ಹಿಂದಿನ ಲೇಖನದಲ್ಲಿ “ದೇವರ ಅಸ್ತಿತ್ವ ಉಳಿದವರ ಕಣ್ಣಲ್ಲಿ” ಎನ್ನುವ ಬಗ್ಗೆ ಚರ್ಚಿಸಿದ್ದೆ, ಅವನನ್ನು ಹೇಗೆ ವಿವಿಧ ರೂಪಗಳಲ್ಲಿ ಪೂಜಿಸುತ್ತಾರೆಂದು ನನ್ನ ವಿಚಾರಗಳನ್ನು ಹಂಚಿಕೊಂಡಿದ್ದೆ. ಈ ಬಾರಿ ಲೇಖನಕ್ಕೆ ಅದೇ ವಿಚಾರ ಮುಂದುವರಿಸುವ ಕುರಿತು ಯೋಚಿಸುತ್ತಿರುವಾಗ, ವಿವಿಡ್ಲಿಪಿ ಪ್ರಕಾಶನದ ಪುಸ್ತಕ “ಕೃಷ್ಣಾರೂಷ” ಬಗ್ಗೆ ವಿಚಾರ ಹಂಚಿಕೊಳ್ಳೋಣ ಅನಿಸಿತು. “ಕೃಷ್ಣಾರೂಷ” ಇಂಗ್ಲಿಷ್ನಲ್ಲಿ ಪ್ರಕಟವಾದ ಒಂದು ಪುಸ್ತಕ, ಅತ್ಯಂತ ಸರಳ ಭಾಷೆಯಲ್ಲಿ ಲೇಖಕರು ಜೀವನದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಅನುಭವ ವಿವರಿಸುವಾಗ ಅದಕ್ಕೆ ತಕ್ಕದಾದ ಶ್ಲೋಕ, ಭಗವದ್ಗೀತೆ, ಶ್ರೀಮದ್ಭಾಗವತ ಇತ್ಯಾದಿ ಯಿಂದ ಆಯ್ದು ಆಯಾ ಭಾಗದಲ್ಲಿ ಹಂಚಿಕೊಂಡಿದ್ದಾರೆ. ಈ ಪುಸ್ತಕವನ್ನು ಸತ್ಯೇಶ್ ಬೆಳ್ಳೂರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಲ ಲೇಖಕರು ಡಿಂಪಲ್ ಅಗ್ರವಾಲ್, ಇವರು ಕೃಷ್ಣನ ಭಕ್ತರು. ಅವರು ತಮ್ಮ ಅನುಭವಗಳನ್ನು ಮತ್ತು ಕೃಷ್ಣನ ಲೀಲೆಗಳನ್ನು ಇದರಲ್ಲಿ ಬಣ್ಣಿಸಿದ್ದಾರೆ. ಅವರ ಪುಸ್ತಕ ನಮ್ಮ ಪ್ರಕಾಶನದ ಎಂಟನೆಯ ಪುಸ್ತಕ. ಇದು ಆಕಸ್ಮಿಕವೋ ಅಥವಾ ನಮಗೆ ಪ್ರಸಾದದ ರೂಪದಲ್ಲಿ ಬಂದಿದೆಯೋ ಗೊತ್ತಿಲ್ಲ.
ಕೆಲವು ದಿನಗಳ ಹಿಂದೆ ನಮ್ಮ ಪರಿಚಿತರೊಬ್ಬರೊಂದಿಗೆ ಮಾತನಾಡುವಾಗ ತಾವು ನಾಸ್ತಿಕರೆಂದು ತಿಳಿಸುತ್ತಾ ಅದಕ್ಕೆ ದೇವೆರೇ ಕಾರಣ ಎಂದರು. ವಿಚಾರಿಸಿದಾಗ ಗೊತ್ತಾಯಿತು ಅವರ ಪ್ರೀತಿಯ ವ್ಯಕ್ತಿ ಕೋವಿಡ್ ಇಂದ ಅಸ್ವಸ್ಥರಾದಾಗ ಇವರು ದೇವರಲ್ಲಿ ಬೇಡಿಕೊಂಡರೂ ಅವರು ಉಳಿಯಲಿಲ್ಲ. ಅವರವರ ಪರಿಸ್ಥಿತಿ ಅನುಗುಣವಾಗಿ ಜನರು ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ, ಯಾರೂ ತಪ್ಪಲ್ಲ. ಈ ಲೇಖನದಲ್ಲಿ ಹಂಚಿಕೊಂಡ ಪುಸ್ತಕದ ಮೂಲ ಲೇಖಕರು ಕ್ಯಾನ್ಸರ್ನಿಂದ ತಮ್ಮ ಜೀವನ ಅಸ್ತವ್ಯಸ್ತವಾದಾಗ ಕೃಷ್ಣನನ್ನೇ ತಮ್ಮ ಮಗನೆಂದು ಪ್ರೀತಿಸಿ, ಪೂಜಿಸಿ ಜೀವಿಸಿದರು. ಆಗ ಅವರಿಗೆ ಮಾನಸಿಕವಾಗಿ ದೊರೆತ ಆಸರೆ ಮುದ್ದು ಕೃಷ್ಣ. ಈ ಪುಸ್ತಕದ ಕೆಲವು ವಿಷಯಗಳನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಅರೋಷ್ ಎಂಬ ಪದದ ಅರ್ಥ ಸೂರ್ಯನ ಮೊದಲ ಕಿರಣ; ಅರೋಷ್ ಮತ್ತು ಕೃಷ್ಣ ನನ್ನಿಬ್ಬರು ಮಕ್ಕಳ ಹೆಸರುಗಳು. ಮೊದಲನೆಯವ ನನ್ನ ಕರುಳ ಬಳ್ಳಿ – ನನ್ನ ರಕ್ತ ಹಂಚಿಕೊಂಡು ಹುಟ್ಟಿದವ, ಎರಡನೆಯವನು ನನ್ನ ಭಾವಬಳ್ಳಿ – ನನ್ನ ಶ್ರದ್ದೆಯಿಂದ ಜನಿಸಿದ (ಇದು ಲೇಖಕರ ಮಾತು). ಇವರ ಜೀವನದ ಅನುಭಗಳು ಪ್ರಾರಂಭ ಆಗುವುದು ಅವರ ಭಿಲಾಯ್ ನಗರದಿಂದ, ಅವರ ತಂದೆ ಮತ್ತು ತಾಯಿ ವಿವರ ಹಾಗು ಮಧ್ಯಮ ವರ್ಗದ ಕುಟುಂಬದೊಂದಿಗೆ. ಇವರ ವಿವರಣೆಯಲ್ಲಿ ಕಂಡು ಬರುವ ಮುಖ್ಯ ವಿಷಯ ಹೇಗೆ ಸರಳ ಜೀವನದಲ್ಲಿ ಬೆಳೆದು ಬಂದದ್ದು, ಪ್ರೀತಿಯಿಂದ ಬೆಸೆದ ಕುಟುಂಬ ಮತ್ತು ಅವರ ಬಾಲ್ಯದಿಂದಲೇ ಭಕ್ತಿ ಜೀವನದ ಒಂದು ಅಂಗವಾಗಿದ್ದು. ಇಂತಹ ವಿವರಣೆ ಕೇಳಿದೊಡನೆ ನೆನಪಾಗುವುದು ಕೆಳಗಿನ ಸಾಲುಗಳು
ನಮ್ಮ ಸಂಸಾರ ಆನಂದ ಸಾಗರ, ಪ್ರೀತಿಎಂಬ ದೈವವೇ ನಮಗಾಧಾರಾ, ಆ ದೈವ ತಂದ ವರದಿಂದ, ಬಾಳೇ ಬಂಗಾರಾ
ತಮ್ಮ ಜೀವನದ ವಿವರಗಳನ್ನು ಹಂಚಿಕೊಳ್ಳುತ್ತ ಲೇಖಕರು ಮದುವೆ ಮತ್ತು ನಂತರ ದಿನಗಳ ಬಗ್ಗೆ ತಿಳಿಸುತ್ತಾರೆ. ಮದುವೆ, ನಂತರ ಗಂಡನ ಮನೆಯ ವಿಷಯ, ಅತ್ತೆ ವಿಷಯ ಎಲ್ಲ ಸಂತೋಷದ ವಿವರ ಹಂಚಿಕೊಂಡು ಮಗನ ಹುಟ್ಟು, ಅರೋಷ್ ಆಗಮನ ಈ ಎಲ್ಲ ಸಂತೋಷದ ಘಳಿಗೆಯಲ್ಲಿ ಬರುವುದು ಆಘಾತವಾದ ವಿಷಯ “ಮಗನ ಕ್ಯಾನ್ಸರ್”. ಅರೋಷ್ಗೆ diffuse pontine glioma, ಒಂದು ಗಡ್ಡೆ ಅವನ ಮೆದುಳಿನಲ್ಲಿ ಇದೆ ಎಂಬುದು ತಿಳಿದು ಅವರ ಜೀವನ ಅಲ್ಲೋಲಕಲ್ಲೋಲವಾಗಿತ್ತು. ಪೂಜೆ, ಪುನಸ್ಕಾರ, ಹೋಮ, ದೇವಸ್ಥಾನ, ದರ್ಗಾ, ಆಯುರ್ವೇದ, ಹೋಮಿಯೋಪಥಿ… ಎಲ್ಲ ಪ್ರಯತ್ನ ನಡೆದರೂ ಕೊನೆಗೆ ಸೂರ್ಯನ ಮೊದಲ ಕಿರಣ ಕಾಣದಾಯಿತು, ಅರೋಷ್ ಅವರನ್ನು ಬಿಟ್ಟು ಹೋದನು. ೨೦೧೪ರಲ್ಲಿ ಬಿಡುಗಡೆಯಾದ “ಹರಿವು” ಚಿತ್ರ ಈ ಒಂದು ಜೀವನದ ತಿರುವಿನಲ್ಲಿ ಬರುವ ಕಠಿಣ ಪಯಣ ಮನ ಮುಟ್ಟುವಂತೆ ಚಿತ್ರಿಸುತ್ತದೆ, ಇದು ನಿಜ ಜೀವನದಲ್ಲಿ ನಡೆದ ಕಥೆಯಾಧಾರಿತ ಚಿತ್ರ. ಸಂಚಾರಿ ವಿಜಯ್ ತಂದೆಯ ಪಾತ್ರದಲ್ಲಿ ಮಾಡಿದ ನಟನೆ ಹೃದಯ ಹಿಂಡುವಂತಿದೆ. ತಾಯಿ ಪ್ರೀತಿಯಂತೆ, ತಂದೆಯ ಪ್ರೀತಿ ಮಗನಿಗೆ ಎಷ್ಟು ಆಳವಾಗಿ ಇರುತ್ತದೆ ಮತ್ತು ಮಗನಿಗಾಗಿ ತಂದೆ ಎಂತಹ ಸಾಹಸಕ್ಕೂ ಸಿದ್ದ ಎಂದು ಇದರಲ್ಲಿ ತೋರಿಸಿದ್ದಾರೆ, ನೋಡಿರದಿದ್ದರೆ ತಪ್ಪದೆ ನೋಡಿ. ಡಿಂಪಲ್ ದಂಪತಿಗಳು ತಮ್ಮ ಮಗ “ಅರೋಷ್” ನ ಕೊನೆಯ ದಿನಗಳ ವಿವರಣೆ ನೀಡುವಾಗ ನನ್ನ ಕಣ್ಣ ಮುಂದೆ ಹರಿವು ಚಿತ್ರ ನೋಡಿದಾಗ ಅದ ಮನ ಕಲುಕುವ ಅನುಭವ ಆಯಿತು. ಇಂತಹದೇ ಕಠಿಣ ಪರಿಸ್ಥಿತಿ ಬಂದಾಗ, ಡಿಂಪಲ್ ದಂಪತಿಗಳಿಗೆ ಬಂದ ಪ್ರಶ್ನೆ “ದೇವರು ಇಂತಹ ಕಠಿಣ ಪರೀಕ್ಷೆ ಯಾವ ಕಾರಣಕ್ಕೆ ಒಡ್ಡುತ್ತಾನೆ”.
ನಾಗರ ಹೊಳೆಯ ಚಿತ್ರ ಹಾಡಿನ ಸಾಲುಗಳು ನಿಜ ಎನಿಸುತ್ತದೆ
ಇಲ್ಲೇ ಸ್ವರ್ಗ, ಇಲ್ಲೇ ನರಕ ಮೇಲೇನಿಲ್ಲ ಸುಳ್ಳು.. ಹುಟ್ಟು ಸಾವು ಎರಡರ ಮಧ್ಯೆ.. ಮೂರು ದಿನದ ಬಾಳು
“ಅರೋಷ್” ಇಲ್ಲದ ಬರಿದಾದ ಜೀವನದಲ್ಲಿ ಕಷ್ಟದಿಂದ ಜೀವನ ಸವೆಸುತ್ತಿರುವಾಗ ಡಿಂಪಲ್ ದಂಪತಿಗಳಿಗೆ ಆಸರೆಯಾಗಿ ಸಿಕ್ಕಿದ್ದು ಭಗವದ್ಗೀತೆ, ಮತ್ತು ಮುದ್ದು ಕೃಷ್ಣ. ಅವರ ನೆರೆಮನೆಯ ಗೆಳತೀ ಶ್ವೇತಾ ಚತುರ್ವೇದಿ ಅವರು ಪರಿಚಯಿಸಿದ ಇಸ್ಕಾನ್ ಶಿಬಿರ ಅವರಿಗೆ ಹೊಸ ದಾರಿ ಒದಗಿಸಿತು.
ವಿವರ: ಯಾರು ತಮ್ಮನು ಯಾವ ರೀತಿಯಲ್ಲಿ ನನ್ನಲ್ಲಿ ಅರ್ಪಿಸಿಕೊಳ್ಳುತ್ತಾರೋ, ಅವರನ್ನು ಅದೇ ರೀತಿಯಲ್ಲಿ ಅನುಗ್ರಹಿಸುತ್ತೇನೆ.
ಭಕ್ತ ಕುಂಬಾರದ ಹಾಡು ಇಲ್ಲಿ ಸೂಕ್ತವೆನಿಸುತ್ತದೆ
ನಾನೂ ನೀನೂ ನೆಂಟರಯ್ಯಾ ನಮಗೆ ಭೇದ ಇಲ್ಲವಯ್ಯಾ ಮಾಧವ, ನಿನ್ನ ನಾಮಾಮೃತದ ಸಾಧನೆ ಒಂದೇ ಸಾಕಯ್ಯ ತಂದೆ
“ಕೃಷ್ಣ ನಿನ್ನ ನಾಮಾಮೃತದ ಪ್ರೀತಿ ಒಂದೇ ಸಾಕಯ್ಯ ಮಗನೆ” ಎನ್ನುವ ಭಾವದಲ್ಲಿ ಡಿಂಪಲ್ ದಂಪತಿಗಳು ಕೃಷ್ಣನನ್ನು ತಮ್ಮ ಮಗನೆಂದು ಆರಾಧಿಸಲು ಆರಂಭಿಸಿದರು. ಕುಳಿತರೆ ಕೃಷ್ಣ, ನಿಂತರೆ ಕೃಷ್ಣ, ಉಂಡರೆ ಕೃಷ್ಣ ಅನ್ನುವ ತನಕ ಕೃಷ್ಣನನ್ನು ಮಗನೆಂದು ಪ್ರೀತಿಸಿದರು, ಪೂಜಿಸದರು. ಅವರಿಗೆ ಕೃಷ್ಣನೇ ಅರೋಷನಾದ, ಮತ್ತು ಅರೋಷ ಕೃಷ್ಣನಾದ. ಅವರ ಈ ಪ್ರೀತಿಗೆ ಅಕಸ್ಕಿವಾಗಿ ಅವರಿಗೆ ಜಗನಾಥಪುರಿಗೆ ಹೋಗುವ ಅವಕಾಶ ದೊರೆಯಿತು, ನಂತರ ಶ್ರೀಮದ್ಭಾಗವತ ಓದುವ ಅವಕಾಶ ದೊರಕಿತು. ತಮ್ಮ ಭಕ್ತಿ ಪಥದ ಅನುಭವಗಳನ್ನು ಮುಂದಿನ ಅಧ್ಯಾಯಗಳಲ್ಲಿ ಸುಂದರವಾಗಿ ವಿವರಿಸಿದ್ದಾರೆ.
ಸಮೋಽಹಂ ಸರ್ವಭೂತೇಷು ನ ಮೇ ದ್ವೇಷ್ಯೋಽಸ್ತಿ ನ ಪ್ರಿಯಃ | ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ || ಭವದ್ಗೀತೆ (೯ -೨೯)
ಭಗವಂತನಿಗೆ ಎಲ್ಲರೂ ಸಮಾನರು. ದೇವರಿಗೆ ಅಚ್ಚುಮೆಚ್ಚಿನವರು ಅಥವಾ ದ್ವೇಷಿಸಲ್ಪಡುವವರು ಯಾರೂ ಇಲ್ಲ. ಆದರೆ, ಯಾರು ನಿಷ್ಕಲ್ಮಷ ಭಕ್ತಿಯಿಂದ ಭಗವಂತನನ್ನು ಆರಾಧಿಸುತ್ತಾರೋ, ಭಗವಂತನು ಅಂತಹ ಭಕ್ತರ ಹೃದಯದಲ್ಲಿ ಇರುತ್ತಾನೆ.
ಅವರ ಪ್ರೀತಿ ಮತ್ತು ಭಕ್ತಿಗೆ ಮೆಚ್ಚಿ ಅವರಿಗೆ ಎರಡನೆಯ ಮಗು ಬರುವ ಸುದ್ದಿ ಅವರ ಜೀವನದ ಸಂತೋಷದ ಕ್ಷಣಗಳ ಆಗಮನವಾಯಿತು. ಅವರ ಜೀವನದಲ್ಲಿ ಒಂದರ ನಂತರ ಇನ್ನೊಂದು, ಹೀಗೆ ಎರಡು ಹೆಣ್ಣು ಮಕ್ಕಳ ಸೌಭಾಗ್ಯ ದೊರಕಿತು.
ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು ಕೇಳದೆ ಸುಖವ ತರುವ ಹೇಳದೆ ದುಃಖವ ಕೊಡುವ ತನ್ನ ಮನದಂತೆ ಕುಣಿಸಿ ಆಡುವ
ಅಂತೆಯೇ ಎರಡು ಮಕ್ಕಳ ಆಗಮನ ಡಿಂಪಲ್ ದಂಪತಿಗಳ ಜೀವನ ಬದಲಾಯಿಸಿತು. ಸಂತೋಷದ ಜೀವನ ಅನುಭವಿಸಿದರು ಆದರೂ ಅದು ಹೆಚ್ಚು ದಿನ ಉಳಿಯಲಿಲ್ಲ. ಜೀವನದ ಮತ್ತೊಂದು ತಿರುವು ಬಂದು, ಮೂಲ ಲೇಖಕರಾದ ಡಿಂಪಲ್ ಅವರಿಗೆ ಕ್ಯಾನ್ಸರ್ ಆಗಿ ಚೇತರಿಸಿಕೊಳ್ಳುತ್ತಿದ್ದಾರೆ.
ನಾ ಮಾಡಿದ ಕರ್ಮ ಬಲವಂತವಾದರೆ ನೀ ಮಾಡುವುದೇನೋ ದೇವ ಸಾಮಾನ್ಯವಲ್ಲಿದು ಬ್ರಹ್ಮ ಬರೆದ ಬರಹ ನೇಮದಿಂದಲಿ ಎನ್ನ ಹಣೆಯಲ್ಲಿ ಬರೆದುದಕೆ
ಕೃಷ್ಣನ ಜೊತೆಗಿದ್ದರೂ ದ್ರೌಪದಿ ತನ್ನ ಪಾಲಿನ ಪಡೆದ ಸಂಕಷ್ಟಗಳನ್ನು ಅನುಭವಿಸಬೇಕಾಯಿತು, ಅಂತಹ ಸಂಕಟಗಳ ನಡೆವೆಯೂ ಕೃಷ್ಣನ ಸಾಂಗತ್ಯ ಅವಳಿಗೆ ಬಲದಂತೆ ಇತ್ತು. ಇಂತಹ ಸಾಂಗತ್ಯ ಇದೆ ಎಂಬ ನಂಬಿಕೆ ಎಂತಹ ಕಷ್ಟ ಕಾಲದಲ್ಲೂ ಪರಿಸ್ಥಿತಿ ಎದರಿಸಲು ಧೈರ್ಯ, ಸ್ಥೈರ್ಯ ಕೊಡುತ್ತದೆ. ಈ ನಂಬಿಕೆಯೇ ಜೀವನಕ್ಕೆ ರಕ್ಷಣೆ ನೀಡಿ, ಮಾರ್ಗದರ್ಶಿ ಆಗುತ್ತದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಎಷ್ಟು ಕಷ್ಟ ಇದ್ದರೂ ಹೇಗೆ ಅದನ್ನು ಎದುರಿಸಿದರು ಎಂದು ಸಂಕ್ಷಿಪ್ತವಾಗಿ ಅವರ ಜೀವನಗಾಥೆ ವಿವರ ಇಲ್ಲಿ ಹಂಚಿಕೊಂಡಿದ್ದೇನೆ.
ಈ ವಾರದ ಪ್ರಸ್ತುತಿ ಅಪರೂಪವಾದುದು. ಜಗತ್ತಿನಲ್ಲೆಲ್ಲ ಅದ್ವಿತೀಯ ನಾಟಕಕಾರನೆಂದು ಹೆಸರಾದ ವಿಲಿಯಮ್ ಶೇಕ್ಸ್ಪಿಯರ್ ಹುಟ್ಟಿದ ನಾಡಲ್ಲೆ ಆತನ ಒಂದು ನಾಟಕದ -- ಎಂಥದೇ ಇರಲಿ,-- ಒಂದು ಪಾತ್ರಕ್ಕೆ ಆಯ್ಕೆಯಾಗಿ ರಂಗಮಂಚ ಹತ್ತುವದು ಸಾಮಾನ್ಯವಲ್ಲ. ನನಗೆ ಗೊತ್ತಿರುವವರಲ್ಲಿ ಅಂಥ ಏಕೈಕ ಕನ್ನಡಿಗ ಲೀಡ್ಸ್ನಲ್ಲಿ ವಾಸಿಸುತ್ತಿರುವ ಶ್ರಿಹರ್ಷ ನೀರಗುಂದ ನಾಗರಾಜ್ ಅವರು. ತಮ್ಮ ಆ ಅನುಭವವನ್ನು ಈ ರಸಭರಿತ ಲೇಖನದಲ್ಲಿ ತೆರೆದಿಟ್ಟಿದ್ದಾರೆ, ಆತ ಹುಟ್ಟಿದ ಎಪ್ರಿಲ್ ತಿಂಗಳಲ್ಲೇ (ತಾರೀಕು ಖಚಿತವಿಲ್ಲ) ’ಬಾರ್ಡ್ ಆಫ್ ಏವಾನ್’ ಎಂದು ಬಿರುದು ಪಡೆದ ಆತನ ೪೧೦ನೆಯ ಪುಣ್ಯತಿಥಿ ಇದೇ ಎಪ್ರಿಲ್ ೨೩ ರಂದು. ಶೇಕ್ಸ್ಪಿಯರ್ ನಾಟಕಗಳ ನಿತ್ಯ ಜೀವಂತಿಕೆಗೆ ಕಾರಣ, ಅವನು ಸಂಪೂರ್ಣವಾಗಿ ರಂಗಭೂಮಿಯ ವ್ಯಕ್ತಿಯಾಗಿದ್ದುದು, ಎಂದು ಪಂಡಿತರು ಹೇಳುತ್ತಾರೆ. ಓದುವವರನ್ನು, ನೋಡುವವರನ್ನು ಸದಾ ಎಚ್ಚರದಲ್ಲಿಡುವ ಕಲೆ ಅವನಿಗೆ ಒಲಿದು ಬಿಟ್ಟಿತ್ತು. ದುರಂತ, ಹಾಸ್ಯ, ತೀವ್ರ ಚಿಂತನೆ ಎಲ್ಲವನ್ನೂ ಹೇಳಬಲ್ಲ (೧೫೦೦ಕ್ಕೂ ಮೇಲ್ಪಟ್ಟು) ನುಡಿಗಟ್ಟುಗಳು ದಕ್ಕಿದ್ದವು. ಅವುಗಳನ್ನು ನಾವು ಇಂದಿಗೂ ಇಂಗ್ಲಿಷ್ ದಲ್ಲಿ ಸಂಪೂರ್ಣವಾಗಿ ಅಳವಡಿಸಿ ಕೊಂಡಿದ್ದೇವೆ. ಭಾಷೆಯ ಬಗೆಬಗೆಯ ಆಟಗಳ ಮೂಲಕವೂ ನಮ್ಮನ್ನು ಹಿಡಿದಿಡುವ ಕೌಶಲ ಅವನಿಗಿತ್ತು’ಆತನ ಪಾತ್ರಗಳೆಲ್ಲ ನಮ್ಮ ಒಳಕನ್ನಡಿಗಳಂತೆ ಕಾಣ ತೊಡಗುತ್ತಾರೆ. ಅವನಿಲ್ಲದಿದ್ದರೆ ನಮ್ಮೊಳಗಿದ್ದ ಭಾವಗಳನ್ನು ಕಾಣದೆ ಸುಮ್ಮನಿರುತ್ತಿದ್ದೆವು. ಆತ ರಾಜರುಗಳ ಬಗ್ಗೆ ಬರೆದರೂ ಒಟ್ಟಾರೆಯಾಗಿ ಜನರ ಕಷ್ಟಗಳ ಬಗ್ಗೆ ಬರೆದನೆಂತಲೆ’('ಬಾರ್ಡೋಲೇಟರ್’(Bardolater) ಹೆರಾಲ್ಡ್ ಬ್ಲೂಂ) ಇಂದಿಗೂ ಜಗತ್ತಿನೆಲ್ಲ ನಾಡಲ್ಲೂ ಆತ ನಾಲ್ಕು ಶತಮಾನದ ನಂತರವೂ ಸಲ್ಲುತ್ತಾನೆ. ಇಂಥ ಅಪರೂಪದ ಅವಕಾಶ ಸಿಕ್ಕ ಬಗೆಯನ್ನು ಮತ್ತು ಶ್ರೀಹರ್ಷಅವರ ಸ್ವಪರಿಚಯವನ್ನೂ ಇಲ್ಲಿ ಓದಿರಿ. (ಸಂಪಾದಕ)
ನನ್ನ ಹೆಸರು ಶ್ರೀಹರ್ಷ ನೀರಾಗುಂದ ನಾಗರಾಜ್. ನನ್ನ ಕುಟುಂಬದ ಊರು ನೀರಾಗುಂದ, ಕರ್ನಾಟಕ; ಆದರೆ ನನ್ನ ಬಾಲ್ಯ ಮತ್ತು ಬೆಳವಣಿಗೆ ಬೆಂಗಳೂರು ನಗರದಲ್ಲೇ ನಡೆದದ್ದು. ಪ್ರಸ್ತುತ ನಾನು ಯುನೈಟೆಡ್ ಕಿಂಗ್ಡಮ್ನ ಲೀಡ್ಸ್ ನಗರದಲ್ಲಿ ನೆಲೆಸಿದ್ದು, ಸಾಫ್ಟ್ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಉದ್ಯಮಶೀಲ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದೇನೆ. ಕಳೆದ ಕೆಲವು ವರ್ಷಗಳಿಂದ ಯುಕೆಯಲ್ಲಿ ವಾಸಿಸುತ್ತಿದ್ದೇನೆ.
ನಾನು ವಿವಾಹಿತರಾಗಿದ್ದು, ನನ್ನ ಪತ್ನಿಯೂ ಸಾಫ್ಟ್ವೇರ್ ಕ್ಷೇತ್ರದಲ್ಲೇ ತಮ್ಮ ವೃತ್ತಿಜೀವನವನ್ನು ಮುಂದುವರಿಸುತ್ತಿದ್ದಾರೆ. ನಾವು ನಮ್ಮ ಇಬ್ಬರು ಮಕ್ಕಳೊಂದಿಗೆ ಲೀಡ್ಸ್ನಲ್ಲಿ ನೆಲೆಸಿದ್ದೇವೆ.
ನನಗೆ ರಂಗಭೂಮಿ ಮತ್ತು ನಾಟಕಗಳ ಬಗ್ಗೆ ಅಪಾರ ಆಸಕ್ತಿ ಇದೆ. ಅದೇ ಆಸಕ್ತಿಯ ಮುಂದುವರಿದ ಭಾಗವಾಗಿ, ನಾನು ಎರಡು ಕನ್ನಡ ಚಲನಚಿತ್ರಗಳಲ್ಲಿ ನಿರ್ಮಾಪಕ ಹಾಗೂ ನಟನಾಗಿ ಕಾರ್ಯನಿರ್ವಹಿಸಿದ್ದೇನೆ. ಜೊತೆಗೆ, ಕಲೆಯ ಮೇಲೆ ಇರುವ ಅಭಿರುಚಿಯಿಂದ ಭರತನಾಟ್ಯದಲ್ಲಿ ತರಬೇತಿ ಪಡೆದಿದ್ದೇನೆ. (ಅವರಿಗೆ ಪಾರ್ಕ್ ರನ್ನಿಂಗ್, ಮ್ಯಾರಥಾನ್ ಓಟದ ಹವ್ಯಾಸವಿದೆ. ಈ ವಾರಾಂತ್ಯದಲ್ಲಿ ಮ್ಯಾಂಚೆಸ್ಟರಿನ ಮ್ಯಾರಥಾನ್ ದಲ್ಲಿ ಕಂಡಾರು! –ಸಂ)
ನನ್ನ ತಂದೆ ಡಾ. ನಾಗರಾಜ್ ನೀರಾಗುಂದ ಅವರು ವಿಜಯ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿದ್ದು, ಕಾದಂಬರಿ ಹಾಗೂ ನಾಟಕ ರಚನೆಯಲ್ಲಿ ಹೆಸರು ಮಾಡಿದವರು. ಅವರ ಸಾಹಿತ್ಯಕೃತಿಗಳನ್ನು ಪ್ರಕಟಿಸುವಲ್ಲಿ, ಗಣಕಯಂತ್ರದ ಮೂಲಕ ಟೈಪಿಂಗ್ ಮಾಡುವುದು, ತಾಂತ್ರಿಕ ಸಹಾಯ ಒದಗಿಸುವುದು ಹಾಗೂ ಪ್ರಕಟಣೆಯ ಕಾರ್ಯಗಳನ್ನು ಸಂಯೋಜಿಸುವುದರಲ್ಲಿ ನಾನು ಭಾಗಿಯಾಗಿದ್ದೇನೆ.
ಈಗ ನನ್ನ ಲೇಖನ ಓದಿರಿ
ರಂಗಭೂಮಿ, ಸ್ನೇಹ ಮತ್ತು ಜೀವನದ ತತ್ತ್ವದ ಒಂದುಪ್ರಯಾಣ
ಬೆಳಕುಗಳು ನಿಧಾನವಾಗಿ ಕಡಿಮೆಯಾದವು. ಒಂದು ಕ್ಷಣಕ್ಕೆ ಆ ಆಡಿಯಟೋರಿಯಂ ಸಂಪೂರ್ಣ ಮೌನದಲ್ಲಿ ಮುಳುಗಿತು. ನಂತರ ಶೇಕ್ಸ್ಪಿಯರ್ ಅವರ ಶಾಶ್ವತ ಪದಗಳು ವೇದಿಕೆಯ ಮೇಲೆ ಪ್ರತಿಧ್ವನಿಸಿದವು. ಕೆಲವೇ ಕ್ಷಣಗಳಲ್ಲಿ ಪ್ರೇಕ್ಷಕರು ಮುಂದೆ ಜೂಕಿದರು. ಚತುರ ಸಂಭಾಷಣೆಗಳಿಗೆ ಅವರು ಮುದ್ದಾಗಿ ನಕ್ಕರು. ಹಾಸ್ಯ ಕ್ಷಣಗಳಲ್ಲಿ ಜೋರಾಗಿ ನಗಾಡಿದರು. ನಾಟಕೀಯ ಪ್ರವೇಶಗಳಿಗೆ ತಾಳಿಯೊಡ್ಡಿದರು. ಮತ್ತೆ ಎಲ್ಲಕ್ಕಿಂತ ಮುಖ್ಯವಾಗಿ ಅವರು ಕಥೆಯೊಂದಿಗೆ ಸಂಪರ್ಕ ಹೊಂದಿದರು. ಮರೆಯಲಾಗದ ಆರು ಸಂಜೆಗಳಲ್ಲಿ, Fulneck Dramatic Society ನಡೆಸಿಕೊಟ್ಟ ಶೇಕ್ಸ್ಪಿಯರ್ ಅವರ ಪ್ರಸಿದ್ಧ ಹಾಸ್ಯ ನಾಟಕ As You Like It ಮೂಲಕ Fulneck Theatre ಎಂಬ ಸಣ್ಣ ಎಪ್ಪತ್ತು ಆಸನಗಳರಂಗಮಂದಿರ ನಗು, ಚಪ್ಪಾಳೆ ಮತ್ತು ಭಾವನೆಗಳಿಂದ ಜೀವಂತವಾಯಿತು. ಪ್ರೇಕ್ಷಕರಿಗೆ ಅದು ಕೇವಲ ನಾಟಕ. ನನಗೆ ಅದು ಇನ್ನಷ್ಟು ಆಳವಾದ ಅನುಭವವಾಯಿತು. ಸಮುದಾಯ, ಸೃಜನಶೀಲತೆ ಮತ್ತು ಜೀವನದ ತತ್ತ್ವವನ್ನು ಅರಿಯುವ ಒಂದು ಪ್ರಯಾಣ. ಆ ಪ್ರಯಾಣದ ಎಲ್ಲೊಂದರಲ್ಲಿ, ಶೇಕ್ಸ್ಪಿಯರ್ “ಲಾರ್ಡ್ ಕೋಹ್ಲಿ”ಯನ್ನು ಭೇಟಿಯಾದರು!
ಬೆಟ್ಟದ ಮೇಲಿರುವ ಆತ್ಮ ಹೊಂದಿದ ರಂಗಮಂದಿರ
ಫುಲ್ನೇಕ್ ಗ್ರಾಮವನ್ನು ನೋಡುತ್ತಾ ಒಂದುಬೆಟ್ಟದ ಮೇಲ್ಮೈಯಲ್ಲಿ ಫುಲ್ನೇಕ್ ಥಿಯೇಟರ್ ಹೆಮ್ಮೆಯಿಂದ ನಿಂತಿದೆ.1740ರ ದಶಕದಲ್ಲಿMoravian Church ಸಹೋದರರು ಸ್ಥಾಪಿಸಿದ ಐತಿಹಾಸಿಕ ಧಾರ್ಮಿಕ ವಸತಿ ಅದು. ಅದರ ಎತ್ತರದ ಸ್ಥಳದಿಂದ, ಈ ರಂಗಮಂದಿರ ಹಸಿರು ಕಣಿವೆಗಳನ್ನು ನೋಡುವ ಸುಂದರ ದೃಶ್ಯವನ್ನು ಹೊಂದಿದೆ. ಇದು ಸುತ್ತಲಿನ ವೆಸ್ಟ್ ಯಾರ್ಕ್ಶೈರ್ನ ನಗರ ಮತ್ತು ಕೈಗಾರಿಕಾ ಪ್ರದೇಶಗಳಿಂದ ದೂರವಿರುವ ಶಾಂತ ಮತ್ತು ಸುಂದರ ವಾತಾವರಣವನ್ನು ಸೃಷ್ಟಿಸುತ್ತದೆ. ಬಹುಮಟ್ಟಿಗೆ ಇದು ಒಂದು ಅಡಗಿದ ಗ್ರಾಮೀಣ ರತ್ನ. ರಂಗಮಂದಿರದ ಒಳಗೆ ಒಂದು ಅಂತರಂಗದ ಎಪ್ಪತ್ತು ಆಸನಗಳ ಆಡಿಟೋರಿಯಂ ಇದೆ.
ಮೂಲ ವೇದಿಕೆ 1920ರ ದಶಕದಲ್ಲಿ ನಿರ್ಮಿಸಲಾಯಿತು. ನಂತರ 1950ರ ದಶಕದಲ್ಲಿ ಒಂದು ಹಳೆಯ ಗೋದಾಮಿನಿಂದ ತೆಗೆದುಕೊಂಡ ಮರವನ್ನು ಮರುಬಳಸಿ ಅದನ್ನು ಪುನರ್ನಿರ್ಮಿಸಲಾಯಿತು. ಸಮುದಾಯ ರಂಗಭೂಮಿಯ ಆತ್ಮವನ್ನು ಪ್ರತಿಬಿಂಬಿಸುವ ಒಂದು ಕಾವ್ಯಮಯ ವಿವರ. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಈ ಸಣ್ಣ ವೇದಿಕೆಯಲ್ಲಿ ಸಾಹಿತ್ಯದ ಮಹಾನ್ ಲೇಖಕರ ಕೃತಿಗಳು ಪ್ರದರ್ಶಿಸಲ್ಪಟ್ಟಿವೆ. Geoffrey Chaucer, Anton Chekhov, Henrik Ibsen, ಮತ್ತುWilliam Shakespeare ಅವರ ನಾಟಕಗಳು ಇಲ್ಲಿ ಜೀವಂತವಾಗಿವೆ. ನೂರಕ್ಕೂ ಹೆಚ್ಚು ವರ್ಷಗಳಿಂದ ಫುಲ್ನೇಕ್ ಡ್ರಾಮಾಟಿಕ್ ಸೊಸೈಟಿ ಈ ವಿಶೇಷ ಯಾರ್ಕ್ಶೈರ್ ಪ್ರದೇಶದಲ್ಲಿ ರಂಗಭೂಮಿಯನ್ನು ಜೀವಂತವಾಗಿರಿಸಿದೆ.
ವೇದಿಕೆಯನ್ನು ಜೀವಂತವಾಗಿಡುವ ವ್ಯಕ್ತಿ ಈ ಸೃಜನಾತ್ಮಕ ಪರಂಪರೆಯ ಮಧ್ಯಭಾಗದಲ್ಲಿ ನಿರ್ದೇಶಕ ಡೇವ್ ರಾಬಿನ್ಸ್ (Dave Robbins) ಇದ್ದಾರೆ. 1990ರ ದಶಕದಿಂದ ಅವರು ಈ ರಂಗಮಂದಿರದ ಪ್ರಮುಖ ಸೃಜನಾತ್ಮಕ ನಿರ್ದೇಶಕರಾಗಿದ್ದಾರೆ. ಆದರೆ ಅವರ ಸಂಪರ್ಕ ಇನ್ನೂ ಹಳೆಯದು. 1968ರಲ್ಲಿ ಅವರು ಮೊದಲ ಬಾರಿ ವೇದಿಕೆಗೆ ಬಂದರು, A Christmas Carol ನಾಟಕದಲ್ಲಿ. ಈ ಕಥೆಯನ್ನು ಬರೆದಿದ್ದವರು Charles Dickens. ರಾಬಿನ್ಸ್ ತಮ್ಮ ರಂಗಭೂಮಿ ಪ್ರವೇಶವನ್ನು ನೆನಪಿಸಿಕೊಂಡಾಗ ಅದು ಸಹಜವಾಗಿ ನಡೆದದ್ದೆಂದು ಹೇಳುತ್ತಾರೆ, ಅವರ ಅತ್ಯುತ್ತಮ ಸ್ನೇಹಿತ ಡಿಕ್ ಪೋರ್ಟರ್. ಇವರ ತಂದೆ ಪೀಟರ್ ಪೋರ್ಟರ್ ಆ ಸಮಯದಲ್ಲಿ ಫುಲ್ನೇಕ್ನ ಮುಖ್ಯ ನಿರ್ದೇಶಕರಾಗಿದ್ದರು. ಇವರಿಬ್ಬರ ತಾಯಿಯರೂ ರಂಗಭೂಮಿಯಲ್ಲಿ ಭಾಗಿಯಾಗಿದ್ದರು. “ನನಗೆ ಯಾವುದೇ ಅಧಿಕೃತ ರಂಗಭೂಮಿ ತರಬೇತಿ ಇಲ್ಲ,” ಎಂದು ರಾಬಿನ್ಸ್ ಹೇಳುತ್ತಾರೆ. “ಇತರರನ್ನು ನೋಡುತ್ತಾ ಮತ್ತು ಏನು ಕೆಲಸ ಮಾಡುತ್ತದೆ ಎಂಬುದನ್ನು ನನ್ನ ಅಂತರಂಗದಿಂದ ನಂಬುತ್ತಾ ನಾನು ಕಲಿತೆ.” ದಶಕಗಳ ಕಾಲದಲ್ಲಿ ಅವರು ಐವತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಆದರೆ ಅವರಿಗೆ ಅತ್ಯಂತ ಸಂತೋಷ ನೀಡುವುದು ನಾಟಕಗಳ ಸಂಖ್ಯೆ ಅಲ್ಲ, ಜನರು.ಇತ್ತೀಚಿನ ವರ್ಷಗಳಲ್ಲಿ ಯುವಪೀಳಿಗೆಯ ಶಕ್ತಿ ಫುಲ್ನೇಕ್ ಡ್ರಾಮಾಟಿಕ್ ಸೊಸೈಟಿಯನ್ನು ಇನ್ನಷ್ಟು ಜೀವಂತಗೊಳಿಸಿದೆ. ಸೋಶಿಯಲ್ ಮೀಡಿಯಾ ಮತ್ತು ಸಮುದಾಯಸಂಪರ್ಕದ ಮೂಲಕ ಹೊಸ ನಟರು ಸೇರಿದ್ದಾರೆ. ಇಂದು ಈ ರಂಗಮಂದಿರ ಇನ್ನಷ್ಟು ಚೈತನ್ಯದಿಂದ ತುಂಬಿದೆ. ರಾಬಿನ್ಸ್ ಕೆಲವೊಮ್ಮೆ ಶೇಕ್ಸ್ಪಿಯರ್ನ ಪ್ರಸಿದ್ಧ ಭಾಷಣ “Seven Ages of Man” ಬಗ್ಗೆ ಚಿಂತಿಸುತ್ತಾರೆ. “ಆ ವಿಚಿತ್ರ ಜೀವನ ಕಥೆಯಲ್ಲಿ...” ಅವರು ನಗುತ್ತಾರೆ, “ಬಹುಶಃ ನಾನು ಸಹ ಕೊನೆಯ ಅಧ್ಯಾಯದತ್ತ ಸಾಗುತ್ತಿದ್ದೇನೆ.” ಎನ್ನುತ್ತಾರೆ. “ಆದರೆ ಕಾಗದದಲ್ಲಿರುವ ಪದಗಳನ್ನು ಮನರಂಜನೆಯ ಕಥೆಯಾಗಿ ರೂಪಿಸುವ ಸೃಜನಾತ್ಮಕ ಸವಾಲು ಇನ್ನೂ ನನ್ನನ್ನು ಸೆಳೆಯುತ್ತದೆ.” ನಂತರ ಅವರು ಈ ರಂಗಮಂದಿರದ ಆತ್ಮವನ್ನು ವಿವರಿಸುವ ಒಂದುಮಾತು ಹೇಳುತ್ತಾರೆ: “ನಾವೆಲ್ಲ ಇಲ್ಲಿ ಒಂದೇ ಕುಟುಂಬ.” ಎಂದು ಮುಗಿಸುತ್ತಾರೆ
ನನ್ನ ಅನಿರೀಕ್ಷಿತ ಪ್ರವೇಶ ಈ ಐತಿಹಾಸಿಕ ರಂಗಮಂದಿರದೊಳಗೆ ನನ್ನ ಪ್ರಯಾಣ ಸಂಪೂರ್ಣವಾಗಿ ಅನಿರೀಕ್ಷಿತವಾಗಿ ಆರಂಭವಾಯಿತು. ನನಗೆ ಒಂದು ಪುಸ್ತಕ ಓದುವ ಕಾರ್ಯಕ್ರಮಕ್ಕೆ ಆಹ್ವಾನ ಬಂದಿತು. ಸಾಹಿತ್ಯದ ಮೇಲಿನ ಕುತೂಹಲದಿಂದ ನಾನು ಹೋದೆ; ಮತ್ತೆಮತ್ತೆ ಹೋದೆ! ನನಗೇ ತಿಳಿದಿರಲಿಲ್ಲ ಆ ಓದುವ ಕಾರ್ಯಕ್ರಮಗಳು ನಿಜವಾಗಿ ಮೌನವಾಗಿ ನಡೆಯುತ್ತಿದ್ದ ಆಡಿಷನ್ಗಳಾಗಿದ್ದವು ಎಂದು. ಎರಡು ವಾರಗಳ ನಂತರ ನನ್ನ ಫೋನ್ ಮೊಳಗಿತು. ಅದು ಡೇವ್ ರಾಬಿನ್ಸ್. “ನಾನು ಸಾಮಾನ್ಯವಾಗಿ ನಮ್ಮಕಾರ್ಯಾಗಾರಗಳಿಗೆ ಬರುವವರನ್ನೇ ಆಯ್ಕೆ ಮಾಡುತ್ತೇನೆ,” ಅವರು ಹೇಳಿದರು. “ಆದರೆ ನಾನು ನಿಮ್ಮನ್ನು ನಂಬಿದ್ದೇನೆ. ನಿಮ್ಮ ಇಂಗ್ಲಿಷ್ ಉಚ್ಚಾರಣೆ ಉತ್ತಮವಾಗಿದೆ. ನಿಮಗಾಗಿ ಒಂದು ಪಾತ್ರವಿದೆ!” ಹೀಗೆ ನನ್ನಜೀವನದ ಹೊಸ ಅಧ್ಯಾಯಕ್ಕೆ ಪರದೆ ತೆರೆಯಿತು. ನನಗೆ ಕೊಟ್ಟ ಪಾತ್ರ ಹಿಂದಿನ ಸಚಿವ ಸಂಪುಟದ ಸದಸ್ಯನಾಗಿದ್ದ ಸ್ಕಾಟ್ಲಂಡಿನ ಒಬ್ಬ ಲಾರ್ಡ್.
“ಲಾರ್ಡ್ ಕೋಹ್ಲಿ” ಹುಟ್ಟಿದ ಕ್ಷಣ ಒಂದು ರಿಹರ್ಸಲ್ ಸಮಯದಲ್ಲಿ ಡೇವ್ ಹಠಾತ್ ಕೇಳಿದರು: ನಿಮ್ಮ ಮೆಚ್ಚಿನ ಕ್ರಿಕೆಟಿಗ ಯಾರು?” ನಾನು ಕ್ಷಣವೂ ತಡ ಮಾಡದೆ ಉತ್ತರಿಸಿದೆ: ವಿರಾಟ್ ಕೋಹ್ಲಿ ಅಂದೆ. ಡೇವ್ ನಕ್ಕರು.“ಹಾಗಾದರೆ ನೀನು ಲಾರ್ಡ್ ಕೋಹ್ಲಿ.” ಆ ಕ್ಷಣದಿಂದ ಎಲ್ಲರೂ ನನ್ನನ್ನು “ಲಾರ್ಡ್ ಕೋಹ್ಲಿ” ಎಂದು ಕರೆಯಲು ಪ್ರಾರಂಭಿಸಿದರು. ನನ್ನ ಪಾತ್ರ ಸ್ಕಾಟ್ಲ್ಯಾಂಡ್ ಒಂದು ಚತುರ ಸಂಸತ್ತಿನ ಮಾಜಿ ಕ್ಯಾಬಿನೆಟ್ ಸದಸ್ಯನ ಪಾತ್ರ. ಅದು ಜೀವಂತ ಸಂಭಾಷಣೆ ಮತ್ತುಸ್ಮರಣೀಯ ದೃಶ್ಯಗಳನ್ನು ಹೊಂದಿತ್ತು.
ಕುಟುಂಬವಾಗಿ ಮಾರ್ಪಟ್ಟ ಕಲಾವಿದರು ಈ ನಾಟಕದಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು. ಇಪ್ಪತ್ತೆರಡರ ವಯಸ್ಸಿನ ಯುವಕರು ಮತ್ತು ಎಪ್ಪತ್ತಕ್ಕೂ ಹೆಚ್ಚುವಯಸ್ಸಿನ ಕಲಾವಿದರು ಒಂದೇ ವೇದಿಕೆಯಲ್ಲಿ ನಟಿಸಿದರು. ರೋಸಲಿಂಡ್, ಒರ್ಲಾಂಡೋ, ಸೆಲಿಯಾ, ಟಚ್ಸ್ಟೋನ್ ಮತ್ತು ಜಾಕ್ಸ್ ಶೇಕ್ಸ್ಪಿಯರ್ನ ಲೋಕವನ್ನು ಜೀವಂತಗೊಳಿಸಿದರು. ಅವರೊಂದಿಗೆ ಡ್ಯೂಕ್ ಸೀನಿಯರ್, ಡ್ಯೂಕ್ ಫ್ರೆಡರಿಕ್, ಒಲಿವರ್, ಸಿಲ್ವಿಯಸ್, ಫೀಬಿ, ಕೊರಿನ್, ಆಡ್ರಿ, ವಿಲಿಯಂ ಮತ್ತು ಇನ್ನೂ ಹಲವರು ಸೇರಿದ್ದರು. ಪ್ರತಿ ಕಲಾವಿದ ತನ್ನದೇ ವ್ಯಕ್ತಿತ್ವವನ್ನು ವೇದಿಕೆಗೆ ತಂದನು. ಕೆಲವು ವಾರಗಳ ರಿಹರ್ಸಲ್ ನಂತರ ಈ ತಂಡ ನಿಧಾನವಾಗಿ ಒಂದು ಕುಟುಂಬವಾಯಿತು. ವೇದಿಕೆಯನ್ನು ಮೀರಿದ ರಿಹರ್ಸಲ್ಗಳು. ಸುಮಾರು ಎರಡು ತಿಂಗಳು ನಾವು ಒಟ್ಟಿಗೆ ಅಭ್ಯಾಸ ಮಾಡಿದೆವು. ಮೊದಲಿಗೆ ನಾನು ಸ್ವಲ್ಪ ಹಿಂಜರಿತ ಅನುಭವಿಸಿದೆ.ನಾನೊಬ್ಬನೇ ತಂಡದಲ್ಲಿದ್ದ ಏಕೈಕ ಭಾರತೀಯ ನಟ. ಆದರೆ ಆ ಹಿಂಜರಿಕೆ ಬೇಗನೆ ಮಾಯವಾಯಿತು. ಎಲ್ಲರೂ ನನ್ನನ್ನು ಹೃದಯಪೂರ್ವಕವಾಗಿ ಸ್ವಾಗತಿಸಿದರು. ಡೇವ್ ರಾಬಿನ್ಸ್ ಪಾತ್ರಗಳನ್ನು ಅನ್ವೇಷಿಸಲು ಸೃಜನಾತ್ಮಕ ಸ್ವಾತಂತ್ರ್ಯವನ್ನು ಕೊಟ್ಟು ಉತ್ತೇಜಿಸಿದರು. ರಿಹರ್ಸಲ್ ನಂತರ ನಾವು ಹತ್ತಿರದ ಪಬ್ಗೆ ಹೋಗುತ್ತಿದ್ದೆವು. ಆಸಂಜೆಗಳು ಅದ್ಭುತವಾಗಿದ್ದವು. ಶೇಕ್ಸ್ಪಿಯರ್ನ ಭಾಷೆ, ಬೆಳಕು, ವಿನ್ಯಾಸ, ವೇಷಭೂಷಣ, ಸಂಗೀತ ಮತ್ತು ಪಾತ್ರಗಳ ಬಗ್ಗೆ ನಾವು ಸದಾ ಚರ್ಚಿಸುತ್ತಿದ್ದೆವು. ಕೆಲವೊಮ್ಮೆ ಚರ್ಚೆಗಳು ಗಂಭೀರವಾಗುತ್ತವೆ. ಕೆಲವೊಮ್ಮೆ ನಗುವಿನಲ್ಲಿ ಕೊನೆಗೊಳ್ಳುತ್ತವೆ. ಆದರೆ ಪ್ರತಿ ಸಾರಿ ನಮ್ಮ ಬಂಧ ಇನ್ನಷ್ಟು ಗಟ್ಟಿಯಾಗುತ್ತಿತ್ತು.
ಜೀವನದ ಕನ್ನಡಿಯಂತೆ: ಶೇಕ್ಸ್ಪಿಯರ್ As You Like It ನಾಟಕದ ಅತ್ಯಂತ ಪ್ರಸಿದ್ಧ ಭಾಗಗಳಲ್ಲಿ ಒಂದು “Seven Ages of Man” ಭಾಷಣ. All the world’s a stage, And all the men and women merely players; They have their exits and their entrances; And one man in his time plays many parts. ಈ ಸಾಲುಗಳಲ್ಲಿ ಶೇಕ್ಸ್ಪಿಯರ್ ಜೀವನದ ತತ್ತ್ವವನ್ನು ಹಿಡಿದಿಡುತ್ತಾರೆ. ಮಾನವನ ಜೀವನದ ಏಳು ಹಂತಗಳನ್ನು ಅವರು ವಿವರಿಸುತ್ತಾರೆ. ಈ ವಿಚಾರವನ್ನು ಸ್ವಲ್ಪ ಇನ್ನಷ್ಟು ಆಳವಾಗಿ ನೋಡೋಣ
1. ಮಗು (Infant ) ಜೀವನದ ಆರಂಭ ಸಂಪೂರ್ಣ ಅವಲಂಬನೆ.ಅಳುವು, ನಗು, ಚಲನೆ ಎಲ್ಲವೂ ಸಹಜ.ಇಲ್ಲಿ ನಿರಪರಾಧಿತ್ವವಿದೆ, ಆದರೆ ಸ್ವತಂತ್ರತೆ ಇಲ್ಲ.ಇದು ಜೀವನದ “ಆರಂಭದ ಸಂಗೀತ” (Beginning of Life’s Music). 2. ಶಾಲೆಗೆ ಹೋಗಲು ಇಷ್ಟವಿಲ್ಲದ ಬಾಲಕ (Schoolboy) “Creeping like snail unwillingly to school.” ಇಲ್ಲಿ ಶೇಕ್ಸ್ಪಿಯರ್ ಬಾಲ್ಯದ ಅಜ್ಞಾನ ಮತ್ತು ಒತ್ತಡವನ್ನು ಹಿಡಿದಿಡುತ್ತಾರೆ. ಕರ್ತವ್ಯ ಮತ್ತು ಸ್ವಾತಂತ್ರ್ಯದ ನಡುವೆ ಮೊದಲ ಸಂಘರ್ಷ. 3. ಪ್ರೇಮಿಯ ಹಂತ (Lover); ಭಾವನೆಗಳ ಸ್ಫೋಟ. ಪ್ರೇಮ, ಕಾವ್ಯ, ಕನಸುಗಳು.ಇಲ್ಲಿ ತರ್ಕಕ್ಕಿಂತ ಹೃದಯವೇ ಮುಖ್ಯ. ಈ ಹಂತದಲ್ಲಿ ಜೀವನ ಒಂದು ಕಾವ್ಯವಾಗುತ್ತದೆ. 4. ಸೈನಿಕ (Soldier)ಆತ್ಮಗೌರವ, ಧೈರ್ಯ, ಮತ್ತು ಹೆಮ್ಮೆ.“Seeking the bubble reputation even in the cannon’s mouth”. ಹೆಸರು, ಮಾನ, ಗುರುತಿಗಾಗಿ ಹೋರಾಟ.ಕೆಲವೊಮ್ಮೆ ಅಪಾಯಕ್ಕೂ ಸಿದ್ಧತೆ (Fight for Identity and Recognition). 5. ನ್ಯಾಯಾಧೀಶ (Justice)ಇದು ಪರಿಪಕ್ವತೆ. ಅನುಭವ, ಜ್ಞಾನ, ಮತ್ತು ಸಮತೋಲನ. ಜೀವನವನ್ನು ಅರ್ಥಮಾಡಿಕೊಂಡಿರುವ ಹಂತ (Stage of Wisdom and Balance).ಇಲ್ಲಿ ವ್ಯಕ್ತಿ ಇತರರಿಗೆ ಮಾರ್ಗದರ್ಶನ ನೀಡುವವನಾಗುತ್ತಾನೆ. 6. ವೃದ್ಧ (Pantaloon) ಶಕ್ತಿ ನಿಧಾನವಾಗಿ ಕಡಿಮೆಯಾಗುತ್ತದೆ. ಶರೀರ ಬದಲಾಗುತ್ತದೆ. ಆದರೆ ಇಲ್ಲಿ ಒಂದು ಸೂಕ್ಷ್ಮ ಹಾಸ್ಯವೂ ಇದೆ ಜೀವನ ತನ್ನ ವಲಯವನ್ನು ಮುಚ್ಚುತ್ತಿದೆ. 7. ಅಂತಿಮ ಹಂತ (Second Childhood) “Sans teeth, sans eyes, sans taste, sans everything: ಮತ್ತೆ ಮಗುತನ — ಆದರೆ ಈ ಬಾರಿ ಕ್ಷೀಣತೆ ಜೊತೆಗೆ .ಇದು ಜೀವನದ ಮೌನ ಸಮಾಪ್ತಿ Sans teeth, sans eyes, sans taste, sans everything.ಆ ವೇದಿಕೆಯಲ್ಲಿ ನಿಂತು ಆ ಪದಗಳು ಪ್ರತಿಧ್ವನಿಸಿದಾಗ ನನಗೆ ಒಂದುಆಳವಾದ ಭಾವನೆ ಉಂಟಾಯಿತು.
ರಂಗಮಂದಿರವು ಕೇವಲ ವೇದಿಕೆಯಾಗಿ ಇರಲಿಲ್ಲ. ಅದು ಜೀವನದ ಕನ್ನಡಿಯಾಯಿತು.
ಆರು ರಾತ್ರಿಗಳ ನಾಟಕದ ಮಾಯೆ ನಾಟಕವು ಆರು ಪ್ರದರ್ಶನಗಳವರೆಗೆ (Feb 28-March 7, 2026) ನಡೆಯಿತು. ಪ್ರತಿಪ್ರದರ್ಶನವೂ ಸಂಪೂರ್ಣವಾಗಿ ಭರ್ತಿಯಾಗಿತ್ತು. ಕೆಲವರು ಟಿಕೆಟ್ಗಾಗಿ ಕಾಯಬೇಕಾಯಿತು. ಆ ಆರು ಸಂಜೆಗಳಲ್ಲಿ ಫುಲ್ನೇಕ್ ರಂಗಮಂದಿರ ನಿಜವಾಗಿಯೂ ಮಾಯೆಯಂತೆ ಕಾಣಿಸಿತು
ಎರಡು ರಂಗಭೂಮಿ ಲೋಕಗಳ ನಡುವಿನ ಸೇತುವೆ ಈ ಅನುಭವ ನನಗೆ ಬೆಂಗಳೂರಿನ Ranga Shankara ರಂಗಮಂದಿರವನ್ನು ನೆನಪಿಸಿತು. ಇದು Arundhati Nag ಅವರು Shankar Nag ಅವರ ಸ್ಮರಣಾರ್ಥ ಸ್ಥಾಪಿಸಿದ ಪ್ರಸಿದ್ಧ ರಂಗಭೂಮಿ. ಸಾವಿರಾರು ಕಿಲೋಮೀಟರ್ ದೂರ ಇದ್ದರೂ, ಫುಲ್ನೇಕ್ ಮತ್ತು ರಂಗ ಶಂಕರ ಒಂದೇ ಆತ್ಮವನ್ನು ಹಂಚಿಕೊಂಡಿವೆ. ಎರಡೂ ಸಮುದಾಯ ರಂಗಭೂಮಿಗಳು. ಎರಡೂ ಹೊಸಬರನ್ನು ಸ್ವಾಗತಿಸುತ್ತವೆ. ಸಾಮಾನ್ಯ ಜನರನ್ನು ಕಥೆ ಹೇಳುವವರಾಗಿ ರೂಪಿಸುತ್ತವೆ.
ಅಂತಿಮ ನಮಸ್ಕಾರ ಈ ಅನುಭವ ಕೇವಲ ಒಂದು ನಾಟಕದಲ್ಲಿ ನಟಿಸಿದುದಕ್ಕಿಂತ ಬಹಳಹೆಚ್ಚು. ಇದು ಧೈರ್ಯದ ಬಗ್ಗೆ, ಸ್ನೇಹದ ಬಗ್ಗೆ, ಸೃಜನಾತ್ಮಕತೆಯ ಬಗ್ಗೆ. ಒಳಗೊಳ್ಳುವಿಕೆಯ ಬಗ್ಗೆ. ಶೇಕ್ಸ್ಪಿಯರ್ ಸರಿಯಾಗಿ ಹೇಳಿದ್ದರು: ಈಸಂಪೂರ್ಣ ಜಗತ್ತೇ ಒಂದು ವೇದಿಕೆ. ಮತ್ತು ನನ್ನ ಜೀವನದ ಒಂದುಮರೆಯಲಾಗದ ಅಧ್ಯಾಯದಲ್ಲಿ, ಆ ವೇದಿಕೆಯಲ್ಲಿ ನಿಲ್ಲುವ ಗೌರವ ನನಗೆ ದೊರೆಯಿತು ಲಾರ್ಡ್ ಕೋಹ್ಲಿಯಾಗಿ!
-- ಶ್ರೀಹರ್ಷ ನೀರಗುಂದ ನಾಗರಾಜ್
ಪಾತ್ರವರ್ಗ (ಪ್ರವೇಶ ಕ್ರಮದಲ್ಲಿ) ಮ್ಯಾಡಮ್ ಲೆ ಬ್ಯೂ (ಹಿರಿಯ ಸಿವಿಲ್ ಸೇವಕ) — ಸ್ಲಾವಿಕಾರಾಂಕೋವಿಕ್ ಒರ್ಲಾಂಡೊ ಡೆ ಬೋಯ್ಸ್ — ಜಾಕ್ ಮಾಸ್ಸಿ ಆಡಮ್ (ಒಲಿವರ್ ಡೆ ಬೋಯ್ಸ್ಗೆ ಸೇವಕ) — ಡಿಕ್ ಪೋರ್ಟರ್ ಒಲಿವರ್ ಡೆ ಬೋಯ್ಸ್ (ಒರ್ಲಾಂಡೊನ ಸಹೋದರ) — ಕ್ರಿಸ್ಲಾಂಗ್ ಡೆನಿಸ್ (ಫ್ರೆಡಾ ಅವರ ಬಾಡಿಗಾರ್ಡ್ಗಳಲ್ಲಿ ಒಬ್ಬರು) — ಜಾರ್ಜಿಯಾನಾ ಗ್ರಾಂಟ್ ಚಾರ್ಲ್ಸ್ (ಫ್ರೆಡಾ ಅವರ ಬಾಡಿಗಾರ್ಡ್ ಹಾಗೂ ಪ್ರಸಿದ್ಧ ಕುಸ್ತಿ ಪಟು) — ಜೋ ಬ್ರಾಹಮ್ ಸಿಲಿಯಾ (ಡಚೆಸ್ ಫ್ರೆಡಾ ಅವರ ಮಗಳು) — ಅಲೆಕ್ಸ್ ವಾಲಿಸ್ ರೊಸಾಲಿಂಡ್ (ಫ್ರೆಡಾ ಅವರ ಸೋದರ ಮಗಳು / ಸಿಲಿಯಾ ಅವರಕಜಿನ್) — ಕ್ಲೇರ್ ಆಂಡ್ರ್ಯೂಸ್ ಟಚ್ಸ್ಟೋನ್ (ಫ್ರೆಡಾ ಅವರ ಅರಮನೆಯ ಹಾಸ್ಯಗಾರ) — ಗ್ರೆಗ್ಆಡಮ್ಸ್ ಡಚೆಸ್ ಫ್ರೆಡಾ (ಹೊಸ ‘ಡಚೆಸ್’) — ಕ್ರಿಸ್ ರಾಬಿನ್ಸ್ ಎಲಿನರ್ (ಹಳೆಯ, ಈಗ ಅಧಿಕಾರ ಕಳೆದುಕೊಂಡ ‘ಡಚೆಸ್’) —ಕ್ರಿಸ್ ಪೋರ್ಟರ್ ಅಮಿಯನ್ಸ್ (ಹಿಂದಿನ ಸಚಿವ ಸಂಪುಟ ಸದಸ್ಯ) — ಮಾಗ್ದಾ ಲೈಡನ್ ಲಾರ್ಡ್ ಕೋಹ್ಲಿ (ಹಿಂದಿನ ಸಚಿವ ಸಂಪುಟ ಸದಸ್ಯ) — ಶ್ರೀಹರ್ಷ ನೀರಗುಂದ ನಾಗರಾಜ್ ಜಾಕ್ವೀಸ್ (ವಿಷಾದಭರಿತ ಸ್ವಭಾವದ ಮಾಜಿ ಸ್ಕಾಟಿಷ್ ಸಂಸದ) — ಡೊಮಿನಿಕ್ ಆಡಮ್ಸ್ ಸಿಲ್ವಿಯಸ್ (ಫೀಬಿಯನ್ನು ಪ್ರೀತಿಸುವ ರೈತ) — ಚಾರ್ಲಿಕ್ರೋಝಿಯರ್ ಕೊರಿನ್ (ಸಿಲ್ವಿಯಸ್ನ ಕುರಿಗಾಹಿ) — ಪಾಲ್ ಕಲ್ಲಿಂಗ್ಫೋರ್ಡ್ ಆಡ್ರಿ (ಚಂಚಲ ಸ್ವಭಾವದ ಕುರಿಗಾಹಿ) — ಹೆಲೆನ್ ಚೆಸ್ಟರ್ಮನ್ ಆಡು (ಧ್ವನಿ ನೀಡಿದವರು) — ಕ್ಲೇರ್ ಆಂಡ್ರ್ಯೂಸ್ ರೆವ್. ಓಲಿವರ್ ಮಾರ್ಟೆಕ್ಸ್ಟ್ (ಅಮೆರಿಕನ್ ಎವಾಂಜೆಲಿಕಲ್ಉಪದೇಶಕ) — ಮೈಕ್ ಹೇಯ್ಸ್ ಫೀಬಿ (ಆಕರ್ಷಕ ಕುರಿಗಾಹಿ, ಸಿಲ್ವಿಯಸ್ನ್ನು ಪ್ರೀತಿಸದವಳು) — ಏಮಿ ವುಡ್ರಫ್ ವಿಲಿಯಂ (ಕಾಡಿನಲ್ಲಿ ಹುಟ್ಟಿದ ಸರಳ ಯುವಕ) — ವಿಲಿಯಂ ಲಿಂಡ್ಲಿ ಆರ್ಡನ್ ಆರ್ಮ್ಸ್ ಪಬ್ನ ಮಾಲೀಕ — ವಿಲಿಯಂ ಲಿಂಡ್ಲಿ ಹೈಮನ್ (ದೈವಿಕ ಪ್ರಯಾಣಿಕ) — ಪಾಲ್ ಕ್ಲಾರ್ಕ್
ಲೇಖನ ಮತ್ತು ಚಿತ್ರಗಳು: ಶ್ರೀಹರ್ಷ ನೀರಗುಂದ ನಾಗರಾಜ್
(ಉದಯವಾಣಿಯNRI ಆವೃತ್ತಿಯಲ್ಲಿ ಇದರ ಸಂಕ್ಷಿಪ್ತ ರೂಪ ಈ ಮೊದಲು ಪ್ರಕಟವಾಗಿತ್ತು.)