ಪತ್ರ ರೂಪಾಂತರ

ತಂತ್ರ ಯುಗದಲ್ಲಿ ಯಾನ ಮಾಡುತ್ತಿರುವಾಗ ಸುದರ್ಶನ್ ಅವರ ನೀಳ್ಗವನ ಬೇರೊಂದು ಕಾಲದಲ್ಲಿ ನಡೆದ ಕಥೆಯೇನೋ ಎಂದು ಪ್ರಾರಂಭದಲ್ಲಿ ಅನಿಸುವುದು ಸಹಜ. ಆದರೆ ಇಲ್ಲಿ ಬರುವ ಸನ್ನಿವೇಶಗಳು ನಿತ್ಯ ಸತ್ಯ. ಅನಿವಾಸಿಯ ಸಂಪಾದಕನಾಗಿ ನನಗೆ ಪ್ರತೀ ಸೋಮವಾರ, ಗುರುವಾರ ಮನಸ್ಸಿನಲ್ಲಿ ಇದೇ ಬಗೆಯ ತಳಮಳ. ನಾಳೆ ಪ್ರಕಟವಾಗುವ ಕೃತಿ ಯಾವುದು, ಅದನ್ನು ಜಾಲ ತಾಣಕ್ಕೆ ಏರಿಸಿಯಾಯಿತೇ, ತಪ್ಪುಗಳಿವೆಯೇ ಹೀಗೆ ಹಲವಾರು ಯೋಚನೆಗಳು. ಕೆಲಸ, ಸಂಸಾರದ ಎಳೆತಗಳು ಇವೆಲ್ಲವೂ ಇಲ್ಲಿ ಪದರ ಪದರವಾಗಿ ತೆರೆದುಕೊಳ್ಳುತ್ತವೆ. ತೆರೆದುಕೊಳ್ಳುತ್ತಲೇ ಸದ್ಯಕ್ಕೆ ಧಡಕ್ಕನೆ ಎಳೆತರುತ್ತದೆ.

 

ಬಲುದಿನದಿ ಮಿತ್ರImage result for ancient letter rollನಿಗೆ ಪತ್ರವನೆ ಬರೆದಿಲ್ಲ
ಬರೆಯಲೆ ನಾನು ಬೇಗ
ತಾಳೆಗರಿಯೊಂದೆಳೆದು ಕುಳಿತಿರುವೆ ಯೋಚಿಸುತ
ಏನನ್ನು ಬರೆಯಲೀಗ

ಉಭಯಕುಶಲೋಪರಿಯ ಎರಡು ಸಾಲುಗಳನ್ನು
ಬರೆದಿರುವೆ ಲೇಖನಿಯಲಿ
ಮದ್ಯಾಹ್ನದೂಟಕ್ಕೆ ಆಲಸ್ಯವದು ಸೇರಿ ನಿದ್ದೆ
ಮೂಡಿತು ಕಣ್ಣುಗಳಲಿ

ನಿದ್ರೆಯಿಂದೆದ್ದು ಮುಂದೆ ಬರೆಯುವೆನೆಂದುImage result for LETTER
ನಾ ಅಲ್ಲಿ ವಿಶ್ರಮಿಸಲು
ಎದ್ದು ನೋಡಲು ತಾಳೆ ಗರಿ ಬದಲಾಗಿ
ತೊಗಲಿನಾ ಪತ್ರವಿರಲು

ತೊಗಲಿನಾ ಹಾಳೆಯಲಿ ನಾ ಪತ್ರ ಉದ್ಧರಿಸೆ
ಮತ್ತೆರೆದು ಸಾಲು ಬರೆದು
ಮುಂದಿನಾ ವಿಷಯಗಳ ಬರೆಯುವೆನು ನಂತರದಿ
ಎಂದಂದು ಒಳಗೆ ಸರಿದು

ಸಂಜೆಯಾಯಿತು ಸಂಧ್ಯಾ ವಂದನೆಯ ನಾ ಮುಗಿಸಿ
ಬಂದಿರಲು ಪತ್ರ ಬರೆಯೆ
ತೊಗಲು ಹಾಳೆಯ ಬದಲು ಅಲ್ಲಿತ್ತು ಸುಂದರ
ಬಟ್ಟೆಯ ಓಲೆ ಗರಿಯೆ

ನನ್ನ ಊರಿನ ವಿಷಯ ಅರುಹುತ್ತ ಕೇಳಿದೆನು
ಆತನ ಸುದ್ದಿಯೆಂತು
ಆಷ್ಟಕ್ಕೆ ಅಡಿಗೆಯಾ ಮನೆಯಿಂದ ನನಗೊಂದು
ಊಟಕ್ಕೆ ಕರೆಯು ಬಂತು

ಪತ್ರವನು ಬದಿಗಿಟ್ಟು ರುಚಿಯೂಟ ಸವಿಯಲಿಕೆ
ನಾನಂದು ಹೋದೆ ಒಳಗೆ
ಬಟ್ಟೆಯಾ ಓಲೆಯದು ಕಾಗದದ ಪತ್ರವಾಗಿತ್ತು
ತಾ ಅಷ್ಟರೊಳಗೆ!!

ಕಾಗದದ ಮೇಲೆರೆಡು ಸಾಲು ಗೀಚಿರಲಿಲ್ಲ
ಅಷ್ಟರಲೆ ಮಗನು ಬಂದು
ನಮ್ಮ ಜೊತೆಯಲಿ ನೀನು ಆಟವಾಡುವುದಿಲ್ಲ
ದೂಷಿಸುತ ಕರೆದನಂದು

Image result for family routineಎಲವೊ ಮಿತ್ರನೆ ನಿನಗೆ ಪತ್ರ ಬರೆಯುವ ಕೆಲಸ
ಎಳೆಯುತಿದೆ ದೀರ್ಘವಾಗಿ
ಎಂದು ಮರುಗುತ ಹೊರಟೆ ಮಗನೊಡನೆ ಆಡಲಿಕೆ
ಅವನ ಮನ ಶಾಂತಿಗಾಗಿ

ಬಂದು ಪತ್ರವ ಮುಗಿಸಿ ಮಡಿಸಿ ಲಕೋಟೆಗೆ
ಹಾಕಬೇಕೆಂದು ನೆನೆದು
ಮೇಲೊಂದು ಮರೆಯದೆಯೆ ಅಂಚೆ ಚೀಟಿಯನೆಂದು
ಮೆತ್ತಬೇಕೆಂದು ಬಗೆದು

ಮಗನಲ್ಲಿ ಮಲಗಿದನು ಇನ್ನು ತೊಂದರೆಯಿಲ್ಲ
ಪತ್ರವನು ನಾ ಮುಗಿಸಲು
ಭರದಿಂದ ಬಂದಿರಲು ಕಾಣದೆಯೆ ಕಾಗದವ
ಸುತ್ತಲೂ ಹುಡುಕುತಿರಲು

ಅಲ್ಲಿತ್ತು ಗಣಕಯಂತ್ರದ ಪರದೆ ಪರದೆಯಲಿ
ನನ ಒಕ್ಕಣೆಗಳು
ಮುಂದೆ ಬರೆಯುವುದಕೆ ಲೇಖಣಿಯೆ ಬೇಕಿಲ್ಲ
ಬೆರಳಚ್ಚು ಗುಂಡಿಗಳಿರಲು

ಪಟಪಟನೆ ನಾ ಬಡಿಯೆ ಮೂಡಿರಲು ಪರದೆಯಲಿ
ನನ್ನೆಲ್ಲ ಮನದ ಮಾತು
ಸಂಗ್ರಹಿಸಿ ಪರದೆಯಲಿ ಶೇಖರಿಸಿ ಕಳುಹಿಸಿರೆ
ಕ್ಷಣದಲ್ಲಿ ಹಾರಿಹೋಯ್ತು

 

ಪತ್ರಗಳ ವಿನಿಮಯಕೆ ಬೇಕಿತ್ತು ಹಿಂದೆಲ್ಲ
ದಿನ ವಾರ ಮಾಸ ಕಾಲ
ಕಣ್ಣೆವೆಯ ಬಡಿವಲ್ಲಿ ಹೊತ್ತೊಯ್ದು ತಲುಪಿಸಿದೆ
ಮಾಯೆಯಾ ಅಂತರ್ಜಾಲ

ಏನಿದಚ್ಚರಿ ದೇವ ಪ್ರತಿಸಲಕು ಪಡೆಯುತಿದೆ
ನನ ಪತ್ರ ರೂಪಾಂತರ
ಸಂದೇಶದ ಮಣ್ಣ ಕಲಸಿ ರೂಪಾಂತರವ
ನೀಡಿರೆ ಕಾಲ- ಕುಂಬಾರ

ಕಾಲನಾ ಹರಿವಿನಲಿ ಕುಳಿತು ನಾ ದೋಣಿಯಲಿ
ಅನುಭವಿಸಿ ಅಚ್ಚರಿಯನು
ಕನಸೊ ನನಸೊ ಎಂದು ತಿಳಿಯದಲೆ ಬೆಚ್ಚುತಲಿ
ಬಿಟ್ಟಿರಲು ನನ ಕಣ್ಣನು

ನಿಮ್ಮ ಬಡಬಡಿಕೆಯಲಿ ನನಗೆ ನಿದ್ರೆಯದಿಲ್ಲ
ದೂರುತಲಿ ನನ ಹೆಂಡತಿ
ಪತ್ರ ಬರೆಯುವುದೆಂದು ನಿಮ್ಮ ಹಣೆಯಲ್ಲಿಲ್ಲ
ಎಂದೆನುತ ತಿವಿದು ಮೂತಿ

ಮಗ್ಗುಲಿಗೆ ಹೊರಳಿದಳು ಕೊಡುತಲಿ ಎಚ್ಚರಿಕೆ
ಹೊಡೆದಳು ತಾನು ಗೊರಕೆ
ನಿದ್ರೆ ಬಾರದೆ ನಾನು ಮನದ ಕಸವನು ಗುಡಿಸೆ
ಹಿಡೆದೆ ಮರೆವಿನ ಪೊರಕೆ.

ಡಾ. ಸುದರ್ಶನ ಗುರುರಾಜರಾವ್.

5 thoughts on “ಪತ್ರ ರೂಪಾಂತರ

  1. ಸುದರ್ಶನರವರೆ, ನಿಮ್ಮ ಈ ಕವಿತೆಯಲ್ಲಿ, ದಶಕಗಳು ಬಹಳ ವೇಗದಲ್ಲಿ ಕಳೆದು ನಾವು ಅದರ ಬಗ್ಗೆ ಯೋಚಿಸುವ ಮೊದಲೆ ಬರಹದ ಬದಲಾವಣೆಗಳು, ಬಹಳ ವೇಗದಲ್ಲಿ ನಮ್ಮ ಜೀವನವನ್ನು ಆಕ್ರಮಿಸಿರುವುದನ್ನು, ಸರಳವಾದ ಭಾಷೆಯಲ್ಲಿ ಸೊಗಸಾಗಿ ಹೇಳಿದ್ದೀರಿ. ನಿಮ್ಮಿಂದ ಮತ್ತೊಂದು ಉತ್ತಮ ಕೊಡುಗೆ ಅನಿವಾಸಿ ಓದುಗರಿಗೆ.
    ದಾಕ್ಷಾಯಿಣಿ

    Like

  2. ಪತ್ರ ರೂಪಾಂತರದಲ್ಲಿ ’ಕಾಲ’ದೈನಂದಿನ ಕೆಲಸ ಕಾರ್ಯಗಳಲ್ಲಿ ಕಳೆದು ಹೋದದ್ದು ಆದರೆ ಬದಲಾವಣೆ ನಿರಂತರವಾಗಿ ಅಪ್ಪಳಿಸಿದ್ದು,ಅದರ ಅಲೆಗಳಲ್ಲಿ ನಾವು ರಾತ್ರಿ ಹಗಲುಗಳನ್ನು ಮಾಡಿದ್ದು ಎಲ್ಲ ವಿವರವಾಗಿದೆ. ಅದರಂತೆ ನಾವು ಈ ಬದಲಾವಣೆಗಳನ್ನು ಒಪ್ಪಿ ್ಅಳವಡಿಸಿಕೊಳ್ಳುತ್ತಾ ಸಾಗಿರುವುದು ದೈನಂದಿನ ಪರಿಯಾಗಿರುವ ಸೋಜಿಗವೂ ಇದೆ.

    Like

  3. ಸುದರ್ಶನರು ಸದ್ಯದ ದೈನಂದಿನ ಜಂಜಾಟದ ಹಿನ್ನೆಲೆಯಲ್ಲಿ ’ಪತ್ರ ಪರಾಚಿ’ ನಡೆದು ಬಂದ ದಾರಿಯನ್ನೂ ವರ್ಣಿಸುವ ಡೊಂಬರಾಟದ ಸಮತೋಲಕ್ಕೆ ಚ್ಯುತಿಯಿಲ್ಲದಂತೆ ಬರೆದ ಬರವಣಿಗೆ ಮೆಚ್ಚುವಂತದು. Timeline ನಲ್ಲಿ present ಬಿಡುವಿಲ್ಲದೆ ಕಾಡುತ್ತಿರುತ್ತದೆ. ಮತ್ತೆ ಮತ್ತೆ ಗತಕಾಲಕ್ಕೆ ಭೆಟ್ಟಿ ಕೊಟ್ಟು ’ಟೈಮ್ ಟ್ರಾವಲ್’ ಮುಂದುವರೆಯುತ್ತಿರುತ್ತದೆ. ಅದರ ಮೇಲೆ ಸುಂದರ ಕಲ್ಪನೆಗಳು (ಕಾಲ ಕುಂಬಾರ, ಮರೆವಿನ ಪೊರಕೆ,ಕಾಲನಾ ಹರಿವಿನ ದೋಣಿ) ,ಇವನ್ನೆಲ್ಲ ಅಸ್ವಾದಿಸಿದೆ.
    ಮತ್ತೊಂದು ಓಳ್ಳೆಯ ಕವಿತೆ.

    Like

  4. ಮಾನವ ತನ್ನ ಉಭಯಕುಶಲೋಪರಿಯನ್ನು ಬರೆಯುವ ಸಾಧನದ ವಿಕಾಸವನ್ನು, ದೈನಂದಿನ ಜೀವನದ ಆಗುಹೋಗುಗಳೊಂದಿಗೆ ಬೆರೆಸಿ ಬರೆದ ಸುದರ್ಶನ ಅವರ ನೀಳ್ಗವನ, ಅವರದೇ ವಿಶಿಷ್ಟ ಶೈಲಿಯಲ್ಲಿ ಚೆನ್ನಾಗಿ ಮೂಡಿಬಂದಿದೆ. ತಾಳೆಯ ಗರಿಯಿಂದ ಪ್ರಾರಂಭಿಸಿ, ಗಣಕಯಂತ್ರದವರೆಗೆ ಮಾನವ ತನ್ನ ಸಂವಹನವನ್ನು ನಡೆಸುವ ಪರಿಯನ್ನು ಹೇಗೆ ಅಭಿವೃದ್ಧಿಗೊಳಿಸಿರುವ ಎನ್ನುವುದನ್ನು ಆಸಕ್ತಿಪೂರ್ಣವಾಗಿ ಬರೆದಿದ್ದಾರೆ. ಅವರ ಪದಗಳ ಬಳಕೆಯ ವೈಖರಿ ಕವನದ ೧೫ನೆಯ ಸಾಲಿನಲ್ಲಿ ನನಗೆ ಮೆಚ್ಚುಗೆಯಾಯಿತು.
    “ಏನಿದಚ್ಚರಿ ದೇವ ಪ್ರತಿಸಲಕು ಪಡೆಯುತಿದೆ
    ನನ ಪತ್ರ ರೂಪಾಂತರ
    ಸಂದೇಶದ ಮಣ್ಣ ಕಲಸಿ ರೂಪಾಂತರವ
    ನೀಡಿರೆ ಕಾಲ- ಕುಂಬಾರ“
    ಪತ್ರಗಳ ಸಂದೇಶವನ್ನು ಕಾಲನೆಂಬ ಕುಂಬಾರನು ಅಚ್ಚರಿಪಡುವ ರೀತಿಯಲ್ಲಿ ರೂಪಾಂತರಗೊಳಿಸಿದ್ದಾನೆ ಎನ್ನುವ ಸಾಲು ಸುಂದರವಾಗಿದೆ.
    ಅದೇ ರೀತಿ ಕಡೆಯ ಸಾಲಿನಲ್ಲಿ ನಿದ್ರೆ ಬಾರದೆ ಮನವನ್ನು ಗುಡಿಸಲು, ಮರೆವು ಎಂಬ ಪರಕೆಯನ್ನು ಹಿಡಿದೆ ಎನ್ನುವ ಪದಗಳು ನನಗೆ ಹಿಡಿಸಿತು. ಸುದರ್ಶನ ಅವರ ಮತ್ತೊಂದು ಭಿನ್ನವಾದ ಶೈಲಿಯ ಪದ್ಯ ನಮ್ಮ ಅನಿವಾಸಿ ಜಾಲಜಗುಲಿಯನ್ನು ಸಂಪನ್ನಗೊಳಿಸಿದೆ.
    ಉಮಾ ವೆಂಕಟೇಶ್

    Like

  5. Sudarshanarige dhanyavadagalu. Nimma kavan odi nanna manassu namma haleya samsar nimma hageye nirvahisiddudu jnapakakke banditu. Yee deshakke band nanter navellaru namma namma vyavsaya,samsar,makkaLa shikshaNagaLalli heNagadale bekalla. Yeede yellara jeevanada daari.
    Aravind Kulkarni

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.