ಯಕ್ಷಗಾನ ‘ಪ್ರಸಂಗ’ದಲ್ಲಿ ಸಾಮಾಜಿಕ ಸಮಸ್ಯೆಗಳು – ರಾಮ್

ಯಕ್ಷಗಾನ ದಕ್ಷಿಣೋತ್ತರ ಜಿಲ್ಲೆಗಳ ಜನರ ನರನಾಡಿಗಳಲ್ಲಿ ಹರಿಯುವ ನೆತ್ತರು. ‘ಆಟ’ ಎಂದರೆ ಯಕ್ಷಗಾನ; ‘ಪ್ರಸಂಗ’- ಆಟದ ಕಥೆ; ತಂಡವೇ ಮೇಳ. ಬೆಳೆಯುವಾಗ ಆಟ ಕುಣಿಯದ ಚಿಣ್ಣರು ನನ್ನ ಬಾಲ್ಯದ ದಿನಗಳಲ್ಲಿರಲಿಲ್ಲ. ರಾತ್ರಿಯಿಡೀ ಕುಳಿತು, ಮಲಗಿ, ನೋಡುತ್ತಿದ್ದ ಆಟ ನಮಗೊಂದು ಥರ ಮಾಟ ಮಾಡಿತ್ತು. ಆ ಅಮಲು ಇಂದೂ ಇಳಿದಿಲ್ಲ. ಕಾಲಕ್ಕೆ ತಕ್ಕಂತೆ ಈಗ ಆಟದ ಅವಧಿ ಪಟ್ಟಣಗಳಲ್ಲಿ 2-3 ತಾಸಿಗೆ ಇಳಿದಿದೆ. ಮೊನ್ನೆ ಊರಿಗೆ ಹೋದಾಗ ಆಟ ನೋಡುವ ಅವಕಾಶ ಸಿಕ್ಕಿತು. ಹೆಕ್ಮೇಳ ಅಂದರೆ ಆರಿಸಿದ ಕಲಾವಿದರ ತಂಡ – hand picked ಅಂತಾರಲ್ಲ, ಹಾಗೆ. ಪ್ರಮುಖ ಪಾತ್ರದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ (ನುರಿತ ಹಿರಿಯ ಕಲಾವಿದ) ಹಾಗೂ ಸ್ತ್ರೀವೇಷದಲ್ಲಿ ನೀಲ್ಕೋಡು ಶಂಕರ ಹೆಗಡೆ (ಭಾವಪೂರ್ಣ ಹಾಗೂ ಅನನ್ಯ ನೃತ್ಯ ಶೈಲಿಗೆ ಪ್ರಸಿದ್ಧ)ಯವರಿದ್ದಾಗ ಸಿಕ್ಕ ಚಾನ್ಸ್ ಬಿಡಲಾದೀತೇ?

ಪ್ರಸಂಗಗಳು  ಪೌರಾಣಿಕ ಕಥೆಗಳನ್ನು ಅವಲಂಬಿಸಿರುವುದೇ ಜಾಸ್ತಿ. ರಾಮಾಯಣ, ಮಹಾಭಾರತಗಳ ಉಪಕಥೆಗಳು ಸಾಮಾನ್ಯ. ‘ಮಾಗದ ವಧೆ’, ‘ರುಕ್ಮಾಂಗದ ಚರಿತೆ’  ಅಥವಾ ‘ಕೀಚಕ ವಧೆ’ ಕೆಲವು ಚಿರಪರಿಚಿತ ಪ್ರಸಂಗಗಳು. ಚಂದಮಾಮದ ಕಥೆಗಳೂ ಪ್ರಸಂಗಗಳಾಗಿವೆ. ನಾನು ನೋಡಿದ ಪ್ರಸಂಗ, ‘ರಾಜಾ ಉಗ್ರಸೇನ’. ನನಗೆ ಈ ಕಥೆಯ ತುದಿ ಬುಡ ಗೊತ್ತಿರಲಿಲ್ಲ. ಯಾವುದೋ ಅಡುಗೂಲಜ್ಜಿ ಕಥೆಯಂತಿತ್ತು ಈ ಶೀರ್ಷಿಕೆ. ಇದರಲ್ಲೇನಿದೆ ಸಾಮಾಜಿಕ ಸಮಸ್ಯೆಗಳ ವಿಶ್ಲೇಷಣೆ ಎಂದು ನೀವು ಪ್ರಶ್ನಿಸಿದರೆ ಆಶ್ಚರ್ಯವೇನಿಲ್ಲ. ಮೊದಲು ಕಥೆ ಕೇಳಿ.

IMG_8308
ವಸಂತಾಗಮನವನ್ನು ಆನಂದಿಸುವ ವೃಷಸೇನೆ

ಒಂದಾನೊಂದು ಕಾಲದಲ್ಲಿ ಒಂದೂರು. ಅಲ್ಲಿಯ ರಾಜ ಉಗ್ರಸೇನ. ಅವನ ಪಟ್ಟದರಸಿ ವೃಷಸೇನೆ. ರಾಜನಿಗೆ ಸುಮಾರು ಮಧ್ಯಮ ವಯಸ್ಸು. ರಾಣಿ ಇನ್ನೂ ಯುವತಿ.  ಇಬ್ಬರಿಗೂ ಮಕ್ಕಳಿಲ್ಲ. ಈ ನೋವು ರಾಣಿಯನ್ನು ಕಾಡುತ್ತಿದೆ. ಆಗಷ್ಟೇ ವಸಂತ ಕಾಲಿಡುತ್ತಿದ್ದಾನೆ. ಎಲ್ಲೆಲ್ಲೂ ಚಿಗುರೊಡೆದು ಮರಗಿಡಗಳು ನವಯೌವ್ವನ ಪಡೆದಿವೆ; ಗಿಳಿಗೊರವಂಕಗಳ ಸಂಗೀತ ಎಲ್ಲೆಡೆ ಪಸರಿಸಿ ನೋವೋತ್ಸಾಹವನ್ನು ತುಂಬುತ್ತಿದೆ. ವೃಷಸೇನೆಗೆ ತಾಯ್ತನದ ಆಸೆ ಉಕ್ಕುತ್ತಿದೆ. ಆಕೆ ರಾಜನನ್ನು ವನ ವಿಹಾರಕ್ಕೆ ಆಹ್ವಾನಿಸುತ್ತಾಳೆ. ರಾಜನಲ್ಲಿ ಯಾವುದೇ ಉಲ್ಲಾಸವಿಲ್ಲ. ರಾಜ್ಯಭಾರದ ನೆವ ಹೇಳಿ, ಸಖಿಯರೊಡನೆ ಜಲಕ್ರೀಡೆಯಾಡಲು ಕಳಿಸಿ, ಸಂಜೆಯಾಗುವುದರಲ್ಲಿ ಬಂದು ಕೂಡುವೆನೆಂದೂ ಭರವಸೆ ನೀಡುತ್ತಾನೆ.

ಅದೇ ಸಮಯದಲ್ಲಿ ಕಾಡಿನಲ್ಲಿ ರಕ್ಕಸನೊಬ್ಬ ಹಸಿವೆಯಿಂದ ಚಡಪಡಿಸುತ್ತಾ ಆಹಾರದ ಹೊಂಚು IMG_8281ಹಾಕುತ್ತಿರುತ್ತಾನೆ. ಅವನ ಕೈಗೆ ಪ್ರಪಂಚ ಪರ್ಯಟನೆಗೆ ಹೋರಟ ನಾರದರು ಸಿಕ್ಕಿಬೀಳುತ್ತಾರೆ. ತಿನ್ನಲು ಬಂದ ರಾಕ್ಷಸನ ಹಸಿವೆಯನ್ನು ಮಂತ್ರ ಶಕ್ತಿಯಿಂದ ಪರಿಹರಿಸುತ್ತ, ಋಷಿಯೊಬ್ಬನ ಶಾಪಕ್ಕೊಳಗಾಗಿ ಅಸುರನಾಗಿರುವ ಯಕ್ಷ ನೀನು ಎಂಬ ಕಥೆಯನ್ನೂ ಹೇಳುತ್ತಾರೆ. ನೀನು ಸ್ತ್ರೀಯೊಬ್ಬಳನ್ನು ಕೂಡಿ, ಗರ್ಭದಾನ ಮಾಡಿ ಅದೇ ಸ್ತ್ರೀಯ ಪತಿಯಿಂದ ಹತನಾದರೆ ಮಾತ್ರ ನಿನಗೆ ಶಾಪ ಮುಕ್ತಿ ಎಂಬ ಪರಿಹಾರವನ್ನು ತಿಳಿಸುತ್ತಾರೆ. ರಾಕ್ಷಸ ಶಾಪ ಮುಕ್ತಿಯ ಹಾದಿ ಹುಡುಕುತ್ತ ಸಾಗುತ್ತಾನೆ.

ರಾಜನ ಅಸಡ್ಡೆಯಿಂದ ನೊಂದ ರಾಣಿ ಅರಣ್ಯದಲ್ಲಿ ವಿಹರಿಸುತ್ತಿರುವಾಗ, ಮುದಿ ಬ್ರಾಹ್ಮಣನೊಬ್ಬ IMG_8347ಎದುರಾಗುತ್ತಾನೆ. ಉಭಯಕುಶಲೋಪರಿಯ ಬಳಿಕ ಮಾತು ಮುಂದುವರೆಯುತ್ತ, ವೃಷಸೇನೆ ಮನದಿಚ್ಛೆ, ದುಗುಡ-ದುಮ್ಮಾನಗಳನ್ನು ಅಪರಿಚಿತನೆದುರು ಬಿಚ್ಚಿಡುತ್ತಾಳೆ. ಬ್ರಾಹ್ಮಣ ಅವಳಿಗೆ ಸಮಾಧಾನ ಹೇಳಿ, ಆಶೀರ್ವದಿಸಿ ತನ್ನ ದಾರಿ ಹಿಡಿದು ಹೋಗುತ್ತಾನೆ. ಅಂತೆಯೇ ಅಲ್ಲಿಗೆ ಉಗ್ರಸೇನ ಆಗಮಿಸುತ್ತಾನೆ.  ವೃಷಸೇನೆಗೆ ಆನಂದಾಶ್ಚರ್ಯ! ನಿರೀಕ್ಷೆಗಿಂತ ಮೊದಲೇ ಬಂದ ಗಂಡನನ್ನು ಕಂಡ ಆಕೆಯ ಸಂತೋಷಕ್ಕೆ ಮೇರೆಯೇ ಇರುವುದಿಲ್ಲ. ರಾಜ ಪ್ರವೇಶಿಸುತ್ತಿದ್ದಂತೇ ಅವರ ಏಕಾಂತಕ್ಕೆ ಧಕ್ಕೆ ಬರದಿರಲೆಂದು ಸಖಿಯರು ಅರಮನೆಗೆ ತೆರಳುತ್ತಾರೆ. ಮೈಮರೆತ ವೃಷಸೇನೆ, ರಾಜನನ್ನು ಬಲು ಸಂಭ್ರಮದಿಂದ ಕೂಡುತ್ತಾಳೆ.

ರಾಸಕ್ರಿಯೆ ಮುಗಿದಂತೇ, ಉಗ್ರಸೇನನ ರೂಪದಲ್ಲಿದ್ದ ರಾಕ್ಷಸ ನಿಜ ರೂಪ ತೋರಿಸುತ್ತಾನೆ. ಪತಿಯ ವೇಷದಲ್ಲಿ ಬಂದವನ ಜೊತೆ ಮೋಸ ಹೋದೆನಲ್ಲ ಎಂಬ ಹತಾಶೆ ವೃಷಸೇನೆಗೆ ಒಂದೆಡೆ; ತನ್ನ ಅಸಹಾಯಕತೆಯ  ಬಳಸಿಕೊಂಡನಲ್ಲ ಎಂಬ ಕ್ರೋಧ ಇನ್ನೊಂದೆಡೆ. ದುಃಖ-ಕ್ರೋಧಗಳ ಉನ್ಮಾದದಲ್ಲಿ IMG_8321ಆಕೆ ಮೂರ್ಛೆ ಹೋಗುತ್ತಾಳೆ. ತಾನು ಮಾಡಿದ ಪ್ರಮಾದದ ಅರಿವೂ ಇಲ್ಲದ ರಾಕ್ಷಸನೋ ತನ್ನ ಕಾರ್ಯವಾದ ಸಂತಸದಲ್ಲಿ ಬೀಗುತ್ತ ವಿಶ್ರಮಿಸುತ್ತಾನೆ. ಅತ್ತ, ಅರಮನೆಗೆ ತೆರಳಿದ ಸಖಿಯರಿಗೆ ದಿಗ್ಭ್ರಾಂತಿ ; ತಾವು ಕಾಡಿನಲ್ಲಿ ಕಂಡ ಅರಸ ಅರಮನೆಯಲ್ಲೇ ಇದ್ದಾನೆ! ವೃತ್ತಾಂತ ಕೇಳಿದ ಉಗ್ರಸೇನ ನಖಶಿಖಾಂತ ಕೋಪದಿಂದ ಕುದಿಯುತ್ತ ಅರಣ್ಯಕ್ಕೆ ಧಾವಿಸುತ್ತಾನೆ. ಹಮ್ಮಿನಲ್ಲಿ ಕುಳಿತ ದುರುಳನ ಕತ್ತನ್ನು ‘ಖಚಕ್’ ಎಂದು ಕತ್ತರಿಸುತ್ತಾನೆ. ಸ್ಮೃತಿ ಬಂದ ವೃಷಸೇನೆ, ಗಂಡನಿಗೆ ಆದ ಕಥೆಯನ್ನೆಲ್ಲ ಹೇಳಿ, ತಿಳಿಯದೇ ಆದ ತಪ್ಪನು ಮನ್ನಿಸೆನೆಂದು ಗೋಗರೆಯುತ್ತಾಳೆ. ಉಗ್ರಸೇನನಿಗೆ ಉಭಯಸಂಕಟ. ಆತ ವೃಷಸೇನೆಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡರೂ, ಸಮಾಜದ ಕೊಂಕುನೋಟವನ್ನು ಎದುರಿಸಲಾರೆನಲ್ಲ ಎಂದು ಅಲವತ್ತುಕೊಳ್ಳುತ್ತಾನೆ. ಬೇರೆ ದಾರಿ ಕಾಣದೇ  ವೃಷಸೇನೆ ಇನ್ನೇನು ಆತ್ಮಹತ್ಯೆಯ ಮೊರೆಹೋಗಬೇಕೆನ್ನುವಾಗ, ನಾರದರು ಪ್ರತ್ಯಕ್ಷರಾಗುತ್ತಾರೆ. ಇಬ್ಬರಿಗೂ ಬುದ್ಧಿ ಹೇಳಿ, ದಂಪತಿಗಳನ್ನು ಒಂದು ಮಾಡಿ ಮಂಗಳ ಹಾಡುತ್ತಾರೆ.

ಹೌದು, ಇದೊಂದು ಅಡಗೂಲಜ್ಜಿ ಕಥೆಯೇ ಸರಿ. ಅಪ್ರತಿಮ ಕಲಾವಿದರ ಅಭಿನಯ ನಮ್ಮನು ತಾಸೆರಡು ತಾಸು ಮೈಮರೆಸಿತ್ತು. ಹಾಗೇ  ಮೆಲಕು ಹಾಕಿದಾಗ, ಪ್ರತಿ ಮಜಲಿನಲ್ಲಿ ಈ ಕಥೆ ಜೀವನದ ಮೌಲ್ಯಗಳನ್ನು ತೆರೆದಿಡುತ್ತ ಹೋಗುವುದು ಭಾಸವಾಗುತ್ತದೆ. ಇಲ್ಲೊಬ್ಬ ಮಧ್ಯ ವಯಸ್ಸಿನ ಪುರುಷ, ಆತನ ಮಡದಿ ಇನ್ನೂ ತರುಣಿ. ಆತನಿಗೆ ಜೀವನದಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ, ಅದರೊಟ್ಟಿಗೆ ಅವನಿಗೆ ಹಲವು ಸ್ತ್ರೀಯರ ಸಂಪರ್ಕವೂ ಇದೆ ಎಂದು ಸೂಕ್ಷ್ಮವಾಗಿ ಅರಹುತ್ತಾನೆ. ಇದು ತಲತಲಾಂತರಗಳಿಂದ ನಡೆದು ಬಂದಿರುವ ಶೋಷಣೆಯ ಪ್ರತಿಬಿಂಬ. ಉಗ್ರಸೇನ, ವೃಷಸೇನೆಯ ಬಯಕೆಗಳನ್ನು ಪತಿಯಾಗಿ ಪೂರ್ತಿಗೊಳಿಸಲಾರ; ಆದರೆ ಆಕೆಗೆ ಅವನ್ನು ಬಯಸುವ ಹಕ್ಕಿಲ್ಲ. ತಿಳಿಯದೇ ತಪ್ಪು ಮಾಡಿ, ಪ್ರಾಯಶ್ಚಿತ್ತ ಅನುಭವಿಸಿದರೂ, ಕ್ಷಮಿಸಿ ಮಡದಿಯನ್ನು ಸಂತೈಸುವ ಉದಾರ ಮನೋಭಾವ ಆತ ತೋರಲಾರ. ಇದೇನು ವಿರೋಧಾಭಾಸ? ಶತಮಾನಗಳು ಉರುಳಿದರೂ  ಅಂದಿಗೂ-ಇಂದಿಗೂ ಯಾವ ವ್ಯತ್ಯಾಸವೂ ಇಲ್ಲ.

ಅವಕಾಶವಾದಿಗಳು ಸದಾಕಾಲ ನಮ್ಮ ಸುತ್ತ ಹೊಂಚು ಹಾಕುತ್ತಿರುತ್ತಾರೆ. ಈ ಪ್ರಸಂಗದಲ್ಲಿನ ರಾಕ್ಷಸ ಇದಕ್ಕೆ ಸರಿಯಾದ ಉದಾಹರಣೆ. ತನ್ನ ಮರೆಮಾಚುವಿಕೆಯ ಪರಿಣತಿಯನ್ನು ಬಂಡವಾಳವನ್ನಾಗಿಸಿ, ಬ್ರಾಹ್ಮಣನಾಗಿ ತನಗೆ ಬೇಕಾದ ಮಾಹಿತಿಯನ್ನು ಸಂಗ್ರಹಿಸುತ್ತಾನೆ. ಆಧುನಿಕ ಯುಗದ ಮಾಹಿತಿ ಕಳುವು/ ಕಟಾವು (data theft/harvest) ನಮ್ಮ ಮುಂದೆ ಅನಾವರಣಗೊಳ್ಳುತ್ತದೆ. ಅಂತೆಯೇ ಸಿಕ್ಕ ವಿವರಗಳಿಂದ ಉಗ್ರಸೇನನ ಗುರುತನ್ನೂ ನಕಲಿಸಿ ತನ್ನ ಲಾಭಕ್ಕಾಗಿ ದುರುಪಯೋಗಿಸಿಕೊಳ್ಳುತ್ತಾನೆ.

ಕ್ಷಣಕಾಲದ ಮೈಮರೆವು ವೈಯಕ್ತಿಕ ಹಂತದಲ್ಲಿ ಯಾವ ರೀತಿ ಪ್ರತಿಕೂಲ ಪರಿಣಾಮ ಬೀರಬಲ್ಲದು! ನಮ್ಮ ವೈಯಕ್ತಿಕ ವಿವರಗಳು ರಹಸ್ಯವಷ್ಟೇ ಅಲ್ಲ, ಪವಿತ್ರ ಕೂಡ ಇಂದಿನ ಗಣಕ/ಅಂತರ್ಜಾಲ ಯುಗದಲ್ಲಿ. ಅನಾಮಧೇಯರೊಂದಿಗೆ, ಅಪರಿಚಿತರೊಂದಿಗೆ ಅವನ್ನು ಹಂಚಿಕೊಂಡರೆ ಮುಂದೆರಗುವ ಆಘಾತ ಅದೆಷ್ಟು ಗಂಭೀರ ಎಂದು ಅರಿವಾಗುವುದಲ್ಲವೇ? ದಿನ ನಿತ್ಯ ನಮ್ಮ ಸುತ್ತ ಮುತ್ತ ಹಾಗೂ  ಪ್ರಪಂಚದಾದ್ಯಂತ ನಡೆದ, ನಡೆಯುತ್ತಿರುವ ವಿದ್ಯಮಾನಗಳಿಗೆ, ಮಾಮೂಲಿ ಎನಿಸುವ ಕಥೆ ಎಷ್ಟು ಸರಳವಾಗಿ, ಸುಂದರವಾಗಿ ಕನ್ನಡಿ ಹಿಡಿದಿದೆಯಲ್ಲ! ಸೊಗಸಾದ ಮನೋರಂಜನೆಯೊಂದಿಗೆ, ಜ್ವಲಂತ ಸಮಸ್ಯೆಗಳನ್ನು ಚಿಂತಿಸುವಂತೆ ಮಾಡಿದ ಪ್ರಸಂಗ, ಕಳೆದ ಸಂಜೆಯ ಸಮಯ ಸಾರ್ಥಕವಾಯಿತೆಂಬ ಧನ್ಯತೆ ಮೂಡಿಸಿತ್ತು ಕೊನೆಯಲ್ಲಿ.

ಲೇಖನ, ವಿಡಿಯೋ ಮತ್ತು ಚಿತ್ರಗಳು: ರಾಂಶರಣ್

Video link: https://www.youtube.com/watch?v=P0uwHxLk1Z4&feature=youtu.be