ಕರ್ನಾಟಕದ ಕಬೀರ ಸಂತ ಶಿಶುನಾಳ ಶರೀಫ ಸಾಹೇಬರು – ಶ್ರೀವತ್ಸ ದೇಸಾಯಿ ಲೇಖನ

”ಕನ್ನಡ ಸಾಹಿತ್ಯಕ್ಕೆ ಶರಣರ ದಾಸರ ಮತ್ತು ಸಂತರ ಕೊಡುಗೆ” ಸರಣಿಯಲ್ಲಿ ಭಾಗ - 4. ಯು.ಕೆ ಕನ್ನಡ ಬಳಗದ  ಯುಗಾದಿ ಹಬ್ಬದ ಸಂಭ್ರಮದಲ್ಲಿ (ಮೇ 3, 2025) ಅನಿವಾಸಿ ಸಾಹಿತ್ಯಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಈ ಸಾಹಿತ್ಯ ಗೋಷ್ಠಿಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಶರಣರ, ದಾಸರ ಮತ್ತು ಸಂತರ ಕೊಡುಗೆ’ಯನ್ನು ಕುರಿತು ಕ್ಗಾಳ್ಲೆೆದ ಮೂರು ವಾರಗಳಲ್ಲಿ ಮೂರು ಸದಸ್ಯರು ತಮ್ಮ ಚರ್ಚೆಯನ್ನು ಮಂಡಿಸಿದರು. ಇದು ಕೊನೆಯ ಭಾಗ. ಇದರಲ್ಲಿ ತತ್ವಪದಕಾರ ಶಿಶುನಾಳ ಶರೀಫ್ ಸಾಹೇಬರ ಕೊಡುಗೆಯನ್ನು ಇಲ್ಲಿ ಚರ್ಚಿಸಲಾಗಿದೆ. ಆ ದಿನ ಮಂಡಿಸಿದ ಭಾಗದ ವಿಸ್ತೃತ ಆವೃತ್ತಿ ಇದು.

ಶರಣರು ಮತ್ತು ದಾಸರ ನಂತರದ ಕಾಲ ಶಿಶುನಾಳ ಶರೀಫರದು. ಅವಾಗಾಗಲೇ ಬ್ರಿಟಿಷರು ಭಾರತದಲ್ಲಿ ತಳವೂರಿ ವಿಕ್ಟೊರಿಯಾ ಮಹಾರಾಣಿಯ ಆಡಳಿತ ಪ್ರಾರಂಭವಾಗಿತ್ತು. ಅವರ ಒಂದು ಕೃತಿಯಲ್ಲಿ (ತತ್ವಪದದಲ್ಲಿ) ಸಹ ಅದರ ಪರೋಕ್ಷ ಉಲ್ಲೇಖವನ್ನು ಗುರುತಿಸಲಾಗಿದೆ. ಅವರಿಗೆ ನೂರಾರು ‘ಗೀತೆ’ಗಳನ್ನು ರಚಿಸಿದ ವರಿಂದಕೀರ್ತಿ ಸಲ್ಲುತ್ತದೆ. ಕಂಬಾರ ಮುದುಕಪ್ಪನ ಮಗಳಾದ ಬಸಮ್ಮಳ ಸುಶ್ರಾವಕ ದನಿಯಲ್ಲಿ ಹಾಡಿಸಿದ್ದವುಗಳ ದಾಖಲೆ ಸಿಗುತ್ತವೆ. ಆದರೆ ಎಲ್ಲವನ್ನೂ ಯಾರೂ ಬರೆದಿಟ್ಟಿಲ್ಲವಾದ್ದರಿಂದ ನಿಖರವಾದ ಸಂಖ್ಯೆ ದೊರೆಯುವದಿಲ್ಲವಂತೆ.
ಮುಸಲ್ಮಾನ ಕುಟುಂಬದಲ್ಲಿ ಹುಟ್ಟಿದ್ದರೂ ಅವರ ತಂದೆ ‘ಹಿಂದುಗಳ ಮಂತ್ರ, ತಂತ್ರ ಶಾಸ್ತ್ರ, ಜ್ಯೋತಿಷ, ಪುರಾಣ ಇವೆಲ್ಲವಕ್ಕೂ ಮನಸ್ಸು ತೆತ್ತಿದ್ದರಿಂದ’ ಅವರ ಪ್ರಭಾವದಿಂದ ಶರೀಫರು ಎರಡೂ ಮತಗಳನ್ನು ಕಲೆಸಿ ಉಂಡಿದ್ದರು.’ ಅವರ ರಚನೆಗಳನ್ನು ತತ್ವಪದಗಳೆಂದು ಕರೆಯುವ ವಾಡಿಕೆ.

ಬೋಧ ಒಂದೇ ಬ್ರಹ್ಮನಾದ ಒಂದೇ
ಸಾಧನ ಮಾಡುವ ಹಾದಿ ಒಂದೇ
ಆದಿ ಪದ ಒಂದೇ …
ಶಿಶುನಾಳಧೀಶನ ಭಾಷೆ ಒಂದೇ

ಶಿಶುನಾಳ ಶರೀಫರು

ತತ್ವಪದಗಳೆಂದರೇನು?
ಈ ಪದಕ್ಕೆ ಅನೇಕ ವ್ಯಾಖ್ಯೆಗಳಿರಬಹುದು. ತತ್ವಪದಗಳು ನಮ್ಮ ಅಂತರಂಗವನ್ನು ದರ್ಶಿಸುವ ಮೂಲಕ ಅಸ್ಮಿತೆಯ ಅರಿವನ್ನುಂಟುಮಾಡುತ್ತವೆ. ಅವು ತಾತ್ವಿಕ ದೃಷ್ಟಿಯಿಂದಲೇ ಜೀವನದ ರಹಸ್ಯಗಳನ್ನು ಭೇದಿಸಲು ಪ್ರೇರಿಸುತ್ತವೆ. ದೇವರು, ಅನುಭವ, ಅನುಭಾವ, ಜ್ಞಾನ, ಮುಕ್ತಿ ಬಗ್ಗೆ ಹೇಳುತ್ತವೆ. ಆದರೆ ಇಲ್ಲಿ ತತ್ತ್ವಪದ ರಚಯಿತರಿಗೆ ಯಾರಿಗೂ ಅಂಕಿತ ಪ್ರದಾನ ವಗೈರೆ ಮಾಡದಿದ್ದರೂ ತಮ್ಮಿಂದ ತಾವೇ ತಮ್ಮ ಆರಾಧ್ಯ ದೈವದ ಹೆಸರಿನಲ್ಲಿ, ತಮ್ಮ ಗುರುಗಳ ಹೆಸರಿನಲ್ಲಿ ತತ್ವಪದಗಳನ್ನು ಬರೆದರು. ಇದು ಪ್ರಮುಖವಾಗಿ ಗುರು ಶಿಷ್ಯ ಪರಂಪರೆಯ ಪ್ರತಿಪಾದಕ ಪಂಥ ಅನಬಹುದು.ಕನ್ನಡದಲ್ಲಿ ತತ್ವಪದಕಾರರೇ ಬೇರೆ ಭಾಷೆಗಳಲ್ಲಿ ಬೇರೆ ಹೆಸರಿನಿಂದ ಕರೆಯಲ್ಪಟ್ಟರು. ಅವಧೂತರು, ಸಂತರು, ವಾರಕರಿ, ಸೂಫಿ ಇತ್ಯಾದಿ. ಕಬೀರರ ದೋಹಾ, ತುಕಾರಾಮನ ಅಭಂಗ, ಜ್ಞಾನದೇವ ಇವರೆಲ್ಲರವೂ ತತ್ವಪದಗಳೇ. ಇಲ್ಲಿ ಯಾವುದೇ ದೀಕ್ಷೆ, ವ್ರತದ ಹಂಗಿಲ್ಲ. ಕನಕದಾಸರೂ ಕೆಳವರ್ಗದವರೇ ಆದರೂ ವೈದಿಕ ಸಂಸ್ಕೃತಿಯ, ಮಧ್ವಮತದ ಹರಿಕಾರರೆನಿಸಿ ಹರಿದಾಸರಾದರು ಅವರು. ಆ ಮಟ್ಟದ ವೇದಾಧ್ಯಯನದಿಂದ ದೂರವಿದ್ದೂ ಚಿಂತನೆಯ ಆಯಾಮಗಳ ದಾಟುತ್ತ ಅನುಭಾವಿಕರೆನಿಸಿದವರ ಅಭಿವ್ಯಕ್ತಿಯ ಪದಗಳೇ ಈ ತತ್ವಪದಗಳು.

ಹುಟ್ಟು ಮತ್ತು ಬೆಳವಣಿಗೆ
ಆಗಿನ ಧಾರವಾಡ ಜಿಲ್ಲೆಯ (ಈಗ ಹಾವೇರಿ) ಶಿಗ್ಗಾವಿ ತಾಲೂಕಿನಲ್ಲಿ ಗುಡಿಗೇರಿ ರೇಲ್ವೆ ಸ್ಟೇಶನ್ನಿನಿಂದ ಮೂರು ಮೈಲಿ ದೂರದಲ್ಲಿರುವ ಚಿಕ್ಕ ಹಳ್ಳಿಯೇ ಶಿಶುನಾಳ. ಅಲ್ಲಿ ವಾಸಿಸುತ್ತಿದ್ದ ತಂದೆ ಇಮಾಮ ಸಾಹೇಬ ಮತ್ತು ತಾಯಿ ಹಜ್ಜುಮಾ ಅವರು ತಮ್ಮ ಪಾಲಿಗಿದ್ದ ಭೂಮಿಯ ಸಾಗುವಳಿಯಿಂದಲೇ ಬದುಕುತ್ತಿದ್ದರು. ಅವರಿಗೆ ಬಹುಕಾಲ ಮಕ್ಕಳಾಗಿರಲಿಲ್ಲ. ಇಮಾಮ ಸಾಹೇಬರು ಹುಲಗೂರ ಖಾದರ ಷಾವಲಿ ಸಂತರಲ್ಲಿ ಹರಕೆ ಹೊತ್ತರು. ಹಜರತ್ ಖಾದರಿಯವರು ಸಹ ಹಿಂದೊಮ್ಮೆ ಹಿಂದು ಮುಸ್ಲಿಮ್ ಧರ್ಮಗಳ ಸಂಗಮದ ಕನಸು ಕಂಡಿದ್ದರಂತೆ. ಒಮ್ಮೆ ಯಾರೋ ಛೇಡಿಸಿದ್ದಕ್ಕೆ ಬಯಸಿ ಬಂದವರಿಗೆ ಲಿಂಗ ದೀಕ್ಷೆ ಕೊಟ್ಟು ಖಾದರಲಿಂಗ ಅನ್ನಿಸಿಕೊಂಡರು ಮತ್ತು ಮುಂದೆ ಶಿಶುನಾಳರ ಹಾಡುಗಳಲ್ಲಿ ಅವರ ಉಲ್ಲೇಖ ಬರುತ್ತದೆ.
ಇಮಾಮ್ ಮತ್ತು ಹಜ್ಜುಮಾ ದಂಪತಿಗಳು ೧೮೧೯ರ ಮಾರ್ಚ ಏಳನೆಯ ತಾರೀಕಿಗೆ ಜನಿಸಿದ ತಮ್ಮ ಗಂಡು ಮಗುವಿಗೆ ಮೊಹಮ್ಮದ್ ಶರೀಫ್ ಎಂದು ಹೆಸರಿಟ್ಟರು. ಆತನೇ ಮುಂದೆ ಶಿಶುನಾಳ ಶರೀಫ್ ಎಂದು ಪ್ರಸಿದ್ಧರಾದರು. ಹುಡುಗನಾಗಿದ್ದಾಗಲೇ ಎರಡೂ ಮತಗಳ ಪ್ರಭಾವ ಆತನ ಮೇಲಿತ್ತು. ತಂದೆಯಿಂದ ರಾಮಾಯಣ, ಭಾರತ, ಪುರಾಣದ ಕತೆಗಳು ಮತ್ತು ಶಿವ ಶರಣರ ಜೀವನದ ಸಂಗತಿಗಳನ್ನು ಅರಿತು ಆ ಹುಡುಗ ’ತನಗರಿವಿಲ್ಲದೆಯೇ ಮತ ಮರುಳತನದಿಂದ ತನ್ನನ್ನು ಪಾರು ಮಾಡ ಬಲ್ಲ ನಿಜ ಧರ್ಮದ ರಕ್ಷಾವಸ್ತ್ರವನ್ನು ಸಿದ್ಧ ಮಾಡಿಕೊಂಡ’ ಎಂದು ಇತಿಹಾಸಕಾರರು ಹೇಳುತ್ತಾರೆ.

’ದೊರಕಿದ, ಗುರು ದೊರಕಿದಾ ’
ಶರೀಫನಿಗೆ ಒಬ್ಬ ಗುರುವಿನ ತಲಾಷ್ ಇತ್ತು. ಆತನ ಮನಸ್ಸಿನಲ್ಲಿ ಫಲವತ್ತಾದ ಭೂಮಿ ತಯಾರಾಗಿತ್ತು. ಅದರಲ್ಲಿ ಬೀಜ ಬಿತ್ತ ಬೇಕಾಗಿತ್ತು. ಅದೃಷ್ಟವಶಾತ್ ಈ ಹುಡುಗನ ಊರಿಗೆ ಪಕ್ಕದ ಊರಿನಿಂದ ಒಬ್ಬ ಬ್ರಾಹ್ಮಣ ಬಂದನು. ಆತ ಜಾತಿ ಮತಗಳ ಕಟ್ಟುಪಾಡುಗಳಿಗೆ ಸೊಪ್ಪು ಹಾಕದ ಮತ್ತು ವೇದ ಶಾಸ್ತ್ರಗಳನ್ನೆಲ್ಲ ಅರೆದು ಕುಡಿದ ಸ್ಮಾರ್ತ ಬ್ರಾಹ್ಮಣ; ದೇವಿ ಉಪಾಸಕ. ಆತನೇ ಬಹು ಮಹಿಮಾವಂತ ಎಂದು ಹೆಸರು ಗಳಿಸಿದ ಗೋವಿಂದ ಭಟ್ಟ. ಆತ ಕಟ್ಟುಪಾಡುಗಳಿಗೆ ಹೊರತಾಗಿದ್ದ. ಕೆಲವರು ಹಬ್ಬಿಸಿದ ವದಂತಿ ’ಸೆರೆ ಕುಡೀತಾನೆ, ಗಾಂಜಾ ಸೇದತಾನೆ, ಯಾರಂದರೆ ಅವರಿಂದ ಮುಟ್ಟಿಸಿಗೋತಾನ,’ ಅಂತ. ಆದರೂ ಜನರಿಗೆ ಆತನ ವಿದ್ವತ್ತಿನ ಬಗ್ಗೆ ಗೌರವ. ಅಂತೆಯೇ ಆತನ ತಂದೆ ಶರೀಫನನ್ನು ಅವರ ಹತ್ತಿರ ಕರೆದು ಕೊಂಡು ಹೋದನು. ಮೊದಲ ಭೇಟಿಯಲ್ಲೇ ಹುಡುಗನ ವೇದಾಂತ ನೆಲೆಯನ್ನು ಕಂಡು ಭಟ್ಟರಿಗೆ ಅಚ್ಚರಿ. ತನ್ನಲ್ಲಿ ಅನುಗ್ರಹ ಬೇಡಿ ಬಂದ ಇಮಾಮ ಸಾಹೇಬನನ್ನು ’ಈ ಹುಡುಗನ್ನ ನನ್ನ ಉಡಿಗೆ ಹಾಕಿ ಬಿಡು’ ಅಂತ ಗೋವಿಂದ ಭಟ್ಟ ಕೇಳಿದೊಡನೆ ತಂದೆ ಒಪ್ಪಿಬಿಟ್ಟನು. ಶರೀಫನೋ ಆತನನ್ನು ಗುರುವೆಂದು ಕೂಡಲೇ ಒಪ್ಪಿದನಂತೆ. ಅವರ ಬಗ್ಗೆ ಒಂದು ಪದ್ಯದಲ್ಲಿ ಹೀಗೆ ಹಾಡಿದನು :
”ದೊರಕಿದ ಗುರು ದೊರಕಿದಾ
ಪರಮಾನಂದ ಬೋಧ ಅರುವಿನೊಳಗೆ ಬಂದು
ದೊರಕಿದಾ ಗುರು ದೊರಕಿದಾ
ಕರಪಾತ್ರೆ ಹಿಡಿದು ಈ ನರ ಶರೀರದಿ ತನ್ನ
ಅರುವ ತನಗೆ ತೋರಿ ಪರಮ ನಂಬುಗೆಯಲಿದೆ”ಯೆಂದು. ಗುರು ಶಿಷ್ಯರು ಹತ್ತಿರವಾದರು.
ಸ್ವಲ್ಪ ಕಾಲದ ನಂತರ ಗುರು ಆತನ ಕೊರಳಿಗೆ ತಮ್ಮ ಮೈಮೇಲಿದ್ದ ಜನಿವಾರವನ್ನು ಹಾಕಿ ಬಿಟ್ಟರು! ಈ ಸಾಂಕೇತಿಕ ಉಪನಯನದಿಂದ ಭಾವ ಪರವಶನಾಗಿ ಗುರುವಿಗೆ ಉದ್ದಂಡ ನಮಸ್ಕಾರ ಹಾಕಿಬಿಟ್ಟ ಶರೀಫ ಉದ್ಗಾರ ತೆಗೆದು ಕವನ ರಚಿಸಿದ:
”ಹಾಕಿದ ಜನಿವಾರವ ಸದ್ಗುರುನಾಥ
ಹಾಕಿದ ಜನಿವಾರವ ನೂಕಿದ ಭವ ಭಾರವ
ಲೋಕದಿ ಬ್ರಹ್ಮಜ್ಞಾನ ನೀ ಪಡೆಯೆಂದು.”
ಅವರೀರ್ವರ ಸಂಬಂಧ ಗಾಢವಾಗಿ ಕೊನೆಯ ವರೆಗೆ ಉಳಿಯಿತು.

ಆಧ್ಯಾತ್ಮದ ಕಡೆಗೇ ಒಲವು ಇದ್ದ ಶರೀಫರು ಊರೂರು ತಿರುಗುತ್ತಿದ್ದರು. ತಂದೆ ತಾಯಿಗಳು ಚಿಂತೆಗೀಡಾಗಿ ಕುಂದುಗೋಳದ ಫಕೀರಸಾಹೇಬರ ಮಗಳು ಫಾತಿಮಾಳೊಂದಿಗೆ ಮದುವೆ ಮಾಡಿದರು. ಸ್ವಲ್ಪ ಸಮಯದ ನಂತರ ಲತ್ತುಮಾ ಎಂಬ ಮಗಳೂ ಹುಟ್ಟಿದಳು. ಆದರೆ ಅನತಿ ಕಾಲದಲ್ಲೆ ಇಬ್ಬರೂ ಮರಣ ಹೊಂದಿದರು. ಹೆಂಡತಿ ಸತ್ತಾಗಲೂ ಶರೀಫರು ದುಃಖಿಸಲಿಲ್ಲ:
’ಮೋಹದ ಹೆಂಡತಿ ತೀರಿದ ಬಳಿಕ
ಮಾವನ ಮನೆಯ ಹಂಗಿನ್ಯಾಕೋ’
ಎಂದು ಹಾಡಿದರು.
ಕಾಲರಾದಿಂದ ಮಗಳ ಮರಣದ ನಂತರವೂ ನಿರ್ಲಿಪ್ತತೆ! ಸಂಸಾರ ಬಂಧನದಿಂದ ಮುಕ್ತನಾದೆನೆಂದು ಉರ್ದುದಲ್ಲಿ ಆಶು ಕವನ ರಚಿಸಿದರು:
’ದುಃಖಮೆ ಪಡಾ ಮನ್ ಸುಖ ನಹಿ ಮಾಯಾ
ಟಕತಿ ಮರನ ರಖವಾಲರೆ’ (ದುಃಖ ಸಾಗರದಲ್ಲಿ ಬಿದ್ದಿದೆ ಮನಸ್ಸು; ಮರಣ ತುಂಬಿದ ಮಾಯಾಮಯ ಸಂಸಾರದಲ್ಲಿ ಸುಖವೇ ಇಲ್ಲ,ಪರಮಾತ್ಮನೇ!) ಕುಡಿಯುವುದು, ತಿನ್ನುವುದು ಇದರಲ್ಲೆ ಕಾಲ ಹರಣ ಮಾಡಿದರೆ ಮರಣ ಸದಾ ನಮ್ಮನ್ನು ದೃಷ್ಟಿಸುವಾಗ ಭಗವಂತನರಿಯುವುದು ಯಾವಾಗ ಎಂದರು.
ಶರೀಫ ಸಹೇಬರು ನವಲಗುಂದದ ನಾಗಲಿಂಗ ಶಿವಯೋಗಿಗಳು ಮತ್ತು ಗರಗದ ಮಡಿವಾಳೇಶ್ವರರ ಜೊತೆ ತ್ರಿಮೂರ್ತಿಗಳಂತೆ ಊರೂರು ತಿರುಗಿದರು. ಗುರುವಿನ ಸಂಬಂಧವೂ ಇತ್ತು.”ಗುರುವೆಂದರೆ ನಿಜಕೆ ಈತನೇ, ದೊರೆಯೆಂದರು ನಿಜಕೆ ಈತನೇ, ಕಟಕಿ ನುಡಿಗೆ ಬಾಗದಿರುವನು–ಏನು ದಿಟ್ಟ!” ಎಂದು ಹಾಡಿದರು.
ಗೋವಿಂದ ಭಟ್ಟ ಗುರುಗಳನ್ನು ಅವರು ಸಾಯುವ ವರೆಗೆ ಸೇವೆ ಮಾಡಿದರು. ನೂರಾರು ಕವಿತೆಗಳನ್ನು ರಚಿಸಿದರು.

+++
ಶರೀಫರ ಅನೇಕ ಕವಿತೆಗಳು ಅವರ ಬಾಳಿನ ಘಟನೆಗಳ ಕಾರಣವಾಗಿ ಹುಟ್ಟಿದವು ( topical) ಎಂಬ ಮಾತಿದೆ. ಘಟನೆಗಳನ್ನು ಆಧರಿಸಿ ಪದ್ಯಗಳು ಹುಟ್ಟಿದವೋ ಅಥವಾ ಪದ್ಯವನ್ನು ನೋಡಿ ಜನ ಕಥೆ ಕಟ್ಟಿದರೋ ಹೇಳುವಂತಿಲ್ಲ. ನಂತರದ ಅನೇಕ ಪದ್ಯಗಳನ್ನೋದಿದಾಗ ಈ ಪ್ರಶ್ನೆ ಉದ್ಭವಿಸುತ್ತದೆ. ಆದರೆ ಅವರ ಅನೇಕ ಪದ್ಯಗಳು ಆಶು ಕವನಗಳು ಎನ್ನುವದರಲ್ಲಿ ಸಂದೇಹವಿಲ್ಲ. ಉದಾಹರಣೆಯಾಗಿ ಈ ಮೊದಲೇ ಉಲ್ಲೇಖಿಸಿದ ಉರ್ದು ಕವನಗಳು ಅಂಥವೇ.
ಇನ್ನೊಂದು ಪದ್ಯ. ಶರೀಫರನ್ನು ಮೆಚ್ಚಿಕೊಂಡ ಚೆಲುವೆಯೊಬ್ಬಳು ಅವರು ಕಾರಡಿಗೆಯ ಶಾಲೆಯಿಂದ ಎಂದಿನಂತೆ ಊರಿಗೆ ಮರಳುವಾಗ ಒಂದು ರಾತ್ರಿ ಕತ್ತಲೆಯಲ್ಲಿ ಎದುರಾಗಿ ತನ್ನ ಮನಸ್ಸಿನ ಮಾತು ಹೇಳಿಕೊಂಡಾಗ ಬರೆದ ಕವಿತೆಯೇ ’ಹಾವು ತುಳಿದೆನೇ ಮಾನಿನಿ’ ಎನ್ನುವ ರಚನೆ.
”ಹಾವು ತುಳಿದೆನೇ/ ಹಾವು ತುಳಿದು ಹಾರಿನಿಂತೆ/ ಜೀವ ಕಳವಳಿಸಿತೇ ಗೆಳತಿ” ಎಂದು ಪ್ರಾರಂಭ ಮಾಡುತ್ತಾರೆ ಆ ಕವಿತೆಯಲ್ಲಿ. ಆಕೆಗೆ ಸಾಂತ್ವನ ಹೇಳಿ ನುಂಗ ಬಂದಿದ್ದ ಮೋಹದಿಂದ ಪಾರಾದೆ ಅಂತ ಕೊನೆಯಲ್ಲಿ ಹೇಳುತ್ತಾರೆ:
”ದೇವಾ ನೀನೇ ಗತಿಯೋ ಎಂದೆ … ಹಾವಿನ
’ಶಿರವ ಮೆಟ್ಟಿದೆ ಶಿವನ ದಯದಿ.”
ಇದೇ ತರಹದ ಅನೇಕ ಪ್ರಾಣಿ ಪ್ರತೀಕಗಳು ಅವರ ಕವನಗಳಲ್ಲಿ ಸಿಗುತ್ತವೆ. ಚೋಳು (ಚೇಳು), ಕುದುರೆ, ನರಿ, ನಾಯಿ ಎಲ್ಲವೂ ರೂಪಕಗಳಾಗುತ್ತವೆ. ಶರೀಫರು ಅನುಭಾವಿ ಕವಿ. ಲೌಕಿಕದ ಎಲ್ಲ ಬೆಡಗು ಬಿನ್ನಾಳಗಳನ್ನುಬಲ್ಲವರಾಗಿದ್ದರು. ತಮ್ಮ ಲೌಕಿಕ ಅನುಭವಗಳ ಸಾರವನ್ನು ತತ್ವಪದಗಳಲ್ಲಿ ಎರಕ ಹೊಯ್ದು ಹಾದಿ ಜನರಿಗೆ ತಲುಪಿಸಿದರು. ಎಲ್ಲ ಮತಗಳಬಗ್ಗೆ ಸಮನ್ವಯ ದೃಶ್ಟಿಯಿಂದ ನೋಡಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿ ಅಳಿಲು ಸೇವೆಯನ್ನು ಮಾಡಿದರು. ಉಳಿದ ಕವಿವರ್ಯರಂತೆ ಅವರನ್ನು ಹಿಂಬಾಲಿಸುವ ಅನುಯಾಯಿಗಳಿರಲಿಲ್ಲವೆಂತಲೇ ಪರಂಪರೆಯಾಗಲು ಸಾಧ್ಯವಿರಲಿಲ್ಲ. ಅದಲ್ಲದೆ ಅವರು ಬದುಕಿದ ಕಾಲವೂ ಪ್ರತಿಕೂಲವಾಗಿರಬೇಕು,ಎನ್ನುವುದು ಇನ್ನೊಂದು ಕಾರಣವಿರಬೇಕು.

ಶಿಶುನಾಳರ ಕವನಗಳ ಆಕರ್ಷಣೆ
ಬರಕೋ ಪದ ಬರಕೋ -ಜತೆಗೆ
ಅದರನ್ವಯ ತಿಳಕೋ;

ಗುರು ಗೋವಿಂದನ ಸ್ತುತಿ ಬರಕೋ
ಧರೆಯೊಳು ಶಿಶುನಾಳಾಧೀಶನ ಪಾದಕೆ
ಕರಕೊಂಡು ಹೋಗೋ ವರ ಪಡಕೋ.

ಅವರ ಕವನಗಳು ಬಾಯಿಂದ ಬಾಯಿಗೆ ಹರಿದು ಜನರನ್ನು ತಲುಪಿ ಪ್ರಸಿದ್ಧಿ ಪಡೆದವು. ಅವುಗಳನ್ನು ಅವರಂತೂ ಬರೆದಿಡಲಿಲ್ಲ. ಕುಂಬಾರ ಮುದುಕಪ್ಪ ಮತ್ತು ಆತನ ಮಗಳು ಬಸಮ್ಮ ಹಾಡಿದ ನಂತರ ಎಚ್ ಟಿ ಮಹಾಂತೇಶ ಶಾಸ್ತ್ರಿಗಳು ಸಂಗ್ರಹಿಸಿದ್ದನ್ನು ಗದುಗಿನ ಶಾಬಾದಿಮಠ ಬುಕ್ ಡಿಪೋ ಮುದ್ರಿಸಿ, ಮರುಮುದ್ರಣಮಾಡುತ್ತ ಬಂದುದು ತಿಳಿದು ಬರುತ್ತದೆ. ಕವಿಯ ಉತ್ತರ ಕರ್ನಾಟಕ ಭಾಷೆಯನ್ನು ಮತ್ತು ಅವರು ಉಪಯೋಗಿಸುವ ಅಸಾಮಾನ್ಯ ರೂಪಕಗಳನ್ನು ಅರ್ಥಮಾಡಿಕೊಳ್ಳಲು ಸಮಾನ್ಯ ಓದುಗನಿಗೆ ಬಹುಕಾಲ ಕಷ್ಟವಾಗಿರಬೇಕು. ಉದಾಹರಣೆಗಾಗಿ ’ಕೋಡಗನ ಕೋಳಿ ನುಂಗಿತ್ತ” ಕವನ. ಇಲ್ಲಿ ಕೋಡಗ ಎಂದರೆ ಚಂಚಲ ಮನಸ್ಸನ್ನು ಸೂಚಿಸುವ, ಟೊಂಗೆಯಿಂದ ಟೊಂಗೆಗೆ ಹಾರುವ ಮರ್ಕಟ. ಕೋಳಿಯೆಂದರೆ ಸೂರ್ಯೋದಯಕ್ಕೆ ಕೂಗುವ ಕೋಳಿ ಅಂದರೆ ಕತ್ತಲೆಯೆಂಬ ಅಜ್ಞಾನವನ್ನು ನುಂಗಿ ತಿಳುವಳಿಕೆಯನ್ನು ಬೆಳಗುವುದು. ಮುಂದಿನ ಚರಣದಲ್ಲಿ ನರ್ತಕಿಯ (ಪಾತರದವಳು) ಗತಿಗೆಡಿಸುವ ಶಕ್ತಿ ಮದ್ದಲಿಯಲ್ಲಿದೆ. ಲೌಕಿಕದಲ್ಲಿ ಎಷ್ಟೇ ದೊಡ್ಡ ವ್ಯಕ್ತಿತ್ವವನ್ನುಳ್ಳವನಾಗಿದ್ದರೂ ಶಿಷ್ಯನ ಮೋಹ ಅಥವಾ ಅಹಂಭಾವವನ್ನು ಗುರುವಿನ ಪಾದದ ಮಹಿಮೆ ನುಂಗಿಹಾಕುತ್ತದೆ ಎನ್ನುವ ತಾತ್ಪರ್ಯ! ಅದೇ ಅರ್ಥ ಉಳಿದ ರೂಪಕಗಳಾದ ಒನಕೆ-ಒರಳು, ಬೀಸುವ ಕಲ್ಲು-ಗೂಟಗಳಲ್ಲಿಯೂ ಇದೆ.
ಅವರ ಅನೇಕ ಪದ್ಯಗಳಲ್ಲಿ ಮೇಲಿಂದ ಮೇಲೆ ಸಂಖ್ಯೆಗಳು ಆರು (ಅರಿಷಡ್ವರ್ಗಗಳು), ಎಂಟು (ಮದಗಳು), ಮೂರು (ತ್ರಿಕರಣಗಳು, ದೇಹಗಳು) ಬರುತ್ತವೆ. ಮಾನವನಿಗೆ ಇಂದ್ರಿಯ ನಿಗ್ರಹ ಎಷ್ಟು ಮುಖ್ಯ, ಅದಿಲ್ಲದಿದ್ದರೆ ಕಾಮ ಆತನನ್ನು ಅವನತಿಗಿಳಿಸುತ್ತದೆ ಎನ್ನುವ ಸೂಚನೆಯನ್ನು ’ಕುಕ್ಷಿಯ ಕೆಳಗಿನ ಇಕ್ಷುವೆ ತಾನಾದ’ ಮಂಗವನ್ನು ಒಂದು ಕವಿತೆಯಲ್ಲಿ ವರ್ಣಿಸಿದರೆ ಇನ್ನೊಂದರಲ್ಲಿ ’ಶಿವನ ತೊಡೆಯ ಕೆಳಗಿರುವಂಥ ಕಪ್ಪೆ’ಯ ಪ್ರತಿಮೆಯಲ್ಲಿ ಅದನ್ನೇ ಸಂಕೇತಿಸುತ್ತಾರೆ. ಹುಚ್ಚು ನಾಯಿಯ ಪ್ರತಿಮೆಯಲ್ಲೂ ಅದೇ ವಸ್ತು ’ಇಳೆಯೊಳೆಲ್ಲರ ತೊಡೆ ಹಿಡಿಯುತ ಹಲ್ಲೊಳು ತಳಮಳಗೊಳಿಸಿತು ಹುಚ್ಚಿಡಿಸಿ’ ಎಂದು.

ದೇಹವೆನ್ನುವ ದೇವಾಲಯ
ಗುಡಿಯ ನೋಡಿರಣ್ಣಾ-ದೇಹದ
ಗುಡಿಯ ನೋಡಿರಣ್ಣಾ…
ಧೀರ ನಿರ್ಗುಣನ ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರಾಗಿರುತಿಹ
ಗುಡಿಯ ನೋಡಿರಣ್ಣಾ
ಎನ್ನುವಲ್ಲಿ ಬಸವಣ್ಣನವರ ’ಉಳ್ಳವರು ಶಿವಾಲಯವ ಮಾಡಿಹರು/ ನಾನೇನು ಮಾಡುವೆ ಬಡವನಯ್ಯಾ/ ಎನ್ನ ಕಾಲೇ ಕಂಬ ದೇಹವವೇ ದೇಗುಲ’ ಎನ್ನುವ ಭಾವವನ್ನು ಕಾಣುತ್ತೇವೆ. ’ಧರಣಿ ವಿಸ್ತಾರ ನೋಡಮ್ಮ’ ಎನ್ನುವ ಪದ್ಯದಲ್ಲಿ ಬರುವ ಸಾಲುಗಳಿವು: ”ಧರಣೀಶ ರಾಣಿ ಕರುಣದಿ ರಾಜ್ಯಕ/ ತರಿಸಿದ ಘನಚೋದ್ಯವೋ, ಚೀನಾದ ವಿದ್ಯವೋ’ ಇವು ಬ್ರಿಟಿಶ್ ರಾಣಿಕಕಾಲದಲ್ಲಿ ಬರೆದುದು. ಗಿರಣಿ ಶರೀರದ ವರ್ಣನೆಯೊಂದಿಗೆ ಯೋಗ ಸಾಧನೆಯ ಅಂಶಗಳನ್ನೂ ನುಡಿಯುತ್ತದೆ ಎನ್ನುತ್ತಾರೆ ವಿಮರ್ಶಕರು. ಶಿಶುನಾಳ ಋಷಿಯನ್ನು ಅದರಲ್ಲಿ ನೇಯ್ಗೆಗಾರನೆಂದು ಅರ್ಥೈಸುತ್ತಾರೆ.

ಅವಸಾನ – ’ಶರಣರ ಬದುಕನ್ನು ಮರಣದಲ್ಲಿ ನೋಡು’
೧೮೮೯ರಲ್ಲಿ ಅವಸಾನದ ಗಳಿಗೆ ಬಂದಾಗ ವಿಭೂತಿ ವೀಳ್ಯ ಆಚರಿಸಿ ದೇಹತ್ಯಾಗ ಮಾಡಲು ಬಯಸಿದರು. ಶರೀಫರಂಥ ದೊಡ್ಡವರಿಂದ ಪೂಜಿಸಿಕೊಳ್ಳಲು, ಅವರತಲೆಯನ್ನು ಕಾಲ ಮೇಲೆ ಇರಿಸಿಕೊಳ್ಳಲುಯಾವ ಜಂಗಮರೂ ಒಪ್ಪಲಿಲ್ಲ. ಕಡೆಗೆ ಅವರ ಮಾತು ಮೀರಲಾರದೆ ಹಿರೆಮಠ ಕರಿಬಸಯ್ಯನವರು ಹಿಂಜರಿಯುತ್ತ ಒಪ್ಪಿದರಂತೆ. ಅವರ ಇಚ್ಛೆಯ ಪ್ರಕಾರ ಅವರತಲೆಯ ಮೇಲೆ ಪಾದವಿಟ್ಟರಂತೆ. ಅಂತ್ಯಕ್ರಿಯೆ ಎರಡೂ ಮತಗಳ ವಿಧಿಯ ಪ್ರಕಾರ ಆಯಿತಂತೆ. ಈಗ ಶರೀಫರ ಗದ್ದುಗೆಯ ಎಡಭಾಗದಲ್ಲಿ ಮುಸಲ್ಮಾನರು ಕುರಾನದಿಂದ ಕಲಮಾ ಓದಿ ಸಕ್ಕರೆ ಓದಿಸಿ ಹಂಚುತ್ತಾರೆ; ಬಲಬದಿಗೆ ಹಿಂದುಗಳು ಹಣ್ಣು ಕಾಯಿ ಹೂ ಅರ್ಪಿಸಿ ಪೂಜಿಸುತ್ತಾರೆ. ಶಿಶುನಾಳ ಊರಲ್ಲಿ ಕಟ್ಟಿದ ಭವ್ಯ ಸಮಾಧಿಯ ಹತ್ತಿರ ಮುಸಲ್ಮಾನ ಮತ್ತು ಹಿಂದುಗಳು ಜೊತೆಯಾಗಿಯೇ ಶಿವರಾತ್ರಿಯ ಹುಣ್ಣಿವೆಯ ಆಸು ಪಾಸು ಮೂರು ದಿನಗಳ ಜಾತ್ರೆ ಆಚರಿಸುತ್ತಾರೆ. ಭಿನ್ನ ಮತೀಯರು ಕಲೆತು ಕೂಡುವದು ಈ ಆದಿ ’ಸಮನ್ವಯ ಕವಿಗೆ’ ಗೌರವ ಅರ್ಪಿಸಿದಂತೆಯೂ ಆಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಸಿ. ಅಶ್ವಥ್ ಅವರ ರಾಗ ಸಂಯೊಜನೆಯಿಂದ ಶರೀಫರ ಆಡಿಯೋ ಕೆಸೆಟ್ಟುಗಳಿಂದ ಶರೀಫರನ್ನು ಜನರು ಗುರುತಿಸುತ್ತಿದ್ದಾರೆ. ಅವರ ಜೀವನ ಚರಿತ್ರೆ ಹೇಳುವ ಸಿನಿಮಾ ಸಹ ಆಗಿದೆ.
ಶರೀಫರ ಜೀವನ ಮತ್ತು ’ಗೀತೆ’ಗಳ ಆಳ ಅಭ್ಯಾಸ ಮಾಡಿದ ಡಾ ಎನ್ ಎಸ್ ಲಕ್ಷ್ಮಿನಾರಾಯಣ ಭಟ್ಟರು ಹೇಳುವ ಪ್ರಕಾರ: ”ನೀತಿಬೋಧೆ ಮಾಡುತ್ತಲೇ ತಮ್ಮ ಪದಗಳಿಗೆ ಕಾವ್ಯದ ಹೊಳಪನ್ನು ನೀಡಿದ ಶರೀಫರ ಕೃತಿಗಳನ್ನು ಪುರಂದರ, ಕನಕರಂಥ ಹಿರಿಯ ಕೀರ್ತನಕಾರರ ಕೃತಿಗಳ ಜೊತೆ ಅಭ್ಯಾಸಮಾದುವ ಅಗತ್ಯವಿದೆ. ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಅವರಿಗೆ ಸಲ್ಲಬೇಕಾದ ಸ್ಥಾನವನ್ನು ನಾವು ಸಮರ್ಪಕವಾಗಿ ಗೊತ್ತು ಮಾಡಬೇಕಾಗಿದೆ.”

ಲೇಖನ: ಶ್ರೀವತ್ಸ ದೇಸಾಯಿ

ಈ ಲೇಖನಕ್ಕೆ ಸಹಾಯ ಮಾಡಿದ ಪುಸ್ತಕಗಳನ್ನು ಮತ್ತು ಅಮೂಲ್ಯ ಒದಗಿಸಿದ ಡಾ ಶಿವಪ್ರಸಾದ್, ಸರೋಜಿನಿ ಪಡಸಲಗಿ ಮತ್ತು ಡಾ C ನವೀನ್ ಅವರಿಗೆ ಋಣಿ.

ಭಕ್ತಿಪಂಥ ಮತ್ತು ಹರಿದಾಸರು; ಸಾಹಿತ್ಯ ಮತ್ತು ಸಂಗೀತ – ಲಕ್ಷ್ಮೀನಾರಾಯಣ ಗುಡೂರ್

ಸಂಪಾದಕೀಯ - ರಾಧಿಕಾ ಜೋಶಿ

ಶತಮಾನಗಳ ಹಿಂದೆ ಶರಣರ ದಾಸರ ಸಾಹಿತ್ಯದ ಚಳುವಳಿ ಪ್ರಾರಂಭವಾಗಿ ಸಮಾಜದ ಸಾಹಿತ್ಯದ ಸುಧಾರಣೆಯಾಯಿತು. ಅನಿವಾಸಿಯಲ್ಲಿ ಯುಗಾದಿಯ ಸಂಭ್ರಮದ ಜೊತೆ ಶುರುವಾದ ಸಂತರ ಸಾಹಿತ್ಯದ ಗೋಷ್ಠಿ ಅಲೆಯಾಗಿ ಸೆಲೆಯಾಗಿ ವಾರಾಂತ್ಯವಾರ ನಮ್ಮ ಮನೆಗಳಲ್ಲಿ ಹರಿಯುತ್ತಾ ಕುತೂಹಲದ ಚಳುವಳಿ ಶುರುವಾಗಿದೆ.
ಈ ವಾರ ಡಾ.ಗುಡೂರ್ ಅವರ ಲೇಖನ ದಾಸ ಸಾಹಿತ್ಯದ ಕೇವಲ ಒಂದು ಪರಿಚಯವಲ್ಲ ಒಂದು ಪ್ರಬಂಧ ಅಥವಾ ಸಂಶೋಧನಾ ಬರಹ ಎಂದರೆ ತಪ್ಪಾಗಲಾರದು.
ಓದುಗರಲ್ಲಿ ಕುತೂಹಲ, ಆಶ್ಚರ್ಯ ಎಲ್ಲಾ ನವರಸ ಭಾವನೆಗಳನ್ನು ಮೂಡಿಸುವ ಒಂದು ವಿವರವಾದ ವರದಿ.
ಸಾಹಿತ್ಯಕ್ಕೆ ತಕ್ಕಂತೆ ಸುಂದರ ಚಿತ್ರವನ್ನು ಒದಗಿಸಿದ ಡಾ. ಗುಡೂರ್ ಅವರಿಗೆ ಶರಣು

ತಪ್ಪದೆ ಕೆಳಗಿರುವ ಧ್ವನಿ ಸುರುಳಿಯನ್ನು ಕೇಳಿ. ಸುಶ್ರಾವ್ಯವಾಗಿ ಹಾಡಿರುವ ಶ್ರೀಮತಿ ಅನ್ನಪೂರ್ಣ ಆನಂದ್ ಅವರಿಗೆ ಧನ್ಯವಾದಗಳು.
*********************************************************************************
ಉತ್ಪನ್ನಾ ದ್ರಾವಿಡೇ ಸಾಹಂ ವೃದ್ಧಿಂ ಕರ್ನಾಟಕೇ ಗತಾ |  
ಭಕ್ತಿಪಂಥವು ದ್ರಾವಿಡದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಬೆಳೆಯಿತು
(ಪದ್ಮಪುರಾಣ ೧-೧೮)

೧೨ನೆಯ ಶತಮಾನದಲ್ಲಿ ಉಡುಪಿಯ ಹತ್ತಿರದ ಪಾಜಕ ಕ್ಷೇತ್ರದಲ್ಲಿ ಹುಟ್ಟಿ, ಅಖಂಡ ಅಧ್ಯಯನ ಮಾಡಿ, ದೇಶಾದ್ಯಂತ ಪರ್ಯಟನ ಮಾಡಿ ಉಡುಪಿಯಲ್ಲಿ ನೆಲೆಸಿದ ಆಚಾರ್ಯ ಮಧ್ವರು ಪ್ರತಿಪಾದಿಸಿದ ದ್ವೈತ ವೈಷ್ಣವ ತತ್ತ್ವ ಒಂದು ಹೊಸ ಪಂಥಕ್ಕೆ ಕಾರಣವಾಯಿತು. ಭಕ್ತಿಪಂಥ ಹೊಸದೇನಲ್ಲ, ಅದಾಗಲೇ ತಮಿಳುನಾಡು ಕರ್ನಾಟಕಗಳಲ್ಲಿ ಸಾಕಷ್ಟು ಪ್ರಚಲಿತವಾಗಿತ್ತು. ಆ ಸುತ್ತಮುತ್ತಲಿನ ಆರು ಶತಮಾನಗಳು ಭಕ್ತಿಪಂಥದ ಸುವರ್ಣಯುಗವೆಂದರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ, ಸಂಸ್ಕೃತದಲ್ಲಿ ಆಗಲೇ ಬರೆದು ಪ್ರಚಲಿತವಿದ್ದ ಅನೇಕ ಗ್ರಂಥಗಳನ್ನು, ತತ್ತ್ವಗಳನ್ನು ಸಾಮಾನ್ಯ ಮನುಷ್ಯನ ದಿನಬಳಕೆಯ ಭಾಷೆಗೆ ತಂದವರು ಈ ಕಾಲದಲ್ಲಿ ಕಂಡುಬರುತ್ತಾರೆ.

ಭಾರತದ ವಿವಿಧ ಭಾಗಗಳ ಭಕ್ತಿಪಂಥದ ಪ್ರಮುಖರು:
ತಮಿಳುನಾಡಿನ – ನಾಯನಾರರು ಮತ್ತು ಆಳ್ವಾರರು
ಕರ್ನಾಟಕದಲ್ಲಿ – ಶರಣರು ಮತ್ತು ಹರಿದಾಸರು
ಆಂಧ್ರಪ್ರದೇಶ – ತ್ಯಾಗರಾಜರು, ಅಣ್ಣಮಾಚಾರ್ಯ, ಭದ್ರಗಿರಿ ರಾಮದಾಸರು, ಪೋತನ,
ಮಹಾರಾಷ್ಟ್ರದಲ್ಲಿ – ಜ್ಞಾನದೇವ, ಮುಕ್ತಾಬಾಯಿ, ನಾಮದೇವ ಇತರ ಅಭಂಗ ಕೀರ್ತನಕಾರರು
ಗುಜರಾತಿನಲ್ಲಿ – ನರಸಿಂಹ ಮೆಹತಾ ಮತ್ತಿತರರು
ರಾಜಸ್ಥಾನ – ಮೀರಾಬಾಯಿ
ಉತ್ತರ ಪ್ರದೇಶ – ಕಬೀರ, ಸೂರದಾಸ, ತುಲಸಿದಾಸ
ಬಂಗಾಲದಲ್ಲಿ – ಕೃಷ್ಣ ಚೈತನ್ಯ, ಚಂಡೀದಾಸ, ಜಯದೇವಕವಿ

ಕರ್ನಾಟಕದ ಹರಿದಾಸ ಪಂಥ:
ಈ ಪಂಥದಲ್ಲಿ ಎರಡು ಮುಖ್ಯ ಬಣಗಳಿವೆ –
೧) ವ್ಯಾಸಕೂಟ: ಇದರಲ್ಲಿ ಇರುವವರು ಸನ್ಯಾಸಿಗಳು, ಸಂಸ್ಕೃತ ಪಾಂಡಿತ್ಯವುಳ್ಳವರು. ಕನ್ನಡದಲ್ಲಿ ದಾಸಸಾಹಿತ್ಯದ ರಚನೆಗೆ ಮೊದಲ ಹೆಜ್ಜೆಯಿಟ್ಟವರು.
೨) ದಾಸಕೂಟ: ಇವರು ಸಂಸಾರಿಗಳು; ಈ ಜಗತ್ತಿನಲ್ಲಿ ಇದ್ದುಕೊಂಡೇ ದಾಸಪಂಥದ ಜೀವನಕ್ಕೆ ಒಪ್ಪಿಸಿಕೊಂಡವರು.
ಹರಿದಾಸ ಎಂದರೆ ಮೊದಲು ಮನಸ್ಸಿಗೆ ಬರುವವರು ಎರಡನೆಯ ಗುಂಪಿಗೆ ಸೇರಿದವರು. ಪ್ರತಿದಿನ ಬೆಳಗ್ಗೆ ಶುಚಿರ್ಭೂತರಾಗಿ, ಸರಳ ಉಡುಗೆಯನ್ನುಟ್ಟು, ತಾಳ-ತಂಬೂರಿಗಳನ್ನು ಹಿಡಿದು ಹೊರಟು, ದೇವರ ನಾಮ ಸಂಕೀರ್ತನೆಗಳನ್ನು ಹಾಡಿ-ಕುಣಿದು ಬಂದರೆಂದರೆ ಆಯಿತು.

ಹರಿದಾಸರೆಲ್ಲರಲ್ಲೂ ಕಂಡುಬರುವ ಸಾಮಾನ್ಯ ಅಂಶಗಳು (common factors):
೧) ಭಕ್ತ ಮತ್ತು ದೇವರುಗಳ ಮಧ್ಯದ ಸಂಬಂಧ – ನಿರ್ವ್ಯಾಜ ಪ್ರೀತಿ / ಭಕ್ತಿ / ಸಮರ್ಪಣಗಳ ಮಿಶ್ರಣ
೨) ವೈಷ್ಣವ ಅದರಲ್ಲೂ ಮಾಧ್ವ ಸಂಪ್ರದಾಯ – ದ್ವೈತ ಪದ್ಧತಿ ಮುಖ್ಯ (ಬೇರೆಯವರೂ ಇದ್ದರು)
೩) ಹರಿದಾಸ ವೃತ್ತಿ / ಜೀವನ ಶೈಲಿ – ಮಧುಕರ ವೃತ್ತಿಯಿಂದ ಬಂದದ್ದು ಅಂದಿನದು ಅಂದಿಗೆ; ನಾಳೆಗಿಡದೆ, ಸಾಲ ಮಾಡದೆ, ಆಸೆಯಿಲ್ಲದೆ ಇರುವ ಬದುಕು. (ಮಧುಕರ ವೃತ್ತಿ ಎನ್ನದು ಬಲು ಚೆನ್ನದು.)
೪) ಜೀವನ ತತ್ತ್ವಗಳು, ವೈರಾಗ್ಯ, ವಿಷ್ಣುವಿನ ಅವತಾರಗಳು, ಮೋಕ್ಷದ ಗುರಿ – ಈ ವಿಷಯಗಳ ಕುರಿತು ರಚಿಸಿದ ಪದಗಳನ್ನು ಕನ್ನಡದಲ್ಲಿ ಹಾಡಿ ಹಂಚುವುದು.
೫) ಹರಿದಾಸ ದೀಕ್ಷೆ, ಅಂಕಿತಗಳ ಬಳಕೆ: ಉದಾಹರಣೆಗೆ – ಪುರಂದರವಿಟ್ಠಲ (ಪುರಂದರ ದಾಸರು), ವಿಜಯವಿಟ್ಠಲ (ವಿಜಯದಾಸರು) ಇತ್ಯಾದಿ ವಿಟ್ಠಲ ನಾಮಾಂಕಿತಗಳು; ಕಾಗಿನೆಲೆಯಾದಿಕೇಶವ (ಕನಕ ದಾಸರು), ಕೃಷ್ಣ (ವ್ಯಾಸರಾಜರು), ಹಯವದನ (ವಾದಿರಾಜರು), ವೇಣುಗೋಪಾಲ (ರಾಘವೇಂದ್ರರು).
೬) ಹೆಚ್ಚನವರು ಬ್ರಾಹ್ಮಣರು, ಆದರೆ ಎಲ್ಲರೂ ಅಲ್ಲ.
ಧನಿಕರು (ಪುರಂದರ ದಾಸರು), ಕಡು ಬಡವರು (ವಿಜಯ / ಗೋಪಾಲ ದಾಸರು)
ಉದ್ದಾಮ ಪಂಡಿತರು (ಜಗನ್ನಾಥ ದಾಸರು) ಅಥವಾ ವಿದ್ಯೆಯಿಲ್ಲದವರು (ಪ್ರಸನ್ನ ವೇಂಕಟ ದಾಸರು) ರೋಗಿ (ಮೋಹನ ದಾಸರು),

ಕಾಲಮಾನ:
ದಾಸಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ 12ನೆಯ ಶತಮಾನದಿಂದ 19ನೆಯ ಶತಮಾನದವರೆಗಿನ ಕಾಲವನ್ನು ಮೂರು ಘಟ್ಟಗಳಾಗಿ ವಿಂಗಡಿಸಬಹುದು. ನರಹರಿತೀರ್ಥರಿಂದ ಪುರಂದರ-ಕನಕದಾಸರವರೆಗಿನ ಅವಧಿ, ವಿಜಯದಾಸರಿಂದ ಜಗನ್ನಾಥದಾಸರವರೆಗಿನ ಅವಧಿ ಮತ್ತು ಅವರ ಶಿಷ್ಯ-ಪ್ರಶಿಷ್ಯರ ಅವಧಿ ಮುಖ್ಯವಾದುವು.

೧೩ ರಿಂದ ೧೫ನೆಯ ಶತಮಾನ:
ಅಚಲಾನಂದ ದಾಸರು ಮತ್ತು ನರಹರಿ ತೀರ್ಥರು ಮೊದಲ ಕನ್ನಡ ದಾಸಸಾಹಿತ್ಯದ ಹೆಸರುಗಳು.
ಶ್ರೀಪಾದರಾಜರು (ರಂಗವಿಠಲ) – ಕನ್ನಡ ಹಾಡುಗಳು ರಚನೆ ಮತ್ತು ದಿನನಿತ್ಯದ ಪೂಜೆಯಲ್ಲಿ ನೃತ್ಯ - ಸಂಗೀತ ಸಹಿತ ಹಾಡುಗಳ ಬಳಕೆಯನ್ನು ಆರಂಭಿಸಿದವರು.
ವ್ಯಾಸರಾಜರು (ಶ್ರೀಕೃಷ್ಣ): ವಿಜಯನಗರದ ಅರಸ ಕೃಷ್ಣದೇವರಾಯನ ಸಮಕಾಲೀನರು.
ವಾದಿರಾಜರು (ಹಯವದನ), ಪುರಂದರ ದಾಸರು, ಕನಕ ದಾಸರು (ಕಾಗಿನೆಲೆ ಆದಿಕೇಶವ), ವೈಕುಂಠ ದಾಸರು ಮುಂತಾದವರು.
೧೬ - ೧೭ನೆಯ ಶತಮಾನ:
ರಾಘವೇಂದ್ರ ತೀರ್ಥರು (ಧೀರವೇಣುಗೋಪಾಲ): ಪುರಂದರದಾಸರ ಕಾಲದ ನಂತರ ಸ್ವಲ್ಪ ಕಡಿಮೆಯಾಗಿದ್ದ ದಾಸಸಾಹಿತ್ಯವನ್ನು ಪುನರುಜ್ಜೀವನಗೊಳಿಸಿದವರು.
ವಿಜಯ ದಾಸರು (ವಿಜಯವಿಟ್ಠಲ), ಪ್ರಸನ್ನವೇಂಕಟ ದಾಸರು, ಹೆಳವನಕಟ್ಟೆ ಗಿರಿಯಮ್ಮ, ನರಸಿಂಹ ದಾಸರು, ಜಗನ್ನಾಥ ದಾಸರು, ಪಂಗನಾಮದ ತಿಮ್ಮಣ್ಣದಾಸರು, ಗೋಪಾಲದಾಸರು, ಮೋಹನದಾಸರು, ಮುಂತಾದವರು.
೧೮ ನೆಯ ಶತಮಾನದಿಂದ ಮುಂದೆ:
ಹಲವಾರು ದಾಸರುಗಳು – ಲಿಂಗಸೂಗೂರು ಯೋಗೇಂದ್ರ (ಪ್ರಾಣೇಶವಿಟ್ಠಲ), ಕರ್ಜಗಿ ದಾಸಪ್ಪ (ಶ್ರೀದವಿಟ್ಠಲ), ಗದ್ವಾಲ ಸುಬ್ಬಣ್ಣದಾಸರು (ಕೇಶವವಿಟ್ಠಲ), ಹುಂಡೇಕಾರದಾಸರು (ಶ್ರೀಶವಿಟ್ಠಲ), ಸುರಪುರದ ಭೀಮದಾಸರು (ಶ್ರೀಶಕೇಶವವಿಟ್ಠಲ), ಸಂತೆಬೆನ್ನೂರು ರಾಮಾಚಾರ್ಯರು (ಕಮಲಾಪತಿವಿಠಲ), ಗರ್ಗೆಶ್ವರಿ ಕೇಶವರಾಯರು (ಮಧ್ವೇಶವಿಠಲ), ಇನ್ನೂ ಹಲವಾರು ದಾಸರುಗಳು ಈ ಪರಂಪರೆಯನ್ನು ಮುಂದುವರೆಸಿದರು.

ಹರಿದಾಸ ಸಾಹಿತ್ಯ:
ಸಾಹಿತ್ಯ ರೂಪಗಳು – ವಚನ, ರಗಳೆ, ಚಂಪೂ, ಷಟ್ಪದಿ ಇತ್ಯಾದಿ ಛಂದೋಬದ್ಧ ರಚನೆಗಳು ಇದ್ದರೂ, ಸಂಗೀತವನ್ನು ಮುಖ್ಯವಾಗಿ ಇಟ್ಟುಕೊಂಡು ರಚಿಸಿದ ಸಾಹಿತ್ಯ ಕನ್ನಡದಲ್ಲಿ ಹರಿದಾಸ ಸಾಹಿತ್ಯ ಮೊದಲು.
ಕರ್ನಾಟಕದಲ್ಲಿ ಭಕ್ತಿಯ ಹೊನಲನ್ನು ಜನಸಾಮಾನ್ಯರ ಭಾಷೆ ಕನ್ನಡಕ್ಕೆ ತಂದ ಯಶಸ್ಸು ಶರಣರ ವಚನಗಳು ಮತ್ತು ದಾಸರ ಸಾಹಿತ್ಯಕ್ಕೆ ಸಲ್ಲುತ್ತದೆ. ಭಕ್ತಿಸಾಹಿತ್ಯದ ಮೂಲ ಉದ್ದೇಶವೇ ಜೀವನದ ಮೌಲ್ಯಗಳನ್ನು ತಿಳಿಸಿ ಸಾಮಾನ್ಯರ ಬದುಕನ್ನು ಉದಾತಗೊಳಿಸುವುದು. ಕನ್ನಡ ಸಾಹಿತ್ಯದಲ್ಲಿ ಈ ಉದ್ದೇಶ ಶಿವಶರಣರಿಂದಲೂ ಹರಿದಾಸರಿಂದಲೂ ಸಾಧಿತವಾಗಿರುವುದನ್ನು ಕಾಣುತ್ತೇವೆ. ವಚನಕಾರರ ಮೂಲ ಕಾಳಜಿ ಸಾಮಾಜಿಕವಾಗಿದ್ದರೆ, ದಾಸಸಾಹಿತ್ಯದ ಪ್ರಮುಖ ಧ್ಯೇಯ ಭಕ್ತಿಸಿದ್ಧಾಂತವಾಗಿತ್ತು ಅನ್ನುವುದು ಸ್ಪಷ್ಟ.

ಧರ್ಮದ ಮೂಲಕ ಸಮಾಜವನ್ನು ಕಾಣಲು, ತಿದ್ದಲು ಶರಣರು ಮತ್ತು ದಾಸರು ಈ ಅಗತ್ಯವನ್ನು ಮನಗಂಡರು. ಧರ್ಮ ಮುಖ್ಯ ಮಾಧ್ಯಮವಾದರೆ ಸಮಾಜ ಚಿಂತನೆ ಇವರ ಮುಖ್ಯ ಕಾಳಜಿಯಾಗಿದೆ. ಅಂಧಾಚರಣೆಯ ನಿರ್ಮೂಲನ, ವ್ಯಕ್ತಿತ್ವ ನಿರ್ಮಾಣ, ತನ್ಮೂಲಕ ಆರೋಗ್ಯಕರ ವಾತಾವರಣದ ನಿರ್ಮಾಣಕ್ಕೆ ಶರಣರು ಮತ್ತು ದಾಸರು ಯತ್ನಿಸಿದರು. ಈ ಯತ್ನದ ಕಾರಣವಾಗಿ ವಚನಗಳು, ಕೀರ್ತನೆಗಳು, ಸುಳಾದಿ ಮತ್ತು ಉಗಾಭೋಗಗಳು ಮೂಡಿಬಂದವು. ಭಕ್ತಿಸಿದ್ಧಾಂತದ ಜೊತೆಗೆ ಸಚ್ಚಾರಿತ್ರ್ಯ, ಸದಾಚಾರ ಹಾಗೂ ಸಾತ್ವಿಕ ಜೀವನದ ಕಡೆಗೂ ಈ ಸಾಹಿತ್ಯದ ಹರಿವಿದೆ. ಲೋಕ ನೀತಿಯ ಮಾತುಗಳಲ್ಲಿ ಸುಖಜೀವನದ ಸಂದೇಶ ನೀಡುವ ಮೂಲಕ ಸಾರ್ಥಕ ಬದುಕಿನ ಕರೆ ನೀಡಿದ್ದಾರೆ ಎನ್ನುವುದೂ ಸತ್ಯ.

ಹರಿದಾಸರ ಸಾಧನೆ ಮೂಲವಾಗಿ ಆಧ್ಯಾತ್ಮಿಕ ಪ್ರಪಂಚದಲ್ಲಿ ಆದರೂ ಅವರು ಸಾಮಾಜಿಕ ಜೀವನವನ್ನು ಕಡೆಗಣಿಸಿದವರಲ್ಲ. ಕಾವ್ಯ ಸೃಷ್ಟಿ ಮಾಡುವ ಕವಿ ಸಮಾಜದಿಂದಲೇ ಮೂಡಿ ಬಂದಿರುತ್ತಾನೆ, ಆದ್ದರಿಂದ ಸಮಾಜವನ್ನು ಬಿಟ್ಟು ಪ್ರತ್ಯೇಕವಾಗಿ ಉಳಿದ ಸಾಹಿತ್ಯಕ್ಕೆ ಇಲ್ಲಿ ಅಸ್ತಿತ್ವ ಇಲ್ಲ. ಕಾವ್ಯ ಸೃಷ್ಟಿಯ ಈ ಪ್ರಕ್ರಿಯೆಯಲ್ಲಿ ಸಮಾಜ ಮತ್ತು ಸಾಹಿತ್ಯಗಳ ಸಂಬಂಧ ಜೀವಂತವಾಗಿ, ಪರಸ್ಪರ ಪೂರಕವಾಗಿ ಇರಬೇಕಾದ ಅಗತ್ಯ ಇದೆ.

ದಾಸ ಸಾಹಿತ್ಯದ ಮೂಲ ತತ್ವ – ಧರ್ಮ – ಮೋಕ್ಷಗಳ ಪ್ರಚಾರ ನೆಲದ ಭಾಷೆಯಲ್ಲಿ ತಂದ ಕೆಲಸದಲ್ಲಿ ದಾಸರು ಮೊದಲಿನವರಲ್ಲ – ಬೌದ್ಧರು ಪಾಲಿಯಲ್ಲೂ, ಜೈನರು ಪ್ರಾಕೃತದಲ್ಲೂ, ಶರಣರು ಕನ್ನಡದಲ್ಲೂ ಆಗಲೇ ಶುರು ಮಾಡಿದ್ದ ಕಾರ್ಯವನ್ನೇ ಮುಂದುವರೆಸಿದವರು ಹರಿದಾಸರು. ಇವರಲ್ಲಿ ಅನೇಕರು ಸಂಸ್ಕೃತ ಪಂಡಿತರಾಗಿದ್ದೂ, ಗ್ರಂಥಗಳನ್ನು ರಚಿಸಿದ್ದೂ ಜನಸಾಮಾನ್ಯರಿಗೆ ತಲುಪಿಸುವುದಕ್ಕೋಸ್ಕರ ಕನ್ನಡವನ್ನು ಮಾಧ್ಯಮವಾಗಿಸಿಕೊಂಡು ರಚನೆಗಳನ್ನು ಮಾಡಿದರು.

ಈ ಮುಂಚೆ ಹೇಳಿದಂತೆ, ದಾಸ ಸಾಹಿತ್ಯದಲ್ಲಿ ಹಲವಾರು ರೀತಿಯ ರಚನೆಗಳಿವೆ – ಕೀರ್ತನೆಗಳು, ಸುಳಾದಿ, ಉಗಾಭೋಗಗಳು ಮುಖ್ಯವಾದವು. ಇವೆಲ್ಲ ರಚನೆಗಳು ಮೂಲವಾಗಿ ಸಂಗೀತಕ್ಕೆ ಒಳಪಡುವ ರೂಪದಲ್ಲಿವೆ. ಸುಳಾದಿ ಮತ್ತು ಉಗಾಭೋಗಗಳಿಗೆ ವಚನಸಾಹಿತ್ಯ ಪ್ರಕಾರದ ಪ್ರೇರಣೆ ಇರಬಹುದು ಎನ್ನುವ ಮಾತಿದೆ. ಇನ್ನು ಹಲವರ ಪ್ರಕಾರ ಶಿವಶರಣರ ವಚನಗಳು ಉಕ್ತಿಗಳು, ದಾಸಸಾಹಿತ್ಯ ಗೇಯ ಪ್ರಕಾರ - ಹೀಗಾಗಿ ಸಂಗೀತದ ಛಾಯೆ ಇರುತ್ತದೆ ಎನ್ನುವುದು. ಸುಳಾದಿ ಮತ್ತು ಉಗಾಭೋಗಗಳಲ್ಲಿ ಧಾರ್ಮಿಕ ವಿಚಾರಗಳು, ಆಧ್ಯಾತ್ಮಿಕ ತತ್ವಗಳು ಮತ್ತು ದೈವ ಸ್ತುತಿಗಳ ನಿರೂಪಣೆ ಇದೆ. ಭಕ್ತನಾದವನ ಆರ್ತಭಾವ ಮತ್ತೂ ಅಂತರಂಗದರ್ಶನವು ಆಗುತ್ತದೆ. ಇದಲ್ಲದೇ ಕನಕದಾಸರ ಹರಿಭಕ್ತಿಸಾರ, ಮೋಹನತರಂಗಿಣಿ ಮತ್ತು ಜಗನ್ನಾಥದಾಸರ ಹರಿಕಥಾಮೃತಸಾರದಂತಹ ದೊಡ್ಡ ಕೃತಿಗಳೂ ಇವೆ. ಸುವ್ವಿಪದ, ಕೋಲಾಟದ ಪದ, ಜೋ ಜೋ ಕೊರವಂಜಿ ಪದಗಳಂತಹ ಜಾನಪದ ಸಾಹಿತ್ಯಿಕ ರಚನೆಗಳೂ ಇವೆ.

ಹರಿದಾಸ ಸಾಹಿತ್ಯ ಮತ್ತು ಕನ್ನಡ: (ಆರ್ ರಾಮಕೃಷ್ಣ – ದಾಸಸಾಹಿತ್ಯ ದರ್ಶನ – ed. ಎಚ್ಚೆಸ್ಕೆ)
ಹರಿದಾಸರ ಸಾಹಿತ್ಯದ ಮಾಧ್ಯಮ ಕನ್ನಡವಾಯಿತು, ಅದರಲ್ಲೂ ನಡುಗನ್ನಡವೇ ಮುಖ್ಯವಾದರೂ, ಹೊಸಗನ್ನಡದ ಬಳಕೆಯಿದೆ.

ಸಂಸ್ಕೃತವಿದಲ್ಲೆಂದು ಕುಹಕ ತಿ-
ರಸ್ಕರಿಸಲೇನಹುದು ಭಕ್ತಿಪು-
ರಸ್ಕರದಿ ಕೇಳ್ವರಿಗೆ ಒಲಿವನು ಪುಷ್ಕರಾಕ್ಷ ಸದಾ ||
ಅಂದಿದ್ದಾರೆ ಜಗನ್ನಾಥ ದಾಸರು.

ಶರಣರಂತೆ ದಾಸರೂ ಕನ್ನಡವನ್ನು ಬಳಸಿ ಬೆಳೆಸಿದರು. ಹಲವಾರು ತರಹದ ಪ್ರಯೋಗಗಳನ್ನು ದಾಸ ಸಾಹಿತ್ಯದಲ್ಲಿ ಕಾಣಬಹುದು:
೧) ಕನ್ನಡದ ಕುರುಹಾದ ವ್ಯಂಜನಾಂತ ಪದಗಳಿಗೆ ಸ್ವರಾಂತ್ಯದ ಬಳಕೆ – ನಾನ್ – ನಾನು, ಪೆಣ್ – ಹೆಣ್ಣು, ಪಾಲ್ – ಪಾಲು, ಕೇಳ್ – ಕೇಳು,

೨) ಪಕಾರ ಶಬ್ದಗಳು ಹಕಾರಗಳಾಗಿ ಬದಲಾವಣೆ: ಪಕ್ಕಿ – ಹಕ್ಕಿ, ಪೆಣ್ಣು – ಹೆಣ್ಣು

೩) ಹೆಚ್ಚಿನವರು ಉತ್ತರ ಕರ್ನಾಟಕದವರಾಗಿದ್ದರಿಂದ, ಉತ್ತರ ಕರ್ನಾಟಕದ ಭಾಷಾವೈಶಿಷ್ಟ್ಯ (dialect) ದಾಸರ ರಚನೆಗಳಲ್ಲಿ ಬಳಕೆಯಾಗುತ್ತದೆ. ಉದಾ. ಕಂಡೀರ್ಯಾ, ತಂದೀರ್ಯಾ ಇತ್ಯಾದಿ

೪) ಛಂದಸ್ಸಿಗನುಗುಣವಾಗಿ ಪದಗಳ ಬದಲಾವಣೆ – ಘನ್ನ, ವಿಟ್ಠಲನ್ನ ಇತ್ಯಾದಿ ಸಜಾತೀಯ ಒತ್ತಕ್ಷರಗಳ ಬಳಕೆ.

೫) ಇನ್ನು ಮುದ್ದುಕೃಷ್ಣನ ಬಾಲಲೀಲೆಗಳನ್ನು ಹೇಳುವಾಗ ಮುದ್ದು ಮಾತಿನ ಬಳಕೆ ಬೇಕೇಬೇಕಲ್ಲ? ಗುಮ್ಮ, ಬೂಚಿ, ಮಮ್ಮು, ಅಮ್ಮಿ, ತಾಚಿ, ಪಾಚಿಕೊ ಇತ್ಯಾದಿ ಪದಗಳ ಬಳಕೆ ಹೇರಳವಾಗಿ ಕಾಣುತ್ತವೆ.

೬) ಸಂಸ್ಕೃತ ಪದಗಳ ಬಳಕೆ ಹರಿದಾಸರ ಸಂಸ್ಕೃತ ಪಾಂಡಿತ್ಯವನ್ನು ತೋರುತ್ತವೆ. ಅಲ್ಲದೇ ಸಾಕಷ್ಟು ಪದಗಳ ತದ್ಭವಗಳ ಉಪಯೋಗವನ್ನೂ ಕಾಣುತ್ತೇವೆ: ಉದಾ – ಬ್ರಹ್ಮ – ಬೊಮ್ಮ, ಸರಸ್ವತಿ – ಸರಸತಿ, ಮುಖ – ಮೊಗ, ವಿನಾಯಕ – ಬೆನಕ ಇತ್ಯಾದಿ.

೭) ಗಡಿಪ್ರದೇಶದಲ್ಲಿ ಸಹಜವಾಗಿಯೇ ಕಂಡುಬರುವ ಬೇರೆ ಭಾಷೆಯ ಪದಗಳ ಬಳಕೆ: ಮರಾಠಿ – ಛಪ್ಪನ್ನ ದೇಶಗಳು, ಬತ್ತೀಸು ರಾಗಗಳು ಮತ್ತು ಉರ್ದು – ಫಕೀರ, ಭಂಗಿ (ಭಾಂಗ್), ಲುಂಗಿ ಇತ್ಯಾದಿ.

ಕನ್ನಡವು ಎಳೆದಂತೆ ಬೆಳೆವ, ಸುಲಲಿತ ಭಾಷೆಯೆಂಬುದನ್ನು ದಾಸ ಸಾಹಿತ್ಯ ಸಾಧಿಸಿ ತೋರಿಸಿಕೊಟ್ಟಿದೆ. ಛಂದೋಬದ್ಧವಾದ, ಮಧುರ ಶಬ್ದಗಳ ಜೋಡಣೆಯಿಂದ, ಕನ್ನಡ ಭಾಷೆಯ ಬೆಳವಣಿಗೆಗೆ ತಮ್ಮ ಕೊಡುಗೆಯನ್ನು ಸಲ್ಲಿಸಿದ್ದಾರೆ.

ಹರಿದಾಸ ಸಾಹಿತ್ಯದ ಶೈಲಿ:
ಭಾಷೆ – ಭಾವಗಳ ಸಮರಸ ಸಂಯೋಜನೆಯೇ ಶೈಲಿ, ಕಾವ್ಯಕ್ಕೆ ರಸವನ್ನು ತುಂಬುತ್ತದೆ. ಚಲುವಾದ ಭಾವನೆಗೆ ಚಲುವಾದ ಭಾಷೆಯೇ ಜೊತೆಯಾಗಬೇಕು. ಬರೆಯುವವರಿಗೆ ಭಾಷೆಯ ಮೇಲೆ ಸಮರ್ಪಕ ಹಿಡಿತ ಬೇಕು, ಇಲ್ಲದಿದ್ದರೆ ಮನದ ಆಲೋಚನೆಯನ್ನು ಅಂದುಕೊಂಡಂತೆ ಹಂಚಲಾಗದು. ಎಲ್ಲ ದಾಸರೂ ಈ ವಿಷಯದಲ್ಲಿ ಪಾಂಡಿತ್ಯ ಇದ್ದವರೆಂದೇ ಹೇಳಬಹುದು. ಆದಿಪ್ರಾಸ (ಎರಡನೆಯ ಅಕ್ಷರ ಪ್ರಾಸ), ಅಂತ್ಯಪ್ರಾಸ, ಮತ್ತೂ ಮಧ್ಯಪ್ರಾಸಗಳು ರಚನೆಯ ಅಂದವನ್ನು ಹೆಚ್ಚಿಸುತ್ತವೆ. ಸಂಗೀತದ ಸಹಕಾರವೂ ಸೇರಿ ರಸಮಯವಾಗುತ್ತವೆ.

ಈಶ ನಿನ್ನ ಚರಣಭಜನೆ ಆಶೆಯಿಂದ ಮಾಡುವೇನು
ದೋಷರಾಶಿ ನಾಶ ಮಾಡೊ ಶ್ರೀಶ ಕೇಶವ ||

ಇನ್ನು ಭಾವಗಳು:
ಈಶ್ವರನನ್ನು ಬರಿಯ ಬುದ್ಧಿಗಮ್ಯನೆಂದು ದಾಸರು ತಿಳಿಯದೇ, ಅನುಭಾವದ ಮಾರ್ಗವನ್ನು ಹಿಡಿದರು. ಹೃದಯದಲ್ಲಿ ಉಕ್ಕಿಬಂದ ಭಾವನೆಗಳನ್ನು ನಿಸ್ಸಂಕೋಚವಾಗಿ ಹಾಡಿದರು. ಇದು ದಾಸರ ಹಾಡುಗಳ ವಿಶಿಷ್ಟವಾದ ಲಕ್ಷಣ. ಇಲ್ಲಿ ಭಕ್ತ - ಭಗವಂತನ ಅನಿರ್ವಚನೀಯ ಸಂಬಂಧ ವ್ಯಕ್ತವಾಗುತ್ತದೆ. ದೇವರು ದಾಸರಿಗೆ ತಾಯಿ-ತಂದೆಯೂ ಹೌದು, ಮಿತ್ರನೂ ಹೌದು, ಒಂದು ರೀತಿಯಲ್ಲಿ ಒಡೆಯನೂ ಹೌದು. ಅವನನ್ನು ಗೌರವಿಸಲು, ಮುದ್ದು ಮಾಡಲು, ಹೊಗಳಲು ಅಷ್ಟೇ ಅಲ್ಲ ಬೈಯಲೂ ಹಿಂಜರಿಯಲಾರರು.

ಕೃಷ್ಣನ ಬಾಲಲೀಲೆಗಳು, ಜೀವನ, ಉಪದೇಶ, ತಾಯಿಯ ಮಮತೆ, ಮಗುವಿನ ಆಟ (ಸ್ವಭಾವೋಕ್ತಿ) – ತಾನೇ ತಾಯಾಗಿ, ಮಗುವಾಗಿ, ಪ್ರಿಯೆಯಾಗಿ, ಕಾಡಿಸಿಕೊಂಡ ಗೋಪಿಯಾಗಿ, ದಾಸನಾಗಿ ನಿಂತು ಬರೆದ ಪದ್ಯಗಳು.
ಶೃಂಗಾರ – ಕೃಷ್ಣನ ರಾಸಲೀಲೆಗಳ ವಿವರವುಳ್ಳ ಗೀತೆಗಳಲ್ಲಿ ಇದು ಮುಖ್ಯ. ಮೆಲ್ಲ ಮೆಲ್ಲನೇ ಬಂದನೇ ಗೋಪೆಮ್ಮ ಕೇಳೇ.. ಗಲ್ಲಕೆ ಮುದ್ದು ಕೊಟ್ಟು ನಿಲ್ಲದೆ ಓಡಿಪೋದ
ದೇವರ ಅವತಾರ ಕ್ರಿಯೆಗಳು- ಬಾರೆ ಗೋಪಿ ಬಾಲಯ್ಯ ಅಳುತಾನೆ ಅನ್ನುವ ಅನೇಕ ಕೃತಿಗಳಲ್ಲಿ ದಶಾವತಾರದ ವರ್ಣನೆ ಕಂಡುಬರುತ್ತದೆ.
ಆಶ್ಚರ್ಯ, ಪ್ರಶ್ನೆ: ಏಕೆ ಮನವಿತ್ತೆ ಲಲಿತಾಂಗಿ ಎಂದು ಲಕ್ಷ್ಮಿಯನ್ನು ಕಾರಣ ಕೇಳುತ್ತಾರೆ.
ದೈನ್ಯತೆ, ಸಮರ್ಪಣಾ ಭಾವಗಳು – ದಾಸ ಎಂದರೇ ಸಂಪೂರ್ಣ ಸಮರ್ಪಣೆಯನ್ನು ನಂಬಿದವನು, ಶರಣಾಗತ ಅನ್ನುವುದನ್ನು ಪ್ರತಿಬಿಂಬಿಸುವ ಪದಗಳು. ಉದಾ: ನಿನ್ನನ್ನೆ ನಂಬಿದೆ ಕೃಷ್ಣಾ, ಕಂಡು ಕಂಡು ನೀ ಎನ್ನ ಕೈಬಿಡುವರೇ ಕೃಷ್ಣಾ (ವಾದಿರಾಜರು); ದೀನ ನಾನು ಸಮಸ್ತ ಲೋಕಕೆ ದಾನಿ ನೀನು
ವೈರಾಗ್ಯ – ನೀರೊಳಗಿನ ಕಮಲದೆಲೆಯಂತೆ ಬದುಕಬೇಕೆಂಬುವ ಆಶಯ ಕಾಣುತ್ತದೆ. ಉದಾ: ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ (ಪುರಂದರ ದಾಸರು); ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ
ಸಾಮಾಜಿಕ ಅನ್ಯಾಯಗಳ / ಕಂದಾಚಾರಗಳ ವಿರುದ್ಧ ಎತ್ತಿದ ಧ್ವನಿ; ಇದರಲ್ಲಿ ಸುತ್ತಲೂ ಸಮಾಜದಲ್ಲಿ ಕಂಡುಬಂದ ಢಂಬಾಚಾರಗಳ ಬಗ್ಗೆ ದಾಸರಿಗಿದ್ದ ದೃಷ್ಟಿಯನ್ನು ಕಾಣಬಹುದು – ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ …; ಉದರ ವೈರಾಗ್ಯವಿದು; ನಿಂದಕರಿರಬೇಕು ಊರೊಳಗೆ
ನಿಂದಾ ಸ್ತುತಿ – ದಾಸರು ತಮ್ಮ frustration ಅನ್ನು ದೇವರಿಗೆ ಬೈದು ತೀರಿಸಿಕೊಂಡರು ಅನ್ನುವಂತೆ ಮೇಲುನೋಟಕ್ಕೆ ಕಂಡರೂ, ಈ ಪದಗಳು ಸ್ತುತಿಗಳೇ. ಉದಾ: ಆರು ಬದುಕಿದರಯ್ಯ ಹರಿ ನಿನ್ನ ನಂಬಿ, ಕರುಣಾಕರ ನೀನೆಂಬುವದ್ಯಾತಕೋ ಭರವಸೆಯಿಲ್ಲೆನಗೆ
ಹಾಸ್ಯ / ವಿಡಂಬನೆ: ಹಾಸ್ಯದ ಮೂಲಕ ದೇವರ ಸ್ತುತಿ ಮಾಡುವ ಪದಗಳು. ಹ್ಯಾಂಗೆ ಕೊಟ್ಟನು ಹೆಣ್ಣ ಸಾಗರನು ಈ ವರಗೆ, ಶೃಂಗಾರ ಪುರುಷರು ಬಹು ಮಂದಿಯಿರಲು; ಒಲಿದೆಯಾತಕಮ್ಮ ಲಕುಮಿ ವಾಸುದೇವಗೆ
ಚಿತ್ರಕವಿತೆ – descriptive poetry – ಆಗಿಹೋದ ಘಟನೆಗಳನ್ನು ಕಣ್ಣಮುಂದೆ ಕಟ್ಟುವಂತೆ ಬಣ್ಣಿಸುವುದು ಅದು ದಾಸರ ಪದಗಳ ಒಂದು ಸ್ಟ್ರಾಂಗ್ ಪಾಯಿಂಟ್ ಅನ್ನುವುದರಲ್ಲಿ ಅನುಮಾನವೇ ಇಲ್ಲ.
ಗ್ರಾಮ್ಯ, ಬಳಕೆಯ ಭಾಷೆಯ ಬಳಕೆ – ಕನಕ ದಾಸರ ದೇವಿ ನಮ್ಮ ದ್ಯಾವರು ಬಂದಾನ ಬನ್ನೀರೆ ನೋಡ ಬನ್ನೀರೆ (ಡೊಳ್ಳಿನ ಪದದ ಧಾಟಿಯಲ್ಲಿ)
ಗಾದೆಮಾತು / ನುಡಿಗಟ್ಟುಗಳ ಬಳಕೆ: ರೊಕ್ಕ ಎರಡಕ್ಕೂ ದುಃಖ ಕಾಣಕ್ಕ; ಕುನ್ನಿ ಕಚ್ಚಿದರಾನೆ ಅಳುಕುವುದೇ
ತತ್ತ್ವಪದಗಳು – ಮುಖ್ಯವಾಗಿ ಕನಕದಾಸರ ಮುಂಡಿಗೆಗಳು ಮತ್ತು ಕೃತಿಗಳು ಜಟಿಲವಾದುವು – ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಇತ್ಯಾದಿ.

ಈಗಲೂ ಖಂಡಿತ ಒಪ್ಪುವ ಮಾತುಗಳನ್ನು ಹೇಳಿದ್ದಾರೆ –
ಪಿತ ಮಾತೆ ಸತಿಸುತರ ಅಗಲಿ ಇರಬೇಡ
ಯತಿಯಾಗಿ ಆ..ರಣ್ಯ ಚರಿಸಲು ಬೇಡ
ವ್ರತನೇಮವ.. ಮಾಡಿ ದಣಿಯಲೂ ಬೇಡ
ಸತಿಯಿಲ್ಲದವಗೆ ಸದ್ಗತಿಯಿಲ್ಲವೋ ಮೂಢ (ಪುರಂದರ ದಾಸರು)

ಒಳ್ಳೆಯ ಕೆಲಸಕ್ಕೆ ಕಾರಣವಾದದ್ದಕ್ಕೆ “ಹೆಂಡತಿ ಸಂತತಿ ಸಾವಿರವಾಗಲಿ” ಎಂದು ಹೊಗಳಿದ್ದಾರೆ.

ಹರಿದಾಸ ಸಾಹಿತ್ಯ ಮತ್ತು ಸಂಗೀತ:
ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ,
ಕುಳಿತು ಪಾಡಲು ನಿಲುವ, ನಿಂತರೆ ನಲಿವ,
ನಲಿದರೆ ಒಲಿವೆ ನಾ ನಿಮಗೆಂಬ | (ಹರಿಕಥಾಮೃತಸಾರ - ಜಗನ್ನಾಥ ದಾಸರು)

ಕೀರ್ತನೆಗಳು ಸಂಗೀತಪ್ರಧಾನವಾದ ರಚನೆಗಳು, ದೇವರು ಸಂಗೀತ – ನೃತ್ಯಗಳಿಗೆ ಒಲಿಯುವನೆಂಬ ನಂಬುಗೆಯಿಂದ ಬೆಳೆದು ಬಂದ ಸಾಹಿತ್ಯ. ಹರಿದಾಸರ ಜೀವನಶೈಲಿಯೂ ಇದಕ್ಕೆ ಅನುಗುಣವಾಗಿಯೇ ಇತ್ತು (ಮಧುಕರ ವೃತ್ತಿ ಎನ್ನದು – ಪುರಂದರ ದಾಸರು).

ಇಲ್ಲಿ ನೆನಪಿಸಿಕೊಳ್ಳಬೇಕಾದ ಹೆಸರು ಶ್ರೀಪಾದರಾಜರದ್ದು. ಇವರು ಕನ್ನಡದಲ್ಲಿ ಸರಳ ರಚನೆಗಳನ್ನು ಮಾಡಿದ್ದಲ್ಲದೇ, ಅವನ್ನು ಸಂಗೀತಕ್ಕೆ ಅಳವಡಿಸಿ ದಿನನಿತ್ಯದ ಪೂಜೆಯ ವೇಳೆಯಲ್ಲಿ ಬಳಕೆಯಲ್ಲಿ ತಂದರು ಸಹ.

ತತ್ತ್ವೋಪದೇಶ, ನೈತಿಕ ಉಪದೇಶಗಳಿಗೆ ಮಾಧ್ಯಮವಾಗಿ ಸಂಗೀತವನ್ನು ಹೊರತಂದ ಶ್ರೇಯ ಪುರಂದರ ದಾಸರದ್ದು. ಕಾವ್ಯವಾದರೆ ಪಂಡಿತರಲ್ಲಿ ಮಾತ್ರ ಉಳಿದು ಹೋಗಬಹುದು ಅನ್ನುವ ಯೋಚನೆಯಿಂದ ಸಂಗೀತವನ್ನು ಆರಿಸಿಕೊಂಡರು ಅನ್ನವುದು ಸರಿಯೇ. ಹಾಡುಗಳು ಬಾಯಿಂದ ಬಾಯಿಗೆ ಕಲಿತು ಬೆಳೆಯುತ್ತವೆ, ಉಳಿಯುತ್ತವೆ ಅನ್ನುವುದೇ ಅವರ ವಿಚಾರವಾಗಿತ್ತು. ದಾಸರ ಗೆಜ್ಜೆಕಟ್ಟಿಕೊಂಡು ಕುಣಿಯುವ ಜೀವನ ಶೈಲಿಗೆ, ಪ್ರಾಸಬದ್ಧ ಸಂಗೀತಮಯ ಹಾಡುಗಳು ಸಮರ್ಪಕ ಜೊತೆಯಾದವು.

ತಾಳ ಬೇಕು ತಕ್ಕ ಮೇಳ ಬೇಕು…
ಯತಿಪ್ರಾಸವಿರಬೇಕು, ಗತಿಗೆ ನಿಲ್ಲಿಸಬೇಕು,
ರತಿಪತಿಯ ಪಿತನೊಳು ಅತಿಪ್ರೇಮವಿರಬೇಕು.. (ಗುರುಮಧ್ವಪತಿ)

ಸಂಗೀತಕ್ಕೆ ಅಳವಡಿಸಬೇಕೆಂದರೆ, ಛಂದಸ್ಸುಗಳ ಬದ್ಧತೆ ಬೇಕು. ಆದಿ, ಅಂತ್ಯ ಅಥವಾ ಮಧ್ಯ ಪ್ರಾಸಗಳ ಬಳಕೆಯಿರಬೇಕು. ದ್ವಿಪದಿ, ಚೌಪದಿಗಳ, ಷಟ್ಪದಿಯ ಬಳಕೆ ಕಾವ್ಯದ ಅಂದವನ್ನು ಹೆಚ್ಚಿಸುತ್ತವೆ. ದಾಸರ ರಚನೆಗಳು ಪಲ್ಲವಿ, ಅನುಪಲ್ಲವಿ ಹಾಗೂ ಚರಣಗಳು ಈ ಕ್ರಮದಲ್ಲಿದ್ದು, ಪಲ್ಲವಿ ತತ್ತ್ವವನ್ನೂ, ಅನುಪಲ್ಲವಿ ವಿವರಣೆಯನ್ನೂ ಕೊಟ್ಟರೆ, ಚರಣಗಳು ಉದಾಹರಣೆಗಳೊಂದಿಗೆ ಮೇಲಿನದನ್ನು ಸಮರ್ಥಿಸುತ್ತವೆ ಅನ್ನಬಹುದು.

ಸಂಗೀತಾಭ್ಯಾಸಿಗಳಿಗೆ ಅನುಕೂಲವಾಗುವಂತೆ ಗೀತೆಗಳನ್ನು ರೂಢಿಗೆ ತಂದ ಶ್ರೇಯಸ್ಸು ಪುರಂದರ ದಾಸರಿಗೆ ಸಲ್ಲುತ್ತದೆ. ಲಂಬೋದರ ಲಕುಮಿಕರ ಅನ್ನುವ ರಚನೆಯಿಂದಲೇ ಅಲ್ಲವೆ ಪ್ರತಿಯೊಬ್ಬ ಸಂಗೀತಾಭ್ಯಾಸಿ ಆರಂಭಿಸುವುದು?
ಜೊತೆಯಲ್ಲಿ ಪುರಂದರ ದಾಸರು ಆಗ ಬಳಕೆಯಲ್ಲಿದ್ದ ತಾಳಗಳನ್ನು ಸರಳೀಕರಿಸಿ, ಸಪ್ತತಾಳಗಳನ್ನು ಬಳಕೆಗೆ ತಂದರು. ಖಂಡಛಾಪು, ಮಿಶ್ರಛಾಪು ಈ ಎರಡು ಛಾಪುತಾಳದ ವಿಧಗಳಲ್ಲಿ ಅನೇಕ ಕೀರ್ತನೆಗಳು ಇವೆ. ಮಾಯಾಮಾಳವ ಗೌಳ ರಾಗವನ್ನು ಆಧರಿಸಿ ಸರಳೀ ಸ್ವರಗಳು ಮತ್ತು ಜಂಟಿ ಸ್ವರಗಳನ್ನು ಹಾಕಿಕೊಟ್ಟು, ಹೊಸತಾಗಿ ಕಲಿಯುವವರಿಗೆ ಸುಲಭವಾಗಿಸಿದ ಶ್ರೇಯವೂ ಪುರಂದರ ದಾಸರದ್ದೇ ಅನ್ನಲಾಗಿದೆ. ಪುರಂದರ ದಾಸರ ಈ ಕಾರ್ಯದಿಂದಲೇ, ಅವರನ್ನು "ಕರ್ನಾಟಕ ಸಂಗೀತದ ಪಿತಾಮಹ" ಅನ್ನುವುದು ಸಹಜವೇ.

ಅನೇಕ ರಾಗಗಳು ಆಗ ಪ್ರಚಲಿತವಾಗಿ ಇದ್ದಿರಬಹುದಾದರೂ, ದಾಸರು ಜಾನಪದ ಮೂಲವಾದ ರಾಗಗಳನ್ನು ತಮ್ಮ ಕೀರ್ತನೆಗಳಿಗೆ ಬಳಸಿಕೊಂಡರು. ಅಲ್ಲಿ ಹೆಸರಿಸಿದ ಈ ರಾಗಗಳ ಸಂಖ್ಯೆ ೧೦೦ನ್ನು ಮೀರಲಿಕ್ಕಿಲ್ಲ; ಇದಕ್ಕೆ ಕಾರಣ ರಾಗ ಕ್ಲಿಷ್ಟವಾದರೆ ಜನಸಾಮಾನ್ಯರ ಬಾಯಲ್ಲಿ ಹಾಡು ಉಳಿಯಲಿಕ್ಕಿಲ್ಲ ಅನ್ನುವುದಿರಬಹುದು. ಈಗೀಗ ವಿದ್ವಾಂಸರು ಹತ್ತು ರಾಗಗಳಲ್ಲಿ ಒಂದೇ ಕೃತಿಯನ್ನು ಹಾಡುವುದು ಕಂಡುಬರುತ್ತದೆ. ಅವು ಮೆಚ್ಚುಗೆಯನ್ನೂ ಗಳಿಸುತ್ತವೆ.

ಗೀತ – ವಾದ್ಯಗಳೊಂದಿಗೆ, ನೃತ್ಯವೂ ಸಂಗೀತದ ಒಂದು ಅಂಗವಾಗಿಯೇ ಬೆಳೆದುಬಂದಿತ್ತಾದರೂ, ಮುಂದೆ ನೃತ್ಯ – ಸಂಗೀತಗಳು ಬೇರೆಯಾದವು ಅನ್ನುವುದು ವಿದ್ವಾಂಸರ ಅಭಿಪ್ರಾಯ. ದಾಸರ ರಚನೆಗಳಲ್ಲಿ ಇರುವ ಬಾಲಕೃಷ್ಣನ ಲೀಲೆಗಳು ಮುಖ್ಯವಾಗಿ ನೃತ್ಯಕ್ಕೆ ತಕ್ಕ ಸಾಮಗ್ರಿಯನ್ನು ಒದಗಿಸುತ್ತವೆ. ದಾಸರುಗಳೇ ಗೆಜ್ಜೆಕಟ್ಟಿಕೊಂಡು, ಕುಣಿದು ಹಾಡಿ ಹಂಚಿದರು. ಹಾಗಾಗಿ ನೃತ್ಯ ಆ ಕೀರ್ತನೆಗಳ ಮೂಲ ಉದ್ದೇಶವಲ್ಲದಿದ್ದರೂ, ಗೀತ – ವಾದ್ಯಗಳ ಜೊತೆಗೂಡಿದಾಗ ಕೀರ್ತನೆಗಳ ಭಾವ ಸಶಕ್ತವಾಗಿ ತೋರಿ, ಪರಿಣಾಮಕಾರಿಯಾಯಿತು.

ತಪ್ಪದೆ ಕೆಳಗಿರುವ ಧ್ವನಿ ಸುರುಳಿಯನ್ನು ಕೇಳಿ . ಸುಶ್ರಾವ್ಯವಾಗಿ ಹಾಡಿರುವ ಶ್ರೀಮತಿ ಅನ್ನಪೂರ್ಣ ಆನಂದ್ ಅವರಿಗೆ ಧನ್ಯವಾದಗಳು

- ಲಕ್ಷ್ಮೀನಾರಾಯಣ ಗುಡೂರ್

***************

(ಈ ಲೇಖನ ಸ್ವಲ್ಪ ಉದ್ದವಾಯಿತೇನೊ ಅನ್ನಿಸಿದರೆ, ಕ್ಷಮೆಯಿರಲಿ. ವಿಷಯದ ಕಾರಣದಿಂದ ಅಷ್ಟು ಸಾಲುಗಳು ಬೇಕಾದವು; ಅದರಲ್ಲೂ ನಾನು ಬರಿಯ ಸಾಹಿತ್ಯ-ಸಂಗೀತಗಳ ಬಗ್ಗೆ ಮಾತ್ರ ಬರೆದಿರುವುದು – ಲಕ್ಷ್ಮೀನಾರಾಯಣ)

ಹೆಚ್ಚಿನ ಓದಿಗೆ:
ಈ ಕೆಳಗಿನ ಗ್ರಂಥಗಳೆಲ್ಲವೂ ಉಚಿತವಾಗಿ archive.org ಯಲ್ಲಿ ಲಭ್ಯವಿವೆ.
೧. ದಾಸ ಸಾಹಿತ್ಯ - ಸಂ: ದಿ. ವಿ ಸೀತಾರಾಮಯ್ಯ ಮತ್ತು ಪ್ರೊ. ಜಿ ವೆಂಕಟಸುಬ್ಬಯ್ಯ
೨. ದಾಸ ಸಾಹಿತ್ಯ ದರ್ಶನ - ಸಂ: ಎಚ್ಚೆಸ್ಕೆ
೩. ದಾಸ ಸಾಹಿತ್ಯದಲ್ಲಿ ಜಾನಪದ ಅಂಶಗಳು - ಡಾ. ಆರ್ ಸುನಂದಮ್ಮ
೪. ದಾಸ ಸಾಹಿತ್ಯ ಸೌರಭ - ಸಂ: ಶ್ರೀನಿವಾಸ ಸು ಮಠದ
೫. ದಾಸ ಸಾಹಿತ್ಯ ಸುಧೆ - ಸಂ: ಟಿ ಎನ್ ನಾಗರತ್ನ
೬. ಕರ್ನಾಟಕದ ಹರಿದಾಸರು - ಡಾ. ಹೆಚ್ ಕೆ ವೇದವ್ಯಾಸಾಚಾರ್ಯ
*********************************************************************************