ಕನ್ನಡ ನಾಡು, ಭಾಷೆ, ಉತ್ಸವ, ಮತ್ತು ಹೊಸವರ್ಷ …..

ಅನಿವಾಸಿಯ ಬಳಗಕ್ಕೆ ನಮಸ್ಕಾರ. 2025ರ ಹೊಸವರ್ಷದಲ್ಲಿಯ ನನ್ನ ಮೊದಲ ಸಂಚಿಕೆಗೆ ನಿಮ್ಮೆಲ್ಲರ ಸ್ವಾಗತ.  ಅನಿವಾಸಿ ಬಳಗದ ಉತ್ಸಾಹ ಹೆಚ್ಚುತ್ತಿರುವುದಕ್ಕೆ ಇತ್ತೀಚೆಗೆ ನಡೆದ ದಶಮಾನೋತ್ಸವ, ಹೊಸ ಸದಸ್ಯರುಗಳ ಆಗಮನ, ಬರವಣಿಗೆ ಇತ್ತ್ಯಾದಿಗಳೇ ಸಾಕ್ಷಿ.  ಇದರ ಜೊತೆಯಲ್ಲೇ, ಕೆಲವೇ ವಾರಗಳ ಹಿಂದೆ (ಕಳೆದ ವರ್ಷ ಅನ್ನಬಹುದಿತ್ತೇನೋ, ಆದರೆ ಎಷ್ಟೋ ದಿನ ಆದಂತೆ ಅನ್ನಿಸುವುದರಿಂದ ಬೇಡ ಅಂದುಕೊಂಡೆ) ಸಕ್ಕರೆಯ ನಾಡು, ಮಂಡ್ಯದಲ್ಲಿ ಹಿರಿಯ ಸಾಹಿತಿ ಶ್ರೀ ಗೋ ರು ಚನ್ನಬಸಪ್ಪನವರ ಅಧ್ಯಕ್ಷತೆಯಲ್ಲಿ ನಡೆದ 87ನೆಯ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲೆಂದೇ ನಮ್ಮ ಅನಿವಾಸಿ ಬಳಗದ ಪ್ರತಿನಿಧಿಯಾಗಿ ತೆರಳಿದ್ದರು ನಮ್ಮ ನವೀನ್.  ಅವರು ಬರೆದ ವರದಿ ಇಲ್ಲಿ ಕೆಳಗಿದೆ.  ಅವರೇ ತೆಗೆದ ಹಲವು ಚಿತ್ರಗಳೂ ಜೊತೆಯಲ್ಲಿವೆ - ಅದರಲ್ಲಿ ಪರಿಚಿತ ಮುಖಗಳಿವೆ, ನೋಡಿ.

ಜೊತೆಯಲ್ಲಿ ನಮ್ಮ ಗೋಪಾಲಕೃಷ್ಣ ಹೆಗಡೆಯವರ ಒಂದು ಕವನವಿದೆ, ಹೊಸವರ್ಷದ ಆಶಯಗಳೊಂದಿಗೆ. ಅವರದ್ದೇ ಮಾತಿನಲ್ಲಿ ಕವನದ ಹುಟ್ಟಿನ ಪರಿಚಯವೂ ಇದೆ.

ಕೊನೆಯ ಕೊಸರಿನಂತೆ, ಹೆಗ್ಡೆಯವರದೊಂದು ಚಿತ್ರಕ್ಕೆ ನನ್ನದೊಂದು ಕಿರು ಕವನವನ್ನೂ ಹಾಕಿಬಿಟ್ಟಿದ್ದೇನೆ, ತಡೆಯಲಾರದೆ. ಕ್ಷಮೆಯಿರಲಿ.

ಎಂದಿನಂತೆ ಓದಿ, ತಮ್ಮೆಲ್ಲರ ಮನೋಭಿಪ್ರಾಯವನ್ನು ತಿಳಿಸುವುದನ್ನು ಮುಂದುವರೆಸಿ. ಹೊಸವರ್ಷದ ಶುಭಾಶಯಗಳು.
- ಲಕ್ಷ್ಮೀನಾರಾಯಣ ಗುಡೂರ
*******************************************
೮೭ ನೇ ಕನ್ನಡ ಸಾಹಿತ್ಯ ಸಮ್ಮೇಳನ ೨೦೨೪, ಮಂಡ್ಯ

ಇತ್ತೀಚಿಗಷ್ಟೆ ೮೭ನೆ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಿತು. ಅದಕ್ಕಂತಲೇ ನಾನು ಭಾರತಕ್ಕೆ ಹೋಗಿದ್ದೆ. ಬಹಳ ವರ್ಷಗಳಿಂದಲೂ ಸಮ್ಮೇಳನದಲ್ಲಿ ಭಾಗಿಯಾಗುವ ತವಕವಿತ್ತು. ಆದರೆ ಆ ಸುಸಂದರ್ಭ ಈಗ ದೊರಕಿತು. ಬಹಳ ನಿರೀಕ್ಷಣೆಯಿಂದ ಸಿದ್ಧತೆ ಮಾಡಿಕೊಂಡಿದ್ದೆ. ಸಾಹಿತ್ಯ ಸಮಾರೋಪದಲ್ಲಿ ಸಾಕಷ್ಟು ಸಾಹಿತ್ಯದಬಗ್ಗೆ, ಕನ್ನಡ ಭಾಷೆ ಬಗ್ಗೆ ಕೇಳಿಬರುತ್ತದೆ, ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವಸಾಹಿತಿ, ಕವಿ, ಬರಹಗಾರರ ನಡುವೆ ನಡೆದಾಡಿ, ಅವರನ್ನು ಆಲಿಸಿ ಅವರಿಂದ ಪ್ರೇರಣೆ ಪಡೆಯುವುದಲ್ಲದೆ, ಕನ್ನಡ ಭಾಷಾಕ್ಷೇತ್ರದಲ್ಲಿ ಎಂಥಹ ಬೆಳವಣಿಗೆ ರೂಪಗೊಂಡಿದೆ ಎಂದು ಕಾಣುವ ಹಂಬಲ ಬೆಳಸಿಕೊಂಡಿದ್ದೆ. ಇದಕ್ಕನುಗುಣವಾಗಿ ಲೀಡ್ಸ್ನಲ್ಲಿ ಮಾಡುತಿದ್ದ ಕೆಲಸವನ್ನು ಮೊಟಕುಗೊಳಿಸಿ ಹತ್ತಿದೆ, ಯುನೈಟೆಡ್ ಕಿಂಗ್ಡಮ್ನ ರಾಯಭಾರಿಯಂತೆ ಭಾವಿಸಿ. ಯಾಕಂದರೆ ನನಗೆ ತಿಳಿದಿರಲಿಲ್ಲ ಬೆರ್ಯಾರಾದರು ಇಲ್ಲಿಂದ ಹೋಗುವರೇನೋ ಅಂತ. ಆದರೆ ಅಲ್ಲಿಗೆ ಹೋದಮೇಲೆ ಲಂಡನಿನಿಂದ ಬಂದಿದ್ದ ಇನ್ನಿಬ್ಬರನ್ನು ಭೇಟಿಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಮಹೇಶ್ ಜೋಶಿಯವರು ಕೆಲವೇ ದಿನಗಳ ಹಿಂದೆ ಬಂದು ನಮ್ಮೆಲ್ಲರಿಗೂ ಆಮಂತ್ರಣ ಕೊಟ್ಟಿದ್ದರು. ನಮ್ಮ ದೇಶವಲ್ಲದೆ ಕನ್ನಡಿಗರಿರುವ ಹತ್ತಾರು ರಾಷ್ಟ್ರಗಳಿಗೂ ಹೋಗಿ ವೈಯಕ್ತಿಕವಾಗಿ ಅಭಿಮಾನಿಗಳು ಭಾಗವಹಿಸಬೇಕೆಂದು ವಿನಂತಿಸಿಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಹಾಗು ಸಾಹಿತ್ಯ ಸಮ್ಮೇಳನ ಬರೇ ಕರ್ನಾಟಕದ ಕನ್ನಡ ಜನರ ತಾಣವಲ್ಲ, ಅವು ಪ್ರಪಂಚದ ಎಲ್ಲೆಡೆ ನೆಲಸಿ ತಮ್ಮ ತಾಯ್ನಾಡನ್ನ ಮರೆಯದ ಜನಸಮುದಾಯದ ಸಂಸ್ಥೆಗಳು ಎಂದು ಸಾರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ನಾನು ಗುರುವಾರ ೧೯ನೆ ತಾರೀಖಿನಂದೇ ಮಂಡ್ಯಕ್ಕೆ ಹೊರಟೆ. ವಿದೇಶದಿಂದ ಬರುವ ಎಲ್ಲ ಪ್ರತಿನಿಧಿಗಳಿಗೆಂದೇ ವಿಶೇಷ ವ್ಯವಸ್ಥೆ ಬಹಳ ದಿನಗಳಿಂದಲೇ ರೂಪಗೊಂಡಿತ್ತು. ಮೈಸೂರಿನ ಸಂದೇಶ್ ಪ್ರಿನ್ಸ್ನಲ್ಲಿ ನಮಗೆ ಉಳಿದುಕೊಳ್ಳುವ, ಅಲ್ಲಿಂದ ಪ್ರತಿದಿನ ಸಮ್ಮೇಳನ ನಡೆಯುವ ಮಂಡ್ಯಕ್ಕೆ ಹೋಗಿಬರುವ ಸಾರಿಗೆ ಏರ್ಪಾಟು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ನಿವೇದಿತಾ ಹೊನ್ನತ್ತಿಯವರ ನೇತೃತ್ವದಲ್ಲಿ ಬಹಳ ಅಚ್ಚುಕಟ್ಟಾಗಿ ಯೋಜಿಸಿ ಕಾರ್ಯಗತ ಮಾಡಲಾಗಿತ್ತು. ನನ್ನ ಭಾಷೆಯ ಸಮ್ಮೇಳನಕ್ಕೆ ನಾನೇ ಎಲ್ಲ ಖರ್ಚುಗಳನ್ನ ವಹಿಸಿಕೊಂಡು ಸರ್ಕಾರಕ್ಕಾಗಲಿ ಪರಿಷತ್ತಿಗಾಗಲಿ, ಸಮ್ಮೇಳನ ಸಂಚಾಲಕ ಇಲಾಖೆಗಾಗಲಿ ಋಣಿಯಾಗಬಾರದೆಂದಿದ್ದೆ. ಆದರೆ ನಮಗ್ಯಾವ ಕುಂದುಕೊರತೆಯಾಗದೆ, ಶುಲ್ಕವೂಯಿಲ್ಲದೆ ವಸತಿ, ಊಟ, ಜೊತೆಗೆ ಮನರಂಜನೆ, ಸಾಹಿತ್ಯ ರಸದೌತಣ ಉಣಿಸಿದ ಎಲ್ಲರಿಗೂ ನಾವು ಚಿರಋಣಿಯಾಗಿರಬೇಕು.

ಮಂಡ್ಯದಲ್ಲಿ ಅದೊಂದು ದೊಡ್ಡ ‘ಕುಂಭಮೇಳ’ ಅನ್ನಬೇಕು. ವಿಶಾಲ ಜಾಗ, ಲಕ್ಷಾಂತರ ಜನರು ಕೂರುವಂಥ ಸಭಾಂಗಣ, ಅದಕ್ಕೆ ತಕ್ಕಂಥ ಅದ್ದೂರಿ ಪ್ರವೇಶದ್ವಾರ, ದೃಷ್ಟಿಯಗಲಕ್ಕೂ ಮೀರಿದ ವೇದಿಕೆ, ಮಹಾಮಂಟಪ, ಅಲ್ಲಲ್ಲೇ ನೋಡಲನುಕೂಲವಾಗುವಂಥ ಕ್ಲೋಸ್ಡ್-ಸರ್ಕ್ಯೂಟ್ ಟಿವಿ, ಹೊರಗಿದ್ದರೂ ಕೇಳಿಸಿಕೊಳ್ಳುವಂಥ ಧ್ವನಿ ವ್ಯವಸ್ಥೆ, ಇವೆಲ್ಲ ದೊಡ್ಡ ಪ್ರಮಾಣದ ವಿನ್ಯಾಸವೆಂತಲೇ ಭಾವಿಸಬೇಕು.

ಸಮ್ಮೇಳನದ ವಿಶೇಷತೆ ಅದರ ಸಭಾಧ್ಯಕ್ಷರಾದ ನಾಡೋಜ ಗೊ ರು ಚನ್ನಬಸಪ್ಪನವರು. ೯೪ ವರ್ಷಗಳಾಗಿದ್ದರೂ ಅವರ ಮಾತಿನಲ್ಲಿದ್ದ ಸ್ಪಷ್ಟತೆ, ಶಬ್ದಭಂಡಾರ, ನಿರರ್ಗಳತೆ ಎಂತಹವರನ್ನೂ ಮೋಡಿ ಮಾಡುವಂಥದು. ನೇರವಾಗಿ ಸರ್ಕಾರಕ್ಕೆ ಮತ್ತು ವಾಣಿಜ್ಯ ಉದ್ಯಮಿಗಳಿಗೆ ಕರೆ ಕೊಟ್ಟರು. ಕನ್ನಡ ಭಾಷೆ ಉಳಿಯಲು ಬೆಳೆಸಲು ಅವರಿಂದ ಯಾವ ತರಹದ ಉತ್ತೇಜನ ದೊರಕಬೇಕು, ಅದರಲ್ಲೂ ಆರ್ಥಿಕ ಹೊಣೆ ವಹಿಸಿಕೊಳ್ಳಬೇಕೆಂದು. ಕನ್ನಡ ವಿಶ್ವವಿದ್ಯಾನಿಲಯ, ಕನ್ನಡ ಶಾಲೆಗಳು ಮುಚ್ಚುವಂಥ ಸ್ಥಿತಿಯನ್ನು ತಡೆಗಟ್ಟಲು ಸರ್ಕಾರ ಯಾವ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಮೇಲಿದ್ದ ರಾಜಕೀಯ ಮುಖಂಡರಿಗೆ ಮನದಟ್ಟು ಮಾಡಿದರು. ಕನ್ನಡ ಪ್ರಾಚೀನ ಭಾಷೆಯಾಗಿದ್ದರೂ ಇಂದಿನ ತಂತ್ರಜ್ಞಾನ ಅಳವಡಿಸಿಕೊಂಡು, ಎಲ್ಲರಿಗೂ, ಅದರಲ್ಲೂ ಪ್ರಚಲಿತ ಯುವಪೀಳಿಗೆಗೆ ತಟ್ಟುವಂಥ ಮಾರ್ಪಾಟು ಮಾಡಿಕೊಳ್ಳಬೇಕು ಎಂದು ಕರೆಯಿತ್ತರು. ಇದರ ಜೊತೆಗೆ ಅವರು ಮತ್ತಿತರ ಮಹತ್ತರ ವಿಷಯಗಳನ್ನೂ ಚರ್ಚಿಸಿದರು. ಶಿಕ್ಷಣ ಮಾಧ್ಯಮ, ಅಂತರ-ರಾಜ್ಯ ಭಾಷಾವಿನಿಮಯ, ಕನ್ನಡ ಕಲಿಕಾ ಕೇಂದ್ರಗಳು, ಪರಿಸರ ಸಂರಕ್ಷಣೆ, ಧರ್ಮದ ದುರುಪಯೋಗ, ಮಹಿಳಾ ಸಮಾನತೆ ಹಾಗು ಸ್ವಾಯತ್ತತೆ, ಕನ್ನಡಿಗರ ಉದ್ಯೋಗ ಬದುಕು, ಪ್ರವಾಸೋದ್ಯಮ, ಮುಂತಾದ ವಿಚಾರಗಳನ್ನು ಎತ್ತಿ ತೋರಿಸಿ ಆ ದಿಕ್ಕಿನಲ್ಲಿ ಏನೆಲ್ಲಾ ಕೆಲಸಕಾರ್ಯಗಳು ನಡೆಯಬೇಕಾಗಿದೆ ಎಂದು ವಿವರಿಸಿದರು.

ಕೆಲವರ ಭಾಷಣಗಳು ತೀರ್ವವಾಗಿದ್ದವು. ಮುಖ್ಯಮಂತ್ರಿ ಚಂದ್ರುರವರು ಸಭಾಧ್ಯಕ್ಷರು ಉಲ್ಲೇಖಿಸಿದ ವಿಷಯಗಳಲ್ಲಿ ಸರ್ಕಾರ ವರ್ಷದಿಂದ ವರ್ಷಕ್ಕೆ ಅನುಸರಿಸುತ್ತಿರುವ ನಿರ್ಲಕ್ಷರೀತ್ಯಕ್ರಮವನ್ನು ಕಟುವಾಗಿ ರಾಜಕೀಯ ಮುಖಂಡರ ಮುಂದೆಯೇ ಟೀಕಿಸಿದರು. ಪ್ರತಿ ಸಮ್ಮೇಳನದಲ್ಲೂ ದೊಡ್ಡ ದೊಡ್ಡ ಭಾಷಣಗಳು ಆಗುತ್ತವೆ, ಮುಂದೆ ಮಾಡಬೇಕಾದ ಅಭಿವೃದ್ಧಿ ಕೆಲಸಗಳ ನಿರ್ಣಯವೂ ಆಗುತ್ತೆ, ಆದರೆ ಸಮ್ಮೇಳನ ತದನಂತರ ಅವೆಲ್ಲ ಒಣಆಶ್ವಾಸನೆಗಳಾಗೆ ಉಳಿಯುತ್ತವೆ ಎಂದು ಆಕ್ಷೇಪಿಸಿದರು.

ಅನೇಕ ಕವಿಗೋಷ್ಠಿಗಳು, ಉಪನ್ಯಾಸಗಳು, ಸಮಾಲೋಚನೆಗಳು ಮೂರು ದಿನಗಳಲ್ಲೂ ಹಬ್ಬಿಕೊಂಡು ಕಿಕ್ಕಿರಿದು ತುಂಬಿದ ಮಂಡ್ಯ ಜನಸಮೂಹಕ್ಕೆ ಒಂದು ರೀತಿಯ ಜ್ಞಾನೋದಯ ಉಂಟುಮಾಡಿತು. ಬೆಳಿಗ್ಗೆಯಿಂದ ಸಂಜೆವರೆಗೂ ಈ ಕಾರ್ಯಕ್ರಮಗಳಾದ ಮೇಲೆ ಮನರಂಜನೆ ಸಾಗುತಿತ್ತು. ಒಂದು ದಿನ ಸಾಧು ಕೋಕಿಲ, ಮತ್ತೊಂದು ಸಂಜೆ ಅರ್ಜುನ ಜನ್ಯ ನೆರೆದಿದ್ದ ಯುವಕ ಯುವತಿಯರನ್ನು ಕುರ್ಚಿ ಮೇಲೆಯೇ ನಿಂತು ಕುಣಿದಾಡುವಂತೆ ಮಾಡಿದರು.

ಪುಸ್ತಕ ಮಳಿಗೆಗಳು ಮತ್ತೊಂದು ವೈಶಿಷ್ಟತೆ. ಕೊಂಡುಕೊಳ್ಳುವರಿಗಂತೂ ಅದೊಂದುಹಬ್ಬವೇ. ಬಹುಷಃ ಇಲ್ಲಿವರೆಗೆ ಪ್ರಕಟವಾಗಿರುವ ಎಲ್ಲ ಕಾದಂಬರಿಗಳು ನಾಟಕಗಳುಕಾವ್ಯಗಳು, ಇತರೆ ಅನೇಕ ಬರವಣಿಗಗಳು ಮಳಿಗೆಗಳಲ್ಲಿ ರಾರಾಜಿಸುತ್ತಿದ್ದವು. ಪ್ರಕಾಶಕರುಅಲ್ಲಿ ತಮ್ಮ ತಮ್ಮ ಪ್ರಕಟಣೆಗಳನ್ನು ಸಾಲು ಸಾಲು ಅಂಗಡಿಗಳಲ್ಲಿ ಬಿತ್ತರಿಸಿ ೫೦%ಗೂ ಮಿಗಿಲಾಗಿ ರಿಯಾಯಿತಿ ಕೊಟ್ಟು ಓದುಗರನ್ನು ಪ್ರೇರೇಪಿಸುತ್ತಿದ್ದರು. ಅಷ್ಟೊಂದು ಪುಸ್ತಕಗಳು ಒಂದೇ ಜಾಗದಲ್ಲಿ ಪ್ರದರ್ಶನವಾದದನ್ನು ಬಹುಷಃ ನಾನು ನೋಡಿರಲಿಲ್ಲ.

ವಿದೇಶಿ ಕನ್ನಡಿಗರ ಸಂಘಟನೆ ಈ ಸಮ್ಮೇಳನದ ಮತ್ತೊಂದು ವೈಶಿಷ್ಟ್ಯಪೂರ್ಣಕಾರ್ಯಕ್ರಮ. ಯುರೋಪ್, ಅಮೇರಿಕಾ, ಆಸ್ಟ್ರೇಲಿಯಾ ದೇಶಗಳ ಜೊತೆಗೆ ಅನೇಕ ಏಷ್ಯಾರಾಷ್ಟ್ರಗಳ ಕನ್ನಡಿಗರು ನೆರೆದಿದ್ದರು. ಅವರೊಡನಾದ ಸ್ನೇಹ-ಪರಿಚಯ ಪರಸ್ಪರಕ್ರಿಯೆ ಬಹಳ ಕಾಲ ಉಳಿಯುವಂಥದು. ನಾನು ಬಹಳಷ್ಟು ವಿದೇಶಿ ಕನ್ನಡಿಗರನ್ನು ಪರಿಚಯಿಸಿಕೊಂಡು ಅವರ ದೇಶಗಳಲ್ಲಿ ಜರುಗುತ್ತಿರುವ ಕನ್ನಡ ಕಲಿಸುವಂಥ ಶಾಲೆಗಳ ಬಗ್ಗೆ, ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡೆ. ನಾವು ರಾಜ್ಯ ದೇಶ ಬಿಟ್ಟುಹೋಗಿದ್ದರೂ, ನಮ್ಮ ಕನ್ನಡ ನಮ್ಮೆಲ್ಲರನ್ನೂ ಒಂದುಗೂಡಿಸುತ್ತಿರುವ ಪರಿ ಎಲ್ಲರಿಗೂ ಅಗಾಧ ಸಂತಸ ತಂದಿರುವುದನ್ನ ಎಲ್ಲರಲ್ಲೂ ಕಂಡೆ. ಮುಂದೆ ನಾವೆಲ್ಲ ಸೇರಿ ಯಾವ ರೀತಿಯ ಕೊಡುಗೆ ಕೊಡಲು ಸಾಧ್ಯ ಅನ್ನುವುದನ್ನು ಕೂಲಂಕಶವಾಗಿ ಚರ್ಚಿಸಿ ಕಾರ್ಯಗತ ಮಾಡುವುದಕ್ಕೆ ಅನುವು ಮಾಡಿಕೊಟ್ಟಿದೆ ಕನ್ನಡ ಸಾಹಿತ್ಯ ಸಮ್ಮೇಳನ.

ಒಟ್ಟಿನಲ್ಲಿ ಈ ಸಮ್ಮೇಳನ ನನಗೊಂದು ಅಪೂರ್ವ ಅನುಭವ!

- ನವೀನ
*******************************************
ಆಕಾಶದ  ಆಶೆ -ಹೊಸ ವರುಷಕೆ!

(ಮುನ್ನುಡಿ: ಹೊಸವರ್ಷವೆಂದರೆ ನನಗೆ ಅದರಲ್ಲಿ ಕಂಡಿದ್ದು ಬರೇ ಅಂದಿನ ಮೈಮರೆತಂತ ಗಳಿಗೆಗಳಲ್ಲ; ಆದರೆ ಹಿಂದಿನ ದಿನಗಳ ನೋವು, ಮುಂದಿರುವ ಅನಿರ್ದಿಷ್ಟದ ಚಿಂತೆ. ಹಾಗೆಯೇ ಸಮತೋಲನದಲ್ಲಿ ಅವಲೋಕಿಸಿದಾಗ, ನನ್ನ ಮನಸ್ಸಿನಲ್ಲಿ ಆನಂದದಕ್ಕಾಗಿ ಆಕಾಶ ಬಯಸಿದ್ದೇನಿರಬಹುದೆಂಬ ಆ ಅವಲೋಕನದ ಚಿತ್ರಣ ಇಲ್ಲಿರಬಹುದು, ನೋಡಿ ತಿಳಿಸಿ; ಆದಿ-ಅಂತ್ಯಗಳ ನಡುವೆ ತುಂಬಿ ಸಂಬಂಧ ಕಲ್ಪಿಸಿದ್ದು ಅಂತರಂಗದ ಗಂಗೆ ಹರಿದು ಮಂದಹಾಸದಲ್ಲಿ ಮನೆಮಾಡಿದಂತಿತ್ತು, ಎನ್ನುವ ಭಾವವನ್ನು ಹಿಡಿಯಲು ಮಾಡಿದ ನನ್ನ ಕಿರು ಪ್ರಯತ್ನ, ನಿಮಗೆ ಹೇಗನ್ನಿಸಿತೋ ಕೇಳುವ ಕುತೂಹಲ! ಸಹನೆಯಿಂದ ಓದಿ ಪ್ರತಿಕ್ರಿಯಿಸುವಿರೆಂದು ನಂಬಿದ್ದೇನೆ – ಗೋಪಾಲಕೃಷ್ಣ ಹೆಗ್ಡೆ)

*****************************

ನೋವಿನಲ್ಲಿ ಕೂಡಿತ್ತೆ ೨೪ರ ಇತಿಹಾಸ?
ಮತ್ತೆ
ನಾಡೆಲ್ಲ ನೋಡಲಿಕ್ಕಿದೆ ೨೫ರ ಪರದೆ-
೨೬ಕ್ಕೆ ಮೊದಲು ಪರದಾಟ,
ನಂಬಲಾರದ ಸತ್ಯ
ಗೊತ್ತಿದ್ದರೂ
ಮೊದಲ ದಿವಸವೇ ಹೊಸವರುಷವನ್ನೆಲ್ಲ
ಬೊಗಸೆಯಲ್ಲಿ ಬಿಗಿದಿಟ್ಟ- ಒಂದನೇ ( ಒಂದೇ)
ದಿನದ ಇದು ಎಂಥಾ ವಿಪರ್ಯಾಸ-ಆಭಾಸ
ಸುಗ್ಗಿ ಕೋಲಾಟ !

ಯಾಕೋ ಈ ಮೌನದಲಿ
ಮೂಡಿದೆ ಮಂದಹಾಸ
- ಹಾರಿರುವೆ ಗರಿಬಿಚ್ಚಿ ಅರಳಿದ
ನೀ,
ನನ್ನ ನೀಲಿ ಆಕಾಶದ ಆಶೆ
ತೋರಿಸಿದೆ ದಿಗಂತ- ಅವಕಾಶ
ಮತ್ತೆ- ಮತ್ತೆ
ಹೀಗೆ
ಆಶಿಸಿಸಿದೆ ನೀಲಿತುಂಬಿರಲಿ - ಶುಭ್ರ
ಅಂತರಂಗ ಅದು
ನಿತ್ಯಾನಂದ, ಕಾವ್ಯಾನಂದದಂತಿರಲಿ
ಸದಾ ಈ ಬ್ರಹ್ಮಾಂಡ ಗುಂಡಿ
ಬಂಡಿ -
ಉಕ್ಕುತ್ತಿರಲಿ
ಸದಾ ಚೆಂದ ತಂದ ಅದು
ಬ್ರಹ್ಮಾನಂದ ಆಗಲಿ,
ಆದಿ - ಅಂತ್ಯಗಳ
ನಡುವೆ
ತುಂಬಿ ಈ,
ಅಂತರಂಗ - ಗಂಗೆ
ಹರಿಯಲಿ ಹರಿದ್ವಾರ
ವರ್ಷತುಂಬ 🙏💐🎊

- ಗೋಪಾಲಕೃಷ್ಣ ಹೆಗ್ಡೆ
*******************************************
ದೇವ - ದಾನವರಿಲ್ಲ, ಸಮುದ್ರಮಥನವೂ ಇಲ್ಲ;
ಹಾಲಾಹಲವಂತೂ ಮೊದಲೇ ಇಲ್ಲ.
ಲಕ್ಷ್ಮೀ ಚಂದ್ರರು ಇಲ್ಲ,
ಧನ್ವಂತರಿಯ ಸುಳಿವಿಲ್ಲ;
ಅಮೃತ ಕಲಶವದೊಂದೇ ಇರುವುದಲ್ಲ!
ಕೇಳು ಜನಮೇಜಯ, ಒಳ್ಳೆಯದ ಹೊರತರಲು ಉಳಿದೆಲ್ಲ ಬೇಕಿಲ್ಲ,
ಮನವದೊಂದಿದ್ದರೆ ಸಾಕಲ್ಲ!

- ಲಕ್ಷ್ಮೀನಾರಾಯಣ ಗುಡೂರ.
*******************************************

'ಬೇವು-ಬೆಲ್ಲ' ದ ಯುಗಾದಿ 

ಸುತ್ತಮುತ್ತಲಿನ ಋಣಾತ್ಮಕ ಬೆಳವಣಿಗೆಗಳು ನಮ್ಮನ್ನಾವರಿಸಿರುವ ಈ ಸಂಧರ್ಭದಲ್ಲಿ, ಇನ್ನು ಕೆಲವೇ ದಿನಗಳಲ್ಲಿ ಯುಗಾದಿ ಹಬ್ಬವಿದೆ  ಎಂಬುದು ಕೆಲವರಿಗೆ ಮರೆತು ಹೋಗಿದ್ದರೆ ಯಾವುದೇ ಆಶ್ಚರ್ಯವಿಲ್ಲ.ಇದೇ ತಿಂಗಳ ಕೊನೆಯಲ್ಲಿ ನಡೆಯಬೇಕಾಗಿದ್ದ ಅನೇಕ ಯುಗಾದಿ ಕಾರ್ಯಕ್ರಮಗಳು ರದ್ದಾಗಿವೆ. ಸಾಮಾಜಿಕ ಪ್ರಾಣಿಗಳಾಗಿರುವ ನಾವೆಲ್ಲರೂ, ನಮ್ಮ ಗುಣಕ್ಕೆ ವಿರುದ್ಧವಾಗಿ ಸಾಮಾಜಿಕವಾಗಿ ಪ್ರತ್ಯೇಕವಾಗಿ ಮನೆಯ ನಾಲ್ಕು ಗೋಡೆಗಳಿಗೆ ನಮ್ಮನ್ನು ಸೀಮಿತಗೊಳಿಸಿಕೊಳ್ಳಬೇಕಾಗಿರುವದು ಇಂದಿನ ಸ್ಥಿತಿ. ಪ್ರತೀ ವರುಷ  ಬೇವು ಸಾಂಕೇತಿಕವಾಗುತ್ತಿತ್ತು ಆದರೆ  ಈ ವರುಷದ ಯುಗಾದಿಯ ಬೇವು-ಬೆಲ್ಲದಲ್ಲಿ ಬೇವಿನ ಪ್ರಮಾಣ ಸ್ವಲ್ಪ ಹೆಚ್ಚಾದಂತೆಯೇ ಕಾಣುತ್ತಿದೆ. ಜೀವನದ ಸಿಹಿ ಕಹಿಗಳನ್ನು ಸಮನಾಗಿ ಕಾಣಬೇಕು ಎಂಬ ಹಬ್ಬದ ಪ್ರತೀತಿಯನ್ನು ನಾವು ಈ ವರುಷ ಸಾಮೂಹಿಕವಾಗಿ ಪಾಲನೆಗೆ ತರಲೇಬೇಕಾಗಿದೆ. ಈ ಸಂಧರ್ಭದಲ್ಲಿ  ಡಿ.ವಿ. ಜಿ ರವರ ಒಂದು ಮುಕ್ತಕ ನೆನಪಾಗುತ್ತಿದೆ.  

ವಹಿಸು ಕೆಲ ಭಾರಗಳ; ಸಹಿಸು ಕೆಲ ನೋವುಗಳ ।
ಪ್ರಹರಿಸರಿಗಳನನಿತು ಯುಕ್ತಗಳನರಿತು ॥
ಮಹಿಯ ನಾಟಕದಿ ನೀಂ ಮನಸಿಟ್ಟು ಕುಣಿಕುಣಿದು ।
ವಿಹರಿಸಾತ್ಮಾಲಯದಿ- ಮಂಕುತಿಮ್ಮ ॥

ಬದುಕಿನಲ್ಲಿ ಕೆಲವು ಭಾರಗಳನ್ನು ಹೊತ್ತುಕೋ, ಕೆಲವು ನೋವುಗಳನ್ನು ಸಹಿಸಿಕೋ, ನಿನ್ನ ಶತ್ರುಗಳನ್ನು ಆದಷ್ಟು ಬಗ್ಗುಬಡಿ, ಬದುಕುವಾಗ ಯುಕ್ತ-ಅಯುಕ್ತಗಳನ್ನು ಅರಿತು, ನಿನಗೆ ವಹಿಸಿದ ಈ ಭೂಮಿಯ ಮೇಲಿನ ನಾಟಕದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು, ನಿನ್ನ ಪಾತ್ರವನ್ನು ವಹಿಸು. ಹಾಗೆ ಮಾಡುವಾಗ ನೀನು ಆತ್ಮದ ಆಲಯದಲ್ಲಿ ವಿಹರಿಸು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ(ರಸಧಾರೆ-೯೦೪). ಅದರಂತೆ ನಾವು ನಮ್ಮ ಶತ್ರುವನ್ನು ಅರಿತುಕೊಂಡು, ಅದನ್ನು ಬಗ್ಗು ಬಡೆಯಲು ಸಾಮಾಜಿಕ ಪ್ರತ್ಯೇಕತೆ (Social Distancing) ಎಂಬ ಭಾರವನ್ನು ಹೊರಬೇಕಾಗಿದೆ, ಕೆಲವು ನೋವುಗಳನ್ನು ಸಹಿಸಬೇಕಾಗಿದೆ ಮತ್ತು  ಈ ವರುಷದ ಯುಗಾದಿಯನ್ನು ಮನೆಗಷ್ಟೇ ಸೀಮಿತಗೊಳಿಸಿ ಆಚರಿಸಬೇಕಾಗಿದೆ. ಈ ಸಂಧರ್ಭದಲ್ಲಿ ನಂಬಿಕೆಯ ಬೆಲ್ಲವ ನೆನೆದು, ಮಾನವೀಯತೆಗೆ ಮೆರಗು ತರಲು ಸದಾವಕಾಶವೆಂದು ತಿಳಿದು ನಮ್ಮ ಕೈಲಾದಷ್ಟು ಸಮಾಜಮುಖಿಯಾಗುವುದರ ಮೂಲಕ ಯುಗಾದಿಯನ್ನು ಆಚರಿಸೋಣ. ನಿಮಗೆಲ್ಲರಿಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಷಯಗಳು

ಯುಗಾದಿ ಹಬ್ಬದ ಪ್ರಯುಕ್ತ ಈ ವಾರ ‘ಅನಿವಾಸಿ’ಯಲ್ಲಿ ಗೋಪಾಲಕೃಷ್ಣ ಹೆಗ್ಡೆ ರವರು ಬರೆದಿರುವ ಲೇಖನ ಮತ್ತು ಅನಿತಾ ಹೆಗ್ಡೆ ರವರು ಬರೆದಿರುವ ಒಂದು ಕವನವನ್ನು ಪ್ರಕಟಿಸುತ್ತಿದ್ದೇವೆ, ಓದಿ ಪ್ರೋತ್ಸಾಹಿಸಿ. 
                                                                                (ಸಂ : ಶ್ರೀನಿವಾಸ ಮಹೇಂದ್ರಕರ್)

೨೦೨೦ರ ಮೌನ ಯುಗಾದಿಯ ವಿಚಾರಗಳು 

Image result for karona virus on briton
ಗೋಪಾಲಕೃಷ್ಣ ಹೆಗ್ಡೆ

ವರ್ಷಕ್ಕೊಮ್ಮೆ ಬರುವ ದಕ್ಷಿಣ  ಭಾರತೀಯ ಹಬ್ಬಗಳಲ್ಲಿ ಒಂದಾದ  ಯುಗಾದಿ ಹಬ್ಬ, ಈ ವರ್ಷ ಕೇವಲ ಸಾಂಕೇತಿಕವಾಗಿ ಸಂಭವಿಸುತ್ತಿದೆ, ಸಂಭ್ರಮದಲ್ಲಿ ಅಲ್ಲ . ಯಾವುದೇ ವಸ್ತು ಅಥವಾ ಘಳಿಗೆ – ಘಟನೆಯನ್ನು, ಸಾಂಕೇತಿಕವಾಗಿ ಅನುಭವಿಸುವದು, ಅಂದರೆ ಅದನ್ನು ಹಾಗೆ ಕಲ್ಪಿಸಿಕೊಳ್ಳುವದು ಅಥವಾ ಅದು ಅಂದರೆ ಏನು ಎಂದು ವಿಚಾರಿಸುವದು, ಚರ್ಚಿಸುವದು, ಎಲ್ಲ   ಕೇವಲ ಮನೋಮಂಥನದ ಚಟುವಟಿಕೆಯೇ ಸರಿ. ಆದರೇನಂತೆ ?

ಈ ಯುಗಾದಿ, ಕಾವಿಡ್-೧೯ ಎಂಬ ವೈರಾಣು, ಕಳೆದ ೩-೪ ತಿಂಗಳಲ್ಲಿ, ಈ ನಮ್ಮ ಮನುಕುಲದ ಲಕ್ಷಾಂತರ  ಜನರನ್ನು ಮುಖ್ಯವಾಗಿ, ಅವರ ಶ್ವಾಸಕೋಶವನ್ನೇ ತನ್ನ  ಭಯಂಕರ ವಜ್ರಮುಷ್ಠಿಯಲ್ಲಿ ಹಿಡಿದು ಕಾಡಿ ಕೊಲ್ಲಲು, ಜಗತ್ತಿನಾದ್ಯಂತ ದಿನೇ- ದಿನೇ, ಬೆಳೆದುಕೊಳ್ಳುತ್ತಿರುವದು ಒಂದು ಪ್ರಳಯದ ಚಿತ್ರಣವೇ ಸರಿ. ಪ್ರಾಣದಾತ ವಾಯುವಿನ ಸಂಬಧವನ್ನೇ ಧಿಕ್ಕರಿಸಿಯೂ, ಅವನಿಗಿಂತ ಪ್ರಬಲನಾಗಿ ಹರಡಬಲ್ಲೆನೆಂಬ  ಅಹಂನಲ್ಲಿ, ಹೂಂಕರಿಸಿ ಘರ್ಜಿಸುತ್ತಿರುವ, ಕಣ್ಣಿಗೂ ಕಾಣಸಿಗದ ಈ ವೈರಾಣು, ವಾಯುವಿನ ಕಾರ್ಯಕೇಂದ್ರವಾದ ಶ್ವಾಸಕೋಸಕ್ಕೇ ಧಕ್ಕೆಯಿಟ್ಟು, ಅವನನ್ನು ಹೀಯಾಳಿಸಿ ಕುಣಿಯುತ್ತಿರುವ ಈ ಸಂದರ್ಭ ಒಂದು ಪ್ರಳಯ ಸಂಕೇತವೇ -ಅಥವಾ  ಸ್ಮಶಾನದ ಮಹಾ ಪ್ರೇತವೇ ಎಂದೆಲ್ಲ ಪರಿಗಣಿಸಿದಲ್ಲಿ ಉತ್ಪ್ರೇಕ್ಷೆಯೇನೂ ಅಲ್ಲ ಅನ್ನಿಸಿದೆ.

ಮೇಲೆ ಅಂದುಕೊಂಡಂತೆ ಗಾಳಿಯ ಸಂಭಂಧವಿಲ್ಲದೆಯೂ , ಬಿರುಗಾಳಿಯಂತೆ ದೇಶ ದೇಶಗಳಿಗೂ ಹರಡುತ್ತಿರುವ ಈ ವೈರಾಣು ಖಾಯಿಲೆ, ನಾವಿಂದು ಹಂಬಲಿಸಿ ಬಂದು ತಂಗಿದ    ಯುನೈಟೆಡ್ ಕಿಂಗ್ಡಮ್ ಅನ್ನು ಸುತ್ತಿಕೊಳ್ಳುತ್ತಿರುವಂತ  ಈ ಉಗ್ರಚಿತ್ರಣದಲ್ಲಿ, ಈ ವೈರಾಣುವೆಂಬ  ಖಳನಾಯಕ-ಚಿತ್ರಕಾರ, ಮಾಮೂಲಾಗಿ ನಡೆದುಕೊಂಡು ಹೋಗಬೇಕಾಗಿದ್ದ ದಿನನಿತ್ಯದ ಕಾರ್ಯಾಚರಣೆಗಳನ್ನೆಲ್ಲವನ್ನು ಅವನ ಕಪ್ಪುಬಣ್ಣ ಒಂದರಲ್ಲೇ ಗಾಬಳಿಸಿ ನುಂಗಿ, ಅವೆಲ್ಲ ಒಂದೊಂದಾಗಿ ಅಳಿಸಿ ಹೋಗುವಂತೆ ಮಾಡುತ್ತಿರುವ ತನ್ನ ಕಾರ್ಯಾಚರಣೆಯಲ್ಲಿ, ನಮ್ಮಂತ ಅನಿವಾಸಿಗರೆಲ್ಲ ಜಗತ್ತಿನಾದ್ಯಂತ, ಅಲ್ಲಲ್ಲಿ ಹಮ್ಮಿಕೊಂಡಿದ್ದ ಯುಗಾದಿ ಹಬ್ಬಕ್ಕೇ ಕಪ್ಪು ಸುರಿದುಬಿಟ್ಟಿದ್ದಾನೆ. ಹೀಗಾಗಿ ಈ ೨೦೨೦ರ ವರ್ಷದಲ್ಲಿ ಯುಗಾದಿ ಸಂಭ್ರಮ ಇಲ್ಲವಾಯಿತು, ಸಡಗರ ಸುಮ್ಮನಾಯಿತು. ಈ ಮೌನದ ಗಳಿಗೆಯಲ್ಲಿ  ರಾಗ ಚಾರುಕೇಶಿ ಸಮಂಜಸವಾಗಿದ್ದರೂ, ಸುಮ್ಮನಾದ ಈ ಯುಗಾದಿಯ(ಸಮಯದ)ನೆನಪಿನಲ್ಲಿ ಅದರ ಸಾಂಕೇತಿಕವೋ ಎಂಬಂತೆ ಒಂದು ‘ಹೊಸರಾಗ’ ಕಲ್ಪಿಸಿಕೊಳ್ಳಲು ಪ್ರಯತ್ನಿಸಿದರೆ, ಅದನ್ನು ಈ ಸಮಯ ಪ್ರಳಯಕಾಲೀನ ಎಂದು ಇಲ್ಲಿಯವರೆಗೆ ಚಿತ್ರಿಸಿದ್ದಕ್ಕಾಗಿ, ಈ ನನ್ನ ಪ್ರಯತ್ನಅಪ್ರಸ್ತುತ  ಎಂದು ಜರಿದುಬಿಟ್ಟೀರೇನೋ  ಎಂಬ  ಭಯ, ಬರೆಯುವ ನನ್ನ ಈ ಲೇಖನಿಯನ್ನು ಕಾಡಿರುವುದು ಓದುಗರಿಗೆ  ಕಾಣಸಿಗದಿರಬಹುದು! ಹತ್ತಿರದ ಸ್ನೇಹಿತರೋ ಅಥವಾ ಸಂಬಂಧಿಯೊಬ್ಬರೋ ಅಕಸ್ಮಾತ್ ಅನಾರೋಗ್ಯರು ಎಂಬ ಸುದ್ದಿಯ ಭಯಾನಕ ಸ್ವಪ್ನ ನಿಜವಾದ ಕ್ಷಣಗಳು,  ನಮ್ಮನ್ನೆಲ್ಲ ಇಂದಿನ ದಿನಗಳಲ್ಲಿ ಬೆನ್ನತ್ತು ಕಾಡಿವೆ ಎಂದು ಬಹಿರಂಗದಲ್ಲಿ ಸೂಚಿಸದೆಯೇ, ನನ್ನ ಈ ಮೇಲಿನ ಹೊಸರಾಗದ  ಆಸೆ, ಅಕಾಲಿಕವಾದರೂ ಆಂತರಂಗಿಕ ಮತ್ತು ಆದರಣೀಯ ಎಂಬ ಯೋಚನೆ, ನಿಮ್ಮೆಲ್ಲ ಓದುಗರ  ಚಿತ್ರಣಕ್ಕೂ ಬಂದೀತೆ? ದಿಬ್ಬಣವಿಲ್ಲದ ಇಂತಹ ದಿನಗಳು ಕೇವಲ ದಾರಿದ್ರ್ಯದ , ದಾರುಣ ಕ್ಷಣಗಳೇ -ಮತ್ತೇನು ಎಂಬುದೂ, ಇನ್ನೊಂದು ಯೋಚನೆ. 

ಪ್ರತಿವರ್ಷ ಯುಗಾದಿಯ ಸಂದರ್ಭದಲ್ಲಿ ಹಲವಾರು ಸಡಗರವರ್ಣಿತ ಬರಹಗಳನ್ನು ಓದಿದಾಗಲೆಲ್ಲ, ಜಗತ್ತಿನ ಬೇರೊಂದು ಕಡೆ, ಹಲವಾರುಕಡೆ ನಡೆಯುತ್ತಿದ್ದ, ರೂಪಿತವಾಗುತ್ತಿದ್ದ ಅಮಾನುಷಿಕ ಕ್ರತ್ಯಗಳ ಬೆಂಕಿಯನ್ನು, ಅದರಿಂದ ಮುಸುಕಿದ ಹೊಗೆಯನ್ನು, ಈ ಸಡಗರವರ್ಣಿತ ಬರಹದೊಂದಿಗೆ ಜೊತೆ-ಜೊತೆಯಾಗಿ ಸೇವಿಸಲಾಗದೆ ಚಡಪಡಿಸಿದ್ದುಂಟು. ಆದರೂ ಅಂದಿನ, ಇಂದಿನ ಮತ್ತು ಮುಂದೆಂದಿನ ಸಡಗರದ ಆಚರಣೆ ಅಸಂಗತವೇನೂ ಅಲ್ಲವೇ ಅಲ್ಲ; ಆದರೆ ಮೇಲೆ ಸೂಚಿಸಿಕೊಟ್ಟ ‘ಕಾಡಿದ-ಕಾಣಸಿಗದ ‘ ವಿನಮ್ರಿತ ರೀತಿಯ ಭಾವನೆಗಳನ್ನೂ, ಸಡಗರದಂತರಂಗದಲ್ಲಿ ಅಳವಡಿಸಿಕೊಂಡಲ್ಲಿ ಸಡಗರದ ಚಿತ್ರಣ ಸಂಪೂರ್ಣವಲ್ಲವಾದರೂ, ಪೂರ್ಣವಾದೀತೇನೋ ಎಂಬ ಆಶಯ, ಈ ಮೌನ ಯುಗಾದಿಯ ಆಶಯವಾಗಿ ನನ್ನಲ್ಲಿ ಬೆಳಿದಿದೆ .   

ಹೀಗೆಲ್ಲ  ವಿಚಾರ ಮಾಡುತ್ತಾ ಹೋದಾಗ ಅನ್ನಿಸಿದ್ದು, ಕಂಡುಕೊಂಡಿದ್ದು  ಸ್ವಲ್ಪ ಮಟ್ಟಿಗಾದರೂ,ಈ ಯುಗಾದಿಯ ಸಾಂಕೇತಿಕ ಸಂದೇಶ, ಪ್ರಳಯವೇ ಆಗಬೇಕಾಗಿಲ್ಲವಾದರೂ, ಯೋಚಿಸಿದಾಗ ಪ್ರತಿಯುಗದ ಆದಿಯಲ್ಲಿ ಅದು ಆದಂತಿದೆ; ಪ್ರಳಯದ ಭಯಾನಕತೆಯ ಭಾವವನ್ನೂ ಮತ್ತೆ ಅದರ ನೋವನ್ನು ತಿರಸ್ಕರಿಸದೆ, ಬದಲಾಗಿ ಅಳವಡಿಸಿಕೊಂಡ, ಆದರಿಸಿದಂತೆಯೇ ಧರಿಸಿಕೊಂಡ  ನಮ್ಮ ಧರಿತ್ರಿ, ಹೊಸಯುಗವನ್ನು ಪ್ರತಿಬಾರಿ ವಿಶ್ವರೂಪ ಸೌಂದರ್ಯದಲ್ಲಿ ರೂಪಿಸಿಕೊಳ್ಳುತ್ತದೆಯಲ್ಲವೇ? ಪ್ರಳಯಗರ್ಭಿತ  ಯುಗ-ಯುಗಗಳಲ್ಲಿ ಕಾಣುವದು ಈ ಯುಗಾದಿಯ ಸಂಕೇತ, ನೋವು ಮುನ್ಸೂಚಿಸುವ ಸುಖ ಸಂದೇಶ ವಿಪರ್ಯಾಸವೇ ಅಲ್ಲ . ಹೀಗಾಗಿ, ಇಂದಿನ ಭಯವನ್ನು ಮತ್ತು ನೋವನ್ನು ತ್ಯಜಿಸದೆ, ಅದನ್ನು, ಇದು ಈಗ ನನಗೆ ಈ ರೂಪದಲ್ಲಿ ಯಾಕಾಯಿತು ಎಂದು ಆತ್ಮವಿಶ್ಲೇಷಣೆ ಮಾಡಿಕೊಂಡಂತೆ, ಈ ಮೌನ ಯುಗಾದಿಯ ಅಂತರಂಗದ ಸಂದೇಶ ಸಂಕೇತ, ನಮ್ಮ ಮಾನಸಿಕ ವಿಕಾಸನೆಯ ಮಾರ್ಗವಾದೀತೇ, ಒಪ್ಪವಿದೆಯೇ  ಅಕಾಲಿಕ ಪ್ರಶ್ನೆಗೆ? ಹೀಗೆ ಸಾಗಿವೆ ನನ್ನ ಮೌನಲೋಚನೆಗಳು. 

 ವಸಂತ ಚಿಗುರು

Image result for spring
ಅನಿತಾ ಹೆಗ್ಡೆ

ಯುಗಾದಿ ಮತ್ತೆ ಬಂತು ವಸಂತ ಋತುವಿನಲಿ
ಚಿಗುರೊಡೆಯಿತು ಮಾವು
ಸಾಕಿಷ್ಟು ಕೋಗಿಲೆಗೆ ಮಧುರಗಾನ
ಚಿಗುರೊಡೆಯಿತು ಬೇವು
ಬೆಲ್ಲದ ಹದ ಸಮ್ಮಿಳಿತ
ಸಾಕಿಷ್ಟು ಮಾನವಗೆ ಸಮತೋಲನ
ಎಲ್ಲೆಡೆ ವಸಂತ ಚಿಗುರು, ವಸಂತ ವಿಸ್ಮಯ!

ಹಿಮ ಕರಗಿ ಧುಮ್ ಎಂದಿತು
ಭೂಶಿರಕಾಯಿತು, ಸೂರ್ಯನ ಆಲಿಂಗನ ಚುಂಬನ
ಎಳೆ ಬಿಸಿಲು ಮಂಜಿನ ಮೇಲೆ, ಹೊಳೆಯುವ ಮುತ್ತಿನ ಹಾರ
ಎಲ್ಲೆಡೆ ಹೂವಿನ ಸಾಲು, ದುಂಬಿಗೂ ಹಬ್ಬದ ಕಾಲ!
ಕಂಪಿಸಿತು ಕೈಗಳು, ಜರಿ ಜರಿದು ಧರೆಗಿಳಿದ ಆ ಶಂಖ ಪುಷ್ಪ
ಇಬ್ಬನಿಯ ಮಸುಬಿನಲೂ ಸ್ಪಷ್ಟ ಆ ಮೋಹಕ ನೋಟ
ಹೇಳಲೇನಾದರೆಂಬ ಕಾತುರ, ಮೌನವೇ ಎಲ್ಲದಕೂ ಉತ್ತರ
ಬರಲಿ ಮಗದೊಮ್ಮೆ ಯುಗಾದಿ, ಮಗೆ ಮಗೆದು ಹಬ್ಬದ ಸಂಭ್ರಮ
ಮತ್ತೊಡೆಯಿತು ಚಿಗುರು, ಹೂವರಳಿ ಹೊಸತನ
ಎಲ್ಲೆಡೆ ವಸಂತ ಚಿಗುರು, ಸೃಷ್ಟಿಯ ವಿಸ್ಮಯ!

ರೇಶಿಮೆ ಸೀರೆ ಹಬ್ಬಕೆ, ಸವಿ ನೆನಪುಗಳ ಮಿಶ್ರಣ
ಶೃಂಗಾರದ ಸಂಭ್ರಮ, ಮುತ್ತಿನ ನತ್ತು
ಕತ್ತಿಗೆ ಮುತ್ತಿನ ಸರ, ಅದಕೊಪ್ಪುವ ಕಿವಿಯೋಲೆ
ಬಿಸಿ ಉಸಿರು ಸನಿಹದಲಿ, ನಾಚಿ ರಂಗಾದಳು ಆಸರೆಯಲಿ
ಇಟ್ಟು ದುಂಡನೆಯ ಕುಂಕುಮದ ಬೊಟ್ಟು, ಜಡೆಗೆ ಮಲ್ಲಿಗೆ ದಂಡೆ
ಪಿಸುರಿದ ಮೆಲ್ಲಗೆ ಸನಿಹದಲಿ, ಇದು ನನ್ನವಳಿಗೆ ಶೋಭೆ ಎಂದು
ಮತ್ತೊಡೆಯಿತು ಚಿಗುರು, ಹಬ್ಬದ ಸಂಭ್ರಮ
ಎಲ್ಲೆಡೆ ಹೊಸ ಚಿಗುರು, ವಸಂತ ತನ್ಮಯ!

ಚಿಗುರೊಡೆದು ಒಂದಿದ್ದು ನಾಲ್ಕಾಗಿ
ಬೆಳೆದು ಹಣ್ಣಾಗು, ಹೆಬ್ಬಾವಲ್ಲ
ಉದುರುವುದು ಅನೀವಾರ್ಯ, ಬೀಳುವುದಲ್ಲ
ಹುಟ್ಟು ಸಾವುಗಳ ಅಂತರದಲಿ, ದ್ವಂದ್ವ, ತಿಳಿ ನೀರ ಅರಿಯೇನೇ ಇರಲಿ
ಮತ್ತೊಡೆಯಿತು ಚಿಗುರು, ಜೀವನ ಉತ್ಸಾಹದ
ಎಲ್ಲೆಡೆ ವಸಂತ ಚಿಗುರು, ಇದುವೇ ಕಾಲಚಕ್ರದ ವಿಸ್ಮಯ!

ಬೆಳ್ಳಂ ಬೆಳಿಗ್ಗೆ ಮೂಡಲ ಮನೆಯ ರವಿ ಕಿರಣ
ತೊಯ್ದ ತೊಯ್ದ ಮನೆಯೆಲ್ಲಾ ಮನವೆಲ್ಲಾ
ದೇವರಿಗೆ ನಂದಾದೀಪ, ಗಂಧ ಚಂದನದ ಲೇಪ
ಲವಲವಿಕೆ ಗಾಜಿನ ಬಳೆಗಳಿಗೆ, ಗೆಜ್ಜೆ ಕಾಲ್ಗಳಿಗೆ ಹೊಸತನ
ಘಮ್ ಘಮ್ ಪಾಯಸ, ಹೋಳಿಗೆ ಹೂರಣ
ಕಹಿ ಮೊದಲು ಪಾನಕಕೆ ಹೊಸ ಬೆಲ್ಲ, ಹಳಸಲ್ಲ ಹೊಸತನ
ಮತ್ತೊಡೆಯಿತು ವಸಂತ ಚಿಗುರು, ಸಂತೋಷದ
ನವೋಲ್ಲಾಸದ, ಪಥದಿ ಸಾಗುವ ಜೀವನ ಪಯಣ!