
ದಾರಿ ನೂರಾರಿವೆ ಬೆಳಕಿನರಮನೆಗೆ’! ‘ಬೇಡ ನನಗೆ ಸಿದ್ಧಾಂತಗಳ ರಾದ್ಧಾಂತ’! ‘ಒಂದೊಂದು ಹಂತ,ನೂರಾರು ಭಾವದ ಭಾವಿ ಎತ್ತಿಕೋ!ನಿನಗೆ ಬೇಕಾದಷ್ಟು ಸಿಹಿನೀರ,ಪಾತ್ರೆಯಾಕಾರಗಳ ಕುರಿತ ಏತಕೆ ಜಗಳ?ನಮಗೆ ಬೇಕಾದದ್ದು ದಾಹ ಪರಿಹಾರ’ ಆಹಾ! ಎಂಥ ಮಾತುಗಳು. ಇದನ್ನು ಬರೆದವರಾರು ಎಂದು ಚಿಂತಿಸುದ್ದೀರಾ ? ಇವರೇ ರಾಷ್ಟ್ರಕವಿ ಡಾ ಜಿ.ಎಸ್.ಶಿವರುದ್ರಪ್ಪ.ಕವಿ, ವಿಮರ್ಶಕ, ಸಂಶೋಧಕ, ನಾಟಕಕಾರ, ಉತ್ತಮ ಶಿಕ್ಷಕ ಹಾಗೂ ಒಳ್ಳೆಯ ಆಡಳಿತಗಾರ.
ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ- ಶಾಂತವೀರಪ್ಪ ಹಾಗು ವೀರಮ್ಮನವರಿಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು. ತಂದೆಯಿಂದ ಸಾಹಿತ್ಯದ ಗೀಳು ಹತ್ತಿಸಿಕೊಂಡ ಶಿವರುದ್ರಪ್ಪನವರು ಹೊನ್ನಾಳಿ,ಕೋಟೆಹಾಳಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು, ರಾಮಗಿರಿ, ಬೆಲಗೂರುಗಳಲ್ಲಿ ಮಾಧ್ಯಮಿಕ ಶಿಕ್ಷಣವನ್ನು,ದಾವಣಗೆರೆ,ತುಮಕೂರುಗಳಲ್ಲಿ ಪ್ರೌಢಶಾಲಾ,ಇಂಟರ್ ಮೀಡಿಯಟ್ ಶಿಕ್ಷಣವನ್ನೂ ಮುಗಿಸಿದರು.ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ.ಎ.ಆನರ್ಸ್ ಪದವಿ ಪಡೆದ ನಂತರ, ಕೆಲಕಾಲ ದಾವಣಗೆರೆಯ ಡಿ.ಆರ್.ಎಮ್.ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದು, ನಂತರ ಎಮ್.ಎ.ಮುಗಿಸಿದರು. ೧೯೫೫ರಲ್ಲಿ ಭಾರತ ಸರಕಾರದ ಸಂಶೋಧನಾ ಶಿಷ್ಯವೇತನದ ಸಹಾಯದಿಂದ ಕುವೆಂಪುರವರ ನೇತೃತ್ವದಲ್ಲಿ ಸಂಶೋಧನೆ ನಡೆಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ದೊರಕಿಸಿಕೊಟ್ಟ ಇವರ ಪ್ರೌಢ ಪ್ರಬಂಧದ ವಿಷಯ – ಸೌಂದರ್ಯ ಸಮೀಕ್ಷೆ.
ಡಾ. ಜಿ.ಎಸ್.ಶಿವರುದ್ರಪ್ಪನವರು ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜು, ಮೈಸೂರು ಮಹಾರಾಜಾ ಕಾಲೇಜಿನಲ್ಲಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಹಾಗು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹಸ್ತಪ್ರತಿಗಳ ಸಂಗ್ರಹಣೆ,ರಕ್ಷಣೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಶಿವರುದ್ರಪ್ಪನವರು ೧೯೭೧ರಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ‘ಹಸ್ತಪ್ರತಿ ವಿಭಾಗ’ವನ್ನು ಪ್ರಾರಂಭಿಸಿದರು.ಕೇವಲ ೪ ವರ್ಷಗಳಲ್ಲಿ ೩೦೦೦ಕ್ಕೂ ಹೆಚ್ಚು ಓಲೆಗರಿಯ ಹಾಗೂ ೧೦೦೦ಕ್ಕೂ ಹೆಚ್ಚು ಕಾಗದದ ಹಸ್ತಪ್ರತಿಗಳ ಸಂಗ್ರಹಣೆಯಾಯಿತು.ನಿವೃತ್ತಿಯ ನಂತರವೂ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಕುವೆಂಪು ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಗಣನೀಯ ಸೇವೆ ಸಲ್ಲಿಸಿರುತ್ತಾರೆ. ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯರಾಗಿ, ರಾಜ್ಯ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ದೆಹಲಿಯ ರಾಷ್ಟ್ರೀಯ ಕವಿ ಸಮ್ಮೇಳನ, ತುಮಕೂರಿನ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷ, ಮದರಾಸಿನ ಕನ್ನಡ ಸಮ್ಮೇಳನದ ಅಧ್ಯಕ್ಷ ಹಾಗೂ ೧೯೯೨ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಗೌರವಿಸಲ್ಪಟ್ಟಿದ್ದಾರೆ.
ಕುವೆಂಪು ಶಿಷ್ಯ ಪರಂಪರೆಯನ್ನು ಉಳಿಸಿಕೊಂಡು ಬಂದವರು ಇವರು. ಯಾವಾಗಲು ಪಂಚೆ-ಶರ್ಟಿನ್ನೇ ಧರಿಸುತ್ತಿದ್ದ ಶಿವರುದ್ರಪ್ಪನವರು, ಮಾಸ್ಕೊ ನಗರಕ್ಕೆ ಹೋಗಬೇಕಾದರೆ ಮೊದಲ ಬಾರಿಗೆ ಪ್ಯಾಂಟ್ ಧರಿಸಿದೆ ಎಂದು ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. ‘ನೀನು ಮುಗಿಲು ನಾನು ನೆಲ’ ಎಂದು ಮರೀಚಿಕೆಯಲ್ಲಿ ಆಕಾಶ ಹಾಗು ಭೂಮಿ ಸೇರಿದಾಗ ಏನನ್ನು ಯೋಚಿಸಿಬಹುದು ಎಂಬುದನ್ನು ಅದ್ಭುತವಾಗಿ ಬರೆದಿದ್ದಾರೆ. ಸಿ.ಅಶ್ವತ್ ಜತೆ ಇವರ ಸಮ್ಮಿಲನ ಮುಗಿಲು-ನೆಲ ಸೇರಿದ ಉಲ್ಲಾಸಕ್ಕೆ ಸಂಕೇತ.
ಇನ್ನು ಎಲ್ಲ ನಿನ್ನದೇ ಎಂದು ದೇವರಿಗೆ ಹೇಳಿದ ಕವನದಲ್ಲಿ- ‘ನಿನ್ನದೇ ನೆಲ ನಿನ್ನದೇ ಜಲ’ ವೆಂದರು. ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಇನ್ನೊಂದು ಅದ್ಭುತ ಗೀತೆ. ಇವರ ಕವನ ಸಂಕಲನಗಳಾದ ಸಾಮಗಾನ, ದೀಪದ ಹೆಜ್ಜೆ, ಪ್ರೀತಿ ಇಲ್ಲದ ಮೇಲೆ, ದೇವಶಿಲ್ಪ, ಕಾಡಿನ ಕತ್ತಲಲ್ಲಿ ಎಲ್ಲವನ್ನೂ ನೆನೆಯ ಬೇಕಾದದ್ದೆ. ಅಷ್ಟೇ ಅಲ್ಲ, ಇವರ ಪ್ರವಾಸವು ಇಂಗ್ಲೆಂಡಿನವರೆಗೂ ಕಾಲಿಟ್ಟಿದ್ದು ‘ಇಂಗ್ಲೆಂಡಿನಲ್ಲಿ ಚತುರ್ಮಾಸ’ ಎಂಬ ಪ್ರವಾಸ ಸಂಕಲನವನ್ನು ಬರೆದಿದ್ದಾರೆ. ಹಾಗೆಯೆ ಇವರ ‘ಎದೆ ತುಂಬಿ ಹಾಡುವೆನು’ ಎಲ್ಲ ಕನ್ನಡ ಗಾಯಕರಿಗೂ ಒಂದು ಆಂಥಮ್ ತರಹ.
ಜಿ.ಎಸ್.ಶಿವರುದ್ರಪ್ಪನವರಿಗೆ ವಿಮರ್ಶೆಗಾಗಿ ೧೯೮೪ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತು.ಇದಲ್ಲದೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೨), ರಾಜ್ಯೋತ್ಸವ ಪ್ರಶಸ್ತಿ, ಸೋವಿಯತ್ ಲ್ಯಾಂಡ ನೆಹರೂ ಪ್ರಶಸ್ತಿ (೧೯೭೩)ಸಹ ಶಿವರುದ್ರಪ್ಪನವರಿಗೆ ದೊರೆತಿವೆ. ೨೦೦೬ನೆಯ ಸಾಲಿನಲ್ಲಿ ಜರಗಿದ ಸುವರ್ಣ ಕರ್ನಾಟಕ ಉತ್ಸವದ ಸಂದರ್ಭದಲ್ಲಿ ಜಿ.ಎಸ್.ಶಿವರುದ್ರಪ್ಪನವರಿಗೆ ಕರ್ನಾಟಕ ಸರಕಾರವು ರಾಷ್ಟ್ರಕವಿ (೨೦೦೬) ಎನ್ನುವ ಗೌರವವನ್ನು ಪ್ರಧಾನಿಸಿದೆ. ಇವರು ಗೋವಿಂದ ಪೈ, ಮತ್ತು ಕುವೆಂಪು ನಂತರ ಈ ಗೌರವಕ್ಕೆ ಪಾತ್ರರಾದ ಮೂರನೆಯ ರಾಷ್ಟ್ರಕವಿ. ಇವರಿಗೆ ದೊರೆತ ಇನ್ನಿತರ ಪುರಸ್ಕಾರಗಳು: ಪಂಪ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ ಹಾಗೂ ನಾಡೋಜ ಪ್ರಶಸ್ತಿ.
ಈಗ ಇವರು ಅವರ ಮನ ಹಂಬಲಿಸಿದ ಹಾಗೆ ಕಾಣದ ಕಡಲಿಗೆ ತೆರೆಳಿದ್ದಾರೆ. ಲೌಕಿಕವಾಗಿ ನಮ್ಮೊಡನೆ ಇರದಿದ್ದರೂ, ಅವರ ಗೀತೆಗಳ ಮುಖಾಂತರ ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದ್ದಾರೆ.
ರಾಷ್ಟ್ರಕವಿಗೆ ನಮನ.
LikeLike
ಲೇಖನ ಚೆನ್ನಾಗಿದೆ ಗಿರಿಧರ್. ಜಿಎಸೆಸ್ ಕವಿತೆಗಳ ಹಿನ್ನೆಲೆಯಲ್ಲಿ ಅವರ ಜೀವನದ ವೃತ್ತಾಂತ ಮತ್ತು ಸಾಧನೆಗಳನ್ನು ಹೆಣೆಯುವ ಒಂದು ಒಳ್ಳೆಯ ಪ್ರಯತ್ನ!
LikeLike
ಧನ್ಯವಾದಗಳು
LikeLike