ರಾತ್ರಿ ಪಾಳಿಯ ಚಾಲಕರು

ಯೋಗಿಂದ್ರ ಮರವಂತೆಯವರಿಗೆ ಪರಿಚಯ ಬೇಕಿಲ್ಲ. ಕನ್ನಡದಲ್ಲಿ ಹೆಸರು ಮಾಡಿದ, ಪುರಸ್ಕೃತರಾದ ಪ್ರಬಂಧಕಾರ. ದೈನಿಕಗಳಲ್ಲಿ , ಅಂತರ್ಜಾಲ ಪತ್ರಿಕೆಗಳಲ್ಲಿ ಅವರ ಅಂಕಣಗಳು ಪ್ರಕಟಗೊಂಡಿವೆ . ಅಂಕಣಗಳನ್ನು, ಪ್ರಬಂಧಗಳನ್ನು ಪುಸ್ತಕವಾಗಿಯೂ ಪ್ರಕಟಿಸಿದ್ದಾರೆ. ಸಾಮಾನ್ಯವಾದ ವಿಷಯಗಳಿಗೆ ಮೂರ್ತ ರೂಪ ಕೊಡುವುದು ಅವರ ವಿಶಿಷ್ಟತೆ. ಇದನ್ನು ಅವರ “ಏರೋ ಪುರಾಣ” ಪುಸ್ತಕದ ಹಲವಾರು ಬರಹಗಳಲ್ಲಿ, ಬಹುಮಾನಿತ “ಕಿಟಕಿಗಳು” ಪ್ರಬಂಧದಲ್ಲಿ ಕಾಣಬಹುದು. ಬಹಳ ಕಾಲದ ನಂತರ ಅನಿವಾಸಿಗೆ ಮತ್ತೆ ಹೊಸ ಬರಹವನ್ನು ಈ ವಾರ ಕೊಟ್ಟಿದ್ದಾರೆ. ಅವರ ಬರಹದ ಲಾಲಿತ್ಯ, ಈ ಪ್ರಬಂಧದಲ್ಲಿ ಸೊಗಸಾಗಿ ಪ್ರದರ್ಶಿತವಾಗಿದೆ. ಅಮೂರ್ತವಾದ ‘ಕನಸು’ ರಾತ್ರಿ ಪಾಳಿಯ ಚಾಲಕನಾಗುತ್ತದೆ; ರಸ್ತೆಗಳಲ್ಲಿ ತಿರುಗುವ ಬೀಡಾಡಿ ಪ್ರಾಣಿಗಳು, ಬೇಕಾ ಬಿಟ್ಟಿ ಗಾಡಿ ಓಡಿಸುವವರು, ಯಾನವನ್ನು ಧ್ವಂಸ ಮಾಡುವವರಾಗುತ್ತಾರೆ. ಕತ್ತಲೆಯ ಹಾದಿಯಲ್ಲಿ ನಿಮ್ಮನ್ನು ನಡೆಸುತ್ತ, ಓಡಿಸುತ್ತ ಲೌಕಿಕ, ತಾತ್ವಿಕ, ಆಧ್ಯಾತ್ಮಿಕ ವಿಚಾರಗಳನ್ನೆಲ್ಲ ತಡಕಿ ಅಚ್ಚುಕಟ್ಟಾಗಿ ನಿಮ್ಮ ಮುಂದೆ ರಾತ್ರಿ ಪಾಳಿಯ ಚಾಲಕರ ವಿವಿಧ ಮುಖಗಳನ್ನು ಅನಾವರಣಗೊಳಿಸಿದ್ದಾರೆ.

“ಕನಸೆಂದರೆ ನಿದ್ರೆಯಲ್ಲಿ ನೋಡುವಂತಹದ್ದಲ್ಲ ; ನಿದ್ರೆ ಮಾಡಲು ಬಿಡದ್ದು” ಎನ್ನುತ್ತ  ನಿದ್ದೆಗೆಡಿಸಿದವರು ಅಬ್ದುಲ್ ಕಲಾಂ. ಇದು ಸೊಂಪಾದ ನಿದ್ದೆಯ ನಡುವಿನ ಸುಸ್ವಪ್ನವಲ್ಲ. ಬೆವರಿ ಬೆಚ್ಚುವ ದುಸ್ವಪ್ನವೂ ಅಲ್ಲ. ಒಡಲಿನೊಳಗೆ ಸಣ್ಣದಾಗಿ ಹುಟ್ಟಿ  ನಿತ್ಯವೂ ಬೇರೆಬೇರೆ ಆಕಾರ ತಾಳಿ ದೊಡ್ಡದಾಗಿ ಜ್ವಲಿಸಿ, ಮೈಮನಗಳನ್ನು ವ್ಯಾಪಿಸಿ ಮುನ್ನಡೆಸುವ ಸ್ವಯಂಸ್ಫೂರ್ತಿ. ನೆಲೆ  ಮುಟ್ಟದ ತನಕ ನಿಲ್ಲದ ನಡಿಗೆ, ಯಾವುದೊ ಲಕ್ಷ್ಯದ ಕಡೆಗಿನ ಅವಿರತ ನಿರಂತರ ಓಟ.  ಕನಸಿನ ಒಂದು ವ್ಯಾಖ್ಯಾನ ಹೀಗಾದರೆ,  ಕಾವ್ಯ ಸಾಹಿತ್ಯಗಳು ಕನಸನ್ನು ಕೆಲವೊಮ್ಮೆ ಬರೇ ಕನಸೆಂದು ಕರೆಯಲು ಬಯಸಬಹುದು. ನಿದ್ದೆಯನ್ನು ಕನಸೆಂದೋ, ಕನಸನ್ನು ನಿದ್ದೆಯೆಂದೋ ಅಥವಾ ಬದುಕನ್ನೇ ಕನಸು ಎಂದೋ  ಕಲ್ಪಿಸಲು ಪ್ರೇರೇಪಿಸಬಹುದು. ಕನಸೇ ಬದುಕಾಗುವುದರ ಬಗ್ಗೆ ಎಚ್ಚರಿಸಬಹುದು. ಕನಸಿನ ರಮ್ಯತೆಯನ್ನು ನಿಗೂಢತೆಯನ್ನು ಅಲ್ಲದಿದ್ದರೆ  ವಿಹ್ವಲತೆಯನ್ನೂ ಶಬ್ದಚಿತ್ರವಾಗಿ ವರ್ಣಿಸಬಹುದು. ಒಳ್ಳೆಯ ಕನಸು, ಕೆಟ್ಟ ಕನಸು ಎಂದು ಕರೆಯಲು ಅಲ್ಲದಿದ್ದರೆ ಮರೆಯಲು ಹೇಳಿಕೊಟ್ಟಿರಬಹುದು. ಅದು ಕಾವ್ಯದ ದೃಷ್ಟಿ, ಕವಿ ಕಲಾವಿದರ ಕಲ್ಪನೆಯ ಸೃಷ್ಟಿ.  ಆದರೆ ಕಲಾಂರು ಹೇಳಿದ್ದು  ಕನಸಿನ ಬೆನ್ನು ಹಿಡಿದವರು ನಿದ್ರಿಸುವುದಿಲ್ಲ ಎಂದು. ಇದು ನಿದ್ದೆ ಮಾಡಗೊಡದ ಒಂದು ಬಗೆಯ ಕನಸು. ಗುರಿ  ತಲುಪುವ ತನಕ ವಿರಮಿಸಲಾಗದ ವ್ಯಸನ, ನಿದ್ರೆಯೊಳಗಿನ ಎಚ್ಚರ.

ಒಬ್ಬರ ನಿದ್ರೆಯೊಳಗಿನ ಎಚ್ಚರ ಆಸುಪಾಸಿನಲ್ಲಿರುವವರ ನಿದ್ದೆಗೆಡಿಸುವುದೂ ಇದೆ; ರಾತ್ರಿ ಮನೆಯನ್ನು ಮುರಿಯುವ ಕಳ್ಳರಿಗೂ ಒಂದು ಎಚ್ಚರ ಇರುತ್ತದೆ.  ಮಲಗಬೇಕಾದವರು ಮಲಗುವುದನ್ನೇ ಕಾದು ತಮಗೆ ಬೇಕಾದ ಕೆಲಸ ಮುಗಿಸಿಕೊಳ್ಳುವ ಎಚ್ಚರ ಅದು. ಅಪರಾಧ ಜಗತ್ತಿನಲ್ಲಿ ಇಂತಹ ಸಂಚಿನ ಎಚ್ಚರಗಳು ಸಾಮಾನ್ಯ. ಇನ್ನು ತಮ್ಮ ಮನೆಗೆ ಹಾಗಾಗಬಹುದೆನ್ನುವ ಊಹೆ ಇರುವವರಿಗೆ  ಬೀಳಬಹುದಾದ ಕನ್ನ  ಅಥವಾ ಸದ್ಯದಲ್ಲೇ ಎರಗಬಹುದಾದ ಆಪತ್ತು, ತಳಮಳವಾಗಿ ಆಂತರಿಕ ಎಚ್ಚರವನ್ನು ಹುಟ್ಟಿಸುವುದಿದೆ. ಇವಕ್ಕೆಲ್ಲ  ವ್ಯತಿರಿಕ್ತವಾಗಿ ಯಾರದೋ ನಿದ್ದೆಯೊಳಗಿನ ಎಚ್ಚರ ಇನ್ಯಾರದೋ ಸುಖನಿದ್ರೆಗೂ ಕಾರಣ ಆಗಬಹುದು. ನಿತ್ಯ ದಿನಚರಿಯಲ್ಲಿ ಬಳಕೆಯಾಗುವ ಉಪಯುಕ್ತವಾಗುವ ಎಷ್ಟೋ ವಿಷಯ ವಸ್ತುಗಳು ಗೊತ್ತಿರುವವರೋ ಗೊತ್ತಿಲ್ಲದವರೋ ನಿದ್ದೆಬಿಟ್ಟು ದುಡಿದು, ದಣಿದು ನೀಡಿದ ಕೊಡುಗೆಯಾಗಿರಬಹುದು. ತಾವು ನಿದ್ದೆ ಬಿಟ್ಟು ಸುತ್ತಮುತ್ತಲಿನವರ ಎಚ್ಚರ ಕಾಯುವವರು ಮನೆಮನೆಯಲ್ಲೂ ಇರುತ್ತಾರೆ. ಆ ಮನೆಗೆ ಬೇಕಾಗಿ ಬಹಳವಾಗಿ ದುಡಿದು ಹಿತ  ಕಾಯವವರು. ಇನ್ನು ಮನೆಯನ್ನು ಮೀರಿ ಊರು ಸಮಾಜಕ್ಕೆ ಕೊಡುಗೆ ನೀಡುವವರೂ ಇರುತ್ತಾರಲ್ಲ. ಬಹಳ ವಿಶೇಷವಾದನ್ನು ಸಾಧಿಸಿ ಪ್ರಸಿದ್ಧರಾದವರು  ಇತಿಹಾಸದಲ್ಲಿ ವರ್ತನಮಾನದಲ್ಲಿ ದಾಖಲಾಗುತ್ತಾರೆ. ಅವರು ಕಲಾಂರಂತಹ ವಿಜ್ಞಾನಿಗಳೂ ಇರಬಹುದು. ದೊಡ್ಡ ಜನಸಮುದಾಯಕ್ಕೋ   ಜಗತ್ತಿಗೋ ನೆರವಾಗುವ ಸಂಶೋಧಕರು ಅನ್ವೇಷಕರು ಇರಬಹುದು. ಸಾಹಿತಿ, ಕ್ರೀಡಾಪಟು, ಸಮಾಜಸೇವಕ, ಸೃಜನಶೀಲ ಕಲಾವಿದ ಹೀಗೆ. ಅವರು  ಕಣ್ಣಿಗೆ ಕಾಣದ ದೂರದ ಅನಾಮಿಕ ಸಾಧಕರು ಆಗಿರಬಹುದು. ಅಷ್ಟು ದೊಡ್ಡ ಲೋಕದ ಸುದ್ದಿ ಬೇಡ ಅಂತಾದರೆ ಹತ್ತಿರದಲ್ಲೇ ಸಣ್ಣ ಚಾಕರಿ ಸಣ್ಣ ಸೇವೆಯಲ್ಲಿ ತೊಡಗಿದ ಮೌನವಾಗಿರುವ ದನಿಯೇ ಇಲ್ಲದ ವಿನಮ್ರ ಸೇವಕರೂ ಇರಬಹುದು. ಅವರು ಯಾರೇ ಇದ್ದರೂ ಅವರೆಲ್ಲರಿಗೂ ಸಾಮಾನ್ಯವಾದುದು ನಿದ್ದೆಯೊಳಗಿನ ಎಚ್ಚರ.

ಕತ್ತಲಲ್ಲಿ ಕಂಡ ಕನಸು ಬೆಳಕು ನೀಡಿದ ಸಣ್ಣ ಮಟ್ಟದ, ದೊಡ್ಡ ಪ್ರಮಾಣದ ಉದಾಹರಣೆಗಳು ಎಷ್ಟಿಲ್ಲ?  ಇವರೆನ್ನೆಲ್ಲ ನಾನು ಕರೆಯುವುದು ರಾತ್ರಿ ಪಾಳಿಯ ಚಾಲಕರೆಂದು; ತಾವು ಎಚ್ಚರವಿದ್ದು ಪ್ರಯಾಣಿಕರಿಗೆ ನಿದ್ರೆಯ ಜೊಂಪು ಹತ್ತಿಸಿ, ಅವರು ಕಣ್ಣು ಬಿಡುವಾಗ ಇನ್ನೊಂದು ಊರಿಗೆ ತಲುಪಿಸುವವರೆಂದು. ಯಾತ್ರಿಕರನ್ನು ಗುರಿ ತಲುಪಿಸುವುದರಲ್ಲೇ ತೃಪ್ತಿ ಕಂಡುಕೊಳ್ಳುವವವರು. ನಾವೆಲ್ಲರೂ ಇಂತಹ ರಾತ್ರಿ ಪಾಳಿಯ ಚಾಲಕರ ಸಹವಾಸ ಅನುಭವ ಪಡೆದವರೇ.

ಭಾವಾರ್ಥದಲ್ಲೂ, ಶಬ್ದಾರ್ಥದಲ್ಲೂ ರಾತ್ರಿ ಪ್ರಯಾಣದ ಚಾಲಕನೇ ಆದವನೊಡನಿನ  ನನ್ನ ಒಂದು ಅನುಭವ  ಇಂಜಿನೀಯರಿಂಗ್ ಓದಿನ  ದಿನಗಳದ್ದು. ಪದವಿಯ  ಕೊನೆಯ ವರ್ಷದಲ್ಲಿದ್ದಾಗ, ಉಷ್ಣ ವಿದ್ಯುತ್ ಸ್ಥಾವರದ ಶೈಕ್ಷಣಿಕ ಭೇಟಿಗೆ ನಾವು ಹೊರಟಿದ್ದೆವು. ನಾವೆಂದರೇನು ,ಆ ಕಾಲದ ಕರ್ನಾಟಕದ ಯಂತ್ರಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಪದವಿ ಪೂರ್ಣಗೊಳ್ಳುವುದೇ ರಾಯಚೂರಿನ ಬಿಸಿಲಿನ ಝಳದಲ್ಲಿ ಒಂದೆರಡು ದಿನಗಳ ಕಾಲ ಬೆಂದು ಬೆವರಿ ನೀರಾದ ಮೇಲೆ. ನಮ್ಮ ಮಟ್ಟಿಗೆ ಆಗ ರಾಯಚೂರಿಗೆ ಪ್ರವೇಶವೇ ಉಷ್ಣ ಸ್ಥಾವರವನ್ನು ಹೊಕ್ಕಂತೆ ಇತ್ತು. ಬೆಂಗಳೂರಿನಿಂದ ರಾಯಚೂರಿನವರೆಗಿನದು ಇಡೀರಾತ್ರಿಯ ಪ್ರಯಾಣ.  ಮೂರು ಖಾಸಗಿ ಬಸ್ಸುಗಳು ಕೇಕೆ ಹಾಕುವ ವಿದ್ಯಾರ್ಥಿಗಳ ಜೊತೆಗೆ ಪ್ರಾಧ್ಯಾಪಕರುನ್ನು  ತುಂಬಿಸಿಕೊಂಡು ಹೊರಟಿದ್ದವು. ಒಂದರ ಹಿಂದೆ ಒಂದು. ಒಂದು ಇನ್ನೊಂದನ್ನು ಹಿಂದೆ ಹಾಕುವುದು , ಮುಂದೆ ಸಾಗುವ ಬಸ್ಸಿನಿಂದ ಹರ್ಷೋದ್ಗಾರ ಚಪ್ಪಾಳೆ ಶಿಳ್ಳೆಗಳು ರಸ್ತೆಯನ್ನು ತುಂಬುವುದು, ಕತ್ತಲೆಯನ್ನು ಅನಾಗರಿಕವಾಗಿ ಬಡಿದು ಎಬ್ಬಿಸುವುದು ನಡೆಯುತ್ತಲೇ ಇತ್ತು. ಈ ನಡುವೆ ನಮ್ಮ ಬಸ್ಸಿನ ಚಾಲಕನಿಗೆ ತೀರ ನಿದ್ದೆ ಬರುತ್ತಿತ್ತು. ಬಸ್ಸು ಪ್ರಯಾಣದಲ್ಲಿ ನನ್ನ ಸೀಟು ಎಲ್ಲೇ ಇದ್ದರೂ ರಾತ್ರಿ ಚಾಲಕನ ಕ್ಯಾಬಿನ್ ಒಳಗೆ ಹೋಗಿ ಹತ್ತಿರ ಕುಳಿತು ಮಾತನಾಡುವುದು ನನಗೆ ಇಷ್ಟ. ಇಂಜಿನ್ನಿನ ಕರ್ಕಶ ಸದ್ದು, ಮುಖಕ್ಕೆ ಬಡಿಯುವ ತಂಪು ಗಾಳಿ, ಗಿಯರ್ ಲಿವರ್ ನ ಅಲುಗಾಟ, ಎದುರಿನಿಂದ ಬರುವ ನಾಲ್ಕಾರು ಪ್ರಖರ ಕಣ್ಣುಗಳ ವಾಹನಗಳು, ನಡುವೆ ಹಿಂದೆಂದೂ ಭೇಟಿಯಾಗಿರದ ಮುಂದೆಯೂ ಆಗದ ನನ್ನ ಚಾಲಕನ ನಡುವಿನ ಸುಪ್ರೇಮ ಸಲ್ಲಾಪ. ಈ ಕೆಲಸ ಯಾವಾಗಿನಿಂದ ಎಂದು ಆರಂಭವಾಗುವ ಮಾತುಕತೆ, ಇವತ್ತಿನ  ರೂಟ್, ಇದೆ ಹಾದಿಯಲ್ಲಿ ಹಿಂದಿನ ಅನುಭವ, ಸ್ವಲ್ಪದರಲ್ಲಿ ತಪ್ಪಿದ ಅಪಘಾತ, ಸಾವಿನ ದವಡೆಯಿಂದ ಪಾರಾದ ಬಸ್ಸು, ಅವನನ್ನು ಗೋಳುಹೊಯ್ದ ವಿಚಿತ್ರ ಪ್ರಯಾಣಿಕರು ಹೀಗೆ ಮುಂದೆ ಸಾಗಿ, ಹೆಂಡತಿ-ಮಕ್ಕಳು ಸಂಸಾರ ಶಾಲೆಗಳನ್ನು ಸುತ್ತಿ ಬಳಸಿ ಸಾಗುತ್ತಿದ್ದವು, ಬಸ್ಸಿನ ಜೊತೆಜೊತೆಗೆ.  ಅಂದೂ ಚಾಲಕನ ಜೊತೆ ಉತ್ಸಾಹದಲ್ಲಿ ಮಾತುಕತೆ ಶುರು ಆಗಿದ್ದರೂ ನಮ್ಮ ಚಾಲಕನಿಗೆ  ವಿಪರೀತ ನಿದ್ದೆ ಬರುತ್ತಿತ್ತು.  ಆತ ಮಧ್ಯಮಧ್ಯ ಸೀಟಿನಿಂದ ಎದ್ದು ನಿಂತು ಬಸ್ಸು ಓಡಿಸುತ್ತಿದ್ದ.  ಹಿಂದಿನ ಆರೇಳು ದಿವಸಗಳಿಂದ ಹಗಲು ರಾತ್ರಿ ಸ್ವಲ್ಪವೂ ನಿದ್ರಿಸದೆ ಕೆಲಸ ಮಾಡಿದ್ದನಂತೆ. ನಮ್ಮ ತಿರುಗಾಟಕ್ಕೆ ಚಾಲಕನಾಗಿ ಬಂದಾಗ , ವಾಹನ ಚಲಾಯಿಸುತ್ತಿರುವಾಗ ತನ್ನ ಸೀಟಿನಲ್ಲಿ ಕುಳಿತರೆ ಸಾಕು, ನಿದ್ರಿಸುವ ಸ್ಥಿತಿಯಲ್ಲಿದ್ದ. ಬಿಡುವು ಇಲ್ಲದೆ ಕೆಲಸಕ್ಕೆ ಮಾಡಲು ಮಾಲಿಕರ ಒತ್ತಡ ಕಾರಣ ಇರಬಹುದು, ಬೇರೆ ಡ್ರೈವರ್ ಇಲ್ಲದಿರಬಹುದು, ಅಥವಾ ರಜೆ ಮಾಡಿ ಸಂಬಳ ಕಳೆದುಕೊಳ್ಳುವ ಸ್ಥಿತಿಯೂ ಆತನದಲ್ಲದಿರಬಹುದು.  ಇಷ್ಟು ತಿಳಿದ ಮೇಲೆ ನಾವು ಕೆಲವರು ಆತನ ಪಕ್ಕದಲ್ಲೇ ಬಂದು ಕೂತು ಮಾತನಾಡುತ್ತಿದ್ದೆವು. ಅವನದು ನಿದ್ದೆ ತಪ್ಪಿಸಿಕೊಂಡು ವಾಹನ ಓಡಿಸುವ ಪಾಳಿಯಾದರೆ, ನಮ್ಮದು ಅಂದಿನ ಮಟ್ಟಿಗೆ ಅವನನ್ನು ಎಚ್ಚರವಿಡುವ ಸರದಿ. ಇದೂ ಸಾಕಾಗುವುದಿಲ್ಲ ಎನಿಸಿದಾಗ ಮಧ್ಯಮಧ್ಯ ಬಸ್ಸು ನಿಲ್ಲಿಸಲು ಹೇಳಿ, ಅಲ್ಪ ಸ್ವಲ್ಪ ನಿದ್ರಿಸುವ ಅವಕಾಶ ನೀಡುತ್ತಾ ಪ್ರಯಾಣ ಬೆಳೆಸಿದವು. ಆದರೂ ನಿಂತುಕೊಂಡು ಬಸ್ಸು ಚಲಾಯಿಸುವ ಆತನ ಮುಖ ವ್ಯಗ್ರವಾಗುತ್ತಿತ್ತು, ಊದಿಕೊಂಡ ಕಣ್ಣು ಕೆಂಪಾಗಿ, ಕ್ಷಣಕ್ಕಾದರೂ ರೆಪ್ಪೆ ಮುಚ್ಚುತ್ತಿತ್ತು. ಪ್ರತಿ ಬಾರಿ ಚಾಲಕನ ಕಣ್ಣಿಗೆ ಅರೆಕ್ಷಣದ ಜೊಂಪು  ಹತ್ತಿದಾಗಲೂ ಕೈಯಲ್ಲಿ ಹಿಡಿದ ಸ್ಟೀಯರಿಂಗ್ ಚಕ್ರ ಗರಕ್ಕನೆ ಒಂದು ದಿಕ್ಕಿಗೆ ತಿರುಗುತ್ತಿತ್ತು, ಹಠಾತ್ ಬಸ್ಸು ಲಯ ತಪ್ಪಿದಂತೆ ಅನಿಸುತ್ತಿತ್ತು. ದಾರಿಯುದ್ದಕ್ಕೂ ಚಾಲಕ ಕಣ್ಣು ರೆಪ್ಪೆಗಳನ್ನು ತೆರೆದಿಡಲು ಹೋರಾಡುತ್ತ , ಎಚ್ಚರದಲ್ಲೇ ನಿದ್ರಿಸುತ್ತ ನಮ್ಮನ್ನು ರಾಯಚೂರು ತಲುಪಿಸಿದ್ದ. ಆ ಚಾಲಕನ ಬದುಕಿನ ಅತ್ಯಂತ ದೀರ್ಘ ರಾತ್ರಿ ಅದಾಗಿದ್ದಿರಬೇಕು. ಮತ್ತೆ ಅಂದು ಆ ಬಸ್ಸಿನಲ್ಲಿ ಪ್ರಯಾಣ ಮಾಡಿದವರ ಮಟ್ಟಿಗೆ ಜೀವನಪೂರ್ತಿ ನೆನಪಿಡುವ ಅತ್ಯಂತ ಕತ್ತಲೆ ನಿಶೆಯ ಪ್ರಯಾಣ.

ಇನ್ನು ನನ್ನ ಹುಟ್ಟೂರಿನ ಆಪ್ತ ಸ್ನೇಹಿತ, ಪ್ರಾಥಮಿಕ ಶಾಲೆಯ ಸಹಪಾಠಿಯೂ ಆಗಿದ್ದವನು ಈಗಲೂ ರಾತ್ರಿ ಪಾಳಿಯ ಬಸ್ ಚಾಲಕ. ವಿದ್ಯಾಭ್ಯಾಸ ಬೇಗ ನಿಲ್ಲಿಸಿ ಅವನ ಕನಸಿನ ಉದ್ಯೋಗವಾದ ಡ್ರೈವಿಂಗ್ ಅರಸಿ ಇನ್ನೊಂದು ಊರಿಗೆ ಹೋದವನು ಸ್ಥಳೀಯ ವ್ಯಾನ್ ಗಳಲ್ಲಿ ಕ್ಲೀನರ್ ಆಗಿ ನೌಕರಿ ಶುರು ಮಾಡಿ, ನೈಟ್ ಬಸ್ ಗಳ ಚಾಲಕನಾಗಿ ಬೆಳೆದು ತನ್ನ ಕನಸನ್ನು ಪೂರೈಸಿಕೊಂಡಿದ್ದ.  ನಾವಿಬ್ಬರು ಭೇಟಿಯಾದಾಗಲೆಲ್ಲ ರಾತ್ರಿ ಪ್ರಯಾಣದ ಲೋಕದ ಬಗ್ಗೆ ಚರ್ಚೆ ಆಗುತ್ತದೆ. ಎಲ್ಲವೂ ಸ್ಪಷ್ಟ ಎನಿಸುವ ಹಗಲಿನ  ಪ್ರಯಾಣವೇ ಸುಖ ಇರಬೇಕಲ್ಲ  ಎಂದು ನಾನು ಹೇಳಿದರೆ, ರಾತ್ರಿ ಪಾಳಿಯ ಚಾಲನೆಯಷ್ಟು ಸಲೀಸು ಇನ್ನೊಂದಿಲ್ಲ ಎಂದು ಆತ ವಾದಿಸುತ್ತಾನೆ. ಹಗಲಿನಲ್ಲಾದರೆ ಎಂತಹ  ಹೆದ್ದಾರಿ ರಸ್ತೆಯನ್ನೂ ವಾಚಾಮಗೋಚರವಾಗಿ  ಬಳಸಿ ಹಾಳುಗೆಡಹುವವರು, ಉದ್ದ ಸಾಗಬೇಕಾದಲ್ಲಿ ಅಡ್ಡ ಬರುವವರು, ಅಶಿಸ್ತಿನ ಮನುಷ್ಯರು  ಅನಧಿಕೃತ ಪ್ರವೇಶ ಮಾಡುವ ಪ್ರಾಣಿಗಳು ಎಲ್ಲವೂ ಸೇರಿದ ಗೋಜಲು ಗೊಂದಲವಾಗುತ್ತದೆ. ನಡುರಾತ್ರಿಯ ಕಗ್ಗತ್ತಲೆಯ ಹೊತ್ತಾದರೆ ಹಗಲಿನಲ್ಲಿ ರಸ್ತೆ ಯಾನವನ್ನು ಧ್ವಂಸ ಮಾಡಿಹೋದ ಆ ಎಲ್ಲರೂ ಮನೆ ಸೇರಿ ಸ್ವಚ್ಛಂದ ಮಲಗಿರುತ್ತಾರೆ.  ರಸ್ತೆಯನ್ನು ಬೆಳಗಿ ಹೊಳೆಯಿಸುವ  ಚಂದ್ರ, ಮಿಂಚಿ ಮಿನುಗುವ ನಕ್ಷತ್ರಗಳು ಅಲ್ಲದಿದ್ದರೆ ಇನ್ನಷ್ಟು ಮತ್ತಷ್ಟು ರಾತ್ರಿ ಪಾಳಿಯ ಬಸ್ಸು-ಲಾರಿ, ಮತ್ತೆ ಅವುಗಳ ಚಾಲಕರಿಗೆ ಬಿಟ್ಟುಕೊಟ್ಟಿರುತ್ತಾರೆ. ಅವನ ಪ್ರಕಾರ ರಾತ್ರಿಯ ಎಚ್ಚರವೂ ಒಂದು ಕಲೆ ಮತ್ತು ಸಿದ್ಧಿ. ನಿತ್ಯ ರಾತ್ರಿ ನಿದ್ದೆ ಬಿಡಬೇಕಾದರೆ ಹಗಲಿನಲ್ಲಿ ನಿದ್ದೆ ಹಿಡಿಯಬೇಕು. ಪ್ರಕೃತಿಗೆ ವಿರುದ್ಧವಾಗಿ ಹಗಲನ್ನು ರಾತ್ರಿ ಮಾಡಬೇಕು, ರಾತ್ರಿಯನ್ನು ಹಗಲಾಗಿಸಬೇಕು. ಸೂರ್ಯ ಮೂಡುವಾಗ ಕಣ್ಮುಚ್ಚಿ ಮುಸುಕು ಎಳೆಯಬೇಕು, ಚಂದ್ರ ಮೂಡುವ ಹೊತ್ತಿಗೆ ಹಲ್ಲುಜ್ಜಿ ಊಟ ಮಾಡಿ ಸ್ಟೀಯರಿಂಗ್ ಹಿಡಿದು ಏಕಾಗ್ರತೆಯಲ್ಲಿ ಕೂರಬೇಕು. ನಡುವೆ ಒಂದೆರಡು ಕಡೆ ಖಡಕ್ ಚಹಾ ಕುಡಿಯಬೇಕು. ಎದುರಿನಿಂದ ಕೋರೈಸುವ ಬಣ್ಣಬಣ್ಣದ ಬೆಳಕು ಬೀರುತ್ತಾ ವಾಹನ ಚಲಾಯಿಸುವವರನ್ನು ಸುಧಾರಿಸಿಕೊಂಡು ಮುಂದೆ ಸಾಗಬೇಕು. ರಾತ್ರಿಯ ಖಾಲಿ ರಸ್ತೆಯಲ್ಲೂ ಅನಾವಶ್ಯಕ ಹಾರ್ನ್ ಒತ್ತುವವರನ್ನು ನಿರ್ಲಕ್ಷಿಸಬೇಕು, ಮಿತಿಮೀರಿದ ವೇಗದಲ್ಲಿ ನುಗ್ಗುವ ಸಣ್ಣ ವಾಹನಗಳನ್ನು ಆಧರಿಸಿ ಪೊರೆಯಬೇಕು. ರಸ್ತೆ ಹಂಪುಗಳನ್ನು ನಿಧಾನಕ್ಕೆ ನಾಲಿಗೆ ಕಚ್ಚಿಕೊಂಡು ಹತ್ತಿ ಇಳಿಸಬೇಕು. ನಿದ್ದೆಯ ನಶೆಯಲ್ಲಿ  ತೇಲುತ್ತಿರುವ ಎಲ್ಲ ಪ್ರಯಾಣಿಕರ ತೊಟ್ಟಿಲು ತೂಗುತ್ತ, ತಲುಪುವಲ್ಲಿಗೆ ತಲುಪಿಸಿ, ಗಾಡಿ ನಿಲ್ಲಿಸಿ ಪ್ರಯಾಣಿಕರು ಒಬ್ಬೊಬ್ಬರಾಗಿ ಸರಂಜಾಮು ಸಮೇತ ಧನ್ಯವಾದವನ್ನೂ ಹೇಳದೇ ಕೆಲವೊಮ್ಮೆ ಕಾರಣಾಂತರದಿಂದ ತಡವಾಗಿದ್ದಕ್ಕೆ ಅಸಮಾಧಾನದಿಂದ ಇಳಿದು ಹೋದ ಮೇಲೆ, ಚಾವಿ ತೆಗೆದು  ಬಲಬದಿಯ ಅರ್ಧ ಬಾಗಿಲನ್ನು ದೂಡಿ ಮಣ್ಣು ನೆಲದ ಮೇಲೆ ಧೊಪ್ ಎಂದು ಹಾರಬೇಕು. ಹಣೆಯ ಮೇಲಿನ ಬೆವರು ಒರೆಸಬೇಕು. ಆದಷ್ಟು ಬೇಗ ತಿಂಡಿ ತಿಂದು, ಸರಿಯಾದ ಜಾಗ ಸಿಗದಿದ್ದರೆ, ಬಸ್ಸಿನ ಸೀಟು, ಯಾವುದೊ ಪೆಟ್ರೋಲ್ ಪಂಪಿನ ಚಾವಡಿ ನೋಡಿ ಧೂಳು ಹೊಡೆದು ನಿದ್ದೆ ಮಾಡಬೇಕು. ಮತ್ತೆ ಸಂಜೆಯ ಪಾಳಿಗೆ ತಯಾರಾಗಬೇಕು. ಇಂತಹ ಹಲವು ವರ್ಷಗಳ  ರಾತ್ರಿಚರಿಯನ್ನು, ತನ್ನ ಮಕ್ಕಳು ಶಿಕ್ಷಣ ಮುಗಿಸಿ ದುಡಿಯಲು ಶುರು ಮಾಡಿದ ಮೇಲೆ, ಮನೆ ಸಾಲ ತೀರಿದ ನಂತರ ಒಂದು ದಿನ ಪೂರ್ಣ ನಿಲ್ಲಿಸಿ ತಾನೂ ಚಾಲಕ ವೃತ್ತಿ ಬಿಟ್ಟು ನೆಮ್ಮದಿಯ ನಿದ್ದೆ ಮಾಡಬೇಕು.

 ರಾತ್ರಿ ಪ್ರಯಾಣದ ವಾಹನಗಳ ಚಾಲಕರಿಂದ ಹಿಡಿದು ನಿದ್ದೆ ಮಾಡಗೊಡದ ದೊಡ್ಡ ಕನಸಿನ ಹಿಂದೆ ಹೊರಟವರು ಕೊಟ್ಟಕೊನೆಗೆ ಅರಸುವುದು  ಒಂದು ನಿರಾಳ ನಿದ್ದೆಯನ್ನೇ ಇರಬಹುದು. ಅನಿವಾರ್ಯ ದುಡಿಮೆ, ಯಶಸ್ಸಿನ ಹಸಿವು, ಮಹತ್ವಾಕಾಂಕ್ಷೆಗಳು ಒಂದಕ್ಕಿಂತ ಒಂದು ಭಿನ್ನವಾದರೂ ಬೇರೆ ಬೇರೆ ದಿಕ್ಕಿನಿಂದ ಒಂದು ಸಂಪೂರ್ಣ ಸಂತೃಪ್ತ ನಿದ್ದೆಯ ಹುಡುಕಾಟದಲ್ಲಿರಬಹುದು. ನಿದ್ದೆಯ ಎಚ್ಚರವೂ ಒಂದು ಆತ್ಯಂತಿಕ ಪ್ರಶಾಂತ ವಿಶ್ರಾಮದ ಅನ್ವೇಷಣೆಯಲ್ಲಿರಬಹುದು. ಅಂತಹ ಒಂದು ಹುಡುಕಾಟದ ಕತೆ ಅಲೆಕ್ಸಾಂಡರ್ ಚಕ್ರವರ್ತಿಯ ಬಗೆಗೂ ಇದೆ.

ಗ್ರೀಕ್ ದೊರೆ ಅಲೆಕ್ಸಾಂಡರ್  ದಂಡಯಾತ್ರೆಯನ್ನು ಮಾಡುತ್ತ , ಸಾಮ್ರಾಜ್ಯವನ್ನು ವಿಸ್ತರಿಸುತ್ತ ಇಂದಿನ ಭಾರತದ ಅಂದಿನ  ಭೂಪ್ರದೇಶಕ್ಕೂ ಬಂದಿದ್ದನಲ್ಲ.  ಹಾಗೆ ಅಲ್ಲಿ  ಸುತ್ತುತ್ತಿರುಗುವಾಗ , ಮರದ ನೆರಳಿನಲ್ಲಿ ಸೊಂಪಾಗಿ ಮಲಗಿದ್ದ ಸಾಧುವೊಬ್ಬನನ್ನು ಕಂಡನಂತೆ . ಕುಚೆಷ್ಟೆಯೋ , ಕುತೂಹಲವೋ ಎಬ್ಬಿಸಿ ಮಾತಿಗಿಳಿದನಂತೆ .
“ಈ ಯುದ್ಧಗಳಿಂದ ಏನು ಸಾಧಿಸುವೆ ?” ಎಂದು ಸಾಧು ಕೇಳಿದನಂತೆ
“ಒಂದೊಂದೆ ರಾಜ್ಯವನ್ನು , ರಾಜರನ್ನು ಗೆದ್ದು , ಎಲ್ಲದಕ್ಕೂ ನಾನೆ ಅರಸ , ಜಗತ್ತಿಗೆ ಚಕ್ರವರ್ತಿ ಎನಿಸಿಕೊಳ್ಳುತ್ತೇನೆ ” ಎಂದನಂತೆ ಅಲೆಕ್ಸಾಂಡರ್.
“ಚಕ್ರವರ್ತಿ ಎನಿಸಿಕೊಂಡ ನಂತರ ಏನು ಮಾಡುವೆ? “
“ಎಲ್ಲರನ್ನು ಎಲ್ಲವನ್ನು ಗೆದ್ದ ನಂತರ ಸುಖವಾಗಿ ನಿದ್ರಿಸುತ್ತೇನೆ” ಎಂದನಂತೆ  ಅಲೆಕ್ಸಾಂಡರ್.
ಆಗ ಸಾಧು ನಗುತ್ತ “ನಾನದನ್ನು ಈಗಾಗಲೇ ಮಾಡುತ್ತಿದ್ದೇನೆ , ಯಾರನ್ನೂ ಕೊಲ್ಲದೆ ಗೆಲ್ಲದೆ ” ಎಂದನಂತೆ.

ಸಾಧುವೊಬ್ಬನಿಗೆ ಸರಳ ಬದುಕಿನಲ್ಲಿ ಸುಲಭವಾಗಿ ದಕ್ಕಿದೆ ಎಂದೆನಿಸುವ ನಿದ್ರೆ, ಅಲೆಕ್ಸಾಂಡರನಿಗೆ ದಶಕದ ಕಾಲ ಕತ್ತಿಯನ್ನು ಝಳಪಿಸುತ್ತ , ಸಾವಿರಾರು ಮೈಲು ದೂರ ಕುದುರೆಗಳನ್ನು ಕಾಲಾಳುಗಳನ್ನು ದಣಿಸಿ, ರಕ್ತ ಕಣ್ಣೀರುಗಳ ಕಾಲುವೆ ಹರಿಸಿ, ನೂರಾರು ರಾಜರನ್ನು ಮಣಿಸುವುದರಲ್ಲಿ ಸಿಕ್ಕಿತ್ತೋ ಇಲ್ಲವೊ? ಗೊತ್ತಿಲ್ಲ. ತಾನು ಬಯಸಿದಂತೆ ಇಡೀ ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗದ ಕಾರಣ , ಆತನ ಕನಸಿನ ನಿದ್ರೆ ಅವನಿಗೆ ದೊರಕದೇ ಹೋಗಿರಬಹುದು; ಸಾಧು ಹೇಳಿದ ಅರ್ಥದಲ್ಲಿ ನಿರಾಳವಾದ ನಿದ್ರೆಯೇ ಬದುಕಿನ ಸರ್ವಸ್ವ ಎಂದು ನಂಬಿದರೆ ಅಲೆಕ್ಸಾಂಡರನಿಗೆ ತಾನೆಷ್ಟು  ದೌರ್ಭಾಗ್ಯವಂತ ಎಂದೂ ಅನಿಸಿರಬಹುದು. ಈ ಘಟನೆ ಕತೆಯೊ ಕಲ್ಪನೆಯೊ ಅಥವಾ ಅಲೆಕ್ಸಾಂಡರನ ಸ್ವಗತವೊ ಇರಬಹುದು. ಅಥವಾ ತೀವ್ರ ಮಹತ್ವಾಕಾಂಕ್ಷೆಯನ್ನು ವಿಮರ್ಶೆ ಮಾಡುವ ಒಂದು ತಾತ್ವಿಕ ಪ್ರಜ್ಞೆಯೂ ಇರಬಹುದು.

ನಿದ್ರೆಯ ಎಚ್ಚರದ ಬಗ್ಗೆ ನುಡಿದವರು, ನೆಮ್ಮದಿ ಸಾರ್ಥಕ್ಯ ಯಶಸ್ಸುಗಳನ್ನು ವಿಶಿಷ್ಟವಾಗಿ ವ್ಯಾಖ್ಯಾನಿಸಿ ಜಿಜ್ಞಾಸೆ ಹುಟ್ಟಿಸಿದವರು ಅಲೆಕ್ಸಾಂಡರನ ಕಾಲದ ಮೊದಲೂ ಆಮೇಲೆಯೂ ಸಿಗುತ್ತಾರೆ. ತಮ್ಮೊಳಗಿನ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ, ಹೊರಗಿನ ಉತ್ತರಗಳನ್ನು ಪ್ರಶ್ನಿಸುತ್ತ ಬದುಕಿದ ಬಾಳಿದ ಬುದ್ಧ, ಬಸವಣ್ಣ, ಗಾಂಧಿ ಮತ್ತೆ ಇನ್ನೂ ಅನೇಕರು ಹೀಗೆ ಎಚ್ಚರದಲ್ಲೇ ನಿದ್ರಿಸಿದವರ ಸಾಲಿಗೆ ಸೇರಿದವರು. ಮತ್ತೆ ನಿದ್ದೆಯೊಳಗಿನ ಜಾಗೃತಿಯಿಂದಲೇ  ಒಂದು ಸಾರ್ಥಕ ವಿರಾಮದ  ಹುಡುಕಾಟದಲ್ಲಿದ್ದವರು. ರಾತ್ರಿಯಿಡೀ ಕತ್ತಲೊಡನೆ ತರ್ಕಿಸುತ್ತಾ ನಿದ್ರೆಗೆಡುತ್ತ ಪ್ರಯಾಣಿಕರನ್ನು ಹೊಸ ನಿಲ್ದಾಣಕ್ಕೆ ತಲುಪಿಸುವ ರಾತ್ರಿ ಪಾಳಿಯ ಚಾಲಕರು.

  • ಯೋಗಿಂದ್ರ ಮರವಂತೆ

’ಲಂಡನ್ ಡೈರಿ’: ವೈದೃಶ್ಯಗಳ ನಡುವಿನ ಬೆರಗುಗಳು’ ಯೋಗೀಂದ್ರ ಮರವಂತೆಯವರ ಪುಸ್ತಕದ ವಿಮರ್ಶೆ – ಡಾ ಜಿ ಎಸ್ ಶಿವಪ್ರಸಾದ್

ಬ್ರಿಸ್ಟಲ್ ಏರ್ ಬಸ್ ಸಂಸ್ಥೆಯಲ್ಲಿ ವಿಮಾನ ಶಾಸ್ತ್ರ ತಂತ್ರಜ್ಞರಾದ ಯೋಗಿಂದ್ರ ಮರವಂತೆ ಅನಿವಾಸಿ ಕನ್ನಡಿಗರಿಗೆ ಚಿರಪರಿಚಿತರು. ಹಲವಾರು ವರ್ಷಗಳಿಂದ ದಿನಪತ್ರಿಕೆಗಳಿಗೆ ಮತ್ತು ಅಂತರ್ಜಾಲ ತಾಣಗಳಿಗೆ ಅಂಕಣ ಬರೆಯುತ್ತ,  ಆಗೊಮ್ಮೆ ಈಗೊಮ್ಮೆ ಅನಿವಾಸಿ ತಾಣದಲ್ಲೂ ಕೆಲವು ಪ್ರಬಂಧಗಳನ್ನು ಬರೆಯುತ್ತ ನಮಗೆಲ್ಲ ಚಿರಪರಿಚಿತರಾಗಿದ್ದಾರೆ. ಅವರ ಲೇಖನಗಳು ನಮ್ಮ ಸಮಕಾಲೀನ ಬದುಕಿನ ಹಲವಾರು ವಿಷಯಗಳಿಗೆ ಸಂಬಂಧಿಸಿದ್ದು ಅವರ ಸೃಜನಾತ್ಮಕ  ಬರಹಗಳು ಅನೇಕ ಚಿಂತನೆಗಳಿಗೆ ಅನುವು ಮಾಡಿಕೊಟ್ಟಿದೆ. ಲಂಡನ್ ಡೈರಿ ಅವರ ಮೊದಲನೇ ಕೃತಿ. ಇದಲ್ಲದೆ ಅವರು 'ಮುರಿದು ಬಿದ್ದ ಸೈಕಲ್ ಮತ್ತು ಹೂಲ ಹೂಪ್ಸ್ ಹುಡುಗಿ’,'ನನ್ನ ಕಿಟಕಿ' ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಒಂದೆರಡು ಸಾಕ್ಷ್ಯಚಿತ್ರವನ್ನೂ ನಿರ್ಮಿಸಿದ್ದಾರೆ. ಯೋಗಿಂದ್ರ ಮರವಂತೆ ಮತ್ತು ಇನ್ನೂ ಅನೇಕ ಅನಿವಾಸಿ ಕನ್ನಡಿಗರು ವಿದೇಶದಲ್ಲಿ ಕುಳಿತು ಉತ್ತಮವಾದ ಪುಸ್ತಕಗಳನ್ನು ಬರೆದಿದ್ದಾರೆ.  ಅವರ ಕೃತಿಗಳನ್ನು ಅನಿವಾಸಿ ಕನ್ನಡಿಗರು ಓದಬೇಕು ಮತ್ತು ಓದಿ ಅವರ ಅಭಿಪ್ರಾಯಗಳನ್ನು ದಾಖಲಿಸಿದರೆ ಲೇಖಕರಿಗೆ ಮುಂದಕ್ಕೆ ಬರೆಯಲು ಉತ್ತೇಜನ ದೊರೆಯುತ್ತದೆ ಎಂಬುದು ನನ್ನ ಅಭಿಪ್ರಾಯ. ಈ ಒಂದು ಹಿನ್ನೆಲೆಯಲ್ಲಿ ನಾನು ಯೋಗಿಂದ್ರ ಅವರ ಲಂಡನ್ ಡೈರಿ ಪುಸ್ತಕ ಪರಿಚಯದ ಪ್ರಯತ್ನ ಮಾಡಿದ್ದೇನೆ. ನನ್ನ ಒಂದು ಕಾದಂಬರಿ ಕೃತಿಯನ್ನು ಅನಿವಾಸಿ ಮಿತ್ರರು ಹಿಂದೆ ಓದಿ ಅದರ ವಿಮರ್ಶೆ ಒದಗಿಸಿದ್ದು ನನಗೆ ಓದುಗರ ದೃಷ್ಟಿಕೋನ ದೊರಕಿದಂತಾಯಿತು. ನನ್ನ ಸಾಮರ್ಥ್ಯಗಳ ಬಗ್ಗೆ ಒಂದು ಒಳನೋಟವೂ ದೊರಕಿತು. ಕನ್ನಡ ನೆಲದಿಂದ ದೂರವಿರುವ ನಮ್ಮಂಥ ಅನಿವಾಸಿ ಲೇಖಕರುಗಳು ಒಬ್ಬರು ಇನ್ನೊಬ್ಬರ ಕೃತಿಗಳನ್ನು ಓದಿ ವಿಚಾರ ವಿನಿಮಯ ಮಾಡಿಕೊಳ್ಳುವ ಅವಶ್ಯಕತೆ ನನಗೆ ಕಂಡಿದೆ. ಈ ಪ್ರಯತ್ನವನ್ನು ಮುಂದಕ್ಕೆ ನಡೆಸಿಕೊಡಲು ನಾನು ಪ್ರಯತ್ನಿಸುತ್ತೇನೆ.

ನಾವುಗಳು ಬರೆದ ಕನ್ನಡ ಪುಸ್ತಕಗಳು ಕರ್ನಾಟಕದಲ್ಲಿ ಪ್ರಕಟಗೊಂಡು ಅದನ್ನು ಇಂಗ್ಲೆಂಡಿನ ಕನ್ನಡ ಓದುಗರಿಗೆ ಒದಗಿಸುವುದು ಸ್ವಲ್ಪ ಕಷ್ಟದ ಕೆಲಸವೇ. ಪುಸ್ತಕದ ಬೆಲೆಗೆ ಸಾಗರದಾಚೆಗೆ ರವಾನಿಸುವ ಮತ್ತು ಅಂಚೆಯಲ್ಲಿ ವಿತರಿಸುವ ಬೆಲೆಯನ್ನು ಸೇರಿಸುವುದು ಅನಿವಾರ್ಯವಾಗುತ್ತದೆ. ಮುಂದಕ್ಕೆ ಯುಕೆ ಕನ್ನಡ ಬಳಗ ಮತ್ತು ಇತರ ಕನ್ನಡ ಸಂಘ ಸಮಾರಂಭದಲ್ಲಿ ಅನಿವಾಸಿ ಲೇಖಕರ ಪ್ರಕಟಿತ ಪುಸ್ತಕಗಳ ಬಗ್ಗೆ ಅರಿವು ಮೂಡಿಸಿ ಅದನ್ನು ಒಂದು ಕಡೆ ಮಾರಾಟ ಮಾಡುವ ಅವಕಾಶವನ್ನು ಈ ಸಂಘಗಳು ಕಲ್ಪಿಸಿ ಕೊಡಬೇಕಾಗಿದೆ. ಇದನ್ನು ಬರಿ ವಾಣಿಜ್ಯ ವಹಿವಾಟಾಗಿ ನೋಡದೆ ಕನ್ನಡ ಬೆಳೆಸುವ ಯತ್ನವೆಂದು ಪರಿಗಣಿಸಬೇಕು. ಅನಿವಾಸಿ ಲೇಖಕರು ತಾವು ಬರೆದ ಕೃತಿಗೆ ಅನಿವಾಸಿ ಓದುಗರ ಬೆಂಬಲವನ್ನು ನಿರೀಕ್ಷಿಸುವುದು ಸಹಜವೇ.  

 -ಸಂಪಾದಕ
ಯೋಗಿಂದ್ರ ಮರವಂತೆ ಅವರು ಅಂಕಣಕಾರರಾಗಿ ಉದಯವಾಣಿ, ಪ್ರಜಾವಾಣಿ, ಕೆಂಡ ಸಂಪಿಗೆ ಮುಂತಾದ ತಾಣಗಳಲ್ಲಿ ಬರೆದ ಪ್ರಬಂಧಗಳನ್ನು ಒಟ್ಟುಗೂಡಿಸಿ ‘ಲಂಡನ್ ಡೈರಿ’ (ಅನಿವಾಸಿಯ ಪುಟಗಳು) ಎಂಬ ಸಂಕಲನವನ್ನು ೨೦೧೯ರಲ್ಲಿ ಹೊರತಂದಿದ್ದು ಅದನ್ನು ಕರ್ನಾಟಕದ ಯಾಜಿ ಪ್ರಕಾಶನ ಪ್ರಕಟಿಸಿದೆ. ಈ ಪುಸ್ತಕವನ್ನು ಹಿಂದೆ ನಾನು ಕೊಂಡಿದ್ದು ಅದು ನನ್ನ ಇಂಡಿಯಾ ಪ್ರವಾಸದಲ್ಲಿ ಕಳೆದುಹೋಗಿ, ಇತ್ತೀಚಿಗೆ ಬೆಂಗಳೂರಿನ ನವಕರ್ನಾಟಕ ಪುಸ್ತಕ ಮಳಿಗೆಗೆ ಭೇಟಿ ನೀಡಿದಾಗ ಮತ್ತೆ ನನಗೆ ದಕ್ಕಿದೆ. ಇದೀಗ ಈ ಪುಸ್ತಕವನ್ನು ಓದಿ ಮುಗಿಸಿದ್ದೇನೆ. ಹಳೆಯ ಪುಸ್ತಕಕ್ಕೊಂದು ಹೊಸ ದೃಷ್ಟಿಕೋನವನ್ನು ಒದಗಿಸುವ ಪ್ರಯತ್ನ ನನ್ನದಾಗಿದೆ. "ಹಾಡು ಹಳೆಯದಾದರೇನು ಭಾವ ನವನವೀನ" ಎನ್ನುವ ಹಾಗೆ ಎಂದು ತಿಳಿಯಿರಿ. ಈ ಪುಸ್ತಕವನ್ನು ಎರಡೇ ಸಾಲುಗಳಲ್ಲಿ ಸಂಕ್ಷಿಪ್ತವಾಗಿ ಪರಿಚಯ ಮಾಡುವುದಾದರೆ  ಪುಸ್ತಕದ ಮೊದಲನೇ ಪುಟದಲ್ಲೇ ಲೇಖಕರೇ ತಿಳಿಸಿರುವಂತೆ; "ಮುಖಾಮುಖಿಗಳು ಹುಟ್ಟಿಸುವ ಬೆರಗು, ಕುತೂಹಲ, ತಳಮಳ, ವೈರುಧ್ಯಗಳ ನಡುವೆ ಅಲೆಯುತ್ತ ನೆನೆಯುತ್ತ ಕಾಲ ಘಟನೆಗಳಿಗೆ ಹೊಂದಿಸಿ ಮನಸ್ಸಿನಲ್ಲಿ ಅಕ್ಷರ ಪೋಣಿಸಿದರೆ, ಹಾಳೆಯ ಮೇಲೆ ಮೂಡಿಸಿದರೆ, ಮತ್ತು ಆ ಹಾಳೆಗಳನ್ನು ಪುಟಗಳಾಗಿ ಜೋಡಿಸಿದರೆ ಅದು ಲಂಡನ್ ಡೈರಿ". ಇದರಲ್ಲಿ ಒಂದು ಮುಖ ಇಂಗ್ಲೆಂಡ್, ಇನ್ನೊಂದು ಮುಖ ಭಾರತ. ಈ ಹೊತ್ತಿಗೆಗೆ ಬೆನ್ನುಡಿ ಬರೆದ ಖ್ಯಾತ ಲೇಖಕಿ ಪುಸ್ತಕದಲ್ಲಿನ ವೈವಿಧ್ಯತೆ ಮತ್ತು ಸೂಕ್ಷ್ಮ ವಿವರಗಳನ್ನು ಗಮನಿಸಿ ಯೋಗಿಂದ್ರ ಅವರಿಗೆ "ಕಾಣುವ ಕಣ್ಣುಗಳು" ಇವೆಯೆಂದು ಪ್ರಶಂಸಿಸಿದ್ದಾರೆ. ಇಂಗ್ಲೆಂಡಿನಲ್ಲಿ ವಾಸ ಮಾಡುತ್ತಿರುವ ಅನಿವಾಸಿಗಳಿಗೆ ಸಾಧಾರಣ ಎನಿಸುವ ದಿನ ನಿತ್ಯ ಬದುಕಿನ ಕ್ಷಣಗಳನ್ನು ಯೋಗಿಂದ್ರ ಅವರು ಗ್ರಹಿಸಿ ಆಳವಾಗಿ ಚಿಂತಿಸಿರುವುದರ ಬಗ್ಗೆ ಖ್ಯಾತ ಲೇಖಕ ಅಬ್ದುಲ್ ರಶೀದ್ ಅವರು ಬೆನ್ನುಡಿಯಲ್ಲಿ ಬರೆಯುತ್ತ “ಯೋಗಿಂದ್ರ ಅವರಿಗೆ ಪತ್ರಕರ್ತನ ಗುಣವಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಪುಸ್ತಕದ ಶೀರ್ಷಿಕೆ ‘ಲಂಡನ್ ಡೈರಿ’ ಎಂತಿದ್ದರೂ ಇದು ಲಂಡನ್ ನಗರವನ್ನೂ ದಾಟಿ ಇಂಗ್ಲೆಂಡಿನ ಬದುಕಿನ ಚಿತ್ರವಾಗಿದೆ. ಕರ್ನಾಟಕದ ಕನ್ನಡಿಗರು ಲಂಡನ್ ಮತ್ತು ಇಂಗ್ಲೆಂಡ್ ಎಂಬ ಹೆಸರಿನಲ್ಲಿ ನಿರ್ದಿಷ್ಟವಾದ ವ್ಯತಾಸವನ್ನು ಕಾಣದೆ ನಗರ ಮತ್ತು ದೇಶವನ್ನು ಒಂದೇ ಹೆಸರಿನಲ್ಲಿ ಸಂಬೋಧಿಸುವುದರಿಂದ ಈ ಶೀರ್ಷಿಕೆ ಇಂಗ್ಲೆಂಡನ್ನು ಕನ್ನಡಿಗರಿಗೆ ಪರಿಚಯಿಸುವ ದೃಷ್ಟಿಯಿಂದ ಸೂಕ್ತವಾಗಿದೆ. ಅಂದ ಹಾಗೆ ಈ ಹೊತ್ತಿಗೆಯ ಮುಖಪುಟವನ್ನು ಗಮನಿಸಿದರೆ ಇಲ್ಲಿ ಇರುವ ಲಂಡನ್ ಬಿಗ್ ಬೆನ್, ಜಿನುಗುತ್ತಿರುವ ಮಳೆ, ಮಬ್ಬು ಕವಿದ ಮೋಡಗಳು ಇಂಗ್ಲೆಂಡಿನ ಒಂದು ಪರಿಪೂರ್ಣ ಚಿತ್ರಾತ್ಮಕ ಸಂಕೇತದಂತೆ ತೋರುತ್ತದೆ. ಈ ಮುಖಪುಟವೇ ಈ ಹೊತ್ತಿಗೆಯ ಒಂದು ಕಿರುಪರಿಚಯ!

ಈ ಪ್ರಬಂಧ ಸಂಕಲನದ ಮೂಲ ಉದ್ದೇಶ ಬ್ರಿಟನ್ನಿನ್ನ ನಿವಾಸಿ ಮತ್ತು ಅನಿವಾಸಿಗಳ ಬದುಕನ್ನು ಕನ್ನಡಿಗರಿಗೆ ಪರಿಚಯಿಸುವುದು ಎಂದು ಶುರಿವಿನಲ್ಲೇ ಪ್ರಸ್ತಾಪಿಸಿಸುವುದು ಉಚಿತ. ಓದುತ್ತ ಹೋದಂತೆ ಲೇಖಕರ ಮೂಲ ಆಶಯ ಮತ್ತು ಹಂಬಲ ತೆರೆದುಕೊಳ್ಳುತ್ತದೆ.  ನಾಲ್ಕೈದು ದಶಕಗಳ ಹಿಂದೆ ವಿದೇಶದಲ್ಲಿ ನೆಲೆಸಿದ್ದ ವೈದ್ಯರು ಮತ್ತು ಇಂಜಿನೀಯರ್ಗಳು ಕನ್ನಡದಲ್ಲಿ ಒಂದು ಲೇಖನವಿರಲಿ ಒಂದೆರಡು ಸಾಲುಗಳನ್ನು ಬರೆಯಲು ಹಿಂಜರಿಯುತ್ತಿದ್ದ ಕಾಲದಲ್ಲಿ ಶಿವರಾಮ ಕಾರಂತ, ಮೂರ್ತಿರಾಯರು, ಗೋರೂರ್, ಗೋಕಾಕ ಮತ್ತು ಜಿ.ಎಸ್.ಎಸ್ ಮುಂತಾದ ಸಾಹಿತಿಗಳು ವಿದೇಶ ಪರ್ಯಟನೆ ಮಾಡಿ ಮರಳಿದಾಗ ಅವರ ಪ್ರವಾಸದ  ಅಲ್ಪ ಸಮಯದಲ್ಲಿ ಕಂಡದ್ದನ್ನು ಕೇಳಿದ್ದನ್ನು ಅನುಭವಿಸಿದ್ದನು ಪ್ರವಾಸ ಕಥನವಾಗಿ ದಾಖಲಿಸಿ ಇಂಗ್ಲೆಂಡ್ ಮತ್ತು ಅಮೆರಿಕಗಳನ್ನು ಕನ್ನಡಿಗರಿಗೆ ಪರಿಚಯಿಸುತ್ತಿದ್ದರು. ಕವಿ- ಸಾಹಿತಿಗಳಾದ ಅವರು ಮಾಹಿತಿಗಳೊಡನೆ ತಮ್ಮ ವಿಶೇಷ ಒಳನೋಟವನ್ನು ಒದಗಿಸುತ್ತಿದ್ದರು. ಆದರೆ ಆ ಬರಹಗಳಲ್ಲಿ ಆಯಾ ದೇಶಗಳ ಜನ ಜೀವನದ ಪೂರ್ಣ ಪರಿಚಯ ಸಿಗುವುದು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗಿನ ಕಾಲದಲ್ಲಿ ಯೋಗಿಂದ್ರ ರೀತಿಯ ಅನೇಕ ಅನಿವಾಸಿ ಎಂಜಿನೀಯರ್ಗಳು, ವೈದ್ಯರು, ವೃತ್ತಿಪರರೂ, ಗೃಹಿಣಿಯರು ವಿದೇಶಗಳಲ್ಲಿ ದಶಕಗಳ ಕಾಲ ಬದುಕಿ ಇಲ್ಲಿಯ ಜನ ಜೀವನ, ಸಾಂಸ್ಕೃತಿಕ ವೈಶಿಷ್ಟ್ಯತೆ, ವಿಲಕ್ಷಣ, ದಿನ ನಿತ್ಯ ಆಗು-ಹೋಗುಗಳನ್ನು ಸವಿವರವಾಗಿ ಕೂಲಂಕುಷವಾಗಿ ಗಮನಿಸಿ ಪ್ರಬಂಧಗಳನ್ನು ಬರೆಯುತ್ತಿದ್ದಾರೆ. ಇನ್ನು ಅಮೇರಿಕಾದ ಅನಿವಾಸಿ ಕನ್ನಡಿಗ ಗುರುಪ್ರಸಾದ್ ಕಾಗಿನೆಲೆ ತಮ್ಮ ಕಥೆ ಕಾದಂಬರಿಗಳಲ್ಲಿ ವಿದೇಶದ ಬದುಕನ್ನೇ ಕಥೆಯ ಹಂದರದಲ್ಲಿ ಅಳವಡಿಸಿದ್ದಾರೆ. ಪ್ರವಾಸ ಕಥನ ಒದಗಿಸಲಾರದ ವಿಷಯ ವಿವರಗಳನ್ನು ಯೋಗಿಂದ್ರ ತಮ್ಮ ಪ್ರಬಂಧಗಳಲ್ಲಿ ವಿಶೇಷ ಒಳನೋಟಗಳ ಜೊತೆ ದಾಖಲಿಸಿದ್ದಾರೆ. ಕರ್ನಾಟಕದ ಅನೇಕ ಕನ್ನಡಿಗರಿಗೆ, ಟಿವಿ ಇನ್ನಿತರ ಮಾಧ್ಯಮಗಳ ಮೂಲಕ, ವಿದೇಶದಲ್ಲಿ ನೆಲೆಸಿರುವ ಬಂಧುಗಳ ಮೂಲಕ, ಬ್ರಿಟನ್ನಿನ್ನ ಬಗ್ಗೆ ಸಾಕಷ್ಟು ತಿಳುವಳಿಕೆ ಇರುತ್ತದೆ. ಆದರೂ ಅನಿವಾಸಿ ಕನ್ನಡಿಗರು ಹೇಗೆ ಬಾಳಿ ಬದುಕುತ್ತಿದ್ದಾರೆ ಎಂಬ ಕುತೂಹಲ ಅವರಿಗಿರುವುದು ಸಹಜವೇ. ಆ ಕೂತುಹಲವನ್ನು ತಣಿಸಲು ಲಂಡನ್ ಡೈರಿ ಒಂದು ಉತ್ತಮ ಪರಿಚಯ ಪ್ರವೇಶ ಎನ್ನಬಹುದು.  ಅಷ್ಟೇ ಏಕೆ ಬ್ರಿಟನ್ನಿನ್ನ ಸ್ವಾರಸ್ಯಕರವಾದ ವಿಚಾರಗಳು ಇಲ್ಲಿರುವುದರಿಂದ ಇಂಗ್ಲೆಂಡಿನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಗೂ ಈ ಪುಸ್ತಕ ಪ್ರಸ್ತುತವಾಗಿದೆ.   

ಈ ಪ್ರಬಂಧವನ್ನು ಒಟ್ಟಾರೆ ನೋಡಿದಾಗ ಇಲ್ಲಿ ಎದ್ದು ಕಾಣುವ ವಿಷಯಗಳೆಂದರೆ; ಆಂಗ್ಲರ ದೃಷ್ಟಿಯಲ್ಲಿ ಭಾರತೀಯರು ಮತ್ತು ಭಾರತ, ಅನಿವಾಸಿ ದೃಷ್ಟಿಯಲ್ಲಿ ಆಂಗ್ಲರು ಮತ್ತು ಅವರ ಸಂಸ್ಕೃತಿ, ಕೊನೆಯದಾಗಿ ಈ ಎರಡೂ ದೃಷ್ಟಿಯಲ್ಲಿ ಇರುವ ಸಮಾನಾಂತರಗಳ, ವೈರುಧ್ಯಗಳ ಬಗ್ಗೆ ಇರುವ ತೌಲನಿಕ ಚಿಂತನೆಗಳು. ಇಲ್ಲಿ 'ಆಂಗ್ಲರ ಕನ್ನಡಕದಲ್ಲಿ ಭಾರತ' ಎಂಬ ಮೊದಲನೇ ಪ್ರಬಂಧದಲ್ಲಿ ಆಂಗ್ಲರು ನಮ್ಮನ್ನು ನೋಡುವಾಗ ವಸ್ತುನಿಷ್ಠವಾಗಿ ನಮನ್ನು ನೋಡುತ್ತಾರೆ, ಇಲ್ಲಿ ಹೊಗಳಿಕೆ ತೆಗಳಿಕೆ ಎರಡು ಅವರ ತಕ್ಕಡಿಯಲ್ಲಿ ಸಮಾನವಾಗಿ ತೂಗುತ್ತದೆ. ನಾವು ನಮ್ಮ ದೇಶ ಎಷ್ಟು ಶ್ರೇಷ್ಠ, ಎಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವಾಗ ಆಂಗ್ಲರು ಬಿಬಿಸಿ ಕಾರ್ಯಕ್ರಮದಲ್ಲಿ, ಬರಹಗಳಲ್ಲಿ ನಮ್ಮ ಹುಳುಕುಗಳನ್ನು ಎತ್ತಿ ತೋರಿಸಿ ಮುಖಕ್ಕೆ ಕನ್ನಡಿ ಹಿಡಿಯುತ್ತಾರೆ ಎಂದು ಹೇಳುವಲ್ಲಿ ಯೋಗಿಂದ್ರ ಹಿಂಜರಿಯುವುದಿಲ್ಲ, ಈ ಪ್ರಬಂಧಗಳಲ್ಲಿ ಪ್ರಾಮಾಣಿಕತೆ ಮತ್ತು ಆತ್ಮಶೋಧನೆಗಳಿವೆ. ಆಂಗ್ಲರು ನಮ್ಮ ಸಂಸ್ಕೃತಿಯನ್ನು ಮೆಚ್ಚಿಕೊಂಡಿರುವ ಉಲ್ಲೇಖಗಳೂ ಸಾಕಷ್ಟಿವೆ. ಇನ್ನು ಬ್ರಿಟನ್ ಬದುಕಿನ ವಿಶೇಷ ಮೌಲ್ಯಗಳು ಮತ್ತು ವಿಚಿತ್ರ ಎನ್ನಿಸುವ ವಿಚಾರಗಳು, ಇಲ್ಲಿಯ ರಾಜ ಮನೆತನ, ರಾಜಕೀಯ ವ್ಯವಸ್ಥೆ, ನಗರ ಮತ್ತು ಗ್ರಾಮೀಣ ಬದುಕು, ಅನಿಶ್ಚಿತವಾದ ಹವಮಾನ ಮತ್ತು ಸದಾ ಜಿನುಗುವ ಮಳೆ, ಇಂಗ್ಲಿಷ್ ಸಾಹಿತ್ಯ; ಹೀಗೆ ಅನೇಕ ವಿಚಾರಗಳ ಬಗ್ಗೆ ಪ್ರಬಂಧಗಳಿವೆ.  

ನನಗೆ ಈ ಕೃತಿಯಲ್ಲಿ ವಿಶೇಷವಾಗಿ ಕಂಡ ಒಂದೆರಡು ಲೇಖನದ ಬಗ್ಗೆ ಪ್ರತ್ಯೇಕವಾಗಿ ಹೇಳಬಯಸುತ್ತೇನೆ. ‘ಮಲೆನಾಡ ಮಳೆದಿನದ ಮಾತುಗಳು ಮೌನಗಳು’ ಎಂಬ ಪ್ರಬಂಧದಲ್ಲಿ ಯೋಗಿಂದ್ರ ಅವರು ಇಂಗ್ಲೆಂಡ್ ವಿಷಯವನ್ನು ಪಕ್ಕಕ್ಕಿಟ್ಟು ತಮ್ಮ ಹುಟ್ಟೂರಾದ ಮರವಂತೆಯಿಂದ ಹೊರಟು ಕೊಲ್ಲೂರು ಘಾಟಿಯನ್ನು ದಾಟಿ ಒಳ ಮಲೆನಾಡಿನ ಹಿಂಸೋಡಿಗೆ ಹೋಗಿಬರುವ ಪ್ರಸಂಗ ವಿಶೇಷವಾಗಿದೆ. ಇಲ್ಲಿ ಮಲೆನಾಡಿನ ಮುಂಗಾರು ಮಳೆಯ ವರ್ಣನೆ, ದಟ್ಟವಾದ ಹಸಿರು ಕಾಡುಗಳು, ಮಳೆಯ ಹೊದಿಕೆಯಲ್ಲಿ ಮುಸುಕು ಹಾಕಿಕೊಂಡು ಮಾತನಾಡುವ ಮರಗಳು, ಕತ್ತಲಿಗೂ ಧ್ವನಿ ಭಾಷೆ ನೀಡುವ ಕಪ್ಪೆ ಜೀರುಂಡೆಗಳು, ಶರಾವತಿಯ ಹಿನ್ನೀರಿನ ದಡದಲ್ಲಿ ಚುರುಮುರಿ ಅಂಗಡಿ ಇಟ್ಟುಕೊಂಡಿರುವಾಕೆಯ ಅನಾನುಕೂಲಗಳು, ಸಮಸ್ಯೆಗಳು, ಅವಳ ದುಃಖದ ಮಾತುಗಳಿಗೆ ಹೊಂ ಹೌದು ಎಂದು ಧ್ವನಿಗೂಡಿಸುವ ಸೌತೆಕಾಯಿ, ಮೆಣಸು ಮತ್ತು ಮಂಡಕ್ಕಿಗಳು; ಹೀಗೆ ಅಲ್ಲಿ ಅನೇಕ ಸುಂದರ ಚಿತ್ರಗಳು ರೂಪಕಗಳು ತೆರೆದು ನಿಲ್ಲುತ್ತವೆ. ಇನ್ನೊಂದು ಮರವಂತೆ ಮಳೆಗೆ ಸಂಬಂಧಿಸಿದ ಪ್ರಬಂಧದಲ್ಲಿ ಕರಾವಳಿಯಲ್ಲಿ ಸುರಿಯುವ ಮಳೆಯ ವರ್ಣನೆ ಅದ್ಭುತವಾಗಿದೆ, ಹಾಗೆ ಲೇಖಕರಿಗೆ ಬೀಳುವ ಕನಸೊಂದರಲ್ಲಿ ಮಳೆ ಒಂದು ಕನ್ಯೆಯಾಗಿ ಬಂದು ಅವಳ ಮತ್ತು ಲೇಖಕನ ಪ್ರೇಮ ಪ್ರಸಂಗ ತೆರೆದುಕೊಂಡು ಅಲ್ಲಿ ಸಂವಾದ ಆತ್ಮೀಯವಾಗಿ ಶೃಂಗಾರ ಕಾವ್ಯವೇ ಸೃಷ್ಟಿಯಾಗಿದೆ. ಯೋಗಿಂದ್ರ ಅವರು ಬ್ರಿಟನ್ನಿನ ಬಗ್ಗೆ ಬರೆಯುವ ವಿಚಾರಕ್ಕಿಂತ ಅವರ ಊರಾದ ಮರವಂತೆಯ ಬಗ್ಗೆ ಬರೆಯುವಾಗ ಅವರ ಬರಹ ಇನ್ನು ಉಜ್ವಲವಾಗುತ್ತದೆ.  ಹಾಗೆಯೇ ಯೋಗಿಂದ್ರ ಅವರು ತಮ್ಮ ವೈಯುಕ್ತಿಕ ಬದುಕಿನ ಅನುಭವಗಳನ್ನು ಸೇರಿಸಿ ಬರೆದಾಗ ಅದು ಓದುಗರಿಗೆ ಆತ್ಮೀಯವಾಗುತ್ತದೆ.

'ಭಾನುವಾರದ ಇಟಾಲಿಯನ್ ಕಟಿಂಗ್' ಬಹಳ ಶ್ರೇಷ್ಠವಾದ ಪ್ರಬಂಧ. ಈ ಪ್ರಬಂಧಕ್ಕೆ ಸುಧಾ ಪತ್ರಿಕೆಯ ಯುಗಾದಿ ವಿಶೇಷಾಂಕದಿಂದ ಬಹುಮಾನ ದಕ್ಕಿದೆ. ಇಲ್ಲಿ ಹೇರ್ ಕಟಿಂಗ್ ಎಂಬ ಸಾಧಾರಣ ವಿಷಯದಲ್ಲಿ ಯೋಗಿಂದ್ರ ಅವರು ಅನೇಕ ಚಿಂತನೆಗಳನ್ನು, ಪ್ರತಿಮೆಗಳನ್ನು, ರೂಪಕಗಳನ್ನು ತಂದು ನಿಲ್ಲಿಸಿದ್ದಾರೆ. ತಗ್ಗಿಸಿದ ತಲೆ, ತಗ್ಗಿಸದೆ ಉಳಿದು ಕೊನೆಗೂ ತಗ್ಗಿಸಬೇಕಾದ ತಲೆ, ಅಹಂಕಾರ, ಅಜ್ಞಾನ, ಅರಿವಿನ ವಿಸ್ತಾರ, ಸಾಂಸ್ಕೃತಿಕ ವೈವಿಧ್ಯತೆ, ಸಂಘರ್ಷಗಳು, ಇವುಗಳನ್ನು ಒಳಗೊಂಡು ಕೊನೆಗೆ ಹೇರ್ ಕಟ್ ಮಾಡಿದಾಗ ಉರುಳಿದ ಎಲ್ಲ ಬಣ್ಣಗಳ, ಊರುಗಳ, ದೇಶಗಳ, ಜಾತಿಗಳ ಕೂದಲನ್ನು ನುಂಗಿಬಿಡುವ ಕಸದ ಬುಟ್ಟಿ ಇಲ್ಲಿ ಬಾಹ್ಯಾಕಾಶದ ಬ್ಲಾಕ್ ಹೋಲಿನ (Cosmic Black Hole) ಪ್ರತಿಮೆಯಾಗಿ ನಿಲ್ಲುತ್ತದೆ. ಇಲ್ಲಿ ಕಾಲನ ಮಹಿಮೆಯಿದೆ. ಒಂದು ಸಣ್ಣ ಪ್ರಸಂಗದಲ್ಲಿ ಇಡೀ ಬದುಕಿನ ಅನುಭವವನ್ನು ಸಾರಾಂಶವನ್ನು ಯೋಗಿಂದ್ರ ಈ ಶ್ರೇಷ್ಠ ಪ್ರಬಂಧದಲ್ಲಿ ಹಿಡಿದಿಟ್ಟಿದ್ದಾರೆ. 

ಈ ಬರಹಗಳಲ್ಲಿ ಯೋಗಿಂದ್ರ ಅವರ ಸೌಂದರ್ಯ ಪ್ರಜ್ಞೆ, ಕಾವ್ಯ ಪ್ರಜ್ಞೆ, ಎದ್ದು ನಿಲ್ಲುತ್ತವೆ. ಕೆಲವು ಕಡೆ ಅವರು ಬಳಸುವ ಪದಗಳು, ಆದಿಪ್ರಾಸಗಳು, ರೂಪಕಗಳು, ಮತ್ತು ಉಂಟಾಗಿರುವ ಛಂದಸ್ಸು ಒಂದು ಗದ್ಯವನ್ನು ಪದ್ಯವಾಗಿ  ನಿರೂಪಿಸುತ್ತದೆ, ಯೋಗಿಂದ್ರ ಇಲ್ಲಿ ಒಬ್ಬ ಕವಿಯೂ ಆಗಿದ್ದಾರೆ. ಕೆಲವೆಡೆ ಅವರು ಪದಗಳನ್ನು ಬಳಸಿ ಒಂದು ಸನ್ನಿವೇಶವನ್ನು ಕಟ್ಟುವಾಗ ಅಲ್ಲಿ ಒಂದು ಚಲನ ಶೀಲತೆ ಉಂಟಾಗುತ್ತದೆ. ಸ್ಥಾವರವು ಜಂಗಮವಾಗುತ್ತದೆ. ಬರಹದಲ್ಲಿಯ ನೋಟ, ಶಬ್ದ, ವಾಸನೆ, ಕ್ರಿಯೆ ಇವುಗಳಿಂದ ಒಂದು ಚಪ್ಪಟ್ಟೆಯಾಗಿರುವ ಸಾಲುಗಳು ಹಲವಾರು ಆಯಾಮಗಳನ್ನು ಪಡೆದುಕೊಂಡು ಒಂದು ಒಂದು ವರ್ಚುಯಲ್ (4D) ಅನುಭವ ಉಂಟಾಗುತ್ತದೆ. ಈ ರೀತಿಯ ವಿಶೇಷ ಅನುಭವವನ್ನು ಅರುಂಧತಿ ರಾಯ್ ಅವರ 'ಗಾಡ್ ಆಫ್ ಸ್ಮಾಲ್ ಥಿಂಗ್ಸ್ 'ಎಂಬ ಎಂಬ ಕೃತಿಯಲ್ಲೂ ಕಂಡಿದ್ದನ್ನು ಇಲ್ಲಿ ನೆನೆಯ ಬಯಸುತ್ತೇನೆ. 

ಒಂದು ಬರಹ ಯಾವಾಗ ಪ್ರಬಂಧ ಸಂಕಲನವಾಗುತ್ತದೆ? ಮತ್ತು ಯಾವಾಗ ಬಿಡಿ ಬರಹವಾಗುತ್ತದೆ? ಎಂಬ ಆಲೋಚನೆ ಒಬ್ಬ ಓದುಗನಾಗಿಯೂ ಮತ್ತು ಲೇಖಕನಾಗಿಯೂ ನನ್ನನು ಕಾಡಿರುವ ವಿಚಾರ. ಸಾಮಾನ್ಯವಾಗಿ ಪ್ರಬಂಧ ಸಂಕಲನ ಒಂದು ವಿಷಯ ಮಾದರಿಯನ್ನು ಕುರಿತಾದ ಧೀರ್ಘವಾದ ಮತ್ತು ಆಳವಾದ ಅಧ್ಯಯನ. ಅಲ್ಲಿ ವೈವಿಧ್ಯತೆ ಇದ್ದರೂ ಅದು ಒಂದು ನಿರ್ದಿಷ್ಟ ವಿಷಯದ ಚೌಕಟ್ಟಿನೊಳಗೇ ಇರುತ್ತದೆ. ಬಿಡಿ ಬರಹಕ್ಕೆ ಆ ಬದ್ಧತೆ ಇರುವುದಿಲ್ಲ. ಅಲ್ಲಿ ವ್ಯಕ್ತಿ ಚಿತ್ರಣ, ಒಂದು ಸಂಸ್ಕೃತಿಯ ಪರಿಚಯ, ಸಾಹಿತ್ಯ, ಕಲೆ, ವಿಜ್ಞಾನ, ವಿಮರ್ಶೆ, ಹೇಗೆ ಅನೇಕ ವಿಚಾರಗಳ ಕಲಸು ಮೇಲೋಗರವಾಗಿರುತ್ತದೆ. ವೈಯುಕ್ತಿಕ ಅನುಭವಗಳನ್ನು, ಸನ್ನಿವೇಶಗಳನ್ನು ಒಳಗೊಂಡು ಲೇಖಕನ ವೈಯುಕ್ತಿಕ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಬಿಡಿ ಬರಹದಲ್ಲಿ ಹೆಚ್ಚು ಅವಕಾಶವಿರಬಹುದು. ಅಂದಹಾಗೆ ಒಂದು ಕಥೆ ಕಾದಂಬರಿಯನ್ನು ಬರೆಯುವುದಕ್ಕಿಂತ ಪ್ರಬಂಧ ಮತ್ತು ಬಿಡಿ ಬರಹವನ್ನು ಬರೆಯುವುದು ಸುಲಭ ಎನ್ನುವುದು ನನ್ನ ಅನಿಸಿಕೆ. ಒಂದು ಉತ್ತಮ ಪ್ರಬಂಧವನ್ನು ಬರೆಯಬೇಕಿದ್ದಲ್ಲಿ ಯೋಗಿಂದ್ರ ಅವರ "ಕಾಣುವ ಕಣ್ಣು" ಅಗತ್ಯ.  ಹಾಗೆಯೇ ಅಲ್ಲಿ ಹಿನ್ನೆಲೆ ವಿಚಾರಗಳನ್ನು ಸಂಶೋಧನೆ ಮಾಡಿ ಮಾಹಿತಿಗಳನ್ನು ರಸವತ್ತಾಗಿ ಸ್ವಾರಸ್ಯಕರವಾಗಿ ಕಾವ್ಯಮಯವಾಗಿ ವ್ಯಕ್ತಪಡಿಸಿ ಹಲವಾರು ದೃಷ್ಠಿಕೋನಗಳನ್ನು ತರಬೇಕಾಗುತ್ತದೆ. ಇಲ್ಲದಿದ್ದಲ್ಲಿ ಅದು ಮಾಹಿತಿಗಳನ್ನು ವೈಕಿಪೀಡಿಯಾದಿಂದ ಓದಿದ ಶೈಕ್ಷಣಿಕ ಒಣ ಅನುಭವವಾಗುತ್ತದೆ. ಯೋಗಿಂದ್ರ ಅವರ ಇತರ ಕೃತಿಗಳನ್ನು ಹೊತ್ತು ತಂದಿದ್ದೇನೆ. ಅವುಗಳನ್ನು ಓದಲು ಕಾತರನಾಗಿದ್ದೇನೆ. ಒಟ್ಟಾರೆ ಹೇಳುವುದಾದರೆ 'ಲಂಡನ್ ಡೈರಿ' ಎಂಬ ಪ್ರಬಂಧ ಸಂಕಲನ ನನ್ನ ಅರಿವಿನ ವಿಸ್ತಾರವನ್ನು ಹೆಚ್ಚಿಸಿದೆ. ಎಲ್ಲರೂ ಓದಬೇಕಾದ ಪುಸ್ತಕ.  

***