ವಿನ್ಸೆಂಟ್ ವ್ಯಾನ್ ಗೊಘ್ ೧೯ನೇ ಶತಮಾನದ ಪ್ರಭಾವಶಾಲಿ ಕಲಾವಿದ. ಈತ ಜೀವನದ ಎರಡನೇ ದಶಕದವರೆಗೂ ಚಿತ್ರ ಬರೆಯಲು ತೊಡಗಲಿಲ್ಲ. ಚಿತ್ತಕ್ಷೋಭೆಗೊಳಗಾಗಿ ತನ್ನ ೩೭ನೇ ವಯಸ್ಸಿನಲ್ಲಿ ವ್ಯಾನ್ ಗೊಘ್ ಆತ್ಮಹತ್ಯೆ ಮಾಡಿಕೊಂಡು ಓಗೊಡದ ನಾಡಿಗೆ ತೆರಳಿದ. ಅಷ್ಟರಲ್ಲಿ ಈ ಮಹಾನ್ ಪ್ರತಿಭಾವಂತ ಎರಡು ಸಾವಿರಕ್ಕೂ ಮಿಕ್ಕಿ ಚಿತ್ರಗಳನ್ನು ರಚಿಸಿದ್ದ. ಆಮ್ಸ್ಟರ್ಡ್ಯಾಂನ ವ್ಯಾನ್ ಗೊಘ್ ಚಿತ್ರ ಪ್ರದರ್ಶನಾಲಯವನ್ನು ನೋಡಿ ಬಂದ ಸ್ಫೂರ್ತಿಯಲ್ಲಿ ನಾನು ಬರೆದ ಕವನ…

ಎಲ್ಲಿತ್ತು ಆ ಪ್ರತಿಭೆ ಅಷ್ಟೊಂದು ಕಾಲ?
ಭುಗಿಲೆದ್ದಿತೇ ಭಾವನೆಗಳ ಪೂರ?
ಮುದುಡಿದ ಮನಸಿನ ಒಳಗಿಂದ
ಉಕ್ಕಿತೇ ಉಸಿರಂತೆ ಬಣ್ಣಗಳ ಜಾಲ?
ಎಷ್ಟು ಪ್ರಜ್ವಲ! ಎಷ್ಟು ವೈವಿಧ್ಯ!!
ಅಷ್ಟೇ ಪ್ರಾಂಜಲ ಭಾವ ಆ ಚಿತ್ರಗಳಲ್ಲಿ
ಸೂರ್ಯಕಾಂತಿಯ ಬೆಡಗು, ಬಾದಾಮಿ ಹೂವಿನ ಮೊಗ್ಗು;
ಆದರೆ ಹುದುಗಿತ್ತು ಮನದಲ್ಲಿ ಕಾರ್ಮೋಡದ ಬಳ್ಳಿ
ಇದ್ದನಲ್ಲ ಪ್ರೀತಿಯ ತಮ್ಮ?
ತೋಡಿಕೊಳ್ಳಲಿಲ್ಲೇಕೆ ಮನದ ಮರ್ಮ?
ತಿಳಿಯಾಗುತಿತ್ತಲ್ಲ ಕೊಳ, ದೂರಾಗುತಿತ್ತಲ್ಲ ಕಾಲ
ಸಿಗುತಿತ್ತಲ್ಲ ಜಗಕೆ ಇನ್ನೂ ನಿನ್ನ ಮಾಯಾಜಾಲ!
- ರಾಂ
ವಾನ್ ಗಾಫ್ ಮನೆತದಲ್ಲಿ ಅನೇಕ ವಿನ್ಸೆಂಟಗಳಂತೆ. ಬಹುಶಃ ನಮ್ಮಲ್ಲಿ ಹನುಮ, ಭೀಮ, ಬಸವ ಇದ್ದಂತೆ ಇರಬಹುದು. ಆದರೆ ಮೇಲಿನ ಕವನದಲ್ಲಿಯ ಕಲಾಕಾರನಂಥ ಪ್ರತಿಭಾವಂತರು ಅವನೊಬ್ಬನೇ ಇರಬೇಕು. ಅವನು ಕರೆಯುತ್ತಿದ್ದ ’ಅಂಕಲ್ ಸೆಂಟ” ನಂತೆ ಈತನದೆಲ್ಲವೂ ನೂರು ಪರ್ ಸೆಂಟ್. ಪ್ರತಿಭೆ, ಜೀವನೋತ್ಸಾಹ, ಕೊನೆಗೆ ಚಿಕ್ಕ ವಯಸ್ಸಿನಲ್ಲೆಯೇ ಗುಂಡಿಗೆ ಕೊಟ್ಟ ಜೀವವೂ 100%! ಎಂಥ ನಷ್ಟ. ಆತ ಕಲಾಭಿಮಾನಿಗಳಲ್ಲಿ ಎಬ್ಬಿಸಿದ ಭಾವನೆಗಳೂ ಅಷ್ಟೇ ಉತ್ಕಟ. ಅದಕ್ಕೆ ರಾಂ ಅವರ ಈ ಕವನವೇ ಸಾಕ್ಷಿ. ಆತನ ಕಾಂತಿಪೂರ್ಣ ಪೇಯಿಂಟಿಂಗಗಳನ್ನು ನೋಡಿದಾಗ ತಮ್ಮ ಮನಸ್ಸಿನಲ್ಲಾದ ಪರಿಣಾಮವನ್ನು ಚೆನ್ನಾಗಿ ವ್ಯಕ್ತ ಪಡಿಸಿದ್ದಾರೆ. ಅದು ಓದುಗನ ಮನಸ್ಸಿನಲ್ಲೂ ಕ್ಷೋಭೆಯನ್ನೆಬ್ಬಿಸುತ್ತದೆ. ನಾನು ಆಂಸ್ಟರ್ಡಾಂ ಹೋಗಿ ಆ ಮ್ಯೂಸಿಯಂ ನೋಡಿದ ನೆನಪು ಮರುಕಳಿಸಿತು. ರಾಂ ಅವರಿಗೆ ಧನ್ಯವಾದಗಳು.
LikeLike
ಚೆಂದವಾದ ಕವನ.
LikeLike
ಯೂರೋಪಿನ ಹಲವಾರು ಮ್ಯೂಸಿಯಮ್ ಗಳಲ್ಲಿ, ವಿನ್ಸೆಮ್ಟ್ ವ್ಯಾಘಾಫ಼ನ ವರ್ಣಚಿತ್ರಗಳನ್ನು ನೋಡಿ ಆನಂದಿಸಿದ್ದೇನೆ. ಆದರೆ ರಾಂಶರಣ್ ಅವರು ಅದನ್ನೇ ನೋಡಿ ಬರೆದ ಕವನ, ಅವರ ಈ ಚಿತ್ರಗಳ ಮೆರಗನ್ನು ಹೆಚ್ಚಿಸಿದೆ. ಅವನ ಸೂರ್ಯಕಾಂತಿ ಚಿತ್ರವನ್ನು ನೋಡಿದಾಗ ನನಗೆ ಕವನ ಬರೆಯುವ ಮನಸ್ಸಾಗಲಿಲ್ಲ. ಅವನ ಚಿತ್ರಗಳೇನೋ ಒಂದಕ್ಕಿಂತ ಇನ್ನೊಂದು ಚೆನ್ನಾಗಿಯೇ ಇದೆ. ಆದರೆ ಅದರ ಹಿಂದಿನ ಭಾವವನ್ನು ಸುಂದರ ಕನ್ನಡದ ಪದಗಳಲ್ಲಿ ಸೆರೆಹಿಡಿಯುವುದೂ ಒಂದು ಕಲೆಯೆ. ಆತ ಚಿತ್ತಕ್ಷೋಭೆಯ ಸ್ಥಿತಿಯಿಂದ ನರಳುವ ವಿಷಯವನ್ನು ಓದಿದ್ದೆ. ಆದರೆ ಅದಕ್ಕೆ ಮುಂಚೆ ಅವನು ಬಿಡಿಸಿದ ಸುಂದರವಾದ ತೈಲಚಿತ್ರಗಳು ಮನೋಹರವಾದವು. ರಾಮಶರಣ್ ಬರೆದಿರುವಂತೆ, ಅದರಲ್ಲಿನ ಹೂವುಗಳು ಜೀವಂತವಾಗಿ ನಮ್ಮೆದಿರು ಅರಳಿರುವಂತೆ ಕಾಣುತ್ತವೆ. ತಮ್ಮ ಪದ್ಯದ ಕೊನೆಯ “ಇದನಲ್ಲ ಪ್ರೀತಿಯ ತಮ್ಮ, ತೋಡಿಕೊಳ್ಳಲಿಲ್ಲೇಕೆ ಮನದ ಮರ್ಮ“ ಸಾಲುಗಳು, ವಿನ್ಸೆಂಟನ ಜೀವನದ ದುರಂತವನ್ನು ಕುರಿತು ಬರೆದಿದ್ದಾರೆ. ಒಳ್ಳೆಯ ಪದ್ಯ.
ಉಮಾ ವೆಂಕಟೇಶ್
LikeLike