ಬಕಿಂಗ್ಹ್ಯಾಮ್ ಅರಮನೆಯಲ್ಲಿ ಗೌರವಿಸಲ್ಪಟ್ಟ ಕನ್ನಡಿಗ ಶುಶ್ರೂಷಕ -ಬಿ ಎಸ್ ತಿಪ್ಪೇಸ್ವಾಮಿ ಲೇಖನ

ಬಿ ಎಸ್ ತಿಪ್ಪೇಸ್ವಾಮಿ
ತಿಪ್ಪೇಸ್ವಾಮಿ ಬಿಲ್ಲಹಳ್ಳಿ ಸಿದ್ದರಾಮಪ್ಪ ಅವರು ಮೂಲತಃ ಚನ್ನಗಿರಿ ತಾಲೂಕಿನ ಬಿಲ್ಲಹಳ್ಳಿಯವರು. ತಾವರೆಕೆರೆಯಲ್ಲಿ ತನ್ನ ಪ್ರಾಥಮಿಕ ಹಾಗೂ ಮಾಧ್ಯಮ ಶಿಕ್ಷಣ ಮುಗಿಸಿ ಕುವೆಂಪು ವಿಶ್ವವಿದ್ಯಾಲಯದಿಂದ ನರ್ಸಿಂಗ್ ಪದವಿ ಗಳಿಸಿ ಭಾರತದಲ್ಲಿ ಹಲವು ವರ್ಷಗಳ ಶುಶ್ರೂಷಕರೆಂದು ಕೆಲಸ ಮಾಡಿ ಯುಕೆಗೆ ಬಂದು ಎರಡೂವರೆ ದಶಕಗಳಿಂದ ಯು ಕೆ ದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತುರ್ತು ಚಿಕಿತ್ಸಾ ವಿಭಾಗ,  ರೆಸ್ಪಿರೇಟರಿ ಮತ್ತು ಟಿ. ಬಿ. ವಿಭಾಗಗಳಲ್ಲೂ ಅನೆಕ ವರ್ಷಗಳ ಅನುಭವವಿದೆ. ಅಲರ್ಜಿ ಶುಶ್ರೂಷೆಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಸದ್ಯ ಹಾಮರ್ಟನ್ NHS ಆಸ್ಪತ್ರೆಯಲ್ಲಿ ಸ್ಪೆಷ್ಯಾಲಿಸ್ಟ್ ಅಲರ್ಜಿ ಲೀಡ್ ನರ್ಸ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿನಿಂದಲೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಇದ್ದವರು, ಕನ್ನಡ ಬಳಗ ಯು ಕೆ ದಲ್ಲೂ ಸೇವೆ ಸಲ್ಲಿಸಿದ ಉತ್ಸಾಹಿ ಕನ್ನಡಿಗರು ಇವರು. ಲಂಡನ್ನಿನ ಬಕಿಂಗ್ ಹ್ಯಾಮ್ ಪ್ಯಾಲಸ್ ವತಿಯಿಂದ ಬಾಲ್ರೂಮಿನಲ್ಲಿ ಔತಣಕೂಟಕ್ಕೆ ಆಮಂತ್ರಣ ಸಂಪಾದಿಸಿದ ಆಯ್ದ ಶುಶ್ರೂಷಕರುಗಳಲ್ಲಿ ಇವರು ಒಬ್ಬರು ಎನ್ನುವದು ಹೆಮ್ಮೆಯ ವಿಷಯ. (ಸಂ)


ಭಾವನೆಯ ಸುಳಿಯಲ್ಲಿ ನನ್ನದೊಂದು ಪಯಣ -ಬಿ ಎಸ್ ತಿಪ್ಪೇಸ್ವಾಮಿ 

ಎಂದಿನಂತೆ ೧೧ನೇ ಅಕ್ಟೋಬರ್ ೨೦೨೩ರಂದು ಕ್ಲಿನಿಕ್ ಮುಗಿಸಿ ಸಂಜೆ ಸುಮಾರು ೪ ಘಂಟೆಗೆ ಕೆಲಸದ  ಇಮೇಲ್ ಪರಿಶೀಲಿಸುತ್ತಿರುವಾಗ   ರೂತ್ ಶಿವನೇಶನ್, ನಮ್ಮ  ಸಿಬ್ಬಂದಿ ಅಭಿವೃದ್ಧಿ ವಿಭಾಗದ ಮುಖ್ಯಸ್ಥರಿಂದ ಒಂದು ಇಮೇಲ್ ಸಂದೇಶ ಕಂಡು ನನಗೆ ನಂಬಲಾಗಲಿಲ್ಲ. ನನ್ನ ಜೊತೆಗಿದ್ದ ಇಬ್ಬರು ಸಹೋದ್ಯೋಗಿಯರಿಂದ ಆ ಇಮೇಲ್ ಪುನರ್ ಪರಿಶೀಲಿಸಿ ಸಂದೇಶ ಖಚಿತವೆಂದು ಖಾತ್ರಿಯಾಯ್ತು. ರೂತ್ ನ ಇಮೇಲ್ ಪ್ರಕಾರ ನಾನು ೧೪ ನವೆಂಬರ್ ೨೦೨೩ರಂದು ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಬ್ರಿಟನ್ ದೇಶದ ರಾಜರಾದ ಗೌರವಾನ್ವಿತ ಚಾರ್ಲ್ಸ್ ಫಿಲಿಪ್ ಆರ್ಥರ್ ಜಾರ್ಜ್ ರವರು  ಬ್ರಿಟನ್ನಲ್ಲಿ ನೆಲೆಸಿರುವ ಅಂತರರಾಷ್ಟ್ರೀಯ ಶುಶ್ರೂಷಕರಿಗೆ ಏರ್ಪಡಿಸಿದ್ದ ಔತಣಕೂಟದ ಆಮಂತ್ರಣವಾಗಿತ್ತು.  ನನಗೇಕೆ ಈ ಆಮಂತ್ರಣ? ಎಂದು ರುತ್ ಗೆ ಮರು ಪ್ರಶ್ನಿಸಿದೆ. ಅದಕ್ಕುತ್ತರಿಸಿದ ರುತ್, ಅಂತರರಾಷ್ಟ್ರೀಯ ಶುಶ್ರೂಷಕರಿಗೆ ನೀನು ಇದುವರೆವಿಗೂ ಸಲ್ಲಿಸಿರುವ ಸೇವೆಗೆ ಬ್ರಿಟನ್ ರಾಜರಿಂದ ಇದೊಂದು ವಿಶೇಷ ಕೊಡುಗೆ ಎಂದರು. ನನಗೆ ಆನಂದ ತಡೆಯಲಾಗದೆ ಕಣ್ಣೀರು ತಾನಾಗಿಯೇ ಹರಿಯತೊಡಗಿದವು. ನವೆಂಬರ್ ೧೪ರಂದು ದೀಪಾವಳಿ ಹಬ್ಬವಿದೆ, ನಮ್ಮ ಅಪ್ಪಾಜಿ ಅಗಲಿದ ನಂತರ ಇದು ಅವರ ಮೊದಲನೇ ಹಿರಿಯರ ಪೂಜೆ, ಅವರ ಪೂಜೆ ಮಾಡಲು ತಂದೆಯ ಶಿವಲಿಂಗ ಕರಡಿಗೆ ಧರಿಸಿದ್ದ ಹಿರಿಯ ಮಗನಾಗಿ ನಾನು ನಿರ್ಧರಿಸಿ ಕೇವಲ ೭ ದಿನಗಳ ಮುಂಚೆ ಲಂಡನ್ನಿಂದ ಬೆಂಗಳೂರಿಗೆ ನವೆಂಬರ್ ೧೦ರಂದು ಪ್ರಯಾಣಿಸಲು ವಿಮಾನದ ಟಿಕೆಟ್ ಖರೀದಿಸಿದ್ದೆ. ನಾ ಬರುವ ವಿಷಯ ಅಮ್ಮನಿಗೆ ಮುಂಚೆ ತಿಳಿಸಿರಲಿಲ್ಲವಾದರೂ ಅರಮನೆಯ ಆಮಂತ್ರಣ ಕಂಡೊಡನೆ ಅಮ್ಮ ಹಾಗೂ ತಮ್ಮನೊಂದಿಗೆ ಈ ವಿಷಯ ಹಂಚಿಕೊಂಡೆ. ಅವರಿಬ್ಬರೂ ಒಂದೇ ಉತ್ತರ ಕೊಟ್ಟು “ರಾಜ ಮನೆಯ ಆಮಂತ್ರಣ ಜೀವನದಲ್ಲಿ ಸಿಗುವ ಏಕೈಕ ಅವಕಾಶ”, ನಿನ್ನ ತಂದೆ ಇದ್ದಿದ್ದರೆ ಅವರು ಅದೆಷ್ಟೋ ಸಂತೋಷಗೊಳ್ಳುತ್ತಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜರನ್ನು ಭೇಟಿಯಾಗಿ ಬಾ, ಜೊತೆಗೆ ಶಿವಲಿಂಗ ಧರಿಸಿ ಹೋಗು. ಆಗ ನಿನ್ನ ತಂದೆ ನಿನ್ನೊಡನೆಯೇ ಇದ್ದಾರೆ ಎಂಬ ಅನುಭವದ ಜೊತೆಗೆ ಅವರ ಆತ್ಮಕ್ಕೆ ನೀನು ಸಲ್ಲಿಸುವ ಅತ್ಯಂತ ಶ್ರೇಷ್ಠ ಮಟ್ಟದ ಗೌರವ ಎಂದರು. ಅವರ ಮಾತು ಕೇಳಿ ನನ್ನ ಭಾವುಕತೆ ಇನ್ನೂಮಿಗಿಲೇರಿತು. ಸಂಜೆ ಸುಮಾರು ೬ ಘಂಟೆಯಾಗಿತ್ತು. ನನ್ನ ಆತ್ಮೀಯ ಗೆಳೆಯರಿಗೆ ಹಾಗೂ ಸಹೋದ್ಯೋಗಿಗಳೊಡನೆ ಈ ವಿಷಯವನ್ನು ಹಂಚಿಕೊಂಡೆ. ಅವರೆಲ್ಲರೂ ತುಂಬಾ ಸಂತೋಷದ ಜೊತೆಗೆ ನನ್ನ ೨೩ ವರ್ಷಗಳ ಕಾಲ ಬ್ರಿಟನ್ನಲ್ಲಿ ನೆಲೆಸಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಶುಶ್ರೂಷಕರಿಗೆ, ಅಧಿಕೃತವಾಗಿ ಭಾರತದಲ್ಲಿ ನಾನು ಹಮ್ಮಿಕೊಂಡ ನನ್ನ ಹಲವಾರು ಕಾರ್ಯಕ್ರಮಗಳನ್ನು ಹೆಸರಿಡಿದು ಶ್ಲಾಘಿಸುತ್ತ “ಈ ಗೌರವಕ್ಕೆ ನೀನು ಅತ್ಯಂತ ಅರ್ಹತೆಯುಳ್ಳವನು” ಎಂದು ಪ್ರೋತ್ಸಾಹಿಸಿದರು.

ಬ್ರಿಟನ್ನಿನ ನ್ಯಾಷನಲ್ ಹೆಲ್ತ್ ಸರ್ವಿಸ್ ನಲ್ಲಿ ಭಾರತದ ಶುಶ್ರೂಷಕರು (Nurses)

ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಸುಮಾರು ೭ ಲಕ್ಷಕ್ಕೂ ಹೆಚ್ಚು  ಶುಶ್ರೂಷಕರು ಪ್ರತಿ ವರ್ಷ ಪದವಿಗಳಿಸಿ, ಪ್ರಪಂಚದಲ್ಲೇ ಅತಿ ಹೆಚ್ಚು ಶುಶ್ರೂಷಕರು ಹೊರಹೊಮ್ಮುವ ರಾಷ್ಟ್ರ ಎಂಬುದು ಹೆಮ್ಮೆಯ ವಿಷಯವಾದರೂ ಸಹ ಅವರಲ್ಲಿ ೧೦ಕ್ಕೆ ೮ ಜನರು ಹೊರರಾಷ್ಟ್ರಗಳಲ್ಲಿ ಕೆಲಸ ನಿರ್ವಹಿಸುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಬ್ರಿಟನ್ನಷ್ಟೇ ಜನ ಸಂಖ್ಯೆ ಇದೆ. ೬ ಕೋಟಿ ಜನ ಸಂಖ್ಯೆ ಇರುವ ಕರ್ನಾಟಕದ ಸರ್ಕಾರೀ ಆಸ್ಪತ್ರೆಗಳಲ್ಲಿ ಹಾಲಿ ಸೇವೆ ಸಲ್ಲಿಸುವ ಶುಶ್ರೂಷಕರ ಸಂಖ್ಯೆ ೧೫ ಸಾವಿರವಾದರೆ ಅಷ್ಟೇ ಜನಸಂಖ್ಯೆ ಇರುವ ಬ್ರಿಟನ್ನ ನ್ಯಾಷನಲ್ ಹೆಲ್ತ್ ಸರ್ವಿಸ್ ನಲ್ಲಿ ಸುಮಾರು ೬ ಲಕ್ಷಕ್ಕೂ ಅಧಿಕ ಶುಶ್ರೂಷಕರು ಕೆಲಸದಲ್ಲಿದ್ದಾರೆ. ಈ ೬ ಲಕ್ಷದಲ್ಲಿ ಶೇಕಡಾ ೧೫-೨೦ರಷ್ಟು ಶುಶ್ರೂಷಕರು ಭಾರತೀಯ ಮೂಲದವರು ಎಂಬುದು ಹೆಮ್ಮೆ ಎನಿಸದರೂ, ನಾಡಿನಲ್ಲಿ ಅವಕಾಶಗಳ ಕುಂದು ಕೊರತೆ, ಅತಿ ಕಡಿಮೆ ಸಂಬಳ, ಶುಶ್ರೂಷಕರಿಗೆ ಸಮಾಜದಲ್ಲಿರುವ ಕಳಪೆ ಮನ್ನಣೆ, ಸರಬರಾಜು ಹಾಗೂ ಸಲಕರಣೆಗಳ ಕೊರತೆ, ಪುರಾವೆ ಆಧಾರಿತ ಅಭ್ಯಾಸಗಳ ಕೊರತೆ, ವೈದ್ಯರ ಪ್ರಾಬಲ್ಯ ಹಾಗೂ ಶುಶ್ರೂಷಕರಿಗೆ ಆಸ್ಪ್ರತ್ರೆಗಳಲ್ಲಿ ಆಡಳಿತಾಧಿಕಾರಿಗಳಾಗುವ ಅವಕಾಶಗಳ ಕೊರತೆ ಇವೆಲ್ಲವೂ ಕೂಡ ಪ್ರತಿಯೊಬ್ಬ ಭಾರತೀಯ ಶುಶ್ರೂಷಕರು ಅನುಭವಿಸುವ ಸತ್ಯ ಸಂಗತಿ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು, ಕಳೆದ ೨೦ ವರ್ಷಗಳಲ್ಲಿ ಸುಮಾರು ೨ ಸಾವಿರಕ್ಕೂ ಹೆಚ್ಚು ಶುಶ್ರೂಷಕರಿಗೆ ಹಾಗೂ ಶುಶ್ರೂಷಕ ವಿದ್ಯಾರ್ಥಿಯರಿಗೆ ತಮ್ಮವೃತ್ತಿಪರ ಜೀವನವನ್ನು ಹೇಗೆ ಸುಧಾರಿಸುವುದು, ಪುರಾವೆ ಆಧಾರಿತ ಅಭ್ಯಾಸಗಳನ್ನು ಹೇಗೆ ಜಾರಿಗೆ ತರುವುದು, ವೃತ್ತಿಯಲ್ಲಿ ನಾಯಕತ್ವ ಅವಕಾಶಗಳನ್ನು ಹೇಗೆ ಕಲ್ಪಿಸಿಕೊಳ್ಳಬಹುದು, ಸಮಾಜದಲ್ಲಿ ಆರೋಗ್ಯದ ಸುಧಾರಣೆ ತರಲು ಶುಶ್ರೂಷಕರ ಪಾತ್ರವೇನೆಂಬುದನ್ನು ಕುರಿತು ವಿವಿಧ ರೀತಿಯ ಚಟುವಟಿಕೆಗಳನ್ನು ಆಯೋಜಿಸುತ್ತಾ ಬಂದಿದ್ದೇನೆ. ಇದಕ್ಕೆ ನನ್ನಸ್ಥಳೀಯ ಹಾಗೂ ಭಾರತೀಯ ಮೂಲದ ಸಹೋದ್ಯೋಗಿಗಳೂ ಸಹ ಸಾಕಷ್ಟು ಸಹಕರಿಸಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಹೊಸದಾಗಿ ವೃತ್ತಿ ಆರಂಭಿಸುವ ಪ್ರತಿ ಅಂತರರಾಷ್ಟ್ರೀಯ ಶುಶ್ರೂಷಕರಿಗೂ ಸಹ ನನ್ನ ವೈಯುಕ್ತಿಕ ಮಟ್ಟದಲ್ಲಿ ಇಲ್ಲಿ ನೆಲೆಸಲು ಬೇಕಿರುವ ಮೂಲಭೂತ ಸೌಕರ್ಯಗಳ ಬಗ್ಗೆ, ದೇಶದ ರೀತಿ ನೀತಿಗಳ ಬಗ್ಗೆ, ಆರೋಗ್ಯ ಹಾಗೂ ಸುರಕ್ಷತೆ ಬಗ್ಗೆ ಪ್ರತಿ ತಿಂಗಳೂ ಮುಖಾಮುಖಿ ಭೇಟಿಯಾಗಿ ತಿಳಿಸುತ್ತೇನೆ.  ಕೋವಿಡ್ ಅವಧಿಯಲ್ಲಿ, ಸ್ಥಳೀಯ ಹಾಗೂ ಭಾರತೀಯ ಸಹೋದ್ಯೋಗಿಗಳು ಅಲ್ಲದೆ ಸ್ವಯಂ ಸೇವಾ ಸಂಸ್ಥೆಗಳ ಸಹಾಯದಿಂದ ಸುಮಾರು ನೂರಕ್ಕೂ ಹೆಚ್ಚು ಕೋವಿಡ್ ರೋಗಿಗಳನ್ನು ಮನೆಯಲ್ಲಿಯೇ ಚಿಕಿತ್ಸೆ ಕೊಟ್ಟು  ಗುಣಮುಖರಾಗುವವರೆಗೂ ದೂರವಾಣಿ ಕರೆಗಳ ಮೂಲಕ ಸಲಹೆ ನೀಡುವುದರ ಜೊತೆಗೆ ಅವರು ಸಾಂಕ್ರಾಮಿಕ ರೋಗದಿಂದಾದ ಮಾನಸಿಕ ಖಿನ್ನತೆಯಿಂದ ಹೊರಬರಲು  ಅತ್ಮಸ್ಥೈರ್ಯ ತುಂಬಿದ್ದೆವು.

ನನ್ನ ಪಯಣ

ಚಿಕ್ಕಂದಿನಿಂದಲೂ ಹಿರಿಮಗನಾಗಿ ನನ್ನ ತಂದೆ ಪಟ್ಟ ಪರಿಶ್ರಮಗಳು ಹಲವಾರು. ಕಡುಬಡತನದ ಕುಟುಂಬದಲ್ಲಿ ಬೆಳೆದ ನನ್ನ ತಂದೆ ಅವರ ಕುಟುಂಬದಲ್ಲಿಯೇ ಮೊದಲನೇ ಪದವೀಧರರಾಗಿ ಒಡಹುಟ್ಟಿದವರೆಲ್ಲರನ್ನು ಆರ್ಥಿಕವಾಗಿ ಪ್ರೋತ್ಸಾಹಿಸಿ ವೃತ್ತಿಪರರನ್ನಾಗಿ ಅಲ್ಲದೆ, ಅವರನ್ನು ಕೌಟುಂಬಿಕವಾಗಿ ನೆಲೆಸಲು ಪಟ್ಟ ಕಷ್ಟಗಳನ್ನು ನೋಡುತ್ತಲೇ ಕಳೆದಿತ್ತು ನನ್ನ ಬಾಲ್ಯ ಹಾಗೂ ಪ್ರೌಡಾವಸ್ಥೆ. ಚನ್ನಗಿರಿ ತಾಲೂಕು, ತಾವರೆಕೆರೆಯಲ್ಲಿ ನನ್ನ ಪ್ರಾಥಮಿಕ ಹಾಗೂ ಮಾಧ್ಯಮ ಶಿಕ್ಷಣ. ಹಟ್ಟಿಕಸ, ಹಸು, ಎಮ್ಮೆ ಸೆಗಣಿ ಬಾಚಿ, ದನಕರುಗಳಿಗೆ ಹುಲ್ಲು ನೀರು ಕುಡಿಸಿ ನಂತರ ಶಾಲೆಗೆ ಹೋಗಿ ಬಂದು, ಸಂಜೆ ಅಮ್ಮ ಕಟ್ಟಿಟ್ಟ ಹುಲ್ಲಿನ ಪೆಂಡಿಯೊಂದಿಗೆ ಹಿಂದಿರುಗಿ, ಅಪ್ಪಾಜಿ ಬೆಳೆಸಿದ ತರಕಾರಿ ಗಿಡಗಳಿಗೆ ನೀರುಣಿಸಿ, ನನ್ನ ಪಠ್ಯೇತರ ಕಾರ್ಯಗಳನ್ನು ಮುಗಿಸಿ ರಾತ್ರಿ ಊಟ ಮುಗಿಸಿ, ಅಪ್ಪನ ಕಾಲೊತ್ತುತ್ತ ಅವರ ಕಥೆಗಳನ್ನು ಕೇಳುತ್ತ ಮಲಗುವುದು ನನಗೆ ಈಗಲೂ ಸವಿನೆನಪು.

ಅವಿಭಕ್ತ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ  ತಂದೆಯವರು, ಶ್ರೇಷ್ಠ ಕೌಟುಂಬಿಕ ಹಾಗೂ ವೃತ್ತಿಪರ ಮೌಲ್ಯಗಳ ಜೊತೆಗೆ, ಒಳ್ಳೆಯ ಸಾಮಾಜಿಕ ನಿಲುವು ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಸಾಕಷ್ಟು ಶ್ರಮಿಸಿದ್ದರು. ಮಕ್ಕಳಿಗೆ ಆಸ್ತಿ ಬೇಡ ಮಕ್ಕಳನ್ನೇ ಆಸ್ತಿಯಾಗಿ ಮಾಡಿ ಎನ್ನುವ ತತ್ವವನ್ನ ಕಾರ್ಯರೂಪಕ್ಕೆ ತಂದ ನಮ್ಮ ತಂದೆ “ಸಫಾರಿ ಸಿದ್ದರಾಮಣ್ಣ” ಎಂದೇ ಹೆಸರುವಾಸಿಯಾಗಿದ್ದರು.. ಈ ಎಲ್ಲಾ ಪೀಠಿಕೆ ಏಕೆಂದರೆ, ತಂದೆಯವರ ಮಾತು ವೇದ ವಾಕ್ಯವೆಂದು ಅವರ ಹೇಳಿದ ದಾರಿಯಲ್ಲೇ ನಡೆದು ಬಂದೆ. ಅವರ ಹಾಗೂ ಅವರ ಪೂಜ್ಯ ಗುರುಗಳಾದ ದಿವಂಗತ ಶ್ರೀ ಬಿ ಜಿ ನಾಗರಾಜ್ ರವರ ಸಲಹೆಯಂತೆ ನನ್ನ ಶುಶ್ರೂಷಕ ಪದವಿಯನ್ನು ಕುವೆಂಪು ವಿಶ್ವವಿದ್ಯಾನಿಲಯದಿಂದ ೧೯೯೮ ನೇ ಸಾಲಿನಲ್ಲಿ ಗಳಿಸಿದೆ. ನನ್ನ ವೃತ್ತಿಪರ ಶಿಕ್ಷಣ ಕರ್ನಾಟಕ ಶುಶ್ರೂಷಕ ಪರಿಷತ್ತಿನಲ್ಲಿ ನೋಂದಣಿಯಾದ ದಿನವೇ ನನಗೆ ಕೆಲಸದ ಪ್ರಸ್ತಾಪ ಪತ್ರದ ಜೊತೆಗೆ ೧೦ ದಿನಗಳ ಮುಂಗಡ ಸಂಬಳವನ್ನು ಒಂದು ಶುಶ್ರೂಷಕ ವಿದ್ಯಾಸಂಸ್ಥೆಯ ಅಧ್ಯಕ್ಷರು ನನ್ನ ತಂದೆಯ ಮುಂದೆಯೇ ನೀಡಿದಾಗ ನನಗಿಂತ ನನ್ನ ತಂದೆಯವರ ಆನಂದಕ್ಕೆ ಪಾರವೇ ಇಲ್ಲವಾಗಿತ್ತು. ಕೇವಲ ೬ ತಿಂಗಳು ಅನುಭವವಿದ್ದರೂ ಕೂಡ, ೨೦೦೦  ಇಸವಿಯಲ್ಲಿ ಒರಿಸ್ಸಾದಲ್ಲಿ ನಡೆದ ಚಂಡಮಾರುತ ದುರಂತದಲ್ಲಿ ವೈದ್ಯಕೀಯ ನೆರವು ನೀಡಲು ರಚಿಸಿದ ಮಣಿಪಾಲ ಆಸ್ಪತ್ರೆ  ವೈದ್ಯಕೀಯ ವಿಪತ್ತು ನಿರ್ವಹಣಾ ತಂಡದಲ್ಲಿ ನನ್ನನ್ನು ಆಯ್ಕೆ ಮಾಡಿದ್ದರು. ಆಗಲೂ ಸಹ ನಾನು ಮೇಲೆ ರೂತ್ ನ ಪ್ರಶ್ನಿಸಿದಂತೆ, ಮಣಿಪಾಲ ಆಸ್ಪತ್ರೆ, ಬೆಂಗಳೂರಿನ ನರ್ಸಿಂಗ್ ಡೈರೆಕ್ಟರ್ ಆಗಿದ್ದ ಶ್ರೀಮತಿ ಶ್ರೀದೇವಿ ವಾರಿಯರ್ ಅವರನ್ನು ಪ್ರಶ್ನಿಸಿದೆ “ನನಗಿಂತಲೂ ಹತ್ತಾರು ವರ್ಷ ಅನುಭವವಿರುವ ಹಿರಿಯ ಶುಶ್ರೂಷಕರಿರುವಾಗ ನನ್ನನ್ನೇಕೆ ಆಯ್ಕೆ ಮಾಡಿದ್ದೀರಿ?” ಎಂದೆ. ಅದುಕ್ಕುತ್ತರಿಸಿದ ಅವರು, ನಿನ್ನಲ್ಲಿರುವ ಅನುಭವಕ್ಕಿಂತ ನಿನಗಿರುವ ಅನುಕಂಪ  ಹಾಗೂ ವೃತ್ತಿಪರತೆ ನಿನಗೆ ಈ ಅವಕಾಶ ನೀಡಿದೆ ಎಂದರು. ಅವರ ಆ ಮಾತು ನನಗೆ ಹತ್ತಾನೆ ಬಲವನ್ನು ಅನುಗ್ರಹಿಸಿದಂತಾಯಿತು. ಒರಿಸ್ಸಾದ ೧೦ ದಿನಗಳ ಸೇವೆ ಇಂದಿಗೂ ಅವಿಸ್ಮರಣೀಯ. ನಮ್ಮೊಂದಿಗೆ ಭಾರತೀಯ ಸೇನೆಯ ಮುಖ್ಯಸ್ಥರು, ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿಗಳು, ಒರಿಸ್ಸಾ ಆರೋಗ್ಯ ಸಚಿವರು ಹಾಗೂ ಅವರ ಕಾರ್ಯದರ್ಶಿಗಳು ಇಂತಹ ಮಹಾ ಗಣ್ಯವಕ್ತಿಗಳೊಡನೆ ದೈನಂದಿನ ಚಟುವಟಿಕೆಗಳ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ ಅವರೊಡನೆ ಅದೇ ಸೇನಾ ಅತಿಥಿ ಗೃಹದಲ್ಲಿ ವಾಸ್ತವಿಸಿದ ನೆನಪು ಅಜರಾಮರ. ಅದೃಷ್ಟವೆಂದರೆ, ನಮಗೆ ಬೇಕಾದ ಎಲ್ಲಾ ಸಹಾಯ ಅಲ್ಲಿನ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು ನೀಡಿದ್ದರಿಂದ  ಅತಿ ಕಡಿಮೆ ಸಮಯದಲ್ಲಿ ಅತ್ಯಂತ ಗರಿಷ್ಟ ಸಂಖ್ಯೆಯಷ್ಟು ರೋಗಿಗಳನ್ನು ಚಿಕಿತ್ಸಿದ್ದಲ್ಲದೆ, ಅವರ ಕುಟುಂಬಗಳಿಗೆ ಬೇಕಾಗುವ ಊಟ ಹಾಗೂ ತಾತ್ಕಾಲಿಕ ವಸತಿಯ ವ್ಯವಸ್ಥೆಯನ್ನು ಮಾಡುವ ಸದಾವಕಾಶ ನಮಗೆ ದೊರಕಿತು. ಅಲ್ಲಿಂದ ಹಿಂದಿರುಗಿದಾಗ ನಮ್ಮ ತಂಡದ ಎಲ್ಲರನ್ನು ಸ್ವಾಗತಿಸುತ್ತಿರುವ ಒಂದು ಬ್ಯಾನರ್ ಮಣಿಪಾಲ ಆಸ್ಪತ್ರೆಯ ಮುಂದೆ ಪ್ರದರ್ಶಿಸಿಲಾಗಿತ್ತು.  ಅಲ್ಲಿನ ಸಾವು ನೋವಿನ ಘಟನೆಗಳನ್ನು ಹಾಗೂ ನಮ್ಮ ಅನುಭವವನ್ನು ಹಂಚಿಕೊಳ್ಳಲು ಸ್ವತಃ ಒರಿಸ್ಸಾದ ಆರೋಗ್ಯ ಸಚಿವರು ಬೆಂಗಳೂರಿಗೆ ಭೇಟಿ ನೀಡಿ ನಮ್ಮೆಲ್ಲರನ್ನೂ ಅವರ ಅತಿಥಿ ಗೃಹಕ್ಕೆ ಆಹ್ವಾನಿಸಿ, ಎಲ್ಲಾ ಮಾಹಿತಿಯನ್ನು ಸಂಗ್ರಹಿಸುವುದರ ಜೊತೆಗೆ ನಮ್ಮೆಲ್ಲರ ಕರ್ತವ್ಯ  ನಿಷ್ಠೆಯನ್ನು ಶ್ಲಾಘಿಸಿದ್ದರು.

ಲಂಡನ್ನಿಗೆ ಹೊರಟ ಕನ್ನಡದ ಶುಶ್ರೂಷಕ

ಒರಿಸ್ಸಾದ ಅನುಭವ ಇನ್ನೂ ಹಸಿಯಿರುವಾಗಲೇ ಲಂಡನ್ ನಗರದಲ್ಲಿರುವ ವಿಪ್ಪ್ಸ್ ಕ್ರಾಸ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಸಂದರ್ಶನಕ್ಕೆ ಆಮಂತ್ರಣ ಬಂದಿತ್ತು. ಅಂದು ಬೆಳಿಗ್ಗೆ ಯುಗಾದಿ ಹಬ್ಬದ ಸಲುವಾಗಿ, ನನ್ನ ವೇತನದಲ್ಲುಳಿಸಿದ  ೧೦,೦೦೦ ರೂಪಾಯಿಗಳನ್ನು ನನ್ನ ತಂದೆತಾಯಿಯರ ಕೈಲಿತ್ತು ನಮಸ್ಕರಿಸಿ ಹಬ್ಬದ ಆಚರಣೆಯಲ್ಲಿದ್ದಾಗ ಬೆಂಗಳೂರಿಂದ ದೆಹಲಿಗೆ ಹೊರಡಲು ಕರೆ ಬಂತು. ಕೇವಲ ೮ ತಿಂಗಳ ಅನುಭವದ     ನಾನು, ದೆಹಲಿಯ ಲೀ ಮೆರಿಡಿಯನ್ ಹೋಟೆಲ್ನಲ್ಲಿ ಸಂದರ್ಶನಕ್ಕೆ  ಎಂದು ಬಂದಿದ್ದ ೩,೫೦೦ ಶುಶ್ರೂಷಕರಲ್ಲಿ ಅತ್ಯಂತ ಕಡಿಮೆ ಅನುಭವಿಯಾಗಿದ್ದರೂ ಕೂಡ, ಬ್ರಿಟನ್ ದೇಶದಲ್ಲಿ ಸೇವೆ ಸಲ್ಲಿಸುವ ಆಕಾಂಕ್ಷಿಯಾಗಿದ್ದೆ. ೩ ದಿನದ ಸಂದರ್ಶನದಲ್ಲಿ ೮೦ ಜನರ ಆಯ್ಕೆ ಮಾಡುವುದಾಗಿ ETI ಕಂಪನಿ ಡೈರೆಕ್ಟರ್ ಜಾನಿ ಭಂಡಾರಿಯವರು ತಿಳಿಸಿದ್ದರು. ಆದರೆ ಕೊನೆಗೆ ಅವರು ಆಯ್ಕೆ ಮಾಡಿದ್ದು ೮ ಜನ. ಅದರಲ್ಲಿ ನಾನು ಮೊದಲನೆಯವನು ಎಂದು ಹೋಟೆಲ್ ಸಭಾಂಗಣದಲ್ಲಿ ಎಲ್ಲರ ಮುಂದೆ ಧೃಡಪಡಿಸಿದರು ಜಾನಿ ಭಂಡಾರಿ. ಮತ್ತೊಮ್ಮೆ ಅದೇ ಪ್ರಶ್ನೆ, ನಾನೇ ಏಕೆ? ಜಾನಿ ಉತ್ತರಿಸಿದ್ದು “ನಿನ್ನಲ್ಲಿರುವ ಕೆಲಸದ ಬಗೆಗಿನ ಉತ್ಸಾಹ ಹಾಗೂ ಅದನ್ನು ಸಂದರ್ಶನದಲ್ಲಿ ಉದಾಹರಣೆಗಳೊಂದಿಗೆ ವಿವರಿಸಿದ ಬಗೆ ವಿಪ್ಪ್ಸ್ ಕ್ರಾಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ವೆಂಡಿ ಹಿಕ್ಕಿ ಅವರಿಗೆ ತುಂಬಾ ಹಿಡಿಸಿದೆ. ನೀನು ನಿನ್ನೆಲ್ಲ ಸಹೋದ್ಯೋಗಿಗಳಿಗೆ ಸಂದರ್ಶನದಲ್ಲಿ ಹೇಗೆ ಉತ್ತರಿಸಬೇಕು ಎನ್ನುವುದಕ್ಕೆ ಮಾದರಿ” ಎಂದು ಎಲ್ಲರೆದುರು ಹಂಚಿಕೊಂಡರು.

೩ನೇ ಜುಲೈ ೨೦೦೦ ದಂದು ನನ್ನ ಶುಶ್ರೂಷಕ ವೃತ್ತಿ ಬ್ರಿಟನ್ನಲ್ಲಿ ಆರಂಭಿಸಿತ್ತು. ಭಾರತೀಯ ಹಾಗೂ ಫಿಲಿಫೈನ್ಸ್ ದೇಶದ ಶುಶ್ರೂಷಕರು ಸಾಕಷ್ಟು ಸಂಖ್ಯೆಯಲ್ಲಿ ಬ್ರಿಟನ್ಗೆ ಆಗಮಿಸಿದರು. ಮುಂದಿನ ೧೨ ತಿಂಗಳಲ್ಲಿ ನನ್ನ ಜೊತೆಗೆ ಕಾರ್ಯ ನಿರ್ವಹಿಸುತ್ತಿದ್ದ ೭೦೦ ಶುಶ್ರೂಷಕರಲ್ಲಿ ೪೫೦ ಮಂದಿ ಮಣಿಪಾಲ ಆಸ್ಪತ್ರೆಯಿಂದ ಬ್ರಿಟನ್ಗೆ ಬಂದು ನೆಲೆಸಿದರು.  ಕಂಡರಿಯದ ನಾಡಿನಲ್ಲಿ, ಓದುವುದಕ್ಕಷ್ಟೇ ಸೀಮಿತವಾಗಿದ್ದ ಇಂಗ್ಲಿಷ್ ಭಾಷೆಯನ್ನು ಈಗ ಆಡು ಭಾಷೆಯಾಗಿ ಅರಗಿಸಿಕೊಳ್ಳಲು ಹರಸಾಹಸ ಪಡುವುದರ ಜೊತೆಗೆ, ಬ್ರಿಟನ್ನಿನ ಸಂಸ್ಕೃತಿ ಹಾಗೂ ಸಾಮಾಜಿಕ ಮೌಲ್ಯಗಳಿಗೆ ಹೊಂದಿಕೊಳ್ಳಲು ಸಹಾಯಿಸಿದ ನನ್ನ ಇಲ್ಲಿನ ಸಹೋದ್ಯೋಗಿಗಳಿಗೆ ಎಂದಿಂದಿಗೂ ಚಿರಋಣಿ. ಅದೇ ರೀತಿ, ನಮ್ಮ್ಮೆಲ್ಲರ ಅನುಭವಗಳನ್ನು ಆಧಾರವಾಗಿರಿಸಿಕೊಂಡು, ಇಲ್ಲಿನ ನ್ಯಾಷನಲ್ ಹೆಲ್ತ್ ಸರ್ವಿಸ್ನಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲು ಶ್ರಮಿಸಿದೆವು. ನಮ್ಮ  ತುರ್ತು ಚಿಕಿತ್ಸಾ ವಿಭಾಗದಲ್ಲಿ ರೋಗಿಗಳು ಚಿಕಿತ್ಸೆ ಪಡೆಯುವ ಸಮಯದಲ್ಲಿ  ಸುಧಾರಣೆ, ವಾರ್ಡ್ನಲ್ಲಿ ಶುಶ್ರೂಷಕರ ನಿರ್ವಹಣೆಯಲ್ಲಿ ಸ್ವಾಯತ್ತತೆ, ನುರಿತ ಶುಶ್ರೂಷಕರು ತಮ್ಮ ಪದವಿ ಹಾಗೂ ಅನುಭವದ ಆಧಾರದ ಮೇಲೆ ಸ್ಪೆಷಲಿಸ್ಟ್ ನರ್ಸಿಂಗ್ ಹಾಗೂ ನರ್ಸ್ ಪ್ರಾಕ್ಟಿಷನರ್ ವೃತ್ತಿಯಲ್ಲಿ ಅಳವಡಿಸಿಕೊಳ್ಳಲು ಬೇಕಾಗುವ ಅರ್ಹತೆಗಳು ಹಾಗೂ ಅನುಭವಗಳನ್ನು ನಾನು ಹಲವಾರು ಸಹೋದ್ಯೋಗಿಗಳೊಂದಿಗೆ ಸ್ಥಳೀಯವಾಗಿ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹಂಚಿಕೊಂಡಿದ್ದೇನೆ.

ಅರಸನ ಕೈ ಕುಲುಕಿಸಿದ ಸೆಗಣಿ ಬಾಚಿದ ಕೈಗಳು!

ಕರ್ತವ್ಯ ನಿಷ್ಠೆ ಹಾಗೂ ಸೇವಾ ಮನೋಭಾವನೆ ನನ್ನ ತಂದೆ ತಾಯಿಯಿಂದ  ಬಳುವಳಿಯಾಗಿ ಬಂದಿದೆ ಎಂಬುದು ನನ್ನ ಭಾವನೆ. ಆದ್ದರಿಂದ, ರಾಜರ ಅರಮನೆಯ ಆಮಂತ್ರಣ ನನಗೆ ಬಯಸದೆ ಬಂದ ಭಾಗ್ಯವಾದರೂ ಅದು ನನ್ನ ಗೌರವಯುತ ತಂದೆಗೆ ಅವರು ದಿವಂಗತರಾದ ನಂತರ ಅವರ ಪಾದಾರವಿಂದಗಳಿಗೆ ಅರ್ಪಿಸುವ ವಿಶೇಷ ಕೊಡುಗೆ. ಅಂದು ಅರಸರನ್ನು ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಎರಡು ಬಾರಿ ಭೇಟಿಯಾಗಿ ಅವರ ಹ್ಯಾಂಡ್ ಶೇಕ್ ಮಾಡಿದ  ಕ್ಷಣ ನೆನೆದೊಡನೆ ನನ್ನೀ ಸೆಗಣಿ ಬಾಚಿದ ಕೈಗಳು ಅರಸನ ಕೈ ಕುಲುಕಿಸುವ ಮಟ್ಟಕ್ಕೆ ಮುಟ್ಟಿದ್ದು ಈ ಜೀವನದಲ್ಲಿ ನನಗೆ ಸಂಪೂರ್ಣ ಸಾರ್ಥಕತೆಯನ್ನು ಕಲ್ಪಿಸಿದೆ. ಅರಸರಿಗೆ ಹುಟ್ಟು ಹಬ್ಬದ ಶುಭಾಷಯಗಳನ್ನು ಹಾರೈಸಿ,  ಅರಸರಿಂದ “ನಿಮ್ಮ ಸೇವೆಗೆ ನನ್ನ ನಮನ” ಎಂಬ ನುಡಿಮುತ್ತುಗಳು ಅವರ ಬಾಯಿಂದ ಹೊಮ್ಮಿದಾಗ, ನನಗೆ ಅನಿಸಿದ್ದು ಅದು ಬರೀ ನನ್ನ ಭಾವನೆಗಳಷ್ಟೇ ಅಲ್ಲ ಅದು ಪ್ರತಿಯೊಬ್ಬ ಭಾರತೀಯ ಮೂಲದ ಶುಶ್ರೂಷಕರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಲ್ಲಿಸುವ ಸೇವೆಯ ಹೆಗ್ಗಳಿಕೆ ಹಾಗೂ ಹಿರಿಮೆ.

ರಾಜರ ಭೇಟಿ, ನನ್ನ ಬದುಕಿನಲ್ಲಿ “ಸಾರ್ಥಕತೆಯ ಕಾರ್ತಿಕೋತ್ಸವದಷ್ಟೇ” ಸಂತಸ ತಂದಿದೆ. ನನ್ನೀ ಯಶಸ್ಸಿನ ಕೀರ್ತಿಯನ್ನು ಈ ಜಗತ್ತಿಗೆ ಪರಿಚಯಿಸಿದ ನನ್ನ ತಂದೆತಾಯಿಯರಿಗೆ ಅರ್ಪಿಸುತ್ತ ನನ್ನ ಪೂಜ್ಯ ತಂದೆ ಸಫಾರಿ ಸಿದ್ದರಾಮಪ್ಪನವರಿಗೆ ಮತ್ತೊಮ್ಮೆ ನನ್ನ ನುಡಿನಮನಗಳೊಂದಿಗೆ….

ತಿಪ್ಪೇಸ್ವಾಮಿ ಬಿಲ್ಲಹಳ್ಳಿ ಸಿದ್ದರಾಮಪ್ಪ

ಮೂರನೆಯ ಸಾಲಿನಲ್ಲಿ ಲೇಖಕರು!

ಲಿಂಕ್ ಗಳು

ಬಕಿಂಗ್ ಹ್ಯಾಮ್ ಪ್ಯಾಲೇಸ್ ಅರಸರ ಭೇಟಿಯ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟಿತಗೊಂಡ ಕೆಲವು ಲಿಂಕ್ ಈ ಕೆಳಗಿವೆ:

King’s birthday coverage: 

https://intranet.homerton.nhs.uk/news/allergy-lead-nurse-thippeswamy-represents-global-nursing-to-the-king-8514

ಮಾಚು-ಪೀಕ್ಚೂ ಚಾರಣ – ಅನ್ನಪೂರ್ಣಾ ಆನಂದ್

ಇತಿಹಾಸ:

ದಕ್ಷಿಣ ಅಮೇರಿಕಾ ಖಂಡದ ಪೆರು ದೇಶದಲ್ಲಿರುವ ಕುಸ್ಕೋ ನಗರದ ಬಳಿ ಇರುವ ಮಾಚು-ಪೀಕ್ಚೂ (Machu-Picchu), ಇಂಕಾ (Inca) ಜನಾಂಗದ ಧಾರ್ಮಿಕ ಸ್ಥಳ. ಇಂಕಾ ನಾಗರೀಕತೆ ಸುಮಾರು ೧೩ನೇ ಶತಮಾನದಲ್ಲಿ ಹುಟ್ಟಿ, ಬೆಳದು, ಉತ್ತುಂಗಕ್ಕೇರಿ, ಸ್ಪೇನ್ ದೇಶದ ಧಾಳಿಯಿಂದ (೧೬ನೇ ಶತಮಾನ) ಪತನಗೊಂಡ ಬಹುಪ್ರಸಿದ್ಧ ನಾಗರೀಕತೆ ಮತ್ತು ಜನಾಂಗ. ೧೩ನೇ ಶತಮಾನದಲ್ಲಿ, ಪ್ರಪಂಚದ ಬೇರೆಡೆಗಳಲ್ಲಿ ನಾಗರೀಕತೆ ಬಹಳ ಮುಂದಿದ್ದರೂ, ಈ ಜನಾಂಗ, ಇದೆಲ್ಲದರಿಂದ ದೂರವಿದ್ದು, ತನ್ನದೇ ಆದ ರೀತಿಯಲ್ಲಿ ಬೆಳೆಯಿತು! ಬೆಟ್ಟಗುಡ್ಡಗಳಲ್ಲೇ ವಾಸಮಾಡುತ್ತಿದ್ದ ಈ ಜನಾಂಗ, ಕಡಿದಾದ ಜಾಗಗಳಲ್ಲಿ ಮನೆ, ಹಳ್ಳಿ, ಊರುಗಳನ್ನು ಕಟ್ಟಿ, ಈ ಗುಡ್ಡಗಳಲ್ಲಿ, ಮೆಟ್ಟಿಲುಗಳನ್ನು ಮಾಡಿ ವ್ಯವಸಾಯವನ್ನು ಮಾಡುತ್ತಿದ್ದರು. ಈ ವ್ಯವಸಾಯ ಕ್ಷೇತ್ರಗಳಿಗೆ ಮಳೆ ಮತ್ತು ಈ ಗುಡ್ಡದಳಿಂದ ಕರಗಿ, ಹರಿದು ಬರುವ ಮಂಜಿನ ನೀರನ್ನುಪಯೋಗಿಸಿ ದವಸ-ಧಾನ್ಯಗಳನ್ನು ಬೆಳೆಯುತ್ತಿದ್ದರು. ಇಂಟಿ (ಸೂರ್ಯ) ಇವರ ಮುಖ್ಯ ದೇವರು. ತಮ್ಮ ರಾಜನನ್ನು ಅವರು ಸೂರ್ಯನ ಮಗನೆಂದು ಭಾವಿಸುತ್ತಿದ್ದರು. “ಕ್ವೆಚುವಾ” (Quechua) ಇವರು ಬಳಸುತ್ತಿದ್ದ ಭಾಷೆ (ಈಗಲೂ ಈ ಭಾಷೆಯನ್ನು ಬಳಸುವ ಜನರು ಅಲ್ಪ ಸ್ವಲ್ಪ ಇದ್ದಾರೆ).

ಪ್ರಯಾಣ:

ಈ ಇಂಕಾ ಜನರ ಧಾರ್ಮಿಕ ಸ್ಥಳವಾದ ಮಾಚು – ಪೀಕ್ಚೂವನ್ನು ಕುಸ್ಕೋ ನಗರದಿಂದ ತಲುಪಲು ಇರುವ ದಾರಿಯೇ ಇಂಕಾ ಟ್ರೈಲ್ (Inca Trail).  ೩೯ ಕಿಲೋ ಮೀಟರ್ (೨೪ ಮೈಲಿ) ಉದ್ದದ ಈ ಹಾದಿಯನ್ನು ಸುಮಾರು ೩ ಅಥವಾ ೪ ದಿನಗಳಲ್ಲಿ ನಡೆಯಬಹುದು. ಸುಮಾರು ೩೦೦೦ ಮೀಟರ್ ಎತ್ತರದಿಂದ ಪ್ರಾರಂಭವಾಗುವ ಈ ಹಾದಿ, ೪೨೧೫ ಮೀಟರ್ (ಈ ಹಾದಿಯ ಉತ್ತುಂಗ) ತಲುಪಿ, ಮತ್ತೆ ೨೪೩೦ ಮೀಟರಿಗೆ ಇಳಿದರೆ ಸಿಗುವುದೀ ಜಗತ್ಪ್ರಸಿದ್ದ ಸ್ಥಳ. ಹಾದಿಯಲ್ಲಿ ಬಹಳಷ್ಟು ಇಂಕಾ ವಸಾಹತುಗಳು (settlements ) ಕಾಣಸಿಗುತ್ತವೆ. ಕ್ಲೌಡ್ ಫಾರೆಸ್ಟ್ ಮೂಲಕ ಹೋಗುವಾಗಲಂತೂ ವಿಶಿಷ್ಟವಾದ ಮರ, ಗಿಡ, ಹಕ್ಕಿಗಳು ಕಾಣಸಿಗುತ್ತವೆ. ಪ್ರತಿ ತಿರುವು ಮುರುವೂ ಅವರ್ಣನೀಯ ಪ್ರಕೃತಿ ಸೌಂದರ್ಯದಿಂದ ತುಂಬಿದೆ! ಆಂಡಿಸ್ (andes ) ಪರ್ವತ ಶ್ರೇಣಿಯನ್ನು ನೋಡುವಾಗ “ಹುಲುಮಾನವ” ಎಂಬ ಉಕ್ತಿಯ ಅರ್ಥ ಮನದಟ್ಟಾಗುತ್ತದೆ!

ಈ ಇಂಕಾ ಟ್ರೈಲ್-ಅನ್ನು ನಡೆಯುವ ಆಸೆ ಬಹಳ ವರ್ಷಗಳಿಂದ ಇತ್ತು. ಈ ವರ್ಷದ ಜನವರಿಯಲ್ಲಿ ಇದರ ಬಗ್ಗೆ ಬಹಳಷ್ಟು ವಿಷಯ ಸಂಗ್ರಹಿಸಿ, ನಾನು, ನನ್ನ ಪತಿ ಆನಂದ್, “Exodus ” ಎಂಬ ಯು.ಕೆ ಕಂಪನಿಯ ಮೂಲಕ ಈ ಪ್ರಯಾಣವನ್ನು ಕೈಗೊಳ್ಳುವ ನಿರ್ಧಾರ ಮಾಡಿದೆವು. ಈ ರೀತಿಯ ಪ್ರವಾಸಗಳಿಗೆ ಕಂಪನಿಗಳ ಮೂಲಕ ಹೋಗುವುದು ಅನುಕೂಲ. ಕ್ಯಾಂಪ್ ಸೈಟ್ಸ್, ಟೆಂಟ್ಸ್, ಟಾಲೆಟ್ಸ್, ಊಟ, ತಿಂಡಿ – ಹೀಗೆ ಎಲ್ಲದರ ವ್ಯವಸ್ಥೆಯನ್ನು ಸುಸಜ್ಜಿತವಾಗಿ ಮಾಡುವುದದಿಂದ ಪ್ರಯಾಣದಲ್ಲಿ ಈ ಅವಶ್ಯಕತೆಗಳ ಬಗ್ಗೆ ಯೋಚನೆ ಮಾಡುವ ತಲೆನೋವು ತಪ್ಪುತ್ತದೆ. ಮೊದಲೇ ಕಷ್ಟಕರವಾದ ಪ್ರಯಾಣ, ಇದರ ಮಧ್ಯೆ ಈ ತಲೆಬಿಸಿ ಬೇಕೇ!

ಆಗಸ್ಟ್ ೨೫ರಿಂದ ೩೧ರ ವರೆಗೆ ಈ ಪ್ರಯಾಣವನ್ನು ನಾನು, ಆನಂದ್ ಮತ್ತೆ ನಮ್ಮೆರಡೂ ಮಕ್ಕಳು, ಮಾಡುವುದೆಂದು ನಿರ್ಧರಿಸಿದೆವು. ನಿಶ್ವಯಿಸಿದ ಕೆಲ ದಿನಗಳಲ್ಲೇ ನಾನು ಮತ್ತು ಆನಂದ್ ನಮ್ಮ ತಯಾರಿ ಪ್ರಾರಂಭಿಸಿದೆವು. ೪ ದಿನಗಳ ಕಾಲ ಸುಮಾರು ೭ – ೮ ಘಂಟೆ ನಡೆಯುವುದು ಅಷ್ಟು ಸುಲಭವಲ್ಲ! ತಯಾರಿಯಿಲ್ಲದೆ ಹೋದರೆ ಬಹಳ ಕಷ್ಟ! ಹಾಗಾಗಿ ವಾರಾಂತ್ಯದ ರಜೆಗಳಲ್ಲಿ ನಡೆಯಲು ಶುರು ಮಾಡಿದೆವು. ೩ ಘಂಟೆಗಳ ನಡಿಗೆಯಿಂದ ಪ್ರಾರಂಭಿಸಿ ೯  – ೧೦  ಘಂಟೆಗಳ ಕಾಲ ನಡೆಯುವಷ್ಟು ನಮ್ಮ ಕಾಲುಗಳಿಗೆ ಶಕ್ತಿ ಬಂತು. ಆತ್ಮಬಲ ಹೆಚ್ಚಿತು. Altitude  sickness ನಮ್ಮ ಕೈಲಿಲ್ಲ, ಅದು ದೇಹಪ್ರಕೃತಿಗೆ ಬಿಟ್ಟದ್ದು. ಆದರೆ ೪ ದಿನದ ನಡಿಗೆಯನ್ನು ಸಂಭಾಳಿಸಬಹುದೆಂಬ ಧೈರ್ಯ ಬಂತು.

ಆಗಸ್ಟ್ ೨೫ ನಾವು ಕುಸ್ಕೋ ನಗರವನ್ನು ತಲುಪಿದೆವು. ೩೩೯೯ ಮೀಟರ್ ಎತ್ತರದಲ್ಲಿರುವ ಈ ನಗರಕ್ಕೆ ಬಂದಿಳಿದ ಸ್ವಲ್ಪ ಹೊತ್ತಿನ್ಲಲಿ altitude ಅನುಭವವಾಗತೊಡಗಿತು – ತಲೆನೋವು, ಓಕರಿಕೆ, ಹಸಿವಾಗದಿರುವುದು, ಇತ್ಯಾದಿ. Diamox ಎಂಬ ಮಾತ್ರೆ ಈ ಅನುಭವಗಳನ್ನು ಹತೋಟಿಯಲ್ಲಿಡಲು ಬಹಳ ಉಪಯುಕ್ತ. ನಾನು ಆನಂದ್ ಈ ಮಾತ್ರೆಯನ್ನು (ಅರ್ಧ ಮಾತ್ರೆ) ದಿನಾ ತೆಗೆದುಕೊಳ್ಳಲು ಪ್ರಾರಂಭಿಸಿದೆವು. ನನ್ನ ಮಕ್ಕಳು ವಯಸ್ಸಿನಲ್ಲಿ ಚಿಕ್ಕವರಾದ್ದರಿಂದ ಅವರಿಗೆ ಮಾತ್ರೆಯ ಆವಶ್ಯಕತೆ ಬರಲಿಲ್ಲ. ಬರೀ ವಯಸ್ಸಲ್ಲ, ದೇಹಪ್ರಕೃತಿಯೂ ಇದಕ್ಕೆ ಕಾರಣ. ಕೆಲವರಿಗೆ ಈ ಅನುಭವವಾಗುವುದೇ ಇಲ್ಲ, ಕೆಲವರಿಗೆ ಸ್ವಲ್ಪ ಗೊತ್ತಾಗತ್ತೆ, ಮತ್ತೆ ಕೆಲವರಿಗೆ ಬಹಳಷ್ಟು ಕಷ್ಟವಾಗುತ್ತದೆ.

೨೫ರ ಸಾಯಂಕಾಲ ನಮ್ಮ ಗೈಡ್ ಎದ್ವಿನ್ಡ್ ನಮ್ಮನ್ನು ೫ ಘಂಟೆಗೆ ನಾವಿಳಿದುಕೊಂಡಿದ್ದ ಹೋಟೆಲಿನ ಲಾಬಿಯಲ್ಲಿ ಸಿಗಲು ತಿಳಿಸಿದ್ದರು. ಅಲ್ಲಿಗೆ ಹೋದಾಗ ನಮ್ಮ ಜೊತೆ ಈ ಪ್ರಯಾಣವನ್ನು ಮಾಡುವ ಮಿಕ್ಕ ೧೨ ಜನರನ್ನು ಸಂಧಿಸಿದೆವು. ಇಂಗ್ಲೆಂಡಿನ ಹಲವಾರು ಭಾಗಗಳಿಂದ ಬಂದ ಎಲ್ಲರ ಪರಿಚಯವಾದ ಮೇಲೆ, ಎದ್ವಿನ್ಡ್ ನಮ್ಮ ಪ್ರವಾಸದ ವಿವರಗಳನ್ನು ಸವಿಸ್ತಾರವಾಗಿ ತಿಳಿಸಿದರು

ಮುಂಬರುವ ೪ ದಿನಗಳ ದಿನಚರಿ – ಪ್ರತಿ ದಿನ ೬ ಘಂಟೆಗೆ ಏಳುವುದು. ಒಂದು ಬೋಗಣಿ ನೀರಲ್ಲಿ ಹಲ್ಲು ಉಜ್ಜಿ ಮುಖ ತೊಳೆಯುವುದು, ನಂತರ ಬಿಸಿ ಬಿಸಿ ಕಾಫೀ ಅಥವಾ ಟೀ. ೭ ಘಂಟೆಗೆ ತಿಂಡಿ ತಿಂದು, ಪ್ರಯಾಣಕ್ಕೆ ಬೇಕಾಗುವ ನೀರು ಮತ್ತು ಕೆಲವು ಉಪಾಹಾರಗಳನ್ನು (ಸೀರಿಯಲ್ ಬಾರ್ಸ್, ಹಣ್ಣು, ಚಾಕಲೇಟ್ ಇತ್ಯಾದಿ) ತೆಗೆದುಕೊಂಡು ನಡಿಗೆ ಶುರು. ಮಧ್ಯಾಹ್ನ ೧ ರಿಂದ ೨ ರ ನಡುವೆ ಊಟ, ಮತ್ತೆ ನಡಿಗೆ, ಸಾಯಂಕಾಲ ೪ ರಿಂದ ೫ ರೊಳಗೆ ಮುಂದಿನ campsite ತಲುಪುವುದು. ಅಲ್ಲಿ ರಾತ್ರಿ ಊಟ ಮತ್ತು ನಿದ್ದೆ. 

ಎದ್ವಿನ್ಡ್ ನಮ್ಮ ಹಾದಿಯ ನಕ್ಷೆಯನ್ನು ತೋರಿಸಿ, ಪ್ರತಿದಿನ ಎಷ್ಟು ನಡೆಯಬೇಕು, ಎಲ್ಲಿ ಇಳಿದುಕೊಳ್ಳುವುದು, ಹೇಗೆ ಈ ಕಷ್ಟಕರವಾದ ಪ್ರಯಾಣವನ್ನು ಸವೆಸಬಹುದು ಎಂದು ಬಹಳಷ್ಟು ಮಾಹಿತಿಯನ್ನು ಕೊಟ್ಟು, ೨೭ರ ಬೆಳಿಗ್ಗೆ  ೭ ಘಂಟೆಗೆ ನಾವೆಲ್ಲಾ ತಯಾರಾಗಿರಬೇಕೆಂದು ತಿಳಿಸಿ ಹೊರಟರು.

೨೬ ಆಗಸ್ಟ್ ನಾವು ಕುಸ್ಕೋ ನಗರದ ಇಂಕಾ ಸ್ಥಳಗಳಿಗೆ ಮತ್ತು ಸಂಗ್ರಹಾಲಯಕ್ಕೆ ಭೆಟ್ಟಿ ಕೊಟ್ಟೆವು. ಹಾಗೇ ಕುಸ್ಕೋ ನಗರದ ಮಾರುಕಟ್ಟೆ ಮತ್ತು ಇತರ ಪ್ರಮುಖ ಬೀದಿಗಳಲ್ಲಿ ಸುತ್ತಾಡಿ, ಮುಂದಿನ ದಿನದ ತಯಾರಿ ನಡೆಸಿ, ಊಟ ಮುಗಿಸಿ ಮಲಗಿದೆವು.

ಇಂಕಾ ಟ್ರೈಲ್ – ಡೇ ೧ (೩೩೯೯ – ೩೦೦೦ ಮೀಟರ್ ಎತ್ತರ, ೧೫ ಕಿಮಿ):

ಬೆಳಿಗ್ಗೆ ೬ ಘಂಟೆಗೆ ತಿಂಡಿ ಮುಗಿಸಿ, ೭ ಘಂಟೆಗೆ ನಾವು ೧೬ ಜನ, ನಮ್ಮ ಗೈಡ್ ಎದ್ವಿನ್ಡ್ ಜೊತೆಗೆ ಒಂದು ಬಸ್ ಹತ್ತಿದೆವು. ಸುಮಾರು ಒಂದು ಘಂಟೆಯ ಪ್ರಯಾಣವಾದಮೇಲೆ ಬಸ್ ನಿಲ್ಲಿಸಿ ನಮ್ಮೊಂದಿಗೆ ಬರುವ ಇನ್ನೊಬ್ಬ ಗೈಡ್ ಮತ್ತು ಸುಮಾರು ೨೦ ಜನ ಸಹಾಯಕರನ್ನು ಹತ್ತಿಸಿಕೊಂಡು, ಮತ್ತೆರಡು ಘಂಟೆ ಪ್ರಯಾಣದ ನಂತರ KM82 ತಲುಪಿದೆವು.

ಇಲ್ಲಿ ನಮ್ಮ ಸಹಾಯಕರ ಬಗ್ಗೆ ಕೆಲವು ಮಾಹಿತಿ ಕೊಡುವುದು ಅತ್ಯಗತ್ಯ.

ನಡೆಯುವ ೧೬ ಮಂದಿಗೆ, ೨ ಗೈಡ್ಸ್ ಮತ್ತೆ ಸುಮಾರು ೨೦ ಜನ ಸಹಾಯಕರು. ಇವರು ನಮ್ಮ ದಿನ ನಿತ್ಯದ ಆವಶ್ಯಕತೆಗಳನ್ನೆಲ್ಲಾ ಚಾಚೂ ತಪ್ಪದೆ ಪೂರೈಸಿದರು! ಅಡಿಗೆ ಮಾಡುವವರು, ಅವರಿಗೆ ಸಹಾಯ ಮಾಡುವವರು, ಟೆಂಟ್-ಗಳನ್ನು ಸಿದ್ಧಗೊಳಿಸುವವರು, ಪೋರ್ಟಬಲ್ ಟಾಯ್ಲೆಟ್ಟುಗಳನ್ನು ತೊಳೆದು ಶುಚಿಗೊಳಿಸುವುದು , ಊಟ ಬಡಿಸುವುದು,  ಹೀಗೆ ಹಲವು ಹತ್ತಾರು ಕೆಲಸಗಳನ್ನು ನಗುಮೊಗದಿಂದ ಮಾಡುವರು. ಇದಲ್ಲದೆ ಪ್ರತಿದಿನ ನಾವೆಲ್ಲಾ ಹೊರಟ ನಂತರ, ಟೆಂಟ್-ಗಳನ್ನೆಲ್ಲಾ ತೆಗೆದು, ಮಡಿಚಿ, ಅಡಿಗೆ ಸಾಮಗ್ರಿಗಳನ್ನೆಲ್ಲ ಒಟ್ಟುಗೂಡಿಸಿ, ನಮ್ಮ ೪ – ೫ ದಿನದ ಬಟ್ಟೆಗಳು ಮತ್ತು ಸ್ಲೀಪಿಂಗ್ ಬ್ಯಾಗ್-ಗಳಿದ್ದ (೭ ಕಿಲೋ) ಚೀಲಗಳನ್ನು ಹೊತ್ತು, ನಾವು ಹೋಗುವ ಹಾದಿಯೆಲ್ಲೇ, ನಮಗಿಂತ ಬೇಗ ಹೋಗಿ, ಮಧ್ಯಾಹ್ನದ ಕ್ಯಾಂಪ್ ಸೈಟ್-ನಲ್ಲಿ ಅಡಿಗೆಗೆ ಮತ್ತೆ ಎಲ್ಲ ಸಾಮಗ್ರಿಗಳನ್ನೂ ಅಣಿಮಾಡಿಕೊಂಡು, ನಮಗೆ ಅಡಿಗೆ ಮಾಡಿ, ಬಡಿಸಿ, ತಾವೂ ಊಟ ಮಾಡಿ, ಮತ್ತೆ ಎಲ್ಲವನ್ನೂ ಹೊತ್ತು ರಾತ್ರಿಯ campsite ತಲುಪಿ, ಎಲ್ಲರ ಟೆಂಟ್ ಹಾಕಿ, ನಮ್ಮ ಚೀಲಗಳನ್ನು ಇಟ್ಟು, ಮತ್ತೆ ರಾತ್ರಿಯ ಅಡಿಗೆ ಮಾಡುತ್ತಿದ್ದರು! ಅವರಿಲ್ಲದಿದ್ದರೆ ಈ ರೀತಿಯ ಪ್ರಯಾಣಮಾಡುವುದು ಅಸಾಧ್ಯವೆಂದೇ ಹೇಳಬಹುದು!

KM82 – ಇದು ನಮ್ಮ ಪ್ರಯಾಣದ ಮೊದಲ ಘಟ್ಟ. ೧೦.೩೦ ಹೊತ್ತಿಗೆ ನಾವೆಲ್ಲಾ ನಮ್ಮ ಪ್ರಯಾಣ ಪ್ರಾರಂಭಿಸಿದೆವು. ಮುಂದೆ ಸಿಕ್ಕಿದ ಚೆಕ್-ಪೋಸ್ಟ್-ನಲ್ಲಿ ನಮ್ಮ ಪಾಸ್-ಪೋರ್ಟ್ ತಪಾಸಣೆಯಾಯಿತು. ಮೊದಲ ದಿನದ ಹಾದಿ ಸ್ವಲ್ಪ ಸುಲಭವಾಗಿತ್ತು. ಹಾಗೇ ನಮ್ಮಲ್ಲಿ ಬಹಳ ಹುರುಪೂ ಇತ್ತು. ೧೬ ಜನರೂ ಮಾತಾಡಿಕೊಂಡು, “ I Spy..”, “word building” ಆಟಗಳನ್ನು ಆಡಿಕೊಂಡು ಹೊರಟೆವು. ಪರಿಚಯ ಸ್ನೇಹವಾಗಲು ಈ ಹಾದಿ ಅನುವುಮಾಡಿಕೊಟ್ಟಿತು ಅಂತಲೂ ಹೇಳಬಹುದು. ತಗ್ಗು ದಿಣ್ಣೆಗಳಿದ್ದ ಈ ಹಾದಿಯನ್ನು ಎಲ್ಲರೂ ಕಷ್ಟಪಡದೆ ಮುಗಿಸಿದೆವು. ಸುಮಾರು ೬ ಘಂಟೆಯ ಹೊತ್ತಿಗೆ “ವೈಲಬಂಬ” ಕ್ಯಾಂಪ್-ಸೈಟ್ ತಲುಪಿದೆವು. ಬಿಸಿ ಕಾಫಿ ಟೀ ನಮ್ಮನ್ನು ಕಾದಿತ್ತು. ಮೊದಲೇ ಹೇಳಿದಂತೆ ನಮ್ಮ ಸಹಾಯಕರು ಆಗಲೇ ಕ್ಯಾಂಪ್-ಸೈಟ್ ತಲುಪಿ ಎಲ್ಲ ವ್ಯವಸ್ಥೆಮಾಡಿದ್ದರು.

ಕಾಫೀ ಟೀ ಮುಗಿಸಿ ನಮ್ಮ ಟೆಂಟು ಗಳಲ್ಲಿ ಸೇರಿಕೊಂಡೆವು. ಇಬ್ಬರು ಮಲಗಬಹುದಾದ ಈ ಟೆಂಟ್-ಗಳು ಅಷ್ಟೇನೂ ದೊಡ್ಡದಿರುವುದಿಲ್ಲ. ಸ್ಲೀಪಿಂಗ್ ಬ್ಯಾಗ್ ಹಾಕಿ, ನಮ್ಮ ಬ್ಯಾಗ್ ಗಳನ್ನೂ ಇಟ್ಟರೆ, ಮಗ್ಗುಲು ಬದಲಿಸಲು ಸ್ವಲ್ಪ ಜಾಗವಿರುತ್ತದೆ ಅಷ್ಟೇ! ಅಂತಹ ಒಂದು ಟೆಂಟ್-ನಲ್ಲಿ ನಮ್ಮ ಸಾಮಗ್ರಿಗಳನ್ನು ಅಣಿಮಾಡಿಕೊಂಡೆವು. ಇಂತಹ ಚಾರಣಗಳಲ್ಲಿ ಸ್ನಾನದ ವ್ಯವಸ್ಥೆ ಇರುವುದಿಲ್ಲ. ವೆಟ್ ವೈಪ್ಸ್ ಉಪಯೋಗಿಸಿ ಮೈ ಒರೆಸಿಕೊಳ್ಳಬೇಕು ಅಷ್ಟೇ. ಅಂತೂ ಸ್ನಾನ ಮಾಡಿ ಬಟ್ಟೆ ಬದಲಾಯಿಸುವ ಹೊತ್ತಿಗೆ ಊಟಕ್ಕೆ ಕರೆ ಬಂತು. ಬಿಸಿ ಬಿಸಿ ಸೂಪ್, ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟ ಮತ್ತು ಕಾಫಿ ಟೀ. ರುಚಿಕರವಾದ ಮತ್ತು ಪೌಷ್ಟಿಕವಾದ ಆಹಾರ. ವೀಗನ್ ಊಟ ಕೂಡ ಇತ್ತು (ಮೊದಲೇ ಹೇಳಿದ್ದರಿಂದ). ಊಟದ ನಂತರ ಸ್ಲೀಪಿಂಗ್ ಬ್ಯಾಗ್ ಒಳಗೆ ತೂರಿ ನಿದ್ದೆ!

ಇಂಕಾ ಟ್ರೈಲ್ – ಡೇ ೨ (೩೦೦೦ – ೪೨೧೩ – ೪೫೦೮ ಮೀಟರ್ ಎತ್ತರ, ೧೨ ಕಿಮಿ):

ಇಂಕಾ ಟ್ರೈಲ್ – ಡೇ ೨ – (೩೦೦೦ – ೪೨೧೩ – ೪೫೦೮ ಮೀಟರ್ಸ್) – ೧೨ ಕಿಲೋಮೀಟರ್ಸ್ – ಮತ್ತೆ ೬ಕ್ಕೆ ಎದ್ದು, ೭ಕ್ಕೆ ತಯಾರಾಗಿ ನಡೆಯಲು ಶುರು ಮಾಡಿದೆವು. ಇಂದು ಅತಿ ಕಷ್ಟದ ದಿನ ಎಂಬುದರ ಅರಿವು ಎಲ್ಲರಿಗೂ ಇತ್ತು. ಈ ದಿನ, ನಮ್ಮ ಚಾರಣದ ಉತ್ತುಂಗಕ್ಕೇರಿ (highest point – “ಡೆಡ್ ವಿಮೆನ್ ಪಾಸ್”), ಇಳಿಯುವ ದಿನ! ಸುಮಾರು ೬೦೦೦ ಮೆಟ್ಟಿಲುಗಳನ್ನು ಅಷ್ಟು ಎತ್ತರದಲ್ಲಿ (altitude) ಹತ್ತುವುದು ಸುಲಭವಾಗಿರಲಿಲ್ಲ! ಆಮ್ಲಜನಕದ ವಿರಳತೆಯಿಂದ ಉಸಿರಾಡಲೇ ಕಷ್ಟವಾಗುವ ವಾತಾವರಣದಲ್ಲಿ ಈ ಹಾದಿ ಸವೆಸಲು ಕಷ್ಟವಿತ್ತು. ಗುಂಪಿನಲ್ಲಿದ್ದ ಕೆಲವು ಸದೃಢರು ಸರಾಗವಾಗಿ ನಡೆದರೂ. ಮಿಕ್ಕವರೆಲ್ಲ ನಿಧಾನವಾಗಿ, ನಮಗೆ ಸರಿಹೋಗುವ ವೇಗದಲ್ಲಿ, ಅಲ್ಲಲ್ಲಿ ವಿರಮಿಸುತ್ತಾ ಉತ್ತುಂಗವನ್ನು ತಲುಪಿದೆವು. ವಿರಮಿಸಿದಾಗ ಸುತ್ತಲೂ ಕಣ್ಣಾಡಿಸಿದರೆ, ದೂರ ದೂರಕ್ಕೆ ಕಾಣುವ ಆಂಡಿಸ್ ಪರ್ವತ ಶ್ರೇಣಿ, ರುದ್ರ ರಮಣೀಯ! ಪ್ರತಿ ತಿರುವೂ ಹೊಸ ನೋಟ ಹೊಸ ವಿಸ್ಮಯ! ನಮ್ಮ ಗುರಿ ತಲುಪಿದಾಗ ಆದ ಆ ಅನುಭವ, ಅನಿಸಿಕೆ, ಭಾವೋದ್ವೇಗ ವರ್ಣಿಸಲಸಾಧ್ಯ! ಒಂದು ರೀತಿಯ ಸಾರ್ಥಕತೆ, ವಿನಮ್ರತೆ ಮನಸ್ಸನ್ನು ಮತ್ತು ಕಣ್ಣನ್ನು ತುಂಬಿಸಿತ್ತು. ಹಲವಾರು ಫೋಟೋಗಳನ್ನು ಕ್ಲಿಕ್ಕಿಸಿ, ಪರ್ವತವನ್ನಿಳಿಯಲು ಪ್ರಾರಂಭಿಸಿದೆವು. “ಪಕಾಯ್ಮಯೋ” ಕ್ಯಾಂಪ್-ಸೈಟ್ ತಲಪುವ ಹೊತ್ತಿಗೆ ಎಲ್ಲರೂ ಸುಸ್ತಾಗಿದ್ದೆವು. ಆದರೆ ಬಹಳ ಕಠಿಣವಾದ ದಿನವನ್ನು ಮುಗಿಸಿದ ನಿರಾಳವಿತ್ತು ಎಲ್ಲರ ಮನದಲ್ಲಿ.

ಇಂಕಾ ಟ್ರೈಲ್ – ಡೇ ೩ – (೪೫೦೮ – ೩೫೮೦ ಮೀಟರ್ ಎತ್ತರ, ೧೨ ಕಿಮಿ):

ಈ ದಿನ ಹಾದಿ ಬಹಳ ಆಸಕ್ತಿದಾಯಕವಾಗಿತ್ತು. ಬಹಳಷ್ಟು ಇಂಕಾ ವಸಾಹತುಗಳನ್ನು ನೋಡಿದೆವು. ನಮ್ಮ ಗೈಡ್ ಎದ್ವಿನ್ಡ್, ಇಂಕಾ ಜನಾಂಗದ ರಾಜಕೀಯ, ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳನ್ನು ಬಹಳ ವಿವರವಾಗಿ, ಮನಮುಟ್ಟುವಂತೆ ವಿವರಿಸಿದರು. ಆಗಿನ ಕಾಲದಲ್ಲಿ ಕಲ್ಲಿನಿಂದ ಕಟ್ಟಿದ ಗೋಡೆಗಳು, ಮನೆಗಳು, ಬಹಳಷ್ಟು ಭೂಕಂಪಗಳನ್ನು ಎದುರಿಸಿಯೂ, ಇನ್ನೂ ಸ್ಥಿರವಾಗಿ ನಿಂತಿರುವುದು ಮಹದಾಶ್ಚರ್ಯ ಮತ್ತು ಇಂಕಾ ಜನಾಂಗದ ಕೌಶಲತೆಯನ್ನು ಎತ್ತಿ ತೋರಿಸುತ್ತದೆ. ಹಣದ ವಿನಿಮಯಕ್ಕಿಂತಾ ವಸ್ತುಗಳ ವಿನಿಮಯವೇ ಜಾಸ್ತಿ ಪ್ರಚಲಿತವಿತ್ತು. ಲಿಖಿತ ಭಾಷೆ ಇಲ್ಲದ್ದರಿಂದ, ದಾರದ ಗಂಟುಗಳಿಂದ ಲೆಖ್ಖವಿಡುತ್ತಿದ್ದರು ಮತ್ತು ಸಂದೇಶವನ್ನೂ ವಿನಿಮಯಿಸುತ್ತಿದ್ದರು ಎಂಬುದು ಕುತೂಹಲಹರ. ಈ ಐತಿಹಾಸಿಕ ಸ್ಥಳಗಳ ಮೂಲಕ ಹಾದು, ಸಂಜೆಯ ಹೊತ್ತಿಗೆ ಆ ದಿನದ ಕ್ಯಾಂಪ್-ಸೈಟ್ “ಪುಯುಪುಕಮಾರ್ಕ” ತಲುಪಿದೆವು.  

ಇಂಕಾ ಟ್ರೈಲ್ – ಡೇ ೪ (೩೫೮೦ – ೨೪೩೦ ಮೀಟರ್ ಎತ್ತರ, ೧೦ ಕಿಮಿ):

ಕಡೆಯ ದಿನ! ಸುಮಾರು ೫೦೦೦ ಮೆಟ್ಟಿಲುಗಳನ್ನು ಹತ್ತಿಳಿದೆವು. ಇಳಿಯುತ್ತಿದ್ದರಿಂದ ಉಸಿರಾಟ ಸ್ವಲ್ಪ ಸರಾಗವಾಗಿತ್ತು. ಆದರೆ ೩ ದಿನದ ಸತತ ನಡಿಗೆಯಿಂದ ಕಾಲುಗಳು ಸೋಲುತ್ತಿದ್ದವು! ಆದರೆ ಪ್ರಸಿದ್ಧ ಮಾಚು-ಪೀಕ್ಚುವನ್ನು ಕಣ್ಣಾರೆ ನೋಡುವ ಸಮಯ ಹತ್ತಿರವಾಗುತ್ತಿದೆಯೆಂಬ ಉತ್ಸಾಹ, ಸಂತೋಷ ಎಲ್ಲರಲ್ಲೂ. ಕೆಲವು ಘಂಟೆಗಳ ಕಾಲ ಕ್ಲೌಡ್ ಫಾರೆಸ್ಟ್ ಮೂಲಕ ನಡೆದಾಗ ಅಲ್ಲಿನ ವೈವಿಧ್ಯತೆಯನ್ನು ನೋಡುವ ಭಾಗ್ಯ ನಮ್ಮದಾಯಿತು. ಪಾಚಿ (moss) ಎಲ್ಲೆಲ್ಲೂ! ಅದೂ ಹಿಂದೆಂದೂ ನೋಡದ ಬಣ್ಣಗಳಲ್ಲಿ! ತಿಳಿ ಹಳದಿ ಇಂದ ಕಂದು ಬಣ್ಣದವರೆಗಿನ ಎಲ್ಲ ಬಣ್ಣಗಳೂ ಕಂಡವು! ಬಣ್ಣ ಬಣ್ಣದ ಆರ್ಕಿಡ್ ಗಳು ಕಣ್ಣು ಸೆಳೆದವು! ಹಾಗೆ ಥರಾವರೀ ಪಕ್ಷಿಗಳ ಚಿಲಿಪಿಲಿ ಮನಸ್ಸಿಗೆ ಆಹ್ಲಾದತಂದಿತು.  ಈ ದಿನಕ್ಕಾಗಿ ಕಾಯುತ್ತಿದ್ದ ನಾವೆಲ್ಲರೂ ಆನಂದದಿಂದ ಹೆಜ್ಜೆ ಹಾಕುತ್ತಾ “ಇಂಟಿ ಪುಂಕು” (sun gate ) ತಲುಪಿದೆವು. ಎದುರಿನ ಬೆಟ್ಟದಲ್ಲಿದ್ದ ಮಾಚು-ಪೀಕ್ಚು ರಮಣೀಯವಾಗಿ ಕಾಣಿಸುತ್ತಿತ್ತು. ಇಂಟರ್ನೆಟ್ ನಲ್ಲಿ ಸಿಗುವ ಮಾಚು-ಪೀಕ್ಚು ವಿನ ಬಹಳಷ್ಟು ಚಿತ್ರಗಳು ಈ ಜಾಗದಿಂದ ತೆಗೆದವೇ! ಮತ್ತೆ ಇಲ್ಲಿ ಬಹಳಷ್ಟು ಫೋಟೋಗಳನ್ನು ಕ್ಲಿಕ್ಕ್ಸಿದೆವು. ಈ ಅಸದಳ ದೃಶ್ಯವನ್ನು ಕಣ್ಣುತುಂಬಿಸಿಕೊಂಡು, ಮನಸ್ಸಿಲ್ಲದ ಮನಸ್ಸಿನಲ್ಲಿ ಆ ಜಾಗದಿಂದ ಹೊರಟೆವು, ಯಾಕಂದ್ರೆ, ಕೆಳಗೆ ೩ ಘಂಟೆಯ ಬಸ್ ಹತ್ತಬೇಕಿತ್ತು ಮತ್ತು ನಾವು ಇನ್ನೂ ಸುಮಾರು ೬ ಕಿಲೋಮೀಟರು ನಡೆಯಬೇಕಿತ್ತು! ಮತ್ತೆ ಸಾವಿರಾರು ಮೆಟ್ಟಿಲುಗಳನ್ನು ಇಳಿದು, ಅಂತೂ ಸರಿಯಾದ ಸಮಯಕ್ಕೆ ಬಸ್ ಹತ್ತಿ ಹೋಟೆಲ್ ತಲುಪಿದೆವು. ನಾಲ್ಕು ದಿನದ ನಂತರ  ಸ್ನಾನ  ಮಾಡಲು ಶವರ್, ಮಲಗಲು ಸರಿಯಾದ ಹಾಸಿಗೆ ಸಿಕ್ಕಿತು. ವಾಟ್ ಅ ಪ್ರಿವಿಲೇಜ್!

ಇಂಕಾ ಟ್ರೈಲ್ – ಡೇ ೫:

ಈ ದಿನ ಹೋಟೆಲಿನಿಂದ ಬಸ್ಸಿನಲ್ಲಿ ಮ್ಯಾಚು-ಪೀಕ್ಚು ತಲುಪಿದೆವು. ನಮ್ಮ ಗೈಡ್ ನಮಗಾಗಲೇ ನಮ್ಮ ಪ್ರವೇಶದ ಸಮಯವನ್ನು ಕಾದಿರಿಸಿದ್ದರು. ಒಳಗೆ ಹೋದರೆ ಇಂಕಾ ಜನಾಂಗದ ಅತಿ ದೊಡ್ಡ ವಸಾಹತು ನಮ್ಮ ಮುಂದೆ ವಿಜೃಂಭಿಸುತ್ತಿತ್ತು. ಗೈಡ್ ಎದ್ವಿನ್ಡ್ ಈ ಸ್ಥಳದ ವಿಷಯಗಳನ್ನು ಸವಿಸ್ತಾರವಾಗಿ ವಿವರಿಸಿ, ಆಗಿನ ರಾಜರ ಅರಮನೆ, ದೇವಸ್ಥಾನಗಳು, ಮನೆಗಳು, ಅವರಿದ್ದ ರೀತಿ, ನೀತಿಗಳನ್ನು ತಿಳಿಸಿದರು. ನಮ್ಮ ಪ್ರಶ್ನೆಗಳಿಗೆಲ್ಲ ಸಮರ್ಪಕವಾಗಿ ಉತ್ತರಿಸಿದರು. ಮಾಚು – ಪೀಕ್ಚೂವನ್ನು ಕಣ್ತುಂಬಿಸಿಕೊಂಡು ಅಲ್ಲಿಂದ ಹೊರಟೆವು. ಮಧ್ಯಾಹ್ನದ ಊಟವನ್ನು ಮಾಚು – ಪೀಕ್ಚೂ ಊರಿನಲ್ಲಿ ಮುಗಿಸಿ, ೩ ಘಂಟೆಗೆ ಟ್ರೈನ್ ಹತ್ತಿ “ಒಲಂಟಾಯ್ತೊಂಬಾ” ತಲುಪಿದೆವು. ಗಾಜಿನ ಛಾವಣಿ ಮತ್ತು ದೊಡ್ಡ ದೊಡ್ಡ ಗಾಜಿನ ಕಿಟಕಿಯ ಟ್ರೈನ್ ನಲ್ಲಿ ಹಿಂದಿರುಗುವಾಗ ಪ್ರಕೃತಿ ಸೌಂದರ್ಯ ಅತಿ ರಮಣೀಯ! ಟ್ರೈನ್ ಇಳಿದು ಬಸ್ ಹತ್ತಿ ೩ ಘಂಟೆ ಪ್ರಯಾಣ ಮಾಡಿ ಕುಸ್ಕೋ ನಗರವನ್ನು ತಲುಪಿದೆವು. ಚಾರಣ ಮುಗಿಸಿದ ಸಂತಸದೊಂದಿಗೆ, ಈ ೫ ದಿನ ಜೊತೆಯಾದ ಸ್ನೇಹಿತರನ್ನು ಬೀಳ್ಕೊಡುವ ಬೇಸರವೂ ಇತ್ತು! ಎಲ್ಲರಿಗೂ ವಿದಾಯ ಹೇಳಿ ಮನೆಗೆ ಮರಳಿದೆವು.

ಮಂಗಳ:

ಒಟ್ಟಿನಲ್ಲಿ ಒಂದು ಅವಿಸ್ಮರಣೀಯ ಅನುಭವ! ಸಮಯ ಮಾಡಿಕೊಂಡು ಖಂಡಿತ ಮಾಚು – ಪೀಕ್ಚೂವಿಗೆ ಭೆಟ್ಟಿಕೊಡಿ. ನಡೆಯುವ ಇಚ್ಛೆಯಿಲ್ಲದಿದ್ದರೆ ಟ್ರೈನ್ ನಲ್ಲಿ ಅನಾಯಾಸವಾಗಿ ಹೋಗಿ ಬರಬಹುದು. ಹಾಗೇ ಪೆರುವಿನಲ್ಲಿ ನೋಡಿವಂತಹ ಇನ್ನೂ ಬೇಕಾದಷ್ಟು ಜಾಗಗಳಿವೆ – ಲಿಮಾ (ರಾಜಧಾನಿ), ಅರಿಕ್ವಿಪ, ಕೊಲ್ಕಾ ಕಣಿವೆ, ಲೇಕ್ ಟಿಟಿಕಾಕಾ, ಎಲ್ಲಾ ನೋಡುವಂತಹ ಸ್ಥಳಗಳು. ೩ ಅಥವಾ ೪ ವಾರ ಆರಾಮಾಗಿ ಕಳಿಯಬಹುದು.  ಒಮ್ಮೆ ಹೋಗಿ ಬನ್ನಿ.