ಇಂಗ್ಲೆಂಡಿನಲ್ಲಿ ಯುಗಾದಿ: ವಸಂತನಾಗಮನದ ನಾಂದಿ

ಸಪ್ಟೆಂಬರ್ ತಿಂಗಳಿನಿಂದ ನಿರಂತರ ಮಳೆಯ ಆಘಾತಕ್ಕೆ ತುತ್ತಾಗಿರುವ ಇಂಗ್ಲೆಂಡಿನಲ್ಲಿ ಕಳೆದ ಕೆಲವು ದಿನಗಳಿಂದ ಸೂರ್ಯ ಮಹಾಶಯ ಮೋಡಗಳ ಚಾದರದ ಮರೆಯಿಂದ ಹಣಕಿ ಹಾಕುತ್ತ ಕವಿದಿರುವ ಛಳಿಯ ಬಲೆಯನ್ನು ಹರಿದು ಬದಿಗೊಡ್ಡಲು ಪ್ರಯತ್ನಿಸುತ್ತಿದ್ದಾನೆ. ಅವನ ಕ್ಷೀಣ ಪ್ರಯತ್ನವನ್ನು ಹುರಿದುಂಬಿಸಲು ಒಣಗಿ ನಿಂತ ಗಿಡ ಮರಗಳು ಟಿಸಿಲೊಡೆಯುತ್ತ, ಮೈತುಂಬ ಬಣ್ಣ ಬಣ್ಣದ ಹೂಗಳನ್ನು ಹೊತ್ತು ಚಿಯರ್ ಚಿಣ್ಣರಂತೆ ಉತ್ಸಾಹದಿಂದ ತಲೆದೂಗುವುದ ಕಂಡಾಗ ವಸಂತ ಬಂದ ಎಂಬ ಉತ್ಸಾಹ ನಮ್ಮಲ್ಲೂ. ವಾತಾವರಣದಲ್ಲಿ ಕಾವು ಕೂಡುತ್ತಿದ್ದಂತೇ ಗೂಡುಗಳಿಂದ ಹೊರಬಿದ್ದು ಹೊಂಬಿಸಿಲ ಹೊಲದಲ್ಲಿ ಹೊರಳಾಡುವ ಹಂಬಲ ಹೊಮ್ಮುವುದು ಸಹಜ. ಇಂತಹ ಹಂಬಲಕ್ಕೆ ಇಂಬಾಗುವುದು ಯುಗಾದಿ. ಪ್ರತಿವರ್ಷದಂತೆ ಈ ವರ್ಷವೂ ಕನ್ನಡ ಬಳಗ ಯು.ಕೆ ಯುಗಾದಿ ಹಬ್ಬದ ಸಂಭ್ರಮದ ಕಾರ್ಯಕ್ರಮವನ್ನು ಏಪ್ರಿಲ್ ೧೩ರಂದು ಲೆಸ್ಟರ್ ನಗರದಲ್ಲಿ ಏರ್ಪಡಿಸಿತ್ತು. ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣೀ ಭೂತರಲ್ಲಿ ಒಬ್ಬರಾದ, ಅನಿವಾಸಿ ಬಳಗದ ಸದಸ್ಯರೂ ಆದ ಡಾ. ರಾಜಶ್ರೀ ಪಾಟೀಲರು ತಮ್ಮ ಅನಿಸಿಕೆಗಳನ್ನು ಚಿತ್ರ ಸಮೇತ ಇಲ್ಲಿ ಉಣಬಡಿಸಿದ್ದಾರೆ. ಕಾರಣಾಂತರಗಳಿಂದ ಅಂದು ಬರಲಾಗದವರಿಗೆ, ವಿದೇಶಗಳಲ್ಲಿರುವ ನಮ್ಮ ಓದುಗರಿಗೆ ಈ ವರದಿ ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸಿದ ಅನುಭವ ಕೊಡುವುದರಲ್ಲಿ ಸಂದೇಹವಿಲ್ಲ. ಪ್ರತೀ ಕನ್ನಡ ಬಳಗದ ದೀಪಾವಳಿ-ಯುಗಾದಿ ಕಾರ್ಯಕ್ರಮದಲ್ಲಿ ನಮ್ಮ ಅನಿವಾಸಿ ಬಳಗ ಸಮಾನಾಂತರವಾಗಿ ಸಾಹಿತ್ಯಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಈ ಬಾರಿ ರಂಗಕರ್ಮಿ ಶ್ರೀ. ಶ್ರೀನಿವಾಸ ಪ್ರಭು ಅವರೊಂದಿಗೆ ನಡೆಸಿದ ಸಂವಾದದ ಅನುಭವವನ್ನು ಉತ್ತರ ಐರ್ಲ್ಯಾನ್ಡ್ ನಿಂದ ಮೊದಲ ಬಾರಿಗೆ ಭಾಗವಹಿಸಿದ ಶ್ರೀಮತಿ ಅಮಿತ ರವಿಕಿರಣ್ ಮುಂದಿನ ವಾರ ವಿಶದವಾಗಿ ಹಂಚಿಕೊಳ್ಳಲಿದ್ದಾರೆ. (ಸಂ)

‘ಬೇವಿನಕಹಿ ಬಾಳಿನಲಿ, ಹೂವಿನ ನಸುಗಂಪ ಸೂಸಿ ಜೀವಕಳೆಯ ತರುತಿದೆ. ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.’
ನಮ್ಮೆಲ್ಲರ ಜೀವನ ಜಂಜಾಟಗಳ ನಡುವೆ ಸಂಭ್ರಮದ ಕಳೆ ತರಲು ಯುಗಾದಿ ಸಂಭ್ರಮ ಮತ್ತೆ ಬಂದಿತ್ತು ೧೩/೦೪/೨೪ ಲೆಸ್ಟರ್ ಗೆ. ಲೆಸ್ಟರ್ ಕನ್ನಡಿಗರು ೨೦೧೬ ನಿಂದ ಸಾಂಪ್ರದಾಯಿಕವಾಗಿ ಯುಗಾದಿಯನ್ನ ಸಂಭ್ರಮದಿಂದ ಆಚರಿಸುತ್ತ ಬಂದಿದ್ದಾರೆ  ಆದರೆ ಈ ಬಾರಿ ಕನ್ನಡ ಬಳಗದ ಸಹಯೋಗ ಅದರ ಮೆರಗನ್ನ ಇನ್ನೂ ಹೆಚ್ಚಿಸಿತ್ತು. ದೇಶದ ಹಲವಾರು ಮೂಲೆಗಳಿಂದ  ೬೦೦ಕ್ಕೂ ಹೆಚ್ಚು ಜನರು ಯುಗಾದಿ ಸಂಭ್ರಮವನ್ನು  ಆಚರಿಸಲು ನೆರೆದಿದ್ದರು. ಅದೇ ದಿನದಂದು ಹಲವಾರು ಕಡೆ ಯುಗಾದಿ ಸಂಭ್ರಮಾಚರಣೆ ಇದ್ದರೂ ಲೆಸ್ಟರನಲ್ಲಿ ಇಷ್ಟೊಂದು ಜನ ಸೇರಿದ್ದು ಇನ್ನೂ ವಿಶೇಷವಾಗಿತ್ತು.

ಕಾರ್ಯಕ್ರಮಕ್ಕೆ ವಿಧಿವತ್ತಾಗಿ  ವಿಘ್ನ ನಿವಾರಕ ವಿಘ್ನೇಶ್ವರನ ಪೂಜೆಯೊಂದಿಗೆ ಮತ್ತು ಸ್ತುತಿಹಾಡಿನೊಂದಿಗೆ ಓಂಕಾರ ದೊರಕಿತು. ಲೆಸ್ಟರ್ ಕನ್ನಡಿಗರು ಮತ್ತು ಕನ್ನಡ ಬಳಗ ಯುಕೆ ತಂಡಗಳು ಭಾರತದಿಂದ ಆಗಮಿಸಿದ ಜನಪ್ರಿಯ ಗಣ್ಯ ಅತಿಥಿಗಳಾದ ಶ್ರೀಯುತ ಸಿಹಿ ಕಹಿ ಚಂದ್ರು, ಶ್ರೀನಿವಾಸ ಪ್ರಭು, ವಿಶ್ವೇಶ್ ಭಟ್ ಅವರನ್ನ ಮತ್ತೂ ದೇಶದ ಮೂಲೆ ಮೂಲೆಯಿಂದ ಬಂದ ಕನ್ನಡಿಗರನ್ನ ಹೃದಯ ಪೂರ್ವಕವಾಗಿ ಬೇವು ಬೆಲ್ಲವನ್ನ ಹಂಚುವದರೊಂದಿಗೆ ಸ್ವಾಗತಿಸಿದರು. ಗಣ್ಯರು ದೀಪ ಬೆಳಗಿಸುವದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶುಭಕೋರಿದರು.

ಸಾಂಪ್ರದಾಯಿಕ ಭರತನಾಟ್ಯ ನೃತ್ಯಗಳಿಂದ ಕಲಾಪ್ರದರ್ಶನ ಪ್ರಾರಂಭವಾಯಿತು. ಬಿಡುವಿಲ್ಲದೆ ಸತತ ೫ ಘಂಟೆಗಳ ಕಾಲ ಕಲಾಪ್ರದರ್ಶನ ಯುಕೆಯ ವಿವಿಧ ಪ್ರದೇಶಗಳಿಂದ ಬಂದ ಕಲಾವಿದರಿಂದ ನಡೆಯಿತು .  ಚಿಕ್ಕ ಪುಟಾಣಿಗಳು ‘ಸಿಂಡರೆಲ್ಲ’ ನೃತ್ಯರೂಪಕ , ಧಾರ್ಮಿಕ ಭಾವನೆಯನ್ನು ಪುಟಿಸಿದ, ನಾಟಕೀಯ ಕನ್ನಡ ಭಾಷೆಯಲ್ಲಿ ಮೂಡಿ ಬಂದ ‘ಸೀತಾ ಅಗ್ನಿಪ್ರವೇಶ’ ದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕರ್ನಾಟಕದ ಶ್ರೀಮಂತ ನೃತ್ಯ ವೈವಿದ್ಯತೆಯನ್ನ ಪ್ರದರ್ಶಿಸುವ ಕೋಲಾಟ , ಕಂಸಾಳೆ, ಡೊಳ್ಳು ಕುಣಿತ, ಕೊಡವ ನೃತ್ಯ ಮತ್ತು ಹುಲಿಕುಣಿತವನ್ನೊಳಗೊಂಡ ‘ಕರ್ನಾಟಕ ನೃತ್ಯದರ್ಶನ’, ಭಾರತದ ವಿವಿಧ ರಾಜ್ಯಗಳ ಮದುವೆ ಶೃಂಗಾರವನ್ನ ಬಿಂಬಿಸುವ ‘ಲಗ್ನ ಶೃಂಗಾರ’, ‘ಹಚ್ಚೇವು ಕನ್ನಡದ ದೀಪ’ ನೃತ್ಯ ರೂಪಕ, ಜನಪ್ರಿಯ ಗೀತೆಗಳನ್ನಾಧರಿಸಿದ ನೃತ್ಯಗಳು, ಹಾಡು, ವೀಣೆ ಹಾಗು ಗಿಟಾರ್ ವಾದನ ಕಾರ್ಯಕ್ರಮಗಳು ನೆರೆದವರ ಮನಸೆಳೆದವು.

ಈ ಎಲ್ಲ ಕಾರ್ಯಕ್ರಗಳು ಒಂದು ಕಡೆಯಾದರೆ, ಇನ್ನೊಂದೆಡೆ ಬಹು ಪ್ರಸಿದ್ದಿ ಪಡೆದಿರುವ ಲೆಸ್ಟರ್ ಬಾಳೆ ಎಲೆ ಭೋಜನ ಯುಗಾದಿ ಸಂಭ್ರಮಕ್ಕೆ ಸಾಂಪ್ರದಾಯಿಕ ಹೊಳಪನ್ನು ಕೊಟ್ಟಿತ್ತು. ಹೋಳಿಗೆ, ಪಾಯಸ, ಭಜಿ, ಪಲ್ಯಗಳು, ಪೂರಿ, ಚಿತ್ರಾನ್ನ, ಅನ್ನ, ಸಾರು, ಸಾಂಬಾರ್, ಉಪ್ಪಿನಕಾಯಿ, ಕೋಸಂಬ್ರಿ ಹೀಗೆ ಭಕ್ಷ್ಯಗಳ ಪಟ್ಟಿ ಎಷ್ಟು ದೊಡ್ಡದಿತ್ತೋ, ಊಟಮಾಡಿದವರಿಂದ ಊಟದ ಬಗೆಗಿನ ಹೊಗಳಿಕೆ ಪಟ್ಟಿನೂ ಅಷ್ಟೇ ದೊಡ್ಡದಾಗಿತ್ತು! ಲೆಸ್ಟರ್ ಆಯೋಜಕರೇ ಟೊಂಕಕಟ್ಟಿ ಈ ಭೂರಿ ಭೋಜನದ ಅಡುಗೆಯನ್ನು ಮಾಡಿ, ಬಡಿಸಿದ್ದು ಇನ್ನೂ ವಿಶೇಷವಾಗಿತ್ತು! ಊಟದ ವ್ಯವಸ್ಥೆ ಯಶಸ್ವಿಯಾಗಲು ಲೆಸ್ಟರ್ ಕನ್ನಡ ಕುಟುಂಬದೊಟ್ಟಿಗೆ ಹಲವಾರು ಸ್ವಯಂಸೇವಕರು ಕೆಲಸಮಾಡಿದ್ದರು. ಕರ್ನಾಟಕದಿಂದ ಬಂದ ಲೆಸ್ಟರ್ ಮತ್ತು ಡಿ ಮೊಂಟೊಫೋರ್ಟ್ ಯೂನಿವರ್ಸಿಟಿ ವಿದ್ಯಾರ್ಥಿಗಳು , ಶಿವಾಲಯ ಲೆಸ್ಟರ್ ಗುಂಪು ಮತ್ತು ಹೆಚ್ ಎಸ್ ಎಸ್ ಸ್ವಯಂಸೇವಕರು ನಗುಮುಖದಿಂದ ತಮ್ಮ ನಿಸ್ವಾರ್ಥ ಸಹಾಯ ಒದಗಿಸಿದರು.

ಸಭಾಂಗಣದ ಪಕ್ಕದಲ್ಲಿ ಆಯೋಜಿಸಿದ ಕೆಲ ಜಾಹಿರಾತುದಾರರ ಅಂಗಡಿಗಗಳು ಜನರ ಆಕರ್ಷಣೆಗೆ ಒಳಗಾದವು . ಇವುಗಳ ಜೊತೆ ಮ್ಯಾಕ್ ಮಿಲನ್ ಚಾರಿಟಿಗೋಸ್ಕರ ೧೩ ವರ್ಷದ ಹುಡುಗಿ ಖುಷಿ ಪಾಟೀಲ್ ತನ್ನ ಕೈಯಾರೆ ಬೇಕ್ ಮಾಡಿದ ವಿವಿಧ ರೀತಿಯ ಕೇಕುಗಳು ಮತ್ತು ಬಿಸ್ಕತ್ಗಳನ್ನೊಳಗೊಂಡ ಅಂಗಡಿ ಚಿಕ್ಕ ಮಕ್ಕಳು ತಮ್ಮ ತಂದೆ ತಾಯಂದಿರನ್ನ ಅಲ್ಲಿಗೆ ಕರೆದೊಯ್ಯುವಂತೆ ಮಾಡಿತ್ತು. ನೆರೆದವರ ಧಾರಾಳ ಕಾಣಿಕೆ ಜಾಹಿರಾತಿನ ನೆರವಿಲ್ಲದೆ ಅವಳ ನೀರಿಕ್ಷೆಗೂ ಮೀರಿ ಹಣಕೂಡಿಸುವಲ್ಲಿ ಯಶಸ್ವಿಯಾಯಿತು. ಅನನ್ಯ ಪ್ರಸಾದ್ (ಡಾ ಜಿ ಎಸ್ ಶಿವಪ್ರಸಾದರವರ ಮಗಳು) ಈ ವರ್ಷಾಂತ್ಯದಲ್ಲಿ ತಾವು ಒಂಟಿಯಾಗಿ ದತ್ತಿ ಕಾರ್ಯಕ್ಕಾಗಿ ಅಟ್ಲಾಂಟಿಕ್ ಸಾಗರವನ್ನು ಹುಟ್ಟು ದೋಣಿಯಲ್ಲಿ ದಾಟುವ ಸಾಹಸದ ಮಾಹಿತಿಯನ್ನು ಹಂಚಿಕೊಂಡರು. ಸಂಗ್ರಹಿಸಲಿರುವ ಹಣವನ್ನು ಯು.ಕೆ ಯ ಮಾನಸಿಕ ಆರೋಗ್ಯ ದತ್ತಿ ಮತ್ತು ಭಾರತದ ದೀನಬಂಧು ಟ್ರಸ್ಟ್ ಗಳೊಂದಿಗೆ ಹಂಚುವ ಆಕಾಂಕ್ಷೆ ಅವರದ್ದು. ಅವರ ಈ ಪ್ರಯತ್ನ ಯಶಸ್ವಿಯಾದರೆ, ಅಟ್ಲಾಂಟಿಕ್ ಸಾಗರವನ್ನು ಒಬ್ಬಂಟಿಯಾಗಿ ಹುಟ್ಟು ದೋಣಿಯಲ್ಲಿ ಕ್ರಮಿಸಿದ ಪ್ರಥಮ ಬಣ್ಣದ ಮಹಿಳೆಯಾಗಲಿದ್ದಾರೆ ಎಂಬುದು ಕನ್ನಡಿಗರಿಗೆ/ಭಾರತೀಯರಿಗೆ ಹೆಮ್ಮೆಯ ವಿಷಯ. ಅವರ ಈ ಪ್ರಯತ್ನ ಯಶಸ್ವಿಯಾಗಲೆಂದು ಎಲ್ಲರೂ ಹಾರೈಸಿದರು.  ಇದರೊಟ್ಟಿಗೆ ಕನ್ನಡ ಬಳಗ ಯುಕೆ ತಂಡದ ವಾರ್ಷಿಕ ಸಾಮಾನ್ಯ ಸಭೆ (ಎಜಿಮ್) ಮತ್ತು ಅನಿವಾಸಿ ಬಳಗದ ಕಾರ್ಯಕ್ರಮ (ಇದರ ವಿಶೇಷ ವಿವರ ಮುಂದಿನ ವಾರ) ಸಮಾನಾಂತರವಾಗಿ ನಡೆದವು.

ಮತ್ತೆ ಸಾಯಂಕಾಲ ಸಭಿಕರೆಲ್ಲ ಕಾತುರದಿಂದ ಕಾಯುತ್ತಿದ್ದ ಗಣ್ಯರ ಕಾರ್ಯಕ್ರಮಗಳು ಶುರುವಾದವು. ಶ್ರೀಯುತ ಶ್ರೀನಿವಾಸ ಪ್ರಭು ತಮ್ಮ ವೃತ್ತಿ ಬದುಕಿನ ಅನುಭವಗಳನ್ನ ಹಂಚಿಕೊಂಡು ಜನರನ್ನ ರಂಜಿಸಿದರು. ಸಭಿಕರ ಕೋರಿಕೆಗೆ ಮಣಿದು, ರಣಧೀರ ಚಿತ್ರದಲ್ಲಿ ಅವರು ನಟ ರವಿಚಂದ್ರನ್ ಅವರಿಗೆ ಧ್ವನಿ ದಾನ ಮಾಡಿದ ಸಂಭಾಷಣೆಗಳನ್ನು ಸಾದರ ಪಡಿಸಿದರು. ಆದರೆ ಅವರು ತಮ್ಮ ಕಂಚಿನ ಕಂಠದಲ್ಲಿ ಪಠಿಸಿದ ಹ್ಯಾಮ್ಲೆಟ್ ನಾಟಕದ ನಾಯಕನ ಕೊನೆಯ ಸಂಭಾಷಣೆ ಅವರ ಭಾಷಣದ ಪ್ರಮುಖ ಆಕರ್ಷಣೆಯಾಗಿತ್ತು. ಶ್ರೀಯುತ  ಸಿಹಿಕಹಿ ಚಂದ್ರು ಅವರಂತೂ ತಮ್ಮ ಮಾತಿನ ಚಾಕಚಕ್ಯತೆಯಿಂದ ಸಭಿಕರನ್ನ ನಗೆಗಡಲಲ್ಲಿ ಮುಳುಗಿಸಿದರು. ಅವರು ಕಲಾಸಾಮ್ರಾಟ್ ರಾಜಕುಮಾರ ಅವರೊಂದಿಗೆ ಕಳೆದ ಕ್ಷಣಗಳು ಎಲ್ಲರ ಮನದಲ್ಲಿ ಮರೆಯದೆ  ಉಳಿಯುವಂತವು. ಅವರು ನಡೆಸಿ ಕೊಡುವ  ಅಡುಗೆ ಕಾರ್ಯಕ್ರಮಗಳು ಕರ್ನಾಟಕದ ಮನೆಮನೆಗಳಲ್ಲಿ ಮಾತಾಗಿವೆ. ಅವರ ಸಲಹೆಯಂತೆ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧಿಗಳು ಮನೆಯಲ್ಲಿ ಮಾಡಿದ ಅಡುಗೆಗಳ ರುಚಿ ನೋಡಿ ಚಂದ್ರು ಅವರು ವಿಜೇತರನ್ನ ಆಯ್ಕೆಮಾಡಿದರು ಮತ್ತು ಅವರ ಹೆಸರಾಂತ ಜನುಮದ ಜೋಡಿ ಸ್ಪರ್ಧೆಯನ್ನೂ ನಡೆಸಿಕೊಟ್ಟರು.

ಸಾಯಂಕಾಲದ ಲಘು ಉಪಾಹಾರ ಮತ್ತು ಚಹಾ ಜನರನ್ನ ಕೊನೆಯ ಕಾರ್ಯಕ್ರಮಕ್ಕೆ ಸಜ್ಜುಗೊಳಿಸಿತು. ಶ್ರೀಯುತ ವಿಶ್ವೇಶ್ ಭಟ್ ರವರು ಬಹುಮುಖ ಪ್ರತಿಭೆಯ ಅಭಿಯಂತರು. ಇವರು ವ್ಯಂಗಚಿತ್ರ ಮತ್ತು ಸಂಗೀತ ಲೋಕಗಳಲ್ಲಿ ತಮ್ಮ ಛಾಪನ್ನ ಮೂಡಿಸಿದ್ದಾರೆ. ಇವರ ತಮ್ಮ ವಿಭಿನ್ನ ರೀತಿಯ ಹಲವಾರು ಸಂಗೀತ ಪ್ರಕಾರಗಳನ್ನೊಳಗೊಂಡ ಪ್ರದರ್ಶನದಿಂದ  ಜನರನ್ನ ಮಂತ್ರ ಮುಗ್ಧರನ್ನಾಗಿಸಿದರು. ಇವರ ಹಾಡಿಗೆ ಜನ ಹೆಜ್ಜೆ ಹಾಕಿ ಸಂತೋಷ ವ್ಯಕ್ತ ಪಡಿಸಿದರು. ಕಾರ್ಯಕ್ರಮ ರಾತ್ರಿಯ ಭೋಜನ ಮತ್ತು ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು.

ಒಟ್ಟಾರೆ ಇದು ಒಂದು ಪರಿಪೂರ್ಣವಾದ , ಪಕ್ವವಾದ, ಯುಗಾದಿ ಹಬ್ಬದ ಸಂಭ್ರಮವನ್ನೊಳಗೊಂಡ ಮತ್ತು  ಕರ್ನಾಟಕದ ಸಂಸ್ಕೃತಿಯ ವೈವಿಧ್ಯತೆಯನ್ನ ಎತ್ತಿಹಿಡಿಯುವ ಆಚರಣೆಯಾಗಿತ್ತು. ಹೀಗೆ ಹಲವಾರು ಕಾರ್ಯಕ್ರಮಗಳು ಮುಂಬರುವ ದಿನಗಳಲ್ಲಿ ನಡೆದು ಅನಿವಾಸಿ ಕನ್ನಡಿಗರ ಮನದಲ್ಲಿ ಸದಾ ತಾಯ್ನುಡಿ ಮತ್ತು ತಾಯ್ನೆಲದ ವಾಸನೆಯನ್ನು ತುಡಿಯುತ್ತಿರಲಿ ಎಂದು ಹಾರೈಸೋಣ.

ಡಾ. ರಾಜಶ್ರೀ ಪಾಟೀಲ್

ಕಥೆ ಕಥೆ ಕಬ್ಬಿಣ..

‘ಕನೆಕ್ಟ್ ಆದರೆ ಕಥೆ ..ಬಾಕಿ ಎಲ್ಲ ವ್ಯಥೆ’.

ನಮಸ್ಕಾರ ಅನಿವಾಸಿ ಬಂಧುಗಳೇ,ಇವತ್ತಿನ ಓದಿಗೆ ಸ್ವಾಗತ 

ಕಥೆ ತನ್ನ ಪಾಡಿಗೆ ತಾನೆಲ್ಲೋ ಇರುತ್ತದೆ. ಪ್ರಾಯಶ: ಯಾವ ಕಥೆಗಾರರಿಗೂ ಅವರವರ ಕಥೆಗಳ ಬಗ್ಗೆ ಕರಾರುವಕ್ಕಾದ ಅಭಿಪ್ರಾಯವಿರುವುದಿಲ್ಲವಾದ್ದರಿಂದ ಅವರೆಲ್ಲ ಒಂದಕ್ಕೆ ನಿಲ್ಲಿಸದೇ ಹಲವಾರು ಕಾದಂಬರಿಗಳನ್ನು ರಚಿಸುತ್ತಾರೋ ಏನೋ? ನಾವೂ ಹಾಗೇ. ಸಿನೆಮಾಗಳ ಮೇಲೆ ಸಿನೆಮಾ. ‘ ಇಂಥದ್ದೊಂದನ್ನು ನೋಡೇ ಇಲ್ಲ’ ಎಂದು ಬೊಂಬಡಿ ಬಜಾಯಿಸುತ್ತಾ ಮಾಡುತ್ತಲೇ ಹೋಗುತ್ತೇವೆ. ಕಥೆ ತನ್ನ ಪಾಡಿಗೆ ತಾನೆಲ್ಲೋ ಇರುತ್ತದೆ.
‐--ಯೋಗರಾಜ ಭಟ್.

ಹೌದಲ್ಲವೇ ಕಥೆ ಯಾರ ಹಂಗಿಗೂ ಒಳಗಾಗದೇ, ಯರೊಬ್ಬರನ್ನೂ ಲೆಕ್ಕಿಸದೇ ತನ್ನ ಪಾಡಿಗೆ ತಾನು ಹಾಯಾಗಿ ಎಲ್ಲೋ ಇರುತ್ತದೆ. ಅದನ್ನು ಹೆಕ್ಕುತ್ತ ನಾವು ಹೈರಾಣಾಗುತ್ತೇವೆ. ಬನ್ನಿ.. ಇವತ್ತು 'ಕಥೆಯ ಕಥೆ' ಕೇಳೋಣ..ಅಲ್ಲಲ್ಲ ಓದೋಣ.

~ಸಂಪಾದಕಿ

ಕಥೆಯ ಕಥೆ


‘ಹೀಂಗs ಒಂದ ಊರಾಗ ಒಬ್ಬ ರಾಜಾ ಇದ್ದನಂತ’.. ‘ ಹೀಂಗs ಒಂದ ಅಡವ್ಯಾಗ ಒಂದು ಹುಲಿ ಇತ್ತಂತ’.. ಹೀಗೆ ಈ ‘ಹೀಂಗ ಒಂದ’ ಅಂತ ಕಥಿ ಶುರುವಾದ್ರ ಸಾಕು ಕಣ್ಣ ಅಗಲಿಸಿ, ಮೈಯೆಲ್ಲ ಕಿವಿಯಾಗಿ, ಆ ಅಂತ ಬಾಯಿ ತಕ್ಕೊಂಡು ಅಜ್ಜಿಯ ಮುಂದೆ ಕಾಲದ ಪರಿವೆಯಿಲ್ಲದೇ ಕೂತು ಬಿಡುವುದಿತ್ತು. ನಾವೂ ಆ ಕಥೆಯೊಡನೆ ಆ ಹೀಂಗ ಒಂದ ಊರೋ, ಅಡವಿಯೋ ಏನಿತ್ತೋ ಅಲ್ಲಿಗೇ ಹೋಗಿ ಆ ಗೇಣುದ್ದ ಮನಷಾ ಚೋಟುದ್ದ ಗಡ್ಡದವನೊಡನೆಯೋ, ಬೆಂಡು ಬತ್ತಾಸಿನ ಮಳೆಯಲ್ಲಿ ಎದ್ದ ಹುಡುಗನೊಡನೆಯೋ ಅಡ್ಡಾಡಿ ಬಂದುಬಿಡುತ್ತಿದ್ದೆವು.ಚಿನ್ನದ ಕೂದಲಿನ ರಾಜಕುಮಾರಿ,ಆಸೆಬುರುಕ ನರಿಯಣ್ಣ,ಜಾಣ ಮೊಲದ ಮರಿ, ಮೂರ್ಖ ಕಾಗಕ್ಕ, ಸಪ್ತ ಸಮುದ್ರದಾಚೆಯ ಗಿಣಿಮರಿಯಲ್ಲಿ ಜೀವವಿಟ್ಟುಕೊಂಡಿದ್ಧ ರಾಕ್ಷಸ..ಇವರೆಲ್ಲ ನಮ್ಮ ಭಾವಕೋಶದ ಜೊತೆಗೇ ಬೆರೆತು ಉಸಿರಾಡುತ್ತಿದ್ದರು.ಕಾಗಕ್ಕ- ಗುಬ್ಬಕ್ಕನ ಕಥೆಯಂತೂ ನಮ್ಮ ಫೇವರಿಟ್.
ಅಜ್ಜಿಯ ಕಥೆ ಹೇಳುವ ಚೆಂದವೇ ಬೇರೆ.ಅವಳ ಕಥೆಗಳು ಬಹಳ ರೋಚಕವಾಗಿದ್ದಂಥವು.ಅಕಿ ತನ್ನ ಹಳ್ಳಿಯ ತನ್ನ ಸಣ್ಣಂದಿನ ಅನುಭವದ,ನೆನಪಿನ ಕಥೆಗಳನ್ನೂ ಹೇಳಾಕಿ. ‘ ನಮ್ಮೂರಿಗೆ ಉದ್ದನೆಯ ಬಿಳಿಗಡ್ಡದ ಬಾಬಾ ಬಂದಿದ್ದ..ಕೇಸರಿ ಶಾಟಿ ಉಟಗೊಂಡು. ಅವಾ ಹಿಮಾಲಯಕ್ಕ ಹೋಗಿದ್ನಂತ.’ ಆಕೆ ಹೇಳುತ್ತಿದ್ದರೆ ‘ಹಿಮಾಲಯ ಅಂದ್ರ?!’..ಹಿಂದೆಯೇ ನಮ್ಮ ಪ್ರಶ್ನೆ. ‘ ಅದು ದೂರ ದೇಶದಾಗ( ಇಲ್ಲಿ ದೇಶ ಅಂದ್ರ ಪ್ರದೇಶ.ಬೇರೆ ದೇಶವಲ್ಲ.) ಇರೋ ಬರ್ಫಿನ ಬೆಟ್ಟ’ ಅಲ್ಲೆ ಯಾರಾದರೂ ಹೋದ್ರ ಥಂಡಿಗೆ ಕೈಕಾಲು ಶಟದ ಹೋಗತಾವ.ಬರೇ ಸಾಧುಗಳು ಮತ್ತು ದೇವರು ಅಷ್ಟೇ ಅಲ್ಲಿರತಾರ ಅಂತ ಅಕಿ ಹೇಳತಿದ್ರ ಬಿಜಾಪೂರದ ಬಿಸಿಲ ಝಳದ ನೆಲದ ನನಗೆ ಆ ಶೆಟೆದು ಹೋಗುವ ಥಂಡಿಯ ಕಿಂಚಿತ್ತೂ ಕಲ್ಪನೆಯಾಗದಿದ್ದರೂ ಬರ್ಫಿನ ಬೆಟ್ಟವಷ್ಟೇ ತಲೆಯಲ್ಲುಳಿದು ‘ ಓಹ್! ಹಂಗಾದ್ರ ಆ ಲಾಲ್ ವಾಲಾ ( ಐಸ್ ಕ್ಯಾಂಡಿ ಮಾರುವವ) ನ್ನ ಅಲ್ಲೆ ಕರಕೊಂಡ ಹೋಗಿ ಆ ಸಿಹಿಸಿಹಿ ಕೆಂಪು ದ್ರವವನ್ನೆಲ್ಲ ಅದರ ಮೇಲೆ ಸುರುವಿದ್ರ ಅದೆಷ್ಟು ದೊಡ್ಡ ಐಸ್ಕ್ರೀಂ ಕುಲ್ಫೀ ಆದೀತು ಅಂತ ನಾನು ಮನದಲ್ಲೇ ಲಾಲಾರಸ ಸುರಿಸಾಕಿ. ‘ ಆ ಸಾಧೂಂದು ಹೀಂಗೇ ಒಂದ ಬಟ್ಟ ( ಬೆರಳು) ಹೆಪ್ಪುಗಟ್ಟಿ ಕಪ್ಪ ಆಗಿಹೋಗಿತ್ತ.ಅದರ ಮ್ಯಾಲೆ ಸುತಗಿ ತಗೊಂಡು ಹೊಡದ್ರೂ ಅವಂಗ ನೋವು ಆಗೂದಿಲ್ಲಂತ.’. ಅಕಿ ಕಥಿ ಮುಂದುವರೆಸಿದ್ರ ‘ ಓಹ್! ಒಮ್ಮೆ ಹಂಗಾರ ನಾನೂ ಹೋಗಿ ಪೂರಾ ಮೈನೇ ಹಂಗ ಮಾಡಕೊಂಡು ಬರಬೇಕು. ಅಂದ್ರ ಒಟ್ಟಾಪ್ಪೆ(ಕುಂಟಾಬಿಲ್ಲೆ ) ಆಡಬೇಕಾದ್ರ ಬಿದ್ರೂ ಮೊಣಕಾಲು – ಮೊಣಕೈ ತರಚಂಗಿಲ್ಲ’ ಅಂತೆಲ್ಲ ಹುಚ್ಚುಚ್ಚಾಗಿ ಯೋಚಿಸುತ್ತಿದ್ದುದು ಈಗಲೂ ನೆನಪಿನಲ್ಲಿದೆ.
ಇನ್ನು ಸ್ವಲ್ಪ ಬುದ್ಧಿ ಬಂದಮೇಲೆ ಅವಳು ಹಾಡಿನ ಮೂಲಕ ಹೇಳಿದ ಕಥೆಗಳಂತೂ ಇಡಿಯ ಪುರಾಣ ಪ್ರಪಂಚವನ್ನೇ ನಮ್ಮೆದಿರು ತೆರೆದಿಡುವಂಥವು.
‘ಚೈತ್ರ ಶುದ್ಧ ಹಗಲು ನವಮಿ ರಾಮ ಜನಿಸಿದ
ಬಿದ್ದ ಶಿಲೆಯ ಪಾದದಿಂದುದ್ಧಾರ ಮಾಡಿದ
ಜನಕರಾಯನಲ್ಲಿ ಚಾಪು ತುಣುಕು ಮಾಡಿದ
ಗುಣಕ ಶೀಲ ಸೀತಾದೇವಿ ಮನಕ ಮೆಚ್ಚಿದ’
ಇಡಿಯ ರಾಮಾಯಣದ ಕಥೆ 3-4 ನುಡಿಗಳಲ್ಲಿ ಮುಗಿದುಹೋಗುತ್ತಿತ್ತು.ಮತ್ತೊಂದು ಆಸಕ್ತಿದಾಯಕ ಹಾಡೆಂದರೆ ‘ಕಮಲಮುಖಿ ಸತ್ಯಭಾಮೆ’. ಶ್ರೀಕೃಷ್ಣ- ಸತ್ಯಭಾಮೆಯರ ಸಂವಾದದ ಹಾಡು. ಇಡಿಯ ದಶಾವತಾರದ ಕಥೆಗಳೆಲ್ಲ ರೋಚಕವಾಗಿ ಅದರಲ್ಲಿ ಬಂದುಬಿಡುತ್ತವೆ. ಅದೂ ಒಂಥರಾ ನಿಂದಾ ಸ್ತುತಿಯ ರೂಪದಲ್ಲಿ. ಸತ್ಯಭಾಮೆಯ ಮನೆಗೆ ಬಂದ ಕೃಷ್ಣ
‘ ಕಮಲಮುಖಿ ಸತ್ಯಭಾಮೆ ಬೇಗದಿಂದ ಬಾಗಿಲು ತಗಿ ಅಂತೀನಿ ರಮಣಿ’ ಎಂದರೆ ಅವಳು ,
‘ಯಾರೂ ಅರಿಯೆ ನಿಮ್ಮ ಖೂನು-ಗುರುತು ಇಲ್ಲ, ಹೆಂಗ ತೆಗಿಯಲಿ ರಾತ್ರೀಲಿ ರಮಣ’ ಎಂದು ಪ್ರಶ್ನಿಸುತ್ತಾಳೆ. ಅವನು ತನ್ನ ಪರಿಚಯ ಹೇಳುತ್ತ,
‘ ವೇದ ತುಡುಗು ಮಾಡಿ ಒಯ್ದು ನೀರೊಳು
ಶಂಖದೊಳಗ ಇದ್ದನು ವೈರಿ|
ಮತ್ಸ್ಯವತಾರ ತಾಳಿ ಶಂಖಾಸುರನ ಕೊಂದು ವೇದವ ತಂದೀನಿ ನಾರಿ|
ಕೂರ್ಮವತಾರ ತೊಟ್ಟು ಸಮುದ್ರ ಮಥನ ಮಾಡೀನೆ ಹೊತ್ತು ಗಿರಿ|
ರತ್ನ ತೆಗೆದು ಅಮೃತ ಹಂಚುವಾಗ ರಾಹು-ಕೇತುವಿನ ಮಾಡೀನಿ ಸೂರಿ|
ರಸಾತಳಕೆಳೀತಿದ್ದ ಭೂಮಿ ಕೇಳ್
ದೇವರಾದರೆಲ್ಲ ಗಾಬರಿ|
ಸತ್ಯವರಾಹನಾಗಿ ಭೂಮಿ ಹೊತ್ತು ಮ್ಯಾಲಕ ಎತ್ತೀನಿ ಕ್ವಾರಿ|
ಹಿರಣ್ಯಕಶಿಪು ಶಂಭುವಿನ ವರದಾ
ವಿಷ್ಣುಭಕ್ತ ಮಗ ಪ್ರಹ್ಲಾದ|
ತಂದೆ- ಮಗಗ ಬಿದ್ದೀತೋ ವಾದ
ಸಿಟ್ಟಿನಿಂದ ಕಶ್ಯಪ ಕಂಭಕೊದ್ದ
ನಾ ಬಂದೆನಾರ್ಭಾಟದಿಂದ
ಹೊಸ್ತಿಲದೊಳಗ ಹೊಟ್ಟಿ ಸೀಳಿದರ ಕೇಳ ಭಾಮಿನಿ ಆತನ ಮರಣ’
ಎಂದು ಪರಾಕ್ರಮ ಕೊಚ್ಚಿಕೊಂಡ ಅವನ ಕಾಲನ್ನೆಳೆವ ಭಾಮೆಯ ಕುಚೋದ್ಯದ ಉತ್ತರ ಕೇಳಿ..
‘ ಮತ್ಸ್ಯನೆಂದು ಬಲು ಬಡಾಯಿ ಹೇಳತಿ
ಹೆಂಗ ಬಂದ್ಯೋ ನೀ ಊರಾಗ|
ಕೂರ್ಮನಾದರ ಇಲ್ಲಿಗ್ಯಾಕ ಬಂದಿ
ಬೀಳಹೋಗೋ ನೀ ಭಾವ್ಯಾಗ|
ಸತ್ಯ ವರಾಹನೆಂದು ಸಾಕ್ಷಿ ಹೇಳತಿ ಭೂಮಿ ಹೊತ್ತ ಕಸರತ್ತ ಎನಗ ತಲೆ ಎತ್ತದೇ ತಿರುಗುತ ಹೋಗಿರಿ ಹಸಿಮಣ್ಣು ತಿಂದಡವ್ಯಾಗ|
ಭಾಳ ಭಾಳ ಹೇಳತಿದ್ದಿ ಕಸರತ್ತ
ನರಸಿಂಹನವತಾರದ ಮಾತ |♧
ಸಿಂಹನಾದರ ಗುಡ್ಡದಾಗ ಇರಹೋಗು ಇಲ್ಲಿಗ್ಯಾಕ ಬಂದಿರಿ ಕಾರಣ’
ಹೀಗೆಯೇ ಎಲ್ಲ ಅವತಾರಗಳ ಬಗ್ಗೆ ಅವನ ಬಡಾಯಿ, ಅವಳ ಹೀಯಾಳಿಸುವಿಕೆ ನಡೆದು ಕೊನೆಗೆ
‘ನಿನ್ನ ಪ್ರಾಣವಲ್ಲಭ ಮನದನ್ನ’ ಬಂದಿದ್ದೇನೆಂದ ಮೇಲೆಯೇ ಅವಳು ಬಾಗಿಲು ತೆಗಯುವುದು. ಹೇಳಿ ಕೇಳಿ ‘ಸರಸಕೆ ಕರೆದರೆ ವಿರಸವ ತೋರುವ’ ಸತ್ಯಭಾಮೆ ಅವಳು.ಸುಮ್ಮನೆ ಇಷ್ಟು ಸುಲಭಕ್ಕೆ ಬಿಟ್ಟಾಳೆಯೇ?
ನಮ್ಮ ಓಣ್ಯಾಯಿ(ಅಜ್ಜಿ) ರಾಗವಾಗಿ ಈ ಹಾಡು ಹಾಡುತ್ತಿದ್ದರೆ ದಶಾವತಾರದ ಎಲ್ಲ ಕಥೆಗಳೂ ಕಣ್ಣಮುಂದೆ ಸಿನೆಮಾ ರೀಲಿನಂತೆ ಉರುಳುತ್ತಿದ್ದವು.
ಸ್ವಲ್ಪ ದೊಡ್ಡವರಾದ ಮೇಲೆ ಅಂದರೆ ಸುಮಾರು 4-5 ನೇಯತ್ತೆ ಹೊತ್ತಿಗೆ ಓದುವ ಹುಚ್ಚು ಅಂಟಿಕೊಂಡಾದ ಮೇಲೆ ಆಹಾ! ಆ ಚಂದಮಾಮ, ಬೊಂಬೆಮನೆ, ಬಾಲಮಿತ್ರದ ಆ ರೋಚಕಕಥೆಗಳು..ಆರು ಬೆರಳಿನ ಉದ್ದ ಗಡ್ಡದ ಮಾಂತ್ರಿಕ, ಛಕ್ಕಂತ ವೇಷ ಬದಲಿಸಿ ಬರುವ ಮಾಟಗಾತಿ,ಕೂದಲೆಳೆ- ಉಗುರುಗಳಿಂದ ಮಾಟ ಮಾಡುವ ತಾಂತ್ರಿಕ , ವಿಕ್ರಮಾದಿತ್ಯನ ಹೆಗಲಿನಿಂದ ಹಾಹ್ಹಾಹಾ ಎಂದು ನಗುತ್ತ ಹಾರಿಹೋಗಿ ಗಿಡದ ಟೊಂಗೆಗೆ ನೇತಾಡುವ ಬೇತಾಳ..ನಮ್ಮಕಲ್ಪನೆಗೊಂದು ಎಲ್ಲೆಯೇ ಇಲ್ಲದಂತೆ ಮಾಡಿದವಷ್ಟೇ ಅಲ್ಲ ಜೊತೆಗೇ ಇಲ್ಲದ ಭಯವನ್ನೂ ಅಲ್ಪಸ್ವಲ್ಪ ಹುಟ್ಟು ಹಾಕಿದವೆನ್ನಿ. ನಾನಾಗ 4 ನೇಯತ್ತೆ ಹುಡುಗಿ. ಒಂದು ಕಥೆ ಓದಿದ್ದೆ. ಅದರಲ್ಲಿ ಸುಳ್ಳು ಮಾತಾಡಿದರೆ ತಲೆಯ ಮೇಲೆ ಕೊಂಬು ಮೂಡುತ್ತವೆ. ಪ್ರತಿಸಲ ಸುಳ್ಳು ಹೇಳಿದಾಗೆಲ್ಲ ಒಂದೊಂದು ಇಂಚು ಬೆಳೆಯುತ್ತ ಹೋಗಿ , ಹೀಗೆಯೇ ಬಹಳ ಸಲ ಸುಳ್ಳು ಹೇಳಿದ ಹುಡುಗನ ತಲೆಯ ಕೊಂಬುಗಳು ಬೆಳೆದು ಬೆಳೆದು ಮೇಲೆ ಜಂತಿಗೆ ಸಿಕ್ಕಿಹಾಕಿಕೊಂಡು ಬಿಡುತ್ತವೆ. ಆದನ್ನೋದಿದ ಮೇಲೆ ವರುಷಗಟ್ಟಲೆ ಸಣ್ಣ ಸುಳ್ಳು ಹೇಳಿದರೂ ಹತ್ತುಸಲ ತಲೆಮುಟ್ಟಿ ನೋಡಿಕೊಳ್ಳುತ್ತಿದ್ದೆ. ಒಮ್ಮೆ ಯಾಕೋ ಪಕ್ಕದ ಶಿವಮೊಗ್ಗಿ ಅವರ ಮನೆಗೆ ಹೋಗಿದ್ದೆ. ಊಟಕ್ಕೆ ಕುಳಿತಿದ್ದ ಅವರು, ‘ಬಾರs ಊಟ ಮಾಡು ಬಾ’ ಎಂದು ಕರೆದರು. ಹಾಗೆಲ್ಲ ಊಟ-ತಿನಿಸಿಗೆ ಯಾರಾದರೂ ಕರೆದರೆ ಹೂಂ ಅಂತ ಹೊರಟುಬಿಡಬಾರದು.ನಮ್ಮ ಊಟ ಆಗಿದೆ ಅಂತ ಹೇಳಬೇಕು ಎನ್ನುವುದು ಮನೆಯಲ್ಲಿ ಹಿರಿಯರು ವಿಧಿಸಿದ್ದ ನಿಯಮವಾಗಿದ್ದರಿಂರ ಹಾಗೇ ಹೇಳಿದೆ. ‘ಇರಲಿ ಬಾ. ಚೂರೇ ಪಾಯಸ ತಿನ್ನು’ ಎಂದರು. ‘ ನಮ್ಮನೆಯಲ್ಲೂ ಅದೇ’ ಎಂದೆ. ಹೀಗೇ ಅವರು ಒತ್ತಾಯಿಸಿ ಕರೆಯುವುದು, ನಾನು ಸುಳ್ಳು ಹೇಳುತ್ತ ಹೋಗಿ ನೋಡುತ್ತಿದ್ದಂತೇ 8-10 ಸುಳ್ಳುಗಳಾಗಿ ಇನ್ನೇನು ಕೊಂಬು ಬೆಳೆದು ನಾನಿಲ್ಲೇ ಇವರ ನಡುಮನೆಯಲ್ಲೇ ಸಿಕ್ಕಿಹಾಕಿಕೊಂಡು ಬಿಡುತ್ತೇನೆಂದು ತುಂಬ ಭಯವಾಗಿ ಅಳಲು ಶುರು ಮಾಡಿದ್ದೆ. ನನ್ನ ಅವಸ್ಥೆ ನೋಡಿ ಪಾಪ ಅವರಿಗೂ ಗಾಬರಿ .
ಇನ್ನೊಮ್ಮೆ ನಮ್ಮ ಸ್ನೇಹಿತರಂತೆ, ಮನೆಯವರಂತೆ ವೇಷ ಬದಲಿಸಿ ಬರುವ ದೆವ್ವದ ಕಥೆ ಓದಿದಾಗಲಂತೂ ನನ್ನ ಪಾಡು ನಾಯಿಪಾಡಾಗಿತ್ತು. ಜೊತೆಗಿದ್ದವರೆಲ್ಲ ಇವರು ನಿಜದವರೋ, ವೇಷಧಾರಿ ದೆವ್ವಗಳೋ ಎಂದು ಹೆದರಿಕೆಯಾಗಿಬಿಡುತ್ತಿತ್ತು. ಅದೂ ಬಿಜಾಪೂರದ ನಮ್ಮ ಮುದ್ದಣ್ಣ ಮಾಮಾನ ಆ ದೊಡ್ಡ ಮನೆಯಲ್ಲಿ ರಾತ್ರಿವೇಳೆ ಬಚ್ಚಲಿಗೆ ಹೋಗಬೇಕಾಗಿ ಬಂದರಂತೂ ಮುಗಿದೇಹೋಯ್ತು. ಪಡಸಾಲೆಯಲ್ಲಿ ಮಲಗಿದ ನಾವು ನಡುಮನೆ, ದೊಡ್ಡ ಅಡುಗೆಮನೆ ದಾಟಿ ಬಚ್ಚಲಿಗೆ ಅದೂ ಎಂಥಾ ಬಚ್ಚಲು ಅಂತೀರಿ 3-4 ಮೆಟ್ಟಿಲುಗಳ , 3-4 ಕಂಬಗಳುಳ್ಳ ದೆವ್ವನಂಥಾ ಬಚ್ಚಲು. ಅಲ್ಲಿ ಒಂದೆಡೆ ಕುಳ್ಳಿನ ಚೀಲ, ಎತ್ತರಕ್ಕೆ ಒಟ್ಟಿದ ಕಟ್ಪಿಗೆಗಳು, ಅವುಗಳ ಸಂದಿಯಲ್ಲೆಲ್ಲೋ ಕಣ್ಣಿಗೆ ಕಾಣದೇ ದಡಬಡ ಮಾಡುವ ಇಲಿಯ ಸಂಸಾರಗಳು, ಉದ್ದ ಮೀಸೆ ಝಳಪಿಸುವ ಜೊಂಡಿಂಗಗಳು..ಸಾಲದ್ದಕ್ಕೆ ಎದುರಿಗೊಂದು ಎರಡು ಸರಳುಗಳ ಸಣ್ಣ ಕಿಡಕಿ. ನಮ್ಮ ಪಪ್ಪೂಮಾಮ( ನನ್ನ ಸಣ್ಣ ಸೋದರ ಮಾವ) ‘ ರಾತ್ರಿ ಬಚ್ಚಲಿಗೆ ಹೋದ್ರ ಆ ಕಿಡಕಿ ಕಡೆ ನೋಡಬ್ಯಾಡ್ರಿ ಎರಡು ಕೆಂಪುಕಣ್ಣು ನಿಮ್ಮನ್ನೇ ನೋಡತಿರತಾವ. ನೀವೇನರ ಅಪ್ಪಿತಪ್ಪಿ ನೋಡಿದ್ರ ತನ್ನ ಉದ್ದನ್ನ ಕೆಂಪು ನಾಲಿಗೆ ಚಾಚಿ ಎಳಕೊಂಡು ಬಿಡತಾವ’ ಅಂತೆಲ್ಲ ಏನೇನೋ ಹೇಳಿ ನಮ್ಮನ್ನು ಕಾಡಿ ಹೆದರಿಸಿರುತ್ತಿದ್ದ. ಹೀಗಾಗಿ ಯಾವಾಗಲೂ ಅಜ್ಜಿಯನ್ನೆಬ್ಬಿಸಿ ಅವಳ ಬೆಂಗಾವಲಿನಲ್ಲೇ ರಾತ್ರಿ ಬಚ್ಚಲಿಗೆ ಹೋಗುವುದು. ಆದರೆ ಈ ವೇಷ ಬದಲಿಸುವ ದೆವ್ವದ ಕಥೆ ಓದಿದ ಮೇಲೆ ಹಿಂದೆ ಬರುತ್ತಿರುವುದು ಓಣ್ಯಾಯಿನೋ ಅಥವಾ ದೆವ್ವವಿರಬಹುದೋ ಎಂದು ಶುರುವಾದ ಸಂಶಯ ಕೆಲವೇ ಸೆಕೆಂಡುಗಳಲ್ಲಿ ಪೆಡಂಭೂತವಾಗಿ ಬೆಳೆದು ನನ್ನನ್ನು ನಡುಗಿಸಿಬಿಡುತ್ತಿತ್ತು. ಅಮ್ಮ ಹೇಳಿಕೊಟ್ಟ ‘ ನಿರ್ಭಯತ್ವಂ ಅರೋಗತಾಂ’ ದ ಹನುಮಪ್ಪನೋ, ಅಜ್ಜ ಕಲಿಸಿದ ‘ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ’ ದ ರಾಯರೋ ಹೇಗೋ ನನ್ನನ್ನು ಕಾಯುತ್ತಿದ್ದರೆನ್ನಿ.
ರಾಯರು(ರಾಘವೇಂದ್ರ ಸ್ವಾಮಿಗಳು) ಅಂದಕೂಡಲೇ ಮತ್ತೊಂದು ಘಟನೆ ನೆನಪಾಯ್ತು. ಒಮ್ಮೆ ರಜೆಗೆಂದು ನಿಪ್ಪಾಣಿಗೆ ನಮ್ಮ ಇನ್ನೊಬ್ಬ ಸೋದರಮಾವನ ಮನೆಗೆ ಹೋಗಿದ್ದೆ. ಬಹಳ ಹೊತ್ತು ರಾತ್ರಿ ಹರಟೆ, ಮಾತುಕತೆಯ ಜೊತೆಗೇ ನನ್ನ ಕಸಿನ್ಸ್ ತಮ್ಮ home-work ನ್ನೂ ಮುಗಿಸಿ, ಪಾಟಿ- ಪುಸ್ತಕ ಎಲ್ಲ ಎತ್ತಿಟ್ಟು ಇನ್ನೇನು ಮಲಗಲು ಅಣಿಯಾದೆವು.
ಪೆನ್ಸಿಲ್ ಬಾಕ್ಸ್ ಒಂದು ತಂಗಿ ಭೂದೇವಿಯ ತಲೆದಿಂಬಿನ ಪಕ್ಕಕ್ಕೆ ಉಳಿದುಹೋಗಿತ್ತು. ನಾನು ಮರೆತು ಉಳಿದಿದೆಯೇನೋ ಎಂದು ಎತ್ತಿಡಲು ಹೋದರೆ ‘ ಅವ್ವಾ, ಗೌರಕ್ಕಾ ಅದನ್ನ ತಗೀಬ್ಯಾಡವಾ. ಅದರಾಗ ರಾಯರು, ಹನುಮಪ್ಪ ಎಲ್ಲ ಇದ್ದಾರ. ಕೆಟ್ಟ ಕನಸು ಬೀಳಬಾರದು, ರಾತ್ರಿ ಅಂಜಿಕಿ ಬರಬಾರದು ಅಂತ ಇಟಗೊಂಡೀನಿ’ ಅಂದಳು. ನಾನು ಅರೇ! ತ್ರಿಜ್ಯ, ಕೋನಮಾಪಕ, ಸೀಸಕಡ್ಡಿಗಳ ಬದಲು ಇದರಲ್ಲಿ ದೇವರು ಹೆಂಗ ಬಂದ್ರು ಅಂತ ತೆಗೆದು ನೋಡಿದರೆ ಅದರಲ್ಲಿ ರಾಯರ-ಹನುಮಪ್ಪನ ಸಣ್ಣ ಸಣ್ಣ ಫೋಟೋಗಳು. ಆಮೇಲೆ ಗೊತ್ತಾಯಿತು ಇದು ಅನಂತನಾಗ್ ನ ‘ ನಾ ನಿನ್ನ ಬಿಡಲಾರೆ’ ಸಿನೆಮಾದ ಕಥೆ ಕೇಳಿದ್ದರ ಪ್ರಭಾವ ಅಂತ. (ಇನ್ನು ಸಿನೆಮಾ ನೋಡಿದ್ದರೆ ಏನಾಗುತ್ತಿತ್ತು ಆ ‘ ಕಾಮಿನಿ’ ಗೇ ಗೊತ್ತು ) ಅಂತೂ ಈಗಲೂ ಅವಳ ಭೇಟಿಯಾದಾಗ ಈ ಕಥೆ ನೆನೆಸಿಕೊಂಡು ನಗುತ್ತೇವೆನ್ನಿ.

ಈಗ ಅಜ್ಜಿಯ ಕಥೆಗಳನ್ನು ಚೆಂದ ಚೆಂದದ ಕಾರ್ಟೂನ್ ಗಳು ಹೇಳುತ್ತವೆ.ತನ್ನ ಚಿಕ್ಕಂದಿನಲ್ಲಿ ‘snow-white ‘ ನೋಡುತ್ತ ಕಣ್ಣೀರು ಸುರಿಸುತ್ತಿದ್ದ, Tom & Jerry ಯಲ್ಲಿ ಕನಸು ನೋಡುತ್ತಿರುವ Tom ನನ್ನು ನೋಡಿ ಸೋಫಾದ ಮೇಲೆ ಉರುಳಾಡಿ ನಗುತ್ತಿದ್ದ ನನ್ನ ಮಗನ ಚಿತ್ರ ಈಗಲೂ ನನ್ನ ಕಣ್ಣ ಮುಂದಿದೆ.ದೃಶ್ಯಮಾಧ್ಯಮ ಯಾವಾಗಲೂ ಹೆಚ್ಚು ರಮಣೀಯ ಹಾಗೂ ಆಕರ್ಷಕವಲ್ಲವೇ?
ಕಥೆಗಳೂ ದೇವರಂತೆ ಅನಾದಿ-ಅನಂತ- ವಿಶ್ವವ್ಯಾಪಿ.ಅವುಗಳ ರೀತಿ, ಮಾಧ್ಯಮಗಳು ಬದಲಾದರೇನಂತೆ? ಜಗವಿರುವತನಕ ಕಥೆಗಳಿರುತ್ತವೆ. ನಮ್ಮ ಕಥೆ, ನಿಮ್ಮ ಕಥೆ, ಅವರ ಕಥೆ, ಇವರ ಕಥೆ, ಕಂಸನ ಕ್ರೌರ್ಯ ದ ಕಥೆ, ಬುದ್ಧನ ಕರುಣೆಯ ಕಥೆ, ಶಕುನಿಯ ಕುತಂತ್ರದ ಕಥೆ,ವಿದುರನ ನೀತಿಕಥೆ, ರಾಮನ ಶೌರ್ಯ ದ ಕಥೆ, ಭೀಮನ ಬಲದ ಕಥೆ, ಸಿರಿವಂತರ ಸೊಕ್ಕಿನ ಕಥೆ, ಬಡವರ ಹಸಿವಿನ ಕಥೆ, ಸೋತ ಕಥೆ, ಗೆದ್ದ ಕಥೆ, ನಗುವ ಕಥೆ, ಅಳುವ ಕಥೆ, ಸನ್ಯಾಸದ ಕಥೆ, ಗಾರ್ಹಸ್ಥ್ಯದ ಕಥೆ, ಸಾಮಾನ್ಯರ ಸಾಮಾನ್ಯ ಕಥೆ , ಸಂತೆಯ ಸೌತೆ-ಬದನೆಗಳ ಕಥೆ, ಹೋರಾಟದ ಕಥೆ, ಯಶಸ್ಸಿನ ಕಥೆ,ಅಪ್ಪುವ ಕಥೆ, ದಬ್ಬುವ ಕಥೆ, ಮಿನಿ ಕಥೆ,ಹನಿಗಥೆ, ಸಣ್ಣ ಕಥೆ,ನೀಳ್ಗಥೆ, ಕಾವ್ಯ-ಕಾದಂಬರಿಗಳ ಕಥೆ...ಮುಗಿಯದ,ನಿಲ್ಲದ ಕಥೆ .

~ ಗೌರಿಪ್ರಸನ್ನ