ಬೆಕ್ಕಿನ ಬಾಣಂತನ – ಅನುಭವ ಕಥನ

ಬೆಕ್ಕಿನ ಬಾಣಂತನ
ಆಕೆಯ ಹೆಸರು ಐಶ್ವರ್ಯ!
ಮನೆಯ ಹತ್ತಿರವಿದ್ದ ಫಾರೆಸ್ಟ್ ಡಿಪೋ ದಾರಿಯಿಂದ ಹಾದು ಬರುತ್ತಿದ್ದಾಗ ನನ್ನ ಗೆಳತಿ ಮಂಗಲಾ ನನ್ನ ಕರೆದು. 'ಅಮಿತಾ ನಿನಗೆ
ಬೆಕ್ಕಿನ ಮರಿ ಬೇಕಾ?' ಎಂದು ಕೇಳಿದಳು. ಬೆಕ್ಕು, ನಾಯಿ ಎಂದರೆ ನಮ್ಮ ಜನ್ಮದ ಬಂಧುಗಳು. ಅವರನ್ನು ಬೇಡ ಎಂದು ಹೇಳಿ
ನಾನ್ಯಾವ ನರಕ ನೋಡಲಿ?

ಮನೆಯಲ್ಲಿ ಬೆಕ್ಕಿನ ಮರಿ ಇತ್ತಾದರೂ, ಮಂಗಲಾ ತೋರಿಸಿದ ಆ ಪುಟ್ಟ ಪುಟಾಣಿ ಮುದ್ದಿನ ಸೊಕ್ಕನ್ನ ನೋಡಿದ ಮೇಲೆ
ಇಲ್ಲವೆನ್ನಲು ಆಗಲೇ ಇಲ್ಲ.
ದಪ್ಪ ಬಾಲದ ಉದ್ದ ರೋಮಗಳ ಆ ಬೆಕ್ಕಿನ ಮರಿಯನ್ನ ಎತ್ತ್ಕೊಂಡ್ ಬಂದುಬಿಟ್ಟೆ.

ಆದರೆ ಈ ವಿಷಯವನ್ನು ಮನೆಯಲ್ಲಿ ಅಮ್ಮನ ಎದುರು ಹೇಳುವ ಧೈರ್ಯ ನಮ್ಮಲ್ಲಿ ಯಾರಿಗೂ ಇರ್ಲಿಲ್ಲ. ಈ ಸಾಕು ಪ್ರಾಣಿ
ವಿಷಯದಲ್ಲಿ ನನ್ನ ಅಮ್ಮನಿಗೆ ಅವಳದೇ ಆದ ಕೆಲವು ನಿಲುವು, ನಿಯಮಗಳಿದ್ದವು, ಈಗಲೂ ಆಕೆ ಅವನ್ನೆಲ್ಲ ಹಾಗೆಯೇ
ಪಾಲಿಸಿಕೊಂಡು ಬಂದಿದ್ದಾಳೆ.
ಆಕೆಯ ಪ್ರಕಾರ ಸಾಕು ಪ್ರಾಣಿಗಳನ್ನು ಪ್ರಾಣಿಗಳಂತೆಯೇ ನೋಡಬೇಕು, ಅವನ್ನು ಮನುಷ್ಯರಂತೆ ಒಳಮನೆ, ಅಡುಗೆಮನೆ, ಹಾಸಿಗೆ
ತನಕ ಕರೆದೊಯ್ದು ಮುದ್ದು ತೋರಿಸುವ ಅಗತ್ಯ ಇಲ್ಲ. ನೀವು ಹಾಸಿಗೆ ಕೊಡಿ, ಗೋಣಿಚೀಲ ಕೊಡಿ ಅವಕ್ಕೆ ಎರಡೂ ಒಂದೇ!
ಎಂದು ವಾದ ಮಂಡಿಸುವ ನನ್ನ ಅಮ್ಮ,
ಕೊಟ್ಟಿಗೆಯಲ್ಲಿದ್ದ ಬೆಳ್ಳಿ ಭಾಮು, ಪುಟ್ಟಿ, ಆದಿ ಎಂಬ ನಾಮಾಂಕಿತ ಗೋವುಗಳ ಜೊತೆಗೆ ಗಂಟೆಗಟ್ಟಲೆ ಏಕಮುಖ ಸಂವಹನ
ನಡೆಸುತ್ತಿದ್ದಳಾದರೂ, ಬೆಕ್ಕು, ನಾಯಿಗಳ ನೆರಳೂ ಆಕೆಗೆ ಆಗುತ್ತಿರಲಿಲ್ಲ.

ಇಂತಿಪ್ಪ ನನ್ನ ಅಮ್ಮನ ಸಮ್ಮುಖ ಈ ಹೊಸ ಬೆಕ್ಕನ್ನು ತಂದಿದ್ದನ್ನು ಅರುಹಿ ಸಂಭಾಳಿಸೋದು ಯಾರು ಎಂಬುದು ನಮ್ಮ
ಮುಂದಿದ್ದ ದೊಡ್ಡ ಪ್ರಶ್ನೆಯಾಗಿತ್ತು. ಜೊತೆಗೆ ಮನೆಯಲ್ಲಿ ಅದಾಗಲೇ ಗಿಳ್ಳಿ ಎಂಬ ಹಿಂದೆಂದೂ ಒಂದೂ ಇಲಿ ಹಿಡಿಯದ ಬೆಕ್ಕು
ಒಲೆಯ ಹಿಂದೆ, ಕೆಲವೊಮ್ಮೆ ಬೆಚ್ಚಗಿನ ಬೂದಿಯ ಮೇಲೆ ಮಲಗಲೆಂದು ಒಲೆಯನ್ನು ಕೆದರಿ ಹಾಕಿ ಅಮ್ಮನ ಕೋಪ ಕಟಾಕ್ಷಕ್ಕೆ
ಆಗಾಗ್ಯೆ ಗುರಿಯಾಗುತ್ತಿತ್ತು.

ಅಡಿಗೆ ಕೊಣೆಯಲ್ಲಿ ಓಡಾಡೋ ಅದನ್ನು ಅಮ್ಮ ಎಲ್ಲ ರೀತಿಯಿಂದಲೂ ಹೀಯಾಳಿಸುತ್ತಿದ್ದರೆ ಅದು ಮಾತ್ರ ನನಗೂ ಈ
ಬೈಗುಳಿಗೂ ಯಾವ ಸಂಬಂಧ ಇಲ್ಲ ಸರ್ ನಾ ತುಂಬಾ ಒಳ್ಳೆಯವನು ಎನ್ನುತ್ತಾ ಚಕ್ಕುಲಿಯಾಗಿ ಮತ್ತೂ ಗಾಢ ನಿದ್ದೆ
ಮಾಡುತ್ತಿತ್ತು.

ಹೀಗೆ ಹೊತ್ತಲ್ಲದ ಹೊತ್ತಲ್ಲಿ ಮತ್ತೊಂದು ಬೆಕ್ಕು ತಂದು ಮನೆಗೆ ಸೇರಿಕೊಳ್ಳುವ ಬಯಕೆ ಆದಾಗಲೆಲ್ಲ ನಮ್ಮದೊಂದು
ಪುಟ್ಟ ಡ್ರಾಮಾ ಟೀಂ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿತ್ತು. ಅಮ್ಮ ಒಬ್ಬಳು ಬಿಟ್ಟು ಇನ್ನುಳಿದವರಿಗೆಲ್ಲ ಅವರವರ ಪಾತ್ರ,
ಸಂಭಾಷಣೆ ನೀರು ಕುಡಿದಷ್ಟೇ ಸರಳವಾಗಿ ರೂಢಿಯಾಗಿತ್ತು.

ಹಿತ್ತಲ ಬಾಗಿಲಿಂದ ಬೆಕ್ಕನ್ನು ಒಳಗೆ ಬಿಟ್ಟು, ಮುಂದಿನ ಪಡಸಾಲೆಯಲ್ಲಿ ಏನೇನೂ ಗೊತ್ತಿಲ್ಲದವರಂತೆ ಬಂದು ಕೂತು
ಬಿಡುತ್ತಿದ್ದೆವು. ಮನೆಗೆ ಬೆಕ್ಕು ತಾನಾಗೇ ಬಂದು ಸೇರಿದರೆ ಒಳ್ಳೇದು ಎಂದು ಅಮ್ಮನಿಗೆ ಅವರಮ್ಮ ಅದ್ಯಾವುದೋ ಕಾಲದಲ್ಲಿ
ಹೇಳಿದ ಮಾತನ್ನು, ಅದ್ಯಾವುದೋ ಒಂದು ಗಳಿಗೆಯಲ್ಲಿ ನಮ್ಮ ಮುಂದೆ ಹೇಳಿದ್ದೇ ತಪ್ಪಾಗಿತ್ತು. ನಾವು ಹೀಗೆ ಹಿತ್ತಲ
ಬಾಗಿಲಿನಿಂದ ಮನೆಗೆ ಸೇರಿಸಿ ತಾನಾಗೇ ಬೆಕ್ಕು ಬಂತು ಎಂದಾಗ ಉಪಾಯ ಇಲ್ಲದೆ ಪಾಪದ ನನ್ನಮ್ಮ, ಅವರಮ್ಮನ ಮಾತನ್ನು
ನೆನೆದು, ಬೆಕ್ಕನ್ನು ಒಲ್ಲದ ಮನಸಲ್ಲೇ ಆದರೂ ಒಳಗೆ ಸೇರಿಸಿಕೊಳ್ಳಲೇ ಬೇಕಾಗುತ್ತಿತ್ತು.

ಆಮೇಲೆ ಬೆಕ್ಕಿನ ತಲೆಗೆ ಸ್ವಲ್ಪ ತೆಂಗಿನ ಎಣ್ಣೆ ಸವರಿ ಅಡಿಗೆ ಒಲೆಯ ಸುತ್ತ ೩ ಬಾರಿ ಅದನ್ನ ಹಿಡಿದು ತಿರುಗಿಸಿದರೆ ಆ ದಿನದಿಂದ
ಅದು ನಮ್ಮ ಬೆಕ್ಕು.

ಹಾಗೆ ಬಂದ ನಂತರ ಅದಕ್ಕೆ ನಾಮಕರಣವೂ ಆಗಬೇಕಲ್ಲ. ಸಾಮಾನ್ಯವಾಗಿ ಯಾವ ದಿನ ತಂದಿದ್ದೆವೋ ಆ ವಾರದ ಹೆಸರಿನ
ಆರಂಭದ ಅಕ್ಷರದಲ್ಲೇ ಹೆಸರಿಡೋದು ನಮ್ಮ ಮನೆಯ ಅಲಿಖಿತ ನಿಯಮ. ಆದರೆ ಈ ಬಾರಿ ಆ ಬೆಕ್ಕಿನ ಮರಿಯ ಅದಾ,ನಜಾಕತ್,
ನೋಡಿ ಅದಕ್ಕೆ ಐಶ್ವರ್ಯ ಅನ್ನೋ ಹೆಸರಿಟ್ಟಿದ್ದೆವು. ಆಕೆ ನಾವು ಆ ತನಕ ನೋಡಿದ, ನಮ್ಮ ಮನೆಯಲ್ಲಿ ಸಾಕಿದ ಬೆಕ್ಕುಗಳಲ್ಲಿ
ಚಂದ ರೂಪಿನವಳು. ಜಗದೇಕ ಸುಂದರಿ

ಹಾಗೆ ಬಂದು ಮನೆ ಸೇರಿದ ‘ಬಿಲ್ಲಿ’ ನಮ್ಮ ಮನೆಯ ಎಲ್ಲರ ಮುದ್ದು ಮರಿಯಾಗಿಬಿಟ್ಟಳು.
ಆಕೆಯನ್ನ ಹೇಗೆ ಮುದ್ದೆ ಮಾಡಿ ತೀಡಿ ಹೇಗೆ ತಿರುಚಿ ಮಲಗಿಸಿದರು ಆಕೆ ಅದೇ ಆಕಾರದಲ್ಲಿ ಮಲಗಿರುತ್ತಿದ್ದಳು. ಮೈ ಶಾಖ,
ಅಡುಗೆ ಒಲೆಯ ಹಿಂದಿನ ಬಿಸಿಗೆ ಮಲಗುವುದೆಂದ್ರೆ ಅದಕ್ಕೆ ಪ್ರಾಣ...
ದಿನಕಳೆದಂತೆ ಇನ್ನು ಚಂದ, ಮತ್ತೂ ಚಂದ ಆಗುತ್ತಾ ಹೋದಳು. ಅವತ್ತು ಪಪ್ಪನ ಸ್ನೇಹಿತರು ಮನೆಗೆ ಬಂದಾಗ ಐಶ್ವರ್ಯಳನ್ನು
ನೋಡಿ, ಅರೇ ಈ ಬೆಕ್ಕು ಎಲ್ಲಿಂದ ತಂದಿರಿ? ಇದು German long hair ಅನ್ನುವ ತಳಿ, ಭಾರತದಲ್ಲಿ ಅಪರೂಪವೇ, ಎಂದು
ಆಶ್ಚರ್ಯ ಪಟ್ಟಾಗ. ಆಕೆಗೆ ಐಶ್ವರ್ಯ ಎಂದು ಹೆಸರಿಟ್ಟಿದ್ದು ಸಾರ್ಥಕ ಅನಿಸಿತ್ತು.

ಹಾಗೆ ಲಾಸ್ಯ, ಲಾವಣ್ಯಗಳಿಂದ, ನಯ ನಾಜೂಕನ್ನೇ ಹೊದ್ದು ಆಕರ್ಷಣೀಯವಾಗಿ ಇದ್ದ ಐಶ್ವರ್ಯಾ ಹೊಟ್ಟೆ ದಿನದಿಂದ ದಿನಕ್ಕೆ
ದೊಡ್ಡದಾಗುತ್ತಾ ಬಂತು.
ನಮಗೆಲ್ಲರಿಗೂ ಖುಷಿ! ಬೆಕ್ಕು ಮುಚ್ಚಿಟ್ಟ ಮರಿಗಳನ್ನು ಹುಡುಕಿ, ಕಣ್ಣು ಬಿಡುವ ತನಕ ದಿನವೂ ಅವನ್ನು ಎಣಿಸಿ ಮುದ್ದಿಸಿ
ಬರುವ ಕಾತುರದಲ್ಲಿ ನಾವಿದ್ದೆವು. (ನಾವು=ನಾನು,ತಂಗಿ, ಅತ್ತೇ, ಅಜ್ಜಿ, ಪಪ್ಪ, ಚಿಕ್ಕಪ್ಪ)
ಥೇಟ್ ಮುದ್ದಿನ ಮಗಳು ಬಾಣಂತನಕ್ಕೆ ಬಂದಂಥ ಸಂಭ್ರಮ ಅದು.

ಬೆಕ್ಕುಗಳು ಕತ್ತಲಲ್ಲೇ ಮರಿ ಹಾಕುತ್ತವೆ ಹಾಕಿದ ಮೊದಲ ಮರಿ ತಿಂದು ಮುಗಿಸುತ್ತವೆ, ೭ ಜಾಗೆ ಬದಲಿಸುತ್ತವೆ ಹೀಗೆ ಬೆಕ್ಕಿನ
ಬಾಣಂತನದ ಕುರಿತು ಏನೇನೋ ನಂಬಿಕೆಗಳಿವೆ ಐತಿಹ್ಯಗಳೂ ಇವೆ. ಆದರೆ ಅದೆಲ್ಲ ಸುಳ್ಳು ಅನ್ನೋದನ್ನ ನನಗೆ ಮನವರಿಕೆ
ಮಾಡಿಕೊಟ್ಟಿದ್ದೆ ಐಶ್ವರ್ಯ.

ಆ ದಿನ ನಮ್ಮ ಮನೆಯ ಮೂಲೆಯ ಕೋಣೆಯಲ್ಲಿ ಓದುತ್ತ ಕುಳಿತಿದ್ದೆ. ನಮ್ಮ ಮುದ್ದು ಐಶು ಬಂದು ನನ್ ಕಾಲ್ ಮೇಲೆ
ಮಲಗಿತು. ಅದು ಆಕೆಯ ಯಾವತ್ತಿನ ರೂಡಿ. ಆದರೆ ಇವತ್ತು ಪ್ರತಿದಿನದಂತಲ್ಲ ಏನೋ ಹೇಳೋರ್ ಥರ ಪುಸ್ತಕ ವನ್ನ
ಪರಚೋದು ಕಾಲು ಒಮ್ಮೆಲೇ ನೆಟ್ಟಗೆ ಮಾಡಿ ವಿಚಿತ್ರ ದನಿಯಲ್ಲಿ ಕೂಗೋದು. ಮಲಗಿದ ಕಡೆಯೇ ಕಾಲಿನಿಂದ ಕೆದರಿ ಉಗುರು
ಹೊರ ತೆಗೆಯುವುದು ಹೀಗೆಲ್ಲ ವಿಚಿತ್ರ ವರ್ತನೆ ಮಾಡೋಕೆ ಶುರು ಮಾಡಿತು.

ಅದು ಮಾಡ್ತಿರೋದನ್ನ ನೋಡಿದ್ರೆ ಅದಕ್ಕೆ ಹೊಟ್ಟೆನೋವು ಬಂದಿದೆ ಎಂದು ಅನಿಸತೊಡಗಿತ್ತು ಆದರೆ ಆಯಾ ತನಕ ಕೇಳಿದ
ಕಥೆಗಳ ಪ್ರಕಾರ ಮರಿ ಹಾಕಲು ಬೆಕ್ಕಿಗೆ ಕತ್ತಲೆ ಜಾಗ ಬೇಕಲ್ಲ? ಇದನ್ನ ನಾನೇ ಒಯ್ದು ಅಟ್ಟದ ಮೇಲಿದ್ದ ಹಳೇ ಹಿತ್ತಾಳೆ
ಹಂಡೆಯ ಒಳಗೆ ಇಟ್ಟು ಬರಲಾ? ಎದ್ದು ಬಿಡಲ? ಎನ್ನುವ ಯೋಚನೆ ಬಂತಾದರೂ, ನನ್ನ ಮೈಯ್ಯ ಮೇಲಂತೂ ಮರಿ ಹಾಕಲ್ಲ
ಅನ್ನೋ ಒಂದು ವಿಶ್ವಾಸದೊಂದಿಗೆ ಅದನ್ನ ತೊಡೆಯ ಮೇಲೆ ಮಲಗಿಸಿ ಕೊಂಡು ಸುಮ್ಮನೆ ಅದರ ತಲೆ, ಹೊಟ್ಟೆ ಕೊರಳನ್ನ ಸವರುತ್ತ ಕುಳಿತೆ. ಹೀಗೆ ಅಂದುಕೊಂಡು ಗಳಿಗೆಯೂ ಕಳೆದಿಲ್ಲ ನನ್ನ ಅರಿವಿಗೆ ಬರುವ ಮೊದಲೇ ನನ್ನ ತೊಡೆಮೇಲೆ ನಮ್ಮ ಬಿಲ್ಲು, ಮರಿ ಹಾಕಿಬಿಟ್ಟಿತ್ತು. ಆ ಅನುಭವ ಬೇಕೆಂದರೂ ಸಿಗುವಂತದ್ದಲ್ಲ.
ಕೆಲವರಿಗೆ ಹೇಸಿಗೆ, ಕೆಲವರಿಗೆ ಅಯ್ಯೋ ರಾಮ್ ರಾಮನ ನೆನಪು, ಕೆಲವರಿಗೆ ನನ್ ಡ್ರೆಸ್ ಚಿಂತೆ,ನಾನು ಮಾತ್ರ ಆ ಗಳಿಗೆಗಳನ್ನು ಆಸ್ವಾಧಿಸುವುದರಲ್ಲಿ ಮಗ್ನಳಾಗಿದ್ದೆ.
ನನಗೆ ಆ ಅನುಭವ ಎಷ್ಟು ರೋಮಾಂಚನ ತಂದಿತ್ತು ಎಂದರೆ, ಮುಂದಿನ ೩ ಮರಿಗಳನೂ ಅದು ನನ್ ತೊಡೆ ಮೇಲೆ ಹೆತ್ತು, ಕೆಳಗೆ
ನಿಂತು ಹೊಕ್ಕಳ ಬಳ್ಳಿಯನ್ನು ತನ್ನ ಹಲ್ಲಿನಿಂದ ತುಂಡು ಮಾಡಿ ಮತ್ತೆ ತೊಡೆ ಮೇಲೆ ಬಂದು ಮಲಗಿ ಮತ್ತೆ ನೋವು
ಕೊಡುತ್ತಿತ್ತು. ನಾನು ಪ್ರತಿಸಲ ಅದು ಹುಡುಗಿಯಿಂದ ಅಮ್ಮನಾಗಿ ಪರಿವರ್ತನೆ ಗೊಂಡ ರೀತಿಯನ್ನು ಆ ಜವಾಬ್ದಾರಿ
ನಿರ್ವಹಿಸುತ್ತಿದ್ದ ಪರಿ ಕಂಡು ಮೂಕ ವಿಸ್ಮಿತಳಾಗಿದ್ದೆ.

ಯಾರು ಹೇಳಿಕೊಟ್ಟರು ಅದಕ್ಕೆ? ಕಣ್ಣು ಬಿಡದ ಆ ಮರಿಗಳನ್ನು ತನ್ನ ಮೊಲೆಗೆ ಅಂಟಿಸಿಕೊಂಡು ಹಾಲುಣಿಸುವ ಪರಿಯ,
ಮರಿಯ ಮಯ್ಯಸುತ್ತ ಇರೋ ಜಿಡ್ಡು ನೆಕ್ಕಿ ಅದನ್ನ ಶುಭ್ರ ಗೊಳಿಸೋ ಕ್ರಮವ? ಪ್ರಕೃತಿ ಅದೆಷ್ಟು ಅಧ್ಭುತ ಅಲ್ವಾ ?
ನನಗನಿಸಿದ ಮಟ್ಟಿಗೆ ಬೆಕ್ಕಿನ ಬಾಣಂತನದಷ್ಟು ಸ್ವಚ್ಛ ಶುಭ್ರ ಹೆರಿಗೆ, ಮತ್ತ್ಯಾವ ಜೀವಿಯೂ ಮಾಡಿಕೊಳ್ಳಲು ಸಾಧ್ಯವೇ
ಇಲ್ಲವೇನೋ.
ಏನೇ ಹೇಳಿ, ಇದೊಂದು ಜೀವಕಾಲದ ಅಮೂಲ್ಯ ಅನುಭವ. ಅದಕ್ಕೆ ಅಕ್ಷರ ರೂಪ ಕೊಡುವುದು ಕಷ್ಟ ಅನಿಸುತ್ತದೆ. ಆದರೆ ನೀವು
ನನ್ನನ್ನ ಎಂದಾದರೂ ಭೇಟಿ ಆದಾಗ, ಅದನ್ನ ಮಾತಲ್ಲಿ ವಿವರಿಸೋ ಪ್ರಯತ್ನ ಖಂಡಿತ ಮಾಡೇನು! ಆದರೆ ಅಕ್ಷರಗಳಿಗೆ ದಕ್ಕದ
ಭಾವಗಳನ್ನು ಮಾತಿನ ಮಾಲೆಯಲ್ಲಿ ಕಟ್ಟಿ ಹಾಕಲಾದೀತೆ?

ಅಲ್ಲಾದರೂ ನಾನೆ ಸೋಲುತ್ತೇನೆ!
ಐಶು ಈಗಿಲ್ಲ. ಆದ್ರೆ ಅವಳ ನೆನೆಪು, ನನಗೆ ಮೊದಲ ಬಾರಿ ಹೆರಿಗೆ ನೋವು ಬಂದಾಗ ಕಾಡಿದ್ದಂತೂ ನಿಜ.
ಇದು ನಮ್ಮ ಬೆಕ್ಕು ಐಶ್ವರ್ಯಳ ಚೊಚ್ಚಲ ಬಾಣಂತನದ ಕಥೆ.
- ಅಮಿತಾ ರವಿಕಿರಣ್
ಚಿತ್ರ ಕೃಪೆ: ಅಂತರ್ಜಾಲ

“ವೀರ ವನಿತೆ” ಮತ್ತು “ಅಜ್ಜನ” ಕವಿತೆ

ಶೀರ್ಷಿಕೆ ನೋಡಿ ಇದು ಕತೆಯೋ ಅಥವಾ ಕವಿತೆಯೂ ಎಂದು ಗೊಂದಲಪಡಬೇಡಿ, ಇದು ಕವಿತೆಯಲ್ಲಿ ಕತೆಯೂ ಹೇಳುತ್ತದೆ ಮತ್ತು ಕವಿತೆಯ ಕಥೆಯನ್ನು ತಿಳಿಸುವ ಪ್ರಯತ್ನ ಮಾಡುತ್ತದೆ. ವೀರ ವನಿತೆ ಎಂದ ಕೂಡಲೇ ನಿಮಗೆ ಇದು ಯಾರ ವಿಷಯ ಎಂದು ತಿಳಿದಿರುತ್ತದೆ… ಹೌದು, ವೀರ ವನಿತೆ ಕಿತ್ತೂರು ಚೆನ್ನಮ್ಮನ ವಿಷಯ. ಇನ್ನೂ ಅಜ್ಜ ಎಂದಾಗ ಕೂಡ ನಿಮಗೆ ಹೊಳೆದಿರಬಹುದು… ಹೌದು, ಅವರೇ ಬೇಂದ್ರೆ ಅಜ್ಜ.

ಈ ಸಂಚಿಕೆಯಲ್ಲಿ ಯಾಕೆ ಈ ವಿಷಯ ಎಂಬ ಪ್ರಶ್ನೆಯೇ?
ನಾಲ್ಕೈದು ದಿನದಲ್ಲಿ ಚೆನ್ನಮ್ಮನ ಹುಟ್ಟಿದ ದಿನ, ಅದ ಕಾರಣ ಇಂದು ವಿವಿಡ್ಲಿಪಿ ಪ್ರಕಟಣೆಯ ಶ್ರೀ. ಸತ್ಯೇಶ್ ಬೆಳ್ಳೂರ್ ಅವರು ಬರೆದ “ಕನ್ನಡೋತ್ಸವ” ನೃತ್ಯ ನಾಟಕದ ಒಂದು ಲಾವಣಿ ಇಲ್ಲಿ ಹಂಚಿಕೊಂಡಿದ್ದೇನೆ. ಚೆನ್ನಮ್ಮನ ವೀರ ಕಥೆಯನು ಸತ್ಯೇಶ್ ಅವರು ಲಾವಣಿಯ ಸುಂದರ ಸಾಲುಗಳಲ್ಲಿ ವಿವರಿಸಿದ್ದಾರೆ, ಕನ್ನಡೋತ್ಸವ ಪುಸ್ತಕ ನೃತ್ಯ ನಾಟಕದ ರೂಪದಲ್ಲಿ ಬೆಂಗಳೂರಿನಲ್ಲಿ ಪ್ರದರ್ಶನ ಕೂಡ ಆಗಿದೆ.

ಎರಡನೆಯದು ಬೇಂದ್ರೆ ಅವರ ನಾಕು ತಂತಿ ಕವನ ಸಂಕಲನದ ವಿಷಯ. ಅವರ ಸಂಕಲನಕ್ಕೆ “ಜ್ಞಾನ ಪೀಠ ಪ್ರಶಸ್ತಿ” ಬಂದು ೫೦ ವರ್ಷ ಆಯಿತು, ಆದುದರಿಂದ ಈ ಸಂಚಿಕೆಯಲ್ಲಿ ಅದರ ವಿಷಯ ಹಂಚಿಕೊಳ್ಳಬಹುದು ಎನ್ನುವ ವಿಚಾರ ಮನಸ್ಸಿಗೆ ಬಂತು… ಹಂಚಿಕೊಂಡಿದ್ದೇನೆ. ನನ್ನ ಸಂಪಾದಕೀಯ ಕಳೆದ ಸಂಚಿಕೆಯಲ್ಲಿ ಬೇಂದ್ರೆ ಅವರ “ನರಬಲಿ” ಕವನದ ವಿಷಯ ಇತ್ತು, ಈ ಸಂಚಿಕೆಯಲ್ಲಿ “ನಾಕು ತಂತಿ” ವಿಚಾರ ಬಂದಿದ್ದು ಆಕಸ್ಮಿಕ, ನನ್ನ ಸಂಪಾದಕೀಯ ಬರುವ ಸಮಯಕ್ಕೆ ಇದೆ ವಿಷಯ ಸಿಕ್ಕಿದ್ದು ಕಾಕತಾಳೀಯ.

ವೀರ ವನಿತೆ ಚೆನ್ನಮ್ಮನ ಲಾವಣಿ (- ಸತ್ಯೇಶ್ ಬೆಳ್ಳೂರ್)

ಬನ್ನಿರಿ ಮಕ್ಕಳೇ ನೋಡುತ ಹಾಡುವ ಕನ್ನಡನಾಡಿನ ಕತೆಯೊಂದ
ಬೆಳಗಾವಿಯ ಅಭಿಮಾನವ ಬೆಳಗುವ ವೀರರಮಣೀಯ ಹಾಡೊಂದ|
ಪೇಶ್ವೆಯ ರಾಜ್ಯವ ನುಂಗಿದ ನಂತರ, ಆಂಗ್ಲರ ದೃಷ್ಟಿಯು ನೆಟ್ಟಿತ್ತು
ಕಿತ್ತೂರಿನ ಸಿರಿ ಧನವನು ದೋಚುವ, ದುಷ್ಟ ಯೋಜನೆಯು ಹೊಮ್ಮಿತ್ತು ||ಪ||

“ವಸ್ತ್ರಕಾಣಿಕೆಯ ಕೊಡುವೆವು ನಾವು, ನಿಮ್ಮಯ ಪಾಡಿಗೆ ಇದ್ದುಬಿಡಿ
ನಿಮ್ಮಯ ರಕ್ಷಣೆ ಆಂಗ್ಲರ ಹೊಣೆಯು, ನಿಮ್ಮಯ ಸೇನೆಯ ಕೊಟ್ಟುಬಿಡಿ”|
ಆಂಗ್ಲರ ಮಾತಿಗೆ ವಿಧಿಯೇ ಇಲ್ಲದೆ ಸಮ್ಮತಿ ಕೊಟ್ಟರು ಒಳಒಳಗೆ
ಚೆನ್ನಮ್ಮಾಜಿಯು ಕುದಿಯುತಲಿದ್ದಳು ತೋರದೆ ಏನನು ಹೊರಹೊರಗೆ ||೧||

ದೇಸಾಯಿಯ ಆರೋಗ್ಯವು ಕೆಟ್ಟರೆ ರಾಜ್ಯವನುಳಿಸುವ ಸಲುವಾಗಿ
ತಾಯಿ ಚೆನ್ನಮ್ಮ ಕಚ್ಚೆಗಟ್ಟುತ್ತ ಖಡ್ಗವ ಹಿಡಿದಳು ಬಲವಾಗಿ|
ಅರಿಗು ತಿಳಿಯದ ಹಾಗೆ ಮತ್ತೊಮ್ಮೆ ಸೈನ್ಯವನೊಂದನು ಕಟ್ಟಿದಳು
ಶಸ್ತ್ರಾಸ್ತ್ರಗಳನು ಪೇರಿಸಿ ಇಡುತಲಿ ಕೋಟೆಯ ಗಟ್ಟಿ ಮಾಡಿದಳು ||೨||

ಸುಳುಹು ಸಿಗುತಲೇ ಆಂಗ್ಲರ ಸೈನ್ಯವು ಕೋಟೆಗೆ ಮುತ್ತಿಗೆ ಹಾಕಿತ್ತು
ಮದ್ದುಗುಂಡುಗಳ ತೋಪು ತುಪಾಕಿಯ ಕೋಟೆಯ ಹೊರಗಡೆ ನಿಲಿಸಿತ್ತು|
“ಅರ್ಧ ತಾಸಿನೊಳು ಕೋಟೆಯ ಬಾಗಿಲ ತೆರೆಯದೆ ಹೋದರೆ ಮುದದಿಂದ
ಬಾಗಿಲ ಸಿಡಿಸಿ ಒಳ ನುಗ್ಗುವೆವು” ಎಂದನು ಥ್ಯಾಕರೆ ಮದದಿಂದ ||೩||

ಅರ್ಧ ತಾಸಿಗೆ ಬಾಗಿಲು ತೆರೆಯಲು ನುಗ್ಗುತ ಬಂದಿತು ವೀರಪಡೆ
ಕುದರೆಯನೇರಿದ ಚೆನ್ನಮ್ಮಾಜಿಯೇ, ಮೊದಲ ಯೋಧಳು ಅವರ ಕಡೆ|
ಒಂಟೆ ಅಬಲೆ ಇವಳೇನು ಮಾಡುವಳು, ನಕ್ಕರು ಆಂಗ್ಲರು ಮೊದಲಲ್ಲಿ
ವೀರನಾರಿಯ ಖಡ್ಗಕೆ ಮಣಿದು, ಸೋಲನು ಉಂಡರು ಕೊನೆಯಲ್ಲಿ ||೪||

ತೋಪು ತುಪಾಕಿಯ ಪಡೆಯೇ ಆದರು, ಥ್ಯಾಕರೆ ಸತ್ತನು ಕೆಳಗುರಳಿ
ಎದೆಯಲಿ ಕೆಚ್ಚಿರೆ, ಮನದಲ್ಲಿ ನೆಚ್ಚಿರೆ, ಗೆಲವೇ ಬರುವುದು ಮರಮರಳಿ|
ಕನ್ನಡ ನಾಡಿನ ಕಥೆಯನು ಯಾರೇ ಹೇಳಲಿ ಕೇಳಲಿ ಯುಗಯುಗದಿ
ಕಿತ್ತೂರಿನ ಈ ರಾಣಿಯ ನೆನೆಯದೆ ಮುಗಿಯುವದೆಂತೋ ಈ ಜಗದೀ ||೫||

ಬನ್ನಿರಿ ಮಕ್ಕಳೆ ನಲಿಯುತ ಹಾಡುವ ಕನ್ನಡನಾಡಿನ ಕಥೆಯನ್ನು
ಕಿತ್ತೂರಿನ ಹೆಸರನು ಬೆಳಗಿಸಿದ ಚೆನ್ನಮ್ಮಾಜಿಯ ಹಾಡನ್ನು…
ವೀರರಮಣೀಯ ಹಾಡನ್ನು…

ದೇಶಪ್ರೇಮದ ಕಹಳೆಯ ಊದಿದ ಒಂದು ಹೆಣ್ಣಿನ ಕಥೆಯು ಇದು…
ಸ್ವಜನರ ದ್ರೋಹದ ಸಂಚಿಗೆ ಬಿದ್ದು ಜೀವವ ತೆತ್ತ ವ್ಯಥೆಯು ಇದು…
ವೀರವನಿತೆಯ ಕಥನವಿದು… ಚೆನ್ನಮಾಜಿಯ ಗಾಥೆ ಇದು…

“ನಾಕು ತಂತಿ”

“ನಾಕು ತಂತಿ” ನಲವತ್ತು ನಾಲ್ಕು ಕವನಗಳ ಸಂಗ್ರಹ, ಅವರ ಮೆಚ್ಚಿನ ಶ್ರಾವಣದ ಕುರಿತ ಕವನ ಮೊದಲನೆಯದು ಮತ್ತು ಶಿಶುಮಾರನ ಲಾಲಿ ನಲವತ್ತು ನಾಲ್ಕನೆಯ ಕವನ, ಪ್ರಕಟಿತ ಪುಸ್ತಕದ ನಾಲ್ಕನೆಯ ಕವನ “ನಾಕು ತಂತಿ”… ಇದು ನಾಲ್ಕನೆಯದು ಆಗುವದಕ್ಕೆ ನಾಕು ಸಂಖ್ಯೆ ಸಾಂಕೇತಿಕ ಇರಬಹುದೇನೋ (ಇದನ್ನು ಯಾರೂ, ಎಲ್ಲಿಯೂ ಉಲ್ಲೇಖಿಸಿಲ್ಲ, ಇದು ನನ್ನ ಅನಿಸಿಕೆ).

ನಾಕು ತಂತಿ ಕವನ ಸಂಕಲನದ ಬಗ್ಗೆ ಮಾತನಾಡುತ್ತ ಬೇಂದ್ರೆ ಅವರು ಹೇಳುತ್ತಾರೆ ” ಕವಿತೆಗಳಲ್ಲಿ ಭಾಷಾಂತರಕ್ಕೆ ಅನುಕೂಲವಾದ ಕವಿತೆಗಳು ಇರುತ್ತವೆ, ಭಾಷಾಂತರಕ್ಕೆ ಅಸಾಧ್ಯವಾದ ಕವಿತೆಗಳು ಇರುತ್ತವೆ. ಅದು ಭಾಷೆಯ ಜಾಯಮಾನಕ್ಕೆ ಕಟ್ಟಿದ್ದು… ನನ್ನ ನಾಕು ತಂತಿ ಕವನ ಯಾವ ಭಾಷೆಗೋ ವಯಲಿಕ್ಕೆ (ಭಾಷಾಂತರಕ್ಕೆ) ಬರಲ್ಲ…”,

ಅವರ ಕವನ ಓದುವಾಗ ಅನಿಸುತ್ತದೆ… ಕವನದ ಸೂಕ್ಷ್ಮ ಅರ್ಥ ತಿಳಿದುಕೊಳ್ಳುವದೇ ಕಷ್ಟ, ಯಾಕಂದರೆ ಕವನದ ಪದಗಳು, ಅಕ್ಷರಗಳು ಕನ್ನಡದಲ್ಲಿ ಕೊಡುವ ಅರ್ಥ ಇನ್ನೊಂದು ಭಾಷೆಯಲ್ಲಿ ಕೊಡಲಿಕ್ಕಿಲ್ಲ. ಡಾ|| ಗುರುರಾಜ ಕರಜಗಿ ಅವರು ಇದನ್ನು ಬೀಜಾಕ್ಷರ ರೂಪದ ಶ್ರುತಿ ಕಾವ್ಯ ಎಂದಿದ್ದಾರೆ. ನಿಜ, ಶಬ್ದ ಗಾರುಡಿಗ ಬೇಂದ್ರೆ ಅವರ ಪ್ರತಿಯೊಂದು ಅಕ್ಷರದಲ್ಲೂ ಅರ್ಥ ಇದೆ.

“ನಾಕು ತಂತಿ” ಯನ್ನು ಬೇಂದ್ರೆ ಅವರು ಬೆಂಗಳೂರಿನ ಆಲ್ ಇಂಡಿಯಾ ರೇಡಿಯೋ ಸಂದರ್ಶನದಲ್ಲಿ ಈ ರೀತಿ ವಿವರಿಸಿದ್ದಾರೆ ” ತನ್ನ ತನಾನೇ ಒಂದು ತಂತಿ, ಆ ತಂತಿ ಒಂದು ತುದಿ ನೀವು ನೋಡ್ತಿರ್ತೀರಿ ಅದಕ್ಕ ಅದು ನಿಮಗೆ ಪ್ರತ್ಯಕ್ಷ ಅಗುದಕ್ಕೆ ಅದಕ್ಕೆ “ನೀನು” ಅಂತೀನಿ, ಇನ್ನೊಂದು ನನಗ ಅದ ಅದಕ್ಕ “ನಾನು” ಅಂತೀನಿ. ಹೊರಗಿನ ಮಂದಿ “ನೀನು” ಅನೂದಕ್ಕೆ ನಾನು “ನಾನು” ಅಂತೀನಿ. ನನ್ನಷ್ಟಕ್ಕೆ ನಾನು ಇದ್ದಂಗೆ ನಾನು ಎಂಬುದು ಇದು “ತಾನು” ಇರ್ತೀನಿ, ಈ “ತಾನು” ಬಹಳ ಎಳೆದಾಡಿದರೆ ಸುಖ ಆಗೋದಿಲ್ಲ, ಅದಕ್ಕೆ “ಆನು” ಬೇಕಾಗುತ್ತದೆ… ಇದರ ಎಲ್ಲಾದರಲ್ಲೂ “ನು” ಏನಿದೆ ಅದು ಜೀವನದ ಮಹತ್ವದ ಭಾಗ.”

ಅದಕ್ಕೆ ಬೇಂದ್ರೆ ಅವರು ತಮ್ಮ ಕವನದಲ್ಲಿ ಅನುತ್ತಾರೆ
’ನಾನು’ ’ನೀನು’
’ಆನು’ ’ತಾನು’
ನಾಕೆ ನಾಕು ತಂತಿ,

ನಾಕೇ ತಂತಿ ಸಾಕು ಶ್ರುತಿ ಹಿಡಿಯಲಿಕ್ಕೆ, ಮಧುರವಾದ ಸಂಗೀತಕ್ಕೆ ಒಂದು ಚೌಕಟ್ಟು ಕೊಡಲಿಕ್ಕೆ. ಹಾಗೆ ’ನಾನು’, ’ನೀನು’, ’ಆನು’, ’ತಾನು’ – ನಾಕೇ ತಂತಿ ಸಾಕು ಜೀವನದ ಸಂಗೀತ ಮಧುರವಾಗಿಸಲಿಕ್ಕೆ.

ಮತ್ತೊಂದು ಕಡೆ ಬೇಂದ್ರೆ ಅವರು ಒಂದು ಇಂಗ್ಲಿಷ್ ಭಾಷಣದಲ್ಲಿ ನಾಕು ತಂತಿ ವಿವರಿಸಿದ್ದು ಹೀಗೆ, (ಕರಜಗಿ ಅವರ ಭಾಷಣದಲ್ಲಿ ಕೇಳಿದ್ದು)

Mans identity is four fold, it’s Naanu, Neenu, Taanu and Aanu. Nu is sensibility, Noovu is special form of sensibility turned into agony. I cannot see myself, not even my face, yet I love it. That is Naanu (I). You can see me as I am but cannot participate in my sensibility, that is Neenu (You). Taanu is the received self, Aanu is the receiving self the one that discovers self by surrender.

ಇನ್ನೂ ಕೆಲವರು ಇದನ್ನು ಅರ್ಥಿಸಿದ್ದು ಹೀಗೆ – “ನಾನು” ಪ್ರಕೃತಿ (ಹೆಣ್ಣಿಗೆ) ಹೋಲಿಸಿದ್ದಾರೆ, “ನೀನು” ಪುರುಷನಿಗೆ ಹೋಲಿಸಿದ್ದಾರೆ, ಇವರಿಬ್ಬರ ಸಮ್ಮಿಲನ “ತಾನು” ಅಂದರೆ ಒಂದು ಮಗು… “ಆನು” ಈ ಸೃಷ್ಟಿಯ ಸೃಷ್ಟಿಕರ್ತ, ಅಂದರೆ ದೇವರು,

ಈ ಕವನದ ನಾಲ್ಕು ಪದಗಳು ಪ್ರತಿ ಸಲ ಓದಿದಾಗಲೂ ಒಂದು ವಿಭಿನ್ನ ಅರ್ಥ ಕೊಡುತ್ತದೆ, ಬೇರೆ ಬೇರೆ ವಿಚಾರ ಮೂಡುತ್ತದೆ, ಹೊಸ ಅರ್ಥ ಹುಟ್ಟುತ್ತದೆ. ನಮ್ಮನ್ನು ನಾವು ಅರ್ಥ ಮಾಡಿಕೊಂಡಿದ್ದು “ನಾನು” ಅನ್ನಬಹುದು… ಬೇರೆಯವರು ನಮ್ಮನ್ನು ನೋಡಿ, ನಮ್ಮ ಬಗ್ಗೆ ತಿಳಿಸುವುದು “ನೀನು” ಅನ್ನಬಹುದು… ನಮ್ಮ ಅಹಂ ಅನ್ನು “ತಾನು” ಅನ್ನಬಹುದು… ಸಕಾರಾತ್ಮಕತೆ ವಿಚಾರಗಳನ್ನು “ಆನು” ಅನ್ನಬಹುದು… ಇವುಗಳನ್ನು ಸಮತೋಲನದಲ್ಲಿ ಇಟ್ಟರೆ ನಮ್ಮ ವ್ಯಕ್ತಿತ್ವ ಮಧುರ, ಇಲ್ಲದಿದ್ದರೆ ಕರ್ಕಶ… ಇದು ನನ್ನ ಮನಸಿನ್ನಲ್ಲಿ ಬಂದ ವಿಚಾರ.

ಅವರ ಇನ್ನೊಂದು ವಿಚಾರ ಇಲ್ಲಿ ಹಂಚಿಕೊಳ್ಳುವುದು ಸೂಕ್ತ ಅನಿಸುತ್ತದೆ, ಅವರು ಹೇಳುತ್ತಾರೆ “ಓದಿದ ಕೂಡಲೇ ಅರ್ಥ ಆಗೋದು ಕವಿತೆ ಉಚ್ಚ ಲಕ್ಷಣ ಅಲ್ಲವೇ ಅಲ್ಲ… ಪ್ರತಿಯೊಂದು ಸಲ ಓದಿದಾಗೂ ಹೊಸ ಅರ್ಥ ಆಗೋದು ಖರೆ ಕವಿತೆಯ ಲಕ್ಷಣ”.

ಇಲ್ಲಿಯವರೆಗೆ ನಾವು ನೋಡಿದ್ದು “ನಾಲ್ಕು ತಂತಿ” ಕವನದ ಮೂರು ಸಾಲು ಮಾತ್ರ, ಪೂರ್ತಿ ಕವನದಲ್ಲಿ ನಾನು ನೋಡಿದ್ದು/ ಓದಿದ್ದು ೬೮ ಸಾಲುಗಳು. ಇವನ್ನು ನನ್ನ ವಿಚಾರಧಾರೆಗೆ ಮತ್ತು ಮಿತಿಗೆ ತಕ್ಕಂತೆ ಅರ್ಥಮಾಡಿಕೊಳುತ್ತಿದ್ದೇನೆ, ಮತ್ತೊಮ್ಮೆ ಅವಕಾಶ ಸಿಕ್ಕರೆ ಉಳಿದ ಸಾಲುಗಳ ಬಗ್ಗೆ ಬರೆಯುವೆ.