ಇಂಗ್ಲೆಂಡಿನಲ್ಲಿ ಯುಗಾದಿ: ವಸಂತನಾಗಮನದ ನಾಂದಿ

ಸಪ್ಟೆಂಬರ್ ತಿಂಗಳಿನಿಂದ ನಿರಂತರ ಮಳೆಯ ಆಘಾತಕ್ಕೆ ತುತ್ತಾಗಿರುವ ಇಂಗ್ಲೆಂಡಿನಲ್ಲಿ ಕಳೆದ ಕೆಲವು ದಿನಗಳಿಂದ ಸೂರ್ಯ ಮಹಾಶಯ ಮೋಡಗಳ ಚಾದರದ ಮರೆಯಿಂದ ಹಣಕಿ ಹಾಕುತ್ತ ಕವಿದಿರುವ ಛಳಿಯ ಬಲೆಯನ್ನು ಹರಿದು ಬದಿಗೊಡ್ಡಲು ಪ್ರಯತ್ನಿಸುತ್ತಿದ್ದಾನೆ. ಅವನ ಕ್ಷೀಣ ಪ್ರಯತ್ನವನ್ನು ಹುರಿದುಂಬಿಸಲು ಒಣಗಿ ನಿಂತ ಗಿಡ ಮರಗಳು ಟಿಸಿಲೊಡೆಯುತ್ತ, ಮೈತುಂಬ ಬಣ್ಣ ಬಣ್ಣದ ಹೂಗಳನ್ನು ಹೊತ್ತು ಚಿಯರ್ ಚಿಣ್ಣರಂತೆ ಉತ್ಸಾಹದಿಂದ ತಲೆದೂಗುವುದ ಕಂಡಾಗ ವಸಂತ ಬಂದ ಎಂಬ ಉತ್ಸಾಹ ನಮ್ಮಲ್ಲೂ. ವಾತಾವರಣದಲ್ಲಿ ಕಾವು ಕೂಡುತ್ತಿದ್ದಂತೇ ಗೂಡುಗಳಿಂದ ಹೊರಬಿದ್ದು ಹೊಂಬಿಸಿಲ ಹೊಲದಲ್ಲಿ ಹೊರಳಾಡುವ ಹಂಬಲ ಹೊಮ್ಮುವುದು ಸಹಜ. ಇಂತಹ ಹಂಬಲಕ್ಕೆ ಇಂಬಾಗುವುದು ಯುಗಾದಿ. ಪ್ರತಿವರ್ಷದಂತೆ ಈ ವರ್ಷವೂ ಕನ್ನಡ ಬಳಗ ಯು.ಕೆ ಯುಗಾದಿ ಹಬ್ಬದ ಸಂಭ್ರಮದ ಕಾರ್ಯಕ್ರಮವನ್ನು ಏಪ್ರಿಲ್ ೧೩ರಂದು ಲೆಸ್ಟರ್ ನಗರದಲ್ಲಿ ಏರ್ಪಡಿಸಿತ್ತು. ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣೀ ಭೂತರಲ್ಲಿ ಒಬ್ಬರಾದ, ಅನಿವಾಸಿ ಬಳಗದ ಸದಸ್ಯರೂ ಆದ ಡಾ. ರಾಜಶ್ರೀ ಪಾಟೀಲರು ತಮ್ಮ ಅನಿಸಿಕೆಗಳನ್ನು ಚಿತ್ರ ಸಮೇತ ಇಲ್ಲಿ ಉಣಬಡಿಸಿದ್ದಾರೆ. ಕಾರಣಾಂತರಗಳಿಂದ ಅಂದು ಬರಲಾಗದವರಿಗೆ, ವಿದೇಶಗಳಲ್ಲಿರುವ ನಮ್ಮ ಓದುಗರಿಗೆ ಈ ವರದಿ ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸಿದ ಅನುಭವ ಕೊಡುವುದರಲ್ಲಿ ಸಂದೇಹವಿಲ್ಲ. ಪ್ರತೀ ಕನ್ನಡ ಬಳಗದ ದೀಪಾವಳಿ-ಯುಗಾದಿ ಕಾರ್ಯಕ್ರಮದಲ್ಲಿ ನಮ್ಮ ಅನಿವಾಸಿ ಬಳಗ ಸಮಾನಾಂತರವಾಗಿ ಸಾಹಿತ್ಯಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಈ ಬಾರಿ ರಂಗಕರ್ಮಿ ಶ್ರೀ. ಶ್ರೀನಿವಾಸ ಪ್ರಭು ಅವರೊಂದಿಗೆ ನಡೆಸಿದ ಸಂವಾದದ ಅನುಭವವನ್ನು ಉತ್ತರ ಐರ್ಲ್ಯಾನ್ಡ್ ನಿಂದ ಮೊದಲ ಬಾರಿಗೆ ಭಾಗವಹಿಸಿದ ಶ್ರೀಮತಿ ಅಮಿತ ರವಿಕಿರಣ್ ಮುಂದಿನ ವಾರ ವಿಶದವಾಗಿ ಹಂಚಿಕೊಳ್ಳಲಿದ್ದಾರೆ. (ಸಂ)

‘ಬೇವಿನಕಹಿ ಬಾಳಿನಲಿ, ಹೂವಿನ ನಸುಗಂಪ ಸೂಸಿ ಜೀವಕಳೆಯ ತರುತಿದೆ. ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.’
ನಮ್ಮೆಲ್ಲರ ಜೀವನ ಜಂಜಾಟಗಳ ನಡುವೆ ಸಂಭ್ರಮದ ಕಳೆ ತರಲು ಯುಗಾದಿ ಸಂಭ್ರಮ ಮತ್ತೆ ಬಂದಿತ್ತು ೧೩/೦೪/೨೪ ಲೆಸ್ಟರ್ ಗೆ. ಲೆಸ್ಟರ್ ಕನ್ನಡಿಗರು ೨೦೧೬ ನಿಂದ ಸಾಂಪ್ರದಾಯಿಕವಾಗಿ ಯುಗಾದಿಯನ್ನ ಸಂಭ್ರಮದಿಂದ ಆಚರಿಸುತ್ತ ಬಂದಿದ್ದಾರೆ  ಆದರೆ ಈ ಬಾರಿ ಕನ್ನಡ ಬಳಗದ ಸಹಯೋಗ ಅದರ ಮೆರಗನ್ನ ಇನ್ನೂ ಹೆಚ್ಚಿಸಿತ್ತು. ದೇಶದ ಹಲವಾರು ಮೂಲೆಗಳಿಂದ  ೬೦೦ಕ್ಕೂ ಹೆಚ್ಚು ಜನರು ಯುಗಾದಿ ಸಂಭ್ರಮವನ್ನು  ಆಚರಿಸಲು ನೆರೆದಿದ್ದರು. ಅದೇ ದಿನದಂದು ಹಲವಾರು ಕಡೆ ಯುಗಾದಿ ಸಂಭ್ರಮಾಚರಣೆ ಇದ್ದರೂ ಲೆಸ್ಟರನಲ್ಲಿ ಇಷ್ಟೊಂದು ಜನ ಸೇರಿದ್ದು ಇನ್ನೂ ವಿಶೇಷವಾಗಿತ್ತು.

ಕಾರ್ಯಕ್ರಮಕ್ಕೆ ವಿಧಿವತ್ತಾಗಿ  ವಿಘ್ನ ನಿವಾರಕ ವಿಘ್ನೇಶ್ವರನ ಪೂಜೆಯೊಂದಿಗೆ ಮತ್ತು ಸ್ತುತಿಹಾಡಿನೊಂದಿಗೆ ಓಂಕಾರ ದೊರಕಿತು. ಲೆಸ್ಟರ್ ಕನ್ನಡಿಗರು ಮತ್ತು ಕನ್ನಡ ಬಳಗ ಯುಕೆ ತಂಡಗಳು ಭಾರತದಿಂದ ಆಗಮಿಸಿದ ಜನಪ್ರಿಯ ಗಣ್ಯ ಅತಿಥಿಗಳಾದ ಶ್ರೀಯುತ ಸಿಹಿ ಕಹಿ ಚಂದ್ರು, ಶ್ರೀನಿವಾಸ ಪ್ರಭು, ವಿಶ್ವೇಶ್ ಭಟ್ ಅವರನ್ನ ಮತ್ತೂ ದೇಶದ ಮೂಲೆ ಮೂಲೆಯಿಂದ ಬಂದ ಕನ್ನಡಿಗರನ್ನ ಹೃದಯ ಪೂರ್ವಕವಾಗಿ ಬೇವು ಬೆಲ್ಲವನ್ನ ಹಂಚುವದರೊಂದಿಗೆ ಸ್ವಾಗತಿಸಿದರು. ಗಣ್ಯರು ದೀಪ ಬೆಳಗಿಸುವದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶುಭಕೋರಿದರು.

ಸಾಂಪ್ರದಾಯಿಕ ಭರತನಾಟ್ಯ ನೃತ್ಯಗಳಿಂದ ಕಲಾಪ್ರದರ್ಶನ ಪ್ರಾರಂಭವಾಯಿತು. ಬಿಡುವಿಲ್ಲದೆ ಸತತ ೫ ಘಂಟೆಗಳ ಕಾಲ ಕಲಾಪ್ರದರ್ಶನ ಯುಕೆಯ ವಿವಿಧ ಪ್ರದೇಶಗಳಿಂದ ಬಂದ ಕಲಾವಿದರಿಂದ ನಡೆಯಿತು .  ಚಿಕ್ಕ ಪುಟಾಣಿಗಳು ‘ಸಿಂಡರೆಲ್ಲ’ ನೃತ್ಯರೂಪಕ , ಧಾರ್ಮಿಕ ಭಾವನೆಯನ್ನು ಪುಟಿಸಿದ, ನಾಟಕೀಯ ಕನ್ನಡ ಭಾಷೆಯಲ್ಲಿ ಮೂಡಿ ಬಂದ ‘ಸೀತಾ ಅಗ್ನಿಪ್ರವೇಶ’ ದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕರ್ನಾಟಕದ ಶ್ರೀಮಂತ ನೃತ್ಯ ವೈವಿದ್ಯತೆಯನ್ನ ಪ್ರದರ್ಶಿಸುವ ಕೋಲಾಟ , ಕಂಸಾಳೆ, ಡೊಳ್ಳು ಕುಣಿತ, ಕೊಡವ ನೃತ್ಯ ಮತ್ತು ಹುಲಿಕುಣಿತವನ್ನೊಳಗೊಂಡ ‘ಕರ್ನಾಟಕ ನೃತ್ಯದರ್ಶನ’, ಭಾರತದ ವಿವಿಧ ರಾಜ್ಯಗಳ ಮದುವೆ ಶೃಂಗಾರವನ್ನ ಬಿಂಬಿಸುವ ‘ಲಗ್ನ ಶೃಂಗಾರ’, ‘ಹಚ್ಚೇವು ಕನ್ನಡದ ದೀಪ’ ನೃತ್ಯ ರೂಪಕ, ಜನಪ್ರಿಯ ಗೀತೆಗಳನ್ನಾಧರಿಸಿದ ನೃತ್ಯಗಳು, ಹಾಡು, ವೀಣೆ ಹಾಗು ಗಿಟಾರ್ ವಾದನ ಕಾರ್ಯಕ್ರಮಗಳು ನೆರೆದವರ ಮನಸೆಳೆದವು.

ಈ ಎಲ್ಲ ಕಾರ್ಯಕ್ರಗಳು ಒಂದು ಕಡೆಯಾದರೆ, ಇನ್ನೊಂದೆಡೆ ಬಹು ಪ್ರಸಿದ್ದಿ ಪಡೆದಿರುವ ಲೆಸ್ಟರ್ ಬಾಳೆ ಎಲೆ ಭೋಜನ ಯುಗಾದಿ ಸಂಭ್ರಮಕ್ಕೆ ಸಾಂಪ್ರದಾಯಿಕ ಹೊಳಪನ್ನು ಕೊಟ್ಟಿತ್ತು. ಹೋಳಿಗೆ, ಪಾಯಸ, ಭಜಿ, ಪಲ್ಯಗಳು, ಪೂರಿ, ಚಿತ್ರಾನ್ನ, ಅನ್ನ, ಸಾರು, ಸಾಂಬಾರ್, ಉಪ್ಪಿನಕಾಯಿ, ಕೋಸಂಬ್ರಿ ಹೀಗೆ ಭಕ್ಷ್ಯಗಳ ಪಟ್ಟಿ ಎಷ್ಟು ದೊಡ್ಡದಿತ್ತೋ, ಊಟಮಾಡಿದವರಿಂದ ಊಟದ ಬಗೆಗಿನ ಹೊಗಳಿಕೆ ಪಟ್ಟಿನೂ ಅಷ್ಟೇ ದೊಡ್ಡದಾಗಿತ್ತು! ಲೆಸ್ಟರ್ ಆಯೋಜಕರೇ ಟೊಂಕಕಟ್ಟಿ ಈ ಭೂರಿ ಭೋಜನದ ಅಡುಗೆಯನ್ನು ಮಾಡಿ, ಬಡಿಸಿದ್ದು ಇನ್ನೂ ವಿಶೇಷವಾಗಿತ್ತು! ಊಟದ ವ್ಯವಸ್ಥೆ ಯಶಸ್ವಿಯಾಗಲು ಲೆಸ್ಟರ್ ಕನ್ನಡ ಕುಟುಂಬದೊಟ್ಟಿಗೆ ಹಲವಾರು ಸ್ವಯಂಸೇವಕರು ಕೆಲಸಮಾಡಿದ್ದರು. ಕರ್ನಾಟಕದಿಂದ ಬಂದ ಲೆಸ್ಟರ್ ಮತ್ತು ಡಿ ಮೊಂಟೊಫೋರ್ಟ್ ಯೂನಿವರ್ಸಿಟಿ ವಿದ್ಯಾರ್ಥಿಗಳು , ಶಿವಾಲಯ ಲೆಸ್ಟರ್ ಗುಂಪು ಮತ್ತು ಹೆಚ್ ಎಸ್ ಎಸ್ ಸ್ವಯಂಸೇವಕರು ನಗುಮುಖದಿಂದ ತಮ್ಮ ನಿಸ್ವಾರ್ಥ ಸಹಾಯ ಒದಗಿಸಿದರು.

ಸಭಾಂಗಣದ ಪಕ್ಕದಲ್ಲಿ ಆಯೋಜಿಸಿದ ಕೆಲ ಜಾಹಿರಾತುದಾರರ ಅಂಗಡಿಗಗಳು ಜನರ ಆಕರ್ಷಣೆಗೆ ಒಳಗಾದವು . ಇವುಗಳ ಜೊತೆ ಮ್ಯಾಕ್ ಮಿಲನ್ ಚಾರಿಟಿಗೋಸ್ಕರ ೧೩ ವರ್ಷದ ಹುಡುಗಿ ಖುಷಿ ಪಾಟೀಲ್ ತನ್ನ ಕೈಯಾರೆ ಬೇಕ್ ಮಾಡಿದ ವಿವಿಧ ರೀತಿಯ ಕೇಕುಗಳು ಮತ್ತು ಬಿಸ್ಕತ್ಗಳನ್ನೊಳಗೊಂಡ ಅಂಗಡಿ ಚಿಕ್ಕ ಮಕ್ಕಳು ತಮ್ಮ ತಂದೆ ತಾಯಂದಿರನ್ನ ಅಲ್ಲಿಗೆ ಕರೆದೊಯ್ಯುವಂತೆ ಮಾಡಿತ್ತು. ನೆರೆದವರ ಧಾರಾಳ ಕಾಣಿಕೆ ಜಾಹಿರಾತಿನ ನೆರವಿಲ್ಲದೆ ಅವಳ ನೀರಿಕ್ಷೆಗೂ ಮೀರಿ ಹಣಕೂಡಿಸುವಲ್ಲಿ ಯಶಸ್ವಿಯಾಯಿತು. ಅನನ್ಯ ಪ್ರಸಾದ್ (ಡಾ ಜಿ ಎಸ್ ಶಿವಪ್ರಸಾದರವರ ಮಗಳು) ಈ ವರ್ಷಾಂತ್ಯದಲ್ಲಿ ತಾವು ಒಂಟಿಯಾಗಿ ದತ್ತಿ ಕಾರ್ಯಕ್ಕಾಗಿ ಅಟ್ಲಾಂಟಿಕ್ ಸಾಗರವನ್ನು ಹುಟ್ಟು ದೋಣಿಯಲ್ಲಿ ದಾಟುವ ಸಾಹಸದ ಮಾಹಿತಿಯನ್ನು ಹಂಚಿಕೊಂಡರು. ಸಂಗ್ರಹಿಸಲಿರುವ ಹಣವನ್ನು ಯು.ಕೆ ಯ ಮಾನಸಿಕ ಆರೋಗ್ಯ ದತ್ತಿ ಮತ್ತು ಭಾರತದ ದೀನಬಂಧು ಟ್ರಸ್ಟ್ ಗಳೊಂದಿಗೆ ಹಂಚುವ ಆಕಾಂಕ್ಷೆ ಅವರದ್ದು. ಅವರ ಈ ಪ್ರಯತ್ನ ಯಶಸ್ವಿಯಾದರೆ, ಅಟ್ಲಾಂಟಿಕ್ ಸಾಗರವನ್ನು ಒಬ್ಬಂಟಿಯಾಗಿ ಹುಟ್ಟು ದೋಣಿಯಲ್ಲಿ ಕ್ರಮಿಸಿದ ಪ್ರಥಮ ಬಣ್ಣದ ಮಹಿಳೆಯಾಗಲಿದ್ದಾರೆ ಎಂಬುದು ಕನ್ನಡಿಗರಿಗೆ/ಭಾರತೀಯರಿಗೆ ಹೆಮ್ಮೆಯ ವಿಷಯ. ಅವರ ಈ ಪ್ರಯತ್ನ ಯಶಸ್ವಿಯಾಗಲೆಂದು ಎಲ್ಲರೂ ಹಾರೈಸಿದರು.  ಇದರೊಟ್ಟಿಗೆ ಕನ್ನಡ ಬಳಗ ಯುಕೆ ತಂಡದ ವಾರ್ಷಿಕ ಸಾಮಾನ್ಯ ಸಭೆ (ಎಜಿಮ್) ಮತ್ತು ಅನಿವಾಸಿ ಬಳಗದ ಕಾರ್ಯಕ್ರಮ (ಇದರ ವಿಶೇಷ ವಿವರ ಮುಂದಿನ ವಾರ) ಸಮಾನಾಂತರವಾಗಿ ನಡೆದವು.

ಮತ್ತೆ ಸಾಯಂಕಾಲ ಸಭಿಕರೆಲ್ಲ ಕಾತುರದಿಂದ ಕಾಯುತ್ತಿದ್ದ ಗಣ್ಯರ ಕಾರ್ಯಕ್ರಮಗಳು ಶುರುವಾದವು. ಶ್ರೀಯುತ ಶ್ರೀನಿವಾಸ ಪ್ರಭು ತಮ್ಮ ವೃತ್ತಿ ಬದುಕಿನ ಅನುಭವಗಳನ್ನ ಹಂಚಿಕೊಂಡು ಜನರನ್ನ ರಂಜಿಸಿದರು. ಸಭಿಕರ ಕೋರಿಕೆಗೆ ಮಣಿದು, ರಣಧೀರ ಚಿತ್ರದಲ್ಲಿ ಅವರು ನಟ ರವಿಚಂದ್ರನ್ ಅವರಿಗೆ ಧ್ವನಿ ದಾನ ಮಾಡಿದ ಸಂಭಾಷಣೆಗಳನ್ನು ಸಾದರ ಪಡಿಸಿದರು. ಆದರೆ ಅವರು ತಮ್ಮ ಕಂಚಿನ ಕಂಠದಲ್ಲಿ ಪಠಿಸಿದ ಹ್ಯಾಮ್ಲೆಟ್ ನಾಟಕದ ನಾಯಕನ ಕೊನೆಯ ಸಂಭಾಷಣೆ ಅವರ ಭಾಷಣದ ಪ್ರಮುಖ ಆಕರ್ಷಣೆಯಾಗಿತ್ತು. ಶ್ರೀಯುತ  ಸಿಹಿಕಹಿ ಚಂದ್ರು ಅವರಂತೂ ತಮ್ಮ ಮಾತಿನ ಚಾಕಚಕ್ಯತೆಯಿಂದ ಸಭಿಕರನ್ನ ನಗೆಗಡಲಲ್ಲಿ ಮುಳುಗಿಸಿದರು. ಅವರು ಕಲಾಸಾಮ್ರಾಟ್ ರಾಜಕುಮಾರ ಅವರೊಂದಿಗೆ ಕಳೆದ ಕ್ಷಣಗಳು ಎಲ್ಲರ ಮನದಲ್ಲಿ ಮರೆಯದೆ  ಉಳಿಯುವಂತವು. ಅವರು ನಡೆಸಿ ಕೊಡುವ  ಅಡುಗೆ ಕಾರ್ಯಕ್ರಮಗಳು ಕರ್ನಾಟಕದ ಮನೆಮನೆಗಳಲ್ಲಿ ಮಾತಾಗಿವೆ. ಅವರ ಸಲಹೆಯಂತೆ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧಿಗಳು ಮನೆಯಲ್ಲಿ ಮಾಡಿದ ಅಡುಗೆಗಳ ರುಚಿ ನೋಡಿ ಚಂದ್ರು ಅವರು ವಿಜೇತರನ್ನ ಆಯ್ಕೆಮಾಡಿದರು ಮತ್ತು ಅವರ ಹೆಸರಾಂತ ಜನುಮದ ಜೋಡಿ ಸ್ಪರ್ಧೆಯನ್ನೂ ನಡೆಸಿಕೊಟ್ಟರು.

ಸಾಯಂಕಾಲದ ಲಘು ಉಪಾಹಾರ ಮತ್ತು ಚಹಾ ಜನರನ್ನ ಕೊನೆಯ ಕಾರ್ಯಕ್ರಮಕ್ಕೆ ಸಜ್ಜುಗೊಳಿಸಿತು. ಶ್ರೀಯುತ ವಿಶ್ವೇಶ್ ಭಟ್ ರವರು ಬಹುಮುಖ ಪ್ರತಿಭೆಯ ಅಭಿಯಂತರು. ಇವರು ವ್ಯಂಗಚಿತ್ರ ಮತ್ತು ಸಂಗೀತ ಲೋಕಗಳಲ್ಲಿ ತಮ್ಮ ಛಾಪನ್ನ ಮೂಡಿಸಿದ್ದಾರೆ. ಇವರ ತಮ್ಮ ವಿಭಿನ್ನ ರೀತಿಯ ಹಲವಾರು ಸಂಗೀತ ಪ್ರಕಾರಗಳನ್ನೊಳಗೊಂಡ ಪ್ರದರ್ಶನದಿಂದ  ಜನರನ್ನ ಮಂತ್ರ ಮುಗ್ಧರನ್ನಾಗಿಸಿದರು. ಇವರ ಹಾಡಿಗೆ ಜನ ಹೆಜ್ಜೆ ಹಾಕಿ ಸಂತೋಷ ವ್ಯಕ್ತ ಪಡಿಸಿದರು. ಕಾರ್ಯಕ್ರಮ ರಾತ್ರಿಯ ಭೋಜನ ಮತ್ತು ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು.

ಒಟ್ಟಾರೆ ಇದು ಒಂದು ಪರಿಪೂರ್ಣವಾದ , ಪಕ್ವವಾದ, ಯುಗಾದಿ ಹಬ್ಬದ ಸಂಭ್ರಮವನ್ನೊಳಗೊಂಡ ಮತ್ತು  ಕರ್ನಾಟಕದ ಸಂಸ್ಕೃತಿಯ ವೈವಿಧ್ಯತೆಯನ್ನ ಎತ್ತಿಹಿಡಿಯುವ ಆಚರಣೆಯಾಗಿತ್ತು. ಹೀಗೆ ಹಲವಾರು ಕಾರ್ಯಕ್ರಮಗಳು ಮುಂಬರುವ ದಿನಗಳಲ್ಲಿ ನಡೆದು ಅನಿವಾಸಿ ಕನ್ನಡಿಗರ ಮನದಲ್ಲಿ ಸದಾ ತಾಯ್ನುಡಿ ಮತ್ತು ತಾಯ್ನೆಲದ ವಾಸನೆಯನ್ನು ತುಡಿಯುತ್ತಿರಲಿ ಎಂದು ಹಾರೈಸೋಣ.

ಡಾ. ರಾಜಶ್ರೀ ಪಾಟೀಲ್

ಯುಗಾದಿ ಎನ್ನುವ ಪ್ರಬುದ್ಧ ಹಬ್ಬ- ಡಾ. ಪ್ರೇಮಲತ ಬಿ.

“ಬೇವಿನ ಕಹಿ ಬಾಳಿನಲ್ಲಿ, ಹೂವಿನ ನಸುಗಂಪ ಸೂಸಿ ಜೀವಕಳೆಯ ತರುತಿದೆ“. ವರಕವಿ ದ.ರಾ.ಬೇಂದ್ರೆಯವರ ಈ ಕವಿತೆ ವಸಂತಮಾಸದ ಸೊಗಸು, ಸೌಂದರ್ಯದಲ್ಲಿ ತೊನೆಯುತ್ತಿರುವ ಪ್ರಕೃತಿಯನ್ನು ನೋಡಿದಾಗಲೆಲ್ಲ ನನ್ನ ನೆನಪಿಗೆ ಬರುತ್ತದೆ. ವಸಂತಮಾಸದ ಜೊತೆಗೇ ಬರುತ್ತದೆ ಯುಗಾದಿ ಹಬ್ಬ. ಈ ಹಬ್ಬವನ್ನು ನಾವೆಲ್ಲ ತಪ್ಪದೇ ಆಚರಿಸುತ್ತಾ ಬಂದಿದ್ದರೂ, ಈ ಹಬ್ಬದ ಹಿಂದಿರುವ ಮಾಹಿತಿ ಬಹಳ ಮಂದಿಗೆ ತಿಳಿದಿರುವುದಿಲ್ಲವೆಂದು ನನ್ನ ಊಹೆ. ಈ ವಾರದ ಲೇಖನದಲ್ಲಿ ಪ್ರೇಮಲತಾರವರು, ನಮ್ಮ ನಾಡಿನ ಹಬ್ಬಗಳಲ್ಲಿ ಯುಗಾದಿಗಿರುವ ಪ್ರಭುದ್ಧ ಪಾತ್ರದ ಬಗೆಗೆ ನಮಗೆ ತಿಳಿಸಿಕೊಟ್ಟಿದ್ದಾರೆ. ಕೋವಿಡ್ ನ ಕರಾಳ ಕತ್ತಲಲ್ಲಿ ನಲುಗಿ, ನುಣುಚಿಕೊಳ್ಳಲು ಹೆಣಗುತ್ತಿರುವ ಮಾನವನ ಇಂದಿನ ಹೋರಾಟಕ್ಕೆ, ವಿವೇಕ, ಜ್ನಾನಗಳನ್ನು ಪ್ರತಿನಿಧಿಸುವ ಈ ಪ್ಲವ ಸಂವತ್ಸರ ವಿಜಯವನ್ನು ತರಲಿ ಮತ್ತು ನಮ್ಮ, ನಿಮ್ಮೆಲ್ಲರ ಬಾಳಿನಲ್ಲಿ ಹರುಷದ ಹೊನಲನ್ನು ಹರಿಸಲೆಂದು ಹಾರೈಸುತ್ತೇನೆ – ಸಂ

ಯುಗಾದಿ ಎನ್ನುವ ಪ್ರಬುದ್ಧ ಹಬ್ಬ

ಯುಗಾದಿ ಅಂದರೆ…. ಹೊಸವರ್ಷದ ಆರಂಭ. ಜಗತ್ತು ಮುಂದುವರಿಯಬೇಕೆಂದರೆ ಎಲ್ಲವೂ ಮರಳಿ ಸಂಭವಿಸಬೇಕು. ಕಾಲದ ಹುಟ್ಟು, ಪ್ರಕೃತಿಯ ಚೈತನ್ಯ, ಮನುಷ್ಯನ ಸಂಕಲ್ಪ, ಬದುಕು, ಬೆಳೆಗಳು ಎಲ್ಲವೂ ಹೊಸ ಕುಡಿಗಳೊಂದಿಗೆ ಮರಳಿ ಹುಟ್ಟಬೇಕು, ಹೊಸತನ್ನು ಪ್ರತಿಪಾದಿಸಬೇಕು.  ಪ್ರಕೃತಿಯ ಚಿಗುರು,ಹೂ,ಹೊಸ ಕುಹೂ,ಸಂತೋಷ, ಸಂಭ್ರಮ ಇತ್ಯಾದಿ ಎಲ್ಲ ಹೊಸತನ್ನೂ ಕಾಲದಲ್ಲಿ  ಗುರುತಿಸಿ ಆ ಸಂತೋಷವನ್ನು ಆಚರಿಸುತ್ತ, ಬರುವ ವರ್ಷದ ದಿವಸಗಳೆಲ್ಲ , ಸಂತೋಷವಾಗಿ, ಸಮತೋಲಿತವಾಗಿ ಕಳೆಯಲೆಂದು ಆಶಿಸಿ ಸಮಾಜದ ಜನರೆಲ್ಲ ಒಟ್ಟುಗೂಡಿ ಆಚರಿಸುವ ಹಬ್ಬವೇ ಯುಗಾದಿ. ಈ ಹಂಬಲದೊಂದಿಗೆ ಮತ್ತೆ ಮರಳಿ ಬರುತ್ತಿದೆ ಇದೋ ಈ ಯುಗಾದಿಯ ಸಂಭ್ರಮ.

ಮಾರ್ಚ್ ೨೦ ರಂದು ನಾವು ಇಲ್ಲಿನ ಕ್ಯಾಲೆಂಡರಿನ ಪ್ರಕಾರ ಅಧಿಕೃತವಾಗಿ ವಸಂತ ಋತುವಿಗೆ ಕಾಲಿಟ್ಟಿದ್ದೇವೆ. ಅದರ ಮೊದಲಲ್ಲೇ ಬರುವ ಯುಗಾದಿಗೆ ಸರಿಯಾಗಿ ಪ್ರಕೃತಿ ಹೊಸ ಹಸಿರು-ಚಿಗುರಿನ ಅಂಗಿತೊಟ್ಟು ಸಂಭ್ರಮಿಸುವ ಮುದ್ದು ಮಗುವೊಂದರಂತೆ ಕಂಗೊಳಿಸುವುದು, ನಮ್ಮಲ್ಲಿ ಸಂಭ್ರಮದ ಹೊಸ ಚೈತನ್ಯವನ್ನು ತುಂಬುವುದು ಪಾಶ್ಚಿಮಾತ್ಯ ದೇಶಗಳಲ್ಲಿ ಬದುಕುವ ನಮ್ಮ ಸೌಭಾಗ್ಯವೂ ಹೌದು.

ಭಾರತದಲ್ಲಿ ಜನರು ಬೇಸಿಗೆಯ ದಿನಗಳಲ್ಲಿದ್ದರೆ ಇಲ್ಲಿ ನಾವು ಯುಗಾದಿಯ ಎಳೆ ಬಿಸಿಲಿನ ನವೋಲ್ಲಾಸಕ್ಕೆ ತೆರೆದುಕೊಳ್ಳುತ್ತಿರುತ್ತೇವೆ.

ಹಬ್ಬಗಳು ಸಮಾಜದ ಅತಿ ಮುಖ್ಯ ಅಂಗಗಳು. ಹಬ್ಬಗಳ ಇರುವು ಸಮುದಾಯದ ಒಗ್ಗಟ್ಟನ್ನು, ಆರೋಗ್ಯದ ಸುಸ್ಥಿತಿಯನ್ನು ಬಿಂಬಿಸುತ್ತದೆ. ಹಬ್ಬಗಳು ಸಮಾಜದ ಜನರ ಚೈತನ್ಯವನ್ನು ಒಗ್ಗೂಡಿಸಿ, ಸಮುದಾಯದಲ್ಲಿ ಸಾರ್ಥಕತೆಯನ್ನು ತುಂಬುತ್ತವೆ.ನಮ್ಮ ನಾಡಿನ ಮತ್ತು ದೇಶದ ಬಹುತೇಕ ಹಿಂದೂ ಹಬ್ಬಗಳು ದೇವರ ಕಥೆ-ಉಪಕಥೆಗಳ ಆಧಾರದ ಮೇಲೆ ಸೃಷ್ಟಿಯಾದವು.ಇವುಗಳ ಜೊತೆ,ಪ್ರಕೃತಿಯ ಬದಲಾವಣೆಗಳ ಆಧಾರದ ಮೇಲೂ ಕೆಲವು ಹಬ್ಬಗಳು ಸೃಷ್ಟಿಯಾಗಿವೆ. ಕೃಷಿಯನ್ನು ಅಧರಿಸಿದ ರೈತಾಪಿ ಹಬ್ಬಗಳೂ ಇವೆ.ಆದರೆ ಸೃಷ್ಟಿಲೋಕದ ಕಾಲ ಮಾಪನವನ್ನು ಆಧರಿಸಿ ಬರುವ ಕೆಲವೇ ಹಬ್ಬಗಳಲ್ಲಿ ಯುಗಾದಿ ಅತ್ಯಂತ ಮುಖ್ಯವಾದ್ದು.

ಸೂರ್ಯ-ಚಂದ್ರರ ಪಥ ಗತಿಯನ್ನು ಅನುಸರಿಸಿ ಧರಿತ್ರಿ ಹೊಸ ಉಡುಗೆ ತೊಡುವ ಚೈತ್ರ ಮಾಸಕ್ಕೆ ಮತ್ತು ವಸಂತ ಋತುವಿಗಂತೂ ವರ್ಷದಲ್ಲಿ ಇನ್ನಿಲ್ಲದ ಪ್ರಾಧಾನ್ಯತೆ. ಭಾರತವೇ ಅಲ್ಲದೆ ಇತರೆ ದೇಶಗಳಲ್ಲೂ ಬೇರೆ ಬೇರೆ ಹೆಸರಿನಲ್ಲಿ ಈ ವಸಂತ ಋತುವಿಗೆ ಸ್ವಾಗತ ಸಿಗುತ್ತದೆ. ಅದರಿಂದಲೇ ಹೊಸವರ್ಷದ ಆರಂಭವೆಂದು ನಮ್ಮ ಹಿರಿಯರು ನಂಬಿದ ಸಂಪ್ರದಾಯವನ್ನೇ ನಾವು ಯುಗಾದಿ ಮತ್ತು ಇತರೆ ಹೆಸರುಗಳಲ್ಲಿ ಹಬ್ಬವಾಗಿ ಆಚರಿಸುತ್ತೇವೆ.

 ಚಳಿಗಾಲದ ಕತ್ತಲೆ, ಕಡಿಮೆ ಬೆಳಕು, ಸಣ್ಣ ದಿನಗಳನ್ನು ತೊಡೆದು ಚೈತ್ರ ಮಾಸ ತರುವ ಉಲ್ಲಾಸ ಅವರ್ಣನೀಯವಾದ್ದು. ಈ ಸಂಭ್ರಮದ ದಿಬ್ಬಣ ಶುರುವಾಗುವುದೇ ಯುಗಾದಿಯ ದಿನ. ನವೋಲ್ಲಾಸ, ಹೊಸ ಚಿಗುರಿನ ಜೊತೆ ಆಗ ತಾನೆ ಹುಟ್ಟಿ ಚಂಗನೆಂದು ನೆಗೆವ ಸಣ್ಣ ಮರಿಗಳಿಂದ ಹಿಡಿದು ,ಪುಟ್ಟ ಮಕ್ಕಳು, ಮುದುಕರು ಎಲ್ಲರೂ ಯುಗಾದಿಯ ಸಮಯದಲ್ಲಿ ನವ ಮುನ್ನುಡಿಯನ್ನು ಬರೆಯುತ್ತಾರೆ.ಸುತ್ತಲಿನ ಪರಿಸರದಲ್ಲೆಲ್ಲ ಪ್ರಸನ್ನತೆಯನು ಹರಡಿ, ಹೊಸ ಉಲ್ಲಾಸವನ್ನು ತುಂಬಿ ಬದುಕನ್ನು ಮತ್ತೆ ಪ್ರಚೋದಿಸುವ ಈ ಕಾಲವನ್ನು ಯುಗದ ಆದಿಯೆಂದೂ, ಹೊಸವರ್ಷವೆಂದೂ ನಮ್ಮ ಸಮಾಜ ಗುರುತಿಸಿರುವುದರಲ್ಲಿ ಅಪಾರವಾದ ಅರ್ಥ ಅಡಗಿದೆ.

 ಪ್ರತಿ  ದಿನವೂ ಹೊಸತೇ ಆದರೂ, ಕಾಲವನ್ನು ಗುಣಿಸುವವರು ಹಲವಾರು ವರ್ಷಗಳನ್ನು ಒಂದು ಕಾಲವಧಿಯಡಿ ಗುರುತಿಸಿ ಅದನ್ನು ಸಂವತ್ಸರವೆಂದು ಕರೆದಿದ್ದಾರೆ. ಈ ಪ್ರತಿ ಸಂವತ್ಸರದಲ್ಲಿ 60 ವರ್ಷಗಳನ್ನು ಕೂಡಿಹಾಕುತ್ತಾರೆ.ಈ ಗಣನೆಯ ಪಂಚಾಂಗದ ಪ್ರಕಾರ ವರ್ಷದ ಮೊದಲ ತಿಂಗಳೇ ಚೈತ್ರಮಾಸ. ಸಂಸ್ಕೃತ ಪದವಾದ ಯುಗ (ಕಾಲ) ಆದಿ(ಶುರುವಾತು) ಇನ್ನೂ ಕ್ಲಿಪ್ತವಾಗಿ ಹೇಳಬೇಕೆಂದರೆ ಕಲಿಯುಗದಲ್ಲಿ ಮಾತ್ರ ಆರಂಭವಾದ ಹಬ್ಬ. ಕಲಿಯುಗ ಶುರುವಾದ್ದು ಕೃಷ್ಣ ಈ ಲೋಕವನ್ನು ಬಿಟ್ಟು ತೆರಳಿದ ಬಳಿಕ. ಮಹರ್ಷಿ ವೇದವ್ಯಾಸರು ಇದನ್ನು ಹೀಗೆ ಹೇಳಿದ್ದಾರೆ “ ಯೆಸ್ಮಿನ್ ಕ್ರಿಷ್ಣೋ ದಿವಂವ್ಯತಃ, ತಸೇವ ಪ್ರತಿ ಪನ್ನಂ ಕಲಿಯುಗಃ “ ಎನ್ನುತ್ತಾರೆ. ಈ ಕಲಿಯುಗ ಶುರುವಾದ್ದು 3102 ಬಿ.ಸಿ. ಯ ಫೆಬ್ರವರಿ 17-18 ನೇ ತಾರೀಖಿನಂದಂತೆ.

ಗೌತಮೀಪುತ್ರ ಶತಕರ್ಣಿ, ಶತವಹಾನದ ರಾಜ  ವಸಂತಕಾಲದ ಈ ಮಹತ್ತನ್ನು ಗುರುತಿಸಿ ಯುಗಾದಿಯ ಆಚರಣೆಯನ್ನು ಶುರುಮಾಡಿದ ಎಂದು ನಂಬುವ ಚರಿತ್ರಕಾರರಿದ್ದಾರೆ. ಇದೇ ರಾಜವಂಶಜರು ಕರ್ನಾಟಕ, ಆಂಧ್ರಪ್ರದೇಶ  ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಆಳಿದ ಕಾರಣ ಈ ಹಬ್ಬವನ್ನು ಮುಖ್ಯವಾಗಿ ಈ ಮೂರು ರಾಜ್ಯಗಳಲ್ಲಿ ಆಚರಿಸುತ್ತಾರೆ. ಮಹಾರಾಷ್ಟ್ರ ದಲ್ಲಿ ಇದನ್ನು ‘ಗುಡಿಪಾಡ್ವ’ ಎಂದು ಕರೆಯುತ್ತಾರೆ.ಇದೇ ದಿನವನ್ನು ಉತ್ತರಭಾರತದವರು ‘ಚೈತ್ರ ನವರಾತ್ರಿ ‘ ಹಬ್ಬದ ಮೊದಲ ದಿನವಾಗಿ ಆಚರಿಸುತ್ತಾರೆ. ರಾಜಾಸ್ಥಾನದಲ್ಲಿ ‘ತಪ್ನಾ’ ಎನ್ನುವ, ಸಿಂಧಿಗಳು ‘ಚೇತಿ ಚಂದ್’ ಎನ್ನುವ ಮಣಿಪುರದವರು ‘ಸಜಿಬು ನೊನ್ಗ್ಮ ಪನ್ಬ’ ಎನ್ನುವ ಹೆಸರಿನ ಹಭ್ಭಗಳನ್ನು ಹೊಸವರ್ಷದ ಹೆಸರಲ್ಲಿ ಇದೇ ದಿನ ಆಚರಿಸಿದರೆ,  ಬಾಲಿ ಮತ್ತು ಇಂಡೋನೇಶಿಯಾದಲ್ಲಿರುವ ಹಿಂದೂಗಳು ‘ನ್ಯೇಪಿ’ ಎನ್ನುವ ಹೆಸರಲ್ಲಿ ಯುಗಾದಿಯ ತತ್ವ ಇರುವ ಹಬ್ಬವನ್ನು ಆಚರಿಸುತ್ತಾರೆ.

‘ಚಂದ್ರಮಾನ ಯುಗಾದಿ’ ಮತ್ತು ‘ಸೂರ್ಯಮಾನ ಯುಗಾದಿ’ ಗಳೆಂದು ಎರಡು ಬಗೆಯನ್ನು ಯುಗಾದಿಯಲ್ಲಿ ಜನರು ಆಚರಿಸಿದರೂ ಚೈತ್ರ ಶುದ್ದ ಪಾಡ್ಯಮಿ ಸೂಚಿಸುವುದು ಚಂದ್ರಮಾನ ಯುಗಾದಿಯನ್ನು. ಪ್ರಕಾಶಮಯವಾದ ಚೈತ್ರದ ಆಮೇಲಾರ್ಧದ ಮೊದಲನ್ನು ಯುಗಾದಿಯ ದಿನ ಸೂಚಿಸುತ್ತದೆ.

ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ, ಕೇರಳ, ತಮಿಳುನಾಡುಗಳಲ್ಲಿ ಸೌರಮಾನದ ರೀತ್ಯ ಯುಗಾದಿ ಆಚರಿಸುತ್ತಾರೆ. ಸೌರಮಾನ ಯುಗಾದಿಯನ್ನು ಸೂರ್ಯ ಭಗವಾನನು ಮೇಷ ರಾಶಿಯನ್ನು ಪ್ರವೇಶಿಸುವ ದಿನದಿಂದ ಆಚರಿಸುತ್ತಾರೆ. ‘ಬಾರ್ಹಸ್ಪತ್ಯಮಾನ’ ಎಂಬ ಆಚರಣೆಯೂ ಭಾರತದಲ್ಲಿ ಚಾಲ್ತಿಯಲ್ಲಿದೆ.

ಪ್ರಕೃತಿಯ ನಾಲ್ಕು ಕಾಲಗಳು ತಮ್ಮಿಂದ ತಾವೆ ಪುನರಾವರ್ತಿತವಾಗುತ್ತಲೇ ಬಂದಿವೆ. ಆದರೆ ಮಾನವನಿಗೆ ಅದನ್ನು ಅಳೆಯುವ ಬಯಕೆ. ಆಯಾ ಕಾಲಗಳಲ್ಲಿ ನಡೆವ ಪ್ರಕೃತಿಯ ವಿದ್ಯಮಾನಗಳನ್ನು ಗಮನಿಸಿ , ಅದಕ್ಕೆ ಸೂಕ್ತ ಹೆಸರಿಟ್ಟು ಅದರ ಸಂಭ್ರಮಗಳಲ್ಲಿ ತಾನು ಕೂಡ ಭ್ರಮಿತನಾಗುವ ಬಯಕೆ. ಈ ಪರಿಭ್ರಮಣೆಯ ಪರಿಣಾಮವೇ ಯುಗಾದಿ ಹಬ್ಬದ ಆಚರಣೆಗೆ ಕಾರಣ. ಮನುಜನಲ್ಲಿ ಕೂಡ ಒಂದು ರೀತಿಯಲ್ಲಿ ಭಾವ ಪುನರುತ್ಥಾನವಾಗುವ ಕಾಲವಿದು. ಜೀವನದ ಅನುಭವವಿರುವ ಹಿರಿಯರು, ಬದುಕನ್ನು ಅದರ ನಿಜರೂಪದಲ್ಲಿ ನೋಡಿದವರು ಕಾಲದಲ್ಲಿ ಒಳಿತೂ-ಕೆಡುಕೂ ಇರುವುದನ್ನು ಗಮನಿಸಿ ಅದನ್ನು ಜೀವನದ ಬೇವು (ಕಹಿ) ಬೆಲ್ಲ (ಸಿಹಿ)ಗಳಲ್ಲಿ ಗುರುತಿಸಿದ್ದಾರೆ. ಅವೆರಡೂ ಸಮನಾಗಿದ್ದಲ್ಲಿ ಬದುಕು ಸಮತೋಲಿತವಾ್ಗಿರಬಲ್ಲದು ಎಂಬ ಅಪಾರವಾದ ಅರಿವನ್ನು ತೋರುತ್ತ, ಅಷ್ಟನ್ನಾದರೂ ಅನುಗ್ರಹಿಸು ಎಂಬ ಬೇಡಿಕೆಯನ್ನು ದೇವನ ಮುಂದಿಡುತ್ತ ಯುಗಾದಿಯಲ್ಲಿ ದೇವರನ್ನು ಅನುನಯಿಸುತ್ತಾರೆ. ಜನ ಸಮುದಾಯಗಳಲ್ಲಿ, ಸಮಾಜದಲ್ಲಿ, ಕುಟುಂಬಗಳಲ್ಲಿ ,ಪ್ರಕೃತಿಯಲ್ಲಿ ವರ್ಷದ ಕಾಲಾವಧಿಯಲ್ಲಿ ಆಗಿರಬಹುದಾದ ಹಲವು ಒಳ್ಳೆಯ-ಕೆಟ್ಟ ಘಟನೆಗಳು ಬದುಕಿನ ಸಹಜವಾದ ಕ್ರಿಯೆ ಎಂದು ಸಾರುವಲ್ಲಿ ಅಪಾರ ಪ್ರಬು್ದ್ಧತೆಯನ್ನು ಮನುಜ ಈ ಹಬ್ಬದ ಮೂಲಕ ಮೆರೆದಿದ್ದಾನೆ.

ಯುಗಾದಿಯಲ್ಲಿ ಇದೇ ತಿಳಿವಿನ ಹೂರಣವನ್ನು ಒಬ್ಬಟ್ಟಿನಲ್ಲಿಟ್ಟು ತಟ್ಟಿದ್ದಾನೆ. ಪುಳಿಯೋಗರೆಯ ಹಿತವಾದ ಹುಣಸೆ ಹುಳಿಯಲ್ಲಿ,ಮಸಾಲೆಯಲ್ಲಿ ಸವಿದಿದ್ದಾನೆ. ಮಾವನ ಕಾಯಿ ಚಿತ್ರಾನ್ನವೂ ಜನಪ್ರಿಯ. ಆದರೆ ಯುಗಾದಿಯ ಸಾಂಕೇತಿಕ ಅಡುಗೆ ಅಂದರೆ ಉಗಾದಿ ಪಚಡಿ!

ಬೆಲ್ಲ, ಹಸಿಮೆಣಸಿನಕಾಯಿ,ಬೇವಿನೆಲೆ, ಹುಣಿಸೇಹಣ್ಣು, ಉಪ್ಪನ್ನು ಬಳಸಿ ಮಾಡುವ ಈ ನೈವೇದ್ಯದಡುಗೆಯಲ್ಲಿ ಬದುಕಿನ ಸುಖ,ದುಗುಡ, ಕಹಿ,ಕೋಪ,ಮತ್ತು ಆಶ್ಚರ್ಯ ಭಾವಗಳನ್ನು ಮೇಳೈಸಿ ಮತ್ತೆ  ಬದುಕು ಹೇಗೆ ಎಲ್ಲ ಅನುಭವಗಳ ಮಿಷ್ರಣ ಎನ್ನುವುದನ್ನು ಸಾಬೀತುಮಾಡಿ  ಜನರಿಗೆ ಸರಳವಾಗಿ ಅನುಭವಕ್ಕೆ ಬರುವಂತೆ ಮಾಡಿ, ಹೀಗೇ ಬದುಕನ್ನು ಎಲ್ಲ ರುಚಿಗಳಲ್ಲಿ ಅಸ್ವಾದಿಸಿ ಎನ್ನುವ ಕರೆಯನ್ನು ಯುಗಾದಿ ಹಬ್ಬದ ಮೂಲಕ ನೀಡಿದ್ದಾನೆ.ಈ ನಿಟ್ಟಿನಲ್ಲಿ ಯುಗಾದಿ ಬರೀ ಹೊಸವರ್ಷದ ಆಚರಣೆಯನ್ನು ಪ್ರತಿಪಾದಿಸುವ ಹಬ್ಬಮಾತ್ರವಾಗಿರದೆ ಬದುಕಿನ ಅನುಭವವನ್ನು ಸಮಚಿತ್ತನಾಗಿ ಸ್ವೀಕರಿಸಿರುವ ಮನುಷ್ಯನ ಪ್ರಬುದ್ಧತೆಯ ಶಿಖರ ಶೃಂಗವನ್ನು ತಿಳಿಸುವ ಹಬ್ಬವಾಗಿದೆ. ಬದುಕಲ್ಲಿ ಕಹಿ ಮಿಳಿತವಾಗಿದ್ದರೂ ಇನ್ನೆಲ್ಲ ಅನುಭವಗಳನ್ನು ಸೇರಿಸಿ ನೋಡಿದಲ್ಲಿ ಹೇಗೆ ಇದು ಸರಳವಾಗಿ ಸ್ವೀಕೃತವಾಗಬಲ್ಲುದು  ಎಂಬ ಸಂದೇಶವನ್ನು ಸಾರುವ ಹಬ್ಬವಿದು.

ಈ ಹಬ್ಬಕ್ಕೆ ದೇವರ ಕಥೆಗಳ ಜೋಡನೆ ಮಾಡುವ ಪ್ರಯತ್ನವೂ ಆಗಿವೆ. ಕೆಲವರು ಇದನ್ನು ಆದಿಕರ್ತ ಬ್ರಹ್ಮನು ಸೃಷ್ಟಿಯನ್ನು ಶುರುಮಾಡಿದ ಮೊದಲ ದಿನವೆಂದು ನಂಬುತ್ತಾರೆ. ಈ ದಿನ ಮನೆಗಳು ಇನ್ನಿಲ್ಲದಂತೆ ಬೇವು ಮತ್ತು ಮಾವಿನೆಲೆಗಳಿಂದ ಅಲಂಕೃತವಾಗುವುದನ್ನು ಗಮನಿಸಿದ್ದೀರಷ್ಟೆ? ಇದಕ್ಕೂ ಒಂದು ಉಪಕಥೆಯಿದೆ. ಆ ಪ್ರಕಾರ  ಗಣೇಶ ಮತ್ತು ಕಾರ್ತಿಕೇಯರಿಬ್ಬರಿಗೂ ಮಾವು ಎಂದರೆ ಅಪಾರ ಪ್ರೀತಿ. ಮಾವಿನ ಚಿಗುರು ಶುರುವಾಗುವುದು ಈ ವಸಂತದ ಸಮಯದಲ್ಲೇ.ಅಪತ್ತುಗಳ ನಿವಾರಕ ಗಣೇಶನನ್ನು ಈ ಸಮಯದಲ್ಲಿ ಪೂಜಿಸುವ ಪರಿಪಾಠವಿರುವುದರಿಂದ ಈ ಹಬ್ಬಕ್ಕೆ ಮಾವಿನೆಲೆಯ ತೋರಣ ಪ್ರತಿ ಮನೆಯನ್ನು ಸಿಂಗರಿಸುತ್ತದೆ. ಹೀಗೆ ಮಾಡಿರೆಂದು ಕಾರ್ತಿಕೇಯನು ಜನರಿಗೆ ಹೇಳಿದನೆಂಬ ಪ್ರತೀತಿಯಿದೆ.

ಬೇವು ಬೆಲ್ಲವನ್ನು ತಿಂದರೆ ದೇಹವು ವಜ್ರಕಾಯವಾಗಬಲ್ಲುದು ಎಂದು ಕೂಡ ಕೆಲವರು ಬರೆದಿದ್ದಾರೆ. ಹಾಗೆಂದೇ ಗಣೇಶನನ್ನು ಸ್ತುತಿಸುವ ಒಂದು ಶ್ಲೋಕ ಹೀಗೆ ಹೇಳುತ್ತದೆ.”ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ, ಸರ್ವಾರಿಷ್ಟ ವಿನಾಶಾಯ ನಿಂಬಕಂ ದಳ ಭಕ್ಷಣಂ “ ಎಂದು ನಂಬಿ ಬೇವು ಬೆಲ್ಲವನ್ನು ತಿಂದು, ಇತರರಿಗೂ ಹಂಚುತ್ತಾರೆ.

ಸಂಪ್ರದಾಯದ ಪ್ರಕಾರ ಯುಗಾದಿಯ ಆಚರಣೆ  ಎಣ್ಣೆ ಸ್ನಾನ,ಪೂಜೆ, ಪ್ರಾರ್ಥನೆ, ಹೋಳಿಗೆ ಊಟ, ಹೊಸಬಟ್ಟೆ, ಹೊಸ ಆಶಯಗಳು, ಇತರರಿಗೆ ಒಳಿತನ್ನು ಕೋರುವುದನ್ನು ಬಿಟ್ಟರೆ ಮತ್ತೇನು ವಿಶೇಷವಿಲ್ಲ. ಆದರೆ, ಹಳ್ಳಿಗಳಲ್ಲಿ ಹಾಗೂ ಇನ್ನೂ ಸಂಪ್ರದಾಯ, ಆಚರಣೆ ಉಳಿಸಿಕೊಂಡಿರುವ ಅಗ್ರಹಾರಗಳಲ್ಲಿ,ಪುರೋಹಿತರು, ಪಂಡಿತರು ಯುಗಾದಿಯಂದು ಸ್ನಾನ ಸಂಧ್ಯಾದಿ ಮುಗಿದ ಬಳಿಕ, ಕುಲದೇವರನ್ನೂ,ಪಂಚಾಗವನ್ನೂ ಪೂಜಿಸಿ, ಅಗಲ ಬಾಯಿಯ ಪಾತ್ರೆಯಲ್ಲಿ ತುಪ್ಪ ಹಾಕಿ ಮನೆಮಂದಿಯೆಲ್ಲ ಅದರಲ್ಲಿ ಮುಖ ನೋಡಿಕೊಳ್ಳುತ್ತಾರೆ. ಆನಂತರ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಸರ್ವದೋಷ ಪರಿಹಾರ ಆಗತ್ತೆ ಎಂಬುದು ನಂಬಿಕೆ. ಸಂಜೆ ಊರಿನ ಅರಳಿ ಕಟ್ಟೆಯಲ್ಲಿ ಸೇರಿ, ಪಂಡಿತರು ಊರಿನ ಜನಕ್ಕೆ ಪಂಚಾಂಗ ಓದಿ ಹೇಳುತ್ತಾರೆ. ವರ್ಷಫಲ ಕೇಳುವ ಸಂಪ್ರದಾಯ ಹಳ್ಳಿಗಳ ಕಡೆ ಇನ್ನೂ ಜೀವಂತವಾಗಿದೆ.

ಪ್ರತಿದೇಶದಲ್ಲೂ ಹಬ್ಬವನ್ನು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಅಲ್ಪ ಸ್ವಲ್ಪ ಮಾರ್ಪಾಟು ಮಾಡಿಕೊಳ್ಳುವುಸು ಸಹಜವೇ.ಯುಗಾದಿಯ ಹಬ್ಬವನ್ನು ಕೂಡ ಇದು ಹೊರತುಪಡಿಸಿಲ್ಲ. ಕರ್ನಾಟಕದ ಕೆಲವು ಭಾಗಗಳಲ್ಲಿ ಯುಗಾದಿಯ ದಿನ ಜೂಜಾಡುವುದೂ ಒಂದು ಸಂಪ್ರದಾಯವಾಗಿ ಬೆಳೆದುಬಿಟ್ಟಿದೆ. ಯುಗಾದಿಯ ಮಾರನೇ ದಿನವನ್ನು ವರ್ಷತೊಡಕು ಎಂದೂ ಆಚರಿಸುತ್ತಾರೆ. ಅಂದು ಮಾಂಸಾಹಾರಿಗಳು ಕಡ್ಡಾಯವಾಗಿ ಮಾಂಸದ ಊಟ ಮಾಡುತ್ತಾರೆ. ಮದ್ಯ ಸೇವನೆಯೂ ಈ ವರ್ಷತೊಡಗಿನ ಆಚರಣೆಯ ಭಾಗಗಳಲ್ಲೊಂದು.ಹಾಗಾಗಿ ಕೆಲವರಿ ಯುಗಾದಿಯ ಮಜಾ ಮಾರನೆಯ ದಿನದ ವರ್ಷ ತೊಡಕಿನಲ್ಲಿ ಸಿಗುತ್ತದೆ.

ಹಾಗಾಗಿ ಯುಗಾದಿ ಅಂದರೆ…. ಚಿಗುರಿನೆಲೆಗಳು ಹಾಡುವ ಪಲ್ಲವಿ, ಹಳೆಯ ಕೆಟ್ಟ ನೆನಪಿನ ಕೊನೆ, ಹೊಸತಿನ ಆಗಮನ, ಕಳೆದ ದಿನಗಳಿಗೆ ವಿದಾಯ ಮತ್ತು ಮುಂದಿನ ದಿನಗಳ ಬಗ್ಗೆ ಇತರರಿಗೆ ಶುಭವನ್ನು ಕೋರುವ, ದೇವರಲ್ಲಿ ಪ್ರಾರ್ಥಿಸುವ  ಕವನ.

 ಅಚ್ಚುಕಟ್ಟಾಗುವ ಮನೆ, ಬಾಗಿಲಿಗೆ  ತಳಿರು ತೋರಣ ,ದೇವರ ಮನೆಯ ಬಾಗಿಲಿಗೆ ಚಿಗುರು ಹಸಿರಿನ ಮಾವಿನೆಲೆಯ ಸಿಂಗಾರ, ಮನೆಯ ಮುಂದೆ ಚಿಕ್ಕಿಯ ಬಣ್ಣದ ರಂಗೋಲಿ, ಶುಭ್ರವಾಗುವ ರಾಸುಗಳು, ಅಭ್ಯಂಗನದ ಸ್ನಾನ, ಬೆಳಗುವ ಮನಸ್ಸು, ಪೂಜೆ ,ಪುನಸ್ಕಾರ, ಮುಂದಿನ ಶುಭ ದಿನಗಳಿಗಾಗಿ ದೇವರಲ್ಲಿ ಪ್ರಾರ್ಥನೆ, ಹೊಸ ಬಟ್ಟೆ, ಒಬ್ಬಟ್ಟಿನ ತಟ್ಟೆ, ಒಳ್ಳೆಯ ಮಾತು, ಶುಭ ಹಾರೈಕೆ, ಸಂಕಲ್ಪಗಳ ಹೂ ಮಾಲೆಯನ್ನು ಹೊಸೆಯುವ ಮತ್ತು ಕಳೆದ ಕಾಲದ ಪುನರಾವಲೋಕನಕ್ಕೆ ಅವಕಾಶ- ಎಲ್ಲವೂ  ಹೌದು.

 ಜೊತೆಗೆ ಯುಗಾದಿಯ ದಿನ ಮುಂಬರುವ ವರ್ಷದ ಬಗ್ಗೆ ಮುನ್ನುಡಿಯ ಉವಾಚವನ್ನು ಕೇಳುವ ಪರಿಪಾಠವೂ ಇದೆ. ಯುಗಾದಿಯ ದಿನ ಶುರು ಮಾಡುವ ಎಲ್ಲ ಹೊಸ ಯೋಜನೆಗಳು ಶುಭದಾಯಕ ಎನ್ನುವ ನಂಬಿಕೆಯೂ ಇದೆ.

ಹೊಸ ಸೇರ್ಪಡೆ ಎಂದರೆ ವಿಶ್ವರತ್ನ ಮಹಾನ್ ಮಾನವತಾವಾದಿ, ಶೋಷಿತ ಜನ ವಿಮೋಚಕ ಮತ್ತು ಬಹುಜನ ಬಂಧು ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ ಜನ್ಮದಿನವನ್ನೂ ಜನರು  ’ಭೀಮ ಯುಗಾದಿ ’ ಎಂದು ಕರೆದಿರುವುದು. ಈ ವರ್ಷ ಆಚರಿಸುವ ಚಂದ್ರಮಾನ ಯುಗಾದಿಯು ಏಪ್ರಿಲ್ 13 ರಂದು ಮಂಗಳವಾರ ಬಂದಿದೆ. ಏಪ್ರಿಲ್ 14 ರ ಬುಧವಾರ ಬರುವ ಅಂಬೇಡ್ಕರರ ಜನ್ಮ ದಿನವನ್ನು(ವರ್ಷ ತೊಡಕಿನ ದಿನವನ್ನು) ಭೀಮ ಯುಗಾದಿ ಎಂದು ಕರೆಯಲಾಗುತ್ತಿದೆ.

ಯುಗಾದಿ ನಮ್ಮ ನಾಡಿನ ಪ್ರಬುದ್ಧ ಹಬ್ಬ. ಹಿಂದೂಗಳ ಹಬ್ಬವೇ ಆದರೂ, ಈ ಹಬ್ಬದ ಹಿಂದಿನ ಮೌಲ್ಯ ಲೋಕಕ್ಕೇ ಅನ್ವಯವಾಗುವಂತದ್ದು.ಹಾಗಾಗಿ ತತ್ವದಲ್ಲಿ ಇದು ಧರ್ಮವನ್ನು ಮೀರಿದ್ದು. ಮನು ಕುಲದ ಪ್ರಬುದ್ಧತೆಯನ್ನು, ಕಾಲವನ್ನು ಅಳೆವ, ಗುಣಿಸುವ ಬೌದ್ಧಿಕ ಮಟ್ಟದ್ದು. ಪ್ರಕೃತಿಯಲ್ಲಿನ ಬದಲಾವಣೆಗಳನ್ನು ಗುರುತಿಸಿ ಅದರೊಡನೆ ತನ್ನನ್ನು ಜೋಡಿಸಿಕೊಳ್ಳುವ ಮನುಷ್ಯನ ತಾತ್ವಿಕತೆಯನ್ನು ಮತ್ತು ಹೊಂದಾಣಿಕೆಯನ್ನು ತೋರುವಂತದ್ದು. ಸಾಮಾಜಿಕವಾಗಿ ಭಾರತದಲ್ಲಿದ್ದ ಸಮುದಾಯಗಳಲ್ಲಿನ ಅರೋಗ್ಯವಂತ ಮನೋಧರ್ಮವನ್ನು ಬಿಂಬಿಸುವಂತಹ ಹಬ್ಬ ಯುಗಾದಿ. ಅದಕ್ಕೆಂದೇ ಪ್ರತಿಯೊಬ್ಬರ ಬದುಕಲ್ಲಿ ಯುಗಾದಿ ಮತ್ತೆ ಮತ್ತೆ ಮರಳಿ ಬರಲಿ ಮತ್ತು  ಇನ್ನಷ್ಟು ಸಂಭ್ರಮವನ್ನು ,ಸಂತೋಷವನ್ನು ತರಲಿ.

ಎಲ್ಲರಿಗೂ ಯುಗಾದಿ ಹಬ್ಬದ ಶುಭ ಹಾರೈಕೆಗಳು.

ಡಾ. ಪ್ರೇಮಲತ ಬಿ.