ಮದುಮಗಳು ಬೇಕಾಗಿದ್ದಾಳೆ – ವತ್ಸಲಾ ರಾಮಮೂರ್ತಿ

ಸಿಟ್ಟಿಂಗ್ ರೂಮಿನಲ್ಲಿ ಗಂಡ ಟೀ ಕುಡೀತಾ, ಕೋಡುಬಳೆ ತಿನ್ನುತ್ತಾ ಕುಳಿತಿದ್ದಾನೆ. ಹೆಂಡತಿ ಹೊಸ ಸೀರೆ ಉಟ್ಟು, ದೊಡ್ಡ ಕುಂಕಮವನಿಟ್ಟುಕೊಂಡು, ಹೂವ ಮುಡಿದು, ಕಳಕಳಂತ ಬರುತ್ತಾಳೆ.

ಹೆಂಡತಿ: ಏನೊಂದ್ರೆ? ಆರಾಮವಾಗಿ ಟೀ ಕುಡೀತ ಕೂತಿದ್ದೀರಾ? ಹುಡುಗಿ ಮನೆಯವರು ಹೆಣ್ಣನ್ನು ಕರಕೊಂಡು ಬರುತ್ತಿದ್ದಾರೆ. ಏಳಿ, ಪ್ಯಾಂಟು ಷರಟು ಬೂಟು ಟೈ ಕಟ್ಟಿಕೊಂಡು ಬನ್ನಿ. ಹಾಗೆ ಸೆಂಟು ಮೆತ್ತಿಕೊಳ್ಳಿ.

ಗಂಡ: ಅಮ್ಮ! ತಿಮ್ಮಣ್ಣಿ ! ಹುಡುಗಿ ನನ್ನ ನೋಡೋಕೆ ಬರುತ್ತಿಲ್ಲ ಕಣೆ. ನಿನ್ನ ಮುದ್ದಿನ ಮಗನ ನೋಡುವುದಕ್ಕೆ ಬರುತ್ತಿದ್ದಾರೆ. ನಾನು ಸೊಟು ಗೀಟು ಹಾಕಲ್ಲ. ಜರತಾರಿ ಪಂಚೆ, ಶಲ್ಯ, ಮುದ್ರೆ ಹಾಕಿಕೊಂಡು ಬರುತ್ತೇನೆ.

ಹೆಂಡತಿ: ಅಯ್ಯೊ! ಹುಡುಗಿ ಮನೆಯವರು ತುಂಬಾ ಮಾಡರ್ನ್ ಮತ್ತು ಸ್ಮಾರ್ಟ್ ಅಂತೆ. ಹುಡುಗಿ ಗ್ರಾಜುಯೆಟ್‌. ವೃತ್ತಿಯಲ್ಲಿರುವ ಹುಡುಗಿ. ಇಂಗ್ಲೀಷ್ ಚೆನ್ನಾಗಿ ಮಾತನಾಡುತ್ತಾಳಂತೆ. ಅಲ್ಲಾ, ನನ್ನ ಯಾಕೆ ತಿಮ್ಮಣ್ಣಿ ಅಂತ ಕರೀತಿರಿ? ನನ್ನ ಹೆಸರು ಸುಗಂಧ ಅಲ್ಲವೇ? ನಮ್ಮ ಅಮ್ಮ ತಿರುಪತಿ ದೇವರ ಹೆಸರು ಅಂತ ಹಾಗೆ ಕರೆದರು. ನಾನು ನಿಮ್ಮನ್ನ ಬೋಡು ಕೆಂಪಣ್ಣಂತ ಕರೀಲಾ?

ಗಂಡ: ಬೇಡ ಕಣೆ. ನಿನ್ನ ಮಗ ತಯಾರಾಗಿದ್ದಾನಾ? ಹೋಗಿ ನೋಡು. ಅಂದಹಾಗೆ ಹುಡುಗಿ ಮನೆಯವರಿಗೆ ಹುಡುಗ ಏನು ಓದಿದ್ದಾನೆ, ಕೆಲಸವೇನು ಅಂತ ಹೇಳಿದ್ದಿ ತಾನೆ?

ಹೆಂಡತಿ: ಅದೇರಿ ಅವನ ಹೆಸರು ಮುಸರೆಹಳ್ರಿ ಮಾದಪ್ಪಂತ ಹೇಳಿಲ್ಲ. ಅವನು ಮಿಸ್ಟರ್ ವಿವಿದ್ ಕುಮಾರ್‌. ಬಿಕಾಂ ಓದಿದ್ದಾನೆ. ಎಸ್ ಎಸ್ ಎಲ್ ಸಿ ಕನ್ನಡ ಮೀಡಿಯಮ್‌ ನಪಾಸು ಅಂತ ಗುಟ್ಟುಬಿಟ್ಟುಕೊಟ್ಟಿಲ್ಲ. ಅಕೌಂಟಂಟ್ ಅಂತ ಹೇಳಿದ್ದೀನಿ.

ಗಂಡ: ಏಷ್ಟು ಸಂಬಳ? ಫೋಟೋ ಕಳಿಸಿದ್ದಿಯಾ?

ಹೆಂಡತಿ: ಹೋಗ್ರಿ! ಬರೆ ೫೦೦ ರೊಪಾಯಿ ಸಂಬಳ , ಕಿರಾಣಿ ಅಂಗಡಿಯಲ್ಲಿ ಕಾರಕೊನಂತ ಹೇಳಿದರೆ ಯಾರು ಮದುವೆ ಮಾಡಿಕೊಳ್ಳುತ್ತಾರೆ? ಅದಕ್ಕೆ ೫೦೦೦ ರೂಪಾಯಿ ಸಂಬಳಂತ ಹೇಳಿದೆ. ಫೋಟೋಗೆ ಏನು ಮಾಡಿದೆಗೊತ್ತಾ? ಫೋಟೋಗ್ರಾಫರನಿಗೆ “ನೋಡಪ್ಪ, ನಮ್ಮ ಮಗನ ಫೋಟೊ ಸ್ಮಾರ್ಟ್ ಆಗಿ ಕಾಣೊ ಹಾಗೆ ಮಾಡಪ್ಪ ಅಂತ ಹೇಳಿದೆ.“ ಅವನು ನಮ್ಮ ಕುಮಾರನ ಉಬ್ಬು ಹಲ್ಲು , ಬೋಳು ತಲೆಯನ್ನು ಮರೆಮಾಚಿದ್ದಾನೆ. ಕರಿಬಣ್ಣ ಫೋಟೋದಲ್ಲಿ ಕಾಣುವುದಿಲ್ಲ.

ಗಂಡ: ಅಲ್ಲ ಕಣೆ , ನೀನೇನೊ ಹುಡುಗ ಬಿಕಾಂ ಅಂತ ಹೇಳಿದ್ದೀ . ಹುಡುಗಿ ಇವನ್ನನ್ನ ಇಂಗ್ಲೀಷಿನಲ್ಲಿ ಮಾತಾನಾಡಿಸಿದರೆ ನಮ್ಮ ಕುಮಾರನಿಗೆ ಉತ್ತರಿಸಲು ಸಾದ್ಯವೇ? ಒಂದು ವಾಕ್ಯ ಇಂಗ್ಲೀಷಿನಲ್ಲಿರಲಿ, ಕನ್ನಡದಲ್ಲಿ ಬರೆಯಲು ಬರಲ್ಲ. ಎಷ್ಟು ಸಾರಿ ಇಂಗ್ಲೀಷಿನಲ್ಲಿ ನಪಾಸಾಗಿದ್ದಾನೆ. ಕಡೆಯಲ್ಲಿ ಕನ್ನಡ ಮೀಡಿಯಮ್ಮಿನಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಗೋತ ಹೋಡಿಲ್ಲಿಲ್ಲವೇ?

ಹೆಂಡತಿ: ಬಿಡ್ರಿ! ನಮ್ಮ ಕುಮಾರನಂಥ ಗಂಡ ಸಿಗಬೇಕಾದರೆ ಪುಣ್ಯ ಮಾಡಿರಬೇಕು.

ಅಷ್ಟರಲ್ಲಿ ಹುಡುಗ ಬರುತ್ತಾನೆ.

ವಿವಿದ್ ಕುಮಾರ: ಅಮ್ಮ ಅಪ್ಪ, ನಾನು ಹುಡುಗೀನ ನೋಡಲ್ಲ. ಎಲ್ಲರೂ “ಹುಡಗ ಕೋತಿ ತರಹ ಇದ್ದಾನೆ, ನಾನು ಒಲ್ಲೆ ಅಂತಾರೆ. ಹೋಗಲಿ, ಹುಡುಗಿಯ ಕತೆ ಏನು? ಫೋಟೋ ಇದೆಯಾ? (ಪಾಪ! ಅವನಿಗೆ ಆಸೆ, ಹಸೆಮಣೆಯ ಮೇಲೆ ಕುಳಿತುಕೊಳ್ಳುಪುದಕ್ಕೆ!)

ತಾಯಿ: ಹುಡುಗಿ ಹೆಸರು ಸೋನಿಯಾ, ಅಂದ್ರೆ ಬಂಗಾರ ಕಣೊ. ಕಪ್ಪು ಬಂಗಾರ ಕಣೊ. ನೀನು ಅದೃಷ್ಟವಂತ. ೧೫ನೇ ಹುಡುಗಿನಾದಾರೂ ಓಪ್ಪುತ್ತಾಳೇನೊ?

ಹುಡುಗ: ಹಾಗಾದರೆ ಏನು ತಿಂಡಿ ಮಾಡಿದ್ದಿ ಅವರಿಗೆ?

ತಾಯಿ: ನೀನೊಬ್ಬ ತಿಂಡಿಪೋತ! ಖಾರದ ಮೆಣಸಿನಕಾಯಿ ಬೊಂಡ ಮತ್ತು ಗಟ್ಟಿ ಉಂಡೆ ಮಾಡಿದ್ದೇನೆ.

ಅಷ್ಟರೊಳಗೆ ಹೂರಗೆ ಕಾರಿನ ಶಬ್ದ.

ಗಂಡ: ಅವರು ಬಂದ್ರು (ಓಡಿಹೋಗಿ ಬಾಗಿಲು ತೆರೆಯುತ್ತಾನೆ).

ಹುಡುಗಿ ಒಳಗೆ ಬಂದಳು!
ಗಂಡನ ಕಡೆಯವರು ತರತರ ನಡುಗಿದರು!
ಏದೆಡಭಢಭ ಬಡಿಯಿತು..!
ಹುಡುಗಿ ಹೇಗಿದ್ದಳು ಗೊತ್ತಾ?
ಆರು ಅಡಿ ಉದ್ದ , ಕಪ್ಪಗೆ ಇದ್ದಾಳೆ. ದೂಡ್ಡ ಬೂಟ್ಸ್ ಹಾಕಿಕೊಂಡಿದ್ದಾಳೆ. ಪೋಲೀಸ್ ಯುನಿಫಾರ್ಮ್-ನಲ್ಲಿ ಬಂದ್ದಿದ್ದಾಳೆ!

ಅವಳು: ಹುಡುಗ ಯಾರು? (ಗುಡಿಗಿದಳು).

ಹುಡುಗ ನಡುಗಿದ ಮತ್ತೊಮ್ಮೆ.

ಹುಡುಗಿ: ನನಗೆ ಈ ಮಂಕುತಿಮ್ಮನೆ ಬೇಕು. ಹೇಳಿದ ಹಾಗೆ ಕೇಳುತ್ತಾನೆ.

ಮದುವೆ ಓಲಗ ಊದಿಸಿಯೇ ಬಿಟ್ಯರು.

ಜೋಗುಳ- ಶ್ರೀರಕ್ಷೆ


ನಮಸ್ಕಾರ ಅನಿವಾಸಿ ಬಳಗಕ್ಕೆ.

ಜೀವನದಲ್ಲಿ ಒಮ್ಮೆಯಾದರೂ ಜೋಗುಳ ಕೇಳದ, ಜೋಗುಳ ಹಾಡದ ವ್ಯಕ್ತಿಗಳು ಇರಲಿಕ್ಕಿಲ್ಲ. ಇಂದಿನ ಸಂಚಿಕೆಯ ಬರಹಗಳು ಹಾಗೂ ನಮ್ಮ ಅನಿವಾಸಿಯ ಹೆಮ್ಮೆಯ ಹಾಡುಗಾರ್ತಿ ಅಮಿತಾ ಅವರ ಅತ್ಯಪರೂಪದ ಜೋಗುಳ ಪದ ನಿಮ್ಮನ್ನೂ ನಿಮ್ಮ ಬಾಲ್ಯಕ್ಕೋ,ನಿಮ್ಮ ಮಕ್ಕಳ ಬಾಲ್ಯಕ್ಕೋ ಖಂಡಿತ ಕರೆದೊಯ್ಯಬಹುದೆಂಬ ನಂಬಿಕೆಯೊಂದಿಗೆ,
~ ಸಂಪಾದಕಿ

ಈ ‘ಜೋ ಜೋ ಜೋ ಜೋ’  ಜೋಗುಳ, ಲಾಲಿ ಅನ್ನೋ ಪದ ಕೇಳಿದ್ರೇನೇ  ಒಂಥರಾ ತೂಗಿದ್ಹಂಗ ಅನಿಸಿ ಕಣ್ರೆಪ್ಪೆ ಭಾರ ಆದ್ಹಂಗ ಆಗತದ. ದಾಸರ ಭಕ್ತಿ ಗೀತೆಗಳು, ಜಾನಪದ, ಕವಿಗಳ ಭಾವಗೀತೆಗಳು ಕೊನೆಗೆ ಸಿನೆಮಾ ಹಾಡುಗಳು..ಹೀಂಗ ಎಲ್ಲ ಪ್ರಕಾರಗಳಲ್ಲೂ ಲಾಲಿ ಹಾಡು, ಜೋಗುಳ  ಅಷ್ಟೇ ಸಶಕ್ತವಾಗಿ, ಸುಂದರವಾಗಿ ಮೂಡಿ ಬಂದಿದ್ದು ಭಾಳ ಸೋಜಿಗ ಅನಸತದ ನನಗ.  ‘ಜೋ ಜೋ ಶ್ರೀ ಕೃಷ್ಣಾ ಪರಮಾನಂದ’ ಎಂಬಂಥ ದಾಸರ ಪದಗಳಿರಲಿ, ‘ಅತ್ತರೆ  ಅಳಲವ್ವಾ ಈ ಕೂಸು ನನಗಿರಲಿ’ ಎಂಬಂಥ ಜಾನಪದವಿರಲಿ, ‘ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ’  ಎನ್ನುವ ಕವಿ ಭಾವವಿರಲಿ, ‘ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ’ ಎನ್ನುವಂಥ ಚಲನಚಿತ್ರ ಗೀತೆಗಳಿರಲಿ ..ಅಲ್ಲೆಲ್ಲಾ ಹರಿದಿರುವುದು ವಾತ್ಸಲ್ಯದ ಹೊನಲೇ. ಮಾಂಸದ ಮುದ್ದೆಯೊಂದು ಕಣ್ಣು-ಮೂಗುಗಳ ಚಿತ್ರ ಬರೆಸಿಕೊಂಡು ಈ ಜಗತ್ತಿಗೆ ಬಂದು ನಮ್ಮ ‘ ಜಗತ್ತೇ’ ಆಗಿ ಬಿಡುವುದು ಅದ್ಯಾವ ಮಾಯೆಯೋ ಕಾಣೆ. 

ನಾನು ಇಲ್ಲಿ ಗಮನಿಸಿದ್ದು ಎರಡು ಅಂಶಗಳನ್ನು. ಒಂದು ತಾಯಿ ಆದಾಕಿ ತನ್ನ ಕಂದನಲ್ಲೇ ಭಗವಂತನನ್ನು ಕಂಡು ಆ ಭಾವವನ್ನು ದೈವೀಕತೆಗೇರಿಸುವ ಪರಿ .
“ ಅಳುವ ಕಂದನ ತುಟಿಯು ಹವಳದ ಕುಡಿಹಂಗ
ಕುಡಿಹುಬ್ಬು ಬೇವಿನೆಸಳ್ಹಂಗ| ಕಣ್ಣೋಟ ಶಿವನ ಕೈಯಲಗು ಹೊಳೆದ್ಹಂಗ|”
ಇಲ್ಲಿ ಮರ್ತ್ಯವನ್ನು ಅಮರ್ತ್ಯಕ್ಕೇರಿಸುತ್ತಿದ್ದಾಳೆ. ತನ್ನ ಕಂದನ ಕಣ್ ಹೊಳಪಲ್ಲಿ ಕೈಲಾಸದ ಪರಶಿವನ ಕೈಯ ತ್ರಿಶೂಲದ ಹೊಳಪು ಕಾಣುತ್ತಿದ್ದಾಳೆ .
ಇನ್ನೊಂದು ಇದಕ್ಕೆ ವಿಪರೀತವಾಗಿ ಮೂಲೋಕದೊಡೆಯನನ್ನು ಭೂಮಿಗೆಳೆತಂದು ಅವನಿಗೆ ಶಿಶುತನವನ್ನು ಆರೋಪಿಸುವುದು.
‘ ಗುಣನಿಧಿಯೇ ನಿನ್ನನೆತ್ತಿಕೊಂಡಿದ್ದರೆ ಮನೆಯ ಕೆಲಸವನಾರು ಮಾಡುವರಯ್ಯ? ಮನಕೆ ಸುಖನಿದ್ರೆ ತಂದುಕೋ ಬೇಗ ಫಣಿಶಯನನೇ ನಿನ್ನ ಪಾಡಿ ತೂಗುವೆನಯ್ಯ”
ಇಲ್ಲಿ ತಾಯ ಕೈಬಿಡದೇ ರಗಳೆ ಮಾಡುವ ಕಂದನ ಗುಣವನ್ನು ಭಗವಂತನಿಗೆ ಆರೋಪಿಸಲಾಗಿದೆ.
ಈ ಜೋಗುಳಗಳಲ್ಲಿ ತಾಯ್ತನದ ಧನ್ಯತೆಯ ಭಾವ, ಮುಂದಿನ ಹಸನಾದ ಭವಿತವ್ಯದ ಹಾರೈಕೆ- ಹರಕೆಗಳು, ತನ್ನ ಮಗುವಿನ ಬಗೆಗಿನ ಅಭಿಮಾನ ಎಲ್ಲವುಗಳನ್ನೂ ಕಾಣಬಹುದಾಗಿದೆ. ಈ ಕೆಳಗಿನ ಪದ್ಯಗಳನ್ನು ನೋಡಿ..
1) ‘ಅತ್ತು ಕಾಡುವನಲ್ಲ, ಮತ್ತೆ ಬೇಡುವನಲ್ಲ, ‘ಎತ್ತಿಕೋ’ ಎಂಬಂಥ ಹಟವಿಲ್ಲ..ಕಂದನ(ತನ್ನ ಮಗುವಿನ ಹೆಸರನ್ನು ಇಲ್ಲಿ ಹೇಳಬಹುದು ‘ಕಂದನ’ ಬದಲಿಗೆ) ಲಕ್ಷಣಕ ಲಕ್ಷ್ಮಿ ಒಲತಾಳು.(ಅಭಿಮಾನ,ಹೆಮ್ಮೆಯ ಭಾವ)
2) ‘ಅತ್ತರೆ ಅಳಲವ್ವಾ ಈ ಕೂಸು ನನಗಿರಲಿ.
ಕೆಟ್ಟರೆ ಕೆಡಲವ್ವ ಮನೆಗೆಲಸ
ಕಂದಮ್ಮನಂಥ ಮಕ್ಕಳಿರಲವ್ವ ಮನೆತುಂಬ’ (ವಾತ್ಸಲ್ಯದ ಧನ್ಯತಾ ಭಾವ)
3) ಆಡುತಾಡುತ ಹೋಗಿ ಜೋಡೆರಢು ಮನೆಕಟ್ಟಿ ಬೇಡ್ಯಾಳ ಬೆಲ್ಲ-ಬ್ಯಾಳಿಯ..ಮಾಡ್ಯಾಳ ಮಾಮಾನ ಮದುವೀಯ..(ಭವಿಷ್ಯದ ಹಾರೈಕೆ)
ಇಲ್ಲಿ ಸಂದರ್ಭಕ್ಕನುಸಾರವಾಗಿ ಅಣ್ಣನ ಮುಂಜಿ, ಸೋದರತ್ತೆಯೋ, ಮಾಂಶಿಯರದೋ ಮದುವೆ, ಸೀಮಂತವೋ ಯಾವುದನ್ನಾದರೂ ಸೇರಿಸಿಕೊಳ್ಳಬಹುದು. ಮನೆಗೆ ಬಂದ ಹೊಸ ಕಂದಮ್ಮ ಸುತ್ತಲಿನವರ ಭಾಗ್ಯದ ಬೆಳಕಾಗಲಿ ಎಂಬುದು ಹಡೆದವಳ ಆಶಯ.
ತೀರ ಪುಟ್ಟ ಮಗುವಿಗೆ ಜೋಗುಳದ ರಿದಮ್, ಅಮ್ಮನ ದನಿ, ಮತ್ತು ಆ ಲಯಬದ್ಧವಾದ ಜೋಳಿಗೆಯ ತೂಗುವಿಕೆಗೆ ನಿದ್ದೆ ಬರುತ್ತದೇನೋ? ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ‘ಹಂಗಂದ್ರ’ ಅಂತ ಹಾಡಿನ ಅರ್ಥವನ್ನೂ ಕೇಳಿ ತಮಗೆ ತಿಳಿದ ನೆಲೆಯೊಳಗೆ ಕಲ್ಪನಾವಿಸ್ತಾರ ಮಾಡಿಕೊಳ್ಳುತ್ತವೇನೋ ಮಕ್ಕಳು.
ನನ್ನ ಅವಳಿ ಮಕ್ಕಳಿಬ್ಬರಿಗೂ ‘ಪಾಲಗಡಲದೊಳು ಪವಡಿಸಿದವನೇ, ಆಲದೆಲೆಯ ಮೇಲೆ ಮಲಗಿದ ಶಿಶುವೆ’ ಎನ್ನುವ ಪುರಂದರ ದಾಸರ ಹಾಡು ಇಷ್ಟ ವಾಗುತ್ತಿತ್ತು. ಅಷ್ಟಿಷ್ಟು ಅರ್ಥವನ್ನೂ ಹೇಳಿದ್ದೆ. ಅವರು ಸುಮಾರು ಮೂರು- ಮೂರೂವರೆ ವರ್ಷ ದವರಿದ್ದಾಗ ಮಾತು ಮಾತಿಗೊಮ್ಮೆ ಸಿಪ್ಪರ್ ನಲ್ಲಿ ಹಾಲು ಕುಡಿಯಲು ಕೇಳವ್ರು. ಹಾಲು ಕುಡಿದರೆ ಊಟಕ್ಕೆ ಕಿರಿಕಿರಿ ಮಾಡುತ್ತಾರೆಂದು ನಾನು ‘ಹಾಲು ಖಾಲಿ ಆಗ್ಯಾವ’ ಅಂತಲೋ , ‘ಸ್ವಲ್ಪೇ ಅವ ಅಜ್ಜಾಗ ಛಾಕ್ಕ ಬೇಕು’ ಅಂತಲೋ, ‘ಅಯ್ಯ , ಈಗಷ್ಟೇ ಎಲ್ಲಾ ಹೆಪ್ಪು ಹಾಕಿದೆ’ ಅಂತಲೋ ಹೇಳಿ ಜಬರದಸ್ತಿ ಅನ್ನ, ಚಪಾತಿ ಊಟ ಮಾಡಿಸುತ್ತಿದ್ದೆ. ಒಮ್ಮೆ ನನ್ನ ಮಗಳು ಅಕ್ಷತಾ ‘ಅವಾ ಕೃಷ್ಣ ಎಷ್ಟು ಲಕ್ಕಿ ಇದ್ದಾನಲಾ ಅಮ್ಮಾ, ಅವರ ಮನ್ಯಾಗ ಹಾಲಿನ ಸಮುದ್ರನೇ ಇರತದ. ಹಾಲು ಖಾಲಿನೇ ಆಗಂಗಿಲ್ಲ. ಯಾವಾಗ ಬೇಕು ಆವಾಗ ಮಂಚದ ಮ್ಯಾಲಿಂದ ಬಗ್ಗೂದು..ಸಿಪ್ಪರ್ ತುಂಬಿಕೊಳ್ಳೂದು.. ಹಾಲು ಕುಡಿಯೂದು..ಮಸ್ತ್ ಅಲಾ ಅಮ್ಮಾ?” ಎಂದು ಹೊಳೆವ ಕನಸುಗಂಗಳಿಂದ ನುಡಿದು ನಂಗ ದಂಗ ಬಡಿಸಿದ್ಲು.
ಒಟ್ಟಿನಲ್ಲಿ ದೇಶ-ಭಾಷೆಗಳ ಹಂಗಿಲ್ಲದ ಸುಂದರ ಭಾವಯಾನ ಈ ಜೋಗುಳ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಮ್ಮನ ಮಡಿಲೋ, ಜೋಳಿಗೆಯೋ, ತೊಟ್ಟಿಲೋ, ಕ್ಯ್ರಾಡಲ್ಲೋ, ಕ್ರಿಬ್ಬೋ, ಬೆಡ್ಡೋ ಏನೇ ಇರಲಿ ಜೋಗುಳದ ಸೊಗಡೆಂದೂ ಮಾಸದಿರಲಿ. ಅಂತೆಯೇ ತುಂಬ ಆಪ್ತವಾದ ಈ ರಕ್ಷೆಗಳು-ಹರಕೆಗಳು ತಮ್ಮ ಧನಾತ್ಮಕ ತರಂಗಗಳನ್ನು ವಿಶ್ವದೆಲ್ಲೆಡೆ ಪಸರಿಸುತ್ತಿರಲಿ.
“ಆ ರಕ್ಷಿ, ಈ ರಕ್ಷಿ , ಕಣ್ಣಿಗೆ ಕಾಮನ ರಕ್ಷಿ, ಬೆನ್ನಿಗೆ ಭೀಮನ ರಕ್ಷಿ, ಮೂಗಿಗೆ ಮುಕುಂದನ ರಕ್ಷಿ, ಮಂಡಿಗೆ ಮಾಧವನ ರಕ್ಷಿ, ಕುಂಡಿಗೆ ಕೂರ್ಮನ ರಕ್ಷಿ, ರಟ್ಟಿಗೆ ರಾಮನ ರಕ್ಷಿ, ಹೊಟ್ಟಿಗೆ ವಿಠಲನ ರಕ್ಷಿ, ಕೈಗೆ ಕೃಷ್ಣನ ರಕ್ಷಿ, ಕಾಲಿಗೆ ಕಲ್ಕಿ ರಕ್ಷಿ..ಎಲ್ಲಾರ ರಕ್ಷಿ ನಮ್ಮ ಕಂದಮ್ಮಗ”.. ಅಳ್ನೆತ್ತಿಗೆ ನಸುಬಿಸಿ ಎಣ್ಣೆಯೊತ್ತಿಸಿಕೊಂಡು, ಅಜ್ಜಿಯ ತೊಡೆಯ ಮೇಲೆ ಮಲಗಿ ಹದವಾದ ಬಿಸಿನೀರೆರೆಸಿಕೊಂಡು ‘ಹೋ’ ಎಂದು ದನಿ ತೆಗೆದು ಅತ್ತು ಸುಸ್ತಾದ ಕಂದಮ್ಮನನ್ನು ಅಜ್ಜನ ಹಳೆಯ ಮೆತ್ತನೆಯ ಧೋತರ ತುಂಡಿನಲ್ಲಿ ಹೊರಕೋಣೆಗೆ ಸುತ್ತಿ ತಂದಾದ ಮೇಲೆ ಘಮ್ಮನೆಯ ಲೋಬಾನದ ಹೊಗೆ ಹಾಕುತ್ತ ಅಜ್ಜಿಯೋ, ಅಮ್ಮನೋ, ಮತ್ತ್ಯಾರೋ ತಾಯಂಥಕರಣದವರೋ ಈ ರಕ್ಷಾ ಮಂತ್ರವನ್ನು ಹೇಳೇ ಹೇಳುತ್ತಿದ್ದರು.

ಸಾಕಷ್ಟು ದೊಡ್ಡವರಾದ ಮೇಲೂ ‘ ಕಲ್ಲಾಗು, ಗುಂಡಾಗು, ಕರಕಿ ಬೇರಾಗು, ಅಗಸಿ ಮುಂದಿನ ಬೋರ್ಗಲ್ಲಾಗು..ಶ್ರೀರಾಮ ರಕ್ಷಿ..ಜಯರಾಮ ರಕ್ಷಿ” ಎನ್ನುವ ಈ ರಕ್ಷೆ ಇಲ್ಲದೇ ಹಬ್ಬ- ಹುಣ್ಣಿಮೆಗಳಂದು, ರವಿವಾರದ ರಜಾ ದಿನಗಳಂದು ನಮ್ಮ ನೆತ್ತಿಗೂ ಎಣ್ಣೆ ಬಿಸಿನೀರು ಬೀಳುತ್ತಿರಲಿಲ್ಲ.
‘ರೋಮರೋಮಗಳಲ್ಲಿ ಭೀಮರಕ್ಷಿಯ ಬಲ ಕೊರಳಾಗ ಕಟ್ಟೀರಿ ಒಂದಾನ’ ತಮ್ಮ ‘ಕರಡಿ ಕುಣಿತ’ದಲ್ಲಿ ಬೇಂದ್ರೆಯವರು ಹಾಡಿದಂತೆ ನಾವೂ ಕೂಡ ಸಣ್ಣವರಿದ್ದಾಗ ಕರಿದಾರದ ಕೊರಳ ತಾಯತದಲ್ಲಿ ಈ ಕರಡಿ ಕೂದಲಿನ ಭೀಮರಕ್ಷೆಯನ್ನು ಕಟ್ಟಿಕೊಂಡೇ ಬೆಳೆದವರು.
“ ನೀನಾವ ಧರ್ಮಂ ಗುರಿಗೆಯ್ದು ಹೊರಟಿಹೆಯೋ ಆ ಧರ್ಮದೇವತೆಯೇ ರಕ್ಷೆಯಾಗಲಿ ನಿನಗೆ!
ನೀಂ ಪೂಜೆಗೈದಿರ್ಪ ದೇವಾನುದೇವತೆಗಳೆಲ್ಲರೂ ನಿನಗಕ್ಕೆ ರಕ್ಷೆ!
ಮಾತಾಪ್ರೀತಿ,ಪಿತೃಭಕ್ತಿ, ಜನದೊಲ್ಮೆಗಳ್ ಚಿರಜೀವವಂ ನಿನಗೆ ದಯೆಗೈಯ್ಯೆ!
ಗಿರಿವನಂ ಪಕ್ಷಿಪನ್ನಗರೆಲ್ಲರುಂ ರಕ್ಷೆಯಕ್ಕಯ್ ನಿನಗೆ!
ರಕ್ಷಿಸಲಿ ಹಗಲಿರುಳು ಬೈಗುಬೆಳಗುಗಳಿನಂ ಶಶಿ ತಾರೆ ಸಪ್ತರ್ಷಿ ಮಂಡಲಂ ದಿಕ್ಪಾಲ ದೇವದಾನವರೆಲ್ಲರುಂ ರಕ್ಷಿಸಲಿ!
ಕ್ರಿಮಿಕೀಟ ಕಪಿ ಚೇಳುಗಳ್ ಹುಲಿ ಸಿಂಹನಕ್ಕಲಂ ಕಾಳ್ಕೋಣ ಮೊದಲಪ್ಪ ವಿಷಜಂತು ಕೋಳ್ಮಿಗಂಗಳ್ ಕಾಪಾಡಲಿ ನನ್ನ ಮೊಲೆವಾಲ ಮೂರ್ತಿಯಂ ರವಿಕುಲ ಲಲಾಮನೀ ರಾಮಾಭಿರಾಮನುಂ !
ಮಗುವು ಮಜ್ಜನಕಿಳಿಯುವಂದು ಜಲದೇವಿಯರೇ, ಮಕರ ನಕ್ರಗಳಿಂದೆ ರಕ್ಷಿಸಿಂ! ರಕ್ಷಿಸಿಂ ಕಾಂತಾರದಧಿದೇವಿಯರೇ, ಕಂದನಡವಿಯೊಳ್..ಪುತ್ತಿನೆಡೆ ಪವಡಿಸಿರೆ, ಮತ್ತೆ ಮರಗಳ ಕೆಳಗೆ ತಂಪು ನೆಳಲೊಳ್ ಮಲಗಿರಲ್ಕೆ! ತಾಯೊಲವಾಣೆ ನಿಮಗೆ, ಓ ಸಿಡಿಲ್ಮಿಂಚು, ಬಿರುಗಾಳಿಗಳೇ ಕೇಳಿಮ್ ಹೆತ್ತು ಹೊರೆದೀ ಹೃದಯದಭಿಶಾಪಂ ನಿಮಗಕ್ಕೆ ಹಸುಳೆ ರಾಮಗೆ ನಿಮ್ಮ ಕತದಿಂದೆ ಭವಿಸಿದಡೆ ಕೇಡು! ಓ ವಿಧಿಯೇ, ಹೇ ಸರ್ವಲೋಕಪ್ರಭೂ, ಕೊಳ್ಳಿದೋ ನಿವೇದಿಸುವೆನಾತ್ಮದೊಲುಮೆಯಂ ರಾಮ ಮಂಗಲ ಕಾರಣಂ ತವ ಚರಣ ತಲಕೆ”!

ವನವಾಸಕ್ಕೆ ಹೊರಟುನಿಂತ ರಾಮಚಂದ್ರನಿಗೆ ಕೌಸಲ್ಯೆ ನೀಡಿದ ಹರಕೆ-ರಕ್ಷೆಯಿದು. ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ದ ಅಯೋಧ್ಯಾ ಸಂಪುಟದಲ್ಲಿ ಬರುವ ಅತ್ಯಂತ ಹೃದಯಸ್ಪರ್ಶಿ ಭಾಗವಿದು. ಮಗನಾದವನು ದೇವಾಧಿದೇವನಾದರೇನು ತಾಯ್ ಕರುಳಿಗೆ ಅವನು ಹಸುಳೆಯೇ ತಾನೇ?

ಇಡಿಯ ಭರತವರ್ಷ ಅಯೋಧ್ಯಾನಗರಿಯ ರಾಮಲಲ್ಲಾನ ಸಂಭ್ರಮೋತ್ಸಾಹದಲ್ಲಿದೆ. ಜಾತಿ-ವರ್ಗ-ವರ್ಣ-ಪಂಥ-ರಾಜಕಾರಣ ಎಲ್ಲ ರಾಜಕೀಯಗಳಾಚೆಯೂ ಪುರುಷೋತ್ತಮನಾದ ಆ ‘ಶ್ರೀ ಸಂಸಾರಿ’ ಯ ರಕ್ಷೆ ಮನುಷ್ಯತ್ವವನ್ನು, ಜೀವನ ಮೌಲ್ಯಗಳನ್ನು ಪೊರೆಯಲೆಂಬ ಸದಾಶಯಗಳೊಂದಿಗೆ..

“ ಶ್ರೀರಾಮ ರಕ್ಷಿ..ಜಯರಾಮ ರಕ್ಷಿ”.

ಜನಪದ ಜೋಗುಳ ಪದ – ಅಮಿತಾ ರವಿಕಿರಣ