ಬ್ರೆಕ್ಸಿಟ್ಟಿನ ಬಿಸಿಯ ಇಂಗ್ಲೆಂಡಿನ ಶೆಫಿಲ್ಡ್ ವಾಸಿ ಹಿರಿಯ ವೈದ್ಯ ಶಿವಪ್ರಸಾದರು, ವಾಟ್ಸಾಪಿನ ಸಂದೇಶವೊಂದರ ಕೊನೆಯಲ್ಲಿ ಕಂಡ ‘ಜೈ ಹಿಂದ್’ ಅವರ ಮನಸ್ಸಿನಲ್ಲಿ ಮೂಡಿಸಿದ ವಿಷಾದದ ಅಲೆಗಳಲ್ಲಿ ಮಂಥಿಸಿದ ರಾಷ್ಟ್ರವಾದ ಮತ್ತು ಧರ್ಮವಾದಗಳ ಪ್ರಸ್ತುತತೆ, ಲಾಭ ಮತ್ತು ಅಪಾಯಗಳನ್ನು ಅರ್ಥೈಸುವ ಪ್ರಯತ್ನ ಮಾಡಿದ್ದಾರೆ. ಅಮೇರಿಕಾದ ಟ್ರಂಪ್ ಉತ್ತೇಜಿಸುತ್ತಿರುವ ತೀವ್ರ-ರಾಷ್ಟ್ರವಾದ ಒಂದು ರೀತಿಯಲ್ಲಿ ರಾಷ್ಟ್ರಾಂಧ ಬಿಳಿಯರ ಅಟ್ಟಹಾಸಕ್ಕೆ ಗಾಳಿ ಹಾಕಿದ, ಹಾದಿ ತಪ್ಪಿದ ರಾಷ್ಟ್ರವಾದದಲ್ಲಿ ಹಳ್ಳ ಹಿಡಿದ ಬ್ರೆಕ್ಷಿಟ್ಟಿನಂತ ಉದಾಹರಣೆಗಳ ಇಂದಿನಲ್ಲಿ, ಬಸವಣ್ಣ, ವಿವೇಕಾನಂದರನ್ನ ಸ್ಮರಿಸುತ್ತ ಧರ್ಮ ಮತ್ತು ದೇಶಪ್ರೇಮ ಭಾರತದಲ್ಲಿ ಒಂದು ಕಾಲದಲ್ಲಿ ಒಂದೇ ಆಗಿತ್ತು ಎಂದು ಸೂಕ್ಷ್ಮವಾಗಿ ಉದಾಹರಿಸಿದ್ದಾರೆ. ಮತಾಂತರ, ಮತಾಂಧತೆಗಳ ಕಚ್ಚಾಟವನ್ನ ಮತಗಳ ಲೆಕ್ಕದ ಲಾಭದಲ್ಲಿ ಮುಚ್ಚಿಟ್ಟೋ, ಹೆಚ್ಚಿಟ್ಟೋ ಸಮಾಜವನ್ನ ಸಾಯಿಸುತ್ತಿರುವ ರಾಜಕಾರಣಿಗಳ ಇಂದಿನ ಭಾರತದ ಸಮನ್ವಯತೆಯ ಬಗ್ಗೆ, ಧಾರ್ಮಿಕತೆಯಿಂದ ದೂರ ಸರಿಯುತ್ತಿರುವ ಪಶ್ಚಿಮ ಸಮಾಜವೊಂದರ ಸದಸ್ಯನ ದೃಷ್ಟಿಯ, ಇತ್ತೀಚೆಗೆ ಪ್ರಜಾವಾಣಿಯಲ್ಲಿ ಪ್ರಕಟವಾದ, ಈ ಲೇಖನ ಅನಿವಾಸಿಯ ಓದುಗರಲ್ಲಿ ಅರ್ಥಪೂರ್ಣ ಹಾಗು ಆರೋಗ್ಯಕರ ಚರ್ಚೆಗೆ ಅನುವು ಮಾಡಿಕೊಡುವುದೆನ್ನುವ ಸದಾಶಯದೊಂದಿಗೆ ಪ್ರಕಟಿಸುತ್ತಿದ್ದೇವೆ. ಎಂದಿನಂತೆ, ಲೇಖನದ ವಿಚಾರಗಳ ಸಂಪೂರ್ಣ ಹೊಣೆ ಲೇಖಕರದ್ದೆ. ನಿಮ್ಮ ಬಳಿಗೆ ಒಪ್ಪವಾಗಿ ತಂದಿಡುವದಷ್ಟೇ ನಮ್ಮ ಕಾರ್ಯ.
![]()
(Emblem of Supreme Court of India. Source: Google Images)
“ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ!”
– ಡಾ. ಜಿ. ಎಸ್. ಎಸ್
ಪ್ರಪಂಚದಲ್ಲಿ ಸಾಕಷ್ಟು ವೈಜ್ಞಾನಿಕ ಮತ್ತು ತಾಂತ್ರಿಕ ಮುನ್ನಡೆಗಳು ಸಾಗಿದ್ದು ಗ್ಲೋಬಲೈಸೇಷನ್ ಅಥವಾ ಜಾಗತೀಕರಣದ ಪರಿಣಾಮದಿಂದ “ಪ್ರಪಂಚ ಎಂಬುದು ಈಗ ಒಂದು ಸಣ್ಣ ಜಾಗ” (World is a small place) ಎಂಬ ಉದ್ಗಾರ ಆಗಾಗ್ಗೆ ಕೇಳಿ ಬರುತ್ತದೆ. ಅಂತರ್ಜಾಲದಿಂದ ಲಭ್ಯವಾಗಿರುವ ಸಂಪರ್ಕದಿಂದಾಗಿ ಮನುಷ್ಯ ಮನುಷ್ಯರ ಸಂಬಂಧ ವೃದ್ಧಿಸಿ ನಾವೆಲ್ಲ ಹಿಂದಿಗಿಂತ ಈಗ ನಿಕಟವಾಗಿ ಬೆಸೆದುಕೊಂಡು ಇದ್ದೇವೆ ಎಂಬ ಭಾವನೆ ಸಾಮಾನ್ಯವಾಗಿದೆ. ಪ್ರಪಂಚದಲ್ಲಿ ಭೂಗೋಳಿಕವಾಗಿ ಸಾವಿರಾರು ಮೈಲಿಗಳಾಚೆ ಇದ್ದರು ಒಂದು ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಬಟನ್ ಕ್ಲಿಕ್ ಮಾಡಿ ಒಬ್ಬರನ್ನೊಬ್ಬರು ಸಂಪರ್ಕಿಸಿ ಮುಖಾಮುಖಿ ಮಾತಾಡುವ ಅವಕಾಶ ಈಗ ನಮಗಿದೆ. ಈ ಒಂದು ಹಿನ್ನೆಲೆಯಲ್ಲಿ ಪ್ರಪಂಚದ ಇತ್ತೀಚಿನ ಆಗು-ಹೋಗುಗಳನ್ನು ಗಮನಿಸಿದಾಗ ಎಲ್ಲೆಡೆ ಧರ್ಮದ ಹೆಸರಲ್ಲಿ ದ್ವೇಷ , ಜಿಹಾದ್ ಹಾಗೂ ಕ್ರುಸೇಡ್ ಗಳು ಮತ್ತೆ ಪ್ರಾರಂಭವಾಗಿ ವಿಶ್ವ ಶಾಂತಿಗೆ ಧಕ್ಕೆ ಒದಗಿ ಬಂದಿದೆ. ಜಾಗತೀಕರಣದಿಂದ ಎಲ್ಲರೂ ಹತ್ತಿರವಿದ್ದರೂ ದೂರ ನಿಲ್ಲುವ ಪರಿಸ್ಥಿತಿ ಬಂದಿದೆ.
ಈ ವೈಜ್ಞಾನಿಕ ಯುಗದ ಸರ್ವತೋಮುಖ ಪ್ರಗತಿ ಮತ್ತು ವೈಚಾರಿಕ ಚಿಂತನೆಗಳ ನಡುವೆ ಧರ್ಮವು ವ್ಯಕ್ತಿ ಮಧ್ಯ ಮತ್ತು
ರಾಷ್ಟ್ರ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಗೋಡೆಗಳಂತೆ ಎದ್ದಿವೆ. ಧರ್ಮವನ್ನು ನೆಪವಾಗಿಟ್ಟುಕೊಂಡು ಹಲವಾರು
ಉಗ್ರಗಾಮಿ ಶಕ್ತಿಗಳು ತಲೆಯೆತ್ತಿ ಹೊಡೆದಾಡಿದ ಪರಿಣಾಮವಾಗಿ ಹಲವು ಮಧ್ಯಪೂರ್ವ ರಾಷ್ಟ್ರಗಳು ತಮ್ಮ ಅಸ್ತಿತ್ವವನ್ನು
ಕಳೆದುಕೊಂಡು ಅಲ್ಲಿನ ಜನಸ್ತೋಮ ಭಾರಿ ಪ್ರಮಾಣದಲ್ಲಿ ಸ್ಥಳಾಂತರಗೊಂಡು ನಿರಾಶ್ರಿತರಾಗಿ ಸ್ಥಿರ ಮತ್ತು ಸುರಕ್ಷಿತವಾಗಿರುವ ಅಕ್ಕಪಕ್ಕದ ಮತ್ತು ದೂರ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಒಂದು ಮಹಾ ವಲಸೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಅಭಿವೃದ್ಧಿಗೊಳ್ಳದೆ ಸ್ಥಗಿತವಾಗಿರುವ ದೇಶಗಳಿಂದ ಕೆಲವರು “ನಿರಾಶ್ರಿತರು” ಎಂಬ ಸುಳ್ಳು ಹಣೆಪಟ್ಟಿಯನ್ನು ಹಿಡಿದು ಸೇರಿಕೊಂಡಿದ್ದಾರೆ. ಹೀಗೆ ಭಾರಿ ಪ್ರಮಾಣದಲ್ಲಿ ವಲಸೆ ಬಂದ ನಿರಾಶ್ರಿತರಿಗೆ ಅಭಿವೃದ್ಧಿಗೊಂಡಿರುವ ರಾಷ್ಟ್ರಗಳು ಸಹಾನುಭೂತಿಯಿಂದ ಬಾಗಿಲು ತೆರದು ಆಶ್ರಯ ಕೊಟ್ಟಿದೆ. ಈ ರಾಷ್ತ್ರಗಳಲ್ಲಿ ಆರ್ಥಿಕ ಏಳಿಗೆಗಾಗಿ ಪರವಾನಗಿ ಪಡೆದುಬಂದ ಜನರೂ ಸೇರಿದ್ದಾರೆ. ಹೀಗೆ ವಲಸೆ ಬಂದ ಜನ ಒಂದು ರಾಷ್ಟ್ರವನ್ನು ತಮ್ಮದಾಗಿಸಿಕೊಂಡು ಅಲ್ಲಿ ತಮ್ಮ ಧಾರ್ಮಿಕ ಅಸ್ತಿತ್ವವನ್ನು ಉಳಿಸಿಕೊಂಡು ರಾಷ್ಟ್ರದ ಸಿಟಿಜನ್ ಶಿಪ್ ಮತ್ತು ಪಾಸ್ಪೋರ್ಟ್ ಗಳನ್ನು ಪಡೆದು ಅಲ್ಲಿನ ಭಾಷೆ ಮತ್ತು ಸಾಂಸ್ಕೃತಿಕ ವಿಷಯಗಳನ್ನು ತಮ್ಮದಾಗಿಸಿಕೊಂಡು ಒಂದು ನೂತನ ರಾಷ್ಟ್ರ ಪ್ರಜ್ಞೆ ಅಥವಾ ಅಸ್ತಿತ್ವವನ್ನು ಪಡೆದುಕೊಳ್ಳುತ್ತಾರೆ. ಈ ಅನಿವಾಸಿ ಪ್ರಜೆಗಳಿಗೆ ತಮ್ಮ ಮೂಲ ದೇಶದ ರಾಷ್ಟ್ರ ಪ್ರಜ್ಞೆ ಮತ್ತು ತಾವು ನೆಲೆಸಿರುವ ನಾಡಿನ ರಾಷ್ಟ್ರ ಪ್ರಜ್ಞೆ ಎರಡೂ ಪ್ರಸ್ತುತವಾಗುತ್ತದೆ. ಇಂಗ್ಲೆಂಡಿನಲ್ಲಿ ವಾಸ ಮಾಡುವ ನನಗೆ ನನ್ನ ಬ್ರಿಟಿಷ್ ರಾಷ್ಟ್ರ ಪ್ರಜ್ಞೆಯನ್ನು ಮತ್ತು ನಿಷ್ಠಾವಂತಿಕೆಯನ್ನು ಬಹಿರಂಗವಾಗಿ ಸಾಬೀತುಗೊಳಿಸುವ ನಿರೀಕ್ಷೆಯಾಗಲಿ ಅಥವಾ ಅಗತ್ಯ ಇಲ್ಲ. ಇದನ್ನು ಪ್ರಸ್ತಾಪಿಸುವ ಉದ್ದೇಶವೆಂದರೆ ನನ್ನ ಹಳೆ ಕಾಲೇಜಿನ ವಾಟ್ಸ್ ಆಪ್ ಗುಂಪಿನಲ್ಲಿರುವ ಕ್ರಿಶ್ಚಿಯನ್ ಸ್ನೇಹಿತರೊಬ್ಬರು ಇತ್ತೀಚಿನ ದಿನಗಳಲ್ಲಿ ತಮ್ಮ ಮೆಸೇಜ್ ಕೊನೆಯಲ್ಲಿ “ಜೈ ಹಿಂದ್” ಎಂಬ ಸಂದೇಶ ಮತ್ತು ತ್ರಿವರ್ಣ
ಧ್ವಜವನ್ನು ಸೇರಿಸುತ್ತಿದ್ದಾರೆ. ನನಗೆ ಈ ವಿಚಾರ ವಿಷಾದವಾಗಿದೆ. ಪಾಶಿಮಾತ್ಯ ದೇಶಗಳಲ್ಲಿ ಸ್ಥಳೀಯರು ತಮ್ಮ ರಾಷ್ಟ್ರಪ್ರಜ್ಞೆ ಯನ್ನು ವಿಶ್ವ ಕಪ್ ಫುಟ್ ಬಾಲ್ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳ ಸಂದರ್ಭದಲ್ಲಿ ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ ಹಾಗೆ ತಮ್ಮ ಧಾರ್ಮಿಕ ಪ್ರಜ್ಞೆಯನ್ನು ಆಚರಣೆಯನ್ನು ತಮ್ಮ ಮನೆಗಳಲ್ಲಿ ಅಥವ ವೈಯುಕ್ತಿಕ ಪರಿಸರದಲ್ಲಿಮಾಡಿಕೊಳ್ಳುತ್ತಾರೆ. ನನ್ನ ಹಲವಾರು ಇಂಗ್ಲಿಷ್ ಸಹೊದ್ಯೋಗಿಗಳು ಮತ್ತು ಸುಶೀಕ್ಷಿತ ಸಾಮನ್ಯರು ತಮಗೆ ಧರ್ಮ ಪ್ರಸ್ತುತವಲ್ಲವೆಂದು ಹೇಳುವುದನ್ನು ಕೇಳಿದ್ದೇನೆ ಹಾಗೆಯೇ ಕ್ರಿಸ್ಮಸ್ ಮತ್ತು ಈಸ್ಟರ್ ಹಬ್ಬದ ಸಂಧರ್ಭದಲ್ಲಿ ನಾನು ಈ ವಿಚಾರವನ್ನು ಗಮನಿಸಿದ್ದೇನೆ.
ಹಲವಾರು ಧರ್ಮಗಳನ್ನು ಒಳಗೊಂಡ ಜ್ಯಾತ್ಯಾತೀತ ಸಮಾಜದಲ್ಲಿ ರಾಷ್ಟ್ರಪ್ರಜ್ಞೆ ಮತ್ತು ಧರ್ಮ ಪ್ರಜ್ಞೆ ಒಂದು ಸಮತೋಲನದ ಪರಿಸ್ಥಿತಿಯಲ್ಲಿ ಇರುವಾಗ ಅದನ್ನು ಕದಡಿದರೆ ಘರ್ಷಣೆ ಮತ್ತು ಅಶಾಂತಿ ಉಂಟಾಗುವುದು ಅನಿವಾರ್ಯ. ಸೋಷಿಯಲ್ ಮೀಡಿಯಾ ಮತ್ತು ವಾಟ್ಸಪ್ ಗಳಲ್ಲಿ ಚರ್ಚೆಯ ಮೂಲಕ ನಮ್ಮ ಸನಾತನ ಧರ್ಮದ ಬಗ್ಗೆ ಹೆಚ್ಚಿನ ಅರಿವನ್ನು ಜಾಗೃತಗೊಳಿಸಿ ಧರ್ಮದ ವಿಚಾರಗಳನ್ನು ಕೈಗೆತ್ತಿಕೊಂಡು ಪ್ರಚಾರ ಕಾರ್ಯವನ್ನು ಹೂಡಿದ್ದೇವೆ. ಭಾರತದಲ್ಲಿ ಇದ್ದಕ್ಕಿದ್ದಂತೆ ಕಳೆದ ಹಲವು ವರ್ಷಗಳಿಂದ ಧರ್ಮ ನಮಗೆ ಬಹಳ ಪ್ರಸ್ತುತ ವಾದಂತೆ ಕಾಣುತ್ತದೆ. ಮೇಲೆ ಪ್ರಸ್ತಾಪಿಸಿದ ಜಾಗತೀಕರಣ ಮತ್ತು ಪ್ರಗತಿಯ ಹಿನ್ನೆಲೆಯಲ್ಲಿ ಜನಸಾಮಾನ್ಯನಿಗೆ ನಿಲುಕದ ವಿಚಾರವೆಂದರೆ ಈ ಇಪ್ಪತ್ತೊಂದನೇ ಶತಮಾನದಲ್ಲಿ ಧರ್ಮ ಏಕೆ ಎಷ್ಟು ಪ್ರಸ್ತುತವಾಗಿದೆ?
ಧರ್ಮ ಎಂಬ ಪದವನ್ನು ಅರ್ಥೈಸುವುದು ಸುಲಭವಲ್ಲ. ಪಾಶ್ಚಿಮಾತ್ಯ ಧರ್ಮ ಶಾಸ್ತ್ರಜ್ಞರ ಪ್ರಕಾರ ಧರ್ಮವೆಂಬುದು ಮನುಷ್ಯನನ್ನು ಮೀರಿದ ದೇವರು ಅಥವಾ ದೇವತಾ ಮನುಷ್ಯ ಒಂದು ಜನಸಮುದಾಯಕ್ಕೆ ಕೊಡಬಹುದಾದ ಜೀವನ ನೀತಿ ರೀತಿ ಮತ್ತು ಆಧ್ಯಾತ್ಮ ಪರಿಕಲ್ಪನೆ. ಈ ಸಂದೇಶ ಒಂದು ಲಿಖಿತ ದಾಖಲೆಯಲ್ಲಿ ರೂಪುಗೊಂಡಿರುತ್ತದೆ. ಕ್ರೈಸ್ತ ಮತದಲ್ಲಿನ ಬೈಬಲ್ ಇದಕ್ಕೆ ಉದಾಹರಣೆ. ಹಲವು ದೇವ ದೇವತೆಯರನ್ನು ಹಲವಾರು ಪುರಾಣ, ಶಾಸ್ತ್ರ ,ವೇದ ಮತ್ತು ಗೀತೆಗಳನ್ನು ಒಳಗೊಂಡ ಹಿಂದೂ ಧರ್ಮವನ್ನು ಈ ವ್ಯಾಖ್ಯಾನಕ್ಕೆ ಒಳಪಡಿಸುವುದು ಕಷ್ಟವಾದರೂ ಸಾರ್ವತ್ರಿಕ ಅಥವಾ ವಿಶ್ವವ್ಯಾಪಿ ವ್ಯಾಖ್ಯಾನದಲ್ಲಿ (Universal definition) ಹಿಂದೂ ಧರ್ಮ ಪ್ರಪಂಚದ ಇತರ ಮುಖ್ಯ ಧರ್ಮಗಳ ಪಟ್ಟಿಯಲ್ಲಿ ಒಂದು ಎಂಬ ವಿಚಾರ ಒಪ್ಪಿಗೆ ಪಡೆದಿದೆ. ಧರ್ಮವನ್ನು ಒಪ್ಪಿಕೊಂಡ ಮತ್ತು ಅಪ್ಪಿಕೊಂಡ ವ್ಯಕ್ತಿ ಧರ್ಮ ಪ್ರಜ್ಞಾವಂತನಾಗುತ್ತಾನೆ. ಸಾವಿರಾರು ವರ್ಷಗಳಿಂದ ಧರ್ಮ ನಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಬದುಕನ್ನು ನಿಯಂತ್ರಿಸುತ್ತಾ ಬಂದಿದೆ. ಧರ್ಮ ಸಾಮಾಜಿಕ ನೆಲೆಯಲ್ಲಿ ಜೀವನಕ್ಕೆ ಬೇಕಾದ ರೀತಿ ನೀತಿ ಮತ್ತು ಉತ್ತಮ ಮೌಲ್ಯಗಳನ್ನು ಒದಗಿಸುವುದರ ಜೊತೆಗೆ ವೈಯುಕ್ತಿಕ ನೆಲೆಯಲ್ಲಿ ಅಧ್ಯಾತ್ಮ ಚಿಂತನೆ ಮತ್ತು ಆಚರಣೆ ಇವುಗಳ ಬಗ್ಗೆ ಮಾರ್ಗದರ್ಶನ ನೀಡಿದೆ. ಕೆಲವು ಧರ್ಮಗಳು ಕಾಲಕಾಲಕ್ಕೆ ಸಮಾಜ ಸುಧಾರಕರಿಂದ ವಿಮರ್ಶೆಗೆ ಒಳಗಾಗಿ ಪ್ರವೃತ್ತಿಯ ದೆಸೆಯಿಂದ ಕೆಲವು ಬದಲಾವಣೆಗಳನ್ನು ಒಪ್ಪಿಕೊಂಡು ಸಾಗಿದೆ. ವೈಯುಕ್ತಿಕ ನೆಲೆಯಲ್ಲಿ ಧರ್ಮಾಚರಣೆಯು ಪ್ರಸ್ತುತವೇ ಎಂಬ ವಿಚಾರ ಪ್ರಶ್ನಾತೀತವಾದದ್ದು. ಒಬ್ಬ ವ್ಯಕ್ತಿಯ ನಂಬಿಕೆ ಮತ್ತು ಶ್ರದ್ಧೆಗಳನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. “ಅವರವರ ಭಾವಕ್ಕೆ ಅವರವರ ದರುಶನಕೆ” ಎಂಬ ವಚನದ ಸಾಲುಗಳನ್ನು ಇಲ್ಲಿ ಪ್ರಸ್ತಾಪ ಮಾಡುವುದು ಸೂಕ್ತ.
ಸಮಾಜದಲ್ಲಿ ಹಿಂದೆ ಧರ್ಮ ಒದಗಿಸಿದ್ದ ಸಾಮಾಜಿಕ ಜವಾಬ್ದಾರಿ, ಸ್ವಾತಂತ್ರೋತ್ತರ ಭಾರತದಲ್ಲಿ ಸಂವಿಧಾನ ನ್ಯಾಯ ಮತ್ತು ಆಡಳಿತ ವ್ಯವಸ್ಥೆಗೆ ಹಸ್ತಾಂತರಗೊಂಡಿದೆ. ಹಲವು ಧರ್ಮಗಳನ್ನು ಒಳಗೊಂಡ ಭಾರತ ಗಣರಾಜ್ಯವಾಗಿ ಹಿಂದೂಸ್ಥಾನವೆಂಬ ಪರಿಕಲ್ಪನೆ ಪಕ್ಕಕ್ಕೆ ಸರಿದು ಸರ್ವಧರ್ಮ ಸಮನ್ವಯದ ಭಾರತವಾಗಿ ರೂಪುಗೊಂಡಿದ್ದು, ಬ್ರಿಟಿಷ್ ಆಳ್ವಿಕೆಯಲ್ಲಿ ಉದ್ಭವಿಸಿದ ರಾಷ್ಟ್ರಪ್ರಜ್ಞೆ ಸ್ವಾತಂತ್ರ್ಯ ದೊರಕಿದ ನಂತರ ಸ್ವಲ್ಪ ತಣ್ಣಗಾದರೂ ಪಾಕಿಸ್ತಾನ ಮತ್ತು ಚೀನಾ ಜೊತೆ ನಡೆದ ಯುದ್ಧಗಳ ಸಮಯದಲ್ಲಿ ಮತ್ತೆ ಮತ್ತೆ ಜಾಗೃತಗೊಳ್ಳುತ್ತಿತ್ತು. ಸಾಮೂಹಿಕ ನೆಲೆಯಲ್ಲಿ ನಮಗೆಲ್ಲ ನಮ್ಮ ಧರ್ಮ ಪ್ರಜ್ಞೆಗಿಂತ ನಮ್ಮ ರಾಷ್ಟ್ರಪ್ರಜ್ಞೆ ಪ್ರಸ್ತುತವಾಗಿತ್ತು.
ಕಳೆದ ಎರಡು ದಶಕಗಳಲ್ಲಿ ಭಾರತ ಆರ್ಥಿಕವಾಗಿ ಮತ್ತು ವೈಜ್ಞಾನಿಕ, ತಾಂತ್ರಿಕ, ಕೈಗಾರಿಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿ ಅಭಿವೃದ್ಧಿಗೊಂಡಿರುವ ರಾಷ್ಟ್ರಗಳ ಮನ್ನಣೆ ಪಡೆದು ಮುಂದುವರಿದಿದೆ. ಎಲ್ಲರಲ್ಲೂ ಆತ್ಮವಿಶ್ವಾಸ ಹೆಚ್ಚಾಗಿದ್ದು ನಮ್ಮ ಹೆಮ್ಮೆ ಸಂತಸಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಇಂತಹ ಯಶಸ್ಸಿನಲ್ಲಿ ನಾವು ನಮ್ಮ ರಾಷ್ಟ್ರಪ್ರಜ್ಞೆಯನ್ನು ಎತ್ತಿಹಿಡಿಯಬೇಕೆ ಹೊರತು ಧರ್ಮಪ್ರಜ್ಞೆಯನ್ನಲ್ಲ. ಈ ಒಂದು ಯಶಸ್ಸಿನಲ್ಲಿ ಸಮಾಜದ ಎಲ್ಲ ಮತಧರ್ಮದವರು ಮತ್ತು ವರ್ಗದವರು ಭಾಗಿಯಾಗಿದ್ದಾರೆ ಎಂಬ ವಿಚಾರ ಅರಿಯಬೇಕಾಗಿದೆ. ಹೆಮ್ಮೆ ಹೆಮ್ಮೆಯಾಗಿ ಉಳಿಯಬೇಕು ಏಕೆಂದರೆ ಹೆಮ್ಮೆಗೂ ಗರ್ವಕ್ಕೂ ನಡುವೆ ಇರುವ ಅಂತರ ಒಂದು ಸಣ್ಣ ರೇಖೆಯಷ್ಟೇ. ಸ್ವಾಮಿ ವಿವೇಕಾನಂದರು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿ ನೂರಾ ಇಪ್ಪತ್ತೈದು ವರ್ಷಗಳು ಕಳೆದಿವೆ. ಅದನ್ನು ನಾವು ನೆನೆಸಿಕೊಂಡು ವಿಜೃಂಭಿಸುತ್ತಿರುವುದು ಸರಿಯೆ. ಭಾಷಣದ ಶುರುವಿನಲ್ಲಿ ಸ್ವಾಮೀಜಿಯವರು “ಅಮೇರಿಕಾದ ನನ್ನ ಸೋದರ ಸೋದರಿಯರೇ” ಎಂದು ಹೇಳುವ ಮಾತಿನಲ್ಲಿ ಅದೆಷ್ಟು ಸಮನ್ವಯತೆ (Inclusiveness) ಇದೆ ಎಂಬುದನ್ನು ಗಮನಿಸಬಹುದು. “ಅನ್ಯ ಧರ್ಮಗಳ ಅಸ್ತಿತ್ವದ ಅಂಗೀಕರಣ ಮತ್ತು ಸಮನ್ವಯತೆಯನ್ನು ಪ್ರಪಂಚಕ್ಕೆ ಯಾವ ಧರ್ಮ ತೋರಿದೆಯೋ ಆ ಧರ್ಮಕ್ಕೆ ಸೇರಿರುವ ಹೆಮ್ಮೆ ನನಗಿದೆ” ಎಂಬ ಸ್ವಾಮೀಜಿಯವರ ಹೇಳಿಕೆ ಅವರ ನಿಲುವನ್ನು ಸ್ಪಷ್ಟಪಡಿಸುತ್ತದೆ. ಆಗಿನ ಕಾಲಕ್ಕೆ ಅಂದರೆ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ರಾಷ್ಟ್ರಪ್ರಜ್ಞೆ ಮತ್ತು ಧರ್ಮಪ್ರಜ್ಞೆಗಳು ಒಂದೇ ಅಂಗಗಳಾಗಿದ್ದವು.
ಇತ್ತೀಚಿಗೆ ಜನಸಾಮಾನ್ಯರಲ್ಲಿ ತಮಗೆ ರಾಷ್ಟ್ರಪ್ರಜ್ಞೆ ಮುಖ್ಯವೋ ಅಥವಾ ಧರ್ಮಪ್ರಜ್ಞೆ ಮುಖ್ಯವೋ ಎಂಬ ವಿಚಾರದಲ್ಲಿ ಗೊಂದಲ ಅಥವಾ ಕನ್ಫ್ಯೂಷನ್ ಮೂಡಿದಂತಿದೆ. ನಮಗೆಲ್ಲಾ ಅಗತ್ಯವಾಗಿ ಬೇಕಾಗಿರುವುದು ರಾಷ್ಟ್ರಪ್ರಜ್ಞೆ. ಧರ್ಮದಲ್ಲಿ ನಂಬಿಕೆ ಮತ್ತು ಶ್ರದ್ಧೆ ಇರುವವರು ತಮ್ಮ ಧರ್ಮಪ್ರಜ್ಞೆಯನ್ನು ವೈಯುಕ್ತಿಕ ನೆಲೆಯಲ್ಲಿ ಉಳಿಸಿಕೊಂಡು ಬೆಳೆಸಿಕೊಳ್ಳುವುದು ಅವರವರ ಆಯ್ಕೆ. ಒಂದು ಬಹುಮುಖಿ ಸಂಸ್ಕೃತಿಯ ರಾಷ್ಟ್ರದಲ್ಲಿ ಒಬ್ಬ ವ್ಯಕ್ತಿಗೆ ಹಲವಾರು ಅಸ್ತಿತ್ವವುಂಟು; ಇವು ರಾಷ್ಟ್ರ ಪ್ರಜ್ಞೆ, ಧರ್ಮ ಪ್ರಜ್ಞೆ, ಭಾಷಾಪ್ರಜ್ಞೆ, ಸಾಂಸ್ಕೃತಿಕ ಪ್ರಜ್ಞೆ ಮತ್ತು ಜಾತಿಪ್ರಜ್ಞೆ. ಇಷ್ಟು ವಿಭಿನ್ನತೆಗಳಿದ್ದರೂ ನಮ್ಮನ್ನು ಒಂದುಗೂಡಿಸಿರುವ ಏಕೈಕ ಶಕ್ತಿ ನಮ್ಮ ರಾಷ್ಟ್ರಪ್ರಜ್ಞೆ ಎನ್ನಬಹುದು. ರಾಷ್ಟ್ರೀಯತೆ ಎಂಬ ಲಾಂಛನವನ್ನು ಹಿಡಿದು ನಮ್ಮ ನಿಜವಾದ ಸಮಸ್ಯೆಗಳಾದ ಸ್ವಾರ್ಥ, ಭ್ರಷ್ಟಾಚಾರ ಮತ್ತು ಪರಿಸರ ಮಾಲಿನ್ಯ ಇವುಗಳನ್ನು ಭಾರತೀಯರಾದ ನಾವೆಲ್ಲರೂ ಅದರಲ್ಲೂ ಮುಂದಿನ ಪೀಳಿಗೆಯಾದ ಯುವಕರು ಎದುರಿಸಬೇಕಾಗಿದೆ.




