‘ಅನಿವಾಸಿ’ ಎಂಬ ಜಾಲಜಗುಲಿಯ ಹಾಡು-ಪಾಡು: ಕೇಶವ ಕುಲಕರ್ಣಿ

ಯೋಜನೆಗಳನ್ನು ಹಾಕುವುದು, ಒಬ್ಬರೆಡೆ ಬೆರಳು ತೋರಿಸಿ ಅವರಿಗೆ ಅದನ್ನು ಅನುಷ್ಠಾನಕ್ಕೆ ತರಲು ಹೇಳುವುದು ಅತ್ಯಂತ ಸುಲಭ.ಆದರೆ, ಹಲವರ ಪ್ರಯೋಜನಕ್ಕಾಗಿ ಸಮಯವನ್ನು ವ್ಯಯಿಸಿ, ಇತರರಿಗೆ ಹೇಳಿಕೊಡುವುದು ಅತ್ಯಂತ ಕಷ್ಟವಾದ ವಿಚಾರ.ಅನಿವಾಸಿಗಾಗಿ ಅಂತಹ ತಾಂತ್ರಿಕ ನಿಭಾವಣೆ ಡಾ. ಕೇಶವ ಕುಲಕರ್ಣಿಗಳ ಹೆಗಲ ಮೇಲೇರಿದ್ದು ಮೊದಲ ಭೇಟಿಯಿಂದಲೆ ಎಂಬುದನ್ನು ನಾವೆಲ್ಲ ಓದಿ ತಿಳಿದಿದ್ದೇವೆ. ಎರಡನೆಯ ಭೇಟಿಯ ವೇಳೆಗೆ, ಬರೆಯವ ಬಗ್ಗೆ ತಿಳಿದಿದ್ದರೂ ಬ್ಲಾಗ್ ನಡೆಸುವ ಬಗ್ಗೆ ಏನೂ ಅರಿಯದಿದ್ದ ನಾವೆಲ್ಲ ಅವರ ಹೆಗಲು ಹತ್ತಿದ್ದಾಗಿತ್ತು!

ಎಲ್ಲರದೂ ಒಂದೇ ಪ್ರಶ್ನೆ.”ತಂತ್ರನವಜ್ಞಾನ್ನು ಬಳಸಿ ಕನ್ನಡವನ್ನು ಕಂಪ್ಯೂಟರಿನಲ್ಲಿ ಮತ್ತು ಫೋನಿನಲ್ಲಿ ಟೈಪ್ ಮಾಡುವುದು ಹೇಗೆ?”ಎನ್ನುವುದು.

ಸಾಹಿತ್ಯ ಜಾಲತಾಣದ ’ಅನಿವಾಸಿ’ ಎಂಬ ಹೆಸರಿನ ಆಯ್ಕೆ ಕೂಡ ಇವರದ್ದೆ. ಮುಂದಕ್ಕೂ ಅನಿವಾಸಿಯ ತಂತ್ರ ಜ್ಞಾನದ ತೋರುಹಾದಿಯಾಗಿ ನಮಗೆಲ್ಲ ಕಂಡದ್ದು ಕೇಶವರೇ.ಇವರ ಹಿನ್ನೆಲೆಯಿಲ್ಲದಿದ್ದರೆ ಅನಿವಾಸಿ ಆರಂಭವಾಗಿ ಮುನ್ನೆಡೆಯುತ್ತಿರಲಿಲ್ಲ ಎಂಬ ಬೆಳಕಿನಲ್ಲಿ ಕೇಶವರಿಗೆ ನಾವೆಲ್ಲ ಆಭಾರಿಗಳು.ಆಗಾಗ ತಂತ್ರಜ್ಞಾನ ಕೈ ಕೊಟ್ಟಾಗ ಸಹಾಯಕ್ಕಾಗಿ ನಾವು ಮೊರೆಹೋಗುತ್ತಿರುವುದೂ ಇದೇ  ಬರಹಗಾರ ತಂತ್ರಜ್ಞನಲ್ಲಿ.

keshav-kulkarni 2
ಡಾ.ಕೇಶವ ಕುಲಕರ್ಣಿ

ಐದೂ ವರ್ಷಗಳ ಕಾಲ ಅನಿವಾಸಿಯ ಅತ್ಯಂತ ಮುಖ್ಯ ಅಂಗವಾಗಿ ತೊಡಗಿಕೊಂಡಿರುವ ಕೇಶವರ ಯುಗಾದಿಯ ಹಾಡು ಈಗಲೂ ಎಲ್ಲರ ನೆನಪಿನಲ್ಲಿದೆ.ನೀಲುಗಳು ಕೂಡ. ಹೊರತಂದ ’ಪ್ರೀತಿಯೆಂಬ ಚುಂಬಕ ’ಎನ್ನುವ ಧ್ವನಿ ಮುದ್ರಿಕೆಯ ಮುಖ ಶೀರ್ಷಿಕೆ ಕೂಡ ಇವರದ್ದೆ. ಸಿಂಗಾಪುರದ  ಸಿಂಗರ ಕನ್ನಡ ಕೂಟ ನಡಸಿದ ಕಥಾ ಸ್ಪರ್ಧೆಯಲ್ಲಿ ಇವರಿಗೆ ಬಹುಮಾನ ಬಂದಿದೆ. ತರಂಗ ವಾರಪತ್ರಿಕೆಯಲ್ಲಿ ಇವರ ಕಥೆಗಳು ಪ್ರಕಟವಾಗಿವೆ.

ಏಕಾಂಕ ನಾಟಕ SMART ಥೆರಪಿ/ಫೋನಾಯಣ ವನ್ನು ಬರೆದು ಅದನ್ನು  ಇರತೆ ಪಾತ್ರದಾರಿಗಳಿಗೆ ಕಲಿಸಿದ ಗುರುಗಳು ಕೂಡ.ಅನಿವಾಸಿಯನ್ನ ಪ್ರತಿನಿಧಿಸಿ ಈ ನಾಟಕ  ಕೇಂಬ್ರಿಡ್ಜ್  ನ ಕನ್ನಡ ಬಳಗ ಕಾರ್ಯಕ್ರಮದಲ್ಲಿ  ಯಶಸ್ವಿಯಾಗಿ ಪ್ರದರ್ಶಿತವಾಯಿತು. ಈ ಹಿಂದೆ ಶಾಲಾ ಕಾಲೇಜಿನ ನಾಟಕಗಳಲ್ಲಿ ಮುಖ್ಯ ಪಾತ್ರವನ್ನು ವಹಸಿದ ಅನುಭವವೂ ಇವರಿಗಿದೆ. ಹಲವು ಸಾಂಸ್ಕೃತಿಕ ಚಟುವಟಿಕೆಗಳು, ಆಟೋಟಗಳಲ್ಲಿನ ಆಸಕ್ತಿ ಇತ್ಯಾದಿ ಹವ್ಯಾಸಗಳಲ್ಲಿ ಆಗಾಗ ಅನಿವಾಸಿಯನ್ನ ಮರೆತರೂ ಅನಿವಾಸಿ ಇವರ ಹೆಗಲಿನಿಂದ ಇಳಿಯುವದಿಲ್ಲ ಎನ್ನುವುದು ಈಗ ಸಂಶಯವಿಲ್ಲದ ಮಾತಾಗಿದೆ.ನಾಳಿನ  ಅನಿವಾಸಿಯ ಐದು ವರ್ಷಗಳ ಹುಟ್ಟುಹಬ್ಬದ ಆಚರನೆ ಮತ್ತು ಸಂಭ್ರಮ ಕೂಡ ಕೇಶವರ ಆಯೋಜನೆಯಲ್ಲೇ ನಡೆಯುತ್ತಿದೆ.

ಅನಿವಾಸಿಯ ಕೈ ಹಿಡಿದು ನಡೆದ ಐದು ವರ್ಷಗಳ ತಮ್ಮ ಅನುಭವವನ್ನು ಸರಳವಾಗಿ ಈ ವಾರ ನಿಮ್ಮ ಮುಂದಿಟ್ಟಿರುವ ಇವರಲ್ಲಿ ಅನಿವಾಸಿಗಾಗಿ   ಇನ್ನೂ ಹಲವು ಯೋಜನೆಗಳಿರುವುದು ಅವರ ಬರಹದಿಂದ ಸ್ಪಷ್ಟವಾಗುತ್ತದೆ.ಎಲ್ಲವೂ ಹೊಸವರ್ಷದಲ್ಲಿ ಈಡೇರಲಿ ಎನ್ನುವ ಶುಭಹಾರೈಕೆಗಳೊಂದಿಗೆ- ಸಂ

 

ಅನಿವಾಸಿ’ ಎಂಬ ಜಾಲಜಗುಲಿಯ ಹಾಡು-ಪಾಡು

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ (ಕೆ‍ಎಸ್‍ಎಸ್‍ವಿವಿ)ಗೆ ಐದು ವರುಷ ತುಂಬಿದ ಹರುಷದ ಸಂದರ್ಭದಲ್ಲಿ, ಜಾಲಜಗುಲಿಯಾಗಿ ನಾವು ಇಲ್ಲಿಯವರೆಗೆ ನಡೆದು ಬಂದ ದಾರಿಯನ್ನು ನೋಡಿಕೊಳ್ಳುವುದು ಕೇವಲ ಔಪಚಾರಿಕ ನೆಪವಲ್ಲ, ಆಗಾಗ ಹಿಂತಿರುಗಿ ನೋಡಿ ಮುಂದೆ ನಡೆಯುವುದು ಒಳ್ಳೆಯದು ನಾವು ಹೊಸ ವರುಷಕ್ಕೆ ಕಾಲಿಟ್ಟಾಗ ಶಾಲೆಯಲ್ಲಿ ನಮ್ಮ ಗುರುಗಳೊಬ್ಬರು ಹೇಳಿದ್ದು ನೆನಪಾಗುತ್ತದೆ.

anivaasi logo 2

ಕೆ‍ಎಸ್‍ಎಸ್‍ವಿವಿಯ ಮುಖವಾಣಿಯಾಗಿ ನಾವೆಲ್ಲ ಸೇರಿ ಒಂದು ಬ್ಲಾಗ್ಅನ್ನು(ಜಾಲಜಗುಲಿ) ಆರಂಭಿಸಲು ಯೋಚಿಸಿದೆವು. ಆದರೆ ಕೆ‍ಎಸ್‍ಎಸ್‍ವಿವಿ ಶುರುಮಾಡಿದವರಲ್ಲಿ ಯಾರೂ ಐಟಿಯವರಿರಲಿಲ್ಲ, ತಂತ್ರಜ್ಞರಿರಲಿಲ್ಲ. ಕುರುಡರಲ್ಲಿ ಮೆಳ್ಳ ಶ್ರೇಷ್ಟ ಎನ್ನುವಂತೆ ಅಷ್ಟಿಷ್ಟು ಗೊತ್ತಿದ್ದ ನಾನೇ ಜಾಲಜಗಲಿಯ ಉಸ್ತುವಾರಿಯನ್ನು ವಹಿಸಿಕೊಂಡೆ. ಸ್ವಂತದ ಒಂದು ಹರುಕಲು ಮುರುಕಲು ಬ್ಲಾಗನ್ನು ಮಾಡಿದ ಬೃಹತ್ ಅನುಭವ ಹೇಗೂ ಇತ್ತಲ್ಲ! ಈಸಲು ಬರದಿದ್ದರೇನಂತೆ , ನೀರಿಗಿಳಿದರೆ ಅದು ಹೇಗೋ ಈಸಲು ಕಲಿಯಬಹುದು, ಅದೇನು ಬ್ರಹ್ಮ ವಿದ್ಯೆಯೇ ಎನ್ನುವ ಹುಂಬ ಧೈರ್ಯದಿಂದ, WordPressಗೆ ಹೋಗಿ kssvv.org ಅನ್ನು ನೊಂದಾಯಿಸಿಯೇ ಬಟ್ಟೆ (ಮುಂದೆ ಅದನ್ನು anivaasi.com ಗೆ ಬದಲಾಯಿಸಿದೆವು).

ನೊಂದಾಯಿಸಿದ್ದೇನೋ ಆಯಿತು. ಆದರೆ ಸ್ವಂತದ ಬ್ಲಾಗ್ ಮಾಡುವುದಕ್ಕೂ ಕೆ‍ಎಸ್‍ಎಸ್‍ವಿವಿಗೂ ಜಾಲಜಗುಲಿಯನ್ನು ಮಾಡುದಕ್ಕೂ ವ್ಯತ್ಯಾಸವಿಲ್ಲವೇ? ಗೂಗಲಿಸಿ, ಯುಟ್ಯೂಬಿಸಿ ವರ್ಡ್‍ಪ್ರೆಸ್‍ನ ಸರಳ ವಿಷಯಗಳನ್ನು ಹತ್ತಾರು ಗಂಟೆ ವ್ಯಯಿಸಿದ ಮೇಲೆ, ಒಂದಿಷ್ಟು ಧೈರ್ಯ ಬಂದಿತು.

ಕೆ‍ಎಸ್‍ಎಸ್‍ವಿವಿ ಗುಂಪಿನ ಸದಸ್ಯರು ಪ್ರತಿ ಶುಕ್ರವಾರ ಏನನ್ನಾದರೂ ಜಾಲದಲ್ಲಿ ಪ್ರಕಟಿಸಬೇಕು ಎಂದು ನಿರ್ಧರಿಸಿದ್ದೆವು.  ಗುಣಮಟ್ಟದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ, ಯು.ಕೆ ಯಲ್ಲಿ ನೆಲೆಸಿರುವ ಕನ್ನಡದ ಓದಿನಲ್ಲಿ ಬರವಣಿಗೆಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಬರೆಯಲು ಹುರಿದುಂಬಿಸುವ ಗುರಿ ಇಟ್ಟುಕೊಳ್ಳಲಾಯಿತು. ಏನಾದರೂ ಬರೆಯಲಿ, ಹೇಗಾದರೂ ಬರೆಯಲಿ, ಕನ್ನಡದದ ಲಿಪಿಯಲ್ಲಿ ಬರೆಯಿರಿ ಎನ್ನುವ ಧ್ಯೇಯ ಎಂದೇ ಹೇಳಬಹುದು.

1

ಉಮಾ ವೆಂಕಟೇಶ್ ಅವರಿಗೆ ಅದಾಗಲೇ ’ಬರಹ’ ತಂತ್ರಜ್ಞಾನ ಉಪಯೋಗಿಸಿ ಬಹಳಷ್ಟು ಲೇಖನಗಳನ್ನು ಬರೆದಿದ್ದರು. ಸಡಗರದಿಂದ ಜಾಲಕ್ಕೆ ಮೊಟ್ಟಮೊದಲ ಲೇಖನವನ್ನು ಬರೆದರು, ’ಚಹಾ ಚಟ ಭಯಂಕರರೇ ಈ ಆಂಗ್ಲರು?’ ಎಂದು. ೨೦೦೪ರಲ್ಲಿ ಮೊಟ್ಟಮೊದಲ ಲೇಖನ ಪ್ರಕಟವಾಯಿತು. ಅಲ್ಲಿಂದ ಆರಂಭವಾದ ಪಯಣ ಒಂದೇ ಒಂದು ಶುಕ್ರವಾರವನ್ನೂ ಒದಗಿರುವ ಆಪತ್ತುಗಳನ್ನು ಧೈರ್ಯದಿಂದ ಎದುರಿಸಿ ತಪ್ಪಿಸದೇ ಸತತ ಐದು ವರ್ಷದಿಂದ ನಡೆದುಕೊಂಡು ಬಂದಿರುವುದು ಒಂದು ಅಚ್ಚರಿಯೇ!

ಏಕೆಂದರೆ ಯು.ಕೆಯಲ್ಲಿ ನೆಲೆಸಿರುವ ಕನ್ನಡಿಗರು ವೃತ್ತಿಯಿಂದ ಬರಹಗಾರರಲ್ಲ. ವೈದ್ಯರೋ, ಇಂಜಿನಿಯರುಗಳೋ ಇಲ್ಲ ಮನೆ ಸಂಭಾಳಿಸುವ ೨೪x೭ ಕೆಲಸದಲ್ಲಿ ಇರುವವರೇ ಎಲ್ಲ. ಅಂಥವರಲ್ಲಿ ಮೊಟ್ಟಮೊದಲನೇಯದಾಗಿ ಬರೆಯುವ ಹವ್ಯಾಸ ಇರಬೇಕು, ಇಲ್ಲದಿದ್ದರೂ ಬರೆಯುವ ಮನಸ್ಸಾದರೂ ಇರಬೇಕು, ಅಂಥವರ ಪರಿಚಯ ಕೆ‍ಎಸ್‍ಎಸ್‍ವಿವಿಗೆ ಆಗಬೇಕು, ಅವರಿಗೆ ನಮ್ಮ ಉದ್ದೇಶಗಳನ್ನು ಹೇಳಬೇಕು, ಅವರಿಗೆ ಒಪ್ಪಿಗೆಯಾಗಬೇಕು, ನಂತರ ಅವರು ಅದನ್ನು ಬರೆಯಬೇಕು, ಅದೂ ಕಂಪ್ಯೂಟರಿನಲ್ಲಿ!

ಬಹುಮುಖ್ಯ ಕಷ್ಟ ಬಂದಿದ್ದು ಇಲ್ಲಿಯೇ! ಬರೆಯುವ ಮನಸ್ಸಿರುವ ಬಹಳಷ್ಟು ಜನರಿಗೆ ಕಂಪ್ಯೂಟರಿನಲ್ಲಿ ಕನ್ನಡದ ಲಿಪಿಯನ್ನು ಹೇಗೆ ಮೂಡಿಸುವುದು ಎಂದು ಗೊತ್ತಿರಲಿಲ್ಲ. ಫೋನಿನಲ್ಲಿ ಭೇಟಿ ಮಾಡಿದಾಗ ಹೇಳಿಕೊಡುವುದು,  ಅದಕ್ಕೆಂದೇ ಒಂದು ಲೇಖನವನ್ನು ಜಾಲದಲ್ಲಿ ಪ್ರಕಟಿಸಿದ್ದೂ ಆಯಿತು. ಬರಹ, ನುಡಿ, ಗೂಗಲ್ ಟ್ರಾನ್ಸ್‍ಲಿಟರೇಶನ್ ಇತ್ಯಾದಿಗಳ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಒದಗಿಸಲಾಯಿತು.

3

ಜಾಲಜಗುಲಿಯನ್ನು ನಿಭಾಯಿಸುವುದು ಒಬ್ಬರಿಂದಲೇ ಆಗುವ ಕೆಲಸವಲ್ಲವಲ್ಲ! ಬಂದ ಬರಹಗಳ ಕಾಗುಣಿತವನ್ನು ತಿದ್ದಬೇಕು, ಅದನ್ನು ವಾರವಾರವೂ ತಪ್ಪದೇ ಪ್ರತಿವಾರ ಒಂದು ಬರಹದಂತೆ ಪೂರ್ವನಿರ್ಧಾರ ಮಾಡಿ ನಿಗದಿ ಮಾಡಬೇಕು, ಬರಹಕ್ಕೆ ತಕ್ಕ ಚಿತ್ರಗಳನ್ನು ಹೊಂದಿಸಬೇಕು, ಬರುವ ಅನಿಸಿಕೆಗಳನ್ನು ಓದಿ ಅದರಲ್ಲಿ ಬರೆದವರಿಗೆ ಸಾರ್ವಜನಿಕರಿಗೆ ತೊಂದರೆಯಾಗುವಂಥದ ಅನಿಸಿಕೆಗಳನ್ನು ಅಳಿಸಿ ಹಾಕಬೇಕು.

ಆರಂಭದಲ್ಲಿ ಅಂಬೆಗಾಲಿಡುತ್ತ, ನಿಧನಿಧಾನವಾಗಿ, ಹೊಸ ಬರಹಗಾರರನ್ನು, ಹೊಸ ಓದುಗರನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಪ್ರತಿ ಮೂರು ಅಥವಾ ನಾಕು ತಿಂಗಳಿಗೆ ಹೊಸ ಸಂಪಾದಕರನ್ನು ನೇಮಿಸಿ ಜಾಲಕ್ಕೆ ಹೊಸ ಕಳೆ ಬಂದಿತು. ಪ್ರತಿ ಸಂಪಾದಕರೂ ಹೊಸ ಯೋಜನೆಗಳೊಂದಿಗೆ, ವಿಚಾರಗಳೊಂದಿಗೆ ಜಾಲಕ್ಕೆ ಹೊಸ ತರಹದ ಆಯಾಮಗಳನ್ನು ತಂದರು.

‘Comments are free, but facts are sacred’ ಎನ್ನುವ ಮಾತಿನಂತೆ, ಓದುಗರ ಅನಿಸಿಕೆಗಳನ್ನು ಯಾವುದೇ ಸೆನ್ಸಾರಿಗೆ ಒಳಪಡಿಸದೇ ಹತೋಟಿಯಲ್ಲಿ ಇಟ್ಟುಕೊಳ್ಳದೇ ಪ್ರಕಟಿಸುವ ನಿರ್ಧಾರ ’ಅನಿವಾಸಿ’ಗೆ ಮುಳುವಾಗುವ ಪರಿಸ್ಥಿತಿಯವರೆಗೂ ಬಂದಿತ್ತು. ಅದನ್ನೂ ಹಾಗೂ ಹೀಗೂ ಸಂಭಾಳಿಸಿ ಅನಿವಾಸಿ ಮುಂದುವರೆದಿದೆ, ಹಿತೈಷಿಗಳ ಬೆಂಬಲದಿಂದಾಗಿ.

kek 1

ಇದುವರೆಗೆ ಮುನ್ನೂರಕ್ಕೂ ಹೆಚ್ಚು ಬರಹಗಳನ್ನು, ಒಂದೇ ಒಂದು ವಾರವೂ ತಪ್ಪಿಸದೇ ಪ್ರಕಟಿಸಿದ ಹೆಮ್ಮೆ ’ಅನಿವಾಸಿ’ಯದು. ಆರಂಭದಲ್ಲಿ ಬೆರಳೆಣಿಕೆಯಷ್ಟು ಓದುಗರಿದ್ದ ಈ ಜಾಲ ಈಗ ಹದಿನೆಂಟು ಸಾವಿರ ಓದುಗರನ್ನು ತಲುಪಿದೆ. ಇನ್ನೂರಕ್ಕೂ ಹೆಚ್ಚು ಇಮೇಲ್ ಚಂದಾದಾರರಿದ್ದಾರೆ. ತಿಂಗಳಿಗೆ ೫೦೦೦ ಸಲ ಜಾಲವನ್ನು ಜಾಲಾಡಿಸುತ್ತಾರೆ, ಅಷ್ಟೇ ಅಲ್ಲ, ಜಾಲವನ್ನು ಜಾಲಾಡಿಸಲು ಬಂದವರು ಒಂದೇ ಲೇಖನ ಓದಿ ಹೋಗುವುದಿಲ್ಲ, ಕಡಿಮೆಯೆಂದರೂ ಎರಡು ಲೇಖನಗಳನ್ನು ಓದಿಯೇ ಹೋಗುತ್ತಾರೆ. ’ಅನಿವಾಸಿ’ ಎಂಬ ಯು.ಕೆ ಕನ್ನಡಿಗರ ತಂಗುದಾಣ, ಜಗತ್ತಿನ ಮೂಲೆ ಮೂಲೆಯಿಂದ ಓದುಗರನ್ನು ಕಲೆ ಹಾಕಿದೆ. ’ಅನಿವಾಸಿ’ಗೆ ಅತ್ಯಂತೆ ಹೆಚ್ಚಿನ ಕ್ಲಿಕ್ಕುಗಳು ಬರುವುದು ಭಾರತದಿಂದ, ಅದು ಬಿಟ್ಟರೆ ಅಮೇರಿಕದ ಕನ್ನಡಿಗರಿಂದ. ಯು.ಕೆ ಕನ್ನಡಿಗರೂ ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಾರೆ. ಆಸ್ಟ್ರೇಲಿಯ, ಕೆನಡಾ, ಯುಎಈ, ಜರ್ಮನಿ, ಸಿಂಗಾಪುರ, ಸೌದಿ ಅರೇಬಿಯ ದೇಶಗಳಿಂದಲೂ ಕನ್ನಡಿಗರು ಪ್ರತಿಸ್ಪಂದಿಸಿದ್ದಾರೆ.

anivaais 2
                                   ಡುಂಡಿರಾಜರ ಕವಿಗೋಷ್ಠಿಯ ಮುಖ್ಯಸ್ಥಿಕೆ ವಹಿಸಿ..

ಕತೆ, ಕವನ, ಪ್ರಬಂಧ, ಹರಟೆ, ಪ್ರವಾಸ ಕಥನ, ಸಿನೆಮಾ-ನಾಟಕ-ಪುಸ್ತಕ-ಕವನಗಳ ಅನಿಸಿಕೆಗಳು, ಕನ್ನಡ ಬಳಗದ ಕಾರ್ಯಕ್ರಮಗಳ ವರದಿಗಳು, ವ್ಯಕ್ತಿಚಿತ್ರ ಇತ್ಯಾದಿ ಪ್ರಕಾರಗಳನ್ನು ಪ್ರಕಟಿಸಿದೆ. ‘ವಿಜ್ಞಾನ ಮತ್ತು ಮಹಿಳೆಯರು’ ಮತ್ತು ‘ನೋಡು ಬಾ ನಮ್ಮೂರ’ ಎನ್ನುವ ಎರಡು ಲೇಖನಮಾಲೆಗಳನ್ನು ಪ್ರಕಟಿಸಿದೆ.

ಸಂಪಾದಕರಾಗಿ ಸಲಹೆಗಾರರಾಗಿ ಶ್ರೀವತ್ಸ ದೇಸಾಯಿ, ಶಿವಪ್ರಸಾದ್ ಮತ್ತು ಪ್ರೇಮಲತಾ ಅವರ  ಸಹಕಾರ, ನಿರ್ವ್ಯಾಜ್ಯ ಕನ್ನಡ ಪ್ರೀತಿ, ಸಂಯಮ ಮತ್ತು ಪರಿಶ್ರಮಗಳಿಲ್ಲದೇ ಇದ್ದರೆ ‘ಕೆ‍ಎಸ್‍ಎಸ್‍ವಿವಿ’ಯ ‘ಅನಿವಾಸಿ’ಎಂಬ ಜಾಲ ಐದು ವರ್ಷವೇನು, ಐದು ತಿಂಗಳೂ ಬದುಕಿ ಉಳಿಯುತ್ತಿರಲಿಲ್ಲ.

skit 11
                          ಫೋನಾಯಣ ನಾಟಕ ಬರೆದು, ನಿರ್ದೇಶಿಸಿ, ನಟಿಸಿದ ಸಂದರ್ಭ

‘ಅನಿವಾಸಿ’ ಇನ್ನೂ ಬೆಳೆಯಲಿ, ನೂರ್ಕಾಲ ಬಾಳಲಿ. ಯು.ಕೆ ಯಲ್ಲಿ ನೆಲೆಸಿರುವ ಎಲ್ಲೆ ಕನ್ನಡಿಗರ ಮುಖವಾಣಿಯಾಗಲಿ. ಬೇರೆ ಬೇರೆ ಸಂಘ ಸಂಸ್ಥೆಗಳ ಜೊತೆಗೂಡಲಿ, ’ಅನಿವಾಸಿ’ಎಂಬ ಜಾಲವಲ್ಲದೇ, ನಿಯಮಿತವಾಗಿ ಪುಸ್ತಕ (ಒಂದು ಪುಸ್ತಕ ಆಗಲೇ ಪ್ರಕಟವಾಗಿದೆ), ಕನ್ನಡ ಸಂಗೀತ (ಒಂದು ಧ್ವನಿಸುರಳಿ ಆಗಲೇ ಬಿಡುಗಡೆಯಾಗಿದೆ), ನಾಟಕ (ಒಂದು ಏಕಾಂಕ ಮಾಡಿದ್ದಿದೆ), ವಿಡಿಯೋ, ಕಿರುಚಿತ್ರ ಬರಲಿ ಎಂದು ಹಾರೈಸುತ್ತೇನೆ.

(ನಾನು ನನ್ನ ’ಸಮಯದ ಅಭಾವದ’ ಕಾರಣದ ನೆಪ ಹೇಳಿ, ಈಗ ಹತ್ತಿರ ಒಂದು ವರ್ಷದಿಂದ ಸಕ್ರಿಯನಾಗಿಲ್ಲ ಎಂಬ ಅಪರಾಧಿ ಭಾವನೆಯಲ್ಲಿದ್ದೇನೆ. ಈ ಲೇಖನದ ಮೂಲಕ ಕ್ಷಮಾಪಣೆಯನ್ನು ಕೇಳಿಕೊಳ್ಳುತ್ತೇನೆ ಮತ್ತು ’ಕೆ‍ಎಸ್‍ಎಸ್‍ವಿವಿಗೆ’ ಸಮಯವನ್ನು ಮೀಸಲಿಡುತ್ತೇನೆ ಎಂದು ನನಗೆ ನಾನೇ ಕರಾರು ಹಾಕಿಕೊಳ್ಳುತ್ತಿದ್ದೇನೆ).

            (ಮುಂದಿನವಾರ – ಸಾಂಸ್ಕೃತಿಕತೆಯ 4 D  ರೂಪ )

ಅನಿವಾಸಿಗೆ ೫ ವರ್ಷ-ಕೊಟ್ಟದ್ದೇನು? ಪಡೆದದ್ದೇನು? -ಡಾ. ರಾಮ ಶರಣ್

ಅನಿವಾಸಿ ಎಂಬ ಬಟ್ಟೆಯನ್ನು (ವಿಶೇಷವನ್ನು)  ಐದು ವರ್ಷಗಳ ಕಾಲ ಎಳೆ ಎಳೆಯಾಗಿ ನೇದು ಅದಕ್ಕೊಂದು ಸ್ವರೂಪವನ್ನು ಕೊಟ್ಟ ರೀತಿಯ ಒಂದು ಸಮಗ್ರ ವರದಿಯನ್ನು ಓದಿ ಆಗಿದೆ.

ಯಾವ ನೇಯ್ಗೆ, ಯಾವ ಗುಣ ಮಟ್ಟ ನಮಗೆ ಒಪ್ಪಿಗೆಯಾಗಬಲ್ಲದು? ಅದಕ್ಕೊಂದು ಮಾನದಂಡವಿದೆಯೇ? ಮೌಲ್ಯವಿದೆಯೇ? ಅದರಿಂದ ನಮಗೇನು ಪ್ರಯೋಜನ? ನಮಗೆ ಆ ಬಟ್ಟಯ ಜತೆಗಿನ ಬಾಂಧವ್ಯದ ಅಗತ್ಯ ಇದೆಯೇ? ನಮಗೆ ಇದು ಸರಿ ಹೊಂದುತ್ತದೆಯೇ?ಎನ್ನುವ ಪ್ರಶ್ನೆಗಳಿಗೆ ಅವರವರಿಗೆ  ದೊರೆಯುವ ಉತ್ತರದ ಮೇಲೆ ಧಾರಕರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಅನಿವಾಸಿಯ ಜೊತೆಗಿನ ಸಂಭಂದಗಳೂ ಹಾಗೆಯೇ.

ಅನಿವಾಸಿ ಎಂಬುದು ಕನ್ನಡಿಗರ ಒಂದು ಪುಟ್ಟ ಗುಂಪು. ಹಾಗಾಗಿ ಕನ್ನಡ ಸಾಹಿತ್ಯಕ್ಕೆ ಇಲ್ಲಿ ಆದ್ಯತೆ. ಸೃಜನಶೀಲತೆಯ ಮೂಲ ತವರಾದ ಸಾಹಿತ್ಯ ಇದರ ಮುಖ್ಯ ಚಟುವಟಿಕೆ.ಅನಿವಾಸಿಯ ಮೂಲ ಉದ್ದೇಶವಾದ ಸಾಹಿತ್ಯಕ ಮೌಲ್ಯಗಳಲ್ಲಿ  ಆಸಕ್ತಿಯಿದ್ದವರಿಗೆ ಅನಿವಾಸಿಯ ಮೂಲಕ ಹಲವು ದರ್ಶನಗಳಾಗಿವೆ. ಆದರೆ, ಸಾಹಿತ್ಯ ಮತ್ತು ಅದರಿಂದ ಉದಯಿಸುವ ಎಲ್ಲ ಸೃಜನಾತ್ಮಕ  ಚಟುವಟಿಕೆಗಳ ಬಗ್ಗೆ ಆಸಕ್ತಿಯಿಲ್ಲದೆ ಬರಿ ಪ್ರದರ್ಶನ, ಘೋಷಣೆ,ವಯಕ್ತಿಕ ಪ್ರಚಾರ ಮತ್ತಿತರ ಚಟುವಟಿಕೆಗಳನ್ನು ಹುಡುಕಿಕೊಂಡು ಬಂದು ದುಡುಕಿ ಈ ಗುಂಪನ್ನು ಸೇರಿದವರಿಗೆ ನಿರಾಶೆಯೂ ಆಗಿರಬಹುದು. ಅನಿವಾಸಿಯಲ್ಲಿ ಹುಳುಕಿಲ್ಲವೆಂದಲ್ಲ. ವೈಚಾರಿಕ ಭಿನ್ನಾಭಿಪ್ರಾಯಗಳಿಗೂ ಕೊರತೆಯಿಲ್ಲ. ಆದರೆ ಪರಸ್ಪರರ ವಿಚಾರಗಳ ಬಗೆಗಿನ ಗೌರವ ಬಹಳ ಮುಖ್ಯ. ಹೇಳಿ ಕೇಳಿ ಇದು ಸೃಜನಶೀಲರ ಗುಂಪು. ಹಾಗಾಗಿ ಇಲ್ಲಿ ಆತ್ಮ, ಅಹಂ ಮತ್ತು ನಾನು  (Artists’s Ego) ಎನ್ನುವ ವಿಚಾರಗಳೂ ಉದಿಸುತ್ತವೆ.ಆದರೆ ಪ್ರತಿ ಸದಸ್ಯರೂ ಈ ಬಟ್ಟೆಯ ಬೇರೆ ಬೇರೆ ಎಳೆಗಳು. ಪ್ರತಿಯೊಬ್ಬರೂ ಈ ಗುಂಪಿಗೆ ತಂದಿರುವ ಮೌಲ್ಯಗಳು ಅಮೂಲ್ಯವಾದವುಗಳೇ. ಇಲ್ಲಿ ಸರಿ ಬರುವ ಒಂದೇ ಒಂದು ಸೂತ್ರ ಎಂದರೆ  ಈ ಎಲ್ಲ ಎಳೆಗಳ ನಡುವಿನ ಹೊಂದಾಣಿಕೆ ಮತ್ತು ಪ್ರಾಮಾಣಿಕತೆ. ಪ್ರಯತ್ನವಷ್ಟೇ ಫಲವನ್ನು ನೀಡಬಲ್ಲದು.

ಕನ್ನಡ ಸಾಹಿತ್ಯದಲ್ಲಿ ಆಸಕ್ತಯಿರುವ ನಿರುಪದ್ರವಕಾರಿ ಸದಸ್ಯರು  ಒಂದೆಡೆ ಸೇರಿ ತಮ್ಮ ಸಾಹಿತ್ಯದ ಒಲವನ್ನು ಮುಂದುವರೆಸುವುದು, ಬೆಳೆಸಿಕೊಳ್ಳುವುದು,  ಜೊತೆ ಜೊತೆಯಾಗಿ ಸೃಜನಶೀಲತೆಯನ್ನು ವೃದ್ಧಿಸಿಕೊಳ್ಳುವುದು, ಒಬ್ಬರನ್ನೊಬ್ಬರು ಉತ್ತೇಜಿಸುವುದು, ಜೊತೆ ಜೊತೆಯಲ್ಲೇ ವಯಕ್ತಿಕ ಬೆಳವಣಿಗೆಗಳು, ಒಂದಷ್ಟು ಸಂತೋಷ,ವಿನೋದ ಮತ್ತು ವಿನಿಮಯ- ಇದರ ಮುಖ್ಯ ಉದ್ದೇಶಗಳು.

ಒಂದೆರೆಡು ವರ್ಷಗಳು ಅನಿವಾಸಿಯ ಜೊತೆ ಕಳೆದ ನಂತರ ಅನಿವಾಸಿಯ ಸಂಪರ್ಕದ ಸವಿಯ ಅರಿವಾಗಲು ಶುರುವಾಗುತ್ತದೆ.  ಮೇರೆ ಮೀರುವ (ಕೆಲವೊಮ್ಮೆ) ಕೆಲವರ ಉತ್ಸಾಹಗಳು, ಹಾರ್ದಿಕ ಆಶಯದ ಹಲವರ ಔದಾರ್ಯಗಳು ಬೆಳಕಿಗೆ ಬರುತ್ತವೆ, ಅರ್ಥವೇ ಆಗದ ಕೆಲವರ ನಿರುತ್ತರಗಳು ಕೂಡ ದಕ್ಕತೊಡಗುತ್ತವೆ.

ಡಾ. ರಾಮ್ ಶರಣ್ ಲಕ್ಷ್ಮೀನಾರಾಯಣ

”ನಾನು ನೀಡಿದ್ದು ಕಡಿಮೆ’ ಎನ್ನುತ್ತಲೇ ಕಳೆದ ಐದು ವರ್ಷಗಳಿಂದಲೂ ಅನಿವಾಸಿಯ ಬಹುತೇಕ ಎಲ್ಲ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗಿಯಾಗಿರುವ ರಾಮಶರಣ್  ತಮ್ಮ ಕೆಳಗಿನ ಬರಹದ ಮೂಲಕ  ಅನಿವಾಸಿಯ ಜೊತೆಗಿನ ತಮ್ಮ  ವಯಕ್ತಿಕ ಒಡನಾಟವನ್ನು ಇವೇ ಹಿನ್ನೆಲೆಗಳ ಆಧಾರದ ಮೇಲೆ ಈ ಲೇಖನದ ಮೂಲಕ ವಸ್ತುನಿಷ್ಠವಾಗಿ ತೂಕಹಾಕಿದ್ದಾರೆ. ಅನಿವಾಸಿಯ ಒಡನಾಟದಲ್ಲಿ ಕಳೆದ ಮೆಚ್ಚಿನ ಕ್ಷಣಗಳನ್ನು, ಅನಿವಾಸಿಯ ಒಡನಾಟದಲ್ಲಿ ಭೇಟಿಮಾಡಿದ ದಿಗ್ಗಜರನ್ನು ನೆನೆಯುತ್ತ ವ್ಯಾವಹಾರಿಕ ( pragmatic) ಧೋರಣೆಗಳ ಪರಿಧಿಗಳಿಂದ ಹೊರಬಂದು ಭಾವುಕರಾಗಿದ್ದಾರೆ. ಅನಿವಾಸಿಗೆ ಕಾಲ ಕಾಲಕ್ಕೆ ಹೊಸ ನೀರು ಸೇರುತ್ತ ಈ ಅನಿವಾಸಿಯೆಂಬ ನದಿ ನಿರಂತರವಾಗಿ ಹರಿಯಲಿ ಎಂದು ಆಶಿಸುತ್ತಾರೆ.

ರಾಂ ರ ಈ ಲೇಖನದಲ್ಲಿ ಮುಖ್ಯವಾದ ಎರಡು ಪ್ರಶ್ನೆಗಳಿವೆ. ಕೊಟ್ಟದ್ದೇನು? ಪಡೆದದ್ದೇನು?ಇದು ಅತ್ಯಂತ ಮುಖ್ಯವಾದ, ಮೌಲ್ಯಯುತವಾದ ವಿಚಾರ. ಇದನ್ನು ಪ್ರತಿ ಸದಸ್ಯರು  ಕೇಳಿ ಕೊಳ್ಳಬೇಕು ಕೂಡ.ಆಗಷ್ಟೆ  ವಾಮನ ರೂಪಿ ಅನಿವಾಸಿಯ  ವೇದಿಕೆ ನಮ್ಮೆಲ್ಲರಿಗೆ ದೊರಕಿಸಿದ ಅವಕಾಶಗಳ  ವಿರಾಟ್ ದರ್ಶನವಾಗುತ್ತದೆ.

ಈ ಸರಣಿಗೆ ಒಂದು ಬರಹವನ್ನು ಬರೆಯಲು ಕೇಳಿದಾಗ ಉತ್ಸಾಹದಿಂದ ಮೊದಲು ಲೇಖನವನ್ನು ಬರೆದು ಕಳಿಸಿದವರು ರಾಂ ಅವರೇ. ಆದರೆ, ಬೇರೆಲ್ಲರ ಲೇಖನಗಳಿಗಾಗಿ ಕಾಯುತ್ತಿದ್ದ ಕಾರಣ ಇಷ್ಟು ನಿಧಾನವಾದದ್ದಕ್ಕೆ ಕ್ಷ್ಮಮೆಯಿರಲಿ ಎಂದು ಕೋರುತ್ತೇನೆ. ಪುಟ್ಟ ಲೇಖನವಾಗಿರುವ ಕಾರಣ ಉದ್ದನ್ನ ಪ್ರಸ್ತಾವನೆ  ಅಷ್ಟೆ –ಡಾ. ಪ್ರೇಮಲತ ಬಿ.

ಅನಿವಾಸಿಗೆ ೫ ವರ್ಷ-ಕೊಟ್ಟದ್ದೇನು? ಪಡೆದದ್ದೇನು?

ಅನಿವಾಸಿಗೆ 5 ವರ್ಷ ತುಂಬಿದೆ ಅಂದ್ರೆ ನಂಬೋಕಾಗ್ತಾ ಇಲ್ಲ. ಪ್ರೇಮಲತಾ  2 ತಿಂಗಳ ಕೆಳಗೆ ವಾಟ್ಸಾಪ್ ಸಂದೇಶ ಕಳಿಸಿದಾಗಲೇ ಗೊತ್ತಾಗಿದ್ದು.

ಈ 5 ವರ್ಷಗಳು ಹೇಗೆ ಹೋದವು ಅಂತಲೇ ಗೊತಾಗ್ಲಿಲ್ಲ. ಹಿಮದ ಉಂಡೆಯಂತೆ ಚಿಕ್ಕ ಕಣದಿಂದ ಮಹಾ ಗಾತ್ರದ ಬಂಡೆ ಆಗದಿದ್ದರೂ ಸಾಕಷ್ಟು ಗಾತ್ರದ ಕಲ್ಲಾಗಿ ನಿಂತಿರುವುದು ಹೆಮ್ಮೆಯ ವಿಷಯ. ಈ ಗತಿಸಿದ ದಿನಗಳಲ್ಲಿ, ಬಹಳಷ್ಟು ಜನ ಸೇರ್ಪಡೆಯಾಗಿದ್ದಾರೆ, ಕೆಲವರು ತೊರೆದು; ತೆರೆ ಮರೆಗೆ ಸರಿದಿದ್ದಾರೆ. ಆದರೆ ನಿಲ್ಲದ ನದಿಯಂತೆ ಅನಿವಾಸಿ ಸದಾ ಹರಿಯುತ್ತ ಬೆಳೆಯುತಿರುವುದನ್ನು ನೋಡುವುದೇ ಸೊಗಸು.

                      SMART ಥೆರಪಿ ’ ನಾಟಕದಲ್ಲಿ ಪಾತ್ರದಾರಿಯಾಗಿ

ನಾನು ನೀಡಿದ್ದಕ್ಕಿಂತ ಅನಿವಾಸಿಯಿಂದ ಪಡೆದದ್ದೇ ಜಾಸ್ತಿ. ಹಿರಿಯರ ಸಹವಾಸ, ಸಮವಯಸ್ಕರೊಂದಿಗೆ ಸಮಾನ ವಿಷಯಗಳ ಚರ್ಚೆ ರಸಗವಳ ಮೆದ್ದಂತೆ. ವಾರಕ್ಕೊಮ್ಮೆ ಬರುವ ಲೇಖನಗಳು ಮನಸ್ಸಿಗೆ ಮುದ ನೀಡುವುದಲ್ಲದೇ, ಹಲವಾರು ಚರ್ಚೆಗಳಿಗೆ ಪೀಠಿಕೆ, ಸರಕಾಗಿದೆ. ಸತತವಾಗಿ ಇದನ್ನು ನಡೆಸಿಕೊಂಡು ಬಂದಿರುವ ಭಗೀರಥ ಪ್ರಯತ್ನಕ್ಕೆ ಈಗಿನ ಕಾಲದ ಪುರಾವೆಯೇ ಸರಿ. ದೇಶದ ಹಲವು ಊರುಗಳಲ್ಲಿ ಹರಿದು ಹಂಚಿ ಹೋಗಿರುವ ಸದಸ್ಯರು ಅಂತರ್ಜಾಲದ ಹಂದರದಲ್ಲೇ ಬೆಳಸಿರುವ ಸಾಪ್ತಾಹಿಕವನ್ನಿಂದು ಜಗತಿನ ಹಲವು ದೇಶಗಳ ಓದುಗರು ಪ್ರೋತ್ಸಾಹಿಸುತ್ತಿರುವುದು ನಮಗೆ ಸದಾ ಚೈತನ್ಯ ಕೊಡುವ ಲಹರಿ.

                  ಕವಿ ಡುಂಡಿರಾಜರ ಹನಿಗವನ ಗೋಷ್ಠಿಯಲ್ಲಿ

ವರ್ಷಕ್ಕೆರಡು ಬಾರಿ ಕನ್ನಡ ಬಳಗದ ಕಾರ್ಯಕ್ರಮಗಳಲ್ಲಿ ನಡೆಯುವ ಅನಿವಾಸಿ ನಡೆಸಿ ಕೊಡುವ ಸಾಹಿತ್ಯಿಕ ಸಭೆಗಳು ನನ್ನ ಅಚ್ಚುಮೆಚ್ಚಿನ ಕ್ಷಣಗಳು. ಕನಸು – ಮನಸಿನಲ್ಲೂ ಎಣಿಸದ ಕನ್ನಡ ಸಾಂಸ್ಕೃತಿಕ ಲೋಕದ ದಿಗ್ಗಜಗಳನ್ನು ಭೇಟಿಯಾಗುವ, ಅವರೆದುರು ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ವೇದಿಕೆ ಇದು.

   ರಾಜ್ಯ ಪ್ರಶಸ್ತಿ ವಿಜೇತ ಗುರುರಾಜ ಕರ್ಜಗಿಯವರ ಸಮ್ಮುಖದಲ್ಲಿ 

ಈ ಎಲ್ಲ ಕ್ಷಣಗಳಲ್ಲಿ ನನಗೆ ಅಪ್ಯಾಯಮಾನವಾಗಿರುವುದು ಶ್ರೀಯುತ ಗುರುರಾಜ ಕರಜಗಿಯವರ ಭೇಟಿ. ವಿಜ್ಞಾನಿ, ಶಿಕ್ಷಣ ತಜ್ಞ, ಸಾಹಿತಿ, ದಾರ್ಶನಿಕ ಹೀಗೆ ಬಹುಮುಖ ಪ್ರತಿಭೆ ಹೊಂದಿರುವ ಕರಜಗಿಯವರು, ಹಿರಿಯರೊಡನೆ ಹಿರಿಯರಾಗಿ; ಕಿರಿಯರೊಡನೆ, ಸಮವಯಸ್ಕನಂತೆ; ಮಕ್ಕಳೊಡನೆ ಮಕ್ಕಳಾಗಿ ಒಡನಾಡುವ ಪರಿ ಹೊಸ ಪಾಠವನ್ನೇ ಕಲಿಸಿತು. “ ವಿದ್ಯಾ ವಿನಯೇನ ಶೋಭತೆ” ಎಂಬ ಮಾತಿಗೆ ಇವರು ಜ್ವಲಂತ ಉದಾಹರಣೆ. ಅನಿವಾಸಿಯ ಸದಸ್ಯನಾಗದಿದ್ದರೆ ಇಂತಹ ಸುವರ್ಣಾವಕಾಶ ನನ್ನದಾಗುತ್ತಿರಲಿಲ್ಲ.

      ಧ್ವನಿ ಸುರುಳಿಯ ಬಿಡುಗಡೆ ಸಮಾರಂಭದಲ್ಲಿ

ಪ್ರೇಮಲತಾರ ಒತ್ತಾಸೆಗೆ, ಬತ್ತದ ಉತ್ಸಾಹಕ್ಕೆ ಮಣಿದು ಭಾಗಿಯಾದ ಧ್ವನಿ ಸುರುಳಿಯ ಯೋಜನೆ; ಗೆಳೆಯರೊಂದಿಗೆ, ಕೇಶವ ಬರೆದು ನಿರ್ದೇಶಿಸಿದ ಏಕಾಂಕದಲ್ಲಿ ನಟನೆ; ‘ಅನಿವಾಸಿ ಅಂಗಳದಿಂದ’ ಹೊತ್ತಿಗೆಯ ಬಿಡುಗಡೆ; ಒಂದೇ – ಎರಡೇ? ಈ  ಐದು ವರ್ಷಗಳಿಂದ ಸತತವಾಗಿ ಸಾಂಸ್ಕೃತಿಕ – ಸಾಹಿತ್ಯಿಕ ಪ್ರವಾಹದಲ್ಲಿ ಅನಿವಾಸಿ, ನನ್ನನ್ನು ಹಿಂದೆಂದೂ ಅನುಭವಿಸದ, ಅನ್ವೇಷಿಸದ ಜಗತ್ತಿಗೆ ತಂದೊಡ್ಡಿದೆ.

                                           ಗಿರೀಶ್ ಕಾಸರವಳ್ಳಿಯರ ಕಮ್ಮಟದಲ್ಲಿ

ಅನಿವಾಸಿ ಬೆಳೆಯುತ್ತಲೇ ಇರಲಿ, ಇಲ್ಲಿನ ಕನ್ನಡಿಗರಿಗೆ ಸಾಹಿತ್ಯಿಕ ನೆಲೆಯಾಗಲಿ ಎಂಬುದೇ ನನ್ನ ಹಾರೈಕೆ. ಈ ಹಾರೈಕೆಯಲ್ಲಿ ನನ್ನ ಸ್ವಾರ್ಥವೂ ಹಾಸು ಹೊಕ್ಕಾಗಿದೆ. ಅನಿವಾಸಿ ಬೆಳೆದರೆ ಅದರ ಆಶ್ರಯದಲ್ಲಿ ನಾನೂ ಬೆಳೆವನೆಂಬ ಆಶಯ. ನಮ್ಮಲ್ಲರ ಆಶಯವೇ ಅನಿವಾಸಿಗೆ ಬೇಕಾದ ಆಮ್ಲಜನಕ ಎಂದೇ ನನ್ನ ಅನಿಸಿಕೆ.-ರಾಂ

 ( ಮುಂದಿನ ವಾರ- ತಾಂತ್ರಿಕತೆಯ ತೋರು ಹಾದಿ)