ಇನ್ಸ್ಟಾ ರೀಲ್ ಮಂಡಲದ ಹೊರಗಿನ ಐತಿಹಾಸಿಕ ರೋಮ್

  • ರಾಮಶರಣ ಲಕ್ಷ್ಮೀನಾರಾಯಣ

ರೋಮ್ ಕ್ರಿ.ಪೂ ೨೫೦ ರಿಂದ ಇಲ್ಲಿಯವರೆಗೆ ಸತತವಾಗಿ ರಾಜಧಾನಿಯಾಗಿ ಮೆರೆದ ನಗರ. ಪ್ರಜಾಪ್ರಭುತ್ವ, ರಾಜಾಡಳಿತ, ಧರ್ಮಶಾಹಿ ಹೀಗೆ ಹಲವು ರೀತಿಯ ಪ್ರಭುತ್ವಗಳ ಕೇಂದ್ರವಾಗಿತ್ತು, ರೋಮ್ ನಗರ. ಇಲ್ಲಿ ಹೆಜ್ಜೆಯಿಟ್ಟಲ್ಲೆಲ್ಲ ಇತಿಹಾಸದ ಕುರುಹು. ಕಲ್ಲೆಸೆದಲ್ಲಿ ಪುರಾತನ ಕಟ್ಟಡ; ಕಿವಿಗೊಟ್ಟರೆ ಅವು ಹೇಳುವ ಕಥೆಗಳು; ಕಣ್ಣು ಹಾಯಿಸಿದಲ್ಲೆಲ್ಲ ಕಾಣುವ ಪ್ರತಿಮೆಗಳು, ಚರ್ಚುಗಳು,  ಮಂದಿರಗಳು; ಆಘರಾಣಿಸಿದರೆ ಸವರುವ ಪುರಾತನ ಕಂಪು; ತಡವಿದರೆ ಉದುರುವ ನೆನಪುಗಳು. ಹೇಳುತ್ತಾ ಹೋದರೆ ಮುಗಿಯದ ದ್ರಶ್ಯಗಳು, ಮೊಗೆದಷ್ಟೂ ಮುಗಿಯದ ಅನುಭವಗಳು ಒಂದೇ ನಗರದಲ್ಲಿ ಸಿಗುವ ಅವಕಾಶ ಇನ್ನೊಂದೆಡೆ ಸಿಗುವುದು ಅಪರೂಪ. ಜನಪ್ರಿಯವಾದ ರೋಮ್ ನಗರದಲ್ಲಿ ಇನ್ಸ್ಟಾಗ್ರಾಮ್ ಕಣ್ಣಿಗೆ ಬೀಳದ, ಚಾಟ್ ಜಿಪಿಟಿ ಕೊಡುವ ಪ್ರಯಾಣ ಯೋಜನೆಯ ಹರವಿಗೆ ಸಿಗದ ಕುತೂಹಲಕಾರಿ ತಾಣಗಳಿವೆಯೇ?

ಯಾವುದೇ ಪ್ರವಾಸಿ ತಾಣವನ್ನು ಸಂದರ್ಶಿಸುವ ಮೊದಲು ಊರಿನ ವಿವರ, ವಸತಿ, ವಿಮಾನ ಯಾನಗಳನ್ನು ಅನ್ವೇಷಿಸಲು  ಅಂತರ್ಜಾಲದ ಮೊರೆ ಹೋಗುವುದು ಸರ್ವೇ ಸಾಮಾನ್ಯ. ನಮ್ಮ ಫೋನ್, ಕಂಪ್ಯೂಟರ್, ಗೂಗಲ್ ಹೋಮ್, ಅಲೆಕ್ಸ್ ಇವುಗಳಲ್ಲೆಲ್ಲ ಹುದುಗಿ, ನಮ್ಮ ಬದುಕಿನ ಅಂತರಂಗದ ಶೋಧನೆಗೆ ತಮ್ಮ ಬದುಕನ್ನೇ ಮುಡುಪಾಗಿಟ್ಟಿರುವ ಗೂಗಲ್, ಮೆಟಾದಂತಹ ಕಂಪನಿಗಳು, ಮಾಂತ್ರಿಕ ದೀಪದ ಗುಲಾಮನಂತೆ, ಇನ್ಸ್ಟಾ, ಯೂ ಟ್ಯೂಬ್ ಇತರ ತಾಣಗಳ ಮೂಲಕ ಆ ಊರಿನಲ್ಲಿ ನೋಡಲು ಯೋಗ್ಯವಾದ ಸ್ಥಾನಗಳು ಯಾವುದು ಎಂಬ ವಿಡಿಯೋಗಳನ್ನು ನಿಮ್ಮ ಫೋನಿಗೋ, ಟ್ಯಾಬ್ಲೆಟ್ಟಿಗೋ ಕಳಿಸುತ್ತ ತಮ್ಮ ಕೈಲಾದ ಅಳಿಲು ಸೇವೆ ಸಲ್ಲಿಸುತ್ತಲೇ ಇರುತ್ತವೆ. ಜಾಲತಾಣಗಳು ಪ್ರಚಲಿತಗೊಳಿಸಿದ ಜಾಗೆಗಳನ್ನು ಕಂಡಾಗ ಇದರ ಥಳುಕು ಇಷ್ಟೇನೆ; ಅಂತಹ ಜಾಗೆಗಳನ್ನು ಮಾತ್ರ ನೋಡಿ ಮರಳಿದರೆ ನಮ್ಮ ಲೈಫು ಇಷ್ಟೇನೇ ಎಂಬ ಅನುಮಾನ ಬಂದೀತು. ಗಿಜಿಮಿಜಿಗುಡುವ ಜಾಗೆಗಳಲ್ಲಿ ಊರಿನ ವೈಶಿಷ್ಠ್ಯವನ್ನು ಕಾಣದೇ, ಅರಿಯದೇ ‘ನಾ ಬಂದೆ, ನಾ ಕಂಡೆ, ನಾ ಹೋದೆ’ ಎಂದು ಷರಾ ಹಾಕಿ ಹೋಗುವ ಭೇಟಿಗಳು ಮನದಾಳದಲ್ಲಿ ಮನೆ ಮಾಡಲು ಸಾಧ್ಯವೇ? ಜನ ಜಂಗುಳಿಯಿಂದ ದೂರವಾಗಿಯೋ, ಗದ್ದಲದ ನಡುವೆಯೇ ಕಂಬಳಿ ಹೊದ್ದು ಅಡಗಿರುವ ಅನುಭವಗಳನ್ನು ಕೆದಕಿದಾಗ ಅವು ಹೇಳುವ ಕಥೆಗಳು ಸೃಷ್ಟಿಸುವ ನೆನಪು, ಆಪ್ತವಾಗಿ, ಬಾಳಿನುದ್ದಕ್ಕೂ ಸವಿಯುವ ಬುತ್ತಿಯಾಗುವವು. ರೋಮ್ ನ ಟ್ರೆವಿ ಕಾರಂಜಿ, ಕೊಲೋಸಿಯಂ, ವ್ಯಾಟಿಕನ್, ಪ್ಯಾಂಥಿಯನ್ ಗಳ ಹೊಳಪಿನ ನಡುವೆ ಯುಗಗಳೇ ಕಳೆದರೂ ಬದಲಾಗದ ಮಾನವನ ವರ್ತನೆಗೆ ಒಂದು ಚರ್ಚ್ ಹಾಗೂ ಒಂದು ಪ್ರತಿಮೆ ದ್ಯೋತಕವಾಗಿವೆ. ಈ ಅನುಭವಗಳನ್ನು ಅನಾವರಣಗೊಳಿಸಿದವನು ‘ರೋಮ್ ನಗರದ ಅಡಗಿದ ರತ್ನಗಳು’ ಎಂಬ ಕಾಲ್ನಡಿಗೆ ಪ್ರಯಾಣದ ಮಾರ್ಗದರ್ಶಿ. ಆತನಿಗೆ ನಾನು ಋಣಿ.

ಕ್ರಿಸ್ತನ ದೇಹತ್ಯಾಗದ ನಂತರ ಆತನ ಪ್ರಮುಖ ಶಿಷ್ಯ ಪೀಟರ್ ಕ್ರಿ.ಶ ೪೦ ರ ಸುಮಾರಿಗೆ ರೋಮ್ ನಗರದ ಹೊರ ವಲಯಕ್ಕೆ ಬಂದ ಎಂಬ ಐತಿಹ್ಯವಿದೆ. ಹಿಂದೂ ಧರ್ಮದಂತೆ, ಹಲವಾರು ದೇವರುಗಳನ್ನು ಪೂಜಿಸುವ ವಾಡಿಕೆ ರೋಮನ್ನರ ಧರ್ಮದಲ್ಲೂ ಇತ್ತು. ಮೂರ್ತಿ ಪೂಜೆ, ಸಾಂಪ್ರದಾಯಿಕ ಆಚರಣೆಗಳು ಸಾಮಾನ್ಯವಾಗಿದ್ದ ಕಾಲವದು. ಜಗತ್ತಿಗೊಬ್ಬನೇ ದೇವ, ಆತನ ಪುತ್ರ ಕ್ರಿಸ್ತ ಎಂಬ ಕ್ರಿಶ್ಚಿಯನ್ ನಂಬಿಕೆ ಆಗ ಹೊಸದು. ಹೊಸದನ್ನು ನಂಬುವುದು, ವಿಚಾರಗಳಿಗೆ ತೆರೆದುಕೊಳ್ಳುವುದು ಸುಲಭವಲ್ಲ. ಈ ವೈಚಾರಿಕತೆಯ ಸಂಘರ್ಷದಲ್ಲಿ ರೋಮನ್ನರು ಕ್ರಿಸ್ತನ ಅನುಯಾಯಿಗಳನ್ನು ಸಹಿಸಲಿಲ್ಲ. ವ್ಯವಸ್ಥಿತವಾಗಿ ಕ್ರಿಶ್ಚಿಯನ್ನರನ್ನು ಹಿಂಸಿಸಿ, ಅಟ್ಟಿಸಿಕೊಂಡು ಹೋಗಿ ಹತ್ಯೆ ಮಾಡತೊಡಗಿದರು. ಸಂತ ಪೀಟರ್ ಕೂಡ ಚಕ್ರವರ್ತಿ ನೀರೋನ ಕಾಲದಲ್ಲಿ ಈ ಹಿಂಸಾಕಾಂಡಕ್ಕೆ ಶಿಲುಬೆಯೇರಿ ಬಲಿಯಾದ.

(ನೆಲಮಳಿಗೆಯಲ್ಲಿನ ಪ್ರಾರ್ಥನಾ ಗೃಹದ ಭಿತ್ತಿಯಲ್ಲಿ ಸಿಸಿಲಿಯಾ, ವ್ಯಾಲೆರಿಯನ್ ಹಾಗೂ ಟಿಬರ್ಟಿಯಸ್ ರ ಮೊಸಾಯಿಕ್ ಭಾವಚಿತ್ರ)
ಸಂತ ಸಿಸಿಲಿಯ ಬೆಸಿಲಿಕಾದಲ್ಲಿ ಸಿಸಿಲಿಯಾಳ ಪ್ರತಿಮೆ (ಕತ್ತಿನಲ್ಲಿ ಮಚ್ಚಿನ ಗುರುತನ್ನು ನೋಡಿ )

ರೋಮ್ ನ ಒಂದು ಶ್ರೀಮಂತ ಕುಟುಂಬದಲ್ಲಿ ಕ್ರಿ.ಶ ೧೮೦ರಲ್ಲಿ ಸಿಸಿಲಿಯ ಎಂಬ ಕನ್ಯೆ ಹುಟ್ಟಿದಳು. ಕ್ರಿಸ್ತನ ಸಂದೇಶಗಳಿಂದ ಆಕರ್ಷಿತಳಾದ ಸಿಸಿಲಿಯ, ಉತ್ತಮ ಹಾಡುಗಾರ್ತಿ. ಆಕೆ ಜೀವನವಿಡೀ ಕನ್ಯೆಯಾಗಿಯೇ ಇದ್ದು, ಕ್ರಿಸ್ತನ ಸಂದೇಶವನ್ನು ಹರಡುವ ತೀರ್ಮಾನ ಮಾಡಿದಳು. ಆಕೆಯ ಪೋಷಕರಿಗೆ ಅದೇ ಊರಿನ ವ್ಯಾಲೇರಿಯನ್ ಎಂಬ ಯುವಕನಿಗೆ ಅವಳನ್ನು ಕೊಟ್ಟು ಮದುವೆ ಮಾಡುವ ಇಚ್ಛೆ. ಆಕೆ ವ್ಯಾಲೇರಿಯನ್ ಗೆ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದರೆ ಮಾತ್ರ ಮದುವೆ ಆಗುವೆ ಎನ್ನುವ ಷರತ್ತನ್ನೊಡ್ಡುತ್ತಾಳೆ. ಅವಳ ಪ್ರೀತಿಗೆ ಸಿಕ್ಕಿದ ವ್ಯಾಲೆರಿಯನ್ ಒಪ್ಪಿ ಅವಳನ್ನು ಮದುವೆಯಾಗುತ್ತಾನೆ. ಅದಲ್ಲದೇ ಆತನ ಸಹೋದರ ಟಿಬರ್ಟಿಯಸ್ ಕೂಡ ಆತನೊಡನೆ ಧರ್ಮಾಂತರ ಮಾಡುತ್ತಾನೆ. ಸಿಸಿಲಿಯ ಇವರೊಂದಿಗೆ ಕ್ರಿಸ್ತನ ಸಂದೇಶಗಳನ್ನು ಹಾಡುತ್ತ ಧರ್ಮ ಪ್ರಚಾರ ಮುಂದುವರೆಸಿದಳು. ರೋಮನ್ನರ ಕೆಂಗಣ್ಣಿಗೆ ಬಿದ್ದ ಮೂವರಿಗೂ ಮರಣದಂಡನೆಯಾಗುತ್ತದೆ (ಕ್ರಿ.ಶ ೨೩೦). ಸಿಸಿಲಿಯಾಳ ಹತ್ಯೆಗೈಯ್ಯುವ ಮೊದಲ ಪ್ರಯತ್ನ ವಿಫಲವಾಗುತ್ತದೆ. ನಂತರ ಅವಳ ಶಿರಚ್ಛೇದನ ಮಾಡುವ ಪ್ರಯತ್ನಗಳೂ ವಿಫಲವಾಗುತ್ತವೆ. ಆಕೆ ಮತ್ತೆ ಮೂರು ದಿನಗಳ ಕಾಲ ಬದುಕಿದ್ದು, ಹಾಡುತ್ತ ಕ್ರಿಸ್ತನ ಸಂದೇಶವನ್ನು ಪಸರಿಸುತ್ತಾಳೆ. ಪವಾಡ ಸದೃಶವಾಗಿ ಮಾರಣಾಂತಿಕ ಪ್ರಯತ್ನಗಳನ್ನು ಮೀರಿ ಬದುಕಿದ ಸಿಸಿಲಿಯಾಳನ್ನು ತದನಂತರ ಕ್ಯಾಥೋಲಿಕ್ ಚರ್ಚ್ ಸಂತಳನ್ನಾಗಿಸಿತು. ಸಂತ ಸಿಸಿಲಿಯ ಇಂದು ಸಂಗೀತದ ಪೋಷಕ ಸಂತಳೆಂದು (patron saint) ಗುರುತಿಸಲ್ಪಡುತ್ತಾಳೆ. ಆಕೆಯ ಚರ್ಚ್ ರೋಮ್ ನಗರದ ಟ್ರಾಸ್ಟವೇರ್ ಎಂಬಲ್ಲಿ ಇದೆ. ರವಿವಾರದ ಪ್ರಾರ್ಥನೆ ಕಾಲದಲ್ಲಿ ಇಲ್ಲಿನ ಕಾನ್ವೆಂಟ್ ನ ಸಾಧ್ವಿಗಳು ಹಾಡುವ ಪ್ರಾರ್ಥನೆಗಳು ವಿಶೇಷವಂತೆ. ಸಿಸಿಲಿಯಾಳ ಗೌರವಾರ್ಥ ಹಲವಾರು ಪ್ರಸಿದ್ಧ ಸಂಗೀತಕಾರರು ಕೃತಿಗಳನ್ನು ರಚಿಸಿದ್ದಾರೆ. ನೀವು ಈ ಚರ್ಚಿಗೆ ಭೇಟಿಯಿತ್ತರೆ, ಅಮೃತ ಶಿಲೆಯಲ್ಲಿ ಕಟೆದ ಸಿಸಿಲಿಯಾಳ ಪುತ್ಥಳಿಯನ್ನು ಕಾಣಬಹುದು. ಸಿಸಿಲಿಯಾಳ ಕತ್ತಿನಲ್ಲಿ ಮಚ್ಚಿನ ಗುರುತೂ ಇದೆ. ನೆಲ ಮಾಳಿಗೆಯಲ್ಲಿ ರೋಮನ್ ಬಂಗಲೆಯ ಪಳೆಯುಳಿಕೆಗಳಿವೆ (ಇದು ಸಿಸಿಲಿಯಾಳ ಮನೆಯಾಗಿತ್ತೆನ್ನುವ ಐತಿಹ್ಯವಿದೆ), ಸುಂದರವಾದ ಹೊಳೆಯುವ ಮೊಸಾಯಿಕ್ ನಿಂದ ಅಲಂಕರಿಸಿದ ಪ್ರಾರ್ಥನಾ ಗೃಹವೂ ಇದೆ.

ಸಿಸಿಲಿಯಾಳ ಅವನತಿಯೊಂದಿಗೆ ಕ್ರಿಸ್ತನ ಬೋಧನೆಗಳು ಅಂದು ಮಣ್ಣಾಗಲಿಲ್ಲ. ತದನಂತರ ಸುಮಾರು ಕ್ರಿ.ಶ ೩೩೦ ರಲ್ಲಿ ಕಾನ್ಸ್ಟಂಟಿನ್ ಚಕ್ರವರ್ತಿ ಕ್ರೈಸ್ತ ಧರ್ಮವನ್ನು ಅಂಗೀಕರಿಸುತ್ತಾನೆ (ಆ ಕಥೆಗೆ ಈಗ ಸಮಯವಿಲ್ಲ), ರೋಮನ್ನರು ಕ್ರಮೇಣ ಕ್ರೈಸ್ತ ಧರ್ಮವನ್ನನುಸರಿಸುತ್ತಾರೆ .

ರೋಮ್ ನಗರದ ಮಧ್ಯದಲ್ಲಿ (ಪ್ಯಾಂಥೆಯಾನ್ ದೇವಾಲಯದ ಸಮೀಪ) ಕ್ಯಾಮ್ಪೋ ಡಿ ಫಿಯೋರಿ ಎಂಬ ಪುರಾತನ ಸಂತೆ ಮಾಳವಿದೆ. ಇಂದಿಗೂ ಅಲ್ಲಿ ಪ್ರತಿದಿನ ಸಂತೆ ಕೂರುತ್ತದೆ. ಆ ಮಾರುಕಟ್ಟೆಯ ನಡುವೆ ಭಿಕ್ಷುವಿನ ಮೆಲುವಂಗಿ ಧರಿಸಿ ತಲೆ ತಗ್ಗಿಸಿ ನಿಂತ ವ್ಯಕ್ತಿಯ ತಾಮ್ರದ ಪುತ್ಥಳಿಯನ್ನು ಕಾಣುತ್ತೀರಿ. ಈತನೇ ಜೋರ್ಡಾನೋ ಬ್ರೂನೋ. ಈತ ೧೫೪೮ರಲ್ಲಿ ನೇಪಲ್ಸ್ ಪ್ರಾಂತ್ಯದ ನೋಲ ಎಂಬಲ್ಲಿ ಹುಟ್ಟಿದ. ಅವನನ್ನು ವಿದ್ಯಾಭ್ಯಾಸಕ್ಕಾಗಿ ನೇಪಲ್ಸಿಗೆ ಕಳಿಸುತ್ತಾರೆ. ಆಗಿನ ಕಾಲದಲ್ಲಿ ಚರ್ಚುಗಳೇ ಜ್ಞಾನಾರ್ಜನೆಯ ಕೇಂದ್ರಗಳಾಗಿದ್ದವು. ಬ್ರೂನೋ ನೇಪಲ್ಸ್ ನಲ್ಲಿ ಧರ್ಮ ಮೀಮಾಂಸೆಯನ್ನು ಅಭ್ಯಾಸ ಮಾಡಿದ. ಆತನ ಸ್ಮರಣ ಶಕ್ತಿ ಅಗಾಧ. ಅದನ್ನು ಬೆಳೆಸಲು ಆತ ತನ್ನದೇ ಆದ ವಿಶೇಷ ತಂತ್ರಗಳನ್ನು ಬೆಳೆಸಿಕೊಂಡಿದ್ದ. ಹೆಚ್ಚಿನ ಅಭ್ಯಾಸಕ್ಕಾಗಿ ಬ್ರೂನೋ ರೋಮ್ ನಗರಕ್ಕೆ ಬಂದಾಗ, ಅಂದಿನ ಪೋಪ್ ಆತನ ಸ್ಮರಣ ಶಕ್ತಿಯ ಪ್ರತಿಭೆಗೆ ಆಕರ್ಷಿತನಾಗಿ, ಬ್ರುನೋನ ಅಧ್ಯಯನಕ್ಕೆ ವಿಶೇಷ ವ್ಯವಸ್ಥೆ ಮಾಡಿಸುತ್ತಾನೆ. ಕ್ರೈಸ್ತ ಧರ್ಮದ ಉಚ್ಛ್ಛ್ರಾಯ ಕಾಲವದು. ಪೋಪ್ ಧರ್ಮಾಧಿಕಾರಿಯಾಗಿದ್ದನಲ್ಲದೇ ಮಧ್ಯ ಇಟಲಿಯ ರಾಜನೂ ಆಗಿದ್ದ. ಅದರೊಟ್ಟಿಗೆ ತನ್ನ ಪ್ರಭಾವವನ್ನು ಯೂರೋಪಿನ ಸಾಕಷ್ಟು ದೇಶಗಳ ರಾಜಕೀಯದಲ್ಲೂ ಬೀರಿದ್ದ. ಕ್ರಿಸ್ತನ ಬೋಧನೆಗೆ ವಿರುದ್ಧವಾಗಿ, ಕ್ರೈಸ್ತ ಧರ್ಮದಲ್ಲಿ ಅಸಹಿಷ್ಣುತೆ, ಕಂದಾಚಾರ, ಅಧಿಕಾರ ಲೋಲುಪತೆ ಬೇರು ಬಿಟ್ಟಿದ್ದವು. ಬ್ರೂನೋ ಪಾದ್ರಿಯಾಗಿ ಚರ್ಚ್ ಸೇರಿದ್ದರೂ, ವ್ಯಾಟಿಕನ್ ನಗರದಲ್ಲಿನ ಗ್ರಂಥಾಲಯಗಳಲ್ಲಿ ಹೆಚ್ಚು ಕಾಲ ಕಳೆದನೇ ಹೊರತು ಚರ್ಚುಗಳಲ್ಲಲ್ಲ. ಅಂದಿನ ಕ್ರೈಸ್ತ ಧರ್ಮದ ನಂಬಿಕೆಗಳಿಗೆ ವ್ಯತಿರಿಕ್ತವಾದ ವಿಚಾರಗಳತ್ತ ಬ್ರೂನೋ ಆಕರ್ಷಿತನಾಗಿ, ಆ ವಿಷಯಗಳ ಅಭ್ಯಾಸದಲ್ಲಿ ತೊಡಗಿಕೊಳ್ಳುತ್ತಾನೆ. ಎರಾಸ್ಮಸ್, ಕೋಪರ್ನಿಕಸ್ ರಂತಹ ದಾರ್ಶನಿಕರ ದೃಷ್ಟಿಕೋನವನ್ನು ತನ್ನದಾಗಿಸಿಕೊಂಡ ಬ್ರೂನೋ ಪೋಪ್ ನ ಅವಕೃಪೆಗೆ ಒಳಗಾಗಲು ತಡವಾಗಲಿಲ್ಲ.

ಸೈದ್ಧಾಂತಿಕ ರಾಜಿಗೆ ಒಪ್ಪದ ಜೋರ್ಡಾನೋ ಬ್ರೂನೋ

೧೫೭೬ ರಲ್ಲಿ  ರೋಮ್ ನಿಂದ ತಪ್ಪಿಸಿಕೊಂಡು ಓಡಿದ ಬ್ರೂನೋ, ಸ್ವಿಟ್ಝರ್ಲ್ಯಾನ್ಡ್, ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್ ದೇಶಗಳನ್ನೆಲ್ಲ ಸುತ್ತಿ, ಪ್ರಾಚಾರ್ಯನಾಗಿ, ಹೆಚ್ಚಿನ ಅಭ್ಯಾಸ ಮಾಡಿ, ೧೫೯೧ ರಲ್ಲಿ ವೆನಿಸ್ ನಗರಕ್ಕೆ ಮರಳಿದ. ಆಗ ವೆನಿಸ್, ವ್ಯಾಟಿಕನ್ನಿನ ಆಳ್ವಿಕೆಗೆ ಒಳಪಟ್ಟಿರಲಿಲ್ಲ. ಬ್ರೂನೋ ಹಾಗಾಗೇ ತಾನು ಅಲ್ಲಿ ಸುರಕ್ಷಿತವೆಂಬ ಭಾವನೆಯಲ್ಲಿ ಹಿಂದಿರುಗಿರಬಹುದು. ‘ಕ್ರಿಸ್ತ ದೇವನ ಸೃಷ್ಟಿ – ಮಗನಲ್ಲ, ಮೇರಿ ಕನ್ಯೆಯಾಗಿರಲಿಲ್ಲ, ಪವಿತ್ರ ಟ್ರಿನಿಟಿಗೆ ಅರ್ಥವಿಲ್ಲ, ಭೂಮಿ ಸೂರ್ಯನ ಸುತ್ತು ಸುತ್ತುತ್ತಿದೆ, ಬ್ರಹ್ಮಾಂಡದಲ್ಲಿ ಹಲವಾರು ಸೌರ ಮಂಡಲಗಳಿವೆ, ಹಾಗೆಯೇ ದೇವರೂ ಹಲವಾರು ಇರಬಹುದು’ ಇವೆಲ್ಲ ಬ್ರೂನೋನ ಬೋಧನೆಗಳಾಗಿದ್ದವು. ಪೋಪ್ ಹಾಗೂ ಆತನ ಸಹಚರರರು ಇದನ್ನು ಸಹಿಸಿಯಾರೇ? ಯಾವುದೋ ತಂತ್ರ ಹೂಡಿ, ವೆನಿಸ್ ನಗರದಲ್ಲಿ ಬ್ರುನೋನನ್ನು ಬಂಧಿಸಿದರು. ಸತತವಾಗಿ ಏಳು ವರ್ಷಗಳ ಕಾಲ ವ್ಯಾಟಿಕನ್ನಿನ ಜೈಲಿನಲ್ಲಿ ಚಿತ್ರಹಿಂಸೆ ಕೊಟ್ಟರೂ ಬ್ರೂನೋ ತನ್ನ ಆತನ ವಿಚಾರಧಾರೆಯನ್ನು ಬದಲಿಸಲು, ತಾನು ಪಡೆದ ಜ್ಞಾನವನ್ನು ಅಸತ್ಯ, ಪಾಪ ಎಂದು ಒಪ್ಪಿಕೊಳ್ಳಲಿಲ್ಲ. ಬ್ರುನೋನನ್ನು ಬಗ್ಗಿಸಲಾಗದೆ ಹತಾಶೆಯಿಂದ ಪೋಪ್ ಕ್ರಿ.ಶ ೧೬೦೦ ರಲ್ಲಿ ಆತನಿಗೆ ಮರಣದಂಡನೆ ವಿಧಿಸುತ್ತಾನೆ. ಆತನನ್ನು ಕ್ಯಾಮ್ಪೋ ಡಿ ಫಿಯೋರಿಗೆ ಕರೆದೊಯ್ಯುವಾಗ, ದಾರಿಯಲ್ಲಿ ತನ್ನ ವಿಚಾರಗಳಿಂದ ಬ್ರೂನೋ ಜನರ ಮೇಲೆ ಪ್ರಭಾವ ಬೀರದಿರಲಿ ಎಂದು ಆತನ ಬಾಯಿಯನ್ನು ಹೊಲಿಯುತ್ತಾರೆ. ಮಾರುಕಟ್ಟೆಯ ಮಧ್ಯದಲ್ಲಿ ಆತನ ಸಜೀವ ದಹನವಾಗುತ್ತದೆ, ಆದರೆ ಬ್ರುನೋನ ವಿಚಾರಗಳು ಅಲ್ಲಿ ದಹನವಾಗಲಿಲ್ಲ .

೧೮೮೯ರಲ್ಲಿ ರೋಮ್ ನಗರದ ಸ್ವತಂತ್ರ ಚಿಂತಕರ ಸಂಘ; ಜಡ್ಡು ಗಟ್ಟಿದ ಚರ್ಚಿನ ಸಂಪ್ರದಾಯಗಳಿಗೆ ಸೆಡ್ಡು ಹೊಡೆದು, ವೈಚಾರಿಕತೆಯ ಪ್ರತಿಪಾದನೆಗೆ ಜೀವನವನ್ನು ಮುಡಿಪಾಗಿಸಿದ ಬ್ರುನೋನ ಪುತ್ಥಳಿಯನ್ನು ಆತನನ್ನು ಬಲಿಕೊಟ್ಟ ಜಾಗದಲ್ಲಿ ಪ್ರತಿಷ್ಠಾಪಿತು. ಬ್ರುನೋನ ಪುತ್ಥಳಿ ವ್ಯಾಟಿಕನ್ ನಗರದತ್ತ ನೋಡುವಂತೆ ನಿಲ್ಲಿಸಿದ್ದನ್ನು ಅಂದಿನ ಪೋಪ್ ಸಹಿಸಲಿಲ್ಲವಂತೆ. ಅವನ ದೃಷ್ಟಿಯನ್ನು ಕಟ್ಟಿಹಾಕಲು ಮೂರ್ತಿಯ ಎದುರು ವ್ಯಾಟಿಕನ್ ಕಾಣದಂತೆ ಒಂದು ಅಪಾರ್ಟ್ಮೆಂಟ್ ಸಂಕೀರ್ಣವನ್ನು ಕಟ್ಟಿಸಿದ ಎನ್ನುತ್ತಾರೆ. ಈ ಕಥೆಯ ಸತ್ಯಾಸತ್ಯತೆಯನ್ನು ನಾನು ಒರೆಗಿಟ್ಟಿಲ್ಲ.

ರೋಮ್ ನಗರ ಇಂತಹ ಅದ್ಭುತ ಕಥೆಗಳ ತಳವಿಲ್ಲದ ಗುಡಾಣ. ಇವನ್ನು ನೋಡಲು, ಅನುಭವಿಸಲು ಒಂದೆರಡು ದಿನಗಳು ಸಾಲವು. ಸಿಸಿಲಿಯ ಹಾಗೂ ಬ್ರೂನೋ ಅವರ ನಡುವಿನ ಅಂತರ ಸರಿ ಸುಮಾರು ಒಂದೂವರೆ ಸಾವಿರ ವರ್ಷಗಳು . ಸಮಕಾಲೀನ ವಿಚಾರಗಳಿಗೆ ವ್ಯತಿರಿಕ್ತವಾದ ವಿಚಾರಗಳನ್ನು ಸಮಾಜದ ಒಳಿತಿಗಾಗಿ ಪಸರಿಸಲು ಇಬ್ಬರೂ ತಮ್ಮ ಜೀವನವನ್ನು ಬಲಿಗೊಟ್ಟರು. ಹಳತು – ಹೊಸತುಗಳ ನಡುವಿನ ಘರ್ಷಣೆ ಕೊನೆಗೊಂಡಿಲ್ಲ. ಸಿಸಿಲಿಯ ಹಾಗೂ ಬ್ರೂನೋ ಬದಲಾಗದ ಮಾನವನ ವರ್ತನೆಗೆ ಹಿಡಿದ ಕನ್ನಡಿಗಳಾಗಿದ್ದಾರೆ, ಇಂದಿಗೂ ಪ್ರಸ್ತುತವಾಗಿದ್ದಾರೆ.   

(ಎಲ್ಲ ಚಿತ್ರಗಳು ಲೇಖಕ ಸೆರೆ ಹಿಡಿದದ್ದು )

ಪ್ರವಾಸಿಗರ ಮನಸೆಳೆಯುವ ಮನೋಹರ ಮೆಡಿಟರೇನಿಯನ್ ಕರಾವಳಿ! ಡಾ ಉಮಾ ವೆಂಕಟೇಶ್

ಇಂದ್ರನೀಲ-ಪುಷ್ಯರಾಗಗಳ ಸಮ್ಮಿಶ್ರ ವರ್ಣದ ನೀರಿನಲೆಗಳಿಂದ ಕಂಗೊಳಿಸುವ ಮೆಡಿಟರೇನಿಯನ್ ಸಮುದ್ರದ ಬಗ್ಗೆ ಶಾಲಾದಿನಗಳಲ್ಲಿ ಪಠ್ಯಪುಸ್ತಕದಲ್ಲಿ ಓದಿದ್ದೆ. ಯೂರೋಪಿನ ನಕ್ಷೆಯನ್ನಷ್ಟೇ ನೋಡಿದ್ದ ನನಗೆ, ಒಂದು ದಿನ ಪ್ರತ್ಯಕ್ಷವಾಗಿ ಕಾಣುವ ಅವಕಾಶ ದೊರೆಯಬಹುದು ಎನ್ನುವ ಆಲೋಚನೆ ಕನಸು-ಮನಸಿನಲ್ಲೂ ಇರಲಿಲ್ಲ. ಮೊಟ್ಟಮೊದಲ ಬಾರಿ 2004ರಲ್ಲಿ, ದಕ್ಷಿಣ ಫ಼್ರಾನ್ಸಿನಲ್ಲಿರುವ, ನೀಸ್ ಪಟ್ಟಣದಲ್ಲಿ ಈ ಸಮುದ್ರವನ್ನು ಕಂಡಾಗ, ಅಲ್ಲಿನ ನೀಲಿವರ್ಣದ ಆಗಸ ಮತ್ತು ನೀರನ್ನು ಕಂಡು, ಮಂತ್ರಮುಗ್ಧಳಾಗಿದ್ದೆ. ಈಗ ಇಪ್ಪತ್ತು ವರ್ಷಗಳಿಂದ ಯು.ಕೆಯಲ್ಲಿ ವಾಸಿಸುತ್ತಿರುವ ನನಗೆ, ಮೆಡಿಟರೇನಿಯನ್ ಸಮುದ್ರವನ್ನು ಹಲವು ದೇಶಗಳಲ್ಲಿ ಕಾಣುವ ಸುವರ್ಣಾವಕಾಶಗಳು ದೊರೆಯುತ್ತಲೇ ಇವೆ. ಇಟಲಿ, ಗ್ರೀಸ್, ಸ್ಪೇನ್, ಫ಼್ರಾನ್ಸ್ ಮತ್ತು ಟರ್ಕಿ ದೇಶಗಳ ಕರಾವಳಿ ಪಟ್ಟಣಗಳಿಗೆ ಹೋದಾಗಲೆಲ್ಲಾ, ಇದರ ಅನುಪಮ ಸೌಂಧರ್ಯವನ್ನು ಕಂಡು ಬೆರಗಾಗಿದ್ದೇನೆ. ಪ್ರತಿ ಬಾರಿ ಕಂಡಾಗಲೂ, ಮೊದಲ ಬಾರಿ ನೋಡಿದಷ್ಟೇ ಬೆರಗಿನ ಭಾವನೆಗಳು ಮನದಲ್ಲಿ ಪುಟಿದೇಳುತ್ತವೆ.

ನೀಲಗಗನ-ನೀಲಿ ಸಾಗರ ಸಂಗಮ

ನೀಲಗಗನ-ನೀಲಿ ಸಾಗರ ಸಂಗಮ

 

ಭೌಗೋಳಿಕವಾಗಿ ಒಂದು ಒಳನಾಡಿನ ಸಮುದ್ರವಾಗಿರುವ ಮೆಡಿಟರೇನಿಯನ್, ಪಕ್ಕದಲ್ಲೇ ಇರುವ ಅಟ್ಲಾಂಟಿಕ್ ಸಾಗರದೊಂದಿಗೆ ಸಂಪರ್ಕ ಹೊಂದಿದೆ. ಈ ಸಂಪರ್ಕದ ಕೊಂಡಿಯೇ ಪ್ರಸಿದ್ಧ ಜಿಬ್ರಾಲ್ಟರ್ ಜಲಸಂಧಿ. ಇಡೀ ದಕ್ಷಿಣ ಯೂರೋಪ್ ಮತ್ತು ಉತ್ತರ ಆಫ಼್ರಿಕಾದ ಕರಾವಳಿಯಾಗಿ ಹಬ್ಬಿರುವ ಮೆಡಿಟರೇನಿಯನ್ ಸಮುದ್ರ ತೀರವು, ತನ್ನೊಳಗೆ ಸೇರಿಸಿಕೊಂಡಿರುವ ದೇಶಗಳ ಪಟ್ಟಿಯೇ ಇದೆ. ಅವುಗಳಲ್ಲಿ ಫ್ರಾನ್ಸ್, ಇಟಲಿ, ಸ್ಪೇನ್, ಪೋರ್ಚುಗಲ್, ಈಜಿಪ್ಟ್, ಗ್ರೀಸ್, ಅಲ್ಬೇನಿಯಾ, ಕ್ರೊಯೇಶಿಯಾ, ಬೋಸ್ನಿಯಾ, ಟರ್ಕಿ, ಸೈಪ್ರಸ್, ಮಾಲ್ಟಾ, ಲೆಬನಾನ್, ಇಸ್ರೇಲ್, ಮೊರಾಕೋ, ಮೊನಾಕೋ, ಟ್ಯುನೀಸಿಯಾ, ಸಿರಿಯಾ, ಲಿಬಿಯಾ ದೇಶಗಳು ಪ್ರಮುಖವಾದವು. ಪ್ರಾಚೀನಕಾಲದ ಪ್ರವಾಸಿಗರು ಮತ್ತು ವ್ಯಾಪಾರಿಗಳ ಒಂದು ಮುಖ್ಯ ಸಮುದ್ರ ಹೆದ್ದಾರಿಯೆನಿಸಿದ್ದ ಮೆಡಿಟರೇನಿಯನ್, ಅನೇಕ ಪ್ರಮುಖ ಪ್ರದೇಶಗಳ ಸಂಸ್ಕೃತಿ, ರಾಜಕೀಯ ಮತ್ತು ಆಧುನಿಕ ಸಾಮಾಜದ ಬೆಳವಣಿಗೆಯಲ್ಲಿ ದೊಡ್ಡ ಪಾತ್ರ ವಹಿಸಿದೆ. ‘ಮೆಡಿಟರೇನಿಯನ್’ ಪದದ ಮೂಲ ಲ್ಯಾಟಿನ್ ಭಾಷೆಯ “meditarreneus” ಪದವಾಗಿದ್ದು, ಇದರ ಅರ್ಥ ಭೂಮಿಯ ಮಧ್ಯೆ ಎಂದಾಗುತ್ತದೆ. ಏಶಿಯಾ, ಆಫ಼್ರಿಕಾ, ಯೂರೋಪ್ ಖಂಡಗಳ ನಡುವಿರುವ ಈ ವಿಶಾಲ ಸಮುದ್ರದ ಭೂವೈಜ್ಞಾನಿಕ ಇತಿಹಾಸವು ಬಹಳ ಆಸಕ್ತಿಪೂರ್ಣವಾದದ್ದು. ಸುಮಾರು 5.3 ಮಿಲಿಯನ್ ವರ್ಷಗಳ ಹಿಂದೆ, ಅಟ್ಲಾಂಟಿಕ್ ಸಾಗರದಿಂದ ಒಂದು ಬೃಹತ್ ಪ್ರವಾಹವು ಕೇವಲ ಎರಡು ವರ್ಷಗಳ ಅವಧಿಯಲ್ಲಿ ಒಂದು ಕಿರಿದಾದ ಸಂಧಿಯಾದ ಜಿಬ್ರಾಲ್ಟರ್ ಜಲಸಂಧಿಯ ಮೂಲಕ ಉಕ್ಕಿ ಹರಿದು ಈ ಒಳನಾಡಿನ ಸಮುದ್ರವನ್ನು ಸೃಷ್ಟಿಸಿತು. ಈ ಪ್ರವಾಹಕ್ಕೆ Zanclean flood ಎಂಬ ಹೆಸರಿದೆ. ಈ ಪ್ರವಾಹದ ರಭಸವು, ಇಂದು ಪ್ರಪಂಚದ ಅತ್ಯಂತ ದೊಡ್ಡ ನದಿಯೆನಿಸಿರುವ ಅಮೆಜ಼ಾನ್ ನದಿಯ ನೀರಿನ ಹರಿವಿಗಿಂತಲೂ, ಸುಮಾರು ೧೦೦೦ ಪಾಲು ಹೆಚ್ಚಿನ ಪ್ರಮಾಣದ್ದೆಂದು ಭೂಗರ್ಭಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.

DSC_0215
ಐಶೋರಾಮದ ಪಂಚ- ತಾರಾ ಹೋಟೆಲ್

 

ಇದರ ಜೊತೆಗೆ ಈ ಮೆಡಿಟರೇನಿಯನ್ ಕರಾವಳಿಯಲ್ಲಿ ಹಬ್ಬಿದ ದೇಶಗಳಲ್ಲಿ, ಪ್ರಪಂಚದಲ್ಲೇ ಅತ್ಯಂತ ಗಮನಾರ್ಹವೆನಿಸಿದ ಕೆಲವು ಪ್ರಾಚೀನ ನಾಗರೀಕತೆಗಳು ಹುಟ್ಟಿ ಬೆಳೆದಿವೆ. ಅವುಗಳಲ್ಲಿ ಮುಖ್ಯವಾದವು ಗ್ರೀಕ್, ಫಿನಿಸಿಯನ್ ಮತ್ತು ರೋಮನ್ ಸಾಮ್ರಾಜ್ಯಗಳನ್ನು ಹೊಂದಿದ್ದ ನಾಗರೀಕತೆಗಳು ಎನ್ನಬಹುದು. ಮುಂದೆ ಮಧ್ಯಯುಗದಲ್ಲಿ ಬೆಳೆದು ಪ್ರಗತಿಹೊಂದಿದ್ದ ಬೈಝಂಟೈನ್ ಸಾಮ್ರಾಜ್ಯ, ಅರಬ್ ಸಂಸ್ಕೃತಿಯ ನಾಗರೀಕತೆಗಳು, ಶೇಕಡಾ ೭೫% ಭಾಗದಷ್ಟು ಮೆಡಿಟರೇನಿಯನ್ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದವು. ಇಂದು ಟರ್ಕಿಯ ರಾಜಧಾನಿಯಾದ ಇಸ್ತಾನಬುಲ್ ಅಥವಾ ಕಾನಸ್ಟಾಂಟಿನೋಪಲ್ ನಗರವು, ಎಶಿಯಾ ಮತ್ತು ಯೂರೋಪ್ ಖಂಡವನ್ನು ಬೆಸೆದ ವ್ಯಾಪಾರ ಮತ್ತು ಸಂಸ್ಕೃತಿಯ ಕೇಂದ್ರವಾಗಿತ್ತು. ಉತ್ತರ ಆಫ಼್ರಿಕಾದಿಂದ ಗುಲಾಮರನ್ನು ಹೊತ್ತು-ತರುವ ಅಮಾನುಷ ಪದ್ಧತಿಗೂ, ಇದೇ ಮೆಡಿಟರೇನಿಯನ್ ಸಮುದ್ರವೇ ಹೆದ್ದಾರಿಯಾಗಿತ್ತು. ಇದರ ಜೊತೆಗೆ ಆಫ್ರಿಕಾದ ಬಾರ್ಬರಿ ಕಡಲ್ಗಳ್ಳರು, ಯೂರೋಪಿನ ಹಡಗುಗಳನ್ನು ಅಪಹರಿಸಿ ಮಿಲಿಯನ್ ಸಂಖ್ಯೆಯಲ್ಲಿ ಯೂರೋಪಿನ ಪ್ರಜೆಗಳನ್ನು ಸೆರೆಹಿಡಿಯುತ್ತಿದ್ದ ಸಮುದ್ರವೂ ಇದೇ ಆಗಿತ್ತು. ಹೀಗೆ ಹಲವು ಹತ್ತು ಐತಿಹಾಸಿಕ, ಸಾಂಸ್ಕೃತಿಕ, ವಾಣಿಜ್ಯ ಮತ್ತು ರಾಜಕೀಯದ ಮಹತ್ವ ಸಂಗತಿಗಳಿಗೆ ಬೀಡೆನಿಸಿದ ಮೆಡಿಟರೇನಿಯನ್ ಪ್ರದೇಶವು, ಇಂದಿಗೂ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡೇ ಬಂದಿದೆ.

ಬೀಸೋ ಗಾಳಿಯಲಿ ಹರಿವ ನೀರ ಅಲೆ

ಬೀಸೋ ಗಾಳಿಯಲಿ ಹರಿವ ನೀರ ಅಲೆ

ತನ್ನ ಗಾಢ ನೀಲವರ್ಣದಿಂದ ತಕ್ಷಣವೇ ಗುರ್ತಿಸಲ್ಪಡುವ ಈ ಸಮುದ್ರದಲ್ಲಿ ಅಲೆಯ ಏರಿಳಿತಗಳು ಕಡಿಮೆ. ಪೂರ್ವದಿಂದ ಪಶ್ಚಿಮಕ್ಕೆ ಹಬ್ಬಿರುವ ಈ ಸಮುದ್ರವನ್ನು, ಇದರ ಹರವಿನಲ್ಲಿರುವ ವಿವಿಧ ದೇಶಗಳಲ್ಲಿ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಇಟಲಿ, ಅಲ್ಬೇನಿಯಾ, ಕ್ರೊಯೇಶಿಯಾ, ಬೋಸ್ನಿಯಾ ಮತ್ತು ಸ್ಲೊವೇನಿಯಾ ನಡುವೆ ಇದನ್ನು ಏಡ್ರಿಯಾಟಿಕ್ ಸಮುದ್ರವೆನ್ನುತ್ತಾರೆ. ಗ್ರೀಸ್, ಅಲ್ಬೇನಿಯಾ ಮತ್ತು ಇಟಲಿಯ ನಡುವೆ ಇದನ್ನು ಅಯೋನಿಯನ್ ಸಮುದ್ರವೆಂತಲೂ, ಟರ್ಕಿ ಮತ್ತು ಗ್ರೀಸ್ ನಡುವೆ ಏಜಿಯನ್ ಸಮುದ್ರವೆಂದೂ, ಸಿಸಿಲಿ, ಸಾರ್ಡೀನಿಯಾ ಮತ್ತು ಇಟಲಿ ದ್ವೀಪಕಲ್ಪದ ನಡುವೆ ಇದೇ ಸಮುದ್ರವನ್ನು ಟೈರ್ಹೀನಿಯನ್ ಸಮುದ್ರವೆಂಬ ಹೆಸರಿನಿಂದಲೂ ಕರೆಯುತ್ತಾರೆ. ನೂರಾರು ದ್ವೀಪಗಳನ್ನೊಳಗೊಂಡ ಈ ಪ್ರದೇಶವು, ಬಿಸಿ ಮತ್ತು ಆರ್ದ್ರವಾದ ಬೇಸಿಗೆಯನ್ನೂ, ಮಳೆಯಿಂದ ಕೂಡಿದ ಸೌಮ್ಯ ಚಳಿಗಾಲದ ಹವಾಮಾನವನ್ನೂ ಹೊಂದಿದೆ. ಇದೇ ಕಾರಣಕ್ಕಾಗಿ ಈ ಪ್ರದೇಶವು ಮಿಲಿಯನ್ನುಗಳ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ತಾಣವಾಗಿದೆ. ಪ್ರತಿ ಚಳಿಗಾಲ, ವಸಂತ, ಮತ್ತು ಮಬ್ಬು ಬೇಸಿಗೆಯಲ್ಲಿ ಪ್ರಪಂಚದ ಎಲ್ಲೆಡೆಯಿಂದ ಬರುವ ಜನ ಇಲ್ಲಿಗೆ ಮುಗಿ ಬೀಳುತ್ತಾರೆ. ಆಲೀವ್ ಎಣ್ಣೆ, ದ್ರಾಕ್ಷಿ, ಕಿತ್ತಳೆ, ನಿಂಬೆಯಂತಹ ಬೆಳೆಗಳನ್ನು ಸಮೃದ್ಧವಾಗಿ ಬೆಳೆಯುವ ಇಲ್ಲಿನ ಹಸಿರು ತುಂಬಿದ ಪರ್ವತಮಯ ಸ್ಥಳಗಳು ಕಣ್ಣಿಗೆ ಹಬ್ಬ ನೀಡುತ್ತವೆ. ಕಣಿಗೆಲೆ, ಮಲ್ಲಿಗೆ, ನಂದಿಬಟ್ಟಲು, ಬೋಗನ್-ವಿಲ್ಲಾ, ಗುಲಾಬಿ ಪುಷ್ಪಗಳು ಎಲ್ಲೆಡೆ ನಳನಳಿಸಿ, ಮನರಂಜನೀಯವಾಗಿರುತ್ತದೆ. ಪಕ್ಷಿ-ಪ್ರಾಣಿಗಳು, ಜಲಚರಗಳ ವೈವಿಧ್ಯತೆಯೂ ಮನಸೆಳೆಯುವ ಅಂಶವಾಗಿದೆ.

ಇಷ್ಟೆಲ್ಲಾ ರಂಜನೀಯ ಸಂಗತಿಗಳ ಜೊತೆಗೆ, ಮೆಡಿಟರೇನಿಯನ್ ಪ್ರದೇಶವು ಯೂರೋಪಿನಲ್ಲೇ ಹೆಚ್ಚಿನ ಸಂಖ್ಯೆಯ ಅಗ್ನಿಪರ್ವತಗಳಿಗೂ ಆಶ್ರಯವಾಗಿದೆ. ಜಗದ್ವಿಖ್ಯಾತವಾದ ವೆಸೂವಿಯಸ್, ಮೌಂಟ್ ಎತ್ನಾ, ಸ್ಟ್ರಾಂಬೋಲಿಯ ಜ್ವಾಲಾಮುಖಿಗಳಿಂದಾದ ಅನಾಹುತಗಳು ಚರಿತ್ರೆಯಲ್ಲಿ ಗಮನಾರ್ಹವಾದ ಸಂಗತಿಗಳು. ಗ್ರೀಸಿನ ಕ್ರೀಟ್ ದ್ವೀಪದಲ್ಲೆದ್ದ ಸುನಾಮಿಯಿಂದ ಮೀನೋವನ್ ನಾಗರೀಕತೆಯು ಸಂಪೂರ್ಣವಾಗಿ ನಾಶವಾದ ಸಂಗತಿಯೂ ಪರಿಚಿತವಾದದ್ದೇ! ಇಂದಿಗೂ ಇಟಲಿ ಮತ್ತು ಟರ್ಕಿಯಲ್ಲಿ ಭೂಕಂಪಗಳು ಸಂಭವಿಸುತ್ತಲೇ ಇರುತ್ತದೆ. ಇದೆಲ್ಲಾ ಏನೇ ಇರಲಿ, ತನ್ನ ಸೌಮ್ಯ ಹವಾಮಾನ, ಸುಂದರ ಕರಾವಳಿ, ನೀಲಿವರ್ಣದ ನೀರು, ಸ್ವಚ್ಛ ಆಗಸ, ಶ್ರೀಮಂತವಾದ ಚರಿತ್ರೆ, ಸಂಸ್ಕೃತಿಗಳಿಂದ ಜಗತ್ತಿನ ಪ್ರವಾಸಿಗಳನ್ನು ಸೆಳೆಯುವ ಈ ಮೆಡಿಟರೇನಿಯನ್ ಪ್ರದೇಶದ ಆಕರ್ಷಣೆಯಿಂದ ತಪ್ಪಿಸಿಕೊಳ್ಳುವುಸು ಕಷ್ಟ. ಇಟಲಿ, ಗ್ರೀಸ್, ದಕ್ಷಿಣ ಫ಼್ರಾನ್ಸ್, ಸ್ಪೇನ್ ಮತ್ತು ಟರ್ಕಿ ದೇಶಗಳಲ್ಲಿ ಈ ಕರಾವಳಿಗೆ ಭೇಟಿಯಿತ್ತಿರುವ ನಾನು ಪ್ರತೀ ಬಾರಿಯೂ ಇದರ ಅಂದಕ್ಕೆ ಮಾರುಹೋಗಿದ್ದೇನೆ. ಇಲ್ಲಿನ ಕೊಡೆಯಾಕಾರದ ಪೈನ್ ವೃಕ್ಷಗಳು ಸಸ್ಯಶಾಸ್ತ್ರ ವಿದ್ಯಾರ್ಥಿಯಾದ ನನ್ನ ಮನಸ್ಸನ್ನು ಸದಾಕಾಲ ಆಶ್ಚರ್ಯಗೊಳಿಸುತ್ತಲೇ ಇರುತ್ತದೆ. ಕಳೆದ ವಾರ ಇಟಲಿಯ ದ್ವೀಪಕಲ್ಪದಲ್ಲಿರುವ ಎಲ್ಬಾ ದ್ವೀಪಕ್ಕೆ ಹೋದಾಗ, ಇಲ್ಲಿನ ಓಕ್, ಕಾರ್ಕ್ ಮತ್ತು ಪೈನ್ ಮರಗಳ ಚಿತ್ರಗಳು ನನ್ನ ಕ್ಯಾಮೆರಾದಲ್ಲಿ ಬಂಧಿಯಾದವು. ಇವೆಲ್ಲದರ ಜೊತೆಗೆ ಪ್ರವಾಸಿಗರನ್ನು ಆಕರ್ಷಿಸುವ ಮತ್ತೊಂದು ಉತ್ತಮ ಅಂಶವೆಂದರೆ, ಇಲ್ಲಿನ ವೈವಿಧ್ಯಮಯ ಆಹಾರ. ಸಮೃದ್ಧವಾದ ತರಕಾರಿ ಹಣ್ಣುಹಂಪಲು, ಆಲೀವ್ ಎಣ್ಣೆ, ಬೇಳೆಕಾಳು, ದ್ರಾಕ್ಷಾರಸದ ಮದ್ಯ ವೈನ್ ಮತ್ತು ಹಲವು ಬಗೆಯ ಮೀನುಗಳನ್ನೊಳಗೊಂಡ ಇಲ್ಲಿನ ತಿಂಡಿತಿನಿಸುಗಳು, ಆರೋಗ್ಯಕ್ಕೆ ಉತ್ತಮವೆಂದು ವಿಜ್ಞಾನಿಗಳು ಮತ್ತು ವೈದ್ಯರ ಅಭಿಪ್ರಾಯ!

ಸೂರ್ಯಾಸ್ತಮಾನ ವೈಭವ

ಸೂರ್ಯಾಸ್ತಮಾನ ವೈಭವ

ಇಂದು ಮೆಡಿಟರೇನಿಯನ್ ಕರಾವಳಿಯಲ್ಲಿ ಪ್ರವಾಸಿಗರನ್ನು ರಂಜಿಸಲು ಇರುವ ಸಾಧನಗಳು ಹಲವು ಹತ್ತು ರೀತಿಯವು. ಈ ಪುಶ್ಯರಾಗವರ್ಣದ ನೀರಿನ ಒಳಗೆ ಇಣುಕಿ, ಒಳಗಿರುವ ಮನಮೋಹಕ ಜಲಚರಗಳ ಪ್ರಪಂಚವನ್ನು ನೋಡಿ ಆನಂದಿಸಲು ಸ್ಕೂಬಾ ಡೈವಿಂಗ್, ಸ್ನಾರ್ಕಲಿಂಗ್ ಚಟುವಟಿಕೆಗಳು. ಮೆಡಿಟರೇನಿಯನ್ ಸಮುದ್ರದಲೆಗಳ ಮೇಲೆ ಜಾರುವ ಆಟ ಸರ್ಫಿಂಗ್, ಕಯಾಕಿಂಗ್, ಯಾಟಿಂಗ್, ಒಂದೇ ಎರಡೇ. ರಜೆಯ ಸಂಪೂರ್ಣ ಮಜಾ ಪಡೆಯಲು ಇರುವ ಉತ್ತಮ ದಂಡೆಗಳು, ಅವುಗಳ ತೀರದ ಐಷೋರಾಮದ ಹೋಟೆಲುಗಳು, ಅಲ್ಲಿ ದೊರೆಯುವ ಸ್ವಾದಿಷ್ಟ ಭೋಜನ! ದುಡ್ಡು ಚೆಲ್ಲಲು ಸಮರ್ಥರಾದ ಜನರಿಗೆ ದೊರಕುವ ಸೌಲಭ್ಯಗಳು ಅನೇಕ. ಇದರಿಂದ ಈ ದೇಶಗಳ ಪ್ರವಾಸೋದ್ಯಮ ವ್ಯಾಪಾರಗಳು ಪುಷ್ಕಳವಾಗಿ ಬೆಳೆಯುತ್ತಿವೆ.

ಅಲೆಕ್ಸಾಂಡ್ರಿಯಾ, ಮಾರ್ಸೇ, ನೀಸ್, ಅಥೆನ್ಸ್, ಥೆಸ್ಸಲೋನಿಕಿ, ನೇಪಲ್ಸ್, ರೋಮ್, ಜಿನೋವಾ, ವೆನಿಸ್, ಬಾರ್ಸಿಲೋನಾ, ಆಂಟಲ್ಯಾ, ಬೈರೂತ್, ಟ್ರಿಪೋಲಿ ಹೀಗೆ ಹಲವು ಹತ್ತು ಚಾರಿತ್ರಿಕವಾಗಿ ಪ್ರಮುಖ ಪಟ್ಟಣಗಳನ್ನು ತನ್ನ ತೀರದಲ್ಲಿ ಹೊಂದಿ ರಾರಾಜಿಸುವ ಮೆಡಿಟರೇನಿಯನ್ ಕರಾವಳಿಯಲ್ಲಿ ವಾಸಿಸುತ್ತಿರುವ ಜನಸಂಖ್ಯೆ ಇಂದು 120 ಮಿಲಿಯನ್ನುಗಳಿಂತಲೂ ಹೆಚ್ಚಿದೆ. ಇತ್ತೀಚೆಗೆ ಈ ಪ್ರದೇಶಗಳಲ್ಲಿ ತಲೆದೋರಿರುವ ನಿರಾಶ್ರಿತರ ವಲಸೆಯ ಸಮಸ್ಯೆಯಂತೂ, ಯೂರೋಪಿನ ರಾಜಕೀಯ ಮುಖಂಡರಿಗೆ ಒಂದೆ ದೊಡ್ಡ ತಲೆನೋವಾಗಿದೆ. ಮದ್ಯಪ್ರಾಚ್ಯ ವಲಯದಲ್ಲಿ ತಲೆಯೆತ್ತಿರುವ ಅಶಾಂತಿ, ರಾಜಕೀಯ ಅಸ್ಥಿರತೆ ಮತ್ತು ಇವುಗಳ ಮಧ್ಯೆ ಎದ್ದುನಿಂತ ಉಗ್ರರ ದಬ್ಬಾಳಿಕೆ, ಅಟ್ಟಹಾಸಗಳು ಮೆಡಿಟರೇನಿಯನ್ ಸ್ವರ್ಗಸಮಾನ ವಾತಾವರಣದಲ್ಲಿ ಪ್ರಕ್ಷುಬ್ಧತೆಯನ್ನು ತಂದೊಡ್ಡಿದೆ. ಆದರೇನು, ಪ್ರವಾಸಿಗಳು ಇಲ್ಲಿಗೆ ಬರುವುದನ್ನಂತೂ ನಿಲ್ಲಿಸಿಲ್ಲ. ಈ ಪ್ರದೇಶದಲ್ಲಿ ಹೆಚ್ಚಾಗುತ್ತಿರುವ ವ್ಯಾಪಾರ, ಪ್ರವಾಸ ಮತ್ತಿತರ ಚಟುವಟಿಕೆಗಳು ಇಲ್ಲಿನ ವಾತಾವರಣವನ್ನು ಕಲುಶಿತಗೊಳಿಸುತ್ತಿದೆ. ಹಡಗುಗಳ ಸಾಗಾಣಿಕೆಯ ಪ್ರವಾಹವಂತೂ, ಈ ಸಮುದ್ರದ ಜೀವಿಗಳ ಅಸ್ತಿತ್ವಕ್ಕೆ ಅಪಾಯವನ್ನು ತಂದೊಡ್ಡಿದೆ. ಅತಿಯಾದ ಮೀನುಗಾರಿಕೆ ಈ ಮೋಹಕ ಜಲರಾಶಿಯಲ್ಲಿರುವ ಜಲಚರಗಳ ಸಂಖ್ಯೆ ಮತ್ತು ಗುಣಮಟ್ಟವನ್ನು ಕಡಿಮೆಗೊಳಿಸಿದೆ.

 

ಹೂವು ಚೆಲುವೆಲ್ಲಾ ನಂದೆಂದಿತು

ಹೂವು ಚೆಲುವೆಲ್ಲಾ ನಂದೆಂದಿತು 

 ನಳನಳಿಸುವ ಬಾಟಲ್ ಬ್ರಶ್

 

ಮೆಡಿಟರೇನಿಯನ್ ಸಂಧ್ಯೆ

ಮೆಡಿಟರೇನಿಯನ್ ಸಂಧ್ಯೆ

DSC_0343

 

ಆದರೇನು, ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯಂತೂ ಹೆಚ್ಚುತ್ತಲೇ ಇದೆ. ಕಳೆದ ವಾರ ಎಲ್ಬಾ ದ್ವೀಪದ ಮೋಹಕ ದಂಡೆಯಲ್ಲಿ ನಿಂತು, ಸಂಜೆಯ ಸೂರ್ಯಾಸ್ತಮಾನವನ್ನು ವೀಕ್ಷಿಸುತ್ತಿದ್ದಾಗ ನನಗೆ ಈ ಯಾವ ಸಮಸ್ಯೆಗಳೂ ಅಲ್ಲಿರುವಂತೆ ತೋರಲೇ ಇಲ್ಲಾ! ಆ ಮೋಹಕ ಜಲರಾಶಿ, ಸುತ್ತಲಿನ ಸಸ್ಯಸಂಪತ್ತು, ಅಲ್ಲಿ ಸುಳಿಯುತ್ತಿದ್ದ ತಂಪಾದ ಗಾಳಿ, ಸುತ್ತಲೂ ಚಿಲಿಪಿಲಿಗುಟ್ಟುತ್ತಿದ್ದ ಪಕ್ಷಿಗಳ ಕಲರವಗಳು ನನ್ನ ಪಾಲಿಗಂತೂ ಸ್ವರ್ಗವೇ ಧರೆಗಿಳಿದಂತಿತ್ತು. ಈ ಸುಂದರತೆಯನ್ನು ಕಾಪಾಡಿ, ನಮ್ಮ ಮುಂದಿನ ಪೀಳಿಗೆಯೂ ಇದನ್ನು ಅಸ್ವಾದಿಸಲು ಸಾಧ್ಯವಾಗುವುದೇ! ಇದನ್ನು ಕಾಲವೇ ನಿರ್ಧರಿಸಬಲ್ಲದು!