ಎರಡು ಕವನಗಳು ಮತ್ತು ಒಂದು ಲೇಖನ – ಕೇಶವ ಕುಲಕರ್ಣಿ

ನೋಡೂಣಂತ

(AI generated image)

ಕೇಳೀನಿ ಮಂದಿ ಅಕಿನ್ನ ಕಣ್ಣ ಪಿಳಕಿಸದs ನೋಡ್ತಾರಂತ
ಹಂಗಾರ ಈ ಊರಾಗ ನಾಕಾರ ದಿನ ಇದ್ದು ನೋಡೂಣಂತ

ಕೇಳೀನಿ ಸೋತವ್ರು ನೊಂದವ್ರಂದ್ರ ಅಕಿ ಕರುಳ ಕರಗತದಂತ
ಹಂಗಾರ ಮನಿ ಮಠಾ ಕಳಕೊಂಡು ಹಾಳಾಗಿ ಹೋಗೂಣಂತ

ಕೇಳೀನಿ ಅಕಿ ನೋಟದಾಗ ಪ್ರೀತಿ ತುಂಬೇತಂತ
ಹಂಗಾರ ಅಕಿ ಮನಿ ಮುಂದ ಫಿರಕಿ ಹೊಡ್ಯೂಣಂತ

ಕೇಳೀನಿ ಅಕಿಗೆ ಹಾಡು ಕವನ ಭಾಳ ಸೇರ್ತಾವಂತ
ಹಂಗಾರ ಒಂದು ಕವನ ಬರದು ಹಾಡೇ ಬಿಡೂಣಂತ

ಕೇಳೀನಿ ಅಕಿ ಮಾತಾಡಿದ್ರ ಮಲ್ಲಿಗಿ ಉದರತಾವಂತ
ಹಂಗಾರ ತಡಾ ಯಾಕ ಮಾತಾಡಿಸಿಯೇ ತೀರೂಣಂತ

ಕೇಳೀನಿ ಅಕಿ ತುಟಿ ಕಂಡ್ರ ಗುಲಾಬಿಗೆ ಹೊಟ್ಟೆಕಿಚ್ಚಂತ
ಹಂಗಾರ ವಸಂತ ಮಾಸದ ಮ್ಯಾಲ ಕಟ್ಲೇ ಹಾಕೂಣಂತ

ಕೇಳೀನಿ ಅಕಿ ನೋಡಿದ್ರ ಸಾಕು ಮಂದಿಗೆ ಹುಚ್ಚ ಹಿಡಿತದಂತ
ಹಂಗಾರ ಹುಚ್ಚರೊಳಗ ದೊಡ್ಡ ಹುಚ್ಚಾಗಿ ಕುಣ್ಯೂಣಂತ

(ಅಹಮದ್ ಫರಾಜ್ ಬರೆದ `ಸುನಾ ಹೈ ಲೋಗ್ ಉಸೆ ಆಂಖ್ ಭರ್ ಕೆ ದೇಖತೇ ಹೈಂ` ಎನ್ನುವ ಹಾಡು ಓದುತ್ತ ಕೇಳುತ್ತ ನನಗೆ ತಿಳಿದಂತೆ ಕೆಲವು ಸಾಲುಗಳನ್ನು ಭಾವಾನುವಾದ ಮಾಡುವಾಗ ಮೂಡಿದ್ದು)

ಆ ಕತೆಯನ್ನು ತಿನ್ನಲು ಬಿಡಬಾರದಿತ್ತು

(AI generated image)

ನಾನು ಬರೆದ ಆ ಕತೆಯನ್ನು ತಿಂದಳು
ಆ ಕತೆ ತಿಂದಾದ ಮೇಲೆ ನಾ ಬರೆದ
ಎಲ್ಲ ಕವನಗಳನ್ನೂ ಟಿಪ್ಪಣೆಗಳನ್ನೂ
ನನ್ನ ಟೇಬಲ್ಲನ್ನೂ ಸ್ವಚ್ಛ ಮಾಡಿದಳು

ನಾನು ಅವಳನ್ನು ತಡೆಯಹೋದೆ
ನಕ್ಕು ಕಣ್ಣು ಮಿಟುಕಿಸದಳು

ಗೋಡೆಗೆ ಹಾಕಿದ್ದ ಪೋಸ್ಟರುಗಳನ್ನು ಹರಿದಳು
ಸ್ಟಿಕಿ ನೋಟ್ಸುಗಳನ್ನು ಬೀಸಾಕಿದಳು
ನನ್ನ ಬಳಿಯಿದ್ದ ಎಲ್ಲ ಪುಸ್ತಕಗಳನ್ನು
ಗೋಣೀಚೀಲದಲ್ಲಿ ತುಂಬಿ ಕಸದ ತೊಟ್ಟಿಗೆಸೆದಳು

ನಾನು ಅವಳನ್ನು ತಡೆಯಹೋದೆ
ಕೈ ಸವರಿ ಮಾತಿಗಿಳಿದಳು

ನನ್ನ ಎಲ್ಲ ಪಾಸ್ವರ್ಡ್ ಪಡೆದಳು
ನನ್ನ ಬರವಣಿಗೆಯ ಫೈಲುಗಳನ್ನು
ನನ್ನ ಸಾಹಿತ್ಯದ ಗೆಳೆಯರ ಕಾಂಟ್ಯಾಕ್ಟ್ ನಂಬರುಗಳನ್ನು
ಎಲ್ಲ ಸೋಷಿಯಲ್ ಮೀಡಿಯಾಗಳನ್ನು ಅಳಿಸಿದಳು

ನಾನು ಅವಳನ್ನು ತಡೆಯಹೋದೆ
ಕೆನ್ನೆಗೆ ಕೆನ್ನೆ ಕೊಟ್ಟು ಸೆಲ್ಫಿ ತೆಗೆದಳು

ನನ್ನ ಹಳೆಬಟ್ಟೆಗಳನ್ನು ಬೀಸಾಕಿ
ಹೊಸ ಬಟ್ಟೆಗಳ ತಂದಳು
ಗಡ್ಡ ತಲೆಗಳ ಟ್ರಿಮ್ ಮಾಡಿದಳು
ಹೊಸ ಶ್ಯಾಂಪೂ ಪರ್ಫ್ಯೂಮು ತಂದಳು

ನಾನು ಅವಳನ್ನು ತಡೆಯಹೋದೆ
ಗಟ್ಟಿಯಾಗಿ ತಬ್ಬಿ ಚುಂಬಿಸಿದಳು

ಕಿಟಕಿಗೆ ಹೊಸ ಕರ್ಟನ್ನುಗಳನ್ನು ಹಾಕಿ
ನನ್ನ ಕೋಣೆಯ ಬಾಗಿಲಿಗೆ ಅಗುಳಿ ಹಾಕಿದಳು
ಮಲಗುವ ಮಂಚವನ್ನು ಗಟ್ಟಿಗೊಳಿಸಿ
ಹೊಸ ಗಾದೆ ದಿಂಬು ಹಾಕಿದಳು

ನಾನು ಇನ್ನು ತಡೆಯದಾದೆ
ಅವಳ ದೇಹದಲ್ಲಿ ಲೀನವಾದೆ

ಅವಳನ್ನು ನನ್ನ ಕೋಣೆಗೆ ಬಿಟ್ಟುಕೊಡಬಾರದಿತ್ತು
ಬಂದಿದ್ದರೂ ಆ ಕತೆಯನ್ನು ತಿನ್ನಲು ಬಿಡಬಾರದಿತ್ತು
ಅವಳು ತಿಂದ ಆ ಕತೆಯ ಹೆಸರು,
`ನನಗೆಂಥ ಹುಡುಗಿ ಬೇಕು?`

ನಾನು ಕತೆ ಕವನ ಬರೆಯುವುದನ್ನು ಬಿಟ್ಟು
ಈಗ ಹದಿನೈದು ವರ್ಷಗಳಾದವು

ವೈದ್ಯಕೀಯದಲ್ಲಿ ಕೃತಕ ಬುದ್ಧಿಮತ್ತೆ: ಭರವಸೆ ಮತ್ತು ಅಪಾಯ

(AI generated image)

ಕಾಡುಗಳಲ್ಲಿ ಅಲೆಯುತ್ತಿದ್ದ ಮನುಷ್ಯ ವ್ಯವಸಾಯವನ್ನು ಆರಂಭಿಸಲು ಲಕ್ಷಾಂತರ ವರ್ಷಗಳು ಬೇಕಾದವು. ವ್ಯವಸಾಯದ ಕ್ರಾಂತಿಯಿಂದ ಕೈಗಾರಿಕಾ ಕ್ರಾಂತಿಯಾಗಲು ಸಾವಿರಾರು ವರ್ಷಗಳು ಬೇಕಾದವು. ಕೈಗಾರಿಕಾ ಕ್ರಾಂತಿಯಿಂದ ಕಂಪ್ಯೂಟರ್ ಕ್ರಾಂತಿಯಾಗಲು ಕೆಲವೇ ನೂರು ವರ್ಷಗಳು ಸಾಕಾದವು. ಕಂಪ್ಯೂಟರ್ ಕ್ರಾಂತಿಯಿಂದ ಸ್ಮಾರ್ಟ್ ಫೋನ್ ಕ್ರಾಂತಿಯಾಗಲು ಕೆಲವೇ ದಶಕಗಳು! ಸ್ಮಾರ್ಟ್-ಫೋನ್ ಕ್ರಾಂತಿಯಾಗಿ ಇನ್ನೂ ಎರಡು ದಶಕಗಳು ಪೂರ್ತಿ ಮುಗಿದಿಲ್ಲ, ಕೃತಕ ಬುದ್ಧಿಮತ್ತೆಯ ಕ್ರಾಂತಿ ಆರಂಭವಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಬಿರುಗಾಳಿಯನ್ನು ಎಬ್ಬಿಸಿದೆ. ವೈದ್ಯಕೀಯ ಕ್ಷೇತ್ರವೂ ಇದಕ್ಕೆ ಹೊರತಲ್ಲ.

ಕೃತಕ ಬುದ್ಧಿಮತ್ತೆಯನ್ನು ಸಾಮಾನ್ಯ ಜನರಿಗೆ ಪರಿಚಯಿಸುವಲ್ಲಿ ಮುಖ್ಯ ಪಾತ್ರ ಚಾಟ್-ಜಿಪಿಟಿಯದು. ಅದಕ್ಕಿಂತೆ ಮೊದಲಿನಿಂದಲೇ ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಢಿಮತ್ತೆಯ ತಂತ್ರಜ್ಞಾನವನ್ನು ತರುವ ಪ್ರಯತ್ನಗಳು ಬಹಳಷ್ಟು ನಡೆದರೂ, ಚಾಟ್-ಜಿಪಿಟಿ ಬಂದ ಮೇಲೆ ವಿಜ್ಞಾನಿಗಳ, ವೈದ್ಯರ ಮತ್ತು ವೈದ್ಯಕ್ಷೇತ್ರಕ್ಕೆ ನೆರವಾಗುವ ಎಲ್ಲ ಉದ್ಯಮಗಳಲ್ಲಿ ಕೃತಕ ಬುದ್ಧಿಮತ್ತೆಯ ಮೇಲಿನ ಗಮನ ಹೆಚ್ಚಾಗಿದೆ. ಇನ್ನೂ ಅಂಬೆಗಾಲಿಡುತ್ತಿರುವ ಕೃತಕ ಬುದ್ಧಿಮತ್ತೆಯ ಬಹುಮುಖಿ ಸ್ವರೂಪಗಳು, ಅದರ ಭರವಸೆಗಳು, ಅಪಾಯಗಳು ಮತ್ತು ಸಂಭಾವ್ಯ ಮಾರ್ಗಗಳನ್ನು ವೈದ್ಯಕೀಯದ ನಿಟ್ಟಿನಲ್ಲಿ ಪರಿಶೀಲಿಸುವುದು ಈ ಲೇಖನದ ಉದ್ದೇಶ.

ಯಂತ್ರಕಲಿಕೆ ಮತ್ತು ಆಳಕಲಿಕೆಗಳು ಕೃತಕ ಬುದ್ಢಿಮತ್ತೆಯ ಕೇಂದ್ರಬಿಂದುಗಳು. ಸಾಮಾನ್ಯ ಮನುಷ್ಯನು ಮಾತನಾಡುವ ಭಾಷೆಯನ್ನು ಅರ್ಥ ಮಾಡಿಕೊಂಡು ಅದನ್ನು ತನ್ನ ಕಲಿಕೆಗೆ ಅಳವಡಿಕೊಳ್ಳುವುದು ಅದರ ಇನ್ನೊಂದು ರೀತಿ. ವೈದ್ಯರ ತಾಂತ್ರಿಕ ಭಾಷೆಯನ್ನು ಮತ್ತು ಸಂಕೀರ್ಣ ರೋಗನಿದಾನವನ್ನು ವೈದ್ಯರ ಟಿಪ್ಪಣೆಗಳನ್ನು ಓದಿ ಅರ್ಥ ಮಾಡಿಕೊಂಡು ತನ್ನ ಬುದ್ಧಿಮತ್ತೆಯನ್ನು ಹೆಚ್ಚಿಸುತ್ತ ಹೋಗುವುದು ಈ ಕೃತಕ ಬುದ್ಢಿಮತ್ತೆಯ ಕೆಲಸ. ಜೊತೆಗೆ ರೋಬೋಟಿಕ್ಸ್ ಯಂತ್ರಗಳಲ್ಲಿ ಆಗುತ್ತಿರುವ ಬೆಳವಣಿಗೆಗೆ ಕೃತಕ ಬುದ್ಢಿಮತ್ತೆಯ ಮೆದುಳನ್ನುಅಳವಡಿಸುವುದು ಮುಂದಿನ ಹಂತ.

ಕೃತಕ ಬುದ್ಢಿಮತ್ತೆಯ ಸಂಶೋಧಕರಾದ ಡಾ. ಫೀ-ಫೀ ಲಿ, “ಕೃತಕ ಬುದ್ಢಿಮತ್ತೆಯು ಮಾನವನ ಬುದ್ಧಿಮತ್ತೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ನಮ್ಮ ಜಗತ್ತು ಎದುರಿಸುತ್ತಿರುವ ಕೆಲವು ಸವಾಲುಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದೆ,” ಎಂದು ಹೇಳುತ್ತಾರೆ. ವೈದ್ಯಕೀಯ ಕ್ಷೇತ್ರದ ಸಕಲ ಅಂಕಿ-ಅಂಶಗಳನ್ನು (ಡೇಟಾ) ಜಾಲಾಡಿಸಿ, ಸೋಸಿ, ಅದರಿಂದ ಉಪಯೋಗವಾಗುವ ಸಂಶೋಧನೆಯನ್ನು ಮಾಡಲು ಈಗ ಕಂಪ್ಯೂಟರುಗಳು ಸಹಾಯ ಮಾಡುತ್ತಿದೆ. ಕೃತಕ ಬುದ್ಢಿಮತ್ತೆಯು ಅದರ ಜೊತೆ ಸೇರಿದಾಗ ವೈದ್ಯಕೀಯ ಸಂಶೋಧನೆಗಳು ಬೇಗ ಪೂರ್ಣವಾಗುತ್ತವೆ ಮತ್ತು ಹೆಚ್ಚು ನಿಖರವಾಗಿರುತ್ತವೆ. ದಿನದಿಂದ ದಿನಕ್ಕೆ ನಾವು ಉತ್ಪಾದಿಸುವ ಡೇಟಾಗಳು ಕೋಟಿ ಕೋಟಿ ಗಿಗಾಬೈಟುಗಳಲ್ಲಿ ಬೆಳೆಯುತ್ತಿವೆ. ಆ ಡೇಟಾವನ್ನು ಪ್ರಕ್ರಿಯೆಗೊಳಿಸಲು, ಒರೆಗೆ ಹಚ್ಚಲು, ಹೊಸ ಮಾದರಿಗಳನ್ನು ಗುರುತಿಸಲು, ಹೊಸ ಔಷಧಿಗಳನ್ನು, ಹೊಸ ಶಸ್ತ್ರಚಿಕಿತ್ಸೆಯ ಉಪಕರಣಗಳನ್ನು ತಯಾರಿಸಲು ಕೃತಕ ಬುದ್ಢಿಮತ್ತೆಯು ಸಹಾಯವನ್ನು ಮಾಡುತ್ತಿದೆ.

ಆರೋಗ್ಯ ರಕ್ಷಣೆಯ ಕ್ಷೇತ್ರದಲ್ಲಿ, ಕೃತಕ ಬುದ್ಢಿಮತ್ತೆಯು ರೋಗನಿರ್ಣಯ, ಚಿಕಿತ್ಸಾ ಯೋಜನೆ ಮತ್ತು ವೈಯಕ್ತೀಕರಿಸಿದ ಔಷಧವನ್ನು ಕ್ರಾಂತಿಕಾರಿಗೊಳಿಸುವ ಭರವಸೆಯನ್ನು ಹೊಂದಿದೆ. ಹೃದ್ರೋಗಶಾಸ್ತ್ರಜ್ಞರಾದ ಡಾ. ಎರಿಕ್ ಟೋಪೋಲ್, , “ಬುದ್ಢಿಮತ್ತೆ ಚಾಲಿತ ಅಲ್ಗಾರಿದಮ್‌ಗಳು ವೈದ್ಯಕೀಯ ಚಿತ್ರಗಳನ್ನು ಸರಿಸಾಟಿಯಿಲ್ಲದ ನಿಖರತೆಯೊಂದಿಗೆ ವಿಶ್ಲೇಷಿಸುವ ಸಾಮರ್ಥ್ಯವನ್ನು ಹೊಂದಿವೆ, ರೋಗವನ್ನು ಬಹಳ ಮೊದಲೇ ಪತ್ತೆ ಹಚ್ಚಲು ಮತ್ತು ಮತ್ತು ಹೆಚ್ಚು ರೋಗಿಗಳು ಬೇಗ ಗುಣಮುಖರಾಗಲು ಕಾರಣವಾಗುತ್ತದೆ.”

ವೈದ್ಯಕೀಯದಲ್ಲಿ ಕೃತಕ ಬುದ್ಢಿಮತ್ತೆಯು ರೋಗಪತ್ತೆ, ಚಿಕಿತ್ಸೆ ಮತ್ತು ಔಷಧ ಶೋಧನೆಯಲ್ಲಿ ಪ್ರಗತಿಯನ್ನು ಸಾಧಿಸಿದೆ. ರಕ್ತಪರೀಕ್ಷೆಯ ವಿಶ್ಲೇಷಣೆಯಿಂದ ಹಿಡಿದು ವರ್ಚುವಲ್ ಹೆಲ್ತ್ ಅಸಿಸ್ಟೆಂಟ್‌ಗಳವರೆಗೆ, ಕೃತಕ ಬುದ್ಢಿಮತ್ತೆ ಚಾಲಿತ ಆವಿಷ್ಕಾರಗಳು ರೋಗಿಯ ಅನುಭವಗಳನ್ನು ಮರುರೂಪಿಸುತ್ತಿವೆ ಮತ್ತು ಚಿಕಿತ್ಸೆಯನ್ನು ಹೆಚ್ಚು ನಿಖರವಾಗಿಸುತ್ತಿವೆ. ರೇಡಿಯಾಲಾಜಿ, ಜೀನೋಮಿಕ್ಸ್ ಮತ್ತು ಆರೋಗ್ಯ ದಾಖಲೆಗಳಲ್ಲಿ ಕೃತಕ ಬುದ್ಢಿಮತ್ತೆಯು ಈಗಾಗಲೇ ದೊಡ್ಡ ಸಂಚಲನವನ್ನು ಮಾಡಿದೆ.

ಕೃತಕ ಬುದ್ಢಿಮತ್ತೆಯು ಇಸಿಜಿಯನ್ನು ಓದುತ್ತದೆ. ಸ್ತನ ಕ್ಯಾನ್ಸರ್‌ ಕಂಡುಹಿಡಿಯುವ ಮೆಮೋಗ್ರಾಂನಲ್ಲಿ ಕೃತಕ ಬುದ್ಢಿಮತ್ತೆ ಸಹಾಯಮಾಡುತ್ತಿದೆ. ರಕ್ತಪರೀಕ್ಷೆಗಳನ್ನು ವಿಶ್ಲೇಷಿಸಿ, ವೈದ್ಯರಿಗೆ ರೋಗ ಪತ್ತೆ ಹಚ್ಚಲು ಸಹಾಯ ಮಾಡುತ್ತಿದೆ. ಕ್ಯಾನ್ಸರ್ ರೋಗಿಗಳಿಗೆ ಯಾವ ತರಹದ ಕೀಮೋಥಿರಪಿ ಇರಬೇಕು ಎನ್ನುವುದನ್ನು ನಿರ್ಧರಿಸಲು ಸಹಾಯ ಮಾಡುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಗೂಗಲ್ಲಿನ `ಡೀಪ್ ಮೈಂಡ್`ನ ಕೃತಕ ಬುದ್ಢಿಮತ್ತೆಯು ಕೆಲವು ವಿಷಯಗಳಲ್ಲಿ ನುರಿತವೈದ್ಯರಿಗೇ ಸವಾಲು ಹಾಕಿದೆ. ಬರೀ ಕಣ್ಣಿನ ರೆಟಿನಾದ ಚಿತ್ರವನ್ನು ನೋಡಿ, ವ್ಯಕ್ತಿಯ ವಯಸ್ಸು, ಮಧುಮೇಹ, ಬಿ.ಪಿಗಳ ಬಗ್ಗೆ ನಿಖರ ಮಾಹಿತಿಯನ್ನು ಕೊಡಬಲ್ಲಷ್ಟು ಸಶಕ್ತವಾಗಿದೆ. ಅಷ್ಟೇ ಅಲ್ಲ, ಕೃತಕ ಬುದ್ಢಿಮತ್ತೆಯು ದಿನದ ೨೪ ಗಂಟೆಯೂ ಲಭ್ಯವಿರುತ್ತದೆ, ಅದು ಬೇಸರ ಮಾಡಿಕೊಳ್ಳುವುದಿಲ್ಲ, ಸುಸ್ತಾಗುವುದಿಲ್ಲ.

ಕೈಗಾರಿಕಾ ಕ್ರಾಂತಿಯಾದಾಗ ಹೊಸಯಂತ್ರಗಳು ಹತ್ತು-ನೂರು ಜನರು ಮಾಡುವ ಕೆಲಸವನ್ನು ಒಂದು ಯಂತ್ರ ಮಾಡಲಾರಂಭಿಸಿತು. ಕಂಪ್ಯೂಟರ್ ಕ್ರಾಂತಿಯಾದಾಗ, ಹತ್ತು ಜನ ಗುಮಾಸ್ತರು ಮಾಡುವ ಕೆಲಸವನ್ನು ಒಂದು ಕಂಪ್ಯೂಟರ ಮಾಡಲಾರಂಭಿಸಿತು. ಸ್ಮಾರ್ಟ್-ಫೋನ್ ಯುಗದಲ್ಲಿ ಹತ್ತು ತರಹದ ಸಾಧನಗಳು ಒಂದೇ ಪುಟ್ಟಯಂತ್ರವಾಗಿ ನಮ್ಮ ಸಹಜೀವಿಯಾಗಿ ಹೋಗಿದೆ. ಕೃತಕ ಬುದ್ಢಿಮತ್ತೆಯು ವೈಟ್ ಕಾಲರ್ ಕೆಲಸಗಳನ್ನು, ಬುದ್ಧಿಮತ್ತೆಯ ಕೆಲಸವನ್ನು ಸ್ಥಳಾಂತರಿಸುತ್ತದೆ. ಈ ಭೀತಿಯು ಇನ್ನೂ ದೊಡ್ಡ ಪ್ರಮಾಣದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಕಾಣಿಸಿಕೊಂಡಿರದಿದ್ದರೂ, ಇನ್ನೊಂದು ದಶಕದಲ್ಲಿ ವೈದ್ಯರ ಕೆಲಸಗಳಲ್ಲಿ ಸಾಕಷ್ಟು ಪಲ್ಲಟಗಳಾಗಲಿವೆ.

ಡೇಟಾ ಗೌಪ್ಯತೆ, ಅಲ್ಗಾರಿದಮಿಕ್ ಪಕ್ಷಪಾತ ಮತ್ತು ನೈತಿಕ ಪರಿಣಾಮಗಳ ಬಗ್ಗೆ ಆರೋಗ್ಯ ಕ್ಷೇತ್ರದಲ್ಲಿ ಕಳವಳಕಾರಿ ಸಂಗತಿಗಳಾಗಿವೆ. ಆರೋಗ್ಯದ ಉಪಚಾರದಲ್ಲಿ ಅಸಮಾನತೆಗಳು ಹೆಚ್ಚಾಗುತ್ತವೆ. ರೋಗಿಗಳಿಗೆ `ಮನುಷ್ಯ` ವೈದ್ಯರ ಮೇಲೆ ನಂಬಿಕೆ ಕಡಿಮೆಯಾಗುತ್ತದೆ. ವೈದ್ಯಕೀಯದಲ್ಲಿ ಕೃತಕ ಬುದ್ಢಿಮತ್ತೆಯ ನವೀನ ಸಂಶೋಧನೆಗಳನ್ನು ಬಳಸಿಕೊಳ್ಳುತ್ತಲೇ ನೈತಿಕ ಪರಿಗಣನೆಗಳನ್ನು ಸಮತೋಲನಗೊಳಿಸುವುದು ಅಗತ್ಯವಾಗಿದೆ.

ಕೃತಕ ಬುದ್ಢಿಮತ್ತೆಯ ನೀತಿಶಾಸ್ತ್ರಜ್ಞರಾದ ಟಿಮ್ನಿಟ್ ಗೆಬ್ರು, “ಕೃತಕ ಬುದ್ಢಿಮತ್ತೆಯ ಅಲ್ಗಾರಿದಮ್‌ಗಳಲ್ಲಿ ಪಕ್ಷಪಾತವನ್ನು ಪರಿಹರಿಸುವುದು ಕೇವಲ ತಾಂತ್ರಿಕ ಸವಾಲಲ್ಲ ಆದರೆ ನೈತಿಕ ಕಡ್ಡಾಯವಾಗಿದೆ,” ಎಂದು ಒತ್ತಿಹೇಳುತ್ತಾರೆ. ಕೃತಕ ಬುದ್ಢಿಮತ್ತೆ ನ್ಯೂಕ್ಲಿಯರ್ ತಂತ್ರಜ್ಞಾನದಷ್ಟೇ ದೈತ್ಯ ಶಕ್ತಿ. ಇಂಥ ದೈತ್ಯಶಕ್ತಿಯೊಂದಿಗೆ ದೊಡ್ಡ ಜವಾಬ್ದಾರಿಯೂ ಬರುತ್ತದೆ. ದೈತ್ಯನನ್ನು ದಾನವನನ್ನಾಗಿಸದಿರಲು ಕೆಲವೇ ಕಾರ್ಪೋರೇಟುಗಳ, ಕೆಲವೇ ದೇಶಗಳ ಬಿಗಿಮುಷ್ಟಿಯಿಂದ, ರಾಜಕೀಯ ಮತ್ತು ಧಾರ್ಮಿಕ ಷಡ್ಯಂತ್ರಗಳಿಂದ ಆದಷ್ಟೂ ದೂರವಿಡುವುದು ಬಹಳ ಮುಖ್ಯವಾಗುತ್ತದೆ. ಐಸಾಕ್ ಅಸಿಮೊವ್‌ನ “ಐ, ರೋಬೋಟ್” ಮತ್ತು ಫಿಲಿಪ್ ಕೆ. ಡಿಕ್‌ನ “ಡು ಆಂಡ್ರಾಯ್ಡಸ್ ಡ್ರೀಮ್ ಆಫ್ ಎಲೆಕ್ಟ್ರಿಕ್ ಶೀಪ್?” ನಂತಹ ಕಾದಂಬರಿಗಳು ಕೃತಕ ಬುದ್ಢಿಮತ್ತೆಯ ಭವಿಷ್ಯದ ಬಗ್ಗೆ ಬರೆದ ಕಾದಂಬರಿಗಳು ಭಯಹುಟ್ಟಿಸುವಂತಿವೆ.

ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ದೊಡ್ಡ ಭರವಸೆ. ಈ ಹೊಸ ಪ್ರಪಂಚದ ಸಂಕೀರ್ಣತೆಗಳನ್ನು ಉಪಯೋಗಿಸುವಾಗ ಮನುಕುಲದ ಮತ್ತು ಈ ಭೂಮಿಯ ಉಳಿವಿನ ಯೋಗಕ್ಷೇಮದ ಶಕ್ತಿಯಾಗಿ ಬಳಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ, ಅಷ್ಟೇ ಅಲ್ಲ, ಅದರ ಪ್ರಯೋಜನಗಳನ್ನು ಸಮಾನವಾಗಿ ವಿತರಿಸಬೇಕಾದ ಸವಾಲೂ ಇದೆ. ಮಾನವನ ವೈಜ್ಞಾನಿಕ ಸಾಧನೆಯ ಹಾದಿಯಲ್ಲಿ ಮನುಷ್ಯನ ಮನಸ್ಸಿನಷ್ಟೇ ಜಟಿಲವಾದ ಕೃತಕ ಬುದ್ಧಿಮತ್ತೆ ಮನುಷ್ಯನ ಬುದ್ಧಿಮತ್ತೆಗೇ ಸವಾಲಾಗುತ್ತಿದೆ. ಪ್ರೊಫೆಸರ್ ಸ್ಟೀಫನ್ ಹಾಕಿಂಗ್, “ಶಕ್ತಿಶಾಲಿ ಕೃತಕ ಬುದ್ಢಿಮತ್ತೆಯು ಉದಯವು ಮಾನವೀಯತೆಗೆ ಸಂಭವಿಸುವ ಅತ್ಯುತ್ತಮ ಅಥವಾ ಕೆಟ್ಟ ವಿಷಯವಾಗಲಿದೆ” ಎಂದು ಎಚ್ಚರಿಸಿದ್ದಾರೆ. ಕೃತಕ ಬುದ್ಢಿಮತ್ತೆಯು ಫ್ರಾಂಕಸ್ಟೀನ್ ಆಗದಂತೆ, ಭಸ್ಮಾಸುರನಾಗದಂತೆ ನೋಡಿಕೊಳ್ಳುವುದು ಈ ಹೊಸ ಜಗತ್ತಿನ ಪ್ರಮುಖ ಸವಾಲಾಗಲಿದೆ.

(ವೈದ್ಯಸಂಪದದಲ್ಲಿ ಮೊದಲು ಪ್ರಕಟಿತ)

ಕಥೆ ಕಥೆ ಕಬ್ಬಿಣ..

‘ಕನೆಕ್ಟ್ ಆದರೆ ಕಥೆ ..ಬಾಕಿ ಎಲ್ಲ ವ್ಯಥೆ’.

ನಮಸ್ಕಾರ ಅನಿವಾಸಿ ಬಂಧುಗಳೇ,ಇವತ್ತಿನ ಓದಿಗೆ ಸ್ವಾಗತ 

ಕಥೆ ತನ್ನ ಪಾಡಿಗೆ ತಾನೆಲ್ಲೋ ಇರುತ್ತದೆ. ಪ್ರಾಯಶ: ಯಾವ ಕಥೆಗಾರರಿಗೂ ಅವರವರ ಕಥೆಗಳ ಬಗ್ಗೆ ಕರಾರುವಕ್ಕಾದ ಅಭಿಪ್ರಾಯವಿರುವುದಿಲ್ಲವಾದ್ದರಿಂದ ಅವರೆಲ್ಲ ಒಂದಕ್ಕೆ ನಿಲ್ಲಿಸದೇ ಹಲವಾರು ಕಾದಂಬರಿಗಳನ್ನು ರಚಿಸುತ್ತಾರೋ ಏನೋ? ನಾವೂ ಹಾಗೇ. ಸಿನೆಮಾಗಳ ಮೇಲೆ ಸಿನೆಮಾ. ‘ ಇಂಥದ್ದೊಂದನ್ನು ನೋಡೇ ಇಲ್ಲ’ ಎಂದು ಬೊಂಬಡಿ ಬಜಾಯಿಸುತ್ತಾ ಮಾಡುತ್ತಲೇ ಹೋಗುತ್ತೇವೆ. ಕಥೆ ತನ್ನ ಪಾಡಿಗೆ ತಾನೆಲ್ಲೋ ಇರುತ್ತದೆ.
‐--ಯೋಗರಾಜ ಭಟ್.

ಹೌದಲ್ಲವೇ ಕಥೆ ಯಾರ ಹಂಗಿಗೂ ಒಳಗಾಗದೇ, ಯರೊಬ್ಬರನ್ನೂ ಲೆಕ್ಕಿಸದೇ ತನ್ನ ಪಾಡಿಗೆ ತಾನು ಹಾಯಾಗಿ ಎಲ್ಲೋ ಇರುತ್ತದೆ. ಅದನ್ನು ಹೆಕ್ಕುತ್ತ ನಾವು ಹೈರಾಣಾಗುತ್ತೇವೆ. ಬನ್ನಿ.. ಇವತ್ತು 'ಕಥೆಯ ಕಥೆ' ಕೇಳೋಣ..ಅಲ್ಲಲ್ಲ ಓದೋಣ.

~ಸಂಪಾದಕಿ

ಕಥೆಯ ಕಥೆ


‘ಹೀಂಗs ಒಂದ ಊರಾಗ ಒಬ್ಬ ರಾಜಾ ಇದ್ದನಂತ’.. ‘ ಹೀಂಗs ಒಂದ ಅಡವ್ಯಾಗ ಒಂದು ಹುಲಿ ಇತ್ತಂತ’.. ಹೀಗೆ ಈ ‘ಹೀಂಗ ಒಂದ’ ಅಂತ ಕಥಿ ಶುರುವಾದ್ರ ಸಾಕು ಕಣ್ಣ ಅಗಲಿಸಿ, ಮೈಯೆಲ್ಲ ಕಿವಿಯಾಗಿ, ಆ ಅಂತ ಬಾಯಿ ತಕ್ಕೊಂಡು ಅಜ್ಜಿಯ ಮುಂದೆ ಕಾಲದ ಪರಿವೆಯಿಲ್ಲದೇ ಕೂತು ಬಿಡುವುದಿತ್ತು. ನಾವೂ ಆ ಕಥೆಯೊಡನೆ ಆ ಹೀಂಗ ಒಂದ ಊರೋ, ಅಡವಿಯೋ ಏನಿತ್ತೋ ಅಲ್ಲಿಗೇ ಹೋಗಿ ಆ ಗೇಣುದ್ದ ಮನಷಾ ಚೋಟುದ್ದ ಗಡ್ಡದವನೊಡನೆಯೋ, ಬೆಂಡು ಬತ್ತಾಸಿನ ಮಳೆಯಲ್ಲಿ ಎದ್ದ ಹುಡುಗನೊಡನೆಯೋ ಅಡ್ಡಾಡಿ ಬಂದುಬಿಡುತ್ತಿದ್ದೆವು.ಚಿನ್ನದ ಕೂದಲಿನ ರಾಜಕುಮಾರಿ,ಆಸೆಬುರುಕ ನರಿಯಣ್ಣ,ಜಾಣ ಮೊಲದ ಮರಿ, ಮೂರ್ಖ ಕಾಗಕ್ಕ, ಸಪ್ತ ಸಮುದ್ರದಾಚೆಯ ಗಿಣಿಮರಿಯಲ್ಲಿ ಜೀವವಿಟ್ಟುಕೊಂಡಿದ್ಧ ರಾಕ್ಷಸ..ಇವರೆಲ್ಲ ನಮ್ಮ ಭಾವಕೋಶದ ಜೊತೆಗೇ ಬೆರೆತು ಉಸಿರಾಡುತ್ತಿದ್ದರು.ಕಾಗಕ್ಕ- ಗುಬ್ಬಕ್ಕನ ಕಥೆಯಂತೂ ನಮ್ಮ ಫೇವರಿಟ್.
ಅಜ್ಜಿಯ ಕಥೆ ಹೇಳುವ ಚೆಂದವೇ ಬೇರೆ.ಅವಳ ಕಥೆಗಳು ಬಹಳ ರೋಚಕವಾಗಿದ್ದಂಥವು.ಅಕಿ ತನ್ನ ಹಳ್ಳಿಯ ತನ್ನ ಸಣ್ಣಂದಿನ ಅನುಭವದ,ನೆನಪಿನ ಕಥೆಗಳನ್ನೂ ಹೇಳಾಕಿ. ‘ ನಮ್ಮೂರಿಗೆ ಉದ್ದನೆಯ ಬಿಳಿಗಡ್ಡದ ಬಾಬಾ ಬಂದಿದ್ದ..ಕೇಸರಿ ಶಾಟಿ ಉಟಗೊಂಡು. ಅವಾ ಹಿಮಾಲಯಕ್ಕ ಹೋಗಿದ್ನಂತ.’ ಆಕೆ ಹೇಳುತ್ತಿದ್ದರೆ ‘ಹಿಮಾಲಯ ಅಂದ್ರ?!’..ಹಿಂದೆಯೇ ನಮ್ಮ ಪ್ರಶ್ನೆ. ‘ ಅದು ದೂರ ದೇಶದಾಗ( ಇಲ್ಲಿ ದೇಶ ಅಂದ್ರ ಪ್ರದೇಶ.ಬೇರೆ ದೇಶವಲ್ಲ.) ಇರೋ ಬರ್ಫಿನ ಬೆಟ್ಟ’ ಅಲ್ಲೆ ಯಾರಾದರೂ ಹೋದ್ರ ಥಂಡಿಗೆ ಕೈಕಾಲು ಶಟದ ಹೋಗತಾವ.ಬರೇ ಸಾಧುಗಳು ಮತ್ತು ದೇವರು ಅಷ್ಟೇ ಅಲ್ಲಿರತಾರ ಅಂತ ಅಕಿ ಹೇಳತಿದ್ರ ಬಿಜಾಪೂರದ ಬಿಸಿಲ ಝಳದ ನೆಲದ ನನಗೆ ಆ ಶೆಟೆದು ಹೋಗುವ ಥಂಡಿಯ ಕಿಂಚಿತ್ತೂ ಕಲ್ಪನೆಯಾಗದಿದ್ದರೂ ಬರ್ಫಿನ ಬೆಟ್ಟವಷ್ಟೇ ತಲೆಯಲ್ಲುಳಿದು ‘ ಓಹ್! ಹಂಗಾದ್ರ ಆ ಲಾಲ್ ವಾಲಾ ( ಐಸ್ ಕ್ಯಾಂಡಿ ಮಾರುವವ) ನ್ನ ಅಲ್ಲೆ ಕರಕೊಂಡ ಹೋಗಿ ಆ ಸಿಹಿಸಿಹಿ ಕೆಂಪು ದ್ರವವನ್ನೆಲ್ಲ ಅದರ ಮೇಲೆ ಸುರುವಿದ್ರ ಅದೆಷ್ಟು ದೊಡ್ಡ ಐಸ್ಕ್ರೀಂ ಕುಲ್ಫೀ ಆದೀತು ಅಂತ ನಾನು ಮನದಲ್ಲೇ ಲಾಲಾರಸ ಸುರಿಸಾಕಿ. ‘ ಆ ಸಾಧೂಂದು ಹೀಂಗೇ ಒಂದ ಬಟ್ಟ ( ಬೆರಳು) ಹೆಪ್ಪುಗಟ್ಟಿ ಕಪ್ಪ ಆಗಿಹೋಗಿತ್ತ.ಅದರ ಮ್ಯಾಲೆ ಸುತಗಿ ತಗೊಂಡು ಹೊಡದ್ರೂ ಅವಂಗ ನೋವು ಆಗೂದಿಲ್ಲಂತ.’. ಅಕಿ ಕಥಿ ಮುಂದುವರೆಸಿದ್ರ ‘ ಓಹ್! ಒಮ್ಮೆ ಹಂಗಾರ ನಾನೂ ಹೋಗಿ ಪೂರಾ ಮೈನೇ ಹಂಗ ಮಾಡಕೊಂಡು ಬರಬೇಕು. ಅಂದ್ರ ಒಟ್ಟಾಪ್ಪೆ(ಕುಂಟಾಬಿಲ್ಲೆ ) ಆಡಬೇಕಾದ್ರ ಬಿದ್ರೂ ಮೊಣಕಾಲು – ಮೊಣಕೈ ತರಚಂಗಿಲ್ಲ’ ಅಂತೆಲ್ಲ ಹುಚ್ಚುಚ್ಚಾಗಿ ಯೋಚಿಸುತ್ತಿದ್ದುದು ಈಗಲೂ ನೆನಪಿನಲ್ಲಿದೆ.
ಇನ್ನು ಸ್ವಲ್ಪ ಬುದ್ಧಿ ಬಂದಮೇಲೆ ಅವಳು ಹಾಡಿನ ಮೂಲಕ ಹೇಳಿದ ಕಥೆಗಳಂತೂ ಇಡಿಯ ಪುರಾಣ ಪ್ರಪಂಚವನ್ನೇ ನಮ್ಮೆದಿರು ತೆರೆದಿಡುವಂಥವು.
‘ಚೈತ್ರ ಶುದ್ಧ ಹಗಲು ನವಮಿ ರಾಮ ಜನಿಸಿದ
ಬಿದ್ದ ಶಿಲೆಯ ಪಾದದಿಂದುದ್ಧಾರ ಮಾಡಿದ
ಜನಕರಾಯನಲ್ಲಿ ಚಾಪು ತುಣುಕು ಮಾಡಿದ
ಗುಣಕ ಶೀಲ ಸೀತಾದೇವಿ ಮನಕ ಮೆಚ್ಚಿದ’
ಇಡಿಯ ರಾಮಾಯಣದ ಕಥೆ 3-4 ನುಡಿಗಳಲ್ಲಿ ಮುಗಿದುಹೋಗುತ್ತಿತ್ತು.ಮತ್ತೊಂದು ಆಸಕ್ತಿದಾಯಕ ಹಾಡೆಂದರೆ ‘ಕಮಲಮುಖಿ ಸತ್ಯಭಾಮೆ’. ಶ್ರೀಕೃಷ್ಣ- ಸತ್ಯಭಾಮೆಯರ ಸಂವಾದದ ಹಾಡು. ಇಡಿಯ ದಶಾವತಾರದ ಕಥೆಗಳೆಲ್ಲ ರೋಚಕವಾಗಿ ಅದರಲ್ಲಿ ಬಂದುಬಿಡುತ್ತವೆ. ಅದೂ ಒಂಥರಾ ನಿಂದಾ ಸ್ತುತಿಯ ರೂಪದಲ್ಲಿ. ಸತ್ಯಭಾಮೆಯ ಮನೆಗೆ ಬಂದ ಕೃಷ್ಣ
‘ ಕಮಲಮುಖಿ ಸತ್ಯಭಾಮೆ ಬೇಗದಿಂದ ಬಾಗಿಲು ತಗಿ ಅಂತೀನಿ ರಮಣಿ’ ಎಂದರೆ ಅವಳು ,
‘ಯಾರೂ ಅರಿಯೆ ನಿಮ್ಮ ಖೂನು-ಗುರುತು ಇಲ್ಲ, ಹೆಂಗ ತೆಗಿಯಲಿ ರಾತ್ರೀಲಿ ರಮಣ’ ಎಂದು ಪ್ರಶ್ನಿಸುತ್ತಾಳೆ. ಅವನು ತನ್ನ ಪರಿಚಯ ಹೇಳುತ್ತ,
‘ ವೇದ ತುಡುಗು ಮಾಡಿ ಒಯ್ದು ನೀರೊಳು
ಶಂಖದೊಳಗ ಇದ್ದನು ವೈರಿ|
ಮತ್ಸ್ಯವತಾರ ತಾಳಿ ಶಂಖಾಸುರನ ಕೊಂದು ವೇದವ ತಂದೀನಿ ನಾರಿ|
ಕೂರ್ಮವತಾರ ತೊಟ್ಟು ಸಮುದ್ರ ಮಥನ ಮಾಡೀನೆ ಹೊತ್ತು ಗಿರಿ|
ರತ್ನ ತೆಗೆದು ಅಮೃತ ಹಂಚುವಾಗ ರಾಹು-ಕೇತುವಿನ ಮಾಡೀನಿ ಸೂರಿ|
ರಸಾತಳಕೆಳೀತಿದ್ದ ಭೂಮಿ ಕೇಳ್
ದೇವರಾದರೆಲ್ಲ ಗಾಬರಿ|
ಸತ್ಯವರಾಹನಾಗಿ ಭೂಮಿ ಹೊತ್ತು ಮ್ಯಾಲಕ ಎತ್ತೀನಿ ಕ್ವಾರಿ|
ಹಿರಣ್ಯಕಶಿಪು ಶಂಭುವಿನ ವರದಾ
ವಿಷ್ಣುಭಕ್ತ ಮಗ ಪ್ರಹ್ಲಾದ|
ತಂದೆ- ಮಗಗ ಬಿದ್ದೀತೋ ವಾದ
ಸಿಟ್ಟಿನಿಂದ ಕಶ್ಯಪ ಕಂಭಕೊದ್ದ
ನಾ ಬಂದೆನಾರ್ಭಾಟದಿಂದ
ಹೊಸ್ತಿಲದೊಳಗ ಹೊಟ್ಟಿ ಸೀಳಿದರ ಕೇಳ ಭಾಮಿನಿ ಆತನ ಮರಣ’
ಎಂದು ಪರಾಕ್ರಮ ಕೊಚ್ಚಿಕೊಂಡ ಅವನ ಕಾಲನ್ನೆಳೆವ ಭಾಮೆಯ ಕುಚೋದ್ಯದ ಉತ್ತರ ಕೇಳಿ..
‘ ಮತ್ಸ್ಯನೆಂದು ಬಲು ಬಡಾಯಿ ಹೇಳತಿ
ಹೆಂಗ ಬಂದ್ಯೋ ನೀ ಊರಾಗ|
ಕೂರ್ಮನಾದರ ಇಲ್ಲಿಗ್ಯಾಕ ಬಂದಿ
ಬೀಳಹೋಗೋ ನೀ ಭಾವ್ಯಾಗ|
ಸತ್ಯ ವರಾಹನೆಂದು ಸಾಕ್ಷಿ ಹೇಳತಿ ಭೂಮಿ ಹೊತ್ತ ಕಸರತ್ತ ಎನಗ ತಲೆ ಎತ್ತದೇ ತಿರುಗುತ ಹೋಗಿರಿ ಹಸಿಮಣ್ಣು ತಿಂದಡವ್ಯಾಗ|
ಭಾಳ ಭಾಳ ಹೇಳತಿದ್ದಿ ಕಸರತ್ತ
ನರಸಿಂಹನವತಾರದ ಮಾತ |♧
ಸಿಂಹನಾದರ ಗುಡ್ಡದಾಗ ಇರಹೋಗು ಇಲ್ಲಿಗ್ಯಾಕ ಬಂದಿರಿ ಕಾರಣ’
ಹೀಗೆಯೇ ಎಲ್ಲ ಅವತಾರಗಳ ಬಗ್ಗೆ ಅವನ ಬಡಾಯಿ, ಅವಳ ಹೀಯಾಳಿಸುವಿಕೆ ನಡೆದು ಕೊನೆಗೆ
‘ನಿನ್ನ ಪ್ರಾಣವಲ್ಲಭ ಮನದನ್ನ’ ಬಂದಿದ್ದೇನೆಂದ ಮೇಲೆಯೇ ಅವಳು ಬಾಗಿಲು ತೆಗಯುವುದು. ಹೇಳಿ ಕೇಳಿ ‘ಸರಸಕೆ ಕರೆದರೆ ವಿರಸವ ತೋರುವ’ ಸತ್ಯಭಾಮೆ ಅವಳು.ಸುಮ್ಮನೆ ಇಷ್ಟು ಸುಲಭಕ್ಕೆ ಬಿಟ್ಟಾಳೆಯೇ?
ನಮ್ಮ ಓಣ್ಯಾಯಿ(ಅಜ್ಜಿ) ರಾಗವಾಗಿ ಈ ಹಾಡು ಹಾಡುತ್ತಿದ್ದರೆ ದಶಾವತಾರದ ಎಲ್ಲ ಕಥೆಗಳೂ ಕಣ್ಣಮುಂದೆ ಸಿನೆಮಾ ರೀಲಿನಂತೆ ಉರುಳುತ್ತಿದ್ದವು.
ಸ್ವಲ್ಪ ದೊಡ್ಡವರಾದ ಮೇಲೆ ಅಂದರೆ ಸುಮಾರು 4-5 ನೇಯತ್ತೆ ಹೊತ್ತಿಗೆ ಓದುವ ಹುಚ್ಚು ಅಂಟಿಕೊಂಡಾದ ಮೇಲೆ ಆಹಾ! ಆ ಚಂದಮಾಮ, ಬೊಂಬೆಮನೆ, ಬಾಲಮಿತ್ರದ ಆ ರೋಚಕಕಥೆಗಳು..ಆರು ಬೆರಳಿನ ಉದ್ದ ಗಡ್ಡದ ಮಾಂತ್ರಿಕ, ಛಕ್ಕಂತ ವೇಷ ಬದಲಿಸಿ ಬರುವ ಮಾಟಗಾತಿ,ಕೂದಲೆಳೆ- ಉಗುರುಗಳಿಂದ ಮಾಟ ಮಾಡುವ ತಾಂತ್ರಿಕ , ವಿಕ್ರಮಾದಿತ್ಯನ ಹೆಗಲಿನಿಂದ ಹಾಹ್ಹಾಹಾ ಎಂದು ನಗುತ್ತ ಹಾರಿಹೋಗಿ ಗಿಡದ ಟೊಂಗೆಗೆ ನೇತಾಡುವ ಬೇತಾಳ..ನಮ್ಮಕಲ್ಪನೆಗೊಂದು ಎಲ್ಲೆಯೇ ಇಲ್ಲದಂತೆ ಮಾಡಿದವಷ್ಟೇ ಅಲ್ಲ ಜೊತೆಗೇ ಇಲ್ಲದ ಭಯವನ್ನೂ ಅಲ್ಪಸ್ವಲ್ಪ ಹುಟ್ಟು ಹಾಕಿದವೆನ್ನಿ. ನಾನಾಗ 4 ನೇಯತ್ತೆ ಹುಡುಗಿ. ಒಂದು ಕಥೆ ಓದಿದ್ದೆ. ಅದರಲ್ಲಿ ಸುಳ್ಳು ಮಾತಾಡಿದರೆ ತಲೆಯ ಮೇಲೆ ಕೊಂಬು ಮೂಡುತ್ತವೆ. ಪ್ರತಿಸಲ ಸುಳ್ಳು ಹೇಳಿದಾಗೆಲ್ಲ ಒಂದೊಂದು ಇಂಚು ಬೆಳೆಯುತ್ತ ಹೋಗಿ , ಹೀಗೆಯೇ ಬಹಳ ಸಲ ಸುಳ್ಳು ಹೇಳಿದ ಹುಡುಗನ ತಲೆಯ ಕೊಂಬುಗಳು ಬೆಳೆದು ಬೆಳೆದು ಮೇಲೆ ಜಂತಿಗೆ ಸಿಕ್ಕಿಹಾಕಿಕೊಂಡು ಬಿಡುತ್ತವೆ. ಆದನ್ನೋದಿದ ಮೇಲೆ ವರುಷಗಟ್ಟಲೆ ಸಣ್ಣ ಸುಳ್ಳು ಹೇಳಿದರೂ ಹತ್ತುಸಲ ತಲೆಮುಟ್ಟಿ ನೋಡಿಕೊಳ್ಳುತ್ತಿದ್ದೆ. ಒಮ್ಮೆ ಯಾಕೋ ಪಕ್ಕದ ಶಿವಮೊಗ್ಗಿ ಅವರ ಮನೆಗೆ ಹೋಗಿದ್ದೆ. ಊಟಕ್ಕೆ ಕುಳಿತಿದ್ದ ಅವರು, ‘ಬಾರs ಊಟ ಮಾಡು ಬಾ’ ಎಂದು ಕರೆದರು. ಹಾಗೆಲ್ಲ ಊಟ-ತಿನಿಸಿಗೆ ಯಾರಾದರೂ ಕರೆದರೆ ಹೂಂ ಅಂತ ಹೊರಟುಬಿಡಬಾರದು.ನಮ್ಮ ಊಟ ಆಗಿದೆ ಅಂತ ಹೇಳಬೇಕು ಎನ್ನುವುದು ಮನೆಯಲ್ಲಿ ಹಿರಿಯರು ವಿಧಿಸಿದ್ದ ನಿಯಮವಾಗಿದ್ದರಿಂರ ಹಾಗೇ ಹೇಳಿದೆ. ‘ಇರಲಿ ಬಾ. ಚೂರೇ ಪಾಯಸ ತಿನ್ನು’ ಎಂದರು. ‘ ನಮ್ಮನೆಯಲ್ಲೂ ಅದೇ’ ಎಂದೆ. ಹೀಗೇ ಅವರು ಒತ್ತಾಯಿಸಿ ಕರೆಯುವುದು, ನಾನು ಸುಳ್ಳು ಹೇಳುತ್ತ ಹೋಗಿ ನೋಡುತ್ತಿದ್ದಂತೇ 8-10 ಸುಳ್ಳುಗಳಾಗಿ ಇನ್ನೇನು ಕೊಂಬು ಬೆಳೆದು ನಾನಿಲ್ಲೇ ಇವರ ನಡುಮನೆಯಲ್ಲೇ ಸಿಕ್ಕಿಹಾಕಿಕೊಂಡು ಬಿಡುತ್ತೇನೆಂದು ತುಂಬ ಭಯವಾಗಿ ಅಳಲು ಶುರು ಮಾಡಿದ್ದೆ. ನನ್ನ ಅವಸ್ಥೆ ನೋಡಿ ಪಾಪ ಅವರಿಗೂ ಗಾಬರಿ .
ಇನ್ನೊಮ್ಮೆ ನಮ್ಮ ಸ್ನೇಹಿತರಂತೆ, ಮನೆಯವರಂತೆ ವೇಷ ಬದಲಿಸಿ ಬರುವ ದೆವ್ವದ ಕಥೆ ಓದಿದಾಗಲಂತೂ ನನ್ನ ಪಾಡು ನಾಯಿಪಾಡಾಗಿತ್ತು. ಜೊತೆಗಿದ್ದವರೆಲ್ಲ ಇವರು ನಿಜದವರೋ, ವೇಷಧಾರಿ ದೆವ್ವಗಳೋ ಎಂದು ಹೆದರಿಕೆಯಾಗಿಬಿಡುತ್ತಿತ್ತು. ಅದೂ ಬಿಜಾಪೂರದ ನಮ್ಮ ಮುದ್ದಣ್ಣ ಮಾಮಾನ ಆ ದೊಡ್ಡ ಮನೆಯಲ್ಲಿ ರಾತ್ರಿವೇಳೆ ಬಚ್ಚಲಿಗೆ ಹೋಗಬೇಕಾಗಿ ಬಂದರಂತೂ ಮುಗಿದೇಹೋಯ್ತು. ಪಡಸಾಲೆಯಲ್ಲಿ ಮಲಗಿದ ನಾವು ನಡುಮನೆ, ದೊಡ್ಡ ಅಡುಗೆಮನೆ ದಾಟಿ ಬಚ್ಚಲಿಗೆ ಅದೂ ಎಂಥಾ ಬಚ್ಚಲು ಅಂತೀರಿ 3-4 ಮೆಟ್ಟಿಲುಗಳ , 3-4 ಕಂಬಗಳುಳ್ಳ ದೆವ್ವನಂಥಾ ಬಚ್ಚಲು. ಅಲ್ಲಿ ಒಂದೆಡೆ ಕುಳ್ಳಿನ ಚೀಲ, ಎತ್ತರಕ್ಕೆ ಒಟ್ಟಿದ ಕಟ್ಪಿಗೆಗಳು, ಅವುಗಳ ಸಂದಿಯಲ್ಲೆಲ್ಲೋ ಕಣ್ಣಿಗೆ ಕಾಣದೇ ದಡಬಡ ಮಾಡುವ ಇಲಿಯ ಸಂಸಾರಗಳು, ಉದ್ದ ಮೀಸೆ ಝಳಪಿಸುವ ಜೊಂಡಿಂಗಗಳು..ಸಾಲದ್ದಕ್ಕೆ ಎದುರಿಗೊಂದು ಎರಡು ಸರಳುಗಳ ಸಣ್ಣ ಕಿಡಕಿ. ನಮ್ಮ ಪಪ್ಪೂಮಾಮ( ನನ್ನ ಸಣ್ಣ ಸೋದರ ಮಾವ) ‘ ರಾತ್ರಿ ಬಚ್ಚಲಿಗೆ ಹೋದ್ರ ಆ ಕಿಡಕಿ ಕಡೆ ನೋಡಬ್ಯಾಡ್ರಿ ಎರಡು ಕೆಂಪುಕಣ್ಣು ನಿಮ್ಮನ್ನೇ ನೋಡತಿರತಾವ. ನೀವೇನರ ಅಪ್ಪಿತಪ್ಪಿ ನೋಡಿದ್ರ ತನ್ನ ಉದ್ದನ್ನ ಕೆಂಪು ನಾಲಿಗೆ ಚಾಚಿ ಎಳಕೊಂಡು ಬಿಡತಾವ’ ಅಂತೆಲ್ಲ ಏನೇನೋ ಹೇಳಿ ನಮ್ಮನ್ನು ಕಾಡಿ ಹೆದರಿಸಿರುತ್ತಿದ್ದ. ಹೀಗಾಗಿ ಯಾವಾಗಲೂ ಅಜ್ಜಿಯನ್ನೆಬ್ಬಿಸಿ ಅವಳ ಬೆಂಗಾವಲಿನಲ್ಲೇ ರಾತ್ರಿ ಬಚ್ಚಲಿಗೆ ಹೋಗುವುದು. ಆದರೆ ಈ ವೇಷ ಬದಲಿಸುವ ದೆವ್ವದ ಕಥೆ ಓದಿದ ಮೇಲೆ ಹಿಂದೆ ಬರುತ್ತಿರುವುದು ಓಣ್ಯಾಯಿನೋ ಅಥವಾ ದೆವ್ವವಿರಬಹುದೋ ಎಂದು ಶುರುವಾದ ಸಂಶಯ ಕೆಲವೇ ಸೆಕೆಂಡುಗಳಲ್ಲಿ ಪೆಡಂಭೂತವಾಗಿ ಬೆಳೆದು ನನ್ನನ್ನು ನಡುಗಿಸಿಬಿಡುತ್ತಿತ್ತು. ಅಮ್ಮ ಹೇಳಿಕೊಟ್ಟ ‘ ನಿರ್ಭಯತ್ವಂ ಅರೋಗತಾಂ’ ದ ಹನುಮಪ್ಪನೋ, ಅಜ್ಜ ಕಲಿಸಿದ ‘ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ’ ದ ರಾಯರೋ ಹೇಗೋ ನನ್ನನ್ನು ಕಾಯುತ್ತಿದ್ದರೆನ್ನಿ.
ರಾಯರು(ರಾಘವೇಂದ್ರ ಸ್ವಾಮಿಗಳು) ಅಂದಕೂಡಲೇ ಮತ್ತೊಂದು ಘಟನೆ ನೆನಪಾಯ್ತು. ಒಮ್ಮೆ ರಜೆಗೆಂದು ನಿಪ್ಪಾಣಿಗೆ ನಮ್ಮ ಇನ್ನೊಬ್ಬ ಸೋದರಮಾವನ ಮನೆಗೆ ಹೋಗಿದ್ದೆ. ಬಹಳ ಹೊತ್ತು ರಾತ್ರಿ ಹರಟೆ, ಮಾತುಕತೆಯ ಜೊತೆಗೇ ನನ್ನ ಕಸಿನ್ಸ್ ತಮ್ಮ home-work ನ್ನೂ ಮುಗಿಸಿ, ಪಾಟಿ- ಪುಸ್ತಕ ಎಲ್ಲ ಎತ್ತಿಟ್ಟು ಇನ್ನೇನು ಮಲಗಲು ಅಣಿಯಾದೆವು.
ಪೆನ್ಸಿಲ್ ಬಾಕ್ಸ್ ಒಂದು ತಂಗಿ ಭೂದೇವಿಯ ತಲೆದಿಂಬಿನ ಪಕ್ಕಕ್ಕೆ ಉಳಿದುಹೋಗಿತ್ತು. ನಾನು ಮರೆತು ಉಳಿದಿದೆಯೇನೋ ಎಂದು ಎತ್ತಿಡಲು ಹೋದರೆ ‘ ಅವ್ವಾ, ಗೌರಕ್ಕಾ ಅದನ್ನ ತಗೀಬ್ಯಾಡವಾ. ಅದರಾಗ ರಾಯರು, ಹನುಮಪ್ಪ ಎಲ್ಲ ಇದ್ದಾರ. ಕೆಟ್ಟ ಕನಸು ಬೀಳಬಾರದು, ರಾತ್ರಿ ಅಂಜಿಕಿ ಬರಬಾರದು ಅಂತ ಇಟಗೊಂಡೀನಿ’ ಅಂದಳು. ನಾನು ಅರೇ! ತ್ರಿಜ್ಯ, ಕೋನಮಾಪಕ, ಸೀಸಕಡ್ಡಿಗಳ ಬದಲು ಇದರಲ್ಲಿ ದೇವರು ಹೆಂಗ ಬಂದ್ರು ಅಂತ ತೆಗೆದು ನೋಡಿದರೆ ಅದರಲ್ಲಿ ರಾಯರ-ಹನುಮಪ್ಪನ ಸಣ್ಣ ಸಣ್ಣ ಫೋಟೋಗಳು. ಆಮೇಲೆ ಗೊತ್ತಾಯಿತು ಇದು ಅನಂತನಾಗ್ ನ ‘ ನಾ ನಿನ್ನ ಬಿಡಲಾರೆ’ ಸಿನೆಮಾದ ಕಥೆ ಕೇಳಿದ್ದರ ಪ್ರಭಾವ ಅಂತ. (ಇನ್ನು ಸಿನೆಮಾ ನೋಡಿದ್ದರೆ ಏನಾಗುತ್ತಿತ್ತು ಆ ‘ ಕಾಮಿನಿ’ ಗೇ ಗೊತ್ತು ) ಅಂತೂ ಈಗಲೂ ಅವಳ ಭೇಟಿಯಾದಾಗ ಈ ಕಥೆ ನೆನೆಸಿಕೊಂಡು ನಗುತ್ತೇವೆನ್ನಿ.

ಈಗ ಅಜ್ಜಿಯ ಕಥೆಗಳನ್ನು ಚೆಂದ ಚೆಂದದ ಕಾರ್ಟೂನ್ ಗಳು ಹೇಳುತ್ತವೆ.ತನ್ನ ಚಿಕ್ಕಂದಿನಲ್ಲಿ ‘snow-white ‘ ನೋಡುತ್ತ ಕಣ್ಣೀರು ಸುರಿಸುತ್ತಿದ್ದ, Tom & Jerry ಯಲ್ಲಿ ಕನಸು ನೋಡುತ್ತಿರುವ Tom ನನ್ನು ನೋಡಿ ಸೋಫಾದ ಮೇಲೆ ಉರುಳಾಡಿ ನಗುತ್ತಿದ್ದ ನನ್ನ ಮಗನ ಚಿತ್ರ ಈಗಲೂ ನನ್ನ ಕಣ್ಣ ಮುಂದಿದೆ.ದೃಶ್ಯಮಾಧ್ಯಮ ಯಾವಾಗಲೂ ಹೆಚ್ಚು ರಮಣೀಯ ಹಾಗೂ ಆಕರ್ಷಕವಲ್ಲವೇ?
ಕಥೆಗಳೂ ದೇವರಂತೆ ಅನಾದಿ-ಅನಂತ- ವಿಶ್ವವ್ಯಾಪಿ.ಅವುಗಳ ರೀತಿ, ಮಾಧ್ಯಮಗಳು ಬದಲಾದರೇನಂತೆ? ಜಗವಿರುವತನಕ ಕಥೆಗಳಿರುತ್ತವೆ. ನಮ್ಮ ಕಥೆ, ನಿಮ್ಮ ಕಥೆ, ಅವರ ಕಥೆ, ಇವರ ಕಥೆ, ಕಂಸನ ಕ್ರೌರ್ಯ ದ ಕಥೆ, ಬುದ್ಧನ ಕರುಣೆಯ ಕಥೆ, ಶಕುನಿಯ ಕುತಂತ್ರದ ಕಥೆ,ವಿದುರನ ನೀತಿಕಥೆ, ರಾಮನ ಶೌರ್ಯ ದ ಕಥೆ, ಭೀಮನ ಬಲದ ಕಥೆ, ಸಿರಿವಂತರ ಸೊಕ್ಕಿನ ಕಥೆ, ಬಡವರ ಹಸಿವಿನ ಕಥೆ, ಸೋತ ಕಥೆ, ಗೆದ್ದ ಕಥೆ, ನಗುವ ಕಥೆ, ಅಳುವ ಕಥೆ, ಸನ್ಯಾಸದ ಕಥೆ, ಗಾರ್ಹಸ್ಥ್ಯದ ಕಥೆ, ಸಾಮಾನ್ಯರ ಸಾಮಾನ್ಯ ಕಥೆ , ಸಂತೆಯ ಸೌತೆ-ಬದನೆಗಳ ಕಥೆ, ಹೋರಾಟದ ಕಥೆ, ಯಶಸ್ಸಿನ ಕಥೆ,ಅಪ್ಪುವ ಕಥೆ, ದಬ್ಬುವ ಕಥೆ, ಮಿನಿ ಕಥೆ,ಹನಿಗಥೆ, ಸಣ್ಣ ಕಥೆ,ನೀಳ್ಗಥೆ, ಕಾವ್ಯ-ಕಾದಂಬರಿಗಳ ಕಥೆ...ಮುಗಿಯದ,ನಿಲ್ಲದ ಕಥೆ .

~ ಗೌರಿಪ್ರಸನ್ನ