ಕನ್ನಡ ಸಾಹಿತ್ಯಕ್ಕೆ ಶರಣರ ದಾಸರ ಮತ್ತು ಸಂತರ ಕೊಡುಗೆ ಭಾಗ 1

ಡಾ ಜಿ ಎಸ್ ಶಿವಪ್ರಸಾದ್ (ಫೋಟೋ ಕೃಪೆ ಗೂಗಲ್)

ಕೆಲವು ದಿನಗಳ ಹಿಂದೆ ಯು.ಕೆ ಕನ್ನಡ ಬಳಗದ  ಯುಗಾದಿ ಹಬ್ಬದ ಸಂಭ್ರಮದಲ್ಲಿ ಅನಿವಾಸಿ ಸಾಹಿತ್ಯಗೋಷ್ಠಿಯನ್ನು    ಏರ್ಪಡಿಸಲಾಗಿತ್ತು. ಈ ಸಾಹಿತ್ಯ ಗೋಷ್ಠಿಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಶರಣರ, ದಾಸರ ಮತ್ತು ಸಂತರ ಕೊಡುಗೆ’ಯನ್ನು ಕುರಿತು ಅನಿವಾಸಿ ಸದಸ್ಯರು ತಮ್ಮ ಚರ್ಚೆಯನ್ನು ಮಂಡಿಸಿದರು. ಈ ಗೋಷ್ಠಿಯಲ್ಲಿ ಶರಣರ  
ಕೊಡುಗೆಯ ಬಗ್ಗೆ ನಾನು ಮಾತನಾಡಿದೆ, ಶರಣೆಯರ ಬಗ್ಗೆ ದಾಕ್ಷಾಯಿಣಿ ಗೌಡ, ದಾಸ ಸಾಹಿತ್ಯದ ಬಗ್ಗೆ ಲಕ್ಷ್ಮೀ ನಾರಾಯಣ ಗುಡೂರ್, ಕೊನೆಯದಾಗಿ ಸಂತ ಶಿಶುನಾಳ ಶರೀಫರ ಬಗ್ಗೆ ಶ್ರೀವತ್ಸ ದೇಸಾಯಿ ಅವರು ಮಾತನಾಡಿದರು. ಚರ್ಚೆಗಳ ಮಧ್ಯೆ ದಾಸರ ಮತ್ತು ಶರಣರ ಗೀತೆಗಳನ್ನು ಗಾಯಕಿಯರಾದ ರಶ್ಮಿ ಮಂಜುನಾಥ್ ಮತ್ತು ಅನ್ನಪೂರ್ಣ ಆನಂದ್ ಪ್ರಸ್ತುತಪಡಿಸಿದರು. ಸದಸ್ಯರು ಮಂಡಿಸಿದ ಈ ಚರ್ಚೆಗಳನ್ನು ಅನಿವಾಸಿ ತಾಣದಲ್ಲಿ ನಾಲ್ಕು ಹಂತಗಳಲ್ಲಿ ಪ್ರಕಟಿಸುವುದೆಂದು ಗೋಷ್ಠಿಯಲ್ಲಿ ಸಮ್ಮತಿಸಲಾಯಿತು. ಈ ನಾಲ್ಕು ವಿಷಯಗಳಿಗೆ ಪೂರಕವಾದ ಹಿನ್ನೆಲೆಯನ್ನು ಒದಗಿಸಿ ನಾನು ಮಂಡಿಸಿರುವ "ಶರಣ ಸಾಹಿತ್ಯದ ಒಟ್ಟಾರೆ ಆಶಯಗಳು, ಸಾಮಾಜಿಕ ನಿಲುವುಗಳು ಮತ್ತು ಮೌಲ್ಯಗಳು" ಎಂಬ ಬರಹವನ್ನು ಈ ವಾರದ ಅನಿವಾಸಿ ಸಂಚಿಕೆಯಲ್ಲಿ ನಿಮಗೆ ತಲುಪಿಸುತ್ತಿದ್ದೇನೆ.

ಕನ್ನಡ ಸಾಹಿತ್ಯಕ್ಕೆ ಶರಣರ ದಾಸರ ಮತ್ತು ಸಂತರ ಕೊಡುಗೆ - ಕೆಲವು ಹಿನ್ನೆಲೆ ವಿಚಾರಗಳು;
ಕನ್ನಡ ಸಾಹಿತ್ಯಕ್ಕೆ 1500 ವರ್ಷಗಳ ಇತಿಹಾಸವಿದೆ. ಇಲ್ಲಿ ಹಳೆಗನ್ನಡ (400 – 1100CE), ನಡುಗನ್ನಡ (1100 -1700 CE) ಮತ್ತು ಹೊಸಗನ್ನಡ (1700 - ಇಲ್ಲಿಯವರೆಗೆ) ಎಂಬ ಮೂರು ಕಾಲಘಟ್ಟಗಳನ್ನು ಗುರುತಿಸಬಹುದು. ಹಳೆಗನ್ನಡ ಕಾಲಘಟ್ಟದಲ್ಲಿ ಜೈನರು ಪ್ರಧಾನವಾಗಿ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡಿದರು. ಇವರಲ್ಲಿ ಪಂಪ, ರನ್ನ ಮತ್ತು ಪೊನ್ನ ಮುಖ್ಯವಾದ ಕವಿಗಳು. ಅವರು ಜೈನ ತೀರ್ಥಂಕರರನ್ನು ಕುರಿತಾಗಿ ಅಷ್ಟೇ ಅಲ್ಲದೆ ಮಹಾಭಾರತದ ವಿಷಯವನ್ನು ಆಯ್ಕೆಮಾಡಿ ಮಹಾ ಕಾವ್ಯವನ್ನು ರಚಿಸದರು. ಇನ್ನು 12ನೇ ಶತಮಾನದಲ್ಲಿ ಶರಣರು ಅಂದರೆ ಬಸವಣ್ಣನವರ ಅನುಯಾಯಿಗಳಾದ ವೀರಶೈವ ಮತ್ತು ಹೊಸದಾಗಿ ಹುಟ್ಟಿಕೊಂಡ ಲಿಂಗಾಯಿತ ಎಂಬ ಮತದವರು ವಚನಗಳನ್ನು ರಚಿಸಿದರು. ಈ ವಚನಗಳು ಸಾಮಾಜಿಕ ಕ್ರಾಂತಿಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಸಾಹಿತ್ಯ ಎನ್ನಬಹುದು. ಇನ್ನು 15ನೇ ಶತಮಾನದಲ್ಲಿ ವೈಷ್ಣವರು (ಹರಿದಾಸರು ಎಂದು ಕೂಡ ಗುರುತಿಸ ಬಲ್ಲವರು) ಪ್ರಧಾನವಾಗಿ ಭಕ್ತಿರಸವನ್ನು ಮತ್ತು ಕೆಲವು ಸಾಮಾಜಿಕ ಹಿತೋಪದೇಶಗಳನ್ನು ಒಳಗೊಂಡ ಕೀರ್ತನೆಗಳನ್ನು ರಚಿಸಿದರು. ಇವು ಮುಖ್ಯವಾಗಿ ಮಧ್ವಾಚಾರ್ಯರ ದ್ವೈತ ಅಧ್ಯಾತ್ಮ ಪರಿಕಲ್ಪನೆಯನ್ನು ಆಧರಿಸಿರುವ ಕೀರ್ತನೆಗಳು ಎಂದು ಗುರುತಿಸಬಹುದು. ಇದು ಹುಟ್ಟಿಕೊಂಡದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್ನ ಬಹುದು. ಶರಣ ಮತ್ತು ದಾಸ ಸಾಹಿತ್ಯಕ್ಕೆ ಪರ್ಯಾಯವಾಗಿ, ಸಮಾಜದ ಅನಕ್ಷರಸ್ತ ರೈತಾಪಿ ಮತ್ತು ಜನ ಸಾಮಾನ್ಯರು ನಡುವೆ ಕರ್ನಾಟಕ ಪ್ರಾದೇಶಿಕ ನೆಲೆಗಳಲ್ಲಿ ಹುಟ್ಟಿಕೊಂಡ ಮತ್ತು ಜಾನಪದ ಸಂಪ್ರದಾಯವನ್ನು ಹೋಲುವ ಸಾಹಿತ್ಯವನ್ನು ತತ್ವ ಪದಗಳು ಎಂದು ಗುರುತಿಸಬಹುದು. ಇದರಲ್ಲಿ ಭಕ್ತಿ ಮತ್ತು ಸಾಮಾಜಿಕ ವಿಷಯಗಳನ್ನು ಆಧರಿಸಿದ ಕೃತಿಗಳಿವೆ. ಶಿಶುನಾಳ ಶರೀಫರ ತತ್ವ ಪದಗಳನ್ನು ಈ ಗುಂಪಿಗೆ ಸೇರಿಸಬಹುದು. ಶಿಶುನಾಳ ಶರೀಫರು 19ನೇ ಶತಮಾನದಲ್ಲಿ ಬಾಳಿದವರು. ಶರಣ ದಾಸರ ಸಂತರ ಕೊಡುಗೆ ಅಪಾರವಾದದ್ದು, ಅವರು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಎದ್ದು ನಿಲ್ಲುವ ಬರಹಗಾರರು. ದೇವರು, ಧರ್ಮ ಎಂಬ ವಿಷಯಗಳಲ್ಲದೆ ಸಾಮಾಜಿಕ ಬದುಕಿಗೆ ಬೇಕಾದ ಮಾನವೀಯ ಮೌಲ್ಯಗಳನ್ನು ಸದ್ಭಾವನೆಗಳನ್ನು ಎತ್ತಿಹಿಡಿದಿದ್ದಾರೆ. ಅವರ ಬರಹಗಳಲ್ಲಿ ಸಾಹಿತ್ಯಿಕ ಮೌಲ್ಯಗಳು ಇವೆ. ಆದುದರಿಂದಲೇ ಅವು ಕಾಲಾತೀತವಾದ ಉತ್ತಮ ಸಾಹಿತ್ಯಗಳಾಗಿವೆ.

- ಸಂ


*

“ಶರಣ ಸಾಹಿತ್ಯದ ಒಟ್ಟಾರೆ ಆಶಯಗಳುಸಾಮಾಜಿಕ ನಿಲುವುಗಳು ಮತ್ತು ಮೌಲ್ಯಗಳು

ಡಾ ಜಿ ಎಸ್ ಶಿವಪ್ರಸಾದ್

ಶರಣ ಸಾಹಿತ್ಯದ ಮುಖ್ಯಾಂಶಗಳು ಎಂದರೆ: ಎಲ್ಲರನ್ನು ಒಳಗೊಳ್ಳುವಿಕೆ, ವೈಚಾರಿಕ ಪ್ರಜ್ಞೆ, ಸಂಪ್ರದಾಯವನ್ನು ಪ್ರಶ್ನಿಸುವ, ಧಿಕ್ಕರಿಸುವ ದಿಟ್ಟ ನಿಲುವು, ಧರ್ಮದ ನಿರಪೇಕ್ಷೆ, ದೇವಸ್ಥಾನದ ನಿರಾಕರಣೆ, ಜಾತಿ ವ್ಯವಸ್ಥೆಯ ನಿರಾಕರಣೆ, ಮೂಢ ನಂಬಿಕೆಗಳ ನಿರಾಕರಣೆ, ಸಮಾಜ ಮತ್ತು ಸಂಸಾರ ಮುಖಿಯಾಗಿರುವ ಚಿಂತನೆಗಳು, ಸ್ತ್ರೀ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ಪ್ರಜಾ ಪ್ರಭುತ್ವದ ಪರಿಕಲ್ಪನೆ, ಮಾನವೀಯ ಮೌಲ್ಯಗಳಾದ ದಯೆ, ಅನುಕಂಪೆ, ವಚನ ನಿಷ್ಠೆ, ದಾಸೋಹ, ಕಾಯಕವೇ ಕೈಲಾಸ ಎಂಬ ಧ್ಯೇಯಗಳ ಬೋಧನೆ ಮತ್ತು ಆಚರಣೆ. ಇವೆಲ್ಲವನ್ನೂ ಒಟ್ಟಾರೆ ನೋಡಿದಾಗ ಬಹಳ ಉದಾರವಾದ ನೀತಿ ಎಂದು ಗುರುತಿಸಬಹುದು. 20ನೇ ಶತಮಾನದ ಯುರೋಪಿನಲ್ಲಿ ಹಲವಾರು ಪ್ರೌಢ ಚಿಂತಕರು ಧೀರ್ಘ ಕಾಲ ಚರ್ಚೆ ಮಾಡಿ ಹುಟ್ಟುಹಾಕಿದ ಉದಾರನೀತಿಗೆ (Liberalism) ಹತ್ತಿರವಾದದ್ದು ಎನ್ನಬಹುದು. ಇವರಿಗಿಂತ ೮೦೦ ವರ್ಷಗಳ ಹಿಂದೆಯೇ ಶರಣರು ಪ್ರಗತಿ ಪರರಾಗಿದ್ದರು ಮತ್ತು ಉದಾರನೀತಿಯ ಬಗ್ಗೆ ಆಗಿನ ಶರಣರು ಆಲೋಚಿಸಿದ್ದರು ಅನ್ನುವ ವಿಚಾರ ಅಚ್ಚರಿಯನ್ನು ಉಂಟುಮಾಡುತ್ತದೆ.

12ನೇ ಶತಮಾನದಲ್ಲಿ ಶರಣರು ಜಡ್ಡು ಹಿಡಿದಿದ್ದ ಸಮಾಜಕ್ಕೆ ಒಂದು ಹೊಸ ಬದಲಾವಣೆಯನ್ನು ತಂದುಕೊಟ್ಟು ಸಾಮಾಜಿಕ ಕ್ರಾಂತಿಯನ್ನು ಉಂಟುಮಾಡಿದರು. ಮುಂದಕ್ಕೆ ಹಿಂದೂ ಧರ್ಮದಲ್ಲಿ /ಸಮಾಜದಲ್ಲಿ/ಸಂಸ್ಕೃತಿಯಲ್ಲಿ ಆಚರಣೆಯೊಳಗಿದ್ದ ಸತಿ ಪದ್ಧತಿ, ಬಾಲ್ಯ ವಿವಾಹ, ವಿಧವೆ ಮರು ವಿವಾಹ, ಜಾತೀಯತೆ ಮತ್ತು ಅಸ್ಪೃಶ್ಯತೆಯ ನಿವಾರಣೆ, ಸ್ತ್ರೀ ಶಿಕ್ಷಣ ಮುಂತಾದ ಸಾಮಾಜಿಕ ಪರಿವರ್ತನೆಗಳನ್ನು ರಾಜಾರಾಂ ಮೋಹನ್ ರಾಯ್, ದಯಾನಂದ ಸರಸ್ವತಿ, ಫುಲೆ, ರಾಮಕೃಷ್ಣ ಪರಮಹಂಸರು, ಗಾಂಧಿ, ಅಂಬೇಡ್ಕರ್ ಮುಂತಾದ ಮಹನೀಯರು ತಂದುಕೊಟ್ಟರು. ಯಾವುದೇ ಒಂದು ಧರ್ಮ ಮತ್ತು ಅದನ್ನು ಆಧರಿಸಿದ ಸಂಸ್ಕೃತಿ ಕಾಲ ಕಾಲಕ್ಕೆ ಪರಿಷ್ಕರಣೆಗೆ ಒಳಗಾಗುವುದು ಆರೋಗ್ಯಕರ. ನಮ್ಮ ಸಾಮಾಜಿಕ ಮೌಲ್ಯಗಳು ತೀವ್ರಗತಿಯಲ್ಲಿ ಬದಲಾಗುತ್ತಿದೆ, ಆದುದರಿಂದ ಅದಕ್ಕೆ ತಕ್ಕಂತೆ ಧರ್ಮಗಳಲ್ಲೂ ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದು ಅಗತ್ಯ. ಧರ್ಮ ಸೂತ್ರಗಳನ್ನು ದೈವ ಸ್ವರೂಪರು ಬರೆದದ್ದು, ಅದನ್ನು ಬದಲಿಸಲು ಸಾಧ್ಯವೇ ಇಲ್ಲ ಎಂದು ಕೆಲವರು ವಾದ ಮಾಡಬಹುದು, ಕಾಲಕ್ಕೆ ಹೊಂದಿಕೊಳ್ಳದ ಧರ್ಮ ಸಂಘರ್ಷಣೆಗಳಿಗೆ ಕಾರಣವಾಗುತ್ತದೆ.


ಇತಿಹಾಸವನ್ನು ಗಮನಿಸಿದಾಗ ನಮ್ಮ ಸಾಮಾಜಿಕ ಮತ್ತು ಧಾರ್ಮಿಕ ಆಚರಣೆಗಳು ಉದಾರ ಮತ್ತು ಸಂಕುಚಿತ ಸಾಂಪ್ರದಾಯಿಕ ನಿಲುವುಗಳ ನಡುವೆ ಗಡಿಯಾರದ ಪೆಂಡ್ಯುಲಮ್ ರೀತಿಯಲ್ಲಿ ತುಯ್ದಾಡುತ್ತಿತು, ಈಗಲೂ ತುಯ್ದಾಡುತ್ತಿದೆ. ಇದನ್ನು ಹಿಂದೂ ಧರ್ಮವಲ್ಲದೆ ಕ್ರೈಸ್ತ ಮತ್ತು ಇಸ್ಲಾಂ ಧರ್ಮದಲ್ಲೂ ಕಾಣಬಹುದು. ಧರ್ಮ, ಸಂಕಟಕ್ಕೆ ಒಳಗಾದಾಗ (ಅಥವಾ ಒಳಗಾಗಿದೆ ಎಂದು ಭಾವಿಸಿದಾಗ) ಧರ್ಮ ರಕ್ಷಕರು ಮುಂದಾಗಿ ತೀವ್ರವಾದ ಧರ್ಮ ಪ್ರಚೋದನೆಯಲ್ಲಿ ತೊಡಗಿರುವುದನ್ನು ಪ್ರಪಂಚದ ಎಲ್ಲ ಸಂಸ್ಕೃತಿಯಲ್ಲಿ ಕಾಣಬಹುದು. ಸೋಷಿಯಲ್ ಮೀಡಿಯಾ ಬಳಸುವ ಈ ಸಮಯದಲ್ಲಿ ತೀವ್ರವಾದ ಧರ್ಮ ಪ್ರಚೋದನೆಯನ್ನು ವಾಟ್ಸ್ ಆಪ್ ಸಂದೇಶಗಳಲ್ಲಿ ಪ್ರತ್ಯಕ್ಷವಾಗಿ ನಾವು ಭಾರತೀಯರು ಅನುಭವಿಸುತ್ತಿದ್ದೇವೆ. ಈ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಿದ ಹಿನ್ನೆಲೆ ಉದ್ದೇಶವೆಂದರೆ ಬಹುಶಃ ಹಿಂದೆ ಧರ್ಮದ ಅತಿಯಾದ ಬಳಕೆಯಾಗಿ ಸಂಪ್ರದಾಯಸ್ಥರ ದಬ್ಬಾಳಿಕೆ ಶೋಷಣೆ ಹೆಚ್ಚಾಗಿದ್ದ ಸಮಯದಲ್ಲಿ ಶರಣರು ಬೇಸತ್ತು ಈ ಒಂದು ಕ್ರಾಂತಿಯನ್ನು ಕೈಗೊಂಡಿರಬಹುದು. 11ನೇ ಶತಮಾನದಲ್ಲಿ ಚಾತುರ್ವಣ ಪದ್ಧತಿ ಜಾರಿಯಲ್ಲಿದ್ದಾಗ, ಜ್ಯಾತಿ ವ್ಯವಸ್ಥೆ ತೀವ್ರವಾಗಿದ್ದಾಗ ಶರಣರು ಅದನ್ನು ಪ್ರತಿಭಟಿಸಿ, ಜಾತಿ ವ್ಯವಸ್ಥೆಯ ತರತಮಗಳನ್ನು ಪ್ರಶ್ನಿಸುತ್ತ ಸಮಾನತೆಯನ್ನು ಎತ್ತಿಹಿಡಿದರು. ಶರಣರ ಆ ಪ್ರತಿಭಟನೆಯ ಭಾವನೆಗಳನ್ನು, ಅಸಮಾಧಾನಗಳನ್ನು ವಚನಗಳಲ್ಲಿ ಕಾಣಬಹುದು. ಈ ಸಾಮಾಜಿಕ ಕ್ರಾಂತಿಯ ಫಲವಾಗಿ ಅನುಭವ ಮಂಟಪ ಮತ್ತು ಮಹಾಮನೆಯ ಸ್ಥಾಪನೆಯಾಯಿತು. ಹಲವಾರು ವಚನಗಳಲ್ಲಿ ಈ ಮಹಾಮನೆಯ ಉಲ್ಲೇಖವಿದೆ. ಈ ಅನುಭವ ಮಂಟಪ ಸಮಾಜದ ಕೆಳವರ್ಗದವರ ಮತ್ತು ಸಾಮಾನ್ಯರ ಸಮ್ಮುಖದಲ್ಲಿ ನಡೆಯಿತು ಎಂಬುದಕ್ಕೆ ವಚನಕಾರರ ವೈಯುಕ್ತಿಕ ಹಿನ್ನೆಲೆಗಳು ಸಾಕ್ಷಿಯಾಗಿವೆ. ಈ ವಿಚಾರಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನಡೆದ ಸಂಶೋಧನೆಯಿಂದ ಮತ್ತು ಪ್ರಾಜ್ಞರಿಂದ ಅನುಮೋದಿತವಾಗಿದೆ. ಹೀಗೆ 11ನೇ ಶತಮಾನದ ಕರ್ನಾಟಕದಲ್ಲಿ, ಪ್ರಜಾ ಪ್ರಭುತ್ವದ ಪರಿಕಲ್ಪನೆ ಉಂಟಾಯಿತು. ಈ ಎಲ್ಲ ಮೇಲಿನ ಹಿನ್ನೆಲೆಯಲ್ಲಿ ಶರಣರು ವಚನ ಸಾಹಿತ್ಯದಲ್ಲಿ ತೊಡಗಿ ಕೊಂಡರು.

ಈಗ ಶರಣರ ಸಾಮಾಜಿಕ ನಿಲುವುಗಳನ್ನು ಗಮನಿಸೋಣ. ಶರಣರು ದೇವಸ್ಥಾನಗಳನ್ನು ಧಿಕ್ಕರಿಸುವ ದಿಟ್ಟತನವನ್ನು ತೋರಿದರು. ಶರಣರು ಧಾರ್ಮಿಕವಾಗಿ ಸಾಂಸ್ಕೃತಿಕವಾಗಿ ಮುಖ್ಯವಾಹಿನಿಯ ಒಳಗೇ ಇದ್ದರೂ ಏಕೆ ದೇವಸ್ಥಾನವನ್ನು ನಿರಾಕರಿಸಿದರು? ಎಂಬ ಪ್ರಶ್ನೆ ಮೂಡುವುದು ಸಹಜ. ಆಗಿನ ಕಾಲಕ್ಕೆ ದೇವಸ್ಥಾನಗಳಿಗೆ ಮೇಲ್ಜಾತಿ ಜನಕಷ್ಟೇ ಪ್ರವೇಶವಿತ್ತು. ದೇವರ ಮತ್ತು ಭಕ್ತರ ನಡುವೆ ಮಧ್ಯವರ್ತಿಗಳು ಹುಟ್ಟಿಕೊಂಡು ಅವರು ದೇವಸ್ಥಾನಗಳನ್ನು ನಿಯಂತ್ರಿಸುತ್ತಿದ್ದರು. ದೇವರ ಹೆಸರಿನಲ್ಲಿ ಮುಗ್ಧರ ಶೋಷಣೆ ನಡೆದಿತ್ತು.

"ಭಕ್ತನಿರ್ದ ತಾಣವೇ ದೇವಲೋಕ
ಭಕ್ತನಂಗಳವೇ ವಾರಣಾಸಿ
ದೇಹವೇ ದೇಗುಲ"

ಎಂದು ಹೇಳುತ್ತಾ ದೇವರ ಮತ್ತು ದೇವಸ್ಥಾನಗಳ ವೈಭವೀಕರಣ ನಡೆಯುತ್ತಿರುವಾಗ ಇಷ್ಟ ಲಿಂಗವೆಂಬ ನಿರಾಕಾರ ದೇವರ ಪರಿಕಲ್ಪನೆಯನ್ನು ಹುಟ್ಟುಹಾಕಿ, ಶರಣರು ದೇವರನ್ನೇ ಜನಸಾಮಾನ್ಯರ ಹತ್ತಿರ ತಂದು ನಿಲ್ಲಿಸಿದರು. ದೇವರು ಒಂದು ವ್ಯಾಪಾರದ, ವಾಣಿಜ್ಯ ಉತ್ಪನ್ನವಾಗಿದ್ದ ಸಮಯದಲ್ಲಿ ಮುಗ್ಧರ ಶೋಷಣೆಯನ್ನುನಿವಾರಿಸಿದರು. 'ಭಕ್ತನಿರುವ ತಾಣವೇ ವಾರಣಾಸಿ' ಎಂಬ ಸಂದೇಶವನ್ನು ಕೊಟ್ಟರು.

ಮನುಷ್ಯನಿಗೆ ನಂಬಿಕೆ ಮುಖ್ಯ; ಆದರೆ ನಂಬಿಕೆಗಳನ್ನು ಕಟ್ಟು ಕಥೆಗಳನ್ನು ಹುಟ್ಟುಹಾಕಿ ಅದರಿಂದ ಲಾಭ ಪಡೆಯುವುದಾದರೆ ಆ ನಂಬಿಕೆಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಬೇಕಾಗುತ್ತದೆ. ಕೆಲವೊಮ್ಮೆ ಆ ನಂಬಿಕೆ ವೈಯುಕ್ತಿಕ ನೆಲೆಯಿಂದ ಜಿಗಿದು ಸಾಮೂಹಿಕ ನೆಲೆಯಲ್ಲಿ ಕೆಲವರಿಗಷ್ಟೇ ಅನುಕೂಲವಾದಾಗ, ಧಾರ್ಮಿಕ ಪ್ರಚೋದನೆಗೆ ಬಳಸಿದಾಗ, ಅಥವಾ ಒಂದು ರಾಜಕೀಯ ಪಕ್ಷ ಅದನ್ನು ಬಂಡವಾಳ ಮಾಡಿಕೊಂಡಾಗ ಆ ನಂಬಿಕೆಯನ್ನು ಪ್ರಶ್ನಿಸಬೇಕಾಗುತ್ತದೆ. ನಂಬಿಕೆ ವೈಯುಕ್ತಿಕ ನೆಲೆಯಲ್ಲಿ ಸೀಮಿತವಾಗಿದ್ದರೆ ಅದನ್ನು ಒಪ್ಪಿಕೊಳ್ಳಬಹುದು, ಅದರಿಂದ ಸಮಾಜಕ್ಕೆ ಹಾನಿ ಉಂಟಾಗುವ ಸಾಧ್ಯತೆ ಕಡಿಮೆ. ನಂಬಿಕೆ ಅವೈಜ್ಞಾನಿಕವಾಗಿ, ಸರಳ ತರ್ಕಗಳಿಗೆ ಸಿಗದೇ ಕೆಲವರ ಲಾಭಕ್ಕಾಗಿ ಅದನ್ನು ಬಳಸಿಕೊಂಡಲ್ಲಿ ಅದನ್ನು ಧಿಕ್ಕರಿಸ ಬೇಕಾಗುತ್ತದೆ. ನಂಬಿಕೆಗಳಿಂದ ಮೌಢ್ಯ ಉಂಟಾಗಿ ಕೆಲವು ಯಾಂತ್ರಿಕ ಆಚರಣೆಗಳು ಹುಟ್ಟಿ ಕೊಂಡಿವೆ. ಈ ಒಂದು ಹಿನ್ನೆಲೆಯಲ್ಲಿ ಬಸವಣ್ಣನವರ ಕೆಳಗಿನ ವಚನ ನೂರಾರು ವರ್ಷಗಳ ನಂತರವೂ ಈ ವೈಜ್ಞಾನಿಕ ಯುಗದಲ್ಲೂ ಪ್ರಸ್ತುತವಾಗಿದೆ ಎನ್ನುವುದು ಶೋಚನೀಯ ಸಂಗತಿ.

"ನೀರ ಕಂಡಲ್ಲಿ ಮುಳುಗುವರಯ್ಯ, ಮರ ಕಂಡಲ್ಲಿ ಸುತ್ತುವರಯ್ಯ
ಬತ್ತುವ ಜಲವ ಒಣಗುವ ಮರವ ನೆಚ್ಚುವರು
ನಿಮ್ಮನೆತ್ತ ಬಲ್ಲರು ಕೂಡಲ ಸಂಗಮ ದೇವಾ"

ಶರಣರು ಸ್ವರ್ಗ ನರಕ, ಪಾಪ, ಪುಣ್ಯ ಸಂಪಾದನೆ ಬಗ್ಗೆ ವೈಚಾರಿಕವಾಗಿ ಆಲೋಚಿಸಿ;
"ದೇವ ಲೋಕ ಮರ್ತ್ಯಲೋಕವೆಂಬುದು ಬೇರೆ ಉಂಟೆ
ಸತ್ಯ ನುಡಿವುದೇ ದೇವಲೋಕ ಮಿತ್ಯನುಡಿವುದೆ ಮರ್ತ್ಯ ಲೋಕ
ಆಚಾರವೇ ಸ್ವರ್ಗ ಅನಾಚಾರವೇ ನರಕ "

ಎಂದು ಹೇಳುತ್ತಾ, ಮುಂದಕ್ಕೆ "ಅಯ್ಯಎಂದರೆ ಸ್ವರ್ಗ ಎಲವೋ ಎಂದರೆ ನರಕ" ಎಂಬ ಉಕ್ತಿಯನ್ನು ನೀಡಿದ್ದಾರೆ. ಶರಣ ಸಾಹಿತ್ಯದಲ್ಲಿ ಬಳಸುವ ಅಯ್ಯ, ಅಕ್ಕ, ಅಣ್ಣ ಸಮಾಜದಲ್ಲಿ ಒಂದು ಭ್ರಾತೃತ್ವವನ್ನು, ಆತ್ಮೀಯ ಭಾವನೆಯನ್ನು ಉಂಟುಮಾಡುತ್ತದೆ. ಜನರ ನಡುವೆ 'ಎಲವೋ' ಎನ್ನದೆ, ದ್ವೇಷ ಅಸೂಯೆಗಳನ್ನು ಬದಿಗಿಟ್ಟು ಎಲ್ಲರು "ಸರ್ವಜನಾಂಗದ ಈ ಶಾಂತಿಯ ತೋಟದಲ್ಲಿ'' ಸೌಹಾರ್ದತೆಯಿಂದ ಬದುಕಿದರೆ ಅದೇ ಸ್ವರ್ಗ! ಇಹ ಮತ್ತು ಪರಲೋಕವೆಂಬ ಕಾಲ್ಪನಿಕ ಲೋಕವನ್ನು ಶರಣು ನಿರಾಕರಿಸಿದರು. ಇಹಲೋಕದಲ್ಲಿ ಬದುಕುತ್ತಾ ಬರಿ ಪರಲೋಕವನ್ನೇ ಕುರಿತು ಚಿಂತಿಸುವವರನ್ನು ಕುರಿತು ಅಲ್ಲಮ ಪ್ರಭುಗಳು ಮಾರ್ಮಿಕವಾಗಿ "ಕೊಟ್ಟ ಕುದುರೆಯನು ಏರಲಾಗದವನು ಧೀರನು ಅಲ್ಲ ಶೂರನೂ ಅಲ್ಲ" ಎನ್ನುತ್ತಾರೆ. ಇಲ್ಲಿ ‘ಕೊಟ್ಟ ಕುದುರೆ’ ಎಂದರೆ ನಮಗೆ ದಕ್ಕಿರುವ ಬದುಕು, ಅದು ಕಾಡು ಕುದುರೆ ಇದ್ದಹಾಗೆ, ಅದನ್ನು ಪಳಗಿಸಿ ಅದರ ಮೇಲೆ ಕುಳಿತು ಬದುಕನ್ನು ಕ್ರಯಿಸಬೇಕು, ಅದನ್ನು ಬಿಟ್ಟು ಬೇರೊಂದು ಪರಲೋಕವೆಂಬ ಕುದುರೆಯನ್ನು ಬಯಸುವುದು ನಿರರ್ಥಕ ಎಂದು ತಿಳಿಸಿದ್ದಾರೆ.

ಶರಣರು ತೀಕ್ಷ್ಣ ವಿಮರ್ಶಕರು, ಅವರು ತಮ್ಮ ಬದುಕನ್ನು, ತಮ್ಮ ಆಚಾರ ವಿಚಾರಗಳನ್ನು ವಿಮರ್ಶೆಗೆ ಒಳಪಡಿಸಿಕೊಂಡವರು, ಆತ್ಮ ಶೋಧನೆಯಲ್ಲಿ ತೊಡಗಿಕೊಂಡವರು. ಇದಕ್ಕೆ ನಿದರ್ಶನವಾಗಿ ಕೆಳಗಿನ ವಚನವನ್ನು ಇಲ್ಲಿ ಪ್ರಸ್ತಾಪಮಾಡುವುದು ಸೂಕ್ತ;

ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು
ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯ
ಉಂಬ ಜಂಗಮ ಬಂದೆಡೆ ನಡೆ ಎಂಬರು
ಉಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ

ನಮ್ಮ ಆಚರಣೆಗಳಲ್ಲಿ ಇರುವ ವೈರುಧ್ಯವನ್ನು ಸ್ವಾರ್ಥತೆಯನ್ನು ಮತ್ತು ಅರ್ಥಹೀನತೆಯನ್ನು ಶರಣರು ಖಂಡಿಸುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಮನುಷ್ಯನಿಗೆ ಮಾರಕವಾಗಿರುವ ಹಾವು, ಆನೆ, ಸಿಂಹ ಎಂಬ ಕಂಡ ಕಂಡ ಪ್ರಾಣಿಗಳನೆಲ್ಲಾ ಪೂಜಿಸುವ ಬಗ್ಗೆ ಶರಣರಿಗೆ ಅಸಮಾಧಾನವಿದ್ದಿರಬಹುದು.

ಶರಣರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದವರು. ಹಿಂದೆ ಈ ಜಾತಿ ವ್ಯವಸ್ಥೆ ಅವರವರ ವೃತ್ತಿಗೂ ಸಂಬಂಧಪಟ್ಟಿದ್ದು, ಇದನ್ನು ಚಾತುರ್ವರ್ಣ ಪದ್ಧತಿ ಎಂದು ಗುರುತಿಸಲಾಗಿತ್ತು. ಈ ವ್ಯವಸ್ಥೆಯಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ವಿಂಗಡಣೆಗಳು ಇದ್ದವು. ಶರಣರು 'ಕಾಯಕವೇ ಕೈಲಾಸ' ಎಂಬ ಪರಿಕಲ್ಪನೆಯನ್ನು ತಂದು ತಮ್ಮ ವೃತ್ತಿಯನ್ನು ಮೇಲು-ಕೀಳು ಎಂದು ಪರಿಗಣಿಸದೆ ಅವರವರ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಆಗ ಅವರವರ ಕಾಯಕ ಅವರಿಗೆ ಶ್ರೇಷ್ಠ, ಆಗ ಎಲ್ಲರೂ ಸಮಾನರೇ ಎಂಬ ಸಂದೇಶವನ್ನು ಬಿತ್ತಿದರು. ಇಂದು ನಾವು ಅನಿವಾಸಿಗಳು ಪಾಶ್ಚ್ಯಾತ್ಯ ದೇಶಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಕೆಲಸ ಮಾಡುವವರು ವೈದ್ಯರೇ ಆಗಿರಬಹುದು, ಅಥವಾ ವಾರ್ಡ್ ಬಾಯ್ ಆಗಿರಬಹುದು ಆದರೂ ಸಮಾಜದಲ್ಲಿ ಎಲ್ಲರೂ ಒಂದೇ ಎನ್ನುವ ಭಾವನೆ ಘನತೆ ನಮಗಿದೆ. ಇದೇ ವಿಚಾರವನ್ನು 900 ವರ್ಷಗಳ ಹಿಂದೆ ಶರಣರು ಕಾಯಕದಲ್ಲಿರುವ ಘನತೆ (Dignity of labour) ಮತ್ತು ಸಮಾನತೆಯನ್ನು ತೋರಿಸಿಕೊಟ್ಟರು. ಈ ಜಾತಿ ಪದ್ದತಿಯನ್ನು ಪ್ರಶ್ನಿಸುತ್ತ ಶರಣರು;

ನೆಲೆ ಒಂದೇ: ಹೊಲಗೇರಿ, ಶಿವಾಲಯಕ್ಕೆ
ಜಲ ಒಂದೇ: ಶೌಚ, ಚಮನಕ್ಕೆ
ಕುಲವೊಂದೇ: ತನ್ನ ತಾನ್ ಅರಿದವಂಗೆ

ಎನ್ನುತ್ತಾ ಹೊಲಗೇರಿಗೂ, ಶಿವಾಲಯಕ್ಕೂ ನೆಲ ಒಂದೇ ಆಗಿದ್ದಲ್ಲಿ, ಶೌಚಕ್ಕೂ, ತೀರ್ಥಕ್ಕೂ, ಶುದ್ಧಿಗೂ ಜಲ ಒಂದೇ ಆಗಿದ್ದಲ್ಲಿ, ಮನುಷ್ಯ ಮನುಷ್ಯರ ನಡುವೆ ಕುಲವೊಂದೇ ಏಕೆ ಆಗಬಾರದು ಎಂದು ಪ್ರಶ್ನಿಸುತ್ತಾರೆ. ಸದರಿ ಪ್ರಪಂಚದಲ್ಲಿ, ಧರ್ಮದ ಹೆಸರಿನಲ್ಲಿ, ಪ್ರಪಂಚದ ನಾನಾ ಭಾಗಗಳಲ್ಲಿ ಧರ್ಮ ಯುದ್ಧ ನಡೆದಿದೆ. "ನಾವು-ಅವರು" ಎಂಬ ಪ್ರತ್ಯೇಕತೆ ಪ್ರಜ್ಞೆ ಹೆಚ್ಚಾಗಿದೆ. ದೇಶಗಳು, ಸಮಾಜ ಧ್ರುವೀಕರಣಗೊಂಡಿದೆ. ಇಂತಹ ಒಂದು ಸನ್ನಿವೇಶದಲ್ಲಿ ಬಸವಣ್ಣನವರ ಈ ವಚನ ಬಹಳ ಪ್ರಸ್ತುತವಾಗಿದೆ;

ಇವನಾರವ ಇವನಾರವ ಎಂದೆನಿಸದಿರಯ್ಯ
ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ
ಕೂಡಲ ಸಂಗಮ ದೇವಾ ನಿಮ್ಮ ಮನೆಯ
ಮಗನೆನಿಸಯ್ಯ

‘ಸರ್ವೇ ಜನಃ ಸುಖಿನೋ ಭವಂತು’ ಎನ್ನುತ್ತಲೇ, ಸಮಾನತೆಯ ಸಂದೇಶವನ್ನು ಸಾರುತ್ತಲೇ "ನಾವು - ಅವರು" ಎಂಬ ಈ ಪ್ರತ್ಯೇಕತೆಯ ಪ್ರಜ್ಞೆಯನ್ನು (Tribalism) ಹುಟ್ಟುಹಾಕಿದ್ದೇವೆ. ಈ ಧ್ರುವೀಕರಣಕ್ಕೆ(Polarization) ಕಾರಣಗಳೇನು ಎಂಬುದನ್ನು ಡಾರ್ವಿನ್ ನೀಡಿರುವ ಜೈವಿಕ ತತ್ವಗಳ ಹಿನ್ನೆಲೆಯಲ್ಲಿ ಗಮನಿಸಬೇಕಾಗಿದೆ. "ಯಾವುದು ಪ್ರಬಲವಾಗಿದೆಯೋ ಅದ್ಕಕಷ್ಟೇ ಉಳಿಗಾಲ" (Survival of the fittest) ಎನ್ನುವ ಸೈಧಾಂತಿಕ ಹಿನ್ನೆಲೆಯಲ್ಲಿ ಮನುಷ್ಯ ತನ್ನ ಒಂದು ಸಂರಕ್ಷಣೆಗೆ ಅನಾದಿ ಕಾಲದಿಂದ ಬುಡಕಟ್ಟು, ವರ್ಣ, ಧರ್ಮ, ರಾಷ್ಟ್ರ, ಜಾತಿ
ಎಂಬ ಗುಂಪುಗಾರಿಕೆ ಮಾಡಿಕೊಂಡು ಬಂದಿದ್ದಾನೆ. ತನ್ನ ಒಂದು ಬದುಕಿನ ರೀತಿನೀತಿಗಳಿಗೆ ಒಗ್ಗಲಾರದವರನ್ನು ಅನ್ಯರೆಂದು ಪರಿಗಣಿಸಿ ಈ ಅನ್ಯರಿಗೆ ಅಸಹ್ಯ ಪಡುತ್ತಾ ಬಂದಿದ್ದಾನೆ. ತನನ್ನು ಬಣ್ಣಿಸಿಕೊಂಡು, ಇತರರನ್ನು ಹಳಿಯುತ್ತ, ಗಂಗಾ ನದಿಯಲ್ಲಿ ಸ್ನಾನ ಮಾಡಿ ಬಹಿರಂಗ ಶುದ್ಧಿಯನ್ನು ಪಡೆದು ಕೊಂಡನೇ ಹೊರೆತು ಅಂತರಂಗ ಶುದ್ಧಿಯನ್ನು ಪಡೆದುಕೊಳ್ಳಲಿಲ್ಲ! ಈ ಒಂದು ಹಿನ್ನೆಲೆಯಲ್ಲಿ ಬಸವಣ್ಣನವರ ವಚನವನ್ನು ಗಮನಿಸಿ;

"ಕಳ ಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸ ಬೇಡ, ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಹಿ, ಇದೇ ಬಹಿರಂಗ ಶುದ್ಧಿ"

‘ಸರ್ವೇ ಜನಃ ಸುಖಿನೋ ಭವಂತು’ ಎಂದಾಗಬೇಕಾದರೆ, ನಮ್ಮ-ನಿಮ್ಮ ನಡುವಿನ ಗೋಡೆಗಳನು ಕೆಡವಬೇಕು.

ಸ್ತ್ರೀ ಸ್ವಾತಂತ್ರ್ಯವನ್ನು ಮೊಟ್ಟ ಮೊದಲಿಗೆ ಗುರುತಿಸಿ, ಗೌರವಿಸಿ, ಅನುಷ್ಠಾನಕ್ಕೆ ತಂದವರು ಶರಣರು, "ಸ್ತ್ರೀ ಬಾಲ್ಯದಲ್ಲಿ ತಂದೆಯ, ಯೌವನದಲ್ಲಿ ಗಂಡನ, ಮುಪ್ಪಿನಲ್ಲಿ ಮಗನ ಅಧೀನಳು, ಹೆಣ್ಣು ಮಾಯೆ, ಎಂದು ಹೇಳುತ್ತಿದ್ದ ಕಾಲದಲ್ಲಿ ಅಲ್ಲಮರು; "ಹೆಣ್ಣು ಮಾಯೆಯಲ್ಲ, ಹೊನ್ನು ಮಾಯೆಯಲ್ಲ, ಮನದ ಮುಂದಣ ಆಸೆಯೇ ಮಾಯೆ' ಎಂದು, ಹೆಣ್ಣಿಗೆ ಸಮಾಜದಲ್ಲಿ ಸಮಾನ ಸ್ಥಾನ-ಮಾನಗಳನ್ನು, ಹಕ್ಕುಗಳನ್ನು ಕಲ್ಪಿಸಿಕೊಟ್ಟರು. ಬಸವಣ್ಣನವರು ಅಕ್ಕ ಮಹಾದೇವಿ ಮತ್ತು ಇತರ ಶರಣೆಯರನ್ನು ಅನುಭವಮಂಟಪದಲ್ಲಿ ಆಹ್ವಾನಿಸಿ ಚರ್ಚೆಯಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಟ್ಟರು. ಶರಣೆಯರೂ ಹಲವಾರು ವಚನಗಳನ್ನು ರಚಿಸಿದರು. ಇಷ್ಟಾಗಿಯೂ ಹೆಣ್ಣು-ಗಂಡಿನ ನಡುವೆ ಏನು ವ್ಯತ್ಯಾಸ, ಅವರನ್ನೇಕೆ ಸಾಮಾಜಿಕ ಆಚರಣೆಯಿಂದ ಹೊರಗಿಡಬೇಕು? ಎಂದು ಪ್ರಶ್ನಿಸಬಹುದು. ಅದಕ್ಕೆ ಉತ್ತರವಾಗಿ ಜೇಡರ ದಾಸಿಮಯ್ಯ ಹೀಗೆ ಹೇಳುತ್ತಾನೆ; "ಮೊಲೆ ಮೂಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಮೂಡಿಬಂದರೆ ಗಂಡೆಂಬರು, ಇವೆರಡರ ನಡುವೆ ಸುಳಿವಾತ್ಮ ಹೆಣ್ಣು ಅಲ್ಲ ಗಂಡು ಅಲ್ಲ!”

ಶರಣರ ಚಿಂತನೆಗಳು ಸಮಾಜಮುಖಿ ಅಷ್ಟೇ ಅಲ್ಲದೆ ಅದು ಸಂಸಾರ ಮುಖಿ ಕೂಡ ಎನ್ನುವುದಕ್ಕೆ ಕೆಳಗಿನ ಸಾಲುಗಳು ಸಾಕ್ಷಿಯಾಗಿವೆ;

ಮಠವೇಕೋ, ಪರ್ವತವೇಕೋ,
ಜನವೇಕೊ, ನಿರ್ಜನವೇಕೊ,
ಚಿತ್ತ ಸಮಾಧಾನ ಉಳ್ಳ ಶರಣಂಗೆ?

ಬಹಳಷ್ಟು ಶರಣರು ಕಾವಿ ತೊಡಲಿಲ್ಲ (ಇದಕ್ಕೆ ಕೆಲವು ಹೊರತುಗಳಿರಬಹುದು) ಸನ್ಯಾಸಿಗಳಾಗಿ ಕಾಡಿಗೆ, ಪರ್ವತಗಳಿಗೆ ಹೋಗಿ, ದೇಹವನ್ನು ದಂಡಿಸಿ ಘೋರ ತಪಸ್ಸನ್ನು ಮಾಡಲಿಲ್ಲ. ಬದಲಾಗಿ "ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ" ಎನ್ನುತ್ತಾ ಸಂಸಾರದೊಳಗೇ ಇದ್ದುಕೊಂಡು ಸತ್ಯಶೋಧನೆಯನ್ನು ನಡೆಸಿ, ಅನುಭವ ಮತ್ತು ಅನುಭಾವವನ್ನು ಪಡೆದುಕೊಂಡರು. ದೇಹ ದಂಡನೆಯ ಕ್ರಮವನ್ನು ಅವರು ಅನುಮೋದಿಸಲಿಲ್ಲ. ದೇಹದಂಡನೆಯನ್ನು ಕುರಿತು ಬಸವಣ್ಣನವರು; 'ಹುತ್ತವ ಬಡಿದೊಡೆ ಹಾವು ಸಾಯಬಲ್ಲುದೆ'? ಎಂದು ಪ್ರಶ್ನಿಸುತ್ತಾರೆ. ಮನದೊಳಗೆ ಹಾವೆಂಬ ವಿಷವನ್ನು ಇಟ್ಟುಕೊಂಡು, ದೇಹವೆಂಬ ಹುತ್ತವನ್ನು ಬಡಿದರೆ ಪ್ರಯೋಜನವೇನು ಎನ್ನುತ್ತಾರೆ.

ಶರಣರು ರಚಿಸಿರುವ ವಚನಗಳಲ್ಲಿ ಸಾಹಿತ್ಯ ಮೌಲ್ಯಗಳೂ ಇವೆ. 11ನೇ ಶತಮಾನದ ಶುರುವಿನಲ್ಲಿ ಸಾಹಿತ್ಯ, ಹೆಚ್ಚಾಗಿ ಹಳೆಗನ್ನಡ ಸಂಸ್ಕೃತಮಯವಾಗಿದ್ದ ಸಮಯದಲ್ಲಿ ಕನ್ನಡ ಆಡು ಭಾಷೆಯನ್ನು ವಚನಕಾರರು ಬಳಸಿಕೊಂಡರು. ಅವರ ಬರಹದಲ್ಲಿ ಸರಳತೆ ಮತ್ತು ಸ್ಪಷ್ಟತೆ ಕಾಣುತ್ತದೆ. ಎಲ್ಲರ ಗ್ರಹಿಕೆಗೆ ನಿಲುಕುವಂತೆ ನಾಲ್ಕಾರು ಸಾಲುಗಳ ವಚನಗಳನ್ನು ರಚಿಸಿದ್ದಾರೆ. ಅಲ್ಲಮ ಪ್ರಭುಗಳ ರಚನೆಯು ಹಲವಾರು ರೂಪಕಗಳನ್ನು ಒಳಗೊಂಡು ಸಂಕೀರ್ಣವಾಗಿ ಮತ್ತು ಒಗಟಿನ ರೀತಿಯಲ್ಲಿದ್ದು ಸಾಹಿತ್ಯ ಪ್ರೌಢವಾಗಿದೆ.

ಒಟ್ಟಾರೆ ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಮಹತ್ವವಾದದ್ದು. ಅವರು ರಚಿಸಿದ ವಚನ ಸಾಹಿತ್ಯದಲ್ಲಿ ಮಾನವೀಯತೆ, ಅನುಕಂಪೆ, ಸ್ತ್ರೀ ಸ್ವಾತಂತ್ರ್ಯ, ವೈಚಾರಿಕತೆ, ಸಮಾನತೆ, ಪ್ರಜಾಪ್ರಭುತ್ವ ಪರಿಕಲ್ಪನೆಗಳನ್ನು ಒಳಗೊಂಡು, ಎಲ್ಲರೂ ಸಮಾನರೇ ಎಂಬ ಸಮಾಜ ಮುಖಿ ಚಿಂತನೆಗಳಿವೆ. ಕಾಯಕವೇ ಕೈಲಾಸ ಎಂದು ದುಡಿಯುತ್ತಾ, ದುಡಿದದ್ದನ್ನು ದಾಸೋಹ ಅನ್ನುವ ಭಾವನೆಯಲ್ಲಿ ಇತರೊಡನೆ ಹಂಚಿಕೊಳ್ಳುತ್ತಾ ಪ್ರಾಮಾಣಿಕವಾಗಿ ಬದುಕಿ, ಸಮಾಜಕ್ಕೆ ಆದರ್ಶಪ್ರಾಯರಾಗಿ ಬೆಳಕನ್ನು ನೀಡಿದವರು. ಈ ಕಾರಣಗಳಿಂದಲೇ ಅವರು ಕೊಟ್ಟಿರುವ ಸಾಹಿತ್ಯ ಎಲ್ಲ ಕಾಲಕ್ಕೂ ಎಲ್ಲ ದೇಶಕ್ಕೂ ಪ್ರಸ್ತುತವಾಗಿದೆ.

ಬೆಂಗಳೂರಿನ ಕೆಲವು ಇಂಗ್ಲಿಷ್ ಹೆಸರಿನ ರಸ್ತೆ ಮತ್ತು ವಸತಿ ಪ್ರದೇಶಗಳ ಇತಿಹಾಸ : ರಾಮಮೂರ್ತಿ

ಈ ವಾರದ ಸಂಚಿಕೆಯಲ್ಲಿ ರಾಮಮೂರ್ತಿ ಅವರು ಬೆಂಗಳೂರು ನಗರದ ರಸ್ತೆಗಳ ಇತಿಹಾಸವನ್ನು ಕುರಿತು ಲೇಖನ ಬರೆದಿದ್ದಾರೆ. ಕೆಂಪೇಗೌಡರು ಹುಟ್ಟು ಹಾಕಿದ ನಗರವನ್ನು ನಂತರದಲ್ಲಿ ಆಳಿದ ಬ್ರಿಟಿಷರು ನಗರಕ್ಕೆ ತಮ್ಮದೇ ಆದ ಛಾಪನ್ನು ಮೂಡಿಸಿ ಇತಿಹಾಸವನ್ನು ಬದಲಿಸಿದರು. ಅದರ ಕುರುಹಾಗಿ ನಮ್ಮ ಹೆಮ್ಮೆಯ ನಗರದಲ್ಲಿ ಇರುವ ಹಲವಾರು ಪ್ರತಿಷ್ಠಿತ ರಸ್ತೆಗಳು ಬ್ರಿಟಿಷ್ ಅಧಿಕಾರಿ ಮತ್ತು ಗಣ್ಯರ ಹೆಸರನ್ನು ಹೊತ್ತಿದೆ. ಇತ್ತೀಚಿಗೆ ಆ ಹೆಸರುಗಳನ್ನು ಬದಲಿಸಲು ಕೆಲವರು ದೇಶ ಭಕ್ತರು ಒತ್ತಾಯ ಪಡಿಸುತ್ತಿದ್ದಾರೆ. ರಸ್ತೆಗಳ, ನಗರಗಳ ಹೆಸರು ಬದಲಾಯಿಸಿದ ತಕ್ಷಣ ಇತಿಹಾಸ ಸತ್ಯ ಬದಲಾಗುವುದೇ? ಯಾವ ಹೆಸರು ನೂರಾರು ವರ್ಷಗಳಿಂದ ಜನರ ನಾಲಿಗೆಯಲ್ಲಿ ಸ್ಮೃತಿಯಲ್ಲಿ ಜೀವಂತವಾಗಿದೆಯೋ, ಜನಪ್ರೀಯವಾಗಿದೆಯೋ ಅದನ್ನು ಉಳಿಸಿಕೊಳ್ಳುವುದರಲ್ಲಿ ತಪ್ಪೇನಿದೆ ಎಂಬುದು ಕೆಲವರ ಅನಿಸಿಕೆ. ಮುಂದಿನ ಪೀಳಿಗಿಗೆ ಇದರ ಅರಿವು ಬೇಕು. ಈ ವಿಚಾರ ಏನೇ ಇರಲಿ ರಾಮಮೂರ್ತಿ ಅವರು ಬ್ರಿಟಿಷ್ ರಾಜ್ ಆಳ್ವಿಕೆಯ ಕೆಲವು ಹಿನ್ನೆಲೆ ಮಾಹಿತಿಯನ್ನು ಇಲ್ಲಿ ಒದಗಿಸಿದ್ದಾರೆ. ಬೆಂಗಳೂರಿನ ಪರಿಚಯ ಇರುವ ಓದುಗರಿಗೆ ಇದು ಪುಳಕ ನೀಡುವ ಬರಹ 
- ಸಂ.
***************************************
ಆಂಗ್ಲರ ಆಳ್ವಿಕೆ ಕಳೆದು ಸುಮಾರು ಎಂಟು ದಶಕಗಳೇ ಸಂದರೂ ಬೆಂಗಳೂರಿನಲ್ಲಿ ಅನೇಕ ಇಂಗ್ಲಿಷ್ ಹೆಸರಿನ ರಸ್ತೆಗಳು ಮತ್ತು ಪ್ರದೇಶಗಳು ಇನ್ನೂ ಉಳಿದಿವೆ. ಪ್ರತಿಯೊಂದು ಹೆಸರಿನ ಹಿಂದೆ ಹತ್ತೊಂಬತ್ತನೇ ಶತಮಾನದಲ್ಲಿದ್ದ ಒಬ್ಬ ಬ್ರಿಟಿಷ್ ಪುರುಷನ ಹಿನ್ನಲೆ ಅಥವಾ ಸಂಪರ್ಕ ಇರುವುದು ಕಂಡು ಬರುತ್ತೆ. ಸ್ವಾತಂತ್ರ್ಯ ಬಂದ ಮೇಲೆ, ಸ್ವಾಭಿಮಾನದಿಂದ ಕೆಲವು ಹೆಸರುಗಳು ಬದಲಾದವು. ಆದರೆ ಜನರು ಇನ್ನೂ ಹಲವನ್ನು ಹಳೆಯ ಹೆಸರಿಂದ ಕರೆಯುತ್ತಾರೆ. ಉದಾಹರಣೆಗೆ, ಬಸವನಗುಡಿಯ Surveyors Street, ಈಗ ಅಧಿಕೃತವಾಗಿ ಕೃಷ್ಣ ಶಾಸ್ತ್ರೀ ರಸ್ತೆ ಆಗಿದ್ದರೂ ಜನ ಸಾಮಾನ್ಯರ ಬಾಯಲ್ಲಿ ಹಳೇ ಹೆಸರೇ ಉಳಿದಿದೆ! 

೧೮೦೪ ರಲ್ಲಿ ಬ್ರಿಟಿಷರು ಸ್ಥಾಪಿಸಿದ ಬೆಂಗಳೂರಿನ ದಂಡು (Cantonment), ದಕ್ಷಿಣ ಭಾರತದಲ್ಲಿಯೇ ದೊಡ್ಡ ಮಿಲಿಟರಿ  ಪ್ರದೇಶವಾಗಿತ್ತು. ಇದರಲ್ಲಿ ಮುಖ್ಯವಾದ ಜಾಗ ಪರೇಡ್ ಗ್ರೌಂಡ್ಸ್. ಇಲ್ಲಿ  ಬ್ರಿಟಿಷರ ಸೈನ್ಯ ತರಬೇತಿ ಪಡೆಯುತ್ತಿತ್ತು. ಈಗಲೂ ಜನವರಿ ೨೬ ರಂದು ಇಲ್ಲೇ ಗಣರಾಜ್ಯದ ಪರೇಡ್ ನಡೆಯುವುದು.  ಇದರ ಸಮೀಪದಲ್ಲಿ ಕಬ್ಬನ್ ಪಾರ್ಕ್ ನಿರ್ಮಾಣವಾಯಿತು. Cantonment ನ  ಸುತ್ತಮುತ್ತ ಇದ್ದ ಜಾಗದಲ್ಲಿ ಬ್ರಿಟಿಷ್  ಕುಟುಂಬದವರು ವಾಸ್ತವ್ಯ ಹೂಡಿದರು, ಈ ಪ್ರದೇಶಕ್ಕೆ ತಮ್ಮ ಹೆಸರುಗಳನ್ನೂ ಕೊಟ್ಟರು: White Field , Austin  Town, Fraser Town, Cooke Town ಇತ್ಯಾದಿ. ಇದು ಸುಮಾರು ೧೫೦ ವರ್ಷಗಳ ಹಿಂದಿನ ಮಾತು. ಈಗಲೂ ಈ ಹೆಸರುಗಳು ಉಳಿದಿವೆ. ಪೂರ್ವ ದಿಕ್ಕಿನಲ್ಲಿರುವ ಈಗಿನ Whitefield ಪ್ರದೇಶವು, ೧೮೮೨ ರಲ್ಲಿ ಚಾಮರಾಜ ಒಡೆಯರ್ ಮಹಾರಾಜರು Anglo Indian ಜನಾಂಗದವರು ವಾಸ ಮಾಡುವುದಕ್ಕೆ ಡೇವಿಡ್ ಇಮ್ಯಾನುಯಲ್ ವೈಟ್ ಅವರಿಗೆ ಕೊಟ್ಟ ೩೭೫೦ ಎಕರೆ ಜಮೀನು. ಈತ Anglo Indian ಸಂಘದ ಅಧ್ಯಕ್ಷನಾಗಿದ್ದ. ಅನೇಕರು ೫೦ ಕಿ.ಮೀ ದೂರದಲ್ಲಿದ್ದ KGF ಚಿನ್ನದ ಗಣಿ ಯಲ್ಲಿ ಕೆಲಸದಲ್ಲಿದ್ದರು. ಹತ್ತಿರದಲ್ಲೇ ಕಟ್ಟಿದ ರೈಲು ನಿಲ್ದಾಣದಿಂದ ಕೆಲಸಕ್ಕೆ ಹೋಗಬಹುದಾಗಿತ್ತು. ಈಗ ವೈಟ್ ಫೀಲ್ಡ್ ನಲ್ಲಿ ಬಹು ದೊಡ್ಡ IT ಸಂಸ್ಥೆಗಳಲ್ಲಿ  ಸಾವಿರಾರು ಜನರು ಕೆಲಸದಲ್ಲಿದ್ದಾರೆ. ಹೀಗೆ, ಪ್ರತಿಯೊಂದು ಪ್ರದೇಶಕ್ಕೂ ಒಂದು ಇತಿಹಾಸ ಇದೆ.  

ಈಗ ಕೆಲವು ರಸ್ತೆಗಳ ಇತಿಹಾಸವನ್ನು ನೋಡೋಣ. ಮುಖ್ಯವಾದ ರಸ್ತೆಗಳು, Avenue Road, Brigade Road, Cubbon Road , Cunningham Road, Millers Road, Krumbigal  Road, Lavelle  Road, Sankey Road, St. Marks Road  ಇತ್ಯಾದಿ. ಇದರಲ್ಲಿ ಅವೆನ್ಯೂ ರಸ್ತೆ ಬಹಳ ಹಳೇ ಮತ್ತು ಮುಖ್ಯವಾದ ರಸ್ತೆ. ದೊಡ್ಡ ಪೇಟೆ ಇದರ ಮುಂಚಿನ ಹೆಸರು. ಈಗಿನ Majestic ನಿಂದ  ಕೆಂಪೇಗೌಡರು ಕಟ್ಟಿದ ಕೋಟೆ ದಾಟಿ,  ಟಿಪ್ಪು ಅರಮನೆವರೆಗೆ ಇದ್ದ ರಸ್ತೆ. ಇದಕ್ಕೆ ರಾಜಬೀದಿ ಎಂದೂ ಹೆಸರಿತ್ತು. ೧೮೮೪ ನಲ್ಲಿ ಈ ರಸ್ತೆ Avenue Road ಆಯಿತು ಅನ್ನುವ ದಾಖಲೆ ಇದೆ. ಒಂದು ಕಾಲದಲ್ಲಿ ಸಾಲು ಮರಗಳು, ತೆಂಗಿನ ಮರಗಳು ಇದ್ದವು ಈ ರಸ್ತೆಯ ಉದ್ದಕ್ಕೂ ಇದ್ದವು.  ಈಗ ವ್ಯಾಪಾರದ ರಸ್ತೆ, ಇಲ್ಲಿ ಸಿಗದೇ ಇರುವ ಪದಾರ್ಥವೇ ಇಲ್ಲ ಅಂದರೆ ತಪ್ಪಲಾಗರಾದು.  
ಕನ್ನಿಂಗ್ ಹ್ಯಾಮ್ ನ

ಈಗಿನ ವಸಂತ ನಗರದಲ್ಲಿರುವ ಕನ್ನಿಂಗ್ ಹ್ಯಾಮ್ ರಸ್ತೆಗೆ ಹೆಸರು ಬಂದಿದ್ದು ಸ್ಕಾಟ್ಲೆಂಡ್ ಮೂಲದ ಫ್ರಾಂಸಿಸ್ ಕನ್ನಿಂಗ್ ಹ್ಯಾಮ್ನಿಂದ (೧೮೨೦-೧೮೭೫). ಈಸ್ಟ್ ಇಂಡಿಯಾ ಕಂಪನಿಯ ಸೈನಿಕ ಶಾಲೆಯಲ್ಲಿ ತರಬೇತಿ ಪಡೆದು ಮದ್ರಾಸ್ ರೆಜಿಮೆಂಟ್ ಗೆ ಸೇರಿ, ೧೮೫೦ರಲ್ಲಿ ಮೈಸೂರು ಪ್ರಾಂತ್ಯದ ಕಮಿಷನರ್ ಆಗಿದ್ದ ಸರ್ ಮಾರ್ಕ್ ಕಬ್ಬನ್ ನವರ ಸಿಬ್ಬಂದಿಯಾಗಿ ಕೆಲಸ ಮಾಡಿ ಲಾಲ್ ಬಾಗ್ ತೋಟ ಮತ್ತು ಬೆಂಗಳೂರಿನ ಅನೇಕ ಪ್ರಮುಖ ಕಟ್ಟಡಗಳನ್ನು ಕಟ್ಟಿದವನು. ಇದರಲ್ಲಿ ಮುಖ್ಯವಾದದ್ದು, ಸರ್ಕಾರದ ಅತಿಥಿ ಗೃಹ “ಬಾಲಬ್ರೂಯಿ”. ಇವನ ಇಬ್ಬರು ಸಹೋದರರೂ ಸಹ ಭಾರತದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ. ಇವನ ಅಣ್ಣ, ಜನರಲ್ ಅಲೆಕ್ಸಾಂಡರ್ Indian Archaeology ಸಂಸ್ಥೆಯನ್ನು ಸ್ಥಾಪಿಸಿದವನು ಮತ್ತು ತಮ್ಮ ಮೇಜರ್ ಜಾನ್ “History of the Sikhs ” ಬರೆದವನು. ಫ್ರಾನ್ಸಿಸ್ ಕನ್ನಿಂಗ್ ಹ್ಯಾಮ್ ಸಹ ದೊಡ್ಡ ಬರಹಗಾರನು. ನಿವೃತನಾದ ಮೇಲೆ ಮೈಸೂರು ಮಹಾರಾಜರಗೆ ಸಲಹೆಗಾರನಾಗಿ ಸೇರಿ ೧೮೭೧ರಲ್ಲಿ ಇಂಗ್ಲೆಂಡ್ ಗೆ ಮರಳಿದ ಮೇಲೆ ತನ್ನ ಸಾಹಿತ್ಯ ಚಟುವಟಿಕೆಯನ್ನು ಪುನರಾರಂಭಿಸಿದ. ಡಿಸೆಂಬರ್ ೧೮೭೫ ನಿಧನವಾದ. ಒಂದು ವಿಚಿತ್ರ ವಿಷಯ, ಇವನ ಭಾವ ಚಿತ್ರ ಎಲ್ಲೂ ಇಲ್ಲ , ಸ್ಕಾಟ್ ಲ್ಯಾಂಡ್ ನಲ್ಲಿ ಅಮೃತ ಶಿಲೆಯ ಪ್ರತಿಮೆ ಮಾತ್ರ ಇದೆ.

ಸರ್ ರಿಚರ್ಡ್ ಸ್ಯಾಂಕಿ (೧೮೨೯-೧೯೦೮) ಹುಟ್ಟಿದ್ದು ೨೨/೩/೧೮೨೯ ರಂದು ಐರ್ಲೆಂಡ್ನಲ್ಲಿ. ೧೮೪೫ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದ ಶಾಲೆಯಲ್ಲಿ ತರಬೇತು ಪಡೆದು, ಮದ್ರಾಸ್ ರೆಜಿಮೆಂಟ್ ಗೆ ಸೇರಿ ಭಾರತದ ಅನೇಕ ಕಡೆ ಇಂಜಿನಿಯರ್ ಆಗಿ ಕೆಲಸ ಮಾಡಿ, ೧೮೬೧ ರಲ್ಲಿ ಮೈಸೂರು ಸಂಸ್ಥಾನದಲ್ಲಿ PWD (Public Works Department ) ಇಲಾಖೆ ಸೇರಿದ. ರಾಜ್ಯದ ನೀರಾವರಿ ಅಭಿವೃದ್ಧಿಯ ಯೋಜನೆ ಸ್ಯಾಂಕಿಯ ಕೊಡುಗೆ. ಬೆಂಗಳೂರಿನ ಕೆರೆ ಸ್ಯಾಂಕಿ ಟ್ಯಾಂಕ್ ಮತ್ತು ಸುತ್ತ ಮುತ್ತಿನ ಕೆರೆಗಳಿಗೆ ಆಣೆಕಟ್ಟು ಹಾಕಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಸುಧಾರಿಸಿದ್ದು ಈತನೇ. ಇದಲ್ಲದೆ, ಬೆಂಗಳೂರಿನ ಮ್ಯೂಸಿಯಂ(೧೮೭೭) ಈಗಿನ ಹೈಕೋರ್ಟ್ (ಅಠಾರ ಕಚೇರಿ – ೧೮೬೪), ಸೈನ್ಟ್ ಆಂಡ್ರೂ ಚರ್ಚ್ (೧೮೬೪), ಮೇಯೋ ಕಟ್ಟಡ (೧೮೭೦) ಇತ್ಯಾದಿ ಕಟ್ಟಡಗಳನ್ನು ಕಟ್ಟಿದ. ನಂತರ ಮದ್ರಾಸ್ ಪ್ರಾಂತ್ಯದಲ್ಲಿ ಅನೇಕ ಯೋಜನೆಗಳನ್ನು ಕೈಗೊಂಡು ಮದ್ರಾಸ್ ಅಭಿವೃದ್ಧಿಗೆ ನೇರವಾದ. ಮರೀನಾ ಬೀಚ್ ಮತ್ತು ಅನೇಕ ಉದ್ಯಾನವನಗಳ ನಿರ್ಮಾಣ ಮಾಡಿದ. ಮದ್ರಾಸ್ ವಿಶ್ವವಿದ್ಯಾನಿಲಯದ Fellow ಆಗಿ ಆಯ್ಕೆಯಾಗಿ ಮದ್ರಾಸ್ ವಿಧಾನ ಪರಿಷತ್ತಿನಲ್ಲಿ ಸದಸ್ಯನಾಗಿ ಸೇವೆ ಸಲ್ಲಿಸಿದ. ೧೮೮೪ ನಲ್ಲಿ ನಿವೃತನಾದಮೇಲೆ ಐರ್ಲೆಂಡ್ ನಲ್ಲಿ Board of Works ನ ಅಧ್ಯಕ್ಷನಾಗಿ ಅನೇಕ ನೀರಾವರಿ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ. ನವಂಬರ್ ೧೯೦೮ ರಲ್ಲಿ ಲಂಡನ್ Grosvenor Place ನಲ್ಲಿ ನಿಧನವಾದ. ಇವನ ಸಮಾಧಿ Sussex ನಲ್ಲಿರುವ Hove ನಲ್ಲಿದೆ.

ಲಾವೆಲ್ ರಸ್ತೆಯ ಹೆಸರಿನ ಮೂಲ, ಐರ್ಲೆಂಡಿನ ಮೈಕಲ್ ಲಾವೆಲ್. ಸ್ಕಾಟಿಷ್ ರೆಜಿಮೆಂಟ್ ನಲ್ಲಿ ಸೈನಿಕನಾಗಿ ಸೇರಿ ನ್ಯೂಜಿಲ್ಯಾಂಡ್ ನಲ್ಲಿ ಮಾವೋರಿ ಯುದ್ಧದಲ್ಲಿ ಭಾಗವಾಗಿ, ಅಲ್ಲಿನ ಗಣಿಗಳ ಅಧ್ಯನ ಮಾಡಿ ಭಾರತಕ್ಕೆ ಬಂದ. ಇಲ್ಲಿ ಚಿನ್ನದ ಗಣಿಗಳ ಬಗ್ಗೆ ಸಂಶೋಧನೆ ಮಾಡಿ , ಕೊನೆಗೆ ಕೋಲಾರ ಗಣಿಗಳನ್ನು ಅಗೆಯಲು ೧೮೭೩ ರಲ್ಲಿ ಬ್ರಿಟಿಷ್ ಸರ್ಕಾರದಿಂದ ಅನುಮತಿ ಪಡೆದು KGF (Kolar Gold Fields) ಸಂಸ್ಥೆಯನ್ನು ಸ್ಥಾಪಿಸಿದ. ಆದರೆ ಇದನ್ನು ನಡೆಸುವುದಕ್ಕೆ ಬೇಕಾದ ಬಂಡವಾಳ ಇವನಲ್ಲಿ ಇರಲಿಲ್ಲ. ಅನೇಕರ ಸಹಾಯದಿಂದ ಕೆಲವು ವರ್ಷ ನಡೆಸಿ ಕೊನೆಗೆ ತನ್ನ ಪಾಲನ್ನು ಮಾರಿ ಬೆಂಗಳೂರಿನಲ್ಲಿ ಒಂದು ಭವ್ಯವಾದ ಮನೆಯನ್ನು (Oorgaum House) ಕಟ್ಟಿದ. ಈ ರಸ್ತೆ ಈಗ ಲಾವೆಲ್ ರಸ್ತೆ. ಈ ಮನೆಯನ್ನು ಮೈಸೂರ್ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಪೀಟರ್ ಡಿಸೋಜಾ ಅನ್ನುವರಿಗೆ ಮಾರಿ ೧೯೧೮ ರಲ್ಲಿ ಇಂಗ್ಲೆಂಡಿಗೆ ಮರಳಿದ.

ರೆಸಿಡೆನ್ಸಿ ರಸ್ತೆ
ಈಗ ಇದು ಬಹಳ ದೊಡ್ಡ ರಸ್ತೆ. ಒಂದು ತುದಿಯಲ್ಲಿ ಪ್ರತಿಷ್ಠಿತ, ೧೯ನೇ ಶತಮಾನದಲ್ಲಿ ಶುರುವಾದ ಬೆಂಗಳೂರ್ ಕ್ಲಬ್, ಇನ್ನೊಂದು ತುದಿಯಲ್ಲಿ ಬೆಂಗಳೂರ್ ಮಾಲ್ . ಈ ರಸ್ತೆಯ ಹೆಸರು ಹೇಗೆ ಬಂತು ಅನ್ನುವುದನ್ನು ನೋಡೋಣ. ೧೭೯೯ ನ ಮೈಸೂರ್ ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಪರಾಜಿತನಾದ ಮೇಲೆ, ಮೂರನೇ ಮುಮ್ಮಡಿ ಕೃಷ್ಣ ರಾಜೇಂದ್ರ ಒಡೆಯರ್ ಅವರನ್ನು ಬ್ರಿಟಿಷರು ಪಟ್ಟಕ್ಕೇರಿಸಿದರು. ಆದರೆ ರಾಜ್ಯದ ಆಡಳಿತ ಮಾತ್ರ ಒಬ್ಬ ಬ್ರಿಟಿಷ್ ರೆಸಿಡೆಂಟ್, ಸರ್ ಬ್ಯಾರಿ ಕ್ಲೋಸ್ ಎಂಬಾತನಲ್ಲಿತ್ತು. ತದನಂತರ ಟಿಪ್ಪುವಿನ ದಿವಾನ್ ಪೂರ್ಣಯ್ಯ ಪುನಃ ದಿವಾನರಾದರು. ಈ ರೆಸಿಡೆಂಟ್ ೧೮೦೪ ರಲ್ಲಿ ಬೆಂಗಳೂರಿಗೆ ಬಂದು ಈಗಿನ SBI ಇರುವ ಜಾಗದಲ್ಲಿ ವಾಸವಾಗಿದ್ದ. ೧೮೩೧ನಲ್ಲಿ ರೆಸಿಡೆಂಟ್ ವಾಸಕ್ಕೆ ಬೇರೆ ಮನೆ ಕಟ್ಟಿದರು. ಆಗ ರೆಸಿಡೆನ್ಸಿ ರಸ್ತೆ ಆಯಿತು. ಕೆಲವು ವರ್ಷದ ನಂತರ ಈಗಿನ ರಾಜ್ ಭವನ್ ಕಟ್ಟಡ ಕಟ್ಟಿ ಲಾರ್ಡ್ ಕಬ್ಬನ್ ಮುಂತಾದವರು ಇಲ್ಲಿ ವಾಸವಾಗಿದ್ದರು. ಈಗ ಇದು ರಾಜ್ಯಪಾಲರ ವಸತಿ ಗೃಹ.

ಕಬ್ಬನ್ ಪಾರ್ಕ್
೧೮೭೦ ರಲ್ಲಿ, ಈಗಿನ ಕಬ್ಬನ್ ಪಾರ್ಕ್ ಸರ್ ರಿಚರ್ಡ್ ಸ್ಯಾಂಕಿಯ ನೇತೃತ್ವದಲ್ಲಿ ಪ್ರಾರಂಭವಾಯಿತು. ಇದನ್ನು ಪೂರೈಸಿದ್ದು ಮೈಸೂರು ಪ್ರಾಂತ್ಯದ ಮುಖ್ಯ ಕಮಿಷನರ್ ಸರ್ ಜಾನ್ ಮೀಡ್. ಆಗ ಇದು ಮೀಡ್ಸ್ ಪಾರ್ಕ್ ಆಗಿತ್ತು. ನಂತರ ೧೮೭೩ರಲ್ಲಿ ಈತ ಬರೋಡಕ್ಕೆ ಹೊಸ ಹುದ್ದೆಗೆ ಹೋದಾಗ ಈ ಉದ್ಯಾನವನಕ್ಕೆ ಬಹಳ ವರ್ಷ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದ ಸರ್ ಮಾರ್ಕ್ ಕಬ್ಬನ್ ನ ಹೆಸರು ಇಡಲಾಯಿತು. ಇಲ್ಲೇ ಅಠಾರ ಕಚೇರಿ, ಪುಸ್ತಕ ಭಂಡಾರ, ಸೆಂಚುರಿ ಕ್ಲಬ್ ಮುಂತಾದ ಕಟ್ಟಡಗಳು ಇರುವುದು. ೧೯೨೭ ನಲ್ಲಿ ಹೆಸರು ಬದಲಾವಣೆ ಆಗಿ ಚಾಮರಾಜ ಒಡೆಯರ್ ಪಾರ್ಕ್ ಆಗಿತ್ತು . ಆದರೆ ಈ ಹೆಸರು ಉಳಿಯಲಿಲ್ಲ.

ಕೊನೆಯದಾಗಿ, ಬೆಂಗಳೂರಿನ ಫ್ರೇಸರ್ ಟೌನ್ ಬಗ್ಗೆ ಎರಡು ಮಾತು. ಆಗಸ್ಟ್ ೧೯೧೦ ರಲ್ಲಿ ಈ ಪ್ರದೇಶದ ಶಂಕು ಸ್ಥಾಪನೆ ನಡೆಯುತು.  ಅಂದಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಬಹಳ ಚಿಕ್ಕ ವಯಸ್ಸಿನಲ್ಲಿ ಪಟ್ಟಕ್ಕೆ ಬಂದಿದ್ದರು. ಅವರ ವಿದ್ಯಾಭ್ಯಾಸ ಮೈಸೂರು ಅರಮನೆಯಲ್ಲಿ ಬ್ರಿಟಿಷ್ ICS ಅಧಿಕಾರಿ ಸರ್ ಸ್ಟೂವರ್ಟ್ ಫ್ರೇಸರ್ (೧೮೬೪-೧೯೬೩) ಅವರ ನೇತೃತ್ವದಲ್ಲಿ ಮುಂದುವರೆಯಿತು. ಇವರ ಹೆಸರನ್ನು ಮಹಾರಾಜರ ಸಲಹೆಯಂತೆ ಇಟ್ಟು ಫ್ರೇಸರ್ ಟೌನ್ ಆಯಿತು. ಈಗ ಇದನ್ನು ಪುಲಕೇಶಿನಗರ ಎಂದು BBMP ನಾಮಕರಣ ಮಾಡಿದೆ ಆದರೆ ಜನಗಳಿಗೆ ಇದು ಈಗಲೂ Fraser  Town! 

ಬೆಂಗಳೂರಿನಲ್ಲಿ ಇಂಗ್ಲಿಷ್ ಹೆಸರಿನ ರಸ್ತೆಗಳು ಅನೇಕ. Infantry Road ,Brigade Road, Cubbon Road, Residency Road, St. Marks Road ಇತ್ಯಾದಿ. ಇನ್ನೂ ಎಷ್ಟು ವರ್ಷಗಳು ಈ ಹೆಸರುಗಳು ಉಳಿಯುತ್ತವೆ ಎನ್ನುವುದು ಬಹುಶಃ ಮುಂದಿನ ಪೀಳಿಗೆಯ ಇತಿಹಾಸದ ಅರಿವಿಲ್ಲದ ರಾಜಕಾರಣಿಗಳು ನಿರ್ಧರಿಸುತ್ತಾರೆ .

- ರಾಮಮೂರ್ತಿ.
***************************************