ಉಫಿಜಿ ಎಂಬ ಕಲೆಯ ಉಗ್ರಾಣ – ಲಕ್ಷ್ಮೀನಾರಾಯಣ ಗುಡೂರ

ನನಗೆ ಇಟಲಿ ಹಲವಾರು ಕಾರಣಗಳಿಗೆ ಇಷ್ಟ. ಆ ದೇಶಕ್ಕೂ, ಭಾರತಕ್ಕೂ ಇರುವ ಸಾಮ್ಯತೆಗಳು ಒಂದು ಮುಖ್ಯ ಕಾರಣ. ಉಳಿದೆಲ್ಲ ಅಲ್ಲಿಂದ ಮುಂದೆ – ಉಪಕಾರಣಗಳು ಅನ್ನಬಹುದು. ಅಲ್ಲಿನ ಪುರಾಣಕಥೆಗಳು, ಕಲೆ, ಕಟ್ಟಡಗಳು, ಇತಿಹಾಸ, ದೇವರ ಜಾಗಗಳು, ಜನರ ಸಾಮಾಜಿಕ ಜೀವನ, ಊಟ-ತಿಂಡಿಗಳ ಬಗೆಗಿನ ಉತ್ಸಾಹ … ಹೀಗೆ ಪಟ್ಟಿ ಮುಂದುವರಿಯುತ್ತದೆ.   

ಹೀಗೆಯೇ ಪ್ರಯಾಣದಲ್ಲಿ ಒಮ್ಮೆ ಸಿಕ್ಕ ಕರ್ನಾಟಕ ಮೂಲದ ಇಟಲಿಯ ನಿವಾಸಿಯೊಬ್ಬರು ನನಗೆ ಹೇಳಿದಂತೆ, ಅಲ್ಲೂ ಭಾರತೀಯರಂತೆಯೇ 6ಕ್ಕೆ ಬರುವೆನೆಂದು ಹೇಳಿ 8ಕ್ಕೆ ಹೋಗಬಹುದು, ಹೇಳದೆಯೆ ನಿಮ್ಮ ಮಿತ್ರನನ್ನು ಅವರ ಮನೆಗೆ ಔತಣಕ್ಕೆ ಕರೆದೊಯ್ಯಬಹುದು! ಬ್ರಿಟಿಶರ ಜೀವನಕ್ರಮಕ್ಕೆ ಹೊಂದಿಕೊಂಡಿರುವ ನಾನು ಹಾಗೇನೂ ಮಾಡಿಲ್ಲವೆನ್ನಿ.  

ಚಿತ್ರಕಲೆ ಹಾಗೂ ಛಾಯಾಗ್ರಹಣದಲ್ಲಿ ಆಸಕ್ತಿಯಿರುವ ನನಗೆ ಎಷ್ಟು ಬಾರಿ ಬೇಕಾದರೂ ಹೋಗಿ ಅಲ್ಲಿನ ಸ್ಥಳಗಳನ್ನು, ಅದರಲ್ಲೂ ಗ್ಯಾಲರಿಯಾಗಳನ್ನು (museum) ನೋಡಲು ಬೇಜಾರಾಗದು.

ಅಲ್ಲಿ ಯಾವ ಊರಿಗೆ ಹೋದರೂ, ಮೇಲೆ ಹೇಳಿದ ಪಟ್ಟಿಯ ಹೆಚ್ಚು ಕಡಿಮೆ ಎಲ್ಲಾ ಅಂಶಗಳೂ ನೋಡಲು ಸಿಗುತ್ತವೆ.  ಈ ಬಾರಿ (ಎರಡನೇ ಬಾರಿ, ಮೊದಲೊಮ್ಮೆ ಯಾವುದೋ ಕೋರ್ಸಿಗೆ ಹೋಗಿದ್ದೆ – ಲೇ.) ಕುಟುಂಬಸಹಿತನಾಗಿ ಫ್ಲಾರೆನ್ಸ್ ನೋಡಲು ಹೋಗಿದ್ದೆ. ಮೊದಲ ಸಲ ಹೋದಾಗ ಮೈಕೆಲೇಂಜಲೋ ಕೆತ್ತಿರುವ ವಿಶ್ವವಿಖ್ಯಾತ ಡೇವಿಡ್ ಮೂರ್ತಿಯಿರುವ ಅಕಾದೆಮಿಯಾ ಗ್ಯಾಲರಿಗೆ ಹೋಗಿ ಆಗಿತ್ತು. ಹೀಗಾಗಿ, ಈ ಬಾರಿ ಹೋದಾಗ ಮನೆಯವರನ್ನೆಲ್ಲ ಅಲ್ಲಿಗೆ ಕಳಿಸಿ, ಇನ್ನೊಂದು ದೊಡ್ಡ ಗ್ಯಾಲರಿಯಾ ಆದ ಉಫಿಜಿ (Uffizi Galleria) ವಸ್ತುಸಂಗ್ರಹಾಲಯಕ್ಕೆ ನಾನೊಬ್ಬನೇ – ನನ್ನ ಕ್ಯಾಮರಾದೊಂದಿಗೆ – ಹೋದೆ. ಈ ಲೇಖನ ಅದರ ಬಗ್ಗೆ ಮಾತ್ರ.

ಆರ್ನೊ ನದಿಯ ದಂಡೆಯ ಮೇಲಿರುವ ಮಹಾನ್ ಕಟ್ಟಡಗಳ ಸಂಕುಲವೇ ಈಗಿನ ಉಫಿಜಿ ಸಂಗ್ರಹಾಲಯ.  ಇದು 16ನೆಯ ಶತಮಾನದ ಇಟಲಿಯ ವಾಸ್ತುಶಿಲ್ಪ ನೈಪುಣ್ಯದ ಉತ್ತಮ ಉದಾಹರಣೆ ಅನ್ನಬಹುದು.  
ಉಫಿಜಿಯ ಇತಿಹಾಸ:  
1550ರ ಇಸವಿಯಲ್ಲಿ ಫ್ಲಾರೆನ್ಸ್ ನಗರದ ಡ್ಯೂಕ್ ಆಗಿದ್ದ ಕಾಸಿಮೊ I ಡಿ’ಮೆಡಿಚಿ, ಹಂಚಿ ಹೋಗಿದ್ದ ನಗರದ ನ್ಯಾಯಾಲಯಗಳನ್ನೆಲ್ಲ ಒಂದೇ ಕಚೇರಿಯ ಆವರಣಕ್ಕೆ ತರಲೆಂದು, ಆಗಿನ ವಾಸ್ತುಶಿಲ್ಪಿ ಜಿಯಾರ್ಜಿಯೋ ವಸಾರಿಯ ಉಸ್ತುವಾರಿಯಲ್ಲಿ ಕಟ್ಟಿಸಿದ Office ಅಥವಾ Uffici / Uffizi ಕಟ್ಟಡಗಳೇ ಇವು. ದೊಡ್ಡ ದೊಡ್ಡ ಕಿಟಕಿಗಳ ನೈಸರ್ಗಿಕ ಗಾಳಿ-ಬೆಳಕಿನ ಅಗಲವಾದ ಆವಾರಗಳು ಇಲ್ಲಿಯ ವೈಶಿಷ್ಟ್ಯ. ಇದರ ನಿರ್ಮಾಣ modular ಆಗಿದ್ದು, ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಕೊಠಡಿಗಳನ್ನು ನಿರ್ಮಿಸಬಹುದಾದ future-proofing ಇಲ್ಲಿದೆ.  ಈ ಕಟ್ಟಡ ಇಂಗ್ಲಿಷಿನ U ಆಕಾರದಲ್ಲಿದ್ದು, ಪೂರ್ವ ಮತ್ತು ಪಶ್ಚಿಮ ಭಾಗಗಳು ಮಾತ್ರ ನೆಲದ ಮೇಲಿವೆ. ನದಿಯಂಚಿನಲ್ಲಿ ಇರುವ ಇವೆರಡನ್ನೂ ಜೋಡಿಸುವ, U ಅಕ್ಷರದ ಬುಡದ ಭಾಗ ಮೇಲಿನ ಅಂತಸ್ತುಗಳಿಗೆ ಮಾತ್ರವೇ ಸೀಮಿತವಾಗಿದೆ, ಅಲ್ಲದೇ ಎತ್ತರದ ಭಾರೀ ಕಂಬಗಳ ಮೇಲೆ ಕಟ್ಟಲಾಗಿದೆ. ಮಧ್ಯದ ತೆರೆದ ಅಂಕಣವು ಒಂದೆಡೆ ನದಿಯ ಮೇಲಿರುವ ಪುರಾತನ ಕಲ್ಲಿನ ಸೇತುವೆಯ (ಪಾಂಟೆ ವೆಕ್ಕಿಯೋ) ಮೂಲಕ ಹಸಿರು ಹೊದಿಸಿರುವ ಬೆಟ್ಟಗಳ, ತೋಟಗಳ ಕಡೆಗೆ ಹೋದರೆ, ಇನ್ನೊಂದು ತುದಿ ಫ್ಲಾರೆನ್ಸಿನ ಮುಖ್ಯ ಮಂದಿರ ಸಾಂತಾ ಮರಿಯಾ ದೆಲ್ ಫಿಯೊರೆಯ ಕಡೆಗೆ ಕರೆದೊಯ್ಯುತ್ತದೆ. ಕಟ್ಟಡದೊಳಗಿನ ಒಳಛಾವಣಿಯನ್ನು ಅಸಂಖ್ಯಾತ ಚಿತ್ರಗಳಿಂದ ಅಲಂಕರಿಸುವ ಕಾರ್ಯ 1581ರಲ್ಲಿ ಶುರುವಾಯಿತು. ಕಾಸಿಮೊ I ಡಿ’ಮೆಡಿಚಿಯ ಮರಣಾನಂತರ ಅವನ ಮಗ ಡ್ಯೂಕ್ ಫ್ರಾನ್ಸೆಸ್ಕೋ I ಮತ್ತವನ ತಮ್ಮಂದಿರು ಈ ಕಟ್ಟಡದ ಕಾರ್ಯವನ್ನು ಇನ್ನೊಬ್ಬ ವಾಸ್ತುಶಿಲ್ಪಿ ಬರ್ನಾರ್ಡೋ ಬುಆಂಟಾಲೆಂಟಿಯ ನೇತೃತ್ವದಲ್ಲಿ ಮುಗಿಸಿ, ಅದನ್ನು ಗ್ಯಾಲರಿಯಾ ಆಗಿ ಬದಲಾಯಿಸುತ್ತಾರೆ.
ತಿರುಗಿ ವರ್ತಮಾನಕ್ಕೆ:
ನಾನೊಬ್ಬನೇ ಹೋಗುವ ವಿಚಾರವಿದ್ದುದರಿಂದ, ಮುಂಚೆಯೇ ಟಿಕೆಟ್ ತೆಗೆಸಿಕೊಂಡಿದ್ದೆ, ಅಷ್ಟೇ ಅಲ್ಲ ಬೆಳಗ್ಗೆ ಬಾಗಿಲು ತೆರೆಯುತ್ತಲೆ ಒಳಕಾಲಿಡುವ ಪ್ರಯತ್ನವನ್ನೂ ಮಾಡುವವನಿದ್ದೆ.  ಅಲ್ಲಿಗೆ ಹೋದಾಗ, ಆ ರೀತಿ ವಿಚಾರ ಮಾಡಿದವ ನಾನೊಬ್ಬನೇ ಇರಲಿಕ್ಕಿಲ್ಲ ಅನ್ನುವ ಅನುಮಾನ ಗಟ್ಟಿಯಾಗಿ ಸಾಬೀತಾಯಿತು. ಆದರೂ, ಅಲ್ಲಿನ ಕಾರ್ಯಕರ್ತರ ಚಾಕಚಕ್ಯತೆಯಿಂದಾಗಿ ಐದಾರು ನಿಮಿಷದಲ್ಲಿಯೇ ಒಳಗಿದ್ದೆ. ಬೆಳಗ್ಗೆ ಬೇಗ ಎದ್ದು ಓಡಿದ್ದು ನಿಜಕ್ಕೂ ಒಳ್ಳೆಯದೇ ಆಯಿತೆನ್ನಿ, ಪ್ರಾಕಾರಗಳೆಲ್ಲ ಜನರಿಲ್ಲದೆ, ಪ್ರತಿಯೊಂದು ಮೂರ್ತಿ, ಚಿತ್ರವನ್ನು ಮನಸೋಇಚ್ಛೆ ನೋಡುವುದು ಸಾಧ್ಯವಾಯಿತು.  

ಮೂರು ಮಹಡಿಗಳ ಆರು ಪ್ರಾಕಾರಗಳು ಮತ್ತು ಅವಕ್ಕಂಟಿದ ಕೊಠಡಿಗಳಲ್ಲಿ ಸುಮಾರು 2300 ವರ್ಷಗಳ ಇತಿಹಾಸ ತುಂಬಿದೆ.  ಗ್ರೀಕರ ಮತ್ತು ರೋಮನ್ನರ ಸಂಗಮವರಿ ಕಲ್ಲಿನ ಮೂರ್ತಿಗಳು ಅಂದಿನ ಶಿಲ್ಪಿಗಳ ಕೌಶಲ್ಯವನ್ನು ಹಾಡಿಹೊಗಳುತ್ತವೆ.  ಹಾಲುಗಲ್ಲು ಮತ್ತು ಕಡುಗಪ್ಪು ಸಂಗಮವರಿ ಕಲ್ಲಿನ ಮೂರ್ತಿಗಳನ್ನು ನೋಡುತ್ತ ಗಂಟಗಟ್ಟಲೆ ಕೂಡುವವರಿದ್ದಾರೆ.  ಇವುಗಳ ಜೊತೆಯಲ್ಲೆ ಸುಮಾರು ಸಾವಿರ ವರ್ಷಗಳಿಂದ ಇತ್ತೀಚಿನ (!) ರೆನೈಸ್ಸಾನ್ಸ್ ಪ್ರಕಾರದವರೆಗಿನ ಕಲಾವಿದರ ತೈಲಚಿತ್ರಗಳಿವೆ. ಇವುಗಳಲ್ಲಿ ಬಹುಪಾಲು ಗ್ರೀಕರ, ರೋಮನ್ನರ ಪೌರಾಣಿಕ, ಐತಿಹಾಸಿಕ ಪಾತ್ರಗಳ / ವ್ಯಕ್ತಿಗಳ ಮೂರ್ತಿಗಳೇ ಹೆಚ್ಚು. ನಂತರದ ಚಿತ್ರಕಲೆಗಳಲ್ಲಿ ಬೈಬಲ್ಲಿನ ಕಥೆಗಳು ಕಂಡುಬರುತ್ತವೆ.  

ಪ್ರಾಕಾರಗಳ ಒಳತಾರಸಿಯನ್ನೆಲ್ಲ ಒಂದಿಂಚೂ ಬಿಡದಂತೆ ಪೌರಾಣಿಕ ಪಾತ್ರಗಳ ಪೇಂಟಿಂಗುಗಳ ಜೊತೆಗೆ, ಇದನ್ನು ಕಟ್ಟುವಾಗಿನ ಸಮಯದ ಮೆಡಿಚಿ ಕುಟುಂಬದ ಪ್ರಮುಖರ ಚಿತ್ರಗಳಿಂದ ತುಂಬಲಾಗಿದೆ. 

ಮೂರು ಅಂತಸ್ತುಗಳನ್ನು ಎರಡು ಬಾರಿ ಮೇಲಿಂದ ಕೆಳಗೆ, ಈ ತುದಿಯಿಂದ ಆ ತುದಿಯವರೆಗೆ ಮನಃಪೂರ್ವಕವಾಗಿ ನೋಡಿ, ಬೇಕಾದ್ದನ್ನು ಕ್ಯಾಮರಾದಲ್ಲಿ, ಫೊನಿನಲ್ಲಿ ಸೆರೆಹಿಡಿಯುತ್ತ ಓಡಾಡಿ ಮುಗಿಸಿದೆ. ಮೂರನೆಯ ಬಾರಿಯ ಸುತ್ತುವಿಕೆಯ ಸಮಯಕ್ಕೆ ಆಗಲೇ ಸಾವಿರಾರು ಜನ-ಜಾತ್ರೆ ಸೇರಿಯಾಗಿತ್ತು. ಈ ಬಾರಿ ನನಗೆ ಫೋಟೊ ತೆಗೆದುಕೊಳ್ಳುವ ಅವಸರವಿರಲಿಲ್ಲವಾಗಿ, ಸುಮ್ಮನೆ ಜನರ ಮಧ್ಯ ಓಡಾಡಿ, ಅಲ್ಲಲ್ಲಿ ಬೆಂಚಿನಮೇಲೆ ಕೂತು ನೋಡಿ ಕೆಳಗೆ ಬಂದೆ.
ಎಲ್ಲಾ ಮ್ಯೂಸಿಯಮ್ಮುಗಳಲ್ಲಿ ಇರುವಂತೆ ಅಲ್ಲಿಯೂ ಒಂದು ನೆನಪುಕಾಣಿಕೆ ಅಂಗಡಿ ಇತ್ತಲ್ಲ, ಅಲ್ಲಿಗೆ ಹೋದೆ. ಎದುರಿಗೆ ಕಲಾವಿದ ಸಾಂಡ್ರೋ ಬಾಟಿಚೆಲ್ಲಿಯ ವಿಶ್ವಪ್ರಸಿದ್ದ ವೀನಸ್ಸಳ ಹುಟ್ಟು (The Birth of Venus by Botticelli, circa 1480s) ಪೇಂಟಿಂಗಿನ ದೊಡ್ಡ ಚಿತ್ರ ಕಾಣಿಸಬೇಕೇ? ಅದನ್ನು ಹೇಗೆ ಬಿಟ್ಟೆ ಅಂದುಕೊಳ್ಳುತ್ತಾ, ಮತ್ತೆ ತಿರುಗಿ ಎರಡನೆಯ ಮಹಡಿಗೆ ಓಡಿದೆ (ಸುಳ್ಳು – ಲಿಫ್ಟಿನಲ್ಲಿ ಹೋದೆ – ಲೇ.). ಅದುವರೆಗೂ ಮುಚ್ಚಿದ್ದ ಕೊಠಡಿಯೊಂದು ಈಗ ತೆರೆದಿದ್ದು ಅದರ ಮುಂದೆ ಒಂದರವತ್ತು ಜನರ ಸಾಲಿತ್ತು. ಸರಿ, ಮತ್ತೇನು, ನೋಡದೆಯಂತೂ ಹೋಗುವಂತಿಲ್ಲವಲ್ಲ, ನಿಂತೆ. ಒಳಗೆ ಒಂದು ನೂರರಷ್ಟು ಇದ್ದ ಗುಂಪಿನ ಮಧ್ಯ ನುಗ್ಗಿಕೊಂಡು ಹೋಗಿ ಆ ಸುಮಾರು ಮೂರು ಮೀಟರ್ ಅಗಲ, ಎರಡು ಮೀಟರ್ ಎತ್ತರದ ಚಿತ್ರದ ಮುಂದೆ ನಿಂತಾಗ ಆದ ಅನುಭವ ವರ್ಣಿಸಲಾಗದು.
ಅರ್ಧ ದಿನದ, ಮೂರು-ಮತ್ತೊಂದು ಸಲದ ಓಡಾಟ ಮುಗಿಸಿ ಹೊರಬಂದು, ಅಲ್ಲಿಯೇ ಕಟ್ಟೆಯ ಮೇಲೆ ಕುಳಿತೆ – ನನ್ನ ಆ ಬೆಳಗ್ಗಿನ overwhelming ಅನುಭವದ ಮೆಲುಕು ಹಾಕುತ್ತ.

ಮಧ್ಯದ ತೆರೆದ ಅಂಕಣದಲ್ಲಿ ದಿನವೂ ಸಂಗೀತಗಾರರು ಅಮೋಘವಾಗಿ ಹಾಡುತ್ತಲೋ, ವಾದ್ಯಗಳನ್ನು ನುಡಿಸುತ್ತಲೋ ಕೇಳುಗರ ಮನತಣಿಸುತ್ತಿರುತ್ತಾರೆ. ಒಂದರ್ಧ ಗಂಟೆ ಕೂತು ಕೇಳಿ, ಅವರ ಮುಂದಿನ ವಯೋಲಿನ್ ಡಬ್ಬಿಗೊಂದಿಷ್ಟು ಕಾಣಿಕೆ (definitely worth, by any means – ಲೇ.) ಹಾಕಿ, ಮನೆಯ ಉಳಿದ ಸದಸ್ಯರನ್ನು ಹುಡುಕುತ್ತಾ ಹೊರಟೆ. ಅವರೆಲ್ಲ ಅಕಾದೆಮಿಯಾ ಗ್ಯಾಲರಿ ಮುಗಿಸಿ ಬಂದು, ಒಂದು ಪುಟ್ಟ ಜೆಲಾಟೇರಿಯಾದಲ್ಲಿ ಝಂಡಾ ಊರಿದ್ದರು. ನಾನೂ ಒಂದು ಬಟ್ಟಲು ತೊಗೊಂಡು, ಅವರೊಡನೆ ಕೂತು, ಇಟಾಲಿಯನ್ನರಂತೆ (ಅಥವಾ ಭಾರತೀಯರಂತೆ) ಕೈಗಳನ್ನು ಬೀಸಿ, ಜೋರಾಗಿ ಆಡುತ್ತಿದ್ದ ಮಾತಿನಲ್ಲಿ ಸೇರಿಕೊಂಡೆ.
ಮತ್ತೇನಾದರೂ ಫ್ಲಾರೆನ್ಸಿಗೆ ಹೋದರೆ (ಇನ್ನೂ ಸಾಕಷ್ಟು ಊರುಗಳಿವೆ ನಿಜ – ಲೇ.), ಇನ್ನೂ ಎರಡಿವೆ ಗ್ಯಾಲರಿಯಾಗಳು ನೋಡಲು!

- ಲಕ್ಷ್ಮೀನಾರಾಯಣ ಗುಡೂರ

(ವಿಸೂ: ಮೇಲೆ ಹಾಕಿರುವ ಎಲ್ಲಾ ಚಿತ್ರಗಳೂ ನಾನೇ ಸೆರೆಹಿಡಿದವು. ಜಾಗ ಹಿಡಿಯುತ್ತದೆಂದು ಕೆಲವೇ ಚಿತ್ರಗಳನ್ನು ಹಾಕಿದ್ದು, ಪ್ರತಿಯೊಂದರ ಹೆಸರು ಹಾಕುವುದನ್ನು ಕೈಬಿಟ್ಟಿದ್ದೇನೆ. ಕ್ಷಮೆಯಿರಲಿ. ಅಲ್ಲದೇ, ನನ್ನ ಚಿತ್ರಗಳು ಎದುರಿಗೆ ನೋಡಿದಾಗ ಆಗುವ ಆನಂದದ ಅನುಭವದ ಕಾಲುಭಾಗಕ್ಕೂ ನ್ಯಾಯ ಒದಗಿಸವು. – ಲೇ.)
***************************************************

ಪಶ್ಚಿಮಕ್ಕೊಂದು ಇಣುಕು : ಜಿ. ಎಸ್. ಜಯದೇವ್

ಅನಿವಾಸಿ ಕನ್ನಡಿಗರಿಗೆ ಜಯದೇವ್ ಅವರು ಈಗಾಗಲೇ ಚಿರಪರಿಚಿತರು. ಒಬ್ಬ ಸಮಾಜ ಸೇವಕನಾಗಿ, ದೀನಬಂಧುವಾಗಿ, ಪರಿಸರ ಪ್ರೇಮಿಯಾಯಾಗಿ, ಶಿಕ್ಷಣ ತಜ್ಞನಾಗಿ, ಲೇಖಕನಾಗಿ, ಅಂಕಣಕಾರನಾಗಿ ಅವರು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ನಡೆಸಿದ್ದಾರೆ. ವೈಜ್ಞಾನಿಕ ಸತ್ಯ ಮತ್ತು ಅಧ್ಯಾತ್ಮ ಇವೆರಡನ್ನೂ ಒಂದೇ ದೃಷ್ಟಿಕೋನದಲ್ಲಿಟ್ಟುಕೊಂಡು ಇವೆರಡರ ನಡುವೆ ಇರುವ ಸಮಾನಾಂಶಗಳ ಬಗ್ಗೆ ಚಿಂತಿಸಿದ್ದಾರೆ. ಮೂಲದಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ, ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡ ಜಯದೇವ್ ಅವರು ಚಾಮರಾಜನಗರದ ಜೆ ಎಸ್ ಎಸ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಕೆಲಸಮಾಡಿ, ಮುಂಚಿತವಾಗಿಯೇ ನಿವೃತ್ತಿ ಪಡೆದು ಬಿಳಿಗಿರಿ ರಂಗನ ಬೆಟ್ಟದಲ್ಲಿ ವಿವೇಕಾನಂದ ಗಿರಿಜನ ಕಲ್ಯಾಣಕೇಂದ್ರದಲ್ಲಿ ಕಾರ್ಯಕರ್ತರಾಗಿ ದುಡಿದಿದ್ದಾರೆ. ಗಿರಿಜನರ ಸಂಪರ್ಕದಿಂದ ಒದಗಿದ ಅಮೂಲ್ಯವಾದ ಅನುಭವ ಅವರಿಗೆ ಪರಿಸರದ ಅಳಿವು ಉಳಿವಿನ ಬಗ್ಗೆ ಚಿಂತಿಸಲು ಅನುವುಮಾಡಿಕೊಟ್ಟಿತು. ಇಲ್ಲಿಂದ ಮುಂದೆ ಹಲವಾರು ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಅವರು ತೊಡಗಿಕೊಂಡರು. ಗಿರಿಜನರ ಸಂಪರ್ಕದಿಂದ ಒದಗಿದ ಹಲವಾರು ಅಮೂಲ್ಯ ಅನುಭವಗಳನ್ನು, ಪರಿಸರದ ಬಗ್ಗೆ ವಿಶೇಷ ಮಾಹಿತಿಗಳನ್ನು ಸಂಗ್ರಹಿಸಿ "ಸೋಲಿಗ ಚಿತ್ರಗಳು" ಎಂಬ ಕೃತಿಯನ್ನು ರಚಿಸಿದ್ದು ಅದು ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲರ ಪ್ರಶಂಸೆಯನ್ನು ಪಡೆಯಿತು. 

ಮಕ್ಕಳ ಬಗ್ಗೆ ವಿಶೇಷ ಪ್ರೀತಿ ಇರುವ ಜಯದೇವ್ ಅವರು ಅನಾಥ ಮಕ್ಕಳ ಬಗ್ಗೆ ತೀವ್ರವಾದ ಕಾಳಜಿಯಿಂದ ಮತ್ತು ಅನುಕಂಪೆಯಿಂದ ದೀನಬಂಧು ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದು ಅಲ್ಲಿ ನೂರಾರು ಗಂಡು ಮತ್ತು ಹೆಣ್ಣು ಮಕ್ಕಳ ಆಶ್ರಯ, ವಿದ್ಯಾಭ್ಯಾಸ, ವ್ಯಕ್ತಿವಿಕಾಸ ಇವುಗಳಿಗೆ ಅನುವುಮಾಡಿಕೊಟ್ಟು ಈ ಮಕ್ಕಳ ಪೋಷಣೆ ನಿರಂತರವಾಗಿ ನಡೆದಿದೆ.  ನೊಂದ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು ಮನಶಾಸ್ತ್ರ ತಜ್ಞರ ಜೊತೆ ಸಮಾಲೋಚನೆ ನಡೆಸಿ ಮಾನಸಿಕವಾಗಿ ಘಾಸಿಗೊಂಡ ಮಕ್ಕಳನ್ನು ಸೂಕ್ಷ್ಮವಾಗಿ ನಿಭಾಯಿಸಿದ್ದಾರೆ. ಅವರಿಗೆ ಈ ದಿಕ್ಕಿನಲ್ಲಿ ದೊರೆತ ಅನುಭವವನ್ನು "ನಾವೇಕೆ ಹೀಗೆ?" ಎಂಬ  ಕೃತಿಯಲ್ಲಿ ದಾಖಲಿಸಿದ್ದಾರೆ. ಗಾಂಧಿ, ವಿವೇಕಾನಂದ, ರಾಮಕೃಷ್ಣ ಪರಮಹಂಸ, ಬುದ್ಧ, ಜೀಸಸ್ ಮುಂತಾದ  ಮಹಾತ್ಮರ ಬದುಕು ಬರಹವನ್ನು ದೀರ್ಘವಾಗಿ  ಅವಲೋಕಿಸಿ ತಮ್ಮ ಬದುಕಿನಲ್ಲಿ ಮತ್ತು ತಮ್ಮ ಆಶ್ರಮದಲ್ಲಿ ಈ ಮೌಲ್ಯಗಳನ್ನು ಅನುಷ್ಠಾತಾನಕ್ಕೆ ತಂದಿದ್ದಾರೆ. ಮೈಸೂರಿನ ಶಕ್ತಿ ಧಾಮ ಎಂಬ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಅಸಹಾಯಕ ಶೋಷಿತ ಮಹಿಳೆಯರಿಗೆ ಪುನರ್ವಸತಿಯನ್ನು ನೀಡಿ ಅವರಿಗೆ ಆಶ್ರಯನೀಡಿದ್ದಾರೆ.  ಹೀಗೆ ಮಹಿಳೆಯರ ಅಭಿವೃದ್ಧಿ ಕಾರ್ಯದಲ್ಲೂ ತಮನ್ನು ತೊಡಗಿಕೊಂಡಿದ್ದಾರೆ.

ಅವರು ಮೈಸೂರಿನ ವಿಶ್ವ ವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಜಯದೇವ ಅವರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಮತ್ತು ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಯನ್ನು ನೀಡಿದೆ. ಹಲವಾರು ಸಂಘ ಸಂಸ್ಥೆಗಳು ಅವರಿಗೆ ಪ್ರತಿಷ್ಠಿತ ಪುರಸ್ಕಾರಗಳನ್ನು ನೀಡಿವೆ. ಅಮೇರಿಕ, ಯುರೋಪ್ ಮತ್ತು ಯುಕೆ ದೇಶಗಳಿಂದ ಅವರಿಗೆ ಆರ್ಥಿಕ ನೆರವು ಬಂದಿರುವುದಲ್ಲದೆ ಹಲವಾರು ವಿದೇಶಿಯರು ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿ ಕೆಲಕಾಲ ಕೆಲಸ ಮಾಡಿದ್ದಾರೆ. ಜರ್ಮನಿಯ ಹಲವಾರು ವಿದ್ಯಾರ್ಥಿನಿಯರು ಕಳೆದ ಹಲವಾರು ವರ್ಷಗಳಿಂದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿನಿಮಯ ಕಾರ್ಯಕ್ರಮದಲ್ಲಿ ದೀನಬಂಧುವಿನಲ್ಲಿ ಸೇವೆ ಸಲ್ಲಿಸಿದ್ದಾರೆ.  

ಜಯದೇವ್ ಅವರಿಗೆ ನಿವೃತ್ತಿ ಎನ್ನುವುದಿಲ್ಲ, ಅವರ ತಮ್ಮನಾಗಿ ನಾನು ಅವರನ್ನು ಇಂಗ್ಲೆಂಡಿಗೆ ಹಲವಾರು ಬಾರಿ ಆಹ್ವಾನಿಸಿದ್ದು,  ಕೊನೆಗೂ ಈ ಬೇಸಿಗೆಯಲ್ಲಿ ದೀನಬಂಧು ಸಂಸ್ಥೆ ಯಿಂದ  ತಾತ್ಕಾಲಿಕವಾಗಿ ಬಿಡುಗಡೆ ಪಡೆದು    ತಮ್ಮ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿ ಯುಕೆ ಮತ್ತು ಯುರೋಪ್ ಪ್ರವಾಸ ಕೈಗೊಂಡಿದ್ದಾರೆ. ಬದುಕಿನಲ್ಲಿ ದಟ್ಟವಾದ ಅನುಭವವನ್ನು ಪಡೆದ ಜಯದೇವ್ ಅವರು ಯುಕೆ ಮತ್ತು ಯೂರೋಪಿನ ಬಗ್ಗೆ ಅವರ  ಮೊಟ್ಟ  ಮೊದಲ ಭೇಟಿಯ ಅನಿಸಿಕೆಗಳೇನು ಎಂದು ಹಲವಾರು ಅನಿವಾಸಿ ಮತ್ತು ವಿದೇಶಿ ಮಿತ್ರರು ಕೇಳಿದ್ದು ಜಯದೇವ್ ಅವರು ತಮ್ಮ ವಿಶೇಷ ಒಳನೋಟಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದನ್ನು ಒಂದು ಲೇಖನವಾಗಿ ಬರೆಯಬೇಕೆಂದು ನಾನು ಒತ್ತಾಯಿಸಿದರೆ ಫಲವಾಗಿ, ಈ ಹಿನ್ನೆಲೆಯಲ್ಲಿ ಅವರ ಕೆಳಗಿನ ಲೇಖನವನ್ನು ಪ್ರಕಟಿಸಿಲಾಗಿದೆ, ದಯವಿಟ್ಟು ಓದಿ ಮತ್ತು ಪ್ರತಿಕ್ರಿಯಿಸಿ.

 -ಸಂಪಾದಕ
      * * *
ಅಮೇರಿಕಾ ದೇಶಕ್ಕಿಂತಲೂ ಸಾಂಸ್ಕೃತಿಕವಾಗಿ ಸಮೃದ್ಧವಾಗಿರುವ ಯೂರೋಪ್ ದೇಶಗಳನ್ನು ನೋಡಬೇಕೆಂಬ ಬಯಕೆ ನನಗೆ ಆಗಾಗ ಮೂಡುತ್ತಿತ್ತು. ಆದರೆ ಸಾಧ್ಯವಾಗಿದ್ದು ಈಗ. ಕಳೆದ ಇಪ್ಪತೈದು ವರ್ಷಗಳಿಂದಲೂ ನನ್ನ ತಮ್ಮ, ಅವನ ಕುಟುಂಬದ ಎಲ್ಲರೂ ನನ್ನನ್ನು ಕರೆಯುತ್ತಲೇ ಇದ್ದಾರೆ. ದೀನಬಂಧು ಸಂಸ್ಥೆಯ ಜವಬ್ದಾರಿಯಿಂದ ಬಿಡಿಸಿಕೊಂಡು ನನ್ನ ತಂಗಿಯ ನೆರವಿನಿಂದ ಈಗ ಪ್ರಯಾಣ ಸಾಧ್ಯವಾಗಿದೆ. ಕಳೆದ ದಶಕಗಳಿಗೆ ಹೋಲಿಸಿದರೆ ಈಗ ಪ್ರಯಾಣ ಬಹಳ ಸುಲಭ. ಮೊಬೈಲ್-ಇಂಟರ್ ನೆಟ್ ಗಳಿಂದಾಗಿ ಪ್ರತಿ ಹೆಜ್ಜೆಯನ್ನು ಪ್ಲಾನ್ ಮಾಡಿ ಪ್ರಯಾಣ ಮಾಡಬಹುದು. 
ಹೊಸ ಸ್ಥಳಗಳನ್ನು ಅಲ್ಲಿಯ ಜನರನ್ನು ಅವರ ರೀತಿ ನೀತಿಗಳನ್ನು ನೋಡಿ ವಸ್ತು ನಿಷ್ಠವಾಗಿ ಗ್ರಹಿಸಬೇಕೆಂದರೆ ಅದಕ್ಕೆ ಹೊಸ ಕಣ್ಣುಗಳೇ ಬೇಕು. ಭಾರತೀಯ ಸಂಸ್ಕೃತಿ ಮತ್ತು ಅದರ ನೀತಿ ರೀತಿಗಳನ್ನೇ ಕಣ್ಣಿನ ತುಂಬಾ ತುಂಬಿಕೊಂಡಿದ್ದರೆ ನಾವು ಈ ಆಗಂತುಕ ಸಂಸ್ಕೃತಿಯ ಬಗ್ಗೆ ತೀರ್ಪು ನೀಡಲು ಪ್ರಾರಂಭಿಸುತ್ತೇವೆ. ಮೊದಲನೆಯದಾಗಿ ಯಾರೂ ನಮ್ಮನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಿಲ್ಲ; ಎರಡನೆಯದಾಗಿ ಇಂತಹ ಪೂರ್ವಾಗ್ರಹಗಳಿಂದಾಗಿ ನಾವು ಹೊಸದನ್ನು ನೋಡುವ ಸುಂದರ ಅವಕಾಶವನ್ನೇ ಕಳೆದುಕೊಂಡುಬಿಡುತ್ತೇವೆ. ಇಂತಹ ಒಂದು ಮುಕ್ತಮನಸ್ಸು ನನಗಿದ್ದರೂ ಮೊದಲು ಕೆಲವು ದಿನ ನನಗೆ ಕಷ್ಟವಾಯಿತು. ಭಾರತೀಯ ದೃಶ್ಯಾವಳಿಗಳಿಗೆ ಬಂಧಿಯಾಗಿದ್ದ ನನ್ನ ನೋಟವನ್ನು ನನ್ನ ಗ್ರಹಿಕೆಯ ಕ್ರಮವನ್ನು, ಸರಿ-ತಪ್ಪುಗಳ ನಿಷ್ಕರ್ಷೆಯನ್ನು ಬಹಿಷ್ಕರಿಸಿ ಮುಕ್ತ ಮನಸ್ಸಿನಿಂದ ನೋಡಲು ಪ್ರಾರಂಭಿಸಿದೆ. ಆಗ ಆತಂಕಕ್ಕೆ ಕಾರಣವಿಲ್ಲದ, ಸುಂದರವಾದ ಇಂಗ್ಲೆಂಡ್-ಯೂರೋಪ್ ಗಳು ಗೋಚರಿಸಲು ಪ್ರಾರಂಭವಾಯಿತು. ಹಿಂದೆ ಬ್ರಿಟಿಷರು ನಮ್ಮನ್ನು ಆಳುತ್ತಿದ್ದರು. ಇತ್ಯಾದಿ ಇತ್ಯಾದಿ ವಿಚಾರಗಳು ಚರಿತ್ರೆಗೆ ಸಂಬಂಧಪಟ್ಟ ವಿಷಯಗಳು; ಚರಿತ್ರೆಯ ಪಾಠಗಳಾಗಿ ಇವನ್ನು ಬ್ರಿಟಿಷರು-ಭಾರತೀಯರು ಇಬ್ಬರೂ ತಿಳಿಯಬೇಕು. ಆದರೆ ವರ್ತಮಾನದ ಮನುಷ್ಯ ಸಂಬಂಧಗಳಲ್ಲಿ ಈ ವಿವರಗಳಿಗೆ ಯಾವ ಸ್ಥಾನವೂ ಇರಬೇಕಾಗಿಲ್ಲ  ಎಂಬ ವಿವೇಕ ನಮಗೆ ಹುಟ್ಟಬೇಕು. ಈ ನನ್ನ ಗಾಢವಾದ ನಂಬಿಕೆ ನನಗೆ ಮತ್ತಷ್ಟು ತೆರೆದ ಮನಸ್ಸನ್ನು ದಯಪಾಲಿಸಿದೆ. ಹಾಗಾಗಿ ಪ್ರವಾಸದ ತುಂಬ ಸುಂದರ ಚಿತ್ರಗಳೇ ಪ್ರಧಾನವಾಗಿವೆ. ಯಾವುದೇ ಸಮಾಜದ ಒಟ್ಟಾರೆ ಮಾನಸಿಕ  ಸ್ವಾಸ್ಥ್ಯವನ್ನು ಕಲುಕುವ ಆಚಾರ ವಿಚಾರಗಳ ಬಗ್ಗೆ ನನಗೆ ಕಳಕಳಿ ಇದೆ, ಮುಚ್ಚುಮರೆ ಇಲ್ಲದೆ ಇವುಗಳನ್ನು ವಿರೋಧಿಸುತ್ತೇನೆ. ಭಾರತದಲ್ಲಂತೂ ಇಂತವುಗಳನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಪಾಶ್ಚತ್ಯ ದೇಶಗಳಲ್ಲಿ ಕಂಡುಬಂದರೆ ಅವುಗಳನ್ನೂ ಸಹ ಪ್ರಶ್ನಿಸುತ್ತೇನೆ 

ಪಶ್ಚಿಮಕ್ಕೆ ಬಂದನಂತರ ಯೂರೋಪಿನ ಕಿರು ಪ್ರವಾಸ ಹೊರತುಪಡಿಸಿದರೆ ನಾನು ಹೆಚ್ಚಾಗಿ ಓಡಾಡಿದ್ದು ನನ್ನ ತಮ್ಮನ ಮನೆ ಇರುವ ಶಫೀಲ್ಡ್ ನಲ್ಲಿ. ಇದೊಂದು ಸುಂದರವಾದ ಹಸಿರಿನಿಂದ ಕಂಗೊಳಿಸುವ ಊರು. ಮತ್ತೊಂದು ವಿಶೇಷ ಎಂದರೆ ನಿಶ್ಶಬ್ದತೆ.. ಮನೆಯೊಳಗಿದ್ದಾಗಲಂತೂ ನಿರಂತರವಾದ ನಿಶ್ಶಬ್ದತೆಯನ್ನು ಅನುಭವಿಸಿ ಆನಂದಪಟ್ಟಿದ್ದೇನೆ. ಭಾರತದ ಉದ್ದಗಲಕ್ಕೂ ಅಸಹನೀಯವಾದ ಗದ್ದಲವನ್ನು ಅನುಭವಿಸಿದ ನನಗೆ ಇದೊಂದು ಆಪ್ಯಾಯ ಮಾನವಾದ ಅನುಭವ. ಬ್ರಿಟಿಷರು ಸ್ನೇಹಜೀವಿಗಳು ಎದುರಿಗೆ ಎಲ್ಲರಿಗೂ ನಗುಮುಖದಿಂದ ಹಲೋ ಹೇಳುತ್ತಾರೆ, ಸರಿದು ದಾರಿಬಿಡುತ್ತಾರೆ. ಪ್ರತಿಯೊಬ್ಬ ವಾಹನ ಚಾಲಕನೂ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾನೆ. ಇಕ್ಕಾಟ್ಟಾದ ರಸ್ತೆಗಳಲ್ಲಿ ಇದುರಿನಿಂದ ವಾಹನ ಬಂದಾಗ ನಿಲ್ಲಿಸಿ ಇತರರಿಗೆ ಅನುವು ಮಾಡಿ ಕೊಡುವ ಸಭ್ಯತೆಯ ಸಂಪ್ರದಾಯವಂತೂ ಅನುಕರಣಯೋಗ್ಯವಾದುದು. ಬ್ರಿಟಿಷರ ಈ ಶಿಸ್ತಿನ ಒಂದನೇ ಹತ್ತುಭಾಗವಾದರೂ ನಮ್ಮ ದೇಶದಲ್ಲಿ ಆಚರಣೆಗೆ ಬರುವುದಾದರೆ ನಮ್ಮ ದೇಶದ ಹಾರನ್ ಹೊಂಕಾರಗಳು ಸ್ವಲ್ಪವಾದರೂ ಕಡಿಮೆಯಾಗಬಹುದು. ನನ್ನ ಅನಿಸಿಕೆ ಏನೆಂದರೆ ನಿಶ್ಯಬ್ದತೆಯಿಂದ ಮನಃಶಾಂತಿ ಉಂಟಾಗುತ್ತದೆ. ಕರ್ಕಶವಾದ ಶಬ್ದಗಳ ನಡುವೆ ಬಹಳಕಾಲ ಸಂಚಾರ ಮಾಡಿದರೆ ಮನಶ್ಯಾಂತಿ ಹಾರಿಹೋಗುತ್ತದೆ, ಮತ್ತು ಮಾನಸಿಕ ಅನಾರೋಗ್ಯಕ್ಕೂ ಕಾರಣವಾಗಬಹುದು. 
ಇರಲಿ ಬ್ರಿಟಿಷರು ಸ್ನೇಹಜೀವಿಗಳು ಎಂದೆ. ನೆನ್ನೆಯ ದಿನ ಲಿನ್ ಮತ್ತು ಜೇನ್ ಇಬ್ಬರು ಧೀಮಂತ ಮಹಿಳೆಯರು ಸ್ಕಾಟ್ ಲ್ಯಾಂಡ್ ನಿಂದ ನೂರಾರು ಮೈಲು ಡ್ರೈವ್ ಮಾಡಿಕೊಂಡು ನನ್ನನ್ನು ನೋಡಲು ನನ್ನ ತಮ್ಮನ ಮನೆಗೆ ಬಂದಿದ್ದರು. ದೀನಬಂಧುವಿನಲ್ಲಿ ಕೆಲವು ತಿಂಗಳುಗಳ ಕಾಲ ವಾಲಂಟರಿ ಸರ್ವಿಸ್ ಮಾಡಿದ್ದ ಇವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತ ಗಂಟೆಗಳನ್ನೇ ಕಳೆದರು. ಒಂದೂವರೆ ದಶಕದ ನಂತರವೂ ತಾವು ಒಡನಾಡಿದ  ಎಷ್ಟೊಂದು ಮಕ್ಕಳ, ಸಿಬ್ಬಂದಿಗಳ ಹೆಸರುಗಳನ್ನು ನೆನಪಿಟ್ಟುಕೊಂಡು ಅತ್ಯಂತ ಪ್ರೀತಿಯಿಂದ ನೆನೆದರು. ಇಲ್ಲಿಯ ಸರಾಸರಿ ಜೀವನವನ್ನು ನೋಡಿದಾಗ ಈ ಜನ ನೆರೆಹೊರೆಯವರನ್ನು ಅಷ್ಟಾಗಿ ಹಚ್ಚಿಕೊಳ್ಳುವುದಿಲ್ಲ ಎಂದು ಅನ್ನಿಸುವುದುಂಟು. ಆದರೆ ಮತ್ತೊಬ್ಬರಿಗೆ ನೆರವಾಗುವ ಸಂದರ್ಭ ಒದಗಿಬಂದಾಗ ತಮ್ಮ ಶಿಷ್ಟಾಚಾರವನ್ನು ಬದಿಗೊತ್ತಿ ಮನುಷ್ಯ ಸಂಬಂಧಗಳಿಗೆ ಮಿಡಿಯುತ್ತಾರೆ. ಬೂಟಾಟಿಕೆ ಎಂಬುದು ಎಳ್ಳಷ್ಟು ಇರುವುದಿಲ್ಲ. ಕೆಲವೊಮ್ಮೆ ವ್ಯತಿರಿಕ್ತ ಪ್ರಕರಣಗಳೂ ಕಂಡುಬರಬಹುದು, ಆದರೆ ಅಪರೂಪ. 

ಬ್ರಿಟಿಷ್ ಜನ ಮಕ್ಕಳ ರಕ್ಷಣೆಗಾಗಿ ಅತಿಯಾದ ಕಾನೂನು, ಕಟ್ಟಳೆಗಳನ್ನು ಮಾಡಿಕೊಂಡಿದ್ದಾರೆ ಎಂದೆನಿಸುತ್ತದೆ. ಇದಕ್ಕೆ ಕಾರಣಗಳೂ ಇವೆ ಎಂಬುದು ಒಂದು ಸಮಜಾಯಿಷಿ. ಎಲ್ಲೆಲ್ಲೂ ಅಪಾಯಗಳನ್ನೇ ನೋಡುತ್ತ, ಸದಾಕಾಲವೂ ಗುರಾಣಿಯನ್ನು ಅಡ್ಡಹಿಡಿದೇ  ಬದುಕುವ  ಜೀವನ ವಿಧಾನ ಬದುಕಿನ ಪ್ರೀತಿಯನ್ನು ನಂಬಿಕೆಯನ್ನು ಗಟ್ಟಿಗೊಳಿಸುವ ಬದಲು ಸ್ವರಕ್ಷಣೆಯ ಗೀಳನ್ನು ಹೆಚ್ಚಿಸಬಹುದಲ್ಲವೆ? ನಂಬಿಕೆ ಮತ್ತು ಪರಸ್ಪರತೆಗಳಿಗೆ ಸ್ಥಳವಿಲ್ಲದೆ ಜೀವನ ಶುಷ್ಕವಾಗಿ ಬಿಡಬಹುದಲ್ಲವೆ? ನಂಬಿಕೆ ಭರವಸೆಗಳಿಲ್ಲದ ಜೀವನದಲ್ಲಿ ಪರಕೀಯತೆ (Alienation) ಹತಾಶೆಗಳು ಸುಪ್ತವಾಗಿ ಮನೆಮಾಡಿ ಆತ್ಮವನ್ನೇ ಕೊರೆಯಬಹುದೋ ಏನೋ? ಈ ಪ್ರಶ್ನೆಗೆ ನನಗೆ ಉತ್ತರ ದೊರೆತಿಲ್ಲ. 

ಪಾಶ್ಚಿತ್ಯ ಜಗತ್ತಿನ ಇಂದಿನ ವ್ಯವಸ್ಥೆ ಮತ್ತು ಸಂಸ್ಕೃತಿ ‘ಅನುಭಾವ’ ಎಂದು ನಾವು ಯಾವುದನ್ನು ಕರೆಯುತ್ತೇವೆಯೊ ಆ ಮನಸ್ಥಿತಿಯನ್ನು ಕೆಲವರಾದರೂ ಪಡೆಯಬಹುದಾದ ಸಾಧ್ಯತೆಯನ್ನು ದೂರ ಸರಿಸುತ್ತದೆ. ಬ್ರದರ್ ಲಾರೆನ್ಸ್ ಅಥವಾ ಸೇಂಟ್ ಫ್ರಾನ್ಸಿಸ್ ಆಫ್ ಅಸಿಸ್ಸಿ ಅವರಂತಹ ಅನುಭಾವಿಗಳು ಪಶ್ಚಿಮದಲ್ಲೂ ಇದ್ದುದು ಉಂಟು. ಆದರೆ ಇಂದಿನ ವಾತಾವರಣದಲ್ಲಿ ಭೌತಿಕತೆಯೇ ಪ್ರಧಾನವಾಗಿದ್ದು ಅಂತರ್ಮುಖತೆ ಗೌಣವಾಗಿದೆ.  ಹಾಗಾಗಿ ಒಂದು ಮಿತಿಯೊಳಗೆ ಇವರು ಅಧ್ಯಾತ್ಮವನ್ನು ಮೆಚ್ಚುತ್ತಾರಾದರೂ ತಮ್ಮ ನಡುವೆಯೇ ಇರಬಹುದಾದ ರಮಣಮಹರ್ಷಿಯವರಂತಹ ಅನುಭಾವಿಯನ್ನು ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಬಹದೋ ಏನೋ! ಭಾರತೀಯ ಸಂಸ್ಕೃತಿಯಲ್ಲಿ ನೆಲೆಯೂರಿದ ನನ್ನಂತಹವರಿಗೆ ಇದೊಂದು ದೊಡ್ಡ ಕೊರತೆಯಾಗಿ ಕಾಣುತ್ತದೆ. ಬದುಕಿನ ನಿರರ್ಥಕತೆಯ ಅರಿವು ನಮ್ಮನ್ನು ಆಧ್ಯಾತ್ಮಿಕತೆಗೆ ಕೊಂಡೊಯ್ದರೆ ಆಲ್ಬರ್ಟ ಕಾಮು  ಅವರಂತಹ ಪಾಶ್ಚಾತ್ಯ ಚಿಂತಕರನ್ನು ಅಸಂಗತ (Absurd) ತತ್ತ್ವಕ್ಕೆ ಕೊಂಡೊಯ್ದು ಆತ್ಮಹತ್ಯೆಯ ಪ್ರಶ್ನೆಯನ್ನು ಎದುರಿಸಬೇಕಾದ ಅನಿವಾರ್ಯತೆಯನ್ನುಂಟು ಮಾಡುತ್ತದೆ. ಕರ್ಮ ಮಾಡುತ್ತಲೇ ನೂರು ವರ್ಷಕಾಲ ಬಾಳಬೇಕು ಎಂದು ಹೇಳುವ ನಮ್ಮ ಈಶೋಪನಿಷತ್ತಿನ ಮಂತ್ರಕ್ಕೂ ಬದುಕಿನ ನಿರರ್ಥಕತೆಯನ್ನು ಆತ್ಮಹತ್ಯೆಯ ಪ್ರಶ್ನೆಯಾಗಿ ಎದುರಿಸುವುದಕ್ಕೂ ಎಷ್ಟು ವೆತ್ಯಾಸವಿದೆ!

ಸರಾಸರಿಯಾಗಿ ಬ್ರಿಟಿಷ್ ಜನ ತಮ್ಮ ಪರಂಪರೆಯ ಬಗ್ಗೆ, ಗತಕಾಲದ ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುತ್ತಾರೆ. ಯಾವಾಗಲೂ ಗೆಲ್ಲುಗರಾಗಿಯೇ ಬೆಳೆದು ಬಂದ ಈ ಜನಾಂಗ ಹೆಮ್ಮೆ ಪಡುವುದರಲ್ಲಿ ಆಶ್ಚರ್ಯವಿಲ್ಲ. ಇಂದಿನ ಅವರ ವ್ಯವಸ್ಥೆಯ ಆದ್ಯತೆಗಳನ್ನು ಗಮನಿಸಿದರೆ ಇದು ಅರಿವಾಗುತ್ತದೆ. ಜೊತೆಗೆ ಸಾಂಸ್ಕೃತಿಕ ಪ್ರಜ್ಞೆಯನ್ನು ಉಳಿಸಲು ಸ್ವಯಂಪ್ರೇರಣೆಯಿಂದ ಸಂಘಟಿತ ಪ್ರಯತ್ನಗಳೂ ನಡೆಯುವುದುಂಟು. ನ್ಯಾಷನಲ್ ಟ್ರಸ್ಟ್ ಇಂತಹ ಒಂದು ಸಾರ್ವಜನಿಕ ಸಂಸ್ಥೆ. ಹಳೆಯ ಕಾಲದ ಮನೆಯನ್ನು ಹಣದ ಮುಗ್ಗಟ್ಟು ಅಥವಾ ಇತರ ಕಾರಣಗಳಿಗಾಗಿ ಯಾರಾದರೂ ಮಾರಿಬಿಟ್ಟಿದ್ದರೆ ಅದನ್ನು ಟ್ರಸ್ಟ್ ಹೆಚ್ಚು ಹಣ ಕೊಟ್ಟು ಕೊಂಡು ಕೊಂಡು ಹಾಗೇಯೇ ಉಳಿಸುತ್ತದೆ. ಹಳೆಯ ಕಾಲದ ಮನೆಗಳನ್ನು ಹಾಗೆಯೇ ಉಳಿಸಿಕೊಂಡು ಮುಂದಿನ ಪೀಳಿಗೆಯವರಿಗೆ ಗತ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು ಈ ಟ್ರಸ್ಟ್ ನ ಉದ್ದೇಶ. ಈ ಮನೆಗಳ ಜೊತೆ ಹಿಂದೆ ಬಳಸುತ್ತಿದ್ದ “ಮಿಲ್ ಸ್ಟೋನ್” ಅಥವಾ ಹಿಟ್ಟು ಮಾಡುವ ಬೃಹತ್ ಬೀಸೆ ಕಲ್ಲುಗಳನ್ನು ಸಂರಕ್ಷಿಸಿದ್ದಾರೆ. ಇಷ್ಟೆ ಅಲ್ಲ ಹಿಂದೆ ಕುರಿಗಳನ್ನು ಕಟ್ಟುತ್ತಿದ್ದ ರೊಪ್ಪವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಜೊತೆಗೆ ಇವುಗಳ ಸಾಂಸ್ಕೃತಿಕ ಚರಿತ್ರೆಯನ್ನು ಹೇಳುವ ಚಿಕ್ಕ ಚಿಕ್ಕ ಫಲಕಗಳು, ಆಯಾ ಪ್ರದೇಶಗಳ ಚಿತ್ರ ಸಹಿತ ನಕ್ಷೆಗಳು ಎಲ್ಲೆಲ್ಲೂ ಕಾಣಸಿಗುತ್ತವೆ. ಜೊತೆಗೆ ಜೀವ ವೈವಿಧ್ಯದ ರಕ್ಷಣೆಗೂ ಬಹಳ ಮಹತ್ವ ನೀಡಿದ್ದಾರೆ. ನ್ಯಾಷನಲ್ ಟ್ರಸ್ಟ್ ವಿಶಾಲವಾದ ಭೂಮಿಯನ್ನು ಕೊಂಡುಕೊಂಡು ಇರುವ ನೈಸರ್ಗಿಕ ಸಂಪತ್ತನ್ನು ಕಾಪಾಡುತ್ತದೆ. ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವುದನ್ನು ತಡೆದರೆ ಸಾಕು ಆ ಪ್ರದೇಶದ ಜೀವ ವೈವಿಧ್ಯ ಮತ್ತು ಪ್ರಕೃತಿ ಸಂಪತ್ತು ಉಳಿಯುತ್ತದೆ. ಭಾರತದಂತಹ ಅದ್ಭುತ ಜೀವವೈವಿಧ್ಯದ ತಾಣದಿಂದ ಬಂದ ನನ್ನಂತಹವರಿಗೆ ಇವರ ಜೀವ ವೈವಿಧ್ಯ ಸಂರಕ್ಷಣೆಯ ಕಾನೂನುಗಳು ಸ್ವಲ್ಪ ಅತಿ ಎನಿಸುವುದುಂಟು. ಆದರೆ ಪಶ್ಚಿಮ ಘಟ್ಟಗಳಂತಹ ಅಮೂಲ್ಯ ಜೀವ ವೈವಿಧ್ಯದ ಬಿಸಿ ತಾಣಗಳ (Hot spot) ಸಂರಕ್ಷಣೆಯ ಬಗ್ಗೆ ನಮ್ಮ ಸರ್ಕಾರಗಳೇ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದು, ಶ್ರೀ ಸಾಮಾನ್ಯರು ಸ್ವಲ್ಪವೂ ಸಹಕರಿಸದಿರುವುದು ಅತ್ಯಂತ ಆತಂಕದ ಸಂಗತಿ. ಅಲ್ಲದೆ ಅನೇಕ ಶತಮಾನಗಳ ಸಾಂಸ್ಕೃತಿಕ ಚರಿತ್ರೆಯಿರುವ ನಮ್ಮ ಸಾವಿರಾರು ದೇವಸ್ಥಾನಗಳು, ಸಾಂಸ್ಕೃತಿಕ ತಾಣಗಳ ರಕ್ಷಣೆಯ ಬಗ್ಗೆ ಕಾಳಜಿ ವಹಿಸದೇ ಇರುವುದು ವಿಷಾದನೀಯ. ಹೊರಗಿನಿಂದ ಬಂದ ದಾಳಿಕೋರರು ನಮ್ಮ ದೇಶದ ಸಾಂಸ್ಕೃತಿಕ ತಾಣಗಳನ್ನು ನಾಶಪಡಿಸಿದರೆಂದು ನಿರಂತರವಾಗಿ ದೂರುತ್ತಲೇ ಕುಳಿತುಕೊಳ್ಳುವುದಕ್ಕಿಂತ ಇರುವ ಸಾಂಸ್ಕೃತಿಕ ತಾಣಗಳ ರಕ್ಷಣಾ ಕಾರ್ಯವನ್ನು ಮುತುವರ್ಜಿಯಿಂದ ಮಾಡುವುದು ಹೆಚ್ಚು ಲಾಭದಾಯಕವಾದೀತು. 

ಬ್ರಿಟಿಷರಂತೆ ಯೂರೋಪಿನ ಇತರ ಕೆಲವು ದೇಶದ ಜನರು  ತಮ್ಮ ಪಾರಂಪರಿಕ ಕಟ್ಟಡಗಳನ್ನು ಬಹುವಾಗಿ ಪ್ರೀತಿಸುತ್ತಾರೆ. ನೆದರ್ಲ್ಯಾಂಡ್ ದೇಶದ ಆಮ್ ಸ್ಟರ್ ಡ್ಯಾಮ್ ನ ಕಟ್ಟಡಗಳಂತೂ ಇನ್ನೂರು-ಮುನ್ನೂರು ವರ್ಷ ಹಳೆಯವು. ಈ ಜನ ತಮ್ಮ ಹಳೆಯ ಮನೆಗಳನ್ನು ಅವು ಇದ್ದ ಹಾಗೆಯೇ ಕಾಪಾಡಿಕೊಂಡು ಬರಲು ಕಂಕಣ ಬದ್ಧರಾಗಿರುವಂತೆ ಕಂಡುಬರುತ್ತದೆ.  ಆಮ್ ಸ್ಟರ್ ಡ್ಯಾಮ್ ನ ಒಂದು ಕಡೆ ಒಂದರ ಪಕ್ಕ ಒಂದು ಇರುವ ಮೂರು ಮನೆಗಳು ವಾಲಿಕೊಂಡಿವೆ. ಇವುಗಳು ಬಹುಶಃ ಮುನ್ನೂರು ವರ್ಷ ಹಳೆಯ ಮನೆಗಳು. ಇವುಗಳನ್ನು “ಡ್ಯಾನ್ಸಿಂಗ್ ಹೌಸಸ್” ಎನ್ನುತ್ತಾರೆ. ಕೆಲವು ಕಡೆ ನಾಲ್ಕು ಮಹಡಿ ಏರಿ ಹೋಗಬೇಕು. ಆದರೆ ಅವರಿಗೆ ಲಿಫ್ಟ್ ಹಾಕಿಸಿಕೊಳ್ಳಲು ಸರ್ಕಾರ ಅನುಮತಿ ಕೊಡುವುದಿಲ್ಲ. ಏಕೆಂದರೆ ಇಂತಹ ಯಾವುದೇ ಪುನರ್ ನವೀಕರಣ ಕಾರ್ಯಕ್ಕೆ ಹಳೆಯ ರಚನೆಗಳನ್ನು ಒಡೆಯಬೇಕಲ್ಲ! ಹಾಗಾಗಿ ಈ ಇಕ್ಕಾಟ್ಟಾದ ಮೆಟ್ಟಿಲುಗಳನ್ನು ಹತ್ತಿಯೇ ಹೋಗಬೇಕು. ಫ್ರಾನ್ಸ್ ಆಧುನಿಕ ನಗರವಾದರೂ ಅಲ್ಲಿಯೂ ಸಹ ನೂರಾರು ಹಳೆಯ ಕಟ್ಟಡಗಳನ್ನು ಉಳಿಸಿಕೊಂಡಿದ್ದಾರೆ. ಯೂರೋಪಿನ ವಿಶೇಷವೆಂದರೆ ಆಧುನಿಕತೆ ಅವರ ಸಾಂಸ್ಕೃತಿಕ ಸ್ಮೃತಿಗಳಿಗೆ, ಸಾಂಸ್ಕೃತಿಕ ಅಸ್ಮಿತೆಗೆ ಮಾರಕವಾಗಿಲ್ಲ. ಆದರೆ ನಮ್ಮ ದೇಶದಲ್ಲ್ಲೋ ಆಧುನಿಕತೆ ಮತ್ತು ಸಾಂಸ್ಕೃತಿಕ ಅಸ್ಮಿತೆಗಳು ಒಂದಕ್ಕೊಂದು ವಿರುದ್ಧವೋ ಎಂಬಂತೆ ಭಾವಿಸುತ್ತೇವೆ. ಆಧುನಿಕತೆ ಎಂಬುದು ಹಳೆಯದೆಲ್ಲದರ ಮೇಲೆ ಕಟ್ಟಿದ ಗೋರಿಯೋ ಎಂಬಂತೆ ನಾವು ವರ್ತಿಸುತ್ತೇವೆ. 

ಭಾರತ ಬಹು ಸಂಸ್ಕೃತಿಗಳ ದೇಶ. ನಾಲ್ಕು ಪ್ರಮುಖ ಜಾಗತಿಕ ಧರ್ಮಗಳ ಉಗಮಸ್ಥಾನ. ವಿಭಿನ್ನ ಸಂಸ್ಕೃತಿಗಳು, ಉಪಸಂಸ್ಕೃತಿಗಳು, ನೂರಾರು ಆಚಾರ ವಿಚಾರಗಳು ಒಟ್ಟಿಗೆ ಸಾವಿರಾರು ವರ್ಷಗಳ ಪರ್ಯಂತ ಬೆಳೆದು ಬಂದ ದೇಶ. ಅನ್ಯ ವಿಚಾರಗಳು, ಅನ್ಯ ಸಂಸ್ಕೃತಿಯ ಪದ್ಧತಿ ಆಚರಣೆಗಳು ಈ ದೇಶದಲ್ಲಿ ಅಕ್ಕಪಕ್ಕದಲ್ಲೇ ಇರುವುದನ್ನು ನೋಡಬಹುದು. ಪ್ರತಿರೋಧಗಳು ಬಹಳ ಕಡಿಮೆ ಎಂದೇ ಹೇಳಬಹುದು. ಈ ಅನಿವಾರ್ಯವಾದ ಸಹ ಬಾಳ್ವೆ ಭಾರತೀಯರಿಗೆ ಅಪಾರವಾದ ತಾಳ್ಮೆ, ಸಹಿಷ್ಣುತೆಯ ಮನೋಧರ್ಮವನ್ನು ಕೊಟ್ಟಿದೆ. ಏಕರೂಪ ಸಂಸ್ಕೃತಿಯ ವಾತಾವರಣ ‘ಅನ್ಯ’ ರನ್ನು ಸಹಿಸುವ ಸಹಿಷ್ಣುತೆಯ ಮನೋಧರ್ಮವನ್ನು ನೀಡಲಾರದು. ಸಾವಿರಾರು ವರ್ಷಗಳ ಪರ್ಯಂತ ‘ಅನ್ಯ’ರಾರೂ ಇಲ್ಲದ, ನಮ್ಮವರಷ್ಟೇ ಇರುವ ವಾತಾವರಣದಲ್ಲಿ ಬೆಳೆದ ಮನೋಧರ್ಮ ‘ಅನ್ಯ’ ಎಂಬ ಎಲ್ಲವನ್ನೂ ಗುಮಾನಿಯಿಂದಲೇ ನೋಡುವುದನ್ನು ಅಭ್ಯಾಸಮಾಡಿಕೊಂಡಿರುತ್ತದೆ. ಭಾರತೀಯ ಪರಿಸರದ ಸಹಿಷ್ಣುತೆಯ ಮನೋಧರ್ಮವನ್ನು ಸ್ವಾಮಿ ವಿವೇಕಾನಂದರು ಸುಮಾರು ನೂರ ಮೂವತ್ತು ವರ್ಷದ ಹಿಂದೆಯೇ ತಮ್ಮ ಭಾಷಣದಲ್ಲಿ ಹೀಗೆ ಹೇಳಿದರು. “I am proud to belong to religion which has taught the world both tolerance and universal acceptance. We believe not only in universal toleration but we accept all religions as true. I am proud to belong to a nation which has sheltered the persecuted and the refugees of all religions and all nations of the earth.

ಇಂದಿನ ಭಾರತದ ರಾಜಕೀಯ ಸಾಮಾಜಿಕ ಪರಿಸರದಲ್ಲಿ “ಅನ್ಯರು –ನಮ್ಮವರು ಎಂಬ ಭಿನ್ನತೆಯ ಮನೋಧರ್ಮವನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ದೌರ್ಭಾಗ್ಯವೇ ಸರಿ. ಈ ಭಿನ್ನತೆಯ ಮನೋಧರ್ಮ ನಮ್ಮ ಸಹಜ ಧರ್ಮವಲ್ಲ ಎಂಬುದನ್ನು ಎಂಟನೆಯ ಶತಮಾನದ ಕವಿರಾಜ ಮಾರ್ಗದ ಈ ಸಾಲುಗಳನ್ನು ಗಮನಿಸಿದರೆ ತಿಳಿಯುತ್ತದೆ” “ಕಸವರಮೆಂಬುದು ನೆರೆಸೈರಿಸಲಾರ್ಪೊಡೆ ಪರವಿಚಾರಮುಮಂ, ಧರ್ಮಮುಮಂ” ಕಸವರ ಎಂದರೆ ಚಿನ್ನ ಅಥವಾ ಸಂಪತ್ತು. ಇದು ಯಾವುದು ಎಂದರೆ ಪರವಿಚಾರವನ್ನು, ಪರಧರ್ಮದ ಸಾನಿಧ್ಯವನ್ನು ಸಹಿಸಿಕೊಳ್ಳುವುದು ಅಥವಾ ಸಹಿಷ್ಣುತೆಯೇ ಆಗಿದೆ ಎಂಬುದು ಈ ಸಾಲುಗಳತಾತ್ಪರ್ಯ. ಇಂದು ಬ್ರಿಟನ್ ಮತ್ತು ಯೂರೋಪಿನ ಅನೇಕ ದೇಶಗಳು ವಲಸಿಗರನ್ನು ಉದಾರವಾಗಿ ಸ್ವೀಕರಿಸುತ್ತಿರುವುದು ಆದರಣೀಯ. ಯಾವುದೇ ಜನಾಂಗವಾಗಲಿ, ದೇಶವಾಗಲಿ ತನ್ನ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ, ದ್ವೀಪ ದೋಪಾದಿಯಲ್ಲಿ ತಾನಷ್ಟೇ ಸುಖ ಸಮೃದ್ಧಿಯಲ್ಲಿ ಬದುಕಲು ಸಾಧ್ಯವಿಲ್ಲ. ಎಲ್ಲರನ್ನು, ಎಲ್ಲವನ್ನೂ ಒಳಗೊಳ್ಳುವುದೇ ಬದುಕು. ನಿಧಾನವಾಗಿಯಾದರೂ ಈ ಸತ್ಯಕ್ಕೆ ತೆರೆದುಕೊಳ್ಳುತ್ತಿರುವ ಪಾಶ್ಚಾತ್ಯ ಜಗತ್ತು ಸರಿಮಾರ್ಗದಲ್ಲೇ ಇದೆ ಎಂಬುದು ನನ್ನ ಅಭಿಪ್ರಾಯ. 

       -   ಜಿ. ಎಸ್. ಜಯದೇವ್ 

                     * * *