ಕಪಡೋಕಿಯ ಎಂಬ ವಿಸ್ಮಯ! – ಅನ್ನಪೂರ್ಣಾ ಮತ್ತು ಆನಂದ್ ಬರೆದ ಚಾರಣ ಚಿತ್ರ-ಕಥನ

ಟರ್ಕಿದೇಶದ ಅನಾಟೋಲಿಯಾ (Anatolia) ಪ್ರಾಂತ್ಯದಲ್ಲಿರುವ ಕಪಡೋಕಿಯ (Cappadocia) ಪ್ರಾಂತ್ಯವು ಚಾರಣಿಗರ ಸ್ವರ್ಗವೆಂದರೆ ಅತಿಶಯೋಕ್ತಿಯಾಗದು! ಅಗ್ನಿಪರ್ವತದ ವಿಸ್ಫೋಟ ಮತ್ತು ಹಲವಾರು ಸಹಸ್ರಮಾನ ವರ್ಷಗಳ ಕ್ಷರಣದಿಂದ ಭೂಮಿಯು ಮಾರ್ಪಟ್ಟು ಸಾವಿರಾರು ಕಣಿವೆಗಳ (valley) ಬೀಡಾಗಿದೆ ಈ ಪ್ರಾಂತ್ಯ. ಎಲ್ಲಿ ನೋಡಿದರಲ್ಲಿ ಕಣಿವೆಗಳು, ಕೊರೆದ ಬೃಹದಾಕಾರದ ಬಂಡೆಗಳು, ಹಲವಾರು ಆಕಾರಗಳ ಚಿಮಣಿಗಳ ನೆಲವಾಗಿದೆ. ಈ ಎಲ್ಲ ಭೌಗೋಳಿಕ ಅದ್ಭುತಗಳನ್ನು ಕಾಲ್ನಡಿಗೆಯಲ್ಲಿ ನಡೆದು ಈ ರುದ್ರ ರಮಣೀಯ ಪ್ರದೇಶವನ್ನು ನೋಡಿ ವಿಸ್ಮಿತರಾದೆವು!

ಗೋರೇಮೇ (Goreme) ಮತ್ತು ಉಚೈಸರ್ (Uchisar), ಈ ಪ್ರಾಂತ್ಯದ ಪ್ರಮುಖ ಊರುಗಳು. ಗೋರೇಮೇ ಉಚೈಸರ್-ಗಿಂತ ದೊಡ್ಡ ಊರು ಮತ್ತು ಪ್ರಖ್ಯಾತ ಕೂಡ . ಇಲ್ಲಿ ಉಳಿದುಕೊಂಡು ಸುತ್ತ ಮುತ್ತಲ ಜಾಗಗಳನ್ನು ನೋಡಬಹುದು. ನಮ್ಮದೇ ವಾಹನವಿದ್ದರೆ ಅನುಕೂಲ. ಇಲ್ಲವಾದರೆ ಸಾಕಷ್ಟು ಸ್ಥಳೀಯ ಪ್ರವಾಸಿ ಸಂಸ್ಥೆಗಳು ಬಸ್ಸಿನಲ್ಲಿ ಕರೆದೊಯ್ಯುವ ವ್ಯವಸ್ಥೆ ಇದೆ. ರೆಡ್ ಟೂರ್ ಮತ್ತು ಗ್ರೀನ್ ಟೂರ್ ಮೂಲಕ ಕಪಡೋಕಿಯದ ಪ್ರಮುಖ ಸ್ಥಳಗಳನ್ನು ನೋಡಬಹುದು. ಆದರೆ ಕಣಿವೆಗಳಲ್ಲಿ ನಡೆದು ಹತ್ತಿರದಿಂದ ನೋಡುವ ಅವಕಾಶವಿಲ್ಲ! ಸಮಯದ ಅಭಾವದಿಂದ view point ಗಳಲ್ಲಿ ಬಸ್ ನಿಲ್ಲಿಸುತ್ತಾರೆ, ಅಷ್ಟೇ.

ನಮ್ಮ ಬಳಿ ಕಾರು ಇದ್ದಿದ್ದರಿಂದ ನಾವು ಬಸ್-ಟೂರ್ ತೆಗೆದುಕೊಳ್ಳಲಿಲ್ಲ. ಕಾರಿನಲ್ಲಿ ಕಣಿವೆಗಳ ಬಳಿ ಕಾರು ನಿಲ್ಲಿಸಿ ನಡೆದೆವು. ರಸ್ತೆಗಳು ಬಹಳ ಚೆನ್ನಾಗಿವೆ ಮತ್ತು ಜನರು ಸಂಚಾರಿ ನಿಯಮಗಳನ್ನು ಪಾಲಿಸುತ್ತಾರೆ. ಊರುಗಳಲ್ಲಿ ಸ್ವಲ್ಪ ನುಗ್ಗಾಟವಿದೆ, ಆದರೆ ಹೆದ್ದಾರಿಗಳಲ್ಲಿ ಶಿಸ್ತಿದೆ.

ಉಚೈಸರ್ ಕೋಟೆ (castle) ಬಹಳ ಚೆನ್ನಾಗಿದೆ. ನಮ್ಮ ಹೋಟೆಲಿನಿಂದ ೧೦ ನಿಮಿಷದ ನಡಿಗೆ. ಟಿಕೆಟ್ ತೆಗೆದುಕೊಂಡು ಕೋಟೆಯನ್ನು ಹತ್ತಿ, ಸೂರ್ಯಾಸ್ತವನ್ನು ನೋಡಿದೆವು. ಅಚ್ಚುಕಟ್ಟಾದ ಮೆಟ್ಟಿಲುಗಳಿವೆ. ಹಾಗಾಗಿ ಕಷ್ಟವಿಲ್ಲದೆ ಹತ್ತಬಹುದು. ಮೋಡಗಳಿಲ್ಲದ ದಿನವಾದ್ದರಿಂದ ಸೂರ್ಯಾಸ್ತ ಬಹಳ ಚೆನ್ನಾಗಿ ಕಂಡಿತು.

ಗೋರೇಮೇ ಸುತ್ತ ಬಹಳಷ್ಟು ಕಣಿವೆಗಳಿವೆ: Love Valley, Mushroom Valley, Pigeon Valley – ಆಕಾರಕ್ಕೆ ತಕ್ಕಂತೆ ಹೆಸರು! Red Valley, Rose Valley, White Valley – ಮಣ್ಣಿನ ಬಣ್ಣಕ್ಕೆ ತಕ್ಕಂತೆ ಹೆಸರು! ಕಣ್ಮನ ತಣಿಸುವ ಪ್ರಕೃತಿಯ ವಿಸ್ಮಯ! ಪ್ರತಿಯೊಂದು ಕಣಿವೆಗೂ ಅದರದೇ ಆದ ಅಂದ ಚಂದ ಮತ್ತು ವಿಶಿಷ್ಟತೆ ಇದೆ.

ಕಣಿವೆಗಳಲ್ಲಿ ಬಂಡೆಗಳನ್ನು ಕೊರೆದು, ಮನೆ ಮಾಡಿಕೊಂಡು ಜನರು ಜೀವನ ನಡೆಸುತ್ತಿದ್ದರಂತೆ! ಆ ಮನೆಗಳು ಈಗಲೂ ಇವೆ. ಹಗ್ಗ ಮತ್ತು ಹಗ್ಗದ ಏಣಿಗಳ ಸಹಾಯದಿಂದ ಮನೆಗೆ ಹೋಗುತ್ತಿದ್ದರೇನೋ?

Love Valley-ಗೆ ಪ್ರವೇಶ ಉಚಿತ. ಗೋರೇಮೇ ಊರಿನ ಹೊರಗೆ ರಸ್ತೆಯ ಬದಿ ಕಾರು ನಿಲ್ಲಿಸಿ ಸುಮಾರು ೩ ಗಂಟೆ ನಡೆದೆವು. ಇನ್ನೂ ಹೆಚ್ಚು ನಡೆಯಲಿಚ್ಛಿಸಿವವರು ನಡೆಯಲು ಬಹಳ ಹಾದಿಗಳಿವೆ. ಈ ಹಾದಿ ಬಹಳವೇ ಸಮತಟ್ಟಾಗಿತ್ತು. ಸುಮಾರು ೪೦ – ೫೦ ಮೀಟರ್ ಉದ್ದದ ನೂರಾರು ಚಿಮಣಿಗಳು! ಈ ಕಣಿವೆ ಬಹುಪ್ರಖ್ಯಾತ. ಗೂಗಲಿಸಿದರೆ ಈ ಕಣಿವೆಯ ಚಿತ್ರಗಳು ಅಂತರಜಾಲದಲ್ಲಿ ತುಂಬಿದೆ! ಇಲ್ಲಿ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅವರ ಟೈಗರ್ ೩ ಚಿತ್ರದ ‘ಲೇಕೆ ಪ್ರಭು ಕಾ ನಾಮ್’ ಚಿತ್ರಗೀತೆಯ ಚಿತ್ರೀಕರಣ ನಡೆದಿದೆ.

Mushroom Valley-ಗೆ ಟಿಕೆಟ್ ತೆಗೆದುಕೊಳ್ಳಬೇಕು. ಇಲ್ಲಿನ ಚಿಮಣಿಗಳ ತಲೆ ನಾಯಿಕೊಡೆಯಾಕಾರದಲ್ಲಿದೆ. Love Valley ಅಷ್ಟು ಉದ್ದದ ಚಿಮಣಿಗಳಲ್ಲ ಮತ್ತು ಸಂಖ್ಯೆಯೂ ಕಡಿಮೆ. ಸುಮಾರು ಒಂದೂವರೆ ಗಂಟೆಯಲ್ಲಿ ಎಲ್ಲವನ್ನೂ ನೋಡಲಾಯಿತು.

Pigeon Valley-ಗೆ ಪ್ರವೇಶ ಉಚಿತ. ಇಲ್ಲಿಯ ಚಿಮಣಿಗಳ ತಲೆ ಸ್ವಲ್ಪ ಪಾರಿವಾಳದ ಆಕಾರದಲ್ಲಿದೆ. ಊಹಿಸಿಕೊಳ್ಳಲು ಸ್ವಲ್ಪ ಕಲ್ಪನಾಶಕ್ತಿಯೂ ಬೇಕು. ಉಚೈಸರ್-ನಿಂದ ಪ್ರಾರಂಭವಾಗುವ ಹಾದಿಯನ್ನು ಹುಡುಕಲು ಸ್ವಲ್ಪ ಕಷ್ಟವಾಯಿತು. ಸ್ವಲ್ಪ ಹುಡುಕಾಡಿ, ಕಡೆಗೆ ಸರಿಯಾದ ದಾರಿಯನ್ನು ಹುಡುಕಿ ಕಣಿವೆಯ ಸುತ್ತ ಓಡಾಡಿದೆವು. ಉಚೈಸರ್-ನಿಂದ ಪ್ರಾರಂಭಿಸಿ ಗೋರೇಮೇ ಮುಟ್ಟಿ ಹಿಂದಿರುಗಿದೆವು. ಸುಮಾರು ೬ -೭ km ನಡಿಗೆ. ಇದು ಸ್ವಲ್ಪ ಕಡಿದಾದ ಕಣಿವೆ. ನಡೆಯಲು ಸ್ವಲ್ಪ ಶ್ರಮ ಪಡಬೇಕು. ಕೆಲವೊಂದು ಜಾಗಗಳಲ್ಲಿ ಹಗ್ಗ ಹಿಡಿದುಕೊಂಡು ಇಳಿಯಬೇಕು ಮತ್ತು ಹತ್ತಬೇಕು.

Red/Rose Valley-ಯ ಮಣ್ಣು ತಿಳಿ ಕೆಂಪು/ಕೆಂಪು ಬಣ್ಣದ್ದಾಗಿದೆ. ಗೋರೇಮೇ ಇಂದ ಸ್ವಲ್ಪ ದೂರದಲ್ಲಿರುವ ಕಾವುಸಿನ್ (Cavusin) ಅನ್ನುವ ಊರಿನ ಹತ್ತಿರ ಕಾರು ನಿಲ್ಲಿಸಿ ನಡಿಗೆ ಶುರು ಮಾಡಿದೆವು. ತಪ್ಪು ಕೈಮರದಿಂದ ಸ್ವಲ್ಪ ಹಾದಿ ತಪ್ಪಿ, ಜಾಸ್ತಿ ನಡೆದು, ಕಡೆಗೆ ಸರಿಯಾದ ದಾರಿಯಲ್ಲಿ ಹೋದೆವು. Rose Valley ನೋಡಲು ಹೋಗಿ, ದಾರಿ ತಪ್ಪಿ, ಕಡೆಗೆ Rose ಮತ್ತು Red Valley ಎರಡನ್ನೂ ನೋಡಿದೆವು. ಸುಮಾರು ೧೪ ಕಿಮಿ ನಡಿಗೆ! ಈ ಹಾದಿ ಬಹಳ ಕಡಿದಾಗಿತ್ತು ಮತ್ತು ಜಾರಿಕೆ ಕೂಡ! ನೆತ್ತಿಯ ಮೇಲಿನ ಸೂರ್ಯನ ಝಳ ಇನ್ನಷ್ಟು ತೊಂದರೆ ಕೊಟ್ಟಿತೆಂದರೆ ತಪ್ಪಾಗಲಾರದು. ಕಡೆಗೆ ಸುಮಾರು ೫ ಘಂಟೆಗಳ ಕಾಲ ನಡೆದಿದ್ದೆವು!

ನಮ್ಮ ಹಾಗೆ ದಾರಿ ತಪ್ಪಿ ಬಹಳಷ್ಟು ಜನ ನಮ್ಮೊಂದಿಗಿದ್ದಿದ್ದು, ನಾವೊಬ್ಬರೆ ಅಲ್ಲ ಎನ್ನುವ ಸಮಾಧಾನ ಕೊಟ್ಟಿತು. ಈ ಕಣಿವೆಯಲ್ಲಿ ನಮಗೆ ಅತ್ಯಂತ ರಮಣೀಯ ದೃಶ್ಯಗಳನ್ನು ನೋಡುವ ಅವಕಾಶ ಸಿಕ್ಕಿತು. Breathtaking views ಅನ್ನಬಹುದು. Rose Valley-ಇಂದ Red Valley-ಗೆ ಹೋದರೆ ಪ್ರವೇಶ ಉಚಿತ. ವಿರುದ್ಧ ದಿಕ್ಕಿನಲ್ಲಿ ಹೋದರೆ ಟಿಕೆಟ್ ತೆಗೆದುಕೊಳ್ಳಬೇಕು! ಕೆಲವು ಕಡೆ ಚಾರಣದ ಹಾದಿ ಬಹಳ ಕಡಿದಾಗಿದೆ. ಜಾರಿಕೆ ಕೂಡ !! ಒಳ್ಳೆಯ trekking shoes ಬೇಕೇ ಬೇಕು . walking poles ಇದ್ದರೆ ಇನ್ನೂ ಉತ್ತಮ.

ಕೆಲವಕ್ಕೆ ಪ್ರವೇಶ ಶುಲ್ಕವಿದೆ, ಮತ್ತೆ ಕೆಲವು ಉಚಿತ. ಮೂರು ದಿನದ ಪಾಸ್ ತೆಗೆದುಕೊಂಡರೆ ಸ್ವಲ್ಪ ಕಡಿಮೆ ವೆಚ್ಚದಲ್ಲಿ ಬಹಳಷ್ಟು ಜಾಗಗಳನ್ನು ನೋಡಬಹುದು. ಈ ಪಾಸ್-ನಲ್ಲಿ ಕೆಲವು ಕಣಿವೆಗಳಿಗೆ, ಕೆಲವು ಸಂಗ್ರಹಾಲಯಗಳಿಗೆ ಮತ್ತು ಕೆಲವು ಭೂಗತ (underground) ನಗರಗಳಿಗೆ ಪ್ರವೇಶವಿದೆ.

ಕಪಡೋಕಿಯ ಪ್ರಾಂತ್ಯದಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಭೂಗತ ನಗರಗಳಿವೆ. ಡೆರಿನ್-ಕುಯು (Derinkuyu) ಮತ್ತು ಕಾಯ್ಮಲ್ಕಿ (Kaymakli) ಎರಡು ಸುಪ್ರಸಿದ್ಧವಾದವು. ಉಚೈಸರ್-ನಿಂದ ಸುಮಾರು ೨೦ ಕಿಮಿ ದೂರದಲ್ಲಿ Kaymakli ಮತ್ತು ೩೦ ಕಿಮಿ ದೂರದಲ್ಲಿ ಡೆರಿನ್-ಕುಯು. ಮೊದಲ ಶತಮಾನದಲ್ಲಿ ನಿರ್ಮಿಸಿರುವ ಈ ಭೂಗತ ನಗರಗಳು ಈಗಲೂ ಸುಸ್ಥಿತಿಯಲ್ಲಿವೆ. ಯುದ್ಧಗಳಿಂದ ರಕ್ಷಣೆ ಪಡೆಯಲು ನಿರ್ಮಿಸಿದ ಈ ನಗರಗಳಲ್ಲಿ ಸುಮಾರು ೨೦೦೦೦ ಜನ, ಅವರ ಹಸುಕರುಗಳೆಲ್ಲ ತಿಂಗಳುಗಟ್ಟಲೆ ಇರುತ್ತಿದ್ದರಂತೆ! ಡೆರಿನ್-ಕುಯುನಲ್ಲಿ ೮ ಮಾಳಿಗೆಗಳಿವೆ, ಭೂಮಿಯ ಕೆಳಗೆ! ಶಾಲೆ, ಚರ್ಚು, ಅಡಿಗೆಮನೆ, ಕೊಠಡಿಗಳು, wine cellar ಎಲ್ಲ ಇದೆ! ಗಾಳಿಯಾಡಲು ಮೇಲಿನಿಂದ ಕೆಳಗಿನವರೆಗೂ ಚಿಮಣಿ ಕೂಡ ಇದೆ. ಶೌಚಕ್ಕೆ ಏನು ಮಾಡ್ತಿದ್ರೋ ದೇವರಿಗೇ ಗೊತ್ತು!

ಇಹ್ಲಾರ (Ihlara ) ಕಣಿವೆ ಉಚೈಸರ್-ನಿಂದ ೭೦ ಕಿಮಿ ದೂರವಿದೆ. ಮೇಲೆ ಹೆಸರಿಸಿರುವ ಕಣಿವೆಗಳಿಗಿಂತ ತುಂಬಾ ಭಿನ್ನವಾಗಿದೆ. ಹಸ್ಸನ್ ಪರ್ವತದಿಂದ ಹಿಮ ಕರಗಿ ನದಿ ಹರಿಯುವುದರಿಂದ ಇಲ್ಲಿ ಸಸ್ಯ ಸಂಪತ್ತು ಹೇರಳವಾಗಿದೆ. ಸುಮಾರು ೧೪ ಕಿಮಿ ನಡಿಗೆಯ ದಾರಿ ಇದೆ. ನದಿಯ ಪಕ್ಕದಲ್ಲೇ, ಎರಡೂ ಕಡೆ ಸುವ್ಯವಸ್ಥಿತ ಹಾದಿ. ಅಲ್ಲಲ್ಲಿ ಕುಳಿತುಕೊಳ್ಳಲು ಬೆಂಚುಗಳು, ಟೀ/ಹಣ್ಣಿನ ರಸ ಮಾರುವ ಅಂಗಡಿಗಳು, ಶೌಚಾಲಯಗಳ ಸೌಲಭ್ಯವಿದೆ.

ಅಕ್ಸಾರ್ಸೆ (Aksaray) ಇಂದ ಇಹ್ಲಾರದವರೆಗೂ ಸುಮಾರು ೧೪ ಕಿಮಿ ದೂರದ ಹಾದಿ. ನಾವು ಬಿಲಿಸಿರ್ಮಾ (bilisirma) ಎಂಬ ಊರಲ್ಲಿ ಕಾರು ನಿಲ್ಲಿಸಿ, ೭ km ನಡೆದು ಇಹ್ಲಾರ ತಲುಪಿ, ಅಲ್ಲಿ ಸ್ಥಳೀಯ ರೆಸ್ಟಾರಂಟಿನಲ್ಲಿ ನಿಜವಾದ ಟರ್ಕಿಷ್ ಊಟ ಮಾಡಿ ಮತ್ತೆ ೭ km ನಡೆದು ಕಾರು ತಲುಪಿ ಹಿಂದಿರುಗಿದೆವು, ಒಟ್ಟು ೪ ಗಂಟೆಗಳ ಹಾದಿ. ಈ ಕಣಿವೆಯಲ್ಲಿ ಹಲವಾರು ಮಾನವ ನಿರ್ಮಿತ ಗುಹೆಗಳು ಹಾಗೂ ಗುಹೆಗಳಲ್ಲಿ ಈಗರ್ಜಿಗಳು ಇವೆ. ಈಗರ್ಜಿಗಳಲ್ಲಿನ ಬಣ್ಣ ಬಣ್ಣದ ಚಿತ್ತಾರಗಳು ಈಗಲೂ ಉಳಿದಿವೆ.

ಇಷ್ಟೆಲ್ಲಾ ನಡೆದಮೇಲೆ ಕೈ ಕಾಲುಗಳಿಗೆ ವಿಶ್ರಾಂತಿ ಕೊಡಲು ಟರ್ಕಿಷ್ ಹಮಾಮಿ ಒಂದು ಒಳ್ಳೆಯ ಸಾಧನ. ಮೈ, ಕೈಗಳಿಗೆ ಎಣ್ಣೆ ತೀಡಿ, ಮಸಾಜ್ ಮಾಡಿ, sauna ನಲ್ಲಿ ಕೂರಿಸಿ ಬೆವರಿಳಿಸಿ, ಸೋಪಿನ ನೊರೆ ನೊರೆಯಲ್ಲಿ ಮುಳುಗಿಸಿ ಸ್ನಾನ ಮಾಡಿಸಿಕೊಳ್ಳುವ ಐಷಾರಾಮ ಯಾರಿಗೆ ಬೇಡ!

Hot air ಬಲೂನ್ ಗಳಿಗೆ ಕಪಡೋಕಿಯ ಬಹಳ ಪ್ರಸಿದ್ಧ. ಬೆಳಗಿನ ಜಾವ ೫ ಘಂಟೆಗೆ ಹೊರಟು, ೬ ಘಂಟೆಗೆ ಬಲೂನಿನ ಬುಟ್ಟಿಗಳಲ್ಲಿ ನಿಂತು, ನಿಧಾನವಾಗಿ ಗಾಳಿಯಲ್ಲಿ ತೇಲುತ್ತಾ, ಮೇಲೇರುವ ನೂರಾರು ಬಲೂನ್ ಗಳನ್ನು ನೋಡುವುದೇ ಒಂದು ಆನಂದ, ವಿಸ್ಮಯ! ಸುತ್ತ ಮುತ್ತ ನಡೆದು ನೋಡಿದ valley ಗಳನ್ನು ಮೇಲಿನಿಂದ, ಹಕ್ಕಿಯಂತೆ ನೋಡುವ ಮಜವೇ ಬೇರೆ! Quad bike ride, range rover ride, ಕುದುರೆ ಸವಾರಿ, microlight flying – ಹೀಗೆ ಹಲವು ಹತ್ತಾರು ಚಟುವಟಿಗೆಗಳಿಗೆ ಅವಕಾಶವಿದೆ .

ಇದ್ದ ಏಳು ದಿನಗಳಲ್ಲಿ ತಾಪಮಾನ ೧೭ರಿಂದ ೨೭ ಡಿಗ್ರಿ ಸೆಲ್ಸಿಯಸ್ ತಲುಪಿತ್ತು! ಆದರೆ ಬೆಳಿಗ್ಗೆ ಮತ್ತು ರಾತ್ರಿ ತಂಪಾಗಿರುತ್ತದೆ. ಒಂದು ಶಾಲ್/ಜಾಕೆಟ್ ಬೇಕೆನಿಸುತ್ತದೆ . ಒಂದೆರಡು ದಿನ ೧೦ -೧೫ ನಿಮಿಷ ಮಳೆಯೂ ಬಂತು. ಬೇಸಿಗೆಯಲ್ಲಿ ೩೨ ಡಿಗ್ರಿವರೆಗೂ ಹೋಗತ್ತದೆ, ಆದರೆ ಅಷ್ಟು ಸೆಖೆ ಆಗಲ್ಲ ಎಂಬುದು ಸ್ಥಳೀಯರ ಅಂಬೋಣ.

ಒಟ್ಟಿನಲ್ಲಿ ಚಾರಣಿಗರು ಸುಲಭವಾಗಿ ೫ -೬ ದಿನಗಳನ್ನ ಕಪಡೋಕಿಯದಲ್ಲಿ ಕಳೆಯಬಹುದು . ಗೋರೇಮೇ ಮತ್ತು ಉಚೈಸರ್ ನಲ್ಲಿ ಬಹಳಷು ಹೋಟೆಲ್ ಮತ್ತು ರೆಸ್ಟೋರೆಂಟುಗಳಿವೆ . ಭಾರತೀಯ ರೆಸ್ಟೋರೆಂಟುಗಳೂ ಇವೆ . ಕೊಮ್ಗೆನೆ (Komgene) ಅನ್ನುವ ಸ್ಥಳೀಯ food chain ನಲ್ಲಿ ‘ದುರಂ’ (veg wrap) ಮತ್ತು ayran (ಮಜ್ಜಿಗೆ) ನಮ್ಮ ಮಧ್ಯಾಹ್ನದ ಊಟವಾಗಿತ್ತು. ಕಡಿಮೆ ವೆಚ್ಚ, ರುಚಿಕರ ಊಟ, ಕಡಿಮೆ ಸಮಯದಲ್ಲಿ! ಪ್ರವಾಸಿಗರ ಜಾಗವಾಗಿರುವುದರಿಂದ, ಎಲ್ಲ ದರಗಳೂ ಯುರೋ ಅಥವಾ ಯುಎಸ್ ಡಾಲರುಗಳಲ್ಲಿ! ಸ್ವಲ್ಪ ದುಬಾರಿ ಎಂದೇ ಹೇಳಬಹುದು. ಆದರೂ ಈ ಪ್ರಕೃತಿಯ ಅದ್ಭುತವನ್ನು ಒಮ್ಮೆ ಖಂಡಿತ ನೋಡಬೇಕಾದ್ದೇ.

ಕಿವಿನೋವು ಮತ್ತು ಕೆಲವು ಕವನಗಳು

ಈ ವಾರದ ಅನಿವಾಸಿಯಲ್ಲಿ ಹೊಸ ಬರಹಗಾರರು, ವಿಜಯ್ ಖುರ್ಸಾಪೂರರ ಕವಂಗಳಿವೆ, ಓದಿ ಹರಸಿ. ಉಮೇಶ ನಾಗಲೋಟಿಮಠ ಈ ಮೊದಲು ಒಂದು ಸಲ ಅನಿವಾಸಿಗೆ ಬರೆದಿದ್ದಾರೆ, ಅವರಿಗೆ ಮತ್ತೊಮ್ಮೆ ಸ್ವಾಗತ. ಇಬ್ಬಾರೂ ಇನ್ನಷ್ಟು ಕನ್ನಡದಲ್ಲಿ ಬರೆಯಲಿ ಎಂದು ಆಶಿಸುತ್ತೇನೆ. – ಸಂ.

ಕಿವಿನೋವು: ಡಾ ಉಮೇಶ ನಾಗಲೋಟಿಮಠ ಬರೆದ ಲೇಖನ

ಲೇಖಕರ ಪರಿಚಯ: ಕಿವಿ ಮೂಗು ಗಂಟಲು ವೈದ್ಯರು, ಹುಬ್ಬಳ್ಳಿಯಲ್ಲಿ ಜನನ, ಬೆಳಗಾವಿಯಲ್ಲಿ ವಿದ್ಯಾಭ್ಯಾಸ . ಭಾರತದಲ್ಲಿ ಸುಮಾರು ೧೭ ವರ್ಷ ಸೇವೆ, ಕಳೆದ ಸುಮಾರು ೯ ವರ್ಷಗಳಿಂದ ಇಂಗ್ಲೆಂಡಿನ ವಿವಿಧ ಆಸ್ಪತ್ರೆಗಳಲ್ಲಿ ಸೇವೆ. MBBS ಮಾಡುವಾಗಿನಿಂದ ಕನ್ನಡ ಬರೆಯುವ ಚಟ. ಹಲವಾರು ಲೇಖನಗಳು/ಪದ್ಯಗಳು ಪತ್ರಿಕೆಯಲ್ಲಿ, ಪುಸ್ತಕಗಳಲ್ಲಿ ಪ್ರಕಟವಾಗಿವೆ , ಆಕಾಶವಾಣಿಯಲ್ಲಿ ಹಲವು ಭಾಷಣ /ಸಂದರ್ಶನ. ವೃತ್ತಿಯಲ್ಲಿ ಇಂಗ್ಲೆಂಡಿನ ರೊವಿನಾ ರೇಯನ್ ಪ್ರಶಸ್ತಿ

ನಾನು ಇಂಗ್ಲೆಂಡಿನ ಚೆಸ್ಟರ್ ಎಂಬ ಊರಿನಲ್ಲಿ ಕಿವಿ, ಮೂಗು ಮತ್ತು ಗಂಟಲು ತಜ್ಞನಾಗಿ ಒಂದು ರವಿವಾರ ಕರ್ತವ್ಯದ ಮೇಲಿದ್ದೆ. ಸಂಜೆ ಸುಮಾರು ೧೦ ವರ್ಷದ ಹುಡುಗ ಕಿವಿನೋವು ಮತ್ತು ಜ್ವರದಿಂದ ದಾಖಲಾಗಿದ್ದ. ಆತನಿಗೆ ಬೇಕಾದ ರೋಗನಿರೋಧಕ ಔಷಧಿ (ಆಂಟಿಬಯೋಟಿಕ್) ಕೊಡುತ್ತಿದ್ದೆವು. ಸಿ.ಟಿ ಸ್ಕ್ಯಾನ್ ಮಾಡಿಸಿದಾಗ ಕಿವಿಯಲ್ಲಿ ಕೀವು ತುಂಬಿಕೊಂಡದ್ದು ಗೊತ್ತಾಗಿ ಆತನಿಗೆ ಶಸ್ತ್ರಕ್ರಿಯೆ (ಆಪೆರೇಷನ್) ಮಾಡುವುದೋ ಅಥವಾ ಇನ್ನೊಂದಿಷ್ಟು ಔಷಧಿ ಕೊಟ್ಟು ಸ್ವಲ್ಪ ಕಾಯ್ದು ನೋಡೋವುದೋ ಎಂಬ ವಿಚಾರದಲ್ಲಿದ್ದೆವು . ರಾತ್ರಿ ಆದರೂ ಆ ಹುಡುಗನ ಕಿವಿನೋವು ಹೆಚ್ಚಾಯಿತೇ ವಿನಹ ಕಡಿಮೆಯಾಗಲಿಲ್ಲ . ಆಗ ನನ್ನ ಬಾಸ್ ನನಗೆ ಆಪೆರೇಷನ್ ಮಾಡಲು ಹೇಳಿದರು. ನಾನು ರಾತ್ರಿ ಸುಮಾರು ೩ ಗಂಟೆಗೆ ಆಪೆರೇಷನ್ ಕೊಠಡಿಗೆ ಹೋಗಿ ಬಾಲಕನಿಗೆ ಅರಿವಳಿಕೆ (anesthesia) ನೀಡಿ ಕಿವಿಯ ಪರದೆಯಲ್ಲಿ ಸಣ್ಣ ಛೇದವನ್ನು ಮಾಡಿದಾಗ ಬಹಳ ಕೀವು ಹೊರಗಡೆ ಬಂದಿತು. ಅಲ್ಲಿಯವರೆಗೆ ಹಾಸಿಗೆ ಹಿಡಿದು ಮಲಗಿದ ಆ ಬಾಲಕ ಮರುದಿನ ಮುಂಜಾನೆ ವಾರ್ಡಿನಲ್ಲಿ ಓಡಾಡತೊಡಗಿದ್ದ. ಆತನ ತಂದೆ ತಾಯಿ ನನಗೆ “ಒಹೋ, ಏನು ಮ್ಯಾಜಿಕ್ ಮಾಡಿದಿರಿ ಡಾಕ್ಟ್ರೇ ?” ಎಂದು ತುಂಬಾ ಖುಷಿಯಿಂದ ಕೇಳಿದರು.

ನಾನು ಮಾಡಿದ ಆ ಚಿಕ್ಕ ಶಸ್ತ್ರಕ್ರಿಯೆಗೆ ಮೈರಿಂಗೋಟೋಮಿ (Myringotomy) ಎನ್ನುತ್ತಾರೆ. ಕಿವಿಯಲ್ಲಿ ಕೀವು ತುಂಬಿ ಒತ್ತಡಲ್ಲಿದ್ದಾಗ ರೋಗಿ ಅತೀವ ಕಿವಿನೋವಿನಿಂದ ಬಳಲುತ್ತಾನೆ. ಔಷಧಿಗಳಿಂದ ಆ ಕೀವು ಕಡಿಮೆಯಾಗದಿದ್ದರೆ ಈ ಆಪೆರೇಷನ್ ಮಾಡಬೇಕಾಗುತ್ತದೆ. ಇಲ್ಲಿ ಸೂಕ್ಷ್ಮದರ್ಶಕ ಯಂತ್ರದಲ್ಲಿ ನೋಡುತ್ತ ಕಿವಿಯ ಪರದೆಯಲ್ಲಿ ಒಂದು ಸಣ್ಣ ಛೇದವನ್ನು ಮಾಡುತ್ತಾರೆ, ಇದರಿಂದ ಆ ಕೀವು ಹೊರಗಡೆ ಬಂದು ನೋವು, ಜ್ವರ ಕಡಿಮೆಯಾಗುತ್ತದೆ. ಈ ಆಪೆರೇಷನ್ ಮಾಡದಿದ್ದರೆ ಹಲವು ಬಾರಿ ಕಿವಿ ಪರದೆ ಕೊಳೆತು ಅದರಲ್ಲಿ ದೊಡ್ಡ ತೂತಾಗುತ್ತದೆ. ನಂತರದಲ್ಲಿ ಈ ತೂತಿನಿಂದ ಕಿವುಡುತನ, ಮೇಲಿಂದ ಮೇಲೆ ಕಿವಿಯ ಸೋಂಕು ಇತ್ಯಾದಿ ತೊಂದರೆಗಳು ಬರುತ್ತವೆ. ಇದರ ಒಟ್ಟು ಸಾರಾಂಶ ಎಂದರೆ ಕಿವಿಯಲ್ಲಿ ಸೋಂಕಾಗಿ ಕೀವು ತುಂಬಿ ಅದು ಔಷಧಿಗೆ ಕಡಿಮೆಯಾಗದಿದ್ದರೆ ಕಿವಿಪರದೆಯಲ್ಲಿ ಛೇದ ಮಾಡಿ ಆ ಕೀವನ್ನು ಹೊರತೆಗೆಯಬೇಕು. ಇದನ್ನು ಯಾಕೆ ಹೇಳುತ್ತಿರುವೆ ಎಂದು ನಿಮಗೆ ಮುಂದೆ ಗೊತ್ತಾಗುತ್ತದೆ.

ನಾನು ಈಗ ಹಲವು ವರ್ಷಗಳ ಹಿಂದೆ ಹೋಗುವೆ. ನಾನು ಬೆಳಗಾವಿಯಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಇದ್ದಾಗಿನಿಂದ ಹಿಡಿದು ಹುಬ್ಬಳ್ಳಿಯಲ್ಲಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕನಾಗಿರುವವರೆಗೆ ನಾನು ನೋಡಿದ್ದೇನೆಂದರೆ ಹಲವಾರು ರೋಗಿಗಳು ಕಿವಿ ನೋವಾದಾಗ ಕಿವಿಯಲ್ಲಿ ಬಿಸಿ ಎಣ್ಣೆ, ಬಿಸಿ ಎಣ್ಣೆಯಲ್ಲಿ ಬಳ್ಳೊಳ್ಳಿ, ಇಲ್ಲವೇ ಬಳ್ಳೊಳ್ಳಿ ಜಜ್ಜಿ ಅದರ ರಸ ಕಿವಿಯಲ್ಲಿ ಹಾಕುವುದು, ಎಣ್ಣೆಗೆ ಜೊತೆಗೆ ಸ್ವಲ್ಪ ಅರಿಶಿಣ – ಹೀಗೆ ಹಲವು ಮನೆ ಮದ್ದು ಮಾಡುತ್ತಿದ್ದರು. ನಮಗೋ ಇದು ಬಲು ವಿಚಿತ್ರವಾಗಿತ್ತು. ಯಾಕೆಂದು ಅವರಿಗೆ ಕೇಳಿದಾಗ ಅವರು ನಮ್ಮ ಅಜ್ಜ, ಅಜ್ಜಿ, ತಾಯಿ ಹೀಗೆ ಮಾಡಿರೆಂದು ಹೇಳಿದಕ್ಕೆ ನಾವು ಮಾಡಿದೆವು ಎನ್ನುತ್ತಿದ್ದರು. ಅವರಾರಿಗೂ ಯಾಕೆ ಎಂದು ಗೊತ್ತಿರಲಿಲ್ಲ, ಆದರೆ ಹಿರಿಯರು ಹೇಳಿದಂತೆ ಮಾಡುತ್ತಿದ್ದರು. ಆ ಹಿರಿಯರನ್ನು ಕೇಳಿದಾಗ ಅವರಿಗೂ ಇದು ಯಾಕೆ ಎಂದು ಗೊತ್ತಿರಲಿಲ್ಲ ಆದರೆ ಇದನ್ನು ಮುಂದುವರೆಸುತ್ತಿದ್ದರು.

ಇದರ ಬಗ್ಗೆ ನಾವು ಸ್ವಲ್ಪ ಅಧ್ಯಯನ/ ಹುಡುಕಾಟ ನಡೆಸಿದೆವು. ನಮಗೆ ಸಿಕ್ಕ ಮಾಹಿತಿ ಬಹಳಷ್ಟು ಕುತೂಹಲಕಾರಿಯಾಗಿತ್ತು. ಆಯುರ್ವೇದದಲ್ಲಿ ಕಿವಿ ನೋವಿನ ಮೂಲವನ್ನು ಹೇಗೆ ಕಂಡು ಹಿಡಿಯುವುದು ಎಂಬ ಬಗ್ಗೆ ಸವಿಸ್ತಾರವಾದ ವಿವರಣೆ ಇದೆ. ಕಿವಿ ನೋವು ಹಲವಾರು ಕಾರಣಗಳಿಂದ ಬರಬಹುದು. ಕೆಲವು ರೋಗಗಳಲ್ಲಿ ಜ್ವರ ಇದ್ದರೆ, ಇನ್ನು ಕೆಲವು ಕಡೆ ನಾಡಿಮಿಡಿತ ಹೆಚ್ಚಾಗಿರುತ್ತದೆ. ಇನ್ನು ಹಲವೆಡೆ ಕಿವಿ ಸ್ವಲ್ಪ ಮಂದವಾಗಿರುತ್ತದೆ. ಇನ್ನು ಹಲವು ಕಡೆ ಕಿವಿ ಹೊರಗೆ ಬಾವು ಕಾಣಿಸುತ್ತದೆ. ಇವುಗಳ ಮೇಲೆ ನಾವು ರೋಗಿಗೆ ಏನಾಗಿದೆ ಎಂದು ಸುಮಾರು ೯೦% ವರೆಗೂ ಸರಿಯಾಗಿ ನಿದಾನಿಸಬಹುದು (ಈ ಕೋವಿಡ್ ಮಹಾಮಾರಿ ನಂತರ ಇಡೀ ಜಗತ್ತಿನಲ್ಲೆಲ್ಲ ವೈದ್ಯರು ಫೋನ್ ಅಥವಾ ಇಂಟರನೆಟ್ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ಈ ತರಹದ ವ್ಯವಸ್ಥೆಯಲ್ಲಿ ಅವರು ಬಹಳಷ್ಟು ಬಾರಿ ಪ್ರಶ್ನೋತ್ತರಗಳ ಮೇಲೆಯೇ ರೋಗವನ್ನು ಗುರುತಿಸುತ್ತಾರೆ.)

ಬೆಳ್ಳೊಳ್ಳಿ ರಸ ಒಂದು ಕೆರೆಟೊಲೈಟಿಕ್ (kerolytic), ಅಂದರೆ ಅದು ಚರ್ಮದ ಹೊರಪದರನ್ನು ಕರಗಿಸುವ ಶಕ್ತಿ ಹೊಂದಿದೆ. ಅರಿಶಿಣ ಒಂದು ಆಂಟಿಸೆಪ್ಟಿಕ್ (antiseptic ), ಅಂದರೆ ರೋಗಾಣುಗಳನ್ನು ನಾಶ ಮಾಡುವ ಶಕ್ತಿ ಹೊಂದಿದೆ. ಈಗ ಆಯುರ್ವೇದದಲ್ಲಿ ಈ ರೀತಿಯ ಕಿವಿಯ ಸೋಂಕಿಗೆ (acute otitis media , not responding to antibiotics ) ಯಾವ ಚಿಕಿತ್ಸೆ ಹೇಳಿದ್ದಾರೆ ಎಂದು ನೋಡೋಣ. ಒಂದು ಪಾತ್ರೆಯಲ್ಲಿ ಎಣ್ಣೆ , ಬಳ್ಳೊಳ್ಳಿ ರಸ/ಬಳ್ಳೊಳ್ಳಿ ,ಅರಿಶಿನ ಹಾಕಿ ಕಾಯಿಸಿ ಆ ಕಾಯ್ದ ಒಂದು ಹನಿ ಎಣ್ಣೆಯನ್ನು ಕಿವಿಯ ಪರದೆಯ ಮೇಲೆ ಹಾಕಬೇಕು. ಇಲ್ಲಿ ರೋಗಿ ಹೇಗೆ ಮಲಗಬೇಕು, ಕಿವಿಯಲ್ಲಿ ಎಣ್ಣೆ ಯಾವ ರೀತಿ ಹಾಕಬೇಕು , ಯಾವ ಸಲಕರಣೆ ಹೇಗೆ ಉಪಯೋಗಿಸಬೇಕೆಂದು ಎಂದು ಸವಿಸ್ತಾರವಾಗಿ ತಿಳಿಸಿದ್ದಾರೆ. ಆ ಕಾಯ್ದ ಎಣ್ಣೆ ಹನಿ ಕಿವಿ ಪರದೆಯ ಮೇಲೆ ಬಿದ್ದ ತಕ್ಷಣ ಹೊರಗಿನ ಪದರು (ಕಿವಿ ಪರದೆಗೆ ೩ ಪದರುಗಳು ಇರುತ್ತವೆ ) ಬೆಳ್ಳೊಳ್ಳಿ ರಸದಿಂದ ಕರಗಿ ಹೋಗಿ ಉಳಿದ ಪದರುಗಳು ಬಿಸಿ ಎಣ್ಣೆಯಿಂದ ಕರಗಿ ಕಿವಿ ಪರದೆಯಲ್ಲಿ ಅತಿ ಸಣ್ಣ ಛೇದವಾಗಿ ಕಿವಿಯ ಒಳಗಿನ ಕೀವು ಹೊರಗೆ ಬರುತ್ತದೆ ಹಾಗು ರೋಗಿಗೆ ನೋವು ತಕ್ಷಣ ಶಮನವಾಗುತ್ತದೆ. ಅದರಲ್ಲಿನ ಅರಿಶಿನ ಕಿವಿಯಲ್ಲಿ ಸೋಂಕು ಮಾಡಿದ ರೋಗಾಣುಗಳ ವಿರುದ್ಧ ಹೋರಾಡುತ್ತದೆ ಹಾಗು ಈ ಎಲ್ಲ ಚಟುವಟಿಕೆ ಹೊರಗಿನ ಸೋಂಕುರಹಿತವಾಗಿ (in sterile condition) ನಡೆಯಲು ಸಹಾಯ ಮಾಡುತ್ತದೆ. ಈಗ ಇದನ್ನು ಮೈರಿಂಗೋಟೋಮಿ (myringotomy ) ಶಸ್ತ್ರ ಕ್ರಿಯೆಗೆ ಹೋಲಿಸಿದಾಗ ಎಲ್ಲವು ಒಂದೇ ಆಗಿದೆ ಅನ್ನಿಸುವುದು. ನಾವು ಇಂದು ಮೈಕ್ರೋಸ್ಕೋಪ್, ಅನಾಸ್ಥೆಸಿಯಾ , ಸ್ಟೆರಿಲೈಸಷನ್ , ಆಂಟಿಸೆಪ್ಟಿಕ್ ಇತ್ಯಾದಿ ಪಾಶ್ಚಿಮಾತ್ಯ ಪದಗಳನ್ನು ಮತ್ತು ವಿಧಾನಗಳನ್ನು ಬಳಸಿ ಆಪೆರೇಶನ್ ಮಾಡುತ್ತೇವೆ. ಆದರೆ ಎರೆಡೂ ಚಿಕಿತ್ಸಾ ಪದ್ಧತಿಗಳಲ್ಲಿ ಇದನ್ನು ಮಾಡುವ ವಿಧಾನ ಬೇರೆ ಇದ್ದರೂ ಚಿಕಿತ್ಸಾ ತತ್ವ ಒಂದೇ ಇದೆ.

ಈ ಚಿಕಿತ್ಸಾ ಪದ್ಧತಿ ಅಪಭ್ರಮಶವಾಗಿ ಜನರು ತಮಗೆ ತೋಚಿದ್ದನ್ನು ಮಾಡುತ್ತಾ ಆಯುರ್ವೇದವನ್ನು ಮೂರಾಬಟ್ಟೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆಯುರ್ವೇದ ಆಧುನಿಕ ಚಿಕಿತ್ಸಾ ಪದ್ದತಿಯ ಅಂಶಗಳನ್ನು ತನ್ನೊಳಗೆ ಕೂಡಿಸಿಕೊಳ್ಳದೆ ಹಳೆಯ ಮುದುಕನಂತೆ ಆಗಿದೆ. ಇನ್ನು ಭಾರತದಲ್ಲಿ ಅಲೋಪಥಿ ಮತ್ತು ಆಯುರ್ವೇದ ವೈದ್ಯರು ಹೊಡೆದಾಡುತ್ತ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಆಯುರ್ವೇದಕ್ಕೆ ಸರಕಾರದ ಪ್ರೋತ್ಸಾಹ, ಸಂಶೋಧನೆಗೆ ಧನ ಸಹಾಯ, ಜನರ ಪ್ರೋತ್ಸಾಹ ಇದಾವುದೂ ಸಿಗದೇ ಅದು ಮುರುಕುಲು ಮನೆಯಲ್ಲಿನ, ಹರಕಲು ಉಟ್ಟ ಮುದಿ ಜಾಣನಂತೆ ಆಗಿದೆ.

ನಾನು ಅಂದು ನನ್ನ ಬಾಸ್ ಅವರಿಗೆ ಈ ಸುಮಾರು ೩-೪ ಸಾವಿರ ವರ್ಷ ಹಳೆಯದಾದ ಆಯುರ್ವೇದ ಚಿಕಿತ್ಸಾ ಪದ್ಧತಿ ಬಗ್ಗೆ ಹೇಳಿ ಕಿವಿಯ ಸೋಂಕಿಗೆ ಯಾವ ರೀತಿ ಚಿಕಿತ್ಸಾ ಪದ್ಧತಿ ಹೇಳಿದ್ದಾರೆ ಎಂದು ವಿವರಿಸಿದೆ. ಆಗ ಅವರು ನನ್ನನ್ನು ಕುರಿತು , “ಹೌದಾ? ‘ಎಂದು ಸಂಶಯದಲ್ಲಿ ಹೇಳಿದರು. ಆಗ ನನಗೆ ಯಾವ ದುಃಖವಾಗಲಿಲ್ಲ. ಏಕೆಂದರೆ ಇದನ್ನು ಮೊದಲು ಅನೇಕ ಭಾರತೀಯರೇ ನಂಬುತ್ತಿಲ್ಲ, ಇನ್ನು ಬಹಳಷ್ಟು ವಿದೇಶಿಜನರ ಬಗ್ಗೆ ಏನು ಹೇಳಬೇಕು? ಇದು ಅವರ ತಪ್ಪು ಅಲ್ಲ. ಏಕೆಂದರೆ ಇದರ ಬಗ್ಗೆ ಬಹಳ ಜನ ತಿಳಿದುಕೊಂಡಿಲ್ಲ. ಭಾರತದಲ್ಲಿ ನಕಲಿ ಆಯುರ್ವೇದ ಪಂಡಿತರು ಬಹಳವಾಗಿದ್ದು ಜನರಿಗೆ ಬಾರಿ ಮೋಸ ಮಾಡುತ್ತಾರೆ. ಇದರಿಂದ ಜನ ಆಯುರ್ವೇದದಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ. ಇದನ್ನು ಸುಧಾರಿಸುವುದೆಂದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವ ಕೆಲಸ.

ಇನ್ನು ಅನೇಕರಿಗೆ ಪ್ಲಾಸ್ಟಿಕ್ ಸರ್ಜರಿ ಜಗತ್ತಿಗೆ ಯಾವ ದೇಶದಿಂದ ಬಂತು ಎಂದು ಕೇಳಿದರೆ ಗೊತ್ತಿಲ್ಲ ಎಂಬ ಉತ್ತರವೇ ಬರುತ್ತದೆ. ಇನ್ನು ಹಲವು ಭೂಪರು ಇಂಗ್ಲೆಂಡ್, ಅಮೇರಿಕಾ, ಯುರೋಪ್ ದೇಶಗಳು ಎಂದೆಲ್ಲ ಹೇಳಬಹುದು. ಇದು ಭಾರತದಿಂದ ಜಗತ್ತಿಗೆ ಕಲಿಸಲ್ಪಟ್ಟಿತು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಮೂಗಿನ ಪ್ಲಾಸ್ಟಿಕ್ ಸರ್ಜರಿ (rhinoplasty ) ಭಾರತದ ಕರ್ನಾಟಕದಿಂದ (ಮೊದಲಿನ ಮೈಸೂರು) ಇಂಗ್ಲೆಂಡಿಗೆ ಹೋಯಿತು. ಈ ಶಸ್ತ್ರಕ್ರಿಯೆಯನ್ನು ಭಾರತದ ಅನೇಕ ಪ್ರದೇಶಗಳಲ್ಲಿ ಮಾಡುತ್ತಿದ್ದರು. ಇದಲ್ಲದೆ ಇನ್ನು ಅನೇಕ ಶಸ್ತ್ರಕ್ರಿಯೆ ನಡೆಯುತ್ತಿದ್ದವು. ೧೭೯೪ರಲ್ಲಿ ಲಂಡನ್ನಿನ ಜಂಟಲ್ಮನಾಸ್ ಮ್ಯಾಗಜಿನ್ ದಲ್ಲಿ ಪ್ರಕಾಶನವಾದ ಒಂದು ಲೇಖನದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಒಬ್ಬ ನೌಕರನ ಕತ್ತರಿಸಲ್ಪಟ್ಟ ಮೂಗನ್ನು ಕರ್ನಾಟಕದಲ್ಲಿ ಈ ಪ್ಲಾಸ್ಟಿಕ್ ಸರ್ಜರಿ ಮೂಲಕ ಪೂರ್ತಿ ಸರಿ ಮಾಡಲಾದ ಬಗ್ಗೆ ವಿವರಿಸಿದ್ದಾರೆ . ಈ ಶಸ್ತ್ರ ಚಿಕಿತ್ಸೆ ನೋಡಿದ ಬ್ರಿಟಿಷ್ ಸ್ವಾಸ್ಥ್ಯ ಅಧಿಕಾರಿಗಳು ತಮ್ಮ ಸರಕಾರಕ್ಕೆ ಇದನ್ನು ತಿಳಿಸಿದಾಗ ಆಗಿನ ಬ್ರಿಟಿಷ್ ಸರಕಾರ ಒಂದು ವೈದ್ಯರ ತಂಡವನ್ನು ಭಾರತಕ್ಕೆ ಕಳುಹಿಸಿ ಈ ಶಸ್ತ್ರಕ್ರಿಯೆ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಿ ಬರಲು ಹೇಳಿದರು. ತದನಂತರ ಪ್ಲಾಸ್ಟಿಕ್ ಸರ್ಜರಿ ಯೂರೋಪಿನಲ್ಲಿ ಬೆಳೆಯಿತು ಹಾಗು ದುರದೃಷ್ಟದಿಂದ ಭಾರತದಲ್ಲಿ ಅಳಿಯಿತು. ಇದರ ಬಗ್ಗೆ ನಾನು ಕೇಳಿದ್ದೆ, ಅದರ ಬಗ್ಗೆ ನೋಡುವ ಭಾಗ್ಯ ನನಗೆ ಲಂಡನ್ನಿನ ವೆಲ್ ಕಮ್ ವಸ್ತುಸಂಗ್ರಹಾಲಯದಲ್ಲಿ ಲಭಿಸಿತು. ನಾನು ಆ ಮ್ಯೂಸಿಯಂಗೆ ಭೆಟ್ಟಿ ಕೊಟ್ಟಾಗ ಅಲ್ಲಿ ಆಯುರ್ವೇದದ ಬಗ್ಗೆ ಪ್ರದರ್ಶನವೊಂದು ನಡೆಯುತ್ತಿದ್ದದ್ದು ಕಾಕತಾಳೀಯ. ಅಲ್ಲಿ ಈ ಪ್ಲಾಸ್ಟಿಕ್ ಸರ್ಜರಿ ಹೇಗೆ ಇಂಗ್ಲೆಂಡಿಗೆ ಬಂದಿತು ಎಂದು ವಿವರಿಸಿದ್ದಾರೆ. ಅಲ್ಲಿ ಹಾಕಿರುವ ಭಾರತೀಯ ಆಯುರ್ವೇದ ಬಗ್ಗೆ ಮಾಹಿತಿ ಮತ್ತು ಫೋಟೋಗಳನ್ನೂ ನೋಡಿದಾಗ ನನ್ನ ಮನಸ್ಸು ಹೊಯ್ದಾಡಿತು. ಒಂದಡೆ ಖುಷಿ, ಒಂದೆಡೆ ದುಃಖ ಆಗುತ್ತಿತ್ತು. ಜಗತ್ತಿಗೆ ಜ್ಞಾನ ದೀಪ ಹಚ್ಚಿ ತನ್ನ ಮನೆಯನ್ನೇ ಕತ್ತಲಾಗಿಸಿಕೊಂಡಿತು ನನ್ನ ಭಾರತ. ಅದಕ್ಕೆ ಅನೇಕ ಕಾರಣಗಳಿವೆ, ಅವುಗಳನ್ನು ಇಲ್ಲಿ ಚರ್ಚಿಸುವುದು ಈ ಲೇಖನದ ಚೌಕಟ್ಟನ್ನು ದಾಟುತ್ತದೆ.

ವಿಜಯ್ ಖುರ್ಸಾಪೂರ ಬರೆದ ಕೆಲವು ಕವಿತೆಗಳು

ಕವಿಯ ಪರಿಚಯ: ವೃತ್ತಿಯಿಂದ ಏರೋಸ್ಪೇಸ್ ಇಂಜಿನಿಯರ್, ಕಳೆದ ೧೦ ವರ್ಷಗಳಿಂದ ಇಂಗ್ಲೆಂಡ್ ನೆಲೆ, ಹುಟ್ಟಿದ ಊರು ಶಿಗ್ಗಾವಿ (ಹಾವೇರಿ ಜಿಲ್ಲೆ), ಓದಿದ್ದು ಧಾರವಾಡ, ಗದಗ, ಇಲ್ಲಿವವರೆಗೆ ಬೆಂಗಳೂರು, ಹೈದರಾಬಾದ ಮತ್ತು ಕೆನಡಾದಲ್ಲಿ ನೆಲೆಸಿ, ೪ -೫ ಏರೋಸ್ಪೇಸ್ ಕಂಪನಿಗಳಲ್ಲಿ ಕೆಲಸ. ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯನ್ನ ಓದುವದರಲ್ಲಿ ಆಸಕ್ತಿ ಮತ್ತು ಕೆಲವು ಚಿಕ್ಕ ಕವನಗಳನ್ನ ಬೆರೆಯುವ ಪ್ರಯತ್ನ.

ಹೊಸ ಗಾಳಿ

ಬಿಸಿಗಾಳಿಯ ಉಸಿರ ಈ ಜೀವಕೆ
ತಂಗಾಳಿಯಾಗಿ ನೀ ಬಾ
ಹೊಸ ಬಯಕೆಯ ಹೊಸ ಕನಸನ ನೀ ಹೊತ್ತು ತಾ

ಕಾಮೋ೯ಡ ಕವಿದ ಈ ಮನಕೆ
ಬೆಳಕಾಗಿ ನೀ ಬಾ
ಹೊಸ ಗುರಿಯ ಹೊಸ ಹುರುಪನ ನೀ ಹೊತ್ತು ತಾ

ಭಾರವಾದ ಹೃದಯದ ಈ ಗೂಡಿಗೆ
ಹರುಷವಾಗಿ ನೀ ಬಾ
ಹೊಸ ದಾರಿಯ ಹೊಸ ತಿರುವನ ನೀ ಹೊತ್ತು ತಾ

ಜಡವಾದ ಈ ದೇಹಕೆ
ಚೆೃತನ್ಯ ವಾಗಿ ನೀ ಬಾ
ಹೊಸ ಶೋಧನೆಯ ಹೊಸ ವಿವೇಚನೆಯನ ನೀ ಹೊತ್ತು ತಾ

ಸದಾ ಅರಸುತಿದೆ ಈ ಮನ ಹೊಸ ತನಕ್ಕಾಗಿ ಹೊಸ ಗಾಳಿಗಾಗಿ

ಹೊದಿಕೆ

ಆಳುವವನಿಗೊಂದು ಹೊದಿಕೆ
ಅಳುವವನಿಗೊಂದು ಹೊದಿಕೆ
ಬದುಕಿಗೆ ಏನೆಲ್ಲ ಹೊದಿಕೆ

ಕಾಯುವನಿಗೊಂದು ಹೊದಿಕೆ
ಕದೀಮನಿಗೊಂದು ಹೊದಿಕೆ
ಈ ಬದುಕಿಗೆ ಏನೆಲ್ಲ ಹೊದಿಕೆ

ಮನಸ್ಸಿಗೊಂದು ಹೊದಿಕೆ
ಮಾನಕೊಂದು ಹೊದಿಕೆ
ಬದುಕಿಗೆ ಏನೆಲ್ಲ ಹೊದಿಕೆ

ಧನಿಕನಿಗೊಂದು ಹೊದಿಕೆ
ದಾನಿಗೊಂದು ಹೊದಿಕೆ
ಈ ಬದುಕಿಗೆ ಏನೆನಿಲ್ಲ ಹೊದಿಕೆ

ಹೊದಿಕೆ ಇಂದ ಹೊರಬಂದಾಗ
ಸಿಗುವುದೇ ಆ ಹೊದಿಕೆಗಿದ್ದ
ಆಲಿಕೆ?

ಹೊದಿಕೆಯ ಮೇಲೆದ್ದ ಹೊದಿಕೆಗಳ
ಬಿಚ್ಚಲೊಲ್ಲೆಯಾ ನಿಜವಾಗಿ ನಿನ್ನ
ತಿಳಿಯೋದಕೆ

ಮಜಾ

ಮೊದಲ ಮಳೆ ಸುರಿಯುವಾಗ
ಬೆಚ್ಚಗೆ ಮನೆಯಲ್ಲಿ ಕೂರುವದಕ್ಕಿಂತ
ಹೊರಗಡೆ ಮಳೆಯಲಿ ನೆನೆಯುವುದೇ ಮಜಾ
ಆ ಮಣ್ಣಿನ ಸುವಾಸನೆಯಲಿ ಮನವು
ವಿಲೀನವಾಗುವಾಗ

ಬೆಳಿಗ್ಗೆ ಮೊಬೈಲ್ನಲ್ಲಿ ಅಲರಾಮು ಆಗುವಾಗ
ತಟ್ಟನೇ ಎದ್ದೇಳುವುದಕ್ಕಿಂತ
ಸ್ನೂಜ್ ಮಾಡಿ ಮತ್ತೆ ಮತ್ತೆ ನಿದ್ದೆಗೆ ಜಾರುವುದೇ ಮಜಾ
ಕನಸಿನಲ್ಲಿ ಹೊಸ ಕನಸೊಂದು ಶುರುವಾಗುವಾಗ

ಸಿನೆಮಾ ನೋಡೋಕೆ ಹೋದಾಗ
ಸಬ್ಯರ ಜೊತೆ ಬಾಲ್ಕನಿಯಲ್ಲಿ ಕೂರೋದಕ್ಕಿಂತ
ಗಾಂಧಿ ಕ್ಲಾಸ್ ನಲ್ಲಿ ಕೂರೋದೇ ಮಜಾ
ಹರುಷದ ಶಿಳ್ಳೆಗಳಲ್ಲಿ ಮನಸ್ಸು ಯವ್ವನಕ್ಕೆ ಜಾರುವಾಗ

ಭರವಸೆ

ಬಿಸಿಲಿಗೆ ಬಸವಳಿದ ತಾವರೆ
ಮುದುಡುತಿದೆ, ಜಲವನರಿಸಿ,
ಕೈ ಚಲ್ಲಿದೆ ಮೆಲ್ಲಗೆ
ಸುರಿಯಬಾರದೇ, ಮಲ್ಲಿಗೆಯ ಮಳೆ
ಅರಳಬಾರದೇ ಮೆಲ್ಲಗೆ, ಭರವಸೆಯ ಕಳೆ

ಬೆಳಕಿನೆಡೆಗೆ

ಮರುಕಳಿಸಿದ ಬೆಳಕಿನ ಬಾನ,
ಹರಡಿದೆ ಕಲರವಗಳ ಗಾನ.
ಮೌನದಲಿ ಅರಿಯುವ ಧ್ಯಾನ,
ಸವಿದಂತೆ ಹಾಲು ಜೇನ.
ಹರಿಯುವ ತಿಳಿನೀರಿನ ಸ್ನಾನ,
ಈ ಜಗದ ಮಧುರ ದಾನ.
ಇತಿ ಮಿತಿಯ ಬದುಕುವ ತನ
ಇರಿಸುವದೇ ಕೇಳಲು? ಇನ್ನೇನ