ಬಕಿಂಗ್ಹ್ಯಾಮ್ ಅರಮನೆಯಲ್ಲಿ ಗೌರವಿಸಲ್ಪಟ್ಟ ಕನ್ನಡಿಗ ಶುಶ್ರೂಷಕ -ಬಿ ಎಸ್ ತಿಪ್ಪೇಸ್ವಾಮಿ ಲೇಖನ

ಬಿ ಎಸ್ ತಿಪ್ಪೇಸ್ವಾಮಿ
ತಿಪ್ಪೇಸ್ವಾಮಿ ಬಿಲ್ಲಹಳ್ಳಿ ಸಿದ್ದರಾಮಪ್ಪ ಅವರು ಮೂಲತಃ ಚನ್ನಗಿರಿ ತಾಲೂಕಿನ ಬಿಲ್ಲಹಳ್ಳಿಯವರು. ತಾವರೆಕೆರೆಯಲ್ಲಿ ತನ್ನ ಪ್ರಾಥಮಿಕ ಹಾಗೂ ಮಾಧ್ಯಮ ಶಿಕ್ಷಣ ಮುಗಿಸಿ ಕುವೆಂಪು ವಿಶ್ವವಿದ್ಯಾಲಯದಿಂದ ನರ್ಸಿಂಗ್ ಪದವಿ ಗಳಿಸಿ ಭಾರತದಲ್ಲಿ ಹಲವು ವರ್ಷಗಳ ಶುಶ್ರೂಷಕರೆಂದು ಕೆಲಸ ಮಾಡಿ ಯುಕೆಗೆ ಬಂದು ಎರಡೂವರೆ ದಶಕಗಳಿಂದ ಯು ಕೆ ದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತುರ್ತು ಚಿಕಿತ್ಸಾ ವಿಭಾಗ,  ರೆಸ್ಪಿರೇಟರಿ ಮತ್ತು ಟಿ. ಬಿ. ವಿಭಾಗಗಳಲ್ಲೂ ಅನೆಕ ವರ್ಷಗಳ ಅನುಭವವಿದೆ. ಅಲರ್ಜಿ ಶುಶ್ರೂಷೆಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಸದ್ಯ ಹಾಮರ್ಟನ್ NHS ಆಸ್ಪತ್ರೆಯಲ್ಲಿ ಸ್ಪೆಷ್ಯಾಲಿಸ್ಟ್ ಅಲರ್ಜಿ ಲೀಡ್ ನರ್ಸ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿನಿಂದಲೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಇದ್ದವರು, ಕನ್ನಡ ಬಳಗ ಯು ಕೆ ದಲ್ಲೂ ಸೇವೆ ಸಲ್ಲಿಸಿದ ಉತ್ಸಾಹಿ ಕನ್ನಡಿಗರು ಇವರು. ಲಂಡನ್ನಿನ ಬಕಿಂಗ್ ಹ್ಯಾಮ್ ಪ್ಯಾಲಸ್ ವತಿಯಿಂದ ಬಾಲ್ರೂಮಿನಲ್ಲಿ ಔತಣಕೂಟಕ್ಕೆ ಆಮಂತ್ರಣ ಸಂಪಾದಿಸಿದ ಆಯ್ದ ಶುಶ್ರೂಷಕರುಗಳಲ್ಲಿ ಇವರು ಒಬ್ಬರು ಎನ್ನುವದು ಹೆಮ್ಮೆಯ ವಿಷಯ. (ಸಂ)


ಭಾವನೆಯ ಸುಳಿಯಲ್ಲಿ ನನ್ನದೊಂದು ಪಯಣ -ಬಿ ಎಸ್ ತಿಪ್ಪೇಸ್ವಾಮಿ 

ಎಂದಿನಂತೆ ೧೧ನೇ ಅಕ್ಟೋಬರ್ ೨೦೨೩ರಂದು ಕ್ಲಿನಿಕ್ ಮುಗಿಸಿ ಸಂಜೆ ಸುಮಾರು ೪ ಘಂಟೆಗೆ ಕೆಲಸದ  ಇಮೇಲ್ ಪರಿಶೀಲಿಸುತ್ತಿರುವಾಗ   ರೂತ್ ಶಿವನೇಶನ್, ನಮ್ಮ  ಸಿಬ್ಬಂದಿ ಅಭಿವೃದ್ಧಿ ವಿಭಾಗದ ಮುಖ್ಯಸ್ಥರಿಂದ ಒಂದು ಇಮೇಲ್ ಸಂದೇಶ ಕಂಡು ನನಗೆ ನಂಬಲಾಗಲಿಲ್ಲ. ನನ್ನ ಜೊತೆಗಿದ್ದ ಇಬ್ಬರು ಸಹೋದ್ಯೋಗಿಯರಿಂದ ಆ ಇಮೇಲ್ ಪುನರ್ ಪರಿಶೀಲಿಸಿ ಸಂದೇಶ ಖಚಿತವೆಂದು ಖಾತ್ರಿಯಾಯ್ತು. ರೂತ್ ನ ಇಮೇಲ್ ಪ್ರಕಾರ ನಾನು ೧೪ ನವೆಂಬರ್ ೨೦೨೩ರಂದು ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಬ್ರಿಟನ್ ದೇಶದ ರಾಜರಾದ ಗೌರವಾನ್ವಿತ ಚಾರ್ಲ್ಸ್ ಫಿಲಿಪ್ ಆರ್ಥರ್ ಜಾರ್ಜ್ ರವರು  ಬ್ರಿಟನ್ನಲ್ಲಿ ನೆಲೆಸಿರುವ ಅಂತರರಾಷ್ಟ್ರೀಯ ಶುಶ್ರೂಷಕರಿಗೆ ಏರ್ಪಡಿಸಿದ್ದ ಔತಣಕೂಟದ ಆಮಂತ್ರಣವಾಗಿತ್ತು.  ನನಗೇಕೆ ಈ ಆಮಂತ್ರಣ? ಎಂದು ರುತ್ ಗೆ ಮರು ಪ್ರಶ್ನಿಸಿದೆ. ಅದಕ್ಕುತ್ತರಿಸಿದ ರುತ್, ಅಂತರರಾಷ್ಟ್ರೀಯ ಶುಶ್ರೂಷಕರಿಗೆ ನೀನು ಇದುವರೆವಿಗೂ ಸಲ್ಲಿಸಿರುವ ಸೇವೆಗೆ ಬ್ರಿಟನ್ ರಾಜರಿಂದ ಇದೊಂದು ವಿಶೇಷ ಕೊಡುಗೆ ಎಂದರು. ನನಗೆ ಆನಂದ ತಡೆಯಲಾಗದೆ ಕಣ್ಣೀರು ತಾನಾಗಿಯೇ ಹರಿಯತೊಡಗಿದವು. ನವೆಂಬರ್ ೧೪ರಂದು ದೀಪಾವಳಿ ಹಬ್ಬವಿದೆ, ನಮ್ಮ ಅಪ್ಪಾಜಿ ಅಗಲಿದ ನಂತರ ಇದು ಅವರ ಮೊದಲನೇ ಹಿರಿಯರ ಪೂಜೆ, ಅವರ ಪೂಜೆ ಮಾಡಲು ತಂದೆಯ ಶಿವಲಿಂಗ ಕರಡಿಗೆ ಧರಿಸಿದ್ದ ಹಿರಿಯ ಮಗನಾಗಿ ನಾನು ನಿರ್ಧರಿಸಿ ಕೇವಲ ೭ ದಿನಗಳ ಮುಂಚೆ ಲಂಡನ್ನಿಂದ ಬೆಂಗಳೂರಿಗೆ ನವೆಂಬರ್ ೧೦ರಂದು ಪ್ರಯಾಣಿಸಲು ವಿಮಾನದ ಟಿಕೆಟ್ ಖರೀದಿಸಿದ್ದೆ. ನಾ ಬರುವ ವಿಷಯ ಅಮ್ಮನಿಗೆ ಮುಂಚೆ ತಿಳಿಸಿರಲಿಲ್ಲವಾದರೂ ಅರಮನೆಯ ಆಮಂತ್ರಣ ಕಂಡೊಡನೆ ಅಮ್ಮ ಹಾಗೂ ತಮ್ಮನೊಂದಿಗೆ ಈ ವಿಷಯ ಹಂಚಿಕೊಂಡೆ. ಅವರಿಬ್ಬರೂ ಒಂದೇ ಉತ್ತರ ಕೊಟ್ಟು “ರಾಜ ಮನೆಯ ಆಮಂತ್ರಣ ಜೀವನದಲ್ಲಿ ಸಿಗುವ ಏಕೈಕ ಅವಕಾಶ”, ನಿನ್ನ ತಂದೆ ಇದ್ದಿದ್ದರೆ ಅವರು ಅದೆಷ್ಟೋ ಸಂತೋಷಗೊಳ್ಳುತ್ತಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜರನ್ನು ಭೇಟಿಯಾಗಿ ಬಾ, ಜೊತೆಗೆ ಶಿವಲಿಂಗ ಧರಿಸಿ ಹೋಗು. ಆಗ ನಿನ್ನ ತಂದೆ ನಿನ್ನೊಡನೆಯೇ ಇದ್ದಾರೆ ಎಂಬ ಅನುಭವದ ಜೊತೆಗೆ ಅವರ ಆತ್ಮಕ್ಕೆ ನೀನು ಸಲ್ಲಿಸುವ ಅತ್ಯಂತ ಶ್ರೇಷ್ಠ ಮಟ್ಟದ ಗೌರವ ಎಂದರು. ಅವರ ಮಾತು ಕೇಳಿ ನನ್ನ ಭಾವುಕತೆ ಇನ್ನೂಮಿಗಿಲೇರಿತು. ಸಂಜೆ ಸುಮಾರು ೬ ಘಂಟೆಯಾಗಿತ್ತು. ನನ್ನ ಆತ್ಮೀಯ ಗೆಳೆಯರಿಗೆ ಹಾಗೂ ಸಹೋದ್ಯೋಗಿಗಳೊಡನೆ ಈ ವಿಷಯವನ್ನು ಹಂಚಿಕೊಂಡೆ. ಅವರೆಲ್ಲರೂ ತುಂಬಾ ಸಂತೋಷದ ಜೊತೆಗೆ ನನ್ನ ೨೩ ವರ್ಷಗಳ ಕಾಲ ಬ್ರಿಟನ್ನಲ್ಲಿ ನೆಲೆಸಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಶುಶ್ರೂಷಕರಿಗೆ, ಅಧಿಕೃತವಾಗಿ ಭಾರತದಲ್ಲಿ ನಾನು ಹಮ್ಮಿಕೊಂಡ ನನ್ನ ಹಲವಾರು ಕಾರ್ಯಕ್ರಮಗಳನ್ನು ಹೆಸರಿಡಿದು ಶ್ಲಾಘಿಸುತ್ತ “ಈ ಗೌರವಕ್ಕೆ ನೀನು ಅತ್ಯಂತ ಅರ್ಹತೆಯುಳ್ಳವನು” ಎಂದು ಪ್ರೋತ್ಸಾಹಿಸಿದರು.

ಬ್ರಿಟನ್ನಿನ ನ್ಯಾಷನಲ್ ಹೆಲ್ತ್ ಸರ್ವಿಸ್ ನಲ್ಲಿ ಭಾರತದ ಶುಶ್ರೂಷಕರು (Nurses)

ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಸುಮಾರು ೭ ಲಕ್ಷಕ್ಕೂ ಹೆಚ್ಚು  ಶುಶ್ರೂಷಕರು ಪ್ರತಿ ವರ್ಷ ಪದವಿಗಳಿಸಿ, ಪ್ರಪಂಚದಲ್ಲೇ ಅತಿ ಹೆಚ್ಚು ಶುಶ್ರೂಷಕರು ಹೊರಹೊಮ್ಮುವ ರಾಷ್ಟ್ರ ಎಂಬುದು ಹೆಮ್ಮೆಯ ವಿಷಯವಾದರೂ ಸಹ ಅವರಲ್ಲಿ ೧೦ಕ್ಕೆ ೮ ಜನರು ಹೊರರಾಷ್ಟ್ರಗಳಲ್ಲಿ ಕೆಲಸ ನಿರ್ವಹಿಸುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಬ್ರಿಟನ್ನಷ್ಟೇ ಜನ ಸಂಖ್ಯೆ ಇದೆ. ೬ ಕೋಟಿ ಜನ ಸಂಖ್ಯೆ ಇರುವ ಕರ್ನಾಟಕದ ಸರ್ಕಾರೀ ಆಸ್ಪತ್ರೆಗಳಲ್ಲಿ ಹಾಲಿ ಸೇವೆ ಸಲ್ಲಿಸುವ ಶುಶ್ರೂಷಕರ ಸಂಖ್ಯೆ ೧೫ ಸಾವಿರವಾದರೆ ಅಷ್ಟೇ ಜನಸಂಖ್ಯೆ ಇರುವ ಬ್ರಿಟನ್ನ ನ್ಯಾಷನಲ್ ಹೆಲ್ತ್ ಸರ್ವಿಸ್ ನಲ್ಲಿ ಸುಮಾರು ೬ ಲಕ್ಷಕ್ಕೂ ಅಧಿಕ ಶುಶ್ರೂಷಕರು ಕೆಲಸದಲ್ಲಿದ್ದಾರೆ. ಈ ೬ ಲಕ್ಷದಲ್ಲಿ ಶೇಕಡಾ ೧೫-೨೦ರಷ್ಟು ಶುಶ್ರೂಷಕರು ಭಾರತೀಯ ಮೂಲದವರು ಎಂಬುದು ಹೆಮ್ಮೆ ಎನಿಸದರೂ, ನಾಡಿನಲ್ಲಿ ಅವಕಾಶಗಳ ಕುಂದು ಕೊರತೆ, ಅತಿ ಕಡಿಮೆ ಸಂಬಳ, ಶುಶ್ರೂಷಕರಿಗೆ ಸಮಾಜದಲ್ಲಿರುವ ಕಳಪೆ ಮನ್ನಣೆ, ಸರಬರಾಜು ಹಾಗೂ ಸಲಕರಣೆಗಳ ಕೊರತೆ, ಪುರಾವೆ ಆಧಾರಿತ ಅಭ್ಯಾಸಗಳ ಕೊರತೆ, ವೈದ್ಯರ ಪ್ರಾಬಲ್ಯ ಹಾಗೂ ಶುಶ್ರೂಷಕರಿಗೆ ಆಸ್ಪ್ರತ್ರೆಗಳಲ್ಲಿ ಆಡಳಿತಾಧಿಕಾರಿಗಳಾಗುವ ಅವಕಾಶಗಳ ಕೊರತೆ ಇವೆಲ್ಲವೂ ಕೂಡ ಪ್ರತಿಯೊಬ್ಬ ಭಾರತೀಯ ಶುಶ್ರೂಷಕರು ಅನುಭವಿಸುವ ಸತ್ಯ ಸಂಗತಿ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು, ಕಳೆದ ೨೦ ವರ್ಷಗಳಲ್ಲಿ ಸುಮಾರು ೨ ಸಾವಿರಕ್ಕೂ ಹೆಚ್ಚು ಶುಶ್ರೂಷಕರಿಗೆ ಹಾಗೂ ಶುಶ್ರೂಷಕ ವಿದ್ಯಾರ್ಥಿಯರಿಗೆ ತಮ್ಮವೃತ್ತಿಪರ ಜೀವನವನ್ನು ಹೇಗೆ ಸುಧಾರಿಸುವುದು, ಪುರಾವೆ ಆಧಾರಿತ ಅಭ್ಯಾಸಗಳನ್ನು ಹೇಗೆ ಜಾರಿಗೆ ತರುವುದು, ವೃತ್ತಿಯಲ್ಲಿ ನಾಯಕತ್ವ ಅವಕಾಶಗಳನ್ನು ಹೇಗೆ ಕಲ್ಪಿಸಿಕೊಳ್ಳಬಹುದು, ಸಮಾಜದಲ್ಲಿ ಆರೋಗ್ಯದ ಸುಧಾರಣೆ ತರಲು ಶುಶ್ರೂಷಕರ ಪಾತ್ರವೇನೆಂಬುದನ್ನು ಕುರಿತು ವಿವಿಧ ರೀತಿಯ ಚಟುವಟಿಕೆಗಳನ್ನು ಆಯೋಜಿಸುತ್ತಾ ಬಂದಿದ್ದೇನೆ. ಇದಕ್ಕೆ ನನ್ನಸ್ಥಳೀಯ ಹಾಗೂ ಭಾರತೀಯ ಮೂಲದ ಸಹೋದ್ಯೋಗಿಗಳೂ ಸಹ ಸಾಕಷ್ಟು ಸಹಕರಿಸಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಹೊಸದಾಗಿ ವೃತ್ತಿ ಆರಂಭಿಸುವ ಪ್ರತಿ ಅಂತರರಾಷ್ಟ್ರೀಯ ಶುಶ್ರೂಷಕರಿಗೂ ಸಹ ನನ್ನ ವೈಯುಕ್ತಿಕ ಮಟ್ಟದಲ್ಲಿ ಇಲ್ಲಿ ನೆಲೆಸಲು ಬೇಕಿರುವ ಮೂಲಭೂತ ಸೌಕರ್ಯಗಳ ಬಗ್ಗೆ, ದೇಶದ ರೀತಿ ನೀತಿಗಳ ಬಗ್ಗೆ, ಆರೋಗ್ಯ ಹಾಗೂ ಸುರಕ್ಷತೆ ಬಗ್ಗೆ ಪ್ರತಿ ತಿಂಗಳೂ ಮುಖಾಮುಖಿ ಭೇಟಿಯಾಗಿ ತಿಳಿಸುತ್ತೇನೆ.  ಕೋವಿಡ್ ಅವಧಿಯಲ್ಲಿ, ಸ್ಥಳೀಯ ಹಾಗೂ ಭಾರತೀಯ ಸಹೋದ್ಯೋಗಿಗಳು ಅಲ್ಲದೆ ಸ್ವಯಂ ಸೇವಾ ಸಂಸ್ಥೆಗಳ ಸಹಾಯದಿಂದ ಸುಮಾರು ನೂರಕ್ಕೂ ಹೆಚ್ಚು ಕೋವಿಡ್ ರೋಗಿಗಳನ್ನು ಮನೆಯಲ್ಲಿಯೇ ಚಿಕಿತ್ಸೆ ಕೊಟ್ಟು  ಗುಣಮುಖರಾಗುವವರೆಗೂ ದೂರವಾಣಿ ಕರೆಗಳ ಮೂಲಕ ಸಲಹೆ ನೀಡುವುದರ ಜೊತೆಗೆ ಅವರು ಸಾಂಕ್ರಾಮಿಕ ರೋಗದಿಂದಾದ ಮಾನಸಿಕ ಖಿನ್ನತೆಯಿಂದ ಹೊರಬರಲು  ಅತ್ಮಸ್ಥೈರ್ಯ ತುಂಬಿದ್ದೆವು.

ನನ್ನ ಪಯಣ

ಚಿಕ್ಕಂದಿನಿಂದಲೂ ಹಿರಿಮಗನಾಗಿ ನನ್ನ ತಂದೆ ಪಟ್ಟ ಪರಿಶ್ರಮಗಳು ಹಲವಾರು. ಕಡುಬಡತನದ ಕುಟುಂಬದಲ್ಲಿ ಬೆಳೆದ ನನ್ನ ತಂದೆ ಅವರ ಕುಟುಂಬದಲ್ಲಿಯೇ ಮೊದಲನೇ ಪದವೀಧರರಾಗಿ ಒಡಹುಟ್ಟಿದವರೆಲ್ಲರನ್ನು ಆರ್ಥಿಕವಾಗಿ ಪ್ರೋತ್ಸಾಹಿಸಿ ವೃತ್ತಿಪರರನ್ನಾಗಿ ಅಲ್ಲದೆ, ಅವರನ್ನು ಕೌಟುಂಬಿಕವಾಗಿ ನೆಲೆಸಲು ಪಟ್ಟ ಕಷ್ಟಗಳನ್ನು ನೋಡುತ್ತಲೇ ಕಳೆದಿತ್ತು ನನ್ನ ಬಾಲ್ಯ ಹಾಗೂ ಪ್ರೌಡಾವಸ್ಥೆ. ಚನ್ನಗಿರಿ ತಾಲೂಕು, ತಾವರೆಕೆರೆಯಲ್ಲಿ ನನ್ನ ಪ್ರಾಥಮಿಕ ಹಾಗೂ ಮಾಧ್ಯಮ ಶಿಕ್ಷಣ. ಹಟ್ಟಿಕಸ, ಹಸು, ಎಮ್ಮೆ ಸೆಗಣಿ ಬಾಚಿ, ದನಕರುಗಳಿಗೆ ಹುಲ್ಲು ನೀರು ಕುಡಿಸಿ ನಂತರ ಶಾಲೆಗೆ ಹೋಗಿ ಬಂದು, ಸಂಜೆ ಅಮ್ಮ ಕಟ್ಟಿಟ್ಟ ಹುಲ್ಲಿನ ಪೆಂಡಿಯೊಂದಿಗೆ ಹಿಂದಿರುಗಿ, ಅಪ್ಪಾಜಿ ಬೆಳೆಸಿದ ತರಕಾರಿ ಗಿಡಗಳಿಗೆ ನೀರುಣಿಸಿ, ನನ್ನ ಪಠ್ಯೇತರ ಕಾರ್ಯಗಳನ್ನು ಮುಗಿಸಿ ರಾತ್ರಿ ಊಟ ಮುಗಿಸಿ, ಅಪ್ಪನ ಕಾಲೊತ್ತುತ್ತ ಅವರ ಕಥೆಗಳನ್ನು ಕೇಳುತ್ತ ಮಲಗುವುದು ನನಗೆ ಈಗಲೂ ಸವಿನೆನಪು.

ಅವಿಭಕ್ತ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ  ತಂದೆಯವರು, ಶ್ರೇಷ್ಠ ಕೌಟುಂಬಿಕ ಹಾಗೂ ವೃತ್ತಿಪರ ಮೌಲ್ಯಗಳ ಜೊತೆಗೆ, ಒಳ್ಳೆಯ ಸಾಮಾಜಿಕ ನಿಲುವು ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಸಾಕಷ್ಟು ಶ್ರಮಿಸಿದ್ದರು. ಮಕ್ಕಳಿಗೆ ಆಸ್ತಿ ಬೇಡ ಮಕ್ಕಳನ್ನೇ ಆಸ್ತಿಯಾಗಿ ಮಾಡಿ ಎನ್ನುವ ತತ್ವವನ್ನ ಕಾರ್ಯರೂಪಕ್ಕೆ ತಂದ ನಮ್ಮ ತಂದೆ “ಸಫಾರಿ ಸಿದ್ದರಾಮಣ್ಣ” ಎಂದೇ ಹೆಸರುವಾಸಿಯಾಗಿದ್ದರು.. ಈ ಎಲ್ಲಾ ಪೀಠಿಕೆ ಏಕೆಂದರೆ, ತಂದೆಯವರ ಮಾತು ವೇದ ವಾಕ್ಯವೆಂದು ಅವರ ಹೇಳಿದ ದಾರಿಯಲ್ಲೇ ನಡೆದು ಬಂದೆ. ಅವರ ಹಾಗೂ ಅವರ ಪೂಜ್ಯ ಗುರುಗಳಾದ ದಿವಂಗತ ಶ್ರೀ ಬಿ ಜಿ ನಾಗರಾಜ್ ರವರ ಸಲಹೆಯಂತೆ ನನ್ನ ಶುಶ್ರೂಷಕ ಪದವಿಯನ್ನು ಕುವೆಂಪು ವಿಶ್ವವಿದ್ಯಾನಿಲಯದಿಂದ ೧೯೯೮ ನೇ ಸಾಲಿನಲ್ಲಿ ಗಳಿಸಿದೆ. ನನ್ನ ವೃತ್ತಿಪರ ಶಿಕ್ಷಣ ಕರ್ನಾಟಕ ಶುಶ್ರೂಷಕ ಪರಿಷತ್ತಿನಲ್ಲಿ ನೋಂದಣಿಯಾದ ದಿನವೇ ನನಗೆ ಕೆಲಸದ ಪ್ರಸ್ತಾಪ ಪತ್ರದ ಜೊತೆಗೆ ೧೦ ದಿನಗಳ ಮುಂಗಡ ಸಂಬಳವನ್ನು ಒಂದು ಶುಶ್ರೂಷಕ ವಿದ್ಯಾಸಂಸ್ಥೆಯ ಅಧ್ಯಕ್ಷರು ನನ್ನ ತಂದೆಯ ಮುಂದೆಯೇ ನೀಡಿದಾಗ ನನಗಿಂತ ನನ್ನ ತಂದೆಯವರ ಆನಂದಕ್ಕೆ ಪಾರವೇ ಇಲ್ಲವಾಗಿತ್ತು. ಕೇವಲ ೬ ತಿಂಗಳು ಅನುಭವವಿದ್ದರೂ ಕೂಡ, ೨೦೦೦  ಇಸವಿಯಲ್ಲಿ ಒರಿಸ್ಸಾದಲ್ಲಿ ನಡೆದ ಚಂಡಮಾರುತ ದುರಂತದಲ್ಲಿ ವೈದ್ಯಕೀಯ ನೆರವು ನೀಡಲು ರಚಿಸಿದ ಮಣಿಪಾಲ ಆಸ್ಪತ್ರೆ  ವೈದ್ಯಕೀಯ ವಿಪತ್ತು ನಿರ್ವಹಣಾ ತಂಡದಲ್ಲಿ ನನ್ನನ್ನು ಆಯ್ಕೆ ಮಾಡಿದ್ದರು. ಆಗಲೂ ಸಹ ನಾನು ಮೇಲೆ ರೂತ್ ನ ಪ್ರಶ್ನಿಸಿದಂತೆ, ಮಣಿಪಾಲ ಆಸ್ಪತ್ರೆ, ಬೆಂಗಳೂರಿನ ನರ್ಸಿಂಗ್ ಡೈರೆಕ್ಟರ್ ಆಗಿದ್ದ ಶ್ರೀಮತಿ ಶ್ರೀದೇವಿ ವಾರಿಯರ್ ಅವರನ್ನು ಪ್ರಶ್ನಿಸಿದೆ “ನನಗಿಂತಲೂ ಹತ್ತಾರು ವರ್ಷ ಅನುಭವವಿರುವ ಹಿರಿಯ ಶುಶ್ರೂಷಕರಿರುವಾಗ ನನ್ನನ್ನೇಕೆ ಆಯ್ಕೆ ಮಾಡಿದ್ದೀರಿ?” ಎಂದೆ. ಅದುಕ್ಕುತ್ತರಿಸಿದ ಅವರು, ನಿನ್ನಲ್ಲಿರುವ ಅನುಭವಕ್ಕಿಂತ ನಿನಗಿರುವ ಅನುಕಂಪ  ಹಾಗೂ ವೃತ್ತಿಪರತೆ ನಿನಗೆ ಈ ಅವಕಾಶ ನೀಡಿದೆ ಎಂದರು. ಅವರ ಆ ಮಾತು ನನಗೆ ಹತ್ತಾನೆ ಬಲವನ್ನು ಅನುಗ್ರಹಿಸಿದಂತಾಯಿತು. ಒರಿಸ್ಸಾದ ೧೦ ದಿನಗಳ ಸೇವೆ ಇಂದಿಗೂ ಅವಿಸ್ಮರಣೀಯ. ನಮ್ಮೊಂದಿಗೆ ಭಾರತೀಯ ಸೇನೆಯ ಮುಖ್ಯಸ್ಥರು, ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿಗಳು, ಒರಿಸ್ಸಾ ಆರೋಗ್ಯ ಸಚಿವರು ಹಾಗೂ ಅವರ ಕಾರ್ಯದರ್ಶಿಗಳು ಇಂತಹ ಮಹಾ ಗಣ್ಯವಕ್ತಿಗಳೊಡನೆ ದೈನಂದಿನ ಚಟುವಟಿಕೆಗಳ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ ಅವರೊಡನೆ ಅದೇ ಸೇನಾ ಅತಿಥಿ ಗೃಹದಲ್ಲಿ ವಾಸ್ತವಿಸಿದ ನೆನಪು ಅಜರಾಮರ. ಅದೃಷ್ಟವೆಂದರೆ, ನಮಗೆ ಬೇಕಾದ ಎಲ್ಲಾ ಸಹಾಯ ಅಲ್ಲಿನ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು ನೀಡಿದ್ದರಿಂದ  ಅತಿ ಕಡಿಮೆ ಸಮಯದಲ್ಲಿ ಅತ್ಯಂತ ಗರಿಷ್ಟ ಸಂಖ್ಯೆಯಷ್ಟು ರೋಗಿಗಳನ್ನು ಚಿಕಿತ್ಸಿದ್ದಲ್ಲದೆ, ಅವರ ಕುಟುಂಬಗಳಿಗೆ ಬೇಕಾಗುವ ಊಟ ಹಾಗೂ ತಾತ್ಕಾಲಿಕ ವಸತಿಯ ವ್ಯವಸ್ಥೆಯನ್ನು ಮಾಡುವ ಸದಾವಕಾಶ ನಮಗೆ ದೊರಕಿತು. ಅಲ್ಲಿಂದ ಹಿಂದಿರುಗಿದಾಗ ನಮ್ಮ ತಂಡದ ಎಲ್ಲರನ್ನು ಸ್ವಾಗತಿಸುತ್ತಿರುವ ಒಂದು ಬ್ಯಾನರ್ ಮಣಿಪಾಲ ಆಸ್ಪತ್ರೆಯ ಮುಂದೆ ಪ್ರದರ್ಶಿಸಿಲಾಗಿತ್ತು.  ಅಲ್ಲಿನ ಸಾವು ನೋವಿನ ಘಟನೆಗಳನ್ನು ಹಾಗೂ ನಮ್ಮ ಅನುಭವವನ್ನು ಹಂಚಿಕೊಳ್ಳಲು ಸ್ವತಃ ಒರಿಸ್ಸಾದ ಆರೋಗ್ಯ ಸಚಿವರು ಬೆಂಗಳೂರಿಗೆ ಭೇಟಿ ನೀಡಿ ನಮ್ಮೆಲ್ಲರನ್ನೂ ಅವರ ಅತಿಥಿ ಗೃಹಕ್ಕೆ ಆಹ್ವಾನಿಸಿ, ಎಲ್ಲಾ ಮಾಹಿತಿಯನ್ನು ಸಂಗ್ರಹಿಸುವುದರ ಜೊತೆಗೆ ನಮ್ಮೆಲ್ಲರ ಕರ್ತವ್ಯ  ನಿಷ್ಠೆಯನ್ನು ಶ್ಲಾಘಿಸಿದ್ದರು.

ಲಂಡನ್ನಿಗೆ ಹೊರಟ ಕನ್ನಡದ ಶುಶ್ರೂಷಕ

ಒರಿಸ್ಸಾದ ಅನುಭವ ಇನ್ನೂ ಹಸಿಯಿರುವಾಗಲೇ ಲಂಡನ್ ನಗರದಲ್ಲಿರುವ ವಿಪ್ಪ್ಸ್ ಕ್ರಾಸ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಸಂದರ್ಶನಕ್ಕೆ ಆಮಂತ್ರಣ ಬಂದಿತ್ತು. ಅಂದು ಬೆಳಿಗ್ಗೆ ಯುಗಾದಿ ಹಬ್ಬದ ಸಲುವಾಗಿ, ನನ್ನ ವೇತನದಲ್ಲುಳಿಸಿದ  ೧೦,೦೦೦ ರೂಪಾಯಿಗಳನ್ನು ನನ್ನ ತಂದೆತಾಯಿಯರ ಕೈಲಿತ್ತು ನಮಸ್ಕರಿಸಿ ಹಬ್ಬದ ಆಚರಣೆಯಲ್ಲಿದ್ದಾಗ ಬೆಂಗಳೂರಿಂದ ದೆಹಲಿಗೆ ಹೊರಡಲು ಕರೆ ಬಂತು. ಕೇವಲ ೮ ತಿಂಗಳ ಅನುಭವದ     ನಾನು, ದೆಹಲಿಯ ಲೀ ಮೆರಿಡಿಯನ್ ಹೋಟೆಲ್ನಲ್ಲಿ ಸಂದರ್ಶನಕ್ಕೆ  ಎಂದು ಬಂದಿದ್ದ ೩,೫೦೦ ಶುಶ್ರೂಷಕರಲ್ಲಿ ಅತ್ಯಂತ ಕಡಿಮೆ ಅನುಭವಿಯಾಗಿದ್ದರೂ ಕೂಡ, ಬ್ರಿಟನ್ ದೇಶದಲ್ಲಿ ಸೇವೆ ಸಲ್ಲಿಸುವ ಆಕಾಂಕ್ಷಿಯಾಗಿದ್ದೆ. ೩ ದಿನದ ಸಂದರ್ಶನದಲ್ಲಿ ೮೦ ಜನರ ಆಯ್ಕೆ ಮಾಡುವುದಾಗಿ ETI ಕಂಪನಿ ಡೈರೆಕ್ಟರ್ ಜಾನಿ ಭಂಡಾರಿಯವರು ತಿಳಿಸಿದ್ದರು. ಆದರೆ ಕೊನೆಗೆ ಅವರು ಆಯ್ಕೆ ಮಾಡಿದ್ದು ೮ ಜನ. ಅದರಲ್ಲಿ ನಾನು ಮೊದಲನೆಯವನು ಎಂದು ಹೋಟೆಲ್ ಸಭಾಂಗಣದಲ್ಲಿ ಎಲ್ಲರ ಮುಂದೆ ಧೃಡಪಡಿಸಿದರು ಜಾನಿ ಭಂಡಾರಿ. ಮತ್ತೊಮ್ಮೆ ಅದೇ ಪ್ರಶ್ನೆ, ನಾನೇ ಏಕೆ? ಜಾನಿ ಉತ್ತರಿಸಿದ್ದು “ನಿನ್ನಲ್ಲಿರುವ ಕೆಲಸದ ಬಗೆಗಿನ ಉತ್ಸಾಹ ಹಾಗೂ ಅದನ್ನು ಸಂದರ್ಶನದಲ್ಲಿ ಉದಾಹರಣೆಗಳೊಂದಿಗೆ ವಿವರಿಸಿದ ಬಗೆ ವಿಪ್ಪ್ಸ್ ಕ್ರಾಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ವೆಂಡಿ ಹಿಕ್ಕಿ ಅವರಿಗೆ ತುಂಬಾ ಹಿಡಿಸಿದೆ. ನೀನು ನಿನ್ನೆಲ್ಲ ಸಹೋದ್ಯೋಗಿಗಳಿಗೆ ಸಂದರ್ಶನದಲ್ಲಿ ಹೇಗೆ ಉತ್ತರಿಸಬೇಕು ಎನ್ನುವುದಕ್ಕೆ ಮಾದರಿ” ಎಂದು ಎಲ್ಲರೆದುರು ಹಂಚಿಕೊಂಡರು.

೩ನೇ ಜುಲೈ ೨೦೦೦ ದಂದು ನನ್ನ ಶುಶ್ರೂಷಕ ವೃತ್ತಿ ಬ್ರಿಟನ್ನಲ್ಲಿ ಆರಂಭಿಸಿತ್ತು. ಭಾರತೀಯ ಹಾಗೂ ಫಿಲಿಫೈನ್ಸ್ ದೇಶದ ಶುಶ್ರೂಷಕರು ಸಾಕಷ್ಟು ಸಂಖ್ಯೆಯಲ್ಲಿ ಬ್ರಿಟನ್ಗೆ ಆಗಮಿಸಿದರು. ಮುಂದಿನ ೧೨ ತಿಂಗಳಲ್ಲಿ ನನ್ನ ಜೊತೆಗೆ ಕಾರ್ಯ ನಿರ್ವಹಿಸುತ್ತಿದ್ದ ೭೦೦ ಶುಶ್ರೂಷಕರಲ್ಲಿ ೪೫೦ ಮಂದಿ ಮಣಿಪಾಲ ಆಸ್ಪತ್ರೆಯಿಂದ ಬ್ರಿಟನ್ಗೆ ಬಂದು ನೆಲೆಸಿದರು.  ಕಂಡರಿಯದ ನಾಡಿನಲ್ಲಿ, ಓದುವುದಕ್ಕಷ್ಟೇ ಸೀಮಿತವಾಗಿದ್ದ ಇಂಗ್ಲಿಷ್ ಭಾಷೆಯನ್ನು ಈಗ ಆಡು ಭಾಷೆಯಾಗಿ ಅರಗಿಸಿಕೊಳ್ಳಲು ಹರಸಾಹಸ ಪಡುವುದರ ಜೊತೆಗೆ, ಬ್ರಿಟನ್ನಿನ ಸಂಸ್ಕೃತಿ ಹಾಗೂ ಸಾಮಾಜಿಕ ಮೌಲ್ಯಗಳಿಗೆ ಹೊಂದಿಕೊಳ್ಳಲು ಸಹಾಯಿಸಿದ ನನ್ನ ಇಲ್ಲಿನ ಸಹೋದ್ಯೋಗಿಗಳಿಗೆ ಎಂದಿಂದಿಗೂ ಚಿರಋಣಿ. ಅದೇ ರೀತಿ, ನಮ್ಮ್ಮೆಲ್ಲರ ಅನುಭವಗಳನ್ನು ಆಧಾರವಾಗಿರಿಸಿಕೊಂಡು, ಇಲ್ಲಿನ ನ್ಯಾಷನಲ್ ಹೆಲ್ತ್ ಸರ್ವಿಸ್ನಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲು ಶ್ರಮಿಸಿದೆವು. ನಮ್ಮ  ತುರ್ತು ಚಿಕಿತ್ಸಾ ವಿಭಾಗದಲ್ಲಿ ರೋಗಿಗಳು ಚಿಕಿತ್ಸೆ ಪಡೆಯುವ ಸಮಯದಲ್ಲಿ  ಸುಧಾರಣೆ, ವಾರ್ಡ್ನಲ್ಲಿ ಶುಶ್ರೂಷಕರ ನಿರ್ವಹಣೆಯಲ್ಲಿ ಸ್ವಾಯತ್ತತೆ, ನುರಿತ ಶುಶ್ರೂಷಕರು ತಮ್ಮ ಪದವಿ ಹಾಗೂ ಅನುಭವದ ಆಧಾರದ ಮೇಲೆ ಸ್ಪೆಷಲಿಸ್ಟ್ ನರ್ಸಿಂಗ್ ಹಾಗೂ ನರ್ಸ್ ಪ್ರಾಕ್ಟಿಷನರ್ ವೃತ್ತಿಯಲ್ಲಿ ಅಳವಡಿಸಿಕೊಳ್ಳಲು ಬೇಕಾಗುವ ಅರ್ಹತೆಗಳು ಹಾಗೂ ಅನುಭವಗಳನ್ನು ನಾನು ಹಲವಾರು ಸಹೋದ್ಯೋಗಿಗಳೊಂದಿಗೆ ಸ್ಥಳೀಯವಾಗಿ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹಂಚಿಕೊಂಡಿದ್ದೇನೆ.

ಅರಸನ ಕೈ ಕುಲುಕಿಸಿದ ಸೆಗಣಿ ಬಾಚಿದ ಕೈಗಳು!

ಕರ್ತವ್ಯ ನಿಷ್ಠೆ ಹಾಗೂ ಸೇವಾ ಮನೋಭಾವನೆ ನನ್ನ ತಂದೆ ತಾಯಿಯಿಂದ  ಬಳುವಳಿಯಾಗಿ ಬಂದಿದೆ ಎಂಬುದು ನನ್ನ ಭಾವನೆ. ಆದ್ದರಿಂದ, ರಾಜರ ಅರಮನೆಯ ಆಮಂತ್ರಣ ನನಗೆ ಬಯಸದೆ ಬಂದ ಭಾಗ್ಯವಾದರೂ ಅದು ನನ್ನ ಗೌರವಯುತ ತಂದೆಗೆ ಅವರು ದಿವಂಗತರಾದ ನಂತರ ಅವರ ಪಾದಾರವಿಂದಗಳಿಗೆ ಅರ್ಪಿಸುವ ವಿಶೇಷ ಕೊಡುಗೆ. ಅಂದು ಅರಸರನ್ನು ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಎರಡು ಬಾರಿ ಭೇಟಿಯಾಗಿ ಅವರ ಹ್ಯಾಂಡ್ ಶೇಕ್ ಮಾಡಿದ  ಕ್ಷಣ ನೆನೆದೊಡನೆ ನನ್ನೀ ಸೆಗಣಿ ಬಾಚಿದ ಕೈಗಳು ಅರಸನ ಕೈ ಕುಲುಕಿಸುವ ಮಟ್ಟಕ್ಕೆ ಮುಟ್ಟಿದ್ದು ಈ ಜೀವನದಲ್ಲಿ ನನಗೆ ಸಂಪೂರ್ಣ ಸಾರ್ಥಕತೆಯನ್ನು ಕಲ್ಪಿಸಿದೆ. ಅರಸರಿಗೆ ಹುಟ್ಟು ಹಬ್ಬದ ಶುಭಾಷಯಗಳನ್ನು ಹಾರೈಸಿ,  ಅರಸರಿಂದ “ನಿಮ್ಮ ಸೇವೆಗೆ ನನ್ನ ನಮನ” ಎಂಬ ನುಡಿಮುತ್ತುಗಳು ಅವರ ಬಾಯಿಂದ ಹೊಮ್ಮಿದಾಗ, ನನಗೆ ಅನಿಸಿದ್ದು ಅದು ಬರೀ ನನ್ನ ಭಾವನೆಗಳಷ್ಟೇ ಅಲ್ಲ ಅದು ಪ್ರತಿಯೊಬ್ಬ ಭಾರತೀಯ ಮೂಲದ ಶುಶ್ರೂಷಕರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಲ್ಲಿಸುವ ಸೇವೆಯ ಹೆಗ್ಗಳಿಕೆ ಹಾಗೂ ಹಿರಿಮೆ.

ರಾಜರ ಭೇಟಿ, ನನ್ನ ಬದುಕಿನಲ್ಲಿ “ಸಾರ್ಥಕತೆಯ ಕಾರ್ತಿಕೋತ್ಸವದಷ್ಟೇ” ಸಂತಸ ತಂದಿದೆ. ನನ್ನೀ ಯಶಸ್ಸಿನ ಕೀರ್ತಿಯನ್ನು ಈ ಜಗತ್ತಿಗೆ ಪರಿಚಯಿಸಿದ ನನ್ನ ತಂದೆತಾಯಿಯರಿಗೆ ಅರ್ಪಿಸುತ್ತ ನನ್ನ ಪೂಜ್ಯ ತಂದೆ ಸಫಾರಿ ಸಿದ್ದರಾಮಪ್ಪನವರಿಗೆ ಮತ್ತೊಮ್ಮೆ ನನ್ನ ನುಡಿನಮನಗಳೊಂದಿಗೆ….

ತಿಪ್ಪೇಸ್ವಾಮಿ ಬಿಲ್ಲಹಳ್ಳಿ ಸಿದ್ದರಾಮಪ್ಪ

ಮೂರನೆಯ ಸಾಲಿನಲ್ಲಿ ಲೇಖಕರು!

ಲಿಂಕ್ ಗಳು

ಬಕಿಂಗ್ ಹ್ಯಾಮ್ ಪ್ಯಾಲೇಸ್ ಅರಸರ ಭೇಟಿಯ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟಿತಗೊಂಡ ಕೆಲವು ಲಿಂಕ್ ಈ ಕೆಳಗಿವೆ:

King’s birthday coverage: 

https://intranet.homerton.nhs.uk/news/allergy-lead-nurse-thippeswamy-represents-global-nursing-to-the-king-8514

ಲಂಡನ್ನಿನಲ್ಲಿ ಕನ್ನಡ ಡಿಂಡಿಮ – ಕನ್ನಡ ಬಳಗ ಯು ಕೆ-40 ರ ಸಂಭ್ರಮದ ಝಲಕ್ ಗಳು!

ಮಹಾರಾಜರು ತಮ್ಮ ಸಂದೇಶದಲ್ಲಿ ೧೯೩೯ರಲ್ಲಿ ಅಂದಿನ ಯುವರಾಜರು ಲಂಡನ್ನಿನಲ್ಲಿ ದಸರಾ ಹಬ್ಬವನ್ನು ಆಚರಿಸಿ ಕನ್ನಡದಲ್ಲಿ ಮಾಡಿದ ಭಾಷಣವನ್ನು ನೆನೆದರು. ಕರ್ನಾಟಕದ ವೈಭವ, ಶ್ರೀಮಂತ ಸಂಸ್ಕೃತಿ, ಲೋಕಕ್ಕೆ ಎಂದೆಂದಿಗೂ ಮಾದರಿಯಾದ ಬಸವ ತತ್ವ, ಸೈದ್ಧಾಂತಿಕ, ವೇದಾಂತಿಕ, ವೈಜ್ಞಾನಿಕ ಹಾಗೂ ಶೈಕ್ಷಣಿಕ ಕೊಡುಗೆಗಳನ್ನು ಸ್ಮರಿಸಿದರು. ಕನ್ನಡಿಗರು ಈ ಕೊಡುಗೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು, ಇವುಗಳಿಂದ ಪ್ರೇರೇಪಿತರಾಗಿ ಬಾಳಿನ ಎಲ್ಲ ದಿಶೆಗಳಲ್ಲಿ ಹೆಚ್ಚಿನ ಯಶಸ್ವಿಯನ್ನು ಪಡೆದು ಪ್ರಭಾವಶಾಲಿಗಳಾಗಬೇಕೆಂದು ಕರೆ ಕೊಟ್ಟರು. ತದನಂತರ ನಾಡಿನ ಪ್ರಮುಖ ಸಾಹಿತಿಗಳು, ಯು.ಕೆ. ಕನ್ನಡಿಗರು ಬರೆದ ಲೇಖನ, ಕವನಗಳ ಸ್ಮರಣ ಸಂಚಿಕೆ “ಸಂಭ್ರಮ”ವನ್ನು ಬಿಡುಗಡೆ ಮಾಡಿದರು.

ಸಂಭ್ರಮ: ಕನ್ನಡ ಬಳಗ (ಯು.ಕೆ) ಗೆ  ಮಾಣಿಕ್ಯ ಹುಟ್ಟಿದ ಹಬ್ಬ  
ಲೇಖಕರು: ರಾಮಶರಣ ಲಕ್ಷ್ಮೀನಾರಾಯಣ 

ಯುನೈಟೆಡ್ ಕಿಂಗ್ಡಮ್ ನ ಮೊದಲ ಕನ್ನಡ ಸಂಘ ಕನ್ನಡ ಬಳಗ (ಯು.ಕೆ). ೪೦ ವರ್ಷಗಳ ಹಿಂದೆ ಐವರು ದಂಪತಿಗಳು ದೀಪಾವಳಿಯ ಶುಭದಿನದಂದು ಕನ್ನಡ ಸಂಘವೊಂದರ ದೀಪ ಬೆಳೆಗಿದರು. ಅದು ಇಂದಿಗೂ ಯು.ಕೆಯಲ್ಲಿ ನೆಲೆಸಿರುವ ಕನ್ನಡಿಗರ ಮನೆ-ಮನಗಳಲ್ಲಿ ಬೆಳಗುತ್ತಿದೆ. ಈ ವಾರಾಂತ್ಯ (ಸಪ್ಟೆಂಬರ್ ೩೦, ಅಕ್ಟೋಬರ್ ೧) ಕನ್ನಡ ಬಳಗ ತನ್ನ ಹುಟ್ಟುಹಬ್ಬ “ಸಂಭ್ರಮ”ವನ್ನು ವಿಜೃಂಭಣೆಯಿಂದ ಲಂಡನ್ ನಗರದಲ್ಲಿ ಸಂಸ್ಥಾಪಕ ಹಿರಿ ಜೀವಿಗಳೊಂದಿಗೆ, ನಾಡಿನ ಹಲವು ಮೂಲೆಗಳಿಂದ ಬಂದ ಎಲ್ಲ ವಯಸ್ಸಿನ ಕನ್ನಡಿಗರೊಂದಿಗೆ ಆಚರಿಸಿದ್ದು  ತನ್ನ ‘ಹಳೆ ಬೇರು, ಹೊಸ ಚಿಗುರು’ ಧ್ಯೇಯ ವಾಕ್ಯಕ್ಕೆ ತಕ್ಕುದಾಗಿತ್ತು. ಈ ಕಾರ್ಯಕ್ರಮವನ್ನು ಯಶಸ್ಸಿಗೆ ಕಾರಣೀಕರ್ತರು, ಕನ್ನಡ ಬಳಗದ ಅಧ್ಯಕ್ಷೆ ಸುಮನಾ ಗಿರೀಶ್, ಉಪಾಧ್ಯಕ್ಷೆ ಸ್ನೇಹಾ ಕುಲಕರ್ಣಿ, ಕಾರ್ಯದರ್ಶಿ ಮಧುಸೂಧನ್, ಖಜಾಂಚಿ ರಶ್ಮಿ ಮಂಜುನಾಥ್, ಸಾಂಸ್ಕೃತಿಕ ಕಾರ್ಯದರ್ಶಿ ವ್ರತ ಚಿಗಟೇರಿ, ಯುವ ಕಾರ್ಯದರ್ಶಿ ವಿದ್ಯಾರಾಣಿ, ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾದ ಚಂದ್ರಪ್ಪ, ಆಶೀರ್ವಾದ ಮರ್ವೇ, ರಾಜೀವ ಮೇತ್ರಿ ಹಾಗೂ ಪ್ರವೀಣ್ ತ್ಯಾರಪ್ಪ. ಅಧ್ಯಕ್ಷೆ ಸುಮನಾ ಗಿರೀಶ್, ಗಣ್ಯ ಅತಿಥಿಗಳಾದ ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರೊಫೆಸರ್ ಗುರುರಾಜ ಕರ್ಜಗಿ, ಪತ್ರಕರ್ತರಾದ ಶ್ರೀಯುತ ವಿಶ್ವೇಶ್ವರ ಭಟ್, ರವಿ ಹೆಗಡೆ ಹಾಗೂ ಸ್ವಾಮಿ ಜಪಾನಂದಜಿ ಹಾಗೂ ನೆರೆದ 1500 (ಎರಡು ದಿನಗಳಲ್ಲಿ ಸೇರಿ) ಕನ್ನಡಿಗರನ್ನು ಹಾರ್ದಿಕವಾಗಿ ಸ್ವಾಗತಿಸಿದರು.  ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಅಮೃತ ಹಸ್ತದಿಂದ “ಸಂಭ್ರಮ” ಕಾರ್ಯಕ್ರಮವನ್ನು ಬೈರನ್ ಸಭಾಂಗಣದಲ್ಲಿ ಪ್ರಾರಂಭ ಮಾಡಿದರು. 

ಸಾಂಪ್ರದಾಯಿಕ ಭರತನಾಟ್ಯ, ಕೂಚಿಪುಡಿ ನೃತ್ಯಗಳಿಂದ ಯು.ಕೆ ಕನ್ನಡಿಗರ ಕಲಾಪ್ರದರ್ಶನ ಪ್ರಾರಂಭವಾಯಿತು. ‘ಬಾರಿಸು ಕನ್ನಡ ಡಿಂಡಿಮವ’ ಎಂಬ ವಿಶಿಷ್ಟ ನೃತ್ಯ ರೂಪಕ, ದರ್ಶಕರಿಗೆ ಶತಮಾನಗಳ ಕರ್ನಾಟಕದ ಇತಿಹಾಸ, ಕಲೆ, ಸಂಸ್ಕೃತಿಗಳನ್ನು ಮನಮೋಹಕವಾಗಿ ಬಣ್ಣಿಸಿತು. ಕನ್ನಡ ಬಳಗ ಚಿಣ್ಣರಲ್ಲಿ ಕನ್ನಡವನ್ನು ಕಲಿಸಿ, ಬೆಳೆಸುವ ಶ್ಲಾಘನೀಯ ಕೆಲಸವನ್ನು ‘ಕನ್ನಡ ಕಲಿ’ ಕಾರ್ಯಕ್ರಮದ ಮೂಲಕ ಮಾಡುತ್ತಲೇ ಬಂದಿದೆ. ಈ ಮಕ್ಕಳು ಕಿರು ನಾಟಕ, ಹಾಡುಗಳ ಮೂಲಕ ತಮ್ಮ ಪ್ರತಿಭೆಯ ಪ್ರದರ್ಶನ ಮಾಡಿದರು. ಪ್ರೊಫೆಸರ್ ಗುರುರಾಜ ಕರ್ಜಗಿಯವರು ಮಾನವನಿಗೆ ನಂಬಿಕೆ ಎಷ್ಟು ಮುಖ್ಯ, ಏಕೆ ಬೇಕು ಎಂಬ ಮನಮುಟ್ಟುವ ವಿವರಣೆಯಿಂದ , ಸಭಿಕರನ್ನು ಮಂತ್ರ ಮುಗ್ಧರನ್ನಾಗಿಸಿದರು. ಈ ವಿದ್ವತ್ಪೂರ್ಣ ಭಾಷಣದ ನಂತರ ಖ್ಯಾತ ಗಾಯಕ ಶ್ರೀ ರಾಜೇಶ್ ಕೃಷ್ಣನ್ ತಮ್ಮ ಸುಮಧುರ ಗಾಯನದಿಂದ ನೆರೆದವರ ಮನತಣಿಸಿ, ಸಭಿಕರೊಡನೆ ಹೆಜ್ಜೆ ಹಾಕಿ ಕುಣಿಸಿದರು.(ಇದರ ಬಗ್ಗೆ ರಮ್ಯ ಭಾದ್ರಿ ಬರೆದ ವಿಸ್ತೃತ ಲೇಖನ ಕೆಳಗೆ ಕೊಟ್ಟಿದೆ.)

ಎರಡನೇ ದಿನದ ಮನರಂಜನಾ ಕಾರ್ಯಕ್ರಮದಲ್ಲಿ ಯಾರ್ಕ್ ಶೈರ್ ಕನ್ನಡ ಬಳಗದ ಗಾಯಕ ವೃಂದ ಪ್ರಸ್ತುತ ಪಡಿಸಿದ ಚಿರನೂತನ ‘ನಿತ್ಯೋತ್ಸವ’, ನಾಡ ಭಕ್ತಿ ಉಕ್ಕಿಸುವ ‘ಅಪಾರ ಕೀರ್ತಿ’ ಚಿತ್ರಗೀತೆಗಳು ಸಭಿಕರನ್ನು ಕನ್ನಡತೆಯ ಭಾವನೆಯಲ್ಲಿ ತೇಲಿಸಿದವು. ಗುರುಪ್ರಸಾದ್ ಪಟ್ವಾಲ್ ಇಲ್ಲಿಯೇ ತರಬೇತಿ ಕೊಟ್ಟು ಬೆಳೆಸಿದ ತಂಡ ಪ್ರದರ್ಶಿಸಿದ ‘ಪಂಚವಟಿ’ ಯಕ್ಷಗಾನ ಕಿರು ಪ್ರಸಂಗ ಕನ್ನಡದ ಜಾನಪದ ಕಲೆಯ ವೈವಿಧ್ಯತೆಯ ಪ್ರದರ್ಶನದೊಂದಿಗೆ, ಯು.ಕೆ ಯಲ್ಲಿ ಈ ಪ್ರಕಾರವನ್ನು ಬೆಳೆಸಿ, ಪ್ರಚಲಿತಗೊಳಿಸುವ ಸಾಹಸದ ದ್ಯೋತಕವಾಗಿತ್ತು. ಕನ್ನಡ ಪ್ರಭದ ಪ್ರಧಾನ ಸಂಪಾದಕರಾದ ಶ್ರೀ ರವಿ ಹೆಗಡೆಯವರು, ಕನ್ನಡ ಬಳಗದ ಕಾರ್ಯವನ್ನು ಶ್ಲಾಘಿಸುತ್ತ, ಬಳಗ ನೂರ್ಕಾಲ ಬಾಳಲಿ, ಕನ್ನಡದ ಬಾವುಟವನ್ನು ವಿದೇಶಿ ನೆಲದಲ್ಲಿ ಹಾರಿಸಲಿ, ಸಾಂಕೇತಿಕವಾಗಿ ಕನ್ನಡದ ಸೀಮೆಯನ್ನು ಕರ್ನಾಟಕದಿಂದಾಚೆ ವಿಸ್ತರಿಸುತ್ತಿರಲಿ ಎಂದು ಆಶಿಸಿದರು. ವಿಶ್ವವಾಣಿಯ ಪ್ರವರ್ತಕರೂ, ಪ್ರಧಾನ ಸಂಪಾದಕರೂ ಆದ ಶ್ರೀ ವಿಶೇಶ್ವರ ಭಟ್ಟರು, ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಅನಿವಾಸಿ ಕನ್ನಡಿಗ ಸಂಘಗಳ ಮಹತ್ವ, ಇತರ ಭಾಷಿಕರಿಂದ ನಾವು ಮಾತೃ ಭಾಷೆಯ ಉಳಿವಿಗೆ, ಪ್ರಸಾರಕ್ಕೆ ಕಲಿಯಬೇಕಾದ ವಿಷಯಗಳನ್ನು ಸುಂದರವಾಗಿ ವಿವರಿಸಿದರು. ಅನ್ಯ ದೇಶಗಳಲ್ಲಿರುವ ಕನ್ನಡ ಸಂಘಗಳ ಅನುಭವಗಳನ್ನು ಹೀರಿ ಕನ್ನಡ ಬಳಗ ಹೇಗೆ ಅಭಿವೃದ್ಧಿಯಾಗಬಹುದು ಎಂದು ವಿಸ್ತರಿಸಿದರು. ಸ್ವಾಮಿ ಜಪಾನಂದಜಿಯವರು ಕನ್ನಡ ಭಾಷೆ ನಶಿಸಬಾರದು, ಬಳಗ ಮಾಡುತ್ತಿರುವ ಕಾರ್ಯ ಈ ದಿಶೆಯಲ್ಲಿ ಮಹತ್ತರವಾಗಿದೆ; ಈ ಕಾರ್ಯಕ್ಕೆ ಕನ್ನಡಿಗರೆಲ್ಲರೂ ನೂರಾನೆಯ ಬಲ ಸೇರಿಸಿ ಎಂದು ನೆರೆದವರಲ್ಲಿ ಉತ್ಸಾಹ ತುಂಬಿದರು.(ಕೆಳಗೆ ಕೊಟ್ಟ ಶ್ರೀಮತಿ ಶ್ರೀರಂಜಿನಿ ಸಿಂಹ ಅವರ ಲೇಖನದಲ್ಲಿ ಇನ್ನಷ್ಟು ವಿವರಗಳಿವೆ.)  

ಕನ್ನಡ ಬಳಗ ವಿಶೇಷವಾಗಿ ಕನ್ನಡ ಸಾಹಿತ್ಯವನ್ನು ಬೆಂಬಲಿಸುತ್ತ ಬಂದಿದೆ. ಕನ್ನಡ ಬಳಗದ ಸಾಹಿತ್ಯಾಸಕ್ತ ಸದಸ್ಯರು ಹುಟ್ಟುಹಾಕಿದ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಚಾರ ವೇದಿಕೆ ತನ್ನ ಅನಿವಾಸಿ (anivaasi.com) ಜಾಲತಾಣದಲ್ಲಿ ವಾರಕ್ಕೊಮ್ಮೆ ಲೇಖನ, ಕಥೆ, ಕವನ, ಪ್ರಬಂಧಗಳನ್ನು ಪ್ರಕಟಿಸುತ್ತಿದೆ. ಹಾಗೆಯೇ, ಕನ್ನಡ ಬಳಗದ ಕಾರ್ಯಕ್ರಮಗಳಿಗೆ ಬರುವ ಸಾಹಿತ್ಯಾಸಕ್ತರನ್ನು ಒತ್ತಟ್ಟಿಗೆ ತಂದು ಸಮಾನಾಂತರ ಸಭೆಗಳನ್ನು ಕಳೆದ ಒಂದು ದಶಕದಿಂದ ನಡೆಸುತ್ತಿದೆ. ಈ ಬಾರಿ ಕನ್ನಡದ ಮೂರು ಪ್ರಮುಖ ಆಹ್ವಾನಿತರು ಅನಿವಾಸಿ ಸಭೆಯಲ್ಲಿ ಸಕ್ರಿಯವಾಗಿ ಪಾಲುಗೊಂಡರು. ಶಿಕ್ಷಣ ನೀತಿ, ಮಾಧ್ಯಮಗಳ ಪ್ರಬಲತೆ-ಪ್ರಭಾವ ಎಂಬ ಎರಡು ವಿಷಯಗಳು ಅತಿಥಿಗಳಾದ ಪ್ರೊಫೆಸರ್ ಕರ್ಜಗಿ, ಶ್ರೀಯುತ ರವಿ ಹೆಗಡೆ ಹಾಗೂ ವಿಶ್ವೇಶ್ವರ ಭಟ್ಟರ ಸಮ್ಮುಖದಲ್ಲಿ ಚರ್ಚಿಸಲ್ಪಟ್ಟವು. ಸದಸ್ಯರ ಚರ್ಚೆಯ ನಂತರ ಅತಿಥಿಗಳು ತಮ್ಮ ಅಭಿಪ್ರಾಯಗಳನ್ನು ಸಭಿಕರಿಗೆ ಸುದೀರ್ಘವಾಗಿ ತಿಳಿಸಿದ್ದಲ್ಲದೆ, ಆಧುನಿಕ ತಂತ್ರಜ್ಞಾನ ಕಲಿಕೆ, ಮಾಧ್ಯಮ ಹಾಗು ಭಾಷೆಯ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂದು ವಿಶ್ಲೇಷಿಸಿದರು. ಸಭಿಕರೊಡನೆ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಮೇಲಿನ ಪ್ರಶ್ಳಿಗಳಿಗೆ ಪಾಂಡಿತ್ಯಪೂರ್ಣ ಉತ್ತರಗಳನ್ನು ನೀಡಿ, ಸಭಿಕರೊಡನೆ ಬೆರೆತು ಸಂಭಾಷಿಸಿದರು. (ಇದರ ಪ್ರತ್ಯೇಕ ವರದಿಯನ್ನು ಕಳೆದ ವಾರದ ’ಅನಿವಾಸಿ’ ಸಂಚಿಕೆಯಲ್ಲಿ ನೋಡಿರಿ)  https://anivaasi.com/2023/10/06/%e0%b2%85%e0%b2%a8%e0%b2%bf%e0%b2%b5%e0%b2%be%e0%b2%b8%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%95%e0%b2%b9%e0%b2%b3/

ಕನ್ನಡ ಬಳಗ ದತ್ತಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಯು.ಕೆ ಹಾಗೂ ಕರ್ನಾಟಕದಲ್ಲಿ ಹಲವಾರು ಸಂಘ-ಸಂಸ್ಥೆಗಳೊಡನೆ ಜೊತೆಯಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಲೇ ಬಂದಿದೆ. ಈ ಉದಾತ್ತ ಕಾರ್ಯ,  ಕಾರ್ಯಕ್ರಮದುದ್ದಕ್ಕೂ ಹಲವು ಮಾಧ್ಯಮಗಳಲ್ಲಿ ಬಿತ್ತರವಾಯಿತು. ಎರಡು ದಿನಗಳ ರಂಜಿತ ಕಾರ್ಯಕ್ರಮ ಎಲ್ಲ ವಯೋಧರ್ಮಗಳಿಗೆ ಪೂರಕವಾಗಿದ್ದಲ್ಲದೆ, ಕಲೆತ ಕನ್ನಡಿಗರಲ್ಲಿ ಹೊಸ ಹುಮ್ಮಸ್ಸನ್ನು ತುಂಬಿದ್ದಲ್ಲಿ ಸಂದೇಹವಿಲ್ಲ.  
ಮಹಾರಾಜರಿಗೆ ಸನ್ಮಾನ
ಬಾರಿಸು ಕನ್ನಡ ದಿಂಡಿಮವ’ ನೃತ್ಯ ನಾಟಕದ ಒಂದು ದೃಶ್ಯ

1. 2.ಸುಮಧುರ ಸಂಜೆ ರಾಜೇಶ್ ಕೃಷ್ಣನ್ ನೊಂದಿಗೆ …

ಮಾಣಿಕ್ಯ ಸಂಭ್ರಮ ಗೀತೆ (RTP) 
– ಯೂ ಟ್ಯೂಬ್ ರೆಕಾರ್ಡಿಂಗ್ ಕೃಪೆ: ಆಂಚಲ್ ಅರುಣ್
Photoes: Kannada Balaga UK (except where credited)