ಸಣ್ಣ ಶಾಲೆಯ ಸುತ್ತ ಬೆಳಗಿನ ಕೆಲ ವಿಷಯಗಳು – ಯೋಗೀಂದ್ರ ಮರವಂತೆ

ಲೇಖಕರು: ಯೋಗೀಂದ್ರ ಮರವಂತೆ

ಯೋಗೀಂದ್ರ ಮರವಂತೆಯವರು ಯು.ಕೆಯಲ್ಲಿ ನೆಲೆಸಿರುವ ಕನ್ನಡದ ಪ್ರಮುಖ ಬರಹಗಾರು ಮತ್ತು ಯಕ್ಷಗಾನ ಕಲಾವಿದರು. ಇವರು ಬರೆದ ಲೇಖನಗಳು ಮತ್ತು ಅಂಕಣಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಭಾರತ ಮತ್ತು ಇಂಗ್ಲಂಡು, ಕನ್ನಡ ಮತ್ತು ಇಂಗ್ಲೀಷು – ಇವೆರಡರ ನಡುವಿನ ಸೇತುವೆಯಂತೆ ಅಪ್ಯಾಯಮಾನವಾಗಿ ಬರೆಯುತ್ತಾರೆ. ಇಂಗ್ಲಂಡಿನ ಸಂಸ್ಕೃತಿಯ ಬಗ್ಗೆ ಕನ್ನಡದ ಅಂಕಣಗಳಲ್ಲಿ ವಿವರವಾಗಿ ಬರೆದಿದ್ದಾರೆ. ಅವರ ಬರಹಗಳೆಲ್ಲ ಸೇರಿ ಆದಷ್ಟು ಬೇಗ ಒಂದು ಪುಸ್ತಕ ಬರಲಿ ಎಂದು ಹಾರೈಸುತ್ತೇನೆ. ದಿನನಿತ್ಯ ನಡೆಯುವ ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ಬರೆದು ತಲೆಯಲ್ಲಿ ಒಂದು ಸಣ್ಣ ಹುಳ ಬಿಡುತ್ತಾರೆ ಈ ಲೇಖನದಲ್ಲಿ. ಓದಿ, ಪ್ರತಿಕ್ರಿಯೆ ಬರೆಯಿರಿ – ಸಂ

ಸಣ್ಣ ಮಕ್ಕಳು ಹೋಗುವ ಒಂದು  ಸಣ್ಣ ಶಾಲೆ. ನಾಲ್ಕಾರು ಕೋಣೆಗಳು , ಎಂಟತ್ತು ಗೋಡೆಗಳು; ಒಳಗೆ ಪಟಗಳು , ಅಕ್ಷರಗಳು, ಮಕ್ಕಳು ಕೈಯಾರೆ ಮಾಡಿದ ಬಣ್ಣ ಬಣ್ಣದ ಚಿತ್ರಗಳು, ಮುದ್ದಾದ ವಿನ್ಯಾಸಗಳು, ಒಂದಿಷ್ಟು ವಿಷಯಗಳು ,ಇವಿಷ್ಟನ್ನು ತನ್ನ  ಮೈಮೇಲೆ ಹೊದ್ದು, ಖಾಲಿ ಉಳಿದ ಜಾಗದಲ್ಲಿ ಮಾತ್ರ ಕಾಣಿಸುತ್ತಿರುವ ಹಳದಿ ಬಣ್ಣದ ಗೋಡೆ, ಕೋಣೆಯೊಳಗೆ ದಿನವೂ ತುಂಬುವ ಮಕ್ಕಳ ಕೇಕೆಗಳು ಅಳು ನಗು ಜಗಳ ಮತ್ತು ಪುಟ್ಟ ಪುಟ್ಟ ಕಲಿಕೆಗಳು, ಹೊರಗೊಂದು ಮೈದಾನ ಸುತ್ತಲಿಗೆ ಆಳೆತ್ತರದ ಆವರಣ, ಆವರಣದ ಮೇಲೆ ಮಕ್ಕಳ ಶಾಲೆ ಎನ್ನುವ ಫಲಕ , ಶಾಲೆ ಎನಿಸಿಕೊಳ್ಳಲು ಇಷ್ಟು ಸಾಲದೇ? ಸಣ್ಣ ಶಾಲೆ ಎನಿಸಿಕೊಳ್ಳಲು ಖಂಡಿತ ಇಷ್ಟು ಸಾಕೋ ಏನೋ. 

ಬೆಳಿಗ್ಗೆ  ಎಂಟು ಮುಕ್ಕಾಲಕ್ಕೆ ಶಾಲೆಯ ಬಾಗಿಲಿನ ಎದುರು ಇರಬೇಕೆಂದು ಮಗಳ ಬಲ ಕೈಯನ್ನು ನನ್ನ ಎಡ ಮುಷ್ಟಿಯಲ್ಲಿ ಹಿಡಿದು ಹಜ್ಜೆ ಹಾಕಿದ್ದೇನೆ . ರಸ್ತೆಯಲ್ಲಿ ಸಿಗುವ ತನ್ನದೇ ಶಾಲೆಯ ಇತರ ಮಕ್ಕಳನ್ನು ನೋಡುತ್ತಾ , ಇವಳ ಹೆಸರು ಇದು , ಅವಳ ಮನೆ ಆ ಕಡೆ ಎನ್ನುತ್ತಿದ್ದಾಳೆ ಮಗಳು. ಕೆಲವು ಸಹಪಾಠಿಗಳನ್ನು ನೋಡಿ ನಗುತ್ತ , ಮತ್ತೆ ಕೆಲವರನ್ನು ಕಂಡು ನಿನ್ನೆ  ಜಗಳ ಆಡಿದನ್ನು ನೆನಪು ಮಾಡುತ್ತಾ ಇನ್ನೊಂದು ಖಾಲಿ ಕೈಯನ್ನು ಬೀಸುತ್ತ ,ಕಾಲನ್ನು ಹಿಂದೆ ಮುಂದೆ ಚಿಮ್ಮಿ ನೆಗೆಯುತ್ತ ನಡೆಯುತ್ತಿದ್ದಾಳೆ. ಇವಳ ಕೈ ಹಿಡಿದು ಕೊಂಡಿದ್ದಕ್ಕೆ ನೇರವಾಗಿ ನಡೆಯಲಾಗದೆ ಈಕೆ ಜಗ್ಗಿದ ಕಡೆಯೆಲ್ಲ ಹೆಜ್ಜೆ ಹಾಕುತ್ತ ತೂರಾಡಿಕೊಂಡು ನಡೆದಿದ್ದೇನೆ . ಮಧ್ಯ ಮಧ್ಯ ನನ್ನ ತಾಳ್ಮೆ ತಪ್ಪಿ ” ಏ ಸರಿ ನಡಿಯೇ” ಎನ್ನುತ್ತಾ ಅವಳನ್ನು ಎಳೆದು ನಡುದಾರಿಗೆ ತಂದ ಹೆಮ್ಮೆಯಲ್ಲಿ ನಡೆಯುತ್ತಿದ್ದೇನೆ. ನನ್ನ  ಬಲ ಕೈಯಲ್ಲಿ ಹಿಡಿಯಲ್ಪಟ್ಟ ಎರಡು ಪುಟಾಣಿ ಚೀಲಗಳು ಕೂಡ ನನ್ನ ಏರು ಧ್ವನಿಗೆ ಬೆಚ್ಚಿ ನನ್ನನು ಅಪ್ಪನನ್ನು ನೋಡುವಂತೆ ನೋಡುತ್ತಿವೆ- ಊಟದ ಡಬ್ಬಿಯ ಚೀಲ ಒಂದು, ಒಂದೇ ಒಂದು ಪುಸ್ತಕವನ್ನು ಹೊತ್ತ ಪುಸ್ತಕದ ಚೀಲ ಇನ್ನೊಂದು. ಯಾರ ಕೈಹಿಡಿದೆಯೇ ನಡೆಯುವಷ್ಟು ದೊಡ್ಡವನಾದ ಅಥವಾ ಹಾಗೆ ತಿಳಿದುಕೊಂಡ ನಾನೂ ಹೀಗೆಯೇ ಎಡವುತ್ತಾ ನಡೆಯುತ್ತಿರಬಹೊದೋ ಅಥವಾ ಎಡವಿದ್ದೇ ನನಗೆ ತಿಳಿಯುವುದಿಲ್ಲವೋ ಎಂದು ಕೂಡ ಯೋಚಿಸುತ್ತಿದ್ದೇನೆ .

ರಸ್ತೆಯ ಎರಡು ಕಡೆಯ ಕಾಲು ಹಾದಿಗಳಲ್ಲಿ ಸಮವಸ್ತ್ರಧಾರಿ ಮಕ್ಕಳ ಗೌಜು, ಅವಸರದ ನಡಿಗೆ ,ಪುಸ್ತಕದ ಚೀಲ, ಬುತ್ತಿ ಚೀಲಗಳ  ಅಲುಗಾಟ . ಕಣ್ಣು ಹಾಯಿಸಿದಷ್ಟು ದೂರ ಮಕ್ಕಳ ಹಿಂಡು ,ಬೆನ್ನಿಗೆ ಹೆತ್ತವರ ದಂಡು. ಮಕ್ಕಳನ್ನು ಶಾಲೆಗೆ ಬಿಟ್ಟು ಹೋಗುವುದೊಂದೇ ಆ ಒಂದು ಘಳಿಗೆಯ ಕಾಲದ ದೃಢ ಸಂಕಲ್ಪ . ಶಾಲೆಯ  ಬಾಗಿಲಿನ ಎದುರಿನ ರಸ್ತೆ ಬೆಳಿಗಿನ ಆ ಹೊತ್ತಿಗೆ ವಾಹನಗಳಿಂದ ಕಿಕ್ಕಿರಿದಿದೆ. ದೂರದಿಂದ ಕಾರಿನಲ್ಲಿ ಬಂದು ಮಕ್ಕಳನ್ನು ಬಿಡುವವರು , ರಸ್ತೆ ಬದಿಗೆ ಕಾರು  ನಿಲ್ಲಿಸಬಾರದ ಕಡೆಗಳಲ್ಲಿ ಮೆತ್ತಗೆ ಕಾರು ನಿಲ್ಲಿಸಿ ಇನ್ನೇನು ಪೊಲೀಸರು ಬಂದು ದಂಡ ಹಾಕುತ್ತಾರೆನೋ ಎಂದು ಹೆದರುತ್ತ ಮಕ್ಕಳ ಕೈ ಎಳೆದುಕೊಂಡು ಶಾಲೆಯ ಕಡೆಗೆ ಓಡುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಬಿಡುವ ಉಸಾಬರಿ ಇಲ್ಲದವರು ಅದೇ ರಸ್ತೆಯಲ್ಲಿ ಆ ಹೊತ್ತಿಗೆ ಹಾದುಹೋಗಬೇಕಾದಾಗ ಯಾಕಾದರೂ ಈ ರಸ್ತೆಯಲ್ಲೊಂದು ಶಾಲೆ ಇದೆಯೋ ಯಾಕಾದರೂ ಮಕ್ಕಳನ್ನು ಹೆರುತ್ತಾರೋ ಎಂದು ಗೊಣಗುತ್ತ ತಮ್ಮ ತಾಳ್ಮೆಯನ್ನು ಪರೀಕ್ಷೆಗೆ ಒಡ್ಡುತ್ತಾ ಸಾಗುತ್ತಿದ್ದಾರೆ. ಆ ರಸ್ತೆಯಲ್ಲಿ ತಿರುಗುವವರ ಹೊಣೆ ಅವರವರದೇ ಆದರೂ ಅಲ್ಲಿ ಮಕ್ಕಳನ್ನು ರಸ್ತೆ ದಾಟಿಸುವ ಹೊಣೆ ಇನ್ನೊಬ್ಬರ ಮೇಲಿದೆ. ಶಾಲೆ  ಶುರು  ಆಗುವ  ಮತ್ತು  ಮುಚ್ಚುವ  ಹೊತ್ತಿನಲ್ಲಿ  ಸಿಗ್ನಲ್  ಇಲ್ಲದ  ಕಡೆ  ಸುರಕ್ಷಿತವಾಗಿ  ರಸ್ತೆ  ದಾಟಿಸಲು , ಕೈಯಲ್ಲಿ  ‘ನಿಲ್ಲಿ ‘ ಎನ್ನುವ ಫಲಕ  ಹೊತ್ತವಳು ಒಬ್ಬಾಕೆ ನಿಂತಿದ್ದಾಳೆ . ಶಾಲೆಯ  ಬಾಗಿಲಿನ  ಎದುರು  ರಸ್ತೆ  ದಾಟಲೆಂದು  ಮಕ್ಕಳು  ಒಟ್ಟಾದಾಗಲೆಲ್ಲ , ಈಕೆ  ತನ್ನ  ಕೈಯ  ‘ನಿಲ್ಲಿ ‘ ಫಲಕದೊಂದಿಗೆ  ರಸ್ತೆಗೆ  ಧುಮುಕಿ ,ಎರಡೂ  ಕಡೆಯ  ವಾಹನಗಳನ್ನು  ನಿಲ್ಲಿಸಿ , ದಾಟುವವರಿಗೆ ಅನುಕೂಲ  ಮಾಡುತ್ತಾಳೆ .ಮಕ್ಕಳು  ಇವಳನ್ನು  ‘ಲಾಲಿಪಾಪ್  ಲೇಡಿ  ‘ ಎನ್ನುತ್ತಾರೆ . ಇವಳು  ಕೈಯಲ್ಲಿ  ಹಿಡಿಯುವ  ‘ಸ್ಟಾಪ್ ‘ ಫಲಕ ದ  ಆಕಾರ  ಲಾಲಿಪಾಪಿನಂತಿದೆ . ಇವಳು   ಕಣ್ಣೆದುರು  ಬರುವ  ಎಲ್ಲ  ಮಕ್ಕಳನ್ನೂ  ಹೆಸರಿಡಿದು  ಕೂಗಿ  ‘ಸುಪ್ರಭಾತ ‘ ಹೇಳುತ್ತಾಳೆ . ಜ್ವರ  ನೆಗಡಿ  ಕೆಮ್ಮು  ಎಂದು  ಶಾಲೆಗೇ  ಹಾಜರಾಗದ  ಮಕ್ಕಳು  ಇರಲಿ ಬಿಡಲಿ,  ಲಾಲಿಪೋಪ್  ಲೇಡಿ ಸೂಟಿ  ತೆಗೆದು  ಕೊಂಡದ್ದು    ನೋಡಿಲ್ಲ  ಕೇಳಿಲ್ಲ . ಮಕ್ಕಳ ಸಣ್ಣ ಸಣ್ಣ ಹೆಜ್ಜೆಗಳು ಇವಳ ಕಣ್ಣೆದುರೇ ದೊಡ್ಡದಾಗಿವೆ, ತೊದಲು ಅಸ್ಪಷ್ಟ ನುಡಿಗಳು ಬಲಿತಿವೆ. ಲಾಲಿಪಾಪ್ ಲೇಡಿ, ದಿನ ಬೆಳಗೊಮ್ಮೆ ಅಪರಾಹ್ನ ಒಮ್ಮೆ, ದೂರದ ವಾಹನಗಳಿಗೂ ಕಣ್ಣು ಕುಕ್ಕುವ ವಸ್ತ್ರ ಧರಿಸಿ ಕೈಯಲ್ಲಿ ವಾಹನ ನಿಲ್ಲಿಸುವ ದಂಡ ಹಿಡಿದು ಹಲವು ಬಾರಿ ರಸ್ತೆಗೆ ಧುಮುಕುತ್ತಾಳೆ, ವಾಹನಗಳನ್ನು ನಿಲ್ಲಿಸುತ್ತಾಳೆ. ರಸ್ತೆ ದಾಟಿಸುತ್ತಾಳೆ.

ಶಾಲೆಯ  ಬಾಗಿಲು  ತೆರೆಯಲು  ಇನ್ನೂ   ಹೊತ್ತಿರುವುದರಿಂದ  ಶಾಲೆಯ  ಮುಚ್ಚಿದ  ಗಾಜಿನ  ಬಾಗಿಲಿನ  ಒಳಗಿಂದ  ಕೆಲವು  ಪರಿಚಯದ ‘ಮಿಸ್’ಗಳ ಕೈ  ಕಾಲು , ಅರ್ಧರ್ಧ ಮುಖಗಳು  ಕಾಣಿಸುತ್ತಿವೆ .ಆವರಣದ  ಒಳ  ಬಂದು ಕಾಯುತ್ತಿರುವ   ಅಪ್ಪ  ಅಬ್ಬೆಯಂದಿರ  ಗುಂಪು  ಅಷ್ಟರಲ್ಲೇ   ದೊಡ್ಡದಾಗಿದೆ ;ಈ  ಗುಂಪಿನಲ್ಲಿ  ನಾನೂ ,ಒಂದು ಕೈಯಲ್ಲಿ ಮಗಳನ್ನು ಮತ್ತೊಂದು ಕೈಯಲ್ಲಿ ಅವಳ ಚೀಲಗಳನ್ನು ಹಿಡಿದು ಮಹಾ ಜವಾಬ್ದಾರಿಗಳನ್ನು ಸರಿತೂಗಿಸುವವನಂತೆ ಸೇರಿಕೊಂಡಿದ್ದೇನೆ . ಹೆಸರು ಪರಿಚಯ  ಇಲ್ಲದ ಕೆಲವರು ಇವನು ಈ ಮಗುವಿನ ಅಪ್ಪ ಎಂದು ಗುರುತು ಹಾಕಿಕೊಂಡು ಒಂದು ನಗೆ ಕೊಟ್ಟಿದ್ದಾರೆ.  ಸಣ್ಣ  ಶಾಲೆಯ  ಸಣ್ಣ  ಬಾಗಿಲು  ತೆರೆಯುತ್ತಿದ್ದಂತೆ  ಶಿಸ್ತಿನ   ಪಾಠವನ್ನು ದಿನವೂ  ಕಲಿಯುವ  ಮಕ್ಕಳು  ಸಾಲಿನಲ್ಲಿ  ಒಬ್ಬರ  ಹಿಂದೆ  ಒಬ್ಬರು  ಒಳ  ಹೋಗುತ್ತಿದ್ದಾರೆ . ಹಾಗೆ  ಸಾಲಿನಲ್ಲಿ  ಸಾಗುವಾಗ  ಮೈಗೆ  ಮೈ  ತಾಗಿದ್ದಕ್ಕೆ , ಬಾಯಿಗೆ ಕೈ ಅಡ್ಡ ಹಿಡಿಯದೆ ಕೆಮ್ಮಿದ್ದಕ್ಕೆ  “ಕ್ಷಮಿಸಿ ” ಎನ್ನುತ್ತಾ , ಎರಡು  ಮಕ್ಕಳು  ಒಂದೇ  ಸಲ  ಒಳ  ಹೋಗಲಾಗದೆ  ಒಂದು  ಪಿಳ್ಳೆ  ಇನ್ನೊಂದಕ್ಕೆ  ಒಳ  ಹೋಗಲು   ಬಿಟ್ಟಿದ್ದಕ್ಕೆ  ಇನ್ನೊಂದು  “ಧನ್ಯವಾದ ” ಹೇಳುತ್ತಾ  , ಕಲಿತ  ಪಾಠಗಳನ್ನೆಲ್ಲ  ಅಲ್ಲಲ್ಲೇ  ಒಪ್ಪಿಸುತ್ತಿದ್ದಾವೆ. ಬಹಳ  ಗಡಿಬಿಡಿಯವರು ,ಮಕ್ಕಳನ್ನು  ತರಗತಿಯ  ಬಾಗಿಲಿನ  ಮೆಟ್ಟಿಲಿನ  ಮೇಲೆ  ಎತ್ತಿ  ನಿಲ್ಲಿಸಿ  ಬಾಗಿಲಿನ ಒಳಗೆ ದಬ್ಬಿ ಓಡಿದ್ದಾರೆ . ಮಕ್ಕಳು  , ಅವರ  ಚಳಿ  ಟೊಪ್ಪಿ ,ಕೋಟಿನ  ಬಣ್ಣ ,ಶಾಲಾ  ಕೊಠಡಿಯ  ಒಳಗೆ  ಕಣ್ಮರೆ  ಆಗುವ  ಕೊನೆಯ  ನೋಟಕ್ಕೆ   ಕೈ  ಎತ್ತಿ  ಟಾಟಾ ಮಾಡಿ  ಹೊರಟಿದ್ದೇವೆ- ಅಪ್ಪಂದಿರು  ಅಮ್ಮಂದಿರು. ಮನೆಯ ದಾರಿ ಹಿಡಿದು ಕೆಲವು ಹೆತ್ತವರು ಅವಸರದಲ್ಲಿ, ಮತ್ತೆ ಕೆಲವರು ಸಮಾಧಾನದಲ್ಲಿ ಈಗ ಮನೆಯ ಕಡೆ ,ಕಚೇರಿಯ ದಿಕ್ಕಿಗೆ ಹೆಜ್ಜೆ ಹಾಕಿದ್ದಾರೆ . ಇನ್ನು ಕೆಲವು ಸಿಕ್ಕಾಪಟ್ಟೆ ಪುರಸೊತ್ತಿನ ಅಪ್ಪ  ಅಮ್ಮಂದಿರು  ಶಾಲೆಯ  ಆವರಣದ  ಹೊರ  ಬರುತ್ತಿದ್ದಂತೆಯೇ  ಒಂದು  ಸಿಗರೇಟು  ಹಚ್ಚಿ  ಮಾತಿಗೆ  ನಿಂತಿದ್ದಾರೆ .ಅಂದಿನ  ಹವಾಮಾನದ  ಕುರಿತು  ಒಂದು  ಟಿಪ್ಪಣಿಯಿಂದ ಶುರುವಾದದದ್ದು , ಅಪರಾಹ್ನ ಮಕ್ಕಳನ್ನು ವಾಪಾಸು ಕರೆದುಕೊಂಡು ಹೋಗುವಾಗ ಶಾಲೆಯ ಆವರಣದ ಹೊರಗೆ ದಿನವೂ  ಕಾಯುವ ಐಸ್ ಕ್ರೀಮ್ ಗಾಡಿಯವನಿಗೆ  ಶಾಪ ಹಾಕುವುದರಲ್ಲಿ  ಮುಂದುವರಿದಿದೆ. ಘಂಟೆ ಒಂಭತ್ತು ಆಗುವಾಗ ಶಾಲೆಯ ಬಾಗಿಲು ಮತ್ತು ಆವರಣದ ಬಾಗಿಲು ಬಾಗಿಲು ಮುಚ್ಚಿದ್ದಾರೆ. ಇನ್ನು ಅಪರಾಹ್ನ ಶಾಲೆ ಮುಗಿಯುವ ತನಕವೂ   ಹೊರಗಿನವರು ಹೊರಗೆ ಒಳಗಿನವರು ಒಳಗೆ. ಶಾಲೆಯ ಎದುರಿನ ಬೀದಿ ಮತ್ತೆ ನಿರ್ಜನ ನಿಶಬ್ದ ಮೌನವಾಗಿ ಬದಲಾಗಿದೆ. ಕೈಗಳೆರಡು ಖಾಲಿಯಾದದ್ದಕ್ಕೋ ಬರಿದಾದ್ದಕ್ಕೋ ಕೈಗಳನ್ನು ಬೀಸಿ ಬೀಸಿ ನಡೆಯುತ್ತಾ ಶಾಲೆಯಿಂದ ಹೊರಬಂದಿದ್ದೇನೆ. ಇನ್ನು ಕಚೇರಿಗೆ ಹೊರಡುವ ಹೊತ್ತಾದ್ದರಿಂದ, ಬೆಳಿಗ್ಗೆ ಧರಿಸಿದ  ಅಪ್ಪನ ವೇಷ ತನ್ನಷ್ಟಕ್ಕೆ ಎಲ್ಲೋ ಕಾಣೆಯಾಗಿ ಉದ್ಯೋಗಕ್ಕೆ ಒಪ್ಪುವ ರೂಪು ಮುಖ ಮುದ್ರೆಗಳು ತಂತಾನೇ ಏರಿಸಿ ನಡೆದಿದ್ದೇನೆ.

ಅನುಪಮ ನಿರಂಜನ – ಹೋರಾಟದ ಬದುಕು: ಡಾ. ರಾಮಶರಣ ಲಕ್ಷ್ಮೀನಾರಾಯಣ

ಲೇಖಕರು: ಡಾ. ರಾಮಶರಣ ಲಕ್ಷೀನಾರಾಯಣ

ಡಾ. ರಾಮಶರಣ ಲಕ್ಷ್ಮೀನಾರಾಯಣ ಅವರು ಅನಿವಾಸಿ ಬಳಗದಲ್ಲಿ ಬಹಳ ಸಕ್ರಿಯರು.  ಇತ್ತೀಚೆ ಜರುಗಿದ ಅನಿವಾಸಿಗಳ ಸಂವಾದದಲ್ಲಿ ಕನ್ನಡದ ಖ್ಯಾತ ಸಾಹಿತಿ, ಅನುಪಮಾ ನಿರಂಜನರ ಬಗ್ಗೆ ಮಾತಾಡಿ, ಅಂದಿನ ಮುಖ್ಯ ಅತಿಥಿಗಳಾದ ಸುಧಾ ಬರಗೂರ್ ಅವರು ತುಂಬ ಶ್ಲಾಘಿಸಲ್ಪಟ್ಟರು. ಆ ಭಾಷಣದ ಬರಹರೂಪ ಇಲ್ಲಿದೆ – ಸಂ 

೭೦-೮೦ ರ ದಶಕದಲ್ಲಿ ಬೆಳೆದ ನಮ್ಮ ಪೀಳಿಗೆಯವರಿಗೆ ಕನ್ನಡ ಓದುವ ಗೀಳು ಬೆಳೆಸಿದವರಲ್ಲಿ ಅನುಪಮ ನಿರಂಜನ ಒಬ್ಬರು. ಅವರ ಕಾದಂಬರಿ-ಕಥೆಗಳು ನಾಡಿನ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಬಂದ ಧಾರಾವಾಹಿಗಳ ಪುಟಗಳನ್ನೂ ಕತ್ತರಿಸಿ, ಒಟ್ಟಾಗಿ ಹೊಲೆದು ಪುಸ್ತಕ ಮಾಡಿಡುವುದು ನನ್ನಮ್ಮನ ಹವ್ಯಾಸ. ಅಂತಹ ಕಂತೆಗಳಲ್ಲಿ ಅನುಪಮಾ ನಿರಂಜನರ “ಹಿಮದ ಹೂ” ಕಾದಂಬರಿ ಓದಿದ ನೆನಪು. ಅವರು ಸ್ತ್ರೀವಾದಿ. ಅವರ ಮನೋಗುಣಕ್ಕೆ ತಕ್ಕುದಾಗಿ ಈ ಕೃತಿಯ ಪ್ರಧಾನ ಪಾತ್ರಗಳು ಒಬ್ಬ ಶಿಕ್ಷಕಿ ಹಾಗೂ ಆಕೆಯ ವಿದ್ಯಾರ್ಥಿನಿ. ಈ ವಿದ್ಯಾರ್ಥಿನಿ ರಕ್ತ ಕ್ಯಾನ್ಸರಿನಿಂದ ಬಳಲುವಾಗ, ನಾಯಕಿ ಹಾಗೂ  ಬಾಲಕಿಯ ನಡುವಿನ ಸಂಬಂಧ, ಮಾನಸಿಕ ತುಮುಲಗಳನ್ನು ಸೂಕ್ಷ್ಮವಾಗಿ ಅನ್ವೇಷಿಸುತ್ತ, ಓದುಗರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುವ ಶೈಲಿ ಮನ ಮುಟ್ಟಿತ್ತು. ಅನುಪಮಾ ಅವರ ಇತರ ಕೃತಿಗಳಲ್ಲಿ ಬರುವಂತೆಯೇ ಇಲ್ಲೂ ಅವರ ವೈದ್ಯ ವೃತ್ತಿ ಮತ್ತು ಜೀವನಾನುಭವಗಳು ಮೇಳೈಸಿವೆ.

ಮಲೆನಾಡು, ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕಣ್ಮಣಿಗಳಲ್ಲಿ ಅನುಪಮಾ ಒಬ್ಬರು. ೧೯೩೪ ರಲ್ಲಿ ತೀರ್ಥಹಳ್ಳಿಯಲ್ಲಿ ವೆಂಕಟಲಕ್ಷ್ಮಿಯಾಗಿ ಅವರ ಜನನ. ನನಗೆ ನೆನಪಿದ್ದಂತೆ ಅವರ ತಂದೆ ಸರ್ಕಾರಿ ಉದ್ಯೋಗಿ. ಮಹಾ ಕಟ್ಟುನಿಟ್ಟಿನ ಮನುಷ್ಯ. ಅನುಪಮ ಅವರು ಓದಿನಲ್ಲಿ ಮುಂದು. ಚಿಕ್ಕಂದಿನಿಂದಲೇ ಅವರದ್ದು ಹೋರಾಟದ ಮನೋಭಾವ. ಗಂಡು-ಹೆಣ್ಣು ಮಕ್ಕಳ ನಡುವಿನ ತಾರತಮ್ಯವನ್ನ ಕಟುವಾಗಿ ವಿರೋಧಿಸಿದ್ದು ೨೧ನೇ ಶತಮಾನಕ್ಕೆ ತಕ್ಕುದಾದೀತು.

ಅನುಪಮಾ ನಿರಂಜನ (ಕೃಪೆ: ವಿಕಿಪೀಡಿಯ)

೧೯೫೬ರಲ್ಲಿ ಅವರು ಮೈಸೂರಿನ ವೈದ್ಯ ಶಾಲೆಯಿಂದ ಎಂ.ಬಿ.ಬಿ.ಎಸ್ ಪದವೀಧರೆಯಾಗಿ ಹೊರಬಿದ್ದರು. ಅದಾಗಲೇ ಅವರು ಪತ್ರಕರ್ತ-ಲೇಖಕ ನಿರಂಜನರ ಸಖ್ಯ ಬೆಳಸಿದ್ದರು. ಪದವೀಧರರಾದ ವರ್ಷವೇ ಮನೆ ಜನರ ವಿರೋಧವಿದ್ದರೂ ನಿರಂಜನರೊಡನೆ ಮದುವೆಯಾದರು. ನಿರಂಜನರು ಮೆಲ್ವರ್ಗದವರು, ತಂದೆಯಿಲ್ಲದೇ ಹುಟ್ಟಿದವರು. ಅನುಪಮಾ, ನೇಕಾರ ಮನೆತನದವರು. ಅಂದಿನ ಕಾಲದಲ್ಲೇ ಜಾತಿ, ಅಂತಸ್ತುಗಳನ್ನು ಮೆಟ್ಟಿ, ಬಂಧು- ಬಾ೦ಧವರ ವಿರೋಧವನ್ನು ಎದುರಿಸಿ ನಿಲ್ಲುವ ಮನೋಸ್ಥೈರ್ಯವನ್ನು ತೋರಿದ್ದಾರೆ.

ನಿರಂಜನ, ಅನುಪಮಾ ಅವರದ್ದು ಮಾದರಿ ದಾಂಪತ್ಯವೆಂದೇ ಹೇಳಬಹುದು. ಇಬ್ಬರೂ ಒಬ್ಬರಿಗೊಬ್ಬರು ಸಮ್ಮಾನ ಗೌರವಗಳನ್ನು ಕೊಟ್ಟು-ಪಡೆದವರು. ಅವರದ್ದು ಕಮ್ಯುನಿಸ್ಟ್-ಎಡಪಂಥೀಯ ಧೋರಣೆ. ಅದರಂತೇ ಬಾಳಿದವರು. ವೈದ್ಯರಾದರೂ  ಅವರ ಜೀವನ ಆಡಂಬರದ್ದಾಗಿರಲಿಲ್ಲ. ಕಾಲಿಗೊಂದು, ಕೈಗೊಂದು ಚಾಕರರಿರಲಿಲ್ಲ.

ಎಣಿಕೆಯಂತೇ ನಿರಂಜನ, ಅನುಪಮ ಅವರ ಬರಹಗಳ ಪ್ರಥಮ ನಿರ್ದಯಿ ವಿಮರ್ಶಕರಾಗಿದ್ದರು; ಅಂತೆಯೇ ಪ್ರೋತ್ಸಾಹಕರೂ ಆಗಿದ್ದರು. ಇದನ್ನು ಅನುಪಮಾ ಅವರೇ ತಮ್ಮ ಆತ್ಮಕಥೆ “ನೆನಪು: ಸಿಹಿ-ಕಹಿ”ಯಲ್ಲಿ ಹೇಳಿದ್ದಾರೆ. ಇವನ್ನು ಹೀರಿ ಬೆಳೆದ ಅನುಪಮಾ ತಮ್ಮದೇ ಶೈಲಿಯನ್ನು ಬೆಳೆಸಿಕೊಂಡರು. ಸ್ತ್ರೀ ವಾದ, ಅಬಲೆಯರ ಶೋಷಣೆ, ನವ್ಯತೆ, ಬಂಡಾಯ ಇತ್ಯಾದಿ ಮನೋಧರ್ಮಗಳನ್ನು ಒಳಗೂಡಿದ ಕೃತಿಗಳನ್ನು ರಚಿಸಿ, ಸ್ವಂತಿಕೆಯನ್ನು ಬೆಳೆಸಿಕೊಂಡವರು. ವೈದ್ಯಕೀಯ ಜ್ಞಾನ ಬಳಸಿ, ಮನೋವೈಜ್ಞಾನಿಕ ಕೃತಿಗಳ ಸೊಬಗನ್ನು ಅವರು ಕನ್ನಡಕ್ಕಿತ್ತರು.

ಅನುಪಮಾ ಅವರ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಸಂಬಂಧಿಕರ ವಿರೋಧ ಕಟ್ಟಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅವರು ಜನಸೇವೆ, ಸಾಹಿತ್ಯ ಸೇವೆಗಳನ್ನೂ ಕೊನೆಯ ಉಸಿರಿನವರೆಗೆ ಮಾಡಿದರು. ೧೯೭೨ರಲ್ಲಿ ಅವರ ಸಂಗಾತಿ ನಿರಂಜನ ಪಾರ್ಶ್ವ ವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದರು. ಅನುಪಮಾ, ವೃತ್ತಿ, ಮಕ್ಕಳ ಜವಾಬ್ದಾರಿ, ಮನೆ ನಿರ್ವಹಣೆಗಳನ್ನು ಹೊತ್ತು, ಅವಿರತ ಸಾಹಿತ್ಯ ಸೇವೆ ಮಾಡಿ ೨೫ ಕಾದಂಬರಿ, ೯ ಕಥಾ ಸಂಕಲನಗಳನ್ನು ಪ್ರಕಟಿಸಿದರು.

ಕೃಪೆ: ಕನ್ನಡ ಸ್ಟೋರ್

ಅವರ “ದಿನಕ್ಕೊಂದು ಕಥೆ” ಆಗ ಮಕ್ಕಳಿಗೆಲ್ಲ ಜನಪ್ರಿಯವಾದ ಕೃತಿ. ಮಕ್ಕಳಿಗಾಗಿ ಕಥೆಗಳನ್ನು ಬರೆಯಲು ಲೇಖನಿಯೆತ್ತಿಕೊಂಡಾಗ ನಿರಂಜನರು, “೩೬೫ ಕಥೆಗಳನ್ನು ಬರೆಯಿರಿ, ದಿನಕ್ಕೊ೦ದಾಗುತ್ತದೆ”, ಎಂದರಂತೆ. ಅಂತೆಯೇ  ಪ್ರಪಂಚದ ಎಲ್ಲೆಡೆಯ ಕಥೆಗಳನ್ನು ಬರೆದು, ಅವನ್ನು ಚೈತ್ರದಿಂದ ಫಾಲ್ಗುಣದವರೆಗೆ ೧೨ ಸಂಪುಟಗಳನ್ನಾಗಿಸಿ ಪ್ರಕಟಿಸಿದರು. ಅಸಂಖ್ಯಾತ ಕನ್ನಡ ಕಣ್ಮಣಿಗಳು ಇವನ್ನು ಓದಿ ತಮ್ಮ ಅರಿವಿನ ಪರಿಧಿಯನ್ನು ಹಿಗ್ಗಿಸಿಕೊಂಡಿದ್ದಾರೆ. ಇಂದಿಗೂ ಈ ಕಥೆಗಳನ್ನು ಮಕ್ಕಳಿಗೆ ಓದಿ ರಂಜಿಸಬಹುದು, ನಾವೂ  ಓದಿ ಬಾಲ್ಯಕ್ಕೆ ಮರಳಿ ಪುಳಕಿತರಾಗಬಹುದು.

ವೈದ್ಯಕೀಯ ಸಾಹಿತ್ಯಕ್ಕೆ ಅನುಪಮಾ ಅವರ ಕೊಡುಗೆ ಅಪಾರ. ಮುಖ್ಯವಾಗಿ ಇದರಲ್ಲೂ ತಾಯಿ, ಮಗುವಿನ ಸ್ವಾಸ್ಥ್ಯಕ್ಕೆ ಸಂಬಂಧಿಸಿದ, ವನಿತೆಯರ ಆರೋಗ್ಯ, ದಾಂಪತ್ಯ ವಿಜ್ಞಾನಕ್ಕೆ ಕೈಪಿಡಿಯಾಗುವ ಕೃತಿಗಳೇ ಹೆಚ್ಚು. ಈ ಕೃತಿಗಳು ಪತ್ರಿಕೆಗಳಲ್ಲಿ ಸರಣಿಯಾಗಿ ಬಂದು ಕನ್ನಡದ ಮೂಲೆ -ಮೂಲೆಗಳನ್ನು ತಲುಪಿವೆ. ೧೯೭೮ರಲ್ಲಿ ಸ್ತನದ ಕ್ಯಾನ್ಸರ್ ಅವರನ್ನು ತಟ್ಟುತ್ತದೆ. ಇದರಿಂದಾಗಿಯೇ ಅವರು ೩ ಸಲ ಶಸ್ತ್ರ ಚಿಕಿತ್ಸೆಗೊಳಗಾಗುತ್ತಾರೆ. ಅನಾರೋಗ್ಯದ ನಡುವೆಯೇ ಅವರು ಕ್ಯಾನ್ಸರ್ ಬಗ್ಗೆ “ಕ್ಯಾನ್ಸರ್ ಜಗತ್ತು” ಎಂಬ ಪುಸ್ತಕವನ್ನು ಬರೆಯುತ್ತಾರೆ.

ಅನುಪಮಾ ಅವರಿಗೆ ಪ್ರವಾಸದ ಹುಚ್ಚಿತ್ತು. ಅಮೇರಿಕ, ಯುರೋಪ್ ಸುತ್ತಿ ಅವರು “ಅಂಗೈಯಲ್ಲಿ ಯುರೋ-ಅಮೇರಿಕ” ಎಂಬ ಪುಸ್ತಕ ಬರೆದರು. ಈ ಪ್ರವಾಸಗಾಥೆ “ವನಿತಾ” ಎಂಬ ಮಾಸಿಕದಲ್ಲಿ ಹರಿದು ಬಂತು. ಅದನ್ನು ಓದಿದ್ದು ನನಗಿನ್ನೂ ಹಚ್ಚ ಹಸಿರಾಗಿದೆ. ಅವರು ಲಂಡನ್ ನಗರಕ್ಕೆ ಬಂದಾಗ, ಅವರಿಗೆ ಕೈಯಲ್ಲಿ ಕೊಡೆಯಿಟ್ಟುಕೊಂಡೇ ತಿರುಗಿ, ಯಾವಾಗ ಇಲ್ಲಿ ಮಳೆ ಬರುತ್ತೋ ಊಹಿಸಲಸಾಧ್ಯ ಎಂದು ಕಿವಿ ಮಾತು ಹೇಳಿದ್ದರಂತೆ. ನನಗೆ ಈಗಲೂ ಈ ಮಾತು ನೆನಪಾಗುತ್ತಲೇ ಇರುತ್ತದೆ, ಇಲ್ಲಿನ ಹವಾಮಾನ ಅನುಭವಿಸಿ.

ಹುಟ್ಟಾ ಹೋರಾಟಗಾರ್ತಿ ಅನುಪಮಾ, ಸಾಹಿತ್ಯ ಕ್ಷೇತ್ರದಲ್ಲಿನ ಅಸಮಾನತೆಯ ವಿರುದ್ಧವೂ ಹೋರಾಡಿದಾದರು. ಅರ್ಹರಾದರೂ  ಅವರಿಗೆ ಸಂದ ಬೇಕಾದ ಪ್ರಶಸ್ತಿಗಳು ಸಿಗದೇ ಹೋಗಿರಬಹುದು. ಸಾಹಿತ್ಯ ಅಕಾಡೆಮಿ, ಸೋವಿಯತ್ ಲ್ಯಾ೦ಡ್ ನೆಹರೂ ಪ್ರಶಸ್ತಿಗಳು ಅವರನ್ನರಸಿ ಬಂದವು. ಕ್ಯಾನ್ಸರ್ ವಿರುದ್ಧ ಹೋರಾಡುತ್ತ, ೧೯೯೧ರಲ್ಲಿ ಓಗೊಡದ ನಾಡಿಗೆ ತೆರಳಿದರು. ೨೦೧೦ರಲ್ಲಿ ಕರ್ನಾಟಕ ಸರ್ಕಾರ ಅವರ ನೆನಪಿನಲ್ಲಿ ಕನ್ನಡ ವೈದ್ಯ ಸಾಹಿತ್ಯ ಪುರಸ್ಕಾರವನ್ನು ಪ್ರಾರಂಭಿಸಿದ್ದು ಸೂಕ್ತ.