ಪ್ರೀತಿಗೊಂದು ಚಮಚೆ -ಅಮಿತಾ ರವಿಕಿರಣ್

ಪ್ರೀತಿಗೊಂದು ವ್ಯಾಖ್ಯೆ ಬೇಕೆ? ಅದಕ್ಕೊಂದು ಪ್ರತಿಮೆ ಬೇಕೆ?  ಕಬೀರನಿಂದ ಆರಂಭಿಸಿ ಬೀಟಲ್ಸ್ ಬ್ರಿಟಿಷ್ ’ಪಾಪ್ ಬ್ಯಾಂಡ್’ (Beatles) ವರೆಗೆ ಅವರು ಹಾಡಿದ್ದನ್ನು ಗುನುಗುನಿಸುತ್ತ ಬಂದಿದ್ದೇವೆ. ಜಾನ್ ಲೆನನ್ ಮತ್ತು ಪಾಲ್ ಮೆಕ್ಕಾರ್ಟ್ನಿಯವರ All you need is Love ಹಾಡು ಅನಿವಾಸಿಯ ಹಿರಿಯ ಓದುಗರ ತುಟಿಯ ಮೇಲೆ ಸದಾ ಇರುತ್ತಿತ್ತು!ಎರಡೂ ಕೈಗಳನ್ನು ಜೋಡಿಸಿ ಹಾರ್ಟ್ ಲಾಂಛನವನ್ನು ತೋರಿಸದ ಈಗಿನ ಯುವಕರೇ ಇಲ್ಲ. ಅದೇ ತರಹ ಬಹುಕಾಲದಿಂದ ಯುಕೆ ದೇಶದ ವೇಲ್ಸ್ ಪ್ರಾಂತದಲ್ಲಿ ಚಮಚಗಳನ್ನು ಕೆತ್ತಿ ಪ್ರೀತಿಯ ದ್ಯೋತಕವಾಗಿ ಕೊಡುವ ರೋಚಕ ಇತಿಹಾಸವನ್ನು ಈ ವಾರ ಬೆಲ್ ಫ಼ಾಸ್ಟ್ ನಲ್ಲಿ ವಾಸಿಸುತ್ತಿರುವ ಅಮಿತಾ ರವಿಕಿರಣ್ ಅವರು ಬರೆದಿದ್ದಾರೆ. ಅದು ನಿಮಗೆಲ್ಲ ಹಿಡಿಸೀತು ಎನ್ನುವ ನಮ್ಮ ಆಶಯ. (ಸಂ)
'ಪ್ರೀತಿ' ಎಂಬ ಈ ಎರಡೂವರೆ ಅಕ್ಷರದ*  ಪದವನ್ನು ಕೇಳಿದಾಗ ಮನಸ್ಸು ಉಲ್ಲಸಿತವಾಗುತ್ತದೆ.  ಪ್ರೀತಿ ಎಂದರೇನು? ಹಾಗೆಂದು ಯಾರಾದರೂ ಒಂದೇ ವಾಕ್ಯದಲ್ಲಿ ಉತ್ತರಿಸಿ ಎಂಬ ಪ್ರಶ್ನೆ ಹಾಕಿದರೆ,  ಪ್ರೀತಿ ಎಂಬ ಪದ ಒಂದೇ ಆದರೂ ಹಾಗೆಂದರೇನು ಎಂಬ ಪ್ರಶ್ನೆಗೆ  ಸಿಗುವ ಉತ್ತರಗಳು ಲೆಕ್ಕಕ್ಕೆ ಸಿಗದಷ್ಟು.
ಜೊತೆಗೆ ಪ್ರತಿ ಉತ್ತರವೂ ಅನನ್ಯ!

ಪ್ರೀತಿ ಎಂದರೇ ಹಾಗಲ್ಲವೇ? ಭಾಷೆಗೆ ನಿಲುಕದ ಭಾವವದು! ಆದರೂ ಮನುಷ್ಯ ತನ್ನ ಒಲವು ವ್ಯಕ್ತಪಡಿಸಿ ಪ್ರೀತಿಯನ್ನು ಪಡೆಯಲು, ಅದನ್ನು ಬೆಳೆಸಲು, ಒಂದು ಬಹು ಸುಂದರ ಉಪಾಯ ಹುಡುಕಿಕೊಂಡಿದ್ದಾನೆ ಅದೇ ಉಡುಗೊರೆ;

ಅದು ಸಂಗೀತ, ಸಾಹಿತ್ಯ, ಮಾತು, ಚಿತ್ರಕಲೆಯ ಮೂಲವಾದರೂ ಸರಿ. ಅಥವಾ ಒಂದು ವಸ್ತು ರೂಪದಲ್ಲಾದರೂ ಸರಿ. ಉಡುಗೊರೆಯ
ಮೂಲಕ ತನ್ನಲ್ಲಿ ಮೂಡಿದ ಪ್ರೀತಿಯನ್ನು ತಾನು ಪ್ರೀತಿಸುವ ಜೀವಕ್ಕೆ ತಿಳಿಸಲು ಹವಣಿಸುತ್ತಾನೆ.
ಈ ಪ್ರೀತಿ ಅಭಿವ್ಯಕ್ತಿಯಲ್ಲಿ ತನ್ನಿಷ್ಟದ ಜೀವಕ್ಕೆ, ಉಡುಗೊರೆ ಕೊಟ್ಟು, ತನ್ನ ಪ್ರೀತಿಯನ್ನು ನಿವೇದಿಸಿಕೊಳ್ಳುವ ಬಗೆ ಇಂದು ನಿನ್ನಯದಲ್ಲ.

ಪುರಾಣ ಕಾಲದಲ್ಲಿ ಪಾರ್ವತಿ ಶಿವನ ಕುರಿತು ತಪಸ್ಸು ಮಾಡುವಾಗ ಆತನನ್ನು ಒಲಿಸಿಕೊಂಡು ಅವನ ಪ್ರೀತಿ ಸಾಂಗತ್ಯದ ಅಭಿಲಾಷಿಯಾಗಿ ಅಪರೂಪದ ಫಲ ಪುಷ್ಪಗಳನ್ನು ಆತನಿಗೆ ಉಡುಗೊರೆಯಾಗಿ ಸಮರ್ಪಿಸಿದಳಂತೆ!

ಅಂತೆಯೇ, ಕೃಷ್ಣ ರಾಧೆಯ ಪ್ರೇಮಕಥೆಯಲ್ಲಿ ಬರುವ ವೈಜಯಂತಿ ಹಾರ ಮತ್ತು ಕೊಳಲು ಕೂಡ ಪರಸ್ಪರ ಕೊಟ್ಟು ಪಡೆದ ಪ್ರೀತಿಯ ಉಡುಗೊರೆಗಳೇ. ಕೃಷ್ಣ-ರುಕ್ಮಿಣಿ- ಸತ್ಯಭಾಮೆಯ ಪಾರಿಜಾತದ ಕಥೆ, ದುಶ್ಯಂತ ಶಾಕುಂತಲೆಯ ಪ್ರೇಮಕಥೆಯಲ್ಲಿ ಬರುವ ಉಂಗುರದ ಉಲ್ಲೇಖಗಳನ್ನು ಕೇಳಿದಾಗ ಪ್ರೇಮ ನಿವೇದನೆಗೆ, ಸಾಮರಸ್ಯ ತುಂಬಿದ ಜೀವನಕ್ಕೆ ಉಡುಗೊರೆ ಎಂಬುದು ಅದೆಷ್ಟು ಮುಖ್ಯ ಎಂಬುದರ ಅರಿವಾಗುತ್ತದೆ.
ಇದೇ ಹಿನ್ನೆಲೆಯಲ್ಲಿ ಹುಟ್ಟಿದ ಒಂದು ಅಪರೂಪದ ಸಂಪ್ರದಾಯ, ಕಲೆ, ರೂಡಿ ವೇಲ್ಸ್ ದೇಶದಲ್ಲಿ ಕಂಡುಬರುತ್ತದೆ.
ಈ ಸಂಪ್ರದಾಯ ಶುರುವಾದದ್ದು ಹದಿನಾರನೇ ಶತಮಾನದ ಅಂತ್ಯದಲ್ಲಿ. ಬೇಸಾಯ, ಹೈನುಗಾರಿಕೆ, ಗಣಿಗಾರಿಕೆ, ಮತ್ತು ನಾವಿಕ ವೃತ್ತಿಯೇ ಮುಖ್ಯವಾಗಿದ್ದ ವೇಲ್ಸ ದೇಶದಲ್ಲಿ, ಅಕ್ಟೋಬರ್ ತಿಂಗಳು ಕಳೆಯುವ ಹೊತ್ತಿಗೆ ಒಂದು ರೀತಿಯ ಬೇಸರದ ಛಾಯೆ ಆವರಿಸುತ್ತಿತ್ತು. ಕಾರಣ ಇಲ್ಲಿ ಆಗ ಚಳಿಗಾಲ ಶುರುವಾಗುತ್ತದೆ. ಮಧ್ಯಾನ್ಹ ಎರಡಕ್ಕೆ ಆವರಿಸುವ ಕತ್ತಲು, ಮತ್ತು ಹವಾಮಾನ ವೈಪರಿತ್ಯ, ಶ್ರಮಜೀವಿಗಳನ್ನು ಏಕತಾನತೆ ಮತ್ತು ಖಿನ್ನತೆಗೆ ನೂಕುತ್ತಿತ್ತು.
Courtesy: Paul Curtis
ಅದೇ ಸಂದರ್ಭದಲ್ಲಿ, ಅಲ್ಲಿಯ ಕ್ರಿಯಾಶೀಲ ಯುವಕನೊಬ್ಬ, ಸುಮ್ಮನೆ ಕೂರಲಾಗದೆ ಮನೆಯ ಮೂಲೆಯಲ್ಲಿ ಬಿದ್ದಿದ್ದ ಪುಟ್ಟ ಮರದ ತುಂಡಿನಲ್ಲಿ, ಕಲಾತ್ಮಕ ಚಮಚೆ/ಸೌಟೊಂದನ್ನು ತಯಾರಿಸಿದ. ಇದು ಬರಿಯ ಚಮಚೆ ಆಗಿರದೆ ಅತ್ಯಂತ ಸೂಕ್ಷ್ಮ ಕುಸುರಿ  ಕೆತ್ತನೆಗಳನ್ನು ಒಳಗೊಂಡ ಸುಂದರ ಕಲಾಕೃತಿಯಂತೆ ತಯಾರಿಸಲ್ಪಟ್ಟಿತ್ತು.

ತಾನು ತಯಾರಿಸಿದ ಈ ಚಮಚೆಯನ್ನು ತನ್ನ ಪ್ರೇಯಸಿಗೆ ಕಾಣಿಕೆಯ ರೂಪದಲ್ಲಿ ನೀಡಿ ಆಕೆ ಅವನ ಮನಸನ್ನು ಬಗೆದಷ್ಟೂ ಸಿಗುವ ಪ್ರೀತಿಯ ಅಗಾಧತೆಯನ್ನು ತಿಳಿಸಿದ. ಆಕೆಯನ್ನು ಮೆಚ್ಚಿಸಲು ರಮಿಸಲು ಮಾಡಿದ ಈ ಪ್ರಯತ್ನ ಯಶಸ್ವಿಯಾಗಿತ್ತು.

ತನಗಾಗಿ ಸಮಯ ಕೊಟ್ಟು ಪ್ರಿಯಕರ ತಯಾರಿಸಿದ ಈ ವಿಶಿಷ್ಟ ವಸ್ತುವನ್ನು ಕಂಡು ಅವನ ಪ್ರೇಯಸಿ ತುಂಬಾ ಖುಶಿಯಾಗಿ, ತನ್ನೆಲ್ಲ ಗೆಳತಿಯರ ಬಳಗಕ್ಕೂ ಇದನ್ನು ಹೆಮ್ಮೆಯಿಂದ ತೋರಿಸಿಕೊಂಡು ಬಂದಳು.

ಈ ಯುವಕ ಸಮಾಜದ ಇತರ ಯುವಕರಿಗೆ/ಪ್ರೇಮಿಗಳಿಗೆ ಮಾದರಿಯಾದ. ಅವನಂತೆ ಇತರರೂ ತಮ್ಮ ಈ ಚಳಿಗಾಲದ ಏಕತಾನತೆ ಕಳೆಯಲು ಈ love spoons ತಯಾರಿಕೆಯಲ್ಲಿ ನಿರತರಾದರು. ಜೊತೆಗೆ ಈ ಕಲಾಕೃತಿಗಳನ್ನು ತಮ್ಮ ಪ್ರೇಯಸಿಯರಿಗೆ ಕೊಡುವ ಹುಮ್ಮಸ್ಸಿನಲ್ಲಿ, ಹಲವು ಅಪರೂಪದ ವಿನ್ಯಾಸಗಳು, ಮಾದರಿಗಳು ಸೇರಿಕೊಂಡವು. ಅಲ್ಲಿನ ಪ್ರಸಿದ್ಧ ಪ್ರೇಮ ಕಥೆಯ ದ್ಯೋತಕದಂತೆ ಈ ಕೆತ್ತನೆಗಳು ಮೂಡಿಬಂದವು.
ಅಲ್ಲಿಂದ ಈ  'ಲವ್ ಸ್ಪೂನ್'  ಎಂಬ  ಕಾಷ್ಠ ಕಲೆ. ವೇಲ್ಸ್ ದೇಶದ ಜನಪದ ವೈಶಿಷ್ಟಗಳಲ್ಲಿ ಒಂದಾಗಿ ಗುರುತಿಸಿಕೊಂಡಿತು.
ಪ್ರೇಯಸಿಗೆ ಕೊಡಲು ಮಾಡಿದ ಈ ಲವ್ ಸ್ಪೂನ್ ಕೆಲ ಸಮಯದ ನಂತರ ಪ್ರೀತಿ ಮತ್ತು ಸಾಮರಸ್ಯ, ಗೌರವ ಆದರ ಇರುವ ಎಲ್ಲ ಬಾಂಧವ್ಯಗಳಲ್ಲೂ. ಶುಭಕಾರ್ಯಗಳಲ್ಲಿ, ಸವಿಗಳಿಗೆಗಳಲ್ಲಿ ಪರಸ್ಪರ ಉಡುಗೊರೆಯಾಗಿ ನೀಡುವ ಕ್ರಮ ಶುರುವಾಯಿತು.

ಪ್ರತಿ ಸೌಟಿನಲ್ಲಿ ಇರುವ ಕೆತ್ತನೆಗೆ ಅದರದೇ ಆದ ಅರ್ಥ ಮತ್ತು ಪ್ರಾಮುಖ್ಯತೆ ಇದೆ.
ಉದಾಹರಣೆಗೆ;
• ಹೃದಯ - ಪ್ರೀತಿಯ ದ್ಯೋತಕ
• ಎರಡು ಬಟ್ಟಲ ವಿನ್ಯಾಸ - ಸಾಂಗತ್ಯ ಮತ್ತು ನಂಬಿಕೆ
• ಸರಪಳಿ ವಿನ್ಯಾಸ - ಪ್ರಾಮಾಣಿಕತೆ ಮತ್ತು ನಂಬಿಕೆ
• ವಜ್ರಾಕೃತಿ - ಸಮೃದ್ಧಿ ಮತ್ತು ಸುಗಮ ಜೀವನದ ಹಾರೈಕೆ
• ಬೀಗ ಮತ್ತು ಬೀಗದ ಕೈ - ಮನೆಯ ಸ್ವಾಸ್ಥ್ಯ, ಶಾಂತಿ ಮತ್ತು ಸಹಬಾಳ್ವೆ.
• ಚಕ್ರ - ಕೆಲಸ ಕಾರ್ಯದಲ್ಲಿ ಶ್ರದ್ಧೆ, ಉನ್ನತಿ

ಹೀಗೆ ಅಸಂಖ್ಯ ಸಾಂಕೇತಿಕ ಅರ್ಥಗಳನ್ನು ಬಿಂಬಿಸುವ ಈ ಕಲಾತ್ಮಕ ಚಮಚೆಗಳ ಜೊತೆಗೆ ವೇಲ್ಸ್ ದೇಶದ ಹಿರಿಮೆ ಬಿಂಬಿಸುವ ರಾಷ್ಟ್ರೀಯ ಚಿಹ್ನೆಗಳನ್ನು ಕೂಡ ಸೇರಿಸಲಾಯಿತು.
ನೀರಸ ಚಳಿಗಾಲ ಕಳೆದು, ವಸಂತಾಗಮನವನ್ನು ಸಾರುವ ಡಾಫುಡಿಲ್ಸ್ ಹೂವು. ಡ್ರಾಗನ್, ಕೆಲ್ಟಿಕ್ ಶೈಲಿಯ ಕೆತ್ತನೆಗಳು ಈ ಕಲೆಯನ್ನು ವೇಲ್ಸ್ ದೇಶದ ಕಲಾಭಿವ್ಯಕ್ತಿಯ ಪ್ರತೀಕವಾಗಿಸಿವೆ.

ಸುಮಾರು ಐದು ಶತಮಾನದ ಇತಿಹಾಸ ಇರುವ ಈ ವಿಶಿಷ್ಟ ಕಲೆಯನ್ನು ಇಲ್ಲಿನ ಆಸಕ್ತ ಕಲಾವಿದರು ಅಷ್ಟೇ ಅಸ್ಥೆಯಿಂದ ತಮ್ಮ ಹಿರಿಯರಿಂದ ಕಲಿತು ಮುಂದುವರಿಸಿಕೊಂಡು ಬಂದಿದ್ದಾರೆ.

ನಾನು ಒಂದು ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಲು ವೇಲ್ಸ್ ದೇಶದ ಒಂದು ಹಳ್ಳಿಗೆ ಭೇಟಿ ಕೊಟ್ಟಾಗ ಅಲ್ಲಿ ಈ ಕಲೆಯ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇದ್ದವು. ಅಲ್ಲಿದ್ದ 70ರ ಹರೆಯದ ಲವ್ ಸ್ಪೂನ್ ತಯಾರಿಸುವ ಕಲಾವಿದನೊಬ್ಬ ನನಗೆ ಈ ಕಲೆ ಹುಟ್ಟಿ ಬೆಳೆದು ಬಂದ ಕಥೆಯನ್ನು ಹೇಳಿದ. ಕನ್ನಡದಲ್ಲಿ ಸಾಮಾನ್ಯವಾಗಿ ಬಳಸುವ ಗಾದೆ ಮಾತೊಂದು ಆ ನಿಮಿಷದಲ್ಲಿ ನೆನಪಾಯಿತು:

ಕೆಲಸವಿಲ್ಲದ ಬಡಗಿ... ತನ್ನ ಪ್ರಿಯತಮೆಯ ಮುಖದಲ್ಲೊಂದು ನಗು ನೋಡಲು ದೇಶವೇ ಹೆಮ್ಮೆ ಪಡುವ ಅನನ್ಯ ಕಲೆಯೊಂದನ್ನು ತನಗೇ ಗೊತ್ತಿಲ್ಲದೆ ಶುರುಮಾಡಿದ.  ಅದು ಇಂದು ಅದೆಷ್ಟೋ ಜನರಿಗೆ ಕೆಲಸ ಕೊಟ್ಟು ಕಾಪಾಡಿದೆ.

ಅಮಿತಾ ರವಿಕಿರಣ್, ಬೆಲ್ಫಾಸ್ಟ್,ಯುಕೆ

ಚಿತ್ರ ಕೃಪೆ: ಪಾಲ್ ಕರ್ಟಿಸ್ ಅವರ ಜಾಲ ತಾಣ. (ಅವರ ವೈಯಕ್ತಿಕ ಅನುಮತಿಯೊಂದಿಗೆ.)
*ಕಬೀರ್ ದಾಸನ ಒಂದು ದೋಹಾ ಹೀಗಿದೆ:
पोथी पढ़ पढ़ जग मुआ, पंडित भया न कोय
ढाई अक्षर प्रेम का, पढ़े सो पंडित होय
(ಪುಸ್ತಕ ಓದಿ ಯಾರೂ ಪಂಡಿತರಾಗಿಲ್ಲ. ಪ್ರೇಮದ ಎರಡೂವರೆ ಅಕ್ಷರಗಳನ್ನು ಕಲಿತವನೇ ಪಂಡಿತ.)

ವಸುಧೇಂದ್ರ: ಕತೆಗಳಿಂದ ಕಾದಂಬರಿಗೆ

ಕತೆ

ನಾನು ಹತ್ತನೇ ಕ್ಲಾಸ್ ತನಕ ಕನ್ನಡ ಮಾಧ್ಯಮದಲ್ಲಿ ಓದಿದೆ. ನಮ್ಮೂರಲ್ಲಿ ಇಂಗ್ಲಿಷ್ ಮೀಡಿಯಂ ಕಾನ್ವೆಂಟ್ ಇತ್ತು, ಆದರೆ ಅಲ್ಲಿ ತಿಂಗಳಿಗೆ ಎಂಟು ರೂಪಾಯಿ ಫೀಸ್ ಇತ್ತು, ಅಷ್ಟು ಕೊಡಕ್ಕೆ ಆಗಲ್ಲ ಸರಕಾರಿ ಶಾಲೆಗೆ ಹೋಗು ಅಂತ ಕಳಿಸಿಬಿಟ್ರು. ಮಗು ಮುಂದೆ ಏನಾಗಬೇಕು ಏನು ಮಾಡಬೇಕು ಆ ಯೋಚನೆಗಳೇ ಇಲ್ಲ, ಸುಮ್ಮನೇ ಓದಬೇಕು, ಅಷ್ಟೇ.

ಮನೆಯಲ್ಲಿ ಸಾಹಿತ್ಯವನ್ನು ಓದುವಂತಹ ವಾತಾವರಣ, ನಮ್ಮ ತಾಯಿ ತುಂಬಾ ಓದೋರು, ಅವರು ಓದ್ತಾ ಇದ್ರೆ ನನಗೆ ಓದೋಕ್ಕೆ ಬಂತು. ನಮ್ಮ ಮನೆಯಲ್ಲಿ ದಿನಪತ್ರಿಕೆ ಕೂಡ ಸಾಧ್ಯವಿರಲಿಲ್ಲ, ಒಂಥರ ಬಡತನ. ಗ್ರಂಥಾಲಯದಿಂದ ತಂದು ಓದೋದು ಅಷ್ಟೇ.

ನಾನು ಲೇಖಕನಾಗುತ್ತೇನೆ ಎಂದು ಅಂದುಕೊಂಡಿರಲೇ ಇಲ್ಲ, ಸಾಫ್ಟ್ವೇರ್ನಲ್ಲಿ ಸೇರಿಕೊಂಡು ಮೂರು ವರ್ಷ ಆಗಿತ್ತು, ಏನು ಮಾಡ್ತಿಲ್ಲ, ಬರೀ ರೊಟೀನ್ ಮಾಡ್ತಾ ಇದ್ದೇನೆ ಅಂತ ಕಾಡೋಕೆ ಶುರುವಾಯಿತು. ಇದೇನು, ಬೆಳಿಗ್ಗೆ ಹೋಗೋದು, ರಾತ್ರಿ ಬರೋದು, ಹಿಂಗೆ ಆಗ್ತಿದೆಯಲ್ಲ, ನಂದೊಂದು ಐಡೆಂಟಿಟಿ ಬೇಕಲ್ಲ ಅಂತ ಹುಡುಕಾಟ ಶುರುವಾಯಿತು. ಐಡೆಂಟಿಟಿ ಕ್ರೈಸಿಸ್ ಅದು. ನನಗೆ ಏನ್ ಮಾಡಬಹುದು ನಾನು ಅಂದುಕೊಂಡಾಗ, ಬರೆಯಲು ಶುರು ಮಾಡಬೇಕು ಅನಿಸಿತು,

ಚಿಕ್ಕಂದಿನಲ್ಲಿ ಎಂಟೋ ಒಂಬತ್ತನೇ ಕ್ಲಾಸಲ್ಲಿ ಅಸೈನ್ಮೆಂಟ್-ಗೆ ಒಂದು ಕಥೆ ಬರೆದಿದ್ದೆ. ತುಂಬ ಚೆನ್ನಾಗಿದೆ ಎಂದು ಗುರುಗಳು ಹೇಳಿದ್ರು. ಅವಾಗ ಅದು ತರಂಗದಲ್ಲಿ ಪ್ರಕಟವಾಗಿತ್ತು. ಅದು ನನಗೆ ತಲೆಯಲ್ಲಿ ಇತ್ತು. ಕಥೆ ಬರೆಯೋಕೆ ಬರುತ್ತೆ, ಟ್ರೈ ಮಾಡೋಣ ಅಂತ ಮತ್ತೆ ಬರೆಯಲು ಶುರುಮಾಡಿದೆ.

ನನಗೆ ಯಾವ ಸಾಹಿತಿಗಳೂ ಗೊತ್ತಿರಲಿಲ್ಲ, ತರಂಗದಲ್ಲಿ ಅವಾಗ ಲೇಖಕರ ಅಡ್ರೆಸ್ ಹಾಕ್ತಾ ಇದ್ರು. ನನಗೆ ಯಾರು ಇಷ್ಟ ಆಗ್ತಾರೋ ಅವರಿಗೆ ಒಂದು ಲೆಟರ್ ಹಾಕಿ ನಾನು ಹಿಂಗೆ ಕಥೆ ಬರೆದಿದ್ದೀನಿ, ನೀವು ಓದ್ತೀರಾ, ಅಂದ್ರೆ, ಕಳಿಸಿಕೊಡಿ ಅಂದ್ರು, ಕಳಿಸಿಕೊಟ್ಟ ಮೇಲೆ, ಚೆನ್ನಾಗಿ ಬರೀತೀಯಾ, ಮುಂದುವರೆಸು ಅಂದರು. ಆ ಒಂದು ಭರವಸೆ ಸಿಕ್ಕ ತಕ್ಷಣ ನಾನು ಸಿಕ್ಕಾಪಟ್ಟೆ ಬರೆಯುತ್ತ ಹೋದೆ.

ಐಟಿನಲ್ಲಿ ೧೨ರಿಂದ ೧೪ ಗಂಟೆ ಕೆಲಸ ಮಾಡ್ತಿದ್ದರಿಂದ ಬರೆಯುವುದು ಕಷ್ಟ ಇತ್ತು. ನನಗೆ ಬರೆಯುವ ಸಮಯ ಸಿಕ್ಕಿದ್ದು ಇಂಗ್ಲೆಂಡ್ ನಲ್ಲಿ ಪೋಸ್ಟ್ ಮಾಡಿದಾಗ. ಇಂಗ್ಲಂಡಿನಲ್ಲಿ ಸರಿಯಾಗಿ ಐದುವರೆಗೆ ಕೆಲಸ ಮುಗಿಸಿಬಿಡ್ತಾರೆ. ಬೆಳಿಗ್ಗೆ ಒಂಬತ್ತರಿಂದ ಸಂಜೆ ಐದು ಗಂಟೆ ಆದ್ರೆ ಮುಗಿದು ಹೋಗ್ಬಿಡ್ತು. ನನಗೆ ಎಷ್ಟು ಫ್ರೀ ಟೈಮ್ ಇರ್ತಿತ್ತು ಅಂತಂದ್ರೆ ನನ್ನ ಪ್ಯಾಶನ್ ಕಾಡೋಕೆ ಶುರುವಾಯಿತು. ಅವಾಗ ಅದೇ ಇಂಟರ್ನೆಟ್ ಬಂದಿತ್ತು ಇಲ್ಲಿಂದ ನಾನು ಬರೆದು ಕಳಿಸಿಕೊಡ್ತಾ ಇದ್ದೆ, ಆ ತರ ಶುರುವಾಯಿತು. ದೆನ್ ಐ ಬಿಕೇಮ್ ವೆರಿ ಸೀರಿಯಸ್. ನಾನು ಇಂಗ್ಲಂಡಿನಲ್ಲಿದ್ದ ಮೂರು ನಾಲ್ಕು ವರ್ಷ ತುಂಬಾ ಬರೆದುಬಿಟ್ಟೆ. ಸುಮಾರು ಒಂದು ಮೂರು ಪುಸ್ತಕ ಬರೆದುಬಿಟ್ಟೆ. ಭಾಷಾಂತರ ಮಾಡಿದೆ. ಕಾನ್ಫಿಡೆನ್ಸ್ ಬಂತು.

ಪ್ರಕಟ ಮಾಡಕ್ಕೆ ಯಾರು ಮುಂದೆ ಬರಲಿಲ್ವಲ್ಲ! ಇಂಗ್ಲಂಡಿಂದ ಹೋಗಿದ್ದೀನಿ, ಬೇಕಾದಷ್ಟು ಹಣ ಗಳಿಸಿದ್ದೆ, ಹಣಕ್ಕೆ ಸಮಸ್ಯೆನೇ ಇರಲಿಲ್ಲ. ನಾನೇ ಪ್ರಕಟಣೆ ಶುರು ಮಾಡ್ಕೊಂಡೆ. ಪ್ರಕಾಶನ ಗೊತ್ತಿರಲಿಲ್ಲ. ಪ್ರಕಾಶನ ಶುರು ಮಾಡ್ಕೊಂಡೆ. ಭಾರತಕ್ಕೆ ಹೋದ ಮೇಲೆ ತುಂಬಾ ಓದುಗರು ಇದ್ದಾರೆ ನನಗೆ ಅಂತ ಗೊತ್ತಾಯ್ತು. ನಾನು ಪ್ರಕಟ ಮಾಡಿದ ಪುಸ್ತಕಗಳು ಆರು ತಿಂಗಳಲ್ಲಿ ಮುಗಿದು ಹೋಗಿಬಿಡುತ್ತಿತ್ತು. ಅದು ತುಂಬಾ ಚೆನ್ನಾಗಿ ಕೆಲಸ ಮಾಡಿತು. ಆಮೇಲೆ ಬೇರೆಯವರದೆಲ್ಲ ಪ್ರಕಾಶನ ಮಾಡೋಕೆ ಶುರು ಮಾಡಿದೆ. ಪ್ರಕಾಶನದಿಂದ ಬದುಕಬಲ್ಲೆ ಅಂತ ಗೊತ್ತಾಯ್ತು. ಬುಕ್ ಅರ್ನಿಂಗ್ಸ್ ನನಗೆ ಬೇಕಾದಷ್ಟು ಆಗುತ್ತೆ.

ಈ ಕಾರ್ಪೊರೇಟ್ ಮೈಂಡ್ ಸೆಟ್ ಮತ್ತು ಈ ಕಥೆ ಬರೆಯುವ ಮೈಂಡ್ ಸೆಟ್ ಎರಡು ಬೇರೆ ವಿರುದ್ಧಗಳು. ಕಾರ್ಪೊರೇಟ್-ನಲ್ಲಿ ಹಣನೇ ಮುಖ್ಯ. ಸಾಹಿತ್ಯದಲ್ಲಿ ಹಣಕ್ಕೆ ಅಷ್ಟು ಬೆಲೆನೇ ಇರಲ್ಲ ಸಾಹಿತ್ಯದಲ್ಲಿ ನೈತಿಕತೆಯೇ ಬೇರೆ. ಎರಡೂ ಪ್ರಪಂಚಕ್ಕೆ ಕ್ಲಾಶ್ ಆಗ್ತಾ ಇದೆ ತುಂಬಾ ಅನಿಸ್ತು. ಕಳೆದ ೧೦ ವರ್ಷ ಪೂರ್ತಿ ಬರವಣಿಗೆ, ಓದು ಮತ್ತು ತಿರುಗಾಟ. ಬೇಕಾದಷ್ಟು ತಿರುಗುತ್ತೀನಿ.

ಕಾದಂಬರಿ

ಹಿಂದೊಮ್ಮೆ ಹರಿಚಿತ್ತ ಸತ್ಯ ಅಂತ ಕಾದಂಬರಿಯನ್ನು ಬರೆದಿದ್ದೆ. ಅದು ಒಂದು ೧೬೦ ಪುಟದಷ್ಟು ಚಿಕ್ಕ ಕಾದಂಬರಿ. ವಿವೇಕ್ ಶಾನುಭಾಗ ಆಗ ದೇಶಕಾಲ ಅಂತ ಮ್ಯಾಗಸಿನ್ ತರ್ತಿದ್ದರು. ಒಂದು ಸ್ಪೆಷಲ್ ಎಡಿಷನ್-ಗೆ ನೀನು ಒಂದು ಕಾದಂಬರಿ ಬರ್ಕೊಡು ಅಂದರು. ನಾನು ಅಲ್ಲಿಯತನಕ ಕಾದಂಬರಿಯನ್ನು ಬರೆದಿರಲಿಲ್ಲ. ಆಗ ನಾನು ಕ್ಲಿನಿಕಲ್ ಡಿಪ್ರೆಶನ್-ನಲ್ಲಿದ್ದೆ. ಆ ಡಿಪ್ರೆಶನ್-ನಿಂದ ಹೊರಗೆ ಬರೋದಕ್ಕೆ ನೀವು ಒಂದು ಕಾದಂಬರಿ ಬರಿ, ಡಿಪ್ರೆಶನ್-ನಿಂದ ಹೊರಬರಲು ಸಹಾಯ ಮಾಡಬಹುದು ಅಂತ ಒಂಥರ ಬಲವಂತ ಮಾಡಿದರು. ಡಿಪ್ರೆಶನ್-ನಲ್ಲಿ ಏನು ಮಾಡೋಕೂ ಇಷ್ಟ ಆಗಲ್ಲ. ನಮ್ಮ ಅಕ್ಕ ಬಿಜಾಪುರದಲ್ಲಿ (ಈಗ ವಿಜಯಪುರ) ಇದ್ರು. ಬಿಜಾಪುರಕ್ಕೆ ಹೋಗಿ ಕೂತ್ಕೊಂಡು ಬರೆದೆ. ಜನಕ್ಕೆ ಇಷ್ಟ ಆಯಿತು.

ಅದು ನಮ್ಮ ತಂದೆ ತಾಯಿಯ ಕಥೆ. ಅವರದು ವಿಚಿತ್ರ ಕಥೆ.

ನನ್ನ ತಾಯಿ ಬಳ್ಳಾರಿಯಲ್ಲಿ ೧೦ನೇ ತರಗತಿಯವರೆಗೆ ಓದಿದ್ರು. ನಮ್ಮಪ್ಪ ಇದ್ದಿದ್ದು ಸೊಂಡೂರಲ್ಲಿ. ಸೊಂಡೂರು ಅಂದ್ರೆ ಹಳ್ಳಿ, ಬಳ್ಳಾರಿ ಪಟ್ಟಣ. ನನ್ನ ತಾಯಿಗೆ ಸೊಂಡೂರಿನಲ್ಲಿ ಜೀವನ ಮಾಡಲು ಇಷ್ಟ ಇರಲಿಲ್ಲ. ಅಷ್ಟೇ ಅಲ್ಲ, ನಮ್ಮ ತಂದೆಗೆ ಚಿಕ್ಕಂದಿನಿಂದ ತಲೆ ತುಂಬಾ ಬಿಳಿ ಕೂದಲು. ನಮ್ಮಮ್ಮ ನಮ್ಮಪ್ಪನನ್ನು ರಿಜೆಕ್ಟ್ ಮಾಡ್ಬಿಟ್ರು.

ನನ್ನ ಅಪ್ಪ ಬೇರೆ ಮದುವೆ ಮಾಡ್ಕೊಂಡ್ರು. ಅವರಿಗೆ ನಾಲ್ಕು ಮಕ್ಕಳಾದವು. ಒಂದ್ಸಲ ಇಡೀ ಕುಟುಂಬ ಇನ್ನಷ್ಟು ಕುಟುಂಬಗಳ ಜೊತೆ ಸೇರಿ ಹಂಪಿಗೆ ಹೋಗ್ತಾರೆ. ಅಲ್ಲಿ ತೆಪ್ಪದಲ್ಲಿ ಕೂತು ಹೋಗಬೇಕು. ಆಗ ಗಂಡಸರು ಏನು ಮಾಡಿದ್ರು ಅಂದ್ರೆ, ಹೆಂಗಸರು ಮಕ್ಕಳು ಮೊದಲು ಹೋಗ್ಬಿಡ್ಲಿ, ಆಮೇಲೆ ಗಂಡಸರು ಹೋಗೋಣ, ಅಂತ ಎಲ್ಲಾ ಹೆಂಗಸರು ಮಕ್ಕಳನ್ನ ಕಳಿಸಿಬಿಟ್ಟಿದ್ದಾರೆ.

ತೆಪ್ಪದಲ್ಲಿ ಹೋಗಬೇಕಾದರೆ, ತೆಪ್ಪದಲ್ಲಿದ್ದ ಎಲ್ಲ ಹೆಂಗಸರೂ ಮಕ್ಕಳೂ ಮುಳುಗಿ ಹೋಗಿದ್ದಾರೆ. ಅದರಲ್ಲಿ ಮೂರು ಮಕ್ಕಳು ಮತ್ತು ಹೆಂಡತಿ ಇದ್ದರು. ಮುಳುಗಿದವರೆಲ್ಲರೂ ಹೋಗಿಬಿಟ್ರು. ಅಲ್ಲಿದ್ದ ಅಷ್ಟೂ ಕುಟುಂಬಗಳು ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ. ಸುಮಾರು ೨೫-೩೦ ಜನ ಹೋಗ್ಬಿಟ್ರು. ಇದು ನಡೆದದ್ದು ೧೯೬೫ರಲ್ಲಿ.

ಅಪ್ಪನ ಜೊತೆ ಇದ್ದ ಒಬ್ಬಳು ಮಗಳು ಮಾತ್ರ ಉಳಿದುಕೊಂಡಿದ್ದು. ಅದೇನೋ, ಆ ತನಕ ನಮ್ಮ ತಾಯಿ ಹಂಗೆ ಉಳಿದುಕೊಂಡಿದ್ರು, ಏನೋ ಕಾರಣಕ್ಕಾಗಿ ಮದುವೆನೇ ಆಗಿರಲಿಲ್ಲ. ಇಲ್ಲದಿದ್ರೆ ನಾನು ಹುಟ್ಟುತ್ತಾನೆ ಇರಲಿಲ್ಲ. ಎರಡನೇ ಮದುವೆ ಆದ್ಮೇಲೆ ಆಮೇಲೆ ನಾವೆಲ್ಲ ಹುಟ್ಟಿದ್ದು. ಇಬ್ಬರು ೨೫ ವರ್ಷಕ್ಕಿಂತ ಹೆಚ್ಚು ತುಂಬಾ ಚೆನ್ನಾಗಿ ಸಂಸಾರ ಮಾಡಿದ್ರು.

ನನಗೆ ಅದು ಒಂತರ ವಿಚಿತ್ರ ಕಥೆ ಅನ್ಸೋದು. ಅದನ್ನೆಲ್ಲ ಸೇರಿಸಿ ಒಂದಿಷ್ಟು ಫಿಕ್ಷನೈಸ್ ಮಾಡಿ ಆ ಕಾಲಘಟ್ಟ ತಗೊಂಡು ಬಂದು ಬರೆದೆ. ನಾನು ಆ ಕಾದಂಬರಿಯನ್ನು ಬರೆದಾಗ ನಮ್ಮ ತಂದೆ ಇರಲಿಲ್ಲ. ನಮ್ಮ ಅಕ್ಕಂದರಿಗೆಲ್ಲ ಗೊತ್ತು. ನಮ್ಮ ಇಡೀ ಕುಟುಂಬಕ್ಕೆ ಗೊತ್ತು. ಆ ತೆಪ್ಪದ ಅಫಘಾಥದಲ್ಲಿ ಇನ್ನೂ ಅಷ್ಟೊಂದು ಕುಟುಂಬಗಳೂ ಇದ್ದವು. ಆ ಕಾದಂಬರಿಯನ್ನು ಓದಿ ಆ ಅಪಘಾತದಲ್ಲಿ ಸಾಕ್ಷಿಯಾಗಿದ್ದವರು, ಅದರೊಳಗೆ ನಮ್ಮಮ್ಮನೂ ತೀರ್ಕೊಂಡ್ರು, ಅಂತೆಲ್ಲ ಅವರ ಕತೆಗಳನ್ನು ಹೇಳಿದರು. ಎಷ್ಟೊಂದು ಕುಟುಂಬಗಳಿಗೆ ನಾನು ಆ ಕಾದಂಬರಿಯಿಂದಾಗಿ ಹತ್ತಿರನಾದೆ. ಅದು ಒಂದು ಅನುಭವ!