ಗಿಳಿಯು ಪಂಜರದೊಳಿಲ್ಲ

ಹಿಂದಿನ ಲೇಖನದಲ್ಲಿ ಪೌರಾಣಿಕ ಕಥೆಗಳಲ್ಲಿ ಬರುವ “ಅಮರತ್ವ” ವನ್ನು ಇಂದಿನ “ಆವಿಷ್ಕಾರಗಳಿಂದ” ಪಡೆಯುವ ಪ್ರಯತ್ನದ ಬಗ್ಗೆ ಬರೆದಿದ್ದೆ. ಈ ವಿಷಯದ ಬಗ್ಗೆ ವಿಚಾರಗಳು ಇನ್ನೂ ತಲೆಯಲ್ಲಿ ಓಡುತ್ತಿತ್ತು, ತಲೆಯಲ್ಲಿ ಹರಡಿದ ವಿಚಾರಗಳನ್ನು ಹೆಣೆದು, ಒಂದು ಲೇಖನ ಮಾಡುವ ಪ್ರಯತ್ನ ಇದು.

ಶನಿ ಮಹಾತ್ಮೆ ಕಥೆಯ ಒಂದು ಭಾಗ; ಸೂರ್ಯನ ಎರಡನೆಯ ಪತ್ನಿ ಛಾಯಾದೇವಿ. ಯಮ ಮೊದಲ ಹೆಂಡತಿಯ ಮಗ, ಅವನು ತಾಯಿ ಛಾಯಾದೇವಿ ಮಾಡುವ ಬೇಧಭಾವ ಬಗ್ಗೆ ಮಾತನಾಡಿದಾಗ, ಛಾಯಾದೇವಿಯು ಯಮನಿಗೆ “ಪ್ರೇತನಾಗು” ಎಂದು ಶಾಪ ಕೊಡುತ್ತಾಳೆ. ಸೂರ್ಯದೇವ ಇದನ್ನು ವರವನ್ನಾಗಿ ಪರಿವರ್ತಿಸಿ, ಯಮನನ್ನು ಪ್ರೇತಗಳ ರಾಜ – ನರಕದ ಒಡೆಯನನ್ನಾಗಿ ಮಾಡುತ್ತಾನೆ. ಈ ಯಮಧರ್ಮ ಜಗತ್ತಿನ ಎಲ್ಲ ಜನರಿಗೆ ಕೊನೆಯ ವರದಾನ “ಸಾವನ್ನು” ಕೊಡುತ್ತಾರೆ, ಜೋಗಿ ತಮ್ಮ ಪುಸ್ತಕ “ಸಾವು” ನಲ್ಲಿ ಹೇಳುವದು “ಅವನು ಕೊನೆಗೆ ಬರುತ್ತಾನೆ. ಹೊರಡು ಅನ್ನುತ್ತಾನೆ. ನಾವೆಲ್ಲ ಎದ್ದು ಹೊರಡುತ್ತೇವೆ, ಅಲ್ಲಿಗೆ ಆಟ ಮುಗಿಯುತ್ತದೆ. ಮುಂದೇನು ಅನ್ನುವುದು ಯಾರಿಗೂ ಗೊತ್ತಿಲ್ಲ. ನಾವು ಭೇಟಿಯಾಗುವ ಕೊನೆಯ ಗಿರಾಕಿ ಸಾವು. ನಮ್ಮ ಹುಟ್ಟಿನೊಂದಿಗೆ ನಮ್ಮೊಳಗೇ ಹುಟ್ಟುವ ಆತ್ಮಬಂಧು”. ಇಲ್ಲಿ ಸಾವನ್ನು ಆತ್ಮಬಂಧು ಎಂದು ಯಾಕೆ ಕರೆದಿರಬಹುದು ಎಂಬುದು ಮುಂದೆ ಚರ್ಚಿಸೋಣ.

ಸಾವಿನ ವಿಷಯ ಬಂದಾಗ ನೆನಪಾಗುವುದು ನನ್ನ ಬಾಲ್ಯದ ಗೆಳೆಯ “ಚಂದ್ರು”. ನನ್ನೊಡನೆ ಶಾಲೆಯಲ್ಲಿ ಓದಿದವನು, ಜಾಣ ಹುಡುಗ. ನಾವೆಲ್ಲರೂ ಶಾಲೆ ಮುಗಿದಮೇಲೆ ಮುಂದಿನ ವಿದ್ಯಾಭ್ಯಾಸಕ್ಕೆ ಬೇರೆ, ಬೇರೆ ಸ್ಥಳಕ್ಕೆ ಹೋದೆವು. ಚಂದ್ರು ಸುರತ್ಕಲ್ ರೀಜನಲ್ ಇಂಜಿನಿಯರಿಂಗ್ ಕಾಲೇಜು ಸೇರಿಕೊಂಡು ಕೆಮಿಕಲ್ ಇಂಜಿನಿಯರಿಂಗ್ ಓದುತ್ತಿದ್ದ. ಅವನು “ಲೈಫ್ ಆಫ್ಟರ್ ಡೆತ್” ಪುಸ್ತಕ ಓದಿ, ಅದರಿಂದ ಪ್ರಭಾವಿತಗೊಂಡನು. ಒಂದು ದಿನ ವಿಷಯ ತಿಳಿಯಿತು, ಅವನು ಸಾವಿನ ನಂತರ ಏನಿದೆ ಎಂದು ನೋಡಲು ಹೋಗುತ್ತಿದ್ದೇನೆ ಎಂದು ಪತ್ರ ಬರೆದು ಇಟ್ಟು, ಸಾವನ್ನು ಅಪ್ಪಿಕೊಂಡಿದ್ದನು… ಈ ವಿಷಯ ಹಂಚಿಕೊಂಡ ಕಾರಣ, ಸಾವು ಕೆಲವರಿಗೆ ಹೆದರಿಕೆ ತಂದರೆ… ಕೆಲವರಿಗೆ ಕುತೂಹಲ ಮೂಡಿಸುತ್ತದೆ.

ಹಿಂದು ಧರ್ಮದಲ್ಲಿ ಸಾವು, ಅದರ ನಂತರದ ಬದುಕಿನ ಬಗ್ಗೆ ವಿಷಯಗಳು ಗರುಡ ಪುರಾಣದಲ್ಲಿ ಬರುತ್ತದೆ. ನಾವು ನಮ್ಮ ಕರ್ಮಗಳ ಅನುಸಾರವಾಗಿ ಸಾವಿನ ನಂತರದ ಬದುಕನ್ನು ಕಾಣುತ್ತೇವೆ. ಒಂದು ರೀತಿ ಅದು ನಿಜ, ಯಾಕೆಂದರೆ ನಾವು ಬದುಕಿದಾಗ ಮಾಡಿದ ಒಳ್ಳೆಯ ಕಾರ್ಯವನ್ನು ಜನ ನೆನಪಿಸಿಕೊಂಡು, ನಮ್ಮ ಸಾವಿನ ನಂತರವೂ ನಮ್ಮ ಉಳಿವು ಇಲ್ಲಿರುವಂತೆ ಮಾಡುತ್ತಾರೆ.

“ಬರಿ ನಾಲ್ಕು ದಿನ ಇಲ್ಲಿ ನಿನ್ನ ಋಣ,
ಕೊನೆಗೆ ಉಳಿಯುವುದೇ ನಿನ್ನ ಒಳ್ಳೆತನ.
ಸ್ನೇಹ ಪ್ರೀತಿ ನ್ಯಾಯ ನೀತಿ ನಿನ್ನದಾಗಲಿ ಸದಾ”
(“ಮಾಸ್ತಿ ಗುಡಿ” ಚಿತ್ರದ ಒಂದು ಹಾಡು)

ಸ್ವಾಮಿ ರಾಮ ಅವರ ಪುಸ್ತಕ “ಹಿಮಾಲಯದ ಮಹಾತ್ಮರ ಸನ್ನಿದಿಯಲ್ಲಿ” ಅವರು ವಿವಿಧ ಸಾಧಕರ ಪರಿಚಯ ಮಾಡಿಕೊಡುತ್ತಾರೆ. ಅದರಲ್ಲಿ ಸ್ವಾಮಿ ರಾಮ ತಮ್ಮ ಗುರುಗಳ ಶಿಷ್ಯಂದಿರಲ್ಲಿ ಒಬ್ಬರಾದ ಸಾಧಕರ ಬಗ್ಗೆ ಬರೆಯುತ್ತಾರೆ, ಆ ಸಾಧಕರನ್ನು ಭೇಟಿಯಾಗಲು ಗಂಗೋತ್ರಿ ಹತ್ತಿರದ ಒಂದು ಗವಿಗೆ ಹೋಗುತ್ತಾರೆ. ಆ ಸ್ವಾಮಿಗಳು ಸುಂದರವಾದ ದೃಢಕಾಯದವರು, ಅವರು ದೇಹದಿಂದ ತಮ್ಮನ್ನು ಬೇರ್ಪಡಿಸಿಕೊಂಡು ಹೋಗುವ ತಯಾರಿಯಲ್ಲಿ ಇದ್ದರು. ಅವರು ಹೇಳಿದ ದಿನ, ಕ್ಷಣ ತಮ್ಮ ದೇಹವನ್ನು ತ್ಯಾಗ ಮಾಡಿ ತಮ್ಮ ಆತ್ಮವನ್ನು ಬ್ರಹ್ಮರಂಧ್ರದಿಂದ ಬೇರ್ಪಡಿಸಿದರು. ಅವರ ಪ್ರಕಾರ ಇದು ಸಾವಲ್ಲ, ಅವರ ಆತ್ಮ ಅವರ ಹತೋಟಿಯಲ್ಲಿ ಇದೆ ಮತ್ತು ಅವರು ತಮ್ಮ ಇಚ್ಛಾನುಸಾರ ಅಮರರಾಗಿಯೇ ಉಳಿಯುತ್ತಾರೆ. ಇಲ್ಲಿ ನಾವು ಮೇಲೆ ನೋಡಿದ ಆತ್ಮಬಂಧು ಪದವನ್ನು ನೋಡೋಣ… ಆತ್ಮಬಂಧು, ಆತ್ಮಾಭಿಮಾನ, ಆತ್ಮನಿರ್ಭರತೆ, ಆತ್ಮಾವಲೋಕನ ಈ ಎಲ್ಲ ಪದಗಳಲ್ಲಿ ಆತ್ಮ ಎಂದು ಉಪಸರ್ಗ ಇದೆ. ಇಲ್ಲಿ ಅಥವಾ ಇಂತಹ ಸಂಬೋಧನೆಯಲ್ಲಿ ದೇಹ ಎಂದು ಇರುವದಿಲ್ಲ, ಯಾಕೆಂದರೆ ನಮ್ಮನ್ನು ಗುರುತಿಸುವುದು ಆತ್ಮ, ನಮ್ಮ ಆತ್ಮತೃಪ್ತಿಗಾಗಿ ಮಾಡುವ ಕಾರ್ಯಗಳೇ ನಮ್ಮನ್ನು ಇಲ್ಲಿ ಉಳಿಸುವುದು; ನಮ್ಮ ದೇಹವಲ್ಲ. ಮೇಲೆ ಕಂಡಂತಹ ಸಾಧಕರ ಪ್ರಕಾರ ದೇಹ ಬಾಹ್ಯ ವ್ಯಕ್ತಿತ್ವ.

ನನ್ನಗೂ, ನನ್ನ ಅಣ್ಣನಿಗೂ ಕೆಲವು ತಿಂಗಳು ಇಂತಹ ಒಬ್ಬ ಸಾಧಕರ ಜೊತೆ ಇದ್ದು, ಅವರ ಸೇವೆ ಮಾಡುವ ಅವಕಾಶ ಸಿಕ್ಕಿತು. ಸಾಧಕರು ಇದ್ದ ಸ್ಥಳ ಸಿದ್ದಾಪುರದ ಹತ್ತಿರದ ಶಿರಳಗಿ ಎಂಬ ಸಣ್ಣ ಗ್ರಾಮದಲ್ಲಿ. ಅವರು ಶ್ರೀ ರಾಮ ದೇವರೊಡನೆ ಮಾತನಾಡುತ್ತಾರೆ, ಹನುಮಂತ ದೇವರ ದರ್ಶನ ಪಡೆದಿದ್ದಾರೆ ಎಂದು ಸುತ್ತಲಿನ ಜನ ಅವರ ಹತ್ತಿರ ತಮ್ಮ ಕಷ್ಟಗಳನ್ನು ಹಂಚಿಕೊಳ್ಳಲು ಬರುತ್ತಿದ್ದರು. ನಮಗೆ ಪ್ರತಿ ದಿನವೂ ಹೊಸ ಜನ, ಹೊಸ ವಿಷಯ ತಿಳಿಯುತ್ತಿತ್ತು, ಇನ್ನೊಂದು ಲೇಖನದಲ್ಲಿ ಅಲ್ಲಿ ಕಂಡ ವಿಷಯ, ಸಂಗತಿಗಳ ಬಗ್ಗೆ ಬರೆಯಲು ಪ್ರಯತ್ನಿಸುತ್ತೇನೆ. ಅವರ ಸರಳ ಜೀವನ, ಸದಾ ನಗು, ಯಾವುದೇ ಒಂದು ವಸ್ತು/ವಿಷಯದ ಮೇಲೆ ಅಸೆ ಇರದೇ ಜೀವಿಸುದು ನೋಡಿ ಒಂದು ದಿನ ತಡೆಯಲಾರದೆ ಕೇಳಿದೆ – “ನಿಮ್ಮ ಬಗ್ಗೆ, ನಿಮ್ಮ ವಿಚಾರ ಹೆಚ್ಚಿನ ಜನರಿಗೆ ತಲುಪಿಸಲು ನಿಮಗೆ ಇಚ್ಛೆ ಇಲ್ಲವೇ? ಆಶ್ರಮ ನೀವು ಇನ್ನೂ ಬೆಳಸಬಹುದಲ್ಲವೇ?”. ಅದಕ್ಕೆ ಅವರು ಅಂದದ್ದು, ನನಗೆ ಬಾಹ್ಯ ಜಗತ್ತು ಬೇಕಿಲ್ಲ, ನನ್ನ ಜಗತ್ತು ನನ್ನ ಅಂತರಾತ್ಮದಲ್ಲಿ ಇದೆ ಮತ್ತು ಅದರಲ್ಲಿ ನಾನು ಸಂತೋಷದಿಂದ ಇದ್ದೇನೆ. ನಿಜಕ್ಕೂ ಅವರಿಗೆ ಬಾಹ್ಯ ಕಾಣುತ್ತಿರಲಿಲ್ಲ, ಅಲ್ಲಿ ನನ್ನನ್ನು ಹೆದರಿಸುವ ಹಾವು, ಕತ್ತಲು, ನಿಶ್ಯಬ್ದ ಅವರಿಗೆ ಎಂದೂ ಕಾಣುತ್ತಿರಲಿಲ್ಲ.

ಇಷ್ಟೊಂದು ವಿಷಯ ಸಾವಿನ ಬಗ್ಗೆ ಬರೆದ ಕಾರಣ ಜನಕ್ಕೆ ಸಾವಿಲ್ಲದೆ ಬದುಕುವ, ಸಾವನ್ನು ಗೆಲ್ಲುವ ಹುಚ್ಚು… ಅವರ ಬಾಹ್ಯ ದೇಹ, ಹೆಸರು ಇಲ್ಲಿ ಶಾಶ್ವತವಾಗಿ ಉಳಿಸಲು ನಡೆಸುವ ಪ್ರಯತ್ನವೇ ಅಮರತ್ವ ಸಾಧನೆ ಅನಿಸುತ್ತದೆ. ನಾಲ್ಕು ಯುಗಗಳ ಬದುಕಿನ ಕೊನೆಯ ಯುಗ “ಕಲಿ” ಯುಗದಲ್ಲಿ ಎಲ್ಲವೂ ನಾಶವಾಗುವದರ ಬಗ್ಗೆ ಭವಿಷ್ಯದ ಹೇಳಿಕೆಗಳ ನಡುವೆ ಚಿರಂಜೀವಿ ಆಗಿರಲು ಸಾಧ್ಯವೇ? ನಮ್ಮ ಜೀವನದ ಶಿಲ್ಪಿ ನಾವೇ. ಸಾವು ಮತ್ತು ಜನನವು ಜೀವನದ ಎರಡು ಘಟನೆಗಳು ಮಾತ್ರ. ಭಕ್ತ ಕಂಬಾರ ಚಿತ್ರದ ಒಂದು ಗೀತೆಯಲ್ಲಿ ಹೇಳಿದಂತೆ

“ಉಸಿರಾಡುವ ತನಕ, ನಾನು ನನ್ನದೆಂಬ ಮಮಕಾರ,
ನಿಂತ ಮರುಘಳಿಗೆ, ಮಸಣವೇ ಸಂಸ್ಕಾರ,
ಮಣ್ಣಲಿ ಬೆರೆತು, ಮೆಲ್ಲಗೆ ಕೊಳೆತು,
ಮುಗಿಯುವ ದೇಹಕೆ ವ್ಯಾಮೋಹವೇಕೆ…”

ದೇವರ ಆಟ ಬಲ್ಲವರಾರೂ, ಎಂಬಂತೆ ಸಾವಿನ ಆಟವೂ ವಿಚಿತ್ರ… ಅಭಿಮನ್ಯು ಮತ್ತು ಉತ್ತರೆಯ ಮಗ ಪರೀಕ್ಷಿತ ರಾಜನ ಕಥೆ ಎಲ್ಲರಿಗೂ ಗೊತ್ತಿರಬಹುದು. ಮಹಾಭಾರತದ ಯುದ್ಧದ ಕೊನೆಯಲ್ಲಿ ಅಶ್ವಥಾಮ ಬ್ರಹ್ಮಾಸ್ತ್ರ ಬಿಟ್ಟು ಉತ್ತರೆಯ ಗರ್ಭ ಭೇದಿಸಿ, ಪಾಂಡವರ ವಂಶ ನಾಶ ಮಾಡಲು ಪ್ರಯತ್ನಿಸುತ್ತಾನೆ. ಬ್ರಹ್ಮಾಸ್ತ್ರ ತಡೆದು ಗರ್ಭದಲ್ಲಿ ಬೆಳೆಯುತ್ತಿರುವ ಮಗುವನ್ನು ಶ್ರೀ ಕೃಷ್ಣ ಉಳಿಸುತ್ತಾನೆ… ಇಲ್ಲಿ ಪರೀಕ್ಷಿತ ಸಾವನ್ನು ಗೆಲ್ಲುತ್ತಾನೆ. ಮುಂದೆ ಋಷಿ ಶಮಿಕಾ ಅವರನ್ನು ಅವಮಾನಿಸಿ ಶಾಪಗ್ರಸ್ಥನಾಗುತ್ತಾನೆ, ಶಾಪದಿಂದ ತಪ್ಪಿಸಿಕೊಳ್ಳಲು ಮಾಡಿದ ಎಲ್ಲ ಪ್ರಯತ್ನಗಳು ವಿಫಲ ಆಗುತ್ತದೆ, ಹಣ್ಣಿನ ನಡುವೆ ನುಸುಳಿ ಕುಳಿತ ತಕ್ಷಕ ಸರ್ಪ ಪರೀಕ್ಷಿತ ರಾಜನನ್ನು ಕಚ್ಚಿ ಅವನ ಸಾವಿಗೆ ಕಾರಣ ಆಗುತ್ತಾನೆ. ಹುಟ್ಟುವ ಮೊದಲು ಸಾವನ್ನು ಗೆದ್ದ ಪರೀಕ್ಷಿತ, ಮುಂದೆ ಪ್ರಯತ್ನ ಪಟ್ಟರೂ ಸಾವನ್ನು ಗೆಲ್ಲಲು ಸಾಧ್ಯ ಆಗುವದಿಲ್ಲ.

ಸಾವು ಜೀವನದ ಕೊನೆಯ ಆದೇಶ ಆದರೆ, ಚಿರಂಜೀವಿ ಪದಕ್ಕೆ ಅರ್ಥ ಇಲ್ಲವೇ?
ನಮ್ಮ ಪೌರಾಣಿಕ ವ್ಯಕ್ತಿಗಳಾದ ಅಶ್ವತ್ಥಾಮ, ಬಲಿ ಚಕ್ರವರ್ತಿ, ವೇದವ್ಯಾಸರು, ಹನುಮಾನ್, ವಿಭೀಷಣ, ಕೃಪಾಚಾರ್ಯರು, ಮಾರ್ಕಂಡೇಯ ಮತ್ತು ಪರಶುರಾಮ ಇವರನ್ನು ಅಷ್ಟ ಚಿರಂಜೀವಿಗಳು ಎಂದು ಕರೆಯುತ್ತಾರೆ. “Land of thousand names ” ಎಂದೇ ಪ್ರಸಿದ್ಧಿ ಪಡೆದ ಸ್ಥಳ ಶಂಬಾಲ , ಇದು ಹಿಮಾಲಯದಲ್ಲಿ ಇದೆ ಎಂದು ಹಿಂದು ಮತ್ತು ಬೌದ್ಧ ಧರ್ಮದ ನಂಬಿಕೆ. ಇದನ್ನು ಹುಡುಕಲು ವಿವಿಧ ದೇಶದ ಶೋಧಕರು ಪ್ರಯತ್ನ ಪಟ್ಟಿದ್ದಾರೆ. ನಮ್ಮ ಅಷ್ಟ ಚಿರಂಜೀವಿಗಳು ಶಂಬಾಲದಲ್ಲಿ ಇದ್ದಾರೆ ಮತ್ತು ವಿಷ್ಣುವಿನ ಹತ್ತನೇ ಅವತಾರ ಕಲ್ಕಿಯ ಆಗಮನಕ್ಕೆ ಕಾಯುತ್ತಿದ್ದಾರೆ ಎಂದು ಪ್ರತೀತಿ.

ಶಂಬಾಲ ಅಥವಾ ಸಹಸ್ರಾರ ಚಕ್ರ ಸಿದ್ದಿ ಸಾಧಕರು ಅನುಭವಿಸಬಲ್ಲರೇನೋ, ಅಂತಹ ಸಾಧಕರು ಚಿರಂಜೀವಿ ಆಗಬಹುದೇನೋ?
ಚಿರಂಜೀವಿ ಆಗಲು ಸಾಧ್ಯವಾಗದಿದ್ದರೆ; ಛಿ! ರಮ್ ಜೀವಿ ಆಗಬಹುದು…

ನನ್ನಂತಹ ಸಾಮಾನ್ಯರಿಗೆ ಸಾವನ್ನು ಸರಳವಾಗಿ ಹೇಳುವದಾದರೆ – “kicked the bucket “…ಪುರಂದರ ದಾಸರ ಕೀರ್ತನೆಯ ಸಾಲುಗಳೇ ಕೊನೆಯ ಅನುಭವ,

“ಒಂಬತ್ತು ಬಾಗಿಲ ಮನೆಯಲ್ಲಿ, ತುಂಬಿದ ಸಂದಣಿ ಇರಲು
ಕಂಬ ಮುರಿದು ಡಿಂಬ ಬಿದ್ದು, ಅಂಬರಕ್ಕೆ ಹಾರಿತಯ್ಯೋ
ರಾಮ, ರಾಮ
ಗಿಳಿಯು ಪಂಜರದೊಳಿಲ್ಲ”

ಕನ್ನಡ ನಾಡು, ಭಾಷೆ, ಉತ್ಸವ, ಮತ್ತು ಹೊಸವರ್ಷ …..

ಅನಿವಾಸಿಯ ಬಳಗಕ್ಕೆ ನಮಸ್ಕಾರ. 2025ರ ಹೊಸವರ್ಷದಲ್ಲಿಯ ನನ್ನ ಮೊದಲ ಸಂಚಿಕೆಗೆ ನಿಮ್ಮೆಲ್ಲರ ಸ್ವಾಗತ.  ಅನಿವಾಸಿ ಬಳಗದ ಉತ್ಸಾಹ ಹೆಚ್ಚುತ್ತಿರುವುದಕ್ಕೆ ಇತ್ತೀಚೆಗೆ ನಡೆದ ದಶಮಾನೋತ್ಸವ, ಹೊಸ ಸದಸ್ಯರುಗಳ ಆಗಮನ, ಬರವಣಿಗೆ ಇತ್ತ್ಯಾದಿಗಳೇ ಸಾಕ್ಷಿ.  ಇದರ ಜೊತೆಯಲ್ಲೇ, ಕೆಲವೇ ವಾರಗಳ ಹಿಂದೆ (ಕಳೆದ ವರ್ಷ ಅನ್ನಬಹುದಿತ್ತೇನೋ, ಆದರೆ ಎಷ್ಟೋ ದಿನ ಆದಂತೆ ಅನ್ನಿಸುವುದರಿಂದ ಬೇಡ ಅಂದುಕೊಂಡೆ) ಸಕ್ಕರೆಯ ನಾಡು, ಮಂಡ್ಯದಲ್ಲಿ ಹಿರಿಯ ಸಾಹಿತಿ ಶ್ರೀ ಗೋ ರು ಚನ್ನಬಸಪ್ಪನವರ ಅಧ್ಯಕ್ಷತೆಯಲ್ಲಿ ನಡೆದ 87ನೆಯ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲೆಂದೇ ನಮ್ಮ ಅನಿವಾಸಿ ಬಳಗದ ಪ್ರತಿನಿಧಿಯಾಗಿ ತೆರಳಿದ್ದರು ನಮ್ಮ ನವೀನ್.  ಅವರು ಬರೆದ ವರದಿ ಇಲ್ಲಿ ಕೆಳಗಿದೆ.  ಅವರೇ ತೆಗೆದ ಹಲವು ಚಿತ್ರಗಳೂ ಜೊತೆಯಲ್ಲಿವೆ - ಅದರಲ್ಲಿ ಪರಿಚಿತ ಮುಖಗಳಿವೆ, ನೋಡಿ.

ಜೊತೆಯಲ್ಲಿ ನಮ್ಮ ಗೋಪಾಲಕೃಷ್ಣ ಹೆಗಡೆಯವರ ಒಂದು ಕವನವಿದೆ, ಹೊಸವರ್ಷದ ಆಶಯಗಳೊಂದಿಗೆ. ಅವರದ್ದೇ ಮಾತಿನಲ್ಲಿ ಕವನದ ಹುಟ್ಟಿನ ಪರಿಚಯವೂ ಇದೆ.

ಕೊನೆಯ ಕೊಸರಿನಂತೆ, ಹೆಗ್ಡೆಯವರದೊಂದು ಚಿತ್ರಕ್ಕೆ ನನ್ನದೊಂದು ಕಿರು ಕವನವನ್ನೂ ಹಾಕಿಬಿಟ್ಟಿದ್ದೇನೆ, ತಡೆಯಲಾರದೆ. ಕ್ಷಮೆಯಿರಲಿ.

ಎಂದಿನಂತೆ ಓದಿ, ತಮ್ಮೆಲ್ಲರ ಮನೋಭಿಪ್ರಾಯವನ್ನು ತಿಳಿಸುವುದನ್ನು ಮುಂದುವರೆಸಿ. ಹೊಸವರ್ಷದ ಶುಭಾಶಯಗಳು.
- ಲಕ್ಷ್ಮೀನಾರಾಯಣ ಗುಡೂರ
*******************************************
೮೭ ನೇ ಕನ್ನಡ ಸಾಹಿತ್ಯ ಸಮ್ಮೇಳನ ೨೦೨೪, ಮಂಡ್ಯ

ಇತ್ತೀಚಿಗಷ್ಟೆ ೮೭ನೆ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಿತು. ಅದಕ್ಕಂತಲೇ ನಾನು ಭಾರತಕ್ಕೆ ಹೋಗಿದ್ದೆ. ಬಹಳ ವರ್ಷಗಳಿಂದಲೂ ಸಮ್ಮೇಳನದಲ್ಲಿ ಭಾಗಿಯಾಗುವ ತವಕವಿತ್ತು. ಆದರೆ ಆ ಸುಸಂದರ್ಭ ಈಗ ದೊರಕಿತು. ಬಹಳ ನಿರೀಕ್ಷಣೆಯಿಂದ ಸಿದ್ಧತೆ ಮಾಡಿಕೊಂಡಿದ್ದೆ. ಸಾಹಿತ್ಯ ಸಮಾರೋಪದಲ್ಲಿ ಸಾಕಷ್ಟು ಸಾಹಿತ್ಯದಬಗ್ಗೆ, ಕನ್ನಡ ಭಾಷೆ ಬಗ್ಗೆ ಕೇಳಿಬರುತ್ತದೆ, ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವಸಾಹಿತಿ, ಕವಿ, ಬರಹಗಾರರ ನಡುವೆ ನಡೆದಾಡಿ, ಅವರನ್ನು ಆಲಿಸಿ ಅವರಿಂದ ಪ್ರೇರಣೆ ಪಡೆಯುವುದಲ್ಲದೆ, ಕನ್ನಡ ಭಾಷಾಕ್ಷೇತ್ರದಲ್ಲಿ ಎಂಥಹ ಬೆಳವಣಿಗೆ ರೂಪಗೊಂಡಿದೆ ಎಂದು ಕಾಣುವ ಹಂಬಲ ಬೆಳಸಿಕೊಂಡಿದ್ದೆ. ಇದಕ್ಕನುಗುಣವಾಗಿ ಲೀಡ್ಸ್ನಲ್ಲಿ ಮಾಡುತಿದ್ದ ಕೆಲಸವನ್ನು ಮೊಟಕುಗೊಳಿಸಿ ಹತ್ತಿದೆ, ಯುನೈಟೆಡ್ ಕಿಂಗ್ಡಮ್ನ ರಾಯಭಾರಿಯಂತೆ ಭಾವಿಸಿ. ಯಾಕಂದರೆ ನನಗೆ ತಿಳಿದಿರಲಿಲ್ಲ ಬೆರ್ಯಾರಾದರು ಇಲ್ಲಿಂದ ಹೋಗುವರೇನೋ ಅಂತ. ಆದರೆ ಅಲ್ಲಿಗೆ ಹೋದಮೇಲೆ ಲಂಡನಿನಿಂದ ಬಂದಿದ್ದ ಇನ್ನಿಬ್ಬರನ್ನು ಭೇಟಿಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಮಹೇಶ್ ಜೋಶಿಯವರು ಕೆಲವೇ ದಿನಗಳ ಹಿಂದೆ ಬಂದು ನಮ್ಮೆಲ್ಲರಿಗೂ ಆಮಂತ್ರಣ ಕೊಟ್ಟಿದ್ದರು. ನಮ್ಮ ದೇಶವಲ್ಲದೆ ಕನ್ನಡಿಗರಿರುವ ಹತ್ತಾರು ರಾಷ್ಟ್ರಗಳಿಗೂ ಹೋಗಿ ವೈಯಕ್ತಿಕವಾಗಿ ಅಭಿಮಾನಿಗಳು ಭಾಗವಹಿಸಬೇಕೆಂದು ವಿನಂತಿಸಿಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಹಾಗು ಸಾಹಿತ್ಯ ಸಮ್ಮೇಳನ ಬರೇ ಕರ್ನಾಟಕದ ಕನ್ನಡ ಜನರ ತಾಣವಲ್ಲ, ಅವು ಪ್ರಪಂಚದ ಎಲ್ಲೆಡೆ ನೆಲಸಿ ತಮ್ಮ ತಾಯ್ನಾಡನ್ನ ಮರೆಯದ ಜನಸಮುದಾಯದ ಸಂಸ್ಥೆಗಳು ಎಂದು ಸಾರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ನಾನು ಗುರುವಾರ ೧೯ನೆ ತಾರೀಖಿನಂದೇ ಮಂಡ್ಯಕ್ಕೆ ಹೊರಟೆ. ವಿದೇಶದಿಂದ ಬರುವ ಎಲ್ಲ ಪ್ರತಿನಿಧಿಗಳಿಗೆಂದೇ ವಿಶೇಷ ವ್ಯವಸ್ಥೆ ಬಹಳ ದಿನಗಳಿಂದಲೇ ರೂಪಗೊಂಡಿತ್ತು. ಮೈಸೂರಿನ ಸಂದೇಶ್ ಪ್ರಿನ್ಸ್ನಲ್ಲಿ ನಮಗೆ ಉಳಿದುಕೊಳ್ಳುವ, ಅಲ್ಲಿಂದ ಪ್ರತಿದಿನ ಸಮ್ಮೇಳನ ನಡೆಯುವ ಮಂಡ್ಯಕ್ಕೆ ಹೋಗಿಬರುವ ಸಾರಿಗೆ ಏರ್ಪಾಟು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ನಿವೇದಿತಾ ಹೊನ್ನತ್ತಿಯವರ ನೇತೃತ್ವದಲ್ಲಿ ಬಹಳ ಅಚ್ಚುಕಟ್ಟಾಗಿ ಯೋಜಿಸಿ ಕಾರ್ಯಗತ ಮಾಡಲಾಗಿತ್ತು. ನನ್ನ ಭಾಷೆಯ ಸಮ್ಮೇಳನಕ್ಕೆ ನಾನೇ ಎಲ್ಲ ಖರ್ಚುಗಳನ್ನ ವಹಿಸಿಕೊಂಡು ಸರ್ಕಾರಕ್ಕಾಗಲಿ ಪರಿಷತ್ತಿಗಾಗಲಿ, ಸಮ್ಮೇಳನ ಸಂಚಾಲಕ ಇಲಾಖೆಗಾಗಲಿ ಋಣಿಯಾಗಬಾರದೆಂದಿದ್ದೆ. ಆದರೆ ನಮಗ್ಯಾವ ಕುಂದುಕೊರತೆಯಾಗದೆ, ಶುಲ್ಕವೂಯಿಲ್ಲದೆ ವಸತಿ, ಊಟ, ಜೊತೆಗೆ ಮನರಂಜನೆ, ಸಾಹಿತ್ಯ ರಸದೌತಣ ಉಣಿಸಿದ ಎಲ್ಲರಿಗೂ ನಾವು ಚಿರಋಣಿಯಾಗಿರಬೇಕು.

ಮಂಡ್ಯದಲ್ಲಿ ಅದೊಂದು ದೊಡ್ಡ ‘ಕುಂಭಮೇಳ’ ಅನ್ನಬೇಕು. ವಿಶಾಲ ಜಾಗ, ಲಕ್ಷಾಂತರ ಜನರು ಕೂರುವಂಥ ಸಭಾಂಗಣ, ಅದಕ್ಕೆ ತಕ್ಕಂಥ ಅದ್ದೂರಿ ಪ್ರವೇಶದ್ವಾರ, ದೃಷ್ಟಿಯಗಲಕ್ಕೂ ಮೀರಿದ ವೇದಿಕೆ, ಮಹಾಮಂಟಪ, ಅಲ್ಲಲ್ಲೇ ನೋಡಲನುಕೂಲವಾಗುವಂಥ ಕ್ಲೋಸ್ಡ್-ಸರ್ಕ್ಯೂಟ್ ಟಿವಿ, ಹೊರಗಿದ್ದರೂ ಕೇಳಿಸಿಕೊಳ್ಳುವಂಥ ಧ್ವನಿ ವ್ಯವಸ್ಥೆ, ಇವೆಲ್ಲ ದೊಡ್ಡ ಪ್ರಮಾಣದ ವಿನ್ಯಾಸವೆಂತಲೇ ಭಾವಿಸಬೇಕು.

ಸಮ್ಮೇಳನದ ವಿಶೇಷತೆ ಅದರ ಸಭಾಧ್ಯಕ್ಷರಾದ ನಾಡೋಜ ಗೊ ರು ಚನ್ನಬಸಪ್ಪನವರು. ೯೪ ವರ್ಷಗಳಾಗಿದ್ದರೂ ಅವರ ಮಾತಿನಲ್ಲಿದ್ದ ಸ್ಪಷ್ಟತೆ, ಶಬ್ದಭಂಡಾರ, ನಿರರ್ಗಳತೆ ಎಂತಹವರನ್ನೂ ಮೋಡಿ ಮಾಡುವಂಥದು. ನೇರವಾಗಿ ಸರ್ಕಾರಕ್ಕೆ ಮತ್ತು ವಾಣಿಜ್ಯ ಉದ್ಯಮಿಗಳಿಗೆ ಕರೆ ಕೊಟ್ಟರು. ಕನ್ನಡ ಭಾಷೆ ಉಳಿಯಲು ಬೆಳೆಸಲು ಅವರಿಂದ ಯಾವ ತರಹದ ಉತ್ತೇಜನ ದೊರಕಬೇಕು, ಅದರಲ್ಲೂ ಆರ್ಥಿಕ ಹೊಣೆ ವಹಿಸಿಕೊಳ್ಳಬೇಕೆಂದು. ಕನ್ನಡ ವಿಶ್ವವಿದ್ಯಾನಿಲಯ, ಕನ್ನಡ ಶಾಲೆಗಳು ಮುಚ್ಚುವಂಥ ಸ್ಥಿತಿಯನ್ನು ತಡೆಗಟ್ಟಲು ಸರ್ಕಾರ ಯಾವ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಮೇಲಿದ್ದ ರಾಜಕೀಯ ಮುಖಂಡರಿಗೆ ಮನದಟ್ಟು ಮಾಡಿದರು. ಕನ್ನಡ ಪ್ರಾಚೀನ ಭಾಷೆಯಾಗಿದ್ದರೂ ಇಂದಿನ ತಂತ್ರಜ್ಞಾನ ಅಳವಡಿಸಿಕೊಂಡು, ಎಲ್ಲರಿಗೂ, ಅದರಲ್ಲೂ ಪ್ರಚಲಿತ ಯುವಪೀಳಿಗೆಗೆ ತಟ್ಟುವಂಥ ಮಾರ್ಪಾಟು ಮಾಡಿಕೊಳ್ಳಬೇಕು ಎಂದು ಕರೆಯಿತ್ತರು. ಇದರ ಜೊತೆಗೆ ಅವರು ಮತ್ತಿತರ ಮಹತ್ತರ ವಿಷಯಗಳನ್ನೂ ಚರ್ಚಿಸಿದರು. ಶಿಕ್ಷಣ ಮಾಧ್ಯಮ, ಅಂತರ-ರಾಜ್ಯ ಭಾಷಾವಿನಿಮಯ, ಕನ್ನಡ ಕಲಿಕಾ ಕೇಂದ್ರಗಳು, ಪರಿಸರ ಸಂರಕ್ಷಣೆ, ಧರ್ಮದ ದುರುಪಯೋಗ, ಮಹಿಳಾ ಸಮಾನತೆ ಹಾಗು ಸ್ವಾಯತ್ತತೆ, ಕನ್ನಡಿಗರ ಉದ್ಯೋಗ ಬದುಕು, ಪ್ರವಾಸೋದ್ಯಮ, ಮುಂತಾದ ವಿಚಾರಗಳನ್ನು ಎತ್ತಿ ತೋರಿಸಿ ಆ ದಿಕ್ಕಿನಲ್ಲಿ ಏನೆಲ್ಲಾ ಕೆಲಸಕಾರ್ಯಗಳು ನಡೆಯಬೇಕಾಗಿದೆ ಎಂದು ವಿವರಿಸಿದರು.

ಕೆಲವರ ಭಾಷಣಗಳು ತೀರ್ವವಾಗಿದ್ದವು. ಮುಖ್ಯಮಂತ್ರಿ ಚಂದ್ರುರವರು ಸಭಾಧ್ಯಕ್ಷರು ಉಲ್ಲೇಖಿಸಿದ ವಿಷಯಗಳಲ್ಲಿ ಸರ್ಕಾರ ವರ್ಷದಿಂದ ವರ್ಷಕ್ಕೆ ಅನುಸರಿಸುತ್ತಿರುವ ನಿರ್ಲಕ್ಷರೀತ್ಯಕ್ರಮವನ್ನು ಕಟುವಾಗಿ ರಾಜಕೀಯ ಮುಖಂಡರ ಮುಂದೆಯೇ ಟೀಕಿಸಿದರು. ಪ್ರತಿ ಸಮ್ಮೇಳನದಲ್ಲೂ ದೊಡ್ಡ ದೊಡ್ಡ ಭಾಷಣಗಳು ಆಗುತ್ತವೆ, ಮುಂದೆ ಮಾಡಬೇಕಾದ ಅಭಿವೃದ್ಧಿ ಕೆಲಸಗಳ ನಿರ್ಣಯವೂ ಆಗುತ್ತೆ, ಆದರೆ ಸಮ್ಮೇಳನ ತದನಂತರ ಅವೆಲ್ಲ ಒಣಆಶ್ವಾಸನೆಗಳಾಗೆ ಉಳಿಯುತ್ತವೆ ಎಂದು ಆಕ್ಷೇಪಿಸಿದರು.

ಅನೇಕ ಕವಿಗೋಷ್ಠಿಗಳು, ಉಪನ್ಯಾಸಗಳು, ಸಮಾಲೋಚನೆಗಳು ಮೂರು ದಿನಗಳಲ್ಲೂ ಹಬ್ಬಿಕೊಂಡು ಕಿಕ್ಕಿರಿದು ತುಂಬಿದ ಮಂಡ್ಯ ಜನಸಮೂಹಕ್ಕೆ ಒಂದು ರೀತಿಯ ಜ್ಞಾನೋದಯ ಉಂಟುಮಾಡಿತು. ಬೆಳಿಗ್ಗೆಯಿಂದ ಸಂಜೆವರೆಗೂ ಈ ಕಾರ್ಯಕ್ರಮಗಳಾದ ಮೇಲೆ ಮನರಂಜನೆ ಸಾಗುತಿತ್ತು. ಒಂದು ದಿನ ಸಾಧು ಕೋಕಿಲ, ಮತ್ತೊಂದು ಸಂಜೆ ಅರ್ಜುನ ಜನ್ಯ ನೆರೆದಿದ್ದ ಯುವಕ ಯುವತಿಯರನ್ನು ಕುರ್ಚಿ ಮೇಲೆಯೇ ನಿಂತು ಕುಣಿದಾಡುವಂತೆ ಮಾಡಿದರು.

ಪುಸ್ತಕ ಮಳಿಗೆಗಳು ಮತ್ತೊಂದು ವೈಶಿಷ್ಟತೆ. ಕೊಂಡುಕೊಳ್ಳುವರಿಗಂತೂ ಅದೊಂದುಹಬ್ಬವೇ. ಬಹುಷಃ ಇಲ್ಲಿವರೆಗೆ ಪ್ರಕಟವಾಗಿರುವ ಎಲ್ಲ ಕಾದಂಬರಿಗಳು ನಾಟಕಗಳುಕಾವ್ಯಗಳು, ಇತರೆ ಅನೇಕ ಬರವಣಿಗಗಳು ಮಳಿಗೆಗಳಲ್ಲಿ ರಾರಾಜಿಸುತ್ತಿದ್ದವು. ಪ್ರಕಾಶಕರುಅಲ್ಲಿ ತಮ್ಮ ತಮ್ಮ ಪ್ರಕಟಣೆಗಳನ್ನು ಸಾಲು ಸಾಲು ಅಂಗಡಿಗಳಲ್ಲಿ ಬಿತ್ತರಿಸಿ ೫೦%ಗೂ ಮಿಗಿಲಾಗಿ ರಿಯಾಯಿತಿ ಕೊಟ್ಟು ಓದುಗರನ್ನು ಪ್ರೇರೇಪಿಸುತ್ತಿದ್ದರು. ಅಷ್ಟೊಂದು ಪುಸ್ತಕಗಳು ಒಂದೇ ಜಾಗದಲ್ಲಿ ಪ್ರದರ್ಶನವಾದದನ್ನು ಬಹುಷಃ ನಾನು ನೋಡಿರಲಿಲ್ಲ.

ವಿದೇಶಿ ಕನ್ನಡಿಗರ ಸಂಘಟನೆ ಈ ಸಮ್ಮೇಳನದ ಮತ್ತೊಂದು ವೈಶಿಷ್ಟ್ಯಪೂರ್ಣಕಾರ್ಯಕ್ರಮ. ಯುರೋಪ್, ಅಮೇರಿಕಾ, ಆಸ್ಟ್ರೇಲಿಯಾ ದೇಶಗಳ ಜೊತೆಗೆ ಅನೇಕ ಏಷ್ಯಾರಾಷ್ಟ್ರಗಳ ಕನ್ನಡಿಗರು ನೆರೆದಿದ್ದರು. ಅವರೊಡನಾದ ಸ್ನೇಹ-ಪರಿಚಯ ಪರಸ್ಪರಕ್ರಿಯೆ ಬಹಳ ಕಾಲ ಉಳಿಯುವಂಥದು. ನಾನು ಬಹಳಷ್ಟು ವಿದೇಶಿ ಕನ್ನಡಿಗರನ್ನು ಪರಿಚಯಿಸಿಕೊಂಡು ಅವರ ದೇಶಗಳಲ್ಲಿ ಜರುಗುತ್ತಿರುವ ಕನ್ನಡ ಕಲಿಸುವಂಥ ಶಾಲೆಗಳ ಬಗ್ಗೆ, ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡೆ. ನಾವು ರಾಜ್ಯ ದೇಶ ಬಿಟ್ಟುಹೋಗಿದ್ದರೂ, ನಮ್ಮ ಕನ್ನಡ ನಮ್ಮೆಲ್ಲರನ್ನೂ ಒಂದುಗೂಡಿಸುತ್ತಿರುವ ಪರಿ ಎಲ್ಲರಿಗೂ ಅಗಾಧ ಸಂತಸ ತಂದಿರುವುದನ್ನ ಎಲ್ಲರಲ್ಲೂ ಕಂಡೆ. ಮುಂದೆ ನಾವೆಲ್ಲ ಸೇರಿ ಯಾವ ರೀತಿಯ ಕೊಡುಗೆ ಕೊಡಲು ಸಾಧ್ಯ ಅನ್ನುವುದನ್ನು ಕೂಲಂಕಶವಾಗಿ ಚರ್ಚಿಸಿ ಕಾರ್ಯಗತ ಮಾಡುವುದಕ್ಕೆ ಅನುವು ಮಾಡಿಕೊಟ್ಟಿದೆ ಕನ್ನಡ ಸಾಹಿತ್ಯ ಸಮ್ಮೇಳನ.

ಒಟ್ಟಿನಲ್ಲಿ ಈ ಸಮ್ಮೇಳನ ನನಗೊಂದು ಅಪೂರ್ವ ಅನುಭವ!

- ನವೀನ
*******************************************
ಆಕಾಶದ  ಆಶೆ -ಹೊಸ ವರುಷಕೆ!

(ಮುನ್ನುಡಿ: ಹೊಸವರ್ಷವೆಂದರೆ ನನಗೆ ಅದರಲ್ಲಿ ಕಂಡಿದ್ದು ಬರೇ ಅಂದಿನ ಮೈಮರೆತಂತ ಗಳಿಗೆಗಳಲ್ಲ; ಆದರೆ ಹಿಂದಿನ ದಿನಗಳ ನೋವು, ಮುಂದಿರುವ ಅನಿರ್ದಿಷ್ಟದ ಚಿಂತೆ. ಹಾಗೆಯೇ ಸಮತೋಲನದಲ್ಲಿ ಅವಲೋಕಿಸಿದಾಗ, ನನ್ನ ಮನಸ್ಸಿನಲ್ಲಿ ಆನಂದದಕ್ಕಾಗಿ ಆಕಾಶ ಬಯಸಿದ್ದೇನಿರಬಹುದೆಂಬ ಆ ಅವಲೋಕನದ ಚಿತ್ರಣ ಇಲ್ಲಿರಬಹುದು, ನೋಡಿ ತಿಳಿಸಿ; ಆದಿ-ಅಂತ್ಯಗಳ ನಡುವೆ ತುಂಬಿ ಸಂಬಂಧ ಕಲ್ಪಿಸಿದ್ದು ಅಂತರಂಗದ ಗಂಗೆ ಹರಿದು ಮಂದಹಾಸದಲ್ಲಿ ಮನೆಮಾಡಿದಂತಿತ್ತು, ಎನ್ನುವ ಭಾವವನ್ನು ಹಿಡಿಯಲು ಮಾಡಿದ ನನ್ನ ಕಿರು ಪ್ರಯತ್ನ, ನಿಮಗೆ ಹೇಗನ್ನಿಸಿತೋ ಕೇಳುವ ಕುತೂಹಲ! ಸಹನೆಯಿಂದ ಓದಿ ಪ್ರತಿಕ್ರಿಯಿಸುವಿರೆಂದು ನಂಬಿದ್ದೇನೆ – ಗೋಪಾಲಕೃಷ್ಣ ಹೆಗ್ಡೆ)

*****************************

ನೋವಿನಲ್ಲಿ ಕೂಡಿತ್ತೆ ೨೪ರ ಇತಿಹಾಸ?
ಮತ್ತೆ
ನಾಡೆಲ್ಲ ನೋಡಲಿಕ್ಕಿದೆ ೨೫ರ ಪರದೆ-
೨೬ಕ್ಕೆ ಮೊದಲು ಪರದಾಟ,
ನಂಬಲಾರದ ಸತ್ಯ
ಗೊತ್ತಿದ್ದರೂ
ಮೊದಲ ದಿವಸವೇ ಹೊಸವರುಷವನ್ನೆಲ್ಲ
ಬೊಗಸೆಯಲ್ಲಿ ಬಿಗಿದಿಟ್ಟ- ಒಂದನೇ ( ಒಂದೇ)
ದಿನದ ಇದು ಎಂಥಾ ವಿಪರ್ಯಾಸ-ಆಭಾಸ
ಸುಗ್ಗಿ ಕೋಲಾಟ !

ಯಾಕೋ ಈ ಮೌನದಲಿ
ಮೂಡಿದೆ ಮಂದಹಾಸ
- ಹಾರಿರುವೆ ಗರಿಬಿಚ್ಚಿ ಅರಳಿದ
ನೀ,
ನನ್ನ ನೀಲಿ ಆಕಾಶದ ಆಶೆ
ತೋರಿಸಿದೆ ದಿಗಂತ- ಅವಕಾಶ
ಮತ್ತೆ- ಮತ್ತೆ
ಹೀಗೆ
ಆಶಿಸಿಸಿದೆ ನೀಲಿತುಂಬಿರಲಿ - ಶುಭ್ರ
ಅಂತರಂಗ ಅದು
ನಿತ್ಯಾನಂದ, ಕಾವ್ಯಾನಂದದಂತಿರಲಿ
ಸದಾ ಈ ಬ್ರಹ್ಮಾಂಡ ಗುಂಡಿ
ಬಂಡಿ -
ಉಕ್ಕುತ್ತಿರಲಿ
ಸದಾ ಚೆಂದ ತಂದ ಅದು
ಬ್ರಹ್ಮಾನಂದ ಆಗಲಿ,
ಆದಿ - ಅಂತ್ಯಗಳ
ನಡುವೆ
ತುಂಬಿ ಈ,
ಅಂತರಂಗ - ಗಂಗೆ
ಹರಿಯಲಿ ಹರಿದ್ವಾರ
ವರ್ಷತುಂಬ 🙏💐🎊

- ಗೋಪಾಲಕೃಷ್ಣ ಹೆಗ್ಡೆ
*******************************************
ದೇವ - ದಾನವರಿಲ್ಲ, ಸಮುದ್ರಮಥನವೂ ಇಲ್ಲ;
ಹಾಲಾಹಲವಂತೂ ಮೊದಲೇ ಇಲ್ಲ.
ಲಕ್ಷ್ಮೀ ಚಂದ್ರರು ಇಲ್ಲ,
ಧನ್ವಂತರಿಯ ಸುಳಿವಿಲ್ಲ;
ಅಮೃತ ಕಲಶವದೊಂದೇ ಇರುವುದಲ್ಲ!
ಕೇಳು ಜನಮೇಜಯ, ಒಳ್ಳೆಯದ ಹೊರತರಲು ಉಳಿದೆಲ್ಲ ಬೇಕಿಲ್ಲ,
ಮನವದೊಂದಿದ್ದರೆ ಸಾಕಲ್ಲ!

- ಲಕ್ಷ್ಮೀನಾರಾಯಣ ಗುಡೂರ.
*******************************************