ಮ್ಯಾಗ್ ಪೈಗಳು ಮತ್ತು ಲಕ್ಷ್ಮಣ ರೇಖೆ…

ಓದುಗರೆ, ಈ ವಾರದ ಅನಿವಾಸಿಯಲ್ಲಿ ಎರಡು ಭಿನ್ನವಾದ, ಭಾವನಾತ್ಮಕ ಸಣ್ಣಕತೆಗಳನ್ನು ಓದುವ ಅವಕಾಶ ನಿಮ್ಮದು.
ಈ ಕಥೆಗಳೆರಡೂ ತರುವ ಸಾಹಸದ, ಹೋರಾಟದ ಭಾವಸಂದೇಶ ನಿಜಕ್ಕೂ ಶಕ್ತಿಯುತವಾದದ್ದು. ಈ ವಾರದ ಲೇಖಕರು ಡಾ. ಶ್ರೀವತ್ಸ ದೇಸಾಯಿ ಮತ್ತು ಶ್ರೀಮತಿ ಗೌರಿಪ್ರಸನ್ನ.
ಮ್ಯಾಗ್ ಪೈಗಳು’ ಕತೆಯಲ್ಲಿ ಶ್ರೀವತ್ಸ ದೇಸಾಯಿಯವರು, ವಿಧಿ ಕೆಲವೊಮ್ಮೆ ಜೀವನದಲ್ಲಿ ತ೦ದೊಡ್ಡುವ ಕ್ರೂರ ಸವಾಲುಗಳನ್ನು, ಅವನ್ನು ಎದುರಿಸಿ, ಗೆಲ್ಲುವ/ಸೋಲುವ ಮನುಜನ ಅನಿರತ ಹೋರಾಟ, ಈ ನೋವನ್ನು ಹಂಚಿಕೊಳ್ಳುವ, ಭರಿಸುವ, ಸಂಗಾತಿಯ ಭಾವನೆಗಳನ್ನು, ಈ ಹೋರಾಟ ಮನದಲ್ಲಿ ತುಂಬುವ ಶೂನ್ಯತೆಯನ್ನು, ಮನಮಿಡಿಯುವಂತೆ ಬರೆದಿದ್ದಾರೆ.
ಶ್ರೀಮತಿ ಗೌರಿಪ್ರಸನ್ನ ತಮ್ಮ ಲಕ್ಷ್ಮಣರೇಖೆ’ ಯಲ್ಲಿ ಸೀತೆಯ ಸ್ವಗತದ ಮೂಲಕ ಅಂದಿನ ಮತ್ತು ಇಂದಿನ ಪುರುಷಪ್ರಧಾನ ಸಮಾಜ ಹೆಣ್ಣಿನ ಜೀವನದಲ್ಲಿ, ಪುರುಷ ತನ್ನ ಸ್ವಾರ್ಥಕ್ಕಾಗಿ ಎಳೆದ ಬಹುಬಗೆಯ ರೇಖೆಗಳ ಉಲ್ಲೇಖನದ ಜೊತೆಗೆ, ಈ ರೇಖೆಗಳು ರಚಿಸಿದ ನಿರ್ಭಂಧನಗಳು, ಮಿತಿಗಳು, ಆಕೆಯ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಮೇಲೆ ಶಾಶ್ವತವಾಗಿ ಮಾಡಬಹುದಾದ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದಾರೆ. ಓದಿ ಪ್ರತಿಕ್ರಿಯಿಸಿ – ಸಂ

ಮ್ಯಾಗ್ ಪೈಗಳು

ಕೈಯಲ್ಲೊಂದು ಪುಸ್ತಕವಿದ್ದರೂ ರಶ್ಮಿ ನೆಟ್ಟ ದೃಷ್ಟಿಯಿಂದ ಒಂದೇ ಸಮನೆ ಕಿಡಕಿಯ ಹೊರಗಿನ ಪ್ರೂನಸ್ ಮರದ ಮೇಲಿನ ಮ್ಯಾಗ್ ಪೈಗಳನ್ನೇ ನೋಡುತ್ತಿದ್ದವಳಿಗೆ, ಸುಧೀರ ಅವಳಿಗಾಗಿ ಒಂದು ಲೋಟದಲ್ಲಿ ಬಿಸಿ ಹಾಲು ಮತ್ತು ಆಪ್ಪಲ್ ಹೋಳುಗಳನ್ನು ತಂದು ಬೆಡ್ಡಿನ ಪಕ್ಕದಲ್ಲಿಟ್ಟದ್ದು ಆಕೆಗೆ ಗೊತ್ತೇ ಆದಂತೆ ಕಾಣಲಿಲ್ಲ. “ಬೇಗ ಇದನ್ನು ತಿಂದು ಹಾಲು ಕುಡಿದು ವಿಶ್ರಾಂತಿ ಮಾಡು, ಆ ಹಕ್ಕಿಗಳು ಎಲ್ಲೂ ಹೋಗುವದಿಲ್ಲ,” ಎಂದು ಆಕೆಯ ಗುಳಿಬಿದ್ದ ಕಣ್ಣುಗಳನ್ನು ನೋಡುತ್ತ ಹಣೆಯಮೇಲೆ ತನ್ನ ತುಟಿಗಳನ್ನು ಮೆಲ್ಲನೆ ಒತ್ತಿ ಹೇಳಿದ. ಕ್ಯಾನ್ಸರ್ ಮರುಕಳಿಸಿದಾಗಿನಿಂದ ಅವಳು ಹೆಚ್ಚು ಸಮಯ ದಿಂಬಿಗೆ ಒರಗಿ ಹಾಸಿಗೆಯಿಂದಲೇ ಕಿಡಕಿಯಿಂದ ಮನೆಯ ಹಿಂದಿನ ತೋಟದ ಬೇಲಿಯ ಪಕ್ಕದ ಮರದ ಮೇಲೆ ವಾಸಿಸುತ್ತಿದ್ದ ಆ ಪಕ್ಷಿಗಳ ಜೋಡಿ, ಅವುಗಳ ಲಲ್ಲೆ, ಅವುಗಳ ಮೇಟಿಂಗ್ ಕಾಲ್, ಅದನ್ನೆ ನೋಡುತ್ತಿರುತ್ತಾಳೆ. ಪುಸ್ತಕವನ್ನು ಮಗುಚಿಟ್ಟು ಸುಧೀರನತ್ತ ದೃಷ್ಟಿ ಹೊರಳಿಸಿ, ’ಥಾಂಕ್ಸ್’ ಅಂದು ಹಣ್ಣನ್ನು ತಿನ್ನುತ್ತ, ’ಆ ಜೋಡಿ ಈ ಸಲ ಬಡತಿಯಾದಂತೆ ಮೇಲಿನ ಟೊಂಗೆಗಳಲ್ಲಿ ಗೂಡು ಕಟ್ಟಿದೆ, ನೋಡಿದೆಯಾ?’ ಎಂದು ನಕ್ಕಳು.

Three for Joy

ಕoಬಿಯ ಮೇಲೆ ಕುಳಿತು ಹೊಂಚು ಹಾಕಲು ಹವಣಿಸುತ್ತಿದ್ದ ಕರಿಯ ಬೆಕ್ಕನ್ನು ನೋಡುತ್ತ ಸುಧೀರ ಅಂದ: ‘ಬಡತಿಯಲ್ಲ, ಸೇಫ್ಟಿ; ಸ್ವರಕ್ಷಣೆಗೆ! ಸರಿ ಕತ್ತಲಾಗುತ್ತಿದೆ, ನಿನ್ನ ಓದು ಮುಗಿಸಿ ಮಲಗು ಇನ್ನು.’ ಎಂದು ಪುಸ್ತಕವನ್ನು ತಿರುವಿ ನೋಡಿದ. ತೆರೆದ ಪುಟದಲ್ಲಿ ಓ ಹೆನ್ರಿಯ ’ಕೊನೆಯ ಎಲೆ ‘ ಕಥೆ. ಹೊರಗೆ ಚಳಿಗಾಲ ಪ್ರಾರಂಭವಾಗಿತ್ತು. ಅಕ್ಟೋಬರಿನ ಗಾಳಿ ಜೋರಾದಂತೆ ಇನ್ನು ಕೆಲವು ಎಲೆಗಳು ಆ ಮರದಿಂದ ಉದುರಿದವು. ಸುಧೀರ ಆ ಪುಸ್ತಕದ ಒಂದು ಸಾಲನ್ನು ಜೋರಾಗಿ ಓದಿದ: ’’ಹನ್ನೆರಡು, ಹನ್ನೊಂದು, ಹತ್ತು, ಒಂಬತ್ತು …ಜೋನ್ಸಿ ಮರದ ಮೇಲಿಂದ ಒಂದೊಂದಾಗಿ ಉದುರಿ ಮರದ ಮೇಲೆ ಎಲೆಗಳನ್ನು ಎಣಿಸುತ್ತಿದ್ದಳು..,” ಇದು ಬರೀ ಕಥೆ, ಚಿನ್ನಾ.ಇದನ್ನು ತೊಗೊಂಡು ಏನು ಮಾಡುತ್ತಿ? ನೀನು ಆಶಾವಾದಿ. ಇದು ಸರಿಯಲ್ಲ’ ಎನ್ನುತ್ತ ಸುಧೀರ ಅವಳ ಕೈಯನ್ನು ಅದುಮಿ, ಕಿಡಕಿಯ ಪರದೆಯೆನ್ನೆಳೆದು ದೀಪವನ್ನಾರಿಸಿ ತನ್ನ ಕೋಣೆಗೆ ವಿಶ್ರಮಿಸಲು ಹೋದ.

ಹೊರಗಡೆ ಕತ್ತಲೆ ಆವರಿಸುತ್ತಿದ್ದಂತೆ ನೆನಪಿನ ಪರದೆ ತೆರೆಯಿತು. ಯೋಚಿಸಲಾರಂಭಿಸಿದ. ತಾವಿಬ್ಬರೂ ಮೆಡಿಕಲ್ ಪಾಸಾದ ಕೂಡಲೇ ಇಂಗ್ಲೆಂಡಿಗೆ ಬರಬೇಕೆನ್ನುವ ಕನಸನ್ನು ಸಾಕಾರ ಮಾಡಿದ್ದರು, ಕರಿಯರ್ ನಲ್ಲಿ ಇಬ್ಬರೂ ಯಶಸ್ವಿಯಾಗಿ, ಮುದ್ದಾದ ಎರಡು ಮಕ್ಕಳೊಂದಿಗೆ ಸಂಸಾರ. ಆಮೇಲೆ ಈ ’ಡ್ರೀಮ್ ಹೌಸ” ಕಟ್ಟಿದ್ದು, ಈಗ ಮಕ್ಕಳಿಬ್ಬರೂ ಗೂಡಿನಿಂದ ಹಾರಿಹೋಗಿದ್ದಾರೆ. ತಮ್ಮದೇ ಸುಖ ಸಂಸಾರಗಳನ್ನು ಕಟ್ಟಿದ್ದಾರೆ. ರಿಟೈರ್ಮೆಂಟಿನ ಯೋಚನೆ ಮಾಡುತ್ತಿರುವಾಗಲೇ ಆಘಾತ. ಆಕೆಗೆ ಕ್ಯಾನ್ಸರ್. ಒಂದು ಪುಪ್ಫುಸದ ಆಪರೇಷನ್ ಆಗಿ ಆರು ವರ್ಷಗಳಾಗಿ, ಕ್ಯಾನ್ಸರ್ ಗೆದ್ದಳು ಅಂತ ಸಂತೋಷದಲ್ಲಿರುವಾಗಲೆ ಅದು ಮರುಕಳಿಸಿ ಈಗ ಮೂರು ತಿಂಗಳಿಂದ ಕೀಮೋಥೆರಪಿ ಶುರುವಾಗಿದೆ. ಈಗದು ಸಫಲವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಅದಕ್ಕೆ ಅವಳ ಮನೋಸ್ಥೈರ್ಯ ಮತ್ತು ಆಶಾವಾದವೇ ಕಾರಣ. ಹೊರಗಡೆ ಪಕ್ಕದ ಮನೆಯ ಬೆಕ್ಕು ಬೇಟೆಯಾಡುತ್ತಿರುವಾಗ ಮಾಡುವ ’ಮಿಯಾಂ” ಸದ್ದು ಅವನನ್ನು ಎಚ್ಚರಿಸಿತು, ಜೊತೆಗೆ ಚಿಂವ್ ಗುಟ್ಟುತ್ತ ’ಪಢ ಪಢ’ವೆಂದು ಹಾರಿ ಪಾರಾದ ಹಕ್ಕಿಗಳ ರೆಕ್ಕೆಯ ಸದ್ದು ಕೇಳಿಸಿತು. ಈ ಹಿಂದೆ ಅದೇ ಮರದಲ್ಲಿ ಗೂಡು ಕಟ್ಟಿದ ಅದೆಷ್ಟೋ ಪುಟ್ಟ ಹಕ್ಕಿಗಳು ಬೇಲಿಯ ಮೇಲೆ ಕಾಯ್ದು ಕುಳಿತಿರುತ್ತಿದ್ದ ಈ ಯಮದೂತ ಬೆಕ್ಕಿನ ಬಾಯಿಗೆ ಸಿಕ್ಕಿಬಿದ್ದುದು ನೆನಪಾಗಿ ಎದೆಯಲ್ಲಿ ಕಸಿವಿಸಿಯಾಯಿತು. ಆದರೆ ಈಗಿನವು ಈ ಮ್ಯಾಗ್ ಪೈಗಳು , ಮಡಿವಾಳ ಹಕ್ಕಿ ಎಂತಲೂ ಹೆಸರು. ಸ್ವಲ್ಪ ದೊಡ್ಡ ಹಕ್ಕಿಗಳು; ಬುದ್ಧಿವಂತ ಹಕ್ಕಿಗಳೆಂದೂ ಪ್ರತೀತಿ. ಅವುಗಳು ಸುಲಭದಲ್ಲಿ ತಪ್ಪಿಸಿಕೊಳ್ಳುತ್ತವೆ. ಸಂಘ ಜೀವಿಗಳು. ಒಮ್ಮೊಮ್ಮೆ ತೋಟದ ಹುಲ್ಲಿನ ಮೇಲೆ ಈ ಜೋಡಿ ಹಕ್ಕಿಗಳಲ್ಲದೆ ಬೇರೆ ಮ್ಯಾಗ್ ಪೈಗಳೂ ಬಂದು ಜೊತೆಗೂಡುತ್ತಿದ್ದವು.  ಸುಧೀರ ಎಣಿಸಿದ್ದ: ’ಒಂದು, ಎರಡು, ಮೂರು..’ ಈ ಚಳಿಗಾಲ ದಾಟಿ ಮುಂದಿನ ವರ್ಷದ ಜೂನ್ ತಿಂಗಳಲ್ಲಿ ಇಬ್ಬರೂ ಭಾರತ ಯಾತ್ರೆಗೆ ಹೋಗುವ ಕನಸು ಕಾಣುತ್ತ, ಆಕೆಯ ಕಣ್ಣುಗಳಲ್ಲಿ ಇಂದು ಕಂಡ ಹೊಳಪನ್ನು ನೆನೆಸುತ್ತ ಅವಳು ಗುಣಮುಖವಾಗುವ ಲಕ್ಷಣಗಳು ಎಂದು ತನ್ನ ಬೆಡ್ರೂಮಿಗೆ ಹೋಗಿ ನಿದ್ದೆ ಹೋದ.

 * *  *  *  *  *  *  *  *  *  *  *

ಒಂದು ತಿಂಗಳ ನಂತರ —

ಕ್ರೆಮಟೋರಿಯಮ್ ದಿಂದ ವಾಪಸ್ಸಾದ ಆ ಕರಿಯ ಹರ್ಸ್ (hearse) ಕೊನೆಯದು. ಶೋಕಗ್ರಸ್ತ ಮಿತ್ರರನ್ನಿಳಿಸಿ ಆ ಮನೆಯ ಡ್ರೈವ್ ದಿಂದ ಫ್ಯೂನೆರಲ್ ಹೋಮಿಗೆ ಹೊರಟಿತು. ಅದರ ಹಿಂದೆಯೇ ಸುಳಿದ ಗಾಳಿಯ ರಭಸ ಮ್ಯಾಗ್ ಪೈ ಪುಚ್ಚಗಳನ್ನು ಬೀದಿಯತ್ತ ಕೊಂಡೊಯ್ದಿತು. ಸುಧೀರ ’ಓ ಹೆನ್ರಿಯ ಕಥೆಗಳ” ಪುಸ್ತಕವನ್ನು ಕಸದ ಬಿನ್ನಿನಲ್ಲಿ ಒಗೆಯುತ್ತಿದ್ದಂತೆ ಹಿಂದಿನ ತೋಟದ ಆ ಪ್ರೂನಸ್ ಮರದಿಂದ ಒಮೇ ಸವನೆ ಒಂಟಿ ಮ್ಯಾಗ್ ಪೈ ಹಕ್ಕಿಯ ಆರ್ತನಾದ ಕೇಳಿಸುತ್ತಿತ್ತು. ಜೊತೆಗೆ ಕರಿ ಬೆಕ್ಕಿನ ಸಂತೃಪ್ತ ’ಮಿಯಾಂವ’ ಕೂಗು. ಸುಧೀರ ಗಕ್ಕನೆ ಅಲ್ಲೇ ನಿಂತ. ಶಾಲೆ ಮುಗಿಸಿ ತನ್ನ ಮನೆಯ  ಡ್ರೈವ್ ದಾಟಿ ತಮ್ಮಮನೆಗೆ ಹೋಗುತ್ತಿದ್ದ ಶಾಲಾ ಬಾಲಕರಲ್ಲಿ ಕೆಲವರು ತಾವು ಕಲಿತಿದ್ದ ‘Magpie Nursery Rhyme’ ದ ಸಾಲುಗಳನ್ನು ಹಾಡುತ್ತ ನಡೆದಿದ್ದರು: ”One for sorrow, two for mirth, three for funeral…”

ಶ್ರೀವತ್ಸ ದೇಸಾಯಿ

ಲಕ್ಷ್ಮಣ ರೇಖೆ……    

‘ಭವತಿ ಭಿಕ್ಷಾಂ ದೇಹಿ’..ಹಸಿವಿನ ದೈನ್ಯತೆಯಿರದ ಗಂಭೀರ ದನಿ. ಭಿಕ್ಷಾಪಾತ್ರೆಯನ್ನು ಹಿಡಿದ ಕಾಷಾಯಧಾರಿಯೊಬ್ಬ ನಿಂತಿದ್ದಾನೆ ಬಾಗಿಲಲ್ಲಿ.. ಲಕ್ಷ್ಮಣರೇಖೆಯ ಆಚೆ ಬದಿಯಲ್ಲಿ.ತಳಮಳಗೊಂಡಿದ್ದ ಮನಸ್ಸಿಗೆ ಸ್ವಲ್ಪ ಶಾಂತಿ. ಈ ಕಾಷಾಯಕ್ಕೂ ,ನನಗೂ ಎಂಥದೋ ಆತ್ಮೀಯತೆ. ಈ ದೀಘ೯ಕಠಿಣ ವನವಾಸ ಸಹ್ಯವಾದದ್ದೇ ಈ ಕಾಷಾಯಧಾರಿಗಳಿಂದ. ಅತ್ರಿ-ಅನಸೂಯೆ, ಗೌತಮ-ಅಹಲ್ಯೆ…ಎಷ್ಟೆಲ್ಲ ಅಂತಃಕರಣದ ಜೀವಗಳು!! ರಾಜಷಿ೯ಯಾದ ಅಪ್ಪ ಜನಕಮಹಾರಾಜನ ರಾಜಸಭೆಯಲ್ಲೂ ಅಷ್ಟೇ …ರಾಜಕೀಯಕ್ಕಿಂತ ವೇದಾಂತವೇ ಹೆಚ್ಚು ಚಚೆ೯ಯಾಗುತ್ತಿತ್ತು. ಯಾಜ್ಞವಲ್ಕ್ಯ ,ಅಷ್ಟಾವಕ್ರ, ಶತಾನಂದ…ನನ್ನ ರಾಮಭದ್ರನನ್ನು ನನ್ನೆಡೆ ಕರೆತಂದ ದೈವರೂಪಿ ವಿಶ್ವಾಮಿತ್ರನೂ ಕಾಷಾಯಧಾರಿಯೇ. ಕಾವಿ ಎಂದರೆ ನಂಬುಗೆ ,ಪ್ರೀತಿ, ಧೈರ್ಯ, ಭರವಸೆ… “ಮಗೂ, ಅನ್ನಪೂಣೆ೯ಯ ಪ್ರತಿರೂಪವಾಗಿರಬೇಕು ಗೃಹಿಣಿ. ಹಸಿದ ಹೊಟ್ಟೆ ತಣಿಸುವುದು ಯಾವ ರಾಜಸೂಯ ,ಅಶ್ವಮೇಧಕ್ಕಿಂತ ಕಡಿಮೆಯದಲ್ಲ ಮಗಳೇ”.. ಅಮ್ಮ ಯಾವಾಗಲೂ ಹೇಳುತ್ತಿದ್ದ ಹಿತನುಡಿ. ಅದಕ್ಕೆಂದೇ ಸನ್ಯಾಸಿಯೊಬ್ಬನಿಗೆ ಭಿಕ್ಷೆ ನೀಡಲು ನನಗೆ ಲಕ್ಷ್ಮಣರೇಖೆ ಅಡ್ಡಬರಲಿಲ್ಲ. ಅಲ್ಲದೇ ನಾನಿಲ್ಲಿ ನೀಡಿದ ಅನ್ನಭಿಕ್ಷೆ ತೊಂದರೆಯಲ್ಲಿರುವ ನನ್ನ ನಲ್ಲನಿಗೆ ಪ್ರಾಣಭಿಕ್ಷೆಯ ಅಭಯಪ್ರದಾನ ಮಾಡೀತೇನೋ ಎಂಬ ಒಳಮನದ ಆಶಯ. ಅಪ್ಪನ ಮೌಲ್ಯಗಳ, ಅಮ್ಮನ ಆದಶ೯ಗಳ, ನನ್ನ ನಂಬುಗೆಗಳ ಅಲಿಖಿತ ರೇಖೆಗಳೆದಿರು ಆ ಲಿಖಿತ ಲಕ್ಷ್ಮಣರೇಖೆ ನನಗೆ ಕಾಣಲೇ ಇಲ್ಲ; ದಾಟಿದೆ.. ಘಟಿಸಬಾರದ್ದು ಘಟಿಸಿಯೇ ಹೋಯ್ತು.

Lakshmana Rekha – Alchetron, The Free Social Encyclopedia

ರಾವಣ ಕೇವಲ ಸೀತೆಯನ್ನಲ್ಲ ಹೊತ್ತೊಯ್ದದ್ದು…ಕಾಷಾಯದ ಘನತೆಯನ್ನು, ಒಳ್ಳೆಯದರ ಬಗೆಗಿನ ನಂಬಿಕೆಯನ್ನು, ಶಿವದ ಭರವಸೆಯನ್ನುಹೊತ್ತೊಯ್ದ. ಹೆದರಿಕೆ ದಶಶಿರಗಳನ್ನು ಹೊತ್ತು ಅಟ್ಟಹಾಸಮಾಡುತ್ತ ಬರುವ ಲಂಕಾಧಿಪತಿ ರಾವಣನಿಂದಲ್ಲ; ನಿಸ್ಸಂಗತೆಯ, ಧೀರತೆಯ ಪ್ರತೀಕವಾದ ಕಾವಿವೇಷ ಧರಿಸಿ ಬಂದು ‘ದೇಹಿ’ ಎಂದು ಅನ್ನ ಕೇಳಿ ಎಳೆದೊಯ್ಯುವ ದುರುಳರಿಂದ.

‘ಸೀತೆಯಾದರೇನು? ಲೋಕಮಾತೆಯಾದರೇನು? ಲಕ್ಷ್ಮಣರೇಖೆ ದಾಟಿದರೆ ಹೆಣ್ಣು -ತಿನ್ನಲೇಬೇಕು ಮಣ್ಣು’ ಎಂದಾಡಿಕೊಂಡು ಮಣ್ಣಿನ ಮಗಳಿಗೇ ಮಣ್ಣು ತಿನ್ನಿಸಿತೀ ಲೋಕ. ಹುಟ್ಟಿದಂದಿನಿಂದ ರೇಖೆಗಳು… ನೇಗಿಲೆಳೆದ ರೇಖೆಯಿಂದ ಸೀಳಿದ ನೆಲದಿಂದಲೇ ಹೊರಬಂದ ಅವನಿಜೆ ನಾನು.. ಮುಂದೆ ತಾಯ್ತಂದೆಯರ ಅಂತಃಕರಣದ ಬೆಳ್ಳಿರೇಖೆ, ವಧುವಾಗ ಹೊರಟಾಗ ಶಿವಧನಸ್ಸಿನ ಪರಾಕ್ರಮದ ರೇಖೆ, ಯುವರಾಣಿಯಾಗಲಿರುವಾಗ ಮಂಥರೆ-ಕೈಕೇಯಿಯರ ವಕ್ರ ರೇಖೆ, ಪಂಚವಟಿಯಲ್ಲಿ ಲಕ್ಷ್ಮಣರೇಖೆ, ಅಶೋಕವನದಲ್ಲಿ ಪಾತಿವೃತ್ಯದ ರೇಖೆ, ಅಗ್ನಿಕುಂಡದಲ್ಲಿ ಪಾವಿತ್ರ್ಯದ ರೇಖೆ, ಸ್ತ್ರೀತ್ವದ, ಸತೀತ್ವದ, ಮಾತೃತ್ವದ, ಕುಲಧಮ೯ಗಳ, ವಂಶಮಯಾ೯ದೆಗಳ, ಸಂಸ್ಕ್ರತಿ -ಸಂಸ್ಕಾರಗಳ, ನೀತಿನಿಯಮಗಳ, ಆಚಾರ-ವಿಚಾರಗಳ….ಬರಿಗಣ್ಣಿಗೆ ಕಾಣಿಸದ ಅಸಂಖ್ಯಾತ ರೇಖೆಗಳು….ಅಂದಿಗೂ -ಇಂದಿಗೂ ಎಲ್ಲ ಸೀತೆಯರ ಭವಿಷ್ಯ ರೂಪಿಸುತ್ತಿರುವ ಲಕ್ಷ್ಮಣ ರೇಖೆಗಳು….

ಗೌರಿ ಪ್ರಸನ್ನ‌

 

  

.

“ಥಟ್ ಅಂತ ಹೇಳಿ!”- ‘ಅನಿವಾಸಿ’ಗೆ ಥಟ್ಟನೆ ಗಿಟ್ಟಿದ ರಸಘಟ್ಟಿ!

ಕನ್ನಡದ ಅತ್ಯಂತ ಜನಪ್ರಿಯ ರಸಪ್ರಜ್ಞೆ ಕಾರ್ಯಕ್ರಮ ’ಥಟ್ ಅಂತ ಹೇಳಿ’ ಕಾರ್ಯಕ್ರಮ ಈಗ ಮೊದಲ ಬಾರಿಗೆ ಯು ಕೆ ದಲ್ಲಿ ಕಾಲಿಟ್ಟಿದೆ! ಭಾರತೀಯ ಟೆಲಿವಿಷನ್ ಮಾಧ್ಯಮದಲ್ಲಿ ಅತ್ಯಂತ ಸುದೀರ್ಘ ಕಾಲದಿಂದ ಪ್ರಸಾರವಾಗುತ್ತಿರುವ ಕ್ವಿಜ್ ಕಾರ್ಯಕ್ರಮವೆಂದು ’ಲಿಮ್ಕ ದಾಖಲೆ’ ಮಾಡಿದ ಹೆಗ್ಗಳಿಕೆ ಅದಕ್ಕೆ. ಈ ಪ್ರಸಾರವನ್ನು ಕಳೆದ ರವಿವಾರದಂದು ಸಾವಿರಾರು ಜನರು ಜಗತ್ತಿನ ಬೇರೆ ಬೇರೆ ಜಾಗಗಳಲ್ಲಿ ವೀಕ್ಷಿಸಿದ್ದು ಹೆಮ್ಮೆಯ ವಿಷಯ.

(ಚಿತ್ರಕೃಪೆ) ರಮ್ಯ ಭಾದ್ರಿ

ರಮ್ಯ ಭಾದ್ರಿ ಬರೆಯುತ್ತಾರೆ

ಥಟ್ ಅಂತ ಹೇಳಿ! ಎಂದು ಪ್ರಸಿದ್ದಿ ಪಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದವಕಾಶ ಯು.ಕೆ. ದಲ್ಲಿಯ ನಮ್ಮ ’ಅನಿವಾಸಿ’ ಬಳಗಕ್ಕೆ ದೊರೆತಿರುವುದು ಹೆಮ್ಮೆಯ ವಿಚಾರ. ಕಳೆದ ರವಿವಾರ ಜುಲೈ 5, 2020 ರಂದು ಮೊದಲ ಕಾರ್ಯಕ್ರಮ ಯಶಸ್ವಿಯಾಗಿ ಪ್ರಸಾರವಾಯಿತು.

ಡಾ ನಾ. ಸೋಮೇಶ್ವರ

ಥಟ್ ಅಂತ ಹೇಳಿ ಎಂದಾಕ್ಷಣ ಥಟ್ ಅಂತ ನೆನಪಾಗೋದು ಚಂದನ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಡಾ ನಾ. ಸೋಮೇಶ್ವರ ರವರು ನಡೆಸಿಕೊಡುತ್ತಿದ್ದ ಜನಪ್ರಿಯ ರಸ ಪ್ರೆಶ್ನೆ ಕಾರ್ಯಕ್ರಮ. ಪ್ರಾಯಶಃ ಈ ಕಾರ್ಯಕ್ರಮವನ್ನರಿಯದ, ನೋಡದ ಕನ್ನಡಿಗನೇ ಇಲ್ಲ ಅಂದರೆ ಅತಿಶಯೋಕ್ತಿಯಲ್ಲ. ಇದು ಕರುನಾಡ  ಜನಮನ ಗೆದ್ದ ಮನೆಮಾತಾದ ಅದ್ಬುತ ರಸ ಪ್ರೆಶ್ನೆ ಕಾರ್ಯಕ್ರಮವೆನ್ನುವುದಕ್ಕೆ ಕಳೆದ 18 ವರ್ಷಗಳಿಂದ ಯಶಶ್ವಿಯಾಗಿ ನಡೆದುಕೊಂಡು ಬಂದಿರಿವುದೆ ಸಾಕ್ಷಿ.  ಇದು ಇಂದು 3000ಕ್ಕೂ ಹೆಚ್ಚು ಕಂತುಗಳನ್ನು ಅಮೋಘವಾಗಿ ಪೂರೈಸುತ್ತಾ  ಅಂತರ್ರಾಷ್ಟ್ರೀಯ ಅಲ್ಲದೆ ಅಂತರ ಖಂಡಗಳ ಮಟ್ಟದಲ್ಲಿ ಪ್ರಪಂಚದ ಮೊಲೆಮೂಲೆಯಲ್ಲಿ ನೆಲೆಸಿರುವ ಕನ್ನಡಿಗರನ್ನು ತಂತ್ರಜ್ಞಾನದ ಸಹಯೋಗದಿಂದ ತಲುಪಿರುವುದು ಅತ್ಯಂತ ಹೆಮ್ಮೆಯ ವಿಚಾರ. ಈ ಕಾರ್ಯಕ್ರಮದ ವಿಶೇಷತೆಯೆಂದರೆ ಪ್ರೆಶ್ನೆಯ ಪ್ರತಿಯೊಂದು ಉತ್ತರಕ್ಕೆ ಬಹುಮಾನವಾಗಿ ಒಂದು ಕನ್ನಡ ಪುಸ್ತಕವನ್ನು ನೀಡಲಾಗುವುದು. ಪುಸ್ತಕಗಳು  ನಮ್ಮ ಅಂತರಂಗ ಹಾಗು ಬಹಿರಂಗ ಜ್ಞಾನದ ಮಾರ್ಗದರ್ಶಿಗಳು. ’ದೇಶ ಸುತ್ತು ಕೋಶ ಓದು’ ಎಂಬ ನಾಣ್ಣುಡಿಯನ್ನು ಆಚರಣೆಗೆ ತರುವಂತ ಹಾಗು ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳು ಮತ್ತು ವೀಕ್ಷಕರಿಗೂ ಪುಸ್ತಕ ಓದುವ ಹವ್ಯಾಸ ವನ್ನು ರೂಢಿಸಿಕೊಳ್ಳಲು ಪ್ರೇರೇಪಿಸುವಂತ ಅದ್ಬುತ ಕಾರ್ಯಕ್ರಮ. 

ಕ್ವಿಜ್ ಮಾಸ್ಟರ್ ಅಪ್ಪಟ ಕನ್ನಡಿಗರಾದ ಡಾ. ನಾ. ಸೋಮೇಶ್ವರ ಅವರಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯದ ಬಗೆಗಿನ ಅವರ ಒಲವು ಅಪರಿಮಿತವಾದವು. ಮೂಲತಃ  ಬೆಂಗಳೂರಿನವರು; ವೃತ್ತಿಯಲ್ಲಿ ವೈದ್ಯರು ಹಾಗೂ ಅತ್ಯುತ್ತಮ ಬರಹಗಾರರು ಹೌದು. ಅವರ ‘ಏಳು ಸುತ್ತಿನ ಕೋಟೆಯಲ್ಲಿ ಎಂಟು ಕೋಟಿ ಬಂಟರು’, ‘ಅನಂತದೆಡೆಗೆ’, ’ಓ ನನ್ನ ಚೇತನ’ ಕೃತಿಗಳು ಅವರ ಪ್ರಬುದ್ಧತೆ ಹಾಗು ಸಾಹಿತ್ಯದಲ್ಲಿನ ಪ್ರೌಢಿಮೆಯನ್ನು ಮನನ ಮಾಡಿಕೊಡುತ್ತದೆ. ಅಷ್ಟೇ ಅಲ್ಲದೆ ವಿವಿಧ ವಿಷಯಗಳ ಬಗ್ಗೆ 30ಕ್ಕೂ ಹೆಚ್ಚು ಪುಸ್ತಗಳನ್ನು ಬರೆದಿರುವ ಖ್ಯಾತಿ ಅವರದು. ಇವರ ಸಾಹಿತ್ಯದೆಡೆಗಿನ ಮನೋಜ್ಞ  ಸೇವೆಗಳಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಆರ್ಯಭಟ್ಟ ಪ್ರಶಸ್ತಿ’, ಗೌರವ ಡಾಕ್ಟರೇಟ್ ಪದವಿ  ಹೀಗೆ ಇನ್ನು ಹಲವು ಗೌರವಗಳು ಸಂದಿವೆ. ಒಟ್ಟಿನಲ್ಲಿ  ಕನ್ನಡಿಗರು ಥಟ್ ಎಂದು ಗುರುತಿಸಿಬಿಡುವ ವಿಶ್ವಮಾನ್ಯತೆಯನ್ನು ಗಳಿಸಿರುವ ಆತ್ಮೀಯ ಗಣ್ಯರು ಸೋಮೇಶ್ವರ ರವರು. 

’ಅನಿವಾಸಿ’ ಬಳಗ

ಇಂತಹ ಪ್ರಸಿದ್ದಿ ಪಡೆದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದವಕಾಶ ನಮ್ಮ ’ಅನಿವಾಸಿ’ ಬಳಗಕ್ಕೆ ದೊರೆತಿರುವುದು ಹೆಮ್ಮೆಯ ವಿಚಾರ. ಹೊರ ದೇಶದಲ್ಲಿದ್ದರೂ ನಮ್ಮ ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವ ಆಶಯದಲ್ಲಿ ಅಕ್ಟೋಬರ್ 2013ರರಲ್ಲಿ ಹುಟ್ಟಿದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ, ಯು.ಕೆ (KSSVV ) ಎಂಬ ಕನಸಿನ ಕೂಸು ಇಂದು “ಅನಿವಾಸಿ”ಎಂಬ ಹೆಸರಿನಿಂದ ಜನ ಮನ್ನಣೆ ಪಡೆದಿದೆ. 2014ರರಲ್ಲಿ ಚೊಚ್ಚಲ KSSVV ಮ್ಯಾಗಜಿನ್ ಪ್ರಕಟಣೆಯಿಂದ ಪ್ರಾರಂಭವಾದ ಅನಿವಾಸಿಯ ಪಯಣ ಸಾಗಿ  ಅನೇಕ ಸ್ವಯಂ  ಸೇವಕರ ಪರಿಶ್ರಮದಿಂದ  2014 ರಲ್ಲಿ ಅಧಿಕೃತವಾಗಿ ಅಂತರ್ಜಾಲ ಪ್ರವೇಶಿಸಿತು.  ಅನಿವಾಸಿಯ ಚೊಚ್ಚಲ ಕೃತಿ “ಅನಿವಾಸಿಗಳ ಅಂಗಳದಿಂದ” 2016ರಲ್ಲಿ ಲೋಕಾರ್ಪಣೆಯಾಯಿತು  ಅಂದಿನಿಂದ ಇಂದಿನವರೆಗೂ ಪ್ರತಿವಾರವೂ ವೈವಿಧ್ಯಮಯವಾದ ಲೇಖನ, ಕಥೆ, ಕವಿತೆ, ವಿಮರ್ಶೆ, ಪ್ರವಾಸ ಕಥನಗಳು anivaasi.com ನಲ್ಲಿ ಪ್ರಕಟಗೊಳ್ಳುತ್ತ ಬಂದಿದೆ. ಅಷ್ಟಕ್ಕೇ ಸೀಮಿತಗೊಳ್ಳದೆ ಹೆಸರಾಂತ ಸಾಹಿತಿಗಳು, ಚಿತ್ರ ನಿರ್ದೇಶಕ್ರನ್ನು ಸಂದರ್ಶನಗಳು, ಅವುಗಳ ವಿಡಿಯೋಗಳು ಇಂದಿಗೂ ಅನಿವಾಸಿ ಜಾಲ ಜಗುಲಿಯಲ್ಲಿ, youtube ನಲ್ಲಿ ಕಾಣ ಸಿಗುವುದು. 

ನಮ್ಮ ಈ ಅನಿವಾಸಿ ಬಳಗಕ್ಕೆ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಟ್ಟವರು ವಿವಿಡ್ಲಿಪಿ ಖ್ಯಾತಿಯ ಶ್ರೀಯುತ ಪ್ರಮೋದ್ ಲಕ್ಕುಂಡಿ ಅವರು.

ಪ್ರಮೋದ ಬರೆಯುತ್ತಾರೆ:

ಜಗತ್ತು ತನ್ನ ಹೊರಗಿನ ಕಾರುಬಾರು ನಿಲ್ಲಿಸಿ, ಮನುಷ್ಯ ಜೀವಿ ಬಿಲದಲ್ಲಿ ಸೇರುವಂತೆ ಮಾಡಿದಾಗ ಎಲ್ಲರೂ ಚಿಂತಿತರಾದರು. ಇಂತಹ ಸಮಯದಲ್ಲಿ ವಾಟ್ಸಪ್, ಜೂಮ್, ವೆಬ್ಎಕ್ಷ ಮುಂತಾದವು ಮನುಷ್ಯನಿಗೆ ದೇವರು ಕೊಟ್ಟ ವರವಾಯಿತು. ವಿವಿಡ್ಲಿಪಿ ಕೂಡ ಇಂತಹ ವರವಾದ ಏರ್ ಮೀಟ್ (Airmeet)ಇಂದ ನೇರ ಪ್ರಸಾರ ಕಾರ್ಯಕ್ರಮಗಳನ್ನು ಪ್ರಾರಂಭ ಮಾಡಿತು, ಈ ಕಾರ್ಯಕ್ರಮದಲ್ಲಿ ಒಂದು “ಕ್ವಿಜ್ ನಡೆದು ಬಂದ ದಾರಿ” ಡಾ. ನಾ ಸೋಮೇಶ್ವರ ಅವರಿಂದ. ಆಗ ಹುಟ್ಟಿದ ಮತ್ತೊಂದು ಕನಸು, ಕಿರುತೆರೆಯಿಂದ ಕನ್ನಡ ನಾಡು- ಭಾಷೆ- ಸಂಸ್ಕೃತಿ- ಕಲೆ- ಸಾಹಿತ್ಯ- ವಿಚಾರ- ಆಚಾರ ಇತ್ಯಾದಿ ಜನರಿಗೆ ತಲುಪಿಸಿದ “ಥಟ್ ಅಂತ ಹೇಳಿ” ರಸಪ್ರಶ್ನೆ ಕಾರ್ಯಕ್ರಮ ಜಗತ್ತಿನ ಕನ್ನಡಿಗರಿಗೆ ತಲುಪಿಸುವುದು. ಅವರೊಡನೆ ಮಾತಾಯಿತು, ಹೊಸ ಪ್ರಯತ್ನಕ್ಕೆ ವೇದಿಕೆ ಸಜ್ಜಾಯಿತು ಆದರೆ ಯಾರೊಡನೆ ಮೊದಲ ಪ್ರಸಾರ ಎನ್ನುವುದು ಪ್ರಶ್ನೆ ಉಳಿಯಿತು.
ಮನದೊಳಗೆ ಯಾರೊಡನೆ ಮಾಡೋಣ ಎಂಬ ವಿಚಾರ ನಡೆದಾಗ ಬಂದ ಹೆಸರು “ಅನಿವಾಸಿ ಬಳಗ”. ಇದೇ ಹೆಸರು ಬರಲು ಕಾರಣ,
೧. ಬಳಗದ ಸದಸ್ಯರೆಲ್ಲರೂ ಸಾಹಿತ್ಯ ಪ್ರೇಮಿಗಳು
೨. ಸಾಹಿತ್ಯಕ ಚಟುವಟಿಕೆಗಳನ್ನು ಮಾಡುತ್ತಾ ಉಳಿದವರಿಗೂ ಪ್ರೋತ್ಸಾಹ ಕೊಡುತ್ತ ಬಂದಿದ್ದಾರೆ
೩. ಇಲ್ಲಿ ನಾಯಕ (ಕಿ) ಎಂಬ ಸ್ಥಾನಕ್ಕೆ ಬೆಲೆಯಿಲ್ಲ, ಬದಲು ಇಲ್ಲಿ ಸಾರಥಿಗಳಿದ್ದಾರೆ ಮತ್ತು ಪ್ರತಿ ಕಾರ್ಯಕ್ಕೂ ಯಾರಾದರೊಬ್ಬರು ಸಾರಥ್ಯವಹಿಸಿ ಕಾರ್ಯದ ಗುರಿ ಮುಟ್ಟಿಸುತ್ತಾರೆ.

5-7-2020 ರ ಕಾರ್ಯಕ್ರಮ



ಇದಕ್ಕಿಂತ ಹೆಚ್ಚಿನ ಅರ್ಹತೆ ಆಯ್ಕೆ ಮಾಡಲು ಅವಶ್ಯಕತೆ ಇರಲಿಲ್ಲ, ನಮ್ಮ “ಥಟ್ ಅಂತ ಹೇಳಿ” ರಥ ಸಿದ್ದವಾಯಿತು ಮತ್ತು ಶ್ರೀವತ್ಸ ದೇಸಾಯಿ ಅವರ ಸಾರಥ್ಯದಲ್ಲಿ ಮೊದಲ ಗುರಿ ಮುಟ್ಟಿತು.

ಕಾರ್ಯಕ್ರಮದಲ್ಲಿ ಭಾಗವಹಿಸಲು ಅನೇಕ ಆಸಕ್ತರು ತಮ್ಮ ಹೆಸರುಗಳನ್ನೂ ನೊಂದಾಯಿಸಿದರು. ಮೊದಲು ನೊಂದಾಯಿಸಿದ  12 ಜನರಿಗೆ ಈ ಸದಾವಕಾಶ ದೊರಕಿತು. ಒಟ್ಟು ನಾಲ್ಕು ಕಂತುಗಳು ನಡೆಯಲಿದ್ದು, ಒಂದೊಂದು ಕಂತಿನಲ್ಲಿ ನಾಲ್ವರು ಎಂಬಂತೆ ಈಗಾಗಲೇ (5-7-2020) ಮೊದಲನೆಯ ಕಂತು ಬಹಳ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ನಮ್ಮ ಸ್ಪರ್ಧಿಗಳು ಅತ್ಯಂತ ಹುರುಪಿನಿಂದ ಪ್ರೆಶ್ನೆಗಳಿಗೆ ಉತ್ತರಿಸಿ ಪುಸ್ತಕಗಳನ್ನು ತಮ್ಮದಾಗಿಸಿಕೊಂಡರು. ಎಂದಿನಂತೆ ೧೦ ಸುತ್ತುಗಳಿದ್ದರೂ ಹೊಸದೊಂದು ಸುತ್ತಿನ ಸೇರ್ಪಡೆ ಮೊದಲ ಕಂತನ್ನು ವಿಶೇಷವನ್ನಾಗಿಸಿತು. ಅದುವೇ ಚಿತ್ರ ಕವನ ಸುತ್ತು. ಇದು ಹೊಸ ಪ್ರಯೋಗವಾದರೂ ಪ್ರತಿಭಾನ್ವಿತರಾದ ನಮ್ಮ ಸ್ಪರ್ಧಿಗಳು ಚಿತ್ರವನ್ನು ನೋಡುತ್ತಿದ್ದಂತೆಯೇ  ಲೀಲಾಜಾಲವಾಗಿ ಆಶು ಕವನಗಳ ಮಳೆಯೇ ಸುರಿಸಿದರು. ಒಬ್ಬರಿಗಿಂದ ಒಬ್ಬರು ಅದ್ಬುತ ಕವನಗಳು. ಇದರಿಂದ ಪ್ರೇರೇಪಿತರಾದ ವೀಕ್ಷಕರೂ ಕೂಡ ಕವನಗಳನ್ನು ಬರೆದು ಕಳಿಸಿದ್ದು ವಿಶೇಷವಾಗಿತ್ತು . ಇಡೀ ಕಾರ್ಯಕ್ರಮದ ರೆಕಾರ್ಡಿಂಗನ್ನು ಕೆಳಗಿನ ಫೇಸ್ ಬುಕ್ ಲಿಂಕ್ನಲ್ಲಿ ನೋಡಬಹುದು:

; __ATA.cmd.push(function() { __ATA.initVideoSlot('atatags-370373-69fcb2928ce5c', { sectionId: '370373', format: 'inread' }); });