“ಥಟ್ ಅಂತ ಹೇಳಿ!”- ‘ಅನಿವಾಸಿ’ಗೆ ಥಟ್ಟನೆ ಗಿಟ್ಟಿದ ರಸಘಟ್ಟಿ!

ಕನ್ನಡದ ಅತ್ಯಂತ ಜನಪ್ರಿಯ ರಸಪ್ರಜ್ಞೆ ಕಾರ್ಯಕ್ರಮ ’ಥಟ್ ಅಂತ ಹೇಳಿ’ ಕಾರ್ಯಕ್ರಮ ಈಗ ಮೊದಲ ಬಾರಿಗೆ ಯು ಕೆ ದಲ್ಲಿ ಕಾಲಿಟ್ಟಿದೆ! ಭಾರತೀಯ ಟೆಲಿವಿಷನ್ ಮಾಧ್ಯಮದಲ್ಲಿ ಅತ್ಯಂತ ಸುದೀರ್ಘ ಕಾಲದಿಂದ ಪ್ರಸಾರವಾಗುತ್ತಿರುವ ಕ್ವಿಜ್ ಕಾರ್ಯಕ್ರಮವೆಂದು ’ಲಿಮ್ಕ ದಾಖಲೆ’ ಮಾಡಿದ ಹೆಗ್ಗಳಿಕೆ ಅದಕ್ಕೆ. ಈ ಪ್ರಸಾರವನ್ನು ಕಳೆದ ರವಿವಾರದಂದು ಸಾವಿರಾರು ಜನರು ಜಗತ್ತಿನ ಬೇರೆ ಬೇರೆ ಜಾಗಗಳಲ್ಲಿ ವೀಕ್ಷಿಸಿದ್ದು ಹೆಮ್ಮೆಯ ವಿಷಯ.

(ಚಿತ್ರಕೃಪೆ) ರಮ್ಯ ಭಾದ್ರಿ

ರಮ್ಯ ಭಾದ್ರಿ ಬರೆಯುತ್ತಾರೆ

ಥಟ್ ಅಂತ ಹೇಳಿ! ಎಂದು ಪ್ರಸಿದ್ದಿ ಪಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದವಕಾಶ ಯು.ಕೆ. ದಲ್ಲಿಯ ನಮ್ಮ ’ಅನಿವಾಸಿ’ ಬಳಗಕ್ಕೆ ದೊರೆತಿರುವುದು ಹೆಮ್ಮೆಯ ವಿಚಾರ. ಕಳೆದ ರವಿವಾರ ಜುಲೈ 5, 2020 ರಂದು ಮೊದಲ ಕಾರ್ಯಕ್ರಮ ಯಶಸ್ವಿಯಾಗಿ ಪ್ರಸಾರವಾಯಿತು.

ಡಾ ನಾ. ಸೋಮೇಶ್ವರ

ಥಟ್ ಅಂತ ಹೇಳಿ ಎಂದಾಕ್ಷಣ ಥಟ್ ಅಂತ ನೆನಪಾಗೋದು ಚಂದನ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಡಾ ನಾ. ಸೋಮೇಶ್ವರ ರವರು ನಡೆಸಿಕೊಡುತ್ತಿದ್ದ ಜನಪ್ರಿಯ ರಸ ಪ್ರೆಶ್ನೆ ಕಾರ್ಯಕ್ರಮ. ಪ್ರಾಯಶಃ ಈ ಕಾರ್ಯಕ್ರಮವನ್ನರಿಯದ, ನೋಡದ ಕನ್ನಡಿಗನೇ ಇಲ್ಲ ಅಂದರೆ ಅತಿಶಯೋಕ್ತಿಯಲ್ಲ. ಇದು ಕರುನಾಡ  ಜನಮನ ಗೆದ್ದ ಮನೆಮಾತಾದ ಅದ್ಬುತ ರಸ ಪ್ರೆಶ್ನೆ ಕಾರ್ಯಕ್ರಮವೆನ್ನುವುದಕ್ಕೆ ಕಳೆದ 18 ವರ್ಷಗಳಿಂದ ಯಶಶ್ವಿಯಾಗಿ ನಡೆದುಕೊಂಡು ಬಂದಿರಿವುದೆ ಸಾಕ್ಷಿ.  ಇದು ಇಂದು 3000ಕ್ಕೂ ಹೆಚ್ಚು ಕಂತುಗಳನ್ನು ಅಮೋಘವಾಗಿ ಪೂರೈಸುತ್ತಾ  ಅಂತರ್ರಾಷ್ಟ್ರೀಯ ಅಲ್ಲದೆ ಅಂತರ ಖಂಡಗಳ ಮಟ್ಟದಲ್ಲಿ ಪ್ರಪಂಚದ ಮೊಲೆಮೂಲೆಯಲ್ಲಿ ನೆಲೆಸಿರುವ ಕನ್ನಡಿಗರನ್ನು ತಂತ್ರಜ್ಞಾನದ ಸಹಯೋಗದಿಂದ ತಲುಪಿರುವುದು ಅತ್ಯಂತ ಹೆಮ್ಮೆಯ ವಿಚಾರ. ಈ ಕಾರ್ಯಕ್ರಮದ ವಿಶೇಷತೆಯೆಂದರೆ ಪ್ರೆಶ್ನೆಯ ಪ್ರತಿಯೊಂದು ಉತ್ತರಕ್ಕೆ ಬಹುಮಾನವಾಗಿ ಒಂದು ಕನ್ನಡ ಪುಸ್ತಕವನ್ನು ನೀಡಲಾಗುವುದು. ಪುಸ್ತಕಗಳು  ನಮ್ಮ ಅಂತರಂಗ ಹಾಗು ಬಹಿರಂಗ ಜ್ಞಾನದ ಮಾರ್ಗದರ್ಶಿಗಳು. ’ದೇಶ ಸುತ್ತು ಕೋಶ ಓದು’ ಎಂಬ ನಾಣ್ಣುಡಿಯನ್ನು ಆಚರಣೆಗೆ ತರುವಂತ ಹಾಗು ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳು ಮತ್ತು ವೀಕ್ಷಕರಿಗೂ ಪುಸ್ತಕ ಓದುವ ಹವ್ಯಾಸ ವನ್ನು ರೂಢಿಸಿಕೊಳ್ಳಲು ಪ್ರೇರೇಪಿಸುವಂತ ಅದ್ಬುತ ಕಾರ್ಯಕ್ರಮ. 

ಕ್ವಿಜ್ ಮಾಸ್ಟರ್ ಅಪ್ಪಟ ಕನ್ನಡಿಗರಾದ ಡಾ. ನಾ. ಸೋಮೇಶ್ವರ ಅವರಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯದ ಬಗೆಗಿನ ಅವರ ಒಲವು ಅಪರಿಮಿತವಾದವು. ಮೂಲತಃ  ಬೆಂಗಳೂರಿನವರು; ವೃತ್ತಿಯಲ್ಲಿ ವೈದ್ಯರು ಹಾಗೂ ಅತ್ಯುತ್ತಮ ಬರಹಗಾರರು ಹೌದು. ಅವರ ‘ಏಳು ಸುತ್ತಿನ ಕೋಟೆಯಲ್ಲಿ ಎಂಟು ಕೋಟಿ ಬಂಟರು’, ‘ಅನಂತದೆಡೆಗೆ’, ’ಓ ನನ್ನ ಚೇತನ’ ಕೃತಿಗಳು ಅವರ ಪ್ರಬುದ್ಧತೆ ಹಾಗು ಸಾಹಿತ್ಯದಲ್ಲಿನ ಪ್ರೌಢಿಮೆಯನ್ನು ಮನನ ಮಾಡಿಕೊಡುತ್ತದೆ. ಅಷ್ಟೇ ಅಲ್ಲದೆ ವಿವಿಧ ವಿಷಯಗಳ ಬಗ್ಗೆ 30ಕ್ಕೂ ಹೆಚ್ಚು ಪುಸ್ತಗಳನ್ನು ಬರೆದಿರುವ ಖ್ಯಾತಿ ಅವರದು. ಇವರ ಸಾಹಿತ್ಯದೆಡೆಗಿನ ಮನೋಜ್ಞ  ಸೇವೆಗಳಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಆರ್ಯಭಟ್ಟ ಪ್ರಶಸ್ತಿ’, ಗೌರವ ಡಾಕ್ಟರೇಟ್ ಪದವಿ  ಹೀಗೆ ಇನ್ನು ಹಲವು ಗೌರವಗಳು ಸಂದಿವೆ. ಒಟ್ಟಿನಲ್ಲಿ  ಕನ್ನಡಿಗರು ಥಟ್ ಎಂದು ಗುರುತಿಸಿಬಿಡುವ ವಿಶ್ವಮಾನ್ಯತೆಯನ್ನು ಗಳಿಸಿರುವ ಆತ್ಮೀಯ ಗಣ್ಯರು ಸೋಮೇಶ್ವರ ರವರು. 

’ಅನಿವಾಸಿ’ ಬಳಗ

ಇಂತಹ ಪ್ರಸಿದ್ದಿ ಪಡೆದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದವಕಾಶ ನಮ್ಮ ’ಅನಿವಾಸಿ’ ಬಳಗಕ್ಕೆ ದೊರೆತಿರುವುದು ಹೆಮ್ಮೆಯ ವಿಚಾರ. ಹೊರ ದೇಶದಲ್ಲಿದ್ದರೂ ನಮ್ಮ ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವ ಆಶಯದಲ್ಲಿ ಅಕ್ಟೋಬರ್ 2013ರರಲ್ಲಿ ಹುಟ್ಟಿದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ, ಯು.ಕೆ (KSSVV ) ಎಂಬ ಕನಸಿನ ಕೂಸು ಇಂದು “ಅನಿವಾಸಿ”ಎಂಬ ಹೆಸರಿನಿಂದ ಜನ ಮನ್ನಣೆ ಪಡೆದಿದೆ. 2014ರರಲ್ಲಿ ಚೊಚ್ಚಲ KSSVV ಮ್ಯಾಗಜಿನ್ ಪ್ರಕಟಣೆಯಿಂದ ಪ್ರಾರಂಭವಾದ ಅನಿವಾಸಿಯ ಪಯಣ ಸಾಗಿ  ಅನೇಕ ಸ್ವಯಂ  ಸೇವಕರ ಪರಿಶ್ರಮದಿಂದ  2014 ರಲ್ಲಿ ಅಧಿಕೃತವಾಗಿ ಅಂತರ್ಜಾಲ ಪ್ರವೇಶಿಸಿತು.  ಅನಿವಾಸಿಯ ಚೊಚ್ಚಲ ಕೃತಿ “ಅನಿವಾಸಿಗಳ ಅಂಗಳದಿಂದ” 2016ರಲ್ಲಿ ಲೋಕಾರ್ಪಣೆಯಾಯಿತು  ಅಂದಿನಿಂದ ಇಂದಿನವರೆಗೂ ಪ್ರತಿವಾರವೂ ವೈವಿಧ್ಯಮಯವಾದ ಲೇಖನ, ಕಥೆ, ಕವಿತೆ, ವಿಮರ್ಶೆ, ಪ್ರವಾಸ ಕಥನಗಳು anivaasi.com ನಲ್ಲಿ ಪ್ರಕಟಗೊಳ್ಳುತ್ತ ಬಂದಿದೆ. ಅಷ್ಟಕ್ಕೇ ಸೀಮಿತಗೊಳ್ಳದೆ ಹೆಸರಾಂತ ಸಾಹಿತಿಗಳು, ಚಿತ್ರ ನಿರ್ದೇಶಕ್ರನ್ನು ಸಂದರ್ಶನಗಳು, ಅವುಗಳ ವಿಡಿಯೋಗಳು ಇಂದಿಗೂ ಅನಿವಾಸಿ ಜಾಲ ಜಗುಲಿಯಲ್ಲಿ, youtube ನಲ್ಲಿ ಕಾಣ ಸಿಗುವುದು. 

ನಮ್ಮ ಈ ಅನಿವಾಸಿ ಬಳಗಕ್ಕೆ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಟ್ಟವರು ವಿವಿಡ್ಲಿಪಿ ಖ್ಯಾತಿಯ ಶ್ರೀಯುತ ಪ್ರಮೋದ್ ಲಕ್ಕುಂಡಿ ಅವರು.

ಪ್ರಮೋದ ಬರೆಯುತ್ತಾರೆ:

ಜಗತ್ತು ತನ್ನ ಹೊರಗಿನ ಕಾರುಬಾರು ನಿಲ್ಲಿಸಿ, ಮನುಷ್ಯ ಜೀವಿ ಬಿಲದಲ್ಲಿ ಸೇರುವಂತೆ ಮಾಡಿದಾಗ ಎಲ್ಲರೂ ಚಿಂತಿತರಾದರು. ಇಂತಹ ಸಮಯದಲ್ಲಿ ವಾಟ್ಸಪ್, ಜೂಮ್, ವೆಬ್ಎಕ್ಷ ಮುಂತಾದವು ಮನುಷ್ಯನಿಗೆ ದೇವರು ಕೊಟ್ಟ ವರವಾಯಿತು. ವಿವಿಡ್ಲಿಪಿ ಕೂಡ ಇಂತಹ ವರವಾದ ಏರ್ ಮೀಟ್ (Airmeet)ಇಂದ ನೇರ ಪ್ರಸಾರ ಕಾರ್ಯಕ್ರಮಗಳನ್ನು ಪ್ರಾರಂಭ ಮಾಡಿತು, ಈ ಕಾರ್ಯಕ್ರಮದಲ್ಲಿ ಒಂದು “ಕ್ವಿಜ್ ನಡೆದು ಬಂದ ದಾರಿ” ಡಾ. ನಾ ಸೋಮೇಶ್ವರ ಅವರಿಂದ. ಆಗ ಹುಟ್ಟಿದ ಮತ್ತೊಂದು ಕನಸು, ಕಿರುತೆರೆಯಿಂದ ಕನ್ನಡ ನಾಡು- ಭಾಷೆ- ಸಂಸ್ಕೃತಿ- ಕಲೆ- ಸಾಹಿತ್ಯ- ವಿಚಾರ- ಆಚಾರ ಇತ್ಯಾದಿ ಜನರಿಗೆ ತಲುಪಿಸಿದ “ಥಟ್ ಅಂತ ಹೇಳಿ” ರಸಪ್ರಶ್ನೆ ಕಾರ್ಯಕ್ರಮ ಜಗತ್ತಿನ ಕನ್ನಡಿಗರಿಗೆ ತಲುಪಿಸುವುದು. ಅವರೊಡನೆ ಮಾತಾಯಿತು, ಹೊಸ ಪ್ರಯತ್ನಕ್ಕೆ ವೇದಿಕೆ ಸಜ್ಜಾಯಿತು ಆದರೆ ಯಾರೊಡನೆ ಮೊದಲ ಪ್ರಸಾರ ಎನ್ನುವುದು ಪ್ರಶ್ನೆ ಉಳಿಯಿತು.
ಮನದೊಳಗೆ ಯಾರೊಡನೆ ಮಾಡೋಣ ಎಂಬ ವಿಚಾರ ನಡೆದಾಗ ಬಂದ ಹೆಸರು “ಅನಿವಾಸಿ ಬಳಗ”. ಇದೇ ಹೆಸರು ಬರಲು ಕಾರಣ,
೧. ಬಳಗದ ಸದಸ್ಯರೆಲ್ಲರೂ ಸಾಹಿತ್ಯ ಪ್ರೇಮಿಗಳು
೨. ಸಾಹಿತ್ಯಕ ಚಟುವಟಿಕೆಗಳನ್ನು ಮಾಡುತ್ತಾ ಉಳಿದವರಿಗೂ ಪ್ರೋತ್ಸಾಹ ಕೊಡುತ್ತ ಬಂದಿದ್ದಾರೆ
೩. ಇಲ್ಲಿ ನಾಯಕ (ಕಿ) ಎಂಬ ಸ್ಥಾನಕ್ಕೆ ಬೆಲೆಯಿಲ್ಲ, ಬದಲು ಇಲ್ಲಿ ಸಾರಥಿಗಳಿದ್ದಾರೆ ಮತ್ತು ಪ್ರತಿ ಕಾರ್ಯಕ್ಕೂ ಯಾರಾದರೊಬ್ಬರು ಸಾರಥ್ಯವಹಿಸಿ ಕಾರ್ಯದ ಗುರಿ ಮುಟ್ಟಿಸುತ್ತಾರೆ.

5-7-2020 ರ ಕಾರ್ಯಕ್ರಮ



ಇದಕ್ಕಿಂತ ಹೆಚ್ಚಿನ ಅರ್ಹತೆ ಆಯ್ಕೆ ಮಾಡಲು ಅವಶ್ಯಕತೆ ಇರಲಿಲ್ಲ, ನಮ್ಮ “ಥಟ್ ಅಂತ ಹೇಳಿ” ರಥ ಸಿದ್ದವಾಯಿತು ಮತ್ತು ಶ್ರೀವತ್ಸ ದೇಸಾಯಿ ಅವರ ಸಾರಥ್ಯದಲ್ಲಿ ಮೊದಲ ಗುರಿ ಮುಟ್ಟಿತು.

ಕಾರ್ಯಕ್ರಮದಲ್ಲಿ ಭಾಗವಹಿಸಲು ಅನೇಕ ಆಸಕ್ತರು ತಮ್ಮ ಹೆಸರುಗಳನ್ನೂ ನೊಂದಾಯಿಸಿದರು. ಮೊದಲು ನೊಂದಾಯಿಸಿದ  12 ಜನರಿಗೆ ಈ ಸದಾವಕಾಶ ದೊರಕಿತು. ಒಟ್ಟು ನಾಲ್ಕು ಕಂತುಗಳು ನಡೆಯಲಿದ್ದು, ಒಂದೊಂದು ಕಂತಿನಲ್ಲಿ ನಾಲ್ವರು ಎಂಬಂತೆ ಈಗಾಗಲೇ (5-7-2020) ಮೊದಲನೆಯ ಕಂತು ಬಹಳ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ನಮ್ಮ ಸ್ಪರ್ಧಿಗಳು ಅತ್ಯಂತ ಹುರುಪಿನಿಂದ ಪ್ರೆಶ್ನೆಗಳಿಗೆ ಉತ್ತರಿಸಿ ಪುಸ್ತಕಗಳನ್ನು ತಮ್ಮದಾಗಿಸಿಕೊಂಡರು. ಎಂದಿನಂತೆ ೧೦ ಸುತ್ತುಗಳಿದ್ದರೂ ಹೊಸದೊಂದು ಸುತ್ತಿನ ಸೇರ್ಪಡೆ ಮೊದಲ ಕಂತನ್ನು ವಿಶೇಷವನ್ನಾಗಿಸಿತು. ಅದುವೇ ಚಿತ್ರ ಕವನ ಸುತ್ತು. ಇದು ಹೊಸ ಪ್ರಯೋಗವಾದರೂ ಪ್ರತಿಭಾನ್ವಿತರಾದ ನಮ್ಮ ಸ್ಪರ್ಧಿಗಳು ಚಿತ್ರವನ್ನು ನೋಡುತ್ತಿದ್ದಂತೆಯೇ  ಲೀಲಾಜಾಲವಾಗಿ ಆಶು ಕವನಗಳ ಮಳೆಯೇ ಸುರಿಸಿದರು. ಒಬ್ಬರಿಗಿಂದ ಒಬ್ಬರು ಅದ್ಬುತ ಕವನಗಳು. ಇದರಿಂದ ಪ್ರೇರೇಪಿತರಾದ ವೀಕ್ಷಕರೂ ಕೂಡ ಕವನಗಳನ್ನು ಬರೆದು ಕಳಿಸಿದ್ದು ವಿಶೇಷವಾಗಿತ್ತು . ಇಡೀ ಕಾರ್ಯಕ್ರಮದ ರೆಕಾರ್ಡಿಂಗನ್ನು ಕೆಳಗಿನ ಫೇಸ್ ಬುಕ್ ಲಿಂಕ್ನಲ್ಲಿ ನೋಡಬಹುದು:

; __ATA.cmd.push(function() { __ATA.initVideoSlot('atatags-370373-6957cf1a3aeac', { sectionId: '370373', format: 'inread' }); });