ಬದಲಾಗುತ್ತಿರುವ ಸಂಯುಕ್ತ ಅರಬ್ ಸಂಸ್ಥಾನಗಳು (UAE)

ಡಾ. ಜಿ. ಎಸ್. ಶಿವಪ್ರಸಾದ್  

ಕಳೆದ ಕೆಲವು ವಾರಗಳ ಹಿಂದೆ ನಾನು ಸಂಯುಕ್ತ ಅರಬ್ ಸಂಸ್ಥಾನಗಳ ರಾಷ್ಟ್ರದಲ್ಲಿ (UAE) ಪ್ರವಾಸ ಕೈಗೊಂಡಿದ್ದು ಅದರ ಬಗ್ಗೆ ಬರೆದಿರುವ ಈ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇದು ಪ್ರವಾಸ ಕಥನ ಅನ್ನುವುದಕ್ಕಿಂದಂತ ಒಂದು ವೈಚಾರಿಕ ಲೇಖನವೆಂದು ನಾನು ಭಾವಿಸುತ್ತೇನೆ. ನಾವು ವೀಕ್ಷಸಿದ ಜನಪ್ರೀಯ ಪ್ರೇಕ್ಷಣೀಯ ತಾಣಗಳನ್ನು, ಅಲ್ಲಿಯ ನಿಸರ್ಗ ಸೌಂದರ್ಯವನ್ನು ಮತ್ತು ಅಲ್ಲಿ ನಮಗಾದ ಅನುಭವಗಳನ್ನು ಚಿತ್ರಗಳ ಜೊತೆ ಓದುಗರೊಂದಿಗೆ ಬರಹದಲ್ಲಿ ಹಂಚಿಕೊಂಡಾಗ ಅದು ಪ್ರವಾಸ ಕಥನವಾಗುತ್ತದೆ.  ಆದರೆ ಈ ನನ್ನ ಬರಹದಲ್ಲಿ ಹೆಚ್ಚಾಗಿ ನಾನು ಪ್ರವಾಸ ಮಾಡಿದ ದೇಶದ ಇತಿಹಾಸ, ಜನ ಜೀವನ ಮತ್ತು ಸಂಸ್ಕೃತಿಗಳ ಬಗ್ಗೆ ಪರಿಚಯಮಾಡಿಕೊಟ್ಟು ಅದರೊಡನೆ ನನ್ನ ಸ್ವಂತ ಅನಿಸಿಕೆಗಳನ್ನು ಬೆರೆಸಿ ಆದಷ್ಟು ವಿಮರ್ಶಾತ್ಮಕವಾದ ಲೇಖನವಾಗಿ ಪ್ರಸ್ತುತಿ ಪಡಿಸುವುದು ನನ್ನ ಉದ್ದೇಶವಾಗಿದೆ. ಇಲ್ಲಿ ಸ್ವಲ್ಪಮಟ್ಟಿಗೆ ಪ್ರವಾಸ ಕಥನ ಸೇರಿಕೊಂಡಿರುವುದು ಅನಿವಾರ್ಯವಾಗಿದೆ. ಈ ಬರಹವು ಹಲವಾರು ವಿಚಾರವನ್ನು ಒಳಗೊಂಡು ದೀರ್ಘ ಬರಹವಾದದ್ದರಿಂದ ಇದನ್ನು ಎರಡು ಕಂತುಗಳಲ್ಲಿ ಪ್ರಕಟಪಡಿಸಲಾಗಿದೆ. 
'ಬದಲಾಗುತ್ತಿರುವ ಸಂಯುಕ್ತ ಅರಬ್ ಸಂಸ್ಥಾನಗಳು ಭಾಗ ೧' ಎಂಬ ಈ ಬರಹವನ್ನು ಓದಿ ಮತ್ತು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

- ಸಂ
ಮೂರು  ದಶಕಗಳ ಹಿಂದೆ ಅರಬ್ ಸಂಸ್ಥಾನಗಳೆಂದರೆ ಅಲ್ಲೇನಿದೆ ? ಬರೇ ಮರುಭೂಮಿ, ಒಂಟೆಗಳು ಮತ್ತು ನೆಲೆಯಿಲ್ಲದ ಅಲೆಮಾರಿ ಬೆಡೊವಿನ್ ಅರಬ್ಬರು ಎಂಬ ಕಲ್ಪನೆಗಳಿತ್ತು. ಅಲ್ಲಿಯ ಜನ ಜೀವನದ ಬಗ್ಗೆ, ಕಟುವಾದ ಕೈಕಾಲು ತುಂಡುಮಾಡುವ, ಚಾಟಿ ಏಟು ನೀಡುವ, ಕಲ್ಲಿನಲ್ಲಿ ಹೊಡೆದು ಸಾಯಿಸುವ ಟ್ರೈಬಲ್ ಶಿಕ್ಷೆಗಳ ಬಗ್ಗೆ ಅಂಜಿಕೆಗಳಿತ್ತು. ಪಾಶ್ಚಿಮಾತ್ಯರ ದೃಷ್ಟಿಯಲ್ಲಿ ಇಂಡಿಯಾ ಎಂದರೆ ಭಿಕ್ಷುಕರು, ಬೀದಿಯಲ್ಲಿ ದನಗಳು, ಹಾವಾಡಿಗರು, ಧೂಳು, ಕೊಳಕು ಎಂಬ ಕಲ್ಪನೆಗಳು ಇದ್ದಂತೆ! ಹಿಂದೆ ಅರಬ್ ರಾಷ್ಟ್ರಗಳೆಂದರೆ ಯಾವಾಗಲು ಜಗಳವಾಡಿಕೊಂಡಿದ್ದ ಇರಾನ್, ಇರಾಕ್ ಅಥವಾ ಶ್ರೀಮಂತ ದೇಶವಾದ ಸೌದಿ ಅಷ್ಟೇ ನಮಗೆ ತಿಳಿದಿತ್ತು.  ದುಬೈ ಅಬುದಾಬಿ ಎಂಬ ನಗರಗಳನ್ನು ಕೇಳಿರಲಿಲ್ಲ. ನನ್ನ ಈ ಬರಹದಲ್ಲಿ ಮುಖ್ಯ ವಿಷಯ ವಸ್ತುವಾದ ಸಂಯುಕ್ತ ಅರಬ್ ಸಂಸ್ಥಾನಗಳ 
ಈ ರಾಷ್ಟ್ರದ (United Arab Emirates: UAE) ಬಗ್ಗೆ ಹೆಚ್ಚಿನ ಅರಿವು ಇರಲಿಲ್ಲ. ಏಕೆಂದರೆ ಈ ದೇಶವು ಅಸ್ತಿತ್ವಕ್ಕೆ ಬಂದದ್ದು ೧೯೭೧ ರಲ್ಲಿ. ಪ್ರಪಂಚದ ಇತರ ದೇಶಗಳಿಗೆ ಹೋಲಿಸಿದಾಗ ಇದು ಇನ್ನು ಕಣ್ತೆರೆಯುತ್ತಿರುವ ರಾಷ್ಟ್ರ. ಹಿಂದೆ ಈ ಪ್ರದೇಶವು ಸ್ಥಳೀಯ ಸಣ್ಣ-ಪುಟ್ಟ ರಾಜಮನತನದ ಸ್ವಾಧೀನದಲ್ಲಿದ್ದು ಕಿಂಗ್ಡಮ್ ಅಥವಾ ಶೇಕ್ ಡಾಮ್ ಆಗಿತ್ತು. ಸುಮಾರು ೫೦೦ ವರ್ಷಗಳ ಹಿಂದೆ ಈ ಪ್ರದೇಶವು ಪೋರ್ಚುಗೀಸರ ಆಡಳಿತಕ್ಕೆ ಒಳಪಟ್ಟಿತ್ತು. ಹಿಂದೆ ಸಾಗರದಡಿಯ ಪರ್ಲ್(ಮುತ್ತು) ಟ್ರೇಡಿಂಗ್ ಇಲ್ಲಿಯ ಮುಖ್ಯ ವಾಣಿಜ್ಯ ವ್ಯಾಪಾರವಾಗಿ ಆದಾಯವನ್ನು ತರುತ್ತಿತ್ತು. ಪರ್ಷಿಯನ್ ಗಲ್ಫ್ ಅಂಚಿನ ಇಲ್ಲಿಯ ಜನರು, ವ್ಯಾಪಾರಿಗಳು, ಕಡಲ್ಗಳ್ಳರು ಆಗಾಗ್ಗೆ ಸಂಘರ್ಷಣೆಯಲ್ಲಿ ತೊಡಗಿದ್ದು ಅಶಾಂತಿ ನೆಲೆಸಿತ್ತು. ಪೋರ್ಚುಗೀಸರು ಇಲ್ಲಿಯ ಲಾಭದಾಯಕ ಅವಕಾಶವನ್ನು ಗ್ರಹಿಸಿ, ಆಕ್ರಮಿಸಿ ಕೋಟೆಗಳನ್ನು ಕಟ್ಟಿದರು, ದಬ್ಬಾಳಿಕೆಯಲ್ಲಿ ತೆರೆಗೆ ವಿಧಿಸಲು ಶುರುಮಾಡಿದರು. ನಂತರದ ಕೆಲವು ವರುಷಗಳಲ್ಲಿ ಅರಬ್ಬರ ಒಳಜಗಳವನ್ನು ಬಗೆಹರಿಸಲು ಮತ್ತು ಆಶ್ರಯ ನೀಡಲು ಬ್ರಿಟಿಷರು ಮುಂದಾದರು, ಕಾದಾಡುತ್ತಿರುವ ಅರಬ್ಬರಲ್ಲಿ ಶಾಂತಿಯ ಒಪ್ಪಂದಗಳನ್ನು ತಂದು ಈ ಪ್ರದೇಶಗಳಲ್ಲಿ ಸ್ಥಿರತೆಯನ್ನು ತಂದುಕೊಟ್ಟರು.

೧೯೩೦ರಲ್ಲಿ ಈ ನಾಡಿನಲ್ಲಿ ಅನಿಲ ಮತ್ತು ತೈಲ ಸಂಪನ್ಮೂಲಗಳಿವೆಯೆಂದೇ ತಿಳಿದುಬಂತು. ಇದು ಅರಬ್ಬರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಅಂದಹಾಗೆ ಈ ಪ್ರದೇಶವು ಅನಾದಿಕಾಲದಿಂದಲೂ ಪೂರ್ವ ಮತ್ತು ಪಶ್ಚಿಮ ವಾಣಿಜ್ಯಗಳು ಸಂಧಿಸುವ ತಾಣವಾಗಿತ್ತು. ಭೌಗೋಳಿಕವಾಗಿ ವಾಣಿಜ್ಯ ದೃಷ್ಟಿಯಿಂದ ಅನುಕೂಲಕರವಾಗಿತ್ತು. ಬ್ರಿಟಿಷ್ ಸಂಸ್ಥೆಗಳಿಗೆ ಇಲ್ಲಿಯ ತೈಲ ಅನಿಲ ನಿರ್ವಾಹಣ ಪರ್ಮಿಟ್ ಗಳನ್ನು ಕೊಟ್ಟಿದ್ದು ೬೦ರ ದಶಕದಲ್ಲಿ ಅಮೇರಿಕ ಕಂಪನಿಗಳು ನಿಧಾನಕ್ಕೆ ಆ ಕಂಟ್ರಾಕ್ಟುಗಳನ್ನು ಪಡೆದವು. ೧೯೬೮ರ ಸಮಯದಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಈ ಶೇಕ್ ರಾಜ್ಯಗಳಿಗೆ ರಕ್ಷಣೆ ಮತ್ತು ಆಶ್ರಯ ಒದಗಿಸುವುದು ಕಷ್ಟವಾಗತೊಡಗಿತು. ತಾವು ನೀಡುತ್ತಿದ್ದ ಆಶ್ರಯವನ್ನು ರದ್ದುಪಡಿಸಿ, ಅಲ್ಲಿಯ ರಕ್ಷಣಾ ವ್ಯವಸ್ಥೆಯನ್ನು, ಒಪ್ಪಂದವನ್ನು ಕೊನೆಗಾಣಿಸುವ ನಿರ್ಧಾರವನ್ನು ಅಂದಿನ ಪ್ರಧಾನಿ ಹೆರಾಲ್ಡ್ ವಿಲ್ಸನ್ ಬಹಿರಂಗಪಡಿಸಿದರು. ಅನಿಲ ತೈಲ ಸಂಪನ್ಮೂಲಗಳನ್ನು ಹೊಂದಿರುವ ಈ ರಾಷ್ಟ್ರಗಳ ನಾಯಕರು ತಮ್ಮ ಮುಂದಿರುವ ಉಜ್ವಲ ಭವಿಷ್ಯವನ್ನು ಮತ್ತು ಸಾಧ್ಯತೆಗಳನ್ನು ಕಂಡುಕೊಂಡು ೧ನೇ ಡಿಸೆಂಬರ್ ೧೯೭೧ ರಲ್ಲಿ ಸಂಯುಕ್ತ ಅರಬ್ ಸಂಸ್ಥಾನಗಳಾದ ಈ ರಾಷ್ಟ್ರವನ್ನು (UAE) ಹುಟ್ಟುಹಾಕಿದರು. ಹಿಂದೆ ಈ ಒಕ್ಕೂಟವನ್ನು ಸೇರಬೇಕಾಗಿದ್ದ ಕತಾರ್ ಮತ್ತು ಬಹರೈನ್ ದೇಶಗಳು ತಮ್ಮದೇ ಆದ ಸ್ವಾತಂತ್ರ್ಯವನ್ನು ಪಡೆದುಕೊಂಡವು. ಈ ಸಂಯುಕ್ತ ಅರಬ್ ಸಂಸ್ಥಾನಗಳ ಈ ರಾಷ್ಟ್ರದಲ್ಲಿ ಅಬುದಾಬಿ, ದುಬೈ, ಶಾರ್ಜಾ, ಅಜ್ಮಾನ್, ಫುಜೈರ, ಉಮ್ ಅಲ ಕ್ಯೋವೆನ್, ಮತ್ತು ರಾಸ್ ಎಲ್ ಕೈಮ ಎಂಬ ಏಳು ರಾಜಮನೆತನಗಳು ಸೇರಿಕೊಂಡವು. ಅಬುದಾಬಿಯ ರಾಜರಾಗಿದ್ದ ಶೇಕ್ ಜಾಯೀದ್ ಬಿನ್ ಸುಲ್ತಾನ್ ಅಲ ನಹ್ಯಾನ್ ಅವರು ಈ ಸಂಯುಕ್ತ ಅರಬ್ ರಾಷ್ಟ್ರವನ್ನು ಹುಟ್ಟುಹಾಕುವಲ್ಲಿ ನೇತಾರರಾಗಿದ್ದು ಈ ರಾಷ್ಟ್ರದ ಮೊದಲ ಅಧ್ಯಕ್ಷರಾಗಿದ್ದರು. ದುಬೈ ಮತ್ತಿತರ ನಗರಗಳ ಮುಖ್ಯ ರಸ್ತೆಗಳಿಗೆ ಮತ್ತು ಅಬುದಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಟ್ಟು ಗೌರವಿಸಲಾಗಿದೆ. ಹಿಂದೆ ಒಂದು ನೆಲೆಯಲ್ಲಿ ನಿಲ್ಲದೆ, ಅಲೆಮಾರಿ ಬುಡಕಟ್ಟಿನ ಜನಾಂಗದವರಾಗಿ, ಜಂಗಮರಾಗಿದ್ದ ಈ ಜನ ತಮ್ಮ ತೈಲ ಅನಿಲ ಸಂಪನ್ಮೂಲಗಳಿಂದ ಶ್ರೀಮಂತರಾಗಿ ಒಂದು ಮರುಭೂಮಿ ಪ್ರದೇಶವನ್ನು ಕಂಗೊಳಿಸುವ ನೂತನ ನಗರಗಳಾಗಿ, ಸಮುದ್ರದನೀರನ್ನು ಸಿಹಿನೀರಾಗಿ ಪರಿವರ್ತಿಸಿ ಹಸಿರುಮೂಡಿಸಿದ್ದಾರೆ. ಸಂಪನ್ಮೂಲಗಳಿಂದ ಬಂದ ಹಣದಲ್ಲಿ ರಸ್ತೆ, ಆಸ್ಪತ್ರೆ, ಶಾಲಾ ಕಾಲೇಜು ಮತ್ತು ಇತರ ಸಾರ್ವಜನಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ದೇಶವನ್ನು ಕಟ್ಟಿದ್ದಾರೆ. ತೈಲದಿಂದ ಬರುವ ಆದಾಯವನ್ನು ಹೊರತಾಗಿ ಮಲ್ಟಿ ನ್ಯಾಷನಲ್ ವಾಣಿಜ್ಯ ಸಂಸ್ಥೆಗಳಿಗೆ, ಖಾಸಗಿ ಉದ್ದಿಮೆದಾರರಿಗೆ ಕಂಪನಿಗಳನ್ನು ಹೂಡಲು ಅವಕಾಶವನ್ನು ಕಲ್ಪಿಸಿ ವಾಣಿಜ್ಯ ವ್ಯವಹಾರಗಳು ಸುಗಮವಾಗಿ ಸಾಗಿವೆ. ಇತ್ತೀಚಿನ ವರುಷಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಿ ಅದರಿಂದ ಈ ದೇಶಕಕ್ಕೆ ಸಾಕಷ್ಟು ಆದಾಯ ಬರುತ್ತಿದೆ. ಇಲ್ಲಿ ಹಣಹೂಡಿದವರಿಗೆ ತೆರಿಗೆಯಿಂದ ಸ್ವಲ್ಪಮಟ್ಟಿಗೆ ಮುಕ್ತಿಯಿದೆ. ಹಣ, ಉದ್ಯೋಗ ಅವಕಾಶ, ರಾಜಕೀಯ ಸ್ಥಿರತೆ, ದೂರದೃಷ್ಟಿ, ಇಲ್ಲಿಯ ಸರ್ವತೋಮುಖ ಬೆಳವಣಿಗೆಗೆ, ಅಭಿವೃದ್ಧಿಗೆ ಕಾರಣವಾಗಿದೆ.

ನನಗೆ ಈ ಸಂಯುಕ್ತ ಅರಬ್ ರಾಷ್ಟ್ರದ ಪರಿಚಯವಾದದ್ದು ನಾನು ಇಂಗ್ಲೆಂಡಿನಿಂದ ಇಂಡಿಯಾಗೆ ಹೋಗಿ ಬರಲು ಬಳಸುತ್ತಿದ್ದ ಎಮಿರೇಟ್ಸ್, ಎತಿಹಾಡ್ ವಿಮಾನ ಕಂಪನಿಗಳಿಂದ. ಬೆಂಗಳೂರಿಗೆ ಹೋಗುವ ಮಾರ್ಗದಲ್ಲೇ ಅನಾಯಾಸವಾಗಿ ಮೂರು ದಿವಸಗಳ ಮಟ್ಟಿಗೆ ಪ್ರಯಾಣದಲ್ಲಿ ಬ್ರೇಕ್ ಪಡೆದು ಎರಡು ಬಾರಿ ದುಬೈ ನಗರವನ್ನು ವೀಕ್ಷಿಸಿ ಬೆರಗಾಗಿದ್ದೆ. ಅಷ್ಟೇ ಅಲ್ಲದೆ ಇಲ್ಲಿಯ ಅದ್ವಿತೀಯ ಮನುಷ್ಯ ಪ್ರಯತ್ನಗಳನ್ನು ಮೆಚ್ಚಿಕೊಂಡು ಮುಂದೊಮ್ಮೆ ಧೀರ್ಘ ಪ್ರವಾಸದಲ್ಲಿ ಇಲ್ಲಿಯ ಇತರ ನಗರಗಳನ್ನು ಒಳನಾಡ ಪ್ರದೇಶಗಳನ್ನು ವೀಕ್ಷಸಬೇಕೆಂಬ ಹಂಬಲ ಮೂಡಿಬಂತು. ಇದಕ್ಕೆ ಪೂರಕವಾಗಿ ಹಿಂದೆ ನಾವಿದ್ದ ಇಂಗ್ಲೆಂಡಿನ ವುಲ್ವರ್ಹ್ಯಾಂಪ್ಟಾನ್ ಎಂಬ ನಗರದಲ್ಲಿ ನಿವಾಸಿಗಳಾಗಿದ್ದು, ನಮ್ಮ ಮಿತ್ರರಾದ ಡಾ.ರಮೇಶ್ ಮತ್ತು ಅವರ ಪತ್ನಿ ಅನ್ನಪೂರ್ಣ ಅವರು ಈಗ ಅಬುದಾಬಿ ಪಕ್ಕದ ಅಲೈನ್ ನಗರದಲ್ಲಿ ವೃತ್ತಿಯಿಂದಾಗಿ ನೆಲೆಸಿದ್ದು ನಮಗೆ ಬರಲು ಆಹ್ವಾನವನ್ನು ನೀಡಿದರು. ೨೦೨೪ರ ಫೆಬ್ರುವರಿ ತಿಂಗಳ ಮೊದಲವಾರದಲ್ಲಿ ನಾನು ಮತ್ತು ನನ್ನ ಶ್ರೀಮತಿ ಡಾ. ಪೂರ್ಣಿಮಾ ಈ ದೇಶದಲ್ಲಿ ಹತ್ತು ದಿವಸಗಳ ಪ್ರವಾಸವನ್ನು ಕೈಗೊಂಡೆವು. ಪ್ರೇಕ್ಷಣೀಯ ತಾಣಗಳನ್ನು ನೋಡುವುದರ ಜೊತೆಗೆ ಇಲ್ಲಿಯ ದಿನ ನಿತ್ಯ ಬದುಕಿನ ಅನುಭವವನ್ನು ಸಾಧ್ಯವಾದಷ್ಟು ಹತ್ತಿರದಿಂದ ಕಾಣುವ ಕುತೂಹಲ ಮತ್ತು ಹಂಬಲ ನಮ್ಮದಾಗಿತ್ತು.

ಅಬುದಾಬಿ ವಿಮಾನನಿಲ್ದಾಣದಲ್ಲಿ ಡಾ. ರಮೇಶ್ ಅವರು ಕಳುಹಿಸಿಕೊಟ್ಟ ಶಿಜೊ ಎಂಬ ಮಲೆಯಾಳಿ, ಸುಶೀಕ್ಷಿತ, ಸಜ್ಜನ್ ಡ್ರೈವರ್ ಬಂದು ವಿನಮ್ರವಾಗಿ ಸ್ವಾಗತಿಸಿ, ನಮ್ಮ ಲಗೇಜುಗಳನ್ನು ಕಾರಿಗೆ ವರ್ಗಾಯಿಸಲು ನೆರವು ನೀಡಿ, ತನ್ನ ಏಳು ಸೀಟಿನ ಭವ್ಯವಾದ ಟೊಯೋಟಾ ಕಾರಿನಲ್ಲಿ ನಮ್ಮನ್ನು ಕುಳ್ಳಿರಿಸಿಕೊಂಡು ಅಲೈನ್ ಹೆದ್ದಾರಿಯನ್ನು ಹಿಡಿದ. ಇಂಗ್ಲೆಂಡಿನಂತಹ ಪುಟ್ಟ ದೇಶದಲ್ಲಿನ ಪುಟ್ಟ ಪುಟ್ಟ ಕಾರುಗಳನ್ನು ಕಂಡಿರುವ ನಮಗೆ, ಪೆಟ್ರೋಲನ್ನು ಇನ್ನಿಲ್ಲದಂತೆ ಕುಡಿದು ಬಿಡುವ ಇಲ್ಲಿಯ ದೈತ್ಯಾಕಾರದ ಕಾರುಗಳು, ಆರು ಎಂಟು ಲೇನ್ ರಸ್ತೆಗಳು, ೧೬೦ ಕಿಮಿ ವೇಗದಲ್ಲಿ ಸಾಗುವ ವಾಹನಗಳು ಅಚ್ಚರಿಯೊಡನೆ ಸ್ವಲ್ಪ ಭಯವನ್ನೂ ಮೂಡಿಸಿತು. ಪೆಟ್ರೋಲ್ ಬೆಲೆ ಎಲ್ಲ ದೇಶಗಳಲ್ಲಿ ಹೆಚ್ಚಾಗಿರುವಾಗ ಇಲ್ಲಿ ಅದರ ಬೆಲೆ ಅಗ್ಗವಾಗಿದೆ. ಹೀಗಾಗಿ ಈ ದೇಶದಲ್ಲಿ ನೆಲೆಸಿರುವ ಜನಕ್ಕೆ ಅದರ ಬಗ್ಗೆ ಚಿಂತೆಯೇ ಇಲ್ಲ. 'ಘೋಡಾ ಹೈ ಮೈದಾನ್ ಹೈ' ಎಂಬ ಹಿಂದಿ ಉಕ್ತಿ ನೆನಪಿಗೆ ಬಂತು. ಜಾಗತಿಕ ತಾಪಮಾನದ ಹಿನ್ನೆಲೆಯಲ್ಲಿ ಯೂರೋಪಿನ ಹಲವಾರು ದೇಶಗಳು ಈಗ ಚಿಕ್ಕ ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತಿರುವಾಗ ಈ ಅರಬ್ಬರು ಮತ್ತು ಅಮೆರಿಕನ್ನರು ಭಾರೀಗಾತ್ರದ ಕಾರುಗಳಲ್ಲಿ ಓಡಾಡುತ್ತಿದ್ದಾರೆ. ನಗರ-ನಗರಗಳನ್ನು ಜೋಡಿಸಿರುವ ಹೆದ್ದಾರಿಗಳಲ್ಲಿ ನೂರಾರು ಮೈಲಿ ಉದ್ದದವರೆಗೆ ಸಾಲು ವಿದ್ಯುತ್ ದೀಪಗಳನ್ನು ಇಡೀ ರಾತ್ರಿ ಹಚ್ಚುತ್ತಾರೆ. ಪ್ರಪಂಚದ ಸಂಪನ್ಮೂಲದ ಬಳಕೆಯ ಬಗ್ಗೆ, ಪರಿಸರದ ಬಗ್ಗೆ ಕಾಳಜಿ ಇವರಿಗಿದೆಯೇ ಎಂಬ ಅನುಮಾನ ಉಂಟಾಗುವುದು ಸಹಜ. ಇತ್ತೀಚಿನ ಜಾಗತಿಕ ತಾಪಮಾನದ ಬಗ್ಗೆ ಚರ್ಚಿಸುವ ಕಾಪ್ ೨೮ ಎಂಬ ೨೦೨೩ ವರ್ಷದ ಸಮಾವೇಶವನ್ನು ದುಬೈನಲ್ಲಿ ನಡೆಸಿದ್ದು ಅದನ್ನು ಹಲವಾರು ದೇಶಗಳು ಪ್ರಶ್ನಿಸಿವೆ. ಈ ಅರಬ್ ರಾಷ್ತ್ರ ೨೦೫೦ರ ಹೊತ್ತಿಗೆ ತಮ್ಮ ಫಾಸಿಲ್ ಇಂಧನದ ಉಪಯೋಗ ಅರ್ಧದಷ್ಟು ಕಡಿಮೆಮಾಡಿ ಪರಿಸರಕ್ಕೆ ಪೂರಕವಾಗುವ ಮತ್ತು ಕಾರ್ಬನ್ ಹೆಜ್ಜೆ ಗುರುತನ್ನು ಕಡಿಮೆಮಾಡುವ ನಿರ್ಧಾರವನ್ನು ಕೈಗೆತ್ತಿಕೊಂಡಿರುವುದು ಸಮಾಧಾನಕರವಾದ ವಿಚಾರ. ಈ ಆಲೋಚನಗಳ ನಡುವೆ ಪ್ರಯಾಣಮಾಡಿ ಒಂದು ಗಂಟೆಯ ಸಮಯದನಂತರ ಒಂದು ಚಿಕ್ಕ ಊರನ್ನು ಹೊಕ್ಕು ಅಲ್ಲಿರುವ ಅಂಗಡಿಸಾಲಿನಲ್ಲಿದ್ದ ಚಿಕ್ಕ ರೆಸ್ಟೋರಾಂಟಿನಲ್ಲಿ ಶಿಜೊ ನೀಡಿದ ಆದೇಶದ ಮೇಲೆ ಒಬ್ಬ ಮಲೆಯಾಳಿ ಹುಡುಗ ಮೂರು ಕಪ್ ಖಡಕ್ ಚಾ ವನ್ನು ಕಾರಿಗೇ ತಂದುಕೊಟ್ಟ. ಒಂದೆರಡು ಗುಟುಕು ಹೀರಿದಾಗ ಚಾ ಒಳಗಿನ ಏಲಕ್ಕಿ ಘಮಲು, ಸಿಹಿ ರುಚಿ, ಗಟ್ಟಿಯಾದ ಹಾಲು ನನ್ನನ್ನು ಕೂಡಲೇ ಕೇರಳದ ವೈನಾಡಿಗೆ ಒಯ್ದಿತ್ತು. ಪಟ್ಟ-ಪಟ್ಟಿ ಪಂಚೆಯ ಮಲಯಾಳಿ ಕಾಕಾಗಳು, ಹಸಿರು ಬೆಟ್ಟಗಳು, ಹೆಮ್ಮರಗಳು ಅದರ ನೆರಳಲ್ಲಿ ಬೆಳೆಯುವ, ಏಲಕ್ಕಿಗಿಡಗಳು ಅದರ ಉದ್ದದ ಹಸುರಿನ ತೆನೆಗಳು ಎಲ್ಲಾ ನನ್ನ ಸ್ಮೃತಿಯಲ್ಲಿ ಹಾದುಹೋದವು. ವಾಸ್ತವದಲ್ಲಿ ನೋಡಿದಾಗ ನನ್ನ ಸುತ್ತ ಮರುಭೂಮಿಯ ರಾಶಿರಾಶಿ ಮರಳು, ಮಸೀದಿಗಳು, ಮಿನಾರೆಟ್ಟುಗಳು, ಅರಬ್ ಜನರು! ಎಲ್ಲಿಯ ಖಡಕ್-ಏಲಕ್ಕಿ ಚಾ ಎಲ್ಲಿಯ ಮರಳುಗಾಡು! ಎತ್ತಣಿಂದೆತ್ತ ಸಂಬಂಧವಯ್ಯ?

ದಾರಿಯುದ್ದಕ್ಕೂ ಬಂಜರು ಭೂಮಿ. ಅಲೆ ಅಲೆಯಾಗಿ ಹಬ್ಬಿರುವ ಮರಳಿನ ದಿಣ್ಣೆಗಳು. ಮರಳಲ್ಲಿ ಗಾಳಿ ಕೆತ್ತಿದ ಚಿತ್ತಾರಗಳು, ಮಕ್ಕಳು ಸ್ಲೇಟಿನ ಮೇಲೆ ಹಳೆ ಚಿತ್ರಗಳನ್ನು ಅಳಿಸಿ ಮತ್ತೆ ಹೊಸ ಚಿತ್ರಗಳನ್ನು ಮೂಡಿಸುವಂತೆ ಗಾಳಿ ಮತ್ತು ಮರಳು ಆಟವಾಡುತ್ತಿದ್ದವು. ನಡುವೆ ನಿರ್ಜನ ಪ್ರದೇಶಗಳು, ಹತ್ತಾರು ಮೈಲಿಗೊಂದು ನಾಗರೀಕತೆಯ ಹತ್ತಿರ ನಾವಿದ್ದೇವೆಂದು ಖಾತ್ರಿಪಡಿಸುವ ಪುಟ್ಟ ತಲೆ, ಎರಡು ಕಾಲು ಮತ್ತು ಎರಡು ಕೈಯನ್ನು ಕೆಳಗೆ ಬಿಟ್ಟಂತಹ ಎಲೆಕ್ಟ್ರಿಕ್ ಪೈಲಾನ್ ಗಳು, ಅದರಿಂದ ತೂಗಿರುವ ವಿದ್ಯುತ್ ತಂತಿಗಳು ಇವು ಇಲ್ಲಿಯ ನೋಟ. ಕೆಲವೊಮ್ಮೆ ಸಮತಟ್ಟಾದ ಪ್ರದೇಶದಲ್ಲಿ ರಸ್ತೆ ಬದಿಯ ಬೇಲಿಯ ಆಚೆಗೆ ತೀವ್ರ ಗತಿಯಲ್ಲಿ ಸಾಗುವ ವಾಹನಗಳನ್ನು ನಿರ್ಲಕ್ಷಿಸಿ ಕೆಲವು ಒಂಟೆಗಳು ತಮ್ಮದೇ ಸಾವಧಾನದಲ್ಲಿ ಒಣಗಿದ್ದ ಕುರುಚಲು ಹುಲ್ಲನ್ನು ಮೇಯುತ್ತಾ, ಹುಲ್ಲನ್ನು ಈ ದವಡೆಯಿಂದ ಆ ದವಡೆಗೆ ವರ್ಗಾಯಿಸಿ, ನಮ್ಮ ಹಳ್ಳಿಯ ವೃದ್ದರು ಹೊಗೆಸೊಪ್ಪನ್ನು ಮೇಯುವಂತೆ ಜಗಿಯುತ್ತಾ ದಿವ್ಯ ಧ್ಯಾನ ಸ್ಥಿತಿಯಲ್ಲಿ ಮಗ್ನರಾಗಿದ್ದವು. ಒಂಟೆಗಳಿಗೆ ಅವಸರ ಎಂಬ ಪದ ಅದರ ಡಿಕ್ಷನರಿಯಲ್ಲಿ ಇಲ್ಲ ಎಂಬುದು ನನ್ನ ಅನಿಸಿಕೆ. ಇಂತಹ ಮಂದಗತಿಯ ಒಂಟೆಗಳನ್ನು ಹಿಡಿದು ಅರಬ್ಬರು ಹೇಗೆ ಕ್ಯಾಮಲ್ ರೇಸ್ ನಡೆಸುತ್ತಾರೋ ನಾ ತಿಳಿಯೆ. ಹಿಂದೆ ಶಿಶುಗಳನ್ನು ಒಂಟೆಯ ಹೊಟ್ಟೆಗೆ ಕಟ್ಟಿ ಕ್ಯಾಮಲ್ ರೇಸ್ ನಡೆಸುತ್ತಿದ್ದು ಈಗ ಆ ಪದ್ದತಿಯನ್ನು ಬಿಟ್ಟು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳೆಸುತ್ತಿದ್ದಾರೆ ಎಂದು ಕೇಳಿದ್ದೇನೆ. ಮಕ್ಕಳು ಹೆದರಿಕೆಯಿಂದ ಚೀರುತ್ತಿದ್ದಾಗ ಗಾಬರಿಗೊಂಡ ಒಂಟೆಗಳು ಜೋರಾಗಿ ಓಡುತ್ತಿದ್ದವು. ಆ ಕ್ರೂರ ಪದ್ಧತಿಯನ್ನು ಈಗ ಕೈ ಬಿಟ್ಟಿರುವುದು ಒಳ್ಳೆಯ ನಿರ್ಧಾರ.

ನಾವು ಅಬುದಾಬಿಯಿಂದ ಅಲೈನ್ ವರಿಗೆ ಕ್ರಯಿಸಿದ ದಾರಿಯಲ್ಲಿ ನೂರಾರು ಕಿಲೋ ಮೀಟರ್ ರಸ್ತೆಯ ಎರಡು ಬದಿಯಲ್ಲಿ ಹಸಿರು ಮರಗಳ ಸಾಲು ಮತ್ತು ರಸ್ತೆ ಮಧ್ಯದ ಡಿವೈಡರ್ ಜಗದಲ್ಲಿ ಸಾಲಾಗಿ ನಿಂತ ಈಚಲು ಮರ ಜಾತಿಯ ಡೇಟ್ಸ್ ಮರಗಳನ್ನು ಕಂಡು ಸೋಜಿಗವಾಯಿತು. "ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ?" ಎಂಬ ದಾಸರ ಪದ ನೆನೆಪಿಗೆ ಬರುತ್ತಿದಂತೆ, ಶಿಜೊ "ಸಾರ್ ರಸ್ತೆ ಪಕ್ಕದಲ್ಲಿರುವ ಮರದ ಬುಡಗಳನ್ನು ಗಮನಿಸಿ, ಅಲ್ಲಿ ಇರುವ ಪೈಪ್ ಗಳನ್ನೂ ನೋಡಿ, ಅರಬ್ಬರು ನೂರಾರು ಮೈಲಿ ಪೈಪ್ಗಳನ್ನು ಎಳೆದು ಈ ಗಿಡಗಳಿಗೆ ಮರುಭೂಮಿಯಲ್ಲಿ ನೀರುಣಿಸುತ್ತಿದ್ದಾರೆ” ಎಂದು ನನ್ನ ಗಮನವನ್ನು ಸೆಳೆದ. ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದಾಗ ದೈವವನ್ನಷ್ಟೇ ನೆನೆಯುವ ನಮ್ಮ ಆಧ್ಯಾತ್ಮಿಕ ಪ್ರಜ್ಞೆಯಿಂದ ಹೊರಬಂದು ವಾಸ್ತವಬದುಕಿನ ಮುಂದಿರುವ ಮನುಷ್ಯ ಪ್ರಯತ್ನವನ್ನು ಕಂಡು ಬೆರಗಾದೆ. ಮನದಲ್ಲೇ ಭೇಷ್ ಎಂದು ಪ್ರಶಂಸಿದೆ. ಇಲ್ಲಿ ಮಳೆ ಹೆಚ್ಚಾಗಿ ಬರುವುದಿಲ್ಲ, ಇದು ಮರುಭೂಮಿ ಹೀಗಿದ್ದರೂ ನೀರು ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ದೇಶದಲ್ಲಿ ನದಿಗಳಲ್ಲಿಲ್ಲ. ಹಾಜರ್ ಬೆಟ್ಟ ಹಾದುಹೋಗುವ ದಕ್ಷಿಣ ಪ್ರದೇಶದಲ್ಲಿ ಕೆಲವು ಅಣೆಕಟ್ಟುಗಳನ್ನು ಕಟ್ಟಿ ನೀರನ್ನು ಶೇಖರಿಸಿದ್ದಾರೆ. ಬಹಳಷ್ಟು ವೇಸ್ಟ್ ನೀರನ್ನು ರಿಸೈಕಲ್ ಮಾಡಿ ಗಿಡ ಮರಗಳಿಗೆ ಬಳಸುತ್ತಾರೆ. ಉಳಿದಂತೆ ಇವರು ಸಮುದ್ರದ ನೀರನ್ನು ಆಧುನಿಕ ತಂತ್ರಜ್ಞಾನದಲ್ಲಿ ದೇಶದುದ್ದಕ್ಕೂ ಸುಮಾರು ೭೦ ಡೀಸಲಿನೇಷನ್ ಘಟಕಗಳನ್ನು ಸ್ಥಾಪಿಸಿ ಅದರಲ್ಲಿ ಸಿಹಿ ನೀರನ್ನು ಉತ್ಪತ್ತಿ ಮಾಡುತ್ತಾರೆ. ಪ್ರವಾಸಿತಾಣಗಳಲ್ಲಿ, ನಗರದ ಪ್ರಮುಖ ರಸ್ತೆಗಳಲ್ಲಿ ಹೂವಿನ ಗಿಡಗಳನ್ನು ನೆಟ್ಟು ಅಂದಗೊಳಿಸಿದ್ದಾರೆ. ದುಬೈನಲ್ಲಿರುವ ಮಿರಾಕಲ್ ಗಾರ್ಡನ್ ಎಂಬ ಅದ್ಭುತ ಹೂಗಳ ಉದ್ಯಾನ ಇವರ ನಿಸರ್ಗಪ್ರೀತಿಗೆ ಸಾಕ್ಷಿಯಾಗಿದೆ. ಇದು ದುಬೈಗೆ ಹೋಗುವ ಎಲ್ಲ ಪ್ರವಾಸಿಗಳು ನೋಡಲೇ ಬೇಕಾದ ಉದ್ಯಾನವನ.

ನಾವು ಅಲೈನ್ ನಗರವನ್ನು ಪ್ರವೇಶಿಸಿದಂತೆ ಅದು ಸಂಯುಕ್ತ ಅರಬ್ ರಾಷ್ಟ್ರದಲ್ಲಿನ ಅತ್ಯಂತ ಹಸಿರು ನಗರವೆಂದು ತಿಳಿಯುತ್ತದೆ. ನಮ್ಮ ಮಿತ್ರರಾದ ಡಾ.ರಮೇಶ್ ಅವರು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಹಿರಿಯ ತಜ್ಞ ವೈದ್ಯರಾಗಿದ್ದು ಅವರಿಗೆ ಅನುಕೂಲವಾದ ಮನೆಯನ್ನು ಸರ್ಕಾರ ಒದಗಿಸಿದೆ. ಇಲ್ಲಿ ಅನುಕೂಲವಾದ ಎಂಬ ಪದಕ್ಕೆ ವಿಶೇಷ ಅರ್ಥ ಇರಬಹುದು. ನಮ್ಮ ಈ ಅತಿಥಿಗಳ ಬಹು ಅಂತಸ್ತಿನ ಮನೆ ಸುಂದರವಾಗಿ, ಹಿರಿದಾಗಿ ಭವ್ಯವಾಗಿದೆ. ಅರಬ್ ಜನರು ತಮ್ಮ ವಾಸಕ್ಕೆಂದು ಕಟ್ಟಿಕೊಂಡಿದ್ದು ನಂತರದಲ್ಲಿ ಅದನ್ನು ಬಾಡಿಗೆ ಕೊಟ್ಟಂತೆ ಕಾಣುತ್ತದೆ. ಕುಟುಂಬವರ್ಗದವರಿಗೆ, ಹೆಂಗಸರಿಗೆ ಒಂದು ಪ್ರವೇಶ ದ್ವಾರ, ಕುಟುಂಬದ ಹೊರಗಿನ ಗಂಡಸರಿಗೆ ಇನ್ನೊಂದು ಪ್ರವೇಶದ್ವಾರ, ಕೆಲಸದವರು ಪ್ರವೇಶಿಸಲು ಬೇರೊಂದು ದ್ವಾರ! ಇನ್ನು ಮನೆಯೊಳಗೆ ಲೆಕ್ಕವಿಲ್ಲದಷ್ಟು ಕೋಣೆಗಳು ಎನ್ನಬಹುದು. ಇಲ್ಲಿ ಎಲ್ಲರ ಮನೆಯ ಕಾಂಪೌಂಡ್ ಗೋಡೆ ಎತ್ತರವನ್ನು ಗಮನಿಸಿದರೆ ಚಿತ್ರದುರ್ಗದ ಕೋಟೆ ಅಥವಾ ಬೆಂಗಳೂರಿನ ಸೆಂಟ್ರಲ್ ಜೈಲ್ ಜ್ಞಾಪಕಕ್ಕೆ ಬರುತ್ತದೆ. ಮನೆಯೊಳಗೇ ಯಾರಿದ್ದಾರೆ, ಮಕ್ಕಳಿದ್ದಾರೆಯೇ, ಗಿಡ ಮರಗಳು ಹೇಗಿವೆ ಇದರ ಸುಳಿವೇ ಸಿಗುವುದಿಲ್ಲ. ಒಬ್ಬರು ಇನ್ನೊಬ್ಬರನ್ನು ಮಾತನಾಡಿಸುವುದಿರಲಿ ಕಾಣುವುದೂ ಕಷ್ಟ. ಇಡೀ ಮನೆ ತನಗೆ ತಾನೇ ಬುರುಕಾ ಹಾಕಿ ಕೂತಂತೆ ಭಾಸವಾಗುತ್ತದೆ.

ಡಾ. ರಮೇಶ್ ಮತ್ತು ಅನು ಅವರ ಮನೆಯಲ್ಲಿ ಆಕರ್ಷಕವಾಗಿರುವುದು ಮನೆಯ ಮುಂದಿನ ಹಸುರಿನ ಹಾಸು ಮತ್ತು ಗಿಡಗಳು, ಮರಗಳು, ಚಿಲಿಪಿಲಿ ಗುಟ್ಟುವ ತರಾವರಿ ಹಕ್ಕಿಗಳು. ಇಲ್ಲಿ ದಾಳಿಂಬೆ, ನಿಂಬೆ ಗಿಡ, ನುಗ್ಗೆಕಾಯಿ ಮರಗಳು, ದಾಸಿವಾಳ ಮತ್ತು ಕಣಗಲೆ ಗಿಡಗಳು ಇವೆ. ಅವರ ಕಾಂಪೌಂಡ್ ಒಳಗೆ ನಿಂತಾಗ ನಾವು ಒಂದು ಮರುಭೂಮಿಯಲ್ಲಿದ್ದೇವೆ ಎಂಬ ವಿಚಾರ ಮರೆತುಹೋಗುತ್ತದೆ. ಅಂದಹಾಗೆ ಈ ದೇಶದ ಒಳನಾಡಿನಲ್ಲಿ ನವೆಂಬರ್ ತಿಂಗಳಿಂದ ಮೇ ತಿಂಗಳಿನವರೆಗೆ ಹವಾಮಾನ ಒಂದು ಹದದಲ್ಲಿ ಇದ್ದು ಆಮೇಲೆ ಕಡು ಬೇಸಿಗೆ ಶುರುವಾಗುತ್ತದೆ. ಬೇಸಿಗೆಯಲ್ಲಿ ನೀರುಣಿಸಿದರೂ ಬಿಸಿಲಿನ ಝಳಕ್ಕೆ ಒಣಗಿದ ಮರ ಗಿಡಗಳು ಚಳಿಗಾಲಕ್ಕೆ ಮತ್ತೆ ಚಿಗುರುತ್ತವೆ ಎಂದು ಕೇಳಿದಾಗ ಖುಷಿಯಾಯಿತು. ನಾವು ಇಲ್ಲಿ ತಂಗಿದ್ದಾಗ ಅಲೈನ್ ನಗರದಲ್ಲಿ ಒಂದು ರಾತ್ರಿ ವಿಪರೀತ ಬಿರುಗಾಳಿ, ಗುಡುಗು ಸಿಡಿಲಿನೊಂದಿಗೆ ಹುಯ್ದ ಆಲಿಕಲ್ಲು ಮಳೆ ಗಾಬರಿಹುಟ್ಟಿಸಿತು. ಒಂದೊಂದು ಅಲಿ ಕಲ್ಲು ಒಂದು ಟೆನಿಸ್ ಬಾಲ್ ಅಳತೆಗಿಂತ ಹೆಚ್ಚಿದ್ದು ಕೆಲವು ಒಂದು ಇಟ್ಟಿಗೆ ಗಾತ್ರದ್ದಾಗಿದ್ದು ಬೀಸುವ ಬಿರುಗಾಳಿಯಲ್ಲಿ ರಮೇಶ್ ಅವರ ಮನೆಯ ಕೆಲವು ಸೆಕ್ಯೂರಿಟಿ ಕ್ಯಾಮರಾಗಳನ್ನು, ಹೂವಿನ ಕುಂಡಗಳನ್ನು ಒಡೆದು ಚೂರು ಮಾಡಿದವು. ಅಲೈನ್ ನಗರದಲ್ಲಿ ಮರುದಿನ ಜಜ್ಜಿ ಹೋದ ಕಾರುಗಳನ್ನು, ಪುಡಿಯಾದ ಗಾಜುಗಳನ್ನು ನೋಡಿ ಚಕಿತರಾದೆವು. ರಸ್ತೆಗಳಲ್ಲಿ ನೀರು ನಿಂತು, ಚರಂಡಿಗಳು ರಭಸದ ನದಿಗಳಾಗಿದ್ದವು. ಸರಕಾರದ ಆದೇಶದಂತೆ ಒಂದೆರಡು ದಿನ ಎಲ್ಲ ಮನೆಯಲ್ಲೇ ಉಳಿಯಬೇಕಾಯಿತು. ಈ ರೀತಿಯ ಅನಿರೀಕ್ಷಿತ ಮಳೆ, ಫ್ಲಾಶ್ ಫ್ಲಡ್ ಇಲ್ಲಿ ಆಗಾಗ್ಗೆ ಬರುವುದು ಉಂಟು. ನಾನು ವಾಟ್ಸಾಪಿನ ವಿಡಿಯೋ ಚಿತ್ರಗಳನ್ನು ಹಿಂದೆ ನೋಡಿದ್ದೆ. ರಮೇಶ್ ದಂಪತಿಗಳು ತಿಳಿಸಿದಂತೆ ಈ ರೀತಿಯ ಅತಿಯಾದ ಪ್ರಕೃತಿ ವಿಕೋಪ ವಿರಳ. ಅದರ ಮಧ್ಯೆ ನಾವಲ್ಲಿದ್ದು ಪಡೆದ ಅನುಭವ ನಮ್ಮ ಪಾಲಿಗೆ ವಿಶೇಷವಾಗಿತ್ತು. ಇಂಗ್ಲೆಂಡಿನಲ್ಲಿ ಸದಾ ಸುರಿಯುವ ಮಳೆಯನ್ನು ತಪ್ಪಿಸಿಕೊಂಡು ಮರುಭೂಮಿಗೆ ಹೋದರೂ ನಮ್ಮ ದುರಾದೃಷ್ಟಕ್ಕೆ ಅಲ್ಲೂ ಮಳೆ ಬರಬೇಕೆ? ಇನ್ನೊಂದು ಸ್ವಾರಸ್ಯಕರವಾದ ಸಂಗತಿ; ಈ ಸಂಯುಕ್ತ ಅರಬ್ ರಾಷ್ಟ್ರಗಳಲ್ಲಿ 'ಕ್ಲೌಡ್ ಸೀಡಿಂಗ್' ಎಂಬ ನೂತನ ತಂತ್ರಜ್ಞಾನದಲ್ಲಿ ವಿಶೇಷವಾದ ವಿಮಾನದಲ್ಲಿ ಮೇಲೇರಿ ತಮ್ಮ ಆಕಾಶದಲ್ಲಿ ಹಾದು ಹೋಗುತ್ತಿರುವ ದಟ್ಟ ಮೋಡಗಳ ಮೇಲೆ ಕೆಲವು ರಾಸಾಯನಿಕ ಲವಣೆಗಳನ್ನು ಉದುರಿಸಿ ಆವಿಗಟ್ಟಿರುವ ಮೋಡವನ್ನು ಕರಗಿಸಿ ಮಳೆಬೀಳುವಂತೆ ಮಾಡುತ್ತಾರೆ. ಈ ರೀತಿಯ ಕೃತಕ ಮಳೆ ಬರಿಸುವ ಪ್ರಯತ್ನವನ್ನು ಆಗಾಗ್ಗೆ ಮಾಡುತ್ತಾರೆ ಎಂದು ತಿಳಿದು ಅಚ್ಚರಿಗೊಂಡೆ. ಪ್ರಕೃತಿಗೆ ತನ್ನದೇ ಆದ ನಿಯಮಗಳಿವೆ, ಅದನ್ನು ಹತ್ತಿಕ್ಕಿ ಮನುಷ್ಯ ತನ್ನ ಅನುಕೂಲಕ್ಕೆ ಹಸ್ತಾಕ್ಷೇಪ ಮಾಡುವು ಸರಿಯೇ? ಅದರ ಪರಿಣಾಮಗಳೇನು? ಎಂಬ ನೈತಿಕ ಪ್ರಶ್ನೆಗಳು ನನ್ನನ್ನು ಕಾಡಿವೆ.

ನಮ್ಮ ಗೆಳೆಯರಾದ ರಮೇಶ್ ದಂಪತಿಗಳು ತಮ್ಮ ಹಸಿರಾದ ಅಲೈನ್ ನಗರವನ್ನು ಕೂಲಂಕುಷವಾಗಿ ನಮಗೆ
ಪರಿಚಯಿಸಿದರು. ಅಲೈನ್ ಮೈಸೂರು ಮತ್ತು ಧಾರವಾಡದ ರೀತಿಯಲ್ಲಿ ಸಾಂಸ್ಕೃತಿಕ ಕೇಂದ್ರ. ಇಲ್ಲಿ ಸ್ಥಳೀಯ ಎಮಿರಾಟಿಗಳೇ ಹೆಚ್ಚು. ದುಬೈ ಅಬುದಾಬಿ ನಗರದಷ್ಟು ದಟ್ಟವಾಗಿಲ್ಲ ಬದಲಾಗಿ ಮೈಸೂರಿನಂತೆ ವಿಶಾಲವಾಗಿ ಹಬ್ಬಿಕೊಂಡಿದೆ. ಈ ಊರ ಸರಹದ್ದಿನ ಒಳಗೇ ಇರುವ ಮೂರು ಸಾವಿರ ಅಡಿ ಎತ್ತರದ ಝಬೀಲ್ ಹಫೀತ್ ಎಂಬ ಬೆಟ್ಟ ಮೈಸೂರಿನ ಚಾಮುಂಡಿಬೆಟ್ಟವನ್ನು ನೆನಪಿಗೆ ತರುವಂತಿದೆ. ಇಲ್ಲಿ ಯಾವುದೇ ಕಟ್ಟಡವನ್ನು ಮೂರು ಅಂತಸ್ತಿನ ಮೇಲೆ ಕಟ್ಟುವಂತಿಲ್ಲ. ಎಲ್ಲ ಕಟ್ಟಡಗಳ ವಿನ್ಯಾಸ ಸ್ಥಳೀಯ ಅರಬ್ ಶೈಲಿಯಲ್ಲಿ ಕಟ್ಟಲಾಗಿದ್ದು ಸುಂದರವಾಗಿದೆ. ನಗರದ ಬಹುಪಾಲು ರಸ್ತೆಗಳು ವಿಶಾಲವಾದ ಶುಭ್ರವಾದ ಜೋಡಿರಸ್ತೆಗಳು. ರಸ್ತೆಗಳ ಬದಿಯಲ್ಲಿ ಸಾಲು ಮರಗಳು ಮತ್ತು ಸಾಕಷ್ಟು ಹೂವಿನ ಗಿಡಗಳು ಇದ್ದು ಸುಂದರವಾಗಿದೆ. ದುಬೈನಲ್ಲಿ ಕಾಣುವ ಆಧುನಿಕ ಗ್ಲಾಸ್ ಮತ್ತು ಸ್ಟೀಲ್ ಬಳಸಿ ಕಟ್ಟಿರುವ ಸ್ಕೈ ಸ್ಕ್ರೇಪರ್ ಕಟ್ಟಡಗಳು ಇಲ್ಲಿ ಕಾಣುವುದಿಲ್ಲ. ಅರಬ್ ದೊರೆಗಳು ತಮ್ಮ ಎರಡನೇ ಮನೆಯನ್ನು, ನಿವೃತ್ತ ಪ್ರತಿಷ್ಠಿತರು ದೊಡ್ಡ ಬಂಗಲೆಗಳನ್ನು ಕಟ್ಟಿಕೊಂಡಿದ್ದಾರೆ. ಇಲ್ಲಿ ಎಲ್ಲ ವಾಹನ ಚಾಲಕರು ನಿಯಮವನ್ನು ಪಾಲಿಸುತ್ತಾರೆ, ಬೆಂಗಳೂರಿನ ರಸ್ತೆಯಲ್ಲಿ ಕಾಣುವ ಅಸಹನೆ, ನುಗ್ಗಾಟ, ಕರ್ಕಶಗಳಿಲ್ಲ. ವಾಹನ ಓಡಿಸುವವರು ನಮ್ಮ ಇಂಡಿಯಾ ಪಾಕಿಸ್ತಾನದ ಡ್ರೈವರ್ಗಳೇ, ಇವರೆಲ್ಲ ಅಂತಹ ಸುಶಿಕ್ಷಿತರಲ್ಲ. ನಮ್ಮ ಡ್ರೈವಿಂಗ್ ಶೈಲಿ, ಸ್ವಭಾವ ಅಲ್ಲಿಗೂ ಇಲ್ಲಿಗೂ ಹೇಗೆ ಬದಲಾಗಿದೆ ಎಂಬ ಆಲೋಚನೆಗಳು ನನ್ನ ಮನಸ್ಸಿನಲ್ಲಿ ಮೂಡಿದವು. ವ್ಯತಾಸ ಇಷ್ಟೇ; ಇಂಡಿಯದಲ್ಲಿ ಲಂಚಕೋರತನವಿದೆ, ಶಿಕ್ಷೆ ವಿಧಿಸಲು ಸಾಧ್ಯವಿಲ್ಲ, ವಿಪರೀತ ಜನಸಂದಣಿ, ನಮ್ಮ ಮಹಾ ನಗರಗಳು ತೀವ್ರ ಗತಿಯಲ್ಲಿ ಹತೋಟಿ ತಪ್ಪಿ ಬೆಳೆಯುತ್ತಿವೆ, ರಸ್ತೆಯನ್ನು ಹಿಗ್ಗಿಸಲು ಸಾಧ್ಯವಿಲ್ಲ, ಹಿಗ್ಗಿಸಿದರೆ ಇನ್ನು ಹೆಚ್ಚು ವಾಹನಗಳು ಬಂದು ಸೇರಿಕೊಳ್ಳುತ್ತವೆ. ಮೋಟಾರ್ ಬೈಕುಗಳು, ಆಟೋ ರಿಕ್ಷಾಗಳು, ಕಾರುಗಳು, ಓಲಾ ಊಬರ್ ಟ್ಯಾಕ್ಸಿಗಳು, ಬಸ್ಸುಗಳು, ಲಾರಿಗಳು ಹೀಗೆ ರಸ್ತೆಯಲ್ಲಿ ತರಾವರಿ ವಾಹನಗಳಿವೆ. ಎಲ್ಲರಿಗೂ ಅವಸರ, ಶಿಸ್ತಿನ ಬಗ್ಗೆ ತಿಳುವಳಿಕೆ ಇಲ್ಲ, ಇದ್ದರೂ ಪಾಲಿಸುವುದಿಲ್ಲ. ಒಟ್ಟಾರೆ ಅವ್ಯವಸ್ಥೆಯನ್ನು ಒಪ್ಪಿಕೊಂಡು ಬದುಕುತ್ತಿದ್ದೇವೆ. ಬೆಂಗಳೂರಿನಲ್ಲೇ ಎಲ್ಲಾ ಬೆಳೆವಣಿಗೆಯನ್ನು ಉತ್ತೇಜಿಸುವ ಬದಲು ಡಿಸ್ಟ್ರಿಕ್ಟ್ ಕೇಂದ್ರಿತ ಬೆಳವಣಿಗೆ ನಡೆಯಬೇಕಾಗಿದೆ. ಆಯೋಜಕರಿಗೆ ದೂರ ದೃಷ್ಟಿ ಬೇಕಾಗಿದೆ. ಭಾರತ ಆರ್ಥಿಕ ಪ್ರಗತಿಯನ್ನು ದಾಖಲಿಸಿದ್ದರೂ ಅದು ಇನ್ನೂ ಅಭಿವೃದ್ದಿಗೊಳ್ಳಬೇಕಾದ ದೇಶ.

***

ಮುಂದುವರೆಯುವುದು…. ಈ ಬರಹದ ೨ನೇ ಭಾಗವನ್ನು ಮುಂದಿನ ಶುಕ್ರವಾರ ನಿರೀಕ್ಷಿಸಿ

ಬದಲಾಗುತ್ತಿರುವ ಸಮಾಜ ಮತ್ತು ಶಿಕ್ಷಣ

ಡಾ ಜಿ ಎಸ್ ಶಿವಪ್ರಸಾದ್

ಯುಕೆ ಕನ್ನಡ ಬಳಗದ ೪೦ನೇ ವಾರ್ಷಿಕೋತ್ಸವ ಸಮಾರಂಭದ ಅನಿವಾಸಿ ಆಶ್ರಯದಲ್ಲಿ ಶಿಕ್ಷಣ ವಿಷಯದ ಬಗ್ಗೆ  ನಡೆದ ಚರ್ಚಾಗೋಷ್ಠಿಯಲ್ಲಿ ಮಂಡಿಸಿದ  ನನ್ನ ಕೆಲವು ಅನಿಸಿಕೆಗಳನ್ನು ಆಧರಿಸಿ ಮುಂದಕ್ಕೆ ವಿಸ್ತರಿಸಿ ಬರೆದಿರುವ ಲೇಖನ. 'ಬದಲಾಗುತ್ತಿರುವ ಸಮಾಜದಲ್ಲಿ ಶಿಕ್ಷಣ' ಕುರಿತಾದ ವಿಷಯಗಳು ಸಾಕಷ್ಟಿವೆ. ಅದರ ಬಗ್ಗೆ ಒಂದು ಪುಸ್ತಕವನ್ನೇ ಬರೆಯಬಹುದೇನೋ. ಹೀಗಾಗಿ ನನ್ನ ಅನಿಸಿಕೆಗಳನ್ನು  ತುಸು ದೀರ್ಘವಾಗಿಯೇ ದಾಖಲಿಸಿದ್ದೇನೆ. ಪುರುಸೊತ್ತಿನಲ್ಲಿ ಓದಿ, ನಿಮ್ಮ ಅನಿಸಿಕೆಗಳನ್ನು ತಿಳಿಸಿ. ನನಗೆ ಈ ಚರ್ಚಾಗೋಷ್ಠಿಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ಅನಿವಾಸಿ ವೇದಿಕೆಗೆ, ಕಾರ್ಯಕ್ರಮವನ್ನು ನಿರ್ವಹಿಸಿದ ಡಾ. ಪ್ರೇಮಲತಾ ಅವರಿಗೆ  ಕೃತಜ್ಞತೆಗಳು

     -ಸಂಪಾದಕ

'ಪರಿವರ್ತನೆ ಜಗದ ನಿಯಮ'. ನಮ್ಮ ಬದುಕು, ನಮ್ಮ ಸಮಾಜ, ನಮ್ಮ ಪರಿಸರ ಬದಲಾಗುತ್ತಿದೆ. ಜಾಗತೀಕರಣದಿಂದಾಗಿ ತೀವ್ರ ಬದಲಾವಣೆಗಳಾಗಿವೆ. ಕೈಗಾರಿಕಾ ಮತ್ತು ವೈಜ್ಞಾನಿಕ ಕ್ರಾಂತಿಯ ಮಧ್ಯದಲ್ಲಿ ನಾವು ಬದುಕುತ್ತಿದ್ದೇವೆ. ಕಳೆದ ಕೆಲವು ವರ್ಷಗಳ ಹಿಂದೆ ಆವರಿಸಿದ್ದ ಕರೋನ ಪಿಡುಗು ನಮ್ಮ ಬದುಕಿನ ರೀತಿ ನೀತಿಗಳನ್ನು ಬದಲಾಯಿಸಿದೆ. ಈ ಹಲವಾರು ಬದಲಾವಣೆಯಿಂದಾಗಿ ನಾವು ಸಾಕಷ್ಟು ಸಾಮಾಜಿಕ ಮತ್ತು ತಾಂತ್ರಿಕ ಹೊಂದಾಣಿಕೆಗಳನ್ನು ಮಾಡಿಕೊಂಡು ಹೊಸ ಕಲಿಕೆಗಳನ್ನು ಪಡೆದಿದ್ದೇವೆ. ಈ ಹೊಸ ಅನುಭವಗಳನ್ನು ನಾವು  ಇಲ್ಲಿಯವರೆಗೆ ಗಳಿಸಿಕೊಂಡ ಹಳೆ ಅನುಭಗಳ ಜೊತೆ ತಳುಕು ಹಾಕಿಕೊಂಡು ಬದುಕಲು ಕಲಿಯಬೇಕಾಗಿದೆ. ಈ ಕಲಿಕೆಯೇ ಶಿಕ್ಷಣದ ಮೂಲ ಉದ್ದೇಶ. ಇಂದು ಕಲಿತ ಅನುಭವಗಳು, ಸಂಪಾದಿಸಿದ  ಜ್ಞಾನ ಕಾಲ ತರುವ ತೀವ್ರ ಬದಲಾವಣೆಗಳ ಹಿನ್ನೆಲೆಯಲ್ಲಿ ಕೆಲವೊಮ್ಮೆ ಅಪ್ರಸ್ತುತವಾಗಬಹುದು. ಕಾಲೇಜು ಶಿಕ್ಷಣದ ಕೊನೆಯಲ್ಲಿ ಪಡೆದ ಪದವಿ ಪತ್ರ ಕಲಿಕೆಯ ಮುಕ್ತಾಯವಲ್ಲ! ಬಹುಶಃ ಅದು ಬದುಕಿನುದ್ದಕ್ಕೂ ಕಲಿಯುವ ಅವಕಾಶಗಳಿಗೆ ಒಂದು ಬುನಾದಿ. ಶಿಕ್ಷಣದ ಗುರಿ ಎಂದರೆ ಒಂದು ಡಿಗ್ರಿ ಎಂಬ ದಾಖಲೆಯನ್ನು ವಿಶ್ವವಿದ್ಯಾಲಯದಲ್ಲಿ ಗಳಿಸಿ ಒಬ್ಬ ಉದ್ಯೋಗಿಯಾಗಿ ಹಣಗಳಿಸಿ ಜೀವನ ಮಾರ್ಗವನ್ನು ಕಂಡುಕೊಳ್ಳುವುದು ಎಂಬುದು ಸಾರ್ವತ್ರಿಕವಾದ  ಅಭಿಪ್ರಾಯ. ಇದು ಒಂದು ವೈಯುಕ್ತಿಕ ನೆಲೆಯಲ್ಲಿ ಅಗತ್ಯ. ಆದರೆ ಶಿಕ್ಷಣದ ಗುರಿ ಒಬ್ಬ ಉದ್ಯೋಗಿಯನ್ನಷ್ಟೇ ತಯಾರು ಮಾಡುವುದಲ್ಲ. ಆ ಉದ್ಯೋಗಿ ಸಮಜದಲ್ಲಿನ ಒಂದು ಘಟಕ. ಅವನು ಅಥವಾ ಅವಳು ಸಮಾಜಕ್ಕೆ ಸಲ್ಲುವಂಥವರಾಗಬೇಕು. ಹೀಗೆ ಸಾಮೂಹಿಕ ನೆಲೆಯಲ್ಲೂ ಒಂದು ಆರೋಗ್ಯಕರ ಸಮಾಜವನ್ನು ಕಟ್ಟಲು ಶಿಕ್ಷಣ ಅಗತ್ಯ. ಈ ಕಾರಣಗಳಿಂದ ನಮ್ಮ ಶಿಕ್ಷಣ, ಶಿಕ್ಷಣ ನೀತಿ ಸಮಾಜಕ್ಕೆ ಹೊಂದುವಂತಿರಬೇಕು.


ಸಮಾಜ ಕ್ಷಿಪ್ರವಾದ ಬದಲಾವಣೆಗಳನ್ನು ಕಾಣುತ್ತಿದ್ದರೂ ಮನುಷ್ಯನ ಮೂಲಭೂತವಾದ ಕೆಲವು ಮಾನವೀಯ ಮೌಲ್ಯಗಳು ನಮಗೆ ಅಗತ್ಯ. ಅವು ನಮ್ಮ ಅಸ್ತಿತ್ವದೊಂದಿಗೆ ಬೆರೆತುಕೊಂಡಿದೆ. ಸಮಾಜ ಬದಲಾಗುತ್ತಿದ್ದರೂ ಈ ಮೌಲ್ಯಗಳನ್ನು ಉಳಿಸಿಕೊಳ್ಳುವ ಶಿಕ್ಷಣ ಬೇಕಾಗಿದೆ. ಅದು ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಬೇಕು. ಶಿಕ್ಷಣ, ವ್ಯಕ್ತಿತ್ವ ವಿಕಾಸನಕ್ಕೆ ಕಾರಣವಾಗಬೇಕು. ವ್ಯಕ್ತಿ ವಿಕಾಸನವಾದಲ್ಲಿ ಸಮಾಜವು ವಿಕಾಸಗೊಳ್ಳುತ್ತದೆ. ಇದನ್ನೇ ಮೌಲ್ಯಾಧಾರಿತ ಶಿಕ್ಷಣ (Value based education) ಎಂದು ಕರೆಯ ಬಹುದು.  ಇದನ್ನು ಒಂದು ಸಣ್ಣ ಉದಾಹರಣೆಯೊಂದಿಗೆ ವಿವರಿಸುವುದು ಸೂಕ್ತ. ನಾನೊಬ್ಬ ವೈದ್ಯ. ನಮ್ಮ ವೈದ್ಯಕೀಯ ಕಾಲೇಜುಗಳು ಒಬ್ಬ ನುರಿತ, ನಿಪುಣ ವೈದ್ಯನನ್ನು ತಯಾರು ಮಾಡ ಬಹುದು. ಆದರೆ ಆ ವೈದ್ಯನಿಗೆ ಸೇವಾ ಮನೋಭಾವವಿಲ್ಲದೆ, ಅನುಕಂಪೆಯಿಲ್ಲದೆ, ಹಣಗಳಿಸುವ ನೆಪದಲ್ಲಿ ರೋಗಿಗಳನ್ನು ಶೋಷಿಸಲು ಮೊದಲಾದರೆ ಆ ಶಿಕ್ಷಣದಿಂದ ಸಮಾಜಕ್ಕೆ ಏನು ಪ್ರಯೋಜನ? ಆ ಶಿಕ್ಷಣ ಒಬ್ಬ ವ್ಯಕ್ತಿಗೆ ಲಾಭವನ್ನು ನೀಡುವುದೇ ಹೊರತು ಸಮಾಜಕ್ಕಲ್ಲ! ಒಬ್ಬ ನುರಿತ ಇಂಜಿನೀಯರ್ ಲಂಚಕೋರನಾಗಿ ಅವನು ಕಟ್ಟಿದ ಸೇತುವೆಗಳು, ಮನೆಗಳು ಕುಸಿದು ಬಿದ್ದಾಗ ಅವನು ಪಡೆದ ವೃತ್ತಿ ಶಿಕ್ಷಣ ಎಷ್ಟರ ಮಟ್ಟಿಗೆ ಮೌಲ್ಯಾಧಾರಿತವಾಗಿತ್ತು ಎನ್ನುವ ಪ್ರಶ್ನೆ ಮೂಡುತ್ತದೆ.

ಈ ಮೌಲ್ಯಾಧಾರಿತ ಶಿಕ್ಷಣ ವ್ಯಕ್ತಿಗಳ ನಡುವೆ ಸ್ನೇಹ, ಪ್ರೀತಿ, ವಿಶ್ವಾಸ, ಪರಸ್ಪರ ನಂಬಿಕೆ, ಗೌರವ ಇವುಗಳನ್ನು ಉಂಟುಮಾಡುತ್ತದೆ. ನಾಗರೀಕ ಸಮಾಜ ಮತ್ತು ಸಂಸ್ಕೃತಿಯನ್ನು ಕಟ್ಟಲು ನೆರವಾಗುತ್ತದೆ. ಕೆಲವು ಉದ್ಯೋಗಗಳಲ್ಲಿ ಒಬ್ಬ ವ್ಯಕ್ತಿ ಒಂದು ತಂಡದ ಭಾಗವಾಗಿ ಕೆಲಸ ಮಾಡಬೇಕಾಗುತ್ತದೆ. ಅಲ್ಲಿ ಸಹೋದ್ಯೋಗಿಗಳ ಜೊತೆ ಕೆಲವು ನಿಯಮಗಳಿಗೆ ಬದ್ಧವಾಗಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಸಹಕಾರ, ವಿನಯ, ಇತರರೊಡನೆ ಹೊಂದಾಣಿಕೆ ಇವುಗಳು ಮುಖ್ಯವಾಗುತ್ತವೆ.  ಇಂಗ್ಲೆಂಡಿನ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ವೈದ್ಯಕೀಯ ಶಿಕ್ಷಣದಲ್ಲಿ ಒಬ್ಬ ವೈದ್ಯಕೀಯ ವಿದ್ಯಾರ್ಥಿಯ ಜ್ಞಾನದ ಅರಿವನ್ನು ಪರೀಕ್ಷಿಸುವುದರ ಜೊತೆ ಜೊತೆಗೆ ಅವನ ಸಮಯ ಪ್ರಜ್ಞೆ, ಸ್ನೇಹ, ವಿನಯಶೀಲತೆ, ಶ್ರದ್ಧೆ, ತಂಡದಲ್ಲಿ ಅವನ ಸಹಕಾರ ಇವುಗಳ ಬಗ್ಗೆ ಸಹಪಾಠಿಗಳು, ನರ್ಸ್ಗಳು, ಹಿರಿಯ ವೈದ್ಯರು ತಮ್ಮ ಅನಿಸಿಕೆಗಳನ್ನು ನೀಡಬೇಕು. ಈ ವರದಿ ಸಮಾಧಾನಕಾರವಾಗಿದ್ದಲ್ಲಿ ಮಾತ್ರ ಆ ವಿದ್ಯಾರ್ಥಿ ಮುಂದಿನ ಹಂತವನ್ನು ತಲುಪಲು ಸಾಧ್ಯ. ಈ ಮಾದರಿಯನ್ನು ಭಾರತೀಯ ಶಿಕ್ಷಣ ನೀತಿಯಲ್ಲಿ ಅಳವಡಿಸಿಕೊಳ್ಳ ಬೇಕಾಗಿದೆ. ಈ ಮೌಲ್ಯಾಧಾರಿತ ಶಿಕ್ಷಣ ಪ್ರಾಥಮಿಕ ಶಿಕ್ಷಣದಿಂದಲೇ ಶುರುವಾಗಿ ಎಲ್ಲಾ ಹಂತದಲ್ಲೂ ದೊರೆಯುವಂತಾಗಬೇಕು.  

ಶಿಕ್ಷಣದ ಗುರಿ ಎಂದರೆ ಅದು ಒಬ್ಬ ಅಲ್ಪಮಾನವನನ್ನು ವಿಶ್ವಮಾನವನನ್ನಾಗಿ ಮಾಡಬೇಕು, ಒಬ್ಬ ಅನಾಗರಿಕನನ್ನು ನಾಗರೀಕನನ್ನಾಗಿಸಬೇಕು. ಸಮಾಜದಲ್ಲಿ ನಾವು ಧರ್ಮ, ಜಾತಿ, ಆರ್ಥಿಕ ವರ್ಗ, ಎಡಪಂಥ, ಬಲಪಂಥ, ವರ್ಣ ಬೇಧ (ರೇಸಿಸಂ) ಎಂಬ ಗೋಡೆಗಳನ್ನು ಕಟ್ಟಿಕೊಂಡು ಅಲ್ಪಮಾನವರಾಗಿ ಬಿಡುತ್ತೇವೆ.  ಇಂದಿನ ರಾಜಕೀಯ ಸಾಮಾಜಿಕ ಪರಿಸ್ಥಿತಿಯಲ್ಲಿ ನಮ್ಮ ಆಲೋಚನಾ ಕ್ರಮದಿಂದಾಗಿ ದೇಶ ವಿಭಜನೆಯಾಗಿದೆ. ರಾಜಕೀಯ, ಧಾರ್ಮಿಕ ಪೂರ್ವೋದ್ದೇಶಗಳಿಂದ ನಮ್ಮ ಪಠ್ಯ ಪುಸ್ತಕದಲ್ಲಿನ ಮಾಹಿತಿಗಳನ್ನು ತಿದ್ದುವ ಪ್ರಯತ್ನ ನಡೆದಿದೆ. ಇತಿಹಾಸವನ್ನು ಮರುವ್ಯಾಖ್ಯಾನ ಮಾಡಿ ಮಕ್ಕಳ ಅರಿವನ್ನು ನಿಯಂತ್ರಿಸಲಾಗುತ್ತಿದೆ. ದ್ವೇಷವೆಂಬ ವಿಷದ ಬೀಜವನ್ನು ಬಿತ್ತುವ ಪ್ರಯತ್ನ ನಡೆಯುತ್ತಿದೆ. ಬದುಕಿನ ಪ್ರತಿಯೊಂದು ಮಜಲಿನಲ್ಲೂ ಶ್ರೇಷ್ಠ ನಿಕೃಷ್ಟ, 'ನಾವು ಮತ್ತು ಅವರು' ಎಂಬ ಭಾವನೆಗಳನ್ನು ಉಂಟುಮಾಡುವ ಶಿಕ್ಷಣದ ಕಡೆಗೆ ವಾಲುತ್ತಿದ್ದೇವೆ. ಬದುಕಿನಲ್ಲಿ ಸಹಭಾಗಿತ್ವ ಎಂಬ ಪರಿಕಲ್ಪನೆ ಸರಿದು ಎಲ್ಲ ಮಜಲುಗಳಲ್ಲಿ ಸ್ಪರ್ಧೆಯೇ ಮುಖ್ಯವಾಗಿದೆ. ಭಾರತದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಪರಿಷತ್ತುಗಳು ಹುಟ್ಟಿಕೊಂಡು ಅವುಗಳನ್ನು ರಾಜಕಾರಣಿಗಳು ನಿಯಂತ್ರಿಸುತ್ತಿದ್ದಾರೆ. ಪ್ರಭಾವಕ್ಕೆ ಒಳಗಾಗುವ ಯುವಕ ಯುವತಿಯರು ಒಂದು ರಾಜಕೀಯ ಪಕ್ಷದ ಕಾಲಾಳುಗಳಾಗಿ ನಿಲ್ಲಲು ತಯಾರಾಗಿದ್ದಾರೆ. ಬರಿ ಬಲಪಂಥ ಎಡಪಂಥ ಸಮಸ್ಯೆಗಳಲ್ಲದೆ ಇಲ್ಲಿ ಧರ್ಮವನ್ನು ಬೆಸೆಯಲಾಗಿದೆ. ಇಲ್ಲಿ ಸಾಕಷ್ಟು ಹಿಂಸೆ ಮತ್ತು ಸಂಘರ್ಷಣೆಗಳು ಸಂಭವಿಸುತ್ತವೆ. ಇದು ಅಪಾಯಕಾರಿ ಬೆಳವಣಿಗೆ ಎನ್ನ ಬಹುದು. ಈ ಕಾರಣಗಳಿಂದಾಗಿ ನಮ್ಮ ಶಿಕ್ಷಣ, ಧರ್ಮ ಮತ್ತು ರಾಜಕೀಯ ಇವುಗಳ ಪ್ರಭಾವದಿಂದ ದೂರವಾಗಬೇಕು. ಒಬ್ಬ ವಿಶ್ವಮಾನವನನ್ನು ತಯಾರು ಮಾಡುವ ಶಿಕ್ಷಣದಿಂದಾಗಿ ಆ ವ್ಯಕ್ತಿ ಪ್ರಪಂಚದ ಎಲ್ಲ ಕಡೆ ಸಲ್ಲುವವನಾಗುತ್ತಾನೆ. ಜಾತಿ ಧರ್ಮವೆಂಬ ಸಂಕುಚಿತ ಕಟ್ಟಳೆಗಳನ್ನು ಮೀರಿ ನಿಲ್ಲಲ್ಲು ಸಮರ್ಥನಾಗುತ್ತಾನೆ.  

ನಾವು ನಮ್ಮ ಧರ್ಮ, ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸುವುದು ತಪ್ಪಲ್ಲ, 
ಅದು ಅತ್ಯಗತ್ಯ. ನಮ್ಮ ಭಾರತೀಯ ಸಾಹಿತ್ಯ, ಕಲೆ, ಸಂಸ್ಕೃತಿ ಸಮೃದ್ಧವಾಗಿದ್ದು ಅದನ್ನು ಉಳಿಸಿಕೊಳ್ಳಬೇಕು. ಒಂದು ಶಿಕ್ಷಣ ಸಮಾಜಕ್ಕೆ ಹೊಂದುವಂತಾಗ ಬೇಕಿದ್ದಲ್ಲಿ ಅದು ನಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಗಟ್ಟಿಗೊಳಿಸಬೇಕು. ಅದು ಒಬ್ಬ ವ್ಯಕ್ತಿಯ ಪರಿಪೂರ್ಣತೆಗೆ ಬಹಳ ಮುಖ್ಯ. "ತನ್ನ ಬೇರುಗಳ ಶಾಶ್ವತ ನೆಲೆದ ನಂಟು ಒಂದು ಗಿಡಕ್ಕೆ ಅಥವಾ ಮರಕ್ಕೆ ಅತ್ಯಗತ್ಯ. ತಮ್ಮ ಸಾಂಸ್ಕೃತಿಕ ಅರಿವಿಲ್ಲದವರು, ತಮ್ಮ ಮೂಲ ಭಾಷೆ ನೆಲೆಗಳನ್ನು, ಅಸ್ಮಿತೆಗಳನ್ನು ಮರೆತವರು ನಿರ್ದಿಷ್ಟ ನೆಲೆಯಿಲ್ಲದೆ, ಸ್ಥಳಾಂತರಗೊಳ್ಳುವ ಕುಂಡಗಳಲ್ಲಿನ ಗಿಡ ಮರಗಳಂತೆ" ಎಂದು ಜಿ.ಎಸ್.ಎಸ್ ಒಮ್ಮೆ ಪ್ರಸ್ತಾಪಮಾಡಿದ್ದನು ಇಲ್ಲಿ ನೆನೆಯುವುದು ಸೂಕ್ತ. ಅವೈಚಾರಿಕತೆ ಮತ್ತು ಮೂಢನಂಬಿಕೆಗಳನ್ನು ಮೂಡಿಸುವ ಪಠ್ಯ ಕ್ರಮವನ್ನು ಕೈಬಿಡಬೇಕು. 

ಶಿಕ್ಷಣವನ್ನು ಸ್ಥಳೀಯ ಸಮುದಾಯಕ್ಕೆ ಹೊಂದುವ ಪರಿಸರ ಭಾಷೆಯಲ್ಲೇ ನೀಡಬೇಕು. ಕರ್ನಾಟಕದಲ್ಲಿ ಅದರಲ್ಲೂ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕನ್ನಡವನ್ನು ಕಡ್ಡಾಯ ಮಾಡಬೇಕು. ಕಿರಿಯ ಮಕ್ಕಳು ತಮ್ಮ ಪರಿಸರವನ್ನು ಅರಿತುಕೊಳ್ಳುವುದು ಪರಿಸರ ಭಾಷೆಯಲ್ಲೇ. ಅವರ ಮಿದುಳಿನ ನರಮಂಡದಲ್ಲಿ ಉಂಟಾಗುವ ಕೆಲವು ಕಲ್ಪನೆಗಳು, ಮನಸ್ಸಿನಲ್ಲಿ ಅಚ್ಚಾಗುವ ಚಿತ್ತಾರಗಳು ಮನೆಯ ಮತ್ತು ಸುತ್ತಣ ಸಮಾಜ ತೊಡಗುವ ಭಾಷೆಯಲ್ಲೇ. ಹೀಗಿರುವಾಗ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಇಂಗ್ಲಿಷ್ ಮೀಡಿಯಂ ಸೇರಿಕೊಂಡು ಕಲಿಕೆಯನ್ನು ಪರಿಸರ ಭಾಷೆಯಲ್ಲದ ಇಂಗ್ಲೀಷಿನಲ್ಲಿ ಕಲಿಯುವ ಮಕ್ಕಳಿಗೆ ಸಾಕಷ್ಟು ಗೊಂದಲ ಉಂಟಾಗುವ ಬಗ್ಗೆ ಶಿಕ್ಷಣ ಮತ್ತು ಮಾನಸಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅದು ಮಗುವಿನ ಆತ್ಮವಿಶ್ವಾಸಕ್ಕೆ ಧಕ್ಕೆ ಬರುವುದಾಗಿ ಅಭಿಪ್ರಾಯ ನೀಡಿದ್ದಾರೆ. ಚಿಕ್ಕ ಮಕ್ಕಳಿಗೆ ಬೇರೆ ಬೇರೆ ಭಾಷೆ ಕಲಿಯುವುದು ಸರಾಗವಿರಬಹುದಾದರೂ ಅದು ಗೊಂದಲವನ್ನು ಉಂಟುಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಮಹಾತ್ಮ ಗಾಂಧಿ ತಮ್ಮ ಆತ್ಮಚರಿತ್ರೆಯಲ್ಲಿ ಹೀಗೆ ಬರೆಯುತ್ತಾರೆ; “ತಮ್ಮ ಮಕ್ಕಳಿಗೆ ಆಲೋಚಿಸಲು ಮತ್ತು ವ್ಯವಹರಿಸಲು ಇಂಗ್ಲೀಷನ್ನೇ ಬಳಸಬೇಕೆನ್ನುವ ಭಾರತೀಯ ತಂದೆ ತಾಯಿಯರು ತಮ್ಮ ತಾಯ್ನಾಡಿಗೆ ದ್ರೋಹವನ್ನು ಬಗೆಯುತ್ತಿದ್ದಾರೆ. ಅವರು ತಮ್ಮ ಮಕ್ಕಳನ್ನು ಭಾರತೀಯ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪರಂಪರೆಯಿಂದ ವಂಚಿತರಾಗುವಂತೆ ಮಾಡುತ್ತಿದ್ದಾರೆ" ಬ್ರಿಟಿಷರು ನಮ್ಮನ್ನು ನೂರಾರು ವರ್ಷಗಳು ಆಳಿ ಅವರ ಭಾಷೆ ಮತ್ತು ಸಂಸ್ಕೃತಿಯನ್ನು ನಮ್ಮ ಮೇಲೆ ಹೇರಿರುವ ಪರಿಣಾಮವಿದು. ನಮ್ಮ ಶಿಕ್ಷಣ ನೀತಿಗಳು    ವಸಾಹತು ಬ್ರಿಟಿಷ್ ಮನಸ್ಥಿತಿಯಿಂದ ಮುಕ್ತವಾಗಬೇಕಾಗಿದೆ. ಇಲ್ಲಿ ಒಂದು ಸಣ್ಣ ಉದಾಹರಣೆ ನೀಡುವುದು ಸೂಕ್ತ. ಕರ್ನಾಟಕದ ಒಳನಾಡಿನ ಯಾವೊದೋ ಒಂದು ಸಣ್ಣ ಹಳ್ಳಿಯಲ್ಲಿ “London Bridge is falling down, falling down” ಎಂಬ ಶಿಶು ಗೀತೆಯನ್ನು ಹೇಳಿಕೊಟ್ಟಲ್ಲಿ, ಆ ಮಕ್ಕಳಿಗೆ ಲಂಡನ್ ಬ್ರಿಡ್ಜ್ ನಿಂತಿದರೆಷ್ಟು? ಬಿದ್ದರೆಷ್ಟು? ಅದರ ಬದಲಿಗೆ ‘ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ’ ಎಂಬ ಗೀತೆಯನ್ನು ಹೇಳಿ ಕೊಡ ಬಹುದಲ್ಲವೇ?  ಉನ್ನತ ಶಿಕ್ಷಣದಲ್ಲಿ ವಿಜ್ಞಾನ ವಿಷಯಗಳನ್ನು ಕಲಿಯಲು ಇಂಗ್ಲಿಷ್ ಬೇಕೇ ಬೇಕು ಎಂದು ವಾದಿಸುವವರು ಒಮ್ಮೆ ಇಂಗ್ಲೆಂಡಿನ ಪಕ್ಕದ ದೇಶಗಳಾದ ಫ್ರಾನ್ಸ್ ಜರ್ಮನಿ, ಪೂರ್ವ ಯೂರೋಪ್ ದೇಶಗಳ ಶಿಕ್ಷಣ ಕ್ರಮಗಳನ್ನು ಗಮಸಿಸಬೇಕಾಗಿದೆ. 

ಶಿಕ್ಷಣ ಎಲ್ಲರನ್ನು ಒಳಗೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಒಂದು ವಾಣಿಜ್ಯ ವಹಿವಾಟಾಗಿದೆ. ಖಾಸಗಿ ಶಾಲಾ ಕಾಲೇಜುಗಳು ಹೆಚ್ಚಾಗಿ ಶಿಕ್ಷಣ ಎಂಬುದು ಉಳ್ಳವರ ಸೊತ್ತಾಗಿದೆ.  ಗುಣಮಟ್ಟದಲ್ಲಿ ಸರ್ಕಾರೀ ಮತ್ತು ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಅಂತರವಿರಬಾದು. ಸಮಾಜದಲ್ಲಿ ಕೆಳಗಿನ ಸ್ಥರಗಳಲ್ಲಿರುವವರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಉಳಿದು ಅವರಿಗೂ ಅವಕಾಶವಿರಬೇಕು. ಎಲ್ಲಿಯವರೆಗೆ ಎನ್ನುವುದು ಇನ್ನೊಂದು ಪ್ರಶ್ನೆ. ಸಮಾಜದ ಹಿತದೃಷ್ಟಿಯಿಂದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಆದ್ಯತೆಯಾಗಬೇಕು. ಅಭಿವೃದ್ಧಿ ಗೊಳ್ಳುತ್ತಿರುವ ದೇಶಗಳಲ್ಲಿ ಅದರ ಪರಿಣಾಮಗಳು ಹಲವಾರು. ನಮ್ಮ ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಪ್ಪಿಕೊಳ್ಳಲು ಹವಣಿಸುತ್ತಿದ್ದಾರೆ.  ವಿದೇಶಗಳಲ್ಲಿರುವ  ಲೈಂಗಿಕ ಸ್ವಾತಂತ್ರ್ಯ ಮತ್ತು ಸ್ವೇಚ್ಛೆಗಾಗಿ ನಮ್ಮ ಯುವಕ ಯುವತಿಯರು ಹಾತೊರೆಯುತ್ತಿದ್ದಾರೆ. ತಮ್ಮ ಲೈಂಗಿಕ ಪ್ರವೃತ್ತಿಯನ್ನು, ತಾವು ಸಲಿಂಗ ಕಾಮಿಗಳು ಎಂಬ ವಿಚಾರವನ್ನು ಯುವಕರು ಮುಕ್ತವಾದ ಮನಸ್ಸಿನಿಂದ ಬಹಿರಂಗ ಪಡಿಸುತ್ತಿದ್ದಾರೆ. ಓಟಿಟಿ ಮತ್ತು ಇತರ ದೃಶ್ಯ ಮಾಧ್ಯಮಗಳಲ್ಲಿ ಲೈಂಗಿಕತೆ ಮತ್ತು ಲೈಂಗಿಕ ಉಲ್ಲೇಖವಿರುವ ಸಿನಿಮಾಗಳು ಧಾರಾವಾಹಿಗಳು ಈಗ ಯಥೇಚ್ಛವಾಗಿವೆ. ಲೈಂಗಿಕ ಗುಹ್ಯ ರೋಗಗಳು ಮತ್ತು ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಧಾರಣೆ ಇವುಗಳ ಬಗ್ಗೆ ಯುವಜನತೆಗೆ ಅರಿವು ಮೂಡಿಸಬೇಕಾಗಿದೆ. ಈ ಒಂದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆ. ಇದನ್ನು ಶಿಕ್ಷಣದ ಯಾವ ಹಂತದಲ್ಲಿ? ಮತ್ತು ಹೇಗೆ ನೀಡಬೇಕು? ಎಂಬುದರ ಬಗ್ಗೆ ಸ್ಪಷ್ಟತೆ ಬೇಕಾಗಿದೆ.

ಕರೋನ ಪಿಡುಗು ಬಂದು ನಮ್ಮ ಬದುಕಿನಲ್ಲಿ ಸಾಮಾಜಿಕ ಮತ್ತು ತಾಂತ್ರಿಕ ಹೊಂದಾಣಿಕೆಗಳನ್ನು ಮಾಡಿಕೊಂಡಿದ್ದೇವೆ. ತಂತ್ರಜ್ಞವನ್ನು ಬಳಸಿ ಮನೆಯಿಂದಲೇ ದುಡಿಯುವ ಮತ್ತು ಕಲಿಯುವ ಅವಕಾಶಗಳನ್ನು ಕಲ್ಪಿಸಿಕೊಂಡಿದ್ದೇವೆ. ಜೋಮ (Zoom) ವೇದಿಕೆ ಅನೇಕ ಶಿಕ್ಷಣ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಹಿಂದೆ ನಮ್ಮ ಅನಿವಾಸಿ ಕನ್ನಡಿಗರು ಮಕ್ಕಳನ್ನು ಒಂದೆಡೆ ಕಲೆಹಾಕಿ 'ಕನ್ನಡ ಕಲಿ' ತರಗತಿಗಳನ್ನು ನಡೆಸಲು ಹೆಣಗುತ್ತಿದ್ದೆವು. ಈಗ ಜೋಮ ವೇದಿಕೆಯಿಂದಾಗಿ ಮಕ್ಕಳು ಮನೆಯಲ್ಲೇ ಕುಳಿತು ಕನ್ನಡವನ್ನು ಕಲಿಯುವ ಅವಕಾಶ ಒದಗಿ ಬಂದಿದೆ. ಅಂದ ಹಾಗೆ ಅದು ಸಫಲತೆಯನ್ನೂ ಕಂಡುಕೊಂಡಿದೆ. ಉನ್ನತ ಶಿಕ್ಷಣದಲ್ಲಿ ಹಲವಾರು ಕಲಿಕೆಗಳು ಆನ್ ಲೈನ್ ವೇದಿಕೆಗಳಲ್ಲಿ ಲಭ್ಯವಾಗಿವೆ, ಇವೆಲ್ಲಾ ತಂತ್ರಜ್ಞಾನದ ಸದುಪಯೋಗ ಎನ್ನಬಹುದು.

ಪರಿಸರ ವಿನಾಶದ ಮತ್ತು ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವ ಬಗ್ಗೆ ಎಲ್ಲ ದೇಶಗಳಲ್ಲಿ ಎಚ್ಚರಿಕೆಯ ಕರೆಗಂಟೆ ಕೇಳಿ ಬರುತ್ತಿದೆ. ಪರಿಸರದ ಅಳಿವು ಉಳಿವಿನ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸಬೇಕಾಗಿದೆ. ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆ, ನಿಸರ್ಗ ಸಂಪನ್ಮೂಲಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಸುವುದರ ಪರಿಣಾಮ ಈ ವಿಚಾರಗಳ ಬಗ್ಗೆ ತ್ವರಿತವಾಗಿ ನಮ್ಮ ಮಕ್ಕಳಿಗೆ ಕಲಿಸಬೇಕಾಗಿದೆ. ಈ ವಿಷಯಗಳನ್ನು ಮಕ್ಕಳ ಗ್ರಹಿಕೆಗೆ ನಿಲುಕುವಂತೆ ಶಿಕ್ಷಣದ ಪ್ರತಿಯೊಂದು ಹಂತದಲ್ಲೂ ಕಡ್ಡಾಯವಾಗಿ ಕಲಿಸಬೇಕು. ಇವುಗಳನ್ನು ತರಗತಿಯಲ್ಲಿ ಬೋಧಿಸಿದರಷ್ಟೇ ಸಾಲದು. ಮಕ್ಕಳನ್ನು ಅರಣ್ಯ ಪ್ರದೇಶಗಳಿಗೆ, ಹಾನಿಗೊಳಗಾದ ನಿಸರ್ಗ ತಾಣಗಳಿಗೆ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಿ ಮಕ್ಕಳಿಗೆ ಪ್ರತ್ಯಕ್ಷ ಅನುಭವವನ್ನು ಒದಗಿಸಿದಲ್ಲಿ ಅದು ಹೆಚ್ಚು ಪರಿಣಾಮಕಾರಿಯಾಗಬಲ್ಲುದು. ಮಕ್ಕಳು ವಾಸಮಾಡುವ ಪರಿಸರದಲ್ಲಿ ಮರಗಳನ್ನು ನೆಡುವ, ಪೋಷಿಸುವ ಶೈಕ್ಷಣಿಕೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಶಾಲಾ ಕಾಲೇಜುಗಳ ಮಕ್ಕಳಿಂದ ಪರಿಸರ ವಿನಾಶದ ಕುರಿತಾಗಿ ಬೀದಿ ನಾಟಕಗಳನ್ನು ಆಡಿಸಿದರೆ ಅದು ಶೈಕ್ಷಣಿಕ ಕಾರ್ಯಕ್ರಮವಲ್ಲದೆ ಮನೋರಂಜನೆಯಾಗಿಯೂ ಕಿರಿಯರ-ಹಿರಿಯರ ಗಮನವನ್ನು ಸೆಳೆಯುತ್ತದೆ.  

ಶಿಕ್ಷಣ ಕ್ರಮದಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕಾಗಿದೆ. ಶಾಲೆಯ ನಾಲ್ಕು ಗೋಡೆಗಳ ಒಳಗೆ ಮಾತ್ರ ಕಲಿಕೆ ಸಾಧ್ಯ ಎಂಬ ಈ ಮನಸ್ಥಿತಿಯಿಂದ ಹೊರಬರಬೇಕಾಗಿದೆ. ಇದು ಮಕ್ಕಳಲ್ಲಿ ಒಂದು ಸಂಕುಚಿತ ಮನೋಭಾವವನ್ನು ಉಂಟುಮಾಡಬಹುದು. ಅನುಕೂಲಕರ ಉತ್ತಮ ಹವಾಮಾನವಿರುವ ದೇಶಗಳಲ್ಲಿ ಮುಕ್ತವಾದ ನಿಸರ್ಗದ ಮಧ್ಯೆ ಕಲಿಕೆಯ ಸಾಧ್ಯತೆಗಳನ್ನು ಕಂಡುಕೊಳ್ಳಬೇಕು. ಮಕ್ಕಳ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕೆ ನಡೆಯಬೇಕಾಗಿದೆ. ಎಲ್ಲರಿಗೂ ಒಂದೇ ಅಳತೆಗೋಲು ಹಿಡಿದು ಕಲಿಸುವ ಕ್ರಮವನ್ನು ಪರಿಶೀಲಿಸಿಬೇಕಾಗಿದೆ. ಕೆಲವೊಮ್ಮೆ ಪುಸ್ತಕಗಳನ್ನು ಪಕಕ್ಕೆ ಇಟ್ಟು ವಿಜ್ಞಾನದ ಪ್ರಯೋಗಗಳನ್ನು ಕೈಯಾರೆ ಮಾಡಿ ನಿತ್ಯ ಸತ್ಯಗಳನ್ನು ಮಕ್ಕಳೇ ಅನ್ವೇಷಣೆ ಮಾಡಿ ತಿಳಿದುಕೊಳ್ಳಬೇಕು. ಈ ರೀತಿಯ ಕಲಿಕೆ ಮಾನವ ಸಹಜ ಕುತೂಹಲವನ್ನು ಕೆರಳಿಸುವುದರ ಜೊತೆಗೆ ಅದು ಒಂದು ಉಲ್ಲಾಸಕರ ಚಟುವಟಿಕೆಯಾಗಬೇಕು. ಮಕ್ಕಳ ಮನಸ್ಸಿನಲ್ಲಿ ಏಕೆ? ಹೇಗೆ? ಎಂಬ ಪ್ರಶ್ನೆಗಳನ್ನು ಮತ್ತು ವೈಜ್ಞಾನಿಕ ಮನೋಭಾವವನ್ನು ಪ್ರಚೋದಿಸುವ ಶಿಕ್ಷಣ ಕ್ರಮವನ್ನು ಅಳವಡಿಸಬೇಕಾಗಿದೆ. ಭಾರತ ಭೌಗೋಳಿಕ ಸಾಂಸ್ಕೃತಿಕ ನೈಸರ್ಗಿಕ ದೃಷ್ಠಿಯಿಂದ ವೈವಿಧ್ಯತೆಯುಳ್ಳ ದೊಡ್ಡ ದೇಶ. ಹೀಗಾಗಿ ಈ ವೈವಿಧ್ಯತೆಯನ್ನು ವಿಜೃಂಭಿಸುವ ಸಲುವಾಗಿ ಶಿಕ್ಷಣ ನೀತಿಯಲ್ಲಿ ಪ್ರಾದೇಶಿಕತೆಗೆ ಹೆಚ್ಚಿನ ಒತ್ತು ಕೊಡಬೇಕಾಗಿದೆ. ನಗರ ಪ್ರದೇಶಗಳಲ್ಲಿ ಸಿಬಿಎಸ್ ಕೇಂದ್ರ ಪಠ್ಯಕ್ರಮವನ್ನು ಬೋಧಿಸುವ ರಾಷ್ಟೀಯ ಅಂತಾರಾಷ್ಟ್ರೀಯ ಶಾಲೆಗಳು ಈ ಪ್ರಾದೇಶಿಕತೆಯನ್ನು ಒದಗಿಸುವುದರ ಬಗ್ಗೆ ಸಂದೇಹವಿದೆ. ಹೆಚ್ಚಿನ ಅಂಕಗಳನ್ನು ನೀಡುವ ಹಿಂದಿ, ಸಂಸ್ಕೃತ ಭಾಷೆಗಳನ್ನು ಮಕ್ಕಳು ಆಯ್ಕೆಮಾಡುತ್ತಿದ್ದಾರೆ. ಉನ್ನತ ಶಿಕ್ಷಣಕ್ಕೆ ಪೂರಕವಾಗುವ ಇಂಗ್ಲಿಷ್ ಪ್ರಧಾನವಾದ ಈ ಶಾಲೆಗಳಲ್ಲಿ ಅವರಿಗೆ ಸ್ಥಳೀಯ ಸಂಸ್ಕೃತಿಯ ಪರಿಚಯವಾಗುವುದಾದರೂ ಹೇಗೆ? ಎಂಬ ಪ್ರಶ್ನೆ ಮೂಡುತ್ತದೆ. ಬಿಳಿಗಿರಿ ರಂಗನ ಬೆಟ್ಟದ ಆದಿವಾಸಿ ಮಕ್ಕಳಿಗೆ ಅವರಿಗೆ ಪ್ರಸ್ತುತವಾಗದ ನಗರದ ವಿಷಯದ ಬದಲು ಅವರ ಪರಿಸರವಾಗಿರುವ ಅರಣ್ಯದ ಬಗ್ಗೆ ಪಠ್ಯಕ್ರಮ ಒತ್ತುನೀಡಬೇಕು. ಕಲಿಕೆ ಎಂಬುದು ಬದುಕಿಗೆ ಬೇಕಾದ ಸಾರ್ವತ್ರಿಕ ಅರಿವಿನ ಜೊತೆಗೆ ಹೆಚ್ಚು ವ್ಯಾಪಕವಾಗದೆ ಒಂದು ವಿಶೇಷ ಜ್ಞಾನವನ್ನು ಆಳವಾಗಿ ದೀರ್ಘವಾಗಿ ಅರಿಯಲು ಸಹಾಯಕವಾಗಬೇಕು. ವಿದ್ಯಾಥಿಗಳ ಕಲಿಕೆ ಅವರ ಬದುಕಿಗೆ ಎಷ್ಟು ಪ್ರಸ್ತುತವಾಗಿರಬೇಕು ಎಂಬುದು ಬಹಳ ಸಂಕೀರ್ಣವಾದದ್ದು. ಆರ್ಥಿಕ ಕಾರಣಗಳಿಂದ ವಲಸೆ ಹೋಗುತ್ತಿರುವಾಗ ಮತ್ತು ಜಾಗತೀಕರಣದ ಹಿನ್ನೆಲೆಯಲ್ಲಿ ಎಲ್ಲವೂ ಪ್ರಸ್ತುತವೆಂಬಂತೆ ತೋರುತ್ತದೆ. ಈ ಪ್ರಶ್ನೆಗೆ ಉತ್ತರ ದೊರಕುವುದು ಸುಲಭವಲ್ಲ. 

ಅಭಿವೃದ್ದಿಗೊಂಡಿರುವ ಇಂಗ್ಲೆಂಡಿನಂತಹ ದೇಶದಲ್ಲಿ ಕೆಲವು ಬಡ ಮಕ್ಕಳು ಮುಂಜಾನೆ ಶಾಲೆಗೆ ಹಸಿದ ಹೊಟ್ಟೆಯಲ್ಲಿ ಬರುತ್ತಿದ್ದಾರೆ. ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ಬೆಳಗಿನ ಉಪಹಾರವನ್ನು ಶಾಲೆಯಲ್ಲಿ ಒದಗಿಸುತ್ತಿದೆ. ಹೀಗಿರುವಾಗ ಬಡತನ ಹಸಿವು ವ್ಯಾಪಕವಾಗಿರುವ ಭಾರತದಲ್ಲಿ ಅದೆಷ್ಟೋ ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ. ಇಂತಹ ಮಕ್ಕಳಿಗೆ ಶಾಲೆಯಲ್ಲಿ ಬೆಳಗ್ಗೆ ಉಪಹಾರ ಮತ್ತು ಮಧ್ಯಾನ್ಹ ಭೋಜನ ಒದಗಿಸುವುದು ಶಿಕ್ಷಣ ಇಲಾಖೆಯ ಜವಾಬ್ದಾರಿಯಾಗಬೇಕು. ಹಸಿದ ಹೊಟ್ಟೆಯಲ್ಲಿ ಮಕ್ಕಳ ಏಕಾಗ್ರತೆ ಕುಗ್ಗಿ ಹೋಗುವುದನ್ನು ನಾನು ಒಬ್ಬ ವೈದ್ಯನಾಗಿ ಗಮನಿಸಿದ್ದೇನೆ. ಶಾಲೆಯಲ್ಲಿ ಸಿಗುವ ಆಹಾರದಲ್ಲಿ ಪೌಷ್ಠಿಕ ಅಂಶಗಳೂ ಇರಬೇಕು. ಈ ವ್ಯವಸ್ಥೆ ಹಸಿದ ಹೊಟ್ಟೆಗೆ ಅನ್ನವನ್ನು ನೀಡುವುದರ ಜೊತೆಗೆ ಮಕ್ಕಳ ತಂದೆ ತಾಯಿಗಳ ಮೇಲೆ ಇರುವ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುತ್ತದೆ, ಶಾಲೆಯಲ್ಲಿ ಹಾಜರಾಗಲು ಕಾರಣವೂ ಆಗುತ್ತದೆ.

ವಿದ್ಯಾರ್ಜನೆಯಲ್ಲಿ ಶಿಕ್ಷಕರ ಪಾತ್ರವು ಮಹತ್ವವಾದದ್ದು. ಶಿಕ್ಷಕರಿಗೆ ಉನ್ನತ ಶಿಕ್ಷಣದ ಅವಶ್ಯಕತೆ ಇರುವುದನ್ನು ಮರೆಯುವುದು ಸುಲಭ. ಅವರಿಗೂ ಶಿಕ್ಷಣ ವ್ಯವಸ್ಥೆಯಿಂದ ಬೆಂಬಲ ಬೇಕಾಗಿದೆ. ಶಿಕ್ಷಣವನ್ನು ಯಾವ ರೀತಿ ವಿದ್ಯಾರ್ಥಿಗಳಿಗೆ ತಲುಪಿಸಬೇಕು, ಯಾವ ರೀತಿ ಒದಗಿಸಿದರೆ ಅದು ಪರಿಣಾಮಕಾರಿ ಎಂಬುದನ್ನು ಶಿಕ್ಷಣ ತಜ್ಞರು ಶಿಕ್ಷಕರಿಗೆ ತಿಳಿಸಬೇಕು. ನನಗೆ ತಿಳಿದಂತೆ ಕರ್ನಾಟಕದಲ್ಲಿ ಸರ್ಕಾರದ ಉನ್ನತ ಶಿಕ್ಷಣ ಅಕಾಡೆಮಿ ಈ ಕೆಲಸವನ್ನು ಮಾಡಿಕೊಂಡು ಬಂದಿದೆ. ಶಿಕ್ಷಕರಲ್ಲಿ ಒಂದು ಸೃಜನ ಶೀಲತೆ (creativity) ಇರಬೇಕು, ಸಂಬಳಕ್ಕಷ್ಟೇ ಕೆಲಸಮಾಡುತ್ತಾ ಹೇಳಿದ್ದನ್ನೇ ಹೇಳೊ ಕಿಸ ಬೈ ದಾಸ ಮೇಸ್ಟ್ರು ಗಳು ನಮ್ಮಲ್ಲಿ ಯಥೇಚ್ಛವಾಗಿದ್ದಾರೆ. ಅವರಲ್ಲಿ ಕ್ರಿಯಾಶೀಲತೆಯನ್ನು (Dynamisim) ಮತ್ತು  ಸೃಜನಶೀಲತೆ (creativity) ಉಂಟುಮಾಡಬೇಕಾಗಿದೆ.  ಹಿಂದೆ ನಮ್ಮ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರ ಬಗ್ಗೆ ಒಂದು ರೀತಿ ಭಯವಿತ್ತು. ಶಿಕ್ಷಣ ಕ್ರಮ ಕಠೋರವಾಗಿ ಮತ್ತು ಹಿಂಸಾತ್ಮಕವಾಗಿತ್ತು. (Learning by humiliation) ದಂಡನೆಯಿಲ್ಲದ ಶಿಕ್ಷಣವಿರಲಿಲ್ಲ. ಈಗ ಸಾಕಷ್ಟು ಸುಧಾರಣೆಗಳಾಗಿವೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾಗಬೇಕು. ವಿದ್ಯಾರ್ಥಿಗಳು ಅವರಿಂದ ಸ್ಫೂರ್ತಿಯನ್ನು ಪಡೆಯಬೇಕು. ಅವರಿಬ್ಬರ ನಡುವೆ ಪರಸ್ಪರ ಪ್ರೀತಿ ವಿಶ್ವಾಸ ಗೌರವಗಳು ಮೂಡಿ ಬರಬೇಕು.

ಇತ್ತೀಚಿಗೆ ಪಾಶ್ಚಿಮಾತ್ಯ ದೇಶಗಳಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಲ್ಲಿ ನ್ಯೂರೋ ಡೈವರ್ಸಿಟಿ ಇರುವುದನ್ನು ಗುರುತಿಸಲಾಗುತ್ತಿದೆ. ಅದು ಮಕ್ಕಳ ಮಾನಸಿಕ ಬೆಳವಣಿಗೆಯ ನ್ಯೂನತೆ ಎಂದು ಹೇಳಬಹುದು. ಎಲ್ಲರ ಗ್ರಹಿಕೆ ಒಂದೇ ರೀತಿ ಇರುವುದಿಲ್ಲ. ಈ ನ್ಯೂನತೆ ಇರುವ ಮಕ್ಕಳ ಗ್ರಹಿಕೆಯಲ್ಲಿ ಕೆಲವು ಕುಂದು ಕೊರತೆಗಳಿರುತ್ತವೆ. ಕೆಲವು ವಿಷಯಗಳನ್ನು ಸಫಲವಾಗಿ ಗ್ರಹಿಸಿದರೂ ಇನ್ನು ಕೆಲವು ಗ್ರಹಿಕೆಯಲ್ಲಿ ತೊಂದರೆ ಇರುತ್ತದೆ. ಹೆತ್ತವರಿಗೆ ಮನೆಯಲ್ಲಿ ಕಾಣದ ಕೆಲವು ಮಾನಸಿಕ ತೊಂದರೆಗಳು ಶಾಲೆಯ ಒತ್ತಡ ವಾತಾವರಣದಲ್ಲಿ ಅಭಿವ್ಯಕ್ತಗೊಳ್ಳುತ್ತವೆ.  ಈ ಒಂದು ಸನ್ನಿವೇಶದಲ್ಲಿ ಒಬ್ಬ ವಿದ್ಯಾರ್ಥಿ ಧಡ್ಡನೆಂದು ಅದು ಅವನ ಹಣೆಬರಹವೆಂದು ಕೈಬಿಡುವುದು ಸರಿಯಲ್ಲ. ಈ ರೀತಿ ತೊಂದರೆ ಇರುವ ಮಕ್ಕಳಿಗೆ ಮನಶಾಸ್ತ್ರ ತಜ್ಞರ ಸಹಾಯ ಸಲಹೆ ಬೇಕಾಗುತ್ತದೆ. ಈ ವಿದ್ಯಾರ್ಥಿಗಳಿಗೆ ಶಿಕ್ಷಕರ ಮತ್ತು ಸಹಪಾಠಿಗಳ ಅನುಕಂಪೆ, ಸಹಕಾರ ಬಹಳ ಮುಖ್ಯ. ಈ ರೀತಿಯ ಮಕ್ಕಳಿಗೆ ವಿಶೇಷ ಪಠ್ಯ ಕ್ರಮ ಮತ್ತು ಪರೀಕ್ಷಾಕ್ರಮ ಬೇಕಾಗುತ್ತದೆ. ಇವರಿಗೆ ಕಲಿಸಲು ಹೆಚ್ಚಿನ ಸೌಲಭ್ಯ ಮತ್ತು ಸಂಪನ್ಮೂಲಗಳು ಬೇಕಾಗುತ್ತದೆ. 

ನಮ್ಮ ಪರೀಕ್ಷಾಕ್ರಮದಲ್ಲಿ ಬಹಳ ವರ್ಷಗಳಿಂದ ವರ್ಷಕ್ಕೆ ಒಂದೇ ಪರೀಕ್ಷೆ ನಡೆಸಿ ಆ ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿ ಉತ್ತೀರ್ಣನಾಗಲು ಅರ್ಹನೇ ಎಂಬುದನ್ನು ನಿರ್ಧರಿಸಲಾಗುತ್ತಿದೆ. ವರ್ಷವಿಡೀ ಕಲಿತ ಒಂದೊಂದು ವಿಷಯವನ್ನು  ಕೇವಲ ಮೂರು ಗಂಟೆಗಳ ಪರೀಕ್ಷೆಯಲ್ಲಿ ನಿರ್ಧರಿಸುವುದು ಒಂದು ವಿಕೃತ ಪದ್ಧತಿ. ಈ ಒಂದು ವ್ಯವಸ್ಥೆಯಲ್ಲಿ ಪರೀಕ್ಷೆ ಎಂಬುದು ವಿದ್ಯಾರ್ಥಿಯ ಅರಿವಿಗಿಂತ ಅವನ
 /ಅವಳ ಜ್ಞಾಪಕ ಶಕ್ತಿಯನ್ನು ಅಳೆಯುವ ಸಾಧನವಾಗುತ್ತದೆ. ಒಂದು ಅಂತಿಮ ಪರೀಕ್ಷೆಯ ಬದಲು ವರ್ಷದುದ್ದಕ್ಕೂ ಹಲವಾರು ಘಟ್ಟಗಳಲ್ಲಿ  ಮಾಡುವುದು ಲೇಸು. ಪರೀಕ್ಷೆ ಎನ್ನುವುದು ಒಂದು ರಣರಂಗವಾಗಿ ಇಲ್ಲಿ ಸ್ಪರ್ಧೆಗೆ ಹೆಚ್ಚು ಪ್ರಾಮುಖ್ಯತೆ. ಸ್ಪರ್ಧೆ ಕೆಲವು ಮಕ್ಕಳ ಆತ್ಮ ವಿಶ್ವಾಸಕ್ಕೆ ಅಗತ್ಯ ಇರಬಹುದು, ಇರಲಿ ಆದರೆ ಅದನ್ನು ವಿಪರೀತವಾಗಿ ವಿಜೃಂಭಿಸುವುದನ್ನು ಕೈಬಿಡಬೇಕು. ಸಾಧಾರಣ ಮತ್ತು ಅಸಾಧಾರಣ ಪ್ರತಿಭೆ ಎಂದು ಶ್ರೇಣೀಕರಿಸಿದರೆ ಸಾಲದೇ? ಹೆತ್ತವರು ತಮ್ಮ ಮಕ್ಕಳನ್ನು ಇತರ ಮಕ್ಕಳಿಗೆ ಹೋಲಿಸಿ ಹಲುಬುವುದುನ್ನು ಖಂಡಿಸಬೇಕು. ಹೆತ್ತವರ, ಪೋಷಕರ ಹೆಚ್ಚಿನ ನಿರೀಕ್ಷೆ ಹಲವಾರು ವಿದ್ಯಾರ್ಥಿಗಳಿಗೆ ಮಾನಸಿಕ ತೊಂದರೆ ನೀಡಿ ಅವರು ಕಿರುಕುಳ ಮತ್ತು ಆತ್ಮಹತ್ಯಗೆ ಗುರಿಯಾಗುತ್ತಿದ್ದಾರೆ. ಈ ಒಂದು ವ್ಯವಸ್ಥೆ ಬದಲಾಗಬೇಕು.

ಒಟ್ಟಾರೆ ಶಿಕ್ಷಣ ನೀತಿ ಸಮಾಜಕ್ಕೆ ಹೊಂದುವಂತಿರಬೇಕಾದರೆ ನಮ್ಮ ಪಠ್ಯ ಕ್ರಮದಲ್ಲಿ, ಶಿಕ್ಷಣ ನೀಡುವ ಕ್ರಮದಲ್ಲಿ, ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ, ಅವರ ತಂದೆ ತಾಯಿಯರ ನಿರೀಕ್ಷೆಯಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕು. ಇಪ್ಪತ್ತೊಂದನೇ ಶತಮಾನದಲ್ಲಿ ಹಲವಾರು ವೈಜ್ಞಾನಿಕ ಸಾಧನೆಗಳಾಗಿ ಬಾಹ್ಯಾಕಾಶ ಮತ್ತು ಗ್ರಹಗಳಲ್ಲಿ ವಸಾಹತು ಮಾಡುವ ಆಲೋಚನೆ ಮನುಜಕುಲಕ್ಕೆ ಮೂಡುತ್ತಿದೆ. ಕರೋನ ರೀತಿಯ ಭಯಂಕರ ಪಿಡುಗನ್ನು ಹತೋಟಿಯಲ್ಲಿಡಲು ಲಸಿಕೆಗಳನ್ನು ಕಂಡುಹಿಡಿದ್ದೇವೆ. ಸೋಶಿಯಲ್ ಮೀಡಿಯಾ ಎಂಬ ತಾಂತ್ರಿಕ ಅದ್ಭುತವನ್ನು ಕಂಡುಕೊಂಡಿದ್ದೇವೆ. ಹಿರಿದಾದ ಆಲೋಚನೆಗಳು ನಮ್ಮ ಕಲ್ಪನೆಗೆ ದೊರೆಯುತ್ತಿವೆ. ಆದರೆ ವಾಸ್ತವವಾಗಿ ನಮ್ಮ-ನಿಮ್ಮ ನಡುವೆ ಹಸಿವು, ಬಡತನ, ಪ್ರಕೃತಿ ವಿಕೋಪ, ಧರ್ಮಯುದ್ಧ, ವಲಸೆ, ಮೂಲಭೂತವಾದ, ಭಯೋತ್ಪಾದನೆ, ಸರ್ವಾಧಿಕಾರ, ಕ್ಷೀಣವಾಗುತ್ತಿರುವ ಪ್ರಜಾಪ್ರಭುತ್ವ ಮೌಲ್ಯಗಳು, ಮತಬೇಧ, ವರ್ಣಬೇಧ ಎಂಬ ಆತಂಕಕಾರಿ ಸನ್ನಿವೇಶಗಳ ಮಧ್ಯೆ ಬದುಕ ಬೇಕಾಗಿದೆ. ಹಸಿವನ್ನು ನೀಗಿಸುವ, ಮಾನವೀಯ ಮೌಲ್ಯಗಳನ್ನು, ಸಹಿಷ್ಣುತೆಯನ್ನು ಎತ್ತಿಹಿಡಿಯಬೇಕಾದ ಶಿಕ್ಷಣವನ್ನು ಮಕ್ಕಳಿಗೆ ಮತ್ತು ಯುವ ಪೀಳಿಗೆಗೆ ತುರ್ತಾಗಿ ನೀಡಬೇಕಾಗಿದೆ. ಉತ್ತಮ ಶಿಕ್ಷಣ ನೀತಿ ಒಂದು ಸಮಾಜದ ನೈತಿಕ ಕನ್ನಡಿಯಾಗಿರಬೇಕು. ಗಾಂಧೀಜಿ ಹೇಳಿದಂತೆ ಅದು ದೇಹ, ಮನಸ್ಸು, ಹೃದಯ ಮತ್ತು ಆತ್ಮದ ವಿಕಾಸಕ್ಕೆ ಕಾರಣವಾಗಬೇಕು. ಸ್ವನಿಯಂತ್ರಣ ಮತ್ತು ಆತ್ಮಶೋಧನೆಗಳನ್ನು ಕಲಿಸಬೇಕು. ಸತ್ಯ, ಪ್ರಾಮಾಣಿಕತೆ ಮತ್ತು ಅಹಿಂಸೆಯ ಹಾದಿಯಲ್ಲಿ ವಿಶ್ವಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯನ್ನು ಹರಡಲು ಕಾರಣವಾಗಬೇಕು.


 ***