(ಕಳೆದ ವಾರ ಕನ್ನಡ ಬಳಗ (ಯು ಕೆ)ಯ ಯುಗಾದಿ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮಗಳಡಿಯಲ್ಲಿ, `ಅನಿವಾಸಿ` ತಾಣದ `ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ`ಯು `ಪರದೇಶದ ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆ`ಯ ವಿಷಯದ ಬಗ್ಗೆ ಚರ್ಚೆಯನ್ನು, ಅಮೇರಿಕದಿಂದ ಬಂದ ಬಹುಮುಖ ಪ್ರತಿಭೆಯ ಮೈ ಶ್ರೀ ನಟರಾಜರ ಸಮ್ಮುಖದಲ್ಲಿ ಹಮ್ಮಿಕ್ಕೊಳ್ಳಲಾಗಿತ್ತು. ಈ ಚರ್ಚೆಯಲ್ಲಿ ಮುಖತಃ ಪಾಲ್ಗೊಳ್ಳಲು ಸಾಧ್ಯವಾಗದಿದ್ದರೂ, ಉಮಾ ಅವರು ತಮ್ಮ ಅನಿಸಿಕೆಗಳನ್ನು ಕಳಿಸಿಕೊಟ್ಟರು. ಈ ಲೇಖನದಲ್ಲಿ ಉಮಾ ಅವರು ಹೊರದೇಶದ ಕನ್ನಡಿಗರು ಕನ್ನಡ ಪ್ರಜ್ಞೆಯನ್ನು ಯಾಕೆ ಮತ್ತು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದನ್ನು ಕೂಲಂಕುಷವಾಗಿ ಬರೆದಿದ್ದಾರೆ. ಅವರಿಬ್ಬರ ಮಕ್ಕಳೂ ಇಷ್ಟು ವರುಷ ಹೊರದೇಶದಲ್ಲಿದ್ದರೂ `ಸುಲಿದ ಬಾಳೆಹಣ್ಣಿನಂದದಿ` ಕನ್ನಡದಲ್ಲಿ ವ್ಯವಹರಿಸುವುದೇ ಅವರ ಜಾಗೃತ ಕನ್ನಡ ಪ್ರಜ್ಞೆಗೆ ಸಾಕ್ಷಿ – ಸಂ)
ಕನ್ನಡತನವೆಂದರೇನು? ನಮ್ಮ ಭಾಷೆಯೇ? ನಮ್ಮ ಆಚಾರ-ವಿಚಾರಗಳೇ? ನಮ್ಮ ಅಡುಗೆ-ತಿಂಡಿಗಳೇ? ನಮ್ಮ ಹಬ್ಬ-ಹರಿದಿನಗಳೇ? ನಮ್ಮ ಉಡುಗೆತೊಡುಗೆಯೇ? ನಮ್ಮ ಸಂಗೀತ, ನಾಟಕ ಸಿನಿಮಾಗಳೇ? ಇಲ್ಲಾ ನಮ್ಮಲ್ಲಿ ಬೇರೂರಿರುವ ನಮ್ಮ ಮೌಲ್ಯಗಳೇ? ಕನ್ನಡತನವೆಂಬುದು ಈ ಮೇಲೆ ಹೆಸರಿಸಿರುವ ಯಾವುದೇ ಒಂದು ವಿಷಯಕ್ಕೆ ಸೀಮಿತವಾದದ್ದಲ್ಲ. ಅದೊಂದು ಸಂಕೀರ್ಣವಾದ ಚೌಕಟ್ಟಿನಲ್ಲಿ ಅಡಗಿರುವ ನಮ್ಮತನವೆನಬಹುದು. ಪರದೇಶಗಳಲ್ಲಿ ನೆಲಸಿರುವ ಕನ್ನಡಿಗರು, ಸ್ಥಳೀಯ ಸಂಸ್ಕೃತಿ, ಆಚಾರ-ವಿಚಾರಗಳ ಪ್ರಭಾವಗಳ ನಡುವೆ ಕನ್ನಡತನ ಅಥವಾ ಕನ್ನಡ ಪ್ರಜ್ಞೆಯನ್ನು ಉಳಿಸಿ, ಪೋಷಿಸಿ, ಅದನ್ನು ತಮ್ಮ ಮುಂದಿನ ಪೀಳಿಗೆಯಲ್ಲಿ ಜೀವಂತವಾಗಿಡಬೇಕಾದ ಜವಾಬ್ದಾರಿ ಬಹಳ ಪ್ರಯಾಸದ ಕೆಲಸ.
ಬಹುರಾಷ್ಟ್ರೀಯ ಸಂಸ್ಕೃತಿಯ ನಡುವಿನಲ್ಲಿ ಬದುಕುವ ಇಂದಿನ ಪೀಳಿಗೆಯ ತಾಯಿತಂದೆಯರು ಮತ್ತು ಅವರ ಮಕ್ಕಳ ಜೀವನ ಸರಳವಲ್ಲ. ಪೋಷಕರಿಗೆ ಮಕ್ಕಳಲ್ಲಿ ನಮ್ಮತನವನ್ನು ಉಳಿಸಿ, ನಮ್ಮ ಭಾಷೆ, ಆಚಾರ-ವಿಚಾರಗಳನ್ನು ಕಲಿಸಿ ಮುಂದುವರೆಸುವ ಕಾರ್ಯ ನಿಜಕ್ಕೂ ಕ್ಲಿಷ್ಟವಾದದ್ದು. ನನ್ನ ಮಟ್ಟಿಗೆ ನಮ್ಮ ಕನ್ನಡತನ ನಮ್ಮ ಭಾಷೆಯಲ್ಲಿದೆ. ಭಾಷೆಯ ಮಾಧ್ಯಮವೇ ಅವರಲ್ಲಿ ನಮ್ಮ ಸಂಸ್ಕೃತಿಯನ್ನು, ನಮ್ಮತನವನ್ನು ಜೀವಂತವಾಗಿಡಲು ಸಾಧ್ಯ. ನಮ್ಮ ಕನ್ನಡದ ಜೀವನವೈಖರಿ, ನಡೆನುಡಿ, ಸಾಹಿತ್ಯ-ಸಂಗೀತ ಎಲ್ಲವೂ ಭಾಷೆಯಲ್ಲಿ ಅಡಗಿದೆ. ಕನ್ನಡ ಭಾಷೆಯನ್ನು ಆಡುಭಾಷೆಯನ್ನಾಗಿ ನಮ್ಮ ಮನೆಗಳಲ್ಲಿ ಉಳಿಸಿಕೊಂಡು ಬರುವ, ಬಂದಿರುವ ಅನಿವಾಸಿ ಮನೆಗಳ ಮಕ್ಕಳಲ್ಲಿ, ಹೆಚ್ಚುಹೆಚ್ಚಾಗಿ ಕನ್ನಡದ ಪ್ರಜ್ಞೆಯನ್ನು ಕಾಣಬಹುದು. ಇದು ನನ್ನ ಸ್ವಂತ ಅನುಭವ. ಭಾಷೆಯನ್ನು ಮರೆತ ಜನಗಳು, ನಮ್ಮ ಸಂಸ್ಕೃತಿಯ ಇನ್ನಾವುದೇ ಮಾಧ್ಯಮವನ್ನು ಬಳಸಿದರೂ, ಕನ್ನಡ ಭಾಷೆಯ ಪ್ರಭಾವವಿಲ್ಲದ ಅವರ ಚಟುವಟಿಕೆಗಳು ರಸಹೀನವಾದ ಕಬ್ಬಿನಂತೆ ಎಂದೆನಿಸುತ್ತದೆ. ಕನ್ನಡ ಭಾಷೆಯ ಅರಿವಿಲ್ಲದ ನಮ್ಮವರ ಮಕ್ಕಳು, ನಮ್ಮ ಶಾಸ್ತ್ರೀಯ ನೃತ್ಯದ ಅಭಿನಯದಲ್ಲಿ, ಭಾಷೆಯ ಪದಗಳಲ್ಲಿ ಅಡಗಿರುವ ಲಾಲಿತ್ಯವನ್ನು ಪ್ರದರ್ಶಿಸಲು ಅಸಮರ್ಥರಾಗಿ ಹೆಣಗಾಡುವುದನ್ನು ಅನೇಕ ಬಾರಿ ಕಂಡು ಮರುಗಿದ್ದೇನೆ.
ಕನ್ನಡದಲ್ಲಿ ಮಾತನಾಡಲು ತಿಳಿಯದ ಅನಿವಾಸಿ ಕನ್ನಡಿಗರ ಮಕ್ಕಳು ತಾಯ್ನಾಡಿಗೆ ಭೇಟಿ ನೀಡುವ ಸಂಧರ್ಭದಲ್ಲಿ, ಆಂಗ್ಲಭಾಷೆಯಲ್ಲಿ ಸಮರ್ಥವಾಗಿ ಸಂಭಾಷಿಸಲಾಗದ ಮನೆಯ ಹಿರಿಯರೊಡನೆ ತಮ್ಮ ಯಾವುದೇ ಭಾವನೆಗಳನ್ನು ಅವರಿಗೆ ತಲುಪಿಸಲು ಕಷ್ಟಪಡುವುದನ್ನು ಕಂಡಿದ್ದೇನೆ. ನಮ್ಮ ಶಾಸ್ತ್ರೀಯ ಸಂಗೀತದಲ್ಲಿನ ಶ್ರೀಮಂತ ಸಾಹಿತ್ಯದ ಅರ್ಥ ತಿಳಿಯದೆ, ಅದರ ಪದಗಳ ಉಚ್ಚಾರಣೆಯನ್ನೂ ಅರಿಯದ ಮಕ್ಕಳು ನಗೆಪಾಟಲಿಗೀಡಾಗುವ ಸಂಧರ್ಭಗಳೇ ಹೆಚ್ಚು. ಒಂದು ಭಾಷೆ ಅಳಿಸಿಹೋದರೆ, ಅದರಲ್ಲಿ ಅಡಗಿರುವ ಒಂದು ಸಂಸ್ಕೃತಿಯ ಸಮಸ್ತ ವಿಚಾರಗಳೂ ಅದರೊಂದಿಗೆ ಅಳಿಯುತ್ತವೆ. ಇದು ಒಂದು ದೊಡ್ಡ ದುರಂತ. ಹಾಗಾಗಿ ನಮ್ಮತನದ ಪ್ರಜ್ಞೆ ಬಹುತೇಕ ನಮ್ಮ ಭಾಷೆಯಲ್ಲಿದೆ. ನಮ್ಮ ಅಸ್ತಿತ್ವವೇ ಅದರಲ್ಲಡಗಿದೆ ಎನ್ನುವುದು ನನ್ನ ಅಭಿಮತ.
ಈ ಸಮಸ್ಯೆಯ ಅರಿವುಳ್ಳ ಅನಿವಾಸಿ ಕನ್ನಡಿಗರು ಜಗದಾದ್ಯಂತ ನಮ್ಮತನದ ಪ್ರತೀಕವಾದ ನಮ್ಮ ಕನ್ನಡ ಭಾಷೆಯನ್ನುಳಿಸಿಕೊಂಡು ಬರಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಮ್ಮ ಪ್ರಯತ್ನವನ್ನು ಜಾರಿಯಲ್ಲಿಟ್ಟಿದ್ದಾರೆ. ಇದು ಶುಭಸಮಾಚಾರ. ಆದರೆ ಈ ಪ್ರಯತ್ನವನ್ನು ಸಂಘಸಂಸ್ಥೆಗಳೇ ಕಾರ್ಯರೂಪಕ್ಕಿಳಿಸಲು ಸಾಧ್ಯವಿಲ್ಲ. ಇದು ತಂದೆತಾಯಿಯರ ಜವಾಬ್ದಾರಿ. ಮನೆಯಲ್ಲಿ ನಮ್ಮ ಆಡುಭಾಷೆಯನ್ನಾಡುವ ಕುಟುಂಬಗಳು ಈ ದಿಸೆಯಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆಗಳು ಹೆಚ್ಚು. ಜೊತೆಗೆ ಹೊರದೇಶದಲ್ಲಿ ಬಾಳುತ್ತಿರುವ ಕನ್ನಡಿಗರ ಮಕ್ಕಳಿಗೆ, ಸಂಸ್ಕೃತಿಗಳ ಘರ್ಷಣೆಯಲ್ಲಿ ಬದುಕಿ ನಮ್ಮತನವನ್ನು ಉಳಿಸಿಕೊಳ್ಳುವುದು ಕಷ್ಟದ ಕಾರ್ಯ. ತಮ್ಮ ಜೊತೆಯ ಮಕ್ಕಳ ಕೂಡಾ ಬೆರೆತು ಅಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಒತ್ತಡವೂ ಅವರ ಮೇಲೆ ಸದಾಕಾಲ ಇರುತ್ತದೆ. ಹಾಗಾಗಿ ಮನೆಯಲ್ಲಿ ಕನ್ನಡತನ ಉಳಿಸಿಕೊಳ್ಳುವ ಹೋರಾಟದಲ್ಲಿ ತಂದೆತಾಯಿಯರು ಬಹಳ ಎಚ್ಚರಿಕೆಯಿಂದ ಈ ಕಾರ್ಯವನ್ನು ನಿಭಾಯಿಸಬೇಕಾಗಿದೆ. ಇಲ್ಲವಾದರೆ, ಮಕ್ಕಳು ನಮ್ಮ ಪ್ರಜ್ಞೆಯನ್ನುಳಿಸಿಕೊಳ್ಳುವ ಗುರಿಯನ್ನು ತಲುಪಲು ವಿಫಲರಾಗಬಹುದು!
ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ, ಹೊರನಾಡಿನಲ್ಲಿರುವ ಅನಿವಾಸಿ ಕನ್ನಡಿಗರು ತಮ್ಮತನವನ್ನು ಬಹಳ ಯಶಸ್ವಿಯಾಗಿ ಉಳಿಸಿಕೊಂಡು ಬಂದಿದ್ದಾರೆ ಎನ್ನಬಹುದು. ಇಂದು ಹೊರನಾಡಿನಲ್ಲಿ ಕನ್ನಡದ ಪ್ರತಿ ಇರುವ ಅಭಿಮಾನಗಳನ್ನು, ಕರ್ನಾಟಕದ ಜನವೃಂದವೇ ಕೊಂಡಾಡುವಂತಿದೆ. ಕನ್ನಡ ಸಾಹಿತ್ಯದ ಪರಂಪರೆಯನ್ನು ಉಳಿಸಿ ಬೆಳಸಲು, ಅನಿವಾಸಿ-ಕನ್ನಡಿಗರು ನಡೆಸುತ್ತಿರುವ ಕಾರ್ಯಕ್ರಮಗಳು, ಚಟುವಟಿಕೆಗಳು ನಿಜಕ್ಕೂ ಪ್ರಶಂಸನೀಯವೇ! ಜೊತೆಗೆ ಆಂಗ್ಲಭಾಷೆಯಲ್ಲಿ ಉತ್ತಮ ಪರಿಣಿತಿ ಇರುವ ಅನಿವಾಸಿಗಳು, ಆಂಗ್ಲ ಭಾಷೆಯ ಉತ್ತಮ ಸಾಹಿತ್ಯವನ್ನು ಕನ್ನಡ ಭಾಷೆಗೆ ಅನುವಾದಿಸಿ, ನಮ್ಮ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಿದ್ದಾರೆ. ನಮ್ಮ ನಾಡಿನ ಶ್ರೀಗಂಧದ ಕಂಪನ್ನು ಹೊತ್ತ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿದರೆ, ನಮ್ಮ ಕನ್ನಡದ ಪ್ರಜ್ಞೆ ನಮ್ಮಲ್ಲಿ ಸದಾ ಜಾಗ್ರತವಾಗೇ ಇರುತ್ತದೆ. ಇಂದು ನಮಗೆಲ್ಲಾ ಲಭ್ಯವಿರುವ ಆಧುನಿಕ ತಂತ್ರಾಂಶಗಳ ನೆರವಿನಿಂದ ಈ ಕಾರ್ಯವನ್ನು ಸಾಧಿಸುವ ಹಾದಿಯೂ ಸ್ವಲ್ಪ ಸುಗಮವಾಗೇ ಇದೆ. ಜೊತೆಗೆ ಸಂಪರ್ಕಸಾಧನ ಸಂಪನ್ಮೂಲಗಳನ್ನು ಬಳಸಿ, ನಮ್ಮ ನಾಡಿನ ಅತ್ಯುತ್ತಮ ಸಾಹಿತಿಗಳ ಕೃತಿಗಳನ್ನು ಹೊರನಾಡಿನಲ್ಲೂ ತರಿಸಿ ಓದುವ ಸೌಭಾಗ್ಯವಿದೆ. ಜೊತೆಗೆ ಇಲ್ಲಿ ನಡೆಸುವ ಕನ್ನಡ ಸಂಘದ ವೈಭಯುತ ಕಾರ್ಯಕ್ರಮಗಳಲ್ಲಿ ಅವರನ್ನು ಕರೆಸಿ ಅವರಿಂದ ಕಲಿಯುವ ಅವಕಾಶಗಳೂ ಹೇರಳವಾಗಿವೆ.
ನಾವು ನೆಲಸಿರುವ ಹೊರನಾಡಿನಲ್ಲಿ, ನಮ್ಮ ಬಳಗದ ಸದಸ್ಯರನ್ನು ಕೂಡಿಕೊಂಡು, ಲೇಖನಗಳನ್ನು ಬರೆದು, ಪ್ರಕಟಿಸಲು ತಂತ್ರಜ್ಞಾನವು ಕಲ್ಪಿಸಿರುವ ಸೌಲಭ್ಯಗಳನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳುವ ಅವಕಾಶವಿದೆ. ಫ಼ೇಸ್-ಬುಕ್, ಟ್ವಿಟ್ಟರುಗಳಂತಹ ಪ್ರಭಾವಿ ಸಾಮಾಜಿಕ ಜಾಲಬಂಧಗಳು, ಖಂಡಗಳ ನಡುವಿನ ಕನ್ನಡಿಗರನ್ನು ಉತ್ತಮವಾಗಿ ಸಂಪರ್ಕಿಸುತ್ತವೆ. ಈ ಮಾಧ್ಯಮಗಳ ಮೂಲಕ ಅವರು ತಮ್ಮ ವಿಚಾರಗಳನ್ನು ಪರಿಣಾಮಕಾರಿಯಾಗಿ ವಿನಿಮಯ ಮಾಡಿಕೊಳ್ಳುವ ಅವಕಾಶಗಳಿವೆ. ನನ್ನ ಮಟ್ಟಿಗೆ ಇಷ್ಟೆಲ್ಲಾ ಆಧುನಿಕ ಸೌಲಭ್ಯಗಳ ನಡುವಿರುವ ನಾವು, ಹೊರನಾಡಿನಲ್ಲಿದ್ದರೂ ನಮ್ಮ ಭಾಷೆಯನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಯಲ್ಲಿ ಜೀವಂತವಾಗಿಡಲು ಸುವರ್ಣಾವಕಾಶಗಳಿವೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳುವ ಜವಾಬ್ದಾರಿ ನಮ್ಮದು.
ಕನ್ನಡ ಪ್ರಜ್ಞೆಯನ್ನು, ಕೇವಲ ನಮ್ಮ ಧರ್ಮದ ಆಚರಣೆ ಅಥವಾ ಹಲವು ಸಾಮಾಜಿಕ ಸಂಪ್ರದಾಯಗಳಿಗೆ ಮಿತಿಗೊಳಿಸದೆ, ಅದನ್ನು ವಿಶಾಲ ಹರವಿನ ವ್ಯಾಪ್ತಿಗೊಳಪಡಿಸಿ ಬೆಳೆಸುವುದರಲ್ಲಿ ಅರ್ಥವಿದೆ. ಹೊರನಾಡಿನಲ್ಲಿ ಹುಟ್ಟಿಬೆಳೆಯುವ ನಮ್ಮ ಮಕ್ಕಳಿಗೆ, ನಮ್ಮವರನ್ನೇ ಮದುವೆಯಾಗಬೇಕು, ನಮ್ಮ ಗುಂಪಿನಿಂದ ಹೊರಗಿನ ಸಮುದಾಯದೊಡನೆ ಸಂಪರ್ಕವಿರಬಾರದು ಎನ್ನುವ ನಿರ್ಬಂಧ ಹೇರಿ ನಮ್ಮತನವನ್ನು ಉಳಿಸಿ ಬೆಳೆಸುವ ಪ್ರಯತ್ನವನ್ನು ಮುಂದುವರೆಸಿದರೆ, ನಮ್ಮ ಪ್ರಜ್ಞೆ ಅವರಲ್ಲಿ ಜಾಗರೂಕವಾಗಿರಲು ಸಾಧ್ಯವಿಲ್ಲ. ಕಟ್ಟುಪಾಡುಗಳಿಂದ ಈ ಬಹುರಾಷ್ಟ್ರ ಸಂಸ್ಕೃತಿಯ ಜಗತ್ತಿನಲ್ಲಿ ಏನನ್ನೂ ಸಾಧಿಸಲಾಗದು. ವಿಶಾಲಮನೊಭಾವನೆಯೇ ಇದಕ್ಕೆ ಸುಲಭವಾದ ದಾರಿ. ಇತರ ಸಂಸ್ಕೃತಿಗಳನ್ನು ಆದರಿಸಿ ಗೌರವಿಸಿದರೆ, ನಮ್ಮ ಕಿರಿಯ ಪೀಳಿಗೆ ತಾನೇತಾನಾಗಿ ನಮ್ಮ ಕನ್ನಡ ಸಂಸ್ಕೃತಿ, ಭಾಷೆಗಳನ್ನೂ ಗೌರವಿಸಿ ಆದರಿಸಿ ಮುಂದುವರೆಸುವ ಸಾಧ್ಯತೆಗಳು ಹೆಚ್ಚು. ನಮ್ಮ ರೀತಿನೀತಿಗಳ ಶ್ರೀಮಂತಿಕೆಯನ್ನು ನಿಧಾನವಾಗಿ, ದೃಢವಾಗಿ, ಜಾಣತನದಿಂದ ಒತ್ತಡ ಹೇರದೆ ಅವರ ಮನಗಳಲ್ಲಿ ಬೇರೂರಿಸಬೇಕು. ಇದಕ್ಕೆ ತಾಳ್ಮೆ ಸಹನೆಗಳು ಅತ್ಯಗತ್ಯ. ನಮ್ಮ ರಕ್ತ ಹಂಚಿಕೊಂಡು, ನಮ್ಮ ಮಾರ್ಗದರ್ಶನದಲ್ಲಿ ಬೆಳೆಯುವ ನಮ್ಮ ಮುಂದಿನ ಕುಡಿಗಳು, ನಮ್ಮ ಸಮೃದ್ಧ ಬೇರಿನ ಪೋಷಣೆಯಲ್ಲಿ ಕನ್ನಡ ಪ್ರಜ್ಞೆಯನ್ನು ಉಳಿಸಿಕೊಳ್ಳುವಂತೆ ಮಾಡುವ ಜಾಣತನ ನಮ್ಮ ಕೈಯಲ್ಲಿದೆ.
ನಮ್ಮ ಕನ್ನಡ ಪ್ರಜ್ಞೆಯನ್ನು ನಾವು ಸದಾಕಾಲ ಜಾಗರೂಕವಾಗಿಟ್ಟು, ಮುಂದುವರೆಸಿದರೆ ಮಾತ್ರಾ ಅದು ಸಾಧ್ಯ!
“ಭಾಷೆಯನ್ನು ಮರೆತು ಇನ್ನಾವುದೇ ಮಾಧ್ಯಮವನ್ನು ಬಳಸಿದರೂ, ಕನ್ನಡ ಭಾಷೆಯ ಪ್ರಭಾವವಿಲ್ಲದ ಅವರ ಚಟುವಟಿಕೆಗಳು ರಸಹೀನವಾದ ಕಬ್ಬಿನಂತೆ “ಇದು ಅಕ್ಷರಸಃ ನಿಜ. ಉಮಾ ಅವರು ಕನ್ನಡ ಪ್ರಜ್ಞೆಯ ಬಗ್ಗೆ ತಮ್ಮ ಮಂಡನೆಯಲ್ಲಿ ಹತ್ತೊಂದು ವಿಚಾರಗಳ ಚರ್ಚೆ ಮಾಡಿದ್ದಾರೆ. ಮುಂದಿನ ಪೀಳಿಗೆಯ ಮೇಲೆ ಒತ್ತಡ ತರಬಾರದೆಂಬ ಮಾತನ್ನು ನಾವೆಲ್ಲಾ ಗಮನಿಸ ಬೇಕು. ಆದರೆ ಎರಡನ್ನು ತೂಗಿಸಿಕ್ದು ಹೋಗುವದು ಕಷ್ಟಕರವೇ. ಎಲ್ಲರೂ ತಮ್ಮದೇ ರೀತಿಯಲ್ಲಿ ಕನ್ನಡ ಪ್ರಜ್ಞೆಯನ್ನು ನಿಂಬೆಳೆಸುವ ಪ್ರಯತ್ನ ಮಾಡಬೇಕಾದದ್ದೇ.
ಶ್ರೀವತ್ಸ
LikeLike
ಉಮಾ ಅವರೇ, ನೀವು ಕನ್ನಡ ಬಳಗಕ್ಕೆ ಬರಲಾಗದಿದ್ದರೂ ನಿಮ್ಮ ಬರಹ-ಭಾಷಣ ಎಲ್ಲರ ಅನಿಸಿಕೆಗಳನ್ನು ಒಟ್ಟುಗೂಡಿಸಿ ಸಾರಾಂಶ ಮಾಡಿಸಿದಂತಿತ್ತು. – ಕೇಶವ
LikeLiked by 2 people