ವಿಜಯ್ ಖುರ್ಸಾಪೂರ, ವೃತ್ತಿಯಿಂದ ಏರೋಸ್ಪೇಸ್ ಇಂಜಿನಿಯರ್, ಕಳೆದ ೧೦ ವರ್ಷಗಳಿಂದ ಇಂಗ್ಲೆಂಡ್-ನಲ್ಲಿ ನೆಲೆ, ಹುಟ್ಟಿದ ಊರು ಶಿಗ್ಗಾವಿ (ಜಿಲ್ಲೆ ಹಾವೇರಿ ), ಓದಿದ್ದು ಧಾರವಾಡ-ಗದಗ, ಬೆಂಗಳೂರು, ಹೈದರಾಬಾದ ಮತ್ತು ಕೆನಡಾದಲ್ಲಿ ನೆಲೆಸಿ, ೪ -೫ ಏರೋಸ್ಪೇಸ್ ಕಂಪನಿಗಳಲ್ಲಿ ಕೆಲಸ. (ಚಿತ್ರಕಾರ: ಎಐ)
ಕರ

ಕರವೆಂಬ ಕರು
ಬೆಳೆದು ಹೋರಿಯಾಗಿ
ಖರೀದಿಗೆ ಹೊರೆಯಾಗಿ
ಹೊಟ್ಟೆಗೆ ಬಟ್ಟೆಗೆ
ಕತ್ರಿ ಹಾಕುತ್ತಿದೆ
ತರತರವಾದ ತೆರಿಗೆಗಳು
ಹುಟ್ಟುತ್ತಲೇ ಇವೆ
ಮಧ್ಯಮ ವರ್ಗದವರ
ಕನಸುಗಳು ಮಧ್ಯದಲ್ಲೇ
ಮೊಟಕುಗೊಳ್ಳುತ್ತಲೇ ಇವೆ
ಸುಂಕದ ಭಾರಗಳು
ಸುಖವನ್ನು ಪ್ರಶ್ನೆಯಾಗಿಸಿ
ದುಡಿದ ಕೈಗಳನು
ಮತ್ತಷ್ಟು ಹಿಂಡುತಿವೆ
ಪೊಗದಿಯ ಏರು ಪೆರು
ಸರಕಾರದ ಬೊಕ್ಕಸ ತುಂಬಲು
ಮಾಡಿಕೊಂಡ
ಪಗಡೆ ಆಟವಾಗಿ ಮಾರ್ಪಟ್ಟಿವೆ
ಅಭಿವೃದ್ಧಿ ಮಾತ್ರ ವೃದ್ಧನಾಗಿ
ಕೋಲು ಹಿಡಿದು ಕುಂಟುತಿದೆ
ಕೈಲಾಗದವನ ಕೂಗು

ಕೈಲಾಗದವನ ಕೂಗು ಕೇಳುವರಾರು?
“ಕೈಲಾಗದವನು” ಎಂಬುದು ಬರಿ ಮಾತಷ್ಟೇ.
ದುಡಿಯುವ ಕೈಗಳುಂಟು,
ಕುಟುಂಬಕ್ಕೆ ತ್ಯಾಗ ಮಾಡಿರುವುದು ಉಂಟು,
ಆದರೂ ಇವನು ಕೈಲಾಗದವನೇ ?
ಏಕೆಂದರೆ?
ದೇಶ-ದೇಶಗಳು ತಮ್ಮ ಪ್ರತಿಷ್ಠೆಗೆ,
ಆಧಿಕಾರಕ್ಕೆ ಹೊಡೆದಾಡುವಾಗ
ಅವನ ಕಣ್ಣಿಗೆ ಇದು ಕ್ಷುಲ್ಲಕ.
ಏಕೆಂದರೆ ಅವನಿಗೆ ಏನೇ ಇದ್ದರೂ
ದುಡಿದು ತಿನ್ನುವುದಷ್ಟೇ ಇಷ್ಟ-ಕಷ್ಟ.
ಬುತ್ತಿಗೆ ಶ್ರೇಷ್ಠತೆ ಬೇಕಾಗಿಲ್ಲ,
ಹಸಿವು ನೀಗಿದರೆ ಸಾಕು.
ಬಟ್ಟೆಗೆ ಕೊಳೆ ಹತ್ತಿದರೂ ಪರವಾಗಿಲ್ಲ,
ಮೈ ಮುಚ್ಚಿದರೆ ಸಾಕು.
ಇದನ್ನರಿತ ಮೇಲಿನವರು
ಮತ್ತಷ್ಟು ಇವರನ್ನೇ ಪರೀಕ್ಷೆಗೆ
ಒಡ್ಡುವವರೇ ಎಲ್ಲ.
ನಾಯಕ /ಖಳನಾಯಕ

ಜಗದಲ್ಲಿ ಕದನಗಳು
ಕಮ್ಮಿ ಇಲ್ಲ; ಹಿಂದೇನೂ
ಇದ್ದವು,
ಬಹುಶಃ ಮುಂದೇನೂ
ಇರುತ್ತವೆ.
ಚುಕ್ಕಾಣಿ ಹಿಡಿದವರ
ಅಧಿಕಾರದ ದಾಹ
ತುಂಬುವುದಿ,ಲ್ಲ
ಕಾಯಕವ ನಂಬಿ
ದುಡಿದವರ ಹೊಟ್ಟೆ
ತುಂಬುವುದಿಲ್ಲ.
ಇತಿಹಾಸದಲ್ಲಿ ನಡೆದುಹೋದ
ಪ್ರತಿ ಕದನಗಳಲ್ಲೂ ಸತ್ತವರು
ಸಾಮಾನ್ಯರೇ!
ಸೋತರು ಗೆದ್ದರು
ಉಳಿದವರು ಮಾತ್ರ
ಪಟ್ಟದ ಮೇಲೆ ಕುಳಿತವರೇ!
ಎಲ್ಲಾ ಕದನಗಳೂ
ಪದೇ ಪದೇ ಕಲಿಸುವುದು
ಒಂದೇ ಪಾಠ, ಏನೆಂದರೆ
ಮುಗ್ದರು ನಂಬಿ ಮಾಡಿದ ನಾಯಕನೇ
ನಾಳೆ ಅವರಿಗೇ ಕಾಡುವ ಖಳನಾಯಕ.
ಒಮ್ಮೆ ಅಸಹಾಯಕರಿಗೆ ಹಸ್ತ ನೀಡಿದ
ಕೈಗಳು ಪದವಿಗೆ ಏರಿದ ಮೇಲೆ
ಬದಲಾಗುವುದೇಕೆ?
ಇಂತಹ ಇತಿಹಾಸಗಳೇ
ಇಂದಿಗೂ ಮರುಕಳಿಸುತ್ತಿರುವುದೇಕೆ?
ಪ್ರಕೃತಿ ಇನ್ನು ಎಷ್ಟು
ಸಲ ತೋರಿಸಬೇಕು,
ಅತಿಯಾದ ಅಧಿಕಾರವನು
ಜನ ಸಾಮಾನ್ಯರು
ಯಾರಿಗೂ ಎಂದಿಗೂ
ಕೊಡಬಾರದೆಂದು,
ಕೊಡಬಾರದೆಂದು.