ಎರಡು ದಡ

ಎಲ್ಲರಿಗೂ ನಮಸ್ಕಾರ
ಈ ವಾರದ ಸಂಚಿಕೆಯಲ್ಲಿ ಚೇತನ್ ಅವರ ಸ್ವಂತ ಲೇಖನ ಇದೆ
ದಯವಿಟ್ಟು ಓದಿ ಪ್ರತಿಕ್ರಿಯಿಸಿರಿ

———————————————————————————————————-

ಅಕ್ಕ

ನಾನು ಮತ್ತು ನನ್ನ ತಂಗಿ ಎಂದೂ ಊರು ಬಿಟ್ಟು ಆಚೆ ಹೋದವರೇ ಅಲ್ಲ , ಮಳೆಗಾಲದಲ್ಲಿ ನನ್ನಮ್ಮನ ಆರ್ಭಟಕ್ಕೋ ಬೇಸಿಗೆಯಲ್ಲಿ ಊರವರ ಆಗ್ರಹಕ್ಕೋ ನಮ್ಮ ಸಂಬಂಧಿಕರು ಒಂದೆರಡು ದಿನ ಬಂದು ಹೋಗುವುದು ಬಿಟ್ಟರೆ ಯಾರು ನಮ್ಮೊಂದಿಗಿದ್ದದ್ದು ಕಡಿಮೆಯೇ  ಅದರಲ್ಲೂ ನಮ್ಮಮನನ್ನು ನೋಡಿದ ನೆನಪು ಇಬ್ಬರಿಗೂ ಇಲ್ಲ ಆದರೂ ಅತಿ ಹೆಚ್ಚು ಮಳೆಯಾದ ಕಾಲದಲ್ಲಿ ನಮ್ಮ ಮನೆಯಿಂದ ಒಂದರ್ಧ ಮೈಲು ದೂರದಲ್ಲಿಯೇ ಹೋದಳೆಂದು ಊರ ಜನ ಮಾತನಾಡುವಾಗ ಕೇಳಿದ್ದು ನಮ್ಮ ಭಾಗ್ಯ, ಅವಳು ಹೀಗೆಲ್ಲ ಹೋದಾಗ ನಮ್ಮೂರಿನಿಂದ ಒಂದೆರಡು ಮೈಲು ದೂರದ ಗೊರೂರಿನ ರಾಮಸ್ವಾಮಪ್ಪ ಹೇಳಿದ ಮಾತನ್ನು ಮರೆಯದೆ ನೆನೆಸಿಕೊಳ್ಳುತ್ತಾರೆ ಹೇಮೆ ಹೋದರೆ ಸೀರೆಯ ಸೆರಿಗಿನಂತೆ ನಲಿಯುತ್ತಲೇ ಎಂದು ಹೌದು ಅವಳ ಹೆಸರು ಹೇಮೆ ಹೇಮಾವತಿ ನಾನೆಂದು ಅವಳನ್ನು ನೋಡದಿದ್ದರು ಅವಳ ಚೆಲುವಿನ ಬಗ್ಗೆ ನನ್ನ ಕಲ್ಪನೆಗೂ ರಾಮಸ್ವಾಮಪ್ಪನ ವರ್ಣನೆಗೂ ಹೇಚ್ಛೆನು ವ್ಯತ್ಯಾಸವಿಲ್ಲವೇನೋ.
ನನ್ನದೋ ಬರಿ ಕಲ್ಪನೆಗಳಲ್ಲೇ ತುಂಬಿದ ಬದುಕು ಮನೆಯ ಹಿಂಬಾಗಿಲಾಯಿತು ನಾನಾಯಿತು ಎಂದೇ ಬದುಕಿದವಳು ಕುರಿ ಕಾಯುವವರು , ದನಗಾಯಿಗಳು , ಊರಾಚೆ ತೋಟ ಮಾಡಿ ಅಡಿಕೆ ಅಯಲು ಬರುವವರೊಂದಿಗಷ್ಟೇ ನನ್ನ ಮಾತು ಒಡನಾಟ ಆದರೆ ನನ್ನ ತಂಗಿ ಹಾಗಲ್ಲ ಮನೆಯ ಮುಂಬಾಗಿಲಿನ ವ್ಯವಹಾರವೆಲ್ಲ ಅವಳದ್ದೇ ತುಂಬಾ ಬುದ್ದಿವಂತೆ ನನ್ನ ತಂಗಿ , ಊರ ಎಲ್ಲ ವ್ಯವಹಾರಗಳಲ್ಲೂ ಅವಳು ತೊಡಗಿ ಕೊಂಡೆ ಇರುತ್ತಾಳೆ ಊರಿಗೆ ಬರುವ ರಾಜಕಾರಣಿಗಳು , ಊರಿನ ಎಲ್ಲ ಜಗಳ ಸಂತೋಷ ಕೊಡುವ ಹಬ್ಬಗಳು ಎಲ್ಲದಕ್ಕೂ ಅವಳ ಸಾಕ್ಷಿಯೇ ಮುಖ್ಯ ಮತ್ತು ಅವಳಿಗೆ ಊರ ಜನ ಅಷ್ಟೇ ಗೌರವ ಕೊಡುತ್ತಾರೆ ಕೂಡ. ಅವಳ ತ್ಯಾಗಗಳೇ ಅವಳಿಗಿರುವ ಅಷ್ಟು ಗೌರವಕ್ಕೆ ಕಾರಣವೇನೋ ಊರಜನರ ಉಪಯೋಗಕ್ಕೆ ಮೀನು ಸಾಕಾಣಿಕೆಗೆ ಬೇಕೆಂದಾಗೆಲ್ಲ ತನ್ನ ಜಾಗವನ್ನು ಬಿಟ್ಟುಕೊಡುತ್ತಾಳೆ, ಯಾವುದೇ ಪ್ರತಿಮೆಯು ಅವಳ ಭೂಮಿಯಲ್ಲೇ ನಿಲ್ಲಬೇಕು, ಸಣ್ಣ ಪುಟ್ಟ ವ್ಯಾಪಾರ ಮಾಡುವವರಿಗೆ ಇವಳ ಮೆಟ್ಟಿಲೇ ಮುನ್ನುಡಿ ಹೀಗೆ ಹತ್ತು ಹಲವು ತ್ಯಾಗಗಳಿಲ್ಲದೆ ಜನ ಅವಳನ್ನು ಅಷ್ಟು ಗೌರವಿಸುವರೇ. ಎಷ್ಟಾದರೂ ನನ್ನ ತಂಗಿ ಅಲ್ಲವೇ , ಆದರೂ ಅವಳು ನಾನು ಮಾತನಾಡಿದ್ದು ಕಡಿಮೆಯೇ ಮಾತೆ ಆಡದೆ ದೂರದಲ್ಲಿ ನೋಡಿ ಸಂತೋಷ ಪಟ್ಟದ್ದೇ ಹೆಚ್ಚು , ಅವಳನ್ನು ನಮ್ಮೂರಿನ ಪಟೇಲರು ನೀನು ಬೆಳೆಯುವ ಚೇಣಿಯಿಂದ ಇನ್ನು ಚಾಪೆಯನ್ನು ಹೆಣೆಯುತ್ತಾರೆಯೇ , ದೊಡ್ಡ ಅರಳಿಮರದ ಕೆಳಗೆ ಕುಳಿತು ಜನ ಇನ್ನು ಹರಟೆ ಹೊಡೆಯುತ್ತಾರೆಯೇ , ಊರ ಮುಂದಿನ ಹನುಮಂತರಾಯನ ಗುಡಿಯಲ್ಲಿ ಮಕ್ಕಳು ಇನ್ನು ಕಣ್ಣ ಮುಚ್ಚಾಲೆ ಆಡುತ್ತಾರೆಯೇ ಎಂದೆಲ್ಲ ಕೇಳುವ ಆಶೆ. ನಾನಂತೊ ಮೂಗಿಗಿಂತ ಹೆಚ್ಚು ನಾನಾಯಿತು ನನ್ನ ಕೆಲಸವಾಯಿತು ಎಂದು ಇದ್ದುಬಿಟ್ಟವಳು , ನಮ್ಮ ಮನೆಯ ಹಿಂಬಾಗಿಲಿನಲ್ಲಿ
ಸಣ್ಣ ಮಕ್ಕಳು ಪಾಠ ಓದಿಕೊಂಡು ಓಡುವಾಗಲೋ , ಸಣ್ಣ ಪುಟ್ಟ ಮೋಟಾರು ಗಾಡಿಗಳು ಹೋದಾಗಲೂ ನೋಡಿ ಸಂತೋಷಪಟ್ಟವಳು ನನ್ನ ತಂಗಿಯಷ್ಟು ನಾನು ಬುದ್ದಿವಂತೆ ಅಲ್ಲದಿದ್ದರೂ ಅವಳು ನನ್ನ ತಂಗಿ ಅಲ್ಲವೇ …!!!
ತಂಗಿ
ನನ್ನ ಅಕ್ಕನಿಗೆ ಅಷ್ಟೇನೂ ಗೊತ್ತಾಗುವುದಿಲ್ಲ, ಬರಿ ಮುಂದಿನ ಬಾಗಿಲಲ್ಲಿದಕ್ಕೆ ನಂಗೆಲ್ಲವೂ ತಿಳಿದಿದೆ , ನಾನು ತುಂಬಾ ಬುದ್ದಿವಂತಳು ಯಾವಾಗ ಬೇಕಾದರೂ ನನ್ನಮ್ಮ ಹೇಮೆಯನ್ನು ಹತ್ತಿರದಿಂದ ನೋಡಬಹುದು ಎಂದುಕೊಂಡುಬಿಟ್ಟಿದಾಳೆ ನನ್ನ ಬೇಜಾರುಗಳನ್ನು ಯಾರಬಳಿ ಹೇಳಿಕೊಳ್ಳಲಿ ನನಗು ಅವಳಂತೆ ಹಿಂದಿನ ಬಾಗಿಲಲ್ಲೇ ಇರಬೇಕಾಗಿತ್ತು ಅನಿಸುತ್ತಲೇ ಇರುತ್ತದೆ , ಏನುಮಾಡುವುದು ನಮಗೆ ದೊರಕಿದ್ದು ನಮಗಲ್ಲವೇ..!!
ನನ್ನ ಜೀವನವೆಲ್ಲವನ್ನು ನಮ್ಮೂರಿನ ಬದುಕಿನ ಬೇರೆ ಬೇರೆ ಕಾಲಘಟ್ಟದಲ್ಲಿ ಆದ ಬದಲಾವಣೆಗಳನ್ನು ನೋಡಿಕೊಂಡೆ ಕಳೆದಿದ್ದೇನೆ, ಎತ್ತಿನಗಾಡಿಯಿಂದ ಶುರುವಾಗಿ ಟೆಂಪೋಗಳು, ಬಸ್ಸುಗಳು ಇತ್ತೀಚೆಗೆ ನಮ್ಮೂರಿನ ಜನರ ಬಳಿ ಅವರದೇ ವಾಹನಗಳನ್ನು ನೋಡಿದ್ದೇನೆ, ಜನರು ಜಾತ್ರೆ , ದೇವಾಸ್ಥಾನಗಳಿಗೆ ಹೋಗುತ್ತಿದ್ದವರು ಪಟ್ಟಣಗಳಿಗೆ ಮಾಲ್ಗಳಿಗೆ ಹೋಗುತ್ತಿದ್ದಾರೆ, ಹಿಂದೆ ನಮ್ಮೂರಿನ ಮದುವೆಗಳ ಮೆರವಣಿಗೆ ಹನುಮಂತರಾಯನ ಗುಡಿಯಿಂದ ಕೇಶವದೇವರ ದರ್ಶನಕ್ಕೆ ಹೋಗಿಬರುತಿದ್ದನ್ನು ನೋಡಿದವಳಿಗೆ ಇಂದು ರಾಜಕೀಯ ಭಾಷಣ ಮತ್ತು ಕಾರ್ಯಕ್ರಮಗಳನ್ನು ನೋಡುವ ಕೇಳುವಂತಾಗಿದೆ ಇದು ಬದುಕಿನ ಬೇಕಿರುವ ಬದಲಾವಣೆಗಳು ಎನ್ನುವ ತಿಳುವಳಿಕೆಯೂಬಂದಿದೆ. ಹಿಂದೆ ನಮ್ಮೂರಿನ ಪಟೇಲರು ನನ್ನ ಅಂಗಳದಲ್ಲಿ ಬೆಳೆದ ಚೇಣಿಯನ್ನು ಕುಯ್ದು ಮಲಗುವ ಚಾಪೆ, ಊಟದ ಚಾಪೆ ಮಾಡಲು ಚೇಣಿಯನ್ನು ಬಡಿಯುತಿದ್ದ ಒಂದೇ ಸಪ್ಪಳವನ್ನು ಕೇಳುತಿದ್ದವಳು ಇಂದು ಅಂಗಡಿ , ಬಸ್ ನಿಲ್ದಾಣಗಳಲ್ಲಿ ನಮ್ಮೂರಿನ ಜನರ ರಾಜಕೀಯ ಹರಟೆಗಳನ್ನು ಕೇಳುತಿದ್ದೇನೆ , ನಮ್ಮೂರಿನ ಜನ ಬುದ್ಧಿವಂತರಿದ್ದಾರೆ ಕಾಡು ಹರಟೆಯ ಜೊತೆಗೆ ಸಾಕಷ್ಟು ಪ್ರಗತಿಶೀಲ ಮಾತುಗಳನ್ನು ಆಡುತ್ತಾರೆ ಅದಕ್ಕಾಗಿಯೇ ದೇವಸ್ಥಾನಗಳ ಜೊತೆಗೆ ನಮ್ಮೂರಿನಲ್ಲಿ ಪ್ರತಿಮೆಗಳು ಬಂದಿರುವುದು. ಘಟ್ಟದ ಕೆಳಗೆ ಕಾರಂತಜ್ಜ ಎಂಬುವರು ಒಂದು ಮನೆಯ ಬಗ್ಗೆ ತಿಳಿಯಬೇಕಾದರೆ ಮನೆಯ ಹಿಂದಿನ ಬಾಗಿಲಿನಿಂದ ಹೋದರೆ ಹೆಚ್ಚು
ಹತ್ತಿರವಾಗಿ ತಿಳಿಯಲು ಸಾಧ್ಯ ಎನ್ನುತ್ತಿರುತ್ತಾರೆ ಎಂದು ನಮ್ಮೂರ ಶಾಲೆಯ ಮಕ್ಕಳು ಹೇಳುತ್ತಿರುತ್ತಾರೆ, ಆ ಮಟ್ಟಿಗೆ ನನ್ನ ಅಕ್ಕನೇ ಭಾಗ್ಯಶಾಲಿ.

ಹೊರನಾಡಿನ ಕನ್ನಡಿಗರು:  ಅಜ್ಜಿ – ಮೊಮ್ಮಗಳ ಸಂವಾದ; ವತ್ಸಲಾ ರಾಮಮೂರ್ತಿ ಬರೆದ ಲೇಖನ

ಸಮಸುಖಿ (ಸಮದುಃಖಿ) ಕನ್ನಡಿಗರಿಗೆ ಸಬ್ಸ್ಟಿಟ್ಯೂಟ್ ಸಂಪಾದಕನ ನಮಸ್ಕಾರಗಳು.  ಕೆಳಗೆ ಬರೆದಿರುವ ಸಂವಾದ ಬರಿಯ ಲೇಖಕಿಯದಲ್ಲ, ಅದು ನಮ್ಮಲ್ಲಿ ಅನೇಕರ ಜೀವನದಲ್ಲಿ ಒಮ್ಮೆ ಬರಬಹುದಾದ ಘಳಿಗೆ.  ಇದು ಬರಿಯ ಕನ್ನಡಿಗರಿಗೆ ಮಾತ್ರವಲ್ಲ, ಯಾವ ವಲಸಿಗರಿಗೂ ಬರಬಹುದಾದ ಪ್ರಶ್ನೆ. ಓದಿ, ನಿಮ್ಮ ಸ್ವಂತದ ಅಥವಾ ಕೇಳಿದ / ನೋಡಿದ ಅನುಭವವೇನಾದರೂ ಇದ್ದರೆ, ಹಂಚಿಕೊಳ್ಳಿ - ಸಂ. 
*****************************************
ನನ್ನ  ಮೊಮ್ಮಗಳು ನನ್ನನ್ನು ಒಂದು question ಕೇಳಿದಳು “ಅಜ್ಜಿ ನಾನು ಯಾರು? ನೀನು ಎಲ್ಲಿಂದ ಬಂದೆ?  ಯಾಕೆ ಬಂದಿ?”
ಅವಳಿಗೆ ಕೂಡಲೆ ಉತ್ತರ ಕೊಡಲು ಹೊಳೆಯಲ್ಲಿಲ್ಲ.  ತುಸು ತಡೆದು “ಮೊಮ್ಮಗಳೇ, ನಮ್ಮ ಚರಿತ್ರೆಯನ್ನು ಕೇಳುವಂತವಳಾಗು.”
“ಹಾಗಾದರೆ ಅಜ್ಜಮ್ಮ, ನಿಮ್ಮ ಊರು, ಸಂಸ್ಕೃತಿಯನ್ನು ವಿವರವಾಗಿ ತಿಳಿಸು” ಎಂಬುದಾಗಿ ಕೇಳಲು, ಕೆಳ ಕಂಡ ಕತೆ ಹೇಳಿದೆ.
“ನಾವು ಹೊರನಾಡಿನ ಕನ್ನಡಿಗರು.  ನಾವು ವಲಸೆ ಬಂದವರು.”

“ಹಾಗಾದರೆ ಬೆಂಗಳೂರಿನಿಂದ ಮುಂಬಯಿ, ಚೆನ್ನೈ ಮುಂತಾದ ಪ್ರದೇಶಕ್ಕೆ ಹೋಗುತ್ತಾರಲ್ಲ? ಅವರೆಲ್ಲಾ ವಲಸೆ ಹೋದವರೇ?”
“ಹೌದು ಬಂಗಾರಿ, ಅವರೊಬ್ಬರೇ ಅಲ್ಲ.  ಅಮೆರಿಕ, ಇಂಗ್ಲಂಡ್‌, ಇನ್ನೂ ಬೇರೆ  ಬೇರೆ ದೇಶಕ್ಕೆ ನಮ್ಮ ಕನ್ನಡನಾಡಿನಿಂದ ಹೋದವರೆಲ್ಲಾ ವಲಸೆ ಹೋದವರೇ.” 
“ಪರದೇಶಕ್ಕೆ ಕೆಲಸ ಹುಡಿಕಿಕೊಂಡು ಬಂದವರೇ ಹೆಚ್ಚು. ಕೆಲಸ ಸಿಕ್ಕಿದ ಮೇಲೆ ಮನೆ, ಸಂಸಾರ ಎಲ್ಲಾ ಮಾಡಿಯಾಯಿತು.”

“ಹಾಗಾದರೆ ನೀವೆಲ್ಲಾ ಸಂತೋಷವಾಗಿ ಇದ್ದೀರಾ?  ನಿಮಗೆ ನಿಮ್ಮ ಭಾಷೆ, ಪರಂಪರೆ, ಚರಿತ್ರೆ, ಹಬ್ಬ-ಹುಣ್ಣಿಮೆಗಳು ಮಿಸ್ಸಾಗುತ್ತಾ?” ಎಂದು ಕೇಳಿದಳು.
“ಹೌದು ಕಣೆ ಖಂಡಿತವಾಗಲೂ ಮಿಸ್ಸಾಗುತ್ತದೆ.  ವಲಸೆ ಬಂದವರು ತುಂಬಾ ಜನ ಒಳ್ಳೆಯ ಕೆಲಸ, ಹಣ ಸಂಪಾದನೆ ಮಾಡಿ ಗೌರವಾಗಿ ಬಾಳುತ್ತಿದ್ದಾರೆ.  ಆದರೆ ನಮಗೆ ನಮ್ಮದು, ನಮ್ಮ ಬಾಲ್ಯದ ಅನುಭವಗಳನ್ನು ಮರೆಯಲು ಸಾಧ್ಯವೇ?  ನಮ್ಮ ಪರಂಪರೆ, ನಮ್ಮ ಭಾವನೆಗಳನ್ನು ಅಳಿಸಲು ಸಾಧ್ಯವೇ?  ಅದೇ ಅಲ್ಲವೇ ನಮ್ಮ ವ್ಯಕ್ತಿತ್ವಕ್ಕೆ ಅಡಿಪಾಯ.  ಅಡಿಪಾಯವನ್ನು ಮುರಿಯಲು ಸಾಧ್ಯವೇ?  ಮುರಿದರೆ ನಮ್ಮ ಬದುಕು ಬರಡಲ್ಲವೇ, ನಮ್ಮ ವ್ಯಕ್ತಿತ್ವ ಒಂದು ದೊಡ್ಡ ಅಂಶವನ್ನ ಕಳೆದ ಹಾಗಲ್ಲವೇ?”

ಮತ್ತೊಂದು ಸವಾಲು – “ನಿಮಗೆ ಕನ್ನಡ ಬಳಗ ಯಾಕೆ ಬೇಕು?”
“ನಮ್ಮ ವ್ಯಕ್ತಿತ್ವದ ಅಡಿಪಾಯಕ್ಕೆ ಆಸರೆ ಬೇಡವೇ?  ನಾವು ಒಂದು ಸಂಘದಲ್ಲಿಯಿದ್ದೇವೆ.  ನಾವು ಭಾಷೆ, ಚರಿತ್ರೆ, ವಾತ್ಯಲ್ಯ ಮುಂತಾದ ಮಾನವೀಯ ಗುಣಗಳನ್ನು ಹಂಚಿಕೊಳ್ಳುತ್ತೇವೆ.  ಈ ಹೊರನಾಡಿನ ಸಂಘಗಳು ನಮ್ಮ ವ್ಯಕ್ತಿತ್ವಕ್ಕೆ ಒಂದು meaning ಕೊಡುತ್ತದೆ.  ನಾವು ವಲಸೆ ಬಂದ ದೇಶಕ್ಕೆ ಹೊಂದಿಕೊಂಡರೂ, ಈ ಹೊರನಾಡು ನಮ್ಮದು ಎನಿಸಲು ಕಷ್ಷ ಅನಿಸುತ್ತದೆ.  ನಮಗೆ chipsಗಿಂತ ಕೋಡುಬಳೆ ರುಚಿಯಲ್ಲವೇ?”

ಮತ್ತೊಂದು ಕ್ವೆಶ್ಚನ್ನು – “ಸರಿ ಇಲ್ಲಿಗೆ ಬಂದಿರಿ. ನಿಮ್ಮ ಜೀವನ ಕಟ್ಟಿದಿರಿ. ಮಕ್ಕಳು, ಮರಿಗಳಾದವು.  ನಮ್ಮ ವಂಶ ಬೆಳೆಯುತ್ತಿದೆ.
ಈಗ ನಾವು ೩ನೆ ಜನರೇಶನ್ನು.  ಮೊದಲನೆಯದು ನೀವು; ಹೊರನಾಡಿಗೆ ಬಂದು ನಿಮ್ಮ ಭಾಷೆ, ಸಂಸ್ಕೃತಿ ಬೆಳಿಸಿ, ಉಳಿಸಿಕೊಂಡಿರಿ.

“ಎರಡನೆ ಜನಾಂಗ ನಿಮ್ಮ ಮಕ್ಕಳು. ನನ್ನ ತಂದೆ-ತಾಯಿಯರು. ಇಲ್ಲೇ ಹುಟ್ಟಿ ಬೆಳದವರು.  ಅವರು ನಿಮ್ಮ ಅಡುಗೆ ತಿಂಡಿ ಎಲ್ಲ ಮಜವಾಗಿ ತಿನ್ನುತ್ತಾರೆ. ಮನೆಯಲ್ಲಿ ನಿಮ್ಮ ಮಾತು ಕೇಳಬಹುದು. ಮನೆಯ ಹೊರಗೆ ಅವರು ಈ ದೇಶದ ಜನರನ್ನೇ ಅನುಸರಿಸುತ್ತಾರೆ.  ಕನ್ನಡ ಮಾತನಾಡಲು ಬರುವುದಿಲ್ಲ.  ಚಿಕ್ಕವರಾಗಿದ್ದಾಗ ಕನ್ನಡ ಕಲಿಯಲು ನೀವು ಸಹಾಯಮಾಡಲಿಲ್ಲ. ಅವರು ಕುವೆಂಪು, ದ ರಾ ಬೇಂದ್ರೆಯಂಥವರ ಹೆಸರು ಕೇಳಿಲ್ಲ.  ಅವರಿಗೆ ನಿಮಗೆ ಇರುವಷ್ಟು ಮಮತೆ ನಿಮ್ಮ ಪರಂಪರೆ ಮೇಲೆ ಖಂಡಿತಯಿಲ್ಲ.  ಅವರು ಕನ್ನಡ ಬಳಗಕ್ಕೆ ಬರುವುದಿಲ್ಲ.  ಬಂದರೂ, ‘we don’t understand anything’ ಅಂತಾರೆ.

ಮೂರನೆಯ ಜನಾಂಗ ನಿಮ್ಮ ಮೊಮ್ಮಕ್ಕಳು. ಅವರ ಬಗ್ಗೆ ಮತ್ತೊಂದು ಸವಾಲು.
“ಅಜ್ಜಿ ನಮಗೆ ನಿಮ್ಮ ಭಾಷೆ ಗೊತ್ತಾಗುವುದಿಲ್ಲ.  ಬೆಂಗಳೂರಿಗೆ ಒಂದೇ ಸಲ ಮಮ್ಮಿ ಡ್ಯಾಡಿ ಜತೆ ಹೋಗಿದ್ದೆ.  ಎಲ್ಲರೂ Englishನಲ್ಲೇ ಮಾತಾಡಿದರು.  ಮಮ್ಮಿ ಡ್ಯಾಡಿ ಕನ್ನಡ ಮಾತನಾಡುವುದಿಲ್ಲ.  ಅವರಿಗೆ ಬರಲ್ಲ ಅಂತಾರೆ.  ಹಬ್ಬ, ಹರಿದಿನ ಮಾಡುವುದಿಲ್ಲ.  ನಾವು ಏನು ಮಾಡಬೇಕು?  ಬ್ರಿಟಿಶ್ ಜನರಂತೆ ಇರಬೇಕೆ?”

“ಇದಲ್ಲದೆ ಮತ್ತೊಂದು ಗುಂಪಿದೆ ಈಗ. ಇವರು ಇತ್ತೀಚಿಗೆ ಹೊರನಾಡಿಗೆ ವಲಸೆ ಬಂದವರು.  ಹೊಸ ಟೆಕ್ನಾಲಜಿ ತಿಳಿದವರು. ಅವರೊಡನೆ ನಮ್ಮ ಮೊದಲನೆ ಜನಾಂಗ (ಹಿರಿಯರು, ೩೦-೪೦ವರುಷಗಳಿಂದ ಹೊರನಾಡಿನಲ್ಲಿ ಇರುವವರು) ಬಾಂಧವ್ಯ ಬೆಳಸಲು ಸಾದ್ಯವೇ?”

“ನನ್ನ ಕತೆ ಮುಗಿಯಿತು. ನಿನ್ನ ಸವಾಲಿಗೆ ನನ್ನ ಹತ್ತಿರ ಉತ್ತರವಿಲ್ಲ!”

- ವತ್ಸಲಾ ರಾಮಮೂರ್ತಿ

*****************************************************