ನಮ್ಮ ನಡೆ-ನುಡಿ, ಆಚಾರ-ವಿಚಾರ ಹಾಗು ಜೀವನದಲ್ಲಿ ಬಂದೊದಗುವ ಅನೇಕ ಸವಾಲುಗಳನ್ನು ಎದುರಿಸುವಿಕೆ ಇವೆಲ್ಲವುದರ ಉಗಮ ನಮ್ಮ ಬಾಲ್ಯ. ನಮ್ಮ ತಂದೆ ತಾಯಂದಿರು ನಮ್ಮ ಮೇಲೆ ಬೀರಿರುವ ಪ್ರಭಾವ ಅದಾವುದೋ ರೂಪದಲ್ಲಿ ನಮ್ಮ ಜೀವನದ ಪ್ರತಿ ಹಂತದಲ್ಲಿಯೂ ಪ್ರತ್ಯಕ್ಷವಾಗುತ್ತಿರುತ್ತದೆ ಮತ್ತು ಅನೇಕ ಬಾರಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ದಾರಿದೀಪವಾಗಿರುತ್ತದೆ. ನಾವು ಚಿಕ್ಕವರಿದ್ದಾಗ ಅನೇಕ ಸಂಗತಿಗಳು ನಮ್ಮ ಬುದ್ದಿಯ ಪರಿಮಿತಿಗೆ ಬಾರದೇ ಹೋಗಿ, ನಾವು ಬೆಳೆದು ನಮ್ಮ ದೈನಂದಿನ ಜೀವನದಲ್ಲಿ ಆ ಸಂಗತಿಗಳ ತಾತ್ಪರ್ಯ ಹೊಳೆದಾಗ, ನಮ್ಮ ತಂದೆ ತಾಯಂದಿರ ಮೇಲಿನ ಗೌರವ ಹೆಚ್ಚುತ್ತದೆ ಮತ್ತು ಹೆಮ್ಮೆಯೆನಿಸುತ್ತದೆ.
ಈ ವಾರ ‘ಅನಿವಾಸಿ’ಯಲ್ಲಿ ಎರಡು ಲೇಖನಗಳು ವಿಭಿನ್ನ ಮಗ್ಗಲುಗಳನ್ನು ಹೊಂದಿದ್ದರೂ, ತಾಯಿಯನ್ನೂ ಹಾಗೂ ಬಾಲ್ಯವನ್ನೂ ನೆನೆಯುವುದರ ಮೂಲಕ ಪರಸ್ಪರ ಪೂರಕವಾಗಿವೆ. “ನನ್ನ ಹೆಮ್ಮೆಯ ಅಮ್ಮ” ಎಂಬ ಲೇಖನದಲ್ಲಿ ಗೌರಿ ಪ್ರಸನ್ನ ರವರು ತಮ್ಮ ತಾಯಿಯ ಪ್ರೇರಣಾತ್ಮಕ ಜೀವನವನ್ನು ನೆನೆಯುತ್ತಾ, ಅವಳ ಮಗಳಾಗಿದ್ದಕ್ಕೆ ತಮಗೆ ಹೆಮ್ಮೆ ಇದೆ ಎಂದು ಹೇಳುತ್ತಿದ್ದರೆ , ಇತ್ತ ” ಗೃಹ ಬಂಧನ ” ಎಂಬ ಲೇಖನದಲ್ಲಿ ರಾಧಿಕಾ ಜೋಶಿ ರವರು ತಮ್ಮ ತಾಯಿ ಮತ್ತು ತಂದೆಯ ಜೀವನ ಕ್ರಮಗಳು, ಲಾಕ್ ಡೌನ್ ಸಂಧರ್ಭದಲ್ಲಿ ಹೇಗೆ ದಾರಿದೀಪವಾಗಿವೆ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಈ ಎರಡು ಲೇಖನಗಳೂ ಓದುಗರನ್ನು ತಮ್ಮ ಬಾಲ್ಯದ ನೆನಪುಗಳಿಗೆ ಕರೆದೊಯ್ಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಎಲ್ಲರೂ ಈ ನೆನಪುಗಳಲ್ಲಿ ಮಿಂದು ಬನ್ನಿ ಎಂದು ಹಾರೈಸುತ್ತೇನೆ.
(ಸಂ)
ನನ್ನ ಹೆಮ್ಮೆಯ ಅಮ್ಮ


ಓಂ ನಮೋ ಭಗವತೇ ವಾಸುದೇವಾಯ. ಅಮ್ಮ: ಜಗದೆಲ್ಲ ಬಂಧಗಳು – ಸಂಬಂಧಗಳು ನಾವು ಈ ಭುವಿಯಲ್ಲಿ ಜನ್ಮ ತಾಳಿದ ನಂತರ ಶುರುವಾಗುವಂಥವು. ಆದರೆ ಅಮ್ಮನೊಡನೆ ?! ಜೀವವೇ ಇರದ ಅಂಗಾಂಗಳು ಮೊಳೆಯದೆ ಇದ್ದ ಒಂದು ಅಂಡಾಣುವಿನ ಸ್ಥಿತಿಯಲ್ಲಿದ್ದಾಗಿನಿಂದಲೇ ನಂಟು. ನಾನವಳ ಗರ್ಭದಲ್ಲಿ ಮೊಳಕೆಯೊಡೆದ ದಿನದಿಂದಲೇ ಅವಳ ದಿನಚರಿ, ಊಟ, ಉಡುಗೆ , ನಿದ್ದೆ- ಎಚ್ಚರ, ಪಥ್ಯ – ತಥ್ಯ, ಕನಸು- ಕನವರಿಕೆ, ಹಂಬಲ- ಹರಕೆ, ಪ್ರಾರ್ಥನೆಗಳೆಲ್ಲವೂ ನನಗನುಗುಣವಾಗಿಯೇ.
ಅದಕ್ಕೆಂದೇ ಭಾರತೀಯ ಸಂಸ್ಕೃತಿಯಲ್ಲಿ ಅಮ್ಮನಿಗೆ ಉನ್ನತ ಸ್ಥಾನ. “ಮಾತೃ ದೇವೋ ಭವ” ಎಂದು ವೇದಗಳು ಸಾರುತ್ತಿವೆ. ‘ಕೌಸಲ್ಯ ಸುಪ್ರಜಾ ರಾಮ’ ಎಂದು ಪರಮಾತ್ಮನನ್ನು ಋಷಿ ಮುನಿಗಳು ಕೌಸಲ್ಯೆಯ ಮಗನಾಗಿ ಕಾಣುತ್ತಿದ್ದಾರೆ. ಜಗದ ಬಂಧ ಹರಿದೊಗೆದು ಮುಕ್ತನಾದ ಸನ್ಯಾಸಿಯೂ ಮಾತೃ ಪಾದುಕೆಗೆ ಪ್ರಣಾಮ ಮಾಡುತ್ತಾನೆ.
“ತೊಟ್ಟಿಲಾಗಲಿ – ಬಟ್ಟಲಾಗಲಿ , ಜಾವಳಾಗಲೀ – ಜುಟ್ಟು ಆಗಲಿ, ಮದುವೆ ಆಗಲಿ – ಮುಂಜುವೆ ಆಗಲಿ, ಲಕ್ಷ್ಮಿ ನಾರಾಯಣನ ಕೃಪೆಯಿಂದ ಅಟ್ಟಡುಗೆ ಅಕ್ಷಯವಾಗಲಿ “- ಇದು ಮನೆಯಲ್ಲಿ ಮಾಡಿದ ಮೆಂತ್ಯಹಿಟ್ಟನ್ನೋ , ಚಟ್ನಿಪುಡಿಯನ್ನೋ , ಅಳ್ಳಿಟ್ಟನ್ನೋ ಡಬ್ಬದಲ್ಲಿ ತುಂಬಿಡುತ್ತ ಅಮ್ಮ ತಪ್ಪದೆ ಹೇಳುವ ಕನ್ನಡದ ಮಂತ್ರವಾಗಿತ್ತು. ಸಣ್ಣವಳಿದ್ದಾಗ ಅದರರ್ಥ ಅಷ್ಟು ಗೊತ್ತಾಗದಿದ್ದರೂ ಅವಳ ಬಾಯಿಂದ ಕೇಳಿ ಕೇಳಿ ಬಾಯಿಪಾಠವಾಗಿತ್ತು. ಅದರ ಹಿಂದಿರುವ ಅನ್ನ ನೀಡಿದ ಭಗವಂತನ ಬಗೆಗಿರುವ ಕೃತಜ್ಞತೆ , ಒಳ್ಳೆಯದರ ಆಶಯ – ಹಾರೈಕೆಗಳು ಎಲ್ಲ ಈಗ ಅರ್ಥವಾಗಿ ಅಚ್ಚರಿ ಹುಟ್ಟಿಸುತ್ತವೆ. ಹರಿಕಥಾಮೃತಸಾರದ ಸಂಧಿಗಳು , ಲಕ್ಷ್ಮಿ ಶೋಭಾನೆ, ವಿಜಯ ಕವಚ. ದುರ್ಗಾ- ಧನ್ವಂತರಿ ಇತ್ಯಾದಿ ಸುಳಾದಿಗಳು , ನಳ ಚರಿತ್ರೆ , ದಾಸರ ಪದಗಳು, ಹೀಗೆಯೇ ಹತ್ತು ಹಲವು ರೂಪದಲ್ಲಿ ಇಡೀ ದಿನ ಅವಳ ನಾಮಸಂಕೀರ್ತನೆ ಸಾಗುತ್ತಿತ್ತು – ಕೆಲಸಗಳ ಜೊತೆಜೊತೆಗೆ. ಅವಳು ಮಾಡದ ಪೂಜೆ ಪುನಸ್ಕಾರಗಳಿಲ್ಲ, ವ್ರತ ನಿಯಮಗಳಿಲ್ಲ. ಚೈತ್ರಾ ಗೌರಿ, ಶೀಗೀ ಗೌರಿ, ಜೇಷ್ಠ ಗೌರಿ , ಗಡಗಿ ಗೌರಿ, ಗೊತ್ತಿಲ್ಲ ಅದೆಷ್ಟು ಗೌರಿಯರೋ. ಹೂರಣದ ಆರತಿ, ಖೊಬ್ರಿಬೆಲ್ಲದ ಆರತಿ, ಸಕ್ರಿ ಅಚ್ಚಿನ ಆರತಿ, ಅದೆಷ್ಟು ಆರತಿಗಳೋ.
ಕುಲ್ಕರ್ಣ್ಯಾರ ಮನಿದು, ಜಹಗೀರದಾರರ ಮನಿದು, ಆಚಾರ್ಯರ ಮನಿದು ಹೀಗೆ ಇಡೀ ಬಲಕುಂದಿಯ ಎಲ್ಲರ ಮನೆಯ ‘ದಾರಗಳು’ ನಮ್ಮ ಗೌರಿಯ ಒಡಲಲ್ಲೇ. ಮಟ ಮಟ ಮಧ್ಯಾಹ್ನ ೧೨ ಹೊಡೆದರೂ ನಾರಣಪ್ಪನ ಗುಡಿಗೆ ಬರಿಗಾಲಲ್ಲಿ ಹೋಗಿಬರದೆ ಒಂದಗಳನ್ನೂ ಬಾಯಿಗೆ ಹಾಕದ ಶ್ರದ್ದೆ. ಆದರೆ ತನ್ನ ನಂಬುಗೆಗಳನ್ನ ನಮ್ಮ ಮೇಲೆಂದೂ ಹೇರದ ವೈಶಾಲತೆ. ನಮ್ಮ ಬಾಲಿಶ ವೈಚಾರಿಕ ಕ್ರಾಂತಿಗಳಿಗೆಲ್ಲ ಸದಾ ಅವಳ ಬೆಂಬಲ. ಗಳಗನಾಥ, ಅ ನ ಕೃ , ವಾಣಿ , ಎಲ್ಲರ ಪುಸ್ತಕ ಓದಿದಾಕಿ, ಈಗಲೂ ಪುಸ್ತಕ ಪ್ರಿಯೆ.
ಯಾವುದಕ್ಕೂ ಹಪಹಪಿಸದೆ, ಗೊಣಗದೆ, ಅತಿಯಾಸೆ ಪಡದೆ ಇದ್ದುದರಲ್ಲಿ ತೃಪ್ತಳಾಗಿ ದುಡಿಯುವ ಕರ್ಮಯೋಗಿಯಾಗಿಯೇ ನಾನವಳನ್ನು ಕಂಡದ್ದು. ಕಸ ಮುಸುರೆ, ಉಡಸಾರಣೆ ಉಪಕರಣಿ, ದೀಪ ರಂಗೋಲಿಗಳು , ಭಾವಿಯ ನೀರು , ಒಲೆಯ ಮೇಲಿನ ಅಡುಗೆ, ಒಳ್ಳು ರುಬ್ಬು ಗುಂಡು ಹಾರೆಗಳ ಒಡನಾಟ, ಹಳ್ಳ – ಹಸನು, ಅವಲಕ್ಕಿ – ಅಳ್ಳಿಟ್ಟು, ಉಪ್ಪಿನಕಾಯಿ – ತೊಕ್ಕು , ಗುಳಂಬ ಹಪ್ಪಳ, ಸಂಡಿಗೆಗಳ ಸಂಭ್ರಮ …ಹಬ್ಬ ಹರಿದಿನಗಳ, ಶ್ರಾದ್ಧ ಪಕ್ಷಗಳ ಮಡಿ ಹುಡಿ …ಇಷ್ಟಾದರೂ ಕೆಲಸ ಹೆಚ್ಚಾಯಿತು ಎಂದು ಅವಳು ಸಿಡಿಗುಟ್ಟಿದ್ದು ನನಗಂತೂ ನೆನಪಿಲ್ಲ.
ವರ್ಷಕ್ಕೊಮ್ಮೆ ತಗೆದುಕೊಳ್ಳುವ ಎರಡೂ ನಾಲ್ಕೋ ಹೊಸ ಕಾಟನ್ ಸೀರೆಗಳನ್ನೂ ಕೂಡ ತಾನು ಮೊದಲು ಉಡದೆ ಊರಿನ ಶೋಭಾಕ್ಕನಿಗೋ, ನಂದಾ ಮಾಂಶಿಗೊ, ವೇಣವ್ವನಿಗೋ “ಘಳಿಗಿ ಮುರುದು” ಕೊಡಲು ಕೊಡಬೇಕು. ಮಲ್ಲಿಗೆ ಮಾಲೆಯ ಸಣ್ಣ ತುಂಡನ್ನು ತನ್ನ ತುರುಬಿಗೆ ಹಾಕಿಕೊಂಡು ಉದ್ದುದ್ದ ಮಾಲೆಗಳನ್ನು ನಮಗೆಲ್ಲ ಕೊಡಬೇಕು. ‘ಸಣ್ಣವರು ಉಡಲಿ ತೊಡಲಿ’ ಎಂಬ ಆಶಯ. ಆದರೆ ತಾನು ಮಾತ್ರ ಹುಟ್ಟಿನಿಂದಲೇ ದೊಡ್ಡವಳು, ದೊಡ್ಡ ಮಗಳು, ದೊಡ್ಡ ಸೊಸೆ, ದೊಡ್ಡ ಅಕ್ಕ, ದೊಡ್ಡ ಅತ್ತೆ, ದೊಡ್ಡಮ್ಮ …ನಿಜಕ್ಕೂ ‘ದೊಡ್ಡವಳೆ’…
ನಮ್ಮೂರ ಅನಾಥೆ, ಕುರುಡಿ ಗುರುಬಸವ್ವನಿಗೆ ಅಮ್ಮನ ಚಟ್ನಿ ಭಕ್ರಿಯೆ ಬೇಕು. ಎದುರು ಮನಯೆ ಗೌಡರ ಕೂಸು ಶರಣು ಅಮ್ಮನ ಮೆಂತ್ಯಹಿಟ್ಟಿದ್ದರೆನೇ ಅನ್ನ ತಿನ್ನುವದು. ಬ್ಯಾಗಾರ ಮಲ್ಲಪ್ಪನ ಮನೆಯಲ್ಲಿ ಜ್ವರ ಬಂದು ಮಲಗಿದವರಿಗೆಲ್ಲ ಅಮ್ಮನ ನಿಂಬೆಹಣ್ಣಿನ ಉಪ್ಪಿನಕಾಯಿಂದಲೇ ಬಾಯಿ ರುಚಿ ಬರಬೇಕು. ಎರಡು ರೂಪಾಯಿಯ ಮೊಸರು ಹಾಕಲು ಬರುವ ಈರವ್ವ ಮನೆಯ ಎಂಟು ಜನ ಮಕ್ಕಳಿಗೂ ಅಮ್ಮ ಬೆಲ್ಲದ ತುಣುಕನ್ನೋ, ಖೊಬ್ರಿಯ ಚೂರನ್ನೋ ಕೊಡದೆ ಕಳಿಸಲಾರಳು. ಆಚಾರರ ಮನೆಯ ಕರುವಿಗೂ ಅಮ್ಮನ ಕಲಗಚ್ಚೆ ಪ್ರೀತಿ.
“ಯಾವದ್ವಿತ್ತೋಪಾರ್ಜನ ಶಕ್ತ: ತಾವನ್ನಿಜ ಪರಿವಾರೋರಕ್ತ:
ಪಶ್ಚಾಜ್ಜೀವತಿ ಜಝ೯ರ ದೇಹೇ ವಾರ್ತಾ೦ಕೋಪಿನ ಪ್ರಚ್ಚತಿ ಗೇಹೇ “
ಎಂದ ಆದಿ ಶಂಕರರ ಮಾತನ್ನೇ ಸುಳ್ಳೆಂದು ಸಾಬೀತು ಮಾಡಿದಾಕಿ ನನ್ನ ಈ ಹಡೆದವ್ವ. ಸುಮಾರು ೧೫ ವರ್ಷಗಳಿಂದ ಹಾಸಿಗೆ ಹಿಡಿದ ನನ್ನ ತಂದೆಯನ್ನು ಓರ್ವ ತಾಯಿಯಾಗಿ ಕೂಸಿನಂತೆ ಜೋಪಾನ ಮಾಡಿದವಳು ಅವಳು. ಎಲ್ಲ ಯಾತ್ರಾ ತೀರ್ಥಗಳನ್ನು , ದೈವದರ್ಶನಗಳನ್ನು ತನ್ನ ಕರ್ತವ್ಯದಲ್ಲೇ ಕಂಡುಕೊಂಡವಳು. ” ಕರ್ಮಣ್ಯೇವಾಧಿಕಾರಾಸ್ತೆ ಮಾ ಫಲೇಷು ಕದಾಚನ ” ಎಂದ ಕೃಷ್ಣನ ಮಾತುಗಳನ್ನು ಚಾಚು ತಪ್ಪದೆ ಪಾಲಿಸಿದವಳು – ಪಾಲಿಸುತ್ತಿರುವವಳು. ಅಮ್ಮ, ಹೆಮ್ಮೆಯಿದೆ ನನಗೆ ನಿನ್ನ ಮಗಳೆಂದು ಹೇಳಿ ಕೊಳ್ಳಲು.
ಗೃಹ ಬಂಧನ


ಲೇಖಕಿ ರಾಧಿಕಾ ಜೋಶಿ ರವರು ‘ಅನಿವಾಸಿ’ ಯಲ್ಲಿ ಹೊಸ ಬರಹಗಾರಾಗಿದ್ದಾರೆ. ಮೂಲತಃ ಹುಬ್ಬಳ್ಳಿಯವರಾದರೂ ಮೈಸೂರೀನಲ್ಲಿ ವಿದ್ಯಾಭ್ಯಾಸ ಮುಗಿಸಿ, CA ಮಾಡಲು ಬೆಂಗಳೂರಿಗೆ ಬಂದು, ಕೊನೆಗೆ ಲಂಡನಿನ್ನ ನಿವಾಸಿ ಆಗಿದ್ದಾರೆ. ಇಬ್ಬರು ಮಕ್ಕಳು ಹಾಗೂ ಪತಿಯೊಡನೆ ಸುಮಾರು 10 ವರುಷಗಳಿಂದ ಹ್ಯಾರೋದಲ್ಲಿವಾಸವಾಗಿದ್ದಾರೆ. ‘ಅನಿವಾಸಿ’ ಗುಂಪಿನ ಸದಸ್ಯರಿಗೆ ತಮ್ಮ ಅಭಿನಂದನೆಗಳನ್ನು ವ್ಯಕ್ತ ಪಡಿಸುವ ರಾಧಿಕಾ ತಮ್ಮ ಬರಹಗಳನ್ನು ಬ್ಲಾಗ್ ತಾಣದಲ್ಲಿ ಪ್ರಕಟಿಸುತ್ತಾರೆ
ನೆನಪಿನ ಬಾವಿಯಲ್ಲಿ ಇಣುಕಿ ನೋಡಿದಾಗ ನೀರಿನ ಮೇಲಿದ್ದ ಒಣಗಿದ ಎಲೆಗಳು, ಧೂಳು ಎಲ್ಲವೂ ಕೆಳಗಿದ್ದ ನೀರನ್ನು ಮುಚ್ಚಿತ್ತು. ಸ್ವಚ್ಛ ನೀರು ನೋಡ ಬಯಸಿ ನಾನು ಒಂದು ಕಲ್ಲನ್ನು ಎಸೆದಾಗ ನೀರು ಅಷ್ಟೇ ಅಲ್ಲದೆ ಬಾವಿಯ ಆಳವು ಗೊತ್ತಾಯಿತು. ನಮಗೆ ತಿಳಿಯದೆ ನಮ್ಮ ಮನಸ್ಸಿನ ಆಳದಲ್ಲಿ ಅದೆಷ್ಟೋ ನೆನಪುಗಳನ್ನು ಕೂಡಿಟ್ಟು ಅವುಗಳ ಮಹತ್ವ ನಮಗೆ ಆಗ ತಿಳಿಯದೇ ಈಗ ಸಮಯ ಬಂದಾಗಲೆಲ್ಲ ಅವುಗಳ ಆಳ ತಿಳಿಯುತ್ತದೆ.
ನಮ್ಮ ತಾಯಂದಿರು ಊಟ ಬಡಿಸಿ ಎಲ್ಲರ ಊಟ ಮುಗಿದಮೇಲೆ ತಾವು ಊಟ ಮಾಡುವುದು ಸಾಮಾನ್ಯ ಪದ್ಧತಿ. ನಾವೆಲ್ಲ ಆಗ ಅವರ ಮಕ್ಕಳು, ಗಂಡಸರು, ಹಾಗು ಹಿರಿಯರಿಗೆ ಊಟ ಬಡಿಸುವ ಮೂಲಕ ಮರ್ಯಾದೆ ಕೊಡುತ್ತಾರೆ ಅಥವಾ ಹೆಂಗಸರ ಕೆಲಸವೇ ಅಷ್ಟು ಎಂದು ತಿಳಿದಿದ್ದರೆ ಮತ್ತೊಂದು ಅರ್ಥ ನನಗೆ ಈತ್ತೀಚೆಗಷ್ಟೇ ತಿಳಿಯಿತು. ನಮ್ಮ ತಾಯಿ ಎಲ್ಲರಿಗೂ ಊಟ ಬಡಿಸುವ ಮೂಲಕ ತಾವು ಎಷ್ಟು ಊಟ ಮಾಡುತ್ತಾರೆ ಅಷ್ಟು ಉಳಿಸಿ, ಉಳಿದದನ್ನು ಎಲ್ಲರಿಗೆ ಹಂಚಿ ,ಅನ್ನ ವ್ಯರ್ಥವಾಗದಂತೆ ನೋಡಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ತಂಗಳು ಪೆಟ್ಟಿಗೆ ಇರುತ್ತಿರಲಿಲ್ಲ, ತಾಜಾ ಹಾಗು ಬಿಸಿ ಊಟ ಮಾಡುವುದು ಆರೋಗ್ಯಕ್ಕೆ ಹಿತಕರ ಎಂಬ ನಂಬಿಕೆ. ಈ ಲೇಖನ ಬರೆಯುವ ಸಂದರ್ಭದಲ್ಲಿ ಪ್ರಪಂಚವನ್ನೇ ನಡುಗಿಸುತ್ತಿರುವ ಅದೃಶ್ಯವಾದ ಒಂದು ವೈರಾಣು ಕೋವಿಡ್ ೧೯,ಇಡೀ ಪ್ರಪಂಚವನ್ನು ತಿಂಗಳು ಗಟ್ಟಲೆ ಗೃಹ ಬಂಧನದಲ್ಲಿ ಇಟ್ಟಿದೆ.
ಪೀಳಿಗೆಗಳು ಬದಲಾಗುತ್ತಿದ್ದಂತೆ ಆದ್ಯತೆಗಳು ಬದಲಾಗಿತ್ತವೆ. ನಮ್ಮ ತಾಯಿ, ದೊಡ್ಡಮ್ಮ, ಚಿಕ್ಕಮ್ಮ ಎಲ್ಲರೂ ಆಗಿನ ಕಾಲದ ಪದವೀಧರರಾಗಿದ್ದರೂ, ಮನೆಯ ಹೊರಗೆ ಹೋಗಿ ಕೆಲಸ ಮಾಡುವ ಅವಶ್ಯಕತೆ ಅವರಿಗೆ ಕಾಣ ಬರಲಿಲ್ಲ. ನಾವೆಲ್ಲರೂ ಶ್ರೀಮಂತಿಕೆಯಲ್ಲಿ ಬೆಳೆಯಲಿಲ್ಲ. ನನ್ನ ಮುಂದಿನ ಮಾತುಗಳು ಪ್ರಗತಿಶೀಲ ಮಹಿಳೆಯ ಲಕ್ಷಣಗಳನ್ನು ಕೊಡುತ್ತವೋ ಇಲ್ಲವೋ ಗೊತ್ತಿಲ್ಲ ಆದರೆ ಕೆಲವು ಸನ್ನಿವೇಶ ಹಾಗು ಸಂದರ್ಭಗಳು ನನ್ನ ಪ್ರಸ್ತುತ ಜೀವನಶೈಲಿಯನ್ನು ಬದಲಾಯಿಸಲು ಯೋಚನೆ ಮಾಡುವಂತೆ ಮಾಡಿವೆ.
ನಮ್ಮ ತಂದೆಯ ಮಾಸಿಕ ಆದಾಯ ಕೇವಲ ೮೦ರೂಗಳು. ಅದರಲ್ಲೇ ಮನೆ ಬಾಡಿಗೆ, ನಮ್ಮ ಶಾಲಾ ಖರ್ಚು, ತಿಂಗಳ ದಿನಸಿ ಮತ್ತು ಇನ್ನಿತರ ವೆಚ್ಚಗಳು. ಆಗಿನ ಕಾಲದಲ್ಲಿ ಎಲ್ಲವು ಇತಿಮಿತಿಯಲ್ಲಿ ಇರುತ್ತಿತ್ತು. ಆದರೂ ಮನೆ ನಡೆಸುವುದು ಕಷ್ಟವೇ ಇತ್ತು. ಅನಿರೀಕ್ಷಿತ ಬಂಧು ಮಿತ್ರರರ ಆಗಮನ, ಹಬ್ಬ ಹರಿದಿನಗಳ ಖರ್ಚು ಎಲ್ಲವೂ ನೀಗಿಸುವುದು ಒಂದು ಸವಾಲೇ ಆಗಿತ್ತು. ಆದರೆ ನಮಗೆ ಎಂದೂ ಇವೆಲ್ಲದರ ಬಗ್ಗೆ ಸ್ವಲ್ಪವೂ ಸುಳಿವಿರುತ್ತಿರಲಿಲ್ಲ. ಮದುವೆ ಮುಂಜವಿ ಸಮಾರಾಧನೆ ಸಧರ್ಭಗಳಲ್ಲಿ ಕೆಲವೊಮ್ಮೆ ನಾವು ಹೋಗುತ್ತಿರಲಿಲ್ಲ ಏಕೆಂದರೆ ಹಬ್ಬಗಳು ಹಾಗು ಹೆಚ್ಚಿನ ವೆಚ್ಚದಿಂದ ಮದುವೆ ವರವಧುವಿಗೆ ಅಥವಾ ಮನೆಯವರಿಗೆ ಉಡುಗೊರೆ ಕೊಡುವಷ್ಟು ದುಡ್ಡು ಇರುತ್ತಿರಲಿಲ್ಲ. ನಮ್ಮ ತಾಯಿ ಯಾವುದಾರೂ ನೆಪ ಮಾಡಿ ಕಾರ್ಯಕ್ರಮವನ್ನು ತಪ್ಪಿಸುತ್ತಿದ್ದರು ಅಥವಾ ಮನೆಯಿಂದ ಒಬ್ಬರೇ ಹಾಜರಾಗುತ್ತಿದ್ದರು. ಆದರೆ ನಮ್ಮ ಅವಶ್ಯಕತೆಗಳಿಗೆ ಯಾವತ್ತೂ ಕೊರತೆ ಬಂದಿರಲಿಲ್ಲ. ಹೊಸ ಬಟ್ಟೆ, ಶಾಲಾ ಪುಸ್ತಕಗಳು ಮತ್ತು ಇನ್ನಿತರ ವಸ್ತುಗಳಿಗೆ ಬರ ಇರಲಿಲ್ಲ. ತಂದೆ ತಾಯಿ ಇಬ್ಬರು ದುಡಿಯುವ ಮಕ್ಕಳ ಹತ್ತಿರ ಎಷ್ಟು ಆಟಿಕೆಗಳು, ಬಟ್ಟೆಗಳು ಇರೊತ್ತಿದ್ದವೋ ಅಷ್ಟು ಇರುತ್ತಿರಲಿಲ್ಲ ಆದ್ರೆ ಹೂ ಕೇರ್ಸ್ !!
ತಂದೆಗೆ ಕೆಲಸದ ಒತ್ತಡ ಇದ್ದರೂ ಅದು ನಮಗೆ ಎಂ ತಿದೂ ಳಿಯುತ್ತಿರಲಿಲ್ಲ. ಸಾಂಪ್ರದಾಯಿಕ(ಕನ್ಸರ್ವೇಟಿವ್) ಜೀನನಶೈಲಿ ಆದ ನಮ್ಮೆಲ್ಲರ ಬದುಕಿನಲ್ಲಿ ಒಂದು ರೀತಿಯ ಶಾಂತತೆ ಇತ್ತು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದಷ್ಟೇ ಅವರ ಧ್ಯೇಯವಾಗಿತ್ತೇ ಹೊರತು ಅವರು ಮುಂದೆ ನಾವು ಏನಾಗುತ್ತೀವಿ ಎಂದು ಅಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಾವು ಒಳ್ಳೆಯ ದಾರಿ ಹಿಡಿದು ನಮ್ಮ ಭವಿಷ್ಯ ನಾವೇ ನಿರೂಪಿಸಿಕೊಳ್ಳುತ್ತೇವೆ ಎಂಬ ನಂಬಿಕೆ ಇರುತ್ತಿತ್ತು. ನಾವು ದೊಡ್ಡವರಾದ ಮೇಲೆ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಸೀಟ್ ಬಗ್ಗೆ ಬಹಳ ಆತಂಕ ಇತ್ತು ಬಿಡಿ. ನಾನು ಎರಡೂ ಆಗಲಿಲ್ಲ.
ನಮ್ಮ ತಾಯಿಗೆ ನಮ್ಮಂತೆ ಎಷ್ಟು ಡಿಗ್ರಿ ಮಾಡಿದೀವಿ ಕೆಲಸಕ್ಕೆ ಹೋಗ್ಲೇಬೇಕು ಎಂಬ ಛಲ ಇರಲಿಲ್ಲ. ನಾವೆಲ್ಲ ಒಳ್ಳೆಯ ಗುಣಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಡುವಂತೆ ನಮ್ಮನ್ನು ಬೆಳೆಸಿದಿರು. ಪ್ರಗತಿಶೀಲ ಮಹಿಳೆ ಹಾಗು ಜವಾಬ್ದಾರಿ, ಪೋಷಕರ ಲಕ್ಷಣ ಎಂದು ನನಗೆ ಈಗ ಅನಿಸುತ್ತಿದೆ. ಕಡಿಮೆ ಆದಾಯದಲ್ಲಿ ಹೇಗೆ ಜೀವನ ಸಾಗಿಸುವುದು ಎಂಬ ಭೀತಿ ನನ್ನ ಕೆಲವು ಸ್ನೇಹಿತೆಯರಿಗೆ ಬಂತು(ಕಾಂಟ್ರಾಕ್ಟಿಂಗ್ ಮಾಡುವ ಜನ ತಮ್ಮ ಕೆಲಸ ಅಕಾಲಿಕವಾಗಿ ಕೊನೆಗೊಂಡಾಗ) ಹಾಗೇ ಕೆಲವರು ಈ ಕಠಿಣ ಸಮದಲ್ಲಿ ನಿಶ್ಚಲವಾಗಿದ್ದರು.
ಅನಗತ್ಯ ಖರ್ಚು, ಅಮಿತ ಹೋಟೆಲ್ ಊಟ, ಅಗತ್ಯವಿಲ್ಲದ ವಸ್ತುಗಳ ಖರೀದಿ ಇವೆಲ್ಲದರ ಬಗ್ಗೆ ಯೋಚನೆ ಮಾಡುವಂತೆ ಜೀವನದ ಈ ೪ ವಾರಗಳು ನನಗೆ ತಿಳಿಸಿವೆ. ನಾವು ಕಲಿತಂತೆ ಮಕ್ಕಳು ಕಲಿಯುತ್ತಾರೆ. ನಮ್ಮ ಅಭ್ಯಾಸಗಳು, ರೂಢಿ ಮಾಡಿಕೊಂಡಿರುವ ಜೀವನ ಸರಳ ಹಾಗು ಸೂಕ್ತವಾಗಿರಬೇಕು.
ಪ್ರತಿಯೊಂದು ಸಾಮಾಜಿಕ ಕಾರ್ಯಕ್ರಮಕ್ಕೆ ಅಂದವಾಗಿ ತಯಾರಾಗಬೇಕು ಎಂಬ ಆಸೆ ಎಲ್ಲಾ ಮಹಿಳೆಯರಲ್ಲೂ ಇರುತ್ತದೆ ಆದರೆ ಪ್ರತಿಬಾರಿಯೂ ಹೊಸ ಉಡುಗೆ, ಆಭರಣ ಖರೀದಿ ಆವಶ್ಯಕವೇ? ಪ್ರತಿ ವಾರ ಹೊರಗೆ ಊಟಕ್ಕೆ ಹೋಗುವುದು ಉಚಿತವೇ? ದಿನನಿತ್ಯ ಅಡುಗೆ ಮಾಡಿ ಹಾಗು ಆಫೀಸಿಗೆ ಹೋಗಿ ರೋಸುಹೋಗಿರುವ ಮಹಿಳೆಯ ಕಷ್ಟ ನನಗೆ ಅರ್ಥವಾಗಿತ್ತದೆ.
ನಮ್ಮ ಮನೆಯ ಅಟ್ಟದ ಮೇಲೆ ಸುಮಾರು ೧೦ ದೊಡ್ಡ ರಟ್ಟಿನ ಡಬ್ಬಿಗಳಲ್ಲಿ ಸಾಮಾನು ಇವೆ. ಸುಮಾರು ೩ ವರುಷಗಳಿಂದ ಅವುಗಳನ್ನು ತೆಗೆದು ನೋಡಿಲ್ಲ. ಇದರ ಅರ್ಥ ಅದರಲ್ಲಿರುವ ಯಾವುದೇ ಸಾಮಾನಿನ ಅವಶ್ಯಕತೆ ಇಲ್ಲ. ಅನವಶ್ಯಕ ವಸ್ತುಗಳ ಮೇಲೆ ಅದೆಷ್ಟು ದುಡ್ಡು ಸುರದಿದ್ದೀವಿ? ಬೇಕು ಬೇಡಗಳ ವ್ಯಾಖ್ಯಾನ ನಾನು ತಿಳಿದುಕೊಂಡು ನಮ್ಮ ಮಕ್ಕಳಿಗೆ ತಿಳಿಸಬೇಕು.
ಮನೆಯಲ್ಲಿ ಕುಳಿತುಕೊಂಡು ಬರುವ ಮುಂದಿನ ದಿನಗಳ ಬಗ್ಗೆ ಯೋಚಿಸುವಾಗ ನನಗೆ ನನ್ನ ಬಾಲ್ಯದ ದೃಶ್ಯಗಳೇ ಕಣ್ಣ ಮುಂದೆ ಬರುತ್ತಿವೆ. ಆಗ ಅವುಗಳ ಆಳವಾದ ಅರ್ಥವನ್ನು ತಿಳಿಯದೆ ಇದ್ದೆ. ಆದರೆ ಈಗ ಸ್ವಲ್ಪ ಮಟ್ಟಿಗೆ ಪ್ರಭುದ್ಧತೆ ಬಂದು(ಬಂದಿದೆ ಅಂದುಕೊಳ್ತೀನಿ ) ಅವುಗಳ ತಾತ್ಪರ್ಯ ಕಂಡುಹಿಡಿಯಲು ಹೊರಟಿದ್ದೇನೆ.
ತಾಯಿ ಮಗಳ ಸಂಬಂಧ ಅಪೂರ್ವವಾದದ್ದು. ಮಗನಾಗಿ ಹುಟ್ಟಿದ ನನಗೆ ಅದನ್ನು ಗ್ರಹಿಸಲು ಸಾಧ್ಯವಿಲ್ಲದಿರಬಹುದು. ಈ ಎರಡೂ ಲೇಖನಗಳು ಆ ಸಂಬಂಧದ ಬಗ್ಗೆ ನನಗೆ ಒಳನೋಟವನ್ನು ನೀಡಿವೆ. ಮಗಳಿಗೆ ತಾಯಿಯಿಂದ ಕಲಿಯಬೇಕಾದುದು ಮಗನಿಗಿಂತ ಹೆಚ್ಚಿರಬಹುದು.
ಈ ಸಂಬಂಧ ಹಲವಾರು ಮಜಲುಗಳಲ್ಲಿ ಹಾದು ಹೋಗುತ್ತದೆ . ಅಮ್ಮ ಕೆಲವೊಮ್ಮ ತಾಯಿ, ಆರಾಧ್ಯ ದೈವ , ಕೆಲವೊಮ್ಮೆ ಗೆಳತಿ ಕೆಲವೊಮ್ಮೆ ಕೆಲವಿಚಾರದಲ್ಲಿ “ಸವಿತಿ” ಶತ್ರು . ಅಮ್ಮ ಮಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಕಚ್ಚಾಟಗಳನ್ನೂ ಕಾಣಬಹುದು . ಆ ಸಂಬಂಧ ಸಂಧರ್ಭಕ್ಕೆ ತಕ್ಕಂತೆ ಪೆಂಡುಲಂ ತೂಗುವ ಹಾಗೆ ಆಚೆ ಇಚೆ ಹರಿದಾಡಬಹುದು ಆದರೂ ಹೆಣ್ಣಿಗೆ ಸಹಜವಾಗಿ ದಕ್ಕುವ ಮಮತೆ, ಸಹನೆ, ಕಾಳಜಿ ಇವುಗಳು ಕಾಲಾಂತರದಲ್ಲಿ ಬಹಳ ಗಾಢಾವಾದ ಸಂಬಂಧಗಳನ್ನು ಬೆಸೆಯುತ್ತವೆ . ಆ ಕಾರಣಕ್ಕಾಗಿ ಅದು ವಿಶೇಶವಾದ ಸಂಬಂಧ . ಅದರ ಆಳ ವಿಸ್ತಾರಗಳು ಮೇಲ್ನೋಟಕ್ಕೆ ಸಿಗದಿರಬಹುದಾದರೂ ರಾಧಿಕಾ ಹೇಳುವ ಹಾಗೆ ನೆನಪು ಎಂಬ ಬಾವಿಯನ್ನು ನೋಡಿ ದಾಗ (ಪ್ರತಿಬಿಂಬದ ಜೊತೆ) ನೆನಪಿನ ಗಣಿಯೇ ಇಲ್ಲಿ ಗೋಚರಿಸುತ್ತದೆ. ಗೌರಿ ಅವರ ತ್ಯಾಗಮಯಿ ತಾಯಿಯ ಪರಿಚಯ ಹೃದಯ ಸ್ಪರ್ಶಿಯಾಗಿದೆ. “ನಿನಗೆ ಬೇರೆ ಹೆಸರು ಬೇಕೇ ? ಸ್ತ್ರೀ ಎಂದರೆ ಅಷ್ಟೇ ಸಾಕೆ” ಎಂಬ ಜನಪ್ರಿಯ ಕವನದ ಸಾಲುಗಳನ್ನು ನೆನಪಿಗೆ ತರುತ್ತದೆ .
ಇಂಗ್ಲೀಷಿನಲ್ಲಿ ಒಂದು ಉಕ್ತಿ ಇದೆ ಅದು ಮೇಲೆ ಪ್ರಸ್ತಾಪಿಸಿದ ತಾಯಿ ಮಗಳ ( ತಂದೆಯೂ ಸೇರಿದಂತೆ) ಸಂಬಂಧವನ್ನು ಯಶಸ್ವಿಯಾಗಿ ಸಂಕ್ಷಿಪ್ತವಾಗಿ ಘೋಷಿಸಿದೆ “A son is a son until he takes a wife, but A daughter is a daughter for life!
LikeLiked by 1 person
ಎರಡೂ ಮನ ಮುಟ್ಟುವ ಲೇಖನಗಳು. ನಮಗೆ ವರ್ಷ ಕಳೆದಂತೆಲ್ಲ ನಮ್ಮ ತಾಯಿಯ ಜೊತೆಗಿನ ಭಾಂದವ್ಯ ಮತ್ತಷ್ಟು ಗಾಢವಾಗುತ್ತ ಹೋಗುತ್ತದೆ. ತಾಯಿಗೆ ಹೇಗೆ ನಮ್ಮ ವಂದನೆಗಳನ್ನು ತಲುಪಿಸುವುದು ಎನ್ನುವ ಗೊಂದಲವೂ ಮೂಡುತ್ತದೆ. ಅದರಲ್ಲೂ ಇಷ್ಟು ದೂರವಿದ್ದಾಗ. ನುಡಿ ನಮನದಂತಿರುವ ಈ ಲೇಖನಗಳನ್ನು ಅವರಿಬ್ಬರೂ ಓದಿ ಸಂತಸ ಪಡಲಿ.
ತಾಯಿ ಎದೆಗೆ ಹಾಕಿಕೊಂಡು ತನ್ನ ಸಂಸಾರದ ಸುಖಕ್ಕಾಗಿ ಜೀರ್ಣಿಸಿಕೊಳ್ಳುವ ವಿಚಾರಗಳು ಹಲವು. ಸಹನೆ, ತ್ಯಾಗ, ಪ್ರೇಮ ಇವುಗಳ ಪ್ರಶಂಸೆಯ ಜೊತೆಗೆ ಆಕೆಯ ಸುಖ, ಅಭಿಲಾಷೆಗಳನ್ನು ಬೆಂಬಲಿಸುವಲ್ಲಿ ನಮ್ಮಗಳ ಪಾತ್ರ ಹೆಚ್ಚಾಗಬೇಕು.
ಸಂಪಾದಕೀಯವೂ ಚೆನ್ನಾಗಿದೆ. ಇನ್ನೂ ಹೆಚ್ಚು ಹೆಚ್ಚು ಬರೆಯುತ್ತಿರಿ.
LikeLiked by 1 person
ತಾಯಿ ಮೊದಲ ಪಾಠಶಾಲೆ ಎನ್ನುವುದು ನಿತ್ಯಸತ್ಯ. ಎರಡೂ ಲೇಖನಗಳು ಈ ಮಾತನ್ನು ಮತ್ತೆ ಎತ್ತಿ ಹಿಡಿದಿವೆ. ಅನಿವಾಸಿಯ ಹೊಸ ಲೇಖಕರು ಗುಂಪಿಗೆ ಕಸುವು ತುಂಬುತ್ತಿರುವುದು ಮನಸ್ಸಿಗೆ ಮುದ ಕೊಡುತ್ತಿದೆ.
– ರಾಂ
LikeLike
ಎರಡು ಲೇಖನಗಳು ಮನ ಮುಟ್ಟುವಂತಹದ್ದು ಕಾರಣ ಅಮ್ಮ ಅನ್ನೊ ಶಬ್ದಕ್ಕೆ ಆ ಶಕ್ತಿಯುಂಟು. ಹುಟ್ಟಿನಿಂದ ಸಾವಿನವರೆಗೂ ಬದುಕಿನ ಯಾವುದೇ ಸಂದರ್ಭದಲ್ಲಿ ಅದರಲ್ಲೂ ನೋವು/ಕಷ್ಟದಲ್ಲಿ ನೆನಪಾಗೋದು ಅಮ್ಮನೇ ! ಶಬ್ದ ಸುಲಭವಾದರೂ ಎಷ್ಟು ಪ್ರಬಲವಾದದ್ದೆಂದರೆ ಅವಳು ಆ ಕ್ಷಣ ನಮ್ಮೊಂದಿಗಿರಲಿ ಇಲ್ಲದಿರಲಿ ನಾಮಗರಿವಿಲ್ಲದೆಯೇ ಪರಿಸ್ಥಿತಿಯನ್ನೆದುರಿಸುವ ಧೈರ್ಯ ಸ್ಥರ್ಯ ತಂದುಕೊಡುವುದು ಎಲ್ಲರ ಅನುಭವಕ್ಕೆ ಬಂದಿರುವುದು ಅಷ್ಟೇ ಸತ್ಯ. ಗೌರಿಯವರ ತಾಯಿಯ ವರ್ಣನೆ ಬಹಳ ಸೊಗಸಾಗಿದೆ ಅಮ್ಮನ ನಡೆ ನುಡಿ , ಆಚಾರ ವಿಚಾರ, ರೀತಿ ನೀತಿ , ತುಡಿತ ಮಿಡಿತ, ತ್ಯಾಗ ನಿಷ್ಠೆ , ಉಡುಗೆ ತೊಡುಗೆ ಹೀಗೆ ಲೇಖಕ್ಕೆ ನಿಲುಕದ ಗುಣಗಳನ್ನು ಸುಂದರವಾಗಿ ಕಣ್ಣಿಗೆ ಕಟ್ಟುವಂತೆ ಪದಗಳನ್ನು ಜೋಡಿಸಿದ್ದಾರೆ. ಬದುಕಿನ ಅನಿವಾರ್ಯತೆಗಳು ಏನೆ ಇರಲಿ ಇರುವುದರಲ್ಲಿ ತೃಪ್ತಿಯಿಂದ ಪರಿವಾರದ ವರ್ತಮಾನ ಭವಿಷ್ಯಕ್ಕೆ ತಕ್ಕಂತೆ ಸಂತೋಷದಿಂದ ಬಾಳ್ವೆ ನಡೆಸಬೇಕು ಎಂಬ ಜೀವನದ ದೊಡ್ಡ ಪಾಠವನ್ನು ಹೇಳಿಕೊಡುವ ಅಮ್ಮನ ಕಿವಿಮಾತುಗಳು ಬಾಲ್ಯದಲ್ಲಿ ಮನದಟ್ಟಾಗದಿದ್ದರು ಬಾಳಿನ ಯಾವುದಾದರೂ ಒಂದು ಘಟ್ಟದಲ್ಲಿ ಅದರ ಅರಿವು ಮಾಡುತ್ತದೆ ಅನ್ನುವುದು ಅಕ್ಷರ ಸಃ ನಿಜ ಹಾಗು ಈ ಪ್ರಭುದ್ದತೆ ಅವಶ್ಯಕ ಎನ್ನುವುದನ್ನು ರಾಧಿಕಾರವರು ತಮ್ಮ ಲೇಖನದಲ್ಲಿ ಚೆನ್ನಾಗಿ ವಿಶೇಷಿಸಿದ್ದಾರೆ . ಈ ಲೇಖನಗಳನ್ನು ಓದಿ ನನ್ನ ಬಾಲ್ಯದ ನೆನಪುಗಳನ್ನು ಮಲುಕು ಹಾಕಲು ಅವಕಾಶ ಮಾಡಿಕೊಟ್ಟ ಇಬ್ಬರಿಗೂ ಧನ್ಯವಾದಗಳು .
LikeLiked by 1 person
ಇಂದಿನ ಈ ಎರಡೂ ಲೇಖನಗಳು ವಿಶಿಷ್ಟ ರೀತಿಯಲ್ಲಿ ಅರಳಿ ಬಂದು ಲೇಖನಗಳು ಅಂತ ಯಾಕನಿಸ್ತಿದೆಯೋ ಗೊತ್ತಿಲ್ಲ.ನಿಜಕ್ಕೂ ಅಮ್ಮ ಅನ್ನೋ ಶಬ್ದವೇ ಹಾಗೋ ಏನೋ! ಗೌರಿಯವರು ಹೆಮ್ಮೆಯ ಅಮ್ಮ ಅಂದಿದ್ದು ನನಗೇನೇನೋ ನೆನಪಿಸ್ತು.ನಮ್ಮಮ್ಮನ ನೆರಳನ್ನು ಕಂಡೆ ನಾ ಅಲ್ಲಿ.. ತಾಯಿ ಮಕ್ಕಳ ಪ್ರೀತಿ , ಸ್ನೇಹಕ್ಕೆ ಯಾವುದೇ ಅಳತೆಗೋಲಿಲ್ಲ.ಯಾವುದನ್ನೂ ಬಾಯಿ ಬಿಟ್ಟು ಹೇಳದೇ ಅರಿಯೋ ಕಲೆ ತಾಯಿ ಹೃದಯ ಮಾತ್ರ ಬಲ್ಲದು.ತನ್ನ ಮಕ್ಕಳು, ಅವರ ಪಾಲನೆ ಪೋಷಣೆ, ಅವರ ಊಟ ತಿನಿಸು, ಮಕ್ಕಳು ಬೆಳೆದಂತೆ ಅವರ ಓದು ಎಲ್ಲಾ ಹಂತದಲ್ಲೂ ನಿಭಾಯಿಸುವ ಚಾಕಚಕ್ಯತೆ ಆ ಕೈಗಳಲ್ಲಿ, ಮನದಲ್ಲಿ, ತಲೆಯಲ್ಲಿ.ಒಂದೇಒಂದು ನಾ ನನ್ನಮ್ಮನ ಬಗ್ಗೆ ಹೇಳಬೇಕು- ಸ್ವತಂತ್ರವಾಗಿ ಯೋಚಿಸಿ, ತೀರ್ಮಾನ ಕೈಗೊಳ್ಳುವುದರ ಮೇಲೆ ಒತ್ತು ಕೊಟ್ಟು ವ್ಯಕ್ತಿ ತ್ವ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ನನ್ನಮ್ಮನ ಕೊಡುಗೆ ಅಪಾರ.ಒಮ್ಮೊಮ್ಮೆ ನಾ ಅಂದುಕೊಳ್ಳುವುದಿದೆ, ನಾ ನನ್ನಕರ್ತವ್ಯನ ನನ್ನ ಮಕ್ಕಳ ವಿಷಯದಲ್ಲಿ ಅಷ್ಟೇ ಜಾಣತನದಿಂದ ನಿಭಾಯಿಸಿದೀನಾ ಅಂತ.
ರಾಧಿಕಾ ಅವರು ಹೇಳಿದ ಒಂದು ಮಾತು, ನಮ್ಮೆಲ್ಲರ ಊಟ ಆದಮೇಲೆ ಅಮ್ಮನ ಊಟ ಅಂದ್ರಲ್ಲಾ, ಅಮ್ಮ ಅಂದ್ರೆ ಅದೇ.ಮಕ್ಕಳ ಊಟ ಆದರೆ ಅಮ್ಮಂಗೆ ತೇಗು ಬಂದು ಬಿಡ್ತದೆ.ಹೆಚ್ಚೇನು ಹೇಳಿದರೂ ಅದು ಅರ್ಥ ಕಳೆದುಕೊಂಡು ಬಿಡ್ತದೆ ಅಮ್ಮನ ವಿಷಯದಲ್ಲಿ.ಹೃದಯ ತುಂಬಿ ಒಂದು ಬಾರಿ ಅಮ್ಮ ಅಂತ ಕೂಗಿದ್ರೆ ಸಾಕು ಆ ತಾಯಿ ಕರುಳು ಸಂತೃಪ್ತ.ನಿಜಕ್ಕೂ ಪ್ರತಿ ಹೆಜ್ಜೆ ಹೆಜ್ಜೆಗೂ ಎಲ್ಲೋ ಅಮ್ಮ ದಾರಿ ತೋರುತ್ತಿರುವ ಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಭಾವ ಇಂದಿಗೂ ನನ್ನ ಮನಸ್ಸಿನಲ್ಲಿ.ಗೌರಿ ಹಾಗೂ ರಾಧಿಕಾ ಅವರ ಲೇಖನಗಳು ಎದೆಯ ಆಳದಲ್ಲೊಂದು ಮೃದು ಮಮತೆ, ವಾತ್ಸಲ್ಯ ದ ಸುಳಿ ಎಬ್ಬಿಸಿ ಮತ್ತೊಮ್ಮೆ ಅದರಲ್ಲಿ ಮುಳುಗಿ ಬಾಲ್ಯದತ್ತ ಕೊಂಡೊಯ್ದು ಬಿಟ್ಟಿದೆ ಅಂದರೆ ಖಂಡಿತಾ ತಪ್ಪಲ್ಲ.ಗೌರಿ ಹಾಗೂ ರಾಧಿಕಾ ಅವರಿಗೆ ಅಭಿನಂದನೆ ಗಳೊಂದಿಗೆ ಧನ್ಯವಾದಗಳು.
ಸರೋಜಿನಿ ಪಡಸಲಗಿ
LikeLiked by 1 person
ಇಬ್ಬರು ಹೆಣ್ಣುಮಕ್ಕಳು ತಮ್ಮ ತಾಯಂದಿರನ್ನು ನೆನೆದು ಅವರ ಬಗ್ಗೆ ಆತ್ಮೀಯ ಚಿತ್ರವನ್ನು ತಮ್ಮ ಲೇಖನಗಳಲ್ಲಿ ಪ್ರಸ್ತುತಪಡಿಸಿದ್ದಾರೆ ಇಂದು ಈಸ್ಟರ್ ಶುಕ್ರವಾರದಂದು. ಪಾಶ್ಚಿಮಾತ್ಯ ನಾಡುಗಳಲ್ಲಿ Mothering Sunday ಲೆಂಟಿನ(Lent) ನಾಲ್ಕನೆಯ ರವಿವಾರ ಆಚರಿಸುತ್ತಾರೆ. ಅಂದರೆ ಹತ್ತು ಹನ್ನೆರಡು ದಿನಗಳ ಹಿಂದೆ ಮದರ್ಸ್ ಡೇ ಇತ್ತು. ಜೀಸಸ್ ನಂತೆ ಬೇರೆಯವರಿಗಾಗಿ ತ್ಯಾಗಮಾಡುವ ಜೀವಿ ತಾಯಿ. ಅದನ್ನು ಇಬ್ಬರೂ ಮನದಟ್ಟುವಂತೆ ಪ್ರೀತಿಯನ್ನೆರೆದು ಬರೆದದ್ದು ಎಲ್ಲರೂ ತಮ್ಮ ತಮ್ಮ ತಾಯಿಯನ್ನು ನೆನೆಯುವದರಲ್ಲಿ ಸಂಶಯವಿಲ್ಲ. ನಮ್ಮಲ್ಲಿ ಮಧ್ಯಮ ವರ್ಗದ ಕುಟುಂಬಗಳಲ್ಲಿ ಸಂಸ್ಕಾರವೇ ದೊಡ್ಡ ಸಂಪತ್ತು ಎಂದು ಇರುವಾಗ ತಂದೆತಾಯಂದಿರು ಮಕ್ಕಳ ಪೋಷಣೆ ಮತ್ತು ಶಿಕ್ಷಣಕ್ಕೇ ಎಲ್ಲವನ್ನೂ ತ್ಯಾಗಮಾಡುತ್ತಾರೆ. ತಮ್ಮ ಲೇಖನದಲ್ಲಿ ಗೌರಿಯವರಂತೂ ತಾಯಿಯ ಸಂಬಂಧವನ್ನು ಎಂಬ್ರಿಯಾಲಜಿಯಿಂದಲೇ ಆರಂಭಿಸಿ ಬೆಳೆಸಿದ್ದಾರೆ! ರಾಧಿಕಾ ಅವರು ಇತ್ತೀಚಿನ ಆಧುನಿಕ ಅನುಕೂಲಸ್ಥ ಸಂಸಾರಗಳಲ್ಲಿಯ ಪರಿಸ್ಥಿತಿಯಲ್ಲಿಯೂ ಬದಲಾಗದ ತಾಯಿಯ ವಾತ್ಸಲ್ಯಕ್ಕೆ ಕನ್ನಡಿ ಹಿಡಿಯುತ್ತಾರೆ. ಸ್ವತಃ ತಾಯಿಯಾಗಿರುವ ಇಬ್ಬರೂ ಬರಹಗಾರ್ತಿಯರನ್ನು ಅಭಿನಂದಿಸಲೇಬೇಕು. ಇದು ಅವರು ಅನಿವಾಸಿಗೆ ಬರೆದ ಮೊದಲ ಲೇಖನಗಳು. ಇನ್ನು ಮುಂದೆಯೂ ಬರೆಯುತ್ತಿರುತ್ತಾರೆ ಎಂದು ಅಪೇಕ್ಷಿಸುವೆ!ಎಲ್ಲ ತಾಯಂದಿರಲ್ಲೂ ತನ್ನ ತಾಯಿಯನ್ನು ಕಾಣುವದು ಮನುಜ ಸಹಜವೇನೋ. ಕೆಲ ತಿಂಗಳ ಹಿಂದೆ ಗೌರಿಯವರ ಮಾತೋಶ್ರಿಯವರನ್ನು ನಾ ಕಂಡ ಅರ್ಧ ಗಂಟೆಯಲ್ಲಿ ನನ್ನ ಅನುಭವ ಅದೇ ಆಗಿ ಹೃದಯ ತುಂಬಿಬಂದಿತ್ತು!
LikeLiked by 1 person
Growing up in the beautiful Karnataka our childhood is filled with wonderful memories of many such selfless hardworking simple people who had a huge impact and influence on our thinking. It is helping us everysingle day of our lives to live safely wherever we are. I have thoroughly enjoyed reading both articles. Reminded me of my loving mum.
LikeLiked by 1 person
ಇವತ್ತಿನ ಎರಡು ಲೇಖನಗಳು ಬಹಳ ಚೆನ್ನಾಗಿದೆ. ಗೌರಿ ಅವರ ಲೇಖನ ಓದಿದಮೇಲೆ ನನ್ನ ಬಾಲ್ಯದ ನೆನಪುಗಳು ಕಣ್ಣು ಮುಂದೆ ಬರುತ್ತೆ ತಂದೆ ಮಾದ್ಯಮಿಕ ಶಾಲೆಯ ಹೆಡ್ ಮಾಸ್ಟರ್ ಮನೆಯಲ್ಲಿ ಏಳು ಮಕ್ಕಳು ತಂದೆ ತಾಯಿ ಮತ್ತು ನಮ್ಮಜ್ಜಿ, ನನಗೇನಾದರೂ ಬೇಕಿದ್ದರೆ ತಂದೆ ಅಥವಾ ಅಜ್ಜಿ ಹತ್ತಿರ ಮಾತ್ರ ಸಂಪರ್ಕ . ಸಣ್ಣ ವಯಸ್ಸಿನಲ್ಲಿ ಮನೆ ಬಿಟ್ಟು ಓದುವುದಕ್ಕೆ ಬೇರೆ ಊರಿಗೆ ಹೋಗಿ, ಬೆಂಗಳೂರಿನಲ್ಲಿ ಕೆಲಸಮಾಡಿ ನಂತರ ಇಂಗ್ಲೆಂಡ್ ಗೆ ೧೯೬೫ ರಲ್ಲಿ ಬಂದಿದ್ದರಿಂದ ಅಮ್ಮನ ಹತ್ತಿರ ಮಾತನಾಡಿದ್ದು ಸ್ವಲ್ಪ ಕಡಿಮೆ ಅಂತ ಹೇಳಬಹುದು. ಆದರೆ ೨೦೦೦ ನಲ್ಲಿ ನಮ್ಮ ಮಗಳ ಮದುವೆಗೆ ಅಮ್ಮ ಇಂಗ್ಲೆಂಡಿಗೆ ಬಂದು ನಮ್ಮ ಮನೆಯಲ್ಲಿ ಕೆಲವು ತಿಂಗಳು ಇಲ್ಲಿ ಕಳೆದಿದ್ದು ಯಾವಾಗಲೂ ಮರೆಯುವುದಿಲ್ಲ. ಆ ವರ್ಷದಲ್ಲಿ ಅಲ್ವಸ್ಟನ್ ಹಾಲ್ ನಲ್ಲಿ ನಡೆದ ಕನ್ನಡ ಬಳಗದ ಸಮಾರಂಭಕ್ಕೆ ಅಮ್ಮ ಅತ್ಯಂತ ಸಂತೋಷದಿಂದ ಭಾಗವಿಸಿದರು ಮತ್ತು ಬಳಗದ ಅನೇಕರ ಪರಿಚಯ ಮಾಡಿಕೊಂಡರು. ಮಧ್ವ ಸಂಪ್ರದಾಯದ ಕಚ್ಚೆ ಸೀರೆ ಉಟ್ಟು ಸ್ಟೇಜ್ ಮೇಲೆ ಬಂದು ಫ್ಯಾಶನ್ ಷೋ ನಲ್ಲೋ ಭಾಗವಹಿದರು . ಈಗ ಅಮ್ಮ ಇಲ್ಲ ಆದರೆ ಹಲವಾರು ದಶಕಗಳ ನಂತರ ಅಮ್ಮನ “ಪರಿಚಯ” ಹೀಗೆ ಆಗಿದ್ದು ಬಹಳ ಸಂತೋಷದ ವಿಷಯ
ರಾಮಮೂರ್ತಿ
ಬೇಸಿಂಗ್ ಸ್ಟೋಕ್
LikeLiked by 1 person