ಅನಿವಾಸಿ ಕನ್ನಡಿಗರಿಗೆ ಜಯದೇವ್ ಅವರು ಈಗಾಗಲೇ ಚಿರಪರಿಚಿತರು. ಒಬ್ಬ ಸಮಾಜ ಸೇವಕನಾಗಿ, ದೀನಬಂಧುವಾಗಿ, ಪರಿಸರ ಪ್ರೇಮಿಯಾಯಾಗಿ, ಶಿಕ್ಷಣ ತಜ್ಞನಾಗಿ, ಲೇಖಕನಾಗಿ, ಅಂಕಣಕಾರನಾಗಿ ಅವರು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ನಡೆಸಿದ್ದಾರೆ. ವೈಜ್ಞಾನಿಕ ಸತ್ಯ ಮತ್ತು ಅಧ್ಯಾತ್ಮ ಇವೆರಡನ್ನೂ ಒಂದೇ ದೃಷ್ಟಿಕೋನದಲ್ಲಿಟ್ಟುಕೊಂಡು ಇವೆರಡರ ನಡುವೆ ಇರುವ ಸಮಾನಾಂಶಗಳ ಬಗ್ಗೆ ಚಿಂತಿಸಿದ್ದಾರೆ. ಮೂಲದಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ, ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡ ಜಯದೇವ್ ಅವರು ಚಾಮರಾಜನಗರದ ಜೆ ಎಸ್ ಎಸ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಕೆಲಸಮಾಡಿ, ಮುಂಚಿತವಾಗಿಯೇ ನಿವೃತ್ತಿ ಪಡೆದು ಬಿಳಿಗಿರಿ ರಂಗನ ಬೆಟ್ಟದಲ್ಲಿ ವಿವೇಕಾನಂದ ಗಿರಿಜನ ಕಲ್ಯಾಣಕೇಂದ್ರದಲ್ಲಿ ಕಾರ್ಯಕರ್ತರಾಗಿ ದುಡಿದಿದ್ದಾರೆ. ಗಿರಿಜನರ ಸಂಪರ್ಕದಿಂದ ಒದಗಿದ ಅಮೂಲ್ಯವಾದ ಅನುಭವ ಅವರಿಗೆ ಪರಿಸರದ ಅಳಿವು ಉಳಿವಿನ ಬಗ್ಗೆ ಚಿಂತಿಸಲು ಅನುವುಮಾಡಿಕೊಟ್ಟಿತು. ಇಲ್ಲಿಂದ ಮುಂದೆ ಹಲವಾರು ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಅವರು ತೊಡಗಿಕೊಂಡರು. ಗಿರಿಜನರ ಸಂಪರ್ಕದಿಂದ ಒದಗಿದ ಹಲವಾರು ಅಮೂಲ್ಯ ಅನುಭವಗಳನ್ನು, ಪರಿಸರದ ಬಗ್ಗೆ ವಿಶೇಷ ಮಾಹಿತಿಗಳನ್ನು ಸಂಗ್ರಹಿಸಿ "ಸೋಲಿಗ ಚಿತ್ರಗಳು" ಎಂಬ ಕೃತಿಯನ್ನು ರಚಿಸಿದ್ದು ಅದು ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲರ ಪ್ರಶಂಸೆಯನ್ನು ಪಡೆಯಿತು.
ಮಕ್ಕಳ ಬಗ್ಗೆ ವಿಶೇಷ ಪ್ರೀತಿ ಇರುವ ಜಯದೇವ್ ಅವರು ಅನಾಥ ಮಕ್ಕಳ ಬಗ್ಗೆ ತೀವ್ರವಾದ ಕಾಳಜಿಯಿಂದ ಮತ್ತು ಅನುಕಂಪೆಯಿಂದ ದೀನಬಂಧು ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದು ಅಲ್ಲಿ ನೂರಾರು ಗಂಡು ಮತ್ತು ಹೆಣ್ಣು ಮಕ್ಕಳ ಆಶ್ರಯ, ವಿದ್ಯಾಭ್ಯಾಸ, ವ್ಯಕ್ತಿವಿಕಾಸ ಇವುಗಳಿಗೆ ಅನುವುಮಾಡಿಕೊಟ್ಟು ಈ ಮಕ್ಕಳ ಪೋಷಣೆ ನಿರಂತರವಾಗಿ ನಡೆದಿದೆ. ನೊಂದ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು ಮನಶಾಸ್ತ್ರ ತಜ್ಞರ ಜೊತೆ ಸಮಾಲೋಚನೆ ನಡೆಸಿ ಮಾನಸಿಕವಾಗಿ ಘಾಸಿಗೊಂಡ ಮಕ್ಕಳನ್ನು ಸೂಕ್ಷ್ಮವಾಗಿ ನಿಭಾಯಿಸಿದ್ದಾರೆ. ಅವರಿಗೆ ಈ ದಿಕ್ಕಿನಲ್ಲಿ ದೊರೆತ ಅನುಭವವನ್ನು "ನಾವೇಕೆ ಹೀಗೆ?" ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ. ಗಾಂಧಿ, ವಿವೇಕಾನಂದ, ರಾಮಕೃಷ್ಣ ಪರಮಹಂಸ, ಬುದ್ಧ, ಜೀಸಸ್ ಮುಂತಾದ ಮಹಾತ್ಮರ ಬದುಕು ಬರಹವನ್ನು ದೀರ್ಘವಾಗಿ ಅವಲೋಕಿಸಿ ತಮ್ಮ ಬದುಕಿನಲ್ಲಿ ಮತ್ತು ತಮ್ಮ ಆಶ್ರಮದಲ್ಲಿ ಈ ಮೌಲ್ಯಗಳನ್ನು ಅನುಷ್ಠಾತಾನಕ್ಕೆ ತಂದಿದ್ದಾರೆ. ಮೈಸೂರಿನ ಶಕ್ತಿ ಧಾಮ ಎಂಬ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಅಸಹಾಯಕ ಶೋಷಿತ ಮಹಿಳೆಯರಿಗೆ ಪುನರ್ವಸತಿಯನ್ನು ನೀಡಿ ಅವರಿಗೆ ಆಶ್ರಯನೀಡಿದ್ದಾರೆ. ಹೀಗೆ ಮಹಿಳೆಯರ ಅಭಿವೃದ್ಧಿ ಕಾರ್ಯದಲ್ಲೂ ತಮನ್ನು ತೊಡಗಿಕೊಂಡಿದ್ದಾರೆ.
ಅವರು ಮೈಸೂರಿನ ವಿಶ್ವ ವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಜಯದೇವ ಅವರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಮತ್ತು ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಯನ್ನು ನೀಡಿದೆ. ಹಲವಾರು ಸಂಘ ಸಂಸ್ಥೆಗಳು ಅವರಿಗೆ ಪ್ರತಿಷ್ಠಿತ ಪುರಸ್ಕಾರಗಳನ್ನು ನೀಡಿವೆ. ಅಮೇರಿಕ, ಯುರೋಪ್ ಮತ್ತು ಯುಕೆ ದೇಶಗಳಿಂದ ಅವರಿಗೆ ಆರ್ಥಿಕ ನೆರವು ಬಂದಿರುವುದಲ್ಲದೆ ಹಲವಾರು ವಿದೇಶಿಯರು ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿ ಕೆಲಕಾಲ ಕೆಲಸ ಮಾಡಿದ್ದಾರೆ. ಜರ್ಮನಿಯ ಹಲವಾರು ವಿದ್ಯಾರ್ಥಿನಿಯರು ಕಳೆದ ಹಲವಾರು ವರ್ಷಗಳಿಂದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿನಿಮಯ ಕಾರ್ಯಕ್ರಮದಲ್ಲಿ ದೀನಬಂಧುವಿನಲ್ಲಿ ಸೇವೆ ಸಲ್ಲಿಸಿದ್ದಾರೆ.
ಜಯದೇವ್ ಅವರಿಗೆ ನಿವೃತ್ತಿ ಎನ್ನುವುದಿಲ್ಲ, ಅವರ ತಮ್ಮನಾಗಿ ನಾನು ಅವರನ್ನು ಇಂಗ್ಲೆಂಡಿಗೆ ಹಲವಾರು ಬಾರಿ ಆಹ್ವಾನಿಸಿದ್ದು, ಕೊನೆಗೂ ಈ ಬೇಸಿಗೆಯಲ್ಲಿ ದೀನಬಂಧು ಸಂಸ್ಥೆ ಯಿಂದ ತಾತ್ಕಾಲಿಕವಾಗಿ ಬಿಡುಗಡೆ ಪಡೆದು ತಮ್ಮ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿ ಯುಕೆ ಮತ್ತು ಯುರೋಪ್ ಪ್ರವಾಸ ಕೈಗೊಂಡಿದ್ದಾರೆ. ಬದುಕಿನಲ್ಲಿ ದಟ್ಟವಾದ ಅನುಭವವನ್ನು ಪಡೆದ ಜಯದೇವ್ ಅವರು ಯುಕೆ ಮತ್ತು ಯೂರೋಪಿನ ಬಗ್ಗೆ ಅವರ ಮೊಟ್ಟ ಮೊದಲ ಭೇಟಿಯ ಅನಿಸಿಕೆಗಳೇನು ಎಂದು ಹಲವಾರು ಅನಿವಾಸಿ ಮತ್ತು ವಿದೇಶಿ ಮಿತ್ರರು ಕೇಳಿದ್ದು ಜಯದೇವ್ ಅವರು ತಮ್ಮ ವಿಶೇಷ ಒಳನೋಟಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದನ್ನು ಒಂದು ಲೇಖನವಾಗಿ ಬರೆಯಬೇಕೆಂದು ನಾನು ಒತ್ತಾಯಿಸಿದರೆ ಫಲವಾಗಿ, ಈ ಹಿನ್ನೆಲೆಯಲ್ಲಿ ಅವರ ಕೆಳಗಿನ ಲೇಖನವನ್ನು ಪ್ರಕಟಿಸಿಲಾಗಿದೆ, ದಯವಿಟ್ಟು ಓದಿ ಮತ್ತು ಪ್ರತಿಕ್ರಿಯಿಸಿ.
-ಸಂಪಾದಕ
* * *
ಅಮೇರಿಕಾ ದೇಶಕ್ಕಿಂತಲೂ ಸಾಂಸ್ಕೃತಿಕವಾಗಿ ಸಮೃದ್ಧವಾಗಿರುವ ಯೂರೋಪ್ ದೇಶಗಳನ್ನು ನೋಡಬೇಕೆಂಬ ಬಯಕೆ ನನಗೆ ಆಗಾಗ ಮೂಡುತ್ತಿತ್ತು. ಆದರೆ ಸಾಧ್ಯವಾಗಿದ್ದು ಈಗ. ಕಳೆದ ಇಪ್ಪತೈದು ವರ್ಷಗಳಿಂದಲೂ ನನ್ನ ತಮ್ಮ, ಅವನ ಕುಟುಂಬದ ಎಲ್ಲರೂ ನನ್ನನ್ನು ಕರೆಯುತ್ತಲೇ ಇದ್ದಾರೆ. ದೀನಬಂಧು ಸಂಸ್ಥೆಯ ಜವಬ್ದಾರಿಯಿಂದ ಬಿಡಿಸಿಕೊಂಡು ನನ್ನ ತಂಗಿಯ ನೆರವಿನಿಂದ ಈಗ ಪ್ರಯಾಣ ಸಾಧ್ಯವಾಗಿದೆ. ಕಳೆದ ದಶಕಗಳಿಗೆ ಹೋಲಿಸಿದರೆ ಈಗ ಪ್ರಯಾಣ ಬಹಳ ಸುಲಭ. ಮೊಬೈಲ್-ಇಂಟರ್ ನೆಟ್ ಗಳಿಂದಾಗಿ ಪ್ರತಿ ಹೆಜ್ಜೆಯನ್ನು ಪ್ಲಾನ್ ಮಾಡಿ ಪ್ರಯಾಣ ಮಾಡಬಹುದು.
ಹೊಸ ಸ್ಥಳಗಳನ್ನು ಅಲ್ಲಿಯ ಜನರನ್ನು ಅವರ ರೀತಿ ನೀತಿಗಳನ್ನು ನೋಡಿ ವಸ್ತು ನಿಷ್ಠವಾಗಿ ಗ್ರಹಿಸಬೇಕೆಂದರೆ ಅದಕ್ಕೆ ಹೊಸ ಕಣ್ಣುಗಳೇ ಬೇಕು. ಭಾರತೀಯ ಸಂಸ್ಕೃತಿ ಮತ್ತು ಅದರ ನೀತಿ ರೀತಿಗಳನ್ನೇ ಕಣ್ಣಿನ ತುಂಬಾ ತುಂಬಿಕೊಂಡಿದ್ದರೆ ನಾವು ಈ ಆಗಂತುಕ ಸಂಸ್ಕೃತಿಯ ಬಗ್ಗೆ ತೀರ್ಪು ನೀಡಲು ಪ್ರಾರಂಭಿಸುತ್ತೇವೆ. ಮೊದಲನೆಯದಾಗಿ ಯಾರೂ ನಮ್ಮನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಿಲ್ಲ; ಎರಡನೆಯದಾಗಿ ಇಂತಹ ಪೂರ್ವಾಗ್ರಹಗಳಿಂದಾಗಿ ನಾವು ಹೊಸದನ್ನು ನೋಡುವ ಸುಂದರ ಅವಕಾಶವನ್ನೇ ಕಳೆದುಕೊಂಡುಬಿಡುತ್ತೇವೆ. ಇಂತಹ ಒಂದು ಮುಕ್ತಮನಸ್ಸು ನನಗಿದ್ದರೂ ಮೊದಲು ಕೆಲವು ದಿನ ನನಗೆ ಕಷ್ಟವಾಯಿತು. ಭಾರತೀಯ ದೃಶ್ಯಾವಳಿಗಳಿಗೆ ಬಂಧಿಯಾಗಿದ್ದ ನನ್ನ ನೋಟವನ್ನು ನನ್ನ ಗ್ರಹಿಕೆಯ ಕ್ರಮವನ್ನು, ಸರಿ-ತಪ್ಪುಗಳ ನಿಷ್ಕರ್ಷೆಯನ್ನು ಬಹಿಷ್ಕರಿಸಿ ಮುಕ್ತ ಮನಸ್ಸಿನಿಂದ ನೋಡಲು ಪ್ರಾರಂಭಿಸಿದೆ. ಆಗ ಆತಂಕಕ್ಕೆ ಕಾರಣವಿಲ್ಲದ, ಸುಂದರವಾದ ಇಂಗ್ಲೆಂಡ್-ಯೂರೋಪ್ ಗಳು ಗೋಚರಿಸಲು ಪ್ರಾರಂಭವಾಯಿತು. ಹಿಂದೆ ಬ್ರಿಟಿಷರು ನಮ್ಮನ್ನು ಆಳುತ್ತಿದ್ದರು. ಇತ್ಯಾದಿ ಇತ್ಯಾದಿ ವಿಚಾರಗಳು ಚರಿತ್ರೆಗೆ ಸಂಬಂಧಪಟ್ಟ ವಿಷಯಗಳು; ಚರಿತ್ರೆಯ ಪಾಠಗಳಾಗಿ ಇವನ್ನು ಬ್ರಿಟಿಷರು-ಭಾರತೀಯರು ಇಬ್ಬರೂ ತಿಳಿಯಬೇಕು. ಆದರೆ ವರ್ತಮಾನದ ಮನುಷ್ಯ ಸಂಬಂಧಗಳಲ್ಲಿ ಈ ವಿವರಗಳಿಗೆ ಯಾವ ಸ್ಥಾನವೂ ಇರಬೇಕಾಗಿಲ್ಲ ಎಂಬ ವಿವೇಕ ನಮಗೆ ಹುಟ್ಟಬೇಕು. ಈ ನನ್ನ ಗಾಢವಾದ ನಂಬಿಕೆ ನನಗೆ ಮತ್ತಷ್ಟು ತೆರೆದ ಮನಸ್ಸನ್ನು ದಯಪಾಲಿಸಿದೆ. ಹಾಗಾಗಿ ಪ್ರವಾಸದ ತುಂಬ ಸುಂದರ ಚಿತ್ರಗಳೇ ಪ್ರಧಾನವಾಗಿವೆ. ಯಾವುದೇ ಸಮಾಜದ ಒಟ್ಟಾರೆ ಮಾನಸಿಕ ಸ್ವಾಸ್ಥ್ಯವನ್ನು ಕಲುಕುವ ಆಚಾರ ವಿಚಾರಗಳ ಬಗ್ಗೆ ನನಗೆ ಕಳಕಳಿ ಇದೆ, ಮುಚ್ಚುಮರೆ ಇಲ್ಲದೆ ಇವುಗಳನ್ನು ವಿರೋಧಿಸುತ್ತೇನೆ. ಭಾರತದಲ್ಲಂತೂ ಇಂತವುಗಳನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಪಾಶ್ಚತ್ಯ ದೇಶಗಳಲ್ಲಿ ಕಂಡುಬಂದರೆ ಅವುಗಳನ್ನೂ ಸಹ ಪ್ರಶ್ನಿಸುತ್ತೇನೆ
ಪಶ್ಚಿಮಕ್ಕೆ ಬಂದನಂತರ ಯೂರೋಪಿನ ಕಿರು ಪ್ರವಾಸ ಹೊರತುಪಡಿಸಿದರೆ ನಾನು ಹೆಚ್ಚಾಗಿ ಓಡಾಡಿದ್ದು ನನ್ನ ತಮ್ಮನ ಮನೆ ಇರುವ ಶಫೀಲ್ಡ್ ನಲ್ಲಿ. ಇದೊಂದು ಸುಂದರವಾದ ಹಸಿರಿನಿಂದ ಕಂಗೊಳಿಸುವ ಊರು. ಮತ್ತೊಂದು ವಿಶೇಷ ಎಂದರೆ ನಿಶ್ಶಬ್ದತೆ.. ಮನೆಯೊಳಗಿದ್ದಾಗಲಂತೂ ನಿರಂತರವಾದ ನಿಶ್ಶಬ್ದತೆಯನ್ನು ಅನುಭವಿಸಿ ಆನಂದಪಟ್ಟಿದ್ದೇನೆ. ಭಾರತದ ಉದ್ದಗಲಕ್ಕೂ ಅಸಹನೀಯವಾದ ಗದ್ದಲವನ್ನು ಅನುಭವಿಸಿದ ನನಗೆ ಇದೊಂದು ಆಪ್ಯಾಯ ಮಾನವಾದ ಅನುಭವ. ಬ್ರಿಟಿಷರು ಸ್ನೇಹಜೀವಿಗಳು ಎದುರಿಗೆ ಎಲ್ಲರಿಗೂ ನಗುಮುಖದಿಂದ ಹಲೋ ಹೇಳುತ್ತಾರೆ, ಸರಿದು ದಾರಿಬಿಡುತ್ತಾರೆ. ಪ್ರತಿಯೊಬ್ಬ ವಾಹನ ಚಾಲಕನೂ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾನೆ. ಇಕ್ಕಾಟ್ಟಾದ ರಸ್ತೆಗಳಲ್ಲಿ ಇದುರಿನಿಂದ ವಾಹನ ಬಂದಾಗ ನಿಲ್ಲಿಸಿ ಇತರರಿಗೆ ಅನುವು ಮಾಡಿ ಕೊಡುವ ಸಭ್ಯತೆಯ ಸಂಪ್ರದಾಯವಂತೂ ಅನುಕರಣಯೋಗ್ಯವಾದುದು. ಬ್ರಿಟಿಷರ ಈ ಶಿಸ್ತಿನ ಒಂದನೇ ಹತ್ತುಭಾಗವಾದರೂ ನಮ್ಮ ದೇಶದಲ್ಲಿ ಆಚರಣೆಗೆ ಬರುವುದಾದರೆ ನಮ್ಮ ದೇಶದ ಹಾರನ್ ಹೊಂಕಾರಗಳು ಸ್ವಲ್ಪವಾದರೂ ಕಡಿಮೆಯಾಗಬಹುದು. ನನ್ನ ಅನಿಸಿಕೆ ಏನೆಂದರೆ ನಿಶ್ಯಬ್ದತೆಯಿಂದ ಮನಃಶಾಂತಿ ಉಂಟಾಗುತ್ತದೆ. ಕರ್ಕಶವಾದ ಶಬ್ದಗಳ ನಡುವೆ ಬಹಳಕಾಲ ಸಂಚಾರ ಮಾಡಿದರೆ ಮನಶ್ಯಾಂತಿ ಹಾರಿಹೋಗುತ್ತದೆ, ಮತ್ತು ಮಾನಸಿಕ ಅನಾರೋಗ್ಯಕ್ಕೂ ಕಾರಣವಾಗಬಹುದು.
ಇರಲಿ ಬ್ರಿಟಿಷರು ಸ್ನೇಹಜೀವಿಗಳು ಎಂದೆ. ನೆನ್ನೆಯ ದಿನ ಲಿನ್ ಮತ್ತು ಜೇನ್ ಇಬ್ಬರು ಧೀಮಂತ ಮಹಿಳೆಯರು ಸ್ಕಾಟ್ ಲ್ಯಾಂಡ್ ನಿಂದ ನೂರಾರು ಮೈಲು ಡ್ರೈವ್ ಮಾಡಿಕೊಂಡು ನನ್ನನ್ನು ನೋಡಲು ನನ್ನ ತಮ್ಮನ ಮನೆಗೆ ಬಂದಿದ್ದರು. ದೀನಬಂಧುವಿನಲ್ಲಿ ಕೆಲವು ತಿಂಗಳುಗಳ ಕಾಲ ವಾಲಂಟರಿ ಸರ್ವಿಸ್ ಮಾಡಿದ್ದ ಇವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತ ಗಂಟೆಗಳನ್ನೇ ಕಳೆದರು. ಒಂದೂವರೆ ದಶಕದ ನಂತರವೂ ತಾವು ಒಡನಾಡಿದ ಎಷ್ಟೊಂದು ಮಕ್ಕಳ, ಸಿಬ್ಬಂದಿಗಳ ಹೆಸರುಗಳನ್ನು ನೆನಪಿಟ್ಟುಕೊಂಡು ಅತ್ಯಂತ ಪ್ರೀತಿಯಿಂದ ನೆನೆದರು. ಇಲ್ಲಿಯ ಸರಾಸರಿ ಜೀವನವನ್ನು ನೋಡಿದಾಗ ಈ ಜನ ನೆರೆಹೊರೆಯವರನ್ನು ಅಷ್ಟಾಗಿ ಹಚ್ಚಿಕೊಳ್ಳುವುದಿಲ್ಲ ಎಂದು ಅನ್ನಿಸುವುದುಂಟು. ಆದರೆ ಮತ್ತೊಬ್ಬರಿಗೆ ನೆರವಾಗುವ ಸಂದರ್ಭ ಒದಗಿಬಂದಾಗ ತಮ್ಮ ಶಿಷ್ಟಾಚಾರವನ್ನು ಬದಿಗೊತ್ತಿ ಮನುಷ್ಯ ಸಂಬಂಧಗಳಿಗೆ ಮಿಡಿಯುತ್ತಾರೆ. ಬೂಟಾಟಿಕೆ ಎಂಬುದು ಎಳ್ಳಷ್ಟು ಇರುವುದಿಲ್ಲ. ಕೆಲವೊಮ್ಮೆ ವ್ಯತಿರಿಕ್ತ ಪ್ರಕರಣಗಳೂ ಕಂಡುಬರಬಹುದು, ಆದರೆ ಅಪರೂಪ.
ಬ್ರಿಟಿಷ್ ಜನ ಮಕ್ಕಳ ರಕ್ಷಣೆಗಾಗಿ ಅತಿಯಾದ ಕಾನೂನು, ಕಟ್ಟಳೆಗಳನ್ನು ಮಾಡಿಕೊಂಡಿದ್ದಾರೆ ಎಂದೆನಿಸುತ್ತದೆ. ಇದಕ್ಕೆ ಕಾರಣಗಳೂ ಇವೆ ಎಂಬುದು ಒಂದು ಸಮಜಾಯಿಷಿ. ಎಲ್ಲೆಲ್ಲೂ ಅಪಾಯಗಳನ್ನೇ ನೋಡುತ್ತ, ಸದಾಕಾಲವೂ ಗುರಾಣಿಯನ್ನು ಅಡ್ಡಹಿಡಿದೇ ಬದುಕುವ ಜೀವನ ವಿಧಾನ ಬದುಕಿನ ಪ್ರೀತಿಯನ್ನು ನಂಬಿಕೆಯನ್ನು ಗಟ್ಟಿಗೊಳಿಸುವ ಬದಲು ಸ್ವರಕ್ಷಣೆಯ ಗೀಳನ್ನು ಹೆಚ್ಚಿಸಬಹುದಲ್ಲವೆ? ನಂಬಿಕೆ ಮತ್ತು ಪರಸ್ಪರತೆಗಳಿಗೆ ಸ್ಥಳವಿಲ್ಲದೆ ಜೀವನ ಶುಷ್ಕವಾಗಿ ಬಿಡಬಹುದಲ್ಲವೆ? ನಂಬಿಕೆ ಭರವಸೆಗಳಿಲ್ಲದ ಜೀವನದಲ್ಲಿ ಪರಕೀಯತೆ (Alienation) ಹತಾಶೆಗಳು ಸುಪ್ತವಾಗಿ ಮನೆಮಾಡಿ ಆತ್ಮವನ್ನೇ ಕೊರೆಯಬಹುದೋ ಏನೋ? ಈ ಪ್ರಶ್ನೆಗೆ ನನಗೆ ಉತ್ತರ ದೊರೆತಿಲ್ಲ.
ಪಾಶ್ಚಿತ್ಯ ಜಗತ್ತಿನ ಇಂದಿನ ವ್ಯವಸ್ಥೆ ಮತ್ತು ಸಂಸ್ಕೃತಿ ‘ಅನುಭಾವ’ ಎಂದು ನಾವು ಯಾವುದನ್ನು ಕರೆಯುತ್ತೇವೆಯೊ ಆ ಮನಸ್ಥಿತಿಯನ್ನು ಕೆಲವರಾದರೂ ಪಡೆಯಬಹುದಾದ ಸಾಧ್ಯತೆಯನ್ನು ದೂರ ಸರಿಸುತ್ತದೆ. ಬ್ರದರ್ ಲಾರೆನ್ಸ್ ಅಥವಾ ಸೇಂಟ್ ಫ್ರಾನ್ಸಿಸ್ ಆಫ್ ಅಸಿಸ್ಸಿ ಅವರಂತಹ ಅನುಭಾವಿಗಳು ಪಶ್ಚಿಮದಲ್ಲೂ ಇದ್ದುದು ಉಂಟು. ಆದರೆ ಇಂದಿನ ವಾತಾವರಣದಲ್ಲಿ ಭೌತಿಕತೆಯೇ ಪ್ರಧಾನವಾಗಿದ್ದು ಅಂತರ್ಮುಖತೆ ಗೌಣವಾಗಿದೆ. ಹಾಗಾಗಿ ಒಂದು ಮಿತಿಯೊಳಗೆ ಇವರು ಅಧ್ಯಾತ್ಮವನ್ನು ಮೆಚ್ಚುತ್ತಾರಾದರೂ ತಮ್ಮ ನಡುವೆಯೇ ಇರಬಹುದಾದ ರಮಣಮಹರ್ಷಿಯವರಂತಹ ಅನುಭಾವಿಯನ್ನು ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಬಹದೋ ಏನೋ! ಭಾರತೀಯ ಸಂಸ್ಕೃತಿಯಲ್ಲಿ ನೆಲೆಯೂರಿದ ನನ್ನಂತಹವರಿಗೆ ಇದೊಂದು ದೊಡ್ಡ ಕೊರತೆಯಾಗಿ ಕಾಣುತ್ತದೆ. ಬದುಕಿನ ನಿರರ್ಥಕತೆಯ ಅರಿವು ನಮ್ಮನ್ನು ಆಧ್ಯಾತ್ಮಿಕತೆಗೆ ಕೊಂಡೊಯ್ದರೆ ಆಲ್ಬರ್ಟ ಕಾಮು ಅವರಂತಹ ಪಾಶ್ಚಾತ್ಯ ಚಿಂತಕರನ್ನು ಅಸಂಗತ (Absurd) ತತ್ತ್ವಕ್ಕೆ ಕೊಂಡೊಯ್ದು ಆತ್ಮಹತ್ಯೆಯ ಪ್ರಶ್ನೆಯನ್ನು ಎದುರಿಸಬೇಕಾದ ಅನಿವಾರ್ಯತೆಯನ್ನುಂಟು ಮಾಡುತ್ತದೆ. ಕರ್ಮ ಮಾಡುತ್ತಲೇ ನೂರು ವರ್ಷಕಾಲ ಬಾಳಬೇಕು ಎಂದು ಹೇಳುವ ನಮ್ಮ ಈಶೋಪನಿಷತ್ತಿನ ಮಂತ್ರಕ್ಕೂ ಬದುಕಿನ ನಿರರ್ಥಕತೆಯನ್ನು ಆತ್ಮಹತ್ಯೆಯ ಪ್ರಶ್ನೆಯಾಗಿ ಎದುರಿಸುವುದಕ್ಕೂ ಎಷ್ಟು ವೆತ್ಯಾಸವಿದೆ!
ಸರಾಸರಿಯಾಗಿ ಬ್ರಿಟಿಷ್ ಜನ ತಮ್ಮ ಪರಂಪರೆಯ ಬಗ್ಗೆ, ಗತಕಾಲದ ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುತ್ತಾರೆ. ಯಾವಾಗಲೂ ಗೆಲ್ಲುಗರಾಗಿಯೇ ಬೆಳೆದು ಬಂದ ಈ ಜನಾಂಗ ಹೆಮ್ಮೆ ಪಡುವುದರಲ್ಲಿ ಆಶ್ಚರ್ಯವಿಲ್ಲ. ಇಂದಿನ ಅವರ ವ್ಯವಸ್ಥೆಯ ಆದ್ಯತೆಗಳನ್ನು ಗಮನಿಸಿದರೆ ಇದು ಅರಿವಾಗುತ್ತದೆ. ಜೊತೆಗೆ ಸಾಂಸ್ಕೃತಿಕ ಪ್ರಜ್ಞೆಯನ್ನು ಉಳಿಸಲು ಸ್ವಯಂಪ್ರೇರಣೆಯಿಂದ ಸಂಘಟಿತ ಪ್ರಯತ್ನಗಳೂ ನಡೆಯುವುದುಂಟು. ನ್ಯಾಷನಲ್ ಟ್ರಸ್ಟ್ ಇಂತಹ ಒಂದು ಸಾರ್ವಜನಿಕ ಸಂಸ್ಥೆ. ಹಳೆಯ ಕಾಲದ ಮನೆಯನ್ನು ಹಣದ ಮುಗ್ಗಟ್ಟು ಅಥವಾ ಇತರ ಕಾರಣಗಳಿಗಾಗಿ ಯಾರಾದರೂ ಮಾರಿಬಿಟ್ಟಿದ್ದರೆ ಅದನ್ನು ಟ್ರಸ್ಟ್ ಹೆಚ್ಚು ಹಣ ಕೊಟ್ಟು ಕೊಂಡು ಕೊಂಡು ಹಾಗೇಯೇ ಉಳಿಸುತ್ತದೆ. ಹಳೆಯ ಕಾಲದ ಮನೆಗಳನ್ನು ಹಾಗೆಯೇ ಉಳಿಸಿಕೊಂಡು ಮುಂದಿನ ಪೀಳಿಗೆಯವರಿಗೆ ಗತ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು ಈ ಟ್ರಸ್ಟ್ ನ ಉದ್ದೇಶ. ಈ ಮನೆಗಳ ಜೊತೆ ಹಿಂದೆ ಬಳಸುತ್ತಿದ್ದ “ಮಿಲ್ ಸ್ಟೋನ್” ಅಥವಾ ಹಿಟ್ಟು ಮಾಡುವ ಬೃಹತ್ ಬೀಸೆ ಕಲ್ಲುಗಳನ್ನು ಸಂರಕ್ಷಿಸಿದ್ದಾರೆ. ಇಷ್ಟೆ ಅಲ್ಲ ಹಿಂದೆ ಕುರಿಗಳನ್ನು ಕಟ್ಟುತ್ತಿದ್ದ ರೊಪ್ಪವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಜೊತೆಗೆ ಇವುಗಳ ಸಾಂಸ್ಕೃತಿಕ ಚರಿತ್ರೆಯನ್ನು ಹೇಳುವ ಚಿಕ್ಕ ಚಿಕ್ಕ ಫಲಕಗಳು, ಆಯಾ ಪ್ರದೇಶಗಳ ಚಿತ್ರ ಸಹಿತ ನಕ್ಷೆಗಳು ಎಲ್ಲೆಲ್ಲೂ ಕಾಣಸಿಗುತ್ತವೆ. ಜೊತೆಗೆ ಜೀವ ವೈವಿಧ್ಯದ ರಕ್ಷಣೆಗೂ ಬಹಳ ಮಹತ್ವ ನೀಡಿದ್ದಾರೆ. ನ್ಯಾಷನಲ್ ಟ್ರಸ್ಟ್ ವಿಶಾಲವಾದ ಭೂಮಿಯನ್ನು ಕೊಂಡುಕೊಂಡು ಇರುವ ನೈಸರ್ಗಿಕ ಸಂಪತ್ತನ್ನು ಕಾಪಾಡುತ್ತದೆ. ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವುದನ್ನು ತಡೆದರೆ ಸಾಕು ಆ ಪ್ರದೇಶದ ಜೀವ ವೈವಿಧ್ಯ ಮತ್ತು ಪ್ರಕೃತಿ ಸಂಪತ್ತು ಉಳಿಯುತ್ತದೆ. ಭಾರತದಂತಹ ಅದ್ಭುತ ಜೀವವೈವಿಧ್ಯದ ತಾಣದಿಂದ ಬಂದ ನನ್ನಂತಹವರಿಗೆ ಇವರ ಜೀವ ವೈವಿಧ್ಯ ಸಂರಕ್ಷಣೆಯ ಕಾನೂನುಗಳು ಸ್ವಲ್ಪ ಅತಿ ಎನಿಸುವುದುಂಟು. ಆದರೆ ಪಶ್ಚಿಮ ಘಟ್ಟಗಳಂತಹ ಅಮೂಲ್ಯ ಜೀವ ವೈವಿಧ್ಯದ ಬಿಸಿ ತಾಣಗಳ (Hot spot) ಸಂರಕ್ಷಣೆಯ ಬಗ್ಗೆ ನಮ್ಮ ಸರ್ಕಾರಗಳೇ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದು, ಶ್ರೀ ಸಾಮಾನ್ಯರು ಸ್ವಲ್ಪವೂ ಸಹಕರಿಸದಿರುವುದು ಅತ್ಯಂತ ಆತಂಕದ ಸಂಗತಿ. ಅಲ್ಲದೆ ಅನೇಕ ಶತಮಾನಗಳ ಸಾಂಸ್ಕೃತಿಕ ಚರಿತ್ರೆಯಿರುವ ನಮ್ಮ ಸಾವಿರಾರು ದೇವಸ್ಥಾನಗಳು, ಸಾಂಸ್ಕೃತಿಕ ತಾಣಗಳ ರಕ್ಷಣೆಯ ಬಗ್ಗೆ ಕಾಳಜಿ ವಹಿಸದೇ ಇರುವುದು ವಿಷಾದನೀಯ. ಹೊರಗಿನಿಂದ ಬಂದ ದಾಳಿಕೋರರು ನಮ್ಮ ದೇಶದ ಸಾಂಸ್ಕೃತಿಕ ತಾಣಗಳನ್ನು ನಾಶಪಡಿಸಿದರೆಂದು ನಿರಂತರವಾಗಿ ದೂರುತ್ತಲೇ ಕುಳಿತುಕೊಳ್ಳುವುದಕ್ಕಿಂತ ಇರುವ ಸಾಂಸ್ಕೃತಿಕ ತಾಣಗಳ ರಕ್ಷಣಾ ಕಾರ್ಯವನ್ನು ಮುತುವರ್ಜಿಯಿಂದ ಮಾಡುವುದು ಹೆಚ್ಚು ಲಾಭದಾಯಕವಾದೀತು.
ಬ್ರಿಟಿಷರಂತೆ ಯೂರೋಪಿನ ಇತರ ಕೆಲವು ದೇಶದ ಜನರು ತಮ್ಮ ಪಾರಂಪರಿಕ ಕಟ್ಟಡಗಳನ್ನು ಬಹುವಾಗಿ ಪ್ರೀತಿಸುತ್ತಾರೆ. ನೆದರ್ಲ್ಯಾಂಡ್ ದೇಶದ ಆಮ್ ಸ್ಟರ್ ಡ್ಯಾಮ್ ನ ಕಟ್ಟಡಗಳಂತೂ ಇನ್ನೂರು-ಮುನ್ನೂರು ವರ್ಷ ಹಳೆಯವು. ಈ ಜನ ತಮ್ಮ ಹಳೆಯ ಮನೆಗಳನ್ನು ಅವು ಇದ್ದ ಹಾಗೆಯೇ ಕಾಪಾಡಿಕೊಂಡು ಬರಲು ಕಂಕಣ ಬದ್ಧರಾಗಿರುವಂತೆ ಕಂಡುಬರುತ್ತದೆ. ಆಮ್ ಸ್ಟರ್ ಡ್ಯಾಮ್ ನ ಒಂದು ಕಡೆ ಒಂದರ ಪಕ್ಕ ಒಂದು ಇರುವ ಮೂರು ಮನೆಗಳು ವಾಲಿಕೊಂಡಿವೆ. ಇವುಗಳು ಬಹುಶಃ ಮುನ್ನೂರು ವರ್ಷ ಹಳೆಯ ಮನೆಗಳು. ಇವುಗಳನ್ನು “ಡ್ಯಾನ್ಸಿಂಗ್ ಹೌಸಸ್” ಎನ್ನುತ್ತಾರೆ. ಕೆಲವು ಕಡೆ ನಾಲ್ಕು ಮಹಡಿ ಏರಿ ಹೋಗಬೇಕು. ಆದರೆ ಅವರಿಗೆ ಲಿಫ್ಟ್ ಹಾಕಿಸಿಕೊಳ್ಳಲು ಸರ್ಕಾರ ಅನುಮತಿ ಕೊಡುವುದಿಲ್ಲ. ಏಕೆಂದರೆ ಇಂತಹ ಯಾವುದೇ ಪುನರ್ ನವೀಕರಣ ಕಾರ್ಯಕ್ಕೆ ಹಳೆಯ ರಚನೆಗಳನ್ನು ಒಡೆಯಬೇಕಲ್ಲ! ಹಾಗಾಗಿ ಈ ಇಕ್ಕಾಟ್ಟಾದ ಮೆಟ್ಟಿಲುಗಳನ್ನು ಹತ್ತಿಯೇ ಹೋಗಬೇಕು. ಫ್ರಾನ್ಸ್ ಆಧುನಿಕ ನಗರವಾದರೂ ಅಲ್ಲಿಯೂ ಸಹ ನೂರಾರು ಹಳೆಯ ಕಟ್ಟಡಗಳನ್ನು ಉಳಿಸಿಕೊಂಡಿದ್ದಾರೆ. ಯೂರೋಪಿನ ವಿಶೇಷವೆಂದರೆ ಆಧುನಿಕತೆ ಅವರ ಸಾಂಸ್ಕೃತಿಕ ಸ್ಮೃತಿಗಳಿಗೆ, ಸಾಂಸ್ಕೃತಿಕ ಅಸ್ಮಿತೆಗೆ ಮಾರಕವಾಗಿಲ್ಲ. ಆದರೆ ನಮ್ಮ ದೇಶದಲ್ಲ್ಲೋ ಆಧುನಿಕತೆ ಮತ್ತು ಸಾಂಸ್ಕೃತಿಕ ಅಸ್ಮಿತೆಗಳು ಒಂದಕ್ಕೊಂದು ವಿರುದ್ಧವೋ ಎಂಬಂತೆ ಭಾವಿಸುತ್ತೇವೆ. ಆಧುನಿಕತೆ ಎಂಬುದು ಹಳೆಯದೆಲ್ಲದರ ಮೇಲೆ ಕಟ್ಟಿದ ಗೋರಿಯೋ ಎಂಬಂತೆ ನಾವು ವರ್ತಿಸುತ್ತೇವೆ.
ಭಾರತ ಬಹು ಸಂಸ್ಕೃತಿಗಳ ದೇಶ. ನಾಲ್ಕು ಪ್ರಮುಖ ಜಾಗತಿಕ ಧರ್ಮಗಳ ಉಗಮಸ್ಥಾನ. ವಿಭಿನ್ನ ಸಂಸ್ಕೃತಿಗಳು, ಉಪಸಂಸ್ಕೃತಿಗಳು, ನೂರಾರು ಆಚಾರ ವಿಚಾರಗಳು ಒಟ್ಟಿಗೆ ಸಾವಿರಾರು ವರ್ಷಗಳ ಪರ್ಯಂತ ಬೆಳೆದು ಬಂದ ದೇಶ. ಅನ್ಯ ವಿಚಾರಗಳು, ಅನ್ಯ ಸಂಸ್ಕೃತಿಯ ಪದ್ಧತಿ ಆಚರಣೆಗಳು ಈ ದೇಶದಲ್ಲಿ ಅಕ್ಕಪಕ್ಕದಲ್ಲೇ ಇರುವುದನ್ನು ನೋಡಬಹುದು. ಪ್ರತಿರೋಧಗಳು ಬಹಳ ಕಡಿಮೆ ಎಂದೇ ಹೇಳಬಹುದು. ಈ ಅನಿವಾರ್ಯವಾದ ಸಹ ಬಾಳ್ವೆ ಭಾರತೀಯರಿಗೆ ಅಪಾರವಾದ ತಾಳ್ಮೆ, ಸಹಿಷ್ಣುತೆಯ ಮನೋಧರ್ಮವನ್ನು ಕೊಟ್ಟಿದೆ. ಏಕರೂಪ ಸಂಸ್ಕೃತಿಯ ವಾತಾವರಣ ‘ಅನ್ಯ’ ರನ್ನು ಸಹಿಸುವ ಸಹಿಷ್ಣುತೆಯ ಮನೋಧರ್ಮವನ್ನು ನೀಡಲಾರದು. ಸಾವಿರಾರು ವರ್ಷಗಳ ಪರ್ಯಂತ ‘ಅನ್ಯ’ರಾರೂ ಇಲ್ಲದ, ನಮ್ಮವರಷ್ಟೇ ಇರುವ ವಾತಾವರಣದಲ್ಲಿ ಬೆಳೆದ ಮನೋಧರ್ಮ ‘ಅನ್ಯ’ ಎಂಬ ಎಲ್ಲವನ್ನೂ ಗುಮಾನಿಯಿಂದಲೇ ನೋಡುವುದನ್ನು ಅಭ್ಯಾಸಮಾಡಿಕೊಂಡಿರುತ್ತದೆ. ಭಾರತೀಯ ಪರಿಸರದ ಸಹಿಷ್ಣುತೆಯ ಮನೋಧರ್ಮವನ್ನು ಸ್ವಾಮಿ ವಿವೇಕಾನಂದರು ಸುಮಾರು ನೂರ ಮೂವತ್ತು ವರ್ಷದ ಹಿಂದೆಯೇ ತಮ್ಮ ಭಾಷಣದಲ್ಲಿ ಹೀಗೆ ಹೇಳಿದರು. “I am proud to belong to religion which has taught the world both tolerance and universal acceptance. We believe not only in universal toleration but we accept all religions as true. I am proud to belong to a nation which has sheltered the persecuted and the refugees of all religions and all nations of the earth.
ಇಂದಿನ ಭಾರತದ ರಾಜಕೀಯ ಸಾಮಾಜಿಕ ಪರಿಸರದಲ್ಲಿ “ಅನ್ಯರು –ನಮ್ಮವರು ಎಂಬ ಭಿನ್ನತೆಯ ಮನೋಧರ್ಮವನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ದೌರ್ಭಾಗ್ಯವೇ ಸರಿ. ಈ ಭಿನ್ನತೆಯ ಮನೋಧರ್ಮ ನಮ್ಮ ಸಹಜ ಧರ್ಮವಲ್ಲ ಎಂಬುದನ್ನು ಎಂಟನೆಯ ಶತಮಾನದ ಕವಿರಾಜ ಮಾರ್ಗದ ಈ ಸಾಲುಗಳನ್ನು ಗಮನಿಸಿದರೆ ತಿಳಿಯುತ್ತದೆ” “ಕಸವರಮೆಂಬುದು ನೆರೆಸೈರಿಸಲಾರ್ಪೊಡೆ ಪರವಿಚಾರಮುಮಂ, ಧರ್ಮಮುಮಂ” ಕಸವರ ಎಂದರೆ ಚಿನ್ನ ಅಥವಾ ಸಂಪತ್ತು. ಇದು ಯಾವುದು ಎಂದರೆ ಪರವಿಚಾರವನ್ನು, ಪರಧರ್ಮದ ಸಾನಿಧ್ಯವನ್ನು ಸಹಿಸಿಕೊಳ್ಳುವುದು ಅಥವಾ ಸಹಿಷ್ಣುತೆಯೇ ಆಗಿದೆ ಎಂಬುದು ಈ ಸಾಲುಗಳತಾತ್ಪರ್ಯ. ಇಂದು ಬ್ರಿಟನ್ ಮತ್ತು ಯೂರೋಪಿನ ಅನೇಕ ದೇಶಗಳು ವಲಸಿಗರನ್ನು ಉದಾರವಾಗಿ ಸ್ವೀಕರಿಸುತ್ತಿರುವುದು ಆದರಣೀಯ. ಯಾವುದೇ ಜನಾಂಗವಾಗಲಿ, ದೇಶವಾಗಲಿ ತನ್ನ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ, ದ್ವೀಪ ದೋಪಾದಿಯಲ್ಲಿ ತಾನಷ್ಟೇ ಸುಖ ಸಮೃದ್ಧಿಯಲ್ಲಿ ಬದುಕಲು ಸಾಧ್ಯವಿಲ್ಲ. ಎಲ್ಲರನ್ನು, ಎಲ್ಲವನ್ನೂ ಒಳಗೊಳ್ಳುವುದೇ ಬದುಕು. ನಿಧಾನವಾಗಿಯಾದರೂ ಈ ಸತ್ಯಕ್ಕೆ ತೆರೆದುಕೊಳ್ಳುತ್ತಿರುವ ಪಾಶ್ಚಾತ್ಯ ಜಗತ್ತು ಸರಿಮಾರ್ಗದಲ್ಲೇ ಇದೆ ಎಂಬುದು ನನ್ನ ಅಭಿಪ್ರಾಯ.
- ಜಿ. ಎಸ್. ಜಯದೇವ್
* * *
ನಾನು `ಕಿಲಿಮಾಂಜಾರೋ` ಎನ್ನುವ ಹೆಸರನ್ನು ಮೊಟ್ಟಮೊದಲು ಕೇಳಿದ್ದು, ಆರನೇ ಇಯತ್ತೆಯಲ್ಲಿ ನಾನು ಭಾಗವಹಿಸಿದ ಅಂತರಶಾಲಾ ರಸಪ್ರಶ್ನೆಯ ಸ್ಪರ್ಧೆಯಲ್ಲಿ: `ಆಫ್ರಿಕಾ ಖಂಡದ ಅತ್ಯಂತ ಎತ್ತರದ ಪರ್ವತ ಯಾವುದು?` ಎನ್ನುವುದು ಪ್ರಶ್ನೆ. ಮೌಂಟ್ ಎವರೆಸ್ಟ್ ಎನ್ನುವುದು ಪ್ರಪಂಚದ ಅತ್ಯಂತ ಎತ್ತರದ ಪರ್ವತ ಅನ್ನುವುದನ್ನು ಬಿಟ್ಟರೆ ಬೇರೆ ಪರ್ವತಗಳ ಬಗ್ಗೆ ಏನೂ ಗೊತ್ತಿರಲಿಲ್ಲ. ಕಿಲಿಮಾಂಜಾರೋ ಎನ್ನುವುದು ಆಫ್ರಿಕಾ ಖಂಡದ ಅತ್ಯಂತ ಎತ್ತರದ ಪರ್ವತ ಎನ್ನುವುದು ಗೊತ್ತಾದದ್ದೇ ಅವತ್ತು. ಸದ್ಯ, ಆ ಪ್ರಶ್ನೆ ಬೇರೆ ತಂಡಕ್ಕೆ ಬಂದಿತ್ತು ಮತ್ತು ಆ ತಂಡಕ್ಕೂ ಸರಿಯಾದ ಉತ್ತರ ಗೊತ್ತಿರಲಿಲ್ಲ ಎನ್ನುವುದು ಬಹಳ ಖುಷಿಕೊಟ್ಟಿತ್ತು, ಆದರೆ ನನಗೆ ಉತ್ತರ ಗೊತ್ತಿರಲಿಲ್ಲ ಎನ್ನುವ ಬಗ್ಗೆ ಖೇದವೂ ಆಗಿತ್ತು. ಅವತ್ತು ಸಂಜೆ ಮನೋರಮಾ ಇಯರ್ ಪುಸ್ತಕದಲ್ಲಿ ಕಿಲಿಮಾಂಜಾರೋ ಬಗ್ಗೆ ಓದಿದ್ದು.
ನಾನಾಗ ಪಿಯುಸಿಯಲ್ಲಿದ್ದೆ. ಹೆಮಿಂಗ್ವೆಯ `ಓಲ್ಡ್ ಮ್ಯಾನ್ ಆಂಡ್ ಸೀ` ಎನ್ನುವ ನೀಳ್ಗತೆಯ ಬಗ್ಗೆ ಲಂಕೇಶ್ ತಮ್ಮ `ಮರೆಯುವ ಮುನ್ನ`ದಲ್ಲಿ ಬರೆದಿದ್ದರು. ಗ್ರಂಥಾಲಯದಲ್ಲಿ ಹುಡುಕಿದಾಗ ಹೆಮಿಂಗ್ವೇಯ ಆ ಪುಸ್ತಕದ ಜೊತೆ ಅವನ ಇನ್ನೊಂದು ಕಥಾಸಂಕಲನವೂ ಸಿಕ್ಕಿ, ಅದರಲ್ಲಿ `ದ ಸ್ನೋಸ್ ಆಫ್ ಕಿಲಿಮಾಂಜಾರೋ` ಎನ್ನುವ ಕತೆಯ ತಲೆಬರಹವನ್ನು ನೋಡಿವವರೆಗೂ ಮತ್ತೆ ಕಿಲಿಮಾಂಜಾರೋದ ನೆನಪೇ ಇರಲಿಲ್ಲ.
ಇಂಗ್ಲೆಂಡಿಗೆ ಬಂದ ಮೇಲೆ ಕಿಲಿಮಾಂಜಾರೋ ಎನ್ನುವ ಹೆಸರು ಮತೆ ಮತ್ತೆ ಕೇಳಲಾರಂಭಿಸಿತು. ಎ ಶ್ರೇಣಿಯಲ್ಲಿ ಓದುವ ಮಕ್ಕಳನ್ನು ಕರೆದುಕೊಂಡು ಕೆಲವು ಖಾಸಗಿ ಶಾಲೆಯವರು ಕಿಲಿಮಾಂಜಾರೋಗೆ ಹೋಗುವಾಗ, ಹೋಗಿ ಬಂದ ಮೇಲೆ ಆ ಫೋಟೋಗಳನ್ನು ನೋಡಿದಾಗ, ಕಿಲಿಮಾಂಜಾರೋ ಎನ್ನುವುದು ಹದಿಹರೆಯದವರು ಮಾತ್ರ ಹತ್ತಬಲ್ಲ ಪರ್ವತ ಎಂದುಕೊಂಡಿದ್ದೆ.
`ಕಿಲಿಮಾಂಜಾರೋ`ವನ್ನು ಕೆಲವು ವರ್ಷಗಳ ಹಿಂದೆ ವಸುಧೇಂದ್ರ ಬರೆದ `ಮೋಹನಸ್ವಾಮಿ` ಕಥಾಸಂಕಲನದಲ್ಲಿ ಓದಿದೆ. ಆ ಕಥೆ ನನ್ನನ್ನು ತುಂಬ ಕಾಡಿತ್ತು. ಪರ್ವತದ ಚಾರಣ ಮನುಷ್ಯನಿಗೆ ತನ್ನನ್ನು ತಾನು ಕಂಡುಕೊಳ್ಳಲು ಅಥವಾ ತೆರೆದುಕೊಳ್ಳಲು ಸಾಧ್ಯವಾಗುವ ಸಾಧ್ಯತೆಯ ಬಗ್ಗೆ ಪ್ರಶ್ನೆ ಎತ್ತುವ ಕಥೆ. ಆ ಕಥೆಯಲ್ಲಿ ಕಿಲಿಮಾಂಜಾರೋ ಪರ್ವತದ ಬಗ್ಗೆ ಮತ್ತು ಚಾರಣದ ಬಗ್ಗೆ ಕೆಲವು ವಿವರಗಳು ಬರುತ್ತವೆ. ಓಹೋ, ಇದು ಬರೀ ಚಿಕ್ಕ ವಯಸ್ಸಿನವರಿಗೆ ಮಾತ್ರವಲ್ಲ, ನಾನೂ ಮಾಡಬಹುದು ಎನಿಸಿದ್ದು ಆಗಲೇ!
ನನ್ನ ಮಿತ್ರರೊಬ್ಬರಲ್ಲಿ ಮಾತನಾಡುವಾಗ ಆಗಾಗ ನಾವೆಲ್ಲ ಸೇರಿ ಕಿಲಿಮಾಂಜಾರೋಗೆ ಹೋಗಬೇಕು, ಎವರೆಸ್ಟ್ ಅಡಿಗೆ ಹೋಗಬೇಕು ಎಂದೆಲ್ಲ ಮಾತಾಡಿಕೊಳ್ಳುತ್ತಿದ್ದೆವು. ಇಂಗ್ಲೆಂಡಿನ ಪೀಕ್ ಡಿಸ್ಟ್ರಿಕ್ಟ್ ಮತ್ತು ವೇಲ್ಸಿನ ಸ್ನೋಡೋನ್ ಹತ್ತಿ ಇಳಿದಿದ್ದನ್ನು ಬಿಟ್ಟರೆ ಯಾವ ಚಾರಣವನ್ನೂ ಮಾಡಿದವನಲ್ಲ. ನಾನು ಉತ್ತರ ಕರ್ನಾಟಕದ ಬಯಲುಸೀಮೆಯ ಬರಭೂಮಿಯವನು; ಗುಡ್ಡಗಾಡುಗಳಲ್ಲಿ ಹುಟ್ಟಿದವನೂ ಅಲ್ಲ, ಬೆಳೆದವನೂ ಅಲ್ಲ; ಪರ್ವತಗಳು, ಕಾಡುಗಳು ನನ್ನನ್ನು ಕಾಡುವುದೂ ಇಲ್ಲ. ಆದರೂ ನನ್ನ `ಬಕೆಟ್ ಲಿಸ್ಟ್`ನಲ್ಲಿ, ಕಿಲಿಮಾಂಜಾರೋವನ್ನು ಬರೆದುಕೊಂಡಿದ್ದೆ. ಆದರೆ ನಾನೂ ಕಿಲಿಮಾಂಜಾರೋ ಪರ್ವತವನ್ನು ಹತ್ತಿ ಸುರಕ್ಷಿತವಾಗಿ ಇಳಿದು ಬರುವೆನೆಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ.
ಆದರೆ ಈಗ ಆರೆಂಟು ತಿಂಗಳ ಹಿಂದೆ, ನನ್ನ ಮಿತ್ರನೊಬ್ಬ ‘(No) Country for Old Men’ ಎನ್ನುವ ವಾಟ್ಸ್ಯಾಪ್ ಗ್ರುಪ್-ಅನ್ನು ನಲವತ್ತು ದಾಟಿದ ತನ್ನಂಥ ಮಧ್ಯವಯಸ್ಕರಿಗಾಗಿ ಶುರುಮಾಡಿ, ಅದರಲ್ಲಿ ನನ್ನನ್ನೂ ಸೇರಿಸಿದ. ಎರಡು ತಿಂಗಳಿಗೊಮ್ಮೆ ಬರೀ ಗಂಡಸರೇ ಸೇರಿ ಎಲ್ಲಾದರೂ ಯುನೈಟೆಡ್ ಕಿಂಗ್ಡಮ್ಮಿನಲ್ಲಿ ಟ್ರೆಕಿಂಗ್ ಹೋಗುವುದು, ಆ ನೆಪದಲ್ಲಿ ಪಬ್ಬಿಗೆ ಹೋಗಿ ಕುಡಿದು ತಿಂದು ಬರುವುದು, ಇದರ ಮುಖ್ಯ ಉದ್ದೇಶ. ಈ ಗುಂಪಿನಲ್ಲಿ ಕಿಲಿಮಾಂಜಾರೋದ ಕನಸುಗಳೆದ್ದು ನನ್ನನ್ನೂ ತಟ್ಟಿದವು. ಅಷ್ಟು ಜನರ ಗುಂಪಿನಲ್ಲಿ ಗೋವಿಂದನಾದೆ.
ಕಿಲಿಮಾಂಜಾರೋದ ಕಿರುಪರಿಚಯ:
ಕಿಲಿಮಾಂಜಾರೋ ಆಫ್ರಿಕಾ ಖಂಡದ ತಾಂಜಾನಿಯಾ ದೇಶದಲ್ಲಿರುವ ಪರ್ವತ. ಇದೊಂದು ಜ್ವಾಲಾಮುಖಿ ಪರ್ವತ. ಆಫ್ರಿಕಾ ಖಂಡದ ಅತ್ಯಂತ ಎತ್ತರ ಪರ್ವತ, ಜಗತ್ತಿನ ಅತ್ಯಂತ ಎತ್ತರದ ಒಂಟಿ ಪರ್ವತ. ಜಗತ್ತಿನ ನಾಲ್ಕನೇ ಎತ್ತರದ ಪರ್ವತ.
ಈ ಪರ್ವತಕ್ಕೆ ಮೂರು ಶಿಖರಗಳಿವೆ: ಕಿಬೋ, ಮಾವೆಂಝಿ ಮತ್ತು ಶಿರಾ. ಇದರಲ್ಲಿ ಕಿಬೋ ಎಲ್ಲಕ್ಕಿಂತ ಎತ್ತರದಲ್ಲಿರುವ ಶಿಖರ ಮತ್ತು ಎಲ್ಲರೂ ಹತ್ತುವುದೂ ಇದನ್ನೇ. ಜಗತ್ತಿನ ಅತ್ಯಂತ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟಿಗೆ ಹೋಲಿಸಿದರೆ ಕಿಲಿಮಾಂಜಾರೋ ಅದಕ್ಕಿಂತ ೨೯೫೫ ಮೀಟರ್ ಚಿಕ್ಕದು. ಕಿಲಿಮಾಂಜಾರೋ ಸಮುದ್ರದ ಮಟ್ಟದಿಂದ ೫೮೯೫ ಮೀಟರ್ (ಹತ್ತಿರ ಆರು ಕಿಲೋಮೀಟರ್) ಎತ್ತರದಲ್ಲಿದೆ, ಅಡಿಗಳಲ್ಲಿ ಲೆಕ್ಕ ಹಾಕಿದರೆ ಸುಮಾರು ೨೦ ಸಾವಿರ ಅಡಿಗಳು. ಮೆಟ್ಟಿಲುಗಳ ಲೆಕ್ಕದಲ್ಲಿ ಹೇಳಿದರೆ ಸುಮಾರು ೨೫ ರಿಂದ ೨೮ ಸಾವಿರ ಮೆಟ್ಟಿಲುಗಳು. ಇಂಗ್ಲೆಂಡಿನ ದೊಡ್ಡ ಕಟ್ಟಡಗಳನ್ನು ತೆಗೆದುಕೊಂಡರೆ, ಒಂದು ಅಂತಸ್ತಿನಿಂದ ಇನ್ನೊಂದು ಅಂತಸ್ತಿಗೆ ಹೋಗಲು ಸುಮಾರು ೨೫ ಮೆಟ್ಟಿಲುಗಳಿರುತ್ತವೆ. ಅಂದರೆ ಈ ಪರ್ವತವನ್ನು ಹತ್ತುವುದು ಎಂದರೆ ಒಂದು ಸಾವಿರ ಮಹಡಿಯ ಕಟ್ಟಡವನ್ನು ಹತ್ತಿದಂತೆ! ಬರೀ ಮೇಲೆ ಹತ್ತುವುದಲ್ಲ, ಮುಂದೆ ಕೂಡ ನಡೆಯಬೇಕಲ್ಲ! ಬೆಟ್ಟದ ತಪ್ಪಲಿನಿಂದ ತುದಿಯನ್ನು ಮುಟ್ಟಲು ಒಟ್ಟು 40 ಕಿಲೋಮೀಟರ್ (೨೫ ಮೈಲುಗಳು, ಹತ್ತಿರ ಫುಲ್ ಮ್ಯಾರಥಾನ್), ಮತ್ತು ಅಷ್ತೇ ಇಳಿಯಬೇಕು, ಒಟ್ಟು ೮೦ ಕಿಲೋಮೀಟರಿನ ದಾರಿ. ಇದನ್ನು ನಾಲ್ಕರಿಂದ ಏಳುದಿನದವರೆಗೆ ಕ್ರಮಿಸಲಾಗುತ್ತದೆ.
ಕಿಲಿಮಾಂಜಾರೋ ಪರ್ವತವನ್ನು ಮೊಟ್ಟಮೊದಲು ಹತ್ತಿದ ಲಿಖಿತ ದಾಖಲೆ ಮಾಡಿರುವುದು ೧೮೮೯ರಲ್ಲಿ ಜರ್ಮನಿಯ ಜೊಹಾನ್ನೆಸ್ ರೆಬ್ಮನ್. ಅಂದಿನಿಂದ ಇಂದಿನವರೆಗೆ ಲಕ್ಷಾಂತರ ಜನರು ಈ ಪರ್ವತದ ಶೃಂಗವನ್ನು ಮುಟ್ಟಿ ಬಂದಿದ್ದಾರೆ. ಭೂಮಧ್ಯರೇಖೆಯ ಹತ್ತಿರದಲ್ಲಿದ್ದರೂ ಪರ್ವತದ ತುದಿಯಲ್ಲಿ ಹಿಮಗಡ್ಡೆಗಳಿವೆ. ಮೊದಲಿನ ಐತಿಹಾಸಿಕ ದಾಖಲೆಯಿಂದ ಇಂದಿನವರೆಗೆ ಹಿಮದ ಗುಡ್ಡೆಗಳು ಕಡಿಮೆಯಾಗುತ್ತ ಬಂದಿವೆ ಮತ್ತು ೨೦೩೫ರ ಹೊತ್ತಿಗೆ ಸಂಪೂರ್ಣವಾಗಿ ಮಾಯವಾಗಬಹುದು ಎನ್ನುವುದು ವಿಜ್ಞಾನಿಗಳ ಲೆಕ್ಕಾಚಾರ.
ಮೋಶಿ ಎನ್ನುವ ಊರು ಕಿಲಿಮಾಂಜಾರೋ ಪರ್ವತದ ತಪ್ಪಲಿನಲ್ಲಿದೆ. ಕೇವಲ ೪೦ ಕಿಲೋಮೇಟರ್ ದೂರದಲ್ಲಿ `ಕಿಲಿಮಾಂಜಾರೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ`ವಿದೆ.
ದಾರಿ ಯಾವುದಯ್ಯ, ಕಿಲಿಮಾಂಜಾರೋವಿಗೆ?
ಈ ಮಹಾನ್ ಪರ್ವತದ ತುದಿಯನ್ನು ಮುಟ್ಟಲು ಬಹಳಷ್ಟು ದಾರಿಗಳಿವೆ. ನಾಲ್ಕರಿಂದ ಏಳು ದಿನಗಳವರೆಗೆ ಈ ದಾರಿಗಳು ಶಿಖರದ ತುದಿಗೆ ಕರೆದುಕೊಂಡು ಹೋಗಿ ಇಳಿಸಿಕೊಂಡು ಬರುತ್ತವೆ. ಕೊಕೋಕೋಲಾ ಮಾರ್ಗ, ಮರಂಗು ಮಾರ್ಗ, ಲೆಮೊಶೋ ಮಾರ್ಗ ಇತ್ಯಾದಿ ಮಾರ್ಗಗಳಿವೆ. ನಮ್ಮ ಪ್ರವಾಸದ ಉಸ್ತುವಾರಿ ಹೊತ್ತ ಸಂಸ್ಠೆಯು ಏಳು ದಿನಗಳ ಚಾರಣವನ್ನು ನಿಗದಿಪಡಿಸಿತು. ಹೆಚ್ಚು ದಿನ ತೆಗೆದುಕೊಂಡಷ್ಟೂ ಕಡಿಮಯಾಗುವ ಆಮ್ಲಜನಕಕ್ಕೆ ಹೊಂದಿಕೊಳ್ಳಲು ಅನುಕೂಲವಾಗುತ್ತದೆ ಮತ್ತು ಪರ್ವತದ ತುದಿಯನ್ನು ತಲುಪುವ ಸಾಧ್ಯತೆಗಳು ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ನಮಗೆ ಏಳು ದಿನಗಳ ಚಾರಣವನ್ನು ಸೂಚಿಸಿದರು. ಈ ದಾರಿಗೆ `ಮಚಾಮೆ ಮಾರ್ಗ` ಎಂದು ಕರೆಯುತ್ತಾರೆ.
ಮೊದಲ ದಿನ:
ಮಚಾಮೆ ದ್ವಾರದಿಂದ ನಮ್ಮ ಪ್ರಯಾಣ ಆರಂಭ. ಮಚಾಮೆ ದ್ವಾರವು ಸಮುದ್ರದ ಮಟ್ಟದಿಂದ ೧೮೦೦ ಮೀಟರ್ ಎತ್ತರದಲ್ಲಿದೆ. ಅಲ್ಲಿಂದ ಸುಮಾರು ೧೮ ಕಿಲೋಮೀಟರ್ ನಡೆದು ೧೨೦೦ ಮೀಟರ್ ಮೇಲೆ ಹತ್ತಿ ೩೦೦೦ ಮೀಟರ್ ಎತ್ತರವನ್ನು ತಲುಪುವುದು ಮೊದಲ ದಿನದ ಚಾರಣ. ಮೊದಲ ದಿನದ ಚಾರಣವು ದಟ್ಟವಾದ ರೇನ್-ಫಾರೆಸ್ಟ್ ನಡುವೆ. ಸೂರ್ಯನ ಕಿರಣಗಳು ಒಳಗೆ ಬರದಷ್ಟು ದಟ್ಟ ಕಾಡು. ೨೬ ಡಿಗ್ರಿ ಸೆಲ್ಸಿಯಸ್ ಉಷ್ಣಾಂಷದಲ್ಲಿ ಒಂದು ತೆಳು ಟಿ-ಶರ್ಟ್ ಹಾಕಿಕೊಂಡು, ಬೆನ್ನ ಹಿಂದೆ ರಕ್-ಸ್ಯಾಕ್ ತಗುಲಿಸಿಕೊಂಡು ಹೊರಟೆವು.
ಗೈಡ್ ನಮ್ಮನ್ನು ನಿಧಾನವಾಗಿ ನಡೆಯಲು ಹೇಳುತ್ತಾನೆ. ತಾಂಜಾನಿಯಾದ ಮುಖ್ಯ ಭಾಷೆ, ಸ್ವಾಹಿಲಿ. ಸ್ವಾಹಿಲಿಯಲ್ಲಿ, `ಪೋಲೆ ಪೋಲೆ` ಎಂದರೆ `ನಿಧನಿಧಾನವಾಗಿ`. ಇದು ಕಿಲಿಮಾಂಜಾರೋ ಹತ್ತುವ ಮಂತ್ರ. ಇಲ್ಲಿ ನಿಧಾನವೇ ಪ್ರಧಾನ. ಗೈಡ್ ನಮ್ಮ ನಡೆಯುವ ವೇಗವನ್ನು ನಿರ್ಧರಿಸುತ್ತಾನೆ. `ಪೋಲೆ ಪೋಲೆ,` ಎಂದು ಆಗಾಗ ಹೇಳುತ್ತ ನಿಧಾನವಾಗಿ ದಟ್ಟ ಕಾಡಿನ ಮಧ್ಯ ಹತ್ತಿಸಿಕೊಂಡು ಹೋಗುತ್ತಾನೆ.
ಹಾದಿಯಲ್ಲಿ ಮಧ್ಯ ಮಧ್ಯ ನಿಂತು ಹಾಡು ಹೇಳಿ ಕುಣಿದು ನಲಿಸುತ್ತಾರೆ. ಕಿಲಿಮಾಂಜಾರೋ ಹತ್ತುವಷ್ಟರಲ್ಲಿ ಅವರು ಹಾಡುವ `ಹಕೂನ ಮಟಾಟ` ಹಾಡು ಬಾಯಿಪಾಠವಾಗಿ ಬಿಡುತ್ತದೆ. `ಹಕೂನ ಮಾಟಾಟ,` ಎನ್ನುವ ಫ್ರೇಸ್ `ಲಯನ್ ಕಿಂಗ್` ಸಿನೆಮಾದಿಂದಾಗಿ ಬಹಳ ಪ್ರಖ್ಯಾತವಾದ ಸಾಲು ಮತ್ತು ಹಾಡು ಕೂಡ: `ಹಕೂನ ಮಟಾಟ, ಮೀನ್ಸ್ ನೋ ವರೀಸ್`
ನಮ್ಮದು ೨೧ ಜನ ಮಧ್ಯವಯಸ್ಕ ಗಂಡಸರ ಗುಂಪು. ನಮ್ಮನ್ನು ನೋಡಿಕೊಳ್ಳುವ ಮುಖ್ಯ ಗೈಡ್, ಬ್ರೂಸ್, ನಲವತ್ತರ ಆಸುಪಾಸಿನಲ್ಲಿರುವ ಎತ್ತರದ ಆಳು. ಜೊತೆಗೆ ನಾಕಾರು ಜನ ಜ್ಯೂನಿಯರ್ ಗೈಡುಗಳು. ಅಷ್ಟೇ ಅಲ್ಲದೇ, ಅಡುಗೆಯವನು, ಅಡುಗೆಯ ಸಹಾಯಕರು, ನಮ್ಮ ಡಫೆಲ್ ಬ್ಯಾಗ್ (ಒಬ್ಬೊಬ್ಬರ ಡಫಲ್ ಬ್ಯಾಗ್ ೧೫ ಕಿಲೋ!) ಹೊರುವವರು, ನಮ್ಮ ಟೆಂಟ್ ಹೊರುವವರು, ಊಟಕ್ಕೆ ಬೇಕಾಗುವ ತಟ್ಟೆ, ಅಡುಗೆ ಸಾಮಗ್ರಿ, ಟೇಬಲ್, ಚೇರ್ ಹೊರುವವರು, ಟೆಂಟ್ ಟಾಯ್ಲೆಟ್ ಹೊರುವವರು, ಟಾಯ್ಲೆಟ್ಟನ್ನು ಶುಚಿಯಾಗಿ ಇಡುವವರು, ಎಲ್ಲ ಸೇರಿ ಸುಮಾರು ೬೦ ಜನ ಸಹಾಯಕರು ಇರಬಹುಸು! ಗೈಡುಗಳನ್ನು ಬಿಟ್ಟರೆ ಉಳಿದವರೆಲ್ಲರೂ ತಮ್ಮ ಹೆಗಲು ಮತ್ತು ತಲೆಯ ಮೇಲೆ ೨೦ ರಿಂದ ೩೦ ಕಿಲೋ ಭಾರದ ಸಾಮಗ್ರಿಗಳನ್ನು ಇಟ್ಟುಕೊಂಡು ಭರಭರನೇ ಮುಂದೆ ಸಾಗಿ, ನಮ್ಮ ಟೆಂಟು, ಟಾಯ್ಲೆಟ್ಟು ಮತ್ತು ಅಡಿಗೆಗಳನ್ನು ತಯಾರು ಮಾಡುತ್ತಾರೆ.
ನಾವು ಸಂಜೆಯ ಹೊತ್ತಿಗೆ ನಮ್ಮ ಮೊದಲ ದಿನದ ಟೆಂಟನ್ನು ತಲುಪಿದಾಗ, ನಮ್ಮ ಟೆಂಟುಗಳು ನಮಗಾಗಿ ಕಾಯುತ್ತಿದ್ದವು. ಬಿಸಿ ಬಿಸಿ ಊಟ ಕೂಡ ತಯಾರಾಗಿತ್ತು. ನಾವು ತಲುಪಬೇಕಾದ `ಕಿಬೋ` ಶೃಂಗ ಕಾಣುತ್ತಿತ್ತು. ಒಂದು ಟೆಂಟಿನಲ್ಲಿ ಇಬ್ಬರು. ಇಬ್ಬರು ಕೂತುಕೊಳ್ಳಬಹುದು, ಇಬ್ಬರು ಮಲಗಿಕೊಂಡರೆ ಟೆಂಟು ತುಂಬಿಹೋಗುವಂಥ ಚಿಕ್ಕ ಟೆಂಟು. ಊಟ ಮಾಡಿ ಮಲಗಿದೆವು. ಮೊದಲ ದಿನದ ಚಾರಣ ಆರಾಮವಾಗಿತ್ತು.
ಎರಡನೇ ದಿನ:
ಎರಡನೇ ದಿನ ಮಚಾಮೆ ಕ್ಯಾಂಪಿನಿಂದ ಶಿರಾ ಕ್ಯಾಂಪಿಗೆ ೧೦ ಕಿಲೋಮೀಟರ್, ೮೪೦ ಮೀಟರ್ ಮೇಲಕ್ಕೆ ಹತ್ತಿ, ೩೮೪೦ ಮೀಟರ್ ತಲುಪಿದೆವು. ಮೊದಲ ದಿನದ ದಟ್ಟಕಾಡು ಮಾಯವಾಗಿ ಎರಡನೇ ದಿನ ನಮಗೆ ಸಿಕ್ಕಿದ್ದು ಚಿಕ್ಕ ಚಿಕ್ಕ ಗಿಡಗಳು, ಕಳ್ಳೆ ಕಂಟೆಗಳು. ಶಿರಾ ಕ್ಯಾಂಪಿನಲ್ಲಿ ನಮ್ಮ ರಕ್-ಸ್ಯಾಕ್ ಇಟ್ಟು, ಕ್ಯಾಂಪಿನಿಂದ ಹತ್ತಿರದಲ್ಲಿರುವ ನೈಸರ್ಗಿಕವಾದ ಶಿರಾ ಗುಹೆಗೆ ಹೋದೆವು. ಅದರೊಳಗೆ ಹೋಗಿ, ಗುಹೆಯ ಗುಡ್ಡದ ಮೇಲೆ ಹತ್ತಿ ಫೋಟೊ ತೆಗೆದುಕೊಂಡು ಬಂದೆವು. ಸಂಜೆಯಾಗಿತ್ತು, ಮೊದಲಬಾರಿಗೆ ಸಣ್ಣಗೆ ಚಳಿಯ ಅನುಭವ ಶುರುವಾಯಿತು. ನಡೆದದ್ದು ಕೇವಲ ೧೦ ಕಿಲೋಮೀಟರ್ ಆಗಿದ್ದರೂ ಎರಡನೇ ದಿನದ ಚಾರಣ ಮೊದಲನೇ ದಿನಕ್ಕೆ ಹೋಲಿಸಿದರೆ ಸ್ವಲ್ಪ ಕಷ್ಟಕರವಾಗಿತ್ತು.
ಮೂರನೇ ದಿನ:
ಮೂರನೇ ದಿನ ೭೬೦ ಮೀಟರ್ ಹತ್ತಿ, ೪೬೦೦ ಮೀಟರ್ ಎತ್ತರದಲ್ಲಿರುವ ಲಾವಾ ಟಾವರ್ ತಲುಪಿದೆವು! ಆಮ್ಲಜನಕ ಕಡಿಮಾಯಾಗುವುದು ಯಾರೂ ಹೇಳದಿದ್ದರೂ ಮೊದಲ ಸಲ ಅನುಭವಕ್ಕೆ ಬರುತ್ತದೆ. ಅಷ್ಟು ಮೇಲೆ ಹತ್ತಿದ ಮೇಲೆ ಮತ್ತೆ ೬೫೦ ಮೀಟರ್ ಕೆಳಗೆ ಇಳಿಯಬೇಕು! ಒಟ್ಟು ೧೫ ಕಿಲೋಮೀಟರ್ ನಡೆದು ಬರಾಂಕೋ ಕ್ಯಾಂಪ್ ತಲುಪಿದೆವು. ದಾರಿಯುದ್ದಕ್ಕೂ ಆಗಾಗ ನೀರು ಕುಡಿಯಲು ಗೈಡ್ ಎಲ್ಲರಿಗೂ ಜ್ಞಾಪಿಸುತ್ತಿದ್ದ. ಸ್ವಾಹಿಲಿಯಲ್ಲಿ ನೀರಿಗೆ `ಮಾಜಿ` ಎನ್ನುತ್ತಾರೆ. ನಾವೆಲ್ಲ ಆಗ, `ಮಾಜಿ ಮಾಜಿ,` ಎಂದು ಕೂಗಿ ನೀರು ಕುಡಿಯುತ್ತಿದೆವು. ಲಾವಾ ಟಾವರಿನಿಂದ ಕಿಲಿಮಾಂಜಾರೋದ ಶೃಂಗ ನಯನ ಮನೋಹರವಾಗಿ ಕಾಣುತ್ತಿತ್ತು, ಆದರೆ ಊಹೆಗೂ ಮೀರಿದ ಎತ್ತರದಲ್ಲಿತ್ತು. ನಿಜವಾಗಿಯೂ ನಾನು ಇದರ ಶೃಂಗ ಮುಟ್ಟಲು ಸಾಧ್ಯವೇ ಎಂದು ಸಣ್ಣ ಅಳುಕು ಕೂಡ ಮೂಡಿತು. ದಾರಿಯುದ್ದಕ್ಕೂ ಚಿಕ್ಕ ಚಿಕ್ಕ ಪೊದೆಗಳು ಮತ್ತು ಕುರುಚಲು ಗಿಡಗಳು. ತೆಂಗಿನಗಿಡವನ್ನು ಮೇಲಿನಿಂದ ಜೋರಾಗಿ ಒತ್ತಿದಂತೆ ಕಾಣುವ ಚಿಕ್ಕ ಚಿಕ್ಕ ಸೆನಿಸಿಯೋ ಗಿಡಗಳು. ಮೂರನೇ ದಿನ ನಾವು ಒಟ್ಟು ಬರೀ ೧೧೦ ಮೀಟರ್ ಮೇಲೆ ಬಂದಿದ್ದೆವು. ಎಂಥಹ ನಷ್ಟ!
ಆಗ ನಮ್ಮ ಚೀಫ್ ಗೈಡ್ ಹೇಳಿದ, `ಮೂರನೇ ದಿನ ಅಷ್ಟು ಮೇಲೆ ಹತ್ತಿ ಮತ್ತೆ ಇಳಿಯುವುದಿದೆಯಲ್ಲ, ಇದು ಕಡಿಮೆಯಾಗುತ್ತಿರುವ ಆಮ್ಲಜನಕ್ಕೆ ಹೊಂದಿಕೊಳ್ಳಲು ಬಹಳ ಉಪಯುಕ್ತವಾದ ಚಾರಣದ ದಿನ. ನೀವು ಅಷ್ಟು ಮೇಲೆ ಹತ್ತಿ ಅಲ್ಲಿ ಊಟ ಮಾಡಿದ್ದೀರಿ, ಆಗ ನಿಮ್ಮಲ್ಲಿ ಆಗಲೇ ಕೆಲವರಿಗೆ ತಲೆನೋವು ಕಾಣಿಸಿಕೊಂಡಿದೆ, ನಂತರ ಕೆಳಗೆ ಇಳಿದಿದ್ದೀರಿ, ಇಲ್ಲಿ ಮಲಗುತ್ತೀರಿ, ಇದು ಮುಂದಿನ ಎರಡು ದಿನಗಳಿಗೆ ಮುಖ್ಯವಾದ ಪೂರ್ವ ತಯಾರಿ,` ಎಂದ. ಇದ್ದರೂ ಇರಬಹುದು ಎಂದುಕೊಂಡೆ. ಒಟ್ಟು ಹದಿನೈದು ಕಿಲೋಮೀಟರ್ ಹತ್ತಿ ಇಳಿಯುವಷ್ಟರಲ್ಲಿ ಎಲ್ಲರೂ ಸುಸ್ತು ಹೊಡೆದು ಹೋಗಿದ್ದೆವು. ಕೆಲವರಿಗೆ ತಲೆ ನೋವು ಕಾಣಿಸಿಕೊಂಡಿತ್ತು. ಚಳಿ ಕೂಡ ಜಾಸ್ತಿಯಾಗಿತ್ತು.
ನಾಲ್ಕನೇ ದಿನ:
ನಾಲ್ಕನೇ ದಿನ ಬರಾಂಕೋ ಕ್ಯಾಂಪಿನಿಂದ ಕರಂಗಾ ಕ್ಯಾಂಪಿಗೆ ಹತ್ತು ಕಿಲೋಮೀಟರ್, ೩೯೫೦ ಮೀಟರಿನಿಂದ ೪೨೦೦ ಮೀಟರಿನವರೆಗೆ (೨೫೦ ಮೀಟರ್ ಎತ್ತರ) ಚಾರಣ! ಪ್ರತಿದಿನದಂತೆ ಪ್ರಾಥರ್ವಿಧಿಗಳನ್ನು ಪೂರೈಸಿಕೊಂಡು (ಸ್ನಾನದ ಹೊರತು), ಬೆಳಗಿನ ಉಪಾಹಾರ ಮಾಡಿ, ಚಳಿಗೆ ಬೇಕಾದ ಬಟ್ಟೆಗಳನ್ನು ಹಾಕಿಕೊಂಡು, ರಕ್-ಸ್ಯಾಕಿನಲ್ಲಿ ಕೆಲವು ಬಟ್ಟೆ ಸ್ನ್ಯಾಕ್-ಗಳನ್ನು ಇಟ್ಟುಕೊಂಡು, ಕ್ಯಾಮಲ್ ಬ್ಯಾಗಿನಲ್ಲಿ ನೀರು ತುಂಬಿಕೊಂಡು, ಸನ್-ಸ್ಕ್ರೀನ್ ಹಾಕಿಕೊಂಡು ಹೊರಟೆವು. ಕರಂಗಾ ಕ್ಯಾಂಪ್ ತಲುಪಿದಾಗ ಲೇಟ್- ಮಧ್ಯಾಹ್ನ. ಈಗ ನಾವು ಎಲ್ಲ ಮೋಡಗಳಿಗಿಂತ ಮೇಲೆ ಇದ್ದೆವು. ಮೋಡಗಳು ನಮ್ಮ ಕೆಳಗೆ ಸುಮುದ್ರದಂತೆ ಕಾಣುತ್ತಿದ್ದವು! ಅವತ್ತು ನಾವು ಸ್ವಾಹಿಲಿಯ `ಕಿಲಿಮಾಂಜಾರೋ` ಹಾಡನ್ನು ಕನ್ನಡ ಮತ್ತು ಹಿಂದಿಗೆ ಭಾಷಾಂತರ ಮಾಡಿ ಅದೇ ಧಾಟಿಯಲ್ಲಿ ಹೇಳಿ ಕುಣಿದು, ಸಾಕಷ್ಟು ಫೋಟೋ ತೆಗೆದುಕೊಂಡೆವು. ಹಿಂದಿನ ದಿನಕ್ಕೆ ಹೋಲಿಸಿದರೆ ಚಳಿ ಹೆಚ್ಚಾಗಿತ್ತು.
ಐದನೇ ದಿನ:
ಐದನೇ ದಿನ ಕರಂಗಾ ಕ್ಯಾಂಪಿನಿಂದ ಬರಾಫು (ಬರಾಫು ಎಂದರೆ ಹಿಮ, ಹಿಂದಿಯಲ್ಲಿ `ಬರ್ಫ್` ಶಬ್ದಕ್ಕೆ ಎಷ್ಟು ಹತ್ತಿರವಿಲ್ಲವೇ?) ಕ್ಯಾಂಪಿಗೆ ಚಾರಣ, ೪೨೦೦ರಿಂದ ೪೬೬೦ ಮೀಟರಿನವರೆಗೆ, ಹತ್ತಿರ ಅರ್ಧ ಕಿಲೋಮೀಟರ್ ಮೇಲಕ್ಕೆ. ಸಮುದ್ರ ಮಟ್ಟದಿಂದ ನಾಲ್ಕು ಸಾವಿರ ಮೀಟರ್ ಮೇಲೆ ಹೋದ ಮೇಲೆ ವಾತಾವರಣದಲ್ಲಿ ಆಮ್ಲಜನಕ ಸಾಕಷ್ಟು ಕಡಿಮೆಯಾಗಲು ಶುರುವಾಗುತ್ತದೆ. ಐದನೇ ದಿನ ನಾವು ನಡೆದದ್ದು ೮ ಕಿಲೋಮೀಟರ್, ನಡೆಯಲು ತೆಗೆದುಕೊಂಡ ಅವಧಿ ೫ ಗಂಟೆ! ಆಗಲೇ ಸ್ವಲ್ಪ ಏದುಸಿರು ಶುರುವಾಗಿತ್ತು, ಚಳಿಕೂಡ ತನ್ನ ಕೈಚಳಕವನ್ನು ತೋರಿಸುತ್ತಿತ್ತು. ಮೋಡಗಳಿಲ್ಲದ ನಗ್ನ ಕಿಬೋ ಶೃಂಗ ಕಣ್ಣಳತೆಯಲ್ಲಿ ಕರೆಯುತ್ತಿತ್ತು. ಬರಾಫು ಕ್ಯಾಂಪಿನಲ್ಲಿ ವಾತಾವರಣದ ಆಮ್ಲಜನಕ ೨೧%ನಿಂದ ೧೦%ಗೆ ಇಳಿದಿತ್ತು!
ಮಧ್ಯಾಹ್ನವಾಗುವಷ್ಟರಲ್ಲಿ ಬರಾಫು ಕ್ಯಾಂಪ್ ತಲುಪಿದೆವು. ಯಥಾಪ್ರಕಾರ ಬಿಸಿಬಿಸಿ ಊಟ ಮಾಡಿದೆವು. ನಂತರ ನಮಗೆಲ್ಲ ಮಲಗಲು ಹೇಳಿದರು! ಆ ಚಳಿಯಲ್ಲಿ, ಅಷ್ಟು ಕಡಿಮೆ ಆಮ್ಲಜನಕದಲ್ಲಿ ಅದೂ ಮಧ್ಯಾಹ್ನ ಎಲ್ಲಿಂದ ತಾನೆ ನಿದ್ದೆ ಬಂದೀತು? ಆದರೆ ಹೊರಗೆ ಅಸಾಧ್ಯ ಚಳಿ, ಜೊತೆಗೆ ನಾಲ್ಕು ಹೆಜ್ಜೆ ಜೋರಾಗಿ ನಡೆದರೆ ಏದುಸಿರು ಬೇರೆ, ಟೆಂಟಿಗೆ ಬಂದು ಮಾಡಿದ್ದು ಮಲಗುವ ನಾಟಕವಷ್ಟೇ!
ಸಂಜೆ ಏಳು ಗಂಟೆಗೆ ರಾತ್ರಿಯ ಭೋಜನ. ಇದು ಕೊನೆಯ ಆರೋಹಣದ ಕೊನೆಯ ಭೋಜನ. ಊಟ ಮಾಡಿದ ಮೇಲೆ ಮತ್ತೆ ಮಲಗಲು ಹೇಳಿದರು, ಏಕೆಂದರೆ ಕೊನೆಯ ಆರೋಹಣ ಶುರುವಾಗುವುದು ಮಧ್ಯರಾತ್ರಿ ೧೨ ಗಂಟೆಗೆ! ಇಲ್ಲಿಯವರೆಗೂ ನಮ್ಮ ಚಾರಣವೆಲ್ಲ ಹಾಡುಹಗಲಿನಲ್ಲೇ ಆಗಿತ್ತು. ನಾವಿನ್ನೂ ಹತ್ತಬೇಕಾಗಿರುವುದು ೧೨೩೫ ಮೀಟರ್! ಆಗಲೇ ಗಾಳಿಯ ಆಮ್ಲಜನಕಕ್ಕೆ ಒದ್ದಾಡುತ್ತಿದ್ದೇವೆ. ರಾತ್ರಿಯ ಹೊತ್ತು ಚಳಿ ಕೂಡ ಜಾಸ್ತಿ. ಬರಾಫು ಕ್ಯಾಂಪಿನಲ್ಲಿ ಉಷ್ಣಾಂಶ ಆಗಲೆ ೮ ಡಿಗ್ರಿ ಸೆಲ್ಸಿಯಸ್ ತೋರಿಸುತ್ತಿತ್ತು. ಇದನ್ನೆಲ್ಲ ನೆನೆಸಿಕೊಂಡು ವೇಳೆ ಕಳೆದದ್ದು, ನಿದ್ದೆ ಮಾತ್ರ ಬಾರದು! ಎದ್ದಿದ್ದು ಬೆಳಿಗ್ಗೆ ೭ ಗಂಟೆಗೆ, ಇನ್ನು ರಾತ್ರಿ ಪೂರ್ತಿ ಏರಬೇಕು. ಇದೆಲ್ಲ ನನ್ನಿಂದ ಸಾಧ್ಯವೇ, ಅಥವಾ ಇದೆಲ್ಲ ಕನಸೇ?
ಐದನೇ ರಾತ್ರಿ ಮತ್ತು ಆರನೇ ದಿನ:
ಐದನೇ ರಾತ್ರಿ ಹನ್ನೊಂದು ಗಂಟೆಯಿಂದ ಕೊನೆಯ ಆರೋಹಣಕ್ಕೆ ತಯಾರಾಗಲು ಶುರುವಾದೆವು. ಅಂತಿಮಾರೋಹಣಕ್ಕೆ ಎರಡರಿಂದ ಮೂರು ಲೇಯರ್ ಕಾಲುಚೀಲಗಳು, ಮೂರರಿಂದ ನಾಲ್ಕು ಲೇಯರ್ ಉಡುಗೆಗಳು ಕಾಲು, ಕೈ ಮತ್ತು ದೇಹಕ್ಕೆ, ಕತ್ತಿಗೆ ಬಲಕ್ಲಾವಾ, ತಲೆ ಮತ್ತು ಕಿವಿ ಮುಚ್ಚಿಕೊಳ್ಳಲು ಟೋಪಿ, ಬೆರಳುಗಳನ್ನು ಮುಚ್ಚಿಕೊಳ್ಳಲು ಕೈಗವಸು, ನಡೆಯಲು ಸಹಾಯಕ್ಕಾಗಿ ಊರುಗೋಲುಗಳು, ತಲೆಗೆ ಹೆಡ್-ಲೈಟು, ರಕ್-ಸ್ಯಾಕಿನಲ್ಲಿ ಕ್ಯಾಮೆಲ್ ಬ್ಯಾಗಿನಲ್ಲಿ ನೀರು, ಸ್ನ್ಯಾಕ್, ಇನ್ನೆರೆಡು ಇರಲಿ ಎಂದು ಹೆಚ್ಚುವರಿ ದಿರಿಸುಗಳು! ಮಧ್ಯರಾತ್ರಿ ಹನ್ನೆರಡಕ್ಕೆ ನಮ್ಮ ಕೊನೆಯ ಆರೋಹಣಕ್ಕೆ ನಮ್ಮ ಗೈಡ್ ನಾಂದಿ ಹಾಡಿದ, `ಹಕೂನ ಮಟಾಟ`.
ನಾವು ಹೊರಟ ರಾತ್ರಿ ಅಮಾವಾಸ್ಯೆ! `ಅಮಾಸಿಯ ನಡುರಾತ್ರಿ ಎಲ್ಲೂ ಹೋಗಬ್ಯಾಡ,` ಎಂದು ಚಿಕ್ಕವನಿದ್ದಾಗ ಹಿರಿಯರಿಂದ ಕೇಳಿಸಿಕೊಳ್ಳುವ ಮಾತು ನೆನಪಾಯಿತು. ಅವತ್ತು ಅಮಾವಾಸ್ಯೆಯ ಮಧ್ಯರಾತ್ರಿ ನಾನೆಂದೂ ಮಾಡಿರದ ಆರೋಹಣಕ್ಕೆ ಅಣಿಯಾಗಿದ್ದೆ! ನಮ್ಮಂತೆಯೇ ಹತ್ತಾರು ಗುಂಪುಗಳು ನಮಗಿಂತೆ ಮೊದಲೇ ಮುಂದೆ ಸಾಗುತ್ತಿದ್ದರು. ಗೈಡ್ ದಾರಿ ತೋರಿಸುತ್ತಿದ್ದ. ನಾವು ಒಬ್ಬರ ಹಿಂದೆ ಒಬ್ಬರು ಹೆಡ್-ಲೈಟಿನಲ್ಲಿ ಮುಂದಿನವರ ಕಾಲನ್ನು ಅನುಸರಿಸಿ ಮೇಲೆ ಹತ್ತಲು ತೊಡಗಿದೆವು. `ಪೋಲೆ ಪೋಲೆ` ಹೆಜ್ಜೆ ಹಾಕುವ ಬರೀ ಕಲ್ಲು ಮಣ್ಣುಗಳಿಂದ ತುಂಬಿದ ಕಡಿದಾದ ಆರೋಹಣ. ನಮ್ಮ ಗೈಡ್ ತುಂಬ ನಿಧಾನವಾಗಿ ಹೆಜ್ಜೆ ಹಾಕುತ್ತ ನಮ್ಮ ಹತ್ತುವ ಗತಿಯನ್ನು ನಿರ್ಧರಿಸಿದ್ದ.
ಅವನು ಅಷ್ಟು ಮೆಲ್ಲ ಹತ್ತುತ್ತಿದ್ದರೂ, ನಮಗೆ ಅದೂ ಕಷ್ಟವೆನಿಸಲು ಶುರು ಹತ್ತಿತು. ಕೈಗವಸು ಹಾಕಿಕೊಂಡಿದ್ದರೂ ಹತ್ತು ನಿಮಿಷದಲ್ಲಿ ಕೈ ಮರಗಟ್ಟಲು ಶುರುವಾಯಿತು. ಇನ್ನೊಂದು ಕೈಗವಸನ್ನು ಅದರ ಮೇಲೆ ಹಾಕಿಕೊಂಡೆ. ಕೈಯ ಚಳಿ ಸ್ವಲ್ಪ ಕಡಿಮೆಯಾಯಿತು, ಆದರೆ ಊರುಗೋಲು ಹಿಡಿಯುವುದು ಕಷ್ಟವೆನಿಸಲು ಶುರುವಾಯಿತು. ಇನ್ನೂ ಹತ್ತು ನಿಮಿಷವಾಗುವಷ್ಟರಲ್ಲಿ ಎದೆ ಮತ್ತು ಬೆನ್ನನ್ನು ಯಾರೋ ಕಟ್ಟಿ ಅಮುಕುತ್ತಿರುವ ಭಾವನೆ. ಸದ್ಯ ಮೂರು ಕಾಲುಚೀಲ ಹಾಕಿಕೊಂಡಿದ್ದು ಒಳ್ಳೆಯದಾಯಿತು, ಕಾಲ್ಬೆರಳುಗಳು ಸುರಕ್ಷಿತವಾಗಿದ್ದವು.
ಸುಮಾರು ಒಂದು ಗಂಟೆ ಹತ್ತಿದ ಮೇಲೆ ಒಂದು ಸಣ್ಣ ಬ್ರೇಕ್! ಆಗ ಒಬ್ಬ ಗೈಡ್ ನನ್ನ ಕಷ್ಟವನ್ನು ನೋಡಿ, ನನ್ನ ಬಳಿ ಬಂದು, ಕೈಗವಸನ್ನು ಸರಿಯಾಗಿ ಹಾಕಿದ. ನಾನು ಹಾಕಿಕೊಂಡ ಲೇಯರ್-ಗಳಲ್ಲಿ ಒಂದು ಲೇಯರ್ ಅನ್ನು ಕಡಿಮೆ ಮಾಡಲು ಹೇಳಿದ. ನಾನು ಇಲ್ಲಿಯವರೆಗೂ ಊರುಗೋಲನ್ನು ಉಪಯೋಗಿಸಿಯೇ ಇರಲಿಲ್ಲ, ಆದರೆ ಊರುಗೋಲಿಲ್ಲದೇ ಅಂತಿಮ ಆರೋಹಣ ಮಾಡಬೇಡಿ ಎಂದು ನಮ್ಮ ಚೀಫ್ ಗೈಡ್ ಹೇಳಿದ್ದ. ನನ್ನ ಜೊತೆಗಾರರೆಲ್ಲ್ರೂ ಊರುಗೋಲನ್ನು ಹಿಡಿದು ನಡೆಯುತ್ತಿದ್ದರು. ನನಗೆ ಮಾತ್ರ ಇಂಥ ರಾತ್ರಿಯಲ್ಲಿ ಕೈಗವಸಿನಲ್ಲಿ ಊರುಗೋಲನ್ನು ಊರಿ ನಡೆಯುವುದು ತುಂಬ ಕಷ್ಟವಾಗುತ್ತಿತ್ತು. ಗೈಡ್ ನನ್ನ ಊರುಗೋಲುಗಳನ್ನು ಮಡಚಿ ನನ್ನ ರಕ್-ಸ್ಯಾಕಿಗೆ ಹಾಕಿದ. ತನ್ನಂತೆ ಊರುಗೋಲಿಲ್ಲದೇ ಹತ್ತಬಹುದು ಎಂದು ಭರವಸೆ ಕೊಟ್ಟ. ಕುಡಿಯಲು ನೀರುಕೊಟ್ಟ, ತಿನ್ನಲು ನನ್ನ ಬ್ಯಾಗಿನಿಂದ ಬಿಸ್ಕೀಟು ಕೊಟ್ಟ. ಹೋದ ಜೀವ ಬಂದಂತಾಯಿತು.
ಮತ್ತೆ ಚಾರಣ ಮುಂದುವರೆಯಿತು. ನಾವೀಗ ಎಲ್ಲ ಮೋಡಗಳಿಗಿಂತ ಆಗಲೇ ಮೇಲಕ್ಕೆ ಬಂದ್ದಿದ್ದೆವಲ್ಲ, ಅಮವಾಸ್ಯೆಯ ರಾತ್ರಿ ಬೇರೆ, ಆಕಾಶದಲ್ಲಿ ಪ್ರತಿ ನಕ್ಷತ್ರಗಳೂ ಕಾಣಿಸುತ್ತಿದ್ದವು. ಅಷ್ಟು ಶುಭ್ರವಾದ ಅಷ್ಟೊಂದು ಚುಕ್ಕೆಗಳಿರುವ ಆಕಾಶವನ್ನು ನಾನು ಅವತ್ತೇ ನೋಡಿದ್ದು. ಆದರೆ ತಲೆ ಮೇಲೆತ್ತಿ ನಡೆಯುವಂತಿಲ್ಲ, ಮುಂದಿನವರ ಕಾಲನ್ನು ನೋಡಿ ಹತ್ತಬೇಕು. ನಾವು ಹೀಗೆ ಹತ್ತಬೇಕಾದರೆ ಬೇರೆ ಗುಂಪಿನಿಂದ ಕೆಲವರನ್ನು ಇಳಿಸಿಕೊಂಡು ಹೋಗುತ್ತಿದ್ದರು, ಅವರಿಗೆಲ್ಲ `ತೀವ್ರ ಪರ್ವತ ಕಾಯಿಲೆ` (acute mountain syndrome) ಆಗಿತ್ತು. ಬಾಯಿಯವರೆಗೂ ಬಂದು ಗಂಟಲಿಗೆ ಇಳಿಯಲಿಲ್ಲ ಎನ್ನುವಂತೆ, ಇಷ್ಟು ಎತ್ತರ ಬಂದು ಪರ್ವತದ ಶೃಂಗ ತಲುಪದವರನ್ನು ನೋಡುತ್ತ ನಿಧನಿಧಾನವಾಗಿ ಮೇಲೆ ಹತ್ತುತ್ತಿದ್ದೆವು. ನಮಗೂ ಅದೇ ಪಾಡು ಬರದಿರಲಿ ಎಂದು ಮನಸ್ಸಿನಲ್ಲೇ ಪ್ರಾರ್ಥಿಸುತ್ತ. ಚಳಿಯ ಹೊಡೆತಕ್ಕೆ ಕ್ಯಾಮೆಲ್ ಬ್ಯಾಗಿನಲ್ಲಿ ನೀರು ಪೂರ್ತಿ ಮಂಜುಗಡ್ಡೆಯಾಗಿಬಿಟ್ಟಿದೆ. ಉಷ್ಣಾಂಶ -೧೦, ಅನುಭವಿಸುವ ಉಷ್ಣಾಂಶ -೧೫ ಡಿಗ್ರೈ ಸೆಂಟಿಗ್ರೇಡ್!
ಕಿಬೋ ಶಿಖರದ ಮೊದಲ ಶೃಂಗದ ಹೆಸರು, ಸ್ಟೆಲ್ಲಾ ಪಾಯಿಂಟ್. ನಾವು ಅದನ್ನು ತಲುಪಲು ಸುಮಾರು ೭೫% ಹತ್ತಿರಬಹುದು, ಸೂರ್ಯೋದಯದ ಮೊದಲ ಕುರುಹುಗಳು ಶುರುವಾದವು. ನಾವು ಹತ್ತುವ ಪರ್ವತವನ್ನು ಬಿಟ್ಟರೆ, ಸುತ್ತಲಿನ ೨೭೦ ಡಿಗ್ರ ಒಂದು ಸರಳರೇಖೆಯನ್ನು ಎಳೆದಂತೆ, ನಸುಗೆಂಪು ಬಣ್ಣದ ಬೆಳಕು! ಅಲ್ಲಿ ಕಾಣುವ ದೃಶ್ಯವನ್ನು ಮತ್ತು ಅನುಭವವನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯ, ಫೋಟೋಗಳಲ್ಲಿ ವಿಡಿಯೋಗಳಲ್ಲಿ ಹಿಡಿದಿಡುವುದು ಸಾಧ್ಯವೇ ಇಲ್ಲ. ಮುಂದಿನ ಹದಿನೈದು ನಿಮಿಷ ಸೂರ್ಯ ಹುಟ್ಟುವ ಅದ್ಭುತ ಕ್ರಿಯೆ ನಾವು ಮೇಲೆ ಹತ್ತುವ ಕಾರ್ಯಕ್ಕೆ ಹುಮ್ಮಸ್ಸು ಕೊಡುತ್ತಿತ್ತು. ಎರಡೂ ಬದಿಯಲ್ಲಿ ಹಿಮಾಚ್ಛಾಧಿತ ಕಲ್ಲುಗಳು ಕಣ್ಣಿಗೆ ತಂಪನ್ನುಣಿಸುತ್ತಿದ್ದವು.
ಸ್ಟೆಲ್ಲಾ ಪಾಯಿಂಟ್ ೫೭೫೬ ಮೀಟರ್ ಎತ್ತರದಲ್ಲಿದೆ. ನಾವು ಅಲ್ಲಿ ತಲುಪುವಷ್ಟರಲ್ಲಿ ಆಗಲೇ ಕೆಲವರು ಕೆಳಗೆ ಇಳಿಯುತ್ತಿದ್ದರು! ಅಲ್ಲಿ ಫೋಟೋ ತೆಗೆದುಕೊಂಡು ಸ್ವಲ್ಪ ಹೊತ್ತು ವಿರಮಿಸಿ, ನಮ್ಮ ಕೊನೆಯ ಆರೋಹಣವನ್ನು ಆರಂಭಿಸಿದೆವು, `ಉಹುರು` ಎನ್ನುವ ತುದಿಯನ್ನು ಮುಟ್ಟಲು. ಅಸಾಧ್ಯ ಚಳಿ. ಹತ್ತು ಹೆಜ್ಜೆ ನಡೆಯುವಷ್ಟರಲ್ಲಿ ಏದುಸಿರು. ಆದರೆ `ಊರಿಗೆ ಬಂದವಳು ನೀರಿಗೆ ಬಾರದಿರುವಳೇ?` ಎನ್ನುವ ಗಾದೆಯಂತೆ, `ಸ್ಟೆಲ್ಲಾ ಪಾಯಿಂಟ್ ತಲುಪಿದ ಮೇಲೆ ಉಹುರು ತಲುಪದಿರಲು ಸಾಧ್ಯವೇ?`
ಸ್ಟೆಲ್ಲಾ ಪಾಯಿಂಟ್-ನಿಂದ `ಉಹುರು` ಸುಮಾರು ಒಂದು ಕಿಲೋಮೀಟರ್, ಸ್ಟೆಲ್ಲಾ ಪಾಯಿಂಟಿಗಿಂತ ಕೇವಲ ೧೪೦ ಮೀಟರ್ ಎತ್ತರ. ನಡೆಯುವ ಎರಡೂ ಬದಿ ದೂರದಲ್ಲಿ ಹಿಮದ ಬಂಡೆಗಳು, ದೂರದಲ್ಲಿ ಕೆಳಗೆ ಮೋಡಗಳು. ನನಗೆ `ನಾರದ ವಿಜಯ್` ಸಿನೆಮಾದಲ್ಲಿ ಆಕಾದಲ್ಲಿ ನಡೆಯುವ ನಾರದನ ನೆನಪಾಯಿತು. ಹೆಜ್ಜೆಯ ಮೇಲೊಂದು ಹೆಜ್ಜೆಯ ನಿಕ್ಕುತ ಒಂದೂವರೆ ಗಂಟೆಯಲ್ಲಿ ಉಹುರು ತಲುಪಿದೆವು. ಅಸಾಧ್ಯ ಎಂದುಕೊಂಡ ಕಿಲಿಮಾಂಜಾರೋ ಪರ್ವತದ ತುಟ್ಟತುದಿ `ಉಹುರು`ದ ಮೇಲೆ ನಾನು ನಿಂತಿದ್ದೆ.
ಉಹುರು ಎಂದು ಬರೆದಿರುವ ಫಲಕದ ಮುಂದೆ ನಿಂತಾಗ, ನನಗೆ ಕಿಲಿಮಾಂಜಾರೋ ಗೆದ್ದ ಭಾವನೆ ಬರಲಿಲ್ಲ. ನನ್ನನ್ನು ಗೆದ್ದ ಭಾವನೆಯೂ ಬರಲಿಲ್ಲ. ನನಗಿಂತ ಮೊದಲು ಲಕ್ಷಾಂತರ ಜನ ಕಿಲಿಮಾಂಜಾರೋ ಹತ್ತಿದ್ದಾರೆ, ನಾನಾದ ಮೇಲೆ ಕೂಡ ಮಿಲಿಯನ್-ಗಟ್ಟಲೇ ಜನರು ಹತ್ತುತ್ತಾರೆ. ಗೈಡುಗಳು ಪೋರ್ಟರುಗಳಿಲ್ಲದೇ ಇದ್ದಿದ್ದರೆ ಇದೆಲ್ಲ ಸಾಧ್ಯವಾಗುವ ಮಾತೇ? `ಉಹುರು` ಎಂದರೆ `ಬಿಡುಗಡೆ` ಎಂದು ಅರ್ಥ; ಎಂಥಹ ಅನ್ವರ್ಥನಾಮ! `ಉಹುರು` ಆ ಕ್ಷ ನನ್ನನ್ನು ಎಲ್ಲದರಿಂದ ಬಿಡುಗಡೆ ಮಾಡಿ ವಿನೀತನನ್ನಾಗಿಸಿತು. ಪ್ರಕೃತಿಯ ಅಗಾಧತೆಯ ಮುಂದೆ ನಾನು ಅಕ್ಷರಷಃ ಇರುವಯಾಗಿಬಿಟ್ಟೆ. ನಮ್ಮನ್ನು ಇಲ್ಲಿಯವರೆಗೆ ಹರೆತಂದ ಗೈಡುಗಳು, ಪೋರ್ಟರುಗಳು, ಅಡುಗೆಯವರು ಮಾಡುವ ಕೆಲಸವನ್ನು ಹಣದಲ್ಲಿ ಅಳೆಯಲು ಸಾಧ್ಯವೇ ಇಲ್ಲ ಎಂದು `ಉಹುರು` ಹೇಳಿದಂತಾಗುತ್ತದೆ, ನಾನು ವಿನಮ್ರನಾಗಿ `ಉಹುರು` ಎಂದು ಬರೆದ ಫಲಕದ ಬಳಿ ಕೂತುಕೊಂಡೆ. .
ಮಿತ್ರರೆಲ್ಲ ಸೇರಿದೆವು. ಎಲ್ಲ ೨೧ ಜನರೂ ಉಹುರು ಮುಟ್ಟಿದೆವು ಎನ್ನುವುದು ದೊಡ್ಡ ಸಮಾಧಾನ. ನೂರಾರು ಫೋಟೋಗಳನ್ನು ತೆಗೆದುಕೊಂಡು, ಉಹುರುದವರೆಗೂ ತಂದ ಥೇಪ್ಲಾ ತಿಂದು, ಹಾಡಿ, ಕುಣಿದೆವು. ನಂತರ ನಾನೊಬ್ಬನೇ ಇನ್ನೂ ಸ್ವಲ್ಪ ಮುಂದೆ ನಡೆದು ಹೋದೆ. ಚಳಿ ಸ್ವಲ್ಪ ಕಡಿಮೆಯಾಗಿತ್ತು ಅಥವಾ ಕಡಿಮೆ ಅನಿಸುತ್ತಿತ್ತು. ಹತ್ತು ನಿಮಿಷ ಏಕಾಂತದಲ್ಲಿ ಕುಳಿತುಕೊಂಡು ಸುತ್ತಲಿನ ದೃಶ್ಯ ವೈಭವನ್ನು ನೋಡುತ್ತ ಕುಳಿತುಕೊಂಡು ಬಿಟ್ಟೆ. ಇದು ನಿಜವಾ, ಕನಸಾ, ಭ್ರಮೆಯಾ, ವಾಸ್ತವವಾ, ಕತೆಯಾ ಎನಿಸುತ್ತಿತ್ತು. ಆಗುತ್ತಿರುವುದು ಸಂತೋಷವಾ, ಆನಂದವಾ, ಶಾಂತಿಯಾ, ಶೂನ್ಯವಾ, ಖಾಲಿತನವಾ, ರಾಹಿತ್ಯವಾ? ಏನೆಂದು ಕರೆಯಲಿ ಆ ಭಾವಕ್ಕೆ? ಕಿಲಿಮಾಂಜಾರೋದ ತುಟ್ಟತುದಿಯಲ್ಲಿ `ಉಹುರು`ವಿನ ಅನುಭವವಾಯಿತು ಎನ್ನುವುದೇ ಸರಿಯೇನೋ!
ಎಷ್ಟು ಹೊತ್ತು ಅಂತ ಅಲ್ಲೇ ಇರಲು ಸಾಧ್ಯ? ಒಲ್ಲದ ಮನಸ್ಸಿನಿಂದ ಒಬ್ಬೊಬ್ಬರಾಗಿ ಹೊರಟೆವು. ಕೆಳಗಿಳಿಯಲು ಮಾತ್ರ ಊರುಗೋಲು ಬೇಕೇ ಬೇಕು. ಹೊಸ ಹುಮ್ಮಸ್ಸಿನಲ್ಲಿ ಊರುಗೋಲುಗಳನ್ನು ಊರುತ್ತ ಕೆಳಗೆ ಇಳಿಯಲು ಶುರುಮಾಡಿದೆವು. ಹಿಂದಿನ ದಿನ ಬೆಳಗಿನ ಆರುವರೆಯಿಂದ ನಿದ್ದೆ ಮಾಡಿಲ್ಲದಿದ್ದರೂ ಒಂಚೂರೂ ನಿದ್ದೆ ಬರುತ್ತಿಲ್ಲ, ಆಗಿರುವ ಸುಸ್ತು ಕೂಡ ಮರೆತು ಹೋಗಿತ್ತು. ಮತ್ತೆ ಬರಾಫು ಕ್ಯಾಂಪು ಸೇರಿದಾಗ ಮಧ್ಯಾಹ್ನವಾಗಿತ್ತು. ಅಲ್ಲಿ ಊಟಮಾಡಿ ಸ್ವಲ್ಪ ಹೊತ್ತು ವಿರಾಮ. ದೇಹಕ್ಕೆ ಹೊಸ ಉತ್ಸಾಹ ಬಂದಿತ್ತು. ಅಲ್ಲಿಂದ ನಾವು ಮಲಗುವ `ಹೈ ಕ್ಯಾಂಪಿ`ಗೆ ಮತ್ತೆ ಎರಡೂವರೆ ಗಂಟೆ ಇಳಿತ. ಹೈ ಕ್ಯಾಂಪ್ ಸೇರಿದಾಗ ಸೂರ್ಯ ಮುಳುಗಲು ಕಾಯುತ್ತಿದ್ದ. ಹೈ ಕ್ಯಾಂಪ್ ೩೯೫೦ ಮೀಟರ್ ಎತ್ತರದಲ್ಲಿದೆ.
ಒಟ್ಟಿನಲ್ಲಿ ಮಧ್ಯರಾತ್ರಿಯಿಂದ ೧೨೪೦ ಮೀಟರ್ ಹತ್ತಿ ಉಹುರು ಮುಟ್ಟಿ, ಮತ್ತೆ ೧೯೪೫ ಮೀಟರ್ ಕೆಳಗೆ ಇಳಿದು ಬಂದಿದ್ದೆವು! ಅಲ್ಲಿ ಊಟಮಾಡಿ ಟೆಂಟ್ ಒಳಗೆ ಸೇರಿದೆವು. ಕಳೆದ ೩೮ ಗಂಟೆಯಿಂದ ನಿದ್ದೆ ಮಾಡಿರಲಿಲ್ಲ. ತಲೆ ಇಟ್ಟ ತಕ್ಷಣ ನಿದ್ದೆ ಬಾರದಿರುತ್ತದೆಯೇ?
ಏಳನೇ ದಿನ:
ಮಾರನೇಯ ದಿನ ಎದ್ದು, ತಿಂಡಿ ತಿಂದು, ಮತ್ತೆ ರೇನ್-ಫಾರೆಸ್ಟ್-ನಲ್ಲಿ ೧೪ ಕಿಲೋಮೀಟರ್ ಇಳಿಯುತ್ತ ಮ್ವೇಕಾ ಬಾಗಿಲನ್ನು ತಲುಪಿ, ಕಿಲಿಮಾಂಜಾರೋಗೆ ವಿದಾಯ ಹೇಳಿದೆವು. ಮ್ವೇಕಾ ದ್ವಾರದಿಂದ ಹೊರಬಂದು, ನಮಗಾಗಿ ಕಾಯುತ್ತಿದ್ದ ಬಸ್ಸಿನಲ್ಲಿ ಕೂತು ಮತ್ತೆ ನಮ್ಮ ಹೊಟೇಲು ಸೇರಿದೆವು.