ಲಂಡನ್ನಿನಲ್ಲಿ ಕನ್ನಡ ಡಿಂಡಿಮ – ಕನ್ನಡ ಬಳಗ ಯು ಕೆ-40 ರ ಸಂಭ್ರಮದ ಝಲಕ್ ಗಳು!

ಮಹಾರಾಜರು ತಮ್ಮ ಸಂದೇಶದಲ್ಲಿ ೧೯೩೯ರಲ್ಲಿ ಅಂದಿನ ಯುವರಾಜರು ಲಂಡನ್ನಿನಲ್ಲಿ ದಸರಾ ಹಬ್ಬವನ್ನು ಆಚರಿಸಿ ಕನ್ನಡದಲ್ಲಿ ಮಾಡಿದ ಭಾಷಣವನ್ನು ನೆನೆದರು. ಕರ್ನಾಟಕದ ವೈಭವ, ಶ್ರೀಮಂತ ಸಂಸ್ಕೃತಿ, ಲೋಕಕ್ಕೆ ಎಂದೆಂದಿಗೂ ಮಾದರಿಯಾದ ಬಸವ ತತ್ವ, ಸೈದ್ಧಾಂತಿಕ, ವೇದಾಂತಿಕ, ವೈಜ್ಞಾನಿಕ ಹಾಗೂ ಶೈಕ್ಷಣಿಕ ಕೊಡುಗೆಗಳನ್ನು ಸ್ಮರಿಸಿದರು. ಕನ್ನಡಿಗರು ಈ ಕೊಡುಗೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು, ಇವುಗಳಿಂದ ಪ್ರೇರೇಪಿತರಾಗಿ ಬಾಳಿನ ಎಲ್ಲ ದಿಶೆಗಳಲ್ಲಿ ಹೆಚ್ಚಿನ ಯಶಸ್ವಿಯನ್ನು ಪಡೆದು ಪ್ರಭಾವಶಾಲಿಗಳಾಗಬೇಕೆಂದು ಕರೆ ಕೊಟ್ಟರು. ತದನಂತರ ನಾಡಿನ ಪ್ರಮುಖ ಸಾಹಿತಿಗಳು, ಯು.ಕೆ. ಕನ್ನಡಿಗರು ಬರೆದ ಲೇಖನ, ಕವನಗಳ ಸ್ಮರಣ ಸಂಚಿಕೆ “ಸಂಭ್ರಮ”ವನ್ನು ಬಿಡುಗಡೆ ಮಾಡಿದರು.

ಸಂಭ್ರಮ: ಕನ್ನಡ ಬಳಗ (ಯು.ಕೆ) ಗೆ  ಮಾಣಿಕ್ಯ ಹುಟ್ಟಿದ ಹಬ್ಬ  
ಲೇಖಕರು: ರಾಮಶರಣ ಲಕ್ಷ್ಮೀನಾರಾಯಣ 

ಯುನೈಟೆಡ್ ಕಿಂಗ್ಡಮ್ ನ ಮೊದಲ ಕನ್ನಡ ಸಂಘ ಕನ್ನಡ ಬಳಗ (ಯು.ಕೆ). ೪೦ ವರ್ಷಗಳ ಹಿಂದೆ ಐವರು ದಂಪತಿಗಳು ದೀಪಾವಳಿಯ ಶುಭದಿನದಂದು ಕನ್ನಡ ಸಂಘವೊಂದರ ದೀಪ ಬೆಳೆಗಿದರು. ಅದು ಇಂದಿಗೂ ಯು.ಕೆಯಲ್ಲಿ ನೆಲೆಸಿರುವ ಕನ್ನಡಿಗರ ಮನೆ-ಮನಗಳಲ್ಲಿ ಬೆಳಗುತ್ತಿದೆ. ಈ ವಾರಾಂತ್ಯ (ಸಪ್ಟೆಂಬರ್ ೩೦, ಅಕ್ಟೋಬರ್ ೧) ಕನ್ನಡ ಬಳಗ ತನ್ನ ಹುಟ್ಟುಹಬ್ಬ “ಸಂಭ್ರಮ”ವನ್ನು ವಿಜೃಂಭಣೆಯಿಂದ ಲಂಡನ್ ನಗರದಲ್ಲಿ ಸಂಸ್ಥಾಪಕ ಹಿರಿ ಜೀವಿಗಳೊಂದಿಗೆ, ನಾಡಿನ ಹಲವು ಮೂಲೆಗಳಿಂದ ಬಂದ ಎಲ್ಲ ವಯಸ್ಸಿನ ಕನ್ನಡಿಗರೊಂದಿಗೆ ಆಚರಿಸಿದ್ದು  ತನ್ನ ‘ಹಳೆ ಬೇರು, ಹೊಸ ಚಿಗುರು’ ಧ್ಯೇಯ ವಾಕ್ಯಕ್ಕೆ ತಕ್ಕುದಾಗಿತ್ತು. ಈ ಕಾರ್ಯಕ್ರಮವನ್ನು ಯಶಸ್ಸಿಗೆ ಕಾರಣೀಕರ್ತರು, ಕನ್ನಡ ಬಳಗದ ಅಧ್ಯಕ್ಷೆ ಸುಮನಾ ಗಿರೀಶ್, ಉಪಾಧ್ಯಕ್ಷೆ ಸ್ನೇಹಾ ಕುಲಕರ್ಣಿ, ಕಾರ್ಯದರ್ಶಿ ಮಧುಸೂಧನ್, ಖಜಾಂಚಿ ರಶ್ಮಿ ಮಂಜುನಾಥ್, ಸಾಂಸ್ಕೃತಿಕ ಕಾರ್ಯದರ್ಶಿ ವ್ರತ ಚಿಗಟೇರಿ, ಯುವ ಕಾರ್ಯದರ್ಶಿ ವಿದ್ಯಾರಾಣಿ, ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾದ ಚಂದ್ರಪ್ಪ, ಆಶೀರ್ವಾದ ಮರ್ವೇ, ರಾಜೀವ ಮೇತ್ರಿ ಹಾಗೂ ಪ್ರವೀಣ್ ತ್ಯಾರಪ್ಪ. ಅಧ್ಯಕ್ಷೆ ಸುಮನಾ ಗಿರೀಶ್, ಗಣ್ಯ ಅತಿಥಿಗಳಾದ ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರೊಫೆಸರ್ ಗುರುರಾಜ ಕರ್ಜಗಿ, ಪತ್ರಕರ್ತರಾದ ಶ್ರೀಯುತ ವಿಶ್ವೇಶ್ವರ ಭಟ್, ರವಿ ಹೆಗಡೆ ಹಾಗೂ ಸ್ವಾಮಿ ಜಪಾನಂದಜಿ ಹಾಗೂ ನೆರೆದ 1500 (ಎರಡು ದಿನಗಳಲ್ಲಿ ಸೇರಿ) ಕನ್ನಡಿಗರನ್ನು ಹಾರ್ದಿಕವಾಗಿ ಸ್ವಾಗತಿಸಿದರು.  ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಅಮೃತ ಹಸ್ತದಿಂದ “ಸಂಭ್ರಮ” ಕಾರ್ಯಕ್ರಮವನ್ನು ಬೈರನ್ ಸಭಾಂಗಣದಲ್ಲಿ ಪ್ರಾರಂಭ ಮಾಡಿದರು. 

ಸಾಂಪ್ರದಾಯಿಕ ಭರತನಾಟ್ಯ, ಕೂಚಿಪುಡಿ ನೃತ್ಯಗಳಿಂದ ಯು.ಕೆ ಕನ್ನಡಿಗರ ಕಲಾಪ್ರದರ್ಶನ ಪ್ರಾರಂಭವಾಯಿತು. ‘ಬಾರಿಸು ಕನ್ನಡ ಡಿಂಡಿಮವ’ ಎಂಬ ವಿಶಿಷ್ಟ ನೃತ್ಯ ರೂಪಕ, ದರ್ಶಕರಿಗೆ ಶತಮಾನಗಳ ಕರ್ನಾಟಕದ ಇತಿಹಾಸ, ಕಲೆ, ಸಂಸ್ಕೃತಿಗಳನ್ನು ಮನಮೋಹಕವಾಗಿ ಬಣ್ಣಿಸಿತು. ಕನ್ನಡ ಬಳಗ ಚಿಣ್ಣರಲ್ಲಿ ಕನ್ನಡವನ್ನು ಕಲಿಸಿ, ಬೆಳೆಸುವ ಶ್ಲಾಘನೀಯ ಕೆಲಸವನ್ನು ‘ಕನ್ನಡ ಕಲಿ’ ಕಾರ್ಯಕ್ರಮದ ಮೂಲಕ ಮಾಡುತ್ತಲೇ ಬಂದಿದೆ. ಈ ಮಕ್ಕಳು ಕಿರು ನಾಟಕ, ಹಾಡುಗಳ ಮೂಲಕ ತಮ್ಮ ಪ್ರತಿಭೆಯ ಪ್ರದರ್ಶನ ಮಾಡಿದರು. ಪ್ರೊಫೆಸರ್ ಗುರುರಾಜ ಕರ್ಜಗಿಯವರು ಮಾನವನಿಗೆ ನಂಬಿಕೆ ಎಷ್ಟು ಮುಖ್ಯ, ಏಕೆ ಬೇಕು ಎಂಬ ಮನಮುಟ್ಟುವ ವಿವರಣೆಯಿಂದ , ಸಭಿಕರನ್ನು ಮಂತ್ರ ಮುಗ್ಧರನ್ನಾಗಿಸಿದರು. ಈ ವಿದ್ವತ್ಪೂರ್ಣ ಭಾಷಣದ ನಂತರ ಖ್ಯಾತ ಗಾಯಕ ಶ್ರೀ ರಾಜೇಶ್ ಕೃಷ್ಣನ್ ತಮ್ಮ ಸುಮಧುರ ಗಾಯನದಿಂದ ನೆರೆದವರ ಮನತಣಿಸಿ, ಸಭಿಕರೊಡನೆ ಹೆಜ್ಜೆ ಹಾಕಿ ಕುಣಿಸಿದರು.(ಇದರ ಬಗ್ಗೆ ರಮ್ಯ ಭಾದ್ರಿ ಬರೆದ ವಿಸ್ತೃತ ಲೇಖನ ಕೆಳಗೆ ಕೊಟ್ಟಿದೆ.)

ಎರಡನೇ ದಿನದ ಮನರಂಜನಾ ಕಾರ್ಯಕ್ರಮದಲ್ಲಿ ಯಾರ್ಕ್ ಶೈರ್ ಕನ್ನಡ ಬಳಗದ ಗಾಯಕ ವೃಂದ ಪ್ರಸ್ತುತ ಪಡಿಸಿದ ಚಿರನೂತನ ‘ನಿತ್ಯೋತ್ಸವ’, ನಾಡ ಭಕ್ತಿ ಉಕ್ಕಿಸುವ ‘ಅಪಾರ ಕೀರ್ತಿ’ ಚಿತ್ರಗೀತೆಗಳು ಸಭಿಕರನ್ನು ಕನ್ನಡತೆಯ ಭಾವನೆಯಲ್ಲಿ ತೇಲಿಸಿದವು. ಗುರುಪ್ರಸಾದ್ ಪಟ್ವಾಲ್ ಇಲ್ಲಿಯೇ ತರಬೇತಿ ಕೊಟ್ಟು ಬೆಳೆಸಿದ ತಂಡ ಪ್ರದರ್ಶಿಸಿದ ‘ಪಂಚವಟಿ’ ಯಕ್ಷಗಾನ ಕಿರು ಪ್ರಸಂಗ ಕನ್ನಡದ ಜಾನಪದ ಕಲೆಯ ವೈವಿಧ್ಯತೆಯ ಪ್ರದರ್ಶನದೊಂದಿಗೆ, ಯು.ಕೆ ಯಲ್ಲಿ ಈ ಪ್ರಕಾರವನ್ನು ಬೆಳೆಸಿ, ಪ್ರಚಲಿತಗೊಳಿಸುವ ಸಾಹಸದ ದ್ಯೋತಕವಾಗಿತ್ತು. ಕನ್ನಡ ಪ್ರಭದ ಪ್ರಧಾನ ಸಂಪಾದಕರಾದ ಶ್ರೀ ರವಿ ಹೆಗಡೆಯವರು, ಕನ್ನಡ ಬಳಗದ ಕಾರ್ಯವನ್ನು ಶ್ಲಾಘಿಸುತ್ತ, ಬಳಗ ನೂರ್ಕಾಲ ಬಾಳಲಿ, ಕನ್ನಡದ ಬಾವುಟವನ್ನು ವಿದೇಶಿ ನೆಲದಲ್ಲಿ ಹಾರಿಸಲಿ, ಸಾಂಕೇತಿಕವಾಗಿ ಕನ್ನಡದ ಸೀಮೆಯನ್ನು ಕರ್ನಾಟಕದಿಂದಾಚೆ ವಿಸ್ತರಿಸುತ್ತಿರಲಿ ಎಂದು ಆಶಿಸಿದರು. ವಿಶ್ವವಾಣಿಯ ಪ್ರವರ್ತಕರೂ, ಪ್ರಧಾನ ಸಂಪಾದಕರೂ ಆದ ಶ್ರೀ ವಿಶೇಶ್ವರ ಭಟ್ಟರು, ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಅನಿವಾಸಿ ಕನ್ನಡಿಗ ಸಂಘಗಳ ಮಹತ್ವ, ಇತರ ಭಾಷಿಕರಿಂದ ನಾವು ಮಾತೃ ಭಾಷೆಯ ಉಳಿವಿಗೆ, ಪ್ರಸಾರಕ್ಕೆ ಕಲಿಯಬೇಕಾದ ವಿಷಯಗಳನ್ನು ಸುಂದರವಾಗಿ ವಿವರಿಸಿದರು. ಅನ್ಯ ದೇಶಗಳಲ್ಲಿರುವ ಕನ್ನಡ ಸಂಘಗಳ ಅನುಭವಗಳನ್ನು ಹೀರಿ ಕನ್ನಡ ಬಳಗ ಹೇಗೆ ಅಭಿವೃದ್ಧಿಯಾಗಬಹುದು ಎಂದು ವಿಸ್ತರಿಸಿದರು. ಸ್ವಾಮಿ ಜಪಾನಂದಜಿಯವರು ಕನ್ನಡ ಭಾಷೆ ನಶಿಸಬಾರದು, ಬಳಗ ಮಾಡುತ್ತಿರುವ ಕಾರ್ಯ ಈ ದಿಶೆಯಲ್ಲಿ ಮಹತ್ತರವಾಗಿದೆ; ಈ ಕಾರ್ಯಕ್ಕೆ ಕನ್ನಡಿಗರೆಲ್ಲರೂ ನೂರಾನೆಯ ಬಲ ಸೇರಿಸಿ ಎಂದು ನೆರೆದವರಲ್ಲಿ ಉತ್ಸಾಹ ತುಂಬಿದರು.(ಕೆಳಗೆ ಕೊಟ್ಟ ಶ್ರೀಮತಿ ಶ್ರೀರಂಜಿನಿ ಸಿಂಹ ಅವರ ಲೇಖನದಲ್ಲಿ ಇನ್ನಷ್ಟು ವಿವರಗಳಿವೆ.)  

ಕನ್ನಡ ಬಳಗ ವಿಶೇಷವಾಗಿ ಕನ್ನಡ ಸಾಹಿತ್ಯವನ್ನು ಬೆಂಬಲಿಸುತ್ತ ಬಂದಿದೆ. ಕನ್ನಡ ಬಳಗದ ಸಾಹಿತ್ಯಾಸಕ್ತ ಸದಸ್ಯರು ಹುಟ್ಟುಹಾಕಿದ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಚಾರ ವೇದಿಕೆ ತನ್ನ ಅನಿವಾಸಿ (anivaasi.com) ಜಾಲತಾಣದಲ್ಲಿ ವಾರಕ್ಕೊಮ್ಮೆ ಲೇಖನ, ಕಥೆ, ಕವನ, ಪ್ರಬಂಧಗಳನ್ನು ಪ್ರಕಟಿಸುತ್ತಿದೆ. ಹಾಗೆಯೇ, ಕನ್ನಡ ಬಳಗದ ಕಾರ್ಯಕ್ರಮಗಳಿಗೆ ಬರುವ ಸಾಹಿತ್ಯಾಸಕ್ತರನ್ನು ಒತ್ತಟ್ಟಿಗೆ ತಂದು ಸಮಾನಾಂತರ ಸಭೆಗಳನ್ನು ಕಳೆದ ಒಂದು ದಶಕದಿಂದ ನಡೆಸುತ್ತಿದೆ. ಈ ಬಾರಿ ಕನ್ನಡದ ಮೂರು ಪ್ರಮುಖ ಆಹ್ವಾನಿತರು ಅನಿವಾಸಿ ಸಭೆಯಲ್ಲಿ ಸಕ್ರಿಯವಾಗಿ ಪಾಲುಗೊಂಡರು. ಶಿಕ್ಷಣ ನೀತಿ, ಮಾಧ್ಯಮಗಳ ಪ್ರಬಲತೆ-ಪ್ರಭಾವ ಎಂಬ ಎರಡು ವಿಷಯಗಳು ಅತಿಥಿಗಳಾದ ಪ್ರೊಫೆಸರ್ ಕರ್ಜಗಿ, ಶ್ರೀಯುತ ರವಿ ಹೆಗಡೆ ಹಾಗೂ ವಿಶ್ವೇಶ್ವರ ಭಟ್ಟರ ಸಮ್ಮುಖದಲ್ಲಿ ಚರ್ಚಿಸಲ್ಪಟ್ಟವು. ಸದಸ್ಯರ ಚರ್ಚೆಯ ನಂತರ ಅತಿಥಿಗಳು ತಮ್ಮ ಅಭಿಪ್ರಾಯಗಳನ್ನು ಸಭಿಕರಿಗೆ ಸುದೀರ್ಘವಾಗಿ ತಿಳಿಸಿದ್ದಲ್ಲದೆ, ಆಧುನಿಕ ತಂತ್ರಜ್ಞಾನ ಕಲಿಕೆ, ಮಾಧ್ಯಮ ಹಾಗು ಭಾಷೆಯ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂದು ವಿಶ್ಲೇಷಿಸಿದರು. ಸಭಿಕರೊಡನೆ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಮೇಲಿನ ಪ್ರಶ್ಳಿಗಳಿಗೆ ಪಾಂಡಿತ್ಯಪೂರ್ಣ ಉತ್ತರಗಳನ್ನು ನೀಡಿ, ಸಭಿಕರೊಡನೆ ಬೆರೆತು ಸಂಭಾಷಿಸಿದರು. (ಇದರ ಪ್ರತ್ಯೇಕ ವರದಿಯನ್ನು ಕಳೆದ ವಾರದ ’ಅನಿವಾಸಿ’ ಸಂಚಿಕೆಯಲ್ಲಿ ನೋಡಿರಿ)  https://anivaasi.com/2023/10/06/%e0%b2%85%e0%b2%a8%e0%b2%bf%e0%b2%b5%e0%b2%be%e0%b2%b8%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%95%e0%b2%b9%e0%b2%b3/

ಕನ್ನಡ ಬಳಗ ದತ್ತಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಯು.ಕೆ ಹಾಗೂ ಕರ್ನಾಟಕದಲ್ಲಿ ಹಲವಾರು ಸಂಘ-ಸಂಸ್ಥೆಗಳೊಡನೆ ಜೊತೆಯಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಲೇ ಬಂದಿದೆ. ಈ ಉದಾತ್ತ ಕಾರ್ಯ,  ಕಾರ್ಯಕ್ರಮದುದ್ದಕ್ಕೂ ಹಲವು ಮಾಧ್ಯಮಗಳಲ್ಲಿ ಬಿತ್ತರವಾಯಿತು. ಎರಡು ದಿನಗಳ ರಂಜಿತ ಕಾರ್ಯಕ್ರಮ ಎಲ್ಲ ವಯೋಧರ್ಮಗಳಿಗೆ ಪೂರಕವಾಗಿದ್ದಲ್ಲದೆ, ಕಲೆತ ಕನ್ನಡಿಗರಲ್ಲಿ ಹೊಸ ಹುಮ್ಮಸ್ಸನ್ನು ತುಂಬಿದ್ದಲ್ಲಿ ಸಂದೇಹವಿಲ್ಲ.  
ಮಹಾರಾಜರಿಗೆ ಸನ್ಮಾನ
ಬಾರಿಸು ಕನ್ನಡ ದಿಂಡಿಮವ’ ನೃತ್ಯ ನಾಟಕದ ಒಂದು ದೃಶ್ಯ

1. 2.ಸುಮಧುರ ಸಂಜೆ ರಾಜೇಶ್ ಕೃಷ್ಣನ್ ನೊಂದಿಗೆ …

ಮಾಣಿಕ್ಯ ಸಂಭ್ರಮ ಗೀತೆ (RTP) 
– ಯೂ ಟ್ಯೂಬ್ ರೆಕಾರ್ಡಿಂಗ್ ಕೃಪೆ: ಆಂಚಲ್ ಅರುಣ್
Photoes: Kannada Balaga UK (except where credited)

“ಥಟ್ ಅಂತ ಹೇಳಿ!”- ‘ಅನಿವಾಸಿ’ಗೆ ಥಟ್ಟನೆ ಗಿಟ್ಟಿದ ರಸಘಟ್ಟಿ!

ಕನ್ನಡದ ಅತ್ಯಂತ ಜನಪ್ರಿಯ ರಸಪ್ರಜ್ಞೆ ಕಾರ್ಯಕ್ರಮ ’ಥಟ್ ಅಂತ ಹೇಳಿ’ ಕಾರ್ಯಕ್ರಮ ಈಗ ಮೊದಲ ಬಾರಿಗೆ ಯು ಕೆ ದಲ್ಲಿ ಕಾಲಿಟ್ಟಿದೆ! ಭಾರತೀಯ ಟೆಲಿವಿಷನ್ ಮಾಧ್ಯಮದಲ್ಲಿ ಅತ್ಯಂತ ಸುದೀರ್ಘ ಕಾಲದಿಂದ ಪ್ರಸಾರವಾಗುತ್ತಿರುವ ಕ್ವಿಜ್ ಕಾರ್ಯಕ್ರಮವೆಂದು ’ಲಿಮ್ಕ ದಾಖಲೆ’ ಮಾಡಿದ ಹೆಗ್ಗಳಿಕೆ ಅದಕ್ಕೆ. ಈ ಪ್ರಸಾರವನ್ನು ಕಳೆದ ರವಿವಾರದಂದು ಸಾವಿರಾರು ಜನರು ಜಗತ್ತಿನ ಬೇರೆ ಬೇರೆ ಜಾಗಗಳಲ್ಲಿ ವೀಕ್ಷಿಸಿದ್ದು ಹೆಮ್ಮೆಯ ವಿಷಯ.

(ಚಿತ್ರಕೃಪೆ) ರಮ್ಯ ಭಾದ್ರಿ

ರಮ್ಯ ಭಾದ್ರಿ ಬರೆಯುತ್ತಾರೆ

ಥಟ್ ಅಂತ ಹೇಳಿ! ಎಂದು ಪ್ರಸಿದ್ದಿ ಪಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದವಕಾಶ ಯು.ಕೆ. ದಲ್ಲಿಯ ನಮ್ಮ ’ಅನಿವಾಸಿ’ ಬಳಗಕ್ಕೆ ದೊರೆತಿರುವುದು ಹೆಮ್ಮೆಯ ವಿಚಾರ. ಕಳೆದ ರವಿವಾರ ಜುಲೈ 5, 2020 ರಂದು ಮೊದಲ ಕಾರ್ಯಕ್ರಮ ಯಶಸ್ವಿಯಾಗಿ ಪ್ರಸಾರವಾಯಿತು.

ಡಾ ನಾ. ಸೋಮೇಶ್ವರ

ಥಟ್ ಅಂತ ಹೇಳಿ ಎಂದಾಕ್ಷಣ ಥಟ್ ಅಂತ ನೆನಪಾಗೋದು ಚಂದನ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಡಾ ನಾ. ಸೋಮೇಶ್ವರ ರವರು ನಡೆಸಿಕೊಡುತ್ತಿದ್ದ ಜನಪ್ರಿಯ ರಸ ಪ್ರೆಶ್ನೆ ಕಾರ್ಯಕ್ರಮ. ಪ್ರಾಯಶಃ ಈ ಕಾರ್ಯಕ್ರಮವನ್ನರಿಯದ, ನೋಡದ ಕನ್ನಡಿಗನೇ ಇಲ್ಲ ಅಂದರೆ ಅತಿಶಯೋಕ್ತಿಯಲ್ಲ. ಇದು ಕರುನಾಡ  ಜನಮನ ಗೆದ್ದ ಮನೆಮಾತಾದ ಅದ್ಬುತ ರಸ ಪ್ರೆಶ್ನೆ ಕಾರ್ಯಕ್ರಮವೆನ್ನುವುದಕ್ಕೆ ಕಳೆದ 18 ವರ್ಷಗಳಿಂದ ಯಶಶ್ವಿಯಾಗಿ ನಡೆದುಕೊಂಡು ಬಂದಿರಿವುದೆ ಸಾಕ್ಷಿ.  ಇದು ಇಂದು 3000ಕ್ಕೂ ಹೆಚ್ಚು ಕಂತುಗಳನ್ನು ಅಮೋಘವಾಗಿ ಪೂರೈಸುತ್ತಾ  ಅಂತರ್ರಾಷ್ಟ್ರೀಯ ಅಲ್ಲದೆ ಅಂತರ ಖಂಡಗಳ ಮಟ್ಟದಲ್ಲಿ ಪ್ರಪಂಚದ ಮೊಲೆಮೂಲೆಯಲ್ಲಿ ನೆಲೆಸಿರುವ ಕನ್ನಡಿಗರನ್ನು ತಂತ್ರಜ್ಞಾನದ ಸಹಯೋಗದಿಂದ ತಲುಪಿರುವುದು ಅತ್ಯಂತ ಹೆಮ್ಮೆಯ ವಿಚಾರ. ಈ ಕಾರ್ಯಕ್ರಮದ ವಿಶೇಷತೆಯೆಂದರೆ ಪ್ರೆಶ್ನೆಯ ಪ್ರತಿಯೊಂದು ಉತ್ತರಕ್ಕೆ ಬಹುಮಾನವಾಗಿ ಒಂದು ಕನ್ನಡ ಪುಸ್ತಕವನ್ನು ನೀಡಲಾಗುವುದು. ಪುಸ್ತಕಗಳು  ನಮ್ಮ ಅಂತರಂಗ ಹಾಗು ಬಹಿರಂಗ ಜ್ಞಾನದ ಮಾರ್ಗದರ್ಶಿಗಳು. ’ದೇಶ ಸುತ್ತು ಕೋಶ ಓದು’ ಎಂಬ ನಾಣ್ಣುಡಿಯನ್ನು ಆಚರಣೆಗೆ ತರುವಂತ ಹಾಗು ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳು ಮತ್ತು ವೀಕ್ಷಕರಿಗೂ ಪುಸ್ತಕ ಓದುವ ಹವ್ಯಾಸ ವನ್ನು ರೂಢಿಸಿಕೊಳ್ಳಲು ಪ್ರೇರೇಪಿಸುವಂತ ಅದ್ಬುತ ಕಾರ್ಯಕ್ರಮ. 

ಕ್ವಿಜ್ ಮಾಸ್ಟರ್ ಅಪ್ಪಟ ಕನ್ನಡಿಗರಾದ ಡಾ. ನಾ. ಸೋಮೇಶ್ವರ ಅವರಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯದ ಬಗೆಗಿನ ಅವರ ಒಲವು ಅಪರಿಮಿತವಾದವು. ಮೂಲತಃ  ಬೆಂಗಳೂರಿನವರು; ವೃತ್ತಿಯಲ್ಲಿ ವೈದ್ಯರು ಹಾಗೂ ಅತ್ಯುತ್ತಮ ಬರಹಗಾರರು ಹೌದು. ಅವರ ‘ಏಳು ಸುತ್ತಿನ ಕೋಟೆಯಲ್ಲಿ ಎಂಟು ಕೋಟಿ ಬಂಟರು’, ‘ಅನಂತದೆಡೆಗೆ’, ’ಓ ನನ್ನ ಚೇತನ’ ಕೃತಿಗಳು ಅವರ ಪ್ರಬುದ್ಧತೆ ಹಾಗು ಸಾಹಿತ್ಯದಲ್ಲಿನ ಪ್ರೌಢಿಮೆಯನ್ನು ಮನನ ಮಾಡಿಕೊಡುತ್ತದೆ. ಅಷ್ಟೇ ಅಲ್ಲದೆ ವಿವಿಧ ವಿಷಯಗಳ ಬಗ್ಗೆ 30ಕ್ಕೂ ಹೆಚ್ಚು ಪುಸ್ತಗಳನ್ನು ಬರೆದಿರುವ ಖ್ಯಾತಿ ಅವರದು. ಇವರ ಸಾಹಿತ್ಯದೆಡೆಗಿನ ಮನೋಜ್ಞ  ಸೇವೆಗಳಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಆರ್ಯಭಟ್ಟ ಪ್ರಶಸ್ತಿ’, ಗೌರವ ಡಾಕ್ಟರೇಟ್ ಪದವಿ  ಹೀಗೆ ಇನ್ನು ಹಲವು ಗೌರವಗಳು ಸಂದಿವೆ. ಒಟ್ಟಿನಲ್ಲಿ  ಕನ್ನಡಿಗರು ಥಟ್ ಎಂದು ಗುರುತಿಸಿಬಿಡುವ ವಿಶ್ವಮಾನ್ಯತೆಯನ್ನು ಗಳಿಸಿರುವ ಆತ್ಮೀಯ ಗಣ್ಯರು ಸೋಮೇಶ್ವರ ರವರು. 

’ಅನಿವಾಸಿ’ ಬಳಗ

ಇಂತಹ ಪ್ರಸಿದ್ದಿ ಪಡೆದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದವಕಾಶ ನಮ್ಮ ’ಅನಿವಾಸಿ’ ಬಳಗಕ್ಕೆ ದೊರೆತಿರುವುದು ಹೆಮ್ಮೆಯ ವಿಚಾರ. ಹೊರ ದೇಶದಲ್ಲಿದ್ದರೂ ನಮ್ಮ ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವ ಆಶಯದಲ್ಲಿ ಅಕ್ಟೋಬರ್ 2013ರರಲ್ಲಿ ಹುಟ್ಟಿದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ, ಯು.ಕೆ (KSSVV ) ಎಂಬ ಕನಸಿನ ಕೂಸು ಇಂದು “ಅನಿವಾಸಿ”ಎಂಬ ಹೆಸರಿನಿಂದ ಜನ ಮನ್ನಣೆ ಪಡೆದಿದೆ. 2014ರರಲ್ಲಿ ಚೊಚ್ಚಲ KSSVV ಮ್ಯಾಗಜಿನ್ ಪ್ರಕಟಣೆಯಿಂದ ಪ್ರಾರಂಭವಾದ ಅನಿವಾಸಿಯ ಪಯಣ ಸಾಗಿ  ಅನೇಕ ಸ್ವಯಂ  ಸೇವಕರ ಪರಿಶ್ರಮದಿಂದ  2014 ರಲ್ಲಿ ಅಧಿಕೃತವಾಗಿ ಅಂತರ್ಜಾಲ ಪ್ರವೇಶಿಸಿತು.  ಅನಿವಾಸಿಯ ಚೊಚ್ಚಲ ಕೃತಿ “ಅನಿವಾಸಿಗಳ ಅಂಗಳದಿಂದ” 2016ರಲ್ಲಿ ಲೋಕಾರ್ಪಣೆಯಾಯಿತು  ಅಂದಿನಿಂದ ಇಂದಿನವರೆಗೂ ಪ್ರತಿವಾರವೂ ವೈವಿಧ್ಯಮಯವಾದ ಲೇಖನ, ಕಥೆ, ಕವಿತೆ, ವಿಮರ್ಶೆ, ಪ್ರವಾಸ ಕಥನಗಳು anivaasi.com ನಲ್ಲಿ ಪ್ರಕಟಗೊಳ್ಳುತ್ತ ಬಂದಿದೆ. ಅಷ್ಟಕ್ಕೇ ಸೀಮಿತಗೊಳ್ಳದೆ ಹೆಸರಾಂತ ಸಾಹಿತಿಗಳು, ಚಿತ್ರ ನಿರ್ದೇಶಕ್ರನ್ನು ಸಂದರ್ಶನಗಳು, ಅವುಗಳ ವಿಡಿಯೋಗಳು ಇಂದಿಗೂ ಅನಿವಾಸಿ ಜಾಲ ಜಗುಲಿಯಲ್ಲಿ, youtube ನಲ್ಲಿ ಕಾಣ ಸಿಗುವುದು. 

ನಮ್ಮ ಈ ಅನಿವಾಸಿ ಬಳಗಕ್ಕೆ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಟ್ಟವರು ವಿವಿಡ್ಲಿಪಿ ಖ್ಯಾತಿಯ ಶ್ರೀಯುತ ಪ್ರಮೋದ್ ಲಕ್ಕುಂಡಿ ಅವರು.

ಪ್ರಮೋದ ಬರೆಯುತ್ತಾರೆ:

ಜಗತ್ತು ತನ್ನ ಹೊರಗಿನ ಕಾರುಬಾರು ನಿಲ್ಲಿಸಿ, ಮನುಷ್ಯ ಜೀವಿ ಬಿಲದಲ್ಲಿ ಸೇರುವಂತೆ ಮಾಡಿದಾಗ ಎಲ್ಲರೂ ಚಿಂತಿತರಾದರು. ಇಂತಹ ಸಮಯದಲ್ಲಿ ವಾಟ್ಸಪ್, ಜೂಮ್, ವೆಬ್ಎಕ್ಷ ಮುಂತಾದವು ಮನುಷ್ಯನಿಗೆ ದೇವರು ಕೊಟ್ಟ ವರವಾಯಿತು. ವಿವಿಡ್ಲಿಪಿ ಕೂಡ ಇಂತಹ ವರವಾದ ಏರ್ ಮೀಟ್ (Airmeet)ಇಂದ ನೇರ ಪ್ರಸಾರ ಕಾರ್ಯಕ್ರಮಗಳನ್ನು ಪ್ರಾರಂಭ ಮಾಡಿತು, ಈ ಕಾರ್ಯಕ್ರಮದಲ್ಲಿ ಒಂದು “ಕ್ವಿಜ್ ನಡೆದು ಬಂದ ದಾರಿ” ಡಾ. ನಾ ಸೋಮೇಶ್ವರ ಅವರಿಂದ. ಆಗ ಹುಟ್ಟಿದ ಮತ್ತೊಂದು ಕನಸು, ಕಿರುತೆರೆಯಿಂದ ಕನ್ನಡ ನಾಡು- ಭಾಷೆ- ಸಂಸ್ಕೃತಿ- ಕಲೆ- ಸಾಹಿತ್ಯ- ವಿಚಾರ- ಆಚಾರ ಇತ್ಯಾದಿ ಜನರಿಗೆ ತಲುಪಿಸಿದ “ಥಟ್ ಅಂತ ಹೇಳಿ” ರಸಪ್ರಶ್ನೆ ಕಾರ್ಯಕ್ರಮ ಜಗತ್ತಿನ ಕನ್ನಡಿಗರಿಗೆ ತಲುಪಿಸುವುದು. ಅವರೊಡನೆ ಮಾತಾಯಿತು, ಹೊಸ ಪ್ರಯತ್ನಕ್ಕೆ ವೇದಿಕೆ ಸಜ್ಜಾಯಿತು ಆದರೆ ಯಾರೊಡನೆ ಮೊದಲ ಪ್ರಸಾರ ಎನ್ನುವುದು ಪ್ರಶ್ನೆ ಉಳಿಯಿತು.
ಮನದೊಳಗೆ ಯಾರೊಡನೆ ಮಾಡೋಣ ಎಂಬ ವಿಚಾರ ನಡೆದಾಗ ಬಂದ ಹೆಸರು “ಅನಿವಾಸಿ ಬಳಗ”. ಇದೇ ಹೆಸರು ಬರಲು ಕಾರಣ,
೧. ಬಳಗದ ಸದಸ್ಯರೆಲ್ಲರೂ ಸಾಹಿತ್ಯ ಪ್ರೇಮಿಗಳು
೨. ಸಾಹಿತ್ಯಕ ಚಟುವಟಿಕೆಗಳನ್ನು ಮಾಡುತ್ತಾ ಉಳಿದವರಿಗೂ ಪ್ರೋತ್ಸಾಹ ಕೊಡುತ್ತ ಬಂದಿದ್ದಾರೆ
೩. ಇಲ್ಲಿ ನಾಯಕ (ಕಿ) ಎಂಬ ಸ್ಥಾನಕ್ಕೆ ಬೆಲೆಯಿಲ್ಲ, ಬದಲು ಇಲ್ಲಿ ಸಾರಥಿಗಳಿದ್ದಾರೆ ಮತ್ತು ಪ್ರತಿ ಕಾರ್ಯಕ್ಕೂ ಯಾರಾದರೊಬ್ಬರು ಸಾರಥ್ಯವಹಿಸಿ ಕಾರ್ಯದ ಗುರಿ ಮುಟ್ಟಿಸುತ್ತಾರೆ.

5-7-2020 ರ ಕಾರ್ಯಕ್ರಮ



ಇದಕ್ಕಿಂತ ಹೆಚ್ಚಿನ ಅರ್ಹತೆ ಆಯ್ಕೆ ಮಾಡಲು ಅವಶ್ಯಕತೆ ಇರಲಿಲ್ಲ, ನಮ್ಮ “ಥಟ್ ಅಂತ ಹೇಳಿ” ರಥ ಸಿದ್ದವಾಯಿತು ಮತ್ತು ಶ್ರೀವತ್ಸ ದೇಸಾಯಿ ಅವರ ಸಾರಥ್ಯದಲ್ಲಿ ಮೊದಲ ಗುರಿ ಮುಟ್ಟಿತು.

ಕಾರ್ಯಕ್ರಮದಲ್ಲಿ ಭಾಗವಹಿಸಲು ಅನೇಕ ಆಸಕ್ತರು ತಮ್ಮ ಹೆಸರುಗಳನ್ನೂ ನೊಂದಾಯಿಸಿದರು. ಮೊದಲು ನೊಂದಾಯಿಸಿದ  12 ಜನರಿಗೆ ಈ ಸದಾವಕಾಶ ದೊರಕಿತು. ಒಟ್ಟು ನಾಲ್ಕು ಕಂತುಗಳು ನಡೆಯಲಿದ್ದು, ಒಂದೊಂದು ಕಂತಿನಲ್ಲಿ ನಾಲ್ವರು ಎಂಬಂತೆ ಈಗಾಗಲೇ (5-7-2020) ಮೊದಲನೆಯ ಕಂತು ಬಹಳ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ನಮ್ಮ ಸ್ಪರ್ಧಿಗಳು ಅತ್ಯಂತ ಹುರುಪಿನಿಂದ ಪ್ರೆಶ್ನೆಗಳಿಗೆ ಉತ್ತರಿಸಿ ಪುಸ್ತಕಗಳನ್ನು ತಮ್ಮದಾಗಿಸಿಕೊಂಡರು. ಎಂದಿನಂತೆ ೧೦ ಸುತ್ತುಗಳಿದ್ದರೂ ಹೊಸದೊಂದು ಸುತ್ತಿನ ಸೇರ್ಪಡೆ ಮೊದಲ ಕಂತನ್ನು ವಿಶೇಷವನ್ನಾಗಿಸಿತು. ಅದುವೇ ಚಿತ್ರ ಕವನ ಸುತ್ತು. ಇದು ಹೊಸ ಪ್ರಯೋಗವಾದರೂ ಪ್ರತಿಭಾನ್ವಿತರಾದ ನಮ್ಮ ಸ್ಪರ್ಧಿಗಳು ಚಿತ್ರವನ್ನು ನೋಡುತ್ತಿದ್ದಂತೆಯೇ  ಲೀಲಾಜಾಲವಾಗಿ ಆಶು ಕವನಗಳ ಮಳೆಯೇ ಸುರಿಸಿದರು. ಒಬ್ಬರಿಗಿಂದ ಒಬ್ಬರು ಅದ್ಬುತ ಕವನಗಳು. ಇದರಿಂದ ಪ್ರೇರೇಪಿತರಾದ ವೀಕ್ಷಕರೂ ಕೂಡ ಕವನಗಳನ್ನು ಬರೆದು ಕಳಿಸಿದ್ದು ವಿಶೇಷವಾಗಿತ್ತು . ಇಡೀ ಕಾರ್ಯಕ್ರಮದ ರೆಕಾರ್ಡಿಂಗನ್ನು ಕೆಳಗಿನ ಫೇಸ್ ಬುಕ್ ಲಿಂಕ್ನಲ್ಲಿ ನೋಡಬಹುದು:

; __ATA.cmd.push(function() { __ATA.initVideoSlot('atatags-370373-6957b5c2ecd13', { sectionId: '370373', format: 'inread' }); });