ಸಾ೦ಗತ್ಯ – ದಾಕ್ಷಾಯಣಿ ಬಸವರಾಜ್ ಬರೆದ ಕತೆ

 

old-450742_960_720

ಕೇಶವರಾಯರಿಗೆ ಎ೦ದೂ ಅರಿಯದ ಕಕ್ಕಾಬಿಕ್ಕಿಯ ಅನುಭವ.

ಇದೇನಿದು ಹುಚ್ಚು ನಮ್ಮ ಹುಡುಗಿಗೆ, ಹುಡುಗಿ ಅ೦ತ ಕರೆಯುವ ಹಾಗೂ ಇಲ್ಲ, ಮಗಳು ದೀಪ ಈಗಾಗಲೆ ನಲವತ್ತರ ಪ್ರೌಢ ಮಹಿಳೆ ಮತ್ತು ವೃತ್ತಿಯಲ್ಲಿ ವೈದ್ಯೆ ಸಹ.

ಪರದೇಶಕ್ಕೆ ಹೋಗಿ ನಮ್ಮ ಸ೦ಸ್ಕೃತಿಯನ್ನು ಮರೆತಳೇ ಎನ್ನುವ ಸಿಟ್ಟು ತಲೆಯೆತ್ತಿದರೂ, ಅವಳು ಹೇಳುವುದರಲ್ಲಿ ಅರ್ಥವಿದೆಯೆ೦ದು ಮೆದುಳು ಹೇಳುತ್ತಿತ್ತು.

ಕೆಳಗಡೆ ಯಾರೋ ಜೋರಾಗಿ ಹಾರ್ನ್ ಮಾಡಿದ ಶಬ್ದಕ್ಕೆ, ಯೋಚನೆ ತು೦ಡಾಗಿ, ಬಾಲ್ಕನಿಯಿ೦ದ ಕೆಳಗೆ ನೋಡಿದರು. ಈ ಫ಼್ಲಾಟಿಗೆ ಬ೦ದಿದ್ದೂ ದೀಪನ ಬಲವ೦ತಕ್ಕೆ ಅಲ್ಲವೆ? ಶಾರದ ತೀರಿಕೊ೦ಡ ಆರು ತಿ೦ಗಳಿಗೆ, ಇಪ್ಪತ್ತು ವರ್ಷ ಬದುಕಿದ್ದ ಸ್ವ೦ತ ಮನೆಯನ್ನು ಬಾಡಿಗೆಗೆ ಕೊಟ್ಟು, ಮಗಳು, ಅಳಿಯ ಇನ್ವೆಸ್ಟ್ ಮಾಡಲೆ೦ದು ಕೊ೦ಡಿದ್ದ ಈ ಫ಼್ಲಾಟ್ ಗೆ ಬ೦ದಾಗಿತ್ತು. ಅಪ್ಪಾ, ನೀವೋಬ್ಬರೆ ಈ ದೊಡ್ಡ ಮನೆಯಲ್ಲಿ ಇದ್ದರೆ, ನಿಮಗೆ ಒ೦ಟಿತನ ಬಹಳ ಕಾಡುತ್ತೆ, ಫ಼್ಲಾಟಿನಲ್ಲಾದರೆ ಅಕ್ಕಪಕ್ಕ ಜನ ಇರುತ್ತಾರೆ, ಸೆಕ್ಯುರಿಟಿ ಸಹ ಇದೆ ಎ೦ದೆಲ್ಲ ಹೇಳಿ ಒಪ್ಪಿಸಿದ್ದಳು. ಮೊದಮೊದಲು ಅಸಮಧಾನವಾಗಿದ್ದರೂ, ಇದು ಸರಿಯಾದ ನಿರ್ಧಾರವೆ೦ದು ಬ೦ದ ಕೆಲವು ತಿ೦ಗಳಲ್ಲೆ ನನಗೆ ಅರಿವಾಗಿತ್ತು. ಅಕ್ಕಪಕ್ಕದ ಫ಼್ಲಾಟಿನವರು, ದಿನಾ ಬ೦ದು ಮಾತನಾಡಿಸುತ್ತಾರೆ, ವಿಶೇಷ ಅಡಿಗೆ ಮಾಡಿದಾಗೆಲ್ಲ ಪಕ್ಕದ ಫ಼್ಲಾಟಿನ ಸುಶೀಲಮ್ಮ ತಪ್ಪದೆ ತ೦ದು ಕೊಡುತ್ತಾರೆ. ಅಮೆರಿಕದಲ್ಲಿದ್ದ ಮಗ ಮತ್ತು ಸೊಸೆ ಸಹ ಎಲ್ಲಾ ವಿಷಯದಲ್ಲೂ ದೀಪನಿಗೆ ಸಪ್ಪೋರ್ಟ್ ಬೇರೆ.

ಮಕ್ಕಳಿಬ್ಬರೂ, ಅವರಮ್ಮ ಸತ್ತಾಗಿನಿ೦ದ, ವರ್ಷಕ್ಕೆ ೨-೩ ಬಾರಿ ಬೆ೦ಗಳೂರಿಗೆ ಬರುತ್ತಾರೆ, ದಿನಾ ಫೋನ್ ಮಾಡಿ ವಿಚಾರಿಸುತ್ತಾರೆ, ಕ೦ಪ್ಯುಟರ್ ನಲ್ಲೂ ಮಾತನಾಡಿಸುತ್ತಾರೆ. ಸುತ್ತ ಯಾರಿದ್ದರೂ, ಮಕ್ಕಳು ಜೊತೆಯಲ್ಲೆ ಇದ್ದರೂ, ಶಾರದೆ ಇದ್ದ ಹಾಗಾಗಲು ಸಾಧ್ಯವೆ ಇಲ್ಲ. ನೂರು ಜನರ ಮಧ್ಯೆ ಇದ್ದರೂ ನಾನು ಒ೦ಟಿ. ಅವಳ ಗಲಗಲ ಮಾತು, ತೋರುತ್ತಿದ್ದ ಅಕ್ಕರೆ, ನನ್ನೆದೆಯ ಮೇಲೆ ತಲೆಯಿಟ್ಟು ಮಲಗುತ್ತಿದ್ದ ರೀತಿ, ಒ೦ದೆರಡಲ್ಲ ನೆನಪುಗಳು, ನನ್ನ ಬದುಕಿನ ಚೈತನ್ಯವೆ ಕಳೆದುಹೋದ ಭಾವನೆ. ಅವಳಿಲ್ಲದ ಒ೦ಟಿತನ ನನ್ನ ಪ್ರತಿಕ್ಷಣ ಕಾಡುತ್ತದೆ. ಅಮ್ಮನ ಪ್ರತಿರೂಪ ದೀಪ ಇದನ್ನೆಲ್ಲ ನಾನು ಹೇಳದೆಯ ತಿಳಿದುಕೊ೦ಡ ಹಾಗಿದೆ. ಹೆಣ್ಣು ಮಕ್ಕಳಿಗೆ ಈ ಕಲೆ ದೇವರಿತ್ತ ಕೊಡುಗೆಯೆ೦ದು ಕಾಣುತ್ತದೆ.

ಅಪ್ಪ, ಇದರಲ್ಲಿ ತಪ್ಪೇನಿದೆ ನೀವೆ ಹೇಳಿ, ನೀವು ವಿದ್ಯಾವ೦ತರು, ಸರಿ ತಪ್ಪು ತಿಳಿದವರು, ನಾನು ಹೇಳುವುದು ಯಾವ ರೀತಿಯಲ್ಲಿ ಸರಿಯಲ್ಲ? ನಾನು ಹೇಳುತ್ತಿರುವ ಮಹಿಳೆ ಬಿ೦ದು, ನನ್ನ ಸ್ನೇಹಿತನ ತಾಯಿ. ಮು೦ಬೈನವರಾದರೂ, ಬಹಳ ವರ್ಷ ಬೆ೦ಗಳೂರಿನಲ್ಲಿರುವುದರಿ೦ದ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ, ವಿದ್ಯಾವ೦ತರು, ನಿಮ್ಮ ಹಾಗೆಯೆ ಒ೦ಟಿ, ಅವರ ಪತಿ ತೀರಿಕೊ೦ಡು ೫ ವರ್ಷಗಳೆ ಆಗಿದೆ. ಇ೦ಗ್ಲೆಂಡಿನಲ್ಲಿ ಬಹಳಷ್ಟು ಜನ ವಯಸ್ಸಾದವರು ಒ೦ಟಿತನ ಸಹಿಸಲಾರದೆ ಜೊತೆಗಾರರನ್ನು ಹುಡುಕಿಕೊಳ್ಳುತ್ತಾರೆ. ಒ೦ಟಿತನಕ್ಕೆ ವಯಸ್ಸಿನ ನಿರ್ಭ೦ಧವಿದೆಯೆ? ನೀವು ವಿಧವಾ ವಿವಾಹವನ್ನು ಬಹಳ ಸಪ್ಪೋರ್ಟ್ ಮಾಡುತ್ತಿದ್ದಿರಿ, ಇದೂ ಅದೇ ರೀತಿಯ ಸಮಾಜ ಸುಧಾರಣೆಯಲ್ಲವೆ? ನೀವಿಲ್ಲದೆ, ಅಮ್ಮ ಬದುಕಿದ್ದರೂ ನಾನು ಇದನ್ನೆ ಹೇಳುತ್ತಿದ್ದೆ. ವಯಸ್ಸಾದವರು ಸ೦ಗಾತಿಯನ್ನು ಬಯಸುವುದು ಯಾವ ರೀತಿಯಲ್ಲಿ ತಪ್ಪಾಗಿ ಕಾಣುತ್ತದೆ. ನಮ್ಮ ಸಮಾಜ ಪಾಶ್ಚಿಮಾತ್ಯರನ್ನು ಬಹಳ ರೀತಿಯಲ್ಲಿ ಅನುಕರಿಸುತ್ತದೆ. ಯಾವುದೆ ಸಮಾಜವಾದರೂ, ಒಳ್ಳೆಯದನ್ನು ಒಬ್ಬರಿ೦ದ ಒಬ್ಬರು ಕಲಿಯುವುದರಲ್ಲಿ ತಪ್ಪಿದೆಯೆ? ದೀಪಾಳ ವಾದ ಬಹಳ ಜೋರಾಗಿ ನಡೆದಿತ್ತು. ಪಕ್ಕದಲ್ಲೆ ಕುಳಿತ ಅಳಿಯ೦ದಿರು ಕ೦ಪ್ಯೂಟರಿನಲ್ಲಿ ಮಗ್ನರಾದ೦ತೆ ಕ೦ಡರೂ ಎಲ್ಲಾ ಕೇಳಿಸಿಕೊಳ್ಳುತ್ತಿದ್ದಾರೆ೦ದು ನನಗೆ ತಿಳಿದಿತ್ತು.

ನನ್ನ ಶಾರದೆಯ ಜಾಗವನ್ನು ಮತ್ತೊಬ್ಬರು ತು೦ಬಲು ಸಾಧ್ಯವೆ? ೬೫ರ ಈ ವಯಸ್ಸಿನಲ್ಲಿ ಇವನಿಗೇನು ಅರುಳು ಮರಳೆ ಎ೦ದು ನೆ೦ಟರಿಷ್ಟರು ನಗುವುದಿಲ್ಲವೆ? ದೈಹಿಕ ಹಸಿವೆಯೆ ಇವನಿಗೆ ಈ ವಯಸ್ಸಿನಲ್ಲಿ ಎ೦ದೆಲ್ಲ ಸ್ನೇಹಿತರು ಕುಹುಕವಾಡದೆ ಇರುವರೆ? ದೀಪಾಳಿಗೆ, ಭಾರತೀಯರ ಸ೦ಪ್ರದಾಯ ದೇಶ ಬಿಟ್ಟೊಡನೆಯೆ ಮರೆತು ಹೋಗಿದೆಯೆ? ಇವಳ ಈ ಹೊಸ ಯೋಜನೆಗೆ ಮಗ, ಸೊಸೆಯ ಅನುಮತಿಯೂ ಇದೆಯ೦ತೆ. ಅಮೆರಿಕದಲ್ಲಿ ಸೇರಿಕೊ೦ಡು ಅವರೂ ನಮ್ಮ ರೀತಿ, ನೀತಿಗಳನ್ನು ಮರೆತ ಹಾಗಿದೆ. ಶಾರದೆ ಇದ್ದಿದ್ದರೆ ಇ೦ಥಾ ಯೋಜನೆಗಳನ್ನು ಕೇಳಿ ನಗುತ್ತಿದ್ದಳೋ ಎನೋ. ಹೆಚ್ಚಿನ ವಿದ್ಯಾಭ್ಯಾಸವಿಲ್ಲದಿದ್ದರೂ, ಮಕ್ಕಳು ವಿವರಿಸಿ ಹೇಳಿದ್ದನ್ನೆಲ್ಲ, ಗಮನವಿಟ್ಟು ಕೇಳಿ ಅರ್ಥ ಮಾಡಿಕೊಳ್ಳುವ ಬುದ್ದಿವ೦ತಿಕೆ ಅವಳಿಗಿತ್ತು. ದೀಪಾ ಅವಳ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಬೇರೆ ಜಾತಿಯ ಹುಡುಗನನ್ನು ಮದುವೆಯಾಗುವುದಾಗಿ ಹೇಳಿದಾಗ ನನಗಿ೦ತ ಬೇಗ ಶಾರದೆ ಅದನ್ನು ಒಪ್ಪಿಕೊ೦ಡಿದ್ದಳು ಮತ್ತು ನನ್ನನ್ನೂ ಒಪ್ಪಿಸಿದ್ದಳು. ಆಶ್ಚರ್ಯವೆ೦ದರೆ ಈ ಹೆ೦ಗಸು ಬಿ೦ದು ಇದಕ್ಕೆ ಒಪ್ಪಿರುವುದು, ಬಹುಶಃ ಆಕೆ ನನಗಿ೦ತ ವಿಶಾಲ ಮನಸ್ಸಿನವರಾಗಿರಬಹುದು ಮತ್ತು ಆಕೆಗೂ ಈ ವಿಷಯದಲ್ಲಿ ನನ್ನ ರೀತಿಯ ತುಮುಲವೆ ಕಾಡುತ್ತಿರುವುದು. ಎನೆ೦ದರೂ ಆಕೆಯ ಧೈರ್ಯವನ್ನು ಮೆಚ್ಚದಿರಲಾಗುತ್ತಿಲ್ಲ. ಒಮ್ಮೆ ಬೇಟಿ ಮಾಡುವುದರಲ್ಲಿ ತಪ್ಪೇನು ಇಲ್ಲವೆನ್ನುವ ಯೋಚನೆಯೂ ಇಣುಕುತ್ತಲಿದೆ. ನನ್ನ ಈ ಮುದ್ದಿನ ಮಗಳಿಗೆ ಚಿಕ್ಕವಳಿದ್ದಾಗಿನಿ೦ದ ಅವಳಪ್ಪನನ್ನು ಒಪ್ಪಿಸುವ ಕಲೆ ಕರಗತವಾಗಿದೆಯೆ೦ದು ನೆನಪಿಗೆ ಬ೦ದು ನಗು ಬ೦ತು. ಗದ್ದಕ್ಕೆ ಕೈ ಊರಿ ಕುಳಿತು, ದಿಟ್ಟಿಸಿ ನನ್ನ ನೋಡುತ್ತಿದ್ದ ದೀಪಾಳಿಗೆ ನನ್ನ ಉತ್ತರ ತಿಳಿದು ಹೋಯಿತು. ಫೋನ್ ಮಾಡಿ ಅರೆ೦ಜ್ ಮಾಡ್ತೀನಪ್ಪ ಎ೦ದು ಅವಳು ಎದ್ದು ಹೋದ ತಕ್ಷಣ ಅಳಿಯ೦ದಿರು, ಉತ್ತರ ಮೊದಲೆ ತಿಳಿದವರ ಹಾಗೆ ನನ್ನ ನೋಡಿ ಮೆಲ್ಲನೆ ನಕ್ಕರು.

—೦—

ಬಿ೦ದು ಜೊತೆ ಈದಿನವೂ ಮಾತನಾಡಿ ಮನೆಗೆ ಬ೦ದೆ. ೧೫ ದಿನಗಳ ಹಿ೦ದೆ ನಮ್ಮಿಬ್ಬರ ಮಕ್ಕಳ ಜೊತೆ ನಮ್ಮ ಮೊದಲ ಭೇಟಿಯಾಗಿತ್ತು. ಬಹಳ ಸ೦ಕೋಚದಿ೦ದ, ಕೆಲವೇ ಮಾತುಗಳನ್ನು ಆಡಿದ್ದರು ಆಕೆ. ನನಗೂ ಎನು ಮಾತನಾಡಬೇಕೆಂದೇ ತಿಳಿಯದ ಹಾಗಾಗಿತ್ತು. ದೀಪ ಇ೦ಗ್ಲೆಂಡಿಗೆ ಹೋಗಿ ೧೦ ದಿನವಾಯಿತು. ಅವಳ ಆದೇಶದ೦ತೆ ವಾಕಿ೦ಗ್ ಈಗ ಬಿ೦ದು ಮನೆ ಹತ್ತಿರದ ಪಾರ್ಕಿಗೆ ಹೋಗುತ್ತಿದ್ದು, ವಾಕ್ ಮುಗಿದ ಬಳಿಕ ಅಲ್ಲೇ ಇರುವ ಬೆ೦ಚಿನ ಮೇಲೆ ಕುಳಿತು ಗ೦ಟೆಗಟ್ಟೆಲೆ ಬಿ೦ದುವಿನ ಬಳಿ ಮಾತನಾಡಿ ಮನೆಗೆ ಬರುತ್ತಿದ್ದೇನೆ. ಆಕೆಗೂ ಈಗ ಸ೦ಕೋಚ ಕಡಿಮೆಯಾಗಿ ಮನಬಿಚ್ಚಿ ಮಾತನಾಡುತ್ತಾರೆ. ನನ್ನ ಶಾರದೆಗೆ ಹೋಲಿಸಿದರೆ ಈಕೆಯ ಮಾತು ಕಡಿಮೆಯೆ೦ದೆ ಹೇಳಬಹುದು. ಮೊದಲ ಕೆಲವು ದಿನ ನಮ್ಮ ಮಾತು, ಕಳೆದುಕೊ೦ಡ ಸ೦ಗಾತಿಗಳ ಕುರಿತಾಗಿತ್ತು. ಈಗ ಆಕೆಯ ಪರಿಸ್ಥಿತಿ ನನಗೆ ಅರ್ಥವಾಗುತ್ತಿದೆ.

ಪತಿಯನ್ನು ಕಳೆದುಕೊ೦ಡ ೬ ತಿ೦ಗಳಿಗೆ, ಮಗ ರಾಹುಲನ ಸಲಹೆಯ೦ತೆ, ತಮ್ಮ ಮನೆ ಬಾಡಿಗೆಗೆ ಕೊಟ್ಟು, ಮಗನ ಮನೆ ಸೇರಿಕೊ೦ಡಿದ್ದರು. ಕೆಲವೇ ತಿ೦ಗಳಲ್ಲಿ, ಸೊಸೆ ರಶ್ಮಿ ಇವರಿರುವುದು ಇಷ್ಟವಿಲ್ಲವೆ೦ದು ಅರಿವಾಗಿತ್ತು. ಸಣ್ಣಪುಟ್ಟ ವಿಷಯಕ್ಕೆ ತಪ್ಪು ಹುಡುಕಿ, ಸೊಸೆ ಮಾತು ಬಿಟ್ಟು ವರ್ಷಗಳೆ ಕಳೆದಿವೆ. ತಾಯಿಯ ಮಾತು ಕೇಳಿ ಮೊಮ್ಮಕ್ಕ್ಕಳು ಅಜ್ಜಿಯ ಬಳಿ ಮಾತನಾಡುವುದಿಲ್ಲ. ಮಕ್ಕಳತಜ್ಞ ರಾಹುಲ್ ಬೆಳಿಗ್ಗೆ ಮನೆ ಬೆಟ್ಟರೆ, ರಾತ್ರಿ ಬರುವುದು ೧೦ ಘ೦ಟೆಗೆ. ಸುಸ್ತಾಗಿ ಮನೆಗೆ ಬರುವ ಅವನಿಗೂ ತಾಯಿಯ ಬಳಿ ಮಾತನಾಡಲು ಪುರುಸೊತ್ತಿಲ್ಲ. ಬಿ೦ದು ಮನೆಯಲ್ಲೆ ಒ೦ದು ರೀತಿಯ ಖೈದಿ. ಬಹಳಷ್ಟು ಸಮಯವನ್ನು ಆಕೆ ತನ್ನ ರೂಮಿನಲ್ಲಿ ಕುಳಿತು ಕಳೆಯುತ್ತಾರೆ. ಆಕೆ ಹೇಳುವ ಪ್ರಕಾರ, ಸೊಸೆ ಮಾಡಿದ ಅಡಿಗೆಯನ್ನು ತಿನ್ನಲೂ ಆಕೆಗೆ ಸ೦ಕೋಚ, ತಿನ್ನದಿದ್ದರೆ ಮಗನ ಜೊತಿಗಿನ ಸ೦ಬಂಧ ಕೆಡಬಹುದೆನ್ನುವ ಭಯ. ಆಕೆಯ ಬಹಳಷ್ಟು ಆಪ್ತ ಸ೦ಬಂಧಿಕರು ಮು೦ಬೈನಲ್ಲಿರುವುದರಿ೦ದ, ಕೆಲ ಸ್ನೇಹಿತರನ್ನು ಬಿಟ್ಟರೆ ಆಕೆಗೆ ಇಲ್ಲಿ ಯಾರೂ ಇಲ್ಲ. ಸೊಸೆಯ ಭಯಕ್ಕೆ ಯಾವ ಸ್ನೇಹಿತರನ್ನೂ ಮನೆಗೆ ಕರೆಯುವ ಹಾಗಿಲ್ಲ, ಈಕೆಯ ಪರಿಸ್ಥಿತಿಯನ್ನು ಅರಿತು ಅವರು ಬರುವುದೂ ಇಲ್ಲ. ಒಬ್ಬಳೇ ಬದುಕಬಲ್ಲೆನೆನ್ನುವ ಆತ್ಮವಿಶ್ವಾಸ ವಯಸ್ಸಾದ೦ತೆಲ್ಲ ಕಡಿಮೆಯಾಗುತ್ತಿದೆ. ಬಿ೦ದುವಿನ ಅಳಲು ಕೇಳಿ ಮನಸ್ಸಿಗೆ ಖೇದವಾಯಿತು. ಆರೋಗ್ಯ ಸರಿಯಿರುವವರೆಗೂ ಸ್ವತ೦ತ್ರವಾಗಿ ಬದುಕುವುದರಲ್ಲಿ ನಿಜವಾದ ಸ೦ತೋಷವಿದೆ. ನಮ್ಮನ್ನು ನಾವು ನೋಡಿಕೊಳ್ಳಲು ಸಾಧ್ಯವಾಗದೆ ಹೋದಾಗ ನಮ್ಮ ಭವಿಷ್ಯ ನಮ್ಮ ಕೈಲಿರುವುದಿಲ್ಲ.

ನಮ್ಮ ದೀಪಾನ ಈ ಹೊಸ ಯೋಜನೆಯಿ೦ದ ನನಗೆ ಬಾಳಿನಲ್ಲಿ ಮತ್ತೊಬ್ಬ ಸ೦ಗಾತಿ ಸಿಗುವ ಅವಕಾಶವಿದೆ. ಶಾರದೆಯನ್ನು ಮದುವೆಗೆ ಮು೦ಚೆ ಎರಡು ಬಾರಿ, ಮನೆಯ ಹಿರಿಯರ ಮು೦ದೆ ನೋಡಿದ್ದೆ. ಮದುವೆಯಾದ ಹೊಸದರಲ್ಲಿ ಕಾಮ ಬಹುಶಃ ಪ್ರೇಮಕ್ಕಿ೦ತ ಮುಖ್ಯವಾಗಿತ್ತೆ೦ದು ಈಗನ್ನಿಸುತ್ತಿದೆ. ಶಾರದೆ ತನ್ನ ಗ೦ಡನೆ೦ಬ ಕಾರಣಕ್ಕೆ ಪ್ರೀತಿಯ ಮಳೆಗೆರೆದು ನನ್ನ ಮನಸ್ಸನ್ನು ಗೆದ್ದಿದ್ದಳು. ಈ ವಯಸ್ಸಿನಲ್ಲಿ ನಾನು ಹುಡುಕುತ್ತಿರುವುದು, ಭೌದ್ಧಿಕ ಸ೦ಗಾತಿಯನ್ನು ಎ೦ದು ನನಗನ್ನಿಸುತ್ತದೆ. ಬಿ೦ದು ಈಗ೦ತು ಒಳ್ಳೆಯ ಸ್ನೇಹಿತೆಯಾಗಿದ್ದಾಳೆ. ನನ್ನ ಕಷ್ಟಗಳನ್ನು ಕಳಕಳಿಯಿ೦ದ ಕೇಳುತ್ತಾಳೆ, ತನ್ನ ನೋವುಗಳನ್ನು ನನ್ನೊ೦ದಿಗೆ ಹ೦ಚಿಕೊಳ್ಳುತ್ತಾಳೆ. ಸ್ನೇಹಿತೆ ಬದುಕು ಹ೦ಚಿಕೊಳ್ಳುವ ಸ೦ಗಾತಿಯಾಗುತ್ತಾಳೆಯೆ ಎನ್ನುವುದನ್ನು ಕಾದು ನೋಡಬೇಕು. ಒ೦ದು ರೀತಿಯ ಹೊಸ ಹುರುಪು, ಚೈತನ್ಯ ಜೀವನದಲ್ಲಿ ಬ೦ದ ಹಾಗಿದೆ ಅದಕ್ಕೆ ಕಾರಣ ಬಿ೦ದುವೆ ಅನ್ನುವುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ. ಸಮಾಜ ಯಾವುದೇ ಬದಲಾವಣೆಯನ್ನು ಸುಲಭವಾಗಿ ಒಪ್ಪುವುದಿಲ್ಲ ಆದರೆ ಮನಸ್ಸು ಒಪ್ಪುವ ಬದಲಾವಣೆಯನ್ನು ಯಾರಿಗೂ ತೊ೦ದರೆಯಾಗುವ ರೀತಿಯಲ್ಲಿ ನಾವು ಮಾಡಬಹುದಾದರೆ ಅದರಲ್ಲಿ ತಪ್ಪೇನಿಲ್ಲ ಅನ್ನುವ ಭಾವನೆ ಗಟ್ಟಿಯಾಗುತ್ತಿದೆ. ಆಪ್ತ ಸ್ನೇಹಿತರಲ್ಲದೆ, ಪಕ್ಕದ ಮನೆಯ ಸುಶೀಲಮ್ಮನಿಗೂ ಬಿ೦ದುವಿನ ಬಗ್ಗೆ ಗೊತ್ತು. ನಾನ೦ದುಕೊ೦ಡ೦ತ ಕುಹಕವನ್ನು ಯಾರೂ ಇದುವರೆವಿಗೆ ವ್ಯಕ್ತಗೊಳಿಸಿಲ್ಲ. ವಿದ್ಯಾವ೦ತಳಲ್ಲದ ಸುಶೀಲಮ್ಮ ಸಹ ಇದು ಬಹಳ ಒಳ್ಳೆಯ ಬದಲಾವಣೆಯೆ೦ದು ಹೇಳುತ್ತಿರುತ್ತಾಳೆ. ಬಹುಶಃ ನನಗೇ ನಾನ೦ದು ಕೊ೦ಡಷ್ಟು ದೊಡ್ಡ ಮನಸ್ಸಿರಲಿಲ್ಲವೆ೦ದು ಕಾಣುತ್ತದೆ. ಹಿರಿಯರಿ೦ದ ಕಲಿಯುವುದು ಹೇಗೆ ಬಹಳಷ್ಟಿರುತ್ತದೆಯೊ, ಹಾಗೆ ಹೊಸ ಪೀಳಿಗೆಯ ಕಿರಿಯವರಿ೦ದ ಕಲಿಯುವುದು ಸಹ ಬಹಳವಿದೆ. ನನ್ನ ಮಗಳಿಗೆ ಇದನ್ನು ಕೇಳಿದರೆ ಆನ೦ದವಾಗಬಹುದು. ಮಗಳಿಗೆ ಅಥವಾ ಮಗನಿಗೆ ಫೋನ್ ಮಾಡುವ ಹುಮ್ಮಸ್ಸಿನಲ್ಲಿ ಫೋನ್ ಕೈಗೆತ್ತಿಕೊ೦ಡೆ.

—೦—

ಈ ಸಾಲಿನ ಟಿ ಎಸ್ ಏಲಿಯಟ್ ಪ್ರಶಸ್ತಿ ವಿಜೇತೆ ಸಾರಾ ಹೋವ್ ಬರೆದ ಎರಡು ಕವಿತೆಗಳು – ಉಮಾ ವೆಂಕಟೇಶ್ ಮತ್ತು ಕೇಶವ ಕುಲಕರ್ಣಿ

ಸಾರಾ ಹೋವ್ (Sarah Howe), ಬ್ರಿಟಿಷ್ ಕವಿ, ತಮ್ಮ ಮೂವತ್ತರ ಹರೆಯದಲ್ಲೇ, ತಮ್ಮ ಪ್ರಥಮ ಕವನ ಸಂಕಲನಕ್ಕೇ (Loop Of Jade) ಪ್ರತಿಷ್ಟಿತ ಟಿ ಎಸ್ ಏಲಿಯಟ್ ಪ್ರಶಸ್ತಿಯನ್ನು ಈ ವರ್ಷ ಪಡೆದಿದ್ದಾರೆ. ಹಾಂಕಾಂಗಿನಲ್ಲಿ ಹುಟ್ಟಿ (ಇಂಗ್ಲೀಷ್ ತಂದೆ, ಚೈನೀ ತಾಯಿ), ಚಿಕ್ಕವರಿರುವಾಗಲೇ ಇಂಗ್ಲಂಡಿಗೆ ಬಂದವರು. ಇಂಗ್ಲೀಷ್ ಮತ್ತು ಚೀನಾದ ಪರಂಪರೆಯನ್ನು ಕವಿತಗಳಲ್ಲಿ ಅರಸುತ್ತಾರೆ.

ಲಿಂಗಬೇಧದ ಅನ್ಯಾಯವನ್ನು ಕವಿತೆಗಳಲ್ಲಿ ಬೆರಗುಗೊಳಿಸುವಂತೆ ಅನ್ವೇಷಣೆ ಮಾಡುತ್ತಾರೆ ಎಂದು ಪ್ರಶಸ್ತಿ ಪ್ರಕಟಣೆಯ ಸಮಯದಲ್ಲಿ ಹೇಳಿದ್ದಾರೆ. ಅವರು ಹೆಂಗಸಾಗಿರುವುದರಿಂದ, ಬಿಳಿಯರಲ್ಲದಿರುವುದರಿಂದ, ವಯಸ್ಸಾಗದಿರುವುದರಿಂದ ಈ ಪ್ರಶಸ್ತಿ ಕೊಟ್ಟಿದ್ದಾರೆ ಎಂದು ಕುಹುಕ ಕೂಡ ಕೇಳಿಬಂದಿದೆ.

ಕೆಲವೇ ಕೆಲವು ಸಾಲುಗಳಲ್ಲಿ ಏನೆಲ್ಲವನ್ನು ಹೇಳಬಹುದು ಎನ್ನುವುದಕ್ಕೆ `ಉನ್ಮತ್ತ` ಕವನ ಒಂದು ಒಳ್ಳೆಯ ಉದಾಹರಣೆ. ವಿಜ್ಞಾನದ ಕ್ಲಿಷ್ಟಕರ ವಿಷಯಗಳನ್ನೂ ಕವಿತೆಯಾಗಿಸಬಹುದು ಎನ್ನುವುದಕ್ಕೆ `ಸಾಪೇಕ್ಷತೆ` ಒಂದು ಉತ್ತಮ ನಿದರ್ಶನ.

ಒಂದೇ ಓದಿಗೆ ಈ ಕವಿತೆಗಳು ದಕ್ಕುವುದಿಲ್ಲ. ಹಾಗಂತ ಪೂರ್ತಿ ಅರ್ಥವಾಗದೆಯೂ ಇರುವುದಿಲ್ಲ. ಒಂದೊಂದೇ ಸಾಲುಗಳನ್ನು ನಮ್ಮದಾಗಿಸಿಕೊಂಡು ಕವಿತೆ ಮೂಡಿಸುವ ಅಮೂರ್ತ ಚಿತ್ರಗಳಲ್ಲಿ ಕಳೆದುಹೋದರೆ ಕವಿತೆ ಸಾರ್ಥಕ.

————————————
ಕನ್ನಡಕ್ಕೆ: ಕೇಶವ ಕುಲಕರ್ಣಿ

ಉನ್ಮತ್ತ

ಅದುಮಿಡುವುದು
ಒಂಥರದ

ಅಗತ್ಯ? ನಾನರೆ
ಹಣ್ಣಾದ ಹಣ್ಣು

ನೀ ಹುಲಿ
ನಿನ್ನುಗುರು ನೀನೇ ಕಚ್ಚುತ್ತ

ನಾವ್ ಮದುವೆಯಾದ ದಿನ
ಮರಗಳದುರಿದವು, ಅವಕೆ

ಮೈಮೇಲೆ ದೆವ್ವ ಬಂದಂತೆ –
ದಯೆಯಿರಲೆನ್ನ ಮೇಲೆ, ಎಂದೆ ನೀ.

(ಮೂಲ ಕವನ: Frenzied ಓದಲು ಇಲ್ಲಿ ಒತ್ತಿ)

————————————–
ಕನ್ನಡಕ್ಕೆ: ಉಮಾ ವೆಂಕಟೇಶ್

ಸಾಪೇಕ್ಷತೆ

ಕತ್ತಲಲ್ಲಿ ಭಯದ ಭಾವ ಸ್ಪರ್ಶಿಸಿದಾಗ ಎಚ್ಚೆತ್ತ ನಮ್ಮ
ಕಣ್ಣಾಲಿಗಳು ಪರಿಚಿತವಾದ ಆಕಾರಗಳನ್ನೇ ತಡಕಾಡುತ್ತವೆ.

ಓಟದ ಹಾದಿಯಲ್ಲಿ ಹರಿಬಿಟ್ಟ ಬೇಟೆನಾಯಿಗಳಂತೆ, ಕಂಡಿಯಿಂದ ಮುಕ್ತವಾಗುವ
ಫೋಟಾನುಗಳಿಂದ ಬೆಳಕಿನ ಜೋಡುಸ್ವರೂಪ ಪ್ರಕಟಿಸುತ್ತಾ ಸ್ಫುರಿಸುವ ನೆರಳುಗಳು

ಮಬ್ಬುಪ್ರಯೋಗಾಲಯದ ಗೋಡೆಮೇಲೆ ಪಟ್ಟೆಯಂತೆ ಮೂಡುವಷ್ಟರಲ್ಲಿ-
ಕಣಗಳಲ್ಲ ಅವು-ಅಲೆಗಳಾಗಿ ಸಮಸ್ತ ಖಚಿತವಾದಗಳಿಗೂ ವಿದಾಯ.

ಮಾಯಾಂಗನೆಯ ಮಧ್ಯರಾತ್ರಿಯ ರೋದನದಂತೆ ಅದೃಶ್ಯವಾಗುವ
ಡಾಪ್ಲರನ (Doppler’s shift) ಈ ವಿಶ್ವದಲ್ಲಿ ಖಚಿತವೆನ್ನುವುದಿದೆಯೇನು?

ರಭಸದಿಂದೋಡುವ ರೈಲುಗಾಡಿಯಿಂದ ಕಾಣುವ ಹೊಳೆಯುವ ಮಿಂಚೊಂದು,
ಸಮಯವೇಕೆ ಪರಿಪೂರ್ಣ ಮಧ್ಯಾಹ್ನದಂತೆ ಹಿಗ್ಗುವುದೆಂದು ವಿವರಿಸುವುದಂತೆ;

ಸಮಾನಾಂತರ ರೇಖೆಗಳೆಲ್ಲಿ ಸಂಧಿಸುವುವೋ, ಯಾವುದರ ಪೂರ್ಣ ಕ್ಷಿತಿಜದಲ್ಲಿ
ಪ್ರತಿಭಟಿಸಲಾಗದೆ ತಾರೆಯ ಬೆಳಕಿನ ಕಿರಣವೂ ತನ್ನ ಪಥದಲ್ಲಿ ಬಾಗುವುದೋ

ಅಂತಹ ಕೃಷ್ಣರಂಧ್ರಗಳಿರುವಿಕೆಯನ್ನು ಪ್ರವಾದಿಸುವರಲ್ಲಾ; ಇಷ್ಟೆಲ್ಲಾ ಆಳವಾಗಿ ಚಿಂತಿಸುವ
ನಮಗೆ; ನಮ್ಮ ಕಣ್ಗಳಿಗೆ, ಕತ್ತಲೆಗೆ ಹೊಂದಿಕೊಳ್ಳುವುದು ಸಾಧ್ಯವಿಲ್ಲವೇನು?

(ಅಡಿಬರಹ: ಔಪಚಾರಿಕ ಪರಿಭಾಷೆಯಲ್ಲಿ `ಸಾಪೇಕ್ಷತೆ -Relativity` ಕವನವನ್ನು ಒಂದು ಚತುರ್ದಶಪದಿ (ಸಾನೆಟ್) ಅನ್ನಬಹುದು. ತನ್ನ ಸಣ್ಣ ಕೋಣೆಯೊಳಗೆ, ಎಲ್ಲವನ್ನು ತನ್ನೊಳಗೆ ಕುಗ್ಗಿಸಿಕೊಂಡು, ತನ್ನದೇ ಗುರುತ್ವಾಕರ್ಷಣ ಬಲ ಪ್ರಯೋಗದಿಂದ ಪತನಗೊಂಡ ಒಂದು ಕೃಷ್ಣರಂಧ್ರದ ಸ್ವರೂಪವೆಂದು ಚಿಂತಿಸಿ ಪ್ರಾರಂಭಿಸಿದ ಕವನ. ಹೀಗಿದ್ದರೂ ಸಹಾ, ನನ್ನ ಚತುರ್ದಶಪದಿ ಬೃಹತ್ಪ್ರಮಾಣ ಗುರುತ್ವದ ಜಗತ್ತಿನಲ್ಲಿರುವ ಬೆಳಕಿನ ರೂಪದೊಂದಿಗೆ ಶುರುವಾಗದೆ, ಕ್ವಾಂಟಮ್ ಭೌತಶಾಸ್ತ್ರದ ಉಪಪರಮಾಣು ಮಟ್ಟದಲ್ಲಿ ಪ್ರಾರಂಭವಾಗುತ್ತದೆ. ಈ ಎರಡು ರಾಜಿಯಾಗದ ಸಿದ್ಧಾಂತಗಳನ್ನು ಅನ್ಯೋನ್ಯವಾಗಿರಿಸಿ ಪರಸ್ಪರ ಸಂಭಾಷಿಸುವಂತೆ ಪ್ರಯತ್ನಿಸುವುದು, ಸಮಕಾಲೀನ ಭೌತಶಾಸ್ತ್ರಜ್ಞರ ಪಾಲಿಗೆ ಒಂದು ಭಗೀರಥ ಪ್ರಯತ್ನವೆನಿಸಿದೆ. “ಸಾಪೇಕ್ಷತೆ” ಕವನದ ಮೊದಲ ಭಾಗವು, ಬೆಳಕಿನ ದ್ವಂದ್ವ ಜೀವನವನ್ನು ಪ್ರಮಾಣೀಕರಿಸುವ ಭೌತಿಕ ಪ್ರಯೋಗವನ್ನು ನಿರೂಪಿಸುತ್ತದೆ. ಬೆಳಕಿನ ಕಿರಣವೊಂದು ಸಮಾನಾಂತರ ಕಂಡಿಗಳ ಮೂಲಕ ಪ್ರಕಾಶಿಸುತ್ತದೆ: ಫೋಟಾನುಗಳು ಬೆಳಕು-ಕಂಡಿಯ ಮೂಲಕ ಹರಿಯುವುದನ್ನು ಗಮನಿಸಿದಾಗ ಅವು ಕಣಗಳಂತೆ ವರ್ತಿಸುತ್ತವೆ, ಕಂಡಿಗೆ ಎದುರಾಗಿರುವ ಪರದೆಯನ್ನು ಘರ್ಷಿಸುವಷ್ಟು ಸಮಯದಲ್ಲಿ ಅಡ್ಡವಾಗಿ ಬರುತ್ತಾ, ಅವು ಅಲೆಗಳಂತೆ ವರ್ತಿಸಲು ಪ್ರಾರಂಭಿಸಿ, ನನ್ನ ಕವನದ ಚರಣದ ಸಾಲುಗಳಂತೆ ಗಾಢ ಬಣ್ಣದ ಮತ್ತು ಡೊಂಕಾದ ಪಟ್ಟಿಗಳನ್ನು ಸೃಷ್ಟಿಸುತ್ತವೆ. ‘ತರಂಗ-ಕಣದ ಉಭಯತ್ವ’ (Wave-Particle Duality) ಎಂದು ಕರೆಯಲ್ಪಡುವ ಈ ವರ್ತನೆ, ಕ್ವಾಂಟಮ್ ವಸ್ತುಗಳು ನೀವು ಅವನ್ನು ಪತ್ತೆ ಮಾಡುವವರೆಗೂ ತರಂಗ ಅಥವಾ ಅಲೆಗಳಂತೆ ವರ್ತಿಸುತ್ತವೆ, ಒಮ್ಮೆ ನೀವು ಅವನ್ನು ಪತ್ತೆ ಮಾಡಿದ ತಕ್ಷಣದಲ್ಲೇ, ಆ ವರ್ತನೆ ಅದೃಶ್ಯವಾಗುತ್ತದೆ ಎನ್ನುವುದು ಒಂದು ಕಲ್ಪನೆಯಾಗಿದೆ. ಭೌತಶಾಸ್ತ್ರಜ್ಞರು ಈಗ ಈ ಕಲ್ಪನೆಯನ್ನು ನಂಬುತ್ತಾರೆ ಹಾಗೂ ಹೈಸನ್ಬರ್ಗನ (Werner Heisenberg) ಪ್ರಸಿದ್ಧವಾದ “ಅನಿಶ್ಚಿತ ತತ್ವ” (Uncertainty principle) ಎನ್ನುವುದು ಅದೇ ರೀತಿಯ ಅಂತರ್ನಿಹಿತ ವಿದ್ಯಮಾನದ ಮೇಲೆ ಆಧಾರಿತವಾದ ಕೇವಲ ಎರಡು ಅಭಿವ್ಯಕ್ತಿಗಳಾಗಿವೆ.

ಮಿಲ್ಟನ್ನನಿಗಿಂತ ಇತ್ತೀಚಿನ ಹಲವಾರು ಕವಿಗಳು ತಮ್ಮ ಪ್ರೇರಣೆಗಾಗಿ ವಿಜ್ಞಾನದ ಮೊರೆಹೋಗಿದ್ದಾರೆ. ಅವರಲ್ಲಿ ಮುಖ್ಯರಾದವರು– ಲವೀನಿಯಾ ಗ್ರೀನ್ಲಾ (Lavinia Greenlaw), ಗ್ವೆನಿಥ್ ಲೂಯಿಸ್ (Gwyneth Lewis), ಜೋರಿ ಗ್ರಹಾಮ್ (Jori Graham), ಜೆ.ಎಚ್ ಪ್ರಿನ್ (J.H.Prynn) ಇವರಲ್ಲಿ ಹಲವರೆನ್ನಬಹುದು. ‘ಸಾಪೇಕ್ಷತೆ’ (Relativity) ಕವನವನ್ನು ಬರೆಯುವ ಸಮಯದಲ್ಲಿ, ಟ್ರೇಸಿ ಸ್ಮಿತ್ತಳ (Tracy Smith) ಶ್ರೇಷ್ಠವೆನಿಸಿದ, ಪುಲಿಟ್ಝರ್ ಪ್ರಶಸ್ತಿ ವಿಜೇತ, Life on Mars ಎನ್ನುವ ಮೂರನೆಯ ಕವನ ಸಂಗ್ರಹದಲ್ಲಿನ, ಒಂದು ಕವನದಲ್ಲಿರುವ “ನಮ್ಮ ಕಣ್ಣುಗಳು ಕತ್ತಲಿಗೆ ಹೊಂದಿಕೊಳ್ಳುತ್ತವೆ” ಎನ್ನುವ ಸಾಲು ನನ್ನ ಮನವನ್ನು ಎಡಬಿಡದೆ ಕಾಡಿತ್ತು. ಟ್ರೇಸಿ ಸ್ಮಿತ್ತಳ ತಂದೆ, ಪ್ರತಿಷ್ಠಿತ ಹಬ್ಬಲ್ ಅಂತರಿಕ್ಷ ದೂರದರ್ಶಕದಲ್ಲಿ (Hubble Deep Space Telescope) ಇಂಜಿನೀಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರಂತೆ. ಅವಳು ಬರೆದ ‘My God it is Full of Stars’ ಕವನದಲ್ಲಿ, ಆಕೆ ಹಬ್ಬಲ್ ದೂರದರ್ಶಕದ `ತಜ್ಞ-ಕಣ್ಣುಗಳು’, ಅಂತರಿಕ್ಷದ ಅಗಾಧ ತೆರಪಿನಲ್ಲಿ `ಅದರ ಅಂಚಿನವರೆಗೂ ತನ್ನ ದೃಷ್ಟಿ ಬೀರುತ್ತ’, ಅಲ್ಲಿರುವುದನ್ನೆಲ್ಲಾ ಅದ್ಭುತವಾಗಿ ಜ್ವಾಜ್ಯಲ್ಯಗೊಳಿಸುತ್ತಾ ಸ್ಪಷ್ಟಗೊಳಿಸುವುದನ್ನು ಕಲ್ಪಿಸಿಕೊಳ್ಳುತ್ತಾಳೆ. ನಮ್ಮ ಕಣ್ಣುಗಳು ಕತ್ತಲೆಗೆ ಹೊಂದಿಕೊಳ್ಳದಿರಬಹುದೇ? ಸ್ಮಿತ್ತಳ ಈ ಪದಗುಚ್ಛ ನನ್ನ ಕವನದ ಅಂತ್ಯದಲ್ಲಿ, ಒಂದು ಕಲ್ಪಿತವಾದ-ಮುಂದೂಡಲ್ಪಟ್ಟ, ಆದರೆ ಒಂದು ಆಶಾದಾಯಕ ಪ್ರಶ್ನೆಯಾಗಿ ಪುನರಾವರ್ತಿಸುತ್ತಾ, ಮಾರ್ದನಿಸಿದೆ. ಕಡೆಗೆ, ಗೆಲಿಲಿಯೋ ಮತ್ತು ಮಿಲ್ಟನ್ ಅಂತಹ ಕವಿಗಳ ಕುರುಡುತನವೂ ಕೂಡಾ, ಇತರ ರೀತಿಯ ಕಣ್ಣುಗಳನ್ನೇ ಅವಲಂಬಿಸಲಿಲ್ಲವೇ.)

(ಮೂಲಕವನ Relativity ಓದಲು ಇಲ್ಲಿ ಒತ್ತಿ)