ಹಣತೆ ಮತ್ತು ಬೆಳಕು  

ಡಾ ಜಿ ಎಸ್ ಶಿವಪ್ರಸಾದ್

ಈ ವಾರದ ಸಂಚಿಕೆಯಲ್ಲಿ ಹಣತೆ ಮತ್ತು ಬೆಳಕು ಎಂಬ ಬರಹವನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಹಣತೆ ಮತ್ತು ಬೆಳಕು ಪ್ರಪಂಚದ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಪ್ರತಿಮೆ, ಉಪಮೆ ಮತ್ತು ರೂಪಕವಾಗಿ ವಿಜೃಂಭಿಸಿದೆ. ಕನ್ನಡ ಸಾಹಿತ್ಯದಲ್ಲಿ ಶತಮಾನಗಳಿಂದಲೂ ಈ ಬೆಳಕು, ಹಣತೆ ಎಂಬ ಪ್ರತಿಮೆಯನ್ನು (ದೀಪ, ದೀವಿಗೆ, ಪ್ರಣತಿ ಜ್ಯೋತಿ ಇತ್ಯಾದಿ ಹೆಸರಿನಲ್ಲೂ) ಬಳಸಲಾಗಿದೆ. ಈ ಒಂದು ಹಿನ್ನೆಲೆಯಲ್ಲಿ ಈ ಬರಹ ಮೂಡಿಬಂದಿದೆ. ಈಗ ತಾನೇ ದೀಪಾವಳಿ ಮುಗಿದಿದೆ, ನೀವು ನಿಮ್ಮ ಹಣತೆಯನ್ನು ಉಜ್ಜಿ ತೊಳೆದು ಎತ್ತಿಡುತ್ತಿರುವ ಸಂದರ್ಭದಲ್ಲಿ ಈ ಬರಹವನ್ನು ನಿಮ್ಮ ಮುಂದಿಡುತ್ತಿದ್ದೇನೆ. ನೀವು ಎಲ್- ಈ- ಡಿ ಲೈಟುಗಳನ್ನು ಬಳಸಿದ್ದರೂ ಚಿಂತೆಯಲ್ಲ. ಈ ಹಣತೆಗಾಗಿ ಸ್ವಲ್ಪ ಸಮಯ ಮಾಡಿಕೊಳ್ಳಿ. ಈ ಹಣತೆಯಲ್ಲಿ ನೀವು ಬೆಳಕನ್ನು ಕಂಡಿದ್ದರೆ ಹಣತೆ ಹಚ್ಚಿದ ನಾನು ತೃಪ್ತ. ನಿಮ್ಮ ಬೆಳಕನ್ನೂ ಹಂಚಿಕೊಳ್ಳಿ. 

-ಸಂ

ಕನ್ನಡ ಸಾಹಿತ್ಯದಲ್ಲಿ ಹಣತೆ, ಬೆಳಕು ಎಂಬ ವಿಷಯವಸ್ತುವನ್ನು, ಕಲ್ಪನೆಯನ್ನು ನೂರಾರು ವರ್ಷಗಳಿಂದ ಕವಿ ಮತ್ತು ಕಥೆಗಾರರು ಬಳಸುತ್ತ ಬಂದಿದ್ದಾರೆ. ಅನಾದಿಕಾಲದಿಂದಲೂ ಬೆಂಕಿ ಮತ್ತು ಅದು ಹೊರ ಹೊಮ್ಮುವ ಬೆಳಕು ನಮ್ಮ ಆಸಕ್ತಿಯನ್ನು ಕೆರಳಿಸಿದೆ. ಅಲ್ಲಿ ಒಂದು ಆಕರ್ಷಣೆಯಿದೆ, ಸೆಳೆತವಿದೆ. ಅದರ ಬಗ್ಗೆ ಭಯ ಗೌರವಗಳಿವೆ. ಇವು ಮನುಷ್ಯವರ್ಗವಲ್ಲದೆ ಇತರ ಜೀವಿಗಳಲ್ಲೂ ಇದೆ. ‘ಬೆಳಕು’ ಎಂಬ ಶಬ್ದ ಹಲವಾರು ಭಾವನೆಗಳನ್ನು ಉಂಟುಮಾಡುತ್ತದೆ. ಕತ್ತಲು ಮತ್ತು ಬೆಳಕಿನ ನಡುವೆ ಒಂದು ವೈರುಧ್ಯವಿದೆ.  'ಬೆಂಕಿಯಲ್ಲಿ ಅರಳಿದ ಹೂ' ಎನ್ನುವ ಅಭಿವ್ಯಕ್ತಿಯಲ್ಲೇ ಅದೆಷ್ಟೋ ಭಾವನೆಗಳನ್ನು, ವೈರುಧ್ಯವನ್ನು ಕಾಣಬಹುದು. ನಮ್ಮ ಪಂಚಭೂತಗಳಾದ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ ಇವುಗಳ ನಮ್ಮ ಕಾವ್ಯ ಕಲ್ಪನೆಗಳಲ್ಲಿ ವಿಜೃಂಭಿಸಿವೆ. ಪ್ರಪಂಚದ ನಾನಾ ಭಾಷೆಗಳ ಸಾಹಿತ್ಯದಲ್ಲಿ ಹಣತೆ ಅಥವಾ ದೀಪವನ್ನು ಒಂದು ಪ್ರತಿಮೆ, ಉಪಮೆ ಮತ್ತು ರೂಪಕವಾಗಿ ಬಳಸಿಕೊಂಡು ಬೆಳಕಿನ ಬೆಲೆಯನ್ನು ಅದರ ಹಿರಿಮೆಯನ್ನು ಕುರಿತು ಕವಿ ಕಥೆಗಾರರು ಬರೆದಿದ್ದಾರೆ. 

ಹಣತೆ ಬೆಳಕಿನ ಸಂಕೇತ ಅಷ್ಟೇ ಅಲ್ಲ ಅದು ಅರಿವಿನ ಪ್ರತಿಮೆಯಾಗಿಯೇ ಹೆಚ್ಚುನಿಲ್ಲುವುದು. ಆ ಬೆಳಕಿನಲ್ಲಿ ಒಂದು ಶಕ್ತಿ ಇದೆ, ಆದುದರಿಂದಲೇ ಅದನ್ನು ನಾವು ದೇವ, ದೇವತೆಗಳಿಗೆ, ಅಳಿದವರಿಗೆ ನೆನಪಿನ ಗೌರವದ ಸೂಚಕವಾಗಿ ಬೆಳಗುತ್ತೇವೆ. ದೀಪವನ್ನು ಹಚ್ಚುವುದರ ಮೂಲಕ ಕಾರ್ಯಕ್ರಮವನ್ನು ಶುರುಮಾಡುತ್ತೇವೆ. ಆ ಜ್ಯೋತಿಯಲ್ಲಿ ಪವಿತ್ರತೆಯನ್ನು ಕಂಡು ಮಂಗಳಾರತಿಯಾಗಿ ಸ್ವೀಕರಿಸುತ್ತೇವೆ. ಚರ್ಚುಗಳಲ್ಲಿ ಮೇಣದ ಬತ್ತಿಯನ್ನು ಹಚ್ಚುತ್ತೇವೆ. ಕಡ್ಡಿ ಗೀಚಿದ ಕೂಡಲೇ ಶೂನ್ಯದಿಂದ ಹಠಾತ್ತನೆ ಮೂಡುವ ಬೆಂಕಿ, ಜ್ಯೋತಿ, ಬೆಳಕು ನಿಗೂಢವಾದದ್ದು ಮತ್ತು ಅತ್ಯಂತ ವಿಸ್ಮಯಕಾರಿ. ಒಂದು ಹಣತೆಯಿಂದ ಇನ್ನೊಂದು ಹಣತೆಗೆ ಹಬ್ಬುತ್ತಾ ಹೆಚ್ಚಾಗುವ ಬೆಳಕಿನ ಗುಣ ಮೆಚ್ಚುವಂತಹುದು. ಈ ಹಣತೆಯಲ್ಲಿ ನಮ್ಮ ನಿಮ್ಮ ಬದುಕಿನಂತೆ ಕೊಂಡಿಗಳಿರುತ್ತವೆ. ಒಂದು ಇನ್ನೊಂದನ್ನು ಅವಲಂಬಿಸಿರುತ್ತದೆ. ಹಣತೆಯಲ್ಲಿ ತೈಲವಿರಬೇಕು, ಆ ತೈಲದಲ್ಲಿ ಬತ್ತಿ ಕುಳಿತಿರಬೇಕು, ತೈಲವಿರುವವರೆಗೂ ಆ ಬತ್ತಿ ಉರಿಯುವುದು. ವಚನ ಸಾಹಿತ್ಯದಲ್ಲಿ ಅಲ್ಲಮ ಪ್ರಭುಗಳು ತಮ್ಮ ವಚನಗಳಲ್ಲಿ ಅನೇಕ ಉತ್ಕೃಷ್ಟ ಉಪಮೆಗಳನ್ನು ಬಳಸಿದ್ದಾರೆ. ಅವರು ಹಣತೆಯನ್ನು ಪ್ರಣತಿ ಎಂದು ಕರೆದಿದ್ದು, ತೈಲ ಎಣ್ಣೆ ಬತ್ತಿಯ ಸಂಬಂಧವನ್ನು ತಮ್ಮ ಒಂದು ವಚನದಲ್ಲಿ ಬಳಸಿದ್ದಾರೆ, ಅದು ಹೀಗಿದೆ;

ಪ್ರಣತೆಯೂ ಇದೆ ಬತ್ತಿಯೂ ಇದೆ;
ಜ್ಯೋತಿಯು ಬೆಳಗುವೆಡೆ,
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ?

ಎಣ್ಣೆ, ಬತ್ತಿ, ಮತ್ತು ಹಣತೆಯ ಬಗ್ಗೆ ಸಿನಿಮಾ ಸಾಹಿತ್ಯದಲ್ಲಿ ಮೂಡಿಬಂದ ಒಂದೆರಡು ಸಾಲು ಸೊಗಸಾಗಿದೆ. 'ಕನ್ನಡ ಕುಲದೇವಿ ಕಾಪಾಡು ತಾಯಿ' ಎಂದು ಶುರುವಾಗುವ ಸ್ಕೂಲ್ ಮಾಸ್ಟರ್ ಗೀತೆಯಲ್ಲಿ ವಿಜಯ ಭಾಸ್ಕರ್ ಬರೆದ ಸಾಲುಗಳು ಹೀಗೆದೆ;

"ಯಾವ ಎಣ್ಣೆಯಾದರೂ ಬೆಳಗುವುದು ಗುರಿಯೆಂಬ
ತತ್ವವನು ನೀನೆತ್ತಿ ತೋರು ಬಾ ತಾಯೆ"
ನಮ್ಮ ಅನಿವಾಸಿ ಬಳಗದ ಲೇಖಕ ಕವಿ ಡಾ ಕೇಶವ್ ಕುಲಕರ್ಣಿಯವರು ದೀಪಾವಳಿಯಂದು ಹಂಚಿಕೊಂಡ ಕವಿತೆಯೊಂದು ಹೀಗಿದೆ;
ಜಗಮಗಿಸುವ 
ಕಣ್ಣುಕುಕ್ಕುವ
ನೂರಾರು ಬಣ್ಣ ಬದಲಿಸುವ
ಈ ಸಾಲು ಸಾಲು
ಎಲ್-ಈ-ಡಿ ಲೈಟುಗಳ ನಡುವೆ
ನನ್ನ ಹಣತೆ ಯಾರಿಗೂ ಕಾಣುವುದಿಲ್ಲ
ಎಂದು ನನಗೆ ಚೆನ್ನಾಗಿ ಗೊತ್ತು

ಆದರೂ

ತವರಿನಿಂದ ತಂದ ಬತ್ತಿಗೆ
ಊರಿಂದ ತಂದ ತುಪ್ಪ ಹಾಕಿ
ಅಜ್ಜಿಯಿಂದ ಬಳುವಳಿಯಾದ ಹಣತೆಗೆ
ಮಗನಿಂದ ದೀಪ ಹಚ್ಚಿಸಿ
ದೀಪಾವಳಿ ಆಚರಿಸುತ್ತೇನೆ

ಇಲ್ಲಿ ಆಧುನಿಕ ಎಲ್-ಈ-ಡಿ ದೀಪಗಳನ್ನು ಮತ್ತು ಹಳೆಯ ಹಣತೆಯನ್ನು ಜೊತೆಗಿಟ್ಟು ಹಳತು ಮತ್ತು ಹೊಸತರ ನಡುವಿನ ಸಂಬಂಧವನ್ನು ಕವಿ ಕೇಶವ್ ಅನ್ವೇಷಿಸಿದ್ದಾರೆ. ಎಲ್ -ಈ -ಡಿ ಲೈಟುಗಳಿಗೆ ಬಣ್ಣ ಬದಲಿಸುವ ಗುಣವಿದೆ, ಅಲ್ಲಿ ತೋರ್ಪಡಿಕೆ ಇದೆ. ಅಲ್ಲಿ ಬಹಿರಂಗ ಪ್ರದರ್ಶನಕ್ಕೆ ಹೆಚ್ಚು ಅವಕಾಶವಿದೆ. ಇವುಗಳನ್ನು ಹತ್ತಿರ ಹೋಗಿ ಸ್ಪರ್ಶಸಿದಾಗ ಮಾತ್ರ ಇವು ತಣ್ಣಗೆ ಉರಿಯುವ ಲೈಟುಗಳೇ ಹೊರತು ಇಲ್ಲಿ ಬೆಚ್ಚನೆಯ ಅನುಭವವಿಲ್ಲ ಎಂಬುದು ತಿಳಿಯುತ್ತದೆ.  ಎಣ್ಣೆ ಬತ್ತಿ ಇರುವ ಹಳೆ ಹಣತೆಗೆ ಘನತೆ, ಬಾಂಧವ್ಯ, ಪರಂಪರೆ, ಒಂದಿಷ್ಟು ಇತಿಹಾಸ, ಅನುಭವ, ಮತ್ತು ಬಣ್ಣ ಬದಲಿಸಿದಂತೆ ಒಂದೇ ರೀತಿಯ ಬೆಳಕನ್ನು ನೀಡುವ ಸಾಮರ್ಥ್ಯವಿದೆ. ಎಣ್ಣೆ ಇರುವವರೆಗೂ ಶ್ರದ್ಧೆಯಿಂದ ಉರಿಯುವ ಮತ್ತು ಸುಡುವ ಶಕ್ತಿ ಇದೆ. ಅದರ ಹಿಂದೆ ಅನೇಕ ಕಥೆ, ಕವನಗಳಿವೆ. ಈ ಬಣ್ಣ ಬದಲಿಸುವ, ಬೂಟಾಟಿಕೆ ಪ್ರಪಂಚದಲ್ಲಿ ಅಬ್ಬರಗಳ ನಡುವೆ ಹಣತೆ ಕಾಣದಾಗಿದೆ ಎಂಬುದು ವಿಷಾದದ ಸಂಗತಿ. ಈ ಕವನ ನಮ್ಮ ವಾಸ್ತವ ಬದುಕಿಗೆ ಕನ್ನಡಿ ಹಿಡಿದಿದೆ.
ಬಿ ಎಂ ಶ್ರೀ ಅವರು 'ಕರುಣಾಳು ಬಾ ಬೆಳಕೇ' ಎಂಬ ಅನುವಾದಿತ ಕವಿತೆಯಲ್ಲಿ ಮುಸಿಕಿದ ಮಬ್ಬಿನಲ್ಲಿ ಕೈ ಹಿಡಿದು ನಡೆಸುವಂತೆ ಬೆಳಕನ್ನು ಬೇಡಿಕೊಳ್ಳುವ ಪ್ರಾರ್ಥನೆಯಿದೆ. ಈ ಮೂಲ ಕವಿತೆಯನ್ನು ಹತ್ತೊಂಬತ್ತನೇ ಶತಮಾನದ ಆದಿಯಲ್ಲಿ ಇಂಗ್ಲಿಷ್ ಪಾದ್ರಿ ಮತ್ತು ಕವಿ ಜಾನ್ ಹೆನ್ರಿ ನ್ಯೂಮನ್ Lead, Kindly Light ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾನೆ. ಈ ಕವಿತೆಯನ್ನು ಬರೆದ ಹಿನ್ನೆಲೆ ಎಂದರೆ 1833 ಯಲ್ಲಿ ನ್ಯೂ ಮ್ಯಾನ್ ಇಟಲಿಯ ಪಲೆರ್ಮೊ ಎಂಬ ನಗರದಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದು ಆತ ಇಂಗ್ಲೆಂಡಿಗೆ ತುರ್ತಾಗಿ ಮರಳಬೇಕಾಗಿರುತ್ತದೆ. ಅವನು ಹಿಂದಿರುಗುವಾಗ ಸಮುದ್ರಮಾರ್ಗದಲ್ಲಿ ಮಬ್ಬು ಕವಿದು ಗಾಳಿ ಸ್ಥಬ್ದವಾಗಿ ಹಡಗು ಚಲಿಸಲಾರದೆ ನಿಂತುಕೊಂಡು ಬಿಡುತ್ತದೆ. ಆ ಒಂದು ಅನಿಶ್ಚಿತ ಸನ್ನಿವೇಶದಲ್ಲಿ ನ್ಯೂಮನ್ ಈ ಕವಿತೆಯನ್ನು ರಚಿಸಿದ್ದಾನೆ. ಅದರ ಅನುವಾದ ಹೀಗಿದೆ; 
ಕರುಣಾಳು ಬಾ ಬೆಳಕೆ ಮುಸುಕಿದಿ ಮಬ್ಬಿನಲಿ 
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯಾ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು

ಹೇಳಿ ನನ್ನಡಿ ಇಡಿಸು ಬಲು ದೂರ ನೋಟವನು
ಕೇಳಿದೊಡನೆಯೆ ಸಾಕು ನನಗೊಂದು ಹೆಜ್ಜೆ
ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸೆನ್ನನು

ಇಷ್ಟು ದಿನ ಸಲಹಿರುವೆ ಈ ಮೂರ್ಖನನು ನೀನು
ಮುಂದೆಯೂ ಕೈ ಹಿಡಿದು ನಡೆಸದಿಹೆಯಾ?
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು
ಇರುಳನ್ನು ನೂಕದಿಹೆಯ?
ಬೆಳಗಾಗ ಹೊಳೆಯದೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡ ದಿವ್ಯ ಮುಖ ನಗುತ
ಈ ಕವಿತೆಯನ್ನು ಮುಂದಕ್ಕೆ ವಿಸ್ತರಿಸಿನೋಡುವುದಾದರೆ, ಈ ಕವಿತೆಯಲ್ಲಿ ನ್ಯೂಮನ್ ತನ್ನ ನಂಬಿಕೆಗಳನ್ನು ಮತ್ತೆ ಅವಲೋಕಿಸುತ್ತಾನೆ. ಕರುಣಾಳು ಬೆಳಕು ಇಲ್ಲಿ ಅದ್ವಿತೀಯವಾದ, ಅಗೋಚರವಾದ  ಶಕ್ತಿ ಅಥವಾ ದೈವತ್ವದ  ಕಲ್ಪನೆ.

ಇದು ಒಂದು ಅಂತರಂಗದ ಅನ್ವೇಷಣೆಯೂ ಆಗಿದೆ. ನನ್ನಲ್ಲಿ ದೂರದೃಷ್ಟಿಯನ್ನಿಡಿಸು ಆದರೆ ನನಗೆ ಈಗ ಬೇಕಾಗಿರುವುದು ಸಣ್ಣ ಹೆಜ್ಜೆ, ನನಗೆ ಅದೇ ಸಾಕು ಎನ್ನುವ ಸಾಲುಗಳು ನಮ್ಮ ಮನುಷ್ಯ ಪ್ರಯತ್ನದ ಇತಿಮಿತಿಗಳನ್ನು ಇಲ್ಲಿ ನೆನಪಿಸುತ್ತದೆ. ದೂರದ ತಾರೆಗಳನ್ನು ಹಿಡಿಯುವುದಕ್ಕೆ ಮುನ್ನ ಕೈಯಲ್ಲಿರುವ ಹಣತೆಗೆ ಬತ್ತಿ, ಎಣ್ಣೆಯನ್ನು ಹುಡುಕುವುದು ಸರಿಯಾದ ವಿಚಾರವೆಂದು ಇನ್ನೊಬ್ಬ ಕವಿ ಹೇಳುತ್ತಾರೆ. ಹಿಂದೆ ನಾನು ನಿನ್ನನ್ನು ಬೇಡದೆ ಹೋದೆ, ಇದುವರೆವಿಗೂ ನನ್ನ ದಾರಿಯನ್ನು ನಾನೇ ಕಂಡುಕೊಳ್ಳಲು ಪ್ರಯತ್ನಿಸಿದೆ ಎನ್ನುವ ಸಾಲುಗಳು ಸ್ವಪ್ರಯತ್ನದ ಅನಿವಾರ್ಯತೆ ಮತ್ತು ಅವಶ್ಯಕತೆಯನ್ನು ಎತ್ತಿಹಿಡಿಯುತ್ತದೆ. ಎಲ್ಲ ಸಮಸ್ಯೆಗಳಿಗೆ ನಂಬಿಕೆ ಅಷ್ಟೇ ಸಾಲದು, ನಮ್ಮ ಬದುಕನ್ನು ನಾವೇ ನಡೆಸಬೇಕು ಎಂಬುದು ನಿಜ. ನಮ್ಮಲ್ಲಿರುವ ಗರ್ವ ಅಹಂಕಾರ ಮೂರ್ಖತನ ನಮ್ಮ ಆತ್ಮವಿಶ್ವಾಸಗಳನ್ನು ಹಿಡಿದಿಟ್ಟಿರುತ್ತವೆ ಆದರೆ ಯಾವುದೋ ಒಂದು ಆತಂಕದ ಘಳಿಗೆಯಲ್ಲಿ ಅದು ಸಾಲದೇ ಹೋಗಬಹುದು. ಇಂತಹ ಒಂದು ಸನ್ನಿವೇಶದಲ್ಲಿ ಆ ಕರುಣಾಳು ಆ ಬೆಳಕು ನಮ್ಮನ್ನು ಕಷ್ಟಗಳೆಂಬ ಅಡವಿ, ಬೆಟ್ಟ ಮತ್ತು ಹೊಳೆಗಳನ್ನು ದಾಟಿಸಿ ಕೈ ಹಿಡಿದು ನಡೆಸಬೇಕಾಗುತ್ತದೆ. ಇರುಳು ಕಳೆದು ಆ ದೈವತ್ವದ ಚಹರೆಗಳು ಕೊನೆಗೂ ಕಾಣಿಸಿಕೊಂಡವು ಎಂಬ ಹಾರೈಕೆಯಲ್ಲಿ ಈ ಕವನ ಮುಕ್ತಾಯಗೊಳ್ಳುತ್ತದೆ. ಈ ಕವಿತೆ ಆಂಗ್ಲ ಭಾಷೆಯ ಸ್ತುತಿ ಗೀತೆಯಾಗಿ ಜನಪ್ರೀಯವಾಗಿದೆ. ಈ ಕವಿತೆಯನ್ನು ಇಂಗ್ಲೆಂಡಿನಲ್ಲಿ ಕಲ್ಲಿದ್ದಲು ಗಣಿ ಕುಸಿದಾಗ ಒಳಗೆ ಸಿಕ್ಕಿ ಹಾಕಿಕೊಂಡಿದ್ದ ಗಣಿ ಕೆಲಸಗಾರರು ಈ ಗೀತೆಯನ್ನು ಹಾಡಿದ್ದರು. ಟೈಟಾನಿಕ್ ಎಂಬ ಹಡಗು ಅಟ್ಲಾಂಟಿಕ್ ಸಮುದ್ರದ ನಡುವೆ ಮುಳುಗಡೆಯಾಗುವ ಸಮಯದಲ್ಲಿ ಇನ್ನೊಂದು ದೊಡ್ಡ ರೆಸ್ಕ್ಯೂ ಹಡಗಿನ ನಿರೀಕ್ಷೆಯಲ್ಲಿ ಚಿಕ್ಕ ರೆಸ್ಕ್ಯೂ ದೋಣಿಯಲ್ಲಿ ನಡುರಾತ್ರಿ ಕಳೆದ ಪಯಣಿಗರು ಈ ಸ್ತುತಿ ಗೀತೆಯನ್ನು ಹಾಡುತ್ತ ಇರುಳನ್ನು ನೂಕಿದರು. ನಮ್ಮ ಭಾರತದ ಹಲವಾರು ಶಾಲಾ ಕಾಲೇಜುಗಳಲ್ಲಿ ಈ ಸ್ತುತಿಗೀತೆಯನ್ನು ದೈನಂದಿಕ ಪ್ರಾರ್ಥನೆಯಾಗಿ ಅಳವಡಿಸಿಕೊಳ್ಳಲಾಗಿದೆ. ಇದು ಕನ್ನಡ ಭಾವಗೀತೆಯಾಗಿಯೂ ಜನಪ್ರೀಯವಾಗಿದೆ.

ಬೆಳಕು ಆರಿದಾಗ ಆವರಿಸುವ ಅಂಧಕಾರ ತಲ್ಲಣವನ್ನು ಉಂಟುಮಾಡುವಂತಹುದು. ಬೆಳಕು ಆರುವುದನ್ನು ಸಾವಿನೊಂದಿಗೆ ರೂಪಕವಾಗಿ ಸಾಹಿತ್ಯದಲ್ಲಿ ಮತ್ತು ಚಿತ್ರರಂಗದಲ್ಲಿ ಬಳಸಲಾಗುತ್ತಿದೆ. ಅದು ಮತ್ತೆ ಆವರಿಸುವ ಅಜ್ಞಾನದ ಸಂಕೇತವೂ ಆಗಿರಬಹುದು. ಖ್ಯಾತ ಕವಿ ಕೆ ಎಸ್ ನರಸಿಂಹಸ್ವಾಮಿ ಅವರ ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು ಎಂಬ ಪ್ರಖ್ಯಾತ ಕವಿತೆಯ ಈ ಹಿನ್ನೆಲೆಯಲ್ಲಿ ಈ ಕೆಳಗಿನ ಸಾಲುಗಳನ್ನು ಇಲ್ಲಿ ಗಮನಿಸುವುದು ಸೂಕ್ತ:

ದೀಪವು ನಿನ್ನದೇ ಗಾಳಿಯು ನಿನ್ನದೆ ಆರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ ಮುಳುಗದಿರಲಿ ಬದುಕು

ಕೆ ಎಸ್ ಎನ್ ಅವರ ಕವಿತೆಗಳ ತುಂಬಾ ಜೀವನೋತ್ಸಾಹ, ಜೀವನ ಪ್ರೀತಿ ತುಂಬಿ ತುಳುಕುತ್ತಿರುವುದನ್ನು ಕಾಣಬಹುದು. ಆ ಹಿನ್ನೆಲೆಯಲ್ಲೂ ಈ ಸಾಲುಗಳನ್ನು ನಾವು ಅರ್ಥೈಸಿಕೊಳ್ಳ ಬಹುದು. ಈ ಕವಿತೆ ಹಲವಾರು ಆಶಯಗಳಿಂದ ತುಂಬಿದೆ.

ಪುರುಷ ಪ್ರಧಾನವಾದ ಸಮಾಜದಲ್ಲಿ, ಶೋಷಣೆಗೆ ಒಳಗಾಗಿ, ಎಲ್ಲರಿಂದ ತಿರಸ್ಕೃತಳಾಗಿ ಪ್ರೀತಿಯನ್ನು ಕಳೆದುಕೊಂಡು ತನ್ನಲ್ಲಿನ ಆತ್ಮವಿಶ್ವಾಸವೆಂಬ ಎದೆಯ ಹಣತೆ ಸಂಪೂರ್ಣವಾಗಿ ಬತ್ತಿಹೋಗಿ ಬದುಕಿನಲ್ಲಿ ಕವಿಯುವ ಅಂಧಕಾರವನ್ನು ನಿಭಾಯಿಸಲಾಗದ ದಾರುಣ ಕಥೆಯಲ್ಲಿ ಲೇಖಕಿ ಬಾನು ಮುಷ್ತಾಕ್ ಹಣತೆ, ಎದೆಯ ಹಣತೆ ಎಂಬ ರೂಪಕವನ್ನು ಬಳಸಿದ್ದಾರೆ. ಅದು ಕಥೆಯ ಶೀರ್ಷಿಕೆಯೂ ಆಗಿದೆ. ಬದಲಾಗುವ ಸನ್ನಿವೇಶದಲ್ಲಿ ಛಲವನ್ನು ಮತ್ತೆ ರೂಢಿಸಿಕೊಂಡು ಎದ್ದುನಿಲ್ಲುವ ನಾಯಕಿಯೊಳಗಿನ ಎದೆಯ ಹಣತೆ ಮತ್ತೆ ಹತ್ತಿ ಉರಿಯಿತೇ ಎನ್ನುವುದನ್ನು ಓದುಗರಿಗೆ ಬಾನು ಬಿಟ್ಟಿರುತ್ತಾರೆ. ಇದೇ ಕೃತಿಯನ್ನು ದೀಪಾ ಬಾಷ್ಟಿ ಅವರು ಇಂಗ್ಲಿಷಿಗೆ ಅನುವಾದಿಸಿ 'ಹಾರ್ಟ್ ಲ್ಯಾಂಪ್' ಎಂಬ ಕೃತಿಗೆ ಬುಕ್ಕರ್ ಪ್ರಶಸ್ತಿ ದೊರಕಿದೆ.

ಕನ್ನಡ ಕವಿ ಸೇಡಿಯಾಪು ಕೃಷ್ಣಭಟ್ಟರು ಒಂದು ಹೊರಗಿನ ಸಾಂಸ್ಕೃತಿಕ ಧಾಳಿಯ ಬಗ್ಗೆ ತಮ್ಮವರನ್ನು ಎಚ್ಚರಿಸಲು ದೀಪವನ್ನು ರೂಪಕವಾಗಿಟ್ಟುಕೊಂಡು ಎಣ್ಣೆ ಹುಯ್ಯುವ ದೀಪಕ್ಕೆ ಎನ್ನುತ್ತಾರೆ. ಭಾರತ ಸ್ವಾತಂತ್ರ್ಯ ಸಂಗ್ರಾಮದ ಸನ್ನಿವೇಶದಲ್ಲಿ ಹಲವಾರು ಕಡೆ ಪಂಜಿನ ಮೆರವಣಿಗೆ ನಡೆದಿರುವುದನ್ನು ನೆನೆಯಬಹುದು. ಅದು ಒಗ್ಗಟಿನ ಸಂಕೇತವಾಗಿಯೂ ನಿಲ್ಲುತ್ತದೆ. ಕೃಷ್ಣ ಭಟ್ಟರ ಕವನದಲ್ಲಿ 'ಎಣ್ಣೆ ಹೊಯ್ಯುವ ದೀಪಕ್ಕೆ' ಎನ್ನುವುದು ಜಾಗೃತಿಯನ್ನು ಮೂಡಿಸುವ ಕರೆಯಾಗಿ ಕೇಳಿ ಬರುತ್ತದೆ. ಹೊರಗಿನ ಸಾಂಸ್ಕೃತಿಕ ಆಕ್ರಮಣವು ಬಿರುಗಾಳಿಯಾಗಿ ಗಿಡ ಮರ ಕೊಂಬೆಗಳನ್ನು ಬಡಿದಾಡಿಸುತ್ತಾ ಬಂದು ಆ ಬಿರುಗಾಳಿಯಲ್ಲಿ ಕಾರ್ಮೋಡಗಳು ಗಿರಿಯ ಅಂಚಿಗೆ ಮೆಟ್ಟಿ ಮಿಂಚಿನಂತೆ ಗಹಗಹಿಸುತ್ತದೆ. ನಮ್ಮಲ್ಲೇ ಇರುವ ಪ್ರೌಢ ಸಾಹಿತ್ಯವನ್ನು (ಹಿರಿಯರ ಸಂಧ್ಯಾವಂದನೆಯ ಸಾಹಿತ್ಯವನ್ನು) ಮುಂದಿನ ಪೀಳಿಗೆ ಕಡೆಗಣಿಸಿ ಮುಗ್ಗುರಿಸುತ್ತಿದೆ ಎನ್ನುವ ಬಗ್ಗೆ ಕವಿಗೆ ವಿಷಾದವಿದೆ. ಈ ಎಲ್ಲಾ ತಲ್ಲಣಗಳ ಹಿನ್ನೆಲೆಯಲ್ಲಿ ನಂದುತ್ತಿರುವ ದೀಪಕ್ಕೆ ಎಣ್ಣೆ ಹುಯ್ಯುವ ಎಂಬ ಆಶಯ ಮನೋಜ್ಞವಾಗಿ ಮೂಡಿಬಂದಿದೆ, ಆ ಕವಿತೆಯ ಸಾಲುಗಳು ಹೀಗಿವೆ;
ಹೊರಗಲ್ಲಿ ಗಿಡಮರಗಳ ಕೊಂಬೆರಂಬೆಗಳ್ 
ಬಡಿದಾಡಿಕೊಂಡು ಭೋರಿಡುತಲಿವೆ
ಪಡುಬಾನ ಕಾರ್ಮುಗಿಲು ಅರಿಲೊಂದೊಂದನೇ ಮೆಟ್ಟಿ
ಕಾಡುಮಿಂಚಿನಲಿ ಗಹ ಗಹಗಹಿಸುತಿದೆ
ಎಣ್ಣೆ ಹುಯ್ಯುವ ದೀಪಕ್ಕೆ!

ಹಸಿದ ಮಕ್ಕಳು ಬಟ್ಟಲೆನ್ನದು
ತನ್ನದೆಂದೆಳದಾಡಿಕೊಂಡು ಗುದ್ದಾಡುತ್ತಿವೆ
ಹಿರಿಯರ ಸಂಧ್ಯಾವಂದನೆಯ ಸಾಹಿತ್ಯವ
ಕಡಗಾಲೊಳೆಡವಿ ಚೆಲ್ಲಾಡುತ್ತಿವೆ
ಎಣ್ಣೆ ಹುಯ್ಯುವ ದೀಪಕ್ಕೆ!
ಜಿ ಎಸ್ ಎಸ್ ಅವರ ‘ನನ್ನ ಹಣತೆ’ ಕನ್ನಡ ಕಾವ್ಯಲೋಕದಲ್ಲಿನ ಗಮನಾರ್ಹವಾದ ಕವಿತೆ. ಅದನ್ನು ಪ್ರಾಜ್ಞರು ಅನೇಕ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಜಿ ಎಸ್ ಎಸ್ ಅವರ ಬಹುಪಾಲು ಕವಿತೆಗಳು ಸರಳವಾಗಿದ್ದು ಸಂಗೀತಕ್ಕೂ ಒದಗಿಕೊಂಡು ಜನಪ್ರೀಯ ಭಾವಗೀತೆಗಳಾಗಿವೆ. ಆದರೆ ‘ನನ್ನ ಹಣತೆ’ ಎಂಬುದು ಪ್ರಸಿದ್ಧ ಕವಿತೆಯಾಗಿಯೇ ಉಳಿದು ಸಾಹಿತ್ಯಾಸಕ್ತರ ಮೆಚ್ಚುಗೆಯನ್ನು ಪಡೆದುಕೊಂಡು ದೀಪಾವಳಿಯ ಆಸುಪಾಸಿನಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಂಕೀರ್ಣವಾಗಿರುವ ಕವಿತೆಯ ಹಲವಾರು ಸಾಲುಗಳಲ್ಲಿ ದೀಪಾವಳಿಯ, ಪಟಾಕಿಯ ಉಲ್ಲೇಖವಿದ್ದರೂ ಅದು ದೀಪಾವಳಿಯನ್ನು ಕುರಿತಾದ ಕವನವಲ್ಲ! ದೀಪಾವಳಿ ಹಬ್ಬವನ್ನು ಮತ್ತು ಅಲ್ಲಿಯ ಸಂಭ್ರಮಗಳನ್ನು ಕುರಿತಾದ ಬೇರೆ ಕವಿತೆಗಳನ್ನು ಜಿ ಎಸ್ ಎಸ್ ರಚಿಸಿದ್ದಾರೆ.  ಆದುದರಿಂದ ಈ ಕವನವನ್ನು ಮೊದಲು ಗಮನಿಸಿ ನಂತರ ಅದರ ಬಗ್ಗೆ ಚರ್ಚೆ ಮಾಡೋಣ. 
ನನ್ನ ಹಣತೆ 

ಹಣತೆ ಹಚ್ಚುತ್ತೇನೆ ನಾನೂ
ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ

ಹಣತೆ ಹಚ್ಚುತ್ತೇನೆ ನಾನೂ;
ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ
ಆಸೆಯಿಂದಲ್ಲ.
ಕತ್ತಲಿನಿಂದ ಕತ್ತಲಿಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ
ಶತಮಾನದಿಂದಲೂ.
ನಡು ನಡುವೆ ಒಂದಿಷ್ಟು ಬೆಳಕು ಬೇಕೆಂದು
ಆಗಾಗ ಕಡ್ಡಿ ಗೀಚಿದ್ದೇವೆ,
ದೀಪ ಮುಡಿಸಿದ್ದೇವೆ,
ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ
ಮತಾಪು-ಪಟಾಕಿ-ಸುರುಸುರುಬತ್ತಿ-ಹೂಬಾಣ
ಸುಟ್ಟಿದ್ದೇವೆ.
"ತಮಸೋ ಮಾ ಜ್ಯೋತಿರ್ಗಮಯ" ಎನ್ನುತ್ತಾ ಬರೀ
ಬೂದಿಯನ್ನೇ ಕೊನೆಗೆ ಕಂಡಿದ್ದೇವೆ.

ನನಗೂ ಗೊತ್ತು ಈ ಕತ್ತಲೆಗೆ
ಕೊನೆಯಿರದ ಬಾಯಾರಿಕೆ
ಎಷ್ಟೊಂದು ಬೆಳಕನ್ನು ಇದು ಉಟ್ಟರೂ ತೊಟ್ಟರೂ
ತಿಂದರೂ, ಕುಡಿದರೂ, ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನುವ ಬಯಕೆ.

ಆದರೂ ಹಣತೆ ಹಚ್ಚುತ್ತೇನೆ ನಾನೂ;
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ ಮತ್ತೆ
ನಾನು ಯಾರೋ.
ಈ ಕವಿತೆಯಲ್ಲಿ ಎರಡು ಮೂರು ವಿಚಾರಗಳು ಅಡಗಿವೆ. ಇಲ್ಲಿ ಕತ್ತಲೆ, ಅಜ್ಞಾನದ ಸಂಕೇತ. ಹಣತೆ ಮತ್ತು ಬೆಳಕು, ಜ್ಞಾನದ ಸಂಕೇತ. ಇಲ್ಲಿ ವಾಸ್ತವ ಪ್ರಜ್ಞೆ, ಜೀವನ ಪ್ರೀತಿ ಮತ್ತು ವ್ಯವಹಾರಿಕವಾದ ಚಿಂತನೆಗಳಿವೆ. ಒಟ್ಟಾರೆ ಮನುಷ್ಯ ಅನಾದಿಕಾಲದಿಂದಲೂ ಅಜ್ಞಾನದ ಜೊತೆ ಹೋರಾಡಿಕೊಂಡು, ಹಣತೆಯನ್ನು ಹಚ್ಚುತ್ತಾ ಬಂದಿದ್ದಾನೆ. ಈ ಹೋರಾಟವನ್ನು ಜಯಿಸಲು ಸಾಧ್ಯವೇ ಎನ್ನುವುದು ಮುಖ್ಯವಾದ ವಿಚಾರ. ಕವಿ ತಾನೂ ಹಣತೆ ಹಚ್ಚುವ, ಅಜ್ಞಾನವನ್ನು ತೊಲಗಿಸುವ ಪ್ರಯತ್ನವನ್ನು ಮಾಡುತ್ತಾರೆ. "ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ" ಎನ್ನುವ ಮೂಲಕ ಮನುಷ್ಯ ಪ್ರಯತ್ನಕ್ಕೆ ಮಿತಿ ಇದೆ ಅನ್ನುವುದನ್ನು ಕವಿ ಇಲ್ಲಿ ಒಪ್ಪಿಕೊಳ್ಳುತ್ತಾರೆ. ಹಿಂದೆ ಈ ಪ್ರಯತ್ನವನ್ನು ದೊಡ್ಡ ಪ್ರಮಾಣದಲ್ಲಿ ಮಾಡಿದ್ದು (ದೀಪಾವಳಿಯ ಹಡಗುಗಳು ಮುಳುಗಿದ್ದು) ಅದೂ ಕೂಡ ವಿಫಲವಾಗಿದೆ ಎನ್ನುವುದನ್ನು ನೆನಪಿಸುತ್ತಾರೆ.  ಮುಂದಿನ ಪಂಕ್ತಿಯಲ್ಲಿ ಕವಿ, ಮನುಷ್ಯ ಈ ಅಜ್ಞಾನವನ್ನು ತೊಲಗಿಸಲು ಇಲ್ಲಿಯವರೆಗೆ ಏನೆಲ್ಲ ಪ್ರಯತ್ನಗಳನ್ನು ಕೈಗೊಂಡಿದ್ದಾನೆ ಎಂಬ ಪ್ರಶ್ನೆಯನ್ನು ಓದುಗರ ಮುಂದೆ ನಿಲ್ಲಿಸಿ, ನಾವು ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನ ಇವುಗಳನ್ನೆಲ್ಲಾ ಕೆದಕಿದ್ದೇವೆ, ಉತ್ತರವಂತೂ ಸಿಕ್ಕಿಲ್ಲ ಬದಲಾಗಿ 'ಬರೀ ಬೂದಿಯನ್ನೇ ಕಂಡಿದ್ದೇವೆ' ಎನ್ನುತ್ತಾರೆ. ಇಲ್ಲಿ ಕವಿ ಬದುಕಿನ ಒಳಾರ್ಥ, ಜೀವನದ ಮಹದೋದ್ದೇಶ ಇವುಗಳನ್ನು ಕುರಿತು ಚಿಂತಿಸುತ್ತಿರಬಹುದು. 'ಕತ್ತಲಿಗೆ ಕೊನೆಯಿಲ್ಲದ ಬಾಯಾರಿಕೆ' ಎಂದು ಹೇಳುವುದರ ಮೂಲಕ ನಮ್ಮ ಕಲ್ಪನೆಗೂ ಮೀರಿದ ಕತ್ತಲೊಂದಿದೆ ಅದು ಸರ್ವವ್ಯಾಪಿ 'ತಿಂದರೂ ಕುಡಿದರೂ, ಉಟ್ಟರೂ, ತೊಟ್ಟರು ಇದಕ್ಕೆ ಇನ್ನೂ ಬೇಕು, ಇನ್ನು ಬೇಕು ಎನ್ನುವ ಬಯಕೆ' ಎಂದು ಕವಿ ಹೇಳುತ್ತಿದ್ದಾರೆ. ಇಲ್ಲಿ, ವೈಜ್ಞಾನಿಕ ಪರಿಭಾಷೆಯಲ್ಲಿ ನೋಡುವುದಾದರೆ ಕಾಸ್ಮಿಕ್ ಬ್ಲಾಕ್ ಹೋಲ್ ಇಮೇಜ್ ನಮ್ಮ ಮುಂದೆ ಬಂದು ನಿಲ್ಲುತ್ತದೆ.  ಹೀಗಿದ್ದರೂ ಕವಿ ಹಣತೆ ಏಕೆ ಹಚ್ಚಬೇಕು? ಕವಿ ಹೇಳುತ್ತಾರೆ; "ಆದರೂ ಹಣತೆ ಹಚ್ಚುತ್ತೇನೆ ನಾನು; ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ"ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ" ಕವಿ ಇಲ್ಲಿ ವಾಸ್ತವ ಪ್ರಜ್ಞೆಯ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ನಮ್ಮ ಬದುಕಿನಲಿ ಇರುವಷ್ಟು ಹೊತ್ತು ನಾನು-ನೀನು (ನಾವು-ನೀವು) ಮುಖ ಕೆಡಸಿಕೊಳ್ಳದೆ, ಒಬ್ಬರು ಇನ್ನೊಬ್ಬರನ್ನು ಮುಖ ಮುಖಿಯಾಗಿ ನೋಡುವಷ್ಟು ಪ್ರೀತಿ ವಿಶ್ವಾಸಗಳನ್ನು, ಸ್ನೇಹ ಸಂಬಂಧಗಳನ್ನು ಉಳಿಸಿಕೊಳ್ಳೋಣ. ಏಕೆಂದರೆ ಅಳಿದ ಮೇಲೆ (ಹಣತೆ ಆರಿದ ಮೇಲೆ) ನೀನು ಯಾರೂ ಮತ್ತು ನಾನು ಯಾರೋ! ಮುಂದಕ್ಕೆ ಇನ್ನು ಯಾರೋ ಬಂದು ಅವರೂ ಹಣತೆ ಹಚ್ಚುತ್ತಾರೆ. ಹೀಗೆ ಮನುಷ್ಯ ಪ್ರಯತ್ನ ನಿರಂತರವಾಗಿ ಸಾಗುತ್ತದೆ.  

ಇದು 'ನನ್ನ ಹಣತೆಯ'ಯನ್ನು ಕುರಿತಾದ ನನ್ನ ಒಂದು ವಿಶ್ಲೇಷಣೆ. ಜಿ ಎಸ್ ಎಸ್ ಅವರ ಕವಿತೆಯ ವಿಶೇಷವೆಂದರೆ ಅದು ಹಲವಾರು ದೃಷ್ಟಿ ಕೋನಗಳನ್ನು ತೆರೆದಿಡುತ್ತದೆ. ಆದುದರಿಂದ ಓದುಗರು ತಮ್ಮ ಕಲ್ಪನೆಗೆ ಒದಗುವ ವಿಶ್ಲೇಷಣೆಯನ್ನೂ ಕಟ್ಟಿಕೊಳ್ಳಬಹುದು.

ಕೊನೆಯದಾಗಿ 'ದೀಪಾವಳಿಯ ಹಣತೆ' ಎಂಬ ನನ್ನ ಕವನದೊಂದಿಗೆ ಈ ಬರಹವನ್ನು ಮುಕ್ತಾಯಗೊಳಿಸುತ್ತಿದ್ದೇನೆ. ಅದೆಷ್ಟೋ ವೈಜ್ಞಾನಿಕ ಸತ್ಯಗಳು ಸಾಧು ಸಂತರು ಮಹಾಪುರುಷರು ಬಿಟ್ಟುಹೋದ ಬೆಳಕಿನ ರೂಪಕವಾಗಿ ನಿಂತಿರುವುದು ಅಚ್ಚರಿಯನ್ನು ಮೂಡಿಸುತ್ತದೆ. ಅದೆಷ್ಟೋ ವಿಚಾರಗಳು ಮೇಲ್ನೋಟಕ್ಕೆ ಭ್ರಮೆಯಾದರೂ ಅದು ನಿಖರವಾದ ಸತ್ಯ. ಎಲ್ಲರೊಳಗೊಂದು ದೀಪ ಉರಿಯುತ್ತಲೇ ಇರುತ್ತದೆ. ಆದರೆ ಆ ಅಂತರಂಗದ ಬೆಳಕನ್ನು ಕಾಣಲು ವಿಶೇಷ ಒಳನೋಟಗಳು ಬೇಕು. ಆ ಬೆಳಕನ್ನು ಇತರರೊಡನೆ ಹಂಚಿಕೊಳ್ಳಬೇಕು ಎನ್ನುವುದು ಈ ಕವಿತೆಯ ಮತ್ತು ಈ ಬರಹದ ಒಟ್ಟಾರೆ ಆಶಯ.
ದೀಪಾವಳಿಯ ಹಣತೆ  

ಕಾರ್ತಿಕದ ಕಗ್ಗತ್ತಲಲ್ಲಿ
ಮುಗಿಲ ತುಂಬೆಲ್ಲಾ
ಮಿಣಕುವ ಬೆಳ್ಳಿ ನಕ್ಷತ್ರಗಳು
ಅಲ್ಲೊಂದು ಕಣ್ತಣಿಸುವ
ನೀರವ ದೀಪಾವಳಿ

ವಿಜ್ಞಾನಿಗಳು ಹೇಳುತ್ತಾರೆ;
“ಆ ನಕ್ಷತ್ರಗಳು ಉರಿದು ಬೂದಿಯಾಗಿವೆ
ನೀವೀಗ ಕಾಣುತ್ತಿರುವುದು
ಅದು ಹೊಮ್ಮಿಸಿದ ಬೆಳಕನ್ನಷ್ಟೆ"
ದೀಪ ಉರಿದಿದ್ದು ಅಂದು
ಬೆಳಕು ಕಾಣುತ್ತಿರುವುದು ಇಂದು!
ಇದು ಭ್ರಮೆಯಲ್ಲ, ನಿಖರ ಸತ್ಯ

ಕವಿಗಳು, ವಿಜ್ಞಾನಿಗಳು, ಸಂತರು
ಹಣತೆಯನ್ನು ಹಚ್ಚಿದ್ದಾರೆ
ಆ ಹಣತೆ ಆರಿಹೋಗಿದ್ದರೂ
ಅದರ ಬೆಳಕು ಇಂದಿಗೂ ಕಾಣುತ್ತಿದೆ,
ನಕ್ಷತ್ರದ ಬೆಳಕಿನಂತೆ.
ಇದು ಭ್ರಮೆಯಲ್ಲ, ನಿಖರ ಸತ್ಯ

ಜಡಗಟ್ಟಿದ ಚಿತ್ತದಲ್ಲಿ
ಅಂಧಕಾರದ ಆಳದಲ್ಲಿ
ನಾವು ಹಚ್ಚಿಕೊಂಡ ಒಳಗಿನ ದೀಪ
ನಮಗೇ ಕಾಣಿಸಲು ಸಮಯಬೇಕು

ನಾವು ಹಚ್ಚುವ ದೀಪ ನಮಗಷ್ಟೇ ಅಲ್ಲ,
ಮುಂದೊಮ್ಮೆ ಇತರರಿಗೂ
ಕಾಣಿಸಬಹುದೆಂಬ ಭರವಸೆಯಿಂದ
ಬನ್ನಿ ಹಚ್ಚೋಣ ದೀಪಾವಳಿಯ ಹಣತೆ


ಜಿ ಎಸ್ ಎಸ್ ಅವರ 'ನನ್ನ ಹಣತೆಯ'ಕೆಲವು ಆಯ್ದ ಸಾಲುಗಳ ಭಾವಾನುವಾದವನ್ನು ಕವಿ ಡಾ ಶ್ರೀವತ್ಸ ದೇಸಾಯಿ ಅವರು ಕೈಗೊಂಡಿದ್ದು ಅದು ಹೀಗಿದೆ;
I know, this darkness has such endless thirst
That no one can quench!
No matter what amount of light it is draped in or is fed or it devoured
Still wants more and more!
But yet, I light a clay lamp, Me too,
Not that I will transcend the darkness,
As long as we are together
I can see your face
And so can you mine, that is the sole desire
After the lamp breathes its last
We remain as just strangers
Unknown to each other!
ಫೋಟೋ ಕೃಪೆ:  ಡಾ ಶ್ರೀವತ್ಸ  ದೇಸಾಯಿ 

ದಿ. ಎಸ್ ಎಲ್ ಭೈರಪ್ಪ – ನೆನಪುಗಳ ಅಚ್ಚಿನ ನುಡಿನಮನ.

ನಮಸ್ಕಾರ.  ಕನ್ನಡ ಸಾಹಿತ್ಯಾಸಕ್ತರಿಗೆ ಹೋದವಾರ ಎರಗಿದ ಆಘಾತ ಇನ್ನೂ ಪೂರ್ತಿ ಕಡಿಮೆಯಾಗಿಲ್ಲ.  ಶಕ್ತಿಯುತ ಕಾದಂಬರಿಗಳನ್ನು ನೀಡಿದ, ಸರಸ್ವತೀ ಸಮ್ಮಾನ ಪುರಸ್ಕೃತ ಶ್ರೀ ಎಸ್ ಎಲ್ ಭೈರಪ್ಪ ಈ ಲೋಕವನ್ನು ಬಿಟ್ಟು ಹೊರಟರೂ, ಅವರ ಲೆಗಸಿ, ಓದುಗರ ಮೇಲಿನ ಅವರ ಪ್ರಭಾವ, ಅವರ ಕಾದಂಬರಿಗಳ ಪರಿಣಾಮ ಇವ್ಯಾವೂ ಅವರ ಜೊತೆಗೆ ಹೋಗಲಾರವು.  ಅವರ ಪುಸ್ತಕಗಳನ್ನು ಓದುವವರ ಮನಸ್ಸಿನ ಮೇಲೆ ಅದರಲ್ಲಿನ ಪಾತ್ರಗಳು, ಸನ್ನಿವೇಶಗಳು ಹಾಕುವ ಮೋಡಿ ಮರೆಯಾಗಲಾರದು.  ನನ್ನ ಸೋದರತ್ತೆಯ ಮನೆಯಲ್ಲಿ ನಮ್ಮ ಮಾವ ಪೇರಿಸಿಟ್ಟಿದ್ದ ಪುಸ್ತಕ ರಾಶಿಯನ್ನು ಸೇರಿರುವ ಹೊಸ ಹೊತ್ತಗೆಗಳನ್ನು ಓದಿ ಮುಗಿಸುವ ಸ್ಪರ್ಧೆ ಪ್ರತೀ ಬೇಸಿಗೆ ರಜೆಯಲ್ಲಿ ನನಗೂ ನನ್ನ ತಂಗಿಗೂ ಇದ್ದದ್ದೇ.  ಅಷ್ಟು ದಪ್ಪನೆಯ ಪುಸ್ತಕ ಪರ್ವವನ್ನು ಎಡಬಿಡದೆ, ಊಟ ತಿಂಡಿ ಬಿಟ್ಟು ೨೪ ಗಂಟೆಗಳಲ್ಲಿ ಓದಿದ್ದನ್ನು ಮರೆಯಲಾರೆ.  

ನಮ್ಮಲ್ಲಿನ ಹಲವಾರು ಅನಿವಾಸಿ ಸದಸ್ಯರು ತಮ್ಮ ನೆನಪುಗಳನ್ನು, ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ಕೆಳಗೆ. ಈ ಸಂಚಿಕೆಯನ್ನು ಹೋದವಾರ ಶ್ರೀಮತಿ ಗೌರಿ ಪ್ರಸನ್ನ ಅವರು ಬರೆದ ನುಡಿನಮನಕ್ಕೆ ಜೋಡಿಸಿಕೊಂಡು, ಆಸಕ್ತರು ಒಂದೆಡೆ ಇಟ್ಟುಕೊಳ್ಳಬಹುದು. - ಲಕ್ಷ್ಮೀನಾರಾಯಣ ಗುಡೂರ್ (ವಾರದ ಸಂಪಾದಕ).

ಕೊಸರು: ಇಲ್ಲಿ ಪ್ರಕಟಿಸಿರುವ ಲೇಖನಗಳು ಯಾವುದೇ order ನಲ್ಲಿ ಇರುವುದಿಲ್ಲ, ಅವನ್ನು ನನಗೆ ತಲುಪಿದಂತೆ ಬಳಸಿದ್ದೇನೆ.
**********************
ಒಂದು ಮಹಾನ್ ದೀಪವು ಇತರ ಲೋಕಗಳನ್ನು ಪ್ರಕಾಶಮಾನಗೊಳಿಸಲು ಸಾಗಿದೆ. ಕನ್ನಡ ಭಾಷೆಯ ಮೇಲಿನ ನನ್ನ ಪ್ರೀತಿಯು ಎಸ್.ಎಲ್. ಭೈರಪ್ಪ ಅವರ ಬರವಣಿಗೆಯ ಮೂಲಕ ಆಕಾಶಕ್ಕೇರಿತು. ಅವರ ಸಂಶೋಧನೆಯ ಆಳತೆ, ಸತ್ಯವನ್ನು ಅಸಂಪ್ರದಾಯಿಕವಾಗಿ ಮತ್ತು ಅಚಲವಾದ ದೃಢತೆಯಿಂದ ಪ್ರಸ್ತುತಪಡಿಸುವ ಅವರ ನಿಶ್ಚಯವನ್ನು ತೋರಿಸುತ್ತದೆ, ಜೊತೆಗೆ ಕಾದಂಬರಿಯ ಸಾಹಿತ್ಯದ ಸೌಂದರ್ಯವನ್ನು ಕಸಿದುಕೊಳ್ಳದೆ. 'ಅವರಣ' ಓದಿದಾಗ, ಇತಿಹಾಸವನ್ನು ಎಷ್ಟು ಮಟ್ಟಿಗೆ ವಿಕೃತಗೊಳಿಸಲಾಗಿದೆ ಎಂಬುದನ್ನು ನಾನು ಅರಿತುಕೊಂಡೆ ಮತ್ತು ಇದನ್ನು ಎಲ್ಲರಿಗೂ, ವಿಶೇಷವಾಗಿ ಇತಿಹಾಸದ ಕೇವಲ ಒಂದು ಭಾಗವನ್ನು ಮಾತ್ರ ಕೇಳಿರುವ ಯುವಜನತೆಗೆ ಓದಬೇಕೆಂದು ಶಿಫಾರಸು ಮಾಡುವೆ. ಕಥೆಯೊಳಗಿನ ಕಥೆ ಬರೆಯುವ ಕಠಿಣ ತಂತ್ರವನ್ನು ಡಾ. ಭೈರಪ್ಪ ಅವರು ಅದ್ಭುತವಾಗಿ ನಿರ್ವಹಿಸಿದ್ದಾರೆ.

ಇನ್ನೂ ಅವರ ಅನೇಕ ಕಾದಂಬರಿಗಳನ್ನು ನಾನು ಓದಿಲ್ಲ, ಈಗ ಅವುಗಳನ್ನು ಓದುವ ನಿಶ್ಚಯ ಮಾಡಿಕೊಂಡಿದ್ದೇನೆ. ನಮ್ಮ ನಡುವೆ ಎಸ್‌ ಎಲ್‌ ಭೈರಪ್ಪನವರು ಇದ್ದರು ಎಂಬುದು ನಮಗೆ ಆಶೀರ್ವಾದವೇ ಅಲ್ಲವೇ? ಅವರು ಕರುನಾಡಿನಲ್ಲಿ ಹುಟ್ಟಿದ್ದು, ಅವರ ಸಾಹಿತ್ಯದ ಅಪಾರ ಕೊಡುಗೆ ನಮ್ಮ ಕನ್ನಡ ಭಾಷೆಯಲ್ಲಿ ಎಂಬದು ಕನ್ನಡಿಗರಾದ ನಮೆಲ್ಲರಿಗೆಷ್ಟು ಹೆಮ್ಮೆ! ಅವರು 2019ರಲ್ಲಿ ಯುಕೆಗೆ ಭೇಟಿ ನೀಡಿದಾಗ ಅವರನ್ನು ನೋಡುವ ಮತ್ತು ಕೇಳುವ ಅವಕಾಶ ನನ್ನದಾಯಿತು. ಇದಕ್ಕೆ ನಾನು ಚಿರಋಣಿ. ಅವರ ಬಗ್ಗೆ ಹೆಚ್ಚು ತಿಳಿದಷ್ಟು, ಹೆಚ್ಚು ವಿನಮ್ರತೆಯ ಭಾವನೆ ಉಂಟಾಗುತ್ತದೆ. ಅವರ ಗಮನವು ಒಂದು ಯುಗದ ಅಂತ್ಯದಂತೆ ಅನಿಸುತ್ತದೆ.

ಓಂ ಶಾಂತಿ.

- ಶಾಲಿನಿ ಜ್ಞಾನಸುಬ್ರಮಣಿಯನ್.
**********************
ಡಾ ಎಸ್ ಎಲ್ ಭೈರಪ್ಪ; ಕೆಲವು ಚಿಂತನೆಗಳು ಮತ್ತು ನೆನಹುಗಳು
ಡಾ ಜಿ ಎಸ್ ಶಿವಪ್ರಸಾದ್


ಭೈರಪ್ಪನವರು ಬಹಳ ಜನಪ್ರಿಯ ಲೇಖಕರು ಮತ್ತು ಕನ್ನಡ ಸಾರಸ್ವತ ಲೋಕದ ದಿಗ್ಗಜರು. ಸರಸ್ವತಿ ಸಮ್ಮಾನ ಪ್ರಶಸ್ತಿಯನ್ನು ಕನ್ನಡಕ್ಕೆ ತಂದುಕೊಟ್ಟವರು. ಅವರು ಪದ್ಮಶ್ರೀ ಮತ್ತು ಪದ್ಮವಿಭೂಷಣ ಪುರಸ್ಕೃತರೂ ಆಗಿದ್ದರು. ಭೈರಪ್ಪನವರು ಸಮಾಜದಲ್ಲಿನ ವಿವಿಧ ಸಮುದಾಯಗಳ ಅನುಭವವನ್ನು ಪಡೆಯಲು ಹತ್ತಾರು ನೆಲೆಗಳಲ್ಲಿ ಹೋಗಿ ಬದುಕನ್ನು ಹತ್ತಿರದಿಂದ ಕಂಡು, ಅದನ್ನು ಧರ್ಮ, ತರ್ಕ ಶಾಸ್ತ್ರ, ಮತ್ತು ಸಾಂಸ್ಕೃತಿಕ ವಿಷಯಗಳ ಹಿನ್ನೆಲೆಯಲ್ಲಿ ತೀವ್ರ ಚರ್ಚೆಗೆ ಒಳಪಡಿಸಿದ ಲೇಖಕ. ಅವರ ಕಾದಂಬರಿ ವಸ್ತು ವಿಷಯದ ಬಗ್ಗೆ ಸಾಕಷ್ಟು ಸಂಶೋಧನೆಯನ್ನು ಮಾಡಿ ಬದುಕಿನ ಅನುಭವಗಳ ವಿಸ್ತಾರವನ್ನು ಓದುಗರಿಗೆ ಪರಿಚಯಿಸುತ್ತಿದ್ದರು. ತಮ್ಮ ನಿಲುವಿಗೆ ಬದ್ಧರಾಗಿ ನಿಂತವರು ಭೈರಪ್ಪನವರು. ಪಂಡಿತರು, ವಿಮರ್ಶಕರು, ಮೀಮಾಂಸಕರು ಭೈರಪ್ಪನವರ ಕೃತಿಗಳ ತಿರುಳುಗಳನ್ನು ಚರ್ಚಿಸಿದ್ದು ಅದನ್ನು ರಾಜಕೀಯ, ಧಾರ್ಮಿಕ, ಸಾಮಾಜಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅದರ ಪ್ರಸ್ತುತತೆಯನ್ನು ಪರಿಣಾಮಗಳನ್ನು ನೋಡಿ ವಿಶ್ಲೇಷಿಸಿದ್ದಾರೆ. ಅಲ್ಲಿ ಕೆಲವು ವಿವಾದಗಳು ಹುಟ್ಟುಕೊಂಡಿರುವುದು ನಿಜ. ಹಲವಾರು ಸಾಂಸ್ಕೃತಿಕ, ಧಾರ್ಮಿಕ, ಮತ, ಜಾತಿ ವ್ಯವಸ್ಥೆಗಳ ನಡುವೆ ಬಹುತ್ವ ಉಳ್ಳ ಭಾರತೀಯ ಸಮಾಜದಲ್ಲಿ ಇತಿಹಾಸ, ಧರ್ಮ, ಸಂಪ್ರದಾಯ ಎಂಬ ವಿಚಾರಗಳು ಭಾವನೆಗಳನ್ನು ಕಲಕುವುದು ಸಹಜವೇ.

ಜಾಗತೀಕರಣದ ಹಿನ್ನೆಲೆಯಲ್ಲಿ ಸಮಾಜ ತೀವ್ರಗತಿಯಲ್ಲಿ ಬದಲಾಗುತ್ತಿದೆ. ರಾಷ್ತ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಕೂಡ ಬದಲಾಗುತ್ತಿದೆ. ಈ ಬದಲಾವಣೆಗಳ ನಡುವೆ ಬದುಕುತ್ತಿರುವ ಸೃಜನ ಶೀಲ ಲೇಖಕರು ಆ ಬದಲಾವಣೆಗಳಿಗೆ ಸ್ಪಂದಿಸಿ ಅದನ್ನು ತಮ್ಮ ಕಲ್ಪನಾ ಶಕ್ತಿಯಿಂದ ಅದರ ವಿವಿಧ ಆಯಾಮಗಳನ್ನು ಗ್ರಹಿಸಿ ಕಥೆ, ಕವನ, ಕಾದಂಬರಿಗಳಲ್ಲಿ ಪ್ರಸ್ತುತಿ ಪಡಿಸುತ್ತಾರೆ. ಅಲ್ಲಿ ಪ್ರಭುತ್ವದ, ಬಹುಸಂಖ್ಯಾತರ, ಅಲ್ಪಸಂಖ್ಯಾತರ ಪರ ಅಥವಾ ವಿರೋಧ ಭಾವನೆಗಳು ಉಂಟಾಗುವುದು ಅನಿವಾರ್ಯವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ, ಒಂದು ಸಿದ್ಧಾಂತಕ್ಕೆ ಜನರು,
ಓದುಗರು ತಮ್ಮ ವೈಯುಕ್ತಿಕ ಬದುಕಿನ ಅನುಭವದ ಆಧಾರದಮೇಲೆ, ಹುಟ್ಟಿನಿಂದಲೇ ಪ್ರಾಪ್ತವಾಗಿರುವ ಕೆಲವು ಸಾಮಾಜಿಕ, ಧಾರ್ಮಿಕ ಸಾಂಸ್ಕೃತಿಕ ಪ್ರಭಾವಗಳ ಆಧಾರದ ಮೇಲೆ, ತಮ್ಮ ಶಿಕ್ಷಣ, ಸಾಹಿತ್ಯದ ಅರಿವು, ತಮ್ಮ ಪರಿಸರ, ಒಡನಾಟ, ಬದುಕಿನ ಮೌಲ್ಯ, ದೃಷ್ಟಿಕೋನ ಇವುಗಳ ಆಧಾರದ ಮೇಲೆ ತಮಗೆ ಒಪ್ಪುವಂಥ ನಿಲುವನ್ನು ಕಟ್ಟಿಕೊಂಡಿರುತ್ತಾರೆ. ಇಂಥ ಒಂದು ಸನ್ನಿವೇಶದಲ್ಲಿ ಒಂದು ಕಥಾವಸ್ತುವನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಆಯ್ಕೆಯನ್ನು ಅವರು ಪಡೆದಿರುತ್ತಾರೆ. ಹಿಂದೆ ಸಾಹಿತ್ಯ ವಿಚಾರ ಗೋಷ್ಠಿಯಲ್ಲಿ, ಪತ್ರಿಕೆಗಳಲ್ಲಿ, ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದವು, ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲೂ ನಡೆಯುತ್ತಿವೆ. ಈ ಚರ್ಚೆಗಳು ಘನವಾಗಿದ್ದಲ್ಲಿ ಅದು ಸಾಹಿತ್ಯ ಬೆಳವಣಿಗೆಗೆ ಪೂರಕವಾಗಿರುತ್ತದೆ. ಹಿಂದೆ, ಭಿನ್ನಾಭಿಪ್ರಾಯಗಳ ನಡುವೆಯೂ ಹಿರಿಯ ಸಾಹಿತಿಗಳ ನಡುವೆ ಪರಸ್ಪರ ಗೌರವ, ಸ್ನೇಹ, ವಿಶ್ವಾಸಗಳಿರುತ್ತಿದ್ದವು.

ಒಂದು ಕಥೆಯಲ್ಲಿ ಕಥಾವಸ್ತು, ಬರವಣಿಗೆಯ ಶೈಲಿ, ಪಾತ್ರಪೋಷಣೆ, ಸರಳತೆ, ಸಂಕೀರ್ಣತೆ ಹೀಗೆ ಅನೇಕ ಆಯಾಮಗಳಿರುತ್ತವೆ. ಕೆಲವೊಮ್ಮೆ ಕಥಾವಸ್ತು ಇಷ್ಟವಾಗಬಹುದು, ಅಥವಾ ಇಷ್ಟವಾಗದಿರಬಹುದು, ಶೈಲಿ ಇಷ್ಟವಾಗ ಬಹುದು, ಅಥವಾ ಸನ್ನಿವೇಶಗಳ ಸಂಕೀರ್ಣತೆ ಮತ್ತು ಪಾತ್ರಗಳ ಪೋಷಣೆ ಓದುಗನ ಆಸಕ್ತಿಯನ್ನು ಸೆಳೆಯಬಹುದು. ಬದುಕಿನಲ್ಲಿ ಎದುರಾಗುವ ಸಾಮಾಜಿಕ, ಸಾಂಸ್ಕೃತಿಕ ಸಮಸ್ಯೆಗಳ, ನಂಬಿಕಗಳ ಘರ್ಷಣೆಗಳು ದ್ವಂದ್ವಗಳು ಎಲ್ಲರನ್ನು ಕಾಡುವುದು ಸಹಜ. ಆ ರೀತಿ ವಿಚಾರಗಳನ್ನು ಲೇಖಕರು ತೀವ್ರ ವಿಮರ್ಶೆಗೆ ಒಳಪಡಿಸಿ ಅದನ್ನು ತಮ್ಮ ಅಭಿಪ್ರಾಯ ಎಂದು ಹೇಳದೆಯೇ ಪಾತ್ರಗಳ ಮುಖೇನ ತೆರೆದಿಡುತ್ತಾರೆ. ಓದುಗರನ್ನು ಆ ಆಳಕ್ಕೆ ಲೇಖಕರು ಕರೆದೊಯ್ಯುತ್ತಾರೆ. ಓದುಗರು ತಮ್ಮ ಅನುಭವಕ್ಕೆ ತಕ್ಕಂತೆ ಅದನ್ನು ಅರ್ಥೈಸಿಕೊಳ್ಳಬಹುದು.

ಕೆಲವು ಲೇಖಕರ ಕೃತಿಗಳನ್ನು ಅರ್ಥಮಾಡಿಕೊಳ್ಳಲು ಭಾರತೀಯ ಸಾಂಸ್ಕೃತಿಕ ಪ್ರಜ್ಞೆ ಅಗತ್ಯ. ಕೆಲವು ಕೃತಿಗಳಿಗೆ ಸಾಂಸ್ಕೃತಿಕ ಗಡಿಗಳನ್ನು ದಾಟಿ ನಿಲ್ಲುವ ಶಕ್ತಿ ಇರುತ್ತದೆ, ಕೆಲವು ಕೃತಿಗಳನ್ನು ಅದರ ಸಾಂಸ್ಕೃತಿಕ ಹಿನ್ನೆಲೆಯಲ್ಲಿ
ನೋಡಿ ಅರ್ಥೈಸಿಕೊಳ್ಳಬೇಕು. ಎಲ್ಲ ಕೃತಿಗಳಿಗೂ ಇತಿಮಿತಿಗಳಿರುತ್ತದೆ, ಅದರ ಮಧ್ಯದಲ್ಲಿ ಅದು ಎಷ್ಟರ ಮಟ್ಟಿಗೆ ಜನರ ಮನ್ನಣೆ ಪಡೆದಿದೆ, ಕೃತಿಗಳು ಎಷ್ಟು ಜನರನ್ನು ತಲುಪಿದೆ, ಎಷ್ಟು ಮರು ಮುದ್ರಣವನ್ನು ಕಂಡಿದೆ, ಎಷ್ಟು ಭಾಷೆಗಳಿಗೆ ಭಾಷಾಂತರಗೊಂಡಿದೆ ಮತ್ತು ಮುಂದಕ್ಕೆ ಎಲ್ಲಿಯವರೆಗೆ ಜನರಿಂದ ಸ್ವೀಕೃತವಾಗಿರುತ್ತದೆ ಅನ್ನುವುದು ಕಡೆಗೆ ಉಳಿಯುವ ವಿಚಾರ. ಈ ಮೇಲಿನ ವಿಚಾರಗಳ ಹಿನ್ನೆಲೆಯಲ್ಲಿ ನಾವು ಭೈರಪ್ಪನವರನ್ನು ಒಬ್ಬ ಲೇಖಕನಾಗಿ ಮತ್ತು ಅವರು ಬರೆದಿರುವ ಕೃತಿಗಳನ್ನು ಅರ್ಥಮಾಡಿಕೊಳ್ಳ ಬೇಕಾಗಿದೆ.

ನಾನು ಭೈರಪ್ಪನವರನ್ನು ಹತ್ತಿರದಿಂದ ಕಂಡದ್ದು ಅವರು ನಮ್ಮ ಕನ್ನಡ ಬಳಗದ ಮೂವತ್ತನೇ ವಾರ್ಷಿಕೋತ್ಸವದ ಅತಿಥಿಯಾಗಿ ಬಂದ ಸಂದರ್ಭದಲ್ಲಿ. ನಾನು ಆಗ ಸ್ಮರಣ ಸಂಚಿಕೆಯ ಸಂಪಾದಕನಾಗುವುದರ ಜೊತೆಗೆ ಸಾಹಿತ್ಯ ಕಾರ್ಯಕ್ರಮಗಳ ಜವಾಬ್ದಾರಿಯನ್ನೂ ಹೊತ್ತಿದ್ದೆ. ಆಗ ಮುಖ್ಯ ಮಂತ್ರಿ ಚಂದ್ರು ಮತ್ತು ಪ್ರೊ ಕೃಷ್ಣೇಗೌಡರು ನಮ್ಮ ಅತಿಥಿಯಾಗಿ ಆಗಮಿಸಿದ್ದರು. ಡಾ ಭಾನುಮತಿ ಅವರು ಬಳಗದ ಅಧ್ಯಕ್ಷರಾಗಿದ್ದರು. ಆ ಒಂದು ಸಂಧರ್ಭದಲ್ಲಿ ಭೈರಪ್ಪ ಅವರನ್ನು ಸನ್ಮಾನಿಸಲಾಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ನಾನು ಭೈರಪ್ಪನವರನ್ನು ಸಾಹಿತ್ಯ ವಿಚಾರವಾಗಿ ಮಾತನಾಡಬೇಕೆಂದು ವಿನಂತಿಸಿಕೊಂಡಾಗ ಅವರು ಅದಕ್ಕೆ ಬದಲಾಗಿ ಅವರ ಕೃತಿಯ ಬಗ್ಗೆ ಸಾರ್ವಜನಿಕ ಸಂವಾದ ಒಂದನ್ನು ಏರ್ಪಡಿಸುವುದು ಸೂಕ್ತವೆಂದು ಸಲಹೆ ನೀಡಿದ್ದರು. ಅಂದಿನ ಪ್ರಶ್ನೋತ್ತರ ಕಾರ್ಯಕ್ರಮಕ್ಕೆ ಡಾ ವತ್ಸಲಾ ರಾಮಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದರು. ಒಳ್ಳೆ ಸಂವಾದ ನಡೆಯಿತು.

೨೦೧೯ರಲ್ಲಿ ಭೈರಪ್ಪನವರನ್ನು ಕುರಿತು ಲಂಡನ್ನಿನ ನೆಹರು ಸೆಂಟರಿನಲ್ಲಿ ಒಂದು ಇಂಗ್ಲಿಷ್ ವಿಚಾರ ಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಅದಕ್ಕೆ ಭೈರಪ್ಪನವರು ಆಗಮಿಸಿದ್ದರು. ಆ ಕಾರ್ಯಕ್ರಮದಲ್ಲಿ ನನಗೆ ಭೈರಪ್ಪನವರ ಕೃತಿಯ ಬಗ್ಗೆ ಇಂಗ್ಲೀಷಿನಲ್ಲಿ ಮಾತನಾಡುವುದಕ್ಕೆ ಅಹ್ವಾನ ಒದಗಿ ಬಂತು. ಸಂತೋಷದಿಂದ ಒಪ್ಪಿಕೊಂಡೆ. ಅಂದು ಖ್ಯಾತ ಲೇಖಕ ಅಮಿಶ್ ತ್ರಿಪಾಠಿ ಅಧ್ಯಕ್ಷತೆ ವಿಹಿಸಿದ್ದು ಅಲ್ಲಿ ಶತಾವಧಾನಿ ಗಣೇಶ್ ಮತ್ತು ಸಾಹಿತಿಗಳಾದ ಗಿರೀಶ್ ಭಟ್ ಅವರೂ ಮಾತನಾಡಿದರು. ನಾನು ಒಬ್ಬ ಅನಿವಾಸಿ ಲೇಖಕನಾಗಿ ‘ತಬ್ಬಲಿಯು ನೀನಾದೆ ಮಗನೆ’ ಕೃತಿಯ ಬಗ್ಗೆ ಒಂದು ಪುನರಾವಲೋಕನೆಯನ್ನು ಮಂಡಿಸಿದೆ. ಐದು ದಶಕಗಳ ನಂತರ ಆ ಕಥೆಯನ್ನು ಅವಲೋಕನೆ ಮಾಡಿದಾಗ ಅದು ತನ್ನ ಸ್ವರೂಪವನ್ನು ಹೇಗೆ ಉಳಿಸಿಕೊಂಡಿದೆ ಎನ್ನುವುದರ ಬಗ್ಗೆ ಮಾತನಾಡಿದೆ. ನನ್ನ ಮಾತುಗಳ ನಂತರ ಭೈರಪ್ಪನವರು ನನ್ನನ್ನು ಅಭಿನಂದಿಸಿದರು, ತಮ್ಮ ಮಾತುಗಳಲ್ಲೂ ಉಲ್ಲೇಖಿಸಿದರು. ಇದು ನನಗೆ ಗೌರವದ ವಿಷಯವಾಗಿದೆ.

ಕೋವಿಡ್ ಸಮಯದಲ್ಲಿ 'ಪಯಣ' ಎಂಬ ನನ್ನ ಕಿರುಕಾದಂಬರಿಯನ್ನು ಸಪ್ನಾ ಬುಕ್ ಹೌಸ್ ಭೈರಪ್ಪನವರ ಗಮನಕ್ಕೆ ಕಳುಹಿಸಿದ್ದು ಅದನ್ನು ಬಿಡುವಿನಲ್ಲಿ ಓದಿ, ಅದು ತಮಗೆ ಇಷ್ಟವಾಯಿತೆಂದು ನನ್ನ ಪರಿವಾರ ಮಿತ್ರದವರ ಮೂಲಕ ತಿಳಿಸಿದ್ದು ನನಗೆ ಖುಷಿ ಮತ್ತು ತೃಪ್ತಿಯನ್ನು ನೀಡಿತು. ಕೋವಿಡ್ ನಂತರದ ಸಮಯದಲ್ಲಿ ನನ್ನ ಅಣ್ಣ ಜಯದೇವ್ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಕನ್ನಡವನ್ನು ಕಡ್ಡಾಯ ಮಾಡಬೇಕೆಂಬ ಒಂದು ಮನವಿಯನ್ನು ಭೈರಪ್ಪನವರ ಬಳಿ ಪ್ರಸ್ತಾಪಿಸಿ ಆ ಚಾಲನೆಗೆ ನೆರವು ಕೇಳಲು ಅವರ ಮನೆಗೆ ಹೋಗಬೇಕಿತ್ತು. ನನಗಾಗಲೇ ಪರಿಚಿತರಾಗಿದ್ದ ಅವರನ್ನು ಕಾಣಲು ಅವರ ಕುವೆಂಪು ನಗರದ ಮನೆಗೆ ಹೋದಾಗ ಅಣ್ಣ ಜಯದೇವನ ಯತ್ನವನ್ನು ಮೆಚ್ಚಿ ಕಂಬಾರರ ಜೊತೆ ಸಮಾಲೋಚಿಸಿ ಸರಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಭರವಸೆಯನ್ನು ನೀಡಿದರು. ಮಾತುಕತೆಯ ನಂತರ ಅವರೇ ಅಡುಗೆ ಮನೆಗೆ ಹೋಗಿ ಕಾಫಿ ತುಂಬಿದ ಕಪ್ಪುಗಳನ್ನು ಹೊತ್ತು ತಂದರು, ಅದನ್ನು ಕೂಡಲೇ ಗಮನಿಸಿದ ನನ್ನ ಶ್ರೀಮತಿ ತುರ್ತಾಗಿ ಅವರಿಂದ ಕಾಫಿ ಟ್ರೇ ಪಡೆದಳು. ಅವರು ಅಂದು, ಒಂದು ಪಂಚೆ ಬನಿಯನ್ ಹಾಕಿಕೊಂಡು ಸರಳವಾಗಿದ್ದರು, ಮನೆಯಲ್ಲಿ ಒಬ್ಬ ಆಳಿಗೆ ಅಥವಾ ಹೆಂಡತಿಗೆ ಕಾಫಿ ತರಲು ಆಜ್ಞಾಪಿಸುವ ಬದಲು ತಾವೇ ಕಾಫಿ ಟ್ರೇ ಹೊತ್ತು ತಂದದ್ದು ಅವರ ಸರಳ ಬದುಕಿಗೆ ಸಾಕ್ಷಿಯಾಗಿತ್ತು. ಅವರ ವಿನಯ ಶೀಲತೆಯನ್ನು ನಾನು ಬಹಳವಾಗಿ ಮೆಚ್ಚಿಕೊಂಡೆ. ಅಲ್ಲಿ ಪ್ರೀತಿ ವಿಶ್ವಾಸವೇ ಪ್ರಧಾನವಾಗಿತ್ತು. ಅವರ ಮನೆಯ ಅಂಗಳದಲ್ಲಿ ತೂಗು ಹಾಕಿದ್ದ ಒಂದು ಸ್ಕಾಟ್ಲ್ಯಾಂಡಿನ ಸ್ಟಾಗ್ ಚಿತ್ರ ನನ್ನ ಗಮನವನ್ನು ಸೆಳೆಯಿತು, ಅದರ ಬಗ್ಗೆ ನಾನು ಮಾತೆತ್ತಿದಾಗ ಈ ಜಿಂಕೆಯ ಚಿತ್ರ ಅವರು ಉತ್ತರಕಾಂಡವನ್ನು ಬರೆಯಲು ಪ್ರೇರಣೆ ನೀಡಿತೆಂದು ತಿಳಿಸಿದರು. ನನ್ನ ತಂದೆ ಜಿ ಎಸ್ ಎಸ್ ಮತ್ತು ಭೈರಪ್ಪ ಆಪ್ತ ಗೆಳೆಯರಾಗಿದ್ದರು, ಜಿ ಎಸ್ ಎಸ್ ಅವರ ಅರೋಗ್ಯ ಕ್ಷೀಣಿಸುತ್ತಿರುವಾಗ ಭೈರಪ್ಪನವರು ಮನೆಗೆ ಬಂದು ಅವರನ್ನು ವಿಚಾರಿಸಿಕೊಂಡು ಸಂತೈಸಿದ್ದರು. ಪಿ ಶೇಷಾದ್ರಿ ನಿರ್ದೇಶನದ, ಸಾಹಿತ್ಯ ಅಕೆಡೆಮಿ ಹೊರತಂದ ಭೈರಪ್ಪನವರ ಸಾಕ್ಷ್ಯ ಚಿತ್ರದಲ್ಲಿ ಭೈರಪ್ಪನವರು ‘ನನ್ನ ಬದುಕಿನಲ್ಲಿ ಹಲವಾರು ಗೆಳೆತನವನ್ನು ನಾನು ಪಡೆದುಕೊಂಡೆ’ ಎನ್ನುತ್ತಾ ಬದುಕಿನ ಪ್ರೀತಿಯ ಬಗ್ಗೆ ಮಾತನಾಡುವಾಗ ಮೂಡುವ ಭೈರಪ್ಪ ಮತ್ತು ಜಿ ಎಸ್ ಎಸ್ ಹಸ್ತಲಾಘ ಮಾಡುತ್ತಿರುವ ಚಿತ್ರ ಅರ್ಥಪೂರ್ಣವಾಗಿದೆ. ಎಲ್ಲ ಕನ್ನಡಿಗರಲ್ಲಿ ಹೆಮ್ಮೆಯನ್ನು ಉಂಟುಮಾಡುತ್ತದೆ.
**********************
ನಾನು ಮೊದಲ ಬಾರಿ ಭೈರಪ್ಪನವರ ಪುಸ್ತಕ ಓದಿದ್ದು 9ನೇ ತರಗತಿಯಲ್ಲಿರುವಾಗ. ದಸರಾ ರಜೆ ಕಳೆದು ಶಾಲೆಗೆ ವಾಪಸಾದಾಗ ಒಮ್ಮಿಂದೊಮ್ಮೆಲೆ ನನ್ನ ತರಗತಿಯ ಒಂದಿಷ್ಟು ಜನರಿಗೆ ಕನ್ನಡ ಕಾದಂಬರಿಯ ಓದುವ ಹವ್ಯಾಸ ಸ್ಪರ್ಧೆಯಾಗಿ ಮಾರ್ಪಟ್ಟಿತು - ನಾನೆಷ್ಟು ಓದಿದೆ ನೀನೆಷ್ಟು ಓದಿದೆ ಎಂಬ ತೋರಿಕೆಯ ಹುಚ್ಚು.  ಅದಕ್ಕೆ ಸರಿಯಾಗಿ ನಮ್ಮ ಶಾಲೆಯಲ್ಲಿ ತುಂಬಾ ಸುಂದರವಾದ ವಾಚನಾಲಯವಿತ್ತು. ಪುಸ್ತಕಗಳನ್ನು ಮನೆಗೂ ಒಯ್ಯಲು ಕೊಡುತ್ತಿದ್ದರು.  ನಾನು ಆ ತನಕ ಓದಿದ ಯಾವುದೇ ಶಾಲೆಯಲ್ಲಿ, ವಾಚನಾಲಯ, ಪುಸ್ತಕವನ್ನು ಮನೆಗೆ ಕೊಂಡೊಯ್ಯುವ ಆಯ್ಕೆ ಇರಲಿಲ್ಲವಾದ್ದರಿಂದ ಈಗ ಅದೊಂದು ರೀತಿ ಒಮ್ಮಿಂದೊಮ್ಮೆಲೆ ಶ್ರೀಮಂತಿಕೆ ಬಂದಂತೆ ಅನಿಸುತ್ತಿತ್ತು. 

ಬರೀ ಪುಸ್ತಕ ತೆಗೆದುಕೊಂಡರೆ ಮುಗಿಯುತ್ತಿರಲಿಲ್ಲ, ಪುಸ್ತಕ ಮರಳಿಸುವಾಗ ಲೈಬ್ರರಿ ಜವಾಬ್ದಾರಿ ಹೊತ್ತಿದ್ದ ಟೀಚರ್ ನಮ್ಮನ್ನು ಪುಸ್ತಕದ ಸಾರಾಂಶದ ಕುರಿತು ಕೇಳುತ್ತಿದ್ದರು. Test ಗಳಲ್ಲಿ ಕಮ್ಮಿ ಮಾರ್ಕ್ಸ್ ಬಂದಾಗ ಕಾದಂಬರಿ ಓದಿದ್ದು ಜಾಸ್ತಿ ಆಯ್ತು ಅನಿಸುತ್ತೆ ಎಂದು ಹಂಗಿಸುತ್ತಿದ್ದರು ಕೂಡ.

ನನ್ನ ಪಪ್ಪ ಭೈರಪ್ಪನವರ ಅಭಿಮಾನಿ, ಜೊತೆಗೆ ಅವರಷ್ಟು ಒಳ್ಳೆಯ ಓದುಗರೆಂದರೆ, ಅವರು ಓದಿದ ಪುಸ್ತಕದ ಕಥೆ ಸಾರಾಂಶವನ್ನು ಅತ್ಯಂತ ಸುಂದರವಾಗಿ ನಮಗೆ narrate ಮಾಡುತ್ತಿದ್ದರು. ಎಷ್ಟು ಚೆನ್ನಾಗಿ ಹೇಳುತ್ತಿದ್ದರು ಎಂದರೆ ಕೊನೆಯಲ್ಲಿ ನಾವು ಕೂಡ ಪುಸ್ತಕ ಓದಿ ಮುಗಿಸಿದ್ದೇವೆ ಅನ್ನುವ ಭಾವ ಮನಸನ್ನು ತುಂಬಿಕೊಳ್ಳುತ್ತಿತ್ತು. ದಾಟು, ಭಿತ್ತಿ, ತಬ್ಬಲಿಯು ನೀನಾದೆ ಮಗನೆ, ನಾಯಿ ನೆರಳು, ಗ್ರಹಣ, ಇವೆಲ್ಲ ಕಾದಂಬರಿ ನಾನು ಓದಿದ್ದು ಪಪ್ಪನ ಕಥೆಗಳ ಮೂಲಕವೇ!

ಅವರನ್ನು ಮೆಚ್ಚಿಸಲು, ಅಥವಾ ನಾನೂ ದೊಡ್ಡ ಓದುಗಳು ಎಂದು ತೋರಿಸಲೋ ಭೈರಪ್ಪನವರ ಪುಸ್ತಕ ಓದುವೆ ಎಂದು ಆ ಸಲ ವಾಚನಾಲಯಕ್ಕೆ ಹೋಗಿ ಭೈರಪ್ಪನವರ ಧರ್ಮಶ್ರೀ ಕಾದಂಬರಿ ತಂದು ಓದಲು ಶುರು ಮಾಡಿದೆ. ನಾನು ಮುಗಿಸುವ ಮೊದಲೇ ಪಪ್ಪ ಅದನ್ನು ಓದಿ ಮುಗಿಸಿದರು, ಜೊತೆಗೆ ಚಿಕ್ಕಪ್ಪ, ಅಕ್ಕ ಪಕ್ಕದಲ್ಲಿದ್ದ ಅಣ್ಣ, ಅಂಕಲ್ ಎಲ್ಲರೂ ಅದನ್ನು ಓದಿ, ಅದ್ಬುತ ಅದ್ಬುತ ಅನ್ನುವಾಗ. ಅದನ್ನು ವಾಪಸ್ ಕೊಡುವ ಸಮಯ ಬಂದೇ ಬಿಟ್ಟಿತ್ತು. ಆ ದಿನ ರಾತ್ರಿ ಪೂರ್ತಿ ಕೂತು ಪುಸ್ತಕ ಮುಗಿಸಿದೆ. ಆ ಪುಸ್ತಕ ಆಪ್ತವಾಗಲು ಹಲವು ಕಾರಣಗಳಿತ್ತು, ಮುಂಡಗೋಡ, ಹಳಿಯಾಳ, ಯಲ್ಲಾಪುರದ ಹಲವೆಡೆ ಈ ಮತಾಂತರದ ವಿರುದ್ಧ ಹಲವಾರು protest ಗಳು ನಡೆಯುತ್ತಿದ್ದವು. ನಮ್ಮ ಜೊತೆಗೆ ಓದುತ್ತಿದ್ದ ಸಹಪಾಠಿಗಳ ಕುಟುಂಬಗಳು ಮತಾಂತರವಾಗಿ ಒಮ್ಮಿಂದೊಮ್ಮೆಲೆ ಹೆಸರು ಬದಲಿಸಿಕೊಂಡು ಚರ್ಚ್ ಗೆ ಹೋಗುತ್ತಿದ್ದ ದೃಶ್ಯಗಳು, ಅದರ ಬಗ್ಗೆ ನಾವು ಕ್ಲಾಸಿನಲ್ಲಿ ಗುಸು ಗುಸು ಮಾಡುತ್ತಿದ್ದುದು. ಕ್ರೈಸ್ತ ಮಿಷನರಿ ಶಾಲೆಯಲ್ಲಿಯೇ ಓದುತ್ತಿದ್ದ ಕಾರಣ ಅದನ್ನು ಮುಕ್ತ ಚರ್ಚೆ ಮಾಡುವ ಧೈರ್ಯವೂ ಇಲ್ಲದ ವಯಸ್ಸು, ಸಂದರ್ಭ, ವೈಪರೀತ್ಯಗಳ ನಡುವೆಯೇ ಮತಾಂತರ ಎಂಬುದು ಹೇಗೆ ಸಾಂಸ್ಕೃತಿಕ ಘರ್ಷಣೆಯನ್ನು ತಂದು ಒಬ್ಬ ವ್ಯಕ್ತಿಯನ್ನು ಟೊಳ್ಳು ಮಾಡುತ್ತದೆ ಎಂಬ ಸಾರಾಂಶದ ಧರ್ಮಶ್ರೀ ನಮ್ಮ ಸುತ್ತಲಿನ ಕಥೆಯೇ ಆಗಿ ಮನಸನ್ನು ಆವರಿಸಿಕೊಂಡಿತು. ಅಲ್ಲಿನ ನಾಯಕನಂತೆಯೇ, ನನ್ನ ಸುತ್ತಲಿನ ಒಬ್ಬ ವ್ಯಕ್ತಿಯೂ ಹೀಗೆ ಅಮ್ಮನ ಮಡಿಲಿಗೆ ಮರಳಬಹುದೇ? ಯಾರಿರಬಹುದು ಅವರು? ಹೀಗೆಲ್ಲ ಪ್ರಶ್ನೆ ಮನದಲ್ಲಿ ಹುಟ್ಟುತ್ತಿತ್ತು.

ಪುಸ್ತಕ ವಾಪಸ್ ಕೊಟ್ಟ ಮೇಲೆ ಟೀಚರ ಕಥೆ ಕೇಳಿದರು, ನಾನೂ ಅನುಮಾನದಲ್ಲಿ ಕಥೆ ಶುರು ಮಾಡಿದೆ. ಅವರು ಅರ್ಧದಲ್ಲೇ ನಿಲ್ಲಿಸಿ "ಸಾಕು ಸಾಕು, ಸ್ವಲ್ಪ ಓದಿನ ಕಡೆಗೆ ಗಮನವಿರಲಿ. ಬರೀ ಕಾದಂಬರಿ ಓದಿ ವಿಮರ್ಶೆ ಮಾಡೋದಲ್ಲ" ಎಂದು ಜೋರ್ ಮಾಡಿದರು.
ಆಮೇಲೆ ಕೆಂಪು ಬಣ್ಣದ ಮುಖಪುಟವಿದ್ದ ಧರ್ಮಶ್ರೀ ನಮ್ಮ ಲೈಬ್ರರಿಯಲಿ ಕಾಣಲೇ ಇಲ್ಲ.

‘ಭಿತ್ತಿ’ ಓದಿ ನನ್ನ ಪಪ್ಪ ಅದೆಷ್ಟು ಪ್ರಭಾವಿತರಾಗಿದ್ದರು ಎಂದರೆ, ಭೈರಪ್ಪನವರಿಗೆ ಪತ್ರ ಬರೆದು ಅವರ ಫೋಟೋ ಒಂದನ್ನು ಕಳಿಸಲು ವಿನಮ್ರ ವಿನಂತಿ ಮಾಡಿದ್ದರು. ಅವರಿಗೆ ಅದೆಷ್ಟೋ ಜನ ಈ ರೀತಿ ಪತ್ರ ಬರೆಯುತ್ತಾರೋ, ನಿರೀಕ್ಷಿಸಿದಂತೆಯೇ ಅವರಿಂದ ಯಾವ ಉತ್ತರವೂ ಬರಲಿಲ್ಲ.
ಮತ್ತೊಂದಿಷ್ಟು ದಿನ ಬಿಟ್ಟು, ಸ್ವವಿಳಾಸದ ಲಕೋಟೆಗೆ ಅಂಚೆ ಚೀಟಿ ಹಚ್ಚಿ ಮತ್ತೊಂದು ಪತ್ರ ಬರೆದು ಮತ್ತದೇ ಮನವಿ ಮಾಡಿದಾಗ, ಭೈರಪ್ಪನವರು ತಮ್ಮದೊಂದು ಭಾವಚಿತ್ರ ಮತ್ತು ಅದರ ಹಿಂದೆ ತಮ್ಮ ಸಹಿ ಹಾಕಿ ಕಳಿಸಿದ್ದರು.

ಆ ಚಿತ್ರ ಇಂದಿಗೂ ನಮ್ಮ ಆಲ್ಬಮ್ ನಲ್ಲಿ ಬೆಚ್ಚಗಿದೆ. ಭೀಮಕಾಯ, ಯಾನ, ಮತದಾನ ಬಿಟ್ಟು ನಾನು ಅವರೆಲ್ಲ ಪುಸ್ತಕಗಳನ್ನು ಓದಿರುವೆ. (ಕೆಲವು ಪಪ್ಪನ ಬಾಯಲ್ಲಿ ಕೇಳಿರುವೆ) ಮಂದ್ರ ಕಾಲೇಜ್ ದಿನಗಳಲ್ಲಿ ಎರಡೇ ದಿನಕ್ಕೆ ಓದಿ ಮುಗಿಸಿದ್ದು, ಈಗ ಓದಲು ಕುಳಿತರೆ ಎರಡೆರಡು ಪುಟಕ್ಕೆ ಇಪ್ಪತ್ತು ಪ್ರಶ್ನೆ ಮನದಲ್ಲಿ ಮೂಡುತ್ತವೆ. ಸಂಗೀತಲೋಕದ ಕರಾಳತೆ, ಸುಂದರತೆ ಎರಡನ್ನೂ ಅದ್ಭುತವಾಗಿ ತೋರಿಸುತ್ತಾ ಚಿತ್ರಿತಗೊಂಡಿರುವ ಪಾತ್ರಗಳು, ನಮ್ಮ ಸುತ್ತಲಿರುವ ಮಂದಿಯೇ ಅನಿಸಿಬಿಡುತ್ತದೆ.

ನನ್ನ ಅತೀ ಪ್ರೀತಿಯ ಕಾದಂಬರಿಗಳು ಎಂದರೆ, ಆವರಣ, ಮತ್ತು ಸಾರ್ಥ; time travel ಮಾಡಿಸುವ ಪುಸ್ತಕಗಳಿವು. ಸಾರ್ಥದ ಚಂದ್ರಿಕೆಯ ಕುರಿತು ನನಗೆ ಈಗಲೂ, ಕನಸುಗಳು ಬರುತ್ತವೆ. ಆವರಣ ಓದಿ ಒಮ್ಮೆಯಾದರೂ ಕಾಶಿಯ ಬೀದಿಗಳಲ್ಲಿ ಗಮ್ಯದ ಹಂಗಿಲ್ಲದೇ ಓಡಾಡಬೇಕು ಎನ್ನುವ ತುಡಿತ ಇನ್ನೂ ಉಳಿದುಕೊಂಡಿದೆ.

ಸರಸ್ವತಿಪುತ್ರರನ್ನ ಸಾರಸ್ವತ ಲೋಕ ಸದಾ ಸ್ಮರಿಸುತ್ತದೆ. ತುಂಬು ಜೀವನ ನಡೆಸಿದ ಗಟ್ಟಿ ವ್ಯಕ್ತಿತ್ವದ ಭೈರಪ್ಪನವರು, ಸರಸ್ವತಿಯ ಮಡಿಲಲ್ಲಿ ಸದ್ಗತಿ ಪಡೆಯಲಿ ಎಂಬ ಪ್ರಾರ್ಥನೆ.

- ಅಮಿತಾ ರವಿಕಿರಣ್, ಬೆಲ್‍ಫಾಸ್ಟ್.
ಅಮಿತಾ ರವಿಕಿರಣ ಅವರ ಸಂಗ್ರಹ.

**********************

’ಪರ್ವ’
ಚಿಕ್ಕವನಾಗಿದ್ದಾಗ ಓದಿದ ಪರ್ವದಲ್ಲಿನ ಪಾತ್ರಗಳು, ನನ್ನ ನೆಚ್ಚಿನ ಮಹಾಕಾವ್ಯ ಮಹಾಭಾರತವನ್ನು ಪೂರ್ತಿ humanise ಮಾಡಿದ ಕಾದಂಬರಿ. ಆದರೂ, ಕಥೆಗೆ, ಪಾತ್ರಗಳಿಗೆ ಒಂಚೂರೂ ಮರ್ಯಾದಾಭಂಗವಾಗದಂತೆ ಬರೆದ ಶ್ರೇಯಸ್ಸು ಭೈರಪ್ಪನವರಿಗೆ ಸಲ್ಲುತ್ತದೆ. ಯುದ್ಧ ಶುರುವಾಗುವ ಹೊತ್ತಿಗಿನ ಬಕ್ಕಾಗುತ್ತಿರುವ ತಲೆಯ ಭೀಮ, ವಯಸ್ಸಾಗುತ್ತಿರುವಾಗ ರಾಜ್ಯ ಗೆದ್ದು ಏನು ಮಾಡುವುದು ೫ ಹಳ್ಳಿ ಕೇಳು ಸಾಕು ಎಂದು ಕೃಷ್ಣನಿಗೆ ಹೇಳುವ ಯುಧಿಷ್ಠಿರ, ಮುದುಕನಾದರೂ ಮೋಹ ಬಿಡದ ಧೃತರಾಷ್ಟ್ರ ಮುಂತಾವರ ಪಾತ್ರಗಳನ್ನು ನಮ್ಮ ದೃಷ್ಟಿಯಲ್ಲಿ ಪೌರಾಣಿಕದಿಂದ ಐತಿಹಾಸಿಕ ಪಾತ್ರಗಳನ್ನಾಗಿಸಿದ್ದು ಸರಳವೇನಲ್ಲ. ಪರ್ವವನ್ನು ದೂರದರ್ಶನದಲ್ಲಿ ೮೦ರ ದಶಕದಲ್ಲಿ ಪ್ರಸಾರವಾದ ಶ್ಯಾಮ್ ಬೆನೆಗಾಲ್ ನಿರ್ದೇಶನದ ’ಭಾರತ್ ಏಕ್ ಖೋಜ್’ ನೊಂದಿಗೆ ಹೋಲಿಸುತ್ತದೆ ನನ್ನ ಮನಸ್ಸು.

ಯುದ್ಧ ನಡೆದಾಗಿನ ಒಂದು ಸನ್ನಿವೇಶ: ಸೈನಿಕರೊಂದಷ್ಟು ಜನ ಯುದ್ಧಕ್ಕೆ ಶುರುವಾಗುವ ಮುನ್ನ (ದಿನದ ಯುದ್ಧ ಮುಗಿಸಿಯೋ, ನೆನಪಾಗುತ್ತಿಲ್ಲ) ಬೆಂಕಿಯ ಸುತ್ತ ಕೈಕಾಯಿಸಿಕೊಳ್ಳುತ್ತ ಮಾತಾಡುತ್ತಿರುತ್ತಾರೆ.
ಸೈನಿಕ ೧: ಯಾರ ಮಧ್ಯ ಯುದ್ಧ ಈಗ?
ಸೈನಿಕ ೨: ಕುಂತಿಯ ಮಕ್ಕಳಿಗೂ, ಕೌರವರಿಗೂ ಮಧ್ಯ ಅಂತೆ, ರಾಜ್ಯ ಕೊಟ್ಟಿಲ್ಲವಂತೆ.
ಸೈನಿಕ ೩: ಅಲ್ಲ, ಈ ಕುಂತಿ ಅನ್ನುವವನು ಯಾರು, ಯಾವ ಊರಿನ ರಾಜ?

ಇನ್ನೂ ಎಷ್ಟೋ ಕಾದಂಬರಿಗಳನ್ನು ನಾನು ಓದಿಲ್ಲ. ಅದರ ತಪ್ಪನ್ನು ನಮ್ಮ ಸೋದರತ್ತೆಯ ಗಂಡನಿಗೆ ಕಟ್ಟಬೇಕೋ ಅಂತ ವಿಚಾರ ಮಾಡುತ್ತಿರುವೆ. ಈ ನಡುವೆ ಓದುವ ಚಟ ಕಡಿಮೆಯಾಗಿದೆ (ಆ ತಪ್ಪು ನನ್ನ ಸ್ವಂತದ್ದು). ಓದಬೇಕೆನ್ನುವ ಹುಮ್ಮಸ್ಸು ಮತ್ತೆ ಹುಟ್ಟುತ್ತಿದೆ, ಭೈರಪ್ಪನವರ ಪುಸ್ತಕಗಳನ್ನು ಹುಡುಕಬೇಕು ಇನ್ನು.

ಎಸ್ ಎಲ್ ಭೈರಪ್ಪನವರ ಆತ್ಮಕ್ಕೆ ಶಾಂತಿಯನ್ನು ಕೋರುವೆ.

- ಲಕ್ಷ್ಮೀನಾರಾಯಣ ಗುಡೂರ್.
**********************