ಕಿರುಗಥೆಗಳು

ಇತ್ತೀಚಿಗೆ ಕಿರುಗಥೆಗಳ ಸಂಗ್ರಹವೊಂದನ್ನು ಓದುತ್ತಿದ್ದೆ. ಹಿಂದೊಮ್ಮೆ ಅನಿವಾಸಿ ಅಂಗಳದಲ್ಲಿನ ಕಾರ್ಯಕ್ರಮಕ್ಕೆ ಕಿರುಗಥೆಯನ್ನು ಬರೆದ ನೆನಪು ಬಂತು. ಈ ಪ್ರಕಾರದಲ್ಲಿ ಮತ್ತೆ ಯಾಕೆ ಪ್ರಯತ್ನ ಮಾಡಬಾರದು ಎಂಬ ವಿಚಾರ ಬಂತು. ಅನಿವಾಸಿಯಲ್ಲೇ ಹಂಚಿಕೊಂಡರೆ, ಸಹೃದಯರ ಪ್ರತಿಕ್ರಿಯೆ ಸಿಗುತ್ತದೆ, ನನ್ನ ಸಂಪಾದಕತ್ವದ ಉಪಯೋಗವನ್ನು ಪಡೆದುಕೊಂಡಂತೆಯೂ ಆಗುತ್ತದೆ: ಒಂದು ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಹುಂಬತನ ಇದು. ಅದಕ್ಕೆ ಸರಿಯಾಗಿ ಎರಡು ಕಿರುಗಥೆಗಳನ್ನು ಈ ವಾರ ನಿಮ್ಮ ಮುಂದಿಟ್ಟಿದ್ದೇನೆ. ಗುರಿ ತಲುಪಿಯಾವೇ? ತಲುಪಿದರೂ ಬಿಟ್ಟರೂ, ಕಲ್ಲು ನೆಲಕ್ಕೇ ಬೀಳಬೇಕಲ್ಲವೇ? ಬಿದ್ದರೆ ಕಲ್ಲು, ನನ್ನ ಮೂಗಲ್ಲ ಎಂಬ ಸಮಾಧಾನವಿದೆ, ನಿಮ್ಮ ಸಮಯ ಹಾಳು ಮಾಡಿದ್ದೇನೆಯೇ ಎಂಬ ಆತಂಕವೂ ಇದೆ.

ವಿಪರ್ಯಾಸ 

ಆತನಿಗೆ ಫುಟ್ ಬಾಲ್ ತುಂಬಾ ಇಷ್ಟ. ಇಂಜಿನಿಯರಿಂಗ್ ಕಾಲೇಜು ತಂಡದ ಮುಖ್ಯ ಆಟಗಾರ ಆತ. ಸ್ನೇಹಪರನಾದ್ದರಿಂದ ಸಹಪಾಠಿಗಳಲ್ಲಿ ಜನಪ್ರಿಯನೂ ಆಗಿದ್ದ. ಡಿಗ್ರಿ ಮುಗಿಸುವಷ್ಟರಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಆಫ್ ಸೈಟ್ ಕೆಲಸ ಎಂದು ಆತನನ್ನು ಕಂಪನಿ ಇಂಗ್ಲೆಂಡಿಗೆ ಕಳಿಸಿತ್ತು. ಫುಟ್ ಬಾಲ್ ಸೆಳೆತ ಆತನನ್ನು ಆಫೀಸಿನ ಫೈವ್-ಅ-ಸೈಡ್ ತಂಡಕ್ಕೆ ಸೇರಿಸಿತ್ತು. ವಾರಕ್ಕೆರಡು ಬಾರಿ ಹತ್ತಿರದ ಸ್ಪೋರ್ಟ್ಸ್ ಸೆಂಟರಿನಲ್ಲಿ ಆಫೀಸಿನ ತಂಡದೊಂದಿಗೆ ಸ್ಪರ್ಧಿಸುತ್ತಿದ್ದ. ಒಟ್ಟಿನಲ್ಲಿ ಅಪ್ಪ-ಅಮ್ಮನ ಕನಸಿನಂತೆ ಇಂಜಿನಿಯರ್ ಆಗಿ, ಒಳ್ಳೇ ಕೆಲಸ ಸೇರಿ, ಬಿಡುವಿನಲ್ಲಿ ತನ್ನ ಪ್ರೀತಿಯ ಹವ್ಯಾಸದಲ್ಲೂ ತೊಡಗಿಕೊಂಡು ಸಂತೃಪ್ತನಾಗಿದ್ದ. ನಿಸ್ವಾರ್ಥವಾಗಿ ಸಾಮಾಜಿಕ ಕಾರ್ಯ ಮಾಡುವ ಕಳಕಳಿಯಿಂದ ಮನೆಯ ಹತ್ತಿರದ ಚ್ಯಾರಿಟಿ ಅಂಗಡಿಯಲ್ಲಿ ವಾರಾಂತ್ಯದಲ್ಲಿ ಸಹಾಯವನ್ನೂ ಮಾಡುತ್ತಿದ್ದ.

ಈತ ಕೂಡ ಆತ ಬೆಳೆದ ಮಹಾನಗರದ ಇನ್ನೊಂದು ಮೂಲೆಯಲ್ಲಿ ಬೆಳೆದಿದ್ದ. ತುಂಬಾ ಬುದ್ಧಿವಂತನಾದ ಈತ ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ, ಎಂಬಿಎ ಮುಗಿಸಿ ಲಂಡನ್ನಿನ ಇನ್ವೆಸ್ಟ್ಮೆಂಟ್ ಬ್ಯಾಂಕ್ ಸೇರಿದ್ದ. ಸಾಕಷ್ಟು ಹಣ ಮಾಡುತ್ತಿದ್ದರೂ ಹಗಲಿರುಳೂ ಇರುತ್ತಿದ್ದ ಕೆಲಸದಿಂದ ಸುಖವಾಗಿ ಎರಡು ತುತ್ತು ಅನ್ನ ತಿನ್ನಲು, ಸರಿಯಾಗಿ ನಿದ್ದೆ ಮಾಡಲೂ ಈತನಿಗೆ ಸಮಯ ಸಿಗುತ್ತಿರಲಿಲ್ಲ. ಆಯಾಸವಾಗದಂತೆ ತನ್ನ ಸಹೋದ್ಯೋಗಿಗಳಂತೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಭ್ಯಾಸವಾಗಿ ತಳಕ್ಕೆ ತಳ್ಳುವ ಸುಳಿಯಲ್ಲಿ ಸಿಲುಕಿದ್ದ. ಒತ್ತಡದಲ್ಲಿ ಈತನ ಮತಿ ಭ್ರಮಣೆ ಆಗುತ್ತಿತ್ತು. ಅಂದು ಆಫೀಸಿನವರೆಲ್ಲ ವಿರಾಮಕ್ಕಾಗಿ ಹತ್ತಿರದ ಶೂಟಿಂಗ್ ಕ್ಲಬ್ಬಿಗೆ ಹೋಗಿದ್ದರು. ಎಲ್ಲರ ಗಮನ ವಿಧ ವಿಧವಾದ ಬಂದೂಕುಗಳು, ಅವನ್ನು ಲೋಡ್ ಮಾಡುವಲ್ಲಿ ವ್ಯಸ್ತವಾಗಿತ್ತು. ಪಕ್ಕದಲ್ಲಿದ್ದ ಬಂದೂಕನ್ನು ಎತ್ತಿಕೊಂಡು ಈತ ಬಿರಬಿರನೆ ಹೊರಗೆ ಓಡಿದ. ಹೊರಬಂದವನಿಗೆ ಎದುರು ಕಂಡಿದ್ದು ಒಂದು ಚಿಕ್ಕ ಚ್ಯಾರಿಟಿ ಅಂಗಡಿ. ನುಗ್ಗಿದವನೇ ಅಲ್ಲಿದ್ದವರ ಮೇಲೆ ಗುಂಡು ಹಾರಿಸಿ ಅಲ್ಲಿದವರನ್ನೆಲ್ಲ ಕೊಂದು, ತನ್ನ ಮೇಲೆ ಗುಂಡು ಹಾರಿಸಿಕೊಂಡು ಹತನಾದ. ಅಂಗಡಿಯಲ್ಲಿ ಆತನೂ ಇದ್ದ.

ಹೊಣೆ 

ಅದೊಂದು ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಇದೊಂದು ಆಸ್ಪತ್ರೆ. ಅಲ್ಲಿಗೆ ಬರುವ ಆರೋಗ್ಯವಿರುವ, ಆರೋಗ್ಯವಿಲ್ಲದ ರೋಗಿಗಳು, ಸಿಬ್ಬಂದಿಗಳೆಲ್ಲ ಸರಕಾರಕ್ಕೆ ಕೇವಲ ಅಂಕಿ-ಅಂಶಗಳು. ಆ ಆಸ್ಪತ್ರೆಯಲ್ಲಿ ಅವನು ಒಂದು ವಿಭಾಗದ ಮುಖ್ಯಸ್ಥ. ಅವನ ಡಾಕ್ಟರಿಕೆಯ ಜೊತೆಗೆ ಕೈಕೆಳಗಿನ ವೈದ್ಯರ, ನರ್ಸಗಳ, ಕಾರಕೂನರ, ಆಯಾಗಳ ಕಿರಿಕಿರಿ ಸಹಿಸುವುದಲ್ಲದೇ, ಮೇಲಿನ ಅಧಿಕಾರಿಗಳ ಅಧಿಕಾರಿಕೆಯನ್ನೂ ಅನುಭವಿಸಬೇಕಿತ್ತು. ಅವನಿಗೆ ಡಾಕ್ಟರಿಕೆ ಮಾಡಲು ಸಮಯವಿತ್ತೋ; ಹೇಳಿಸಿಕೊಂಡು, ಪರಿಚಾರಿಕೆ ಮಾಡಿದ ಮೇಲೆ ಉತ್ಸಾಹ ಉಳಿದಿತ್ತೋ; ಆ ಭಗವಂತನೇ ಬಲ್ಲ! ಅವನ ಮ್ಯಾನೇಜರಿಕೆಗೆ ಸಹಾಯ ಮಾಡಲು ಅವಳು ಜೂನಿಯರ್ ವ್ಯವಸ್ಥಾಪಿಕೆ. ವಾರಕ್ಕೊಂದೆರಡು ಸಮಸ್ಯೆ ಹುಡುಕಿ, ಅದಕ್ಕೆ ಪರಿಹಾರದ ದಾರಿಯನ್ನು ಪತ್ತೆಹಚ್ಚುವುದು ತನ್ನ ಕರ್ತವ್ಯವೆಂದು ಅವಳು ಮನದಟ್ಟು ಮಾಡಿಕೊಂಡಂತಿತ್ತು. ಅವತ್ತು ಆಕೆ ಹೊಸ ಸಮಸ್ಯೆಯೊಂದನ್ನು ಪತ್ತೆ ಹಚ್ಚಿದ್ದಳು. ಕ್ಯಾನ್ಸರ್ ವಿಭಾಗದವರು ಕೊಡುವ ಮದ್ದೊಂದು ಮೂಳೆ ಸವಕಳಿ ಮಾಡಿ, ಮೂಳೆ ಮುರಿತದ ಸಾಧ್ಯತೆ ಜಾಸ್ತಿ ಮಾಡುತ್ತಿತ್ತು. ಆ ವ್ಯತಿರಿಕ್ತತೆಯ ಸಾಧ್ಯತೆ ಹಾಗೂ ಚಿಕಿತ್ಸೆಯ ಪರಿಣತಿ ಅವನ ವಿಭಾಗದ ಅತಿ ಚಿಕ್ಕ ವಿಶೇಷತೆಯಲ್ಲೊಂದು. ಅವನ ಸಹೋದ್ಯೋಗಿಯೊಬ್ಬ ಕೆಲಸಕ್ಕೆ ಸೇರಿದ ಹೊಸತರಲ್ಲಿ ಹುಮ್ಮಸ್ಸಿನಿಂದ ಕ್ಯಾನ್ಸರ್ ತಜ್ಞರಿಗೆ ಈ ವ್ಯತಿರಿಕ್ತತೆಯ ಮಾಹಿತಿ ನೀಡಿ, ಹಣಕಾಸಿನ ವ್ಯವಸ್ಥೆಯನ್ನು ಯೋಚಿಸದೇ ಮೂಳೆ ಸ್ಕ್ಯಾನಿಂಗ್ ಹಾಗೂ  ಚಿಕಿತ್ಸೆಯ ವ್ಯವಸ್ಥೆ ಮಾಡಿದ್ದ, ಮಾಡಿ ತನ್ನ ಪ್ರಭಾವಳಿಯನ್ನು ಹೆಚ್ಚಿಸಿಕೊಂಡಿದ್ದ. ಈಗ ಈ ಸೇವೆಯ ಬೇಡಿಕೆ ಮಿತಿಮೀರಿ, ವಿಭಾಗದ ಇತರ ಮುಖ್ಯ ಕಾರ್ಯಗಳಿಗೆ ಕುತ್ತು ತಂದಿತ್ತು. ಇದನ್ನು ಸರಿಯಾಗಿಸುವುದು ಹೇಗೆ ಎಂಬುದು ಅವಳ ಸಮಸ್ಯೆ.  ಹೊಸ ಸಿಬ್ಬಂದಿಯನ್ನು ನೇಮಿಸೋಣ ಎಂಬುದು ಅವನ ಪರಿಹಾರ. ಅದಕ್ಕೆ ಹಣವೆಲ್ಲಿ ಎಂಬುದು ಅವಳ ಪ್ರಶ್ನೆ. ಇದು ನಮ್ಮ ವಿಭಾಗದ ಮೂಲಭೂತ ಕರ್ತವ್ಯವಲ್ಲ, ಕೇವಲ ನಿನ್ನ ಸಹೋದ್ಯೋಗಿಯ ದತ್ತಿ ಕಾರ್ಯ. ನಿಮಗೆ ನಿಮ್ಮ ಮುಖ್ಯ ರೋಗಿಗಳ ಹೊಣೆ ತುಂಬಾ ಇದೆ, ಅದನ್ನು ಪೂರೈಸಲು ಸಮಯವೂ ಇಲ್ಲ, ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಲು ಹಣವೂ ಇಲ್ಲ. ಕ್ಯಾನ್ಸರ್ ವಿಭಾಗ ಈ ಸೇವೆಗೆ ತಕ್ಕುದಾದ ಹಣವನ್ನು ಸಂದಾಯ ಮಾಡದೇ ನಾವು ಇದನ್ನು ಮುಂದುವರೆಸುವಂತಿಲ್ಲ ಎಂದು ತಾಕೀತು ಮಾಡಿದಳು.

ನಮಗೆ ಸ್ಕ್ಯಾನಿಂಗ್ ವಿಶ್ಲೇಷಣೆಯ ಪರಿಣತಿ ಇಲ್ಲ, ಮೂಳೆ ಸವಕಳಿ ತಡೆಯುವ ಮದ್ದಿನ ಬಗ್ಗೆ ಸರಿಯಾದ ಮಾಹಿತಿಯಿಲ್ಲ, ಜೊತೆಗೆ ನಮ್ಮಲ್ಲಿ ಕೂಡ ಸಂದಾಯ ಮಾಡಲು ಹಣವೂ ಇಲ್ಲ. ನೀವು ಈ ರೀತಿ ಸರಾಗವಾಗಿ ನಡೆದಿದ್ದ ಸೇವೆಯನ್ನು ಥಟ್ಟಂತ ತಡೆದರೆ, ರೋಗಿಗಳಿಗೆ ಹಾನಿಯಾದರೆ ಯಾರು ಹೊಣೆ ಎಂದು ಕ್ಯಾನ್ಸರ್ ನವರು ತಗಾದೆ ತೆಗೆದರು. ಈ ವಿಷಯದ ಪರಿಹಾರಕ್ಕಾಗಿ ಸಂಬಂಧಪಟ್ಟವರನ್ನು ಸೇರಿಸಿ ಮೀಟಿಂಗ್ ನಡೆಸಿದರು. ಆಗ, ಮೂಳೆ ಮುರಿತದ ತಡೆಗೆ ಬೇಕಾದ ಮದ್ದನ್ನು ಕ್ಯಾನ್ಸರ್ ತಜ್ಞರು ಬೇರೊಂದು ಕಾರಣಕ್ಕಾಗಿ ಉಪಯೋಗಿಸುತ್ತಾರೆಂದೂ, ಅದರ ಬಗ್ಗೆ ಅವರಿಗೆ ಬೇಕಾದ ಮಾಹಿತಿಯಿದೆ ಎಂದು ಅರಿವಾಯಿತು. ನೀವು ಮದ್ದಿನ ಬಗ್ಗೆ ಮಾಹಿತಿಯಿಲ್ಲ ಎಂದು ಬೇಕಂತಲೇ ಸುಳ್ಳು ಹೇಳಿದ್ದಿರಿ ಎಂದು ಜಟಾಪಟಿ ಆಯಿತು. ವಿಭಾಗಗಳ ನಡುವಿನ ಕಗ್ಗಂಟನ್ನು ಬಿಡಿಸಲು ಅವನು, ಅವನ ಸಹೋದ್ಯೋಗಿ ಹಾಗೂ ಕ್ಯಾನ್ಸರ್ ವಿಭಾಗದ ಮುಖ್ಯ್ಸತ ಸೇರಿ ಒಂದು ಮಾರ್ಗದರ್ಶಿಕೆಯನ್ನು ತಯಾರಿಸುವುದೆಂದು ನಿರ್ಧರಿಸಿದರು. ಅಂತೂ ಹಗ್ಗ ಜಗ್ಗಾಟ ನಿಂತು ಮಾರ್ಗದರ್ಶಿಕೆ ತಯಾರಾಗಲು ಆರು ತಿಂಗಳುಗಳಾದವು. ಅಷ್ಟರಲ್ಲಿ ಕ್ಯಾನ್ಸರ್ ಮುಖ್ಯಸ್ಥನಿಗೇ ಕ್ಯಾನ್ಸರ್ ಬಂದು ರಜದ ಮೇಲೆ ಹೋಗಿಬಿಟ್ಟ.

ಹೊಸ ಮಾರ್ಗದರ್ಶಿಕೆಯನ್ನು ಅನುಮೋದಿಸಿ ಜಾರಿಗೆ ತರಲು ಎಲ್ಲ ಕ್ಯಾನ್ಸರ್ ತಜ್ಞರನ್ನು ಒಟ್ಟುಗೂಡಿಸಿ ಇನ್ನೊಂದು ಸಭೆ ಕರೆಯಲಾಯಿತು. ಮಾರ್ಗದರ್ಶಿಕೆ ಕೇಂದ್ರದ ನಿಯಮಾವಳಿಗೆ ಅನುಸಾರವಾಗಿದ್ದು ನಮ್ಮ ರೋಗಿಗಳ ಸುರಕ್ಷತೆಗೆ ಅವಶ್ಯ. ಆದರೆ ತುಂಬಾ ಕ್ಲಿಷ್ಟವಾಗಿದೆ, ನಮ್ಮೊಂದಿಗೆ ಸಮಾಲೋಚಿಸದೇ ತಯಾರಿಸಲಾಗಿದೆ, ಇದನ್ನು ಅಳವಡಿಸಲು ನಮ್ಮಲ್ಲಿ ಸಮಯವಿಲ್ಲ ಎಂದು ಅವರೆಲ್ಲ ಗಲಾಟೆ ಮಾಡಿದರು. ಇನ್ನೇನು ಇದರ ರೂವಾರಿಯಾದ ಮುಖ್ಯಸ್ಥ ಕೆಲಸಕ್ಕೆ ವಾಪಸಾಗುತ್ತಾನೆ. ಅವನು ಬಂದ ಮೇಲೆ ಇದನ್ನು ಚರ್ಚಿಸೋಣ. ಅಲ್ಲಿಯವರೆಗೂ ಇಲ್ಲಿಯವರೆಗೂ ನಡೆದ ಹಾಗೇ ಮುಂದುವರೆಸೋಣ ಎಂದು ವರಾತ ಹಚ್ಚಿದರು. ನಮ್ಮ ತಜ್ಞರಿಗೆ ಈ ಸೇವೆಯನ್ನು ಮುಂದುವರಿಸಲು ಸಮಯವಿಲ್ಲ. ಅವರಿಗೆ ಇದಕ್ಕಿಂತಲೂ ಮುಖ್ಯವಾದ ಕೆಲಸಗಳಿವೆ. ಈ ಸೇವೆಗೆ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಬೇಕಾಗುತ್ತದೆ. “Show me the money” ಎಂದು ಜೂನಿಯರ್ ವ್ಯವಸ್ಥಾಪಕಿ “ಜೆರಿ ಮೆಗ್ವಾಯರ್” ಸಿನಿಮಾದಲ್ಲಿ ಕ್ಯೂಬಾ ಗೂಡಿಂಗ್ ಮಾಡಿದಂತೆ ಸೊಂಟ ಕುಣಿಸಿದಳು. ವಿಷಯವನ್ನೂ ನೆನೆಗುದಿಯಲ್ಲೇ ಇದೆ. ಆಗಾಗ ಮುಂಗೈಯನ್ನೋ, ಬೆನ್ನು ಮೂಳೆಯನ್ನೋ, ಸೊಂಟವನ್ನೋ ಮುರಿದುಕೊಂಡ ಕ್ಯಾನ್ಸರ್ ರೋಗಿಗಳು ಆಸ್ಪತ್ರೆಗೆ ಬರುತ್ತಿರುತ್ತಾರೆ. ಈ ವ್ಯತಿರಿಕ್ತ ಘಟನೆಗಳನ್ನು ಆಸ್ಪತ್ರೆಯ ಸಂಖ್ಯಾ ಶಾಸ್ತ್ರಜ್ಞ ದಾಖಲಿಸುತ್ತಿದ್ದಾನೆ.

  • ರಾಮ್

ಮರೆಯಲಾಗದ ರಾಜರ್ಷಿ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್

ಬೇಸಿಂಗ್ ಸ್ಟೋಕ್  ರಾಮಮೂರ್ತಿ ಅವರ ಲೇಖನ 
  • ಅವರನ್ನು ಜನತೆ ”ಕೃಷ್ಣರಾಜ ಭೂಪ, ಮನೆ ಮನೆ ದೀಪ” ಎಂದು ಗೌರವಿಸುತ್ತಿದ್ದರು! ಮೈಸೂರು ಸಂಸ್ಥಾನ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಆಡಳಿತವುಳ್ಳ ರಾಜ್ಯವೆಂದು ೧೯೩೦ ರ ದುಂಡು ಮೇಜು ಪರಿಷತ್ತಿನಲ್ಲಿ ಲಾರ್ಡ್ ಜಾನ್ ಸ್ಯಾಂಕಿಯವರಿಂದ ಶ್ಲಾಘಿಸಲ್ಪಟ್ಟಿತ್ತು. ಆ ಮಟ್ಟಕ್ಕೆ ತಂದ ಶ್ರೇಯಸ್ಸಿನ ಸಿಂಹಪಾಲು ನಮ್ಮ ಹೆಮ್ಮೆಯ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರಿಗೆ ಸಲ್ಲ ಬೇಕು ಅಂದರೆ ಅತಿಶಯೋಕ್ತಿಯಾಗಲಾರದು. ಈ ತಿಂಗಳಿನ ನಾಲ್ಕನೆಯ ತಾರೀಕು ಅವರ ೧೪೦ನೇ ಜಯಂತಿ. ಅದನ್ನು ಸ್ಮರಿಸುತ್ತ ಕರ್ನಾಟಕದ ಇತಿಹಾಸದಲ್ಲಿ ವಿಶೇಷ ಆಸಕ್ತಿಯುಳ್ಳ ಮತ್ತು ’ಅನಿವಾಸಿ’ಯಲ್ಲಿ ಅನೇಕ ಇತಿಹಾಸ ಸಂಬಂಧ ಪಟ್ಟ ಲೇಖನಗಳನ್ನು ಒದಗಿಸಿಕೊಟ್ಟ ಕನ್ನಡ ಬಳಗ ಯು ಕೆ ದ ಹಿರಿಯ ಆಜೀವ ಸದಸ್ಯರಾದ ಶ್ರೀ ರಾಮಮೂರ್ತಿಯವರಿಗೆ ನಾವು ಆಭಾರಿ. ಕಳೆದ ವರ್ಷದ ಬಳಗದ ೪೦ನೆಯ ವಷವನ್ನು ಅದ್ದೂರಿಯಾಗಿ ’ಸಂಭ್ರಮ’ ಅಂತ ಕರೆದು ಲಂಡನ್ನಿನಲ್ಲಿ ಆಚರಿಸಿದಾಗ ಮುಖ್ಯ ಅತಿಥಿಯಾಗಿ ಈಗಿನ ಮೈಸೂರು ಮಹಾರಾಜರು ಬಂದಾಗ ನಾಲ್ವಡಿಯವರು ೧೯೩೬ರಲ್ಲಿ ಲಂಡನ್ನಿಗೆ ಬಂದ ವಿಷಯವನ್ನು ಪ್ರಸ್ತಾಪಿಸಿದ್ದರು. ಆ ಪ್ರವಾಸದ ಬಗ್ಗೆ ಸಹ ರಾಮಮೂರ್ತಿಯವರು ಇನ್ನುಳಿದ ವಿಷಯಗಳೊಂದಿಗೆ ಪ್ರಸ್ತುತ ಪಡಿಸಿದ್ದಾರೆ. ಲೇಖನ ಕೊನೆಗೆ ಒಂದು ಸ್ವಾರಸ್ಯಕರ *ಟಿಪ್ಪಣಿಯಿದೆ. ಓದಲು ಮರೆಯ ಬೇಡಿ! ಎಂದಿನಂತೆ ಎಲ್ಲರೂ ತಪ್ಪದೆ ಓದಿ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಬೇಕೆಂದು ಕೋರುತ್ತೇನೆ. (ಸಂ)

ನಾವು ಮರೆತೆಂತಿರುವ ’ರಾಜಋಷಿ” ಅಥವ ರಾಜರ್ಷಿ, ಮೈಸೂರು ಸಂಸ್ಥಾನವನ್ನು ಭಾರತದ ಮಾದರಿ ರಾಜ್ಯವನ್ನಾಗಿ ಮಾಡಿದಂತಹ ಮಹಾನುಭಾವ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಮಹಾರಾಜರು.(೧೮೮೪-೧೯೪೦). ಇವರ ೧೪೦ನೇ ಜಯಂತಿ ಇದೇ ವಾರ ೦೪/೦೬/೨೦೨೪ ರಂದು ಇತ್ತು! ಆದರೆ ಈಗಿನ ಕರ್ನಾಟಕದಲ್ಲಿ ಇವರನ್ನು ಸರ್ಕಾರ ಮತ್ತು ಜನತೆ ಸಹ ಮರೆತಂತೆ ಇದೆ. ತಮ್ಮ ಆಡಳಿತಲ್ಲಿ ಇವರು ತಾವು ತಂದ ಸುಧಾರಣೆಗಳನ್ನು ನೋಡಿ, ೧೯೨೫ ರಲ್ಲಿ ಮಹಾತ್ಮ ಗಾಂಧಿ ಇವರನ್ನು ಇವರೊಬ್ಬ ರಾಜರ್ಷಿ ಎಂದು ಪ್ರಶಂಸಿದರು ಮತ್ತು ಲಂಡನ್ ನಲ್ಲಿ ೧೯೩೦ ರಲ್ಲಿ ನಡೆದ ದುಂಡು ಮೇಜು ( Round Table) ಸಭೆಯಲ್ಲಿ “ಮೈಸೂರು ರಾಜ್ಯದ ಆಡಳಿತ ಪ್ರಪಂಚದಲ್ಲೇ ಅತ್ಯುತ್ತಮವಾದದ್ದು” ಅನ್ನುವ ಹೇಳಿಕೆಯನ್ನೂ ಕೊಡಲಾಯಿತು.

ಹನ್ನೊಂದನೆಯ ವಯಸ್ಸಿಗೇ ಪಟ್ಟ
೧೯ನೇ ಶತಮಾನದ ಕೊನೆಯಲ್ಲಿ ಮೈಸೂರು ರಾಜ್ಯದಲ್ಲಿ ತೀವ್ರ ಬರಗಾಲ ಬಂದಿತ್ತು ಮತ್ತು ಚಿಕ್ಕ ವಯಸ್ಸಿನಲ್ಲೇ ಇವರ ತಂದೆ ಚಾಮರಾಜ ಒಡೆಯರ್ ಕಲ್ಕತ್ತ ನಗರದಲ್ಲಿ ತೀರಿದ್ದರಿಂದ ರಾಜ್ಯದಲ್ಲಿ ಗೊಂದಲವೇ ಉಂಟಾಗಿತ್ತು. ಆಗ ಕೃಷ್ಣರಾಜೇಂದ್ರರರಿಗೆ ಕೇವಲ ೧೧ ವರ್ಷವಾದರೂ ಪಟ್ಟಕ್ಕೆ ಏರಬೇಕಾಯಿತು (೧/೦೨/೧೮೯೫). ಆದರೆ ಅವರ ತಾಯಿ ಕೆಂಪರಾಜಮ್ಮಣಿ ರಾಜ್ಯದ ಆಡಳಿತವನ್ನು ಕೃಷ್ಣರಾಜೇಂದ್ರ ಅವರಿಗೆ ೧೮ ವರ್ಷ ತುಂಬುವ ವರೆಗೂ ವಹಿಸಿಕೊಂಡಿದ್ದರು. ಜಗನ್ಮೋಹನ್ ಅರಮನೆಯಲ್ಲಿ ಅಂದಿನ ವೈಸರಾಯ್ ಲಾರ್ಡ್ ಕರ್ಜನ್ ಅವರ ನೇತೃತ್ವದಲ್ಲಿ ೮/೧೨/೧೯೦೨ ರಂದು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಇಪ್ಪತ್ತು ನಾಲ್ಕನೆಯ ಮೈಸೂರ ಮಹಾರಾಜರಾದರು. ಇವರ ವಂಶದಲ್ಲಿ ಇವರು ನಾಲ್ಕನೆಯ ಕೃಷ್ಣರಾಜೇಂದ್ರ ಆದ್ದರಿಂದ ನಾಲ್ವಡಿ ಸೇರಿಸಲ್ಪಟ್ಟಿತು. ಅವ್ರು ೧೯೦೦, ಜೂನ್ ೬ರಂದು ಈಗಿನ ಗುಜರಾತ್ ರಾಜ್ಯದ ಕಾಠಿಯಾವಾಡದ ರಾಜಕುಮಾರಿ ಪ್ರತಾಪಕುಮಾರಿ ಇವರ ಜೊತೆ ವಿವಾಹ ನಡೆಯಿತು

ಅವರ ಆಡಳಿತದ ಸಾಧನೆಗಳು

ಈ ಕಾಲದ  ಮತ್ತು ಸ್ವಲ್ಪ ಹಿಂದೆ ಇದ್ದ ಆಡಳಿತದ ಕೆಲವು ಉಲ್ಲೇಖನೀಯ ಅಂಶಗಳನ್ನು  ಇಲ್ಲಿ ನೋಡೋಣ.

  • ೧೮೭೬ ನಲ್ಲಿ ಮಹಾರಾಜಾ ಸಂಸ್ಕೃತ ಕಾಲೇಜ್ ಪ್ರಾರಂಭ (ಭಾರತದ ಮೊಟ್ಟ ಮೊದಲನೆಯ ಸಂಸ್ಕೃತ ಕಾಲೇಜ್ ಸ್ಥಾಪಿತವಾದದ್ದು ೧೭೯೧ ಕಾಶಿ ನಗರದಲ್ಲಿ ಒಬ್ಬ ಬ್ರಿಟಿಷ್  ಪ್ರಜೆ ಜೋನಾತನ್ ಡಂಕನ್ ಎಂಬಾತನಿಂದ)  
  • ಮೊಟ್ಟಮೊದಲನೆಯ ಹೈಡ್ರೋ ಎಲೆಕ್ಟ್ರಿಕ್ ಉತ್ಪಾದನೆ ೧೯೦೨ ನಲ್ಲಿ ಶಿವನಸಮುದ್ರದಲ್ಲಿ ಪ್ರಾರಂಭವಾಯಿತು. ಇದರ ಬ್ರಿಟಿಷರ ಮುಖ್ಯ ಉದ್ದೇಶ ಬೇರೆ ಅನ್ನಿ, ಕೋಲಾರದ ಚಿನ್ನದ ಗಣಿಗೆ ವಿದ್ಯುಚ್ಛಕ್ತಿಯ ಅವಶ್ಯಕತೆ ಇತ್ತು!
  • ೧೯೦೩ರಲ್ಲಿ ಭಾರತದ ಮೊದಲನೆಯ ಕಣ್ಣಾಸ್ಪತ್ರೆ, ಬೆಂಗಳೂರಿನ ಮಿಂಟೋ ಆಸ್ಪತ್ರೆ (Minto Eye hospital).
  • ಆಗಸ್ಟ್ ಐದನೇ ತಾರೀಕು ೧೯೦೫ ಬೆಂಗಳೂರಿನ ರಸ್ತೆಗಳಿಗೆ ಏಷ್ಯಾದ ಮೊದಲನೆಯ ವಿದ್ಯುತ್ ರಸ್ತೆ ದೀಪಗಳು. ಕೆ ರ್ ಮಾರ್ಕೆಟ್ ನಲ್ಲಿ ಸರ್ ಜಾನ್ ಹ್ಯುಯೆಟ್ ಎಂಬಾತನಿಂದ ಉದ್ಘಾಟನೆ. 
  • ಚಿತ್ರದುರ್ಗದಲ್ಲಿ ವಾಣಿವಿಲಾಸ ಅಣೆಕಟ್ಟು.
  • ಜಮ್ಶೇಟ್ ಜಿ ಟಾಟಾ ಅವರಿಗೆ ೩೭೧ ಎಕರೆ ಮತ್ತು ಐದು ಲಕ್ಷ ರೂಪಾಯಿ ಹಣ ಸಹಾಯದಿಂದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಪ್ರಾರಂಭ.
  • ರಾಜ್ಯದಲ್ಲಿ ರೈಲು ಸಂಪರ್ಕ ಮತ್ತು ಇನ್ನೂ ಅನೇಕ ಸುಧಾರಣೆಗಳು ಪ್ರಾರಂಭವಾದವು
  • ಗ್ರಾಮ ಕೈಗಾರಿಕೆಗಳಾದ ಮರಗೆಲಸ, ನೇಯ್ಗೆ, ರೇಶ್ಮೆ, ಕಬ್ಬಿಣ ಮತ್ತು ಬೆತ್ತದ ಕೆಲಸಗಳು, ಚೆನ್ನಪಟ್ಣದಲ್ಲಿ ಗೊಂಬೆ ಮತ್ತು ಬಣ್ಣದ ಕೆಲಸ. – ಇವುಗಳ ತರಬೇತಿ ಕೇಂದ್ರಗಳನ್ನು ಸಹ ಸ್ಥಾಪಿಸಿಲಾಯಿತು.
  • ೧೯೦೩ ರಲ್ಲಿ ಮೈಸೂರು ನಾಗರಾಭಿವೃದ್ಧಿ ಮಂಡಳಿ ರಚಿತವಾಗಿ, ಅದರ ಫಲವಾಗಿ ಮೈಸೂರು ನಗರ ಭಾರತದಲ್ಲಿ ಅತ್ಯಂತ ಸುಂದರ ನಗರವೆಂದು ಹೆಸರು ಪಡೆಯಿತು. 
  • ೧೯೦೫ರಲ್ಲಿ ಸಹಕಾರಿ ಸಂಘ ಮತ್ತು ಬ್ಯಾಂಕ್ ಗಳು ಸ್ಥಾಪಿತವಾದವು.
  • ೧೮೮೧ ರಲ್ಲಿ ಪ್ರಾರಂಭವಾಗಿದ್ದ ಮೈಸೂರು ಪ್ರತಿನಿಧಿಗಳ ಸಭೆ, ೧೯೦೭ ರಲ್ಲಿ ವಿಸ್ತಾರಗೊಂಡು Mysore Legislative Assembly ಯಾಯಿತು. ರಾಜ್ಯದ ಆಡಳಿತಕ್ಕೆ ನೆರವಾಗುವ  ಕಾನೂನುಗಳು ಮತ್ತು ನಿಬಂಧನೆಗಳನ್ನು ಜಾರಿಗೆ ತರುವುದು ಇದರ ಉದ್ದೇಶ.ವಾಗಿತ್ತು. ಸಮಾಜದ ಹಲವಾರು ಗಣ್ಯ ವ್ಯೆಕ್ತಿ ಗಳು ಇದರಲ್ಲಿ ಭಾಗವಹಿದ್ದರು. 

ತರುಣ ಮಹಾರಾಜರಿಗೆ ಸಾಕಷ್ಟು ತರಬೇತಿಯಾಗಿತ್ತು. ಬಾಲ್ಯದಲ್ಲಿ ಅರಮನೆಯಲ್ಲೇ ಇವರ ಶಿಕ್ಷಣ ಆಯಿತು.  ಶ್ರೀ ರಾಘವೇಂದ್ರ ರಾಯರಿಂದ ಕನ್ನಡ ಮತ್ತು ಸಂಸ್ಕೃತದ ಅಭ್ಯಾಸ,ಮತ್ತು ಆಡಳಿತದ ಕ್ರಮ ಮತ್ತು ಜವಾಬ್ದಾರಿ ಸರ್ ಸ್ಟೋವರ್ಟ್ ಫ್ರೇಸರ್ ಅವರಿಂದ ಪಡೆದರು . (ಬೆಂಗಳೂರಿನ ಈಗಿನ Fraser Town ಇವರ ಜ್ಞಾಪಕವಾಗಿ ). ಕ್ರಮೇಣ, ಕರ್ನಾಟಕ ಮತ್ತು ಪಾಶ್ಚಿಮಾತ್ಯ ಸಂಗೀತದ  ಅಭ್ಯಾಸ ಸಹ ದೊರಕಿತು. ಅರಮನೆಯಲ್ಲೇ ಇದ್ದ ತಮ್ಮ ಕಾರ್ಯಾಲಯಕ್ಕೆ ದಿನವೂ ಇತರ ಸರಕಾರಿ  ನೌಕರರಂತೆ ತಪ್ಪದೆ ಹೋಗುತ್ತಿದ್ದರು. ರಾಜ್ಯದ ಅನೇಕ ಭಾಗಗಳಿಗೆ ಭೇಟಿ ಮಾಡಿ ಪ್ರಜೆಗಳ ಕಷ್ಟ ಸುಖಗಳನ್ನು ತಿಳಿದು ಇದಕ್ಕೆ ಬೇಕಾದ ಪರಿಹಾರಗಳನ್ನು ಜಾರಿಗೆ ತಂದರು. ಶಿಕ್ಷಣದ ಬೆಳವಣಿಗಯ ಬಗ್ಗೆ   ತುಂಬಾ ಗಮನಕೊಟ್ಟು ದೇಶದ ಮೂಲೆ ಮೂಲೆಗಳಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳ ಆರಂಭವಾಯಿತು. ಶಿಕ್ಷಣದ ಕಡ್ಡಾಯ ಹಂತಹಂತವಾಗಿ ಜಾರಿಗೆ ತರಲು ಶಾಸನವನ್ನು ಮಾಡಿದರು. ಹೆಣ್ಣು ಮಕ್ಕಳ ಮತ್ತು ಹಿಂದುಳಿದ ಪಂಗದಗಳಿಗೆ ವಿದ್ಯಾಭ್ಯಾಸ ಹರಡಲು ತಕ್ಕ ಕಾರ್ಯಕ್ರವನ್ನು  ಕೈಕೊಂಡರು.

ಸುಧಾರಣೆಗಳು ಮತ್ತು ದಕ್ಷ ಆಡಳಿತ

ಮಹಾರಾಜರ ಆಡಳಿತದಲ್ಲಿ, ಗ್ರಾಮೀಣ ಜನರ ಬಡತನವನ್ನು ನಿವಾರಿಸುವುದು, ಅರೋಗ್ಯ ಮತ್ತು ಶಿಕ್ಷಣ ಕಡೆ ಗಮನ, ಬಾಲ್ಯವಿವಾಹದ ರದ್ದು  (ಎಂಟು ವರ್ಷದೊಳಗಿನ ಹುಡುಗಿಯರ) ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆ  ಇತ್ಯಾದಿ ಸುಧಾರಣೆಗಳು ಇವರ ಗುರಿಯಾಗಿತ್ತು.   

ಪುಣೆಯಲ್ಲಿ ನೀರಾವರಿ ಇಲಾಖೆಯಲ್ಲಿ ಹೆಸರು ಪಡೆದಿದ್ದ  ಎಂ.ವಿಶ್ವೇಶರಯ್ಯನವರು ಕನ್ನಡಿಗರೇ ಆಗಿದ್ದರೂ, ಅವರ ಇಂಜನೀರಿಂಗ್ ಶಿಕ್ಷಣ ಪಡೆದಿದ್ದು ಪೂನಾ ಇಂಜಿನೀರಿಂಗ್ ಕಾಲೇಜ್ ನಲ್ಲಿ. ನಂತರ  ಬಾಂಬೆ ಪ್ರಾಂತ್ಯದಲ್ಲಿ ಕೆಲಸದಲ್ಲಿದ್ದವರು. ಅವರನ್ನು ಮೈಸೂರು ರಾಜ್ಯಕ್ಕೆ ಬರುವಂತೆ ಮಾಡಿದವರು ದಿವಾನ್ ಆನಂದ ರಾಯರು. ಮೊದಲು ನೀರಾವರಿ ಇಲಾಖೆಯ ಮುಖ್ಯಸ್ಥರಾಗಿ ಬಂದು ೧೯೧೨ ರಲ್ಲಿ ಆನಂದರಾಯರು ನಿವೃತವಾದ ನಂತರ ಮಹಾರಾಜರು ಇವರನ್ನು ದಿವಾನರಾಗಿ ಮಾಡಿದರು.  ಇವರ  ಕಾಲದಲ್ಲಿ ರಾಜ್ಯದ ಸರ್ವವಿಧದ ಬೆಳವಣಿಗೆಯ ಯುಗ ಆರಂಭವಾಯಿತು. ಕೈಗಾರಿಕೆಯ ಕ್ಷೇತ್ರ ವಿಶೇಷವಾಗಿ ಬೆಳೆಯಿತು. ಮಂಡ್ಯದ ಸಕ್ಕರೆ ಕಾರ್ಖಾನೆ, ಮೈಸೂರಿನಲ್ಲಿ ಗಂಧದ ಎಣ್ಣೆ ತಯಾರಿಕೆ, ಭದ್ರಾವತಿಯಲ್ಲಿ  ಕಾಗದ, ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆ, ಬೆಂಗಳೂರಿನ ಗಾಜು ಮತ್ತು ಪಿಂಗಾಣಿ, ಮೈಸೂರು ಲ್ಯಾಂಪ್ಸ್, ಬೆಂಗಳೂರಿನಲ್ಲಿ ಇಂಜಿನೀರಿಂಗ್ ಕಾಲೇಜ್, ೧೯೧೬ ರಲ್ಲಿ ಮೈಸೂರು ವಿಶ್ವವಿದ್ಯಾಲಯ ಮತ್ತು ಮೈಸೂರ ಬ್ಯಾಂಕ್,  ಕನ್ನಡ ಸಾಹಿತ್ಯ ಪರಿಷತ್  ಮತ್ತು ಅನೇಕ ಸಂಸ್ಥೆಗಳು, ಇವೆಲ್ಲ ಸ್ಥಾಪಿತವಾದವು.

ಶಿಕ್ಷಣದ ಪೋಷಕ

ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವವರಿಗೆ ವಿದ್ಯಾರ್ಥಿವೇತನ ನೀಡುವ ಪದ್ದತಿಯನ್ನು ಜಾರಿಗೆ ತಂದುದಲ್ಲದೆ ೧೯೧೬ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ವನ್ನು ಸ್ಥಾಪಿಪಿಸದರು. 

ಟಿ. ಪಿ . ಕೈಲಾಸಂ ಅವರು ಗಣಿ ಶಾಸ್ತ್ರವನ್ನು ಓದಲು ಇಂಗ್ಲೆಂಡ್ ಗೆ ಬಂದಿದ್ದು ಮಹಾರಾಜರ ನೆರವಿನಿಂದಲೇ. ಕಾಶಿ ಹಿಂದೂ ವಿಶ್ವವಿದ್ಯಾನಿಲಯಕ್ಕೆ ಕುಲಪತಿಯಾಗಿದ್ದ ಮಹಾರಾಜರು ಆ ಸಂಸ್ಥೆಗೆ ೨ ಲಕ್ಷ ರೂಪಾಯಿಗಳ ದಾನಮಾಡಿದ್ದಲ್ಲದೆ ಪ್ರತಿ ವರ್ಷ ೧೨,೦೦೦ ರೂಪಾಯಿಗಳ ಧನ ಸಹಾಯವನ್ನು ಮಾಡುತ್ತಿದ್ದರು.    ಮೊದಲನೇ ಮಹಾ ಯುದ್ಧ (೧೯೧೪-೧೯೧೮) ಆರಂಭವಾದಾಗಲೇ ಮಹಾರಾಜರು ರೂ ೫೦ ಲಕ್ಷ ಕಾಣಿಕೆಯನ್ನು ಮತ್ತು ೨ ಲಕ್ಷ ಇಂಡಿಯಾ ರಿಲೀಫ್ ಫಂಡ್ ಗೂ  ನೀಡಿದರು. ಮೈಸೂರಿನ ಸೈನಿಕರು ಈಜಿಪ್ಟ್ ಮತ್ತು ಪ್ಯಾಲಸ್ಟೈನ್ ಪ್ರದೇಶದಲ್ಲಿ ಹೋರಾಡಿದರು.

”ಮಾದರಿ ರಾಜ್ಯ’’ದತ್ತ ಮುನ್ನಡೆ
೧೯೨೩ ರಲ್ಲಿ ರಾಜಘೋಷಣೆ ಪ್ರಕಟಣೆಯಾಗಿ ಪ್ರಜಾಪ್ರತಿನಿಧಿ ಸಭೆಯು ಪ್ರಥಮ ಬಾರಿಗೆ ಶಾಸನಬದ್ಧ ಸಂಸ್ಥೆಯಾಯಿತು (ಈಗಿನ ವಿಧಾನ ಸಭೆ). ಇದರ ಸಂಖ್ಯೆ ೨೫೦ -೨೭೫ ಎಂದು ನಿರ್ಧರಿಸಿ, ಬಹು ಮಂದಿಗೆ ಮತದಾನ ಮಾಡುವ ಅವಕಾಶ ದೊರಕಿತು. ಮೊದಲನೇ ಬಾರಿಗೆ ಮಹಿಳೆಯರಿಗೆ ಈ ಹಕ್ಕು ಬಂತು ಎನ್ನುವದು ಗಣನೀಯ.
ಹಿಂದುಳಿದ ವರ್ಗಗಳಿಗೆ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಜನಾಂಗಗಳಿಗೆ ೩೫ ಸ್ಥಾನಗಳು ಮತ್ತು ಗ್ರಾಮಾಂತರ ಪ್ರದೇಶದಿಂದ ಬಂದವರಿಗೆ ೧೫೦ ಸೀಟುಗಳು ಮೀಸಲಾಗಿತ್ತು.
೧೯೧೯ ರಲ್ಲಿ ಹಿಂದುಳಿದ ಜನಾಂಗಕ್ಕೆ ವಿದ್ಯಾಭ್ಯಾಸ ಮತ್ತು ಕೆಲಸದ ಅವಶ್ಯಕತೆಯ ಅರಿವಾಗಿ, ರಾಜ್ಯದ ಹಿರಿಯ ಅಧಿಕಾರಿಯಾಗಿದ್ದ ಲೆಸ್ಲಿ ಮಿಲ್ಲರ್ ಅವರನ್ನು ಈ ಬಗ್ಗೆ ಸಲಹೆ ಕೊಡುವುದಕ್ಕೆ ನೇಮಿಸಿದರು. ಇವರ ವರದಿಯಲ್ಲಿ ( Millers Report ) ೨೫% ಈ ಜನಾಂಗಕ್ಕೆ ಮೀಸಲಾಗಬೇಕು ಎಂದು ಸಲಹೆ ಕೊಟ್ಟರು ಮತ್ತು ಮಹಾರಾಜರಿಂದ ಒಪ್ಪಿಗೆ ಸಹ ಬಂತು. ಅಂದ ಮೇಲೆ ಇವತ್ತಿನ
Reservation Policy ಹೊಸತೇನಲ್ಲ.
೧೯೨೬ರಲ್ಲಿ ಮಹಾರಾಜರ ಆಪ್ತ ಕಾರ್ಯದರ್ಶಿಯಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ದಿವಾನರಾಗಿ , ಸರ್ ಎಂ ವಿ ಹಾಕಿದ್ದ ತಳಹದಿಯ ಮೇಲೆ ರಾಜ್ಯದ ಬೆಳವಣಿಗೆ ಇನ್ನು ಮುಂದುವರೆಯಿತು.
ಮೈಸೂರಿನ ಉತ್ಪನ್ನಗಳನ್ನು ವಿದೇಶದಲ್ಲಿ ಮಾರಾಟ ಮಾಡಲು ಅನುಕೂಲವಾಗಲೆಂದು ಲಂಡನ್ ನಲ್ಲಿ ರಾಜ್ಯದ ಹಿರಿಯ ಅಧಿಕಾರಿ ಎಮ್ ಏ ಶ್ರೀನಿವಾಸನ್ ಅವರನ್ನು ಟ್ರೇಡ್ ಕಮಿಷನರ್ ನ್ನಾಗಿ ನೇಮಿಸಿದರು. ಮೈಸೂರ್ ಸೇಲ್ಸ್ ಇಂಟರ್ನ್ಯಾಷನಲ್ (MSIL ) ಸ್ಥಾಪನೆಯಾಗಿ ಲಂಡನ್ನಿನ ಪಿಕಾಡಿಲ್ಲಿಯಲ್ಲಿ ( Piccadilly) ಇದರ ಕಚೇರಿ ಇತ್ತು. ಇದನ್ನು ಸುಮಾರು ೨೫-೩೦ ವರ್ಷದ ಹಿಂದೆ ಇಲ್ಲಿ ಮುಚ್ಚಿದರು.
ಮೈಸೂರಿನಲ್ಲಿ ವೈದ್ಯ ಶಿಕ್ಷಣ ಕಾಲೇಜ್ (ಮೈಸೂರ್ ಮೆಡಿಕಲ್ ಕಾಲೇಜ್ ) ೧೯೨೪ ರಲ್ಲಿ ಪ್ರಾರಂಭವಾಯಿತು.

ಕಾವೇರಿಗೊಂದು ಆಣೆಕಟ್ಟು
೧೯ನೇ ಕಾಲದಲ್ಲಿ ತೀವ್ರ ಬರಗಾಲದಿಂದ ಮೈಸೂರು ಮತ್ತು ಮಂಡ್ಯ ಪ್ರದೇಶಗಳಲ್ಲಿ ಕ್ಷಾಮ ಬರುವುದು ಸಾಮಾನ್ಯವಾಗಿತ್ತು ಹತ್ತಿರಲ್ಲೇ ಹರಿಯುವ ಕಾವೇರಿ ನದಿಗೆ ಆಣೆಕಟ್ಟು ಕಟ್ಟುವ ಯೋಜನೆ ಇತ್ತು ಆದರೆ ಅಂದಿನ ಮದ್ರಾಸ್ ಪ್ರೆಸಿಡೆನ್ಸಿ ವಿರೋಧಿಸಿತ್ತು. ದಿವಾನ್ ಆನಂದರಾಯರು ಮಹಾರಾಜರೊಂದಿಗೆ ಚರ್ಚಿಸಿ ಇದಕ್ಕೆ ಬೇಕಾಗಿದ್ದ ೮೧ ಲಕ್ಷ ರೂಪಾಯಿಗಳನ್ನು ಮಂಜೂರ್ ಮಾಡಿಸಿ ೧೧/೧೦/೧೯೧೧ ದಿನ ಈ ಜಲಾಶದ ನಿರ್ಮಾಣದ ಕೆಲಸ ಪ್ರಾರಂಭವಾಗಿ ೧೯೩೧ ರಲ್ಲಿ ಸಂಪೂರ್ಣವಾಯಿತು. ಇದರಿಂದ ಸಾವಿರಾರು ಎಕರೆ ಭೂಮಿ ಫಲವತ್ತಾಯಿತು
ಕೃಷ್ಣರಾಜಸಾಗರದ ಜಲಾಶಯದ ಪ್ರದೇಶದಲ್ಲಿ ದೊಡ್ಡ ಉದ್ಯಾನವನ ಮತ್ತು ಮೈಸೂರು ನಗರದಲ್ಲಿ ವಿಶಾಲವಾದ ರಸ್ತೆಗಳು, ಸಾಲು ಮರಗಳು ಮತ್ತು ಉಪವನ (ಪಾರ್ಕ್ಸ್) ನಿಮಾಣಗೊಂಡವು.
ಒಣ ಪ್ರದೇಶಗಳಾಗಿದ್ದ ಮಂಡ್ಯ, ಟಿ ನರಸೀಪುರ ತಾಲೋಕ್ ಗಳಿಗೆ ನೀರಾವರಿ ಸೌಲಭ್ಯ ಮತ್ತು ಅನೇಕ ಕೈಗಾರಿಕೆಗಳು ಮಹಾರಾಜರ ನೇತೃತ್ಯದಲ್ಲಿ ನಿರ್ಮಾಣವಾಯಿತು.
೧೯೩೦ ರಲ್ಲಿ ಸರ್ ಸಿ ವಿ ರಾಮನ್ ಅವರಿಗೆ ಭೌತಶಾಸ್ತ್ರದ ನೊಬೆಲ್ ಪಾರಿತೋಷಕ ಬಂದಾಗ ಮಹಾರಾಜರು ಅವರಿಗೆ ೧೦ ಎಕರೆ ಜಮೀನನ್ನು ಕೊಟ್ಟು ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಪ್ರಾರಂಭಿಸುವದಕ್ಕೆ ನೆರವು ನೀಡಿದರು. ೧೯೩೮ರಲ್ಲಿ ಮಹಾರಾಣಿ ಕಾಲೇಜ್ ಮತ್ತು ಕೃಷಿ ಮತ್ತು ವ್ಯವಸಾಯ ಅಧ್ಯಯನದ ಕಾಲೇಜ್ ಸಹ ಪ್ರಾರಂಭವಾಯಿತು.

ಲಂಡನ್ನಿನ ವಿಕ್ಟೋರಿಯಾ ನಿಲ್ದಾಣದಲ್ಲಿ ಸ್ವಾಗತ (೧೯೩೬)

ಇಂಗ್ಲೆಂಡಿನಲ್ಲಿ ಮಹಾರಾಜರು
೧೯೩೬ರಲ್ಲಿ ತಮ್ಮ ಖಾಸಕಿ ವೈದ್ಯರ ಸಲಹೆಯಂತೆ ಚಿಕಿತ್ಸೆ ಮತ್ತು ವಿಶ್ರಾಂತಿಗಾಗಿ ಇಂಗ್ಲೆಂಡ್ ದೇಶಕ್ಕೆ ಪ್ರಯಾಣ ಬೆಳೆಸಿದರು. ಅದು ಅವರ ಪಪ್ರಥಮ ವಿದೇಶಯಾತ್ರೆಯಾಗಿತ್ತು. ೨೫ ದಿನದ ಸಮುದ್ರ ಪ್ರಯಾಣದ ನಂತರ ಲಂಡನ್ ನಲ್ಲಿ ಡಾರ್ಚೆಸ್ಟರ್ ಹೋಟೆಲಿನಲ್ಲಿ ತಂಗಿದ್ದರು. ಸಮುದ್ರಯಾನದಲ್ಲಿ ಇಂಗ್ಲೆಂಡ್ ತಲುಪಿ ನಂತರ ಅವರು ರೈಲು ಮಾರ್ಗವಾಗಿ ಹೊರಟು ಲಂಡನ್ನಿನ ವಿಕ್ಟೋರಿಯಾ ಸ್ಟೇಷನ್ನಿನಲ್ಲಿಳಿದಾಗ ಕೂಡಿತ್ತು ಕಿಕ್ಕಿರಿದ ಜನಸ್ತೋಮ. (ಫೊಟೋ).ದಿವಾನ್ ಮತ್ತು ಮಹಾರಾಜರನ್ನು ಸ್ವಾಗತಿಸಿದವರಲ್ಲಿ ಫ್ರೇಸರ್ ಟೌನ್ ಖ್ಯಾತಿಯ ಸರ್ ಸ್ಟುಅರ್ಟ್ ಫ್ರೇಸರ್ ಸಹ ಇದ್ದರು. ಭಾರತ ಮೂಲದ ೧೫೦ ವಿದ್ಯಾರ್ಥಿಗಳು ಕೂಡಿ ಮೆರವಣಿಗೆಯಲ್ಲಿ ಡಾರ್ಚೆಸ್ಟರ್ ಹೊಟೆಲ್ ಗೆ ಕರೆದೊಯ್ದರು. ಹೋಟೆಲ್ ತಲುಪಲು ಅರ್ಧ ಗಂಟೆಗೂ ಹೆಚ್ಚು ಸಮಯ (ಆಗಿನ ಕಾಲದಲ್ಲಿ) ಬೇಕಾಯಿತಂತ! ಮರುದಿನ ಡೇಲಿ ಸ್ಕೆಚ್ ಪತ್ರಿಕೆ ತನ್ನ ವರದಿಯಲ್ಲಿ ”ವಿಕ್ಟೋರಿಯಾ ಸ್ಟೇಶನ್ ದಲ್ಲಿ ಅರ್ಧ ಗಂಟೆ ಇಂದ್ರಧನುಷ್ಷಿನ ಒಂದು ತುದಿಯೇ ಇಳಿದಿತ್ತು” ಎಂದು ಬಣ್ಣಿಸಿತ್ತು!

ಕ್ರಾಯ್ಡನ್ ವಿಮಾನ ನಿಲ್ದಾಣದಿಂದ ಬರ್ಲಿನ್ನಿಗೆ ಹೊರಟು ನಿಂತ ಮಹಾರಾಜರು

ಹೋಟೆಲ್ಲಿನಲ್ಲಿ ಆಚಾರ್ಯವಂತ ಮಹಾರಾಜರಿಗೆ ತಕ್ಕ ಸಿದ್ದತೆಗಳನ್ನು ಮಾಡಲಾಗಿತ್ತು. ಸರ್ ಮಿರ್ಜಾ ಇಸ್ಮಾಯಿಲ್ ಅವರ ನೇತೃತ್ವದಲ್ಲಿ ಹಲವಾರು ಸೇವಕರು ಅಧಿಕಾರಿಗಳು ಮತ್ತು ದಿನನಿತ್ಯದ ಪೂಜೆಗಾಗಿ ಇಬ್ಬರು ಪುರೋಹಿತರು ಸಹ ಇವರ ತಂಡದಲ್ಲಿದ್ದರು! ಒಂದು ಪ್ರತ್ಯೇಕ ಕೋಣೆಯಲ್ಲಿ ದಿನಾಲು ಚಾಮುಂಡೇಶ್ವರಿಯ ಪೂಜೆ ನಡೆಯುತಿತ್ತು. ಅವರ ಅಂದಿನ ಇಂಗ್ಲೆಂಡ್ ವಾಸ್ತವ್ಯದಲ್ಲಿ ಮಹರಾಜರು ಥೇಮ್ಸ್ ದಂಡೆಯ ಮೇಲೆ ಉಪಾಕರ್ಮ ಸಹ ಮಾಡಿದರು ಎನ್ನುವ ದಾಖಲೆಯಿದೆ. (ಈಗಿನ ಮೈಸೂರು ಮಹಾರಾಜರಾದ ಶ್ರಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಳೆದ ೨೦೨೩ ಸೆಪ್ಟೆಂಬರ್ ೩೦ರಂದು ಕನ್ನಡ ಬಳಗ ಯು ಕೆ ದ ”ಸಂಭ್ರಮ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ತಮ್ಮ ಭಾಷಣದಲ್ಲಿ ಈ ಘಟನೆಯನ್ನು ನೆನೆದರು.-ಸಂ).
ಆ ನಂತರ ಅವರು ಬರ್ಲಿನ್ ಗೆ ವಿಮಾನದಲ್ಲಿ ಲಂಡನ್ ಹತ್ತಿರದ ಕ್ರಾಯ್ಡನ್ ವಿಮಾನ ನಿಲ್ದಾಣದಿಂದ ತೆರಳಿದರು.  ಆಗ ಅವರೊಡನೆ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಸಹ ಇದ್ದರು. ನಂತರ ಭಾರತಕ್ಮರಳಿದರು.

ಕೊನೆಯ ದಿನಗಳು
ಇಷ್ಟರಲ್ಲಿ, ಮಹಾರಾಜರ ಅರೋಗ್ಯ ದಿನೇ ದಿನೇ ಹದಗೆಡುತ್ತಿತ್ತು,. ಕೊನೆಗೆ ಹೃದಯಾಘಾತದಿಂದ ೩/೦೮/೧೯೪೦ ರಂದು ನಿಧನರಾದರು . ಲಂಡನ್ ಟೈಮ್ಸ್ ಪತ್ರಿಕೆ ಯಲ್ಲಿ ಇವರ ಮರಣ ಈ ರೀತಿ ಪ್ರಕಟವಾಯಿತು.

ಇವರಿಗೆ ಮಕ್ಕಳಿರಲಿಲ್ಲ. ಆದುದರಿಂದ ಕಂಠೀರವ ನರಸಿಂಹರಾಜ ಒಡೆಯರ್ ಅವರ ಪುತ್ರ ಜಯಜಾಮರಾಜೇಂದ್ರ ಒಡೆಯರ್ ೮/೯/೧೯೪೦ ದಿನ ರಾಜ್ಯದ ೨೫ನೇ ಹಾಗು ಕೊನೆಯ ಮಹಾರಾಜರಾದರು. ಮಹಾರಾಜರಾಗಿ ಇವರ ಆಡಳಿತ ಮುಗಿದ ನಂತರ (೨೫/೦೧/೧೯೫೦) ರಾಜಪ್ರಮುಖ ಮತ್ತು ರಾಜ್ಯಪಾಲರಾಗಿ ನೇಮಕವಾದರು. ಅವರು ೨೩/೦೯/೧೯೭೪ ರಂದು ನಿಧನರಾದರು.

ನಾಲ್ವಡಿಯವರ ಕೊಡುಗೆಯನ್ನು ನೆನೆಯೋಣ ಇಂದು.
ನಾಲ್ವಡಿ ಕೃಷ್ಣರಾಜೇಂದ್ರ ಮಹಾರಾಜರು ಮೈಸೂರು ರಾಜ್ಯಕ್ಕೆ ಕೊಟ್ಟಿರುವ ಕೊಡುಗೆ ಅಪಾರವಾದದ್ದು. ಕನ್ನಡಿಗರಾದ ನಾವು ಇವರನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಇಂದು ಕರ್ನಾಟಕ ಸರ್ಕಾರಕ್ಕೆ ಮತ್ತು ಜನತೆಗೆ ಇದರ ಬಗ್ಗೆ ಯಾವ ರೀತಿಯಲ್ಲೂ ಆಸಕ್ತಿ ಇಲ್ಲವೇನೋ ಅನ್ನಿಸುತ್ತದೆ. ಟಿಪ್ಪು ಸುಲ್ತಾನರ ಜಯಂತಿ ಮಾಡಬೇಕೆಂದು ಸರ್ಕಾರದ ಅಸೆ ಇತ್ತು, ಮಾಡಲಿ, ಏನೂ ಅಭ್ಯಂತರ ಇಲ್ಲ, ಆದರೆ ಕನ್ನಡ ನಾಡನ್ನು ಮಾದರಿ ರಾಜ್ಯವನ್ನಾಗಿ ಮಾಡಿದವರು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರು. ಈ ವರ್ಷ ಜೂನ್ ತಿಂಗಳಲ್ಲಿ ಇವರ ೧೪೦ ವರ್ಷದ ಜನ್ಮ ದಿನ, ಕನ್ನಡ ಜನತೆ ಆ ದಿನವನ್ನಾದರೂ ಜ್ಞಾಪಿಸಿಕೊಂಡು ನಮ್ಮ ಕೃತಜ್ಞತೆಯನ್ನು ಅರ್ಪಿಸೋಣ. ಆ ನಿಟ್ಟಿನಲ್ಲಿ ಇದೊಂದು ನನ್ನ ಚಿಕ್ಕ ಪ್ರಯತ್ನ.
(ಈ ಲೇಖನನಕ್ಕೆ ಅನೇಕ ಸಲಹೆಗಳನ್ನು ಕೊಟ್ಟು ಸಹಾಯ ಮಾಡಿದ ಶ್ರೀವತ್ಸ ದೇಸಾಯಿ ಅವರಿಗೆ ನನ್ನ ಕೃತಜ್ಞತೆಗಳು.)
ರಾಮಮೂರ್ತಿ
ಬೇಸಿಂಗ್ ಸ್ಟೋಕ್



* ಟಿಪ್ಪಣಿ -ಶ್ರೀವತ್ಸ ದೇಸಾಯಿ

ಆಚಾರವಂತ ಮಹಾರಾಜರು.

ರಾಮಮೂರ್ತಿಯವರು ಮೇಲಿನ ಲೇಖನದಲ್ಲಿ ಉಲ್ಲೇಖಿಸಿದಂತೆ ನಾಲ್ವಡಿಯವರು ಆಚಾರವಂತರು ಅಂದಾಯ್ತು. *ದಿನಕರ್ ಕೆ ಆರ್ ಅವರು ತಮ್ಮ ‘ಮ್ಯೂಸಿಂಗ್ಸ್ ಆಫ್ ಎ ಮೈಸೂರಿಯನ್‘ ಬ್ಲಾಗ್ ನಲ್ಲಿ ಮಹಾರಾಜರು ಓಕ್ಲಿ ಕೋರ್ಟ್ ನಲ್ಲಿ ಉಪಾಕರ್ಮ ಮಾಡಿದರು ಎಂದು ಬರೆದಿದ್ದಾರೆ. ಮೇಲೆ ಹೇಳಿದಂತೆ ತಮ್ಮ ಭಾಷಣದಲ್ಲಿ ಈಗಿನ ಮಹಾರಾಜರು ಶ್ರೀಕೃಷ್ಣದತ್ತ ಒಡೆಯರ್ ಅವರು ಟೇಮ್ಸ್ ದಂಡೆಯಲ್ಲಿ ಅಂತ ಖಚಿತ ಪಡಿಸಿದರು. ಎಲ್ಲಿದೆ ಆ ಸ್ಥಳ ಅಂತ ಅನ್ವೇಷಣೆ ಮಾಡುತ್ತ ಹೊರಟ ನನಗೆ ವಿಂಡ್ಸರ್ನಲ್ಲಿ ಟೇಮ್ಸ್ ನದಿತೀರದಲ್ಲಿಯ ಒಂದು ಭವ್ಯ ಮಹಲಿನ ಪತ್ತೆಯಾಯಿತು. ಹಿಂದೊಮ್ಮೆ ಶಿಪ್ ಓನರ್ ಅರ್ನೆಸ್ಟ್ ಒಲೀವಿಯರ್ ಅದರಲ್ಲಿ ವಾಸವಾಗಿದ್ದ ಅಂತ ೧೯೩೬ರ ೨೧, ಜೂಲೈ ಡೇಲಿ ಮಿರ್ರರ್ ಪತ್ರಿಕಾವರದಿಯಿಂದ (ಕೆಳಗಿನ ಚಿತ್ರ ನೋಡಿರಿ) ಗೊತ್ತಾಗುತ್ತದೆ. ಆಗ ಅರಮನೆಯವರು ವಾರ್ಷಿಕ ಉಪಾಕರ್ಮಕ್ಕೆ ಇನ್ನೂ ಜಾಗ ಹುಡುಕುತ್ತಿರಬೇಕು ಎಂದಾಯಿತು. ಆ ವರ್ಷ ಉಪಾಕರ್ಮದ ತಿಥಿ ಸೆಪ್ಟೆಂಬರ್ ೨ ರಂದು ಅಂತ ತಿಳಿಯಿತು. ಆ ಮಹಲಿನ ಮಾಲಕರ ಅವಸಾನದ ನಂತರ ಹಲವಾರು ವರ್ಷಗಳು ಓಕ್ಲಿ ಕೋರ್ಟ್ ಪಾಳು ಬಿದ್ದರೂ ಅನೇಕ ಹ್ಯಾಮರ್ ಹೌಸ್ ಹಾರರ್ ಫಿಲ್ಮ್ಗಳು, ಡ್ರಾಕುಲಾ ಚಿತ್ರಗಳ ಶೂಟಿಂಗ್ ಗೆ ಅವಕಾಶ ಕೊಟ್ಟ ದಾಖಲೆಯಿದೆ. ಈಗ ಅದನ್ನು ಪುನರುತ್ಥಾನಗೊಳಿಸಿ ಒಂದು ಲಗ್ಶುರಿ ರಿವರ್ ವ್ಯೂ ಹೋಟೆಲ್ಲಾಗಿ ಪರಿವರ್ತನೆ ಮಾಡಿದ್ದಾರಂತೆ. ಆಗ ೧೪ ಬೆಡ್ ರೂಂ ಗಳು, ಹದಿನಾರು ಸೇವಕರ ಮನೆಗಳಿದ್ದು ಈಗ ತಂಗಲು ೧೧೮ ಮಲಗುವ ಕೋಣೆಗಳಿವೆಯಂತೆ. ೨೫೦ ಪೌಂಡುಗಳಿಗೆ ಒಂದು ರಾಯಲ್ ಸ್ವೀಟ್ ಸಿಗಬಹುದೇನೋ! (ಪೇಪರ್ ಕಟ್ಟಿಂಗ್ ದೊರಕಿಸಿದ ಜೇಕ್ ರೋಚ್ ಅವರಿಗೆ ಧನ್ಯವಾದಗಳು).
* http://mysoreanmusings.blogspot.com/2014/04/first-flight-of-our-mysore-king-nalwadi.html