ಕೈ ಹಿಡಿದು ನಡೆಸಿದ ಗುರುವಿನ ಕುರಿತು..

ಎಲ್ಲರಿಗೂ ನಮಸ್ಕಾರ,
ನಾನು ಇಂದು ಬರೆಯುತ್ತಿರುವುದು, ನನ್ನ ಪ್ರೀತಿಯ ಗುರುಗಳಾದ ಡಾ. ಶಾಲಿನಿ ರಘುನಾಥ್ ಅವರ ಕುರಿತು. ಡಾ. ಶಾಲಿನಿ ರಘುನಾಥ್ ಅವರು
ನಮ್ಮ ಕನ್ನಡ ನಾಡಿನ ಹೆಸರಾಂತ ಜಾನಪದ ವಿದ್ವಾಂಸರು. ಭಾಷಾ ವಿಜ್ಞಾನದಲ್ಲಿ ಹಲವು ಸಂಶೋಧನಾತ್ಮಕ ಕೃತಿಗಳನ್ನು ರಚಿಸಿದ್ದಾರೆ.
ಜಾನಪದ ಸಂಶೋಧನೆ ಮತ್ತು ಸಂಗ್ರಹಕಾರ್ಯದಲ್ಲೂ ಅವರು ತಮ್ಮ ವಿಶೇಷ ಛಾಪು ಮೂಡಿಸಿದ್ದಾರೆ. ತಮ್ಮ ಉದ್ಯೋಗವನ್ನು ತಪಸ್ಸಿನಂತೆ
ಮಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಅಧ್ಯಯನದ ರುಚಿ ಹತ್ತಿಸಿದವರು. ಕಲಿತ ವಿದ್ಯೆಯನ್ನು ಬದುಕಿಗೆ ಅಳವಡಿಸಿಕೊಂಡು ನಿರಂತರವಾಗಿ ಚಿಂತನೆ ಮಾಡುವ ಹಾದಿಯಲ್ಲಿ ನನ್ನನು ಕೈಹಿಡಿದು ನಡೆಸಿದವರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅವರ ವಿದ್ಯಾರ್ಥಿಯಾಗಿ ನಾನು
ಕಳೆದ ಎರಡು ವರ್ಷಗಳು ಆ ನಂತರದ ಈ 14 ವರ್ಷಗಳೂ ನನ್ನನು ಅದೇ ಕಲಿಕೆಯ ಹಾದಿಯಲ್ಲಿಟ್ಟಿವೆ. ಅಂತಹ ಗುರುವಿನ ಜೊತೆಗೆ ನನ್ನ ಒಡನಾಟದ ಕುರಿತು ನನ್ನ ಈ ಲೇಖನ.
- ಅಮಿತಾ ರವಿಕಿರಣ್
ಚಿತ್ರಕೃಪೆ; ಗೂಗಲ್
ಪದವಿಯು ಮುಗಿದು ನಾಲ್ಕು ವರ್ಷಗಳ ಧೀರ್ಘ ಅಂತರದ ನಂತರ ಮತ್ತೆ ಕಾಲೇಜ್ ಸೇರಿಕೊಳ್ಳುವ ಸುಯೋಗ ಬಂದಿತ್ತು ಕಲಿಯಬೇಕೆಂಬ ಆಸೆ
ಇತ್ತಾದರೂ ಅದನ್ನು ಆಚರಣೆಗೆ ಹೇಗೆ ತರುವುದು ಎಂಬುದು ತಿಳಿದಿರಲಿಲ್ಲ. ಪದವಿ ಪಡೆದಿದ್ದು ಸಂಗೀತದಲ್ಲಿ ಆದರೆ ಸ್ನಾತಕೋತ್ತರ
ಅಧ್ಯಯನವನ್ನು ಸಂಗೀತದಲ್ಲೇ ಮುಂದುವರಿಸುವ ಮನಸ್ಸಿರಲಿಲ್ಲ ಸಂಗೀತ ಬಿಡುವ ಮನಸ್ಸು ಇರಲಿಲ್ಲ. ಈ ನಡುವೆ ಅತಿಯಾಗಿ ನನ್ನ ಮನಸನ್ನ
ಆವರಿಸಿದ್ದ ವಿಷಯ ಜಾನಪದ. ಆಗ ನನಗೆ ಜನಪದ ಜಾನಪದ ದ ನಡುವಿನ ವ್ಯತ್ಯಾಸವು ತಿಳಿದಿರಲಿಲ್ಲ.
ನನ್ನ ದನಿ ಕೇಳಿದ ಹಲವು ಮಂದಿ ಜನಪದ ಸಂಗೀತವನ್ನು ಮುಂದುವರಿಸಿಕೊಂಡು ಹೋಗು ಎಂದು ಹೇಳುತ್ತಿದ್ದರು ಮತ್ತು ಯಾವ
ಕಾರ್ಯಕ್ರಮಕ್ಕೆ ಹೋದರೂ ಜಾನಪದ ಗೀತೆಗಳನ್ನು ಹಾಡು ಎಂಬ ಅಪೇಕ್ಷೆ ಮುಂದಿಡುತ್ತಿದ್ದರು. ಆ ಒಂದು ಹಿನ್ನೆಲೆಯಲ್ಲಿ ಜನಪದ ಸಂಗೀತದ
ಬಗೆಗೆ ಏನಾದರು ಹೆಚ್ಚಿನದ್ದು ಕಲಿಯಬೇಕು ಎಂಬ ಸ್ಪಷ್ಟ ಉದ್ದೇಶದೊಂದಿಗೆ ನಾನು ಜಾನಪದ ಅಧ್ಯಯನ ಪೀಠದ ಹೊಸ್ತಿಲನ್ನು ತುಳಿದಿದ್ದೆ.

ಆ ದಿನ ನಮ್ಮ ಪ್ರವೇಶ ಪ್ರಕ್ರಿಯೆ ಆರಂಭವಾದ ದಿನ. ನಾನು ಮೊದಲ ಬಾರಿ ಶಾಲಿನಿ ಮೇಡಂ ಅವರನ್ನು ನೋಡಿದ್ದು ಹಸಿರು ಕೆಂಪಂಚಿನ
ಧಾರವಾಡ ಸೀರೆಯಲ್ಲಿ ನಗು ಮೊಗದಿಂದ ವಿದ್ಯಾರ್ಥಿಗಳನ್ನು ಮಾತನಾಡಿಸುತ್ತಿದ್ದರು. ಅದೆಷ್ಟು ಸರಳತೆಯಿಂದ ಅವರು ನಮ್ಮೊಂದಿಗೆ
ಮಾತನಾಡಿದ್ದರೆಂದರೆ, ಅವರು ಅಧ್ಯಯನ ಪೀಠದ ಅಧ್ಯಕ್ಷೆ ಎಂಬುದು ನನಗೆ ತಿಳಿಯಲೇ ಇಲ್ಲ.
ಅಡ್ಮಿಷನ್ ಆಗಿ ಮನೆಗೆ ಹೋದಾಗ ಅದೇ ತಿಂಗಳ ಕಸ್ತೂರಿ ಮಾಸಪತ್ರಿಕೆಯಲಿ ಭಾಷಾ ಶಾಸ್ತ್ರ ಕುರಿತಾದ ಒಂದು ಲೇಖನದಲ್ಲಿ ಅವರ ಹೆಸರು
ಉಲ್ಲೇಖಿಸಲಾಗಿತ್ತು. ಅವರಲ್ಲಿರುವ ಅಪರೂಪದ ಪುಸ್ತಕ ಸಂಗ್ರಹದ ಬಗ್ಗೆ ಲೇಖಕ ತುಂಬಾ ಚನ್ನಾಗಿ ಬರೆದಿದ್ದರು. ಅವರೇ ಇವರು ಎಂದು
ತಿಳಿದಾಗ ಮನಸ್ಸು ಸಂಭ್ರಮಿಸಿತ್ತು.

ಕಾಲೇಜ್ ಶುರುವಾದ ನಂತರ ನಾವು ಅವರನ್ನು ಭೇಟಿ ಮಾಡಲು ಅವರ ಚೇಂಬರ್ ಗೆ ಹೋದಾಗ ಅವರು ಮಾತನಾಡಿದ ಶೈಲಿ, ಅವರ
ಆತ್ಮೀಯತೆ ನನ್ನ ಶಿಕ್ಷಣ ಮುಂದುವರಿಸುವ ಕುರಿತು ಇದ್ದ ಹಲವು ದುಗುಡ ಕಡಿಮೆ ಮಾಡಿದ್ದವು. ಜೊತೆಗೆ ಅಷ್ಟೇ ಕಳಕಳಿಯಲ್ಲಿ ಹೇಳಿದ್ದರು.
ಜಾನಪದವನ್ನು ಸುಲಭ , ಡಿಗ್ರಿ ಮುಗಿಸಲು ಒಂದು ಸರಳ ವಿಷಯ ಎಂಬ ಭಾವನೆ ಸಾಮಾನ್ಯ. ಮತ್ತು ಅಧ್ಯಯನ ಪೀಠಕ್ಕೆ ಬರುವ ಹಲವರಲ್ಲಿ
ಈ ಆಲೋಚನೆಯೇ ಇರುತ್ತದೆ ಆದರೆ ನೀವು ಅದನ್ನು ನಿಜಕ್ಕೂ ಇಷ್ಟಪಟ್ಟು ಅಭ್ಯ್ಯಸಿಸಿ ಏನಾದರು ಹೊಸ ದಿಶೆಯಲ್ಲಿ ಆಲೋಚಿಸಬೇಕು. ಬರೀ
ಜಾಬ್ ಗಿಟ್ಟಿಸಲು ಒಂದು ಡಿಗ್ರಿ ಅಂದುಕೊಳ್ಳದೆ ಪ್ರೀತಿಯಿಂದ ಅಧ್ಯಯನ ಶುರು ಮಾಡಿ, ಎಲ್ಲಿ ನೋಡಿದರೂ ನಿಮಗೆ ಜನಪದವೇ ಕಾಣಬೇಕು. ಈ
ವಿಷಯವನ್ನು ಮನದಟ್ಟು ಮಾಡಿಕೊಂಡೆ ಕ್ಲಾಸಿಗೆ ಬನ್ನಿ ಮತ್ತು ತರಗತಿಗಳನ್ನು ತಪ್ಪಿಸಬೇಡಿ ಅಂದರು.

ಮೊದಲ ಸೆಮಿಸ್ಟರ್ ನಲ್ಲಿ ಜಗತ್ತಿನ ಜಾನಪದ ಇತಿಹಾಸ ಎಂಬ ವಿಷದೊಂದಿಗೆ ಮೇಡಂ ಮೊದಲಬಾರಿ ನಮ್ಮ ಮುಂದಿದ್ದರು , ಯುರೋಪ್
ಅಮೇರಿಕ ಮತ್ತು ರಷ್ಯ ಭಾರತದ ಜನಪದ ಇತಿಹಾಸವನ್ನು ಹೇಳುವುದರೊಂದಿಗೆ ಇತಿಹಾಸ ಓದುವುದು ನಮ್ಮ ವರ್ತಮಾನಕ್ಕೆ ಹೇಗೆ
ಉಪಯೋಗಕಾರಿ ? ಅನ್ನುವ ವಿಷಯವನ್ನು ಅದೆಷ್ಟೋ ಉದಾಹರಣೆಗಳೊಂದಿಗೆ ವಿವರಿಸಿದ್ದರು ಅದರಲ್ಲೂ ಎಂದೋ ಕಳೆದು ಹೋದ ಫಿನ್ಲ್ಯಾಂಡ್
ನ ಕಲೆವಾಲ್ ಎಂಬುವ ಕಥನಗೀತೆಯನ್ನು ಸಂಪಾದಿಸಿದ ರೀತಿ ಅದು ಅಲ್ಲಿನ ಜನಮಾನಸದ ಮೇಲೆ ಬೀರಿದ ಪರಿಣಾಮ. ಮತ್ತು ಅದೇ
ಕ್ರಮವನ್ನು ಬಳಸಿ ತುಳುನಾಡಿನ ಸಿರಿ ಪಾಡ್ದನಗಳನ್ನು ಸಂಗ್ರಹಿಸಿದ ಕ್ರಮವನ್ನು ಅದರ ಸುತ್ತಲಿನ ವಿಷಯವನ್ನು ಮನಮುಟ್ಟುವಂತೆ
ಅರ್ಥಮಾಡಿಸಿದ್ದರು.

ನಾನು ಎಂ ಎ ಸೇರಿಕೊಂಡ ವರುಷವೇ ಮೊದಲಬಾರಿ ವಿಶ್ವವಿದ್ಯಾಲಯ ಮುಕ್ತ ವಿಷಯೊಂದನ್ನು ಆಯ್ಕೆಮಾಡಿಕೊಳ್ಳುವ ಹೊಸ ವಿಧಾನವನ್ನು
ಪರಿಚಯಿಸಿತ್ತು. ಅದನ್ನು open elective subject ಎಂದು ಕರೆದಿದ್ದರು ನಾವು ಆಯ್ದುಕೊಂಡ ವಿಷಯದ ಜೊತೆಗೆ open elective ವಿಷಯದ
ತರಗತಿಯ ಹಾಜರಿ ಮತ್ತು ಅದರ ಅಂಕಗಳು ಮುಖ್ಯವಾಗಿದ್ದವು. ಆ ಹೊತ್ತಿನಲ್ಲಿ ನನ್ನ ಕರೆದು ಮೇಡಂ ಹೇಳಿದ್ದರು 'ಯಾವ ವಿಷಯ ತಗೋಬೇಕು ಅನ್ನುವುದರ ಬಗ್ಗೆ ನಿಮಗೆ ಪೂರ್ಣ ಸ್ವಾತಂತ್ರವಿದೆ ಆದರೆ ನಿಮಗೊಂದು ಸಲಹೆ ಕೊಡುತ್ತೇನೆ. ಯಾವುದಾದರು ವಿದೇಶಿ
ಭಾಷೆಯನ್ನು ಆಯ್ಕೆಮಾಡಿ. ಅದರಿಂದ ನಿಮ್ಮ ಕಲಿಕೆ ಇನ್ನು ಉತ್ತಮಗೊಳ್ಳುತ್ತದೆ, ಮತ್ತು ಜಾನಪದ ವಿಧ್ಯಾರ್ಥಿಗಳು ಆಂಗ್ಲ ಭಾಷೆ ಮತ್ತು ಇತರ
ಭಾಷೆಗಳನ್ನು ಕಲಿಯಬೇಕು ಅದರಿಂದ ಅಧ್ಯಯನದಲ್ಲಿ ಹೊಸತನ ಕಾಣ ಸಿಗುತ್ತದೆ ಎಂದರು. ಅವರ ಮಾತಿನ ಅರ್ಥ,ದೂರದರ್ಶಿತ್ವ ಆಗ ನನಗೆ ನಿಜಕ್ಕೂ ಅರ್ಥವಾಗಿರಲಿಲ್ಲ. ಆದರೆ ಅವರ ಮಾತನ್ನು ಮೀರದೆ ಅವರ ಸಲಹೆಯಂತೆ ನಾನು ಕ್ರಮವಾಗಿ ಜರ್ಮನ್ ಮತ್ತು ಫ್ರೆಂಚ್ ಭಾಷೆಗಳನ್ನು ಆಯ್ಕೆ ಮಾಡಿಕೊಂಡು ಆ ಭಾಷೆಗಳ ಪ್ರಾರಂಭಿಕ ಕಲಿಕೆ ಮಾಡಲು ಸಾಧ್ಯವಾಯಿತು ,

`The dream begins with a teacher who believes in you ,who tugs and pushes and leads you to the next plateau sometimes poking you with a sharp stick' ಅನ್ನುವ ಮಾತು ಅದೆಷ್ಟು ಸತ್ಯ ನನ್ನಲ್ಲಿ ಅವರು ಕನಸುಗಳನ್ನು ಬಿತ್ತುತ್ತಿದ್ದರು ಸ್ನಾತಕೋತ್ತರ ಜಾನಪದ ಪದವಿ ಪಡೆದವರಿಗೆ ಲೆಕ್ಚರರಿಕೆ ಒಂದೇ ಆಯ್ಕೆ ಅಲ್ಲ! ಅದಲ್ಲದೆ ಹಲವಾರು ಕ್ರಿಯಾಶೀಲ ಕ್ಷೇತ್ರಗಳು ಕಾಯುತ್ತಿವೆ. ಆದರೆ ನಾವು ಅದರ ಬಗ್ಗೆ ಧೇನಿಸುತ್ತಿರಬೇಕು. ಸದಾಕಾಲ ಒಂದು ಎಚ್ಚರಿಕೆ ನಮ್ಮಲ್ಲಿರಬೇಕು. ಆ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ? ಯಾಕೆ ಹೀಗಲ್ಲದಿದ್ದರೆ ಹೇಗೆ ಆಗಬಹುದಿತ್ತು? ಅನ್ನುವ ಪ್ರಶ್ನೆಗಳನ್ನು ಪ್ರತಿ ವಿಷಯಕ್ಕೂ ನಮ್ಮನ್ನು ನಾವು ಕೇಳಿಕೊಳ್ಳಬೇಕು ಅದು ನಮ್ಮ ಆಲೋಚನೆಯನ್ನು ಮೊನಚು ಮಾಡುತ್ತದೆ ಎಂಬುದು ವಿದ್ಯಾರ್ಥಿಗಳಿಗೆಲ್ಲರಿಗೂ ಅವರು ಹೇಳುತ್ತಿದ್ದ ಕಿವಿಮಾತು.

ವಿರಾಮವಿರದ ಅವರ ದಿನಚರಿಯಲ್ಲೂ ಕ್ಲಾಸ್ ಗೆ ಒಮ್ಮೆಲೇ ಬಂದು ಯಾವುದಾದರೂ ವಿಷಯಗಳನ್ನು ಕೊಟ್ಟು ಅದರ ಬಗ್ಗೆ ಬರೆದು ತರಲು
ಹೇಳುತ್ತಿದ್ದರು ಮತ್ತು ಪ್ರತಿ ಬರಹವನ್ನು ಕೂಲಂಕಷವಾಗಿ ಪರಿಶಿಲಿಸಿ ತಿದ್ದುಪಡಿ ಹೇಳುತಿದ್ದರು.
ಆ ನಿಟ್ಟಿನಲ್ಲಿ ನಾನು ಹಲವು ಚಿಕ್ಕಪುಟ್ಟ ಲೇಖನ ಬರೆಯುತ್ತಿದ್ದೆ. ಅದರಲ್ಲಿ ಮುಖ್ಯವಾದದ್ದು ಚಿತ್ರರಂಗ ಮತ್ತು ಜಾನಪದ ಎಂಬ ವಿಷಯದ ಬಗ್ಗೆ
ವಿವರವಾಗಿ ಬರೆದ ನಿಬಂಧ. ಅದನ್ನು ನೆನೆಸಿಕೊಂಡರೆ ಈಗಲೂ ನನಗೆ ನಗು ಬರುತ್ತದೆ. ಸಾಕಷ್ಟು ವಿಷಯಗಳನ್ನು ಇಂಟರ್ನೆಟ್ ನಿಂದ
ಸಂಗ್ರಹಿಸಿದ್ದೆ. ಮೇಡಂ ಅವರಿಂದ ಸಾಕಷ್ಟು ಮೆಚ್ಚುಗೆಯನ್ನೂ ನಿರೀಕ್ಷಿಸಿದ್ದೆ. ಆದರೆ ಅವರು ಮಾತ್ರ 'ಸಂಗ್ರಹ ಚನ್ನಾಗಿದೆ ತುಂಬಾ ವಿಷಯ ಹುಡುಕಿದೀರಿ ಅನ್ನೋದನ್ನು ಬಿಟ್ಟು ಬೇರೇನೂ ಹೇಳಲೇ ಇಲ್ಲ. ನನಗೆ ನಿಜಕ್ಕೂ ಬೇಜಾರಾಗಿತ್ತು.
ಕೆಲವು ವಾರಗಳ ನಂತರ ನನ್ನ ಕರೆದು ಹೇಳಿದರು ‘ನೀವು ತುಂಬಾ ಶ್ರಮ ಪಡ್ತೀರಿ,ವಿಷಯ ಸಂಗ್ರಹಿಸ್ತೀರಿ ಬರೀತೀರಿ ಕೂಡ ಆದರೆ ಅದನ್ನು
ವ್ಯವಸ್ತಿತವಾಗಿ ಜೋಡಿಸುವುದರಲ್ಲಿ ಮುಗ್ಗರಿಸುತ್ತೀರಿ ಇದೊಂಥರ ಇಟ್ಟಿಗೆ ಸಿಮೆಂಟ್ ಕಲ್ಲು ಎಲ್ಲ ವನ್ನು ತಂದು ರಾಶಿ ಹಾಕಿ ಒಮ್ಮೆಲೇ ಮನೆ
ಕಟ್ಟುವ ಹುರುಪಿನಂತೆ. ಆದರೆ ಮನೆ ಕಟ್ಟಲು ಒಂದು ಕ್ರಮವಿದೆ ಅದನ್ನು ನೀವು ಕಲಿಬೇಕು ಅದಕ್ಕೆ ನೀವು ಬಹಳ ಓದಬೇಕು ಅಂದು ತಮ್ಮಲ್ಲಿದ್ದ
ಹಲವಾರು ಪುಸ್ತಕಗಳನ್ನು ನನಗೆ ಓದಲು ಕೊಟ್ಟಿದ್ದರು. ಬರವಣಿಗೆಯ ಮುನ್ನ ಸಂಗ್ರಹಿಸಿದ ವಿಷಯವನ್ನು ಹೇಗೆ ವಿಂಗಡಿಸುವುದು. ಕ್ರಮವಾಗಿ
ಜೋಡಿಸುವುದು ಮತ್ತು ನಿರೂಪಿಸುವುದು ಹೇಗೆ ಅನ್ನುವುದನ್ನು ಉದಾಹರಣೆಗಳ ಸಮೇತ ವಿವರಿಸಿದ್ದರು.

'A teacher is who gives you something to take home to Think about ,besides homework'
ಅವರು ಕಲಿಸುತ್ತಿದ್ದುದೆ ಹಾಗೆ, ಪಾಠಗಳು ನಿಮಿತ್ಯ ಮಾತ್ರ ಆದರೆ ನಿಜವಾದ ಪಾಠಶಾಲೆ ಸಮಾಜ, ಜನಪದವನ್ನು ನಾಲ್ಕು ಗೋಡೆಗಳ ಮಧ್ಯೆ
ಕುಳಿತು ಕಲಿಯಾಲಾಗದು, ನಿಮಗೆ ಅದರ ಗುಂಗು ಹಿಡಿಯಬೇಕು ಅನ್ನುತ್ತಿದ್ದರು ಮತ್ತು ಅದು ನನಗೆ ಹಿಡಿದೇ ಬಿಟ್ಟಿತು. ಕಾಲೇಜಿಗೆ ಹೋಗಲು
ನಾನು ದಿನ ಮುಂಡಗೊಡಿನಿಂದ ಧಾರವಾಡಕ್ಕೆ, ಮತ್ತೆ ವಾಪಸ್ ಮನೆಗೆ ಬರಲು ಬಸ್ನಲ್ಲಿ 150ಕಿಲೋಮೀಟರ್ ಪ್ರಯಾಣ ಮಾಡಬೇಕಿತ್ತು. ಆ
ಪಯಣದಲ್ಲಿ ದಿನದ ನಾಲ್ಕು ಘಂಟೆಗಳು ವ್ಯಯವಾಗುತಿದ್ದವು, ಅಷ್ಟು ಸಮಯ ನನ್ನ ಆಲೋಚನೆ ಓದು ಬರೀ ಜನಪದವೇ. ಕುರಿಮಂದೆಯ
ಹೆಣ್ಣುಮಗಳ ಕಿವಿಯಲ್ಲಿಯುವ ಬುಗುಡಿ ಯಿಂದ ಅದ್ಯಾರೊ ಹಿಡಿದು ಬಂದ ಕಸೂತಿ ಚೀಲದವರೆಗೆ. ಆಟೋ ರಿಕ್ಷಾ ಹಿಂಬದಿಯ ತಮಾಷೆ
ಬರಹಗಳಿಂದ ಹಿಡಿದು, ಜಗಳದಲ್ಲಿ ಬಳಸಲ್ಪಡುವ ಬೈಗುಳದಲ್ಲಿಯೂ, ಎಲ್ಲಿ ನೋಡಿದರಲ್ಲಿ ಜನಪದವೇ ಕಾಣುತಿತ್ತು.

ಮೇಡಂ ಅವರು ನನ್ನ ಮೇಲೆ ಅಷ್ಟು ಪರಿಣಾಮ ಬೀರಿದ್ದರು ಮಾತಿನಲ್ಲಿ, ಹಾಡಿನಲ್ಲಿ,ಕುಣಿತದಲ್ಲಿ ,ನಡೆಯಲ್ಲಿ ,ಹಿತ್ತಲ ಕಸದಲ್ಲೂ ಜನಪದೀಯ
ಅಂಶಗಳು ಕುಣಿದಾಡುತ್ತಿದ್ದವು. ಆಗ ನನ್ನ ಮನಸು ಬುದ್ದಿ ಅನುಭವಿಸಿದ ಆ ಖುಷಿ, ಆತ್ಮ ಸಂತೃಪ್ತಿಯನ್ನು ಬರಹದಲ್ಲಿ ಹಿಡಿದಿದಲಾಗದು. ಇಷ್ಟು
ವರ್ಷ ನಾನು ಹುಡುಕುತ್ತಿದ್ದುದು ಇದೆ ಏನೋ ಅನ್ನ್ನಿಸುವುದಕ್ಕೆ ಶುರುವಾಗಿದ್ದು ನನ್ನ ಎಲ್ಲ ಚಡಪಡಿಕೆಗಳಿಗೆ ಉತ್ತರ ಜಾನಪದ ಮಾತ್ರವೇ
ನೀಡಬಲ್ಲದು ಎಂಬ ಸತ್ಯ ಅರಿವಾಗಿತ್ತು.

ಇದೆ ಸಮಯದಲ್ಲಿ ಮೇಡಂ ಅವರ ಮತ್ತೊಂದು ಯೋಜನೆಯಿಂದ ನಾನು ಜಾನಪದದ ಮತ್ತೂಂದು ಮಗ್ಗಲು ನೋಡುವಂತಾಯಿತು. ಪ್ರವಾಸೋದ್ಯಮ ಮತ್ತು ಜಾನಪದ ಎಂಬ ವಿಷಯದ ಮೇಲೆ ಮೂರು ದಿನಗಳ ಕಾರ್ಯಾಗಾರ, ನನ್ನ ಸ್ನಾತಕೋತ್ತರ ಅಧ್ಯಯನದ ಇನ್ನೊಂದು ತಿರುವು ಅದು.
ಅಲ್ಲಿ ನಾ ತಿಳಿದ ,ನೋಡಿದ ,ಕಲಿತ ವಿಷಯ ಹಲವು ಅಲ್ಲಿಯ ತನಕ ಸಂಗೀತ ಮತ್ತು ಜಾನಪದವನ್ನು ಜೊತೆಮಾಡಿ ಅದನ್ನೇ ನನ್ನ ಮುಖ್ಯ
ಅಧ್ಯಯನದ ವಿಷಯವನ್ನಾಗಿ ಮಾಡಿಕೊಳ್ಳಬೇಕು, ಸಂಶೋಧನೆಗೆ ಅಣಿಯಾಗಬೇಕು ಅಂದುಕೊಂಡ ನನಗೆ ಜನಪದ ವೈದ್ಯದ ಮೇಲೆ ಪ್ರೀತಿ
ಹುಟ್ಟಿತು. ಅದಕ್ಕೆ ಕಾರಣವಾಗಿದ್ದು ಹೊನ್ನಾವರದ ಜನಪದ ತಜ್ಞೆ ಶ್ರೀಮತಿ ಶಾಂತಿ ನಾಯಕ್ .

ಸೆಮಿನಾರ್ ಮುಗಿಸಿ ಬಂದ ದಿನದಿಂದಲೇ ನಾನು ಮೇಡಂ ಅವರ ಬೆನ್ನು ಬಿದ್ದೆ. ಜನಪದ ವೈದ್ಯದ ಕುರಿತು ಅವರಲ್ಲಿದ್ದ ಅಪರೂಪದ ಪುಸ್ತಕಗಳು
,ಲೇಖನಗಳು, ಅವರಿಗೆ ತಿಳಿದಿದ್ದ ಹಲವಾರು ವಿಷಯಗಳನ್ನು ಸಮಯ ಸಿಕ್ಕಾಗಲೆಲ್ಲ ಚರ್ಚಿಸುತ್ತಿದ್ದರು.ಮತ್ತು ಜನಪದ ವೈದ್ಯದ ಕುರಿತು
ಸಂಶೋಧನೆ ಅಥವಾ ಅಧ್ಯಯನ ಮಾಡುವಾಗ ಎದುರಾಗುವ ಸಮಸ್ಯೆಗಳ ಬಗ್ಗೆ ಮೊದಲೇ ಅವರು ನನಗೆ ಎಚ್ಚರಿಸಲು ಮರೆಯಲಿಲ್ಲ.
ಅವರ ಕಾರಣದಿಂದಲೇ ನಾನು ಶಾಂತಿ ನಾಯಕ್ ,ಏನ್ ಆರ್ ನಾಯಕ್, ಅರವಿಂದ್ ನಾವಡ, ಅಂಬಳಿಕೆ ಹಿರಿಯಣ್ಣ ,ಮತ್ತು ಜಾನಪದ ಲೋಕದ ಹಲವು ದಿಗ್ಗಜರನ್ನು ಭೇಟಿ ಮಾಡಿದೆ.
ಸಮೂಹ ಸಂವಹನ ಮಾಧ್ಯಮಗಳು ಮತ್ತು ಜಾನಪದ ಎಂಬ ವಿಷಯದ ಬಗ್ಗೆ ವಿಚಾರ ಕಮ್ಮಟ ಏರ್ಪಡಿಸಿದಾಗ ಅಲ್ಲಿ ಚರ್ಚಿಸಬೇಕಾದ
ವಿಷಯಗಳನ್ನು ಮೇಡಂ ಅದೆಷ್ಟು ಚನ್ನಾಗಿ ಆಯ್ಕೆ ಮಾಡಿದ್ದಾರೆ ವಾಹ್ ಅನ್ನಿಸುತ್ತಿತ್ತು. ಪ್ರತಿಯೊಂದು ವಿಷಯವು ಅನನ್ಯ. ಟಿ ಎಸ ನಾಗಭರಣ
ಅವರನ್ನು ನೇರ ಸಂವಾದಕ್ಕೆ ಕರೆದು ಅದೆಷ್ಟು ಚಂದದ ಕಾರ್ಯಕ್ರಮವನ್ನು ವಿಧ್ಯಾರ್ಥಿಗಳ ಮುಂದೆ ಇಟ್ಟಿದ್ದರು ಮತ್ತು ಅದು ಅಷ್ಟೇ
ಉಪಯುಕ್ತವಾಗಿತ್ತು.
ಅಂಥದೇ ಇನ್ನೊಂದು ಅನನ್ಯ ಕಾರ್ಯಕ್ರಮ ಶಿರಸಿಯ ಅಜ್ಜಿಮನೆಯಲ್ಲಿ ನಡೆದ ಸ್ಥಳೀಯ ಪರಂಪರಾಗತ ಜ್ಞಾನ ಮತ್ತು ಆರೋಗ್ಯ. ಇಲ್ಲಿ
ಚರ್ಚಿತವಾದ ವಿಷಯಗಳೂ ಅಷ್ಟೇ ಈಗಲೂ ಹಸಿರು ಹಸಿರು ಕೆಲವೊಮ್ಮೆ ಶಿಬಿರದ ನಡುವೆ ಮೇಡಂ ನಮಗೆ ವಿಷಯ ಸಂಬಂಧಿ ಪ್ರಶ್ನೆ
ಕೇಳುತ್ತಿದ್ದರು, ಮತ್ತು ಸಂಪನ್ಮೂಲ ವ್ಯಕ್ತಿ ಮಾತನಾಡುತ್ತಿರುವ ವಿಷಯಕ್ಕೆ ನಾವು ಎಷ್ಟರ ಮಟ್ಟಿಗೆ ಕನೆಕ್ಟ್ ಆಗಿದ್ದೇವೆ ಎಂಬುದನ್ನು ಸೂಕ್ಷ್ಮವಾಗಿ
ಪರಿಶೀಲಿಸುತ್ತಿದ್ದರು , ಈ ದಿಸೆಯಲ್ಲಿ ನಾವು ಭೇಟಿಯಾದದ್ದು ಅಪರೂಪದ ವಿಜ್ಞಾನಿ ಪಲ್ಲತಡ್ಕ ಕೇಶವ ಭಟ್ಟ್ ಅವರನ್ನ , ಈ ರೀತಿಯ ಅನನ್ಯ
ವಿಚಾರ ಮತ್ತು ದೃಷ್ಟಿಕೋನ ಮತ್ತು ಸರಳತೆ ಮೇಡಂ ಅವರನ್ನು ಮತ್ತೂ ಹೆಚ್ಚು ಗೌರವಿಸುವಂತೆ ಮಾಡುತ್ತಿದ್ದವು ,

ಆ ವರೆಗೆ ಮೇಡಂ ಅಂದರೆ ನನಗೆ ನನ್ನ ದೊಡ್ಡಮ್ಮ ಚಿಕ್ಕಮ್ಮ ಸೋದರತ್ತೆ ರೂಪದಲ್ಲೇ ಕಂಡಿದ್ದರು. ಅವರು ಯಾವತ್ತು ಸಿಟ್ಟು ಮಾಡಿದ್ದು,
ಜೋರಾಗಿ ಮಾತಾಡಿದ್ದು,ತಾಳ್ಮೆ ಕಳೆದುಕೊಂಡಿದ್ದು ನಾನು ನೋಡೇ ಇಲ್ಲ. ಎಂಥ ಕಠಿಣ ಪರಿಸ್ಥಿತಿಯಲ್ಲೂ ಅವರೊಂದು ಹೊಸ ವಿಚಾರ ಹುಡುಕಿ
ಅದನ್ನು ಹಿಂಬಾಲಿಸಲು ಹೊರಡುತ್ತಿರುವಂತೆ ನನಗೆ ಭಾಸವಾಗುತಿತ್ತು.
ಅದು ನನ್ನ ಕೊನೆ ಸೆಮಿಸ್ಟರ್. ನಾವು ಕ್ಷೇತ್ರ ಕಾರ್ಯ ಮಾಡಿ ನಿಬಂಧವಿ ಬರೆದು ವಿಶ್ವವಿದ್ಯಾಲಯಕ್ಕೆ ಸಾದರಪಡಿಸಬೇಕಿತ್ತು. ನಾನು ಆಯ್ದು
ಕೊಂಡಿದ್ದು ಬಾಣಂತಿ, ನವಜಾತ ಶಿಶುವಿನ ಆರೈಕೆ ಮತ್ತು ಜನಪದ ವೈದ್ಯ ಪದ್ಧತಿ. ಆಗ ಮಾತ್ರ ಮೇಡಂ ಅವರ ಇನ್ನೊಂದು ರೂಪ ನೋಡಿದ್ದು.
ನಾನು ಅತಿ ಭಾವುಕಿ, ಸಿನಿಮ ಕಾದಂಬರಿ ಭಾವಗೀತೆ,ಗಝಲ್ ಹುಚ್ಚು ಇದ್ದಿದ್ದಕ್ಕೋ ಏನೋ ನನ್ನ ಬರವಣಿಗೆ ಒಂದು ವಿಚಿತ್ರ ಧಾಟಿಯಲ್ಲಿ
ಇರುತಿತ್ತು.

ರಜಾ ಅರ್ಜಿಯನ್ನೂ ಕವಿತೆಯಂತೆ ಬರೆಯುತ್ತಿದ್ದೆ. ನಿಬಂದ ಬರೆಯುವಾಗ ನನ್ನ ಅದೇ ಬರವಣಿಗೆ ಮುಂದುವರಿಯಿತು , ಮೇಡಂ ನಾಲ್ಕು ಬಾರಿ
ನನ್ನ ಕರಡು ಪ್ರತಿಯನ್ನು ಸರಿ ಇಲ್ಲ ಎಂದು ಮರಳಿಸಿ ಬಿಟ್ಟರು. ಅದು ಕೊನೆ ಹಂತ ನನ್ನಲ್ಲಿ ಸಾಕಷ್ಟು ಮಾಹಿತಿ ಇತ್ತು ಬರವಣಿಗೆ ಸಂಪೂರ್ಣ
ಗೊಂಡಿತ್ತು. ಯಾಕೆ ?ಏನು ತಪ್ಪು ಎಂಬುದು ಅರಿವಿಗೆ ಬರಲಿಲ್ಲ ,ಮತ್ತೆ ಕೊಟ್ಟೆ ಆಗ ಅಂದರು; ನಿಮ್ಮ ತಪ್ಪು ನಿಮಗೆ ಗೊತ್ತಾಗುತ್ತೆ ಅಂದುಕೊಂಡೆ.
ನೀವು ಅದನ್ನು ಗಮನಿಸಿಯೇ ಇಲ್ಲ ಆದಷ್ಟು ಸರಳ ವಾಕ್ಯಗಳನ್ನು ಬಳಸಿ. ನೇರ ವಿಷಯಗಳನ್ನು ಹೇಳುವಾಗ ಅಷ್ಟೇ ದೃಡವಾಗಿ ನೇರವಾಗಿ
ಹೇಳಬೇಕು ಮತ್ತು ಅದಕ್ಕೊಂದು ಚೌಕಟ್ಟಿರಬೇಕು ಎಲ್ಲೆಂದರಲ್ಲಿ ಹೇಗೆ ಬೇಕೋ ಹಾಗೆ ಬರೆಯೋದಲ್ಲ ಅಂದು ಮತ್ತೆ ವಾಪಸ್ ಮಾಡಿದ್ದರು.
ಬಸ್ಸಿನಲ್ಲಿ ಕುಳಿತು ಮತ್ತೆ ಹಾಳೆಗಳನ್ನು ತಿರುವಿದೆ ಪ್ರತಿ ಪುಟದಲ್ಲೂ ಅವರ ಅಕ್ಷರಗಳು. ಅಷ್ಟೂ ಪುಟಗಳನ್ನು ಓದಿ ಮಾರ್ಕ್ ಮಾಡಿ ಕೊಟ್ಟಿದ್ದರು.
ಅದನ್ನು ಹೇಗೆ ಬರೆಯಬಹುದು ಅನ್ನುವುದನ್ನು ಸೂಚ್ಯವಾಗಿ ಹೇಳಿದ್ದರು ಆಗಲೇ ಅನ್ನಿಸಿದ್ದು, ಕಾವ್ಯಾತ್ಮಕ ಬರವಣಿಗೆ ಮತ್ತು ನೇರ ಬರವಣಿಗೆ
ಅದೆಷ್ಟು ದೂರ ದೂರ. ಸ್ವಲ್ಪ ಆಯ ತಪ್ಪಿದರು ಅರ್ಥ ಅಪಾರ್ಥ ಆಗುವ ಸಂಭವ ಇರುತ್ತದೆ ಅಧ್ಯಯನ ಪ್ರಬಂಧ ಲಲಿತ ಪ್ರಬಂಧವಾಗುವ
ಸಾಧ್ಯತೆ ಇರುತ್ತದೆ. ಅದನ್ನು ಮೇಡಂ ನನಗೆ ಅದೆಷ್ಟು ಚನ್ನಾಗಿ ಅರ್ಥ ಮಾಡಿಸಿದ್ದರು.

ಜಾನಪದ ದ ಬಗ್ಗೆ ಮಾತಾಡುವ ಹಲವರು ಜನಪದ ಕಲಾವಿದರನ್ನು ನಡೆಸಿಕೊಳ್ಳುವ ರೀತಿಯನ್ನು ನಾನು ಕಣ್ಣಾರೆ ನೋಡಿದ್ದೇನೆ. ಜನಪದ
ಉಳಿಸಿ ಬೆಳೆಸಿ ಅನ್ನುತ್ತಾ ಭಾಷಣ ಮಾಡಿ ಹಾರ ತುರಾಯಿ ಹಾಕಿಸಿಕೊಂಡು, ಕಾರಿಡಾರಿನಲ್ಲಿ ನಡೆಯುವಾಗ ಅದೇ ಮಗ್ಗುಲಲ್ಲಿ ಕುಳಿತ ಜನಪದ
ಕಲಾವಿದರಿಗೆ ನಕ್ಕು ನಮಸ್ಕರಿಸಿದ ದೊಡ್ಡ ವಿದ್ವಾಂಸರೂ ಈ ಕ್ಷೇತ್ರದಲ್ಲಿ ಇದ್ದಾರೆ.
ಅಂಥಹ ಸಂದರ್ಭದಲ್ಲಿ ನಮ್ಮ ವಿಶ್ವವಿದ್ಯಾಲಯಕ್ಕೆ ಜನಪದ ಕಲೆಗಳು ಪ್ರಾಯೋಗಿಕ ಪರೀಕ್ಷೆಗಳಿಗೆಂದು ಹಾಲಕ್ಕಿ ಸುಗ್ಗಿ, ಕೋಲಾಟ ಕಲಿಸಲು ಬಂದ ಕಲಾವಿದರನ್ನು ಅದೆಷ್ಟು ಆತ್ಮೀಯವಾಗಿ ಮಾತನಾಡಿಸಿ, ಅವರ ಯೋಗಕ್ಷೇಮ ವಿಚಾರಿಸಿ ,ಅವರೊಂದಿಗೆ ಅದೆಷ್ಟು ಸರಳತೆಯಿಂದ
ಸಜ್ಜನಿಕೆಯಿಂದ ವರ್ತಿಸುವ ಮೇಡಂ.ಅವರ ಊಟ ತಿಂಡಿ ವಸತಿ ಬಗೆಗೆ ಮನೆ ಮಂದಿಯ ಬಗ್ಗೆ ವಹಿಸುವ ಕಾಳಜಿಯನ್ನೇ ತೋರಿಸುವುದು
ನೋಡಿದಾಗ ಅವರು ತುಂಬಿದ ಕೊಡ ಅನಿಸಿದ್ದು ಅದೆಷ್ಟು ಸಲವೂ.

ಹಾಗೆ ಒಂದು ದಿನ ಅವರ ಆಫೀಸ್ ನಲ್ಲಿ ನಾನು ಯಾವುದೊ ವಿಷಯ ಅವರೊಂದಿಗೆ ಚರ್ಚಿಸುತ್ತಿದ್ದಾಗ ,ಆಗಷ್ಟೇ ಪಿ ಹೆಚ್ ಡಿ ಸೇರಿಕೊಂಡ ನನ್ನ
ಸಿನಿಯರ್ ಒಬ್ಬರಿಗೆ ಲಕೊಟೆ ಒಂದನ್ನು ಕೊಟ್ಟರು. ನಿಮ್ಮ ಸ್ಕಾಲರ್ಷಿಪ್ ಬರೋತನಕ ಸುಮಾರು ಕೆಲಸ ಮಾಡಲಿಕ್ಕೆ ಇರುತ್ತದೆ, ಮತ್ತು ಖರ್ಚು
ಆಗುತ್ತೆ ಇದು ನನ್ನ ಪುಟ್ಟ ಸಹಾಯ ನಿಮಗೆ.ಅಧ್ಯಯನ ಚೆನ್ನಾಗಿ ನಡೀಲಿ ಎಂದು ಆಶೀರ್ವದಿಸಿದರು. ಆ ವಿದ್ಯಾರ್ಥಿ ಹೊರಗೆ ಹೋದ ನಂತರ
ಪ್ರತಿ ವರ್ಷ ಯೋಗ್ಯ ಅನಿಸಿದ ಒಬ್ಬ ವಿದ್ಯಾರ್ಥಿಗೆ ನನ್ನ ಪತಿಯ ಸ್ಮರಣಾರ್ಥ ಒಂದಷ್ಟು ಸಹಾಯ ಮಾಡ್ತೇನೆ ನನ್ನ ಮನಸಿನ ನೆಮ್ಮದಿಗೆ ಅಂದರು ಆ ದಿನ ಅವರ ಮತ್ತೊಂದು ಅನನ್ಯತೆ ನನಗೆ ಕಾಣಿಸಿತ್ತು.

ನನಗನಿಸಿದ ಪ್ರಕಾರ ಅವರ ಸೃಜನ ಶೀಲತೆ ,ಮತ್ತು ನವೀನ ಆಲೋಚನೆಗಳು ಅವುಗಳನ್ನು ಕಾರ್ಯಗತ ಮಾಡುವಲ್ಲಿ ಹಲವಾರು ಬಾರಿ
ಪೂರಕ ವಾತಾವರಣ ಇರುತ್ತಿರಲಿಲ್ಲ ಸಿಬ್ಬಂದಿ ಸಹಕಾರ ,ಕೆಲವೊಮ್ಮೆ ವಿದ್ಯಾರ್ಥಿಗಳ ನಿರಾಸಕ್ತಿ ಅವರಿಗೆ ಬೇಸರ ತರುತ್ತಿತ್ತು, ಆದರೆ ಎಂದು ಆ
ಕಾರಣ ಕೊಟ್ಟು ಯಾವುದೇ ಯೋಜನೆಯನ್ನು ಅವರು ಕೈಬಿಟ್ಟಿಲ್ಲ. ಜನಪದ ಸಂಗ್ರಹಾಲಯ ಮತ್ತು ಅದಕ್ಕೆ ವಸ್ತುಗಳನ್ನು ಪೇರಿಸುವ ಕೆಲಸದಲ್ಲಿ
ಅವರು ತೋರಿಸುತ್ತಿದ್ದ ಆಸಕ್ತಿ ಪುಟ್ಟ ಮಗು ಹೊಸ ವಿಷಯಕ್ಕೆ ತೋರುವ ಉತ್ಸಾಹದಂಥದ್ದು.

ಒಮ್ಮೆ ನನಗೆ ರಂಗಗೀತೆ ಗಳ ಬಗ್ಗೆ ಸ್ವಲ್ಪ ವಿವರಣೆಗಳು ಬೇಕಿದ್ದವು. ನಾನು ಅವರನ್ನು ಆ ಬಗ್ಗೆ ಕೇಳಿದ್ದೆ ಮತ್ತು ಅದನ್ನು ಮರೆತು ಬಿಟ್ಟಿದ್ದೆ. ಆದರೆ
ಅವರು ತಮ್ಮ ಸಂಗ್ರಹದಲ್ಲಿನ ಪುಸ್ತಕ ಹುಡುಕಿ ಮತ್ತೆ ಸಂಜೆ ನನಗೆ ಫೋನ್ ಮಾಡಿದ್ದರು ನಾಳೆ ಪುಸ್ತಕ ತಗೊಂಡ್ ಹೋಗು ಅದು ಸಿಕ್ಕಿದೆ ಎಂದಾಗ ಅವರು ಆಸಕ್ತ ವಿದ್ಯಾರ್ಥಿಗಳಿಗಾಗಿ ಕೊಡುತ್ತಿದ್ದ ಸಮಯ ಮತ್ತು ಪ್ರಾಮುಖ್ಯತೆ ಅರಿವಿಗೆ ಬಂದಿತ್ತು.
ಕಲಿಯುವ ಮನಸ್ಸಿರುವ ವಿದ್ಯಾರ್ಥಿಗೆ ಇಂಥ ಒಬ್ಬ ಗುರು ದಕ್ಕಿದರೆ ಆ ವಿದ್ಯಾರ್ಥಿಯ ಭವಿಷ್ಯ ಉಜ್ವಲ ವಾದಂತೆಯೇ. ಕಲಿಯುವ ಪಾಠ
ಪಾಠವಾಗಿರದೆ ಅದು ಬದುಕಿಗೆ ಇಂಬುಕೊಡುವ ವಿದ್ಯೆಯಾಗಿತ್ತದೆ.

ನನ್ನ ನೆರವೇರದ ಆಸೆ ಎಂದರೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಬೇಕು ಎಂಬುದು. ಸ್ನಾತಕೋತ್ತರ ಅಧ್ಯಯನ ಮುಗಿದ ನಂತರ ನಾನು ಬೆಲ್ಫಾಸ್ಟ್ ಬಂದು ಸೇರಿದೆ. ವಿಶ್ವವಿದ್ಯಾಲಯದ ಕೆಲವು ನಿಯಮಗಳು ಕಲಿಯುವ ತುಡಿತವಿರುವ ವಿದ್ಯಾರ್ಥಿಗಳಿಗೆ ಬೇಲಿ ಹಾಕಿಬಿಡುತ್ತವೆ.
ಆದರೂ ಇಂದಿಗೂ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವೆ. ನಾನು ಇಷ್ಟ ಪಟ್ಟು ಆಯ್ಕೆ ಮಾಡಿಕೊಂಡ ಜನಪದ ನನ್ನ ಕೈಹಿಡಿದು
ಮುನ್ನಡೆಸಿದೆ ಈಗಲೂ ನಾ ಅವರಿಗೆ ಫೋನ್ ಮೂಲಕ ಸಂಪರ್ಕಿಸಿದರೆ ಅದೇ ಆತ್ಮೀಯತೆ ಅಷ್ಟೇ ಆಪ್ಯಾಯತೆ ಅಕ್ಕರೆ. “ಶಾನಭಾಗ್ ಊರಿಗೆ
ಬಂದೀರ?” ಎನ್ನುತ್ತಲೇ ಮಾತು ಶುರುಮಾಡಿ ಅದೆಷ್ಟು ವಿಷಯ, ಉಲ್ಲೇಖ, ನೆನಪು ಹಂಚಿಕೊಳ್ತಾರೆ. ನನ್ನ ಬಾಲಿಶ ಪ್ರಶ್ನೆಗಳಿಗೆ ತಾಳ್ಮೆಯಿಂದ
ಉತ್ತರಿಸುತ್ತಾರೆ , ಅವರ ಶಿಷ್ಯೆ ಅವರ ವಿದ್ಯಾರ್ಥಿನಿ ಅನ್ನಲು ನನಗೆ ಯಾವತ್ತಿಗೂ ಹೆಮ್ಮೆ.

ಬಕಿಂಗ್ಹ್ಯಾಮ್ ಅರಮನೆಯಲ್ಲಿ ಗೌರವಿಸಲ್ಪಟ್ಟ ಕನ್ನಡಿಗ ಶುಶ್ರೂಷಕ -ಬಿ ಎಸ್ ತಿಪ್ಪೇಸ್ವಾಮಿ ಲೇಖನ

ಬಿ ಎಸ್ ತಿಪ್ಪೇಸ್ವಾಮಿ
ತಿಪ್ಪೇಸ್ವಾಮಿ ಬಿಲ್ಲಹಳ್ಳಿ ಸಿದ್ದರಾಮಪ್ಪ ಅವರು ಮೂಲತಃ ಚನ್ನಗಿರಿ ತಾಲೂಕಿನ ಬಿಲ್ಲಹಳ್ಳಿಯವರು. ತಾವರೆಕೆರೆಯಲ್ಲಿ ತನ್ನ ಪ್ರಾಥಮಿಕ ಹಾಗೂ ಮಾಧ್ಯಮ ಶಿಕ್ಷಣ ಮುಗಿಸಿ ಕುವೆಂಪು ವಿಶ್ವವಿದ್ಯಾಲಯದಿಂದ ನರ್ಸಿಂಗ್ ಪದವಿ ಗಳಿಸಿ ಭಾರತದಲ್ಲಿ ಹಲವು ವರ್ಷಗಳ ಶುಶ್ರೂಷಕರೆಂದು ಕೆಲಸ ಮಾಡಿ ಯುಕೆಗೆ ಬಂದು ಎರಡೂವರೆ ದಶಕಗಳಿಂದ ಯು ಕೆ ದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತುರ್ತು ಚಿಕಿತ್ಸಾ ವಿಭಾಗ,  ರೆಸ್ಪಿರೇಟರಿ ಮತ್ತು ಟಿ. ಬಿ. ವಿಭಾಗಗಳಲ್ಲೂ ಅನೆಕ ವರ್ಷಗಳ ಅನುಭವವಿದೆ. ಅಲರ್ಜಿ ಶುಶ್ರೂಷೆಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಸದ್ಯ ಹಾಮರ್ಟನ್ NHS ಆಸ್ಪತ್ರೆಯಲ್ಲಿ ಸ್ಪೆಷ್ಯಾಲಿಸ್ಟ್ ಅಲರ್ಜಿ ಲೀಡ್ ನರ್ಸ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿನಿಂದಲೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಇದ್ದವರು, ಕನ್ನಡ ಬಳಗ ಯು ಕೆ ದಲ್ಲೂ ಸೇವೆ ಸಲ್ಲಿಸಿದ ಉತ್ಸಾಹಿ ಕನ್ನಡಿಗರು ಇವರು. ಲಂಡನ್ನಿನ ಬಕಿಂಗ್ ಹ್ಯಾಮ್ ಪ್ಯಾಲಸ್ ವತಿಯಿಂದ ಬಾಲ್ರೂಮಿನಲ್ಲಿ ಔತಣಕೂಟಕ್ಕೆ ಆಮಂತ್ರಣ ಸಂಪಾದಿಸಿದ ಆಯ್ದ ಶುಶ್ರೂಷಕರುಗಳಲ್ಲಿ ಇವರು ಒಬ್ಬರು ಎನ್ನುವದು ಹೆಮ್ಮೆಯ ವಿಷಯ. (ಸಂ)


ಭಾವನೆಯ ಸುಳಿಯಲ್ಲಿ ನನ್ನದೊಂದು ಪಯಣ -ಬಿ ಎಸ್ ತಿಪ್ಪೇಸ್ವಾಮಿ 

ಎಂದಿನಂತೆ ೧೧ನೇ ಅಕ್ಟೋಬರ್ ೨೦೨೩ರಂದು ಕ್ಲಿನಿಕ್ ಮುಗಿಸಿ ಸಂಜೆ ಸುಮಾರು ೪ ಘಂಟೆಗೆ ಕೆಲಸದ  ಇಮೇಲ್ ಪರಿಶೀಲಿಸುತ್ತಿರುವಾಗ   ರೂತ್ ಶಿವನೇಶನ್, ನಮ್ಮ  ಸಿಬ್ಬಂದಿ ಅಭಿವೃದ್ಧಿ ವಿಭಾಗದ ಮುಖ್ಯಸ್ಥರಿಂದ ಒಂದು ಇಮೇಲ್ ಸಂದೇಶ ಕಂಡು ನನಗೆ ನಂಬಲಾಗಲಿಲ್ಲ. ನನ್ನ ಜೊತೆಗಿದ್ದ ಇಬ್ಬರು ಸಹೋದ್ಯೋಗಿಯರಿಂದ ಆ ಇಮೇಲ್ ಪುನರ್ ಪರಿಶೀಲಿಸಿ ಸಂದೇಶ ಖಚಿತವೆಂದು ಖಾತ್ರಿಯಾಯ್ತು. ರೂತ್ ನ ಇಮೇಲ್ ಪ್ರಕಾರ ನಾನು ೧೪ ನವೆಂಬರ್ ೨೦೨೩ರಂದು ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಬ್ರಿಟನ್ ದೇಶದ ರಾಜರಾದ ಗೌರವಾನ್ವಿತ ಚಾರ್ಲ್ಸ್ ಫಿಲಿಪ್ ಆರ್ಥರ್ ಜಾರ್ಜ್ ರವರು  ಬ್ರಿಟನ್ನಲ್ಲಿ ನೆಲೆಸಿರುವ ಅಂತರರಾಷ್ಟ್ರೀಯ ಶುಶ್ರೂಷಕರಿಗೆ ಏರ್ಪಡಿಸಿದ್ದ ಔತಣಕೂಟದ ಆಮಂತ್ರಣವಾಗಿತ್ತು.  ನನಗೇಕೆ ಈ ಆಮಂತ್ರಣ? ಎಂದು ರುತ್ ಗೆ ಮರು ಪ್ರಶ್ನಿಸಿದೆ. ಅದಕ್ಕುತ್ತರಿಸಿದ ರುತ್, ಅಂತರರಾಷ್ಟ್ರೀಯ ಶುಶ್ರೂಷಕರಿಗೆ ನೀನು ಇದುವರೆವಿಗೂ ಸಲ್ಲಿಸಿರುವ ಸೇವೆಗೆ ಬ್ರಿಟನ್ ರಾಜರಿಂದ ಇದೊಂದು ವಿಶೇಷ ಕೊಡುಗೆ ಎಂದರು. ನನಗೆ ಆನಂದ ತಡೆಯಲಾಗದೆ ಕಣ್ಣೀರು ತಾನಾಗಿಯೇ ಹರಿಯತೊಡಗಿದವು. ನವೆಂಬರ್ ೧೪ರಂದು ದೀಪಾವಳಿ ಹಬ್ಬವಿದೆ, ನಮ್ಮ ಅಪ್ಪಾಜಿ ಅಗಲಿದ ನಂತರ ಇದು ಅವರ ಮೊದಲನೇ ಹಿರಿಯರ ಪೂಜೆ, ಅವರ ಪೂಜೆ ಮಾಡಲು ತಂದೆಯ ಶಿವಲಿಂಗ ಕರಡಿಗೆ ಧರಿಸಿದ್ದ ಹಿರಿಯ ಮಗನಾಗಿ ನಾನು ನಿರ್ಧರಿಸಿ ಕೇವಲ ೭ ದಿನಗಳ ಮುಂಚೆ ಲಂಡನ್ನಿಂದ ಬೆಂಗಳೂರಿಗೆ ನವೆಂಬರ್ ೧೦ರಂದು ಪ್ರಯಾಣಿಸಲು ವಿಮಾನದ ಟಿಕೆಟ್ ಖರೀದಿಸಿದ್ದೆ. ನಾ ಬರುವ ವಿಷಯ ಅಮ್ಮನಿಗೆ ಮುಂಚೆ ತಿಳಿಸಿರಲಿಲ್ಲವಾದರೂ ಅರಮನೆಯ ಆಮಂತ್ರಣ ಕಂಡೊಡನೆ ಅಮ್ಮ ಹಾಗೂ ತಮ್ಮನೊಂದಿಗೆ ಈ ವಿಷಯ ಹಂಚಿಕೊಂಡೆ. ಅವರಿಬ್ಬರೂ ಒಂದೇ ಉತ್ತರ ಕೊಟ್ಟು “ರಾಜ ಮನೆಯ ಆಮಂತ್ರಣ ಜೀವನದಲ್ಲಿ ಸಿಗುವ ಏಕೈಕ ಅವಕಾಶ”, ನಿನ್ನ ತಂದೆ ಇದ್ದಿದ್ದರೆ ಅವರು ಅದೆಷ್ಟೋ ಸಂತೋಷಗೊಳ್ಳುತ್ತಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜರನ್ನು ಭೇಟಿಯಾಗಿ ಬಾ, ಜೊತೆಗೆ ಶಿವಲಿಂಗ ಧರಿಸಿ ಹೋಗು. ಆಗ ನಿನ್ನ ತಂದೆ ನಿನ್ನೊಡನೆಯೇ ಇದ್ದಾರೆ ಎಂಬ ಅನುಭವದ ಜೊತೆಗೆ ಅವರ ಆತ್ಮಕ್ಕೆ ನೀನು ಸಲ್ಲಿಸುವ ಅತ್ಯಂತ ಶ್ರೇಷ್ಠ ಮಟ್ಟದ ಗೌರವ ಎಂದರು. ಅವರ ಮಾತು ಕೇಳಿ ನನ್ನ ಭಾವುಕತೆ ಇನ್ನೂಮಿಗಿಲೇರಿತು. ಸಂಜೆ ಸುಮಾರು ೬ ಘಂಟೆಯಾಗಿತ್ತು. ನನ್ನ ಆತ್ಮೀಯ ಗೆಳೆಯರಿಗೆ ಹಾಗೂ ಸಹೋದ್ಯೋಗಿಗಳೊಡನೆ ಈ ವಿಷಯವನ್ನು ಹಂಚಿಕೊಂಡೆ. ಅವರೆಲ್ಲರೂ ತುಂಬಾ ಸಂತೋಷದ ಜೊತೆಗೆ ನನ್ನ ೨೩ ವರ್ಷಗಳ ಕಾಲ ಬ್ರಿಟನ್ನಲ್ಲಿ ನೆಲೆಸಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಶುಶ್ರೂಷಕರಿಗೆ, ಅಧಿಕೃತವಾಗಿ ಭಾರತದಲ್ಲಿ ನಾನು ಹಮ್ಮಿಕೊಂಡ ನನ್ನ ಹಲವಾರು ಕಾರ್ಯಕ್ರಮಗಳನ್ನು ಹೆಸರಿಡಿದು ಶ್ಲಾಘಿಸುತ್ತ “ಈ ಗೌರವಕ್ಕೆ ನೀನು ಅತ್ಯಂತ ಅರ್ಹತೆಯುಳ್ಳವನು” ಎಂದು ಪ್ರೋತ್ಸಾಹಿಸಿದರು.

ಬ್ರಿಟನ್ನಿನ ನ್ಯಾಷನಲ್ ಹೆಲ್ತ್ ಸರ್ವಿಸ್ ನಲ್ಲಿ ಭಾರತದ ಶುಶ್ರೂಷಕರು (Nurses)

ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಸುಮಾರು ೭ ಲಕ್ಷಕ್ಕೂ ಹೆಚ್ಚು  ಶುಶ್ರೂಷಕರು ಪ್ರತಿ ವರ್ಷ ಪದವಿಗಳಿಸಿ, ಪ್ರಪಂಚದಲ್ಲೇ ಅತಿ ಹೆಚ್ಚು ಶುಶ್ರೂಷಕರು ಹೊರಹೊಮ್ಮುವ ರಾಷ್ಟ್ರ ಎಂಬುದು ಹೆಮ್ಮೆಯ ವಿಷಯವಾದರೂ ಸಹ ಅವರಲ್ಲಿ ೧೦ಕ್ಕೆ ೮ ಜನರು ಹೊರರಾಷ್ಟ್ರಗಳಲ್ಲಿ ಕೆಲಸ ನಿರ್ವಹಿಸುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಬ್ರಿಟನ್ನಷ್ಟೇ ಜನ ಸಂಖ್ಯೆ ಇದೆ. ೬ ಕೋಟಿ ಜನ ಸಂಖ್ಯೆ ಇರುವ ಕರ್ನಾಟಕದ ಸರ್ಕಾರೀ ಆಸ್ಪತ್ರೆಗಳಲ್ಲಿ ಹಾಲಿ ಸೇವೆ ಸಲ್ಲಿಸುವ ಶುಶ್ರೂಷಕರ ಸಂಖ್ಯೆ ೧೫ ಸಾವಿರವಾದರೆ ಅಷ್ಟೇ ಜನಸಂಖ್ಯೆ ಇರುವ ಬ್ರಿಟನ್ನ ನ್ಯಾಷನಲ್ ಹೆಲ್ತ್ ಸರ್ವಿಸ್ ನಲ್ಲಿ ಸುಮಾರು ೬ ಲಕ್ಷಕ್ಕೂ ಅಧಿಕ ಶುಶ್ರೂಷಕರು ಕೆಲಸದಲ್ಲಿದ್ದಾರೆ. ಈ ೬ ಲಕ್ಷದಲ್ಲಿ ಶೇಕಡಾ ೧೫-೨೦ರಷ್ಟು ಶುಶ್ರೂಷಕರು ಭಾರತೀಯ ಮೂಲದವರು ಎಂಬುದು ಹೆಮ್ಮೆ ಎನಿಸದರೂ, ನಾಡಿನಲ್ಲಿ ಅವಕಾಶಗಳ ಕುಂದು ಕೊರತೆ, ಅತಿ ಕಡಿಮೆ ಸಂಬಳ, ಶುಶ್ರೂಷಕರಿಗೆ ಸಮಾಜದಲ್ಲಿರುವ ಕಳಪೆ ಮನ್ನಣೆ, ಸರಬರಾಜು ಹಾಗೂ ಸಲಕರಣೆಗಳ ಕೊರತೆ, ಪುರಾವೆ ಆಧಾರಿತ ಅಭ್ಯಾಸಗಳ ಕೊರತೆ, ವೈದ್ಯರ ಪ್ರಾಬಲ್ಯ ಹಾಗೂ ಶುಶ್ರೂಷಕರಿಗೆ ಆಸ್ಪ್ರತ್ರೆಗಳಲ್ಲಿ ಆಡಳಿತಾಧಿಕಾರಿಗಳಾಗುವ ಅವಕಾಶಗಳ ಕೊರತೆ ಇವೆಲ್ಲವೂ ಕೂಡ ಪ್ರತಿಯೊಬ್ಬ ಭಾರತೀಯ ಶುಶ್ರೂಷಕರು ಅನುಭವಿಸುವ ಸತ್ಯ ಸಂಗತಿ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು, ಕಳೆದ ೨೦ ವರ್ಷಗಳಲ್ಲಿ ಸುಮಾರು ೨ ಸಾವಿರಕ್ಕೂ ಹೆಚ್ಚು ಶುಶ್ರೂಷಕರಿಗೆ ಹಾಗೂ ಶುಶ್ರೂಷಕ ವಿದ್ಯಾರ್ಥಿಯರಿಗೆ ತಮ್ಮವೃತ್ತಿಪರ ಜೀವನವನ್ನು ಹೇಗೆ ಸುಧಾರಿಸುವುದು, ಪುರಾವೆ ಆಧಾರಿತ ಅಭ್ಯಾಸಗಳನ್ನು ಹೇಗೆ ಜಾರಿಗೆ ತರುವುದು, ವೃತ್ತಿಯಲ್ಲಿ ನಾಯಕತ್ವ ಅವಕಾಶಗಳನ್ನು ಹೇಗೆ ಕಲ್ಪಿಸಿಕೊಳ್ಳಬಹುದು, ಸಮಾಜದಲ್ಲಿ ಆರೋಗ್ಯದ ಸುಧಾರಣೆ ತರಲು ಶುಶ್ರೂಷಕರ ಪಾತ್ರವೇನೆಂಬುದನ್ನು ಕುರಿತು ವಿವಿಧ ರೀತಿಯ ಚಟುವಟಿಕೆಗಳನ್ನು ಆಯೋಜಿಸುತ್ತಾ ಬಂದಿದ್ದೇನೆ. ಇದಕ್ಕೆ ನನ್ನಸ್ಥಳೀಯ ಹಾಗೂ ಭಾರತೀಯ ಮೂಲದ ಸಹೋದ್ಯೋಗಿಗಳೂ ಸಹ ಸಾಕಷ್ಟು ಸಹಕರಿಸಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಹೊಸದಾಗಿ ವೃತ್ತಿ ಆರಂಭಿಸುವ ಪ್ರತಿ ಅಂತರರಾಷ್ಟ್ರೀಯ ಶುಶ್ರೂಷಕರಿಗೂ ಸಹ ನನ್ನ ವೈಯುಕ್ತಿಕ ಮಟ್ಟದಲ್ಲಿ ಇಲ್ಲಿ ನೆಲೆಸಲು ಬೇಕಿರುವ ಮೂಲಭೂತ ಸೌಕರ್ಯಗಳ ಬಗ್ಗೆ, ದೇಶದ ರೀತಿ ನೀತಿಗಳ ಬಗ್ಗೆ, ಆರೋಗ್ಯ ಹಾಗೂ ಸುರಕ್ಷತೆ ಬಗ್ಗೆ ಪ್ರತಿ ತಿಂಗಳೂ ಮುಖಾಮುಖಿ ಭೇಟಿಯಾಗಿ ತಿಳಿಸುತ್ತೇನೆ.  ಕೋವಿಡ್ ಅವಧಿಯಲ್ಲಿ, ಸ್ಥಳೀಯ ಹಾಗೂ ಭಾರತೀಯ ಸಹೋದ್ಯೋಗಿಗಳು ಅಲ್ಲದೆ ಸ್ವಯಂ ಸೇವಾ ಸಂಸ್ಥೆಗಳ ಸಹಾಯದಿಂದ ಸುಮಾರು ನೂರಕ್ಕೂ ಹೆಚ್ಚು ಕೋವಿಡ್ ರೋಗಿಗಳನ್ನು ಮನೆಯಲ್ಲಿಯೇ ಚಿಕಿತ್ಸೆ ಕೊಟ್ಟು  ಗುಣಮುಖರಾಗುವವರೆಗೂ ದೂರವಾಣಿ ಕರೆಗಳ ಮೂಲಕ ಸಲಹೆ ನೀಡುವುದರ ಜೊತೆಗೆ ಅವರು ಸಾಂಕ್ರಾಮಿಕ ರೋಗದಿಂದಾದ ಮಾನಸಿಕ ಖಿನ್ನತೆಯಿಂದ ಹೊರಬರಲು  ಅತ್ಮಸ್ಥೈರ್ಯ ತುಂಬಿದ್ದೆವು.

ನನ್ನ ಪಯಣ

ಚಿಕ್ಕಂದಿನಿಂದಲೂ ಹಿರಿಮಗನಾಗಿ ನನ್ನ ತಂದೆ ಪಟ್ಟ ಪರಿಶ್ರಮಗಳು ಹಲವಾರು. ಕಡುಬಡತನದ ಕುಟುಂಬದಲ್ಲಿ ಬೆಳೆದ ನನ್ನ ತಂದೆ ಅವರ ಕುಟುಂಬದಲ್ಲಿಯೇ ಮೊದಲನೇ ಪದವೀಧರರಾಗಿ ಒಡಹುಟ್ಟಿದವರೆಲ್ಲರನ್ನು ಆರ್ಥಿಕವಾಗಿ ಪ್ರೋತ್ಸಾಹಿಸಿ ವೃತ್ತಿಪರರನ್ನಾಗಿ ಅಲ್ಲದೆ, ಅವರನ್ನು ಕೌಟುಂಬಿಕವಾಗಿ ನೆಲೆಸಲು ಪಟ್ಟ ಕಷ್ಟಗಳನ್ನು ನೋಡುತ್ತಲೇ ಕಳೆದಿತ್ತು ನನ್ನ ಬಾಲ್ಯ ಹಾಗೂ ಪ್ರೌಡಾವಸ್ಥೆ. ಚನ್ನಗಿರಿ ತಾಲೂಕು, ತಾವರೆಕೆರೆಯಲ್ಲಿ ನನ್ನ ಪ್ರಾಥಮಿಕ ಹಾಗೂ ಮಾಧ್ಯಮ ಶಿಕ್ಷಣ. ಹಟ್ಟಿಕಸ, ಹಸು, ಎಮ್ಮೆ ಸೆಗಣಿ ಬಾಚಿ, ದನಕರುಗಳಿಗೆ ಹುಲ್ಲು ನೀರು ಕುಡಿಸಿ ನಂತರ ಶಾಲೆಗೆ ಹೋಗಿ ಬಂದು, ಸಂಜೆ ಅಮ್ಮ ಕಟ್ಟಿಟ್ಟ ಹುಲ್ಲಿನ ಪೆಂಡಿಯೊಂದಿಗೆ ಹಿಂದಿರುಗಿ, ಅಪ್ಪಾಜಿ ಬೆಳೆಸಿದ ತರಕಾರಿ ಗಿಡಗಳಿಗೆ ನೀರುಣಿಸಿ, ನನ್ನ ಪಠ್ಯೇತರ ಕಾರ್ಯಗಳನ್ನು ಮುಗಿಸಿ ರಾತ್ರಿ ಊಟ ಮುಗಿಸಿ, ಅಪ್ಪನ ಕಾಲೊತ್ತುತ್ತ ಅವರ ಕಥೆಗಳನ್ನು ಕೇಳುತ್ತ ಮಲಗುವುದು ನನಗೆ ಈಗಲೂ ಸವಿನೆನಪು.

ಅವಿಭಕ್ತ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ  ತಂದೆಯವರು, ಶ್ರೇಷ್ಠ ಕೌಟುಂಬಿಕ ಹಾಗೂ ವೃತ್ತಿಪರ ಮೌಲ್ಯಗಳ ಜೊತೆಗೆ, ಒಳ್ಳೆಯ ಸಾಮಾಜಿಕ ನಿಲುವು ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಸಾಕಷ್ಟು ಶ್ರಮಿಸಿದ್ದರು. ಮಕ್ಕಳಿಗೆ ಆಸ್ತಿ ಬೇಡ ಮಕ್ಕಳನ್ನೇ ಆಸ್ತಿಯಾಗಿ ಮಾಡಿ ಎನ್ನುವ ತತ್ವವನ್ನ ಕಾರ್ಯರೂಪಕ್ಕೆ ತಂದ ನಮ್ಮ ತಂದೆ “ಸಫಾರಿ ಸಿದ್ದರಾಮಣ್ಣ” ಎಂದೇ ಹೆಸರುವಾಸಿಯಾಗಿದ್ದರು.. ಈ ಎಲ್ಲಾ ಪೀಠಿಕೆ ಏಕೆಂದರೆ, ತಂದೆಯವರ ಮಾತು ವೇದ ವಾಕ್ಯವೆಂದು ಅವರ ಹೇಳಿದ ದಾರಿಯಲ್ಲೇ ನಡೆದು ಬಂದೆ. ಅವರ ಹಾಗೂ ಅವರ ಪೂಜ್ಯ ಗುರುಗಳಾದ ದಿವಂಗತ ಶ್ರೀ ಬಿ ಜಿ ನಾಗರಾಜ್ ರವರ ಸಲಹೆಯಂತೆ ನನ್ನ ಶುಶ್ರೂಷಕ ಪದವಿಯನ್ನು ಕುವೆಂಪು ವಿಶ್ವವಿದ್ಯಾನಿಲಯದಿಂದ ೧೯೯೮ ನೇ ಸಾಲಿನಲ್ಲಿ ಗಳಿಸಿದೆ. ನನ್ನ ವೃತ್ತಿಪರ ಶಿಕ್ಷಣ ಕರ್ನಾಟಕ ಶುಶ್ರೂಷಕ ಪರಿಷತ್ತಿನಲ್ಲಿ ನೋಂದಣಿಯಾದ ದಿನವೇ ನನಗೆ ಕೆಲಸದ ಪ್ರಸ್ತಾಪ ಪತ್ರದ ಜೊತೆಗೆ ೧೦ ದಿನಗಳ ಮುಂಗಡ ಸಂಬಳವನ್ನು ಒಂದು ಶುಶ್ರೂಷಕ ವಿದ್ಯಾಸಂಸ್ಥೆಯ ಅಧ್ಯಕ್ಷರು ನನ್ನ ತಂದೆಯ ಮುಂದೆಯೇ ನೀಡಿದಾಗ ನನಗಿಂತ ನನ್ನ ತಂದೆಯವರ ಆನಂದಕ್ಕೆ ಪಾರವೇ ಇಲ್ಲವಾಗಿತ್ತು. ಕೇವಲ ೬ ತಿಂಗಳು ಅನುಭವವಿದ್ದರೂ ಕೂಡ, ೨೦೦೦  ಇಸವಿಯಲ್ಲಿ ಒರಿಸ್ಸಾದಲ್ಲಿ ನಡೆದ ಚಂಡಮಾರುತ ದುರಂತದಲ್ಲಿ ವೈದ್ಯಕೀಯ ನೆರವು ನೀಡಲು ರಚಿಸಿದ ಮಣಿಪಾಲ ಆಸ್ಪತ್ರೆ  ವೈದ್ಯಕೀಯ ವಿಪತ್ತು ನಿರ್ವಹಣಾ ತಂಡದಲ್ಲಿ ನನ್ನನ್ನು ಆಯ್ಕೆ ಮಾಡಿದ್ದರು. ಆಗಲೂ ಸಹ ನಾನು ಮೇಲೆ ರೂತ್ ನ ಪ್ರಶ್ನಿಸಿದಂತೆ, ಮಣಿಪಾಲ ಆಸ್ಪತ್ರೆ, ಬೆಂಗಳೂರಿನ ನರ್ಸಿಂಗ್ ಡೈರೆಕ್ಟರ್ ಆಗಿದ್ದ ಶ್ರೀಮತಿ ಶ್ರೀದೇವಿ ವಾರಿಯರ್ ಅವರನ್ನು ಪ್ರಶ್ನಿಸಿದೆ “ನನಗಿಂತಲೂ ಹತ್ತಾರು ವರ್ಷ ಅನುಭವವಿರುವ ಹಿರಿಯ ಶುಶ್ರೂಷಕರಿರುವಾಗ ನನ್ನನ್ನೇಕೆ ಆಯ್ಕೆ ಮಾಡಿದ್ದೀರಿ?” ಎಂದೆ. ಅದುಕ್ಕುತ್ತರಿಸಿದ ಅವರು, ನಿನ್ನಲ್ಲಿರುವ ಅನುಭವಕ್ಕಿಂತ ನಿನಗಿರುವ ಅನುಕಂಪ  ಹಾಗೂ ವೃತ್ತಿಪರತೆ ನಿನಗೆ ಈ ಅವಕಾಶ ನೀಡಿದೆ ಎಂದರು. ಅವರ ಆ ಮಾತು ನನಗೆ ಹತ್ತಾನೆ ಬಲವನ್ನು ಅನುಗ್ರಹಿಸಿದಂತಾಯಿತು. ಒರಿಸ್ಸಾದ ೧೦ ದಿನಗಳ ಸೇವೆ ಇಂದಿಗೂ ಅವಿಸ್ಮರಣೀಯ. ನಮ್ಮೊಂದಿಗೆ ಭಾರತೀಯ ಸೇನೆಯ ಮುಖ್ಯಸ್ಥರು, ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿಗಳು, ಒರಿಸ್ಸಾ ಆರೋಗ್ಯ ಸಚಿವರು ಹಾಗೂ ಅವರ ಕಾರ್ಯದರ್ಶಿಗಳು ಇಂತಹ ಮಹಾ ಗಣ್ಯವಕ್ತಿಗಳೊಡನೆ ದೈನಂದಿನ ಚಟುವಟಿಕೆಗಳ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ ಅವರೊಡನೆ ಅದೇ ಸೇನಾ ಅತಿಥಿ ಗೃಹದಲ್ಲಿ ವಾಸ್ತವಿಸಿದ ನೆನಪು ಅಜರಾಮರ. ಅದೃಷ್ಟವೆಂದರೆ, ನಮಗೆ ಬೇಕಾದ ಎಲ್ಲಾ ಸಹಾಯ ಅಲ್ಲಿನ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು ನೀಡಿದ್ದರಿಂದ  ಅತಿ ಕಡಿಮೆ ಸಮಯದಲ್ಲಿ ಅತ್ಯಂತ ಗರಿಷ್ಟ ಸಂಖ್ಯೆಯಷ್ಟು ರೋಗಿಗಳನ್ನು ಚಿಕಿತ್ಸಿದ್ದಲ್ಲದೆ, ಅವರ ಕುಟುಂಬಗಳಿಗೆ ಬೇಕಾಗುವ ಊಟ ಹಾಗೂ ತಾತ್ಕಾಲಿಕ ವಸತಿಯ ವ್ಯವಸ್ಥೆಯನ್ನು ಮಾಡುವ ಸದಾವಕಾಶ ನಮಗೆ ದೊರಕಿತು. ಅಲ್ಲಿಂದ ಹಿಂದಿರುಗಿದಾಗ ನಮ್ಮ ತಂಡದ ಎಲ್ಲರನ್ನು ಸ್ವಾಗತಿಸುತ್ತಿರುವ ಒಂದು ಬ್ಯಾನರ್ ಮಣಿಪಾಲ ಆಸ್ಪತ್ರೆಯ ಮುಂದೆ ಪ್ರದರ್ಶಿಸಿಲಾಗಿತ್ತು.  ಅಲ್ಲಿನ ಸಾವು ನೋವಿನ ಘಟನೆಗಳನ್ನು ಹಾಗೂ ನಮ್ಮ ಅನುಭವವನ್ನು ಹಂಚಿಕೊಳ್ಳಲು ಸ್ವತಃ ಒರಿಸ್ಸಾದ ಆರೋಗ್ಯ ಸಚಿವರು ಬೆಂಗಳೂರಿಗೆ ಭೇಟಿ ನೀಡಿ ನಮ್ಮೆಲ್ಲರನ್ನೂ ಅವರ ಅತಿಥಿ ಗೃಹಕ್ಕೆ ಆಹ್ವಾನಿಸಿ, ಎಲ್ಲಾ ಮಾಹಿತಿಯನ್ನು ಸಂಗ್ರಹಿಸುವುದರ ಜೊತೆಗೆ ನಮ್ಮೆಲ್ಲರ ಕರ್ತವ್ಯ  ನಿಷ್ಠೆಯನ್ನು ಶ್ಲಾಘಿಸಿದ್ದರು.

ಲಂಡನ್ನಿಗೆ ಹೊರಟ ಕನ್ನಡದ ಶುಶ್ರೂಷಕ

ಒರಿಸ್ಸಾದ ಅನುಭವ ಇನ್ನೂ ಹಸಿಯಿರುವಾಗಲೇ ಲಂಡನ್ ನಗರದಲ್ಲಿರುವ ವಿಪ್ಪ್ಸ್ ಕ್ರಾಸ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಸಂದರ್ಶನಕ್ಕೆ ಆಮಂತ್ರಣ ಬಂದಿತ್ತು. ಅಂದು ಬೆಳಿಗ್ಗೆ ಯುಗಾದಿ ಹಬ್ಬದ ಸಲುವಾಗಿ, ನನ್ನ ವೇತನದಲ್ಲುಳಿಸಿದ  ೧೦,೦೦೦ ರೂಪಾಯಿಗಳನ್ನು ನನ್ನ ತಂದೆತಾಯಿಯರ ಕೈಲಿತ್ತು ನಮಸ್ಕರಿಸಿ ಹಬ್ಬದ ಆಚರಣೆಯಲ್ಲಿದ್ದಾಗ ಬೆಂಗಳೂರಿಂದ ದೆಹಲಿಗೆ ಹೊರಡಲು ಕರೆ ಬಂತು. ಕೇವಲ ೮ ತಿಂಗಳ ಅನುಭವದ     ನಾನು, ದೆಹಲಿಯ ಲೀ ಮೆರಿಡಿಯನ್ ಹೋಟೆಲ್ನಲ್ಲಿ ಸಂದರ್ಶನಕ್ಕೆ  ಎಂದು ಬಂದಿದ್ದ ೩,೫೦೦ ಶುಶ್ರೂಷಕರಲ್ಲಿ ಅತ್ಯಂತ ಕಡಿಮೆ ಅನುಭವಿಯಾಗಿದ್ದರೂ ಕೂಡ, ಬ್ರಿಟನ್ ದೇಶದಲ್ಲಿ ಸೇವೆ ಸಲ್ಲಿಸುವ ಆಕಾಂಕ್ಷಿಯಾಗಿದ್ದೆ. ೩ ದಿನದ ಸಂದರ್ಶನದಲ್ಲಿ ೮೦ ಜನರ ಆಯ್ಕೆ ಮಾಡುವುದಾಗಿ ETI ಕಂಪನಿ ಡೈರೆಕ್ಟರ್ ಜಾನಿ ಭಂಡಾರಿಯವರು ತಿಳಿಸಿದ್ದರು. ಆದರೆ ಕೊನೆಗೆ ಅವರು ಆಯ್ಕೆ ಮಾಡಿದ್ದು ೮ ಜನ. ಅದರಲ್ಲಿ ನಾನು ಮೊದಲನೆಯವನು ಎಂದು ಹೋಟೆಲ್ ಸಭಾಂಗಣದಲ್ಲಿ ಎಲ್ಲರ ಮುಂದೆ ಧೃಡಪಡಿಸಿದರು ಜಾನಿ ಭಂಡಾರಿ. ಮತ್ತೊಮ್ಮೆ ಅದೇ ಪ್ರಶ್ನೆ, ನಾನೇ ಏಕೆ? ಜಾನಿ ಉತ್ತರಿಸಿದ್ದು “ನಿನ್ನಲ್ಲಿರುವ ಕೆಲಸದ ಬಗೆಗಿನ ಉತ್ಸಾಹ ಹಾಗೂ ಅದನ್ನು ಸಂದರ್ಶನದಲ್ಲಿ ಉದಾಹರಣೆಗಳೊಂದಿಗೆ ವಿವರಿಸಿದ ಬಗೆ ವಿಪ್ಪ್ಸ್ ಕ್ರಾಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ವೆಂಡಿ ಹಿಕ್ಕಿ ಅವರಿಗೆ ತುಂಬಾ ಹಿಡಿಸಿದೆ. ನೀನು ನಿನ್ನೆಲ್ಲ ಸಹೋದ್ಯೋಗಿಗಳಿಗೆ ಸಂದರ್ಶನದಲ್ಲಿ ಹೇಗೆ ಉತ್ತರಿಸಬೇಕು ಎನ್ನುವುದಕ್ಕೆ ಮಾದರಿ” ಎಂದು ಎಲ್ಲರೆದುರು ಹಂಚಿಕೊಂಡರು.

೩ನೇ ಜುಲೈ ೨೦೦೦ ದಂದು ನನ್ನ ಶುಶ್ರೂಷಕ ವೃತ್ತಿ ಬ್ರಿಟನ್ನಲ್ಲಿ ಆರಂಭಿಸಿತ್ತು. ಭಾರತೀಯ ಹಾಗೂ ಫಿಲಿಫೈನ್ಸ್ ದೇಶದ ಶುಶ್ರೂಷಕರು ಸಾಕಷ್ಟು ಸಂಖ್ಯೆಯಲ್ಲಿ ಬ್ರಿಟನ್ಗೆ ಆಗಮಿಸಿದರು. ಮುಂದಿನ ೧೨ ತಿಂಗಳಲ್ಲಿ ನನ್ನ ಜೊತೆಗೆ ಕಾರ್ಯ ನಿರ್ವಹಿಸುತ್ತಿದ್ದ ೭೦೦ ಶುಶ್ರೂಷಕರಲ್ಲಿ ೪೫೦ ಮಂದಿ ಮಣಿಪಾಲ ಆಸ್ಪತ್ರೆಯಿಂದ ಬ್ರಿಟನ್ಗೆ ಬಂದು ನೆಲೆಸಿದರು.  ಕಂಡರಿಯದ ನಾಡಿನಲ್ಲಿ, ಓದುವುದಕ್ಕಷ್ಟೇ ಸೀಮಿತವಾಗಿದ್ದ ಇಂಗ್ಲಿಷ್ ಭಾಷೆಯನ್ನು ಈಗ ಆಡು ಭಾಷೆಯಾಗಿ ಅರಗಿಸಿಕೊಳ್ಳಲು ಹರಸಾಹಸ ಪಡುವುದರ ಜೊತೆಗೆ, ಬ್ರಿಟನ್ನಿನ ಸಂಸ್ಕೃತಿ ಹಾಗೂ ಸಾಮಾಜಿಕ ಮೌಲ್ಯಗಳಿಗೆ ಹೊಂದಿಕೊಳ್ಳಲು ಸಹಾಯಿಸಿದ ನನ್ನ ಇಲ್ಲಿನ ಸಹೋದ್ಯೋಗಿಗಳಿಗೆ ಎಂದಿಂದಿಗೂ ಚಿರಋಣಿ. ಅದೇ ರೀತಿ, ನಮ್ಮ್ಮೆಲ್ಲರ ಅನುಭವಗಳನ್ನು ಆಧಾರವಾಗಿರಿಸಿಕೊಂಡು, ಇಲ್ಲಿನ ನ್ಯಾಷನಲ್ ಹೆಲ್ತ್ ಸರ್ವಿಸ್ನಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲು ಶ್ರಮಿಸಿದೆವು. ನಮ್ಮ  ತುರ್ತು ಚಿಕಿತ್ಸಾ ವಿಭಾಗದಲ್ಲಿ ರೋಗಿಗಳು ಚಿಕಿತ್ಸೆ ಪಡೆಯುವ ಸಮಯದಲ್ಲಿ  ಸುಧಾರಣೆ, ವಾರ್ಡ್ನಲ್ಲಿ ಶುಶ್ರೂಷಕರ ನಿರ್ವಹಣೆಯಲ್ಲಿ ಸ್ವಾಯತ್ತತೆ, ನುರಿತ ಶುಶ್ರೂಷಕರು ತಮ್ಮ ಪದವಿ ಹಾಗೂ ಅನುಭವದ ಆಧಾರದ ಮೇಲೆ ಸ್ಪೆಷಲಿಸ್ಟ್ ನರ್ಸಿಂಗ್ ಹಾಗೂ ನರ್ಸ್ ಪ್ರಾಕ್ಟಿಷನರ್ ವೃತ್ತಿಯಲ್ಲಿ ಅಳವಡಿಸಿಕೊಳ್ಳಲು ಬೇಕಾಗುವ ಅರ್ಹತೆಗಳು ಹಾಗೂ ಅನುಭವಗಳನ್ನು ನಾನು ಹಲವಾರು ಸಹೋದ್ಯೋಗಿಗಳೊಂದಿಗೆ ಸ್ಥಳೀಯವಾಗಿ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹಂಚಿಕೊಂಡಿದ್ದೇನೆ.

ಅರಸನ ಕೈ ಕುಲುಕಿಸಿದ ಸೆಗಣಿ ಬಾಚಿದ ಕೈಗಳು!

ಕರ್ತವ್ಯ ನಿಷ್ಠೆ ಹಾಗೂ ಸೇವಾ ಮನೋಭಾವನೆ ನನ್ನ ತಂದೆ ತಾಯಿಯಿಂದ  ಬಳುವಳಿಯಾಗಿ ಬಂದಿದೆ ಎಂಬುದು ನನ್ನ ಭಾವನೆ. ಆದ್ದರಿಂದ, ರಾಜರ ಅರಮನೆಯ ಆಮಂತ್ರಣ ನನಗೆ ಬಯಸದೆ ಬಂದ ಭಾಗ್ಯವಾದರೂ ಅದು ನನ್ನ ಗೌರವಯುತ ತಂದೆಗೆ ಅವರು ದಿವಂಗತರಾದ ನಂತರ ಅವರ ಪಾದಾರವಿಂದಗಳಿಗೆ ಅರ್ಪಿಸುವ ವಿಶೇಷ ಕೊಡುಗೆ. ಅಂದು ಅರಸರನ್ನು ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಎರಡು ಬಾರಿ ಭೇಟಿಯಾಗಿ ಅವರ ಹ್ಯಾಂಡ್ ಶೇಕ್ ಮಾಡಿದ  ಕ್ಷಣ ನೆನೆದೊಡನೆ ನನ್ನೀ ಸೆಗಣಿ ಬಾಚಿದ ಕೈಗಳು ಅರಸನ ಕೈ ಕುಲುಕಿಸುವ ಮಟ್ಟಕ್ಕೆ ಮುಟ್ಟಿದ್ದು ಈ ಜೀವನದಲ್ಲಿ ನನಗೆ ಸಂಪೂರ್ಣ ಸಾರ್ಥಕತೆಯನ್ನು ಕಲ್ಪಿಸಿದೆ. ಅರಸರಿಗೆ ಹುಟ್ಟು ಹಬ್ಬದ ಶುಭಾಷಯಗಳನ್ನು ಹಾರೈಸಿ,  ಅರಸರಿಂದ “ನಿಮ್ಮ ಸೇವೆಗೆ ನನ್ನ ನಮನ” ಎಂಬ ನುಡಿಮುತ್ತುಗಳು ಅವರ ಬಾಯಿಂದ ಹೊಮ್ಮಿದಾಗ, ನನಗೆ ಅನಿಸಿದ್ದು ಅದು ಬರೀ ನನ್ನ ಭಾವನೆಗಳಷ್ಟೇ ಅಲ್ಲ ಅದು ಪ್ರತಿಯೊಬ್ಬ ಭಾರತೀಯ ಮೂಲದ ಶುಶ್ರೂಷಕರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಲ್ಲಿಸುವ ಸೇವೆಯ ಹೆಗ್ಗಳಿಕೆ ಹಾಗೂ ಹಿರಿಮೆ.

ರಾಜರ ಭೇಟಿ, ನನ್ನ ಬದುಕಿನಲ್ಲಿ “ಸಾರ್ಥಕತೆಯ ಕಾರ್ತಿಕೋತ್ಸವದಷ್ಟೇ” ಸಂತಸ ತಂದಿದೆ. ನನ್ನೀ ಯಶಸ್ಸಿನ ಕೀರ್ತಿಯನ್ನು ಈ ಜಗತ್ತಿಗೆ ಪರಿಚಯಿಸಿದ ನನ್ನ ತಂದೆತಾಯಿಯರಿಗೆ ಅರ್ಪಿಸುತ್ತ ನನ್ನ ಪೂಜ್ಯ ತಂದೆ ಸಫಾರಿ ಸಿದ್ದರಾಮಪ್ಪನವರಿಗೆ ಮತ್ತೊಮ್ಮೆ ನನ್ನ ನುಡಿನಮನಗಳೊಂದಿಗೆ….

ತಿಪ್ಪೇಸ್ವಾಮಿ ಬಿಲ್ಲಹಳ್ಳಿ ಸಿದ್ದರಾಮಪ್ಪ

ಮೂರನೆಯ ಸಾಲಿನಲ್ಲಿ ಲೇಖಕರು!

ಲಿಂಕ್ ಗಳು

ಬಕಿಂಗ್ ಹ್ಯಾಮ್ ಪ್ಯಾಲೇಸ್ ಅರಸರ ಭೇಟಿಯ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟಿತಗೊಂಡ ಕೆಲವು ಲಿಂಕ್ ಈ ಕೆಳಗಿವೆ:

King’s birthday coverage: 

https://intranet.homerton.nhs.uk/news/allergy-lead-nurse-thippeswamy-represents-global-nursing-to-the-king-8514