ಮಾಯಾಲೋಕಗಳು

ಅಜ್ಜಿ ಕಥೆ

ನನ್ನ ಮೊಮ್ಮಕ್ಕಳು ರಜಾ ಬಂದಾಗ ನಮ್ಮ ಮನೆಗೆ ಬರುತ್ತಾರೆ. ಬಂದಾಗ ಅಜ್ಜಿ ಕತೆ ಹೇಳು ಅಂತ ಕೇಳುತ್ತಾರೆ. ಆಯಿತು. ಕೇಳಿ. ಇದು ನಡೆದ ಸಮಾಚಾರ. ಸುಮಾರು 100 ವರ್ಷ ಕಿಂತ ಮುಂಚೆ ನಡೆದ ಕಥೆ. ನನಗೆ ನನ್ನ ಅಮ್ಮ ಹೇಳಿದ್ದು. ಏನಪ್ಪಾ ಅಂದರೆ ನಾವು ಮೂಲತ: ಮಹಾರಾಷ್ಟ್ರದವರು. ಮಾದ್ವ ಬ್ರಾಹ್ಮಣರು. ವಿಪರೀತ ಮಡಿ, ಮೈಲಿಗೆ ಗಲಾಟೆ. ಮನೆಯ ಹೆಂಗಸರು ತುಂಬಾ ಜೋರು. ಆ ಕಾಲದಲ್ಲಿ ಕಚ್ಚೆ ಹಾಕಿಕೊಂಡು ಕುದರೆ ಸವಾರಿ ಮಾಡುತ್ತಿದ್ದರಂತೆ  ಅವರು ಪೂನಾ ಹತ್ತಿರ ಒಂದು ಊರಲ್ಲಿ ಇದ್ದರಂತೆ. ಪೇಶ್ವೆಗಳ ಹತ್ತಿರ ಸಿಪಾಯಿ ಗಳಾಗಿ ಇದ್ದರಂತೆ. ಇವರಿಗೆ ಮೈಸೂರಿನಲ್ಲಿ ನೆಂಟರು ಮದುವೆಗೆ ಬರಬೇಕೆಂದು ಕರೆದರಂತೆ. ಆ ಕಾಲದಲ್ಲಿ ಸಂಚಾರ ಮಾಡುವುದು ಬಹಳ ಕಷ್ಟ. ಕುದರೆಮೇಲೆ ಕಾಡಿನ ದಾರಿಯಲ್ಲಿ ಹೋಗಬೇಕು. ಚಿಕ್ಕ ಚಿಕ್ಕ ಹಳ್ಳಿಗಳಲ್ಲಿ ರಾತ್ರಿ ಇರಬೇಕು. ಸಾಮಾನ್ಯವಾಗಿ ಮರಾಟಿಗ ಹೆಂಗಸರು ಗಟ್ಟಿಗರು, ಸರಿ ಅಂತ ಪ್ರಯಾಣಕ್ಕೆ ಎಲ್ಲ ಸಿದ್ದಮಾಡಿಕೊಂಡು ಗಂಡ ಮತ್ತು ಹೆಂಡತಿ ಎರಡು ಕುದರೆ ಮೇಲೆ ಹೊರಟರಂತೆ. ಸುಮಾರು ದಿನಗಳು ಕಳೆದವು. ಎಷ್ಟೂ ಕಾಡು, ಮೆಡು ಗಲ್ಲಿ ಸುತ್ತಿ, ನಾನಾ ತರಹದ, ಕಷ್ಟ ಅನುಭವಿಸಿದರು. ಹುಲಿ, ಸಿಂಹ, ಹಾವು, ಜಿಂಕೆ ನಾನಾ ತರಹದ ಪ್ರಾಣಿಗಳನ್ನು ನೋಡಿದರಂತೆ. ಅವರ ಹತ್ತಿರ ಬಂದೂಕು ಇತ್ತು. ಒಂದು ಸಲ ಅವರ ಹತ್ತಿರ ಇದ್ದ ತಿಂಡಿ ಸಾಮಾನು ಮುಗಿದುಹೋಯ್ಯಂತೆ. ಕಾಡಿನಲ್ಲಿ ಏನು ಮಾಡುವುದು ಅಂತ, ಜೇನು, ಹಣ್ಣು ಸಿಗುತ್ತಾ ಅಂತ ನೋಡುತ್ತಾ ಇದ್ದರಂತೆ. ಒಂದು ಬಂಡೆ ಮೇಲೆ ದೊಡ್ಡ ಮುದ್ದೆ ಕಾಣಿಸಿತು. ಹೋಗಿ ನೋಡಿದರೆ ಬೇಲದ ಹಣ್ಣು, ಜೇನುತುಪ್ಪ ಕಲಿಸಿ,ಇತ್ತಂತ್ತೆ. ಇವರು ಹಸಿವೆಯನ್ನು ತಡಯಲಾರದೆ ತಿಂದರಂತೆ. ಅಷ್ಟರಲ್ಲಿ ಒಂದು ಕರಡಿ, ತನ್ನ ಮಕ್ಕಳಲಂದಿಗೆ ಬರುತ್ತಾ ಇದ್ದಿದ್ದನ್ನು ನೋಡಿ, ಇಬ್ಬರು, ಕುದರೆಮೇಲೆ ಹತ್ತಿ ಓಡಿಹೋಗಿ ಜೀವ ಉಳಿಸಿಕೊಂಡರು.  ಕರಡಿ ಪಾಪ!ತನ್ನ ಮಕ್ಕಳಿಗೆ  ತಯಾರಿಸಿದ ಬೆಲದ ಹಣ್ಣು ಜೇನು ತುಪ್ಪದ ಫಲಾಹಾರ,ನಮ್ಮ ನೆಂಟರು ತಿಂದುಬಿಟ್ಟರು. ಕರಡಿ ಅಟ್ಟಿಸಿಕೊಂಡು, ಬರುವವಷ್ಟ್ರಲ್ಲಿ, ಇವರು ಕುದರೆಮೇಲೆ ದೌಡಾಯಿಸಿದರು.
ಹೀಗೆ ನಮ್ಮ ಅಮ್ಮ ನಮಗೆಲ್ಲ ಬೆಳದಿಂಗಳ ಊಟ ಕೈ ತುತ್ತು ಹಾಕುತ್ತ ಹೇಳುತ್ತಿದರು.

'ಅಜ್ಜಿ ಇದು ನಿಜವಾದ ಘಟನೆನಾ ಅಥವಾ ಬರಿ ಕಥೆನಾ?' ' ನನ್ನ ತಾಯಿಯ ಮುತ್ತಜ್ಜಿ,ಮುತ್ತಜ್ಜ ಪೂನಾದಿಂದ ಮೈಸೂರಿಗೆ ವಲಸೆಬಂದದ್ಫು ನಿಜ. ಕುದುರೆ ಮೇಲೆ ಕಾಡಿನಲ್ಲಿ ಬಂದಿದ್ಫು ನಿಜ. ಮಿಕ್ಕಿದೆಲ್ಲ ನನಗೆ ಗೊತ್ತಿಲ್ಲ' ಅಂತ ಜಾರಿಕೊಂಡೆ. ಇಲ್ಲದಿದ್ದರೆ Where is the proof? ಅಂದರೆ ಏನು ಮಾಡಲಿ? ನಾವೆಲ್ಲ ನಮ್ಮ ಅಮ್ಮ ಹೇಳಿದ ಕಥೆ 200% ನಂಬುತ್ತೀವಿ. ಒಂದು ಜನರೇಶನ್ ಗೆ ಮುಂದಿನ ಜನರೇಶನ್ ಕತೆ ಇನ್ನು ಜೀವಂತ ವಾಗಿದೆ.

~ ವತ್ಸಲಾ ರಾಮಮೂರ್ತಿ

ಜಾಹೀರಾತುಗಳ ಮಾಯಾಲೋಕ

ಇದೀಗ ಇಲ್ಲಿ  ಸಂಜೆಗಳೇ ಇಲ್ಲದ  ಬರೀ ಬೆಳಗು – ರಾತ್ರಿಗಳ ನವೆಂಬರ್. ಚಳಿರಾಯ ನಿಧಾನವಾಗಿ ತನ್ನ ಪಾದವೂರುವ  ಸನ್ನಾಹದಲ್ಲಿದ್ದಾನೆ.  ಚಕ್ಕುಲಿ- ಕರಚಿಕಾಯಿ, ದೇಸಿ ಘೀ ಯ ಬೇಸನ್ ಉಂಡಿಗಳ ದೀಷಾವಳಿ ಫರಾಳದ  ಪ್ರಭಾವವೋ ಅಥವಾ ಚಳಿರಾಯನ ಕರಾಮತ್ತೋ ಅಂತೂ ಸಣ್ಣನೆಯ ಕೆಮ್ಮು, ಗಂಟಲ ಕೆರೆತ,  ಮೈಕೈ ನೋವು...ಹೀಂಗ  ಒಂದೊಂದೇ ಕಿರಿಕರಿಗಳು ,ಕಾಡಲಿಕ್ಕೆ ಶುರುವಾಗೂ ದಿನಗಳಿವು. 

‘ ಗಲೇಂ ಮೆ ಖರಾಶ್ ಮಜೇದಾರ್ ಸ್ಟೆಪ್ಸಿಲ್ಸ’ , ‘ ವಿಕ್ಸ್ ಕೀ ಗೋಲಿ ಲೋ ಖಿಚ್ ಖಿಚ್ ದೂರ್ ಕರೋಂ ‘
ಇದೇನಿದು ಜಾಹೀರಾತು ಶುರು ಮಾಡಿದ್ರೆಲಾ ಅಂತೀರೇನು? ಹೌದ ನೋಡ್ರಿ ಈ ಜಾಹೀರಾತುಗಳ ಮಹಿಮಾ ಮತ್ತ ಮಾಯಾ ( ಮುನ್ನಾಭಾಯಿಗತೆ ಯೆ ಮಹಿಮಾ ಔರ್ ಮಾಯಾ ಕೌನ್ ಹೈ ಅಂತ ಮಾತ್ರ ಕೇಳಬ್ಯಾಡ್ರಿ ಮತ್ತ) ಭಾಳ ದೊಡ್ಡದು ಬಿಡ್ರಿ. ಖರೇ ಹೇಳಬೇಕಂದ್ರ ಈ ಇಂಟರ್ ನೆಟ್ , ಗೂಗಲ್ ಮಹಾಶಯ ಸಹಾಯಕ್ಕಿಲ್ಲ ದ ನಮ್ಮ ಆಗಿನ ದಿನಗಳಲ್ಲಿ ನಮಗೇನರೇ ಅಲ್ಪ-ಸ್ವಲ್ಪ ಲೋಕಜ್ಞಾನ, ಸಾಮಾನ್ಯ ಜ್ಞಾನ ಇತ್ತು ಅಂದ್ರ ಅದರಾಗ ಈ ಜಾಹೀರಾತುಗಳದೇ ದೊಡ್ಡ ಪಾತ್ರ ಅಂತ ನಿಸ್ಸಂಶ ಯವಾಗಿ ಹೇಳಬಲ್ಲೆ.
ಡಮಡಮು ಅಂತ ಬಾರಸಕೋತ ಮಂಗ್ಯಾ ಆಡಸಂವಾ ಬಂದ್ರ, ‘ಮನ ಡೋಲೆ ಮೋರಾ ತನ್ ಡೋಲೆ’ ಅಂತ ಪುಂಗಿ ಊದೋ ಹಾವಾಡಿಗನ ಆ ಬಿದಿರನ ಬುಟ್ಟಿ ಕಂಡ್ರ, ಬಾರಕೋಲಿನ ಚಾಟಿ ಮೈಮೇಲೆ ಬೀಸಕೋತ ‘ ನೀರ ಹಾಕ್ರಿ, ನೀರ ಹಾಕ್ರಿ’ ಅಂತ ದುರಗಮುರಗ್ಯಾ ಬಂದ್ರ , ಆನೆಯೋ- ಒಂಟೆಯೋ ಸವಾರಿಗಾಗಿ ಬಂದ್ರ, ಯಾರೋ ಕೌಲೆತ್ತು ತಂದ್ರ, ಆಕಾಶದಾಗೊಂದು ವಿಮಾನ ಹಾರಿದ್ರ ಮನೆಯೊಳಗಿಂದ ಹೊರಗೆ ಓಡೋಡಿ ಬಂದು ಜಗತ್ತಿನ ಅದ್ಭುತಗಳೆಲ್ಲ ಅಲ್ಲೇ ಮೇಳೈಸಿಬಿಟ್ಟಾವೇನೋ ಅನ್ನೂಹಂಗ ಬೆರಗುಗಣ್ಣಿಂದ ನೋಡುತ್ತ ಅವನ್ನೆಲ್ಲ ಆಸ್ವಾದಿಸುವ ಮುಗ್ಧ ಬಾಲ್ಯ – ಹದಿಹರೆಯಗಳವು. ಹೊಸತಾಗಿ ಆಗಷ್ಟೇ ಅವರಿವರ ಮನೆಯಲ್ಲಿ ಸಣ್ಣದಾಗಿ ಒಂದೊಂದೇ Black & white, portable T.V.ಗಳು ಬರಲು ಶುರುವಾಗಿದ್ದ ದಿನಗಳು. ಖರೇ ಹೇಳಬೇಕಂದ್ರ ಆಗ ಈ ಟಿ ವಿ ವೈಯಕ್ತಿಕ ಸ್ವತ್ತಾಗಿರಲಿಲ್ಲ. ಮನೆಯವರು ದುಡ್ಡನ್ನು ಪಾವತಿಸಿ T.V ತಂದರೂ ಅದರ ಮೇಲೆ ಇಡಿಯ ಓಣಿಯ ಜನರ ಅಧಿಕಾರವಿರುತ್ತಿತ್ತು. ಈಗಿನವರಿಗೆ ಇದು ನಂಬಲಸಾಧ್ಯವಾದರೂ ನಮ್ಮ ಕಾಲದ ಸೋಳಾಣೆ ಸತ್ಯ,ಶಂಬರ್ ಟಕ್ಕೆ ಖರೇ ಮಾತಾಗಿತ್ತು ಇದು.

ನಮ್ಮ ಓಣ್ಯಾಗ ಮೊದಲ ಉಕ್ಕಲಿ ಮಾಮಾ ಅವರ ಮನಿಗೆ ಟಿ.ವಿ. ಬಂದಿತ್ತು. ಅವರ ಮನೆಯ ಮೂರುಜನ ನಮ್ಮ ಮನೆಯ ಆರು ಜನ ಅದನ್ನು ನೋಡಲು ಕೂಡುವುದಿತ್ತು. ಆ ಟಿ.ವಿ. ಕಾರ್ಯಕ್ರಮಗಳಿಗೆ ತಕ್ಕಹಂಗ ಅವರು ತಮ್ಮ ಊಟ, ತಿನಸು ,ಛಾ ಮುಗಸಕೊಂಡು ಎಷ್ಟೋ ಸಲ ನಮಗೂ ಕೊಟ್ಟು ನಮ್ಮನ್ನೆಲ್ಲ ಕುರ್ಚಿ, ದಿವಾನದ ಮೇಲೆ ಕೂಡಿಸಿ ಪಾಪ ಅವರೇ ಕೆಳಗೆ ಚಾಪೆ ಮ್ಯಾಲೆ ಕೂಡೋ ಪಾಳಿ ಬರತಿತ್ತು. ಆದ್ರ ಮಜಾ ಅಂದ್ರ ಇವುಗಳ ಬಗ್ಗೆ ಅವರಿಗೂ ಬೇಸರವಿರಲಿಲ್ಲ. ಉಲ್ಟಾ ಎಂದರೇs ಒಮ್ಮೆ ನಾವು ಹೋಗದಿದ್ರ ಅವರ ಮಗಳು ರೇಖಾ ಕಟ್ಟಿ ಮ್ಯಾಲೆ ನಿಂತು ‘ ಚಿತ್ರಹಾರ್ ಶುರು ಆತು ಲಗೂನೇ ಬರ್ರಿ’ ಅಂತ ಕೂಗಿ ಕರೆಯುತ್ತಿದ್ದಳು. ರಾತ್ರಿ ಹೊತ್ತು ಪ್ರಸಾರವಾಗುತ್ತಿದ್ದ ‘ ಕಿಲ್ಲೆ ಕಾ ರಹಸ್ಯ’ ನೋಡಲು ಅವರು ನಿದ್ದೆ ಬಂದಿದ್ದರೂ ತೂಕಡಿಸುತ್ತ ನಮಗಾಗಿ ಕಾಯುತ್ತಿದ್ದದು ನನಗೀಗಲೂ ನೆನಪಿದೆ.

84 ರಲ್ಲಿ ನಮ್ಭ ಪ್ರಧಾನಿ ಇಂದಿರಾಗಾಂಧಿಯವರ ಹತ್ಯೆಯಾದಾಗಲಂತೂ ನಮ್ಮ ಹಿಂದಿನ ಓಣಿಯ ಗುನ್ನಾಳಕರ ಅವರು ತಮ್ಮ ಟಿ.ವಿ.ಯನ್ನು ಮನೆ ಯ ಅಂಗಳದಲ್ಲಿಟ್ಟು ನೂರಾರು ಮಂದಿಗೆ ಪ್ರಧಾನಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದರು. ಕ್ರಿಕೆಟ್ ಮ್ಯಾಚ್ ಗಳು ಇದ್ದರೂ ಅಷ್ಟೇ. ಪಡಸಾಲೆಯ ಟಿ.ವಿ. ಅಂಗಳಕ್ಕೇ ಬರುತ್ತಿತ್ತು.

ನಂತರ ಗೌಡರ್ ಅವರ ಮನಿಗೆ ಕಲರ್ ಟಿ.ವಿ. ಬಂದು ನಾವು ಐದು ಜನ ಮಕ್ಕಳು, ಅವರ ಮನೆಯ ಆರು ಜನ ಮಕ್ಕಳು ತಮ್ಮ ತಮ್ಮ ಸ್ನೇಹಿತರಾದಿಯಾಗಿ ಬಂಧುಬಳಗ ಸಮೇತವಾಗಿ ಸತ್ಯನಾರಾಯಣ ಪೂಜೆಯಷ್ಟೇ ಶ್ರದ್ಧೆಯಿಂದ ರಮಾನಂದ ಸಾಗರರ ರಾಮಾಯಣ, ಬಿ.ಆರ್. ಛೋಪ್ರಾರ ಮಹಾಭಾರತ ನೋಡುತ್ತಿದ್ದೆವೆನ್ನುವುದು ಬಹಳ ಸುಂದರ ನೆನಪು. ಗೌಡರ್ ಮಾಲಾಕಾಕು ಅಂತೂ ಸ್ನಾನ ಮಾಡಿ ಒಗೆದ ಬಟ್ಟೆ ತೊಡದೇ ಹೋದ್ರ ರಾಮಾಯಣ – ಮಹಾಭಾರತ ನೋಡಲಿಕ್ಕೆ ಎಂಟ್ರಿ ಪಾಸ್ ನೇ ಕೊಡತಿದ್ದಿಲ್ಲ. ಹಿಂಗಾಗಿ ನಾವು ರಾಮ- ಸೀತಾನ ಬಗ್ಗೆ ಭಯಭಕ್ತಿ ಇರದಿದ್ರ ಅಷ್ಟೇ ಹೋತು ಮಾಲಾಕಾಕುಗ ಅಂಜಿ ರವಿವಾರ ಇದ್ರೂ ಲಗೂಲಗೂ ಸ್ನಾನ – ಹೆರಳು,ಎಲ್ಲಾ ಮುಗಿಸಿಕೊಂಡು ಲಕಾಲಕಾ ತಯಾರಾಗಿ ಬಿಡತಿದ್ವಿ ಅನ್ರಿ.

ಈಗ ಮನ್ಯಾಗ 65, 75 ಇಂಚಿನ ಟಿ.ವಿ., ಹೋಮ್ ಥೇಟರ್ ಅಂತ ಸುಟ್ಟುಸುಡುಗಾಡು ನೂರಾ ಎಂಟು ಇದ್ರೂ ಆಗಿನ ಮಜಾ ಇಲ್ಲ ಅನ್ನೂದು ನನ್ನೊಬ್ಬಳ ಅನಿಸಿಕೆನೋ ಅಥವಾ ನಿಮ್ಮದೂ ಹೌದೋ ನನಗೆ ‘ ಗೊತ್ತಿಲ್ಲ.

ಹೀಂಗ ಈ ಟಿ.ವಿ. ಬಂದಮ್ಯಾಲೆ ಜಾಹೀರಾತುಗಳ ಒಂದು ಸುಂದರ ಪ್ರಪಂಚ ನಮ್ಮ ಕಣ್ಣೆದುರು ತೆರೆದುಕೊಂಡುಬಿಟ್ಟಿತು. 5-10 ಪೈಸೆಯ ಪೆಪ್ಪರ್ ಮಿಂಟೋ, ಕಿಸ್ ಮಿ ಚಾಕಲೇಟುಗಳಿಗಷ್ಟೇ ಪರಿಚಿತರಾಗಿದ್ದ ನಮಗೆ ‘ ಕಿತನಾ ಮಜಾ ಆಯೇರೆ ದುನಿಯಾ ಡೇರಿ ಮಿಲ್ಕ್ ಕಿ ಬನ್ ಜಾಯೇರೆ’ ಅಂತ ಚಾಕಲೇಟಿನಂಥ ಹೊಸ ಜಗತ್ತನ್ನು ತೋರಿಸಿದ್ದೇ ಈ ಜಾಹೀರಾತುಗಳು. ‘ಕುಛ್ ಬಾತ್ ಹೈಂ ಹಮ್ ಸಭೀಮೆಂ..ಖಾಸ್ ಹೈಂ..ಕುಛ್ ಸ್ವಾದ್ ಹೈಂ..ಕ್ಯಾ ಸ್ವಾದ್ ಹೈಂ ಜಿಂದಗಿ ಮೆಂ’ ಅಂತ ಶುರುವಾಗೋ ಡೇರಿ ಮಿಲ್ಕ್ ನ ಜಾಹೀರಾತು ನಮ್ಮ ಬದುಕಿನಾಗೂ ಸ್ವಾದ ತುಂಬಿ ಖಾಸ್ ಆದ್ವು ಇದರ ಎಲ್ಲಾ ಜಾಹೀರಾತುಗಳೂ ಒಂದೊಂದೂ ಸುಂದರ..ಒಂದೊಂದೂ ಹೃದಯಸ್ಪರ್ಶಿ. ಅವುಗಳನ್ನು ತಯಾರಿಸಿದವರ ಸೃಜನಶೀಲತೆಗೆ ನನ್ನ ಶರಣು.

‘ ಆಡು ಮುಟ್ಟದ ಸೊಪ್ಪಿಲ್ಲ’ ಅನ್ನೂಹಂಗ ಈ ಜಾಹೀರಾತುಗಳು ಕೈಯಾಡಿಸದ ಕ್ಷೇತ್ರಗಳೇ ಇಲ್ ಅನ್ನಬಹುದು. ಆಗಷ್ಟೇ ಹುಟ್ಟಿದ ಮಗುವಿನ ಪಿಂಕೂ ಗ್ರೈಪ್ ವಾಟರ್ ನಿಂದ ಹಿಡಿದು ನಿಮ್ಮ ಮಕ್ಕಳ ಎತ್ತರ, ತೂಕಗಳಿಗಾಗಿ ಕೋಂಪ್ಲಾನ್ – ಹಾರ್ಲಿಕ್ಸ್ ಗಳವರೆಗೆ, ಸ್ವಾದ್ ಭರೆ ಶಕ್ತಿಭರೆ ಪಾರ್ಲೆ ಜಿ ಯ ಜೊತೆಗೆ ನಾವು ಯಾವ ಚಹಾ ಕುಡಿಯಬೇಕು, ಯಾವ ಹಪ್ಪಳ ತಿನ್ನಬೇಕು, ನಲ್ಲನ ಮನ ಗೆಲ್ಲಲು ಅಡುಗೆಗೆ ಯಾವ ಮಸಾಲೆ ಉಪಯೋಗಿಸಬೇಕು, ಬಿರಿಯಾನಿ ರುಚಿಯಾಗಲು ಯಾವ ಅಕ್ಕಿ ಹಾಕಬೇಕು ? ಬೆನ್ನು – ಸೊಂಟ- ಹಲ್ಲು ನೋವುಗಳಿಗೆ ಏನು ಮಾಡಬೇಕು? ಯಾವ ಸೋಪ್, ಕ್ರೀಂ, ಪೌಡರ್ ನಿಂದ ನಾವು ಚಿರ ಯೌವನಿಗರಾಗಬಹುದು? ಯಾವ ಶಾಂಪೂ, ಹೇರ್ ಆಯಿಲ್ ಗಳಿಂದ ನಾವು ನಾಗವೇಣಿಯರಾಗಬಹುದು? ಯಾವ ಶೇವಿಂಗ್ ಕ್ರೀಂ, ಡಿಯೊಡ್ರಂಟ್ ಗಳನ್ನು ಬಳಸಿದ್ರ ಹುಡುಗಿಯರು ಮೈಮೇಲೆ ಬಂದು ಬೀಳಬಹುದು? ಏನು ಮಾಡಿದರೆ ಮನೆಯ ಪೀಠೋಪಕರಣಗಳನ್ನು ಆಜೀವಪರ್ಯಂತ ಮುರಿಯದಂತೆ ಇಟ್ಟುಕೊಳ್ಳಬಹುದು? ಯಾವ ಗಾಡಿ, ಬೈಕು ತಗೊಂಡ್ರ ಎಷ್ಟೆಷ್ಟು ಮೈಲೇಜು, ಏನೇನು ಲಾಭ? ಯಾವ ಚಪ್ಪಲಿ, ಶೂಸ್ ಬಳಸಬೇಕು? ಯಾವ ಒಳ ಉಡುಪುಗಳನ್ನು ಧರಿಸಬೇಕು? ಯಾವ ಪೆನ್ನು- ಪೆನ್ಸಿಲ್ – ನೋಟ್ ಬುಕ್ ಗಳನ್ನು ಉಪಯೋಗಿಸಿದ್ರ ಛಂದನೆಯ – ದುಂಡನೆಯ ಅಕ್ಷರ ಬರೆದು ವಿದ್ಯಾವಂತರಾಗಬಹುದು? ಕೊಳೆಯಾದ ಬಟ್ಟೆಗಳನ್ನು ಹೆಂಗ ಕೊಕ್ಕರೆಯಂತೆ ಬಿಳಿ ಶುಭ್ರ ಮಾಡಬಹುದು .ಇತ್ಯಾದಿ ಅಮೂಲ್ಯ – ಅತ್ಯಮೂಲ್ಯ ವಿಚಾರಗಳನ್ನೆಲ್ಲ ನಮ್ಮ ತಿಳಿವಿಗೆ ತುರುಕಿದ್ದೇ ಈ ಜಾಹೀರಾತುಗಳಂದ್ಲ ತಪ್ಪಿಲ್ಲ.
ಇನ್ನು ಕೆಲವೊಂದು ಜಾಹೀರಾತುಗಳಂತೂ ನಮ್ಮ ನೆಚ್ಚಿನ ನಟ- ನಟಿಯರ ಸಲುವಾಗಿ ಫೇವರಿಟ್. ‘ಲಿಮ್ಕಾ..ಲಿಮ್ಕಾ’ ಎಂದು ಹಾಡುವ , ಲಖಾನಿ ಹವಾಯಿ ಚಪ್ಪಲ್ ಹಾಕಿಕೊಂಡು ಕುಣಿಯುವ ಸಲ್ಮಾನ್ ಖಾನ್ ಇರಲಿ, ‘ ಡಾಬರ್ ಆಮ್ಲಾ ಕೇಶ್ ತೈಲ್’ ಅಂತ ಕಪ್ಪನೆಯ ಕೇಶರಾಶಿಯನ್ನು ಹಾರಿಸುತ್ತ ತಿರುಗುವ ಜಯಪ್ರದಾ ಇರಲಿ, ಬಾರಾತಿಯೋಂ ಕಾ ಸ್ವಾಗತವನ್ನು ಪಾನ್ ಪರಾಗ್ ಪಾನ್ ಮಸಾಲಾದಿಂದ ಮಾಡುವ ಶಮ್ಮಿಕಪೂರ್, ಅಶೋಕ ಕುಮಾರ್ ಇರಲಿ, ‘ what an Idea sir ji’ ಎನ್ನುವ ಅಭಿಷೇಕ್ ಬಚ್ಚನ್ ಇರಲಿ, Dr.fixit ನ ಅಮಿತಾಭ್ ಬಚ್ಚನ್ ಇರಲಿ, ತೀರ ಇತ್ತೀಚಿನ cleethorpes max fresh ನ ರಣವೀರ ಸಿಂಗ್ ಇರಲಿ, ಮಧುಬಾಲಾನಿಂದ ಹಿಡಿದು ಮಾಧುರಿ ದೀಕ್ಷಿತವರೆಗಿನ Lux ಸೋಪಿನ ರೂಪದರ್ಶಿಯರಿರಲಿ ಎಲ್ಲರೂ..ಎಲ್ಲವೂ ನಮ್ಮ ಫೇವರಿಟ್. ಯಾಕಂದ್ರ ನಮಗ ಬಾಲಿವುಡ್ ತಾರಾಮಣಿಗಳಂದ್ರ ಅದೇನೋ ಹುಚ್ಚು ಸೆಳೆತ – ಪ್ರೀತಿ – ಅಪನಾಪನ್. ಇನ್ನ ಅವರು ಮಾಡಿದ ads ಅಂದ್ರ ಮುಗದೇ ಹೋತ. ಅಲ್ಲೇನ್ರಿ?

ಅಲ್ರೀ ಎಲ್ಲಾಬಿಟ್ಟು ಯಕ:ಶ್ಚಿತ್ ಉಪ್ಪಿನ ಬಗ್ಗೆನೂ ಎಷ್ಟೆಲ್ಲ ಜಾಹೀರಾತುಗಳ್ರಿ..ಅದ್ಯಾಕ ಯಕ:ಶ್ಚಿತ್ ಬಿಡ್ರಿ ಇದರ ಮಹತ್ವ ಏನು ಕಡಿಮೆದ? ಇದರ ಸಲುವಾಗಿ ದಂಡಿ ಸತ್ಯಾಗ್ರಹನೇ ನಡದು ಇತಿಹಾಸದಾಗೂ ಅದಕ್ಕೊಂದು ಸ್ಥಾನ ಸಿಕ್ಕೇಬಿಟ್ಟದ. ಟಾಟಾ ನಮಕ್ ದೇಶ್ ಕಾ ನಮಕ್- ಅದರಾಗ ಶುದ್ಧತೆ, ಅಯೋಡಿನ್ ಗಳಂತೂ ಅವನೇ ಅವ ಜೋಡಿಗೆ ಚುಟಕಿ ಭರ್ ಇಮಾನದಾರಿನೂ ಅದರಾಗಿರತದ ಅನ್ನೂದು ad ನೋಡೇ ಗೊತ್ತಾಗಿದ್ದು. ‘ ಡರ್ ಕೆ ಆಗೇ ಜೀತ್ ಹೈ’ ಎಂಬ ಅಮೂಲ್ಯ ವಿಚಾರ ತಿಳಿದದ್ದೂ ಈ ಜಾಹೀರಾತಿನಿಂದಲೇ.

ಇನ್ನ ನಾವು ನಮ್ಮ ರೆಡ್ ಲೇಬಲ್ ಟೀ ಯಿಂದ Taj ಗೆ ಪಕ್ಷಾಂತರ ಮಾಡಿದ್ದಕ್ಕೂ ಈ ಜಾಹೀರಾತೇ ಕಾರಣ. ಉದ್ದನೆಯ ಗುಂಗುರು ಕೂದಲು ಹಾರಿಸುತ್ತ, ಬೆರಳುಗಳಿಂದ ತಬಲಾದ ಮೇಲೆ ನಾದದ ನರ್ತನ ಮಾಡುತ್ತ ಉಸ್ತಾದ್ ಝಾಕೀರ್ ಹುಸೇನ್ ‘ ವಾಹ್ ತಾಜ್ ಬೋಲಿಯೆ’ ಅಂತ ಸೇಳಿದ ಮ್ಯಾಲೆ ನಮಗೆ ಬ್ಯಾರೆ ಹಾದೀನೇ ಇದ್ದಿದ್ದಿಲ್ಲ ಬಿಡ್ರಿ.

‘ ದೋ ಮಿನಿಟ್’ ನ ಮ್ಯಾಗಿ ನನ್ನ ಮಕ್ಕಳ ಪ್ರೀತಿಯ ಭೋಜನ. ನನಗೂ ಅವಸರದ ಆಪ್ತಬಂಧು. ಪುಳಿಯೋಗರೆ, ಪಾವ್ ಭಾಜಿ ಮಸಾಲೆಗಳು , ಖರ್ರಂ ಖುರ್ರಂನ ಲಿಜ್ಜತ್ ಪಾಪಡ್ ಗಳು ನಮ್ಮ ಅಡುಗೆ ಮನೆಗೆ ಆಪ್ತವಾದದ್ದು ಜಾಹೀರಾತುಗಳ ಕಮಾಯಿನೇ.ಹಾಲು ಬೇಡವೆಂದ ಮಕ್ಕಳಿಗೆ compla, horlicks ಗಳ ಆಮಿಷವೊಡ್ಡಿ ಕುಡಿಸಿ ‘ಮೈ ಬಢ ರಹಾ ಹೂಂ ಮಮ್ಮಿ’ ಅಂತ ಅವರ ಪರವಾಗೆ ನಾನೇ ಅಂದುಕೊಂಡು ಖುಷಿಪಟ್ಟದ್ದು, ಬ್ಯಾಸಗ್ಯಾಗ ರಸನಾ, ಆಟ ಆಡಿ ಬಂದಕೂಡಲೇ glucon-D, ಥಂಡ್ಯಾಗ ಚ್ಯವನ್ ಪ್ರಾಶ್ ಹೀಂಗ ಮಕ್ಕಳ ಆರೋಗ್ಯದ ದೇಖರೇಕಿ ಬಗ್ಗೆ ಅತ್ಯಪರೂಪದ ಮಾರ್ಗದರ್ಶಿಗಳಾಗಿದ್ದವು.
ಈ ಮೈ ತೊಳೆವ ಸಾಬಾಣಿನ (soap) ಜಾಹೀರಾತುಗಳಂತೂ ನನ್ನ ಚಿತ್ತದಾಗ ಪಟ್ಟಾಗಿ ಕೂತಬಿಟ್ಟಾವ ಲಾ..ಲಲಾ..ಲ..ಲಾ ಅಂತ ಹಾಡಕೋತ ಸ್ವಚ್ಛ ಶುಭ್ರವಾದ ನದಿ- ಜಲಪಾತದಾಗ Liril soap ಹಿಡಿದು ಸ್ನಾನ ಮಾಡೋ ಆ ರೂಪದರ್ಶಿನ್ಶ ನೋಡಿದ್ರ ಬಚ್ಚಲಿನಾಗೇ ಹತ್ತು ಸಲ ನಮ್ಮ ಕೈಯಿಂದ ಜಾರಿ ಜಾರಿ ಬೀಳುತ್ತಿದ್ದ ಸೋಪ್ ನೆನೆಸಿಕೊಂಡು , ಇಂಥ,ಹರಿವ ನೀರಿನ ರಭಸದಾಗೊ,ಅದ್ಹೆಂಗಿನ್ನೂ ಜಾರದs ಅಕಿನ ಕೈಯಾಗೇ ಉಳದದ ಅನ್ಶೂದೇ ಸೋಜಿಗ ಅನಸತಿತ್ಯು ನನಗೆ. ಇನ್ನ ಹೊಸಬಟ್ಟಿ, ಬಿಳಿಬಟ್ಟಿ ಕೆಸರು ಮಾಡಿಕೊಂಡು ಬಂದ್ರ ಮಕ್ಕಳಿಗೆ ಬಯ್ಯದ s ‘ ದಾಗ್ ಅಚ್ಛಾ ಹೈ...surf excell hai na? ಅನ್ನುವ ನಗುಮೊಗದ ಅಮ್ಮಂದಿರೂ ನನಗ ಬ್ಯಾರೆ ಲೋಕದವರ ಹಂಗೇ ಕಾಣಸತಾರ. ಯಾಕಂದ್ರ ಸಣ್ಣವರಿದ್ದಾಗ ಹೊಸ ಬಟ್ಟೆ, ಬಿಳಿ ಬಟ್ಟೆ ಕಲೆ ಮಾಡಿಕೊಂಡ್ರ ಮಸ್ತ್ ಮಂಗಳಾರತಿ ಮಾಡಿಸಕೋತಿದ್ವಿ ಮನ್ಯಾಗ. ಈಗ ನಾನೂ ಮಕ್ಕಳಿಗೆ ಮಂಗಳಾರತಿ ಮಾಡದಿದ್ರೂ ‘ ಸ್ವಲ್ಪ ನೋಡಕೊಂಡು ಸಾವಕಾಶ ಮಾಡಲಿಕ್ಕೆ ಬರಂಗಿಲ್ಲ s?’ ಅಂತ ಅನ್ನಬಹುದೇ ಹೊರತು ‘ ದಾಗ್ ಅಚ್ಛಾ ಹೈ’ ಅನ್ನುವ ಸಹನಶೀಲತಾ ನನ್ನ ಹತ್ರ ಇಲ್ಲ.

ಒಟ್ಟಿನಾಗ ನನಗ ಈ ಜಾಹೀರಾತುಗಳ ತಯಾರಿಕೆ, ಹಣಹೂಡಿಕೆ, ಗಳಿಕೆ, ತಂತ್ರಜ್ಞಾನ ಇತ್ಯಾದಿಗಳ ಬಗ್ಗೆ ಅಷ್ಟೆಲ್ಲ ಜ್ಞಾನ ಇರದಿದ್ರೂ ಅವು ಕೊಡುವ ಮುದದ ಬಗ್ಗೆ ಬಹಳ ಖುಷಿ ಅನಸತದ. ಇವುಗಳ ಸತ್ಯಾಸತ್ಯತೆಗಳೇನೇ ಇರಲಿ ಸೆಕೆಂಡುಗಳ, ನಿಮಿಷಗಳ ಅತ್ಯಲ್ಪ ಅವಧಿಯಲ್ಲೇ ಅವುಗಳನ್ನು ಹೃದ್ಯವಾಗಿ ಪ್ರಸ್ತುತ ಪಡಿಸುವ ರೀತಿ ಇದೆಯಲ್ಲ ಅದು ನನ್ನನ್ನು ತಟ್ಟುತ್ತದೆ. ಕಿವಿ ಗುಳು ಗಳು ಅನ್ನುವಾಗ ಇಯರ್ ಬಡ್ ಹಾಕಿಕೊಂಡು ಗಲಗಲ ಮಾಡಿ ಪ್ರಪಂಚವನ್ನೇ ಒಂದು ಕ್ಷಣ ಮರೆತಂತೆ, ಕೈಗೆ ತಾಗದ ಬೆನ್ನಿಗೆ ತುರಿಕೆಯಿದಾಗ ಹಣಿಗೆಯೊಂದರಿಂದ ಅದನ್ನು ಕೆರೆದುಕೊಂಡಾಗ ಸಿಗುವ ಸುಖದಂತೆ, ಗಂಟಲಲ್ಲೇ ಅಡಗಿ ಕಾಡಿಸಿದ ಶೀನೊಂದು ‘ಆಕ್ಶೀ’ ಎಂದು ಪಟ್ಟನೇ ಹೊರಬಂದಾಗ ಸಿಗುವ ಸಮಾಧಾನದಂತೆ, ಒತ್ತಿ ಬರುತ್ತಿರುವ ತೂಕಡಿಕೆಗೊಂದು ಹೆಗಲು ದೊರೆತಾಗಿನ ನೆಮ್ಮದಿಯಂತೆ ಈ ಜಾಹೀರಾತುಗಳೂ ಕೂಡ ನಂಗ ಏನೋ ಒಂಥರಾ ಅನಿರ್ವಚನೀಯ ಅಂತಾರಲ್ಲ ಅಂಥ ಖುಷಿ, ಭರವಸೆ, ನೆಮ್ಮದಿ, ಉತ್ಸಾಹಗಳನ್ನು ಕೊಡತಾವ.

ಇದನ್ನೋದಿ ಒಂದೆರಡು ನಿಮ್ಮ ಫೇವರಿಟ್ ಜಾಹೀರಾತು ನಿಮಗ ನೆನಪಾದ್ರ, ಮನಸ್ಸು ಜರ್ ಅಂತ ಹಿಂಬರಿಕಿ ಜಾರಿಹೋದ್ರ ಅದನ್ನ ನಂಗೂ ಹೇಳೂದ ಮರೀಬ್ಯಾಡ್ರಿ.

~ ಗೌರಿಪ್ರಸನ್ನ

ಮೂರನೆಯ ಚಾರ್ಲ್ಸ್ – King Charles III

ನನಗನ್ನಿಸುವಂತೆ ಅನಿವಾಸಿಯ ಬಳಗದ ಸದಸ್ಯರೆಲ್ಲರ (ಹೆಚ್ಚು-ಕಮ್ಮಿ ಎಲ್ಲರ ಅನ್ನೋಣವೇ?) ಜೀವನ ಕಾಲದಲ್ಲಿ ಇದು ಮೊದಲನೆಯ ಸಿಂಹಾಸನಾರೋಹಣ, ಈ ಶನಿವಾರ ಅಂದರೆ ನಾಳೆ 2023 ರ ಮೇ 6 ರಂದು ಜರುಗಲಿದೆ.  ಕಳೆದ 70 ವರ್ಷಗಳಿಂದ ರಾಜಕುಮಾರನಾಗಿಯೇ ಉಳಿದಿದ್ದ ಚಾರ್ಲ್ಸ್, 7 ತಿಂಗಳ ಹಿಂದೆ ರಾಣಿ ಎಲಿಜಬೆತ್ ರ ಮರಣಾನಂತರ ರಾಜನಾದರೂ, ಈ ವಾರದ ಕೊನೆಯಲ್ಲಿ ಅಧಿಕೃತ ಸಮಾರಂಭದಲ್ಲಿ ಪತ್ನಿ ಕಮಿಲಾರೊಂದಿಗೆ ಸಿಂಹಾಸನವನ್ನು ಏರಲಿದ್ದಾರೆ.  53 ಕ್ಕೂ ಹೆಚ್ಚು ಅವಧಿಯ ತಮ್ಮ ಅಪ್ರೆಂಟಿಸ್ ಅನುಭವವನ್ನು ವೃತ್ತಿಯಲ್ಲಿ ಯಶಸ್ವಿಯಾಗಿ ಬಳಸುವ ಅವಕಾಶ ಪಡೆಯಲಿದ್ದಾರೆ.  ಈ ಸಂದರ್ಭದಲ್ಲಿ ನಮ್ಮ ಅನಿವಾಸಿ ಬಳಗದ “ಡೇವಿಡ್ ಬೇಯ್ಲಿ” ಹವ್ಯಾಸಿ ಛಾಯಾಗ್ರಾಹಕರೊಬ್ಬರು, ಸುಮಾರು ಅರ್ಧ ಶತಮಾನದ ಹಿಂದೆ ತಾವು ಕಿಂಗ್ ಚಾರ್ಲ್ಸ್ ಅವರ ಜೀವನದ ಒಂದು ಭಾಗದಲ್ಲಿ ಹೇಗೆ ಹಾಯ್ದು ಬಂದರೆಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಓದುಗರಲ್ಲೂ ಹಲವರು ಈರೀತಿಯ ಅನುಭವಗಳ ಪಟ್ಟಿಮಾಡುವವರಿರಬಹುದು – ದಯವಿಟ್ಟು ಪ್ರತಿಕ್ರಿಯೆ ಬರೆದು ನಮ್ಮೊಂದಿಗೆ ಹಂಚಿಕೊಳ್ಳಿ.

ಮೊದಲಿಗೆ ರಾಜ ಚಾರ್ಲ್ಸ್ ರ ಜೀವನಕಾಲದ ಒಂದು ಝಲಕನ್ನು ನೋಡೋಣ.  ಹಲವಾರು ಅಂತರ್ಜಾಲ ತಾಣಗಳು ಈ ಚಿಕ್ಕ ಬರಹದ ಸಾಮಗ್ರಿ ಒದಗಿಸಿದ ಮೂಲಗಳು – royal.uk, britroyals.com, theguardian.com, smithsonianassociates.org ಇತ್ಯಾದಿ. – ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ)

ಮೂರನೆಯ ಚಾರ್ಲ್ಸ್ - ಕಿಂಗ್ ಚಾರ್ಲ್ಸ್ ದ ಥರ್ಡ್

ಜನಪ್ರಿಯ ರಾಣಿ ಎರಡನೆಯ ಎಲಿಜಬೆತ್ ಹಾಗೂ ರಾಜಕುಮಾರ ಫಿಲಿಪ್ (ಡ್ಯೂಕ್ ಆಫ಼ ಎಡಿನ್ಬರಾ) ಇವರ ಮೊದಲ ಮಗ.
ಸ್ಕಾಟ್ಲಂಡಿನಲ್ಲಿ ಮತ್ತು ಕೇಂಬ್ರಿಜ್ ನ ಟ್ರಿನಿಟಿ ಕಾಲೇಜಿನಲ್ಲಿ ವಿದ್ಯಾಭ್ಯಾಸ. 
ಜುಲೈ 1, 1969 ರಂದು ಪ್ರಿನ್ಸ್ ಆಫ್ ವೇಲ್ಸ್ ಪದವಿ.  ಅಲ್ಲಿಂದ ಕೇಂಬ್ರಿಜ್ ಹಾಗೂ ರಾಯಲ್ ವಿಮಾನ ದಳದಲ್ಲಿ ಕಲಿಕೆ. 1971 ರಲ್ಲಿ ಅವರ ತಂದೆ ಹಾಗೂ ತಾತನ ಹೆಜ್ಜೆಗಳನ್ನನುಸರಿಸಿ, ನೌಕಾದಳಕ್ಕೆ ಸೇರಿಕೆ.

1981 ರ ಜುಲೈ 29ರಂದು ಡಯಾನಾ ಅವರೊಂದಿಗೆ ಮದುವೆ.  ಅವರ ವೈವಾಹಿಕ ಜೀವನ ಹಲವು ಏರುಪೇರುಗಳಿಂದ ಕೂಡಿದ್ದು, 1993ರಲ್ಲಿ ಅವರಿಬ್ಬರ ಬೇರ್ಪಡುವಿಕೆಯಲ್ಲಿ ಕೊನೆಗೊಂಡಿತು.  2005 ರಲ್ಲಿ ಚಾರ್ಲ್ಸ್ ಮತ್ತೆ ಕಮಿಲಾ ಅವರನ್ನು ಮದುವೆಯಾದರು. 

ರಾಜನಾಗುವ ಮೊದಲಿನಿಂದಲೂ ಚಾರ್ಲ್ಸ್ ಸೈನ್ಯದ, ಸೈನಿಕರ ಜೊತೆಯ ತಮ್ಮ ಬಾಂಧವ್ಯವನ್ನು ಗಟ್ಟಿಯಾಗಿ ಇಟ್ಟುಕೊಂಡಿದ್ದಾರೆ.  ಹಲವಾರು ಚಾರಿಟಬಲ್ ಸಂಸ್ಥೆಗಳ ಪೋಷಕನಾಗಿ, ಅವುಗಳ ಕೆಲಸವನ್ನು ಪ್ರೋತ್ಸಾಹಿಸಿಕೊಂಡು ಬಂದಿದ್ದಾರೆ.  ವೇಲ್ಸ್ ಹಾಗೂ ಸ್ಕಾಟ್ಲಂಡ್ ಗಳ ಮೇಲಿನ ಅವರ ಪ್ರೀತಿ ಸುಲಭವಾಗಿ ಕಂಡುಬರುವಂಥದ್ದು. ಇವೆಲ್ಲದರೊಂದಿಗೆ ಚಾರ್ಲ್ಸ್ ರ ನಿಸರ್ಗ ಪ್ರೇಮ, ಅವರನ್ನು ಹಲವಾರು ಜಾಗತಿಕ ಹಾಗೂ ಸ್ಥಳೀಯ ಸವಾಲುಗಳೊಂದಿಗೆ ಸೆಣಸುವ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಿಸಿದೆ.  ಸುಸ್ಥಿರ ಭವಿಷ್ಯ (sustainable future), ಅಭಿವೃದ್ಧಿಗಾಗಿ ಅವರ ಹೋರಾಟ ಮುಂದುವರೆದಿದೆ.

ಮೂರನೆಯ ಚಾರ್ಲ್ಸ್, ಯುನೈಟೆಡ್ ಕಿಂಗ್ಡಮ್ ನ 22ನೆಯ ಸಿಂಹಾಸನಾಧೀಶ / ರಾಜ.  ಮುತ್ತಾತ ಐದನೆಯ ಜಾರ್ಜ್ ರಿಂದ ಸ್ಥಾಪಿತವಾದ ವಿಂಡ್ಸರ್ ಮನೆತನದ 6ನೇ ರಾಜ.  ಆಸ್ಟ್ರೇಲಿಯಾ, ನ್ಯೂಜಿಲಂಡ್, ಕೆನಡಾ ಸೇರಿದಂತೆ 16 ದೇಶಗಳ ರಾಜಪಟ್ಟ (ನೇರ ಆಡಳಿತವಿಲ್ಲದ ಸ್ವತಂತ್ರ ದೇಶಗಳು). 54 ಸ್ವತಂತ್ರ ದೇಶಗಳ ಸದಸ್ಯತ್ವದ ಕಾಮನ್ ವೆಲ್ತ್ ಕೂಟದ ಮುಖ್ಯಸ್ಥ.  
ಅತ್ಯಂತ ಜನಪ್ರಿಯ ರಾಣಿಯಾಗಿ 70 ವರ್ಷಕ್ಕೂ ಹೆಚ್ಚು ಕಾಲ ಇಲ್ಲ-ಸಲ್ಲದ ಕಾಂಟ್ರೋವರ್ಸಿಗಳಿಲ್ಲದೇ ’ರಾಜ್ಯಭಾರ’ ಮಾಡಿದ ಎರಡನೆಯ ಎಲಿಜಬೆತ್ ರಾಣಿಯ ಉತ್ತರಾಧಿಕಾರಿಯಾಗಿ ಸಿಂಹಾಸನವನ್ನೇರುವುದು ಸುಲಭದ ಮಾತಲ್ಲ.  ಹಾಗೆಯೇ ಸುರಳೀತವಾಗಿ ಹೊಸ ರಾಜನ ರಾಜ್ಯಾಡಳಿತವೂ ನಡೆಯಲೆಂದು ಹಾರೈಸೋಣ. 

-ಲಕ್ಷ್ಮೀನಾರಾಯಣ ಗುಡೂರ.

*********************************************************

ನಾನು ರಾಯಲ್ ಫೋಟೋಗ್ರಾಫರ್ (ಅನಧಿಕೃತ) ಆದ ದಿನ! - ಡಾ. ಶ್ರೀವತ್ಸ ದೇಸಾಯಿ
ಇದೇ ವಾರ ಲಂಡನ್ನಿನಲ್ಲಿ ಮೂರನೆಯ ಕಿಂಗ್ ಚಾರ್ಲ್ಸ್ ನ ಪಟ್ಟಾಭಿಷೇಕ ನಡೆಯಲಿದೆ. ರಾಣಿ ಎಲಿಝಬೆತ್ ಪಟ್ಟಕ್ಕೇರಿದ ವರ್ಷ
1952. ಆಗ ನಾಲ್ಕು ವರ್ಷದವನಾಗಿದ್ದ ಆತ ಈ ದಿನಕ್ಕಾಗಿ ಎಪ್ಪತ್ತು ವರ್ಷಗಳೇ ಕಾಯ್ದಿರ ಬಹುದು. ಆತನ ’ಹೆಡ್ ಅಂಡ್
ಶೋಲ್ಡರ್’ ಫೋಟೋ ತೆಗೆದು ನನ್ನನ್ನೊಬ್ಬ ಅನಧಿಕೃತ ಫೋಟೋಗ್ರಾಫರ್ ಅಂತ ನಾನೇ ಅಂದುಕೊಳ್ಳುತ್ತ ನಾನು 45
ವರ್ಷಗಳಿಂದ ಈ ದಿನಕ್ಕಾಗಿ ಕಾಯುತ್ತಿದ್ದೇನೆ ಅಂದರೆ ಬರೀ ಉಡಾಫೆ ಅಂದುಕೊಳ್ಳದೆ ಆ ಕಥೆಯನ್ನು ಕೇಳಿ ಆಮೇಲೆ ಹೇಳಿರಿ!

ರೆಡ್ ಲೆಟ್ಟರ್ ಡೇ, ಜೂಲೈ, 1978.
ಹದಿನೈದನೆಯ ಶತಮಾನದಿಂದಲೂ ಹಬ್ಬದ ದಿನಗಳ ಪ್ರಥಮಾಕ್ಷರವನ್ನು ಕೆಲೆಂಡರಿನಲ್ಲಿ ಕೆಂಪು ಅಕ್ಷರಗಳಿಂದ ಮುದ್ರಿಸುವ ಈ ರೀತಿಯ ಪರಿಪಾಠ ಪ್ರಿಂಟರ್ ವಿಲಿಯಮ್ ಕ್ಯಾಕ್ಸ್ಟನ್ ಶುರುಮಾಡಿದ ಕಾಲದಿಂದ ಬಂದಿದೆ ಅಂತ ಪ್ರತೀತಿ.
ನನ್ನ ಪಾಲಿಗೆ ಆ ದಿನ ಅಂಥದೊಂದು ದಿನ. ಒಂದು ಕೆಂಪು ಹೆಲಿಕಾಪ್ಟರನ್ನು ತಾನೇ ಪೈಲಟ್ ಆಗಿ ನಡೆಸಿಕೊಂಡು ಯು ಕೆ ನ ವೇಲ್ಸ್ ಪ್ರಾಂತದ ಮರ್ಥರ್ ತಿಡ್ಫಿಲ್ ಎನ್ನುವ ಊರಿನ ’ಪ್ರಿನ್ಸ್ ಚಾರ್ಲ್ಸ್ ಆಸ್ಪತ್ರೆ’ಯ ಖಾಲಿ ಕಾರ್ ಪಾರ್ಕಿನಲ್ಲಿ ಬಂದಿಳಿದಾಗ ರೆಡ್ ಲೆಟ್ಟರ್ ಡೇ ಆಯಿತು.  ಅಷ್ಟೇ ಏಕೆ, ಆತನ ಹೆಸರಿನಲ್ಲಿ ನಾಮಕರಣವಾಗಿ ಅದನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿಸಿದ ಆಸ್ಪತ್ರೆಯ ಸಿಬ್ಬಂದಿ ಮತ್ತು ಅಲ್ಲಿ ನೆರೆದ ನೂರಾರು ಜನರಿಗೂ ಅದು ಮರೆಯಲಾರದ ದಿನ. ಆಗ ಮೋಬೈಲ್ ಕ್ಯಾಮರಾಗಳು ಹುಟ್ಟಿರಲಿಲ್ಲ. ಅದೇ ಆಸ್ಪತ್ರೆಯಲ್ಲಿ ಎರಡು ವರ್ಷಗಳಿಂದ ಜೂನಿಯರ್ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ನಾನು ಒಂದು ಹಳೆಯ ಮಾದರಿಯ ಅಶಾಯಿ ಪೆಂಟಾಕ್ಸ್ Asahi Pentax ಕ್ಯಾಮರಾ ಹಿಡಿದು ಆತನ ಒಂದು ಚಿತ್ರವನ್ನಾದರೂ ಸೆರೆ ಹಿಡಿಯಲು ಕಾತುರನಾಗಿದ್ದೆ. ರಾಜ ಕುಮಾರ ಅಂದ ಮೇಲೆ ಸಾಕಷ್ಟು ಸೆಕ್ಯೂರಿಟಿ ಇತ್ತಾದರೂ ಈಗಿನಷ್ಟು ಇರಲಿಲ್ಲ. ಆದರೂ ನಿಯಮಾವಳಿಗಳ (protocol) ಪ್ರಕಾರ ಫ್ಲಾಷ್ ಫೋಟೋಗೆ ಕಡ್ಡಾಯವಾಗಿ ನಿಷೇಧ. ಅದು ನನಗೆ ಸ್ವಲ್ಪ ನಿರಾಶೆಯನ್ನುಂಟು ಮಾಡಿದರೂ ನನ್ನ ಅದೃಷ್ಟವನ್ನು ಪರೀಕ್ಷಿಸಲು
ಸಿದ್ಧನಾದೆ.

ನನಗೂ ಫೋಟೋಗ್ರಾಫಿಗೂ ಅಂಟಿದ ನಂಟು ...
ಎಲಿಝಬೆತ್ ರಾಣಿ ಪಟ್ಟಕ್ಕೆ ಬಂದಾಗ ನಾವು ಊಟಿಯಲ್ಲಿ ವಾಸಿಸುತ್ತಿದ್ದೆವು. ಆಗ ನನಗೆ ಆರುವರ್ಷ, ನನ್ನ ಅಣ್ಣನಿಗೆ ಎಂಟು
ವರ್ಷ ವಯಸ್ಸಿರಬಹುದು. ನಮಗೆ ಮೊದಲಿನಿಂದಲೂ ಫೋಟೋ ತೆಗೆಯ ಬೇಕೆಂದು ತವಕ. ನನ್ನಣ್ಣ ಮತ್ತು ನಾನು ತಂದೆಯವರಿಗೆ
ಕಾಡಿ, ಬೇಡಿ ಒಂದು ಫುಲ್ ವ್ಯೂ ಕ್ಯಾಮರವನ್ನು ಅದೇ ಸಮಯಕ್ಕೆ ಗಿಟ್ಟಿಸಿದ್ದೆವು. ಆಗ ಬ್ಲಾಕ್ ಅಂಡ ವೈಟ್ ಫೋಟೊ ತೆಗೆದು,
ಊರಲ್ಲಿದ್ದ ಒಂದೇ ಸ್ಟೂಡಿಯೋಗೆ ಕೊಟ್ಟು, ’ತೊಳೆಸಿ’ ಪ್ರಿಂಟ್ ಮಾಡಿಸಿದ ನೆನಪು ಇನ್ನೂ ಹಸಿರಾಗಿದೆ. ಆಮೇಲೆ ಕಾಲೇಜಿಗೆ
ಬಂದಾಗ ನನ್ನ ಮಿತ್ರನೊಡನೆ ಸೇರಿ ನಾವೇ ಪ್ರಿಂಟ್ ಮಾಡಿದ್ದೂ ಇದೆ. ನಂತರ ಈಗ ಡಿಜಿಟಲ್ ಯುಗ ಬಂದಾಗಿನಿಂದ ಎಲ್ಲರಂತೆ
ನಾನೂ ಒಬ್ಬ ಡೇವಿಡ್ ಬೇಯ್ಲಿ, ಅಥವಾ ಕ್ರಿಸ್ ಜಾಕ್ಸನ್ ಅನ್ನುವ ಭ್ರಮೆಯಲ್ಲಿದ್ದೇನೆ!

ಲೈಬ್ರರಿಯಲ್ಲಿ ರಾಜನ ಭೇಟಿ
ಇಂಗ್ಲಿಷ್ ನಿಘಂಟು ಬರೆದು ಪ್ರಸಿದ್ಧರಾದ ಡಾ ಸಾಮ್ಯುಎಲ್ ಜಾನ್ಸನ್ ಅವರನ್ನು ಮೂರನೆಯ ಜಾರ್ಜ್ ಅವರು ತಮ್ಮ
ಇಚ್ಛೆಯಂತೆ ರಾಣಿಯ ಲೈಬ್ರರಿಯಲ್ಲಿ 1767 ರಲ್ಲಿ ಭೆಟ್ಟಿಯಾಗಿದ್ದರು ಅಂತ ಓದಿದ ನೆನಪು. ಅದನ್ನೇ ನೆನಪಿಸುವ ಅಂದಿನ
ಘಟನೆ. ಆಗ ನಾನು ಅದೇ ಆಸ್ಪತ್ರೆಯಲ್ಲಿ ಕನ್ಸಲ್ಟಂಟ್ ಆಗಿ ಕೆಲಸ ಮಾಡುತ್ತಿದ್ದ ಡಾ ಲಾಲಾ ಎನ್ನುವ ಕಣ್ಣಿನ ತಜ್ಞರ ಕೆಳಗೆ ಕೆಲಸ
ಮಾಡುತ್ತಿದ್ದೆ. ಅವರು ಆ ದಿನ ಆಗ ಪ್ರಿನ್ಸ್ ಎಂದೇ ಕರೆಯಲಾಗುತ್ತಿದ್ದ ಚಾರ್ಲ್ಸ್ ಅವರನ್ನು ಭೇಟಿ ಮಾಡಲು ಇಚ್ಛಿಸಿದ್ದರು.
ಅದಕ್ಕೆ ಆಸ್ಪತ್ರೆಯ ಅಧಿಕಾರಿಗಳೂ ಒಪ್ಪಿದ್ದರು. ಅವರ ಜೊತೆಗೆ ನಾನೂ ಸೇರಿಕೊಳ್ಳಲೇ ಎಂದು ಹೊಂಚು ಹಾಕಿದ್ದು ಫಲಿಸಲಿಲ್ಲ.
ಪ್ರೋಟೋಕಾಲ್ ಅಂತ ಅಧಿಕಾರಿಗಳು ಅದೇ ಕೋಣೆಯಲ್ಲಿರಲು ಸಮ್ಮತಿಸಲಿಲ್ಲ.

ಅಂತೂ ಸಿಕ್ಕಿತು ಅವಕಾಶ
ನಂತರ ಹಿಸ್ ರಾಯಲ್ ಹೈನೆಸ್ ಪ್ರಿನ್ಸ್ ಚಾರ್ಲ್ಸ್ ’ತಮ್ಮ’ ಹೆಸರಿನ ಆಸ್ಪತ್ರೆಯ ವಿವಿಧ ಭಾಗಗಳಿಗೆ ಭೇಟಿಕೊಡಲು ಸುತ್ತಿತ್ತುರುವಾಗ ಅವರ ಹಿಂದೆ ’ಆಂಟೂರಾಜ್’ ಜೊತೆಗೆ ಸೇರಿಕೊಂಡು ಒಂದು ಕೋಣೆಯಲ್ಲಿ ಕೆಲವು ಡಾಕ್ಟರರು ಮತ್ತು ನರ್ಸ್ಗಳು ಸಾಲಾಗಿ ನಿಂತಿದ್ದನ್ನು ನೋಡಿ, ಅವರ ಹಿಂದಿನ ಸಾಲಿನಲ್ಲಿ ಆಯಕಟ್ಟಿನ ಸ್ಥಳದಲ್ಲಿ ನಿಂತುಕೊಂಡೆ. ನಮ್ಮ ಎದುರಿಗೆ ಮೂರೇ ಅಡಿ ದೂರದಲ್ಲಿ ಒಬ್ಬೊಬ್ಬರನ್ನಾಗಿ ವಿಚಾರಿಸುತ್ತ ಮಾತಾಡಿಸುತ್ತ ಬಂದ ಚಾರ್ಲ್ಸ್ ಅವರನ್ನು ಫೋಕಸ್ ಮಾಡಿ ತಲೆ ಮತ್ತು ಭುಜಗಳು (head and shoulder) ಇಷ್ಟೇ ಕಾಣಿಸುವಂಥ ನಾಲ್ಕೈದು ’ಪೋರ್ಟ್ರೇಟ್’ ಫೋಟೋಗಳನ್ನು ಕ್ಲಿಕ್ಕಿಸಿದೆ. ಆಗ ಡಿಜಿಟಲ್ ಕ್ಯಾಮರಾಗಳ ಆವಿಷ್ಕಾರ ಆಗಿದ್ದಿಲ್ಲ. ನೆಗೆಟಿವ್ ಗಾಗಿ ಫಿಲ್ಮ್ ಗಳನ್ನು ಕಂಪನಿಗೆ ಕಳಿಸಿ ಪೋಸ್ಟಿನಲ್ಲಿ ಪ್ರಿಂಟ್ ಬರುವ ವರೆಗೆ ಪ್ರಸೂತಿ ವೇದನೆ! ಎರಡು ವಾರಗಳ ನಂತರ ಪೋಸ್ಟ್ಮನ್ ಬಂದಾಗ ’ಹೆಣ್ಣೋ ಗಂಡೋ’ ಅಂತ ಕುತೂಹಲದಿಂದ ಮತ್ತು ಅವಸರದಿಂದ ಕವರನ್ನು ಬಿಚ್ಚಿ ನೋಡಿದೆ. ಫ್ಲಾಷ್ ಇಲ್ಲ ಅಂತ  1/15 ಸೆಕೆಂಡುಗಳ ಎಕ್ಸ್ ಪೋಶರ್ ಕೊಟ್ಟಿದ್ದೆ.  ಒಂದೇ ಒಂದು ಫೋಟೋ ಮಾತ್ರ ಅವರದೇ ಅನ್ನುವಷ್ಟಾದರೂ ಸ್ಪಷ್ಟವಾಗಿ ಕಾಣಿಸುವಂತಿತ್ತು. ನನಗೆ ಸ್ವರ್ಗ ಮೂರೇ ಗೇಣು! ಒಂದು ಕಾಲದಲ್ಲಿ ಆತ ಕಿಂಗ್ ಆಗುವ ದಿನವನ್ನೇ ಕಾಯುತ್ತಿದ್ದೇನೆ ಇಂದಿನ ವರೆಗೆ! ಇನ್ನುಳಿದ snaps ಕುದುರೆ ರೇಸಿನಲ್ಲಿ ಹೇಳುವಂತೆ 'also ran' ಅನ್ನುವ ಲೆಕ್ಕಕ್ಕಿಲ್ಲದವು! ಹೋಗಲಿ ಬಿಡಿ. ಆ ‘ಐತಿಹಾಸಿಕ' ಫೋಟೋ ಬಲಗಡೆ ಕೊಟ್ಟಿದೆ, ನಿಮಗಾಗಿ!(Credit: Monochrome editing by Nigel Burkinshaw)
ರೈಟ್ ರಾಯಲ್ ಖುಶಿ!
 ಆ ಫೋಟೋವನ್ನು ಎನ್ಲಾರ್ಜ್ ಮಾಡಿಸಿ, ಪೋಸ್ಟರ್ ಮಾಡಿಸಿ ನನ್ನ ಡಿಪಾರ್ಟ್ಮೆಂಟಿನಲ್ಲಿ ಇಟ್ಟಿದ್ದೆ. 1978 ರಲ್ಲಿ ಆ ಊರು ಬಿಟ್ಟು ಬಂದೆ. ಈಗ ಆ ದೊಡ್ಡ ಫೋಟೋದ ಗತಿ ಏನಾಯಿತು ಗೊತ್ತಿಲ್ಲ. ಆ ನೆಗಟಿವ್ ಮಾತ್ರ ಇನ್ನೂ ನನ್ನ ಹತ್ತಿರ ಇದೆ. ರಾಯಲ್ ಗ್ರಾಂಟ್ ಅಂತ ಒಂದು ’ಪದವಿ’ ಸಿಗುವದು ಅಷ್ಟು ಸುಲಭವಲ್ಲ. ಆ ಫೋಟೋದ ಒಂದು ಪ್ರತಿಯನ್ನು ’ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್’ ಲಂಡನ್ ಅಂತ ಹೆಮ್ಮೆಯಿಂದ ಕಳಿಸಿದ್ದು ಏನಾಯಿತೋ ಗೊತ್ತಿಲ್ಲ. ಆದರೆ ಈ ವರ್ಷದ ವರೆಗೆ ಕಾಯ್ದಿದ್ದ ನನಗೆ ಆ ಫೋಟೋ ಕ್ಲಿಕ್ಕಿಸಿದ ದಿನವನ್ನು ನೆನೆದು ಮೈ ಪುಳಕಿತವಾಗುತ್ತಿದೆ!  ನನ್ನ ಅತ್ಯಂತ ಅದೃಷ್ಟದ ಫೋಟೋ ಅದು ಅಂತ ನೀವೂ ಒಪ್ಪ ಬಹುದೆಂದು ಊಹಿಸುತ್ತೇನೆ! ಅದಕ್ಕೆ ನನ್ನ ಕಾಪಿರೈಟಿದೆ, ಎಚ್ಚರಿಕೆ!

ಶ್ರೀವತ್ಸ ದೇಸಾಯಿ
ಡೋಂಕಾಸ್ಟರ್, ಯಾರ್ಕ್ ಶೈರ್, ಯು ಕೆ.
  (ಫೋಟೋಗಳೆಲ್ಲ ಲೇಖಕರು ಕ್ಲಿಕ್ಕಿಸಿದ್ದು. Copyright reserved.)
  (ಇದೇ ವಾರದ ಕನ್ನಡ ಪ್ರಭ ಎನ್ ಆರ್ ಐ ಆವೃತ್ತಿಯಲ್ಲಿ ಪ್ರಕಟವಾದ ನನ್ನ ಲೇಖನದ  ಪರಿಷ್ಕೃತ ರೂಪ) 

**********************************************************