ಸಪ್ಟೆಂಬರ್ ತಿಂಗಳಿನಿಂದ ನಿರಂತರ ಮಳೆಯ ಆಘಾತಕ್ಕೆ ತುತ್ತಾಗಿರುವ ಇಂಗ್ಲೆಂಡಿನಲ್ಲಿ ಕಳೆದ ಕೆಲವು ದಿನಗಳಿಂದ ಸೂರ್ಯ ಮಹಾಶಯ ಮೋಡಗಳ ಚಾದರದ ಮರೆಯಿಂದ ಹಣಕಿ ಹಾಕುತ್ತ ಕವಿದಿರುವ ಛಳಿಯ ಬಲೆಯನ್ನು ಹರಿದು ಬದಿಗೊಡ್ಡಲು ಪ್ರಯತ್ನಿಸುತ್ತಿದ್ದಾನೆ. ಅವನ ಕ್ಷೀಣ ಪ್ರಯತ್ನವನ್ನು ಹುರಿದುಂಬಿಸಲು ಒಣಗಿ ನಿಂತ ಗಿಡ ಮರಗಳು ಟಿಸಿಲೊಡೆಯುತ್ತ, ಮೈತುಂಬ ಬಣ್ಣ ಬಣ್ಣದ ಹೂಗಳನ್ನು ಹೊತ್ತು ಚಿಯರ್ ಚಿಣ್ಣರಂತೆ ಉತ್ಸಾಹದಿಂದ ತಲೆದೂಗುವುದ ಕಂಡಾಗ ವಸಂತ ಬಂದ ಎಂಬ ಉತ್ಸಾಹ ನಮ್ಮಲ್ಲೂ. ವಾತಾವರಣದಲ್ಲಿ ಕಾವು ಕೂಡುತ್ತಿದ್ದಂತೇ ಗೂಡುಗಳಿಂದ ಹೊರಬಿದ್ದು ಹೊಂಬಿಸಿಲ ಹೊಲದಲ್ಲಿ ಹೊರಳಾಡುವ ಹಂಬಲ ಹೊಮ್ಮುವುದು ಸಹಜ. ಇಂತಹ ಹಂಬಲಕ್ಕೆ ಇಂಬಾಗುವುದು ಯುಗಾದಿ. ಪ್ರತಿವರ್ಷದಂತೆ ಈ ವರ್ಷವೂ ಕನ್ನಡ ಬಳಗ ಯು.ಕೆ ಯುಗಾದಿ ಹಬ್ಬದ ಸಂಭ್ರಮದ ಕಾರ್ಯಕ್ರಮವನ್ನು ಏಪ್ರಿಲ್ ೧೩ರಂದು ಲೆಸ್ಟರ್ ನಗರದಲ್ಲಿ ಏರ್ಪಡಿಸಿತ್ತು. ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣೀ ಭೂತರಲ್ಲಿ ಒಬ್ಬರಾದ, ಅನಿವಾಸಿ ಬಳಗದ ಸದಸ್ಯರೂ ಆದ ಡಾ. ರಾಜಶ್ರೀ ಪಾಟೀಲರು ತಮ್ಮ ಅನಿಸಿಕೆಗಳನ್ನು ಚಿತ್ರ ಸಮೇತ ಇಲ್ಲಿ ಉಣಬಡಿಸಿದ್ದಾರೆ. ಕಾರಣಾಂತರಗಳಿಂದ ಅಂದು ಬರಲಾಗದವರಿಗೆ, ವಿದೇಶಗಳಲ್ಲಿರುವ ನಮ್ಮ ಓದುಗರಿಗೆ ಈ ವರದಿ ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸಿದ ಅನುಭವ ಕೊಡುವುದರಲ್ಲಿ ಸಂದೇಹವಿಲ್ಲ. ಪ್ರತೀ ಕನ್ನಡ ಬಳಗದ ದೀಪಾವಳಿ-ಯುಗಾದಿ ಕಾರ್ಯಕ್ರಮದಲ್ಲಿ ನಮ್ಮ ಅನಿವಾಸಿ ಬಳಗ ಸಮಾನಾಂತರವಾಗಿ ಸಾಹಿತ್ಯಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಈ ಬಾರಿ ರಂಗಕರ್ಮಿ ಶ್ರೀ. ಶ್ರೀನಿವಾಸ ಪ್ರಭು ಅವರೊಂದಿಗೆ ನಡೆಸಿದ ಸಂವಾದದ ಅನುಭವವನ್ನು ಉತ್ತರ ಐರ್ಲ್ಯಾನ್ಡ್ ನಿಂದ ಮೊದಲ ಬಾರಿಗೆ ಭಾಗವಹಿಸಿದ ಶ್ರೀಮತಿ ಅಮಿತ ರವಿಕಿರಣ್ ಮುಂದಿನ ವಾರ ವಿಶದವಾಗಿ ಹಂಚಿಕೊಳ್ಳಲಿದ್ದಾರೆ. (ಸಂ)
‘ಬೇವಿನಕಹಿ ಬಾಳಿನಲಿ, ಹೂವಿನ ನಸುಗಂಪ ಸೂಸಿ ಜೀವಕಳೆಯ ತರುತಿದೆ. ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.’ ನಮ್ಮೆಲ್ಲರ ಜೀವನ ಜಂಜಾಟಗಳ ನಡುವೆ ಸಂಭ್ರಮದ ಕಳೆ ತರಲು ಯುಗಾದಿ ಸಂಭ್ರಮ ಮತ್ತೆ ಬಂದಿತ್ತು ೧೩/೦೪/೨೪ ಲೆಸ್ಟರ್ ಗೆ. ಲೆಸ್ಟರ್ ಕನ್ನಡಿಗರು ೨೦೧೬ ನಿಂದ ಸಾಂಪ್ರದಾಯಿಕವಾಗಿ ಯುಗಾದಿಯನ್ನ ಸಂಭ್ರಮದಿಂದ ಆಚರಿಸುತ್ತ ಬಂದಿದ್ದಾರೆ ಆದರೆ ಈ ಬಾರಿ ಕನ್ನಡ ಬಳಗದ ಸಹಯೋಗ ಅದರ ಮೆರಗನ್ನ ಇನ್ನೂ ಹೆಚ್ಚಿಸಿತ್ತು. ದೇಶದ ಹಲವಾರು ಮೂಲೆಗಳಿಂದ ೬೦೦ಕ್ಕೂ ಹೆಚ್ಚು ಜನರು ಯುಗಾದಿ ಸಂಭ್ರಮವನ್ನು ಆಚರಿಸಲು ನೆರೆದಿದ್ದರು. ಅದೇ ದಿನದಂದು ಹಲವಾರು ಕಡೆ ಯುಗಾದಿ ಸಂಭ್ರಮಾಚರಣೆ ಇದ್ದರೂ ಲೆಸ್ಟರನಲ್ಲಿ ಇಷ್ಟೊಂದು ಜನ ಸೇರಿದ್ದು ಇನ್ನೂ ವಿಶೇಷವಾಗಿತ್ತು.
ಕಾರ್ಯಕ್ರಮಕ್ಕೆ ವಿಧಿವತ್ತಾಗಿ ವಿಘ್ನ ನಿವಾರಕ ವಿಘ್ನೇಶ್ವರನ ಪೂಜೆಯೊಂದಿಗೆ ಮತ್ತು ಸ್ತುತಿಹಾಡಿನೊಂದಿಗೆ ಓಂಕಾರ ದೊರಕಿತು. ಲೆಸ್ಟರ್ ಕನ್ನಡಿಗರು ಮತ್ತು ಕನ್ನಡ ಬಳಗ ಯುಕೆ ತಂಡಗಳು ಭಾರತದಿಂದ ಆಗಮಿಸಿದ ಜನಪ್ರಿಯ ಗಣ್ಯ ಅತಿಥಿಗಳಾದ ಶ್ರೀಯುತ ಸಿಹಿ ಕಹಿ ಚಂದ್ರು, ಶ್ರೀನಿವಾಸ ಪ್ರಭು, ವಿಶ್ವೇಶ್ ಭಟ್ ಅವರನ್ನ ಮತ್ತೂ ದೇಶದ ಮೂಲೆ ಮೂಲೆಯಿಂದ ಬಂದ ಕನ್ನಡಿಗರನ್ನ ಹೃದಯ ಪೂರ್ವಕವಾಗಿ ಬೇವು ಬೆಲ್ಲವನ್ನ ಹಂಚುವದರೊಂದಿಗೆ ಸ್ವಾಗತಿಸಿದರು. ಗಣ್ಯರು ದೀಪ ಬೆಳಗಿಸುವದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶುಭಕೋರಿದರು.
ಸಾಂಪ್ರದಾಯಿಕ ಭರತನಾಟ್ಯ ನೃತ್ಯಗಳಿಂದ ಕಲಾಪ್ರದರ್ಶನ ಪ್ರಾರಂಭವಾಯಿತು. ಬಿಡುವಿಲ್ಲದೆ ಸತತ ೫ ಘಂಟೆಗಳ ಕಾಲ ಕಲಾಪ್ರದರ್ಶನ ಯುಕೆಯ ವಿವಿಧ ಪ್ರದೇಶಗಳಿಂದ ಬಂದ ಕಲಾವಿದರಿಂದ ನಡೆಯಿತು . ಚಿಕ್ಕ ಪುಟಾಣಿಗಳು ‘ಸಿಂಡರೆಲ್ಲ’ ನೃತ್ಯರೂಪಕ , ಧಾರ್ಮಿಕ ಭಾವನೆಯನ್ನು ಪುಟಿಸಿದ, ನಾಟಕೀಯ ಕನ್ನಡ ಭಾಷೆಯಲ್ಲಿ ಮೂಡಿ ಬಂದ ‘ಸೀತಾ ಅಗ್ನಿಪ್ರವೇಶ’ ದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕರ್ನಾಟಕದ ಶ್ರೀಮಂತ ನೃತ್ಯ ವೈವಿದ್ಯತೆಯನ್ನ ಪ್ರದರ್ಶಿಸುವ ಕೋಲಾಟ , ಕಂಸಾಳೆ, ಡೊಳ್ಳು ಕುಣಿತ, ಕೊಡವ ನೃತ್ಯ ಮತ್ತು ಹುಲಿಕುಣಿತವನ್ನೊಳಗೊಂಡ ‘ಕರ್ನಾಟಕ ನೃತ್ಯದರ್ಶನ’, ಭಾರತದ ವಿವಿಧ ರಾಜ್ಯಗಳ ಮದುವೆ ಶೃಂಗಾರವನ್ನ ಬಿಂಬಿಸುವ ‘ಲಗ್ನ ಶೃಂಗಾರ’, ‘ಹಚ್ಚೇವು ಕನ್ನಡದ ದೀಪ’ ನೃತ್ಯ ರೂಪಕ, ಜನಪ್ರಿಯ ಗೀತೆಗಳನ್ನಾಧರಿಸಿದ ನೃತ್ಯಗಳು, ಹಾಡು, ವೀಣೆ ಹಾಗು ಗಿಟಾರ್ ವಾದನ ಕಾರ್ಯಕ್ರಮಗಳು ನೆರೆದವರ ಮನಸೆಳೆದವು.
ಈ ಎಲ್ಲ ಕಾರ್ಯಕ್ರಗಳು ಒಂದು ಕಡೆಯಾದರೆ, ಇನ್ನೊಂದೆಡೆ ಬಹು ಪ್ರಸಿದ್ದಿ ಪಡೆದಿರುವ ಲೆಸ್ಟರ್ ಬಾಳೆ ಎಲೆ ಭೋಜನ ಯುಗಾದಿ ಸಂಭ್ರಮಕ್ಕೆ ಸಾಂಪ್ರದಾಯಿಕ ಹೊಳಪನ್ನು ಕೊಟ್ಟಿತ್ತು. ಹೋಳಿಗೆ, ಪಾಯಸ, ಭಜಿ, ಪಲ್ಯಗಳು, ಪೂರಿ, ಚಿತ್ರಾನ್ನ, ಅನ್ನ, ಸಾರು, ಸಾಂಬಾರ್, ಉಪ್ಪಿನಕಾಯಿ, ಕೋಸಂಬ್ರಿ ಹೀಗೆ ಭಕ್ಷ್ಯಗಳ ಪಟ್ಟಿ ಎಷ್ಟು ದೊಡ್ಡದಿತ್ತೋ, ಊಟಮಾಡಿದವರಿಂದ ಊಟದ ಬಗೆಗಿನ ಹೊಗಳಿಕೆ ಪಟ್ಟಿನೂ ಅಷ್ಟೇ ದೊಡ್ಡದಾಗಿತ್ತು! ಲೆಸ್ಟರ್ ಆಯೋಜಕರೇ ಟೊಂಕಕಟ್ಟಿ ಈ ಭೂರಿ ಭೋಜನದ ಅಡುಗೆಯನ್ನು ಮಾಡಿ, ಬಡಿಸಿದ್ದು ಇನ್ನೂ ವಿಶೇಷವಾಗಿತ್ತು! ಊಟದ ವ್ಯವಸ್ಥೆ ಯಶಸ್ವಿಯಾಗಲು ಲೆಸ್ಟರ್ ಕನ್ನಡ ಕುಟುಂಬದೊಟ್ಟಿಗೆ ಹಲವಾರು ಸ್ವಯಂಸೇವಕರು ಕೆಲಸಮಾಡಿದ್ದರು. ಕರ್ನಾಟಕದಿಂದ ಬಂದ ಲೆಸ್ಟರ್ ಮತ್ತು ಡಿ ಮೊಂಟೊಫೋರ್ಟ್ ಯೂನಿವರ್ಸಿಟಿ ವಿದ್ಯಾರ್ಥಿಗಳು , ಶಿವಾಲಯ ಲೆಸ್ಟರ್ ಗುಂಪು ಮತ್ತು ಹೆಚ್ ಎಸ್ ಎಸ್ ಸ್ವಯಂಸೇವಕರು ನಗುಮುಖದಿಂದ ತಮ್ಮ ನಿಸ್ವಾರ್ಥ ಸಹಾಯ ಒದಗಿಸಿದರು.
ಸಭಾಂಗಣದ ಪಕ್ಕದಲ್ಲಿ ಆಯೋಜಿಸಿದ ಕೆಲ ಜಾಹಿರಾತುದಾರರ ಅಂಗಡಿಗಗಳು ಜನರ ಆಕರ್ಷಣೆಗೆ ಒಳಗಾದವು . ಇವುಗಳ ಜೊತೆ ಮ್ಯಾಕ್ ಮಿಲನ್ ಚಾರಿಟಿಗೋಸ್ಕರ ೧೩ ವರ್ಷದ ಹುಡುಗಿ ಖುಷಿ ಪಾಟೀಲ್ ತನ್ನ ಕೈಯಾರೆ ಬೇಕ್ ಮಾಡಿದ ವಿವಿಧ ರೀತಿಯ ಕೇಕುಗಳು ಮತ್ತು ಬಿಸ್ಕತ್ಗಳನ್ನೊಳಗೊಂಡ ಅಂಗಡಿ ಚಿಕ್ಕ ಮಕ್ಕಳು ತಮ್ಮ ತಂದೆ ತಾಯಂದಿರನ್ನ ಅಲ್ಲಿಗೆ ಕರೆದೊಯ್ಯುವಂತೆ ಮಾಡಿತ್ತು. ನೆರೆದವರ ಧಾರಾಳ ಕಾಣಿಕೆ ಜಾಹಿರಾತಿನ ನೆರವಿಲ್ಲದೆ ಅವಳ ನೀರಿಕ್ಷೆಗೂ ಮೀರಿ ಹಣಕೂಡಿಸುವಲ್ಲಿ ಯಶಸ್ವಿಯಾಯಿತು. ಅನನ್ಯ ಪ್ರಸಾದ್ (ಡಾ ಜಿ ಎಸ್ ಶಿವಪ್ರಸಾದರವರ ಮಗಳು) ಈ ವರ್ಷಾಂತ್ಯದಲ್ಲಿ ತಾವು ಒಂಟಿಯಾಗಿ ದತ್ತಿ ಕಾರ್ಯಕ್ಕಾಗಿ ಅಟ್ಲಾಂಟಿಕ್ ಸಾಗರವನ್ನು ಹುಟ್ಟು ದೋಣಿಯಲ್ಲಿ ದಾಟುವ ಸಾಹಸದ ಮಾಹಿತಿಯನ್ನು ಹಂಚಿಕೊಂಡರು. ಸಂಗ್ರಹಿಸಲಿರುವ ಹಣವನ್ನು ಯು.ಕೆ ಯ ಮಾನಸಿಕ ಆರೋಗ್ಯ ದತ್ತಿ ಮತ್ತು ಭಾರತದ ದೀನಬಂಧು ಟ್ರಸ್ಟ್ ಗಳೊಂದಿಗೆ ಹಂಚುವ ಆಕಾಂಕ್ಷೆ ಅವರದ್ದು. ಅವರ ಈ ಪ್ರಯತ್ನ ಯಶಸ್ವಿಯಾದರೆ, ಅಟ್ಲಾಂಟಿಕ್ ಸಾಗರವನ್ನು ಒಬ್ಬಂಟಿಯಾಗಿ ಹುಟ್ಟು ದೋಣಿಯಲ್ಲಿ ಕ್ರಮಿಸಿದ ಪ್ರಥಮ ಬಣ್ಣದ ಮಹಿಳೆಯಾಗಲಿದ್ದಾರೆ ಎಂಬುದು ಕನ್ನಡಿಗರಿಗೆ/ಭಾರತೀಯರಿಗೆ ಹೆಮ್ಮೆಯ ವಿಷಯ. ಅವರ ಈ ಪ್ರಯತ್ನ ಯಶಸ್ವಿಯಾಗಲೆಂದು ಎಲ್ಲರೂ ಹಾರೈಸಿದರು. ಇದರೊಟ್ಟಿಗೆ ಕನ್ನಡ ಬಳಗ ಯುಕೆ ತಂಡದ ವಾರ್ಷಿಕ ಸಾಮಾನ್ಯ ಸಭೆ (ಎಜಿಮ್) ಮತ್ತು ಅನಿವಾಸಿ ಬಳಗದ ಕಾರ್ಯಕ್ರಮ (ಇದರ ವಿಶೇಷ ವಿವರ ಮುಂದಿನ ವಾರ) ಸಮಾನಾಂತರವಾಗಿ ನಡೆದವು.
ಮತ್ತೆ ಸಾಯಂಕಾಲ ಸಭಿಕರೆಲ್ಲ ಕಾತುರದಿಂದ ಕಾಯುತ್ತಿದ್ದ ಗಣ್ಯರ ಕಾರ್ಯಕ್ರಮಗಳು ಶುರುವಾದವು. ಶ್ರೀಯುತ ಶ್ರೀನಿವಾಸ ಪ್ರಭು ತಮ್ಮ ವೃತ್ತಿ ಬದುಕಿನ ಅನುಭವಗಳನ್ನ ಹಂಚಿಕೊಂಡು ಜನರನ್ನ ರಂಜಿಸಿದರು. ಸಭಿಕರ ಕೋರಿಕೆಗೆ ಮಣಿದು, ರಣಧೀರ ಚಿತ್ರದಲ್ಲಿ ಅವರು ನಟ ರವಿಚಂದ್ರನ್ ಅವರಿಗೆ ಧ್ವನಿ ದಾನ ಮಾಡಿದ ಸಂಭಾಷಣೆಗಳನ್ನು ಸಾದರ ಪಡಿಸಿದರು. ಆದರೆ ಅವರು ತಮ್ಮ ಕಂಚಿನ ಕಂಠದಲ್ಲಿ ಪಠಿಸಿದ ಹ್ಯಾಮ್ಲೆಟ್ ನಾಟಕದ ನಾಯಕನ ಕೊನೆಯ ಸಂಭಾಷಣೆ ಅವರ ಭಾಷಣದ ಪ್ರಮುಖ ಆಕರ್ಷಣೆಯಾಗಿತ್ತು. ಶ್ರೀಯುತ ಸಿಹಿಕಹಿ ಚಂದ್ರು ಅವರಂತೂ ತಮ್ಮ ಮಾತಿನ ಚಾಕಚಕ್ಯತೆಯಿಂದ ಸಭಿಕರನ್ನ ನಗೆಗಡಲಲ್ಲಿ ಮುಳುಗಿಸಿದರು. ಅವರು ಕಲಾಸಾಮ್ರಾಟ್ ರಾಜಕುಮಾರ ಅವರೊಂದಿಗೆ ಕಳೆದ ಕ್ಷಣಗಳು ಎಲ್ಲರ ಮನದಲ್ಲಿ ಮರೆಯದೆ ಉಳಿಯುವಂತವು. ಅವರು ನಡೆಸಿ ಕೊಡುವ ಅಡುಗೆ ಕಾರ್ಯಕ್ರಮಗಳು ಕರ್ನಾಟಕದ ಮನೆಮನೆಗಳಲ್ಲಿ ಮಾತಾಗಿವೆ. ಅವರ ಸಲಹೆಯಂತೆ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧಿಗಳು ಮನೆಯಲ್ಲಿ ಮಾಡಿದ ಅಡುಗೆಗಳ ರುಚಿ ನೋಡಿ ಚಂದ್ರು ಅವರು ವಿಜೇತರನ್ನ ಆಯ್ಕೆಮಾಡಿದರು ಮತ್ತು ಅವರ ಹೆಸರಾಂತ ಜನುಮದ ಜೋಡಿ ಸ್ಪರ್ಧೆಯನ್ನೂ ನಡೆಸಿಕೊಟ್ಟರು.
ಸಾಯಂಕಾಲದ ಲಘು ಉಪಾಹಾರ ಮತ್ತು ಚಹಾ ಜನರನ್ನ ಕೊನೆಯ ಕಾರ್ಯಕ್ರಮಕ್ಕೆ ಸಜ್ಜುಗೊಳಿಸಿತು. ಶ್ರೀಯುತ ವಿಶ್ವೇಶ್ ಭಟ್ ರವರು ಬಹುಮುಖ ಪ್ರತಿಭೆಯ ಅಭಿಯಂತರು. ಇವರು ವ್ಯಂಗಚಿತ್ರ ಮತ್ತು ಸಂಗೀತ ಲೋಕಗಳಲ್ಲಿ ತಮ್ಮ ಛಾಪನ್ನ ಮೂಡಿಸಿದ್ದಾರೆ. ಇವರ ತಮ್ಮ ವಿಭಿನ್ನ ರೀತಿಯ ಹಲವಾರು ಸಂಗೀತ ಪ್ರಕಾರಗಳನ್ನೊಳಗೊಂಡ ಪ್ರದರ್ಶನದಿಂದ ಜನರನ್ನ ಮಂತ್ರ ಮುಗ್ಧರನ್ನಾಗಿಸಿದರು. ಇವರ ಹಾಡಿಗೆ ಜನ ಹೆಜ್ಜೆ ಹಾಕಿ ಸಂತೋಷ ವ್ಯಕ್ತ ಪಡಿಸಿದರು. ಕಾರ್ಯಕ್ರಮ ರಾತ್ರಿಯ ಭೋಜನ ಮತ್ತು ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು.
ಒಟ್ಟಾರೆ ಇದು ಒಂದು ಪರಿಪೂರ್ಣವಾದ , ಪಕ್ವವಾದ, ಯುಗಾದಿ ಹಬ್ಬದ ಸಂಭ್ರಮವನ್ನೊಳಗೊಂಡ ಮತ್ತು ಕರ್ನಾಟಕದ ಸಂಸ್ಕೃತಿಯ ವೈವಿಧ್ಯತೆಯನ್ನ ಎತ್ತಿಹಿಡಿಯುವ ಆಚರಣೆಯಾಗಿತ್ತು. ಹೀಗೆ ಹಲವಾರು ಕಾರ್ಯಕ್ರಮಗಳು ಮುಂಬರುವ ದಿನಗಳಲ್ಲಿ ನಡೆದು ಅನಿವಾಸಿ ಕನ್ನಡಿಗರ ಮನದಲ್ಲಿ ಸದಾ ತಾಯ್ನುಡಿ ಮತ್ತು ತಾಯ್ನೆಲದ ವಾಸನೆಯನ್ನು ತುಡಿಯುತ್ತಿರಲಿ ಎಂದು ಹಾರೈಸೋಣ.
ಈ ವಾರದ ಅಂಕಣದ ಎರಡನೆಯ ಭಾಗದಲ್ಲಿ ಓದುಗರು ಕುತೂಹಲದಿಂದ ಕಾಯುತ್ತಿರುವ ಶಿವ ಮೇಟಿಯವರ ’ತಲಾಷ್’ ಕಥೆಯ ಎರಡನೆಯ ಭಾಗ ಕಳೆದ ವಾರದಿಂದ ಮುಂದುವರೆದಿದೆ. ಅದಕ್ಕೂ ಮೊದಲು ಶ್ರೀವತ್ಸ ದೇಸಾಯಿಯವರು ಬರೆದ ಇಂಗ್ಲೆಂಡಿನ ಮಧ್ಯಯುಗದ ಅರಸನ ದಂತದ ಕಥೆಯನ್ನು ಓದುಗರಿಗಾಗಿ ಇಡಲಾಗುತ್ತಿದೆ. ಫ್ರಾನ್ಸ್ ಮೂಲದ ಪ್ಲಾಂಟಾಂಜೆನೆಟ್ ವಂಶದ ಕೊನೆಯ ಅರಸ ಮೂರನೆಯ ರಿಚರ್ಡ್ ದೊರೆ ಕಾರಣಾಂತರಗಳಿಂದ ಆ ಕಾಲದ ಇತಿಹಾಸದಲ್ಲಿ ಪ್ರಸಿದ್ಧನೂ ನಿಜ, ಕುಪ್ರಸಿದ್ಧನೂ ಸಹ. ನೂರು ವರ್ಷಗಳ ಕಾಲ (1337-1453) ಫ್ರಾನ್ಸಿನೊಡನೆ ಈ ದೇಶ ಬಿಟ್ಟೂ ಬಿಡದೆ ಸಂಗ್ರಾಮದಲ್ಲಿ ತೊಡಗಿತ್ತು. ಅದು ಮುಗಿಯುತ್ತಿದ್ದಂತೆಯೇ War of the Roses ಪ್ರಾರಂಭವಾಗಿತ್ತು.ಆ ಸಮಯದಲ್ಲಿಯೇ ಹುಟ್ಟಿದ ಮೂರನೆಯ ರಿಚರ್ಡ್ ಮೂರು ದಶಕಗಳ ನಂತರ ಪಟ್ಟಕ್ಕೇರಿದರೂ ಆತ ಆಳಿದ್ದು ಕೇವಲ ಎರಡೂವರೆ ವರ್ಷ(1483-1485). ಆತ ತನ್ನ ಅಣ್ಣನ ಇಬ್ಬರ ಮಕ್ಕಳನ್ನು ಟಾವರ್ ಆಫ್ ಲಂಡನ್ನಿನಲ್ಲಿ ಸೆರೆಹಿಡಿದಿಟ್ಟಿದ್ದ, ಆತ ಗೂನನಲ್ಲದಿದ್ದರೂ ಆತನ ಬೆನ್ನು ಬಾಗಿತ್ತು, ಒಂದು ಕೈ ಮುರುಟಿತ್ತು, ಒಂದು ಕಾಲಿನಲ್ಲಿ ಕುಂಟುತ್ತಿದ್ದ, ಹೀಗೆಲ್ಲ ವರ್ಣಿಸಿ ಆತನನ್ನು ಖಳನಾಯಕನನ್ನಾಗಿ ಮಾಡಿ ಹೀಗಳೆದವರಲ್ಲಿ ಶೇಕ್ಸ್ಪಿಯರ್ ಮಹಾ ಕವಿ ಸಹ ಒಬ್ಬ. ಆತನ ಜೀವನ ಮತ್ತು ಮೃತ್ಯು ಅನೇಕ ದಂತ ಕಥೆಗಳನ್ನು ಹುಟ್ಟು ಹಾಕಿತ್ತು. ಆತನ ಬಗ್ಗೆ ಇತಿಹಾಸಕ್ತರ ಕುತೂಹಲ ಇತ್ತೀಚಿನ ವರೆಗೂ ಇತ್ತು; ಇನ್ನೂ ಇದೆ. ಆಧುನಿಕ ವಿಜ್ಞಾನದ ಸಂಶೋಧನೆ ಮತ್ತು ತಂತ್ರಗಳಿಂದ ಆತನ ಅಂತ್ಯದ ಬಗೆಗೆ ಬೆಳಕು ಚೆಲ್ಲುವ ಸ್ವಾರಸ್ಯಕರ ವೃತ್ತಾಂತವನ್ನು ನಿಮ್ಮೆದುರು ಇಡುವ ಪ್ರಯತ್ನ ಈ ಕೆಳಗಿನ ಲೇಖನದಲ್ಲಿದೆ. ಒಂದು ವಿಡಿಯೋ ಸಹ ಇದೆ. ಓದುಗರಿಗೆ ಹಿಡಿಸೀತೆಂಬ ಭರವಸೆಯಿದೆ. ಹೆಚ್ಚಿನ ಮಾಹಿತಿಗೆ ಲೆಸ್ಟರಿಗೆ ಭೇಟಿ ಕೊಡಬಹುದು. (ಸಂ )
1 ”ಕಾರ್ ಪಾರ್ಕ್ ರಾಜ’ -ಒಂದು ದಂತದ ಕಥೆ
ತನ್ನ ಮೈ ಮೇಲೆ ಸಾವಿರಾರು ಕಾರುಗಳು ಬಂದು, ನಿಂತು ದಾಟಿ ಹೋಗುತ್ತಿದ್ದರೂ ಐದು ಶತಮಾನಕ್ಕೂ ಮೇಲು ತನ್ನ ರಹಸ್ಯವನ್ನು R- ಅಡಿ ಬಚ್ಚಿಟ್ಟುಕೊಂಡು ಪವಡಿಸಿದ್ದ ಒಬ್ಬ ಅರಸನ ಕಥೆ ಇದು. ಒಬ್ಬ ಮೊಮ್ಮಗ ಅಜ್ಜನಿಗೆ ಹೇಳಿದ ’ದಂತ’ ಕಥೆ ಇದು. ಒಬ್ಬ ’ಕಿಂಗ್’ ಇನ್ನೊಬ್ಬ ಕಿಂಗನ ಅಸ್ಮಿತೆಯನ್ನು ಬಯಲು ಮಾಡಿದ ಕಥೆ. ಆಧುನಿಕ ವಿಜ್ಞಾನದ ಯಶೋಗಾಥೆ ಇದು!
ಇದು ಹದಿನೈದನೆಯ ಶತಮಾನದ ಇಂಗ್ಲೆಂಡಿನ ಒಬ್ಬ ಅರಸನ ದಂತದ ಕಥೆ! ಕ್ರಿ ಶ 1485ರಲ್ಲಿ ಇಂಗ್ಲೆಂಡಿನ ಮಧ್ಯಭಾಗದಲ್ಲಿ ಲೆಸ್ಟರ್ ಪಕ್ಕದ ಬಾಸ್ವರ್ತ್(Bosworth) ಕಾಳಗದಲ್ಲಿ ಮೂರನೆಯ ರಿಚರ್ಡ್ ರಾಜ (ಎಡಗಡೆಯ ಚಿತ್ರ) ಬಿದ್ದು ಕುದುರೆಯನ್ನು ಕಳಕೊಂಡು ಕಾದುತ್ತಲೇ ಲ್ಯಾಂಕಾಸ್ಟ್ರಿಯನ್ ರಿಚ್ಮಂಡ್ (ಮುಂದೆ ಏಳನೆಯ ಹೆನ್ರಿ) ಸೈನ್ಯದ ಪ್ರಹಾರದಿಂದ ಮೃತನಾದ. ಶೇಕ್ಸ್ಪಿಯರನ ಅದೇ ಹೆಸರಿನ ನಾಟಕದಲ್ಲಿ ಬರೆದಂತೆ “A horse, a horse, My kingdom for a horse” ಅಂತ ಪರಿತಪಿಸುತ್ತ ಮಡಿದ. ಐದೂವರೆ ನೂರು ವರ್ಷಗಳ ವರೆಗೆ ಆತನ ದೇಹದ ಅವಶೇಷಗಳ ಬಗ್ಗೆ ಊಹಾ ಪೋಹವೇ ಬೆಳೆದು ದಂತ ಕಥೆಗಳು ಹುಟ್ಟಿಕೊಡಿದ್ದವು. ಆತನೆ ಆಕಾರ-ಸ್ವಭಾವಗಳ ಬಗ್ಗೆ ಮಹಾಕವಿ ಶೇಕ್ಸ್ಪಿಯರ್ ಸಹ ಆ ದಂತಕಥೆಗಳ ಆಧಾರದ ಮೇಲೆ ತನ್ನ ನಾಟಕದಲ್ಲಿ ಆತನ ಅಸಾಮಂಜಸ ವರ್ಣನೆಯನ್ನೇ ಕೊಟ್ಟಿದ್ದಾನೆ. ಆತನ ಅಸ್ಥಿಗಳು 2012ರಲ್ಲಿ ಲೆಸ್ಟರ್ ಮಹಾನಗರದ ಮಧ್ಯದ ಒಂದು ಕಾರ್ ಪಾರ್ಕಿನಡಿಯಲ್ಲಿ ಆರ್ (R) ಅಕ್ಷರದಡಿ ಆರಡಿ ಕೆಳಗೆ ಸಿಕ್ಕವು. ಈಗ ಈ ವಿಸ್ಮಯಕಾರಕ, ರೋಚಕ ಕಥೆ ಇತಿಹಾಸಕಾರರನ್ನು ನಿರಂತರವಾಗಿ ಆಕರ್ಷಿಸುತ್ತಿದೆಯಲ್ಲದೆ ಅರ್ಕಿಯಾಲಜಿಸ್ಟ್ ಮತ್ತು ವಿಜ್ಞಾನಿಗಳ ಕುತೂಹಲವನ್ನೂ ಕೆರಳಿಸಿದ ಒಂದು ಕಥೆಯಾಗಿದೆ. ಆತನ ಕಥೆಯನ್ನು ಹೇಳುವ ಲೆಸ್ಟರ್ ಮ್ಯೂಸಿಯಮ್ ’RIII’ಗೆ ಈಗ ತಂಡೋಪ ತಂಡವಾಗಿ ಜನರು ಮತ್ತು ಶಾಲಾ ಮಕ್ಕಳೂ ಸಹ ಭೇಟಿ ಕೊಡುತ್ತಿದ್ದಾರೆ
ಫ್ರಾನ್ಸ್ ಮೂಲದ ಪ್ಲಾಂಟಾಜೆನೆಟ್ (Plantangenet) ಮನೆತನದ ಕೊನೆಯ ಅರಸ ರಿಚರ್ಡ್ನ ಅಸ್ಥಿ ಮತ್ತಿತರ ಪಳೆಯುಳಿಕೆಗಳು ಸಿಕ್ಕ ಜಾಗವನ್ನು ಸಹ ನೆಲದ ಮೇಲಿನ ಗಾಜಿನ ಮುಖಾಂತರ ನೋಡಬಹುದು ಅಂತ ತಿಳಿದಿದ್ದರಿಂದ ಬಲು ಉತ್ಸುಕನಾಗಿದ್ದ ಹತ್ತು ವರ್ಷದ ನನ್ನ ಮೊಮ್ಮಗ ಅಕ್ಷಯನನ್ನು ಕರೆದು ಕೊಂಡು ಕಳೆದ ತಿಂಗಳು ಲೆಸ್ಟರ್ ಊರಿನ ಮ್ಯೂಸಿಯಮ್ಗೆ ಹೊರಟೆ. ಶಾಲೆಯಲ್ಲಿ ಮೊದಲೇ ಆ ಬಗ್ಗೆ ಕಲಿತಿದ್ದ ಆತನೇ ನನಗೆ ’ಆರ’ಡಿ (R-ಅಡಿ) ಹೂತ ರಾಜನ ವಿಷಯ ಹೇಳಿದ್ದು. ಈಗಿನ ಮಹಾ ನಗರದ ಮಧ್ಯವರ್ತಿ ಕಾರ್ ರ್ಪಾರ್ಕಿನ ಅಡಿಯಲ್ಲಿ ಹಿಂದಿನ ಕಾಲದಲ್ಲಿ ನೆಲಸಮವಾದ ಗ್ರೇ ಫ್ರಯರ್ಸ್ ಚರ್ಚಿನಲ್ಲೇ ಹದಿನೈದನೆಯ ಶತಮಾನದಲ್ಲಿ ರಾಜನನ್ನು ಅವಸರದಲ್ಲಿ ದಫನ ಮಾಡಿದ ಹಳೆಯ ಕೆಲವು ದಾಖಲೆಗಳಿದ್ದವು. ಅದನ್ನು ಖಚಿತ ಪಡಿಸಿಕೊಳ್ಳಲು ಮುಮ್ಮಡಿ ರಿಚರ್ಡ್ ಸಂಸ್ಥೆ 13,000 ಪೌಂಡುಗಳ ಹಣ ಸಂಗ್ರಹ ಮಾಡಿ ನಗರ ಪಾಲಿಕೆಯ ಅನುಮತಿ ಪಡೆದು ಜಿ ಪಿ ಆರ್ ರಾಡಾರ್ ಸಹಾಯದಿಂದ ಆತ ಹೂತಿರುವ ಜಾಗದ ಪತ್ತೆ ಹಚ್ಚಿದ ನಂತರ ಉತ್ಖನನ ಪ್ರಾರಂಭವಾಯಿತು. ಮೊದಲು ಸಿಕ್ಕದ್ದು ತೊಡೆಯ ಎಲುವು. ಬೆನ್ನೆಲುಬು ಬಾಗಿತ್ತು (scoliosis). ತಲೆಬುರುಡೆಯ ಕೆಳಭಾಗದಲ್ಲಿ ಆಳವಾದ ಗಾಯಗಳ ಕುರುಹುಗಳಿದ್ದವು. ಶೇಕ್ಸ್ಪಿಯರ್ ಸಹ ಆಗಿನ ಕಾಲದ ಪ್ರಚಲಿತ ವಿದ್ಯಮಾನಕ್ಕನುಗುಣವಾಗಿ ತನ್ನ ’ಕಿಂಗ್ ರಿಚರ್ಡ್’ ನಾಟಕದಲ್ಲಿ ಆತನಿಗೆ, ’ಗೂನ, ಒಂದು ಕೈ ಮುರುಟಿತ್ತು, ಒಂದು ಕಾಲು ಕುಂಟುತ್ತಿತ್ತು’ ಎನ್ನುವ ವಿಕಾರ ರೂಪ ಕೊಟ್ಟಿದ್ದಲ್ಲದೇ ಅವನನ್ನು ಒಬ್ಬ ಖಳನಾಯಕನನ್ನಾಗಿ ವರ್ಣಿಸಿದ್ದಾನೆ (ಮೊದಲ ಮೂವತ್ತು ಸಾಲುಗಳಲ್ಲಿ). ತನ್ನ ಅಣ್ಣನ ಇಬ್ಬರು ಎಳೆಯ ಮಕ್ಕಳನ್ನು (”Princes in the Tower”) ಸೆರೆಹಿಡಿದಿಟ್ಟ ನಂತರ ಬಹುಶಃ ಕೊಲ್ಲಿಸಿ ಕುಖ್ಯಾತನನ್ನಾಗಿ ಮಾಡಿದ್ದಾನೆ. ’ನಾನು ಹೊರಟರೆ ನಾಯಿಗಳೂ ಸಹ ನಿಂತು ಬೊಗಳುತ್ತವೆ!’ ಎನ್ನುವ ಆತನ ಸ್ವಗತ ಆ ನಾಟಕದಲ್ಲಿ ಹೀಗಿದೆ:
Deform’d, unfinish’d, sent before my time
Into this breathing world, scarce half made up(Richard III, 1.1.14-31) ಇತ್ತೀಚಿನ ಸಂಶೋಧಕರ ಅಭಿಪ್ರಾಯದ ಪ್ರಕಾರ ಇದು ಅತಿರೇಕದ ವರ್ಣನೆ, ರಿಚರ್ಡನ ಮರಣದ ನಂತರ ಬಂದ ಟ್ಯೂಡರ್ ಮನೆತನದ ಪರವಾಗಿದ್ದವರ ಪ್ರಚಾರದಿಂದ ಪ್ರೇರಿತವಾದ ತೇಜೊವಧೆ ಎನ್ನುವ ಮತಕ್ಕೆ ಬಂದಿದ್ದಾರೆ.
ಶಾಲಾ ಬಾಲಕ ಗಾಜಿನಡಿಯಲ್ಲಿಯ ಅಸ್ಥಿಯನ್ನು ನೋಡುತ್ತಿರುವ ದೃಶ್ಯಬಾಗಿದ ಬೆನ್ನೆಲುಬಿನ ಅರಸ ರಿಚರ್ಡ್ನ ಅಸ್ಥಿ
ಲೆಸ್ಟರ್ (Leicester) ಐತಿಹಾಸಿಕ ಸ್ಥಳ
ಇಂಗ್ಲೆಂಡಿನ ಮಧ್ಯದಲ್ಲಿರುವ ಈ ಮಹಾನಗರ ಇತಿಹಾಸದ ಕೇಂದ್ರಬಿಂದುವಾಗಿ ಉಲ್ಲೇಖ ಪಡೆದಿದೆ. ಇತ್ತೀಚೆಗಷ್ಟೇ 2022 ರ ದೀಪಾವಳಿಗೆ ಮುಂಚೆ ಇಲ್ಲಿ ಮತೀಯ ಗಲಭೆಗಳುಂಟಾಗಿ ಜಗತ್ತಿನಲ್ಲೆಲ್ಲ ಹೆಡ್ಲೈನ್ ಸುದ್ದಿ ಮಾಡಿತ್ತು. ಸದ್ಯಕ್ಕಂತೂ ಇಲ್ಲಿ ಶಾಂತಿ ನೆಲೆಸಿದೆ. ಪೋಲೀಸರ ’ರಕ್ಷೆ’ಯಲ್ಲಿ ದೀಪಾವಳಿ ಹಬ್ಬ ವಿಜೃಂಭಣೆಯಿಂದ ಸಾಂಗವಾಗಿ ಜರಿದು ನಿಟ್ಟುಸಿರು ಬಿಟ್ಟೆವು. ಅದಕ್ಕೂ ಪೂರ್ವದಲ್ಲಿ 1974ರಲ್ಲಿ ದಕ್ಷಿಣ ಏಷಿಯಾದ ಮೂಲದ ಹೆಂಗಸರು ಬಿಳಿಯರಿಗಿಂತ ಅದೇ ಕೆಲಸಕ್ಕಾಗಿ ತಮಗೆ ಕಡಿಮೆ ವೇತನ ಕೊಟ್ಟದ್ದಕ್ಕಾಗಿ ಸಂಪು ಹೂಡಿ, ಕೊನೆಗೆ ಇಂಪೀರಿಯಲ್ ಟೈಪ್ ರೈಟರ್ ಕಂಪನಿಯನ್ನು ಮುಚ್ಚುವಂತೆ ಮಾಡಿ ಇತಿಹಾಸವನ್ನೇ ಬರೆದರು. ಅದಕ್ಕೂ ಮೊದಲು ಐದೂವರೆ ನೂರು ವರ್ಷಗಳ ಹಿಂದೆ ಅನತಿ ದೂರದಲ್ಲಿರುವ ಬಾಸ್ವರ್ತ್ ಮೈದಾನದಲ್ಲಿ ಮಡಿದು ಮೂರನೆಯ ರಿಚರ್ಡ್ ರಾಜ ಊರ ಮಧ್ಯದ ಫ್ರಯರಿ ಚರ್ಚಿನಲ್ಲಿ ಅವಸರದ ಸಮಾಧಿಯನ್ನು ಹೊಕ್ಕುಇಲ್ಲಿಯ ವರೆಗೆ ಗುಲ್ಲೆಬ್ಬಿಸದೆ ಪವಡಿಸಿದ್ದ!
ಕಿಂಗ್ ರಿಚರ್ಡ್ ವಿಸಿಟರ್ ಸೆಂಟರ್, ಲೆಸ್ಟರ್
ಲೆಸ್ಟರಿನ ಯಾವದೇ ಮೂಲೆಯಲ್ಲಿಯೂ ಒಂದು ಕಿರೀಟದ ಕೆಳಗೆ ದೊಡ್ಡ 'R' ಎನ್ನುವ ಅಕ್ಷರವಿರುವ (ಲೋಗೋ) ಲಾಂಛನವನ್ನು ಕಾಣ ಬಹುದು. ಮ್ಯೂಸಿಯಂ ಮೂರು ಭಾಗಗಳಲ್ಲಿ ಈ ಕಥೆಯನ್ನು ಹೇಳುತ್ತದೆ: ವಂಶಾವಳಿ(Dynasty), ಮೃತ್ಯು(Death)ಮತ್ತು ವೈಜ್ಞಾನಿಕ ಅನ್ವೇಶಣೆ(Discovery).
RIII ಮ್ಯೂಸಿಯಂ ಒಳಗೆ …
1.ವಂಶಾವಳಿ: ಹದಿನಾಲ್ಕನೆಯ ಶತಮಾನದ ಆದಿಯಲ್ಲಿ ಮೂರನೆ ಎಡ್ವರ್ಡ್ ರಾಜ 50 ವರ್ಷ ನೆಮ್ಮದಿಯಾಗಿ ಆಳಿದ ನಂತರ ಫ್ರಾನ್ಸ್ ನೊಡನೆ ’ಒಂದು ಶತಮಾನ ದ ಯುದ್ಧ’ದಲ್ಲಿ ತೊಡಗಿ ಸೋತಿತ್ತು ಇಂಗ್ಲೆಂಡ್. ಆತನ ವಂಶದ ಎರಡು ಶಾಖೆಯ ಮರಿಮಕ್ಕಳು ದಾಯಾದಿಗಳಾಗಿ ಮೂವತ್ತು ವರ್ಷ ಸತತವಾಗಿ ಬಡಿದಾಡಿದ್ದೇ ”ವಾರ್ ಆಫ್ ಥಿ ರೋಸಸ್’ ಎನ್ನುವ ಹೆಸರು ಪಡೆಯಿತು. ಲ್ಯಾಂಕಾಸ್ಟರ್ ಮನೆತನ ಲಾಂಛನ ಕೆಂಪು ಗುಲಾಬಿ ಯಾಗಿದ್ದರೆ ಯಾರ್ಕ್ ಮನೆತನದ್ದು ಬಿಳಿ ಗುಲಾಬಿ (Yorkists). ಈ ಮನೆತನದ ಕೊನೆಯ ರಾಜನೇ ಯುದ್ಧದಲ್ಲಿ ಮಡಿದ ಕೊನೆಯ ಇಂಗ್ಲೆಂಡಿನ ರಾಜ ನಮ್ಮ ಕಥಾನಾಯಕ ಮೂರನೆಯ ರಿಚರ್ಡ್. ಆತನ ಮರಣದ ನಂತರ ಇವೆರಡೂ ಶಾಖೆಗಳು ವಿವಾಹದಿಂದ ಒಂದಾಗಿ ಟ್ಯೂಡರ್ ಮನೆತನ ಆರಂಭವಾಯಿತು. ಇದು ಸಂಕ್ಷಿಪ್ತ ಇತಿಹಾಸ.
2.ಮೃತ್ಯು
ಲೆಸ್ಟರಿನ ಬ್ಲೂ ಬೋರ್ ಎನ್ನುವ ಇನ್ ದಲ್ಲಿ (ತಂಗುದಾಣ) ರಿಚರ್ಡ್ ತನ್ನ ಕೊನೆಯ ರಾತ್ರಿಯನ್ನು ಕಳೆದ. ವೇಲ್ಸ್ ಕಡೆಯಿಂದ ಇನ್ನೂ ಪಡೆಯೊಂದಿಗೆ ಬರುತ್ತಿದ್ದ ಹೆನ್ರಿಯನ್ನು ಎದುರಿಸಲು ಬಾಸ್ವರ್ತ್ಗೆ ಕಾಳಗಕ್ಕೆ ಹೊರಟ. ರಿಚರ್ಡನ ಸೈನ್ಯ ದೊಡ್ಡದಿದ್ದರೂ ಆತನಿಗೆ ಬೆಂಬಲ ಕೊಡಬೇಕಾಗಿದ್ದ ಲಾರ್ಡ್ ಸ್ಟಾನ್ಲಿ ಕೊನೆಯ ಗಳಿಗೆಯಲ್ಲಿ ಅವನ ಸಹಾಯ ಮಾಡದೆ ವೈರಿಯ ಪಂಗಡವನ್ನು ಸೇರಿದ. ರಿಚರ್ಡ್ ಮಾತ್ರ ಕೆಸರಿನಲ್ಲಿ ತನ್ನ ಕುದುರೆ ಸಿಕ್ಕಿ ಬಿದ್ದಿದ್ದರಿಂದ ಕೆಳಗಿಳಿಯ ಬೇಕಾಯಿತು. ಆತನ ಕಿರೀಟ, ಶಿರಸ್ತ್ರಾಣ ಕಳಚಿ ಬಿದ್ದಿತ್ತು. ಯುದ್ದ ಮಾಡುತ್ತ ಸಾವನ್ನಪ್ಪಿದ. ಮೇಲೆ ಉದ್ಧರಿಸಿದಂತೆ, ’ಒಂದು ಕುದುರೆ ಬೇಕು! ಇದು ಸ್ಟಾನ್ಲಿಯ ಫಿತೂರಿ’, ಅನ್ನುತ್ತಲೇ ಮಡಿದ. ಒಂದು ಕುದುರೆಗಾಗಿ ನನ್ನ ರಾಜ್ಯವನ್ನೇ ಕೊಡುವೆ ಅನ್ನುವ ಇಂಗ್ಲಿಷ್ ಪದಪುಂಜ ಮಹಾಕವಿ ಶೇಕ್ಸ್ಪಿಯರನ ನಂತರ ಮನೆಮಾತಾಗಿದೆ. ಅದನ್ನೇ ತಿರುಚಿ ಈಗಲೂ ಸಹ "I will give an arm and a leg" ಅಂತ ಜನರಾಡುವದನ್ನು ಈಗಲೂ ನಾವು ಕೇಳ ಬಹುದು. ಆತನ ದೇಹಕ್ಕೆ ಬಿದ್ದ ಹನ್ನೊಂದು ಪ್ರಹಾರಗಳಲ್ಲಿ ತಲೆಯ ಕೆಳಭಾಕಕ್ಕೆ ತಗಲಿದ ಎರಡು ಮಾರಕವಾಗಿದ್ದವು ಅಂತ ಸಿದ್ಧವಾಗಿವೆ. ಆತನ ಬತ್ತಲೆ ದೇಹವನ್ನು ಆಗಿನ ರೂಢಿಯಂತೆ ಜನರೆಲ್ಲ ನೋಡಲೆಂದು ಎರಡು ದಿನ ಪಕ್ಕದಲ್ಲಿದ್ದ ಒಂದು ಚರ್ಚಿನಲ್ಲಿ ಪ್ರದರ್ಶನ ಮಾಡಿದ ನಂತರ ಗ್ರೇ ಪಾದ್ರಿಗಳು ಅವಸರದಲ್ಲಿ (ಅದಕ್ಕೇ ತಲೆ ಸೊಟ್ಟಾಗಿ ಕುಳಿತಿದೆ) ಶವ ಸಂಸ್ಕಾರ ಮಾಡಿದರೆಂದು ಸಂಶೋಧಕರ ಅಭಿಮತ.
ರುವ ಲೇಖನಗಳಿಂದ ತಿಳಿದು ಬರುತ್ತದೆ.
3. ದಂತ ಮತ್ತು ವಂಶವಾಹಿನಿ
ನಿನ್ನಜ್ಜ ಮುತ್ತಜ್ಜ ಮೂಲಜ್ಜರೆಲ್ಲರುಂ
ನಿನ್ನೊಳವತರಿಸಿ ಮುಂದಿನ್ನು ಜನಿಸಲಿಹ
ನಿನ್ನ ಮಗ ಮೊಮ್ಮ ಮರಿಮೊಮ್ಮರೊಳು ಜೀವಿಪ್ಪರ್
ಅನ್ವಯ ಚಿರಂಜೀವಿ -ಮಂಕುತಿಮ್ಮ.
25 ಆಗಸ್ಟ್, 2012 ರಂದು ರಿಚರ್ಡ್ ಸೊಸೈಟಿಯವರ ((ಲೆಸ್ಟರ್ ರಿಕಾರ್ಡಿಯನ್ಸ್) ಪ್ರಯತ್ನದ ಫಲವಾಗಿ ಊರ ಮಧ್ಯದ ಸೋಶಿಯಲ್ ಸರ್ವಿಸಸ್ ಕಾರ್ ಪಾರ್ಕಿನಲ್ಲಿ ಡಿಗ್ಗರ್ ಗಳು ಕೆಲಸ ಪ್ರಾರಂಭ ಮಾಡಿದವು. ಮೂರು ಟ್ರೆಂಚುಗಳನ್ನು ಅಗಿಯುವ ಯೋಜನೆ. ಕಾರ್ ಪಾರ್ಕಿನ ನೆಲದ ಮೇಲೆ ಬರೆದ ಬಿಳಿಯ 'R' ಅಕ್ಷರದ ಹತ್ತಿರವೇ ಅಗಿದ ಮೊದಲನೆಯ ಟ್ರೆಂಚ್. ಕೆಲವೇ ತಾಸುಗಳಲ್ಲಿ ಸಿಕ್ಕ ತೊಡೆಯ ಎಲುಬು ರಿಚರ್ಡನದೇ ಅಂತ ವೈಜ್ಞಾನಿಕವಾಗಿ ನಂತರದ ಡಿ ಎನ್ ಎ ಸಂಶೋಧನೆಯಲ್ಲಿ ಸಾಬೀತಾದುದು ಕಾಕತಾಳೀಯವೇ! ಎಲುಬುಗಳ ಸ್ಕ್ಯಾನ್ನಿಂದ ಆತ 32 ರಿಂದ 34 ವಯಸ್ಸಿನವ ಅಂತ ಗೊತ್ತಾಯಿತು. ಅಷ್ಟೇ ಅಲ್ಲ, ಆ ಎಲುಬುಗಳ ಕೊಲಾಜನ್ನಿನ ಆಕ್ಸಿಜನ್, ಸ್ಟ್ರಾನ್ಷಿಯಮ್, ಕಾರ್ಬನ್ ಡೇಟಿಂಗ್ ಮತ್ತು ನೈಟ್ರೋಜನ್ ಐಸೊಟೋಪುಗಳ ವಿಶ್ಲೇಷಣೆಯಿಂದ ಆತ 1483ರಲ್ಲಿ ಪಟ್ಟಕ್ಕೇರಿದ ರಾಜನೇ ಅನ್ನುವದರಲ್ಲಿ ಸಂಶಯ ಉಳಿಯಲಿಲ್ಲ. ಆನಂತರ ಸೇವಿಸಿದ ರಾಜ ವೈಭವದ ಆಹಾರದಲ್ಲಿ ಹಂಸ, ಕೊಕ್ಕರೆ ಮತ್ತು ಸಾರಸ, ಅಪರೂಪದ ಮೀನ ಇತ್ಯಾದಿ ಇದ್ದವು ಅನ್ನುವ ಮಾಹಿತಿ ಗಣ್ಯ ವೈಜ್ಞಾನಿಕ ಜರ್ನಲ್ಗಳಲ್ಲಿ ಪ್ರಕಟಗೊಂಡ ಲೇಖನಗಳಿಂದ ತಿಳಿದು ಬರುತ್ತದೆ
ಚ್ಯೂರಿಯ ಚೂರ್ಣ ಮತ್ತು ದಂತದ ಕಥೆ:
ಕಟ್ಟ ಕಡೆಗೆ ಆತನದೇ ಆ ಅಸ್ಥಿ ಅಂತ 99.999% ಪುರಾವೆ ಸಿಕ್ಕಿದ್ದು ಆತನೆಯ ಹಲ್ಲುಗಳ ಡಿ ಎನ್ಎ ಗಳಿಂದ. ಆತನ ಬಗ್ಗೆ ಹಬ್ಬಿದ್ದ ಎಷ್ಟೋ ಸಂಗತಿಗಳು (ಉದಾ ಸೊಟ್ಟವಾದ ಬೆನ್ನು, ಗೂನ ಅಲ್ಲ) ಬರೀ ದಂತ ಕಥೆಯಲ್ಲ ಅಂತ ಕೊನೆಗೂ ರುಜು ಸಿಕ್ಕಿತು. ಲೆಸ್ಟರ್ ಯುನಿವರ್ಸಿಟಿಯ ಚ್ಯೂರಿ ಕಿಂಗ್ (Dr Turi King) ಎನ್ನುವ ಜೆನೆಟಿಕ್ಸ್ ಮತ್ತು ಜೀನೋಮ್ ಬಯಾಲಜಿ ಪ್ರೊಫೆಸರ್ ಅವಳಿಗೆ ಅದರ ಹೊಣೆಯನ್ನು ಹೊರಿಸಿದ್ದರು. ಈ ವಿಷಯದಲ್ಲಿ ಅಪಾರ ಅನುಭವ ಆಕೆಗೆ. ಸದ್ಯ ಮೂವತ್ತುಮೂರನೇ ವಯಸ್ಸಿಗೇ ಜೀವ ತೆತ್ತಿದ್ದ ರಿಚಡನ ಕೆಳದವಡೆಯಲ್ಲಿ ಸಾಕಷ್ಟು ಹಲ್ಲುಗಳಿದ್ದವು. ಹಲ್ಲಿನ ಡಿ ಎನ್ ಎ ಸುಲಭದಲ್ಲಿ ಕ್ಷಯವಾಗುವದಿಲ್ಲವಂತೆ. ಸುದೈವದಿಂದ ದೇಹದ ಹತ್ತಿರದಲ್ಲೇ ತೇವವಿದ್ದರೂ ಎಲುವುಗಳು ನೀರಲ್ಲಿ ಮುಳುಗಿ ಹಾನಿಯಾಗಿರಲಿಲ್ಲ. ಮೆಲ್ಲ ಮೆಲ್ಲಗೆ ಒಂದು ಹಲ್ಲನ್ನು ಹತ್ತಾರು ನಿಮಿಷ ಅಲ್ಲಾಡಿಸುತ್ತ ಅಲ್ಲಾಡಿಸುತ್ತ ಕೊನೆಗೆ ಅದನ್ನು ಕಿತ್ತಿ ಸ್ವಚ್ಛ ಪಾಕೀಟಿನಲ್ಲಿ ಹಾಕಿ ಅದರ ಚೂರ್ಣದಿಂದ ತನ್ನ ಸಂಶೋಧನೆ ಮಾಡಿ ಅದರಲ್ಲಿ ದೊರೆತ (ತಾಯಿಯ ವಂಶಾವಳಿಯಿಂದ ಮುಂದುವರೆದ) ಮೈಟೋಕೋಂಡ್ರಿಯಲ್ ಡಿ ಎನ್ ಎ ರಿಚರ್ಡನ ಮನೆತನದ ಹೆಣ್ಣು ಸಂತತಿಯ ಹದಿನಾರನೆಯ ಪೀಳಿಗೆಯ ಮೈಕಲ್ ಇಬ್ಸೆನ್ ಮತ್ತು ಹದಿನೆಂಟನೆಯ ಪೀಳಿಗೆಯ ವೆಂಡಿ ಡಲ್ಡಿಗ್ ಅವರ ವಂಶವಾಹಿನಿಗಳ ಅತ್ಯಂತ ನಿಕಟ ಹೋಲಿಕೆ (ಮೇಲಿನ ಕಗ್ಗ ಹೇಳುವ ’ಅನ್ವಯ’) ಇರುವುದನ್ನು ಸಾಬೀತು ಮಾಡಿ ಕೊನೆಗೂ ಆ ಅಸ್ಥಿಗಳು 99.999% ಆತನದೇ ಅನ್ನುವ ರುಜುವಾತನ್ನು ಸ್ಥಾಪಿಸಿದ್ದು ಅದ್ಭುತವೇ ಸರಿ. Y ವರ್ಣತಂತುವಿನ (chromosome) ಜಾಡು ಹಿಡಿದು ಹೊರಟಾಗ ಸಿಕ್ಕ ಐವರು ವಂಶಜರಲ್ಲಿ ಒಬ್ಬರದೂ ಡಿ ಎನ್ ಎ ದಲ್ಲಿ ಹೊಂದಿಕೆ ಸಿಗದಿದ್ದರೂ ಆ ಎಲುಬುಗಳು ರಿಚರ್ಡನದೇ ಅನ್ನುವ ನಿರ್ಣಯಕ್ಕೆ ವ್ಯತಿರಿಕ್ತವಾಗಿರಲಿಲ್ಲ. ಗೀತೆ ಹೇಳಿದ ವರ್ಣಸಂಕರ ನೆನಪಾಗುತ್ತದೆ! ನಿಮಗೆ ಅವಕಾಶ ಸಿಕ್ಕರೆ ಲೆಸ್ಟರ್ಗೆ ಅವಶ್ಯ ಭೇಟಿ ಕೊಡಿ. ಒಮ್ಮೆ ಕೊಂಡ ತಿಕೀಟಿಗೆ ಮಾತ್ರ ಒಂದೇ ಒಂದು ವರ್ಷದ ಬಾಳಿಕೆಯಿದೆ!
Turi King removing a tooth from lower jaw of Richard III
ಶೇಕ್ಸ್ಪಿಯರಾಯಣ
What’s in a name? (Or in a letter?)
ಇಲ್ಲಿ ಒಂದು ಸಾಮ್ಯತೆಯಿದೆ. ಆತನ ನಾಟಕದಲ್ಲಿ ಒಬ್ಬ G ಅಕ್ಷರದವ ಎಡ್ವರ್ಡ್ ರಾಜನ ಸಂತತಿಯನ್ನು ಕೊಲೆಮಾಡುವದಾಗಿ ಭವಿಷ್ಯವಾಣಿ ಹೇಳುತ್ತದೆ. ಯಾರು ಆ G? ಅದು ನಾಟಕದಲ್ಲಿ ಬರುವ ರಹಸ್ಯ.
EIIR, VR ಮತ್ತು ಸದ್ಯ CR ಇತ್ಯಾದಿ ಬ್ರಿಟಿಷ್ ರಾಜ ಮುದ್ರೆಯಲ್ಲಿ ಕ್ರಮವಾಗಿ, ಎಲಿಝಬೆತ್, ವಿಕ್ಟೋರಿಯಾ, ಚಾರ್ಲ್ಸ್ ಇವರಲ್ಲಿ R- Regina (ರಾಣಿ) ಅಥವಾ Rex (ರಾಜ)ನನ್ನು ಸೂಚಿಸುತ್ತದೆ. ಅಂದರೆ ಲೆಸ್ಟರಿನ ಕಾರ್ ಪಾರ್ಕಿನ R? Reserved ಇರಬಹುದೇನೋ!
‘ದಂತ ಕಥೆ’ ಹೇಗೆ ಹುಟ್ಟಿತು?
ಇನ್ನು ಪಾವೆಂ ಅವರ ಪದಾರ್ಥ ಚಿಂತಾಮಣಿಯಿಂದ (ಪು:241): ”ದಂತಕ್ಕೂ ಕಥೆಗೂ ಏನು ಸಂಬಂಧ? ದಂತ ಕಥೆ ಎನ್ನುವ ಪದ ಎಲ್ಲರಿಗೂ ಗೊತ್ತು. ಯಾವ ಖಚಿತ ಆಧಾರವಿಲ್ಲದೆ ಬಾಯಿಂದ ಬಾಯಿಗೆ ತಲೆಮಾರುಗಳಿಗೆ ಹಬ್ಬುತ್ತ ಬೆಳೆದ ವಾರ್ತೆ ದಂತ ಕಥೆಯೆನಿಸುತ್ತದೆ. ಮಾಸ್ತಿಯವರು ಇದಕ್ಕೊಂದು ವ್ಯುತ್ಪತ್ತಿಯನ್ನು ಊಹಿಸುತ್ತಾರೆ. ದಂತ ಕಥೆಯ ದಂತ, ಹಲ್ಲು ಅಲ್ಲವೇ ಅಲ್ಲ, ’ಉದಂತ’ ಎಂದರೆ ಸಂಸ್ಕೃತದಲ್ಲಿ ವೃತ್ತಾಂತ, ವರ್ತಮಾನ(ಉದಾ: ರಾಮೋದಂತಃ). ಈ ಉದಂತದಲ್ಲಿ ಪ್ರಥಮಾಕ್ಷರ ಉದುರಿ ಹೋಗಿ ’ದಂತ’ ಮಾತ್ರ ಉಳಿಯಿತು. ಉದಂತ ಮತ್ತು ಕಥೆ ಸುಮಾರಾಗಿ ಒಂದೇ ಅರ್ಥದ ಶಬ್ದಗಳು. ಹೇಗಿದೆ ಈ ’ದಂತ ಕಥೆ’ಯ ವೃತ್ತಾಂತ?
ಲೇಖನ ಮತ್ತು ಫೋಟೋಗಳು: ಶ್ರೀವತ್ಸ ದೇಸಾಯಿ (ಎರಡು ಚಿತ್ರಗಳು ಗೈಡ ಬುಕ್ ಕೃಪೆ).
Links:
King Richard III Visitor Centre, 4A St Martins, Leicester LE1 5DB
(ಮುಂದುವರೆದುದು)
ಇಲ್ಲಿಯ ವರೆಗೆ: ಅಂಜಲಿ ಶಾಲೆಯಿಂದ ಇನ್ನೂ ಮನೆಗೆ ಬಂದಿಲ್ಲ. ಎಲ್ಲಿಗೆ ಹೋದಳೋ? ತಲಾಷ್ (ಶೋಧ) ಪ್ರಾರಂಭವಾಗಿದೆ. ಇನ್ನು ಓದಿರಿ.
ರಾಮೂನು ಆಲದ ಮರದ ಕಟ್ಟೆಯ ಹತ್ತಿರ ಬಂದು ಸೇರಿದ್ದ. ವಿಷಯ ಗೊತ್ತಾಗಿ ಓಣಿಯ ಜನರೂ ಧಾವಿಸಿದ್ದರು.
ಕಟ್ಟೆಯ ಹತ್ತಿರ ಕೆಲವು ಕ್ಷಣ ಮೌನವಾಗಿದ್ದ ನಾಯಿ ಮತ್ತೇ ಬೊಗಳತೊಡಗಿತು. ವಸುಂಧರೆಯ ಸೆರಗನ್ನು ಕಚ್ಚಿ ಎಲ್ಲಿಯೋ ಕರೆದುಕೊಂಡು ಹೋಗಲು ಪ್ರಯತ್ನಿಸುತಿತ್ತು. ಎಲ್ಲರೂ ಅದರ ಜೊತೆಗೆ ಮುನ್ನೆಡೆದರು . ಕಟ್ಟೆಯಿಂದ ಉತ್ತರ ದಿಕ್ಕಿನೆಡೆಗೆ ನಡೆದ ನಾಯಿಯು ಸುಮಾರು ನೂರು ಮೀಟರುಗಳಾದ ಮೇಲೆ ನಿಂತುಕೊಂಡಿತು.
ಅಲ್ಲೇನಿದೆ ಎಂದು ನೋಡಲು, ಹತ್ತಿರದಲ್ಲಿಯೇ ಅಂಜಲಿಯು ಶಾಲೆಗೆ ಒಯ್ಯುತ್ತಿದ್ದ ನೀರಿನ ಬಾಟಲಿ ಬಿದ್ದಿತ್ತು . ಅಂಜಲಿಯು ಈ ದಿಕ್ಕಿನಲ್ಲಿಯೆ ಎಲ್ಲಿಯೋ ಮರೆಯಾಗಿದ್ದಾಳೆ ಎಂಬುವದು ಅಲ್ಲಿದ್ದವರಿಗೆಲ್ಲ ಖಾತರಿಯಾಯಿತು. ಬೀದಿಯ ನಾಯಿಯಾಗಿದ್ದರೂ 'ಅನ್ನ ತಿಂದ ಮನೆಯ ಋಣವನ್ನು' ತೀರಿಸಿತ್ತು. ಆ ದಿಕ್ಕಿನಲ್ಲಿಯೇ ಸುಮಾರು ಜನರು ಅಲೆದು ಬಂದರೂ ಎಲ್ಲಿಯೂ ಅಂಜಲಿಯ ಸುಳಿವು ಸಿಗಲಿಲ್ಲ. ಚಿಂತಾಕ್ರಾಂತವಾಗಿ ರೋಧಿಸುತ್ತಿದ್ದ ವಸುಂಧರೆಯನ್ನು ಬಿಟ್ಟು, ರಾಮು ಪೊಲೀಸ್ ಸ್ಟೇಷನ್ ಕಡೆಗೆ ನಡೆದಿದ್ದ. ನೆರೆದವರೆಲ್ಲ 'ಎಲ್ಲ ಸರಿಹೋಗುವದೆಂದು' ವಸುಂಧರೆಗೆ ಸಮಾಧಾನ ಹೇಳುತ್ತಿದ್ದರು.
ಕೆಲವು ಸಮಯದ ನಂತರ ರಾಮು ಪೋಲೀಸರ ವಾಹನದೊಂದಿಗೆ ಮರಳಿ ಸ್ಥಳಕ್ಕೆ ಬಂದಿದ್ದ. ಸಹಜವಾಗಿ, ಕೆಲಸವೆಲ್ಲ ಮುಗಿದ ಮೇಲೆ ಪ್ರತ್ಯಕ್ಶವಾಗುವ ಪೊಲೀಸರು ಇಷ್ಟು ಬೇಗನೆ ಬಂದಿದ್ದು ಜನರಲ್ಲಿ ಆಶ್ಚರ್ಯವನ್ನು ಮೂಡಿಸಿತ್ತು. ಪೊಲೀಸರು ಸೂಕ್ಷ್ಮರೀತಿಯಾಗಿ ಪರಿಶೋಧಿಸಿದಾಗ ಅಲ್ಲಿಂದ ಅಡ್ಡದಾರಿಯಲ್ಲಿ ನಾಲ್ಕು ಚಕ್ರದ ವಾಹನ ಹೋಗಿರುವದು ಖಾತ್ರಿಯಾಯಿತು. ತಕ್ಷಣವೇ ಅವರು ಶಾಲಾವಾಹನದ ಚಾಲಕನನ್ನು ಫೋನಿನಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರು, ಸಾಧ್ಯವಾಗದೇ ಇದ್ದಾಗ ಪೋಲೀಸರ ಜೀಪು ಚಾಲಕನ ಮನೆಯತ್ತ ಸಾಗಿತು. ಪೊಲೀಸರನ್ನು ಕಂಡು ನಡುಗುತ್ತಿದ್ದ ಚಾಲಕನು ತನ್ನ ವಿವರಣೆಯನ್ನು ಕೊಟ್ಟನು. 'ಅಂಜಲಿಯು ಶಾಲೆ ಮುಗಿದಾದ ಮೇಲೆ ಶಾಲಾವಾಹನದಲ್ಲಿ ಹತ್ತಿದ್ದು ಮತ್ತು ತನ್ನ ಗೆಳೆಯರೊಂದಿಗೆ ಕಟ್ಟೆಯ ಸ್ಟಾಪಿನಲ್ಲಿ ಇಳಿದಿದ್ದು ನಿಜವೆಂದು ಹಾಗು ಅದನ್ನು ಬಿಟ್ಟು ತನಗೆ ಬೇರೆ ಏನೂ ಗೊತ್ತಿಲ್ಲವೆಂದು, ತಾನು ಯಾವ ರೀತಿಯ ಶೋಧನೆಗೂ ಸಿದ್ದನೆಂದು ಪ್ರಮಾಣಮಾಡಿ ಹೇಳಿದನು.
ಅವನನ್ನು ಜೀಪಿನಲ್ಲಿ ಕೂರಲು ಹೇಳಿ, ಪೊಲೀಸರು ಅಂಜಲಿಯ ತರಗತಿಯ ಶಿಕ್ಷಕನ ಮನೆಯತ್ತ ಧಾವಿಸಿದರು. ಶಿಕ್ಷಕನ ಮನೆಗೆ ಬೀಗ ಹಾಕಿತ್ತು. ಈಗೇನು ಮಾಡುವದು ಎಂದು ಯೋಚಿಸಿದ ಅವರು ನೇರವಾಗಿ ಶಾಲೆಯ ಪ್ರಿನ್ಸಿಪಾಲರ ಮನೆಯತ್ತ ಸಾಗಿದರು.
ಬಂದ ವಿಷಯವನ್ನು ಹೇಳಿದಾಗ ಅವರು 'ಅಂಜಲಿಯ ಕ್ಲಾಸಿನ ಶಿಕ್ಷಕ ಮತ್ತು ಉಪಶಿಕ್ಷಕರು ಕಳೆದ ಎರಡು ದಿನಗಳಿಂದ ರಜೆಯ ಮೇಲಿರುವದಾಗಿಯೂ ಮತ್ತು ಇನ್ನೊಬ್ಬ ಶಿಕ್ಷಕಿಯು ತರಗತಿಯನ್ನು ನೋಡಿಕೊಳ್ಳುತ್ತಿರುವದಾಗಿಯೂ' ಮಾಹಿತಿಯನ್ನು ನೀಡಿದರು.
ತರಗತಿಯನ್ನು ನೋಡಿಕೊಳ್ಳುತ್ತಿದ್ದ ಶಿಕ್ಷಕಿಯನ್ನು ಫೋನಿನಲ್ಲಿ ಮಾತನಾಡಿಸಿದಾಗ 'ಅಂಜಲಿಯು ಪೂರ್ತಿ ದಿನ ಶಾಲೆಯಲ್ಲಿ ಇದ್ದಿದ್ದು ಖಚಿತವಾಯಿತು'.
"ಹಲ್ಕಾ ನನ್ನ ಮಕ್ಕಳು! ಈ ಶಿಕ್ಷಕರದೇ ಕಿತಾಪತಿ, " ಎಂದು ಪೊಲೀಸರು ಮಾತನಾಡುವದನ್ನು ಕೇಳಿ ರಾಮುಗೆ ಭಯ ಬಂದಿತ್ತು . ಎಂದೂ ದೇವರಿಗೆ ಕೈ ಮುಗಿಯದವನು 'ಅಪ್ಪ ದೇವರೇ ! ನನ್ನ ಮಗಳನ್ನು ಸುರಕ್ಷಿತವ್ವಾಗಿ ಮನೆಗೆ ತಲುಪಿಸು,' ಎಂದು ಮನದಲ್ಲೇ ದೇವರಿಗೆ ಬೇಡಿಕೊಂಡಿದ್ದ. ರಾಮುನನ್ನು ಆಲದ ಕಟ್ಟೆಯ ಹತ್ತಿರ ಬಿಟ್ಟು ಪೊಲೀಸರು ಮುಂದಿನ ಕಾರ್ಯಾಚರಣೆಗೆ ಸ್ಟೇಷನ್ ಗೆ ಮರಳಿದ್ದರು.
ಇವನ ಬರುವಿಕೆಗಾಗಿಯೇ ಕಾಯುತ್ತಿದ್ದ ವಸುಂಧರೆ ಕೇಳಿದಳು
"ಏನಾದರೂ ಗೊತ್ತಾಯ್ತೆನ್ರಿ?"
ಏನು ಹೇಳಬೇಕೆಂದು ತೋಚದೆ ರಾಮು ತೊದಲುತ್ತ ನುಡಿದಿದ್ದ
" ಇನ್ನೂ ಏನು ಗೊತ್ತಾಗಿಲ್ಲ, ಇಷ್ಟರಲ್ಲಿಯೇ ಗೊತ್ತಾಗಬಹುದು "
ಅಷ್ಟರಲ್ಲಿಯೇ ಜನರಲ್ಲಿ ಯಾರೋ ಅನ್ನುತ್ತಿದ್ದರು: "ಪೋಲೀಸರ ಕೈಯಲ್ಲಿ ಅಷ್ಟು ಬೇಗನೆ ಆಗುವ ಕೆಲಸ ಇದಲ್ಲ. ನಮ್ಮ ಹುಚ್ಚಪ್ಪನನ್ನು ಕೇಳಿದರೆ ಎಲ್ಲ ಗೊತ್ತಾಗಬಹುದು, ಅವನಿಗೆ ಗೊತ್ತಿಲ್ಲದಿರುವದು ಈ ಊರಲ್ಲಿ ಏನಿದೆ ?"
ಹೌದು; ಅವನೊಬ್ಬ ಹುಚ್ಚ. ಅವನ ಇಟ್ಟ ಹೆಸರು ಬಹು ಜನರಿಗೆ ಗೊತ್ತಿಲ್ಲದಿದ್ದರೂ ಕೊಟ್ಟ ಹೆಸರು ಮಾತ್ರ ಎಲ್ಲರಿಗೂ ಗೊತ್ತು. 'ಹುಚ್ಚಪ್ಪ'! ಐವತ್ತರ ಗಡಿಯಲ್ಲಿ ಇರುವ ಅವನ ಬಗ್ಗೆ ಊರ ಜನರಿಗೆ ಇಷ್ಟು ಮಾತ್ರ ಗೊತ್ತು-
'ಅವನು ಭಾಳ ಸಾಲಿ ಓದ್ಯಾನಂತ, ಇಪ್ಪತ್ತು ವರ್ಷದ ಹಿಂದ ಬೆಳಗಾವಿ ಲಿಂಗರಾಜ ಕಾಲೇಜಿನಾಗ ಪದವಿ ಮುಗಿಸ್ಯಾನಂತ , ಅಷ್ಟ ಸಾಲಿ ಓದಿ ನೌಕರಿ ಸಿಗದಿದ್ದಕ್ಕ, ಊರ ಸುಧಾರಣೆ ಮಾಡಾಕ ಹೋಗಿ ತಾನ ಹುಚ್ಚ ಆಗ್ಯಾನಂತ ‘ ಎಂದು.
ಹಗಲಿನಲ್ಲೆಲ್ಲ ಊರಿನ ಬೀದಿ ಬೀದಿ ಅಲೆಯುತಿದ್ದ ಅವನು ಇಳಿ ಹೊತ್ತಾದರೆ ಆಲದ ಕಟ್ಟೆಯನ್ನು ಸೇರಿಕೊಳ್ಳುತಿದ್ದ. ಊರಿನಲ್ಲಿರುವ ಎಲ್ಲ ಮನೆಗಳ ಗುಟ್ಟು ಅವನಿಗೆ ಗೊತ್ತು. ಮಾತು ಕಡಿಮೆ ನೋಟ ಜಾಸ್ತಿ.
ಅದೇನೋ ಕಾರಣಕ್ಕಾಗಿ ಆ ಸಮಯದಲ್ಲಿ ಅವನೂ ಸಹ ಆಲದ ಕಟ್ಟೆಯ ಹತ್ತಿರವಿರಲಿಲ್ಲ. ಜನರೆಲ್ಲಾ ಅವನ ಬಗ್ಗೆಯೇ ಮಾತನಾಡುತ್ತಿದ್ದಾಗ ಆಕಡೆಯಲ್ಲೋ ಅವನ ಆಗಮನ ಆಗುತ್ತಿದ್ದದ್ದು ಕಂಡು ಬಂತು.
ಅವನ ಬರುವಿಕೆಗಾಗಿಯೇ ಕಾಯುತ್ತಿದ್ದ ವಸುಂಧರೆ ದಗ್ಧ ದನಿಯಲ್ಲಿ ಕೇಳಿದಳು
" ಹುಚ್ಚಪ್ಪ, ಅಂಜಲಿ ಎಲ್ಲೋ ಮಾಯ ಆಗ್ಯಾಳ, ಎಲ್ಲೂ ಸುಳುವು ಸಿಗವಲ್ಲದು "
ಅವಳ ಕಣ್ಣಲ್ಲೆ ನೋಡುತ್ತ ಅವನು ನುಡಿದ: "ಸಿಗತಾಳು! ಆರ ಮೈಲು, ಉತ್ತರ ದಿಕ್ಕು, ಅರೆ ರಾತ್ರಿ, ಅರಿಶಿಣ ಕುಂಕುಮ, ಟೈಮ್ ಜಾಸ್ತಿ ಇಲ್ಲ "
ಅಲ್ಲಿದ್ದವರಿಗೆ ಅದೇನೂ ಅರ್ಥವಾಗಲಿಲ್ಲ. ವಸುಂಧರೆ ಮನದಲ್ಲೇ ಅವನ ಒಗಟಿನ ಪದಗಳಿಗೆ ಅರ್ಥ ಹುಡುಕುತ್ತಿದ್ದಳು.
ಒಮ್ಮೆಲೇ ಅವಳಿಗೆ ಅದೇನೋ ಅರ್ಥವಾಯಿತು .
ರಾಮುನಿಗೆ ಜೋರಾಗಿ ಹೇಳುತ್ತಿದ್ದಳು.
" ಅರ್ಥ ಆಯ್ತು, ಅರ್ಥ ಆಯ್ತು, ಬೇಗ ಮನೆಗೆ ನಡೀರಿ, ಟೈಮ್ ಜಾಸ್ತಿ ಇಲ್ಲ "
ರಾಮುನಿಗೆ ಅದೇನು ಅವಳಿಗೆ ಅರ್ಥ ಆಯಿತು ಎಂದು ಸ್ವಲ್ಪವೂ ತಿಳಿಯಲಿಲ್ಲ ಆದರೂ ಅವಳ ಮಾತಿನಂತೆ ಅವಸರದಿಂದ ಮನೆಯ ಕಡೆಗೆ ನಡೆದ.
( ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವದು )
ಶಿವ ಮೇಟಿ