ಭಾರತ ಸ್ವಾತಂತ್ರ್ಯ ದಿನಾಚರಣೆಯಂದು ಹಲವು ಪ್ರಶ್ನೆಗಳು ಮತ್ತು ನೆನಪುಗಳು

ಇತ್ತೀಚಿಗಷ್ಟೇ  ಭಾರತ ತನ್ನ ೭೬ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿತು. ಈ ೭೬ ವರ್ಷಗಳಲ್ಲಿ ಭಾರತ ಸಾಕಷ್ಟು ಪ್ರಗತಿಯನ್ನು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ಗಳಿಸಿದೆ. ಇದರಿಂದಾಗಿ ಭಾರತೀಯರ ಆತ್ಮ ವಿಶ್ವಾಸ ಸ್ವಾಭಿಮಾನ ಹೆಚ್ಚಾಗಿದೆ. ಇದು ಅತ್ಯಂತ ಹೆಮ್ಮೆಯ ವಿಷಯ. ಭಾರತದ ನಗರಗಳಲ್ಲಿ ಮಧ್ಯಮ ವರ್ಗದವರ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಸಾಂಸಾರಿಕ ಜೀವನಗಳಲ್ಲಿ ನೆಮ್ಮೆದಿ ಸಂತೋಷಗಳಿವೆ. ಈ ಪ್ರಗತಿಗೆ ಯಾವುದೇ ಒಬ್ಬ ಜನ ನಾಯಕ ಅಥವಾ ರಾಜಕೀಯ ಪಕ್ಷ ಕಾರಣವಲ್ಲ. ಕಳೆದ ಹಲವಾರು ದಶಕಗಳಲ್ಲಿ ಹಲವಾರು ಜನನಾಯಕರ, ರಾಜಕೀಯ ಪಕ್ಷಗಳ, ದಕ್ಷ ಅಧಿಕಾರಿಗಳ, ವಿವಿಧ ಧಾರ್ಮಿಕ ಹಿನ್ನೆಲೆಯ ಪ್ರಾಮಾಣಿಕ ಜನಸಾಮಾನ್ಯರ, ವಿಜ್ಞಾನಿಗಳ, ಕಲಾವಿದರ ಪರಿಶ್ರಮ, ಧಾರ್ಮಿಕ ಸಹಿಷ್ಣುತೆ ಮತ್ತು ಜಾತ್ಯಾತೀತ ಭಾವನೆಗಳು ಮತ್ತು ಕರ್ತವ್ಯ ನಿಷ್ಠೆ ಈ ಪ್ರಗತಿಗೆ ಕಾರಣವಾಗಿದೆ. ನಾವು ನಿಂತ ನೆಲೆಯ ಹಿನ್ನೆಲೆ ಮತ್ತು  ಪರಂಪರೆಯನ್ನು ಅರಿಯಬೇಕಾಗಿದೆ. ಇಂದಿನ ಪ್ರಸಕ್ತ ಸಾಮಾಜಿಕ -ರಾಜಕೀಯ ಸನ್ನಿವೇಶದಲ್ಲಿ ಕೆಲವು ವಿಚಾರಗಳನ್ನು ತಮ್ಮ ನಿಲುವಿಗೆ ಒಪ್ಪುವಂತೆ ಬದಲಾಯಿಸುವ ಪ್ರಯತ್ನ ಕೆಲವರಿಂದ ನಡೆದಿದೆ. ಕೆಲವರಿಗೆ ಗಾಂಧಿ ಒಬ್ಬ ಕ್ಷುಲಕ ಮತ್ತು ಅಪ್ರಸ್ತುತ ವ್ಯಕ್ತಿಯಾಗಿದ್ದಾರೆ, ಸ್ವಾತಂತ್ರ್ಯ ಹೋರಾಟ ನಡೆಸಿದ ಪಿತಾಮಹರನ್ನು ಪಕ್ಕಕ್ಕೆ ತಳ್ಳಿ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿರುವುದು ವಿಪರ್ಯಾಸವಾದ ಮತ್ತು ವಿಷಾದದ ಸಂಗತಿ. ಒಂದು ದೇಶ ತನ್ನ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದರೂ ಅಲ್ಲಿ ಎಲ್ಲರಿಗೂ ವೈಯುಕ್ತಿಕ ನೆಲೆಯಲ್ಲಿ ಸ್ವಾತಂತ್ರ್ಯ ದೊರಕಿದೆ ಎಂದು ಹೇಳಲಾಗುವುದಿಲ್ಲ. ದೇಶವನ್ನು ಆಳುವ, ಸ್ವಾತಂತ್ರ್ಯವನ್ನು ನಿಯಂತ್ರಿಸುವ ರಾಜಕೀಯ,ಆರ್ಥಿಕ, ಧಾರ್ಮಿಕ, ಜಾತಿ ಮುಂತಾದ ವ್ಯವಸ್ಥೆ ಈ ಸ್ವಾತಂತ್ರ್ಯವನ್ನು ಕಸಿದು ಕೊಳ್ಳಬಹುದು. ಒಂದು ದೇಶ ಒಟ್ಟಾರೆ ಪರಿಶ್ರಮದಿಂದ ಗಳಿಸಿದ ಸ್ವಾತಂತ್ರ್ಯ ಯಾರಿಗೆ? ಎಷ್ಟರ ಮಟ್ಟಿಗೆ ತಲುಪಿದೆ? ಎಂಬುದನ್ನು ಕುರಿತು ಕವಿ ಸಿದ್ದ ಲಿಂಗಯ್ಯ ಹೀಗೆ ಬರೆಯುತ್ತಾರೆ; 
( ಆಯ್ದ ಸಾಲುಗಳು) 

ಯಾರಿಗೆ ಬಂತು? ಎಲ್ಲಿಗೆ ಬಂತು? ನಲವತ್ತೇಳರ ಸ್ವಾತಂತ್ರ್ಯ 
 ಜನಗಳ ತಿನ್ನುವ ಬಾಯಿಗೆ ಬಂತು, ಕೋಟ್ಯಧೀಶರ ಕೋಣೆಗೆ ಬಂತು 
ಮಹಡಿಯ ಮನೆಗಳ ಸಾಲಿಗೆ ಬಂತು, ಪೋಲಿಸರ  ಬೂಟಿಗೆ ಬಂತು 
ಬಂದೂಕದ ಗುಂಡಿಗೆ ಬಂತು, ನಲವತ್ತೇಳರ ಸ್ವಾತಂತ್ರ್ಯ 

ಬಡವರ ಮನೆಗೆ ಬರಲಿಲ್ಲ, ಬೆಳಕಿನ ಕಿರಣ ತರಲಿಲ್ಲ 
ಗೋಳಿನ ಕಡಲನು ಬತ್ತಿಸಲಿಲ್ಲ, ಸಮತೆಯ ಹೂವನು ಅರಳಿಸಲಿಲ್ಲ  
ಯಾರಿಗೆ ಬಂತು? ಎಲ್ಲಿಗೆ ಬಂತು? ನಲವತ್ತೇಳರ ಸ್ವಾತಂತ್ರ್ಯ 

 
ಕವಿ ಸಿದ್ದಲಿಂಗಯ್ಯ ಈ ಕವಿತೆಯನ್ನು ಬರೆದು ಹಲವಾರು ವರ್ಷಗಳು ಸಂದಿವೆ. ಇದೇ ಮೇಲಿನ ಪ್ರಶ್ನೆಯನ್ನು ಡಾ ಗುರುಪ್ರಸಾದ್ ಪಟ್ವಾಲ್ ಅವರು ಭಾರತದ ಪ್ರಸಕ್ತ ರಾಜಕೀಯ-ಸಾಮಾಜಿಕ  ಪರಿಸ್ಥಿತಿಗೆ ಹೋಲಿಸಿ ತಮ್ಮ ಕವನದಲ್ಲಿ ಚಿಂತಿಸಿದ್ದಾರೆ ಮತ್ತು ತಮ್ಮ ವ್ಯಥೆಯನ್ನು ದಾಖಲಿಸಿದ್ದಾರೆ. " ಎಲ್ಲಿದೆ ಸ್ವಾಮೀ ಸ್ವಾತಂತ್ರ್ಯ?" ಎಂಬ ಪ್ರಶ್ನೆಯಲ್ಲಿ ಕೊನೆಗೊಳ್ಳುವ ಈ ಕವಿತೆಯನ್ನು ಓದಿ, ನಮ್ಮ ದೇಶದಲ್ಲಿ ಯಾರಿಗೆ? ಎಷ್ಟರ ಮಟ್ಟಿಗೆ? ಸ್ವಾತಂತ್ರ್ಯ ಇದೆ ಎನ್ನುವುದನ್ನು  ಓದುಗರೇ ಅರಿತುಕೊಳ್ಳಬೇಕು.   

ಸ್ವಾತಂತ್ರ್ಯ ದಿನಾಚರಣೆ ಎಲ್ಲ ಭಾರತೀಯರಿಗೆ ಹೆಮ್ಮೆಯ ವಿಷಯ. ಅದರಲ್ಲೂ ಶಾಲಾ ಮಕ್ಕಳಿಗೆ  ದಿನಾಚರಣೆಯ ಸಡಗರ ಸಂಭ್ರಮಗಳು, ಸಿದ್ಧತೆಗಳು, ಉತ್ಸವದ ಆಚರಣೆ ಉಲ್ಲಾಸಕರವಾಗಿದ್ದು, ಅಲ್ಲಿ ಇತಿಹಾಸ, ಶಿಸ್ತು, ಕವಾಯಿತು, ಮತ್ತು ದೇಶಭಕ್ತಿ ಗೀತೆಗಳ ಪರಿಚಯವಾಗುತ್ತದೆ. ಅಲ್ಲಿಯ ಸಾಮೂಹಿಕ ಆಚರಣೆ ಮಕ್ಕಳಲ್ಲಿ ಒಗ್ಗಟ್ಟಿನ ಮತ್ತು ಸಮತೆಯ ಭಾವನೆಯನ್ನು ನೀಡುತ್ತದೆ. ರಾಧಿಕಾ ಜೋಶಿ ಅವರು ಹಿಂದೆ ತಾವು ಖುದ್ದಾಗಿ ಭಾಗವಹಿಸಿದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು,  ಹಳೆ ನೆನಪುಗಳನ್ನು  ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

            - ಸಂಪಾದಕ 
***
ಫೋಟೋ ಕೃಪೆ ಗೂಗಲ್
ಸ್ವಾತಂತ್ರ್ಯ..?


ಅತಂತ್ರ ಕುತಂತ್ರಗಳ ದಿನಗಳ ನಡುವೆ 
ಬಂತು ಸ್ವಾತಂತ್ರ್ಯದ ದಿನ

ಎಲ್ಲೆಂದೆರಲ್ಲಿ ಧ್ವಜ 
ಕೆಲಸಕ್ಕಿಂದು ರಜ 

ಅಂದು ಯಾರದ್ದೋ ಬಲಿದಾನ
ಇಂದು ಯಾರಿಗೋ ಸನ್ಮಾನ

ಕೆಂಪು ನೆತ್ತರು ಹರಿಸಿದವರಾರೋ
ಕೆಂಪು ಕೋಟೆ ದರ್ಪದಿ ಹತ್ತಿದವರಾರೋ 

ತಿರಂಗದ ಬಣ್ಣಗಳಲ್ಲೇ ವರ್ಣಭೇದ
ಹಸಿರು ಕೇಸರಿಯಲ್ಲೇ ಜಾತಿವಾದ 

ಹುಟ್ಟಬಹುದೇ ಇಂದು ರಾಮವಾಣಿಯ ಕಬೀರ
ರಾಮ ರಹೀಮರು ಸರಿದರೇ ಇನ್ನೂ ದೂರ

ಕಬೀರನ ರಾಮವಾಣಿಗೆ ಇಂದು ಬೆಲೆ ಎಲ್ಲಿ
ಸಂತ ಶರೀಫನಿಗಿಂದು ನೆಲೆ ಎಲ್ಲಿ

ಸಿಹಿ ಉಣಿಸುವ ಉರ್ದು ಇಂದು ವಾರ್ತೆ ಮಾತ್ರ
ನೋವಳಿಸುವ ಯೋಗವಾಯಿತು ಹಿಂದೂ ಮಂತ್ರ
ಎಲ್ಲಿದೆ ಸ್ವಾಮೀ  ಸ್ವಾತಂತ್ರ್ಯ..?

ಡಾ . ಗುರುಪ್ರಸಾದ್ ಪಟ್ವಾಲ್

ಸುವರ್ಣ ವರ್ಷದ ನೆನಪು ಅಮೃತ ಘಳಿಗೆಯಲ್ಲಿ 
-  ರಾಧಿಕಾ ಜೋಷಿ 
ये शुभ दिन है हम सबका
लहरा लो तिरंगा प्यारा  

 
ನಮ್ಮ ದೇಶದ ಸ್ವತಂತ್ರ ಹೋರಾಟದ ಇತಿಹಾಸ ನಮ್ಮ ಪಠ್ಯದಲ್ಲಿ ಹಾಗು ಸಿನೆಮಾಗಳಲ್ಲಿ ನೋಡಿದ್ದೇವೆ. ನಮ್ಮ ಸ್ವತಂತ್ರ ಹೋರಾಟದ ಕಥೆಗಳು ನಮ್ಮನ್ನು ಭಾವುಕರನ್ನಾಗಿಸುವುದರ  ಜೊತೆಗೆ ನಮ್ಮಲ್ಲಿ ಆಕ್ರೋಶವನ್ನು ಉಂಟುಮಾಡುತ್ತದೆ. ಆದರೆ ಭಾರತ ಈಗ ಪ್ರಪಂಚವನ್ನೇ ಎದುರಿಸಿ ಎಲ್ಲ ಕ್ಷೇತ್ರದಲ್ಲೂ ಬೃಹದ್ಸಾಧನೆ ಮಾಡುತ್ತಲೇಯಿದೆ. ಆಗಸ್ಟ್ ೧೫ ಹತ್ತಿರ ಬಂದಂತೆ ನಮ್ಮಲಿ ದೇಶ ಪ್ರೇಮ ಹೆಚ್ಚಾಗಿ ಹುಚ್ಚಾಗುತ್ತೇವೆ. ಆದರೆ ಈ ಬಾರಿ ''ಹರ್ ಘರ್ ತಿರಂಗ'' ಅಭಿಯಾನ ಒಂದೇ ವಿಶೇಷ ವಿಚಿತ್ರ ಭಾವನೆ ನಮ್ಮೆಲ್ಲರ ಮನದಲ್ಲಿ ಮೂಡಿಸುತು.
ಎಲ್ಲರು ಹೋರಾಡಿದ ಭಾರತೀಯರೆಂಬ ಹೆಮ್ಮ ಸಹಜವಾಗಿಯೇ ಮೂಡಿತು. ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಲಿಲ್ಲವಾದರೂ ಅದರ ಶಾಲೆಯ ಆಚರಣೆಯ ಸಂಭ್ರಮದಲ್ಲಿ ಭಾಗಿಯಾಗಿದ್ದೆ ಅಂತ ಹೆಮ್ಮೆಯಿಂದೆ ಹೇಳಿಕೊಳ್ಳುತ್ತೇನೆ.  ''ಏ ಮೇರೇ ವತನ್ ಕೆ ಲೋಗೋ ಝರ ಆಂಖ ಮೇ ಭರಲೋ ಪಾನಿ''  ಈಹಾಡು ನಾನು ಮೊದಲ ಬಾರಿಗೆ ಯಾವಾಗ ಕೇಳಿದ್ದೇನೋ ಗೊತ್ತಿಲ್ಲ ಆದರೆ ಎಂಟನೆಯ ತರಗತಿಯಲ್ಲಿ ಸ್ವಾತಂತ್ರ  ದಿನದ  ಅಂಗವಾಗಿ ನಡೆಯಲಿದ್ದ ಕಾರ್ಯಕ್ರಮಕ್ಕೆ ನಮ್ಮ ಶಾಲೆ ಆಯ್ಕೆ ಆಗಿದ್ದು ಒಂದು ದೊಡ್ಡ ಸುದ್ದಿ. ಈ ಕಾರ್ಯಕ್ರಮ ನಮ್ಮ ಶಾಲೆಯ ಕ್ರೀಡಾ ಮೈದಾನದಲ್ಲ! ಮೈಸೂರಿನ ಪ್ರತಿಷ್ಠಿತ ಬನ್ನಿ ಮಂಟಪದಲ್ಲಿ. ಏಕೆಂದರೆ ಆ ವರ್ಷ ಸ್ವಾತಂತ್ರ ಸಿಕ್ಕ ಸುವರ್ಣ ವರುಷ ಅಂದರೆ 1997. ಮೈಸೂರು ಕೂಡ ದೊಡ್ಡ ಪ್ರಮಾಣದಲ್ಲಿ ತಯ್ಯಾರಿ ನಡೆಸಿತ್ತು. ನಗರದ ಸಚಿವರು ಮತ್ತು ಗಣ್ಯರು ಅಲ್ಲಿ ನೆರೆದು ಅಧಿಕೃತ ಧ್ವಜಾರೋಹಣ ಸಮಾರಂಭಕ್ಕೆ ವೇದಿಕೆ ಸಜ್ಜಾಗುತ್ತಿತ್ತು. ನಮಗೆ ಈವೆಲ್ಲರ ಅರಿವಿರಲಿಲ್ಲ.ತಿಂಗಳ ಮುಂಚಿತವಾಗಿಯೇ ಇಡೀ ಶಾಲೆಯ ಮಕ್ಕಳಿಗೆ ನೃತ್ಯಾಭ್ಯಾಸ. ನಮಗೆ ಖುಷಿನೋ ಖುಷಿ. ಯಾಕಂದ್ರೆ ಪಾಠವಿಲ್ಲ ಹೋಂ ವರ್ಕ್ ಇಲ್ಲ. ಅಷ್ಟೇ ಅಲ್ಲ ಎಲ್ಲಾ ಮಕ್ಕಳಿಗೂ ಬಾದಾಮಿ ಹಳದಿಯ ಚೂಡಿ ದಾರ್ ಸಮವಸ್ತ್ರ ಈ ನೃತ್ಯ ಪ್ರದರ್ಶನದ ಸಲುವಾಗು. ನಮ್ಮ ಶಾಲೆಯ ಆಡಿಟೋರಿಯಂ ಅನ್ನು ಒಂದು ಪುಟ್ಟ ಕಾರ್ಖಾನೆಯನ್ನಾಗಿ  ಪರಿವರ್ತಿಸಿ ೧೦-೨೦ ದರ್ಜಿಯನ್ನು ಕರೆತಂದು ನಮ್ಮ ಅಳತೆಯ  ಪ್ರಕಾರ ಚೂಡಿ ದಾರ್ ಹೋಲಿಸಲಾಯಿತು. ಇಡೀ  ದಿನ ಮೈದಾನದಲ್ಲಿ ಡಾನ್ಸ್ ಪ್ರಾಕ್ಟೀಸ್ !  2-3 ತಿಂಗಳು ಬೆಳಗಿನಿಂದ  ಸಂಜೆಯತನಕ ''ಏ ಮೇರೇ ವತನ್ ಕೆ ಲೋಗೋ ಝಾರ ಆಂಖ ಮೇ ಭರಲೋ ಪಾನಿ''!. ಎಲ್ಲಾ ಮಕ್ಕಳಿಗೂ ಬಾಯಿಪಾಠ. ನಮ್ಮ ಹಿಂದಿ ಬಹಳ ಶುದ್ಧವಾದ ಕರಣ ಪದಗಳ   ಅರ್ಥ ಸರಿಯಾಗಿ ತಿಳಿಯದೆ ಬರಿ ಕುಣಿದ್ದಾಯ್ತು. ಕನ್ನಡದ ಹಾಡು ಬದಲು ಹಿಂದಿ ಹಾಡು ಯಾಕೆ ಹಾಡಿನ ಅರ್ಥ ಪೂರ್ತಿಯಾಗಿ ತಿಳಿಯುವ ತಿಳುವಳಿಕೆ ಕೂಡ ಇರಲಿಲ್ಲ,ಯಾರನ್ನಾದರೂ ಕೇಳೋಣ ಅಂತ ನಮ್ಮ ತಲೆಗೆ ಬರಲೇ ಇಲ್ಲ. ಆದರೆ ಈ ದಿನಗಳು ಮಾತ್ರ ಮನಸ್ಸಿನಲ್ಲಿ ಹಸಿರಾಗಿ ಉಳಿದಿದೆ.
ಭಾರತದ ನಕ್ಷೆ ಮಾಡಿ ಎಲ್ಲ ಮಕ್ಕಳನ್ನು ಅದ್ರೊಳಗೆ ನಿಲ್ಲಿಸಿ ಒಂದು ರಾಜ್ಯದಿಂದ ಮತ್ತೊಂದಕ್ಕೆ ಕುಣಿಯುತ್ತ ಹೋಗೋದು.ಮೈದಾನಲ್ಲಿ NCC ಕ್ಯಾಡೆಟ್ಸ್ ಸೈನಿಕರಾಗಿ ಗಡಿಯಲ್ಲಿ  ನಕಲಿ ಬಂದೂಕು ಗುಂಡಿನ ಸದ್ದು, ಅಶ್ರುವಾಯು ಎಲ್ಲವೂ  ಒಂದು ನೃತ್ಯ ನಾಟಕ ರೂಪಕ ಒಂದು ಸಮರದ ನೈಜ ದೃಶ್ಯಾವಳಿ ಸೃಷ್ಟಿಸಿತ್ತು. ನಮ್ಮ ನೃತ್ಯ ಪ್ರದರ್ಶನಕ್ಕೆ ನಮ್ಮ ಶಾಲೆಗೆ ಪ್ರಥಮ ಸ್ಥಾನ! ಅಷ್ಟೇ ಅಲ್ಲ .. ಇದೇ ಮತ್ತೆ ರಿಪೀಟ್ ದಸರಾ ಉತ್ಸವಕ್ಕೆ. ನಮಗೆ ಮಜಾ.. ಓದಿಲ್ಲ ಬರಿಯಿಲ್ಲ ! 

ಈ ಹಾಡು ಕೆಲ ವರಷುಗಳ ಹಿಂದೆ ಮತ್ತೆ ಕೇಳಿದೆ ಮೈ ಝಂಮ್ ಅಂತು! ಕವಿ ಪ್ರದೀಪ್ ಮನಸ್ಸಿನ್ನಲ್ಲಿ ಅದೆಷ್ಟು ದುಃಖ ರೋದನೆ! 1962 ರಲ್ಲಿ ಭಾರತ ಚೀನಾ ನಡುವಿನ ಯುದ್ಧದಲ್ಲಿ ಹುತಾತ್ಮರಾದ ವೀರ ಸೇನಾನಿಗಳಿಗೆ   ಶ್ರದ್ಧಾಂಜಲಿ ರೂಪದಲ್ಲಿ ಹೊರಬಂದ ಅಕ್ಷರ ಕಂಬನಿ. ಈ ಹಾಡನ್ನು ರಾಷ್ಟ್ರ ಗೀತೆಯಷ್ಟೇ ಸರಾಗವಾಗಿ ಹಾಡಬಲ್ಲ ನಾನು ಅರ್ಥಗೊತಿಲ್ಲದೆ ಬಡಬಡಿಸುತ್ತಿದ್ದೆ. ಈ ಗೀತೆಯ ಹಿನ್ನೆಲೆ ತಿಳಿದಿರಲಿಲ್ಲ. ಬಹಳಷ್ಟು ರೋಚಕ ಕಥೆಗಳಿವೆ. ಇವೆಲ್ಲವೂ ಈಗ ಬಹುಷಃ ಮುಖ್ಯವಲ್ಲ. ಆದರೆ 1963  ಗಣತಂತ್ರ ದಿನದ ಕಾರ್ಯಕ್ರಮದಲ್ಲಿ ಹಾಡಿದ ಲತಾ ಮಂಗೇಶ್ಕರ್ ಅವರಿಗೆ ಈ ಹಾಡಿನ ಯಶಸ್ಸಿನ ಮೇಲೆ ನಂಬಿಕೆಯಿರಲಿಲ್ಲ ಯಾಕೆಂದರೆ ಈಹಾಡು ಯಾವುದೇ ಸಿನಿಮಾಕ್ಕೆ ಬಳಸಿರಲಿಲ್ಲ.ಆದರೆ ಜವಾಹರ್ ಲಾಲ್ ನೆಹರು  ಅವರ ಪ್ರತಿಕ್ರಿಯೆ ಹಾಗು ಪದಗಳ ಸೂಕ್ಷ್ಮ ಹಾಗು ದೇಶಭಕ್ತಿಯ ಭಾವನೆ ಈ ಹಾಡನ್ನು ತಕ್ಷಣವೇ ಜನಪ್ರಿಯ ಮಾಡಿತು. ಈ ಹಾಡು ಈ ಪ್ರಸ್ತುತ ದಿನಕ್ಕೂ ಅಳವಡಿಸುತ್ತದೆ. ಪ್ರಪಂಚದ ಎಲ್ಲೋ ಮೂಲೆಯಲ್ಲಿ ಇಂತಹ  ಪರಿಸ್ಥಿತಿ ಇದ್ದೇಇದೆ. ಆದರೆ ನಾವು ಆಚರಿಸಬಹುದಾದ ಎಷ್ಟೋ ಹೆಮ್ಮೆಯ ವಿಷಯಗಳು ಇವೆ. ಭಾರತದ ಹಿರಿಮೆ ಗರಿಮೆಯ ಬಗ್ಗೆ ಮಾತಾಡಲು ನಾವು ಹಂಜರಿದಿದ್ದರೆ ನಾವು ಎಲ್ಲೇ ಇದ್ದರೂ  ಅದೇ ನಮ್ಮನ್ನು ಮತ್ತಷ್ಟು ಭಾರತದ ಸಮೀಪ ಕರೆದೊಯ್ಯುತ್ತದೆ. 
ಈಗ ಪ್ರತಿಬಾರಿ ಈ ಹಾಡು ಕೇಳಿದಾಗ ನನಗೆ ನಮ್ಮ ಶಾಲೆಯ ಆ ಅಮೃತ ದಿನಗಳು ಅಜಾದಿಯ ಮಹೋತ್ಸವ ಎಲ್ಲಾ ಕಣ್ಣ ಮುಂದೆ ಬರುತ್ತದೆ. ಭಾರತದ ಮೇಲೆ ಮತ್ತಷ್ಟು ಪ್ರೀತಿ ಗೌರವ ಹೆಚ್ಚಾಗುತ್ತದೆ.

***

ಫೋಟೋ ಕೃಪೆ ಕವಿತ ಕುಮಾರ್

ನುಡಿದಂತೆ ನಡೆವುದು,,.  (ಕವನ)

ಒಬ್ಬ ಕವಿಯ ಕಥೆಗಾರನ ಲೇಖಕನ ಬರಹ ಅವನ ಬದುಕಿನ ವಿಸ್ತರಣೆಯಷ್ಟೆ. ಲೇಖಕನ ಬದುಕನ್ನು ಬರಹವನ್ನು ಬೇರ್ಪಡಿಸದೆ ಒಟ್ಟಾಗಿ ಗ್ರಹಿಸಬೇಕು ಎನ್ನುವುದು ಸಾರ್ವತ್ರಿಕ ಅಭಿಪ್ರಾಯ. ಹೀಗಿರುವಾಗ ಆ ಲೇಖಕ 'ಹೇಳುವುದು ಆಚಾರ ಮಾಡುವುದು ಅನಾಚಾರವಾದಾಗ' ಅವನ ಲೇಖನ ತನ್ನ ಮೌಲ್ಯವನ್ನು ಕಳೆದುಕೊಂಡು ಬಿಡುತ್ತದೆ. ಫ್ಯಾಸಿಸ್ಟ್ ಆದ ಹಿಟ್ಲರ್ ತನ್ನ ಕಾಲದ ನಾಜೀ ಜರ್ಮನಿಯನ್ನು  ಕುರಿತು "ಸರ್ವ ಜನಾಂಗದ  ಶಾಂತಿಯ ತೋಟ" ಎಂದು ಕವನ ಬರೆದಿದ್ದರೆ ಅಥವಾ ಕೋಮು ಸೌಹಾರ್ದತೆಯ ಬಗ್ಗೆ ಇಲ್ಲ  ವಿಶ್ವ ಶಾಂತಿಯ ಬಗ್ಗೆ ಮಹಾ ಗ್ರಂಥವನ್ನು ಬರೆದಿದ್ದರೆ ಆ ಕೃತಿ ಸಾಹಿತ್ಯಿಕವಾಗಿ ಎಷ್ಟೇ ಉತ್ಕೃಷ್ಟವಾಗಿದ್ದರೂ ಅದು ಅಸಂಗತವೆಂದು ತಿರಸ್ಕಾರಗೊಳ್ಳುತ್ತಿತ್ತು ಮತ್ತು ಕಸದ ಬುಟ್ಟಿಗೆ ಲಾಯಕ್ಕಾಗುತ್ತಿತ್ತು. ಲೇಖಕನಿಗೆ ಒಂದು ನೈತಿಕ ಹೊಣೆಗಾರಿಕೆ ಇರುತ್ತದೆ. “Practice what you preach” ಎಂಬ ಪುರಾತನವಾದ ಲೋಕೋಕ್ತಿ ತಿಳಿಸುವಂತೆ ಒಬ್ಬ ಕವಿ, ಲೇಖಕ, ಬೋಧಕ, ಧಾರ್ಮಿಕ ಗುರು, ಜನ ನಾಯಕ, ಮತ್ತು  ಜನ ಸಾಮಾನ್ಯರ ನುಡಿ ಮತ್ತು ನಡೆಗಳಲ್ಲಿ ಸಾಮರಸ್ಯವಿರಬೇಕು, ಪ್ರಾಮಾಣಿಕತೆ ಇರಬೇಕು. ಒಂದು ಆದರ್ಶವಿರಬೇಕು ಅಷ್ಟೇ ಅಲ್ಲದೇ ಆ ಆದರ್ಶದ ಪರಿಪಾಲನೆಯಾಗಬೇಕು. ಬದುಕಿನುದ್ದಕ್ಕೂ ಈ ಆದರ್ಶ ಪರಿಪಾಲಿಸುವ ವ್ಯಕ್ತಿ ಮಹಾತ್ಮನಾಗುತ್ತಾನೆ. ಸಮಾಜದ  ನಿರೀಕ್ಷೆ, ಸಾಮಾಜಿಕ ಮೌಲ್ಯಗಳು ಕಾಲ ಕಾಲಕ್ಕೆ ಬದಲಾದರೂ ಮೂಲಭೂತ ಮಾನವೀಯ ಮೌಲ್ಯಗಳು ಬದಲಾಗುವುದಿಲ್ಲ, ಆ ಕಾರಣಕ್ಕಾಗಿಯೇ ಕ್ರಿಸ್ತ, ಬುದ್ಧ ಬಸವಣ್ಣ, ಗಾಂಧಿ ನಮಗೆ ಇಂದಿಗೂ ಪ್ರಸ್ತುತವಾಗಿರುತ್ತಾರೆ. ಬಸವಣ್ಣನವರು 'ನುಡಿದರೆ ಮುತ್ತಿನ ಹಾರದಂತಿರಬೇಕು' ಎಂಬ ವಚನದಲ್ಲಿ "ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮ ದೇವನೆಂತು ಒಲಿಯುವನಯ್ಯಾ" ಎಂದು ಹೇಳಿರುವುದನ್ನು ಇಲ್ಲಿ ನೆನೆಯುವುದು ಸೂಕ್ತ. ಡಾ. ದಾಕ್ಷಾಯಿಣಿ  ಅವರ "ನುಡಿದಂತೆ ನಡೆವುದು" ಎಂಬ ಕವನ ಮೇಲಿನ ವಿಚಾರಗಳ ಬಗ್ಗೆ ಸಂಬಂಧಿಸಿದೆ. ಇತ್ತೀಚಿನ ಕವನಗಳಲ್ಲಿ  ಪ್ರಾಸ ವಿರಳವಾಗಿರುವಾಗ ಪ್ರಾಸತುಂಬಿದ ಈ ಕವಿತೆ ಓದುಗರಿಗೆ ವಿಶೇಷ ಅನುಭವ ನೀಡಿದೆ.   
-	ಸಂಪಾದಕ





ನುಡಿದಂತೆ ನಡೆವುದು,,.  (ಕವನ)

ನುಡಿದಂತೆ ನಡೆಯುವುದು ಬಹು ಕಷ್ಟ,
ಬಾಳ್ವೆ, ಬದುಕು ನಡೆಸಿದರೆಡೆಗೆ, ಅದು ಅದೃಷ್ಟ.

ಕಣಿ ಹೇಳುವವರ ಸಂಖ್ಯೆ ಬಹಳ
ತಕ್ಕಂತೆ ಕುಣಿಯುವವರು ವಿರಳ.

ಕತೆಯಲ್ಲಿ ಬರೆಯಬಹುದು ಪೊಳ್ಳು,
ಬದುಕುವ ರೀತಿಯಲ್ಲಿದ್ದರೂ ಬಹು ಟೊಳ್ಳು.

ಕವನದ ಅಂಚಿಗೂ ಸಲ್ಲುವುದು ಕವಿಗಳ ನ್ಯಾಯ,
ನಡೆನುಡಿಯಲ್ಲಿ ತುಂಬಿದ್ದರೂ ಬರಿ ಅನ್ಯಾಯ.

ಸಿಹಿ, ಸಿಹಿ ನುಡಿಮುತ್ತುಗಳು ಕಾಗದದಲ್ಲಿ,
ಕಹಿ,ಕಹಿ ಕಷಾಯದ ಕಪ್ಪು ಮಾತುಗಳಲ್ಲಿ.

ಪ್ರೀತಿ,ವಿಶ್ವಾಸ, ವಿಧೇಯತೆಯ, ವೈಭವ ಬರಹದಲ್ಲಿ,
ಭೀತಿ, ಹಠ, ಅಸೂಯೆಯ ಆಳದ ಶಂಕೆಯಲ್ಲಿ.

ಅಕ್ಷರಗಳ ನಾಡಿನಲ್ಲಿ ಆದರ್ಶ ಸಾಧನೆಗೆ ಬಹು ಬಣ್ಣನೆ, 
ದೇವಾ ಬರೆದಂತೆ ಬದುಕುವ ಮಾನವನಿಗೆ ಸಿಗಲಿ ಎಲ್ಲಾ  ಮನ್ನಣೆ.

(ಕತೆಗಾರರ, ಕವಿವರ್ಯಯರ ಕ್ಷಮೆ ಕೋರಿ)

ದಾಕ್ಷಾಯಿಣಿ