ಕತೆಯಾಯಿತು  ಮರ

  • ಯೋಗೀಂದ್ರ ಮರವಂತೆ

ನೂರ್ಕಾಲ ಬದುಕಿದರೆ ಮಾನವರಿಗೊಂದು ವಿಶೇಷ ಸಾಧನೆ. ಕೇವಲ ಆಯಸ್ಸು ವಿಶೇಷತೆಯ ಮಾನದಂಡವಾಗದು. ಸ್ಥಳದ ನಾವಿನ್ಯತೆ, ಜನಪ್ರಿಯತೆ ಅಲ್ಲಿನ ವೈಶಿಷ್ಟ್ಯವನ್ನು ಅವಲಂಬಿಸಿರುತ್ತದೆ. ಇಂಗ್ಲೆಂಡ್, ಸ್ಕಾಟ್ಲೆಂಡಿನ ಗಡಿಯುದ್ದಕ್ಕೂ ರೋಮನ್ನರು ಕಟ್ಟಿದ ಹೆಡ್ರಿಯನ್ ಗೋಡೆ (ಪಾಗಾರ) ಐತಿಹಾಸಿಕ ಕುರುಹು. ಆ ಪಾಗಾರ ಮುರಿದು ಬಿದ್ದ, ಎರಡು ಗುಡ್ಡಗಳ ನಡುವೇ ಬಳುಕುವ ಸೊಂಟದಂದದ ಜಾಗೆಯಲ್ಲಿ ಸುಮಾರು ನೂರೈವತ್ತು ವರ್ಷಗಳಿಂದ ಸ್ವತಂತ್ರವಾಗಿ ಹರಡಿ ಸೊಂಪಾಗಿ ಬೆಳೆದಿದ್ದ ಚೆಲುವೆ ಸಿಕಮೋರ್ ಗ್ಯಾಪ್ ಮರ. ಸಿಕಮೋರ್ ಮರಗಳು ಸರಿ ಸುಮಾರು ೩ ೦ ೦ -೪ ೦ ೦ ವರ್ಷಗಳ ಕಾಲ ಬಾಳ ಬಲ್ಲವು. ಮರಗಳ ಜಗತ್ತಿನಲ್ಲಿ ೩ ಶತಮಾನಗಳ ಬಾಳ್ವೆ ಏನೇನೂ ಅಲ್ಲ. ಸಹಸ್ರಾರು ವರ್ಷಗಳ ಕಾಲ ಬದುಕಿ ಮನುಕುಲದ ಉನ್ನತಿ ಅವನತಿಯ ಹಾದಿಯನ್ನೆಲ್ಲ ಅವಲೋಕಿಸುವ ಮರಗಳು ಜಗತ್ತಿನ ತುಂಬೆಲ್ಲ ಕಾಣ ಸಿಗುತ್ತವೆ. ಇಂದಿನ ಲೇಖನ ನೀವು ಊಹಿಸಿದಂತೆ ನಾರ್ಥಂಬಲ್ಯಾನ್ಡ್ ನ ಪ್ರಸಿದ್ಧ ಸಿಕಮೋರ್ ಗ್ಯಾಪ್ ಮರದ ಕಥೆ. ಯೋಗೀಂದ್ರ ಅವರ ಬರಹದಲ್ಲಿ ಹಿಂದೆ ನಾವು ಕಂಡಂತೆ ಅಮೂರ್ತವನ್ನು ಮೂರ್ತವಾಗಿಸುವ, ನಿರ್ಜಿವವನ್ನು ಸಜೀವಗೊಳಿಸುವ ವೈಶಿಷ್ಟ್ಯತೆ ಇದೆ. ಅದೇ ಹೊಳಹಿನಲ್ಲಿ ಮರವನ್ನು ಅವರು ಮಾನವ ರೂಪದಲ್ಲಿ ನಮ್ಮ ಮುಂದೆ ಪ್ರಸ್ತುತಿಸಿದ್ದಾರೆ. ಈ ಲೇಖನವನ್ನು ಓದುವಾಗ ಕರುಣೆ, ಜಿಗುಪ್ಸೆ, ಕ್ರೌರ್ಯ, ಮತ್ಸರ, ಕುಹಕತೆ, ಇನ್ನಿತರ ಭಾವಗಳು ನಿಮ್ಮಲ್ಲಿ ಹೊಮ್ಮುವುದು ಖಚಿತ. ಕೊನೆಯಲ್ಲಿ ಮಾನವನ ಕ್ರೌರ್ಯಕ್ಕೆ ಸರಿ ಸಮನಾಗಿ ಪ್ರಕೃತಿ ಹಾಗೂ ಮಾನವನ ಧನ್ವಂತರಿ ಸ್ಪರ್ಶದ ಪರಿಣಾಮವನ್ನೂ ಕಾಣಬಹುದು.

-ಸಂಪಾದಕ

ಸಿಕಾಮೋರ್ ಗ್ಯಾಪ್ ಮರ ತನ್ನ ಉಚ್ಛ್ಛ್ರಾವಸ್ಥೆಯಲ್ಲಿ (ಚಿತ್ರ ಕೃಪೆ : ಅಂತರ್ಜಾಲ)

ಈಗಷ್ಟೇ ಕಳೆದ,  ಮೇ ತಿಂಗಳ ಒಂಬತ್ತನೆಯ ತಾರೀಕಿನಂದು  ಜಗತ್ತಿನ ಯಾವ ಯಾವ ನ್ಯಾಯಾಲಯದಲ್ಲಿ ಎಷ್ಟೆಷ್ಟು  ವಾದ ಪ್ರತಿವಾದ ನಡೆಯಿತೋ  ಗೊತ್ತಿಲ್ಲ, ಯಾರು ಕೊಲೆಗಾರ ಅಲ್ಲದಿದ್ದರೆ  ವಂಚಕ ಎಂದು ಸಾಬೀತಾಯಿತೋ ತಿಳಿದಿಲ್ಲ . ಎಷ್ಟು ಆಪಾದಿತರಿಗೆ ಶಿಕ್ಷೆಯ  ಘೋಷಣೆ , ಇನ್ನೆಷ್ಟು ನಿರಪರಾಧಿಗಳ ಖುಲಾಸೆ ಎಂದು ಹೇಳುವುದು ಅಸಾಧ್ಯ.
ಆದರೆ ಇಂಗ್ಲೆಂಡ್ ನ ಉತ್ತರ ಗಡಿಯ ನ್ಯೂ ಕಾಸಲ್ ಕ್ರೌನ್  ಕೋರ್ಟಿನ  ನ್ಯಾಯಾಧೀಶರು ಆ ದಿನದ  ಅತ್ಯಂತ ವಿಶಿಷ್ಟ ತೀರ್ಪೊಂದನ್ನು ನೀಡಿದ್ದರು. ಆ ತೀರ್ಪು , ಆ ದಿನದ ಮಾತ್ರವಲ್ಲ ,  ಇಡೀ ವರ್ಷದ, ದಶಕದ, ಶತಮಾನದ,  ಅಲ್ಲದಿದ್ದರೆ ಯಾವ ನ್ಯಾಯ ವ್ಯವಸ್ಥೆಯೂ ಎಂದೂ ಉಚ್ಛರಿಸಿರಲಾರದ  ಅಪೂರ್ವ ತೀರ್ಪೂ  ಆಗಿದ್ದಿರಬೇಕು. ಅಂದು ಕಟಕಟೆಯಲ್ಲಿ ನಿಂತಿದ್ದ ಇಂಗ್ಲೆಂಡ್ ನ ಉತ್ತರ-ಪಶ್ಚಿಮ (ವಾಯುವ್ಯ) ಪ್ರಾಂತ್ಯದ ಇಬ್ಬರು ಸಾಮಾನ್ಯ ವ್ಯಕ್ತಿಗಳ ಕಿಡಿಗೇಡಿತನ ಸಾಬೀತಾಗಿತ್ತು.  ಅವರೇ  ಅಪರಾಧಿಗಳು ಎಂದು ತೀರ್ಪು ಹೊರಬಿದ್ದಿತ್ತು ,  ಅಪರಾಧಕ್ಕೆ ತಕ್ಕುದಾದ ಶಿಕ್ಷೆ ಮುಂದಿನ ತಿಂಗಳು ಜುಲೈಯಲ್ಲಿ ನಿರ್ಧಾರವಾಗಲಿದೆ  ಎಂದೂ ತಿಳಿಸಲಾಗಿತ್ತು.

ಆರೋಪಿಗಳಿಗೆ ಶಿಕ್ಷೆ ಆಗುವುದೇನೂ ಹೊಸತಲ್ಲ ಬಿಡಿ.  ಅಂದು ಆರೋಪಿಯಿಂದ ಅಪರಾಧಿಗಳಾಗಿ ಬದಲಾದವರು ವಾಯುವ್ಯ ಇಂಗ್ಲೆಂಡ್ ನ ಕಂಬ್ರಿಯ  ಅಥವಾ ಅದೇ ಪ್ರಾಂತ್ಯದ ವಿಶ್ವವಿಖ್ಯಾತ ಹೆಸರಾದ  ಲೇಕ್ ಡಿಸ್ಟ್ರಿಕ್ಟ್ ಪ್ರದೇಶದ  ವಾಸಿಗಳು . ಅವರೊಂದು   ಕುಚೋದ್ಯವನ್ನು ಮಾಡಿದ್ದರು. ಸುಮಾರು ಎರಡು ವರ್ಷಗಳ ಹಿಂದಿನ ನಡುರಾತ್ರಿಗೆ, ತುಸು ದೂರ  ಕಾರು ಓಡಿಸಿಕೊಂಡು ಹೋಗಿ  ಆಮೇಲೆ ಇಪ್ಪತ್ತು ನಿಮಿಷ ನಡೆದು  ಗರಗಸ ಹಿಡಿದು ನಾರ್ಥಂಬರಲ್ಯಾಂಡ್ ಎನ್ನುವ ಪ್ರದೇಶಕ್ಕೆ ಬಂದಿದ್ದರು. ಜೋರು ಗಾಳಿ ಬೀಸುವ ತಣ್ಣಗಿನ ಹವೆಯ ಆ ರಾತ್ರಿ  ಅಲ್ಲಿದ್ದ ಒಂದು ಪುರಾತನ ವೃಕ್ಷವನ್ನು ವಿನಾಕಾರಣ ಕಡಿದಿದ್ದರು. ಸಕಾರಣವಾಗಿಯಾದರೂ ಒಂದು ಮರವನ್ನು ಕಡಿಯಬಹುದೇ ಎನ್ನುವುದೇ ಒಂದು ದೊಡ್ಡ ಜಿಜ್ಞಾಸೆ. ಮರಗಳಿಗೆ ವಿವೇಚನೆ ಇದ್ದರೆ , ಅದಕ್ಕೆ ತಕ್ಕುದಾಗಿ ಮಾತೂ  ಬಂದಿದ್ದರೆ ಅವುಗಳ ಅಭಿಪ್ರಾಯ  ಏನಿರುತ್ತಿತ್ತೋ? ಒಬ್ಬ ವ್ಯಕ್ತಿಯನ್ನು ಕೊಲ್ಲಬಹುದೇ  ಎನ್ನುವ ಪ್ರಶ್ನೆಗೆ ಮನುಷ್ಯರು ನೀಡಬಹುದಾದ  ಉತ್ತರಕ್ಕಿಂತ ಮರಗಳು  ನೀಡುವ ಉತ್ತರ ಬಹಳ ಭಿನ್ನ ಇರಲಿಕ್ಕಿಲ್ಲ. ಹಾಗಂತ  ಭೂಮಿ ಆಕಾಶಗಳ ಪ್ರತಿ ಅಂಗುಲಕ್ಕೂ  ಅನಭಿಷಕ್ತ ದೊರೆಯಂತೆ ವರ್ತಿಸುವ ಮನುಷ್ಯರಿಗೆ ಮರಗಳನ್ನು ಕಡಿಯಬಹುದೇ ಎನ್ನುವ ಪ್ರಶ್ನೆಯೇ  ಅಪ್ರಸ್ತುತ ವಿಲಕ್ಷಣ ವಿನೋದವಾಗಿ ಕಂಡೀತು.

ಇರಲಿ, ಅಂತೂ ಆ ಇಬ್ಬರು ಜೊತೆಯಾಗಿ ಎಲ್ಲ ಅರ್ಥ ಜಿಜ್ಞಾಸೆಗಳನ್ನು ಮೀರಿ ಮರವೊಂದನ್ನು ಕಡಿದಿದ್ದರು. ಹಾಗೆ ತಾವು ಕಡಿದು ಒರಗಿಸಿದ ಮರದ ದಿಮ್ಮಿ ,ತೊಗಟೆ, ಎಲೆ, ಟೊಂಗೆ, ಟಿಸಿಲು, ಬೇರು ನಾರು ಯಾವುದೂ ಆ ಮರಕಟುಕರಿಗೆ ಬೇಕಿರಲಿಲ್ಲ. ಕಟ್ಟಿಗೆಗಾಗಿ ಮಾರಿ ಹಣ ಮಾಡುವ ಉದ್ದೇಶವೂ  ಅವರದಾಗಿರಲಿಲ್ಲ. ಯಾರೋ ನೆಟ್ಟ, ಯಾರದೋ ಇಚ್ಛೆಯಿಂದಾಗಿ ಆ ಸ್ಥಳದಲ್ಲಿ ಬೆಳೆದ, ನಿತ್ಯ ಜೀವನ್ಮುಖಿ  ಪ್ರಕೃತಿಗೆ ಆ ಪ್ರದೇಶದಲ್ಲೊಂದು ಹೊಸ ಆಯಾಮ ನೀಡಿದ, ಭೂಮಿ ಬಾನು ,ನಾಡು ಕಾಡು, ಹುಲ್ಲು ಹಸಿರು, ಕಲ್ಲು ಮಣ್ಣುಗಳು ಒಂದಾಗಿ ನಲಿಯುವ, ಬೆಟ್ಟ ಕಣಿವೆಗಳು ಒಂದಾಗಿ ಕುಣಿಯುವ  ಜಾಗದಲ್ಲಿ  ಬಲಿತ, ಯಾರಿಗೆ ಯಾವ ತೊಂದರೆಯನ್ನೂ ಕೊಡದ, ಸಾಧ್ಯ ಆದರೆ ತಂಪು ನೆರಳು ಶುದ್ಧ ಗಾಳಿ ಮತ್ತೆ ನಯನ ಮನೋಹರ ದೃಶ್ಯವನ್ನು ಸಹಜವಾಗಿ ಬಿಡಿಸುತ್ತ  ಅಸಂಖ್ಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತ ಪ್ರಸಿದ್ಧವಾಗಿದ್ದ ಮರವೊಂದು  ಅಚಾನಕ್ ಇಲ್ಲದಿದ್ದರೆ ಜಗತ್ತು ಹೇಗೆ ಪ್ರತಿಕ್ರಿಯಿಸಬಹುದು  ಎಂದು ಆ ಇಬ್ಬರಿಗೆ ನೋಡಬೇಕಿತ್ತು. ಅಷ್ಟೇ. ಬರೇ ಅಷ್ಟೇ. ಒಂದು ಮರವನ್ನು ಕಡಿಯಲು ಅವರಿಗಿದ್ದದ್ದು ಅದೊಂದೇ  ಕ್ಷುಲ್ಲಕ ಕಾರಣ-ಪ್ರೇರಣೆ. ಕಾಲ, ಭೂಮಿ, ಜೀವಿ, ಜೀವನ  ಸಂದರ್ಭ ಎಲ್ಲವನ್ನು  ಒಂದು ಕ್ಷಣಕ್ಕಾದರೂ ಅಪಹಾಸ್ಯ ಮಾಡಲು ಅವರು ಕಂಡುಕೊಂಡ ದಾರಿ, ಪುರಾತನ ಚಾರಿತ್ರಿಕ ಸಿಕಮೋರ್ ಮರವನ್ನು ಕಡಿಯುವುದು. ಮತ್ತೆ  ಆ ಮರದ ಬಗ್ಗೆ ಕೇಳಿದವರ, ನೋಡಿದವರ, ಫೋಟೋ ತೆಗೆದವರ, ನೆರಳಲ್ಲಿ ಒಂದು ಘಳಿಗೆ ಕುಳಿತವರ, ತಮ್ಮ ಮೃತ ಆಪ್ತರ ಬೂದಿಯನ್ನು ಮರದ ಆಸುಪಾಸಲ್ಲಿ ಚೆಲ್ಲಿ ಆರ್ದ್ರರಾದವರ ಅಸಹಾಯಕತನ ಸಂಕಟವನನ್ನು ನೆನೆದು ಖುಷಿ ಪಡುವುದಿತ್ತು.  ಒಟ್ಟಾರೆ ಆ  ಮರಕಟುಕರಿಂದ ,
ಸುಮಾರು ೧೫೦ ವರ್ಷಗಳ ಹಿಂದೆ ನೆಡಲ್ಪಟ್ಟ ಸಸಿ ಮರ ಹೆಮ್ಮರವಾಗಿ ಬೆಳೆದು ಜಗತ್ತಿನ ಮೂಲೆಮೂಲೆಯ  ಪ್ರವಾಸಿಗಳಿಗೆ ಪರಿಸರ ಪ್ರೇಮಿಗಳಿಗೆ, ಸಿನೆಮಾ ನಿರ್ದೇಶಕರಿಗೆ, ಇವರ್ಯಾರೂ ಅಲ್ಲದ ಜನಸಾಮಾನ್ಯರಿಗೆ,  ಅಷ್ಟೇ ಏಕೆ ಇಡೀ ಈಶಾನ್ಯ ಇಂಗ್ಲೆಂಡಿಗೆ
ಹೆಗ್ಗುರುತೇ  ಆಗಿದ್ದ “ಸಿಕಮೋರ ಗ್ಯಾಪ್ ಮರ ” ಅಂದು ಕಡಿಯಲ್ಪಟ್ಟು ನೆಲದ ಮೇಲೆ ಧೊಫ್ ಎಂದು ಬಿದ್ದಿತ್ತು. ಕಡಿಯಲ್ಪಟ್ಟ ನಡುರಾತ್ರಿಯಿಂದ ಬೆಳಗಿನ ತನಕವೂ ಆ ಮರವನ್ನು ತಿಳಿದವರು ಎಲ್ಲೆಲ್ಲಿ ಹೇಗೇಗೆ ಇದ್ದರೂ ಅವರಿಗೆಲ್ಲ ತಮ್ಮ ಜಗತ್ತು ಏನೂ ಬದಲಾಗದೆ ನಿನ್ನೆಯಂತೆಯೇ ಇದೆ ಎನ್ನುವ ಭ್ರಮೆಯೇ  ಮುಂದುವರಿದಿತ್ತು.  ಹಾಗಂತ ಬೆಳಗಾಗುತ್ತಲೇ, ಒಂದು ಕೆಟ್ಟ ಹಾಸ್ಯಕ್ಕಾಗಿ ಮಾಡಿದ ಕೃತ್ಯ ನೂರೈವತ್ತು  ವರ್ಷಗಳ ಇತಿಹಾಸದ ಹಾದಿ ಬದಲಿಸಿತ್ತು. ೨೦೨೩ರ ಸೆಪ್ಟೆಂಬರ್ ೨೮ ರ ಬೆಳಿಗ್ಗೆ ಆ ಮರವನ್ನು ನೋಡಿ, ಕೇಳಿ, ತಿಳಿದಿದ್ದ ಎಲ್ಲರಿಗೂ ಆಘಾತ, ದುಗುಡ, ಹತಾಶೆ ಕಾದಿತ್ತು.

ನಿತ್ಯವೂ ಜಗತ್ತಿನ ಮೂಲೆಮೂಲೆಗಳಲ್ಲಿ  ಮರಗಳು ಉರುಳುವುದು, ಗಿಡಗಳನ್ನು ಸವರುವುದು, ಕಟ್ಟಡವನ್ನು ಎಬ್ಬಿಸುವುದು, ರಸ್ತೆಯನ್ನು ಹಾಸುವುದು ಅಭಿವೃದ್ಧಿಯ ಸಂಕೇತವಾಗಿರುವಾಗ ಈಶಾನ್ಯ ಇಂಗ್ಲೆಂಡಿನ ಸಣ್ಣ ಊರಿನ ಹಳೆಯ ಮರವನ್ನು ಉರುಳಿಸಿದವರು ಯಾಕೆ
ಬಂಧನಕ್ಕೊಳಗಾದರು?  ಬಂಧಿಸಲ್ಪಟ್ಟವರನ್ನು ನ್ಯಾಯಾಲಯ ಏಕೆ  ಅಪರಾಧಿ ಎಂದು ತೀರ್ಮಾನಿಸಿತು? ಮನುಷ್ಯರಿಗೆ ಹೀಗೊಂದು ಪ್ರಶ್ನೆ ಬರುವ ಸಾಧ್ಯತೆ ಇದೆಯೋ ಇಲ್ಲವೋ ಗೊತ್ತಿಲ್ಲ ನಿತ್ಯವೂ ಕಡಿಯಲ್ಪಡುವ ಅಷ್ಟೇನೂ ಪ್ರಸಿದ್ಧವಲ್ಲದ ಅತಿ ಸಾಮಾನ್ಯ ಮರಗಳ
ಸಂತತಿಗಾದರೂ ಹೀಗೊಂದು ಸಂದೇಹ ಕಾಡೀತು.

ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ , ಇಂತಹದ್ದೆಂದು ದಾಖಲಾಗದ ದಿನದಂದು ವಕೀಲ, ಅನ್ವೇಷಕ ಮತ್ತೆ ಸದ್ರಿ ಸ್ಥಳದ ಅಂದಿನ ಮಾಲೀಕ ಜಾನ್ ಕ್ಲೇಟನ್ ಅಲ್ಲಿನ ಸುಂದರ ಪರಿಸರಕ್ಕೆ ಪೂರಕವಾಗಲಿ ಎಂದು  ಈ ಆ ಸಿಕಮೊರ್ ಸಸಿಯನ್ನು  ನೆಟ್ಟಿದ್ದ, ಇತಿಹಾಸ
ಪ್ರಸಿದ್ಧ ಹ್ಯಾಡ್ರಿಯನ್ ಗೋಡೆಯ ಪಕ್ಕದಲ್ಲಿ.   ರೋಮನ್ನರು ಇಂಗ್ಲೆಂಡಗೆ ಕಾಲಿಟ್ಟ ಆರಂಭಿಕ ಕಾಲವಾದ  ಒಂದನೆಯ ಶತಮಾನದಷ್ಟು ಹಿಂದೆಯೇ ೧೩೫ ಕಿಲೋಮೀಟರು ಉದ್ದದ ಆ ಗೋಡೆ  ಕಟ್ಟಲ್ಪಟ್ಟಿತ್ತು. ಆಧುನಿಕ ಕಾಲದಲ್ಲಿ  ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡಗಳ
ಗಡಿಯಂತೆಯೂ ಕಾಣುವ ಹ್ಯಾಡ್ರಿಯನ್ ಗೋಡೆಯ ಉತ್ಖತನದಲ್ಲಿ  ಜಾನ್ ಕ್ಲೇಟನ್ ಐವತ್ತು ವರ್ಷ ತೊಡಗಿಸಿಕೊಂಡವನು. ಅನಾದಿ ಕಾಲದ ಗೋಡೆಯ ಸುದೀರ್ಘ ಭವಿಷ್ಯದ ಬಗ್ಗೆ ಕಾಳಜಿ ಇದ್ದವನು. ಆ ಗೋಡೆಯ ಕಲ್ಲುಗಳನ್ನು ಅವರಿವರು ಒಂದೊಂದೇ ಜಾರಿಸಿ ಕೊಂಡುಹೋಗಿ
ಮುಂದೊಂದೊಂದು ದಿನ ಗೋಡೆಯೇ ನಶಿಸಿ ಹೋಗುವ ಬಗ್ಗೆ ಅವನಿಗೆ ಆತಂಕ ಇತ್ತು. ಶ್ರೀಮಂತ ಹಿನ್ನೆಲೆಯ ಆತ  ಕೆಲವು ಕೋಟೆಗಳ ಜೊತೆಗೆ ಹ್ಯಾಡ್ರಿಯನ್  ಗೋಡೆಯ ಇಪ್ಪತ್ತು ಮೈಲಿ ಉದ್ದದ ಭಾಗದ ವಾರೀಸುದಾರನೂ ಆಗಿದ್ದ. ಸಹಜವಾಗಿ ಗುಡ್ಡ ಕಣಿವೆಗಳು ಹತ್ತಿಳಿಯುವ ಆ  ಗೋಡೆಯ ಒಂದು ನೈಸರ್ಗಿಕ ತಗ್ಗಿನಲ್ಲಿ ಸಿಕಮೊರ್  ಸಸಿಯನ್ನು ನೆಟ್ಟಿದ್ದ.  ಸಸಿ ಬೆಳೆದದ್ದು, ಬಲವಾದದ್ದು, ಜಗತ್ತಿನ ದಿಕ್ಕುದೆಸೆಯ ಪ್ರವಾಸಿಗಳಿಗೆ ಆಗಂತುಕರಿಗೆ, ಅಭ್ಯಾಗತರಿಗೆ ನಿರ್ಮಲ ಘಳಿಗೆಯನ್ನು ಹಂಚಿದ್ದು,  ಮತ್ತೆ ಎರಡು ವರ್ಷಗಳ ಹಿಂದೆ ಇಬ್ಬರ ಗರಗಸಕ್ಕೆ ಬಲಿಯಾಗಿ ಹ್ಯಾಡ್ರಿಯನ್ ಗೋಡೆಯ ಮೇಲೆಯೇ  ಉರುಳಿ ಬಿದ್ದದ್ದು  ಎಲ್ಲವೂ ಮರವೊಂದರ ದೀರ್ಘ ಇತಿಹಾಸದ ಅನಿರೀಕ್ಷಿತ ಇತ್ತೀಚಿನ ಮುಂದುವರಿಕೆ.

ಉರುಳಿ ಬಿದ್ದ ಮರದ ಭವಿಷ್ಯವನ್ನು ಸಜ್ಜುಗೊಳಿಸುವ ಕಾರ್ಯ

೨೦೨೩ರ ೨೮ ಸೆಪ್ಟೆಂಬರ್ ಬೆಳಿಗ್ಗೆ, ಬಿದ್ದಿದ್ದ ಮರವನ್ನು ನೋಡಿದ ಸ್ಥಳೀಯರು ಆರಕ್ಷಕರಿಗೆ  ದೂರು ಕೊಟ್ಟಿದ್ದರು. ಸಣ್ಣ ಸಣ್ಣ ಇತಿಹಾಸ ಕತೆ ದಂತಕಥೆಗಳನ್ನೂ ಗೌರವಯುತವಾಗಿ ಸ್ಮರಿಸುವ, ಆರೈಕೆ ಮಾಡಿ ಕಾಯ್ದಿಟ್ಟು ಮತ್ತೆ ಪ್ರವಾಸಿಗರಿಗೂ ಆಸ್ಥೆಯಿಂದ ತೋರಿಸಿ ಹೆಮ್ಮೆ ಪಡುವ  ಸಂಸ್ಕೃತಿಯ ಇಂಗ್ಲೆಂಡನಲ್ಲಿ ಜಗತ್ಪ್ರಸಿದ್ಧ ಮರ ಉರುಳಿದ್ದು “ಹೈ ಪ್ರೊಫೈಲ್ ಕೇಸ್” ಆಗಿತ್ತು; ಮತ್ತೆ ಅಪರೂಪದ್ದೂ.  ತನಿಖೆಯಲ್ಲಿ
ಭಾಗವಹಿಸಿದ ವಿಧಿವಿಜ್ಞಾನ ತಂಡದ ಅಧಿಕಾರಿ ಹೇಳುವಂತೆ “ನನ್ನ ಮೂವತ್ತೊಂದು ವರ್ಷದ ಸೇವೆಯಲ್ಲಿ ಅಪರಾಧದ ಕುರುಹಿಗಾಗಿ ಮರವೊಂದರ ಪರೀಕ್ಷೆಯನ್ನು ಹಿಂದೆಂದೂ ಮಾಡಿದ್ದಿಲ್ಲ”. ತನಿಖೆ ಮುಂದುವರಿದು , ಸುಳಿವು ಸಿಕ್ಕಿ ೨೦೨೪ರ ಏಪ್ರಿಲ್ ಅಲ್ಲಿ
ಡೇನಿಯಲ್ ಮತ್ತು ಆಡಮ್ ಎನ್ನುವ ಕಂಬ್ರಿಯದ  ವಾಸಿಗಳನ್ನು   ಐತಿಹಾಸಿಕ ಮರವನ್ನು ಕಡಿದ, ಮರವನ್ನು ಬೀಳಿಸಿ ಚಾರಿತ್ರಿಕ  ಹ್ಯಾಡ್ರಿಯನ್  ಕಲ್ಲುಗೋಡೆಗೆ ಹಾನಿ ಮಾಡಿದ ಕ್ರಿಮಿನಲ್ ಆರೋಪದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಕೋರ್ಟಿನಲ್ಲಿ  ವಾದ-ಪ್ರತಿವಾದಗಳು ಜರುಗಿ ಅವರ ಅಪರಾಧ ಸಾಬೀತಾದದ್ದು ಮೊನ್ನೆಮೊನ್ನೆಯ ಅಂದರೆ ಇದೇ ವರ್ಷದ ಮೇ ತಿಂಗಳಿನಲ್ಲಿ. ವಿಚಾರಣೆಯ ಉದ್ದಕ್ಕೂ ಅಪರಾಧವನ್ನು ಅಲ್ಲಗಳೆಯುತ್ತಿದ್ದ, ಒಬ್ಬರು ಇನ್ನೊಬ್ಬರನ್ನು ದೂಷಿಸುತ್ತಿದ್ದ , ೩೯ ಹಾಗು ೩೨ ವರ್ಷದ ಅಪರಾಧಿ ಜೋಡಿ, ಮರ ಬೀಳುವ  ಸಂದರ್ಭವನ್ನು ತಮ್ಮ ಮೊಬೈಲ್ ಫೋನಿನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಬಿದ್ದ
ಮರದ ಗೆಲ್ಲೊಂದನ್ನು ಪದಕದಂತೆ ತಮ್ಮೊಡನೆ ಒಯ್ದಿದ್ದರು. ೧೯೯೧ರಲ್ಲಿ ನಿರ್ಮಾಣಗೊಂಡ ರಾಬಿನ್ ಹುಡ್ ಸಿನೆಮಾದ ಒಂದು ಮುಖ್ಯ ಸನ್ನಿವೇಶದಲ್ಲಿ ಹಿನ್ನೆಲೆಯಲ್ಲಿದ್ದ ಮರ, ೨೦೨೩ರ ಸೆಪ್ಟೆಂಬರ್ ೨೭ರ ಜೋರು ಗಾಳಿಯ ನಡುಇರುಳಿನಲ್ಲಿ ಕಿಡಿಗೇಡಿಗಳ ಬ್ಯಾಟರಿ ಚಾಲಿತ ಗರಗಸಕ್ಕೆ ತುತ್ತಾಗಿ ಮುನ್ನಲೆಯಲ್ಲಿ ಅಂತಿಮ ಉಸಿರಳೆದದ್ದು ಎಂತಹ ವಿಪರ್ಯಾಸ! ನಿಮಿಷಗಳಲ್ಲಿ ಆರಂಭವಾಗಿ ಮುಗಿಯುವ ಮರ ಕಡಿಯುವ ಸಂದರ್ಭವನ್ನು ನೋಡಿದವರಲ್ಲಿ ವಿಭಿನ್ನ  ಭಾವನೆಗಳು ಹುಟ್ಟಬಹುದಾದರೂ, ಇನ್ನೇನು ಬೀಳಲಿರುವ ಮರಕ್ಕೆ, ಒಂದು ಕ್ಷಣಕ್ಕೆ ತನ್ನನು ಬದುಕಿಸಲು ಆ ರಾಬಿನ್ ಹುಡ್ ಆದರೂ ಬರಬಾರದಿತ್ತೇ ಎಂದೂ ಅನಿಸಿರಬಹುದು, ತನ್ನನ್ನು ನೆಟ್ಟು ಬೆಳೆಸಿದ  ಜಾನ್ ಕ್ಲೇಟನ್ ಕಣ್ಣೆದುರು ಬಂದಿರಬಹುದು. ತನ್ನ ನೆರಳಲ್ಲಿ ತಂಗಿ ಮುಂದುವರಿದ ಕಾಲ್ನಡಿಗೆಯವರು, ತನ್ನ ಆಸುಪಾಸಿನ ಕ್ಷಣಭಂಗುರದಲ್ಲಿ ಲೀನರಾಗಿ ಮೈಮರೆತ ಲಕ್ಷ ಲಕ್ಷ ಅನಾಮಿಕ ಅಜ್ಞಾತ ಪ್ರವಾಸಿಗರು ಸ್ಮರಣೆಗೆ ಬಂದಿರಬಹುದು. ಬಿಡಿ,  ಫೋನು ತಪಾಸಣೆಯಲ್ಲಿ  ದೊರೆತ ಆ ವಿಡಿಯೋ ತುಣುಕು, ಜನರಲ್ಲಿ
ಎಬ್ಬಿಸುವ ಭಾವಲಹರಿ ಏನೇ ಇದ್ದರೂ ಕಾನೂನು ತನಿಖೆಯ ಮಟ್ಟಿಗೆ ಅತಿ ಅಗತ್ಯವಾದ ಪುರಾವೆಯನ್ನು  ಒದಗಿಸಿತ್ತು. ಮತ್ತೆ ನ್ಯೂ ಕಾಸಲ್ ಕ್ರೌನ್  ಕೋರ್ಟ್ ಆ ಇಬ್ಬರನ್ನು ಅಪರಾಧಿ ಎಂದು ಘೋಷಿಸಲು ಪ್ರಮುಖ ಆಧಾರವಾಗಿ ಒದಗಿತ್ತು.

ಪ್ರಸಿದ್ಧ ಮರದ ಅಕಾಲಿಕ ಸಾವಿನ  ಸುದ್ದಿ ಇಂಗ್ಲೆಂಡಿನ ಒಳಗಿನಿಂದ, ಹೊರಗಿನಿಂದ ತೀವ್ರ ಪ್ರತಿಕ್ರಿಯೆ ಪಡೆದಿತ್ತು. ಸಿಟ್ಟು, ಆಘಾತ, ಆಶ್ಚರ್ಯಗಳು ಸಾಮಾಜಿಕ ಜಾಲತಾಣವನ್ನು ತುಂಬಿದವು. ಸುದ್ದಿ ಪತ್ರಿಕೆಯ ಮುಖಪುಟದಲ್ಲಿ, ವೆಬ್ ಪೇಜ್ ಗಳಲ್ಲಿ ವಸಂತ ವೈಶಾಖದ ಹಸಿರಿನಲ್ಲಿ,  ಶರತ್ ಶಿಶಿರಗಳ  ಹಿಮಹೊದಿಕೆಯಲ್ಲಿ ವಿಭಿನ್ನ ರೂಪದ ಮರದ  ಚಿತ್ರಗಳು ಕಾಣಿಸಿಕೊಂಡವು. ಕೆಲವರು ಭಾವುಕರಾಗಿ ಕವಿತೆಗಳನ್ನು ಕಟ್ಟಿ ಹಾಡಿದ್ದರು. ಕವಿತೆಯ ಸಾಲುಗಳನ್ನು  ಕೇಳಿದ ಕೆಲವರು ಕಣ್ಣೀರು ಹಾಕಿದರು. ಪ್ರಕೃತಿ ಸೃಜಿತ ಗಾಳಿಯ ನಿನಾದ, ಮನುಷ್ಯ ನಿರ್ಮಿತ  ಗರಗಸದ ಕರ್ಕಶ ಸದ್ದುಗಳು ಜೊತೆಯಾದ ಹಿನ್ನೆಲೆ ಸಂಗೀತದಲ್ಲಿ ಶವವಾಗುವ ಮರದ ಚಿತ್ರತುಣುಕು , ಸಾಮಾಜಿಕ ಮಾಧ್ಯಮದಲ್ಲಿ ಅನಾಥ ಅಸಹಾಯಕ ಸಾಕ್ಷಿಗಳಂತೆ ಓಡಾಡಿದವು.

೨೦೨೩ರ ಅಕ್ಟೋಬರನಲ್ಲಿ , ಕಡಿದುಬಿದ್ದ ಮರವನ್ನು ಖಂಡ ತುಂಡು ಮಾಡಿ ಕ್ರೇನ್ ಮೂಲಕ ಸಾಗಿಸಲಾಯಿತು. ಅಕಾಲಿಕ ಸಾವಿನ ಪುರಾತನ ಮರದ ಕತೆಯ ಮುಂದುವರಿದ ಪುಟವಾಗಿ, ಇಲ್ಲಿನ ಹಲವು ನೈಸರ್ಗಿಕ ತಾಣಗಳ ಉಸ್ತುವಾರಿ ವಹಿಸಿಕೊಂಡಿರುವ ನ್ಯಾಷನಲ್ ಟ್ರಸ್ಟ್ ಸಂಸ್ಥೆ ಆ
ಮರದಿಂದ ನಲವತ್ತೊಂಬತ್ತು ಸಸಿಗಳನ್ನು ಬೆಳೆಸಿ ದೇಶದ ಬೇರೆ ಬೇರೆ ಚ್ಯಾರಿಟಿ ಮತ್ತಿತರ ಸಂಸ್ಥೆಗಳಿಗೆ ನೀಡಿತು. ತನ್ನ ಕೊನೆಯ ಕಾಲದಲ್ಲಿ ನಲವತ್ತೊಂಬತ್ತು ಅಡಿ ಉದ್ದ ಇದ್ದ ಮರದ ನೆನಪಿಗಾಗಿ ಬೆಳೆಸಿದ  ೪೯ ಸಸಿಗಳನ್ನು ಚ್ಯಾರಿಟಿ   ಸಂಸ್ಥೆಗಳಿಂದ ಪಡೆಯಲು ಜನರಿಂದ  ಅರ್ಜಿಗಳನ್ನು ಆಹ್ವಾನಿಸಲಾಯಿತು. ೪೯ ಗಿಡಗಳನ್ನು ಪಡೆಯಲು ಯುನೈಟೆಡ್ ಕಿಂಗ್ಡಮ್ ನ ಬೇರೆಬೇರೆ ಭಾಗಗಳಿಂದ  ೫೦೦ ಅರ್ಜಿಗಳು ಬಂದಿದ್ದವು. ಪ್ರತಿಯೋರ್ವ ಅರ್ಜಿದಾರರೂ ತಮಗ್ಯಾಕೆ ಒಂದು ಸಸಿ ಬೇಕು ಎಂದು ಬರೆದಿದ್ದರು. ಸಸಿ ಹಂಚುವ ಅಭಿಯಾನವನ್ನು “ನಾಳಿನ ಭರವಸೆಗಾಗಿ ಮರಗಳು” ಎಂದೂ ಕರೆಯಲಾಗಿತ್ತು. ನಲವತ್ತೊಂಬತ್ತರಲ್ಲಿ ಒಂದು ಸಸಿ, ಹ್ಯಾಡ್ರಿಯನ್ ಗೋಡೆಯಿಂದ ಬಹಳವೇನೂ ದೂರದಲ್ಲಿರದ ಹೆಕ್ಸ್ಹಮ್ ಪ್ರಾಂತ್ಯದಲ್ಲಿ ಮುಂದಿನ ಚಳಿಗಾಲಕ್ಕೆ ನೆಲ ನೆಲೆ ಕಾಣಲಿದೆ.  ಹೋಲಿ ನ್ಯೂಟನ್ ಎನ್ನುವಾಕೆಯ ಸಮಾಧಿಯ ಬಳಿ. ಹದಿನೈದು ವರ್ಷದವಳಿದ್ದಾಗ ಸಂಬಂಧ ಕೊನೆಗೊಂಡದ್ದನ್ನು ಒಪ್ಪಲಾಗದ ಮಾಜಿ ಪ್ರಿಯಕರ ಆಕೆಯನ್ನು ಕೊಲೆ ಮಾಡಿದ್ದ. ಕೊಲೆಯಾದ
ಮಗಳ ನೆನಪಿನಲ್ಲಿ ಬದುಕುತ್ತಿರುವ ಆಕೆಯ ಹೆತ್ತವರು ತಾವು ಪಡೆಯಲಿರುವ ಸಿಕಮೋರ್ ಸಸಿ ಅಳಿದ  ಮಗಳನ್ನು ಸ್ಮರಿಸುವ ಹೊಸ ದಾರಿಯಾಗಿದೆ ಎಂದು ಖುಷಿ ಪಡುತ್ತಿದ್ದಾರೆ. ಇನ್ನುಳಿದ ನಲವತ್ತೆಂಟು ಸಸಿಗಳೂ ಯು.ಕೆಯ ಬೇರೆ ಬೇರೆ ಭಾಗಗಳನ್ನು ಸೇರಿ ಅಲ್ಲೆಲ್ಲ,
ನಾಶವಾದ ಮರದ ಕತೆಯನ್ನು ಹೇಳಲಿವೆ  ನೆನಪನ್ನು ಹಸಿರಾಗಿಡಲಿವೆ .

ಒಂದು ಸಣ್ಣ ಸಹಜ ಸುಂದರ ಖುಷಿಯನ್ನು  ನಿರಂತರವಾಗಿ  ನೂರೈವತ್ತು ವರ್ಷಗಳ ಕಾಲ ಹಂಚಿದ,  ಪ್ರಾಕೃತಿಕ ದ್ರಶ್ಯಕಾವ್ಯದಲ್ಲಿ ಭೂಮಿ ಆಕಾಶದಷ್ಟೇ ಚಿರಂತನ ಎನಿಸಿದ ಮರ, ಕ್ಷುಲ್ಲಕ ಕಿಡಿಗೇಡಿತನದ ಪರಿಣಾಮವಾಗಿ  ಇಲ್ಲದಾದಾಗ, ನಿತ್ಯವೂ ನಮ್ಮನ್ನು ಕಾಯುವ
ಬದುಕಿನ ಭರವಸೆಯೇ ಕರಗಿ ಹೋಗುವ ಸಾಧ್ಯತೆ ಇದೆ. ಆದರೆ ಅಂತಹ ವಿಷಣ್ಣ ಸಾಧ್ಯತೆಯನ್ನು ಎದುರಿಸುವ ,ಮತ್ತೆ ಚೇತೋಹಾರಿ ಉತ್ಸಾಹವನ್ನು ನಮ್ಮ ಒಳಹೊರಗೆ ತುಂಬಿಸುವ  ಹೋರಾಟವನ್ನು ನಲವತ್ತೊಂಬತ್ತು ಸಸಿಗಳು ಆಗಲೇ ಆರಂಭಿಸಿವೆ. ಇನ್ನು ಈಶಾನ್ಯ ಇಂಗ್ಲೆಂಡಿನ ಹ್ಯಾಡ್ರಿಯನ್ ಗೋಡೆಯ ಪಕ್ಕದ  ಕಡಿದ ಬುಡದಲ್ಲೂ  ಚಿಗುರೆಲೆಗಳು  ಮೊಳೆತು “ಹೊಸತು ಜನ್ಮ”ದ  ಸೂಚನೆ ಕಾಣುತ್ತಿದೆ. ಒಂದು ವೇಳೆ ಆ ಮೊಳಕೆಗಳು ಚಿಗುರೆಲೆಗಳು ಬೆಳೆಯುತ್ತಲೇ ಹೋದರೆ ಮುಂದಿನ ಇನ್ನೂರು ವರ್ಷಗಳಲ್ಲಿ, ಎರಡು ವರ್ಷದ ಹಿಂದೆ ಬೀಳುವ ಮೊದಲಿನ  ಮರದಷ್ಟೇ ದೊಡ್ಡ ಮರವೊಂದು ಆಕಾರ ತಳೆಯಬಹುದು ಎಂದು ವೃಕ್ಷ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಬರಡು ಬುಡವನ್ನೋ ಎಳೆಯ ಚಿಗುರನ್ನೋ ಅಥವಾ ಮುಂದೆಂದೋ ಅಲ್ಲೊಂದು ಮರ ಎದ್ದು ನಿಲ್ಲುವುದನ್ನೋ ಕನವರಿಸುತ್ತ  ಬರುತ್ತಿರುವವರಿಗೆ  “ಗೌರವದಿಂದ ನಡೆದುಕೊಳ್ಳಿ”ಎನ್ನುವ ಎಚ್ಚರಿಕೆಯ ಫಲಕ ಅಲ್ಲೇ  ತೂಗುಹಾಕಲ್ಪಟ್ಟಿದೆ. ಬಂದು ಮರಳುವವರಿಗೂ ,ಮರಳಿ ಬರುವವರಿಗೂ ,  ನಾಳಿನ  ಭರವಸೆ ಜೀವಂತವಾಗಿದೆ.

—————————

ಯೋಗೀಂದ್ರ ಮರವಂತೆ

ಬುಲಂದ್ ಭಾರತ್ ಕಿ ಬುಲಂದ್ ತಸ್ವೀರ್

ಇತ್ತೀಚಿಗೆ ದೂರದರ್ಶನ ನೋಡುತ್ತಿರುವಾಗ, ನಡು ನಡುವೆ ಬರುವ ಜಾಹಿರಾತುಗಳನ್ನು ನೋಡುತ್ತಿದ್ದೆ. ಡೋಮಿನೋಸ್ ಜಾಹಿರಾತಿನಲ್ಲಿ ಸ್ನಾನ ಮಾಡುತ್ತಿರುವ ಟಬ್ನಲ್ಲಿ ಡೆಲಿವೆರಿಯವನು ಪ್ರತ್ಯಕ್ಷನಾಗಿ ಡೆಲಿವರಿ ಕೊಡುತ್ತಾನೆ, ಇನ್ನೊಂದು ಜಾಹಿರಾತಿನಲ್ಲಿ ನಮ್ಮ ಬಾಲಿವುಡ್ ನಟ ಬಚ್ಚಲು ತಿಕ್ಕಲು ಹಾರ್ಪಿಕ್ ಎಷ್ಟು ಉತ್ತಮ ಎಂದು ತೋರಿಸುತ್ತಾನೆ… ಹೀಗೇ ನೋಡುತ್ತಿದ್ದರೆ ನೀವು ಇನ್ನೂ ವಿಚಿತ್ರವಾದ ಇಂತಹ ಜಾಹಿರಾತು ನೋಡಬಹುದು.ಜಾಹೀರಾತು ಕೆಲವು ವಿಚಿತ್ರವಾದರೆ, ಇನ್ನೂ ಕೆಲವು ಮರೆಯದ ಸುಂದರ ಕಥೆ ತರಹ ಇರುತ್ತವೆ.

ಅಲಿಕ್ ಪದಂಸೀ, ಆರ್ ಬಾಲ್ಕಿ. ಪ್ರಹ್ಲಾದ್ ಕಕ್ಕರ್, ಗೌರಿ ಶಿಂಧೆ, ರಾಮ್ ಮಾಧ್ವಾನಿ ಇವರು ಜಾಹಿರಾತು ಜಗತ್ತಿನ ಕೆಲವು ಪ್ರಮುಖರು. ಸೃಜನಾತ್ಮಕ ಜಾಹಿರಾತು ಸೃಷ್ಟಿಸಿ ಮುಂದೆ ಒಳ್ಳೆಯ ಚಲನಚಿತ್ರಗಳನ್ನೂ ಕೂಡ ಮಾಡಿದ್ದಾರೆ. “ಜಾಹಿರಾತು” ಮತ್ತು “ಸಾಹಿತ್ಯ” ಇದರ ಒಂದು ಸಂಬಂಧ ಹೇಗೆ ಇರಬಹುದು.. ಇಂದಿನ ಲೇಖನ ಇದೆ ವಿಷಯದ ಬಗ್ಗೆ ಬರೆಯೋಣ ಅಂತ ವಿಚಾರ ಬಂತು…ಬರೆದಿದ್ದೇನೆ.

ಎಲ್ಲೆಲ್ಲೂ ಸಂಗೀತವೇ, ಎಲ್ಲೆಲ್ಲೂ ಸೌಂದರ್ಯವೇ
ಕೇಳುವ ಕಿವಿಯಿರಲು, ನೋಡುವ ಕಣ್ಣಿರಲು
ಎಲ್ಲೆಲ್ಲೂ ಸಂಗೀತವೇ…

ಮಲಯ ಮಾರುತದ ಚಿತ್ರದ ಹಾಡು, ಇದೆ ಹಾಡಿನ ಸಾಲುಗಳನ್ನು ಸ್ವಲ್ಪ ಬದಲಿಸಿದರೆ

ಎಲ್ಲೆಲ್ಲೂ ಸಾಹಿತ್ಯವೇ, ಎಲ್ಲೆಲ್ಲೂ ಮಾಹಿತಿಯೇ,
ಓದುವ ಕಣ್ಣಿರಲು, ಅರಿಯುವ ಮನವಿರಲು,
ಎಲ್ಲೆಲ್ಲೂ ಸಾಹಿತ್ಯವೇ…

ಜೀವನದಲ್ಲಿ ಪ್ರತಿ ಶಬ್ದ ಸಂಗೀತವಾದರೆ, ಪ್ರತಿ ಸಾಲು ಸಾಹಿತ್ಯ ಆಗಬಹುದು… ಅದು ಕೇಳುಗನ, ಓದುಗನ ಆಸಕ್ತಿ, ಅಭಿರುಚಿಯ ಅನುಗುಣವಾಗಿ ಅವಲಂಬಿತವಾಗಿದೆ.
ನಾವು ಚಿಕ್ಕವರಿದ್ದಾಗ ಚಲನಚಿತ್ರದ ನೋಡಲು ಚಿತ್ರಮಂದಿರಕ್ಕೆ ಹೋದಾಗ, ನಾವು ನೋಡಿದ
ಜಾಹಿರಾತಿನ ಸಾಲುಗಳಿಂದ ಈ ವಿಚಾರ ಆರಂಭಿಸೋಣ.

“ವಜ್ರದಂತಿ, ವಜ್ರದಂತಿ, ವಿಕೋ ವಜ್ರದಂತಿ,
ವಿಕೋ ಪೌಡರ್, ವಿಕೋ ಪೇಸ್ಟ್,
ಆಯುರ್ವೇದಿಕ್ ಜಡಿಬೂಟಿಯೊಂ ಸೆ ಬನಾ ಸಂಪೂರ್ಣ್ ಸ್ವದೇಶೀ,
ವಿಕೋ ಪೌಡರ್, ವಿಕೋ ಪೇಸ್ಟ್, ವಿಕೋ ವಜ್ರದಂತಿ!!!”

“ವಾಷಿಂಗ್ ಪೌಡರ್ ನಿರ್ಮಾ, ದೂಧ್ ಸಿ ಸಫೆದಿ
ನಿರ್ಮಾ ಸೆ ಆಯಿ, ರಂಗೀನ್ ಕಪಡಾ ಭೀ ಖಿಳ್ ಖಿಳ್ ಜಾಯೆ,
ಹೇಮಾ, ರೇಖಾ, ಜಯಾ ಔರ್ ಸುಷ್ಮಾ
ಸಬ್ಕಿ ಪಸಂದ್ ನಿರ್ಮಾ, ವಾಷಿಂಗ್ ಪೌಡರ್ ನಿರ್ಮಾ”

ಈ ಸಾಲುಗಳಲ್ಲಿ ಸಾಹಿತ್ಯ ಕಾಣಬಹುದೇ?
ಈ ಪ್ರಶ್ನೆಗೆ ಉತ್ತರಿಸಲು ಸಾಹಿತ್ಯ ಅಂದರೆ ಸರಳವಾದ ಉತ್ತರ ಏನು ಎಂದು ನೋಡೋಣ.

“Literature is a body of work that transmits culture “
ಅಥವಾ “Literature is the collective term for written works valued for their artistic or intellectual merit.”

ವಿಕೋ ವಜ್ರದಂತಿ ಸಾಲುಗಳನ್ನು ನೋಡಿದಾಗ “ಸಂಸ್ಕೃತಿ” ಪದದ ಬದಲಾಗಿ “ನಡೆದು ಕೊಂಡ ಬಂದ ಪದ್ಧತಿ” ಎಂದು ಓದಿದಾಗ ನಮಗೆ ಕಾಣಿಸುವುದು ಆ ಸಮಯದ ಆಯುರ್ವೇದ, ಗಿಡ ಮೂಲಿಕೆ ಉಪಯೋಗ. ನನಗೆ ಇನ್ನೂ ನೆನಪಿರುವುದು ಬೇವಿನ ಕಡ್ಡಿ ಉಪಯೋಗಿಸಿ ಹಲ್ಲುಜ್ಜುತ್ತಿದಿದ್ದು, ಅದರ ಖುಷಿಯೇ ಬೇರೆ. ಇನ್ನು “ಸ್ವದೇಶೀ” ಪದ ನೋಡಿದಾಗ ಅಂದಿನ ಸ್ಥಳೀಯ ಉತ್ಪನ್ನ ಉಳಿಸುವ, ಬೆಳೆಸುವ ಉದ್ದೇಶ. ನಮ್ಮ ದೇಶದ ಪರಂಪರೆಯಾದ ಆಯುರ್ವೇದ ವಿಜ್ಞಾನವನ್ನು ಶ್ರೀ ಜಿ ಕೆ ಪೆಂಡಾರ್ಕರ್ (ವಿಕೋ ಸಂಸ್ಥೆಯ ಸಂಸ್ಥಾಪಕ) ಅವರು ಉತ್ಸಾಹದಿಂದ ಸ್ವದೇಶೀ ಪ್ರಚಾರ ಇದರಲ್ಲಿ ಮಾಡಿದ್ದಾರೆ. ೧೯೬೦ ರ ಸುಮಾರು, ಭಾರತೀಯ ಕಂಪನಿಗಳು ವಿದೇಶಿ ತಂತ್ರಜ್ಞಾನಕ್ಕೆ ಮಾರುಹೋಗುತ್ತಿದ್ದಾಗ, ಶ್ರೀ ಪೆಂಡಾರ್ಕರ್ ಅವರು ಆಯುರ್ವೇದವನ್ನು ನಿರಂತರವಾಗಿ ಪ್ರಚಾರ ಮಾಡಿದರು.

ಇನ್ನು ನಿರ್ಮಾ, ಸಂಸ್ಥೆಯ ಸಂಸ್ಥಾಪಕನ ಮಗಳ ಕಥೆ ಎಂದು ಕೆಲವರಿಗೆ ಗೊತ್ತಿರಬಹುದು. ಕರ್ಸನ್ ಭಾಯ್ ಮಗಳು ನಿರುಪಮಾ, ಅವಳ ನೆನಪು ವರುಷ ವರುಷಗಳ ತನಕ ಇರಲೆಂದು ತಂದೆ ಮಗಳ ಪ್ರೀತಿಯ ಹೆಸರಾದ ನಿರ್ಮಾ ಸಂಸ್ಥೆ ಆರಂಭಿಸಿ, ಅದನ್ನು ಮನೆ ಮನೆಗೆ ತಲುಪಿಸಿದರು. ಇಲ್ಲಿ “ಹೇಮಾ, ರೇಖಾ, ಜಯಾ ಔರ್ ಸುಷ್ಮಾ” ಅಂದರೆ ಪ್ರತಿ ಹೆಣ್ಣು ಮೆಚ್ಚುವ, ಅವರ ಮನೆಯಲ್ಲಿ ಲಭ್ಯವಿರುವದು ನಿರ್ಮಾ ಎಂದು. ಇಲ್ಲಿಯೂ ಕೂಡ ಸುಂದರ ಮತ್ತು ಸರಳ ಪದಗಳ ಪದ್ಯ, “ನಿರ್ಮಾ” ಎಲ್ಲರ ಚಿರಪರಿಚಿತ ಹೆಸರಾಯಿತು.

ಇನ್ನು ಸರಳವಾಗಿ ಜಾಹೀರಾತು ವಿವರಿಸಿದರೆ “ಇದೊಂದು ಸಾಮಾನ್ಯವಾಗಿ ವಿಷಯ ತಿಳಿಯಪಡಿಸುವ ಒಂದು ಕ್ರಿಯೆ. ಇದು ಸಾರ್ವಜನಿಕರ ಗಮನಕ್ಕೆ ಮಾಡುವ ಒಂದು ಕರೆ, ಸಾಮೂಹಿಕ ಮನವಿ”. ಹಾಗಾದರೆ ಜಾಹಿರಾತು ಒಂದು ವಸ್ತು ಅಥವಾ ಉತ್ಪನ್ನ ಮಾರುವ ಒಂದು ಪ್ರಕ್ರಿಯೆ ಅಲ್ಲವೇ?
ಜಾಹೀರಾತುಗಳು, ಉತ್ಪನ್ನವನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಸೀಮಿತ ಅಲ್ಲ. ಅದರ ಮುಖ್ಯ ಉದ್ದೇಶ ಭಾವನೆಗಳನ್ನು ಹುಟ್ಟು ಹಾಕುವದು, ಮನವನ್ನು ಸಂತೋಷದಿಂದ ತುಂಬಿ,ನೆನಪುಗಳ ಆಗರದೆಡೆಗೆ ನಮ್ಮನ್ನು ಕರೆದುಕೊಂಡು ಹೋಗುವುದು…ಭಾವನಾತ್ಮಕ (emmotional) ಸೆಳೆತದಿಂದ ಉತ್ಪನ್ನ ಮತ್ತು ಅಪೇಕ್ಷಿತ (desire) ಭಾವನೆಯ ನಡುವೆ ಉಪಪ್ರಜ್ಞೆಯ (Subconscious) ಸಂಪರ್ಕವನ್ನು ಸೃಷ್ಟಿಸುವದು, ಅದನ್ನು ಹೆಚ್ಚು ಸ್ಮರಣೀಯ ಮತ್ತು ಅಪೇಕ್ಷಣೀಯವಾಗಿಸುವದು. ಅದು ಭಾವನೆಗಳು, ಸಾಮಾಜಿಕ ಸೂಚನೆಗಳು ಮತ್ತು ಅರಿವಿನ ಪೂರ್ವಾಗ್ರಹಗಳ ಮೇಲೆ ಕೇಂದ್ರೀಕರಿಸುತ್ತದೆ.

ಏ ಝಮೀನ್ ಏ ಆಸ್ಮಾನ್
ಹಮಾರಾ ಕಲ್ ಹಮಾರಾ ಆಜ್
ಬುಲಂದ್ ಭಾರತ್ ಕಿ ಬುಲಂದ್ ತಸ್ವೀರ್
ಹಮಾರಾ ಬಜಾಜ್

ಅಲಿಕ್ ಪದಂಸೀ ಅವರ ಬಜಾಜ್ ಜಾಹಿರಾತು ಮನೆ ಮನೆಯ ಹಾಡಾಯಿತು. ದ್ವಿಚಕ್ರ ವಾಹನ ಮಾರುಕಟ್ಟೆ ಅಂತರರಾಷ್ಟ್ರೀಯ ಮಾರಾಟಗಾರರಿಗೆ ತೆರೆದುಕೊಳ್ಳುತ್ತಿದ್ದಾಗ ಈ ಒಂದು ಜಾಹಿರಾತು ಬಜಾಜ್ ಸ್ಕೂಟರ್ ಹೊರತಂದಿತು. ಭಾರತದ ಈ ವಾಹನ ಸಾಮಾನ್ಯ ಜನರನ್ನು ಸಶಕ್ತರಾಗಿ ಮಾಡುತ್ತದೆ ಎಂದು ತೋರಿಸಲು ಅವರು ಇಲ್ಲಿ ಸಾಮಾನ್ಯ ಜನರನ್ನೇ ತೋರಿಸಿದರು…

ಫೆವಿಕಾಲ್, ಲಿಮ್ಕಾ, ಹ್ಯಾಪಿಡೆಂಟ್, ಕ್ಯಾಡ್ಬರಿ ಮುಂತಾದ ಇಂತಹ ಸುಂದರ ಜಾಹಿರಾತು ನೀವು ನೋಡಿರಬಹುದು. ಎಲ್ಲವನ್ನು ಒಂದೇ ಲೇಖನದಲ್ಲಿ ಬರೆಯಲಾಗುವುದಿಲ್ಲ… ಆದರೂ ನೋಡಿದ ಸುಂದರ, ಸಣ್ಣ ಕಥೆಯಂಥ ಒಂದೆರಡು ಹಂಚಿಕೊಳ್ಳುತ್ತಿದ್ದೇನೆ.

ನೀರು – ಅದರ ಮೂಲ ಅವಶ್ಯಕತೆ, ವಿವಿಧ ಜನರು ಅದನ್ನು ಉಪಯೋಗಿಸುವ ಪರಿ ತೋರಿಸಿದ ಒಂದು ಸುಂದರ ಚಿತ್ರ ಈ ಕೆಳಗಿನ ಜಾಹಿರಾತು

ಶಿಕ್ಷಕಿ ಮತ್ತು ವಿದ್ಯಾರ್ಥಿಗಳ ಸುಂದರ ಸಂಬಂಧ ಬಗ್ಗೆ ಪಾರ್ಲೆ ಜಿ ಅವರು ಸುಂದರ ಕಥೆ ಹೆಣೆದಿದ್ದಾರೆ.

ಎಲ್ಲರೂ ಒಂದೇ ಎಂದು ತೋರಿಸುವ ಈ ಕಿರುಚಿತ್ರ ಕಣ್ಣಂಚಲಿ ನೀರು ತಂದರೆ ಆಶ್ಚರ್ಯವಿಲ್ಲ

ಕೊನೆಯದಾಗಿ ನಾನು ಇಷ್ಟ ಪಟ್ಟ ಇನ್ನೊಂದು ಜಾಹಿರಾತು