಳುಹಿಸಿ, ಅವಳಲ್ಲಿ ಅವನ ಬಗ್ಗೆ ಸಂಶಯ ಹುಟ್ಟಿಸಿದೆ. ಎರಡು ದಿನಗಳ ಹಿಂದೆ ಮೋನಿಕಾಳನ್ನು ನನ್ನ ಮನೆಗೆ ಕರೆತಂದೆ. ರೆಡ್ಡಿಗೆ ಹೆರಾಯಿನ್ ಬಗ್ಗೆ ಒಲವಿದ್ದದ್ದು ನನಗೆ ಮೊದಲಿನಿಂದಲೂ ಗೊತ್ತಿತ್ತು. ಕೆಲವು ಸಲ ಇಬ್ಬರೂ ಸೇರಿ ಸವಿದಿದ್ದೆವು. ಮೊನ್ನೆ ಅವನಿಗೆ ಫೋನು ಮಾಡಿ, ಅವನ ಮನೆಯಲ್ಲಿ ಇಪ್ಪತ್ತು ಲಕ್ಷ ಹಣ
ಹಿಂತಿರುಗಿಸುವದಾಗಿಯೂ ಮತ್ತು ಕೂಡಿ ಹೆರಾಯಿನ್ ಸೇವಿಸುವದಾಗಿಯೂ ತಿಳಿಸಿದ್ದೆ. ಈ ಪ್ಲಾನಿನನಲ್ಲಿ ಹಣದಾಸೆ ಹಚ್ಚಿ ಮನೆಗೆಲಸದ ಹುಡುಗ ರಾಜುನನ್ನು ಉಪಯೋಗಿಸಿದೆ. ಮನೆಯಲ್ಲಿಯ ಎಲ್ಲ ಸಿ ಸಿ ಟಿವಿಗಳನ್ನು
ಅವನ ಕೈಯಿಂದ ಆಫ್ ಮಾಡಿಸಿದ್ದೆ. ನನ್ನನ್ನು ನಂಬಿ ಆರೂವರೆ ಗಂಟೆಗೆ ರೆಡ್ಡಿ ಮನೆಗೆ ಬಂದಿದ್ದ. ಅವನ ರಕ್ತನಾಳದಲ್ಲಿ ಅಪಾಯಕರ ಪ್ರಮಾಣದ ಹೆರಾಯಿನ್ ನನ್ನು ಇಂಜೆಕ್ಟ್ ಮಾಡಿದ್ದೆ. ಕೆಲವೇ ನಿಮಿಷಗಳಲ್ಲಿ ಅವನು ಮೂರ್ಛೆ ಹೋಗಿದ್ದ. ರಾಜುವಿನ ಸಹಾಯದಿಂದ ಅವನನ್ನು ಅವನ ಕಾರಿನ ಡಿಕ್ಕಿಯಲ್ಲಿ ಹಾಕಿದ್ದೆ. ಕುಳಿತ ಸ್ಥಳವನ್ನು ಸ್ವಚ್ಛಗೊಳಿಸುವ ಅವಸರದಲ್ಲಿ ನನಗೆ ದುರದೃಷ್ಟವಶಾತ್ ನೀಡಲ್ ಸ್ಟಿಕ್ ಇಂಜುರಿ ಆಗಿತ್ತು.
ರಾಜುನ ಜೊತೆಗೆ ಕಾರನ್ನು ಓಡಿಸಿ ಹತ್ತಿರದ ನೆಲ್ಲಿಗುಡ್ಡೆ ಕೆರೆಗೆ ಬಂದು ರಾಜುನ ಸಹಾಯದಿಂದ ಮೂರ್ಛೆಗೊಂಡಿದ್ದ ರೆಡ್ಡಿಯನ್ನು ಕೆರೆಯಲ್ಲಿ ತಳ್ಳಿದೆ. ತಳ್ಳುವ ಮುಂಚೆ ಅವನದೇ ಮೊಬೈಲ್ನಿಂದ ಮೋನಿಕಾಗೆ ಮೆಸೇಜ್ ಕಳುಹಿಸಿದ್ದೆ ಹಾಗೂ ಫಿಂಗರ್ ಪ್ರಿಂಟ್ ಅಳಿಸಲು ಸ್ಟೀಯರಿಂಗನ್ನು ಬಟ್ಟೆಯಿಂದ ತಿಕ್ಕಿ, ಕಾರನ್ನು ಲಾಕ್ ಮಾಡಿ, ಕಾರ ಕೀ ಮತ್ತು ಮೊಬೈಲ್ ಅನ್ನು ಅವನ ಜೇಬಿನಲ್ಲಿ ಹಾಕಿದ್ದೆ. ಮಳೆ ಸುರಿಯುತ್ತಿದ್ದರಿಂದ ಜನರು ಯಾರೂ ಇರಲಿಲ್ಲ. ಟ್ಯಾಕ್ಸಿ ಹಿಡಿದುಕೊಂಡು ಮನೆ ಸೇರಿ, ಮೋನಿಕಾಳನ್ನು ಕರೆದುಕೊಂಡು ಸ್ಟೇಷನ್ ಗೆ ಬಂದಿದ್ದೆ. ಇದು ಕೊಲೆಯಲ್ಲ ಆತ್ಮಹತ್ಯೆ ಅಂತ ತೋರಿಸುವುದೇ ನನ್ನ ಉದ್ದೇಶವಾಗಿತ್ತು. ಮುಂದೆ
ಏನಾಯಿತಂತ ನಿಮಗೇ ಗೊತ್ತಲ್ಲ” ಎಂದು ಎಲ್ಲವನ್ನೂ ವಿವರಿಸಿ ತಲೆ ತಗ್ಗಿಸಿ ನಿಂತುಕೊಂಡನು.
“ದುರದೃಷ್ಟವಶಾತ್ ನಿಮ್ಮ ಬೆರಳಲ್ಲಾದ ನೀಡಲ್ ಸ್ಟಿಕ್ ಇಂಜುರಿಯಿಂದ ಸ್ಟೀಯರಿಂಗ್ ಮೇಲೆ ಹಾಗು ಹೆರಾಯಿನ ಸೇವಿಸಿದ ರೆಡ್ಡಿಯ ರಕ್ತನಾಳದಿಂದ ಡಿಕ್ಕಿಯಲ್ಲಿ ಅಂಟಿದ ಸಣ್ಣ ರಕ್ತದ ಕಲೆ ನಿಮ್ಮ ಕಣ್ಣಿಗೆ ಕಾಣದೇ ಹೋಯಿತಲ್ಲವೇ?”
ವಿಕ್ರಂ ವೇಳೆಯನ್ನು ನೋಡಿಕೊಂಡನು, ಮೂರು ದಿನಗಳಿಗೆ ಇನ್ನೂ ಮೂರು ತಾಸು ಬಾಕಿ ಇತ್ತು!

ಡಾ. ಶಿವಶಂಕರ ಮೇಟಿ

ನನ್ನ ಕತೆ – ಕೇಶವ ಕುಲಕರ್ಣಿ

ಈ ವಾರದ ಪ್ರಕಟಣೆ ವಿಳಂಬವಾಗಿರುವುದಕ್ಕೆ ಕ್ಷಮೆ ಕೋರುತ್ತೇನೆ. ಈ ವಾರದ ಪ್ರಕಟನೆ ನಾನು ೨೦ ವರ್ಷಗಳ ಹಿಂದೆ ಬರೆದ ಕತೆ, `ತರಂಗ`ದಲ್ಲಿ `ತಿಂಗಳ ಬಹುಮಾನಿತ ಕಥೆ`ಯಾಗಿ ಪ್ರಕಟವಾಗಿತ್ತು. ಎರಡು ದಶಕಗಳ ನಂತರದ ಈ ಆಧುನಿಕ ಕಾಲದಲ್ಲಿ ಈ ಕಥೆ ಅಪ್ರಸ್ತುತ ಎನಿಸಬಹುದು. ಈ ಹಿಂದೆ ಪ್ರಕಟವಾದ ಕಥೆಯನ್ನೇ ಇಲ್ಲಿ ನಿಮ್ಮ ಮುಂದಿಡುತ್ತಿರುವುದಕ್ಕೂ ಕ್ಷಮೆ ಕೋರುತ್ತೇನೆ. – ಕೇಶವ

ಇದೆನ್ನೆಲ್ಲ ನಿಮ್ಮ ಮುಂದೆ ಕಕ್ಕಿಬಿಡಬೇಕು ಎಂದು ನಾನು ನಿಮ್ಮ ಎದುರಿಗೆ ಇದೀಗ ಕುಳಿತಿದ್ದೇನೆ. ಏಕೆಂದರೆ ಕಕ್ಕುವುದು ನನಗೀಗ ಅನಿವಾರ್ಯವಾಗಿದೆ. ಅದರ ಸಲುವಾಗಿಯೇ ಈಗ ಎಲ್ಲವನ್ನೂ ಒಂದೂ ಬಿಡದೇ ಸಾವಕಾಶವಾಗಿ ಹೇಳುತ್ತೇನೆ. ಇಷ್ಟಾದರೂ ಈಗ ಎಲ್ಲಿಂದ ಶುರು ಮಾಡಲಿ ಎಂದು ತಿಳಿಯಲಾರದೇ ಒದ್ದಾಡುತ್ತಿದ್ದೇನೆ. ಎಲ್ಲಿಂದ ಶುರುಮಾಡಿದರೆ ನಿಮ್ಮಗೆ ಪೂರ ಅರ್ಥವಾದೀತು ಎಂದು ನನಗೆ ಅರ್ಥವಾಗುತ್ತಿಲ್ಲ.

ಅವತ್ತೂ ಹೀಗೆಯೇ ಆಯಿತು. ರೂಪಾ ಕುಲಕರ್ಣಿಯ ಬರ್ತ್‌ಡೇ ಪಾರ್ಟಿ ಮುಗಿಸಿಕೊಂಡು ರಾತ್ರಿ ಹನ್ನೊಂದ್ದಕ್ಕೆ ಖೋಲಿಗೆ ಬಂದಾಗ ಹೀಗೆಯೇ, ಎಲ್ಲವನ್ನೂ ಕಕ್ಕಿ ಬಿಡಬೇಕು ಅನಿಸಿತು. ಖೋಲಿಯಲ್ಲಿ ಉಳಿದವರಿಬ್ಬರೂ ಸಿನಿಮಾಕ್ಕೆ ಹೋಗಿದ್ದರು. ಕೈಗೆ ಸಿಕ್ಕ ವಹಿ ತೆಗೆದುಕೊಂಡು ಹೀಗೆಯೇ ಶುರು ಮಾಡಿ, ಬರ್ತ್‌ಡೇ ಪಾರ್ಟಿಯಲ್ಲಿ ನಡೆದುದನ್ನು, ಅದು ನನ್ನ ಮೇಲೆ ಮಾಡಿದ ಪರಿಣಾಮವನ್ನು, ನಾನು ಬೆಳೆದ ವಾತಾವರಣವು ಅಲ್ಲಿ ತಂದ ಸಂದಿಗ್ಢತೆಯನ್ನು ಬರೆಯುತ್ತ ಹೋದೆ. ಬರ್ತ್‌ಡೇ ಪಾರ್ಟಿ ತೆಲೆಯನ್ನು ಪೂರ ಕೆಡೆಸಿತ್ತು. ಸುಮಾರು ಇಪ್ಪತ್ತು ಪಾನು ಗೀಚಿದೆ. ಏಕೆಂದರೆ ಆಗಲೂ ಹಾಗೆಯೇ, ಕಕ್ಕುವುದು ಅನಿವಾರ್ಯವಾಗಿತ್ತು. ಇಲ್ಲದಿದ್ದರೆ ನಾನು ನನ್ನ ಮನಸ್ಸಿನ ತಳಮಳದಿಂದ ಹೊರಬರಲು ಸಾಧ್ಯಗಲಾರದೇ ಒದ್ದಾಡುತ್ತಿದ್ದೆ. 

ಹೀಗೆಲ್ಲ ಹೇಳಿದರೆ ನಿಮ್ಮಗೆ ತಿಳಿಯುವದಿಲ್ಲವೆಂದು ಗೊತ್ತು. ಹಾಗೆಂದು ಆವತ್ತು ಬರೆದ ಇಪ್ಪತ್ತು ಪಾನುಗಳನ್ನು ಇಲ್ಲಿ ಹೇಳುವುದಿಲ್ಲ; ಅವುಗಳನ್ನು ಹೇಳುವ ಮನಸ್ಸೂ ಇಲ್ಲ. ನನಗೆ ಆದಕ್ಕಿಂತ ಮುಂದಿನದನ್ನು ಹೇಳಬೇಕಾಗಿದೆ. ಆದರೆ ಹಿಂದಿನದು ಗೊತ್ತಿರದೇ  ಮುಂದಿನದು ತಿಳಿಯಲಿಕ್ಕಿಲ್ಲವೆಂದು ಹಿಂದಿನದನ್ನು ಹೇಳಿ ಮುಂದೆ ಸಾಗುತ್ತೇನೆ.

ನಾನೊಬ್ಬ ವಿಚಿತ್ರ ವ್ಯಕ್ತಿತ್ವದ ಮನುಷ್ಯ. ನನ್ನ ಸ್ವಭಾವ ಪರಿಚಯ ಮಾಡಿ ಕೊಡಲು ಇದೆಲ್ಲ ಹೇಳಿದರೆ ಸಾಕು ಅನಿಸುತ್ತದೆ. ಈಗಿನ ಕಾಲ: ೧೯೯೨. ಹೆಸರು (ಏನಾದರೂ ನಡೆದೀತು), ವಯಸ್ಸು: ಇಪ್ಪತ್ತು, ಓದುತ್ತಿರುವುದು: ಬಿ. ಇ (ಮೆಕ್ಯಾನಿಕಲ್) ಜಾತಿ: ಬ್ರಾಹ್ಮಣ; ಹವ್ಯಾಸ: ಕಥೆ-ಕವನ ಓದುವುದು, ಬರೆಯುವುದು. ನಮ್ಮ ಮನೆಯಲ್ಲಿ ಒಟ್ಟೂ ನಾಕೇ ಮಂದಿ – ಸಣ್ಣ ಪಗಾರದ ಧಾರ್ಮಿಕ ನಡೆವಳಿಕೆಯ ಬಾಳುತ್ತಿರುವ ಅಪ್ಪ, ಅಪ್ಪನ ಮಾತು ಕೇಳಿಕೊಂಡು ಬದುಕುತ್ತಿರುವ ಕ್ಯಾನ್ಸರಿನಿಂದ ನವೆಯುತ್ತಿರುವ ಅಮ್ಮ, ಮೂರೂವರೆ ವರ್ಷದಿಂದ ಮೂಲೆಯಲ್ಲಿ ಪಾರ್ಸಿ ಹೊಡೆದು ಮಲಗಿದ ಅಜ್ಜಿ ಮತ್ತು ನಾನು. ಮನೆಯಲ್ಲಿ ಪೂರ ಧಾರ್ಮಿಕ ವಾತಾವರಣ. ನಮ್ಮಜ್ಜ ನಮ್ಮಪ್ಪ ಮಗುವಾಗಿರುವಾಗಲೇ ಸತ್ತನಂತೆ; ಅಂದಿನಿಂದ ನಮ್ಮಜ್ಜಿ ಮಾಡಿಯಾಗಿದ್ದಾಳೆ ( ಈ ಕಥೆ ಮುಗಿಯುವುದರೊಳಗಾಗಿ ಸಾಯುತ್ತಾಳೆ). ದಿನಾಲು ಮಡಿ ಊಟವೇ ಆಗಬೇಕು. ತನೆಗೇ ಏಡಿರೋಗ ಬಡಿದಿದ್ದರೂ ಅವ್ವ ದೇವರು-ದಿಂಡಿರೆಂದು ಕಷ್ಟಪಟ್ಟು ಮಡಿ ಅಡಿಗೆ ಮಾಡುತ್ತಾಳೆ. ದಿನಾಲೂ ದೇವರ ಪೂಜೆ, ವೈಶ್ವದೇವ, ರಾಯರ ಹಸ್ತೋದಕ ಆಗಲೇಬೇಕು. ಪ್ರತಿ ಗುರುವಾರ ತಾರತಮ್ಯ ಭಜನೆ, ಕಡ್ಡಾಯವಾಗಿ ಎರಡು ಹೊತ್ತು ಸಂಧ್ಯಾವಂದನೆ ಇವನ್ನೆಲ್ಲ ಅಪ್ಪ ಶ್ರದ್ದೆಯಿಂದ ಮಾಡುತ್ತಾನೆ. ಔಷಧಿಗಾಗಿ ಪೈಸೆ ಪೈಸೆ ಕೊಡಿಸಿ ಅಮ್ಮ, ಅಜ್ಜಿಯರನ್ನು ಡಾಕ್ಟರಿಗೆ ತೋರಿಸುತ್ತಾನೆ. ಅಂತಹುದರಲ್ಲಿ ಮುಂಚಿನಿಂದಲ್ಲು ಚಲೋ ಓದಿದ್ದರಿಂದಲೋ ಏನೋ, ಚಲೋ ಮಾರ್ಕ್ಸ್ ಬಂದು ನಾನು ಹದಿನೆಂಟನೆಯ ವಯಸ್ಸಿಗೆ ಬಾಗಲಕೋಟೆಯಿಂದ ಹುಬ್ಬಳ್ಳಿಗೆ (ಬಿವಿಬಿ ಕಾಲೇಜು) ಬರಬೇಕಾಗಿ ಬಂತು. ಅಪ್ಪ ಹಾಗೂ ಹೀಗೊ ತಿಂಗಳಿಗೆ ನಾನೂರೋ ಐನೂರೋ ಕಳಿಸುತ್ತಾನೆ.

ಇಲ್ಲಿ ಹುಬ್ಬಳ್ಳಿಗೆ ಬಂದ ಮೇಲೆ ನನ್ನಲ್ಲಿ ಒಂದೊಂದೇ ಬದಲಾವಣೆಗಳು ಕಾಣಿಸಿಕೊಳ್ಳಲು ಶುರುವಾದವು. ನಾನು ಹೈಸ್ಕೂಲಿನಲ್ಲಿದ್ದಾಗ ಮಾಡುತ್ತಿದ್ದ ಗಾಂಧಿ-ಟಾಲ್ಸ್ಟಾಯ್ ಭಜನೆಗಳು ಸಾವಕಾಶವಾಗಿ ಕಡಿಮೆಯಾಗಲು ಹತ್ತಿದವು. ಹಾಸ್ಟೆಲಿನಲ್ಲಿ ಬೇರೆ ಬೇರೆ ತರಹದ ಗೆಳೆಯರು ಸುತ್ತುವರಿದಿದ್ದಾರೆ. ಹುಡುಗಿಯರ ಬಗೆಗೆ ಹೇಸಿಗೆಯಿಲ್ಲದೇ ಹೊಲಸು ಮಾತಾಡುತ್ತಾರೆ. ಮುಂಚಿ ಇಂತಹುದನ್ನೆಲ್ಲ ಎಂದೂ ಕೇಳಿದವನಲ್ಲ. ಮನಸ್ಸಿನಲ್ಲೇ ಖುಷಿಯಾದರೂ ಮಾತನಾಡಲು, ನಗಲು ನನ್ನ ಸಂಸ್ಕಾರದ ಅಡ್ಡಿ.

ದಾರಿಯಲ್ಲಿ ಹೊರಟ ಹುಡುಗಿಯರನ್ನು ನೋಡಲು ಕಡಿವಾಣ ಹಾಕಿಕೊಂಡಿದ್ದರೂ ಒಬ್ಬನೇ ಇದ್ದಾಗ ದಾರಿಯಲ್ಲಿನ ಹುಡುಗಿಯರನ್ನು ಕಣ್ತುಂಬ ತುಂಬಿಕೊಳ್ಳಲು ಶುರು ಮಾಡಿದೆ; ಮನಸ್ಸಿನಲ್ಲೇ ಮಂಡಿಗೆ ತಿನ್ನಹತ್ತಿದೆ. ಇಂಥ ಹೊತ್ತಿನಲ್ಲೇ ಹುಬ್ಬಳ್ಳಿಯ ಸಿನಿಮಾ ಚಾಳಿ ಬೇರೆ ಅಂಟಿಕೊಳ್ಳಹತ್ತಿತ್ತು. ಆಗಲೇ ಸಾಹಿತ್ಯದ ಕೆಲವು ಪ್ರಮುಖ ಕೃತಿಗಳನ್ನು ಓದುವ ಅವಕಾಶ ಪಡೆದುಕೊಂಡೆ. ಎಲ್ಲದಕ್ಕೂ ಭಗವಂತೆನೇ ಕಾರಣ, ಬದುಕಿನಲ್ಲಿ ಆದರ್ಶ- ಗುರಿಗಳೇ ಮುಖ್ಯ, ಅವುಗಳಿಗಾಗಿ ಮಾಡುವ ಸತತ ಪ್ರಯತ್ನ ಇವುಗಳನ್ನು ನಂಬಿದ್ದ ನಾನು ಇವುಗಳನ್ನೇ ಸಂಶೆಯದಿಂದ ನೋಡಲಿಕ್ಕೆ ಹತ್ತಿದೆ. ಆದರೆ ಹಿಂದಿನದನ್ನು ಬಿಡಲಾಗದೇ ಹೊಸಹಾದಿ ತಿಳಿಯದೇ ಒದ್ದಾಡಿ ಕಥೆ-ಕವನ ಗೀಚಲು ಶುರುಮಾಡಿದೆ. ಸಾಹಿತ್ಯಿಕ ಸ್ಪರ್ಧಗಳಲ್ಲಿ ಬಹುಮಾನ ಬಂದದ್ದರಿಂದ, ಹುಡುಗಿಯರ ಬಗೆಗೆ ಜೋಕು ಮಾಡದ್ದರಿಂದ, ಮೊದಲನೆಯ ವರ್ಷ ಚಲೋ ಮಾರ್ಕ್ಸ್ ಬಂದದ್ದಿರಿಂದ , `ಗಾಂಧಿ`;`ಕವಿ`, `ಪುಸ್ತಕದಾಗಿನ ಹುಳ` ಆದೆ. ಇಷ್ಟರೊಳಗಾಗಿ ಒಳಗಿನ ನಾನು, ಹೊರಗಿನ ನಾನು ಬೇರೆ ಬೇರೆಯಾಗಿದ್ದು ನನ್ನ ಗಮನಕ್ಕೆ ಬಂತು.

ಇಷ್ಟಲ್ಲದೇ ಅಪ್ಪ ಈಗೀಗ ರೊಕ್ಕ ವೇಳೆಗೆ ಸರಿಯಾಗಿ ಕಳಿಸುತ್ತಿಲ್ಲ (ಅಜ್ಜಿಯ ರೋಗ ಜಾಸ್ತಿಯಾಗಿದೆಯಂತೆ). ನನಗೆ ಇದಲ್ಲದರಿಂದ ಬೇಡುಗಡೆ ಬೇಕಾಗಿತ್ತು. ಆದರೆ ಆಧ್ಯಾತ್ಮದ ಜೀವಾತ್ಮ – ಪರಮಾತ್ಮ, ಸಾಹಿತ್ಯದ ಕಾಮ-ಸಾವು-ಅಹಂಗಳು ಒಂದಕ್ಕೊಂದು ಹೊಂದಲಾರದೇ ನಾನು ಅಂತರ್ಮುಖಿಯಾಗಹತ್ತಿದೆ. ಅಷ್ಟಲ್ಲದೇ ಅಮೆರಿಕದ ವಿದ್ಯಾರ್ಥಿಗಳಂತೆ ನಾನೇಕೆ ದುಡಿಯುತ್ತ ಕಲಿಯಬಾರದು? ಅಪ್ಪನಿಗೇಕೆ ಕಷ್ಟ ಕೊಡಬೇಕು ಎನಿಸಲು ಹತ್ತಿತು. ಹೀಗೆ ಇನ್ನೆಷ್ಟನ್ನೋ ತಲೆಯಲ್ಲಿ ತುಂಬಿಕೊಂಡು ನಾನು ನನ್ನನ್ನೇ ನೋಡಲು ಶುರುಮಾಡಿದಾಗ ರೂಪಾಕುಲಕರ್ಣಿ ಬರ್ತ್‌ಡೇ ಪಾರ್ಟಿಗೆ ಬಾ ಎಂದು ಆಹ್ಹಾನಿಸಿದ್ದಳು.

ಅದು ಆಗಸ್ಟ್ ತಿಂಗಳ ಕೊನೆ. ನನ್ನ ಕಿಸೆ ಪೂರ ಜಾಲಾಡಿಸಿದರೂ ಆರೇಳು ರೂಪಾಯಿ ಸಿಗಬಹುದಿತ್ತು. ರಾತ್ರಿ ಬಹಳ ಹೊತ್ತು ಓದುತ್ತ ಕುಳಿತಿದ್ದರಿಂದ ಮುಂಜಾನೆ ಎದ್ದಕೂಡಲೇ ತಲೆ ಚಿಟಿಚಿಟಿ ಎನಿಸಿ ಒಂದು ರೂಪಾಯಿ ಖರ್ಚು ಮಾಡಿ ಚಹಾ ಕುಡಿದೆ. ಕಾಲೇಜಿನಲ್ಲಿದ್ದಾಗ ರೂಪಕುಲಕರ್ಣಿ ಬರ್ತ್‌ಡೇ ಪಾರ್ಟಿಗೆ ಬರಲು ಆಹ್ವಾನವಿತ್ತಳು. ನಾನು ಸಬೂಬು ಹೇಳಿ ತಪ್ಪಿಸಿಕೊಳ್ಳಹೋದೆ. ಆದರೆ ಬಾಜು ನಿಂತ ಅರುಣ ನನ್ನ ಸತ್ತ್ವವನ್ನೇ ಕೆಣಕಿ ಜೋಕು ಹೊಡೆದು ಒಪ್ಪಿಸಿಬಿಟ್ಟ. ರೂಪಕುಲಕರ್ಣಿಗೆ ಪ್ರೆಸೆಂಟೇಶನ್ ತರಲು ಪ್ರತಿಯೊಬ್ಬ ಇಪ್ಪತ್ತು ರೂಪಾಯಿ ಹಾಕಬೇಕೆಂದು ಹೇಳಿದ. ನಾನು ಇಲ್ಲಿಯ ತನಕ ಯಾವುದೇ ಪಾರ್ಟಿಗೊ ಹೋದವನಲ್ಲ. ಅಲ್ಲದೆ ಇಪ್ಪತ್ತು ರೂಪಾಯಿ ಬೇರೆ ಕೊಡಬೇಕು. ತಲೆಕೆಟ್ಟು, ಖೋಲಿಗೆ ಬಂದೆ. ಮನಸ್ಸು ವಿಚಿತ್ರ ರೀತಿಯಲ್ಲಿ ತಳಮಳಿಸುತ್ತಿತ್ತು. ಆ ಭಾವಗಳನ್ನು ಶಬ್ದಮಾಡುವ ವ್ಯರ್ಥಪ್ರತಿಮೆಗಳನ್ನು ಹುಡುಕುತ್ತ ಕಾಗದದ ಮೇಲೆ ಗೀಚಿತ್ತ ಕೂತಿದ್ದೆ. ಆವಾಗಲೇ ಬಾಗಲಕೋಟೆಯಿಂದ ಮಗ್ಗಲ ಮನೆ ಬಿಂದಪ್ಪ ಬಂದ. ಅಪ್ಪ-ಅಮ್ಮ-ಅಜ್ಜಿ ಅರಾಮವೆಂದು ಕೇಳಿ ಅಪ್ಪನ ಚೀಟಿ ಕೊಟ್ಟಿದ್ದ. ಅಪ್ಪ ಆಶೀರ್ವಾದ ತಿಳಿಸಿ ಬರೆದಿದ್ದ, `ಮುಂದಿನ ತಿಂಗಳು ದುಡ್ಡು ಕಳಿಸಲು ಆಗುವುದಿಲ್ಲ. ಬಾಳು ಮಾಮಾಗೆ ಪತ್ರ ಹಾಕಿ ತರಿಸಿಕೊ,` ಅಂತ. ಬಿಂದಪ್ಪ ಉಂಡಿ-ಅವಲಕ್ಕಿ ಚೀಲ ಕೊಟ್ಟುಹೋದ. ನಾನು ಪೂರ ಕುಸಿದೆ. ನನಗೆ ಖೋಲಿಯಲ್ಲಿ ಕುಳಿತುಕೊಳ್ಳುವುದು ಸಾಧ್ಯವಾಗಲಿಲ್ಲ. ಅಂಗಿ-ಪ್ಯಾಂಟು ಹಾಕಿಕೊಂಡು ಬರ್ತ್‌ಡೇಗೆ ಹೋಗಲು ತಯಾರಿ ನಡೆಸಿದೆ.

ಪಾರ್ಟಿಯಲ್ಲಿ ಏನೇನು ನಡೆಯಿತು ಎಂದು ವಿವರವಾಗಿ ಹೇಳುವುದಿಲ್ಲ, ಏಕೆಂದರೆ ಅದನ್ನೆಲ್ಲ ಪಾರ್ಟಿಯಿಂದ ಬಂದಕೊಡಲೇ ಬರ್ತ್‌ಡೇ ಸಲುವಾಗಿ ಮನೆಯನ್ನು ಅಲಂಕರಿಸಿದ ರೀತಿ, ವಿದ್ಯುತ್ ಪ್ರಕಾಶ ಕುರಿತು ಬರೆದೆ. ಕೇಕೊಂದಕ್ಕೇ ಎರಡು ನೂರ ಐವತ್ತು ಎಂದು ರೂಪಾಕುಲಕರ್ಣಿ ಜಂಭ ಕೊಚ್ಚಿ ಕೊಂಡಿದ್ದನ್ನೊ ಬರೆದೆ. ಗೆಳೆಯರು ಗೆಳತಿಯರಿಗೆ ಇಂಪ್ರೆಶನ್ ಹೊಡೆಯಲು, ಗೆಳತಿಯರು ಗೆಳೆಯರು ಎದುರು ಡೌಲು ಬಡೆಯಲು ವ್ಯವಹರಿಸುತ್ತಿದ್ದ ಕ್ಷುದ್ರರೀತಿಯನ್ನು ಬರೆದೆ. ಪಾರ್ಟಿಗೆ 

ಬರದವರ ಬಗ್ಗೆ ಹೇಗೆ ಅಶ್ಲೀಲವಾಗಿ ಮಾತನಾಡಿ ಗೇಲಿ ಮಾಡುತ್ತಿದ್ದರು; ನಗು ಬರದಿದ್ದರೂ ಮನಃಪೂರ್ವಕವಾಗಿ ನಕ್ಕಂತೆ ಹೇಗೆ ಗೊಳ್ ಎಂದು ನಗುವಿನ ಸೋಗು ಹಾಕುತ್ತಿದ್ದರು; ಪೋಲಿ ಜೋಕುಗಳನ್ನು ಎಗ್ಗಿಲ್ಲದೇ ಹೇಳಿ ಹೇಗೆ ಸ್ಯಾಡಿಸ್ಟ್ ಖುಷಿ ತೆಗೆದುಕೊಂಡರು – ಎಂಬುದನ್ನೆಲ್ಲ ಗೀಚಿದೆ. ನಾನು ಬೆಳೆದ ರೀತಿ, ನನ್ನ ಮನೆಯ ಪರಿಸರ, ನನ್ನ ಮನಸ್ಸಿನ ರೀತಿ, ನನ್ನ ಹಣದ ಕೊರತೆ ಎಲ್ಲವನ್ನೂ ಬರೆದು, ಅಂಥ ಮನಃಸ್ಥಿತಿಯಲ್ಲಿದ್ದ ನನ್ನ ಮೇಲೆ ಪಾರ್ಟಿ ಮಾಡಿದ ಪರಿಣಾಮವನ್ನು ಬರೆದೆ. ಪಾರ್ಟಿ ಮಾಮೂಲಾಗೇ ಸಾಗಿದ್ದರೂ ಎಲ್ಲ ನನಗೆ ವಿಚಿತ್ರವಾಗಿ ಕಾಣಿಸುತ್ತಿರುವುದನ್ನು, ಹಾಗೆ ಕಾಣಿಸಲು ಕಾರಣವಾದ ನನ್ನ ಸಂಸ್ಕೃತಿಯನ್ನು, ಮನೆಯ ಧಾರ್ಮಿಕ ವಾಟವನದಲ್ಲಿ ಜಿಡ್ಡುಹಿಡಿದ ರೋಗದ ನಂಟನ್ನು, ಮಗನಿಗೆ ಕಳಿಸಲು ರೊಕ್ಕವಿರದಿದ್ದರೂ ಸಾಲ ಮಾಡಿಯಾದರೂ ಬ್ರಾಹ್ಮಣರನ್ನು ಕರೆದು ಊಟಹಾಕಿಸಿ ದಕ್ಷಿಣೆಕೊಡುವ ಅಪ್ಪನನ್ನು, ಕೈಯಿಂದ ಕುಂಡೆ ತೊಳೆದುಕೊಳ್ಳಲು ಬರದಿದ್ದರೂ, ಅಮ್ಮನ ಮೇಲೆ ದರ್ಪ ತೋರುವ ಅಜ್ಜಿಯನ್ನು, ಇದೆಲ್ಲವನ್ನು ಸಹಿಸಿಕೊಂಡು ತನ್ನ ರೋಗವನ್ನು ತುಟಿಕಚ್ಚಿ ಮುಚ್ಚಿಕೊಂಡು ಮಡಿಯೆಂದು ಬಡಿದುಕೊಳ್ಳುವ ಅವ್ವನನ್ನು ಕುರಿತು ಬರೆದೆ. ಹಾಗೆಯೇ ಪಾರ್ಟಿಯಲ್ಲಿ ರೂಪಾಳ ಅಪ್ಪ ದರ್ಪದಿಂದ ಹಲ್ಲು ಕಿರಿಯುತ್ತ ಓಡಾಡಿದ ರೀತಿಯನ್ನು ಬರೆದೆ. ಹಾಗೆಯೇ ನನ್ನನ್ನು ಪೂರ ಹುಚ್ಚ ನನ್ನಾಗಿಸುವ ಸನ್ನಾಹದಲ್ಲಿದ್ದ ‘ಪಿಕ್ ಆ್ಯಂಡ ಆ್ಯಕ್ಟಿ’ ನ ಎಲ್ಲ ಘಟನೆಗಳನ್ನು ಸವಿವರವಾಗಿ ಬರೆದೆ.

[ಒಂದೆರಡು ಸ್ಯಾಂಪಲ್ ಕೊಡುತ್ತೇನೆ;

೧. ಮಿಲಿಂದ ಚೀಟಿ ಎತ್ತುತ್ತಿದ್ದಾಗ ಒಂದರೆ ನಿಮಿಷದ ಮೌನ. ಚೀಟಿ ಒಡೆದವನೇ `ಹುರ್ರಾ,`; ಎಂದು ಕೆಟ್ಟದಾಗಿ ಅರಚಿ ಕುಣಿದಾಡಿದ. ಗಟ್ಟಿಯಾಗಿ ಓದಿದ: `Take Sulochana on double ride on your imaginary bicycle,.` ಎಂದು. ಸುಲೋಚನಾಳತ್ತ ತಿರುಗಿ ಇಂಗ್ಲಿಷಿನಲ್ಲೇ ಕೂಗಿಡಾ, `ಗಾಡ್ಸ್ ಮಸ್ಟ್ ಬಿ ಕ್ರೇಜಿ ಪಾರ್ಟ್ ಟು`ನಲ್ಲಿ ಇರುವಂತೆ ನಿನ್ನನ್ನು ಕೂಡಿಸಿ ಕೊಂಡು ರೈಡ್ ಮಾಡುತ್ತೇನೆ` ಎಂದು. ಸುಲೋಚನಾ ಸಿಟ್ಟಿನಿಂದ, ನಾಚಿಕೆಯಿಂದ ಕೆಂಪಾಗಿ, `ನೊ! ನೆವರ್!!`; ಎಂದು ಅರಚಿದಳು. ಎಲ್ಲರೂ ಆಕೆಯನ್ನು ಸುತ್ತುಗಟ್ಟಿ ಅರಚತೊಡಗಿದಾಗ ಆಕೆ ಮಣಿದು ಮಿಲಿಂದನ ಮುಂದೆ ಕುಳಿತಂತೆ ನಟನೆ ಮಾಡಿದಳು. ಆತ ಪೆಡಲ್ ತಿರಿಗಿಸುತ್ತಿರುವಂತೆ ಕಾಲು ತಿರುಗಿಸುತ್ತ ಆಕೆಯ ಹಿಂಭಾಗವನ್ನು ಕಾಲಿನಿಂದ ಒತ್ತುತ್ತಿದ್ದ, ಪ್ರತಿಸಾರಿ ಹಾಗೆ ಮಾಡಿದಾಗಲೂ ಎಲ್ಲರೂ ಹೋ ಎಂದು ಕೂಗಿ ಚಪ್ಪಾಳೆ ತಟ್ಟುತ್ತಿದ್ದರು. ಎಲ್ಲರನ್ನೂ ಝಾಡಿಸಿ ಒದೆಯಲೇ ಎನಿಸಿ ನಾನು ಥರಥರ ನಡುಗಿದೆ ಒಳಗೊಳಗೆ.

೨. “Select your partner and ask him/her for marriage”.ಗಂಡುಬೀರಿ ಮಾಲತಿ ಸರದಿಯದು ಟೀಶರ್ಟ್ ಮತ್ತು ಗಿಡ್ಡ ಸ್ಕರ್ಟ್ ಹಾಕಿಕೊಂಡಿದ್ದಳು. ಕೆದರಿದ ಕೂದಲನ್ನು ಆಲುಗಾಡಿಸುತ್ತ ನನ್ನ ಹೆಸರನ್ನೇ ಕೂಗಬೇಕೇ? ಸೋಫಾದಲ್ಲಿ ನೋಯುತ್ತಿದ್ದ ತಲೆ ಹಿಡಿದು ಕೊಂಡು ಕೂತ ನಾನು ತಣ್ಣಗಾದೆ ತುಟಿ ಮೇಲೆ ನಗೆ ಆಡಿಸಿಕೊಂಡು, `ಹೆ, ಹೆ! ಹೇ!!`, ಎಂದು ವಿಚಿತ್ರವಾಗಿ ಹಲ್ಲು ಬೀರಿದೆ. ಆಕೆ ಸ್ಟೈಲಾಗಿ ಬಳುಕುತ್ತ ಬಂದು ನಾಟಕೀಯವಾಗಿ, `ಪ್ರಿಯಾ, ನಾವಿಬ್ಬರೂ ಜನ್ಮ ಜನ್ಮಾಂತರದ ಪ್ರೇಮಿಗಳಲ್ಲವೆ?` ಎಂದು ವೈಯಾರ ಮಾಡಿ ನನ್ನ ಮುಂದೆ ಬಗ್ಗಿದಳು. ನಾನೊಮ್ಮೆ ಉಗುಳುನುಂಗಲು ಪ್ರಯತ್ನಿಸುತ್ತಿದ್ದಂತೆ ಆಕೆಯ ಮುಂದೆ ಜಾರಿದ ಟೀಶಾರ್ಟಿನೊಳಗಿಂದ ಎದೆಯ ಸೀಳು ಕಾಣಿಸಿ ಬೆವರಿಹೋದೆ. ಕಾಲು ನೆಲದಲ್ಲೇ ಸಿಕ್ಕಿಹೋದಂತೆ ಅನಿಸಿತು. ಆಕೆ, `ಪ್ರಾಣಕಾಂತಾ, ಈ ಜನ್ಮದಲ್ಲಿ ನಮ್ಮಮದುವೆ ಯಾವಾಗ?` ಎಂದು ಕಿಲಿಕಿಲಿ ನಕ್ಕಳು. ಎಲ್ಲರೂ ಚಪ್ಪಾಳೆ ತಟ್ಟಿ ಜೋರಾಗಿ ನಕ್ಕರು. ನಾನೂ ಹೇಗೊ ಸಾವರಿಸಿಕೊಂಡು ಜೋರಾಗಿ ಚಪ್ಪಾಳೆ ತಟ್ಟಿದೆ.]

ಹಾಗೆಯೇ ಪಾರ್ಟಿ ಮುಗಿಸಿಕೊಂಡು ಕೊಪ್ಪಿಕರ್ ರಸ್ತೆಯಲ್ಲಿ ರಾತ್ರಿ ಒಂಬತ್ತಕ್ಕೆ ಹೇಗೆ ಕಾಲಳೆಯುತ್ತ ದಿಕ್ಕು ತಪ್ಪಿದವನಂತೆ ಅಲೆದೆ ಎಂಬುದನ್ನು, ಅಂಗಡಿಯೊಂದನ್ನು ಹೊಕ್ಕು ಕೆಲಸ ಖಾಲಿ ಇದೆಯೇ ಎಂದು ಕೇಳಿ ಛೀಮಾರಿ ಹಾಕಿಸಿಕೊಂಡಿದ್ದನ್ನು ಬರೆದೆ. ಪಾರ್ಟಿಯ ವೈಭವ, ನನ್ನ ಖಾಲಿ ಕಿಸೆ (ಇನ್ನೂ ಆರು ರೂ. ಇತ್ತು) ಎಲ್ಲ ಒಟ್ಟಿಗೆ ಒಕ್ಕರಿಸಿ ಕೆಲಸ ಕೇಳುವಂತೆ ಮಾಡಿದ್ದವು. ಆಮೇಲೆ ಮುಂದೆ ಮೋಹನ ಟಾಕೀಜಿಗೆ ಬಂದಾಗ, ಕಿಸೆಯಲ್ಲಿ ಆರು ರೂಪಾಯಿ ನೆನಪಾಗಿ ಟಾಕೀಜಿನೊಳಗಡೆ ಹೋದುದನ್ನು ಯಾವುದೋ ಹೊಲಸು ಇಂಗ್ಲೀಶ್ ಚಿತ್ರ ಶುರುವಾಗಿ ಚುಂಬನಗಳು, ಅರೆಬೆತ್ತಲೆ, ಬೆತ್ತಲೆ ದೇಹಗಳು, ನರಳಾಟಗಳು ನನ್ನ ತಲೆ ಕೆಡಿಸಿದ್ದನ್ನು ಬರೆದೆ. ಅರ್ಧಸಿನಿಮಾಕ್ಕೇ ಎದ್ದು ತಲೆಕೆಟ್ಟಂತಾಗಿ ಹುಚ್ಚು ಹಿಡಿದವಂತೆ ಓದುತ್ತ ಹೋಸ್ಟೆಲಿಗೆ ಬಂದುದನ್ನು ಬರೆಯಲು ಕುಳಿತುದನ್ನು ಬರೆದು ಪೆನ್ನು ಮುಚ್ಚಿದೆ. 

ಬರೆದು ಮುಗಿಸಿದಾಗ ರಾತ್ರಿ ಹನ್ನೆರಡೂವರೆ, ಅಷ್ಟರಲ್ಲಿ ರೂಮ್ಮೇಟುಗಳಿಬ್ಬರೂ ಸಿನಿಮಾ ಮುಗಿಸಿಕೊಂಡು ಬಂದರು. ಸಟ್ಟನೆ ಬರೆದದ್ದನ್ನೆಲ್ಲ ಮುಚ್ಚಿಟ್ಟು ಮಲಗಿದಂತೆ ನಟನೆ ಮಾಡಿದೆ. ಮುಂಜಾನೆ ಎದ್ದ ಮೇಲೆ ಅವರಿಗೆ ಓದಲು ಕೊಡಬೇಕು ಎಂದುಕೊಂಡಿದ್ದವನಿಗೆ ಹಾಗೆ ಮಾಡಲು ಧ್ಯರ್ಯ ಸಾಲಲಿಲ್ಲ. ಸುಮಾರು ವಾರಗಳು ಕಳೆದರೂ ಅದನ್ನು ಯಾರಿಗೂ ತೋರಿಸಲಾಗದೇ ಒದ್ದಾಡುತ್ತಿದ್ದಾಗ ಪತ್ರಿಕೆಯೊಂದಕ್ಕೆ ಕಳಿಸಿದರೆ ಹೇಗೆ ಎನಿಸಿತು. ಹೆಸರುಗಳನ್ನು ಬದಲಾಯಿಸಿ ಬರೆದುದನ್ನೆಲ್ಲ ಕಾಪಿ ಮಾಡಿ ಕಳಿಸಿದೆ. ಡಿಸೆಂಬರಿನಲ್ಲಿ ಪ್ರಕಟವೂ ಆಯಿತು.

ಅಂದು ಸಂಜೆ ಪತ್ರಿಕೆಯನ್ನು ಹಿಡಿದಿಕೊಂಡು, ಖುಷಿಯಲ್ಲಿ ಓದುತ್ತಲೇ ಖೋಲಿಗೆ ಬಂದೆ. ನನಗೆ ವಿಪರೀತ ಸಂತೋಷವಾಗಿತ್ತು. ಮೊತ್ತ ಮೊದಲ ಕಥೆ ಮೊದಲ ಬಾರಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಖೋಲಿಗೆ ಬಂದೊಡನೇ `ಕೇಹುಹೊss,; ಎಂದು ಕೂಗಿ, ರೂಮ್ಮೇಟ್ ಮಾಧವ ಏನಾಯಿತೆಂದು ಆಶ್ಚರ್ಯದಿಂದ ನೋಡುತ್ತಿರುವಂತೆಯೇ, ನನ್ನ ಕಥೆ ಛಾಪಿಸಿದ ವಿಷಯ ತಿಳಿಸಿ, ಪತ್ರಿಕೆ ಅವನ ಕೈಗೆ ಕೊಟ್ಟೆ. ಆತ ಅಭಿನಂದನೆ ಸಲ್ಲಿಸಿ, `ಪಾರ್ಟಿ ಯಾವಾಗ?` ಎಂದ. `ಕೊಡೊನಲ್ಲ, ಅದಕ್ಕೇನು?`; ಎಂದೆ. ಅಷ್ಟರಲ್ಲಿ ನನ್ನ ಆವಾಜ ಕೇಳಿ ಬಾಜು ಖೋಲಿ ಶಿವರಾಮ (ಆತ ಸಾಹಿತ್ಯದ ಬಗ್ಗೆ ಮುರನಾಲ್ಕು ತಾಸು ಕೊರೆಯುತ್ತಾನೆ) ಬಂದು ನನ್ನನ್ನು ಬಿಗಿದಪ್ಪಿಕೊಂಡ. ಆತ ಖುಷಿಯಲ್ಲಿದ್ದುದನ್ನು ಆತನ ಕಣ್ಣುಗಳೇ ಹೇಳುತ್ತಿದ್ದವು. ಆತ ನನ್ನ ಕೈಹಿಡಿದು ಕುಳಿತುಕೊಂಡ. ಆತ ಆ ಕಥೆಯಿಂದ ನನಗೇ ಗೊತ್ತಿರದ ಎಷ್ಟೆಷ್ಟೋ ವಿಷಯಗಳನ್ನು ಹೆಕ್ಕಿ ವಿವರಿಸತೊಡಗಿದ. ಆಧುನಿಕತೆಯ ಅಟ್ಟಹಾಸದಲ್ಲಿ ಸಂಪ್ರದಾಯಸ್ಥ ಧಾಮಿ೯ಕ ನಂಬಿಕೆಗಳು ಅರ್ಥಕಳೆದುಕೊಳ್ಳುತ್ತಿರಿವುದನ್ನು. ವ್ಯಕ್ತಿ ಅಂಥ ತ್ರಿಶಂಕು ಸ್ಥಿತಿಯಲ್ಲಿದ್ದಾಗಿನ ಭಾವನೆಗಳನ್ನು ರಿಯಲಿಸ್ಟಿಕ್ ಅಗಿ ಬರೆದು ಕಥೆಗೆ ಧಾಮಿ೯ಕ ತಳಹದಿ ಬಂದಿದೆ ಎಂದ. ರೂಪಾ ಕುಲಕಣಿ೯ಯ ಅಪ್ಪ ರೋಟರಿಕ್ಲಬ್ಬಿನ ಮುಖ್ಯ ಸದಸ್ಯನಾಗಿರುವುದರಿಂದ ಮತ್ತು ಕಾಂಗ್ರೆಸ್ಸಿನಲ್ಲಿ ಬಹಳ ಓಡಾಡುವುದರಿಂದ ಅತ ಪಾರ್ಟಿಯಲ್ಲಿ ಆಡಿದ ಮಾತುಗಳು ಕಥೆಗೆ ರಾಜಕೀಯ ಬಣ್ಡ ತಂದಿದೆ ಎಂದ. ಆರ್ಥಿಕಸ್ಥಿತಿ ಮನುಷ್ಯನ ಭಾವನೆಗಳಲ್ಲಿ ಹೇಗೆ ಬದಲಾವಣೆ ತರುತ್ತದೆ; ಭಾರತ ಪಾಶ್ಚಾತ್ಯೀಕರಣದತ್ತ ವಾಲಿರುವಾಗ ಹೇಗೆ ತುಮುಲವೆಳುತ್ತದೆ; ಹದಿನೆಂಟು ವರ್ಷಗಳಿಂದ ಬ್ರಾಹ್ಮಣ್ಯದಲ್ಲಿ ಬಂಧಿತನಾದ ವ್ಯಕ್ತಿ ಬಿಡುಗಡೆ ಹೊಂದಿದಾಗ ಹೇಗೆ ಕಾಮಜಾಗೃತಿ ಉಂಟಾಗುತ್ತದೆ ಎಂಬುದು ಕಥೆಯಲ್ಲಿ ಬಂದಿರುವುದನ್ನು ವಿವರಿಸಿದ. ಮುಂದಿನ ಬರವಣಿಗೆಯನ್ನು ಹೇಗೆ ತಿದ್ದಿಕೊಳ್ಳಬೇಕು, ಪ್ರತಿಮೆಗಳನ್ನು 

ಸಹಜವೆನ್ನುವಂತೆ ಪ್ರಯತ್ನಪೂವ೯ಕವಾಗಿ ತುರುಕಿ ಕಥೆಯ ಹರಹನ್ನು ಹೇಗೆ ಹಿಗ್ಗಿಸಬೇಕು (ಉದಾ: ರೂಪಾ ಕುಲಕರ್ಣಿಯ ಬರ್ತ್‌ಡೇ ದಿನವೇ ಕಥಾನಾಯಕನ ಬತ್೯ಡೇ ಇರುವುದು) ಎಂಬುದನ್ನು ಹೇಳಿದ. ನನ್ನಲ್ಲಿ ನಾನು ಉಬ್ಬಿಹೋದೆ. ಕಂಡವರಿಗೆಲ್ಲ ಸುದ್ದಿಹೇಳುತ್ತ ಸಾಗಿದೆ. ರಾತ್ರಿ ಚಾದರ ಹೊದ್ದು ಮಲಗಿಕೊರಿಡೇ ಕಥೆ ಓದಿದೆ. ಅವೇ ಪಾತ್ರಗಳು. ಹೆಸರುಗಳು ಮಾತ್ರ ಬೇರೆ . ಅವೇ ಘಟನೆಗಳು. ಸಮಾಧಾನವೆನಿಸಿ ಚಾದರ ಎಳೆದು ಮುಸುಕು ಹಾಕಿಕೊಂಡು ಕನಸು ಕಾಣತೊಡಗಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಹೆಸರು. ಚಿತ್ತಾರದ ನಂತರ ಕನ್ನಡದಲ್ಲಿ ಕಾಣಿಸಿಕೊಂಡ ಹೊಸ ಪ್ರತಿಭೆ ಎಂದೆಲ್ಲ. 

ಕದ ತಟ್ಟಿದ ಆವಾಜಿನಿಂದ ಎಚ್ಚರವಾದಾಗ ಇನ್ನೂ ಮಧ್ಯರಾತ್ರಿ. ಕತ್ತಲಲ್ಲಿ ಬಾಗಿಲು ತೆರೆಯುತ್ತಲೇ ಓರ್ವ ವೈಕ್ತಿ. ನನ್ನನ್ನು ತಳ್ಳಿಕೊಂಡೇ ಒಳಗೆ ಬಂದು ಕದ ಹಾಕಿದ್ಧೇ ಫಟೀರ್ ಎ೦ದು ಕಪಾಳಕ್ಕೆ ಹೊಡೆಯಿತು. ನಾನು ಏನಾಗುತ್ತಿದೆ ಎಂದುಕೊಳ್ಳುವಷ್ಪರಲ್ಲಿ ಪಕಡಿಗೆ ಇನ್ನೊಂದು ಹೊಡೆತ ಬಿತ್ತು. ‘ಅವ್ವಾSS’ ಎ೦ದು ಚೀರಿ ಕೆಳಕ್ಕೆ ಬಿದ್ಧೆ. ರೂಮ್ ಮೇಟುಗಳಿಗೆ ಎಚ್ಚರವಾಗಿ ಲೈಟು ಹಚ್ಚಿದರು. ಎದುರಿಗೆ ಮಿಲಿಂದ ನಿಂತಿದ್ದ. ಕಾಲರ್ ಹಿಡಿದು ಎತ್ತಿದವನೇ, `ಬಡ್ದಿಮಗನೇ. ನನ್ನ ಬಗ್ಗೆ ಕಥೇನಲ್ಲಿ ಬರೀತೀಯಾ? ನಾನು ಬಾರ್‌ಗೆ ಹೋಗ್ತೇನೆ. ಸಿಗರೇಟು ಸೇದ್ತೇನೆ ಎಂದು ಬರೀತೀಯಾ? ಬಿಎಫ್ ನೋಡ್ತೇನೆ ಅಂತೀಯಾ?`. ಪ್ರತಿ ಪ್ರಶ್ನೆಗೂ ಒ೦ದೊ೦ದು ಹೊಡೆತ. ಒದೆತ ಕೊಡುತ್ತಿದ್ದ. ರೂಮ್ ಮೇಟುಗಳಿಬ್ಬರೂ ಕಷ್ಟದಿಂದ ಬಿಡಿಸಿ ನಡೆದದ್ಧಾದರೂ ಏನೆಂದು ಕೇಳಿದರು.& `ನನ್ನನ್ನೇನು ಕೇಳ್ತೀಯಾ ಗುರು? ಕೇಳು ಈ ಸೂಳೆಮಗನ್ನ,` ಎಂದ. ಮಿಲಿಂದ ಕಾವ್ಯಾಳನ್ನು ಲವ್ ಮಾಡುತ್ತಿರಿವುದನ್ನು ಬರೆದಿದ್ದೆ. ಅವಳನ್ನು ಮೆಚ್ಚಿಸಲು ಪಾರ್ಟಿಯಲ್ಲಿನ ಅವನ ಧರ್ತಿ ಬಗ್ಗೆ ಬರೆದಿದ್ದೆ. ಅವಳನ್ನು ಅತ ಸಂಜೆ ಮಾತನಾಡಿಸಲು ಹೋದಾಗ (ಇಬ್ಬರೂ ಒ೦ದೇ ಊರಿನವರು) ನಾನು ಬರೆದ ಕಥೆ ವಿಷಯ ಹೇಳಿ ಛೀಮಾರಿ ಹಾಕಿ ಕಳಿಸಿದಳೆಂದು ಮಿಲಿಂದ ಕಿರುಚಾಡಿದ. ನಾನು `ಸಾರಿ`, ಎಂದು ಹಲುಬಿ ಆತನನ್ನು ಸಮಾಧಾನ ಮಾಡುವಷ್ಟರಲ್ಲಿ ಸಾಕಾಯಿತು.

ಮುಂಜಾನೆ ಎದ್ದಾಗ ಇನ್ನೂ ಹೊಟ್ಟೆ ನೋಯುತ್ತಿತ್ತು ತಲೆ ತುಂಬ ಕಥೆಯ ಪಾತ್ರಗಳು ಒದೆಯುತ್ತಿದ್ದವು. ಕಾಲೇಜಿನಲ್ಲಿ ಕೆಲವರು ಕಂಗ್ರಾಟ್ಸ್ ಹೇಳಿದರು. ಕೆಲವರು ನನ್ನನ್ನು ಹೊಸ ವಿಚಿತ್ರವಾಗಿ ದಿಟ್ಟಿಸಿದರು. ನನ್ನ ಕಥೆ ಛಾಪಿಸಲ್ಪಟ್ವ ಸುದ್ದಿ ಬಹಳ ವೇಗವಾಗಿ ಹಬ್ಬಿತ್ತು. ನನಗೆ ಪಿರಿಯಡ್ನಲ್ಲಿ ಕೂಡಲಾಗದೇ ಗಂಗಾಮಾ೦ಶಿ ಮನೆಗಾದರೂ ಹೋಗೋಣವೆಂದು ಬಸ್ ಸ್ಟಾಪಿಗೆ ಬಂದೆ. ಎದುರಿನಲ್ಲಿ ಮಾಲತಿ ನಾಕಾರು ಗೆಳತಿಯ ರೊ೦ದಿಗೆ ನನ್ನ ಕಡೆಗೇ

ಬಂದಳು. ನನ್ನ ಬನಿಯನ್ನೆಲ್ಲ ಹಸಿಯಾಯಿತು. ಬಂದವಳೇ ಇರಿಗ್ಲಿಷಿನಲ್ಲಿ ನನ್ನನ್ನು ತರಾಟೆಗೆ ತೆಗೆದುಕೊರಿಡಳು. ಅವಳ ಟೀಶಟ್೯ ಒಳಗೆ ಇಣುಕಿರುವುದನ್ನು ಬರೆದಿರುವುದನ್ನು ಹೀನಾಯವಾಗಿ ಬಯ್ದು (ಇಣುಕಿದರೆ ತಪ್ಪಿಲ್ಲವಂತೆ, ಬರೆಯಬಾರದಂತೆ), ನನ್ನನ್ನು ಕಾಗದದ ಕಾಮುಕ ಎಂದರಚಿ, ಸ್ಯಾಡಿಸ್; ಎಂದು ಬಿರುದು ಕೊಟ್ಟಳು. ನಾನು ಹತ್ತು ಸರ್ತಿಯಾದರೂ ಸಾರಿ ಎಂದಿರಬಹುದು. ಅಂತಹುದರಲ್ಲಿ ಅರುಣ, ವೆಂಕಟೇಶ ರಾಜು, ಧಾರವಾಡಕರ್. ಶೆಟ್ವ. ಪ್ರಕಾಶ್ ತ್ರಿವೇದಿ ಬಂದು ಸೇರಿಕೊಂಡರು. ಒಬ್ಬೊಬ್ಬರು ಒ೦ದೊ೦ದು ರೀತಿಯಲ್ಲಿ ಬಯ್ಡರು,`ಕಾಮಣಿ ಅದವರಿಗೆ ಜಗತ್ತೆಲ್ಲಾ ಹಳದಿ`, `ಥತ್ ತೇರಿಕೇ, ನೀ ಯಾವ್ ಗಾ೦ಧಿ ಲೇ, ರಾತ್ರಿ ಚೂಡಿದ ಇಂಗ್ಲಿಷ್ ಸಿನಿಮಾ ಹೇಗಿತ್ತೋ”, “ಕಿಸೆನ್ಯಾಗ ನಾಕ ಪೈಸಾ ಇರಲಿಕ್ರೂ ಗೋಮಾಜಿಕಾಪ್ಸೆನ ಗತೆ ಹೆ೦ಗ ನಿಂತಾನ ನೋಡ್ರ್ಯೋs” ಎಲ್ಲ ಚುಚ್ಚುತ್ತಿದ್ಡವು. ನಾನು ಪೂರ ತತ್ತರಿಸಿ ಹೋದೆ. ಎಲ್ಲರೂ ತಾವು ಎಷ್ಟು ಒಳ್ಳೆಯವರು ಎಂದು ಉದಾಹರಣೆ ಸಮೇತ ಸಿದ್ಬಮಾಡಿದರು. ನಾನೊಬ್ಬನೇ ಈ ಸಮಾಜದಲ್ಲಿ ಕೊಳೆತು ನಾರುತ್ತಿರುವವ ಎಂದು ಹಂಗಿಸಿದರು. ರೂಪಾ ಕುಲಕರ್ಣಿ ಶ್ರೀಮಂತಳಾದರೂ ಆಕೆಗೆ ಸೊಕ್ಕಿಲ್ಲದಿದ್ದೂರಿಂದಲೇ 

ನನ್ನಂಥವನನ್ನೂ ಪಾರ್ಟಿಗೆ ಕರೆದಳು ಎಂದರು. ಆಕೆಗೆ ನನ್ನ ಕಥೆಯ ವಿಷಯ ತಿಳಿದು ಮನಸ್ಸಿಗೆ ಬೇಸರವಾಗಿಯೇ ಕಾಲೇಜಿಗೆ ಬಂದಿಲ್ಲವೆಂದು ಹೇಳಿ. ಪಾಪ. ಆಕೆ ಎಷ್ಟು ನೊಂದುಕೊಂಡಿರುವಳೋ ಎಂದು ಕನಿಕರ ವ್ಯಕ್ತಪಡಿಸಿದರು. ಅಷ್ಟರಲ್ಲಿ ರೂಮ್-ಮೇಟ್ ಮಾಧವ. ದೀಪಕ. ಬಾಜು ಖೋಲಿ ಶಿವರಾಮ ಬಂದಾಗಲೇ ನನಗೆ ಇವರಿಂದ ಬಿಡುಗಡೆ ಸಿಕ್ಕಿತು. ನನ್ನನ್ನು ಗಾಢ ಮೌನ ಆವರಿಸಿತ್ತು. ಮೂವರೂ ಖುಷಿಯಲ್ಲಿ ಜೋಕು ಹೂಡಯುತ್ತ ಪಾರ್ಟಿಗೆ ದು೦ಬಾಲು ಬಿದ್ದರು. ಬಸ್ಸು ಬಂದಾಗ ಹತ್ತಿ ‘ಐಸ್‍ಲ್ಯಾಂಡಿ’ಗೆ ಹೋಗಿ ಎರಡು ತಾಸು ಕೂತು ತಿಂದು. `ಹಿ೦ಗs ಮ್ಯಾಲಿಂದ ಮ್ಯಾಲೆ ಕತೀ ಬರಿ. ಪಾರ್ಟಿ ಮೇಲೆ ಪಾರ್ಟಿ’ ಎಂದು ಹೇಳಿ. ಕಂಗ್ರಾಟ್ಸ್; ಹೇಳಿದರು. ನೂರಾಹದಿನೈದು ರೂಪಾಯಿ ಬಿಲ್ಲು ತೆತ್ತು ಖಾಲಿ ಕಿಸೆ ಹೊತ್ತು ಖೋಲಿಗೆ ಬಂದಾಗ. ಜೀವನದಲ್ಲಿ ಎಲ್ಲ ಖಾಲಿ ಖಾಲಿ ಎನಿಸಿ ಹಾಸಿಗೆ ಮೇಲೆ ಬಿದ್ಧುಬಿಟ್ಟೆ. 

ಎದ್ದಾಗ ಚಲೋ ಬಿಸಿಲು ಏರಿ ಕಿಟಕಿಯಿಂದ ಸೀದಾ ನನ್ನ ಮಾರಿಗೇ ಬಡಿಯುತ್ತಿತ್ತು. ಸ೦ಡಾಸಕ್ಕೆ ಹೋಗಿ ಬರುವುದರೊಳಗಾಗಿ ಮತ್ತೊoದು ಆಕಸ್ಮಿಕ ನನ್ನನ್ನು ಕಾದಿತ್ತು. `Grandmother Serious; start immediately` ಟೆಲಿಗ್ರಾಂ. ನಾನಾಗಲೇ ಯೋಚನೆ ಮಾಡುವ ಸ್ಥಿತಿಯನ್ನು ಮೀರಿ ಬಿಟ್ಟಿದ್ದೆ, ಶೂನ್ಯ ಮನಸ್ಸಿನಿಂದ ಬಾಗಲಕೋಟೆ ಬಸ್ಸುಹಿಡಿದೆ.

ಮನೆಯೊಳಗೆ ಹೆಜ್ಜೆ ಇಡುತ್ತಿದ್ದಂತೆ ಕಿಟ್ಟಕ್ಕತ್ಯಾ ನನ್ನನ್ನು ನೋಡಿ ಅಳಲು ಆರಂಭಿಸಿದಳು. ಅಪ್ಪನ ಜೊತೆ ಹೊಲದ ವಿಷಯದಲ್ಲಿ. ಅಜ್ಜಿಯಿಂದ ಆಭರಣ ಕಿತ್ತುಕೊಂಡ ವಿಷಯದಲ್ಲಿ ಜಗಳಾಡಿದ ವೆಂಕುಕಾಕಾ ಎಂದೂ ಹಣಿಕಿ ಹಾಕದಿದ್ದವ ಮೂಲೆಹಿಡಿದು ಬಾಯಿಗೆ ಅಡ್ಡ ಪಂಜೆ ಹಿಡಿದುಕೊಂಡು. ಕಣ್ಣುತುಂಬಿಕೊಂಡು ಕೂತಿದ್ದ. ಅಪ್ಪ ಸ್ಥಿತಪ್ರಜ್ಞನಂತೆ ಮೌನದರಿಸಿದ್ದ. ಅವ್ವ ಗರಬಡಿದವಳಂತೆ ಅಧೀರಳಾಗಿ ನಿಂತಿದ್ದಳು. ಅಜ್ಜಿಗೆ ಬಿಪಿ ಸಿಕ್ಕಾಪಟ್ಟೆ ಜಾಸ್ತಿಯಾಗಿ ಮತ್ತೆ ಲಕ್ವಾ ಹೊಡೆಯಿತಂತೆ. ಅನಂತರ ಎರಡು ದಿನಗಳಲ್ಲಿ ಮಿದುಳಿನಲ್ಲಿ ರಕ್ತಸ್ರಾವವಾಯಿತಂತೆ. ಸಾಯುವುದಕ್ಕೆ ಮುಂಚೆ ಅಜ್ಜಿ ನನ್ನನ್ನು ಸನ್ನೆಮಾಡಿ ಕೇಳಿದಳಂತೆ. ಕಿಟ್ಟಕ್ಕತ್ಯಾ ಎಲ್ಲವನ್ನು ಅಳುತ್ತಲೇ ಹೇಳಿದಳು. ಅವ್ವನನ್ನು ಹಿಡಿದುಕೊಂಡಾಗ ಆಕೆ ನನ್ನ ತಲೆಬಳಸಿ ಆಳತೊಡಗಿದಳು. ಅಪ್ಪ ಒ೦ದು ಹನಿ ಕಣ್ಣೀರು ಹಾಕದೇ 

ಚಟ್ವದ ಸಿದ್ದತೆಯಲ್ಲಿ ತೊಡಗಿದ್ದ. ನಾನು ಕಥೆಯಲ್ಲಿ ನನ್ನ ಅಜ್ಜಿ ತೋರಿದ ದಪ೯ವಮ್ನ. ತನಗೆ ಲಕ್ವಾ ಹೊಡೆದಿದ್ದರೂ ಕ್ಯಾನ್ಸರಿನಿಂದ ಬಳಲುತ್ತಿರುವ ಅವ್ವನನ್ನು ಮಡಿಯ ಸಲುವಾಗಿ ದುಡಿಸಿಕೊಳ್ಳುತ್ತಿರುವ ಹೊಲಸು ಧಮಾ೯ಚರಣೆಯನ್ನು ಬರೆದದ್ದು ಈಗ ಅದು ಆಥ೯ ಕಳೆದುಕೊಂಡು ನನ್ನ ಮು೦ದೆ ನೇತಾಡತೊಡಗಿದಂತೆ ಈಗ ಅನ್ನಿಸುತ್ತಿದೆ. ಅಜ್ಜಿ ನಾನು ಬರೆದ ಕಥೆಯನ್ನು ಓದಿದ್ದರೆ ಸಾಯುವಾಗ ನನ್ನನ್ನು ನೋಡಲು ಹಾತೊರೆಯುತ್ತಿದ್ದಳೇ ಎಂಬ ಪ್ರಶ್ನೆ ಈಗ ನಿಲ್ಲುತ್ತಿದೆ. ಎದ್ದಾಗಿನಿಂದ ಹಾಸಿಗಗೆ, ಹೋಗುವವರೆಗೆ (ಒಮ್ಮೊಮ್ಮೆ ಮಲಗಿದ ಅನಂತರವೂ) ಕಾಟ ಕೊಟ್ಟ ಅತ್ತೆ ಸತ್ತಿದ್ದಕ್ಕಾಗಿ ಅಮ್ಮ ಬಿಕ್ಕಿ ಬಿಕ್ಮಿ ರೋದಿಸುತ್ತಿದ್ದಳು. ಅತ್ತೆ-ಸೊಸೆ ಸಂಬಂಧ ನಾನು ಊಹಿಸಿ ಬರೆದುದಕ್ಕಿಂತ ಭಿನ್ನವಾಗಿತ್ತೇ ಎಂದೀಗ ಭೀತನಾಗಿದ್ದೇನೆ.

ಎರಡು ದಿನ ಕಳೆಯುವಷ್ಟರಲ್ಲಿ ಎಲ್ಲರ ದುಃಖ ಎಷ್ಟೋ ಕಡಿಮೆಯಾಗಿತ್ತು. ವೆಂಕುಕಾಕಾ ಚುಟ್ಟಾ ಸೇದುತ್ತ ಪತ್ರಿಕೆ ಓದುತ್ತ ಕುಳಿತಿದ್ದ. ನನ್ನ ಕಥೆ ಅದರಲ್ಲೇ ಪ್ರಕಟವಾಗಿತ್ತು. ನನ್ನೆದೆ ಧಸಕ್ಕೆಂದಿತು. ಅದೇ ವೇಳೆಗೆ ವೆಂಕುಕಾಕಾ ಮಾರಿ ಇಷ್ಟಗಲ ಮಾಡಿ ನನ್ನನ್ನು ಕೂಗಿಯೇ ಬಿಟ್ಟ. “ಏನೋ ? ಈ ಕತೀ ನೀನ ಬರೆದದ್ದು ಹೌದಲ್ಲೋ ?”; ಎಂದು. ಹೌದೆಂದೆ. ಕಾಕು, ಕಿತ್ತಕ್ಕತ್ಯಾ, ಅಪ್ಪ, ಅವ್ವ, ಸುತ್ತಲಿದ್ದ ಎಲ್ಲರನ್ನೂ ವೆಂಕುಕಾಕಾ ಕೂಗಿ ಸುದ್ದಿ ಹೇಳಿದ. ದುಃಖದ ವಾತಾವರಣದಲ್ಲಿ ಸ್ವಲ್ಪ ಸಂತೋಷದ ಗಾಳಿ ಸೇರಿಕೊಂಡಂತೆ ಆಯಿತು. ಅವ್ವ, `ಏನೂಂತ ಬರೆದೀಯೋ?” ಎಂದಳು. `ನನ್ನೇನ ಕೇಳ್ತಿ? ಕತಿ ಓದಲಾ`, ಎಂದೆ. ನಾನು ಏನೆಂದು ಬರೆದಿದ್ದೇನೆ ಎನ್ನಬೇಕಿತ್ತು ಎಂದು ತೋಚದೇ ಹಾಗೆ ಹೇಳಿದೆ. ವೆಂಕುಕಾಕಾ ಜೋರಾಗಿಯೇ ಎಲ್ಲರೂ ಆತನನ್ನು ಸುತ್ತುವರಿದು ಕೂತಾಗ ಓದತೊಡಗಿದ, `ಕತಿ ಹೆಸರು: ರೂಪಾಕುಲಕರ್ಣಿ ಬರ್ತ್‌ಡೇ ಪಾರ್ಟಿ`. ಎಲ್ಲರೂ ಲಕ್ಷ್ಯಕೊಟ್ಟು ಕೇಳುತ್ತಿದ್ದರು. ನನಗೆ ಅಲ್ಲಿ ನಿಂತುಕೊಳ್ಳಲಾಗಲಿಲ್ಲ. ಎದ್ದು ಅಟ್ಟದ ಮೇಲೆ ಹೋದೆ. ನನ್ನೆದೆ ಡವಡವ ಹೊಡೆದುಕೊಳ್ಳುತ್ತಿತ್ತು. ದಿನಪೂರ್ತಿ ಮಡಿಯೆಂದು ಸಾಯುತ್ತ ಪಾರ್ಸಿ ಹೊಡೆದು ನಾರುತ್ತಿರುವ ಅಜ್ಜಿ, ಧರ್ಮವೆಂದು ಹಲುಬಿ ಕಣ್ಣೀರಿನಲ್ಲಿ ಅವ್ವನನ್ನು ನೆನೆಸುವ ಅಪ್ಪ, ತನೆಗೆ ಕ್ಯಾನಸರಾಗಿದ್ದರು ನಾಯಿಯಂತೆ ದುಡಿಯುವ ಅವ್ವ. ಮನೆಯ ಇಷ್ಟೆಲ್ಲ ತೊಂದರೆ ಗೊತ್ತಿದ್ದೂ ರೊಕ್ಕದ ಸಲುವಾಗಿ ಕೌರವರಂತೆ ಜಗಳಾಡಿ ದೂರವಾದ ಕಾಕಾ-ಎಲ್ಲವನ್ನೂ ಕಾಕಾ ಓದುತ್ತಿದ್ದ. ನಾನು ಮಾಲತಿಯ ಟೀಶರ್ಟ್ ಒಳಗೆ ಇಣುಕಿರುವುದನ್ನು ಎರಡೆರಡು ಸಲ ಓದಿದ. ಅವ್ವ ಅಳುತ್ತಿರುವುದು ಕೇಳಿಸಿತು. ಅಪ್ಪ ಅರಚತೊಡಗಿದ. `ಅಂವ ಬಂದರ ಬರ್ಲಿ. ಓದ್ಲಿಕ್ಕೆ ಅಂತ ಹುಬ್ಬಳ್ಳಿಗೆ ಕಳಿಸಿದ್ರ ನಮ್ಮ ಪಿಂಡಾ ಕಟ್ತಾನ ನಿನ್ನ ಮಗ`. ನಾನು ಅಟ್ಟದಲ್ಲಿ ಮಲಗಿಕೊಂಡಂತೆ ನಟಿಸುತ್ತಿದ್ದೆ. ಅಷ್ಟರಲ್ಲಿ ಪುಟ್ಟಿ (ವೆಂಕುಕಾಕಾನ ಆರು ವರ್ಷದ ಮಗಳು) ಅಟ್ಟದ ಮೇಲೆ ಬಂದು, ನನ್ನನ್ನು ನೋಡಿದವಳೇ, `ಇಂವ ಇಲ್ಲೇ ಮಲಗ್ಯಾನ, ನೋಡ ಬಾ`; ಎಂದಳು. ನನ್ನ ಸಿಟ್ಟು ನೆತ್ತಿಗೇರಿ ಎರಡು ಕೊಟ್ಟೆ, ಅವಳು ಜೋರು ದನಿ ತೆಗೆದು ಅಳತೊಡಗಿದಳು. ನಾನು ಅವಳನ್ನು ಎತ್ತಿಕೊಂಡವನೇ ಕೆಳಗಿಳಿದು ಬಂದುಬಿಟ್ಟೆ. 

ಅವ್ವ ಮೂಗಿಗೆ ಸೆರಗು ಮುಚ್ಚಿಕೊಂಡು ಅಳುತ್ತಿದ್ದಳು. ವೆಂಕುಕಾಕಾ ದುರುಗುಟ್ಟಿಕೊಂಡು ನನ್ನನ್ನೇ ನೋಡಿತ್ತಿದ್ದ. ಪುಟ್ಟಿ ಒಮ್ಮೆಲೇ ಅಳು ನಿಲ್ಲಿಸಿದಾಗ ಎಲ್ಲ ನಿಶಬ್ದವಾಯಿತು. ನಾನು ಗಪ್ಪು ನಿಂತಿದ್ದೆ. ಅಪ್ಪ ಪತ್ರಿಕೆಯನ್ನು ಮಾರಿಯ ಮೇಲೆ ಬೀಸಿ ಒಗೆದು, `ಬರೀಪಾ, ಇನ್ನೂ ಏನೇನ ಬರೆದು ಎಲ್ಲರ ಮಾನ ಹರಾಜು ಹಾಕಬೇಕಂತೀ ಹಾಕಿಬಿಡು,` ಎಂದ. ನಾನು ಬಗ್ಗಿ ಪತ್ರಿಕೆಯನ್ನೆತ್ತಿಕೊಂಡು ಗಟ್ಟಿಯಾಗಿ ಹಿಡಿದು ಕೊಂಡೆ. `ನಿಂಗ ರೊಕ್ಕ ಕಡಿಮೇಬಿದ್ರ ಕಾಗದ ಬರ್ದು ತಿಳ್ಸೊ. ಕತಿ ಒಳಗ ಬರ್ದು ಯಾಕ ನಮ್ಮನಿ ರಂದಿ ಎಲ್ಲಾ ಹೊರಗ ಚೆಲ್ತಿ?` ಎಂದು ಅವ್ವ ಗಳಗಳನೇ ಅಳಲು ಶುರು ಮಾಡಿದಳು. ಅಪ್ಪ ಅವ್ವನತ್ತ ಸಿಟ್ಟಿನಿಂದ ತಿರುಗಿ, `ಅಂವಗೆಲ್ಲಿ ರೊಕ್ಕ ಕಡಿಮಿ ಬೀಳ್ತಾವ? ತಿಂಗಳ ಕಡೀ ಆಖ್ಯರಿದ್ರೂ ಇಂಗ್ಲೀಷ್ ಸಿನಿಮಾ ನೋಡ್ತಾನ, ಅದೂ ಹೊಲಸ,` ಎಂದು ಬಯ್ದು, `ಎಂಥಾ ಮಗನ್ನ ಹಾಡದ್ಯ? ನಮ್ಮನಿ ಗೋಪುರಕ್ಕ ಕಳಸಾ ಇಡ್ತಾನ,` ಎಂದು, ನನ್ನತ್ತತಿರುಗಿ, `ಏ ರಂಡೆಗಂಡ, ಹೆತ್ತ ಹೊಟ್ಟಿಗಿ ಬೆಂಕಿ ಹಾಕ್ಲಿಕ್ಕ ಯಾಕ ಹುಟ್ಟಿದ್ಯೋ? ಹೋಗ, ಯಾವಕಿದರ ಅಂಗಿ ಒಳಗ ಹಣಿಕಿ ಹಾಕಹೋಗ, ಯಾವ್ದಾರ ಇಂಗ್ಲೀಷ್ ಸಿನಿಮಾ ನೋಡ ಹೋಗ,` ಎಂದು ರಭಸದಿಂದ ನನ್ನತ್ತ ಬಂದು, ಹಲ್ಲನ್ನು ಕಟಕಟನೇ ಕಡಿದು, `ಸಾಯ್, ಹಾಳಾಗು, ಎಲ್ಲೆರೆ ಸಾಯ್ ಹೋಗು,` ಎಂದು ನನ್ನನ್ನು ಕಂಡಕಂಡಲ್ಲಿ ಒದೆಯತೊಡಗಿದ. ಪುಟ್ಟಿ ದೊಡ್ಡ ದನಿ ತೆಗೆದು ಆಳಹತ್ತಿದಳು. ಅಪ್ಪನ ಆವೇಶವೆಲ್ಲ 

ಮುಗಿದ ಮೇಲೆ ನಿಂತಲ್ಲಿಯೇ ಕುಸಿದ, `ನಾ ಪಾಲಸೋ ಧರ್ಮಕ್ಕ ಅರ್ಥ ಇಲ್ಲಂತ, ನಾ ಗಂಟೇ ಬಾರ್ಸೊದು ಮಗ್ಗಲ ಮೇನಿಯವ್ರು ಕೇಳಲಿ ಅಂತ, ಏನ, ನೀ ಅತ್ತೀ ಸೇವಾ ಮಾಡಿದ್ದು ನನ್ನ ಹೆದರಿಕಿಗಂತ, ನಾ ನಿನ್ನ ಬೆಳೀಲಕ್ಕೆ ಬಿಡಲಿಲ್ಲಂತ,` ಅಪ್ಪ ಹಲುಬತೊಡಗಿದ.

ನಾನು `ಅಪ್ಪಾ` ಎನ್ನಲು ಬಾಯಿ ತೆಗೆದೆ. ಆದರೆ ಗಂಟಲಿನಿಂದ ಯಾವುದೇ ಶಬ್ದ ಹೊರಬರದೇ ಮತ್ತೆ ನಿಶ್ಚಲನಾದೆ. ಅವ್ವ ಅಳುತ್ತಲೇ, `ಛಲೋ ಬಿರುದು ಕೊಟ್ಯಲ್ಲೋ, ಪೈಸಾ ಪೈಸಾ ಗಳಿಸಲಿಕ್ಕ ಅವ್ರು ಎಷ್ಟು ಬೆವರ ಹರಸ್ತಾರಂತ ನಿಂಗೇನ ಗೊತ್ತೂ? ನಿನ್ನ ದೇವ್ರು ಎಂದೂ ಕ್ಷಮಿಸೂದಿಲ್ಲ,`ಎಂದಳು. `ಶ್ಯಾಣ್ಯಾ, ಶ್ಯಾಣ್ಯಾ ಅಂತ ಎಲ್ಲರೂ ಅಂತಿದ್ರು. ರಾಯರ ಕುದರಿ ಕತ್ತಿ ಆತು,` ಎಂದಳು ಕಾಕು. ನನಗೀಗ ಸುಮ್ಮನಿರಲಾಗಲಿಲ್ಲ. `ನೀವು ಸುಮ್ಮ ಕೂಡ್ರೀ, ಕಾಕು, ನಮ್ಮೆಪ್ಪ ಅವ್ವಾ ನಂಗ ಬೇಕಾದ್ದ ಬಯ್ತಾರ, ನೀವಡ್ಡ ಬಾಯಿ ಹಾಕಬ್ಯಾಡ್ರಿ,` ಎಂದರಚಿದೆ. ಅಪ್ಪ ಸಿಟ್ಟಿನಿಂದ,`ಯಾಕ, ದೊಡ್ಡವರಿಗೆ

ತಿರತಿರಗಿ ಮಾತಾಡ್ಲೀಕತ್ತಿ ? ಮರ್ತಬಿಟ್ಟೀನ ನಾ ಹೇಳಿದ್ದು?` ಎಂದು, ಒಂದರೆ ಕ್ಷಣ ಬಿಟ್ಟು, `ನೀ ಭಾಳ ಓದಿದವಲ್ಲಾ, ನಿನ್ನ ಮುಂದ ನಾ ಬುದ್ದಿ ಹೇಳ್ತೀನಲ್ಲಾ, ನಾ ಎಂಥಾ ಹುಚ್ಚ. ನೀ ಭಾಳ ದೊಡ್ಡವ ಆಗಿ ನೋಡು, ದೊಡ್ಡ ದೊಡ್ಡ ಪುಸ್ತಕ ಓದಿ , ಕತೀ ಬರೀತಿ. ನಿನ್ನ ಮುಂದೆ ನಾವೆಷ್ಟರವರಪ್ಪಾ, ದೊಡ್ಡಮನಷ್ಯಾ,` ಎಂದು ಹಂಗಿಸಿದ. ನನ್ನ ಕಟ್ಟಿದ ಗಂಟಲು ಕಣ್ಣೀರಾಗಿ ಹರಿಯಿತು. ನಾನು ಅಳಲಿಕ್ಕೆ ಶುರುಮಾಡಿದೆ. ಅಪ್ಪ, ಅವ್ವ, ಕಾಕಾ, ಕಾಕು ಎಲ್ಲ ಕೂಡಿ ಬಯ್ಯತೊಡಗಿದರು. ಅಜ್ಜಿ ಅವ್ವನನ್ನು ಮಗಳಂತೆ ನೋಡಿ ಕೊಳ್ಳುತ್ತಿದ್ದುದನ್ನು, ಅಪ್ಪನಿಗೆ ನನ್ನ ಮೇಲಿರುವ ಆಗಾಧ ಪ್ರೀತಿಯನ್ನು, ನನ್ನನ್ನು ಉಳಿದವರ ಮುಂದೆ ಹೊಗಳುವುದನ್ನು, ನನ್ನ ಪತ್ರ ಬಂದಾಗ ಓದೊಂದು ಅಕ್ಷರವನ್ನು ಓದಿ ಓದಿ ಆನಂದಿಸುವುದನ್ನು ಅವ್ವ ಬಿಕ್ಕಿ ಬಿಕ್ಕಿ ಆಳುತ್ತ ಹೇಳಹತ್ತಿದಳು. ಅಪ್ಪನಿಗೆ ಆವೇಶ ತಡೆಯಲಾಗಲಿಲ್ಲ. ನನ್ನನ್ನು ದರದರ ಎಳೆದವನೆ, `ಎಲ್ಲೆರೆ ಹಾಳಾಗಿ ಹೋಗು,` ಎಂದು 

ದಬ್ಬಿ, ಬಾಗಿಲನ್ನು ಹಾಕಿಕೊಂಡ, ಮನೆಯ ಅಜುಬಾಜು ಮಂದಿ ಸುತ್ತಲೂ ಮುಕುರಿದ್ದರು. ನಾನು ತೆಲೆತಗ್ಗಿಸಿ ಕೈಯಲ್ಲಿದ್ದ ಪತ್ರಿಕೆಯನ್ನು ನೋಡುತ್ತ ನಡೆಯಹತ್ತಿದೆ. ಕಿಲ್ಲಾದ ಸಂದಿಯನ್ನು ದಾಟಿ ಹೊರಟೆ. ದುಃಖಿಸಿ ಅಳುತ್ತ ಕತ್ತೆಹೊಳೆಗೆ (ಘಟಪ್ರಭಾ ನದಿ) ಬಂದು ಕೂತು ಎಲ್ಲ ದುಗುಡವನ್ನೂ ಹರಿಸಿಬಿಟ್ಟೆ. 

ಈಗಲೂ ಅಲ್ಲೇ ನದಿ ದಂಡೆ ಮೇಲೆ ಕೂತಿದ್ದೇನೆ. ಎಷ್ಟು ಅತ್ತರೂ ಸಮಾಧಾನವಾಗಲಿಲ್ಲ. ಎಲ್ಲವನ್ನೂ ಒಮ್ಮೆಲೆ ಕಕ್ಕಿಬಿಡಬೇಕು ಎನಿಸಿತು. ಅರ್ಧತಾಸು ಸುಮ್ಮನೆ ಕೂತು, ಮನಸ್ಸನ್ನು ತಹಬದಿಗೆ ತಂದುಕೊಂಡು, ಒಂದೊಂದೆ ಘಟನೆಗಳನ್ನು ಜೋಡಿಸಿಕೊಂಡು ಸಿದ್ದನಾದೆ. ನನ್ನ ಮುಂದೆ ನೀವು ಕೂತಿದ್ದೀರೆಂದು ಕಲ್ಪಿಸಿಕೊಂಡು ಎಲ್ಲವನ್ನೂ ಒಂದೂ ಬಿಡದೇ ಅದೇ ಪತ್ರಿಕೆಯ ಖಾಲಿ ಜಾಗದಲ್ಲೆಲ್ಲ ಬರೆದಿದ್ದೇನೆ. ಕಕ್ಕಬೇಕೆನಿಸಿದ್ದನ್ನೆಲ್ಲವನ್ನೂ ಕಕ್ಕಿದ್ದರೂ ಇನ್ನೂ ಸಮಾಧಾನವಾಗೆಲ್ಲ. ವಾಸ್ತವಿಕತೆಯ ನೆಲೆಗಟ್ಟಿನ ಮೇಲೆ ಅನುಭವದ ಜಾಡು ಹಿಡಿದು ಪ್ರಾಮಾಣಿಕವಾಗಿ ಬರೆಯಬೇಕೆನ್ನುವ ಹಟ ತೊಟ್ಟು ಕಥೆ ಬರೆದು ನಾನು ಸಾಧಿಸಿದ್ದಾದರೂ ಏನು ಎಂದು ಅನಿಸುತ್ತಿದೆ. ನನ್ನ ಕಥೆ ಮೆಚ್ಚಿ ಒಂದೆರಡು ಕಾಗದಗಳು ಬರಬಹುದು. ಸತ್ತ ಅಜ್ಜಿಯ ನಂಬಿಕೆಗಳು ನನ್ನನ್ನು ದಿನವೂ ಪೀಡಿಸುತ್ತವೆ. ಅಪ್ಪ, ಅವ್ವನ ನಂಬಿಕೆಗಳು, ಪರಿಕಲ್ಪನೆಗಳು ನನ್ನನ್ನು ಭೂತದಂತೆ ಬೆನ್ನು ಹತ್ತುತ್ತವೆ. ಇನ್ನು ಮುಂದೆ ಅಪ್ಪ, ಅವ್ವ ನನ್ನನ್ನು ಮಗನ ಹಾಗೆ ಪ್ರೀತಿಸುವುದೇ ಇಲ್ಲ, ಅಪರಿಚಿತನಂತೆ ನಿರುಕಿಸುತ್ತಾರೆ. ಮತ್ತೆ ನಾನು ಕಾಲೇಜಿಗೆ ಹೋದ ಕೂಡಲೇ ರೂಪಾ ಕುಲಕರ್ಣಿ ತರಾಟೆಗೆ ತೆಗೆದುಕೊಳ್ಳುತ್ತಾಳೆ, ಎಲ್ಲ ಗೆಳೆಯರಿಗೂ ನಾನು ಅಪರಿಚಿತನಾಗುತ್ತೇನೆ. ನನಗೆ ಒಂದು ಥರ ಹುಚ್ಚು ಹಿಡಿದರೂ ಹಿಡಿಯಬಹುದು. ಏಕಾಂಗಿಯಾಗಿ ಖೋಲಿಯಲ್ಲಿ ಗೋಡೆಯನ್ನು ನೋಡುತ್ತಾ ಗಪ್ಪು ಕೂಡುವ ಕೆಲಸ ನನ್ನ ದಿನಚರಿಯಾಗಬಹುದು. ಇದನ್ನೆಲ್ಲ ನಾನು ಕಥೆ ಬರೆದು ಪ್ರಕಟಿಸುವುದಕ್ಕೆ ಮುಂಚೆ ಯೋಚಿಸಬೇಕಾಗಿತ್ತು, ಅಲ್ಲವೇ ?

ಅಯ್ಯೋ, ಆಗಲೇ ಸೂರ್ಯ ಮುಳುಗಿಯೇ ಹೋದ. ಮನೆಯಿಂದ ಬಿಟ್ಟಾಗ ಮಧ್ಯಾಹ್ನದ ಹೊತ್ತು. ಇನ್ನೂ ಯಾರ ಊಟವೂ ಆಗಿಲ್ಲ. ಅವ್ವ ಅಳುತ್ತ , ನನ್ನ ದಾರಿ ಕಾಯುತ್ತಾ ಏನೇನೋ ಕೆಟ್ಟ ಯೋಚನೆ ಮಾಡುತ್ತ ( ನಾನು ಜೀವಕ್ಕೇ ಅಪಾಯ ತಂದುಕೊಂದನೆಂದು ಅಥವಾ ಮನೆಬಿಟ್ಟು ಓಡಿ ಹೋದೆನೆಂದು) ಕೂತಿರಬಹುದು. ಅಪ್ಪ ಕಾಲು ಸುಟ್ಟ ಬೆಕ್ಕಿನಂತೆ ಪರದಾಡುತ್ತ, ತನ್ನನ್ನು ಶಪಿಸಿ ಕೊಳ್ಳುತ್ತ ಊಟ ಮಾಡದೇ ಪರಿತಪಿಸುತ್ತಿರಬಹುದು. ಎಲ್ಲರೂ ಹುಚ್ಚು ಹಿಡಿದವರ ಹಾಗೆ ನಾನು ಹೋದ ದಾರಿ ಕಾಯುತ್ತ ಕೂತಿರುತ್ತಾರೆ, ಇನ್ನು ತಡಮಾಡುವುದಿಲ್ಲ ಹೋಗಿಬರುತ್ತೇನೆ.