ಕನ್ನಡ ಬಳಗ ದೀಪಾವಳಿ/ರಾಜ್ಯೋತ್ಸವ ನವೆಂಬರ್ ೨೦೨೫: ಅನಿವಾಸಿಯಿಂದ ಭೈರಪ್ಪನವರಿಗೆ ಶ್ರದ್ಧಾಂಜಲಿ

ಕನ್ನಡ ಬಳಗ, ಮಿಲ್ಟನ್ ಕಿನ್ಸ್ ನ ಅನಿಕೇತನ ಸಂಸ್ಥೆಯ ಜೊತೆ ಕೈ ಗೂಡಿಸಿ, ನವೆಂಬರ್ ೮ ರಂದು ದೀಪಾವಳಿ ಹಾಗು ರಾಜ್ಯೋತ್ಸವಗಳನ್ನು ಆಚರಿಸಿತು. ಕನ್ನಡ ಬಳಗದ ಕಾರ್ಯಕ್ರಮಗಳಲ್ಲಿ ‘ಅನಿವಾಸಿ’ ಯ ಸಮಾನಾಂತರ ಸಭೆ ಈಗ ಸಂಪ್ರದಾಯವೇ ಆಗಿದೆ. ಹೆಚ್ಚಾಗಿ, ಮುಖ್ಯ ಕಾರ್ಯಕ್ರಮದ ಉದ್ಘಾಟನೆ ಹಾಗೂ ಹಿತನುಡಿಗಳ ನಂತರದ ಸಮಯ ಇದಕ್ಕಾಗೇ ಮೀಸಲು. ಇತ್ತೀಚಿಗೆ ಕಾಣದ ಲೋಕಕ್ಕೆ ತೆರಳಿದ ಭೈರಪ್ಪನವರ ಅಗಲಿಕೆ ಕನ್ನಡಿಗರಿಗೆ ಅತೀವ ದುಃಖದಾಯಕ ಕಾರಣವಾಗಿದೆ. ಕನ್ನಡದ ಮಹಾನ್ ಕಾದಂಬರಿಕಾರರಲ್ಲಿ ಒಬ್ಬರಾದ ಭೈರಪ್ಪನವರಿಗೆ ಶ್ರದ್ಧಾಂಜಲಿ ಅರ್ಪಿಸುವುದೇ ಈ ಬಾರಿಯ ಅನಿವಾಸಿ ಕಾರ್ಯಕ್ರಮಕ್ಕೆ ತಕ್ಕುದಾದ ವಿಷಯವೆಂದು ಮೊದಲೇ ತೀರ್ಮಾನವಾಗಿತ್ತು. ಸದಸ್ಯರು ತಮಗೆ ಇಷ್ಟವಾದ ಕಾದಂಬರಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದು ಮೊದಲ ಭಾಗ. ಮುಖ್ಯ ಅತಿಥಿಯಾಗಿ ಬರುವ ಶ್ರೀ. ಮತ್ತೂರು ನಂದಕುಮಾರರಿಂದ ಅವರ- ಭೈರಪ್ಪನವರ ಒಡನಾಟದ ವಿಶಿಷ್ಟ ಅನುಭವಗಳ ಅವಲೋಕನೆ ಎರಡನೇ ಭಾಗದಲ್ಲಿ ಎಂದು ನಿಶ್ಚಯಿಸಿದ್ದೆವು. ಕಾರ್ಯಕ್ರಮದ ಮುಖ್ಯ ಸಂಘಟಕರಾದ ಆನಂದ್ ಕೇಶವಮೂರ್ತಿ ಹಾಗೂ ಅನ್ನಪೂರ್ಣ ಆನಂದ್, ಮುಖ್ಯ ಅತಿಥಿಯವರ ಅನುಮೋದನೆ ಪಡೆದು ಯೋಜನೆಯನ್ನು ಕಾರ್ಯಗತಗೊಳಿಸಿದರು. ಈ ಸಂಚಿಕೆಯಲ್ಲಿ ಕಾದಂಬರಿಗಳ ವಿಶ್ಲೇಷಣೆ ಹಾಗೂ ಮತ್ತೂರರ ಭಾಷಣವದ ವಿವರಗಳಿವೆ. ಜೊತೆಯಲ್ಲೇ ಆತಿಥೇಯ ನಗರ ಮಿಲ್ಟನ್ ಕೀನ್ಸ್ ನವರೇ ಆದ ನಾಗರಾಜ ಬಸವರಾಜು ಅವರು ಬರೆದ ಇಡೀ ದಿನದ ಕಾರ್ಯಕ್ರಮಗಳ ವರದಿಯೂ ಇದೆ. ಕೊನೆಯಲ್ಲಿ ಡಾ . ಶ್ರೀವತ್ಸ ದೇಸಾಯಿ ಅವರು ಚಿತ್ರೀಕರಿಸಿದ ಕಾರ್ಯಕ್ರಮದ ಮುಖ್ಯಾಂಶಗಳ ಚಿಕ್ಕ ವಿಡಿಯೋವನ್ನು ನೋಡಲು ಮರೆಯದಿರಿ. -ರಾಮಶರಣ ಲಕ್ಷ್ಮೀನಾರಾಯಣ

ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮದ ಪರಿಚಯವನ್ನು ಆನಂದ್ ಮಾಡಿಕೊಟ್ಟರು. ಮುಖ್ಯ ಅತಿಥಿಗಳ ಪರಿಚಯವನ್ನು ಶ್ರೀವತ್ಸ ದೇಸಾಯಿಯವರು ನೆರವೇರಿಸಿದರು. ಕೊನೆಯಲ್ಲಿ ಜಿ.ಎಸ್.ಶಿವಪ್ರಸಾದ್ ಸಾಂಗವಾಗಿ ಆಭಾರ ಮನ್ನಿಸಿದರು. 

ಪರ್ವ: ಸಾರ್ವಕಾಲಿಕ ನೆಚ್ಚಿನ ಕಾದಂಬರಿ – ಅನ್ನಪೂರ್ಣ ಆನಂದ್ 

ಚಿತ್ರಕೃಪೆ : ಕೇಶವ ಕುಲಕರ್ಣಿ

ಹೈಸ್ಕೂಲಿನಿಂದ ಕಾದಂಬರಿ ಓದುವ ಗೀಳು ಹತ್ತಿತ್ತು. ನನಗೆ ಮೊದಲು ಸಿಕ್ಕಿದ ಭೈರಪ್ಪನವರ ಕಾದಂಬರಿ ‘ವಂಶವೃಕ್ಷ’. ಅವರ ಬರಹದ ಶೈಲಿ, ಪಾತ್ರ ಪೋಷಣೆ, ಕಥೆಯ ಹಂದರ ನನ್ನ ಮನತಟ್ಟಿದವು. ‘ಧರ್ಮಶ್ರೀ’ ಹಾಗು ‘ದೂರಸರಿದರು’ ಗಳ ನಂತರ ಕೈಗೆಟುಕಿದ್ದು ‘ಪರ್ವ’. ಭಾರತೀಯ ಮಕ್ಕಳೆಲ್ಲ ಮಹಾಭಾರತದ ಕಥೆಗಳನ್ನು ಓದಿ, ಕೇಳಿಯೇ ಬೆಳೆಯುತ್ತಾರೆ. ಮಂತ್ರ ಪ್ರಭಾವದಿಂದ ಮಕ್ಕಳಾಗುವುದು, ಗಾಂಧಾರಿ ಹೊಟ್ಟೆ ಕಿವುಚಿಕೊಂಡು ನೂರು ಮಕ್ಕಳನ್ನು ಪಡೆಯುವುದು, ಕೃಷ್ಣನ ಚಮತ್ಕಾರಗಳು, ಇವೆಲ್ಲ ಕಲ್ಪನೆಗೆ ಮೀರಿದ ವಿಚಿತ್ರ ಭಾವನೆಗಳನ್ನು ಮೂಡಿಸುತ್ತಿದ್ದವು. ‘ಪರ್ವ’ ಮಹಾಭಾರತದ ಪಾತ್ರಗಳನ್ನೆಲ್ಲ ಮಾನವ ಸದೃಶಗೊಳಿಸುತ್ತವೆ. ಇಲ್ಲಿ ಚಮತ್ಕಾರಗಳಿಲ್ಲ. ಕೃಷ್ಣ, ಚಾಣಾಕ್ಷನೂ, ಮುತ್ಸದ್ದಿಯೂ ಆದ ವ್ಯಕ್ತಿ. ಕಥೆಯೂ  ಅಂತಃ ಸಂವಾದ, ಕೆದಕಿದ ನೆನಪು, ಪ್ರತಿಕ್ರಿಯೆಯ ರೂಪದಲ್ಲಿ ಸಾಗುವುದರಿಂದ, ಪುರಾಣವಾಗದೇ ಒಂದು ಐತಿಹಾಸಿಕ ಕಥೆಯಾಗಿ ಅನಾವರಣಗೊಳ್ಳುತ್ತದೆ. ಕುರುಕ್ಷೇತ್ರ ಯುದ್ಧ ವೈಭವೀಕರಣಗೊಳ್ಳದೇ ಕೊಳೆತು ನಾರುವ ಹೆಣದ ರಾಶಿ, ಯುದ್ಧ ತರುವ ಗೋಳು, ಹೊಲಸು ಇವನ್ನೆಲ್ಲ ತೋರುತ್ತ ಜಿಗುಪ್ಸೆ ಹುಟ್ಟುವಂತೆ ಮಾಡುತ್ತದೆ. ಸ್ತ್ರೀಪಾತ್ರಗಳಿಗೆ ಇಲ್ಲಿ ಪುರುಷ ಪಾತ್ರಗಳಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ಇದೆ. ದ್ರೌಪದಿಯ ಪ್ರತೀಕಾರ, ಕುಂತಿಯ ಆಂತರಿಕ ತಲ್ಲಣ, ಗಾಂಧಾರಿಯ ಮಾತೃತ್ವದ ಬಂಧನ ಮನತಟ್ಟುತ್ತವೆ. ‘ಪರ್ವ’ ವನ್ನು ನಾನು ಹಲವು ಬರಿ ಓದಿದ್ದೇನೆ; ಪ್ರತಿಸಲವೂ ಹೊಸತನ್ನು ಕಂಡಿದ್ದೇನೆ. ಭೈರಪ್ಪನವರ ಕಾದಂಬರಿಗಳಲ್ಲೆಲ್ಲ ಇದು ನನ್ನ ಸಾರ್ವಕಾಲಿಕ ನೆಚ್ಚಿನ ಕೃತಿ.   

ಧರ್ಮಶ್ರೀ: ೬೦ರ ಭಾರತದ ಚಿತ್ರಣ – ಆನಂದ್ ಕೇಶವಮೂರ್ತಿ 

ನಾನು ‘ಧರ್ಮಶ್ರೀ’ಯನ್ನು ಮೊದಲ ಬಾರಿಗೆ ಓದಿದ್ದು ೩೫-೪೦ ವರ್ಷಗಳ ಹಿಂದೆ. ಕಳೆದ ವಾರ ಮತ್ತೊಮ್ಮೆ ಓದಿದಾಗ ಕಂಡದ್ದು ಹಲವು ಹೊಸ ವಿಷಯಗಳು. ೧೯೬೧ ರಲ್ಲಿ ಈ ಕೃತಿ ಬೆಳಕು ಕಂಡಿತು. ಹಾಗಾಗಿ ಇದನ್ನು ಭೈರಪ್ಪನವರು ೧೯೫೯ ಅಥವಾ ೧೯೬೦ರಲ್ಲಿ ಬರೆದಿರಬಹುದು. ಆಗ ಅವರಿಗೆ ೩೦ರ ಹರೆಯ. ಅಷ್ಟು ಚಿಕ್ಕ ವಯಸ್ಸಿನಲ್ಲೇ ಅವರು ಎಷ್ಟೊಂದು ಓದಿದ್ದರು, ಪ್ರೌಢಿಮೆ ಹೊಂದಿದ್ದರು ಎಂಬ ವಿಷಯ ಈ ಕಾದಂಬರಿಯನ್ನು ಓದಿದಾಗ ಅನಿಸುತ್ತದೆ. ೬೦ರ ದಶಕದ ಸಾಮಾಜಿಕ ಬದುಕು, ಕಿತ್ತು ತಿನ್ನುವ ಬಡತನ, ಹಿಂದೂ ಧರ್ಮದಲ್ಲಿ ತಂಡವವಾಡುತ್ತಿದ್ದ ಜಾತೀಯತೆ ಇವನ್ನೆಲ್ಲ ಧರ್ಮಶ್ರೀ ಪ್ರತಿಫಲಿಸುತ್ತದೆ. ಕಾದಂಬರಿಯ ಮೊದಲ ಪುಟಗಳು ಭೈರಪ್ಪನವರ ಮೈಸೂರಿಗೆ ವಿದ್ಯಾಭ್ಯಾಸಕ್ಕೆ ಬರುವವರೆಗಿನ ಆತ್ಮ ಕಥೆಯೇ ಎಂದು ತಮ್ಮ ‘ಭಿತ್ತಿ’ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ. ಹಿಂದೂ ಕಥಾನಾಯಕ ಕ್ರಿಸ್ತ ಧರ್ಮಕ್ಕೆ ಮತಾಂತರ ಹೊಂದಿದ ಮೇಲೆ ಅವನಿಗಾಗುವ ತಳಮಳ, ಅದರ ಪರಿಣಾಮಗಳು ಇದರಲ್ಲಿ ಮನಮುಟ್ಟುವಂತೆ ಚಿತ್ರಿತವಾಗಿವೆ. ರಾಷ್ಟೀಯ ಸ್ವಯಂ ಸೇವಕ ಸಂಘದ ಧ್ಯೇಯೋದ್ದೇಶ, ಸಂಘವನ್ನು ಹತ್ತಿಕ್ಕಲು ಅಂದಿನ ಸರಕಾರ ಮಾಡಿದ ಪ್ರಯತ್ನಗಳು ಇದರಲ್ಲಿವೆ. ಕ್ರಿಶ್ಚಿಯನ್ ಮಿಷನರಿಗಳು ಶೋಷಿತರನ್ನು ಗುರಿಯಾಗಿಸಿಕೊಂಡು, ಆಮಿಷಗಳನ್ನೊಡ್ಡಿ ಮತಾಂತರಗೊಳಿಸುತ್ತಿದ್ದ ಬಗೆ; ಸಮಾನ ಅಂತಸ್ತಿನ ಭರವಸೆ ನೀಡಿದರೂ ಶೋಷಿತರನ್ನು ಶೋಷಿಸುತ್ತಲೇ ಇದ್ದ ಸಂಗತಿಗಳನ್ನು ವಿವರಿಸುತ್ತಾರೆ. ದಿಸ್ತೀನ್ ಗೌಡನ ಪಾತ್ರದ ಮೂಲಕ ಧಾರ್ಮಿಕ ವ್ಯವಸ್ಥೆಯ ಕೊರತೆಗಳನ್ನು ಎತ್ತಿ ತೋರಿಸುತ್ತಾರೆ. ಈ ಕಾದಂಬರಿ ೬೦ರ ದಶಕದ ಸಮಾಜ ವ್ಯವಸ್ಥೆಯ ಅಧ್ಯಯನ, ಧಾರ್ಮಿಕ ಶೋಷಣೆಗೆ ಹಿಡಿಯುವ ಕೈಗನ್ನಡಿ ಎಂದು ಹೇಳಬಹುದು. 

ಮತದಾನ ಹಾಗೂ ಇತರ ಕಾದಂಬರಿಗಳು: ಹಾಜರಿ ಕಡಿಮೆಯಾಗಲು ಕಾರಣೀಭೂತ – ವಿನಯ್ ರಾಯಚೂರ್ 

ಭೈರಪ್ಪನವರ ಕಾದಂಬರಿಗಳು ನನ್ನನ್ನು ಎಷ್ಟು ಆಕರ್ಷಿಸಿದ್ದವೆಂದರೆ, ನಾನು ಕ್ಲಾಸಿಗೆ ಹೋಗದೇ ಪಟ್ಟಾಗಿ ಕುಳಿತು ಮುಗಿಸುತ್ತಿದ್ದೆ. ನನ್ನ ಹಾಜರಿ ಕಡಿಮೆಯಾಗಲು ಇವೇ ಮೂಲ ಕಾರಣ. ಅವರ ಎಲ್ಲ ಕಾದಂಬರಿಗಳನ್ನು ಓದಿದ್ದೇನೆ. ‘ಮತದಾನ’ ಇಷ್ಟವಾಗುವುದಕ್ಕೆ ಮೂರೂ ಕಾರಣಗಳಿವೆ: ಚಿಕ್ಕದಾದರೂ ಚೊಕ್ಕದು ಈ ಕೃತಿ; ಆದರ್ಶಕ್ಕೆ ಜೋತು ಬಿದ್ದರೆ ಬದುಕು ಸಾಗದು; ರಾಜಕೀಯ ಎಂದಿಗೂ ಹೊಲಸೇ ಎನ್ನುವುದನ್ನು ಸಾಬೀತು ಮಾಡುತ್ತದೆ. ‘ಗೃಹಭಂಗ’ ದಲ್ಲಿ ಸಂಘರ್ಷದ ಬದುಕಿನ ಚಿತ್ರಣದ ಜೊತೆಗೆ, ಅಂತಹ ಅನುಭವಕ್ಕೆ ಒಳಗಾದವರಿಗೆ ಸಾಂತ್ವನ ಹೇಳುವ ಧ್ವನಿಯಿದೆ. ಭೈರಪ್ಪನವರ ಕಾದಂಬರಿಗಳಲ್ಲಿ ತತ್ವಶಾಸ್ತ್ರದ ಹೊಳವು ಸರ್ವೇ ಸಾಮಾನ್ಯ. ‘ಸಾಕ್ಷಿ’ ಹಾಗೂ ‘ನಾಯಿ ನೆರಳು’ ಇವೆರಡರಲ್ಲಿ ಆಧ್ಯಾತ್ಮಿಕತೆ, ತತ್ವಶಾಸ್ತ್ರಗಳ ಪ್ರಭಾವವನ್ನು ದಟ್ಟವಾಗಿ ಕಾಣಬಹುದು. ಪುನರ್ಜನ್ಮದ ಜಿಜ್ಞಾಸೆ ಕೂಡ ನಾಯಿನೆರಳಿನಲ್ಲಿ ತೀವ್ರವಾಗಿದೆ. ಅವರ ಯಾವುದೇ ಕಾದಂಬರಿಗಳಲ್ಲಿ ಅಂತಿಮ ನಿಷ್ಕರ್ಷ ಕಾಣ ಬರುವುದಿಲ್ಲ. ಓದುಗರ ಊಹೆಗೆ, ಚರ್ಚೆಗೆ ಅವು ತೆರೆದುಕೊಳ್ಳುತ್ತವೆ. ಅವರ ಕಾದಂಬರಿಗಳಿಂದ ಪ್ರೇರಿತನಾಗಿ, ನಾನು ತತ್ವಶಾಸ್ತ್ರ, ವೈಚಾರಿಕತೆ ಇವನ್ನೆಲ್ಲ ಇನ್ನು ಹೆಚ್ಚಾಗಿ ಅರಿಯುವ ಪ್ರಯತ್ನ ಮಾಡಿದ್ದೇನೆ. 

ಉತ್ತರಕಾಂಡ: ಭೈರಪ್ಪನವರ ಕೊನೆಯ ಕಾದಂಬರಿ – ಕೇಶವ ಕುಲಕರ್ಣಿ 

‘ಪರ್ವ’ದಲ್ಲಿ ಮಹಾಭಾರತವನ್ನು ಬರೆದ ಭೈರಪ್ಪನವರು, ‘ಉತ್ತರಕಾಂಡ’ದಲ್ಲಿ ರಾಮಾಯಣವನ್ನು ಬರೆದದ್ದು ೪೦ ವರ್ಷಗಳ ನಂತರ. ಭಾರತದ ಉದ್ದಗಲಕ್ಕೂ ಗದ್ಯ ಹಾಗೂ ಕಾವ್ಯದ ರೂಪದಲ್ಲಿ ನೂರಾರು ರಾಮಾಯಣಗಳ ಆವೃತ್ತಿಗಳನ್ನು ಕಾಣಬಹುದು. ಪಾಶ್ಚಾತ್ಯ ಶಿಕ್ಷಣದ ಪ್ರಭಾವ ಆಗುವವರೆಗೂ ರಾಮ ದೈವಾಂಶ ಸಂಭೂತನಾಗಿದ್ದ. ಆಧುನಿಕ ಕಾಲದಾರಂಭದಲ್ಲಿ ಪುರುಷೋತ್ತಮನಾದ. ವಿಚಾರವಾದ, ಹೊಸ ಸಿದ್ಧಾಂತಗಳ ಪ್ರಭಾವದಲ್ಲಿ ರಾಮಾಯಣವನ್ನು ವಿಭಿನ್ನ ದೃಷ್ಟಿಕೋನಗಳಿಂದ ನೋಡಲಾಗಿದೆ. ಪೌರಾಣಿಕ ನೋಟದಿಂದ ಹೊರತಾಗಿ, ಐತಿಹಾಸಿಕ ಅಥವಾ ಸಮಕಾಲೀನ ಕಥಾನಕದಂತೆ ಕಂಡವರಿದ್ದಾರೆ. ಕನ್ನಡದಲ್ಲೇ ಪೋಲಂಕಿ ರಾಮಮೂರ್ತಿಯವರು ‘ಸೀತಾಯಣ’ ಬರೆದು ಸಾಕಷ್ಟು ಚರ್ಚೆಗೊಳಗಾಗಿದ್ದರು. 

ಉತ್ತರಕಾಂಡದ ವೈಶಿಷ್ಟ್ಯತೆಯೆಂದರೆ, ಕಥೆ ಪ್ರಾರಂಭವಾಗುವುದೇ ಲವ-ಕುಶ ರ ಜನ್ಮವಾದನಂತರ. ರಾಮಾಯಣವು ಇಲ್ಲಿ ಸೀತೆಯ ಸ್ವಗತದಲ್ಲಿ rewind ಆಗುತ್ತದೆ. ‘ಪರ್ವ’ದಂತೆ ಇಲ್ಲಿನ ಪಾತ್ರಗಳೆಲ್ಲ ಮಾನವೀಕೃತಗೊಂಡಿವೆ. ಸೀತೆಯ ದೃಷ್ಟಿಕೋನದಿಂದ ಭೈರಪ್ಪ ರಾಮನನ್ನು ‘ಕಟ್ಟುತ್ತ’ ಹೋಗುತ್ತಾರೆ. ರಾಜನಾಗಿ ಗೆಲ್ಲುವ ರಾಮ, ಗಂಡನಾಗಿ ಸೋಲುತ್ತಾನೆ. ಅವರು ಈ ಕೃತಿಯಲ್ಲಿ ಸಾಕಷ್ಟು ಕಥೆಗಾರನ ಸ್ವಾತಂತ್ರ್ಯವನ್ನು ಬಳಸಿದ್ದಾರೆ. ಇದನ್ನು ಓದಿದಾಗ, ಭೈರಪ್ಪನವರು ಸಾಹಿತ್ಯ ಓದುಗರ ಕಟ್ಟುಪಾಡನ್ನು ಮೀರಿ ಒಳಗಾಗದೇ ಪಂಥ ಮೀರಿ ಬರೆದದ್ದನ್ನು ಗುರುತಿಸಬಹುದು. ಕೊನೆಯಲ್ಲಿ ವಾಲ್ಮೀಕಿ “ಈ ಕಥೆಗೆ ಸುಖಾಂತವನ್ನೊದಗಿಸಲೆಂದು ಅಯೋಧ್ಯೆಗೆ ಹೋಗಿ ಧರ್ಮಸಭೆ ಏರ್ಪಡಿಸಿದೆ. ಆದರೂ ಕಥೆಯ ದಿಕ್ಕನ್ನು ಬದಲಾಗಿಸಲಾಗಲಿಲ್ಲ” ಎಂದು ಸೋಲೊಪ್ಪಿಕೊಳ್ಳುತ್ತಾನೆ. 

ಈ ಕಾದಂಬರಿ, ಭೈರಪ್ಪನವರ ಒಳ್ಳೆಯ ಕಾದಂಬರಿ ಎಂದು ನನಗೆನ್ನಿಸುವುದಿಲ್ಲ; ಇದು ಅಷ್ಟಾಗಿ ಚರ್ಚೆಗೋ, ವಿಮರ್ಶೆಗೋ ಒಳಗೊಳ್ಳಲಿಲ್ಲ. 

ಮಂದ್ರ, ಹೆಸರೇ ಸೂಚಿಸುವಂತೆ ಸಂಗೀತದ ತಳಹದಿಯ ಮೇಲೆ ನಿಂತ ಕೃತಿ. ಮುಖ್ಯ ಪಾತ್ರದಾರಿ ಮೋಹನಲಾಲ, ಅಪ್ರತಿಮ ಪ್ರತಿಭೆಯ ಸಂಗೀತಗಾರ. ಹರಿದ್ವಾರ ಘಾಟಿಯಿಂದ ಮುಂಬಯಿಯ ಶಾಸ್ತ್ರೀಯ ಸಂಗೀತ ಲೋಕದ ಮಹಾನ್ ತಾರೆಯಾಗಿ ಬೆಳಗಿದವ. ಆತನ ಬೆಳವಣಿಗೆಯ ಮೂಲಕ ಭೈರಪ್ಪನವರು ಹಿಂದೂಸ್ತಾನಿ ಸಂಗೀತದ ಒಳ ನೋಟದ ಪರಿಚಯ ಮಾಡಿಕೊಡುತ್ತಾರೆ. ಇಲ್ಲಿ ಗುರು-ಶಿಷ್ಯ ಪರಂಪರೆಯ ಚಿತ್ರಣವಿದೆ; ಘರಾಣೆಗಳ ವಿವರವಿದೆ. ಹಲವು ರಾಗಗಳ ವಿವರ, ರಾಗಗಳ ರಸ, ಸಂಗೀತಗಾರ ಹೇಗೆ ಸ್ವರಗಳ ಹಂದರದಲ್ಲಿ ಸ್ವಯಂ ರಸಾಸ್ವಾಧನೆ ಮಾಡುತ್ತ, ಶ್ರೋತೃಗಳಿಗೂ ಉಣಬಡಿಸುತ್ತಾನೆ ಎಂದು ತೋರಿಸುತ್ತಾರೆ. ಜೊತೆಗೇ, ಕಲಾವಿದರ ನಡುವಿನ ಈರ್ಷ್ಯೆ, ಅನಾರೋಗ್ಯಕರ ಸ್ಪರ್ಧೆ ಇವನ್ನೆಲ್ಲ ಕಾಣಬಹುದು. 

ಮೋಹನಲಾಲನ ವಿಷಯ ಲಂಪಟತನ, ಅವಕಾಶವಾದಿ ಮನೋಭಾವ ಸಂಗೀತಕ್ಕಿಂತಲೂ ಮುಖ್ಯವಾದ ವಸ್ತುವಾಗಿ ಕಾಣಬಹುದು. ಆತ ಮಧು ಷಾ ಎಂಬ ಶಿಷ್ಯೆಯನ್ನು ತನ್ನ ಆಪ್ತ ಶಿಷ್ಯೆಯೆಂದು ಕರೆಯುತ್ತ, ಸಂಗೀತದ ಸಂಪೂರ್ಣ ಜ್ಞಾನವನ್ನು ಕೊಡುವ ನೆಪದಲ್ಲಿ ಶೋಷಿಸುವುದನ್ನು ಓದಿದಾಗ, ಇತ್ತೀಚಿಗೆ ಸುದ್ದಿಯಾದ ಸಂಗೀತ ಲೋಕದ ಲೈಂಗಿಕ ಶೋಷಣೆಯ ಕಥೆಗಳ ನೆನಪಾಗುವುದು ಸಹಜ. ಮೋಹನಲಾಲ ತನ್ನ ವೃತ್ತಿ ಜೀವನದ ಮಧ್ಯದಲ್ಲೇ ಮನೋಹರಿ ದಾಸ್ ಎಂಬ ನರ್ತಕಿಯ ಹಿಂದೆ ಓಡಿ  ಹೋಗುತ್ತಾನೆ. ಆಕೆ ತನ್ನ ವೃತ್ತಿಯಲ್ಲಿ ಮುಂದೆಬರಲು ಪಟ್ಟ ಕಷ್ಟಗಳು, ಶೋಷಣೆಗೆ ಒಳಗಾದ ಸಂಗತಿಗಳು; ತದನಂತರ ಆಕೆಯೇ ಸಹ ನರ್ತಕರನ್ನು ಶೋಷಿಸುವ ಪ್ರಸಂಗಗಳು ಕಥೆಯನ್ನು ನೈಜವಾಗಿಡಲು ಸಹಕರಿಸುತ್ತವೆ. 

ಈ ಕಾದಂಬರಿಯಲ್ಲೂ, ಭೈರಪ್ಪನವರ ಇತರ ಕಾದಂಬರಿಗಳಂತೇ ಹಿಂದಿರುವ ಸಂಶೋಧನೆಯ ಆಳ, ವಿಷಯದ ಮೇಲಿರುವ ಹಿಡಿತ, ಪಾತ್ರಗಳು ತಂದಿಡುವ ನೈತಿಕ ಸಂಧಿಗ್ತತೆ ಗಹನವಾಗಿವೆ. ಸಂಗೀತ ಪ್ರಿಯರೆಲ್ಲ ಓದಬೇಕಾದ ಕೃತಿಯೆಂದು ನನ್ನ ಅನಿಸಿಕೆ.  

ಭೈರಪ್ಪನವರೊಡನೆ ಸಹಚಾರ: ಡಾ.ಮತ್ತೂರು ನಂದಕುಮಾರ್ 

ಚಿತ್ರಕೃಪೆ : ಕೇಶವ ಕುಲಕರ್ಣಿ

ಇಂದು ಅನಿವಾಸಿಯ ಸದಸ್ಯರು ಸುಂದರವಾಗಿ ಭೈರಪ್ಪನವರ ಕಾದಂಬರಿಗಳ ಬಗ್ಗೆ ವಿಶ್ಲೇಷಣೆ, ಅನಿಸಿಕೆಗಳನ್ನು ಹಂಚಿಕೊಂಡರು. ಭೈರಪ್ಪನವರು ನನಗೆ ಆತ್ಮೀಯರು. ಅವರು ಮಿತಭಾಷಿ. ಎಂದೂ ಜನರ ಗಮನದ ಕೇಂದ್ರದಿಂದ ದೂರವುಳಿಯುತ್ತಿದ್ದರು. ಅವರ ಪ್ರಥಮ ಭೆಟ್ಟಿ, ನಾನು ಮೈಸೂರಿನಲ್ಲಿ ವ್ಯಾಸಂಗಕ್ಕೆ ಅಣ್ಣನ ಮನೆಯಲ್ಲಿದ್ದಾಗ. ಅಲ್ಲಿ ನಡೆದ ಕಾರ್ಯಕ್ರಮಕ್ಕೆ ದಿನವೂ ಬಂದು ಕುಳಿತು, ಕೇಳಿ ಸದ್ದಿಲ್ಲದೇ ಮರೆಯಾಗುತ್ತಿದ್ದರು. ಎಲ್ಲವನ್ನೂ ಗಮನವಿಟ್ಟು ಕೇಳುತ್ತಿದ್ದರು, ನೋಡುತ್ತಿದ್ದರು. ಸ್ಪಂಜಿನಂತೆ ವಿಚಾರಗಳನ್ನು ಹೀರಿಕೊಳ್ಳುತ್ತಿದ್ದರು. ಸಾಮಾನ್ಯರೊಡನೆ ಸಾಮಾನ್ಯರಾಗಿ ಬೆರೆಯುತ್ತಿದ್ದರು. ಪ್ರವಾಸಕ್ಕೆ ಹೋದಾಗ ಸ್ಥಳಿಯರೊಂದಿಗೇ ಉಳಿದು, ಅಲ್ಲಿನ ಆಚಾರ, ವಿಚಾರ, ವೈಶಿಷ್ಟ್ಯತೆಗಳನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದರೇ ಹೊರತು, ಹೊಟೇಲುಗಳಲ್ಲಿ ತಂಗಿ ನೀರ ಮೇಲಿನ ಕಮಲದ ಎಲೆಯಂತಿರುತ್ತಿರಲಿಲ್ಲ. ಮತ್ತೂರಿಗೆ ಬಂದಾಗ, ನಮ್ಮ ಮನೆಯಲ್ಲೇ ಅವರ ವಾಸ್ತವ್ಯ. ದಿನವೂ ಬೆಳಗ್ಗೆ ನನ್ನೊಡನೆ ಊರಿನ ಕೆರೆಯ ಸುತ್ತ ವಾಕಿಂಗ್ ಹೋಗಲೇ ಬೇಕಿತ್ತು. ಆಗ ಎದುರಾಗುವ ಜನರೊಡನೆ ಕಳೆಯುತ್ತಿದ್ದರು; ವಯಸ್ಸಿನ ಭೇದವಿಲ್ಲದೇ ಚರ್ಚೆ ಮಾಡುತ್ತಿದ್ದರು. ಲಂಡನ್ನಿಗೆ ಬಂದಾಗ ಕೂಡ ನಮ್ಮ ಮನೆಯಲ್ಲೇ ತಂಗುತ್ತಿದ್ದರು. ಆಗ ಅವರು ನನ್ನೊಡನೆ ನೀರನ್ನು ಯಾಕೆ ಪೋಲು ಮಾಡಬಾರದು ಎಂಬ ವಿಷಯವನ್ನು ವರ್ಣಿಸಿದ ನೆನಪು ಮನದಲ್ಲಿ ತೇವವಾಗಿಯೇ ಇದೆ. ದಿನವೂ ವಾಕಿಂಗ್ ಹೋದಾಗ ಹಲವಾರು ವಿಷಯಗಳ ಚರ್ಚೆ ಆಗುತ್ತಿತ್ತು. ಅವರು ಮಂದ್ರ ಬರೆಯುವ ಮೊದಲು ಬೇಕಿದ್ದ ಸಾಮಗ್ರಿಯನ್ನು ಕಲೆ ಹಾಕಲು ನಾನು ಸ್ವಲ್ಪ ಸಹಾಯ ಮಾಡಿದ್ದನ್ನು ಅವರು ಮುನ್ನುಡಿಯಲ್ಲಿ ಉಲ್ಲೇಖಿಸಿದ್ದು  ನನಗೆ ಹೆಮ್ಮೆಯ ಸಂಗತಿ – ಹೂವಿನೊಡನೆ ನಾರೂ ದೇವರ ಮುಡಿಗೇರಿದಂತೆ. ಅವರು ನಂಗೆ ತುಂಬಾ ಆತ್ಮೀಯರು. ಆತ್ಮೀಯರ ಬಗ್ಗೆ ಮಾತನಾಡುವಾಗ ಕಾಲ ಕಳೆದ ಅರಿವೇ ಇರುವುದಿಲ್ಲ.  ಇವತ್ತಿನ ಭೈರಪ್ಪನವರ ಸ್ಮರಣೆ ಅರ್ಥಪೂರ್ಣವಾಗಿದೆ. ಅವರನ್ನು ಓದಬೇಕು, ಓದಿ ಅವರ ನೆನಪನ್ನು ಹಸಿರಾಗಿಡಬೇಕು. 

ಆಂಗ್ಲನಾಡಿನಲ್ಲಿ ಕರುನಾಡ ಸೊಗಡು: ದೀಪಾವಳಿ ಹಾಗೂ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ – ನಾಗರಾಜ ಬಸವರಾಜು

 ದೀಪಗಳ ಹಬ್ಬ ದೀಪಾವಳಿ ಮತ್ತು ನಮ್ಮೆಲ್ಲರ ಹೆಮ್ಮೆಯ ನಾಡಹಬ್ಬ ಕರ್ನಾಟಕ ರಾಜ್ಯೋತ್ಸವ — ಈ ಎರಡೂ ಹಬ್ಬಗಳು ಅನಿವಾಸಿ ಕನ್ನಡಿಗರಿಂದ ನವೆಂಬರ್ ೦೮, ೨೦೨೫ರಂದು ಮಿಲ್ಟನ್ ಕೀನ್ಸ್‌ನಲ್ಲಿ ಅದ್ಧೂರಿಯಾಗಿ ಆಚರಿಸಲ್ಪಟ್ಟವು. ದೂರದ ಬ್ರಿಟನ್ ನೆಲದಲ್ಲಿ, ಅನಿಕೇತನ ಮಿಲ್ಟನ್ ಕೀನ್ಸ್ (ಸ್ಥಳೀಯ ಸಮುದಾಯ ಸಂಸ್ಥೆ) ಮತ್ತು ೪೦ ವರ್ಷಗಳ ಸುದೀರ್ಘ ಇತಿಹಾಸವಿರುವ ಪ್ರತಿಷ್ಠಿತ ಕನ್ನಡ ಬಳಗ ಯು.ಕೆಯ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮವು ಕನ್ನಡಿಗರ, ಕರುನಾಡ ಕುಡಿಗಳ ಹೃದಯಗಳನ್ನು ಬೆಸೆದ ಬೃಹತ್ ಸಾಂಸ್ಕೃತಿಕ ಸೇತುವೆಯಾಗಿತ್ತು.

 ಆದಿಪೂಜಿತ ವಿನಾಯಕನ ಆರಾಧನೆಯೊಂದಿಗೆ, ಉಪಸ್ಥಿತರಿದ್ದ ಗೌರವಾನ್ವಿತ ಅತಿಥಿಗಳಾದ ಡಾ. ಎಂ. ಎನ್. ನಂದಕುಮಾರ್ ಹಾಗೂ ಗಾಯಕ ಶ್ರೀ ಸಂತೋಷ್ ವೆಂಕಿಯವರು ಎರಡೂ ಸಂಘ ಸಂಸ್ಥೆಗಳ ಅಧ್ಯಕ್ಷರು, ನಿರ್ದೇಶಕರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ವಿದೇಶ ನೆಲದಲ್ಲಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ರೀತಿಯ ಆಚರಣೆಗಳು ಮೈಲಿಗಲ್ಲು. ಯುವ ಪೀಳಿಗೆಗೆ ನಮ್ಮ ನಾಡು-ನುಡಿಯ ಮಹತ್ವವನ್ನು ಸಾರುವ ಉದ್ದೇಶದಿಂದ ಆಯೋಜಿಸಲಾದ ಈ ಉತ್ಸವಕ್ಕೆ ಅಪಾರ ಸಂಖ್ಯೆಯ ಸ್ಥಳೀಯ ಕನ್ನಡಿಗರು ಹಾಗು ದೂರದೂರಿನ ಕನ್ನಡ ಬಳಗದ ಸದಸ್ಯರು ಕುಟುಂಬ ಸಮೇತ ಆಗಮಿಸಿ ಕರುನಾಡ ಸೊಗಡನ್ನು ಮೆರೆಸಿದರು. ಕಾರ್ಯಕ್ರಮದ ಗೌರವ ಅತಿಥಿ, ಡಾ. ಎಂ. ಎನ್. ನಂದಕುಮಾರ್ (ಕಾರ್ಯನಿರ್ವಾಹಕ ನಿರ್ದೇಶಕರು, ಭಾರತೀಯ ವಿಧ್ಯಾ ಭವನ, ಲಂಡನ್) ನೆರೆದವರನ್ನು ಉದ್ದೇಶಿಸುತ್ತ, ಈ ರೀತಿಯ ಕಾರ್ಯಕ್ರಮಗಳು ಮತ್ತು ಕನ್ನಡ/ಕರ್ನಾಟಕ ಕುರಿತಾದ ಕಾರ್ಯಕ್ರಮಗಳು ನಾಡಿನಿಂದ ದೂರದ ದೇಶದದಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಸೇತುವೆಯಾಗಿ, ಕರ್ನಾಟಕ ಭಾಷೆಗಳ, ಕಲಾ ಸಂಸ್ಕೃತಿ ಪರಂಪರೆಗಳ ಪರಿಚಯವಾಗಿ, ಈ ಅಭಿರುಚಿಗಳ ಬೆಳವಣಿಗೆಗೆ ಪೂರಕವಾಗಿರಲಿ ಎಂದು ಆಶಿಸಿದರು.

 ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಹಲವಾರು ಕಲಾವಿದರ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು. ಮಕ್ಕಳು, ಯುವಕರು ಮತ್ತು ಹಿರಿಯರು ಜಾನಪದ, ಶಾಸ್ತ್ರೀಯ ಸಂಗೀತ, ನೃತ್ಯ ಮತ್ತು ನಾಟಕಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಮಕ್ಕಳ ಛದ್ಮವೇಶ, ಜನಪದ ಹಾಗು ಸಿನಿಮಾ ನೃತ್ಯಗಳು, ವಯಸ್ಕರ ಗಾಯನ, ದಂಪತಿಗಳ ಜೋಡಿ ನೃತ್ಯ, ನವರಸ ರೂಪಕ, ರಾಮಾಯಣ ಸಂಗೀತ ನೃತ್ಯ ಹಾಗು ಕರುನಾಡ ವೈಭವ ಕುರಿತಾದ ಫಿನಾಲೆ ನೃತ್ಯ ಸಭಿಕರ ಮನ ಸೂರೆಗೊಂಡವು. ಪ್ರತಿಯೊಂದು ಪ್ರದರ್ಶನವೂ ಕನ್ನಡಿಗರ ಕಲಾಭಿರುಚಿ ಮತ್ತು ನಾಡಿನ ಸಂಸ್ಕೃತಿಯ ಶ್ರೀಮಂತಿಕೆಗೆ ಸಾಕ್ಷಿಯಾದವು. ದೀಪಾವಳಿಯ ಬೆಳಕು ಮತ್ತು ರಾಜ್ಯೋತ್ಸವದ ಕೆಂಪು-ಹಳದಿ ವರ್ಣಗಳು, ಎಲ್ಲರ ಸಾಂಪ್ರಾದಾಯಿಕ ಉಡುಗೆ ತೊಡುಗೆಗಳು ಹಾಗೂ ಅದಕ್ಕನುಗುಣವಾಗಿ ಒಳಾಂಗಣ ಅಲಂಕಾರಗಳು ಸಮಾರಂಭದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದವು.

ಸ್ಮರಣಾಂಜಲಿ: ಕನ್ನಡದ ದಿಗ್ಗಜರಿಗೆ ನಮನ

ಈ ವರ್ಷ ನಮ್ಮಿಂದ ದೂರವಾದ, ಈ ಹಿಂದೆ ಕನ್ನಡ ಬಳಗ ಯು ಕೆ ಗೆ ಆಹ್ವಾನಿತ ಅತಿಥಿಯಾಗಿ ಬಂದಿದ್ದ ನಾಡೋಜ ಡಾ. ಎಸ್. ಎಲ್. ಭೈರಪ್ಪ ಮತ್ತು ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅಲ್ಲದೆ, ಕನ್ನಡ ಬಳಗ ಯು.ಕೆಯ ಬೆಳವಣಿಗೆಗೆ ಶ್ರಮಿಸಿ, ಇತ್ತೀಚೆಗೆ ಅಗಲಿದ ಹಿರಿಯ ಸದಸ್ಯರ ಆತ್ಮಗಳಿಗೆ ಒಂದು ನಿಮಿಷದ ಮೌನ ಮತ್ತು ನುಡಿನಮನದ ಮೂಲಕ ಗೌರವ ಸಲ್ಲಿಸಲಾಯಿತು. ತಮ್ಮ ನೆಚ್ಚಿನ ಹಿರಿಯರನ್ನು ನೆನೆದು ಅನೇಕರು ಭಾವುಕರಾದರು.

ಬಹುಭಾಷಾ ಗಾಯಕ ಶ್ರೀಯುತ ಸಂತೋಷ್ ವೆಂಕಿ ಅವರ ಸಂಗೀತ ರಸಸಂಜೆ ಮೂಲಕ ನೆರೆದಿದ್ದ ಚಿಣ್ಣರು, ಯುವಕರು ಹಾಗೂ ಹಿರಿಯರೆಲ್ಲ ಕುಣಿದು ಕುಪ್ಪಳಿಸುವಂತೆ ಮಾಡಿದರು. ಈ ಕಾರ್ಯಕ್ರಮ ಕೇವಲ ಹಬ್ಬದ ಆಚರಣೆಯಾಗಿರದೆ, ಹೊರನಾಡ ಕನ್ನಡಿಗರು ತಮ್ಮ ಬೇರುಗಳನ್ನು ಗಟ್ಟಿಗೊಳಿಸಿಕೊಂಡು, ಹೊಸ ಪೀಳಿಗೆಗೆ ಕರುನಾಡ ವೈಭವಯುತ ಸಂಸ್ಕೃತಿಯ, ಪರಂಪರೆಯ ಮಹತ್ವವನ್ನು ತಿಳಿಸುವ ಶ್ಲಾಘನೀಯ ಪ್ರಯತ್ನವಾಯಿತು.

‘ಭೈರಪ್ಪನವರಿಗೆ ಶ್ರದ್ಧಾಂಜಲಿ’ ಕಾರ್ಯಕ್ರಮಕ್ಕೆ ನೆರೆದ ಸಭಿಕರು – ಚಿತ್ರಕೃಪೆ ಆನಂದ ಕೇಶವಮೂರ್ತಿ

ಕನ್ನಡ ಬಳಗದ ಹುಟ್ಟು ಮತ್ತು ಬೆಳವಣಿಗೆ-ರಾಮಮೂರ್ತಿ

       ಶ್ರೀಯುತ  ರಾಮಮೂರ್ತಿ

ಒಂದು ಸಂಸ್ಥೆಯನ್ನು ಕಟ್ಟಿ  ಬೆಳೆಸುವುದು ಹಲವರ ಜೀವನ ಪೂರ್ತಿಯ ಸಾಧನೆ . ಅದನ್ನು ಬೆಳೆಸಿಕೊಂಡು ಹೋಗುವುದು ಮುಂದಿನ ತಲೆಮಾರಿನವರ ಹೊಣೆ. ಯುನೈಟೆಡ್ ಕಿಂಗ್ಡಮ್ ನ  ಮೊಟ್ಟ ಮೊದಲ ಕನ್ನಡ ಸಮುದಾಯದ ಸಂಸ್ಥೆ ಕನ್ನಡ ಬಳಗ, ಯು.ಕೆ . ( KBUK )

ಇದರ  ಹುಟ್ಟು ಮತ್ತು ಬೆಳವಣಿಗೆಯನ್ನು ಅತ್ಯಂತ ಹತ್ತಿರದಿಂದ ನೋಡುತ್ತ ಅದಕ್ಕಾಗಿ ಶ್ರಮದಾನವನ್ನು ಮಾಡುತ್ತ ಬಂದವರಲ್ಲಿ ರಾಮಮೂರ್ತಿಯವರು ಕೂಡ ಒಬ್ಬರು. ಈ ವಾರ ಅದೆಲ್ಲದರ ನೆನಪಿನ ಸುರಳಿಯನ್ನು ನಮ್ಮ ಮುಂದೆ ಬಿಚ್ಚಿಡುವ ಮೂಲಕ ಅವರು ಬರಿಯ  ಒಂದು ಲೇಖನವನ್ನು ಮಾತ್ರ  ಬರೆದಿಲ್ಲ. ಬದಲಿಗೆ ಕೆ.ಬಿ.ಯು.ಕೆ ಗಾಗಿ ಒಂದು ಉತ್ತಮ ದಾಖಲೆಯನ್ನು ಸೃಷ್ಟಿಸಿದ್ದಾರೆ. ಇಂದಿನ ತಲೆಮಾರಿನವರಿಗೆ ಒಂದು ಸಂಸ್ಥೆಯ ಆಸ್ಥೆಯನ್ನು ಕಾಪಾಡಿಕೊಳ್ಳುವ ಅಗತ್ಯದ ಬಗ್ಗೆ ತಿಳಿಸಿದ್ದಾರೆ. ಬಳಗದ ಶ್ರೀಮಂತ ಚರಿತ್ರೆಯ ನೆನಪುಗಳನ್ನು ನಮ್ಮ ಮುಂದಿಟ್ಟು ಸಂಸ್ಥೆಯ ಮಹತ್ವವನ್ನು ಸಾರಿದ್ದಾರೆ.

ಕಳೆದ ವಾರ  ಇಂಗ್ಲೆಂಡಿಗೆ ಬಂದ ಕನ್ನಡ ಜನರ ಬದುಕು ೬೦-೭೦ ರ ದಶಕದಲ್ಲಿ ಹೇಗಿತ್ತು ಎನ್ನುವ ಬಗ್ಗೆ ಬರೆದಿದ್ದರು. ಅದನ್ನು ಓದಿದ ನಂತರ, ಅಲ್ಲಿಂದ ಇಲ್ಲಿಗೆ ಆಗಿರುವ ಎಲ್ಲ ಬದಲಾವಣೆಗಳನ್ನು ನಾವು ಗ್ರಹಿಸಬಹುದು. ಆ ಲೇಖನದ ಲಿಂಕ್ ಇಲ್ಲಿದೆ. https://wp.me/p4jn5J-2o6.

ಇವತ್ತು ಹಲವು ಕನ್ನಡ ಸಂಸ್ಥೆಗಳು ಈ ಆಂಗ್ಲನಾಡಿನಲ್ಲಿ ಹುಟ್ಟಿವೆ. ಆದರೆ ಅವೆಲ್ಲದರ ತಾಯ್ಬೇರು ಕೆ.ಬಿ.ಯು.ಕೆ ಎನ್ನುವುದರಲ್ಲಿ ಸಂಶಯವೇ ಇಲ್ಲ.ಈ ಲೇಖನ ಅದಕ್ಕೆ ಪೂರ್ಣ ಸಾಕ್ಷಿಯಾಗಿ ನಿಲ್ಲುತ್ತದೆ- ಡಾ. ಪ್ರೇಮಲತ ಬಿ.


 ಕನ್ನಡ ಬಳಗದ ಆರಂಭ

೩೦ ಅಕ್ಟೊಬರ್ ೧೯೮೨ ದಿನ ದೀಪಾವಳಿ ಹಬ್ಬ ಆಚರಿಸಲು ಡಾನ್ಕ್ಯಾಸ್ಟರ್ ನಲ್ಲಿದ್ದ  ಗೋಪಾಲ್ ಕುಲ್ಕರ್ಣಿ ಅವರ ಮನೆಯಲ್ಲಿ ಕೆಲವು ಕನ್ನಡಿಗರು ಸೇರಿದ್ದರು. ಅರವಿಂದ್ ಮತ್ತು ಸ್ನೇಹ ಕುಲ್ಕರ್ಣಿ, ಶ್ರೀವತ್ಸ ದೇಸಾಯಿ, ಪಾಂಡುರಂಗಿ ಮತ್ತು ಅಗಳಗಟ್ಟಿ ದಂಪತಿಗಳು ಮುಂತಾದವರು.  ಈ ದೇಶದಲ್ಲಿ  ನೆಲಸಿರುವ ಕನ್ನಡ ಕುಟುಂಬಗಳನ್ನು ಸೇರಿಸುವ ಉದ್ದೇಶದಿಂದ  ಇಲ್ಲಿ ಒಂದು ಸಂಸ್ಥೆ ಬೇಕು ಅನ್ನಿಸಿ ಕೊನೆಗೆ ಕನ್ನಡ ಬಳಗ (extended family ) ಅಂತ ನಾಮಕರಣ ಮಾಡಿದರು . ಇದಕ್ಕೆ ಬೇಕಾದ ಖರ್ಚಿಗೆ ತಲಾ £೫ ಹಾಕಿ ನಮ್ಮ ಬಳಗ ಪ್ರಾರಂಭ ವಾಯಿತು.  ಅವಾಗ internet ಅಥವಾ ಮೊಬೈಲ್ ಫೋನ್ ಇರಲಿಲ್ಲ. ಸಂಪರ್ಕ ’word of mouth’ ಮಾತ್ರ. ಹಲವಾರು ವೈದ್ಯರು ಇದ್ದದ್ದರಿಂದ Pulse ಎನ್ನುವ ವಾರ ಪತ್ರಿಕೆಯಲ್ಲೂ ಕನ್ನಡ ಬಳಗದ  ಬಗ್ಗೆ ಪ್ರಚಾರ ಮಾಡಿದರು.

ಮೊಟ್ಟ ಮೊದಲಿನ ಕನ್ನಡ ಬಳಗದ ಆರಂಭ ನಾಟಿಂಗ್ಹ್ಯಾಮ್ ಹಿಂದೂ ದೇವಸ್ಥಾನದಲ್ಲಿ. ಇದು ೧-೫-೧೯೮೩. ಭಾರತೀಯ ವಿದ್ಯಾ ಭವನದ ಶ್ರೀ ಮತ್ತೂರ್ ಕೃಷ್ಣಮೂರ್ತಿ ಅವರು ಅಧ್ಯಕ್ಯತೆ ವಹಿಸಿದ್ದರು. ಅವರು ತಮ್ಮ ಭಾಷಣದಲ್ಲಿ “ ಕನ್ನಡಿಗರು ಆರಂಭ ಶೂರರು ಎಂಬ ಶಂಕೆ ಇದೆ ಆದರೆ ನೀವೆಲ್ಲ ಸೇರಿ ಇದನ್ನು ಅಳಿಸಬೇಕು “ ಅಂತ ಮನವಿ ಮಾಡಿದರು. ಸುಮಾರು ೧೫೦ ಕ್ಕೂ ಹೆಚ್ಚು ಕನ್ನಡಿಗರು ಸೇರಿದ್ದರು.ಬಹಳ ವರ್ಷದ ನಂತರ  ಮನೋರಂಜನಾ ಕಾರ್ಯಕ್ರಮಗಳನ್ನು ನೋಡುವ ಅವಕಾಶ ಒದಗಿ ಬಂದಿತ್ತು. ಎಲ್ಲರಿಗೂ ಒಂದು ಸಂಭ್ರಮ ಮತ್ತು ಉತ್ಸಾಹ ಎದ್ದು ಕಾಣಿಸುತ್ತಿತ್ತು. ಊಟದ ವ್ಯವಸ್ಥೆ ಈಗಿನ ತರ ಹೊರಗಿನಿಂದ ಅಡಿಗೆಯವರದಲ್ಲ. ಬಂದಿದ್ದ ಅನೇಕ ಸ್ವಯಂಸೇವಕರು ಸೇರಿ ಅಷ್ಟು ಜನಕ್ಕೂ ಅಡಿಗೆ ಮಾಡಿದ್ದರು.

ಈ ಪ್ರಥಮ ಸಮ್ಮಿಲನದಲ್ಲಿ ಬಳಗದ ಮೊದಲನೆಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಡಾ. ಸ್ನೇಹ ಕುಲ್ಕರ್ಣಿ –   ಅಧ್ಯಕ್ಯರು
ಡಾ. ವಿಭೂತಿ           –   ಕಾರ್ಯದರ್ಶಿ
ಡಾ. ಕುರುವತ್ತಿ        –    ಕೋಶಾಧಿಕಾರಿ
ಶ್ರೀಮತಿ ವಿಜಯಾ ಆನಿಖಿಂಡಿ   – ಸಾಂಸ್ಕತಿಕ  ಕಾರ್ಯದರ್ಶಿ

ಮ್ಯಾನ್ಸ್ ಫೀಲ್ಡ್ ನಲ್ಲಿ ವಕೀಲ ರಾಗಿದ್ದ ಶ್ರೀ ಎಡ್ವರ್ಡ್ಸನ್ ಅವರಿಂದ ಸಲಹೆ ಪಡೆದು  ಪ್ರಥಮ ಸಂವಿಧಾನವನ್ನು (Constitution) ನ್ನು ರಚಿಸಲಾಯಿತು

ಇದರ ಮುಖ್ಯ ಅಂಶ , ಆಂಗ್ಲದೇಶದಲ್ಲಿ ನೆಲಸಿರುವ ಕನ್ನಡ ಅಭಿಮಾನಿಗಳ ಒಕ್ಕೂಟದ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪರಿಪಾಲನೆ ಮಾಡುವುದು, ರಾಜಕೀಯ, ಜಾತಿ ಮತ್ತು ಮತಗಳ ಬೇಧಭಾವನೆಗಳಿಂದ ದೂರವಾಗಿರುವುದು ಇತ್ಯಾದಿ. ಸಮಿತಿಯ ಅವಧಿ ಎರಡು ವರ್ಷ( ಈಗ ಮೂರು ವರ್ಷಕ್ಕೆ ಬದಲಾವಣೆ ಆಗಿದೆ) ಯುಗಾದಿ ಮತ್ತು ದೀಪಾವಳಿ ಆಚರಣೆ ಮತ್ತು  ಯುಗಾದಿ ಸಮಯದಲ್ಲಿ ಸದ್ಯಸರ ಸಭೆ, ಧರ್ಮ ಕಾರ್ಯಗಳನ್ನು  ಬೆಂಬಲಿಸುವುದು  ಮತ್ತು ನೂತನ ಸಮಿತಿಯ ಆಯ್ಕೆ ಇತ್ಯಾದಿ ಅಂಶಗಳನ್ನು ಸಂವಿಧಾನದಲ್ಲಿ ಸೇರಿಸಿದೆವು.

ಲಂಡನ್ನಿನಲ್ಲಿ ಆಗಸ್ಟ್  ೧೯೮೩ ನಲ್ಲಿ  ಭಾರತೀಯ ವಿದ್ಯಾ ಭವನಲ್ಲಿ ನಡೆದ ಸಮಾರಂಭಕ್ಕೆ  ಸುಮಾರು ೨೦೦ ಕ್ಕೂ ಹೆಚ್ಚು ಕನ್ನಡಿಗರು ಸೇರಿ  ಅನೇಕ ಸಾಂಸ್ಕೃತಿಕ  ಕಾರ್ಯಕ್ರಗಳಲ್ಲಿ ಭಾಗವಹಿಸಿ ಆನಂದಿಸಿದರು ಮತ್ತು  ಇತರೆ ಕನ್ನಡದವರನ್ನು ಪರಿಚವನ್ನು ಮಾಡಿಕೊಂಡರು.

ಮೊಟ್ಟಮೊದಲನೆಯ ಎ.ಜಿ.ಎಮ್. ಸ್ಟಾಕ್ಪೋರ್ಟ್ ನಲ್ಲಿ ೧೯೮೪ ನಲ್ಲಿ ನಡೆದು ಮುಂದಿನ ಕಾರ್ಯಕಾರಿ ಸಮಿತಿ ಚುನಾವಣೆಯಿಂದ ಆರಿಸಬೇಕೆಂದು ನಿರ್ಧಾರವಾಗಿ   ೧೯೮೫ ನಲ್ಲಿ  ೧೫ ಜನರ ಸಮಿತಿಯನ್ನು ಆರಿಸಲಾಯಿತು. ಬಳಗದ ಹಿರಿಯ ಸದಸ್ಯೆ  ಡಾ.ಅಭಯಾಂಬ ಈ ಸಮಿತಿಯ ಕಾರ್ಯದರ್ಶಿಗಳಾಗಿ ಬಹಳ ಶ್ರದ್ಧೆ ಇಂದ ಕೆಲಸ ಮಾಡಿ ಅನೇಕರನ್ನು ಸದಸ್ಯರನ್ನಾಗಿ ಮಾಡಿದರು.

೧೯೮೭ ನಲ್ಲಿ (೨೬-೦೯-೧೯೮೭ )  ಉತ್ತರ ಲಂಡನ್ Enfield ನಲ್ಲಿ ನವರಾತ್ರಿ ಸಂಭ್ರಮಕ್ಕೆ ಕರೆಯೋಲೆಯನ್ನು ಕನ್ನಡ ಟೈಪ್ ರೈಟರ್ ನಲ್ಲಿ ರಾಜಾರಾಮ್ ಕಾವಳೆ ಅವರು ತಯಾರಿಸಿದರು.ಸುಮಾರು ೩೦೦ ಕನ್ನಡದ ಕುಟುಂಬದವರಿಗೆ ಕಳಿಸಲಾಯಿತು. ಇಲ್ಲಿ ಮಕ್ಕಳಿಗೆ ಮತ್ತು ವಯಸ್ಕರಿಗೆ ಆಟಗಳನ್ನು ಏರ್ಪಡಿಸಿ ಮಧ್ಯಾನ್ಹ ೧೮೯೮ ರಲ್ಲಿ ನಡೆಯುತ್ತಿರುವ ವಿಶ್ವ ಕನ್ನಡಿಗರ ಸಮ್ಮೇಳನ ಬಗ್ಗೆ ಚರ್ಚೆ ನಡೆಯಿತು. ಈ ಕಾರ್ಯಕ್ರಮಕ್ಕೆ ಹಣ ಕೂಡಿಸಲು ನಾನು ಮತ್ತು ಕಾವಳೆ ಅವರು Ealing road ನಲ್ಲಿರುವ ಅಂಗಡಿಗಳಿಗೆ ಭೇಟಿ ಕೊಟ್ಟು ಜಾಹಿರಾತುಗಳನ್ನು ಕೊಡಿ ಅಂತ ಮನವಿ ಮಾಡಿ ಸ್ವಲ್ಪ ಸಂಪಾದಿಸಿದೆವು.

೧೯೮೮ ವಿಶ್ವ ಕನ್ನಡ ಸಮ್ಮೇಳನ 

೧೯೮೭ರಲ್ಲಿ  ಇಲ್ಲಿ ಮತ್ತು ಇತರ ದೇಶದಲ್ಲಿ ನೆಲಸಿರುವ ಕನ್ನಡಿಗರನ್ನು ಸೇರಿಸಿ ವಿಶ್ವ ಕನ್ನಡ ಸಮ್ಮೇಳವನ್ನು ನಡೆಸುವ  ಉದ್ದೇಶದಿಂದ  ಡಾ. ಭಾನುಮತಿ ಈ ವರ್ಷದ ಚುನಾವಣೆಯಲ್ಲಿ ಭಾಗವಹಿಸಿ ಅಧ್ಯಕ್ಷರಾದರು.  ಅದೇ ಸಮಯದಲ್ಲಿ ಅಂದಿನ ಕರ್ನಾಟಕದ ಮಖ್ಯ  ಮಂತ್ರಿಗಳಾಗಿದ್ದ ಶ್ರೀ ರಾಮಕೃಷ್ಣ  ಹೆಗ್ಗಡೆ ಲಂಡನ್ ಭೇಟಿಮಾಡಿದಾಗ (ಮೇ ೧೯೮೭) ಕನ್ನಡ ಬಳಗದವರು ಅವರಿಗೆ ಸನ್ಮಾನ ಮಾಡಿ ವಿಶ್ವ ಕನ್ನಡಿಗರ ಸಮ್ಮೇಳನ ನಡೆಸುವ ಉದ್ದೇಶವನ್ನು ಭಾನುಮತಿ  ಹೆಗ್ಗಡೆ ಅವರ ಮುಂದೆ ಇಟ್ಟು  ಅವರ ಸರಕಾರದಿಂದ ಸಹಾಯ ಕೋರಿದರು, ಮುಖ್ಯ ಮಂತ್ರಿಗಳು ಈ ಸಲಹೆ ಅತ್ಯಂತ ಒಳ್ಳೆಯದು ಮತ್ತು ತಮ್ಮ ಸರಕಾರದ ಸಂಪೂರ್ಣ ಬೆಂಬಲ ಇದೆ ಅಂತ ಭರವಸೆ ಕೊಟ್ಟರು.  ಆದರೆ,ಕೆಲವು ತಿಂಗಳ ನಂತರ ಕರ್ನಾಟಕದ ರಾಜಕೀಯದ ಪರಿಸ್ಥಿತಿ ಬದಲಾಗಿತ್ತು. ಹೆಗ್ಗಡೆ ಮುಖ್ಯಮಂತ್ರಿ ಸ್ಥಾನದಿಂದ ಹೊರಗೆ ಬಂದಿದ್ದರು, ನಮ್ಮ ಸಮ್ಮೇಳನದ ಬಗ್ಗೆ ಹೊಸದಾಗಿ ಅವರ ಜಾಗಕ್ಕೆ ಬಂದಿದ್ದ ಶ್ರೀ ಬೊಮ್ಮಾಯಿಯವರಿಗೆ ಗೊತ್ತಿರಲಿಲ್ಲ, ಆದ್ದರಿಂದ ಈ  ಸಮ್ಮೇಳನ ನಡೆಯುವುದೇ ಅನ್ನುವ ಸಂಶಯ  ಇತ್ತು.  ಆದರೆ  ಡಾ.ಭಾನುಮತಿ  ಕರ್ನಾಟಕ್ಕೆ ಭೇಟಿ ಕೊಟ್ಟು ಮಂತ್ರಿಗಳನ್ನು ಮತ್ತು ಅಧಿಕಾರಿಗಳನ್ನು ಭೇಟಿಮಾಡಿ ಅವರಿಂದ ಬೆಂಬಲ ಪಡೆದರು. ಇಬ್ಬರ ಅಧಿಕಾರಿಗಳ ಸಹಾಯ ಇಲ್ಲಿ ಮರೆಯಬಾರದು.  ವಾರ್ತಾ  ಇಲಾಖೆಯಲ್ಲಿದ್ದ ಡಾ.ಕೃಷ್ಣಮೂರ್ತಿ ಮತ್ತು ಕನ್ನಡ ಮತ್ತು ಸಂಸ್ಕೃತಿಯ ನಿರ್ದೇಶಕ ಶ್ರೀ ವಿಠ್ಠಲಮೂರ್ತಿ. ಈ ಮಹನೀಯರು ಇಂದಿಗೂ ನಮ್ಮ ಸಂಪರ್ಕದಲ್ಲಿದಾರೆ.

ಆಗಸ್ಟ್ ೧೯೮೮ ಮ್ಯಾಂಚೆಸ್ಟರ್ ನ UMIST ಆವರಣದಲ್ಲಿ ನಲ್ಲಿ ಮೂರು ದಿನ ಈ ಸಮ್ಮೇಳವನ್ನು ನಡೆಸಬೇಕೆಂದು ನಿರ್ಧಾರ ಮಾಡಿ  ಅನೇಕ ಸದಸ್ಯರ ಸಮಿತಿ ಯನ್ನು ಮಾಡಿ ಕೆಲಸ ಎಲ್ಲರೂ ಉತ್ಸಾಹದಿಂದ ದುಡಿದರು. ನನ್ನ ಅಭಿಪ್ರಾಯದಲ್ಲಿ  ಕನ್ನಡ ಬಳಗದಲ್ಲಿ ಅನೇಕ ಕುಟುಂಬಗಳು ಮೊಟ್ಟ  ಮೊದಲು  ಭೇಟಿಯಾಗಿ  ಮೂರು ದಿನ ಒಟ್ಟಿಗೆ ಇದ್ದು  ಭಾಂದವ್ಯ ಬೆಳಸಿದ್ದು  ಈ ಸಮಯದಲ್ಲೇ .  ಇಲ್ಲಿಬೆಳೆದ ಸಂಪರ್ಕಗಳು  ೩೨ ವರ್ಷದ ನಂತರವೂ ಸ್ಥಿರವಾಗಿದೆ.  ಅನೇಕ ಮಕ್ಕಳು ಇಲ್ಲಿ ಭಾಗವಹಿಸಿ, ಪರಸ್ಪರ ಸ್ನೇಹವನ್ನು ಇನ್ನೂ ಇಟ್ಟು್ಕೊಂಡು  ಈಗ ಅವರ ಮಕ್ಕಳ ಜೊತೆ ಕನ್ನಡ ಬಳಗಕ್ಕೆ ಬರುವುದನ್ನು ನೋಡಿದರೆ  ಈ ನಮ್ಮ ಸಂಸ್ಥೆ ಮುಂದೆವರಿಯುವುದರಲ್ಲಿ ಸಂದೇಹವೇ ಇಲ್ಲ ಎನಿಸುತ್ತದೆ.

ಇಲ್ಲಿ ಹಣಕಾಸು ಹೊಂದಿಸುವ ಕೊರತೆ ಇಂದ ಈ ಸಮ್ಮೇಳನ ನಡೆಯುತ್ತಾ ಅನ್ನುವ ಸಂಶಯ ಬಂದಿತ್ತು, ಹೆಸರಿಗೆ ಹಣಕಾಸಿನ ಸಮಿತಿ ಇತ್ತು ಆದರೆ  ಯಾರಿಂದಲೂ ಆರ್ಥಿಕ ಸಹಾಯ ಬರಲಿಲ್ಲ. ಯಾರನ್ನು ಕೇಳಬೇಕು ಅನ್ನುವುದು  ಸಹ ಸರಿಯಾಗಿ ಗೊತ್ತಿರಲಿಲ್ಲ. ಈ ಸಂದರ್ಭದಲ್ಲಿ ಕನ್ನಡ ಬಳಗದ ಸದಸ್ಯ ದಿವಂಗತ ಶ್ರೀ ವಿಶ್ವೇಶ್ವರಯ್ಯ ಮಾಡಿದ ಸಹಾಯ ಮರೆಯುಬಾರದು. ಇವರು V.W. Car ಕಂಪನಿ ಮಿಲ್ಟನ್ ಕಿನ್ಸ್  ನಲ್ಲಿ ಕೆಲಸದಲ್ಲಿದ್ದರು, ನಮ್ಮ ಪರಿಸ್ಥಿತಿ ಕೇಳಿ ಅವರ ಕಂಪನಿ ಇಂದ ಸಹಾಯ ಸಿಗಬಹುದು ಎಂದು ಭರವಸೆ ಕೊಟ್ಟು ಸಮ್ಮೇಳನದ ಬಗ್ಗೆ  Presentation ಮಾಡಿ ಅಂತ ಸಲಹೆ ಕೊಟ್ಟರು. ಈಗಿನ ಹಾಗೆ Power Point ಇರಲಿಲ್ಲ. ಮುಖ್ಯವಾದ ಅಂಶಗಳನ್ನು ಆ ಕಂಪನಿಯ ಮುಖ್ಯಸ್ಥರ ಮುಂದೆ ಭಾನುಮತಿ ಅವರು ಮತ್ತು ನಾನು  ಇಟ್ಟು  ೩೦೦೦ ಪೌಂಡ್ ಗಳಸ್ಟು ಸಹಾಯ ಬೇಕು ಅಂತ ಮನವಿ ಮಾಡಿಕೊಂಡವಿ. ನಾವು ಕೈಗೊಂಡ ಕಾರ್ಯ ಯಶಸ್ವಿ ಆಗಲಿ ಅಂತ ಹಾರೈಸಿ ೨೦೦೦ ಪೌಂಡುಗಳ ಸಹಾಯ ಮಾಡುತ್ತೇವೆ ಅಂತ  ಆ ಕಂಪನಿಯ ಮುಖ್ಯಸ್ಥರು ಭರವಸೆ ಕೊಟ್ಟರು. ಇದು ನಮ್ಮ ಬಳಗದ ಮೊದಲೆಯ Commercial Sponsorship ! ಮುಂದೆ NW Arts ಮತ್ತು ಬಿಸಿಸಿಐ ಇಂತಹ ಸಂಸ್ಥೆಗಳಿಂದ ಸ್ವಲ್ಪ ಸಹಾಯ ಬಂತು.

ಕರ್ನಾಟಕ ಸರ್ಕಾರದಿಂದ ಅನೇಕ ವಸ್ತುಗಳನ್ನು ಪ್ರದರ್ಶನಕ್ಕೆ ಡಾ. ಕೃಷ್ಣಮೂರ್ತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಯ ನಿರ್ದೇಶಕರಾಗಿದ್ದ ಶ್ರೀ ವಿಠ್ಠಲಮೂರ್ತಿ  ತಂದಿದ್ದರು. ಆದರೆ ಇದು ಕಸ್ಟಮ್ ನಲ್ಲಿ ಹಿಡಿದು ಸುಮಾರು ೨೦೦೦೦ ಪೌಂಡ್ ಮೇಲೆ VAT ಕೊಡದಿದ್ದರೆ ಈ ವಸ್ತುಗಳನ್ನು ಬಿಡುವುದಿಲ್ಲ ಎಂದು ಬೆದರಿಸಿದರು, ಆಗ ಡಾ. ಅಪ್ಪಾಜಿ ಗೌಡರು  ಅಧಿಕಾರಿಗಳನ್ನು ಕಂಡು ತಮ್ಮ ವೈಯಕ್ತಿಕ  ಗ್ಯಾರಂಟಿ ಕೊಟ್ಟು ಈ ಸಾಮಾನುಗಳನ್ನು ಬಿಡಿಸಿ UMIST ಗೆ ತಂದರು. ಈ ತರಹ ಸನ್ನಿವೇಶಗಳು ಬಹಳ ನಡೆಯಿತು. ನಮಗ್ಯಾರಿಗೂ ಇಷ್ಟು ದೊಡ್ಡ ಸಮಾರಂಭ ನಡೆಸಿದ್ದ ಅನುಭವ ಇರಲಿಲ್ಲ. ಆದರೆ ಇದು ನಮಗೆಲ್ಲ ಒಂದು unique experience ಅಂತ ಹೇಳಿದರೆ ಏನೂ ತಪ್ಪಿಲ್ಲ.

UMIST ನ ವಿದ್ಯಾರ್ಥಿ ಕೊಠಡಿಗಳು ಮತ್ತು ಹತ್ತಿರದ ಹೋಟೆಲ್ ಗಳಲ್ಲಿ ಹೊರನಾಡಿನಿಂದ ಬಂದವರಿಗೆ ಮತ್ತು ನಮ್ಮ ಸದಸ್ಯರಿಗೆ ಉಳಿಯುವುದಕ್ಕೆ ಏರ್ಪಾಡಾಗಿತ್ತು,   ಕೆಲವು ರಾಜಕಾರಣಿಗಳು ವಿದೇಶಕ್ಕೆ ಬರುವುದು ಅವರ ವೈಯಕ್ತಿಕ ಕಾರಣಗೋಸ್ಕರ  ಅಂತ ಕಾಣಿಸುತ್ತೆ. ಮುಖ್ಯ ಮಂತ್ರಿಗಳು ಸಮ್ಮೇಳನವನ್ನು ಉದ್ಘಾಟಿಸಿ ಅವತ್ತೇ ಲೇಕ್ ಡಿಸ್ಟ್ರಿಕ್ಟ್ ಗೆ ಹೊರಟರು !! ಅವತ್ತು ಸಾಯಂಕಾಲ ಅವರಿಂದ ಭಾಷಣವು ಇರಬೇಕಿತ್ತು  ಆದರೆ ಅವರ ಅಜೆಂಡಾ ಬೇರೆ ಇತ್ತು ಅಂತ ಕಾಣತ್ತೆ,

ಅಮೇರಿಕ, ಯೂರೋಪ್ ಮತ್ತು ಭಾರತದಿಂದ ಅನೇಕರು ಭಾಗವಿಸಿದ್ದರು . ಕರ್ನಾಟಕದಿಂದ ಶ್ರೀ ಶಿವರಾಮ ಕಾರಂತರು . ಜಸ್ಟಿಸ್ ನಿಟ್ಟೂರು ಶ್ರೀನಿವಾಸ ರಾಯರು, ಮುಖ್ಯಮಂತ್ರಿ ಚಂದ್ರು, ಸಿ ಅಶ್ವಥ್, ಜಿ ಆರ್ ವಿಶ್ವನಾಥ್,

ಬಿ ಕೆ ಯಸ್  ಅಯಂಗಾರ್, ಶಂಕರ್ ನಾಗ್, ನಟ ಶ್ರೀನಾಥ್ ಮುಂತಾದವರು ೬೦ ಮಂದಿ, ೩೦ ಜನ ಅಮೆರಿಕದಿಂದ ಮತ್ತು ಮೂವರು  ಯೂರೋಪ್ ನಿಂದ ಮತ್ತು ನಮ್ಮ ಬಳಗದ ಸದ್ಯಸ್ಯರು ಸೇರಿ  ಸುಮಾರು ೫೦೦ ಜನರು ಭಾಗವಹಿಸಿದ್ದರು

ಕಾರಂತರ ಮತ್ತು ಎಂ. ಪಿ .ಪ್ರಕಾಶ್ ಅವರ ಭಾಷಣಗಳು  ಶಂಕರ್ ನಾಗ್  ಮತ್ತು ಶ್ರೀನಾಥ್ ತಂಡದವರಿಂದ ನಗೆ ನಾಟಕ, ಬೆಂಗಳೂರಿನ ಸರಳಯ್ಯ ಸಹೋದರಿಯರ ಸಂಗೀತ ಮತ್ತು ಕನ್ನಡ ಬಳಗದ ಸದಸ್ಯರಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ಮನೋರಂಜಿಸಿತು. ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಶಿವರಾಂ ಕಾರಂತರು ಬಿಡುಗಡೆ ಮಾಡಿದರು.ಈ ಸಮ್ಮೇಳನ ನಮ್ಮ ಕನ್ನಡ ಬಳಗದ ಮುಂದಿನ ಬೆಳವಣಿಗೆಗೆ ಅಡಿಪಾಯ ಹಾಕಿ ಇಲ್ಲಿನ ಕನ್ನಡದವರನ್ನು ಒಂದುಗೂಡಿದ್ದು ಮಾತ್ರ ಅಲ್ಲ, ಬೇರೆ ದೇಶದಲ್ಲೂ ಕನ್ನಡ ಸಂಸ್ಕೃತಿ ಬೆಳೆಯಲು ಸಹಕಾರಿಯಾಯ್ತು.

ಈ ಸಮ್ಮೇಳನದ ಬಗ್ಗೆ ಕರ್ನಾಟಕದಲ್ಲಿ ರೇಡಿಯೋ, ಟಿವಿ ಮತ್ತು ಪತ್ರಿಕೆಗಳಲ್ಲಿ ಪ್ರಚಾರವಾಗಿ ಕನ್ನಡ ಬಳಗ ಯು.ಕೆ. ಹೆಸರು ಪ್ರಸಿದ್ಧವಾಯಿತು ಇಂತಹ ಸಮ್ಮೇಳನ ಹೊರದೇಶದಲ್ಲಿ ನಡದಿದ್ದು ಇಲ್ಲೇ ನಮ್ಮ ಕನ್ನಡ ಬಳಗದ ಆಶ್ರದಲ್ಲಿ ಎಂದು ಇಂದು ಹೆಮ್ಮೆಯಿಂದ ಹೇಳಬಹುದು. ಆದರೆ ಈಗ ಅಮೇರಿಕಾದ ಅಕ್ಕ ಸಂಸ್ಥೆ  ಹೆಚ್ಚಿನ ಹೆಸರನ್ನು ಪಡೆ್ದಿದೆ..

೧೯೯೭ರಲ್ಲಿ  ಐಲ್ ಆಫ್ ವೈಟ್ ನಲ್ಲಿ ೨ ದಿನದ ವಿಶೇಷ ಸಮ್ಮೇಳನ  ನಮ್ಮ ಸದ್ಯಸರಿಂದ  ಬಹಳ ಮನ್ನಣೆ ಪಡೆಯಿತು. ಬಳಗದ ಅಜೀವ ಸದಸ್ಯ  ಡಾ. ಪ್ರಬಾಕರ ರೆಡ್ಡಿ ಆಗ ಅಲ್ಲಿ ನೆಲಸಿದ್ದರು ಅವರ ಸಹಾಯದಿಂದ  ಈ ಎರಡು ದಿನಗಳ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಕನ್ನಡ ನಗೆ ನಾಟಕ ಮತ್ತು ವಿವಿಧ ಮನೋರಂಜನಾ ಕಾರ್ಯಕ್ರಮಗಳು ಮತ್ತು ಆ ವರ್ಷದ ವಾರ್ಶಿಕ ಸಭೆ ಅಲ್ಲಿ ನಡೆಯಿತು

ಕನ್ನಡ ಬಳಗದ ಮೈಲು ಗಲ್ಲುಗಳು

೨೦೦೦ ಸಹಸ್ರಾಬ್ದಿ ಸಮ್ಮೇಳನ – ಆಗಸ್ಟ್ ೨೫/೨೬/೨೭

ಈ ಸಮ್ಮೇಳನ ಉದ್ದೇಶ, “Working to bring together two generations and two cultures “ಅಕ್ಷರ, ಅರೋಗ್ಯ ಮತ್ತು ಆಚರಣೆ.

ಮೊದಲನೆಯದು, ಎರಡು ತಲೆಮಾರು ಮತ್ತು ಎರಡು ಸಂಸ್ಕ್ರತಿಗಳ ಸಮನ್ವಯ ವನ್ನು ರೂಪುಗೊಳಿಸುವುದು.

ಎರಡೆನೆಯದು, ಕರ್ನಾಟಕದ ಸ್ತ್ರೀ ಸಮಾಜಕ್ಕೆ ವಿದ್ಯಾಭ್ಯಾಸ ಸಹಾಯ, ಪಾವಗಡದ ಸ್ವಾಮಿ ವಿವೇಕಾನಂದ ಅರೋಗ್ಯ ಕೇಂದ್ರಕ್ಕೆ Ambulance ಯೋಜನೆಗೆ ಹಣ ಸಹಾಯ ಮತ್ತು ಸಹಸ್ರಾಬ್ಡಿ ಆಚರಣೆ.

೨೦೦೦ ನಲ್ಲಿ ಚೆಶೈರನ ವಾರ್ನರ್ ಸಂಸ್ಥೆಯ  ಅಲ್ವಿಸ್ಟನ್ ಹಾಲ್ ನಲ್ಲಿ ಸಹಸ್ರಾಬ್ಡಿ ಸಮ್ಮೇಳನ ಆಗಸ್ಟ್ ೨೫-೨೮ ಭಾನುಮತಿಯವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿಸಿತು . ಕರ್ನಾಟಕ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಶ್ರೀ ಕೆ ಸಿ ರಾಮಮೂರ್ತಿ ಅನೇಕ ಕಲಾವಿದರ ಜೊತೆಯಲ್ಲಿ ಬಂದು ನಮ್ಮ ಕಾರ್ಯಕ್ರವವನ್ನು ನಡೆಸಿಕೊಟ್ಟರು.

ಕರ್ನಾಟಕ ಸರ್ಕಾರದ ಸಚಿವೆ ಶೀಮತಿ ರಾಣಿ ಸತೀಶ್ , ಶ್ರೀ ಯು ಆರ್ ಅನಂತಮೂರ್ತಿ, ಪ್ರೊ ಆ ರಾ ಮಿತ್ರ, ಸಂಗೀತ ಕುಲ್ಕರ್ಣಿ, ರಮೇಶ್ ಅರವಿಂದ್, ಹಾಸ್ಯಗಾರ ಎಂ ಯಸ್ ನರಸಿಂಹಮೂರ್ತಿ, ಸರಕಾರದ ಹಿರಿಯ ಅಧಿಕಾರಿ ಐಮ್ ವಿಠ್ಠಲಮೂರ್ತಿ, ಶತಾವಧಾನಿ ಡಾ ಗಣೇಶ್ ಮತ್ತು ಬಿ ಕೆ ಯಸ್ ವರ್ಮಾ, ಯಕ್ಷಗಾನ ಕಲಾವಿದರು , ಪದ್ಮಶ್ರೀ ಚಿಂದೋಡಿ ಲೀಲ ಮತ್ತು ಡೊಳ್ಳು ಕುಣಿತದ ತಂಡ, ಈ ೪೦ ಗಣ್ಯರು ನಮ್ಮ ಅತಿಥಿಗಳಾಗಿ ಮೂರು ದಿನಗಳು ಕಳೆದಿದ್ದು ಮರೆಯುವ ಹಾಗೆ ಇಲ್ಲ.ಅನೇಕ ವಿವಿಧ ಕಾರ್ಯಕ್ರಮಗಳು ಮತ್ತು ನಮ್ಮ ಯುವ ಸದಸ್ಯರಿಂದ ಅದ್ಭುತವಾದ Fashion Show ಎಲ್ಲರ ಮನ ಸೂರೆಗೊಂಡಿತು.

೨೦೦೩ ರಲ್ಲಿ ಕನ್ನಡ ಬಳಗದ ೨೦ನೇ ವಾರ್ಷಿಕೋತ್ಸವ ಅಲ್ಟ್ರಿಚಾಮ್ ಚೆಶೈರ್ ನಲ್ಲಿ ನವಂಬರ್ ೧ -೨ ವಿಜೃಂಭಣೆಯಿಂದ  ಎರಡು ದಿನಗಳು ನಡೆದವು  ಕರ್ನಾಟಕದಿಂದ ಪ್ರೊ ಆ. ರಾ . ಮಿತ್ರ,  . ಪ್ರೊ ಕೃಷ್ಣೇಗೌಡ ಮತ್ತು ಪ್ರೊ. ಅರಳುಮಲ್ಲಿಗೆ ಪಾರ್ಥಸಾರಥಿ ಮುಖ್ಯ ಅಥಿತಿಗಳಾಗಿ ಬಂದಿದ್ದರು.

ಬಳಗದ ರಜತ ಮಹೋತ್ಸವ

ಆದರೆ ೨೦೦೮ ಆಗಸ್ಟ್ ೨೨-೨೫ ಕನ್ನಡ ಬಳಗದ ರಜತ ಮಹೋತ್ಸವ ಅಲ್ವಿಸ್ಟನ್ ಹಾಲ್ ನಲ್ಲಿ ನಡೆದಿದ್ದು ಮರೆಯುವಹಾಗೆ ಇಲ್ಲ. ಇಪ್ಪತ್ತು ವರ್ಷಗಳ ಹಿಂದೆ ನಡೆದಿದ್ದ ವಿಶ್ವ ಕನ್ನಡ ಸಮ್ಮೇಳನ ನಡೆಸಿದ ಹುಮ್ಮಸ್ಸು ಮತ್ತೆ ನಮ್ಮ ಸದಸ್ಯರಿಗೆ ಬಂದು ಬಹಳ ಅದ್ದೂರಿಯಿಂದ ಆಚರಿಸಲು ಮುಂದೆಬಂದು ದುಡಿದರು.

ಕರ್ನಾಟಕದಿಂದ, ಶ್ರೀ ವಿಠ್ಠಲಮೂರ್ತಿ ಅವರ ನೇತೃತ್ವದಲ್ಲಿ  ಪ್ರೊ ನಿಸಾರ್ ಅಹ್ಮದ್, ಜಯಂತ್ ಕಾಯ್ಕಿಣಿ, ಪ್ರೊ. ಕೃಷೆಗೌಡ, “ರವಿ”(ಕೆ .ಎಲ್. ಎಲ್. ಸ್ವಾಮಿ ) ಸಂಗೀತ ಕುಲ್ಕರ್ಣಿ ಶಂಕರ್ ಶಾನಭೋಗ್ ಮತ್ತು ಅಮೇರಿಕ ದಿಂದ ಕೆಲವು ಕಲಾವಿದರು ಸಹ ಈ ಸಮಾರಂಭದಲ್ಲಿ ಭಾಗವಹಿದ್ದರು್.ಅಧ್ಯಕ್ಷೆ   ಡಾ  ಭಾನುಮತಿ ಬಂದಿದ್ದ ಗಣ್ಯರನ್ನು ಸ್ವಾಗತಿಸಿ  ಕನ್ನಡ ಬಳಗದ ೨೫ ವರ್ಷದ ಬೆಳವಣಿಗೆಯನ್ನು ತಿಳಿಸಿದರು.

ನಮ್ಮ ನಾಡಿನ ಪ್ರಸಿದ್ಧ ಕವಿ ಪ್ರೊ. ನಿಸಾರ್ ಅಹ್ಮದ್ ಅವರಿಗೆ ಕನ್ನಡ ಬಳಗದಿಂದ ಭಿನ್ನವತ್ತಳೆ ಅರ್ಪಿಸಲಾಯಿತು.  ಈ ಸಮಾರಂಭದಲ್ಲಿ ರಜತ ಸಂಭ್ರಮದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

 

೨೦೧೦ ಮೊದಲನೆಯ ಯುವ ಕನ್ನಡಿಗರ ಮೇಳ ಕಿಂಗ್ಸ್ ಹಾಲ್ ಸ್ಟೋಕ್ ಆನ್ ಟ್ರೆಂಟ್ ನಲ್ಲಿ ಎರಡು ದಿನಗಳ ನಡೆದ ವಿಶೇಷ ಕಾರ್ಯಕ್ರಮಕ್ಕೆ ಅನೇಕ ಎರಡನೇ ಪೀಳಿಗೆಯ ಜನಾಂಗದವರು ಭಾಗವಹಿದ್ದರು.

 ಬಳಗದ ೩೦ ನೇ ವಾರ್ಷಿಕೋತ್ಸವ 

೨೦೧೩ ಕನ್ನಡ ಬಳಗದ ೩೦ ನೇ ಹುಟ್ಟಿದ ಹಬ್ಬವನ್ನು ಆಚರಿಸಲು ಸ್ಟೋಕ್ ಆನ್ ಟ್ರೆಂಟ್ ನಲ್ಲಿರುವ ಕಿಂಗ್ಸ್ ಹಾಲ್ ನಲ್ಲಿ ಮೇ ೨೫-೨೬ ಎರಡು ದಿನಗಳ ಆಚರಣೆ. ನಮ್ಮ ಮುಖ್ಯ ಅಥಿತಿಗಳು ಶ್ರೀಮಾನ್  ಎಸ್ ಎಲ್ ಭೈರಪ್ಪ ನವರು, ಮುಖ್ಯಮಂತ್ರಿ ಚಂದ್ರು  ಮತ್ತು ಪ್ರೊ ಕೃಷ್ಣೆ ಗೌಡರು.  ಇವರಲ್ಲದೆ ಪ್ರಸಿದ್ಧ ಗಾಯನ ಪಟುಗಳಾದ ಅರ್ಚನಾ ಉಡುಪ ಮತ್ತು ಸಂಗೀತ ಸಂಯೋಜಕ  ಪ್ರವೀಣ್ ಡಿ ರಾವ್. ರಂಗ ಭೂಮಿಯ ಕಲಾವಿದೆ ಲಕ್ಷ್ಮಿ ಚಂದ್ರಶೇಖರ್. ಜಾನಪದ ಗೀತೆ ಹಾಡುವ ಬಸವಲಿಂಗಯ್ಯ ಮುಂತಾದ ಕಲಾವಿದರು ನಮ್ಮೊಡನೆ ಎರಡು ದಿನಗಳು ಕಳೆದಿದ್ದು ಮರೆಯುಲು ಸಾಧ್ಯವಿಲ್ಲ

ಚೆಸ್ಟರ್ ಫೀಲ್ಡ್ ನಲ್ಲಿ ೧೮/೧೦/೨೦೧೪ ನಲ್ಲಿ ನಡೆದ ದೀಪಾವಳಿ ಹಬ್ಬ ಮಾತ್ರ ಅಲ್ಲ KSSVV (ಕನ್ನಡ ಸಾಹಿತ್ಯ ಮತ್ತು ಸಾಂಸ್ಕ್ರತಿಕ ವಿಚಾರ ವೇದಿಕೆ )  ಪ್ರಾರಂಭ. ನಮ್ಮ ಮುಖ್ಯ ಅಥಿತಿಗಳಾಗಿ ಬಂದಿದ್ದ ಶ್ರೀ ವೆಂಕಟೇಶಮೂರ್ತಿ ಅವರಿಂದ “ಅನಿವಾಸಿ “ಉದ್ಘಾಟನೆ  ಆಯಿತು.  ಪ್ರತಿ ಶುಕ್ರವಾರ ಪ್ರಕಟ ವಾಗುವ ಅನಿವಾಸಿಯನ್ನು ಪ್ರತಿವಾರ  ಓದಬಹುದು. (www.anivaasi.com )

ನಮ್ಮ ಬಳಗದ ಯುಗಾದಿ ಮತ್ತು ದೀಪಾವಳಿ ಹಬ್ಬಗಳನ್ನು ದೇಶದ ನಾನಾ ಕಡೆ ಆಚರಿಸಿದೆ, ಸ್ಕ್ಯಾಟ್ಲ್ಯಾಂಡ್ , ವೇಲ್ಸ್ ಮತ್ತು ಉತ್ತರ ಐರ್ಲೆಂಡ್ ಯೂ ಸೇರಿದಂತೆ.

೩೬ ವರ್ಷದ ನಂತರವೋ ನಮ್ಮ ಸದಸ್ಯರು ಉತ್ಸಾಹದಿಂದ ಎಲ್ಲೇ ಈ ಆಚರಣೆಗಳಾದರೂ ಉತ್ಸಾಹದಿಂದ ಬಂದು ಭಾಗವಹಿಸುತ್ತಾರೆ ಅನ್ನುವುದು ತುಂಬಾ ಹೆಮ್ಮೆಯ ವಿಚಾರ. ಆದರೆ ಈ ದೇಶದಲ್ಲೆ ಹುಟ್ಟಿ ಬೆಳದ ಎರಡನೇ ಪೀಳೆಗೆಯ ಯವರು ಮುಂದೆ ಬಂದು ಪ್ರೋತ್ಸಾಹ ಮಾಡುವುದು ಅಪರೂಪ ಅನ್ನುವುದು ಒಂದು ವಿಷಾದವಾದ ಸಂಗತಿ. ಕರ್ನಾಟಕದಿಂದ ಇತ್ತೀಚಿಗೆ ಬಂದವರು ಹೆಚ್ಚಾದ ಸಂಖ್ಯೆಯಲ್ಲಿ ಬರುತ್ತಾರೆ ನಮ್ಮ ಬಳಗದ ಮುಂದಿನ ಬೆಳವಣಿಗೆ ಇವರ ಮೇಲಿದೆ .

ಈ ದೇಶದಲ್ಲಿ ಈಗ ಸುಮಾರು ೨೦,೦೦೦ಕ್ಕೂ ಹೆಚ್ಚು ಕನ್ನಡ ಮಾತನಾಡುವವರು ನೆಲಸಿದ್ದಾರೆ ಮತ್ತು ಅನೇಕ ಕನ್ನಡ ಸಂಸ್ಥೆಗಳು ಇಲ್ಲಿ ಪ್ರಾರಂಭವಾಗಿದೆ, ಅನೇಕ ಸಂಸ್ಥೆಗಳು ಕನ್ನಡ ಕಲಿ ಯೋಜನೆಯನ್ನು ನಡೆಸುತ್ತಿರುವುದು ಹೆಮ್ಮಯ ಸಂಗತಿ

ಕನ್ನಡ ಬಳಗ ಹಿರಿಯ ಸಂಸ್ಥೆ ಆಗಿರುವುದಿಂದ ಕನ್ನಡ  ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಹೊಣೆ ನಮ್ಮದು.

ಅಮೆರಿಕದಲ್ಲಿರುವ ಹಾಗೆ (ಅಕ್ಕ ಸಂಸ್ಥೆ ) ಇಲ್ಲೀಯೂ ಸಹ ಅದೇ ರೀತಿ ಒಂದು ಸಂಸ್ಥೆ ಯನ್ನು ಮಾಡುವುದಕ್ಕೆ ಕನ್ನಡಬಳಗದ  ನಾಯಕತ್ವ ಮತ್ತು ಬೆಂಬಲದ ಅಗತ್ಯವಿದೆ.

                                                                        _ ರಾಮಮೂರ್ತಿ, ಬೇಸಿಂಗ್ ಸ್ಟೋಕ್