ರಾಷ್ಟ್ರ ಪ್ರಜ್ಞೆ ಮತ್ತು ಧರ್ಮಪ್ರಜ್ಞೆ

ಬ್ರೆಕ್ಸಿಟ್ಟಿನ ಬಿಸಿಯ ಇಂಗ್ಲೆಂಡಿನ ಶೆಫಿಲ್ಡ್ ವಾಸಿ ಹಿರಿಯ ವೈದ್ಯ ಶಿವಪ್ರಸಾದರು, ವಾಟ್ಸಾಪಿನ ಸಂದೇಶವೊಂದರ ಕೊನೆಯಲ್ಲಿ ಕಂಡ  ‘ಜೈ ಹಿಂದ್’ ಅವರ ಮನಸ್ಸಿನಲ್ಲಿ ಮೂಡಿಸಿದ ವಿಷಾದದ ಅಲೆಗಳಲ್ಲಿ ಮಂಥಿಸಿದ ರಾಷ್ಟ್ರವಾದ ಮತ್ತು ಧರ್ಮವಾದಗಳ ಪ್ರಸ್ತುತತೆ, ಲಾಭ ಮತ್ತು ಅಪಾಯಗಳನ್ನು ಅರ್ಥೈಸುವ ಪ್ರಯತ್ನ ಮಾಡಿದ್ದಾರೆ. ಅಮೇರಿಕಾದ ಟ್ರಂಪ್ ಉತ್ತೇಜಿಸುತ್ತಿರುವ ತೀವ್ರ-ರಾಷ್ಟ್ರವಾದ ಒಂದು ರೀತಿಯಲ್ಲಿ ರಾಷ್ಟ್ರಾಂಧ ಬಿಳಿಯರ ಅಟ್ಟಹಾಸಕ್ಕೆ ಗಾಳಿ ಹಾಕಿದ, ಹಾದಿ ತಪ್ಪಿದ ರಾಷ್ಟ್ರವಾದದಲ್ಲಿ ಹಳ್ಳ ಹಿಡಿದ ಬ್ರೆಕ್ಷಿಟ್ಟಿನಂತ ಉದಾಹರಣೆಗಳ ಇಂದಿನಲ್ಲಿ, ಬಸವಣ್ಣ, ವಿವೇಕಾನಂದರನ್ನ ಸ್ಮರಿಸುತ್ತ ಧರ್ಮ ಮತ್ತು ದೇಶಪ್ರೇಮ ಭಾರತದಲ್ಲಿ ಒಂದು ಕಾಲದಲ್ಲಿ ಒಂದೇ ಆಗಿತ್ತು ಎಂದು ಸೂಕ್ಷ್ಮವಾಗಿ ಉದಾಹರಿಸಿದ್ದಾರೆ. ಮತಾಂತರ, ಮತಾಂಧತೆಗಳ ಕಚ್ಚಾಟವನ್ನ ಮತಗಳ ಲೆಕ್ಕದ ಲಾಭದಲ್ಲಿ ಮುಚ್ಚಿಟ್ಟೋ, ಹೆಚ್ಚಿಟ್ಟೋ ಸಮಾಜವನ್ನ ಸಾಯಿಸುತ್ತಿರುವ ರಾಜಕಾರಣಿಗಳ ಇಂದಿನ ಭಾರತದ ಸಮನ್ವಯತೆಯ ಬಗ್ಗೆ, ಧಾರ್ಮಿಕತೆಯಿಂದ ದೂರ ಸರಿಯುತ್ತಿರುವ ಪಶ್ಚಿಮ ಸಮಾಜವೊಂದರ ಸದಸ್ಯನ ದೃಷ್ಟಿಯ, ಇತ್ತೀಚೆಗೆ ಪ್ರಜಾವಾಣಿಯಲ್ಲಿ ಪ್ರಕಟವಾದ, ಈ ಲೇಖನ  ಅನಿವಾಸಿಯ ಓದುಗರಲ್ಲಿ ಅರ್ಥಪೂರ್ಣ ಹಾಗು ಆರೋಗ್ಯಕರ ಚರ್ಚೆಗೆ ಅನುವು ಮಾಡಿಕೊಡುವುದೆನ್ನುವ ಸದಾಶಯದೊಂದಿಗೆ ಪ್ರಕಟಿಸುತ್ತಿದ್ದೇವೆ. ಎಂದಿನಂತೆ, ಲೇಖನದ ವಿಚಾರಗಳ ಸಂಪೂರ್ಣ ಹೊಣೆ ಲೇಖಕರದ್ದೆ. ನಿಮ್ಮ ಬಳಿಗೆ  ಒಪ್ಪವಾಗಿ ತಂದಿಡುವದಷ್ಟೇ ನಮ್ಮ ಕಾರ್ಯ. 

Emblem of the Supreme Court of India.svg

(Emblem of Supreme Court of India. Source: Google Images)

 

“ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ!”

                                                                             – ಡಾ. ಜಿ. ಎಸ್. ಎಸ್

ಪ್ರಪಂಚದಲ್ಲಿ ಸಾಕಷ್ಟು ವೈಜ್ಞಾನಿಕ ಮತ್ತು ತಾಂತ್ರಿಕ ಮುನ್ನಡೆಗಳು ಸಾಗಿದ್ದು ಗ್ಲೋಬಲೈಸೇಷನ್ ಅಥವಾ ಜಾಗತೀಕರಣದ ಪರಿಣಾಮದಿಂದ “ಪ್ರಪಂಚ ಎಂಬುದು ಈಗ ಒಂದು ಸಣ್ಣ ಜಾಗ” (World is a small place) ಎಂಬ ಉದ್ಗಾರ ಆಗಾಗ್ಗೆ ಕೇಳಿ ಬರುತ್ತದೆ. ಅಂತರ್ಜಾಲದಿಂದ ಲಭ್ಯವಾಗಿರುವ ಸಂಪರ್ಕದಿಂದಾಗಿ ಮನುಷ್ಯ ಮನುಷ್ಯರ ಸಂಬಂಧ ವೃದ್ಧಿಸಿ ನಾವೆಲ್ಲ ಹಿಂದಿಗಿಂತ ಈಗ ನಿಕಟವಾಗಿ ಬೆಸೆದುಕೊಂಡು ಇದ್ದೇವೆ ಎಂಬ ಭಾವನೆ ಸಾಮಾನ್ಯವಾಗಿದೆ. ಪ್ರಪಂಚದಲ್ಲಿ ಭೂಗೋಳಿಕವಾಗಿ ಸಾವಿರಾರು ಮೈಲಿಗಳಾಚೆ ಇದ್ದರು ಒಂದು ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಬಟನ್ ಕ್ಲಿಕ್ ಮಾಡಿ ಒಬ್ಬರನ್ನೊಬ್ಬರು ಸಂಪರ್ಕಿಸಿ ಮುಖಾಮುಖಿ ಮಾತಾಡುವ ಅವಕಾಶ ಈಗ ನಮಗಿದೆ. ಈ ಒಂದು ಹಿನ್ನೆಲೆಯಲ್ಲಿ ಪ್ರಪಂಚದ ಇತ್ತೀಚಿನ ಆಗು-ಹೋಗುಗಳನ್ನು ಗಮನಿಸಿದಾಗ ಎಲ್ಲೆಡೆ ಧರ್ಮದ ಹೆಸರಲ್ಲಿ ದ್ವೇಷ , ಜಿಹಾದ್ ಹಾಗೂ ಕ್ರುಸೇಡ್ ಗಳು ಮತ್ತೆ ಪ್ರಾರಂಭವಾಗಿ ವಿಶ್ವ ಶಾಂತಿಗೆ ಧಕ್ಕೆ ಒದಗಿ ಬಂದಿದೆ. ಜಾಗತೀಕರಣದಿಂದ ಎಲ್ಲರೂ ಹತ್ತಿರವಿದ್ದರೂ ದೂರ ನಿಲ್ಲುವ ಪರಿಸ್ಥಿತಿ ಬಂದಿದೆ.

ಈ ವೈಜ್ಞಾನಿಕ ಯುಗದ ಸರ್ವತೋಮುಖ ಪ್ರಗತಿ ಮತ್ತು ವೈಚಾರಿಕ ಚಿಂತನೆಗಳ ನಡುವೆ ಧರ್ಮವು ವ್ಯಕ್ತಿ ಮಧ್ಯ ಮತ್ತು
ರಾಷ್ಟ್ರ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಗೋಡೆಗಳಂತೆ ಎದ್ದಿವೆ. ಧರ್ಮವನ್ನು ನೆಪವಾಗಿಟ್ಟುಕೊಂಡು ಹಲವಾರು
ಉಗ್ರಗಾಮಿ ಶಕ್ತಿಗಳು ತಲೆಯೆತ್ತಿ ಹೊಡೆದಾಡಿದ ಪರಿಣಾಮವಾಗಿ ಹಲವು ಮಧ್ಯಪೂರ್ವ ರಾಷ್ಟ್ರಗಳು ತಮ್ಮ ಅಸ್ತಿತ್ವವನ್ನು
ಕಳೆದುಕೊಂಡು ಅಲ್ಲಿನ ಜನಸ್ತೋಮ ಭಾರಿ ಪ್ರಮಾಣದಲ್ಲಿ ಸ್ಥಳಾಂತರಗೊಂಡು ನಿರಾಶ್ರಿತರಾಗಿ ಸ್ಥಿರ ಮತ್ತು ಸುರಕ್ಷಿತವಾಗಿರುವ ಅಕ್ಕಪಕ್ಕದ ಮತ್ತು ದೂರ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಒಂದು ಮಹಾ ವಲಸೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಅಭಿವೃದ್ಧಿಗೊಳ್ಳದೆ ಸ್ಥಗಿತವಾಗಿರುವ ದೇಶಗಳಿಂದ ಕೆಲವರು “ನಿರಾಶ್ರಿತರು” ಎಂಬ ಸುಳ್ಳು ಹಣೆಪಟ್ಟಿಯನ್ನು ಹಿಡಿದು ಸೇರಿಕೊಂಡಿದ್ದಾರೆ. ಹೀಗೆ ಭಾರಿ ಪ್ರಮಾಣದಲ್ಲಿ ವಲಸೆ ಬಂದ ನಿರಾಶ್ರಿತರಿಗೆ ಅಭಿವೃದ್ಧಿಗೊಂಡಿರುವ ರಾಷ್ಟ್ರಗಳು ಸಹಾನುಭೂತಿಯಿಂದ ಬಾಗಿಲು ತೆರದು ಆಶ್ರಯ ಕೊಟ್ಟಿದೆ. ಈ ರಾಷ್ತ್ರಗಳಲ್ಲಿ ಆರ್ಥಿಕ ಏಳಿಗೆಗಾಗಿ ಪರವಾನಗಿ ಪಡೆದುಬಂದ ಜನರೂ ಸೇರಿದ್ದಾರೆ. ಹೀಗೆ ವಲಸೆ ಬಂದ ಜನ ಒಂದು ರಾಷ್ಟ್ರವನ್ನು ತಮ್ಮದಾಗಿಸಿಕೊಂಡು ಅಲ್ಲಿ ತಮ್ಮ ಧಾರ್ಮಿಕ ಅಸ್ತಿತ್ವವನ್ನು ಉಳಿಸಿಕೊಂಡು ರಾಷ್ಟ್ರದ ಸಿಟಿಜನ್ ಶಿಪ್ ಮತ್ತು ಪಾಸ್ಪೋರ್ಟ್ ಗಳನ್ನು ಪಡೆದು ಅಲ್ಲಿನ ಭಾಷೆ ಮತ್ತು ಸಾಂಸ್ಕೃತಿಕ ವಿಷಯಗಳನ್ನು ತಮ್ಮದಾಗಿಸಿಕೊಂಡು ಒಂದು ನೂತನ ರಾಷ್ಟ್ರ ಪ್ರಜ್ಞೆ ಅಥವಾ ಅಸ್ತಿತ್ವವನ್ನು ಪಡೆದುಕೊಳ್ಳುತ್ತಾರೆ. ಈ ಅನಿವಾಸಿ ಪ್ರಜೆಗಳಿಗೆ ತಮ್ಮ ಮೂಲ ದೇಶದ ರಾಷ್ಟ್ರ ಪ್ರಜ್ಞೆ ಮತ್ತು ತಾವು ನೆಲೆಸಿರುವ ನಾಡಿನ ರಾಷ್ಟ್ರ ಪ್ರಜ್ಞೆ ಎರಡೂ ಪ್ರಸ್ತುತವಾಗುತ್ತದೆ. ಇಂಗ್ಲೆಂಡಿನಲ್ಲಿ ವಾಸ ಮಾಡುವ ನನಗೆ ನನ್ನ ಬ್ರಿಟಿಷ್ ರಾಷ್ಟ್ರ ಪ್ರಜ್ಞೆಯನ್ನು ಮತ್ತು ನಿಷ್ಠಾವಂತಿಕೆಯನ್ನು ಬಹಿರಂಗವಾಗಿ ಸಾಬೀತುಗೊಳಿಸುವ ನಿರೀಕ್ಷೆಯಾಗಲಿ ಅಥವಾ ಅಗತ್ಯ ಇಲ್ಲ. ಇದನ್ನು ಪ್ರಸ್ತಾಪಿಸುವ ಉದ್ದೇಶವೆಂದರೆ ನನ್ನ ಹಳೆ ಕಾಲೇಜಿನ ವಾಟ್ಸ್ ಆಪ್ ಗುಂಪಿನಲ್ಲಿರುವ ಕ್ರಿಶ್ಚಿಯನ್ ಸ್ನೇಹಿತರೊಬ್ಬರು ಇತ್ತೀಚಿನ ದಿನಗಳಲ್ಲಿ ತಮ್ಮ ಮೆಸೇಜ್ ಕೊನೆಯಲ್ಲಿ “ಜೈ ಹಿಂದ್” ಎಂಬ ಸಂದೇಶ ಮತ್ತು ತ್ರಿವರ್ಣ
ಧ್ವಜವನ್ನು ಸೇರಿಸುತ್ತಿದ್ದಾರೆ. ನನಗೆ ಈ ವಿಚಾರ ವಿಷಾದವಾಗಿದೆ. ಪಾಶಿಮಾತ್ಯ ದೇಶಗಳಲ್ಲಿ ಸ್ಥಳೀಯರು ತಮ್ಮ ರಾಷ್ಟ್ರಪ್ರಜ್ಞೆ ಯನ್ನು ವಿಶ್ವ ಕಪ್ ಫುಟ್ ಬಾಲ್ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳ ಸಂದರ್ಭದಲ್ಲಿ ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ ಹಾಗೆ ತಮ್ಮ ಧಾರ್ಮಿಕ ಪ್ರಜ್ಞೆಯನ್ನು ಆಚರಣೆಯನ್ನು ತಮ್ಮ ಮನೆಗಳಲ್ಲಿ ಅಥವ ವೈಯುಕ್ತಿಕ ಪರಿಸರದಲ್ಲಿಮಾಡಿಕೊಳ್ಳುತ್ತಾರೆ. ನನ್ನ ಹಲವಾರು ಇಂಗ್ಲಿಷ್ ಸಹೊದ್ಯೋಗಿಗಳು ಮತ್ತು ಸುಶೀಕ್ಷಿತ ಸಾಮನ್ಯರು ತಮಗೆ ಧರ್ಮ ಪ್ರಸ್ತುತವಲ್ಲವೆಂದು ಹೇಳುವುದನ್ನು ಕೇಳಿದ್ದೇನೆ ಹಾಗೆಯೇ ಕ್ರಿಸ್ಮಸ್ ಮತ್ತು ಈಸ್ಟರ್ ಹಬ್ಬದ ಸಂಧರ್ಭದಲ್ಲಿ ನಾನು ಈ ವಿಚಾರವನ್ನು ಗಮನಿಸಿದ್ದೇನೆ.

ಹಲವಾರು ಧರ್ಮಗಳನ್ನು ಒಳಗೊಂಡ ಜ್ಯಾತ್ಯಾತೀತ ಸಮಾಜದಲ್ಲಿ ರಾಷ್ಟ್ರಪ್ರಜ್ಞೆ ಮತ್ತು ಧರ್ಮ ಪ್ರಜ್ಞೆ ಒಂದು ಸಮತೋಲನದ ಪರಿಸ್ಥಿತಿಯಲ್ಲಿ ಇರುವಾಗ ಅದನ್ನು ಕದಡಿದರೆ ಘರ್ಷಣೆ ಮತ್ತು ಅಶಾಂತಿ ಉಂಟಾಗುವುದು ಅನಿವಾರ್ಯ. ಸೋಷಿಯಲ್ ಮೀಡಿಯಾ ಮತ್ತು ವಾಟ್ಸಪ್ ಗಳಲ್ಲಿ ಚರ್ಚೆಯ ಮೂಲಕ ನಮ್ಮ ಸನಾತನ ಧರ್ಮದ ಬಗ್ಗೆ ಹೆಚ್ಚಿನ ಅರಿವನ್ನು ಜಾಗೃತಗೊಳಿಸಿ ಧರ್ಮದ ವಿಚಾರಗಳನ್ನು ಕೈಗೆತ್ತಿಕೊಂಡು ಪ್ರಚಾರ ಕಾರ್ಯವನ್ನು ಹೂಡಿದ್ದೇವೆ. ಭಾರತದಲ್ಲಿ ಇದ್ದಕ್ಕಿದ್ದಂತೆ ಕಳೆದ ಹಲವು ವರ್ಷಗಳಿಂದ ಧರ್ಮ ನಮಗೆ ಬಹಳ ಪ್ರಸ್ತುತ ವಾದಂತೆ ಕಾಣುತ್ತದೆ. ಮೇಲೆ ಪ್ರಸ್ತಾಪಿಸಿದ ಜಾಗತೀಕರಣ ಮತ್ತು ಪ್ರಗತಿಯ ಹಿನ್ನೆಲೆಯಲ್ಲಿ ಜನಸಾಮಾನ್ಯನಿಗೆ ನಿಲುಕದ ವಿಚಾರವೆಂದರೆ ಈ ಇಪ್ಪತ್ತೊಂದನೇ ಶತಮಾನದಲ್ಲಿ ಧರ್ಮ ಏಕೆ ಎಷ್ಟು ಪ್ರಸ್ತುತವಾಗಿದೆ?

ಧರ್ಮ ಎಂಬ ಪದವನ್ನು ಅರ್ಥೈಸುವುದು ಸುಲಭವಲ್ಲ. ಪಾಶ್ಚಿಮಾತ್ಯ ಧರ್ಮ ಶಾಸ್ತ್ರಜ್ಞರ ಪ್ರಕಾರ ಧರ್ಮವೆಂಬುದು ಮನುಷ್ಯನನ್ನು ಮೀರಿದ ದೇವರು ಅಥವಾ ದೇವತಾ ಮನುಷ್ಯ ಒಂದು ಜನಸಮುದಾಯಕ್ಕೆ ಕೊಡಬಹುದಾದ ಜೀವನ ನೀತಿ ರೀತಿ ಮತ್ತು ಆಧ್ಯಾತ್ಮ ಪರಿಕಲ್ಪನೆ. ಈ ಸಂದೇಶ ಒಂದು ಲಿಖಿತ ದಾಖಲೆಯಲ್ಲಿ ರೂಪುಗೊಂಡಿರುತ್ತದೆ. ಕ್ರೈಸ್ತ ಮತದಲ್ಲಿನ ಬೈಬಲ್ ಇದಕ್ಕೆ ಉದಾಹರಣೆ. ಹಲವು ದೇವ ದೇವತೆಯರನ್ನು ಹಲವಾರು ಪುರಾಣ, ಶಾಸ್ತ್ರ ,ವೇದ ಮತ್ತು ಗೀತೆಗಳನ್ನು ಒಳಗೊಂಡ ಹಿಂದೂ ಧರ್ಮವನ್ನು ಈ ವ್ಯಾಖ್ಯಾನಕ್ಕೆ ಒಳಪಡಿಸುವುದು ಕಷ್ಟವಾದರೂ ಸಾರ್ವತ್ರಿಕ ಅಥವಾ ವಿಶ್ವವ್ಯಾಪಿ ವ್ಯಾಖ್ಯಾನದಲ್ಲಿ (Universal definition) ಹಿಂದೂ ಧರ್ಮ ಪ್ರಪಂಚದ ಇತರ ಮುಖ್ಯ ಧರ್ಮಗಳ ಪಟ್ಟಿಯಲ್ಲಿ ಒಂದು ಎಂಬ ವಿಚಾರ ಒಪ್ಪಿಗೆ ಪಡೆದಿದೆ. ಧರ್ಮವನ್ನು ಒಪ್ಪಿಕೊಂಡ ಮತ್ತು ಅಪ್ಪಿಕೊಂಡ ವ್ಯಕ್ತಿ ಧರ್ಮ ಪ್ರಜ್ಞಾವಂತನಾಗುತ್ತಾನೆ. ಸಾವಿರಾರು ವರ್ಷಗಳಿಂದ ಧರ್ಮ ನಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಬದುಕನ್ನು ನಿಯಂತ್ರಿಸುತ್ತಾ ಬಂದಿದೆ. ಧರ್ಮ ಸಾಮಾಜಿಕ ನೆಲೆಯಲ್ಲಿ ಜೀವನಕ್ಕೆ ಬೇಕಾದ ರೀತಿ ನೀತಿ ಮತ್ತು ಉತ್ತಮ ಮೌಲ್ಯಗಳನ್ನು ಒದಗಿಸುವುದರ ಜೊತೆಗೆ ವೈಯುಕ್ತಿಕ ನೆಲೆಯಲ್ಲಿ ಅಧ್ಯಾತ್ಮ ಚಿಂತನೆ ಮತ್ತು ಆಚರಣೆ ಇವುಗಳ ಬಗ್ಗೆ ಮಾರ್ಗದರ್ಶನ ನೀಡಿದೆ. ಕೆಲವು ಧರ್ಮಗಳು ಕಾಲಕಾಲಕ್ಕೆ ಸಮಾಜ ಸುಧಾರಕರಿಂದ ವಿಮರ್ಶೆಗೆ ಒಳಗಾಗಿ ಪ್ರವೃತ್ತಿಯ ದೆಸೆಯಿಂದ ಕೆಲವು ಬದಲಾವಣೆಗಳನ್ನು ಒಪ್ಪಿಕೊಂಡು ಸಾಗಿದೆ. ವೈಯುಕ್ತಿಕ ನೆಲೆಯಲ್ಲಿ ಧರ್ಮಾಚರಣೆಯು ಪ್ರಸ್ತುತವೇ ಎಂಬ ವಿಚಾರ ಪ್ರಶ್ನಾತೀತವಾದದ್ದು. ಒಬ್ಬ ವ್ಯಕ್ತಿಯ ನಂಬಿಕೆ ಮತ್ತು ಶ್ರದ್ಧೆಗಳನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. “ಅವರವರ ಭಾವಕ್ಕೆ ಅವರವರ ದರುಶನಕೆ” ಎಂಬ ವಚನದ ಸಾಲುಗಳನ್ನು ಇಲ್ಲಿ ಪ್ರಸ್ತಾಪ ಮಾಡುವುದು ಸೂಕ್ತ.

ಸಮಾಜದಲ್ಲಿ ಹಿಂದೆ ಧರ್ಮ ಒದಗಿಸಿದ್ದ ಸಾಮಾಜಿಕ ಜವಾಬ್ದಾರಿ, ಸ್ವಾತಂತ್ರೋತ್ತರ ಭಾರತದಲ್ಲಿ ಸಂವಿಧಾನ ನ್ಯಾಯ ಮತ್ತು ಆಡಳಿತ ವ್ಯವಸ್ಥೆಗೆ ಹಸ್ತಾಂತರಗೊಂಡಿದೆ. ಹಲವು ಧರ್ಮಗಳನ್ನು ಒಳಗೊಂಡ ಭಾರತ ಗಣರಾಜ್ಯವಾಗಿ ಹಿಂದೂಸ್ಥಾನವೆಂಬ ಪರಿಕಲ್ಪನೆ ಪಕ್ಕಕ್ಕೆ ಸರಿದು ಸರ್ವಧರ್ಮ ಸಮನ್ವಯದ ಭಾರತವಾಗಿ ರೂಪುಗೊಂಡಿದ್ದು, ಬ್ರಿಟಿಷ್ ಆಳ್ವಿಕೆಯಲ್ಲಿ ಉದ್ಭವಿಸಿದ ರಾಷ್ಟ್ರಪ್ರಜ್ಞೆ ಸ್ವಾತಂತ್ರ್ಯ ದೊರಕಿದ ನಂತರ ಸ್ವಲ್ಪ ತಣ್ಣಗಾದರೂ ಪಾಕಿಸ್ತಾನ ಮತ್ತು ಚೀನಾ ಜೊತೆ ನಡೆದ ಯುದ್ಧಗಳ ಸಮಯದಲ್ಲಿ ಮತ್ತೆ ಮತ್ತೆ ಜಾಗೃತಗೊಳ್ಳುತ್ತಿತ್ತು. ಸಾಮೂಹಿಕ ನೆಲೆಯಲ್ಲಿ ನಮಗೆಲ್ಲ ನಮ್ಮ ಧರ್ಮ ಪ್ರಜ್ಞೆಗಿಂತ ನಮ್ಮ ರಾಷ್ಟ್ರಪ್ರಜ್ಞೆ ಪ್ರಸ್ತುತವಾಗಿತ್ತು.

ಕಳೆದ ಎರಡು ದಶಕಗಳಲ್ಲಿ ಭಾರತ ಆರ್ಥಿಕವಾಗಿ ಮತ್ತು ವೈಜ್ಞಾನಿಕ, ತಾಂತ್ರಿಕ, ಕೈಗಾರಿಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿ ಅಭಿವೃದ್ಧಿಗೊಂಡಿರುವ ರಾಷ್ಟ್ರಗಳ ಮನ್ನಣೆ ಪಡೆದು ಮುಂದುವರಿದಿದೆ. ಎಲ್ಲರಲ್ಲೂ ಆತ್ಮವಿಶ್ವಾಸ ಹೆಚ್ಚಾಗಿದ್ದು ನಮ್ಮ ಹೆಮ್ಮೆ ಸಂತಸಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಇಂತಹ ಯಶಸ್ಸಿನಲ್ಲಿ ನಾವು ನಮ್ಮ ರಾಷ್ಟ್ರಪ್ರಜ್ಞೆಯನ್ನು ಎತ್ತಿಹಿಡಿಯಬೇಕೆ ಹೊರತು ಧರ್ಮಪ್ರಜ್ಞೆಯನ್ನಲ್ಲ. ಈ ಒಂದು ಯಶಸ್ಸಿನಲ್ಲಿ ಸಮಾಜದ ಎಲ್ಲ ಮತಧರ್ಮದವರು ಮತ್ತು ವರ್ಗದವರು ಭಾಗಿಯಾಗಿದ್ದಾರೆ ಎಂಬ ವಿಚಾರ ಅರಿಯಬೇಕಾಗಿದೆ. ಹೆಮ್ಮೆ ಹೆಮ್ಮೆಯಾಗಿ ಉಳಿಯಬೇಕು ಏಕೆಂದರೆ ಹೆಮ್ಮೆಗೂ ಗರ್ವಕ್ಕೂ ನಡುವೆ ಇರುವ ಅಂತರ ಒಂದು ಸಣ್ಣ ರೇಖೆಯಷ್ಟೇ. ಸ್ವಾಮಿ ವಿವೇಕಾನಂದರು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿ ನೂರಾ ಇಪ್ಪತ್ತೈದು ವರ್ಷಗಳು ಕಳೆದಿವೆ. ಅದನ್ನು ನಾವು ನೆನೆಸಿಕೊಂಡು ವಿಜೃಂಭಿಸುತ್ತಿರುವುದು ಸರಿಯೆ. ಭಾಷಣದ ಶುರುವಿನಲ್ಲಿ ಸ್ವಾಮೀಜಿಯವರು “ಅಮೇರಿಕಾದ ನನ್ನ ಸೋದರ ಸೋದರಿಯರೇ” ಎಂದು ಹೇಳುವ ಮಾತಿನಲ್ಲಿ ಅದೆಷ್ಟು ಸಮನ್ವಯತೆ (Inclusiveness) ಇದೆ ಎಂಬುದನ್ನು ಗಮನಿಸಬಹುದು. “ಅನ್ಯ ಧರ್ಮಗಳ ಅಸ್ತಿತ್ವದ ಅಂಗೀಕರಣ ಮತ್ತು ಸಮನ್ವಯತೆಯನ್ನು ಪ್ರಪಂಚಕ್ಕೆ ಯಾವ ಧರ್ಮ ತೋರಿದೆಯೋ ಆ ಧರ್ಮಕ್ಕೆ ಸೇರಿರುವ ಹೆಮ್ಮೆ ನನಗಿದೆ” ಎಂಬ ಸ್ವಾಮೀಜಿಯವರ ಹೇಳಿಕೆ ಅವರ ನಿಲುವನ್ನು ಸ್ಪಷ್ಟಪಡಿಸುತ್ತದೆ. ಆಗಿನ ಕಾಲಕ್ಕೆ ಅಂದರೆ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ರಾಷ್ಟ್ರಪ್ರಜ್ಞೆ ಮತ್ತು ಧರ್ಮಪ್ರಜ್ಞೆಗಳು ಒಂದೇ ಅಂಗಗಳಾಗಿದ್ದವು.

ಇತ್ತೀಚಿಗೆ ಜನಸಾಮಾನ್ಯರಲ್ಲಿ ತಮಗೆ ರಾಷ್ಟ್ರಪ್ರಜ್ಞೆ ಮುಖ್ಯವೋ ಅಥವಾ ಧರ್ಮಪ್ರಜ್ಞೆ ಮುಖ್ಯವೋ ಎಂಬ ವಿಚಾರದಲ್ಲಿ ಗೊಂದಲ ಅಥವಾ ಕನ್ಫ್ಯೂಷನ್ ಮೂಡಿದಂತಿದೆ. ನಮಗೆಲ್ಲಾ ಅಗತ್ಯವಾಗಿ ಬೇಕಾಗಿರುವುದು ರಾಷ್ಟ್ರಪ್ರಜ್ಞೆ. ಧರ್ಮದಲ್ಲಿ ನಂಬಿಕೆ ಮತ್ತು ಶ್ರದ್ಧೆ ಇರುವವರು ತಮ್ಮ ಧರ್ಮಪ್ರಜ್ಞೆಯನ್ನು ವೈಯುಕ್ತಿಕ ನೆಲೆಯಲ್ಲಿ ಉಳಿಸಿಕೊಂಡು ಬೆಳೆಸಿಕೊಳ್ಳುವುದು ಅವರವರ ಆಯ್ಕೆ. ಒಂದು ಬಹುಮುಖಿ ಸಂಸ್ಕೃತಿಯ ರಾಷ್ಟ್ರದಲ್ಲಿ ಒಬ್ಬ ವ್ಯಕ್ತಿಗೆ ಹಲವಾರು ಅಸ್ತಿತ್ವವುಂಟು; ಇವು ರಾಷ್ಟ್ರ ಪ್ರಜ್ಞೆ, ಧರ್ಮ ಪ್ರಜ್ಞೆ, ಭಾಷಾಪ್ರಜ್ಞೆ, ಸಾಂಸ್ಕೃತಿಕ ಪ್ರಜ್ಞೆ ಮತ್ತು ಜಾತಿಪ್ರಜ್ಞೆ. ಇಷ್ಟು ವಿಭಿನ್ನತೆಗಳಿದ್ದರೂ ನಮ್ಮನ್ನು ಒಂದುಗೂಡಿಸಿರುವ ಏಕೈಕ ಶಕ್ತಿ ನಮ್ಮ ರಾಷ್ಟ್ರಪ್ರಜ್ಞೆ ಎನ್ನಬಹುದು. ರಾಷ್ಟ್ರೀಯತೆ ಎಂಬ ಲಾಂಛನವನ್ನು ಹಿಡಿದು ನಮ್ಮ ನಿಜವಾದ ಸಮಸ್ಯೆಗಳಾದ ಸ್ವಾರ್ಥ, ಭ್ರಷ್ಟಾಚಾರ ಮತ್ತು ಪರಿಸರ ಮಾಲಿನ್ಯ ಇವುಗಳನ್ನು ಭಾರತೀಯರಾದ ನಾವೆಲ್ಲರೂ ಅದರಲ್ಲೂ ಮುಂದಿನ ಪೀಳಿಗೆಯಾದ ಯುವಕರು ಎದುರಿಸಬೇಕಾಗಿದೆ.

 

ಉಮಾ ವೆಂಕಟೇಶ್ ಬರೆವ ವಿಜ್ಞಾನ ಮತ್ತು ವನಿತೆಯರು ಸರಣಿ: ಲೀಸ ಮೈಟ್ನರ್

ಲೇಖಕರು: ಉಮಾ ವೆಂಕಟೇಶ್

ಉಮಾ ವೆಂಕಟೇಶ್, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆಯ ಸಂಸ್ಥಾಪಕರಲ್ಲಿ ಒಬ್ಬರು. `ಕನ್ನಡವೆನೆ ಕಿವಿ ನಿಮಿರುವುದು` ಎಂದು ಕವಿ ಇವರನ್ನೇ ನೋಡಿ ಬರೆದಿರಬೇಕು. ಕನ್ನಡದ ಸೇವೆಗೆ ಎಲ್ಲಿದ್ದರೂ ಹಾಜರು. ಕನ್ನಡ ಸಾಹಿತ್ಯ, ಅದರಲ್ಲೂ ವೈಜ್ಞಾನಿಕ ಸಾಹಿತ್ಯ ಇವರ ಮುಖ್ಯ ಆಸಕ್ತಿ. ಇಂಗ್ಲಂಡಿನಲ್ಲಿ ವಿಜ್ಞಾನಿ ಪತಿಯೊಡನೆ `ಅನಿವಾಸಿ` ಬಳಗದ ಪ್ರಮುಖ ಪ್ರೇರಕಶಕ್ತಿಯಾಗಿದ್ದವರು, ಈಗ ಅಮೇರಿಕದಲ್ಲಿ ನೆಲೆಸಿದ್ದಾರೆ. ಆದರೂ ನಮ್ಮ ನಂಟನ್ನು ಬಿಟ್ಟುಕೊಟ್ಟಿಲ್ಲ ಎನ್ನುವುದಕ್ಕೆ ಈ ಲೇಖನ ಬರೆದು ಕೊಟ್ಟಿದ್ದಾರೆ.

ನೋಬೆಲ್ ಪಾರಿತೋಷಕ ವಂಚಿತ ಅಪ್ರತಿಮ ಪ್ರತಿಭಾಶಾಲಿ ಮಹಿಳೆ: ಪರಮಾಣು ವಿದಳನದ ಪ್ರಥಮಾನ್ವೇಷಕಿ ಲೀಸ ಮೈಟ್ನರ್

“ವಿಜ್ಞಾನವು ಸಾಮಾನ್ಯ ಮಾನವರನ್ನು ಸತ್ಯ ಮತ್ತು ವಸ್ತುನಿಷ್ಠತೆಯತ್ತ ನಡೆಯಲು ಪ್ರೇರೇಪಿಸಿ, ವಾಸ್ತವತೆಯನ್ನು ಆಶ್ಚರ್ಯ ಮತ್ತು ಮೆಚ್ಚುಗೆಯೊಂದಿಗೆ ಸ್ವೀಕರಿಸುತ್ತಾ ಮುನ್ನಡೆಯುವುದನ್ನು ಕಲಿಸಿದರೆ, ವಸ್ತುಗಳ ನೈಸರ್ಗಿಕ ಕ್ರಮವು ವಿಜ್ಞಾನಿಗಳಲ್ಲಿ ವಿಸ್ಮಯ ಮತ್ತು ಅತ್ಯಾನಂದದ ಭಾವನೆಗಳನ್ನು ಉಕ್ಕಿಸುತ್ತದೆ”.

1940ನೆ ಇಸವಿಯ ಶರತ್ಕಾಲದಲ್ಲಿ, ದಕ್ಷಿಣ ಆಫ಼್ರಿಕಾದ ನವತರುಣಿಯೊಬ್ಬಳು, ತಾನು ವಿಜ್ಞಾನಿಯಾಗುವ ಆಕಾಂಕ್ಷೆಯ ಹೊಂದಿರುವೆ ಎಂದು ವಿವರಿಸಿ, ಅಂದಿನ ಪ್ರಖ್ಯಾತ ಭೌತಶಾಸ್ತ್ರಜ್ಞನೆನಿಸಿದ್ದ ಸರ್ವಕಾಲಿಕ ಮಹಾಮೇಧಾವಿ ಆಲ್ಬರ್ಟ್ ಐನಸ್ಟೈನನಿಗೆ ಪತ್ರವೊಂದನ್ನು ಬರೆದಿದ್ದಳು. ಆ ಪತ್ರವನ್ನು ಕೊನೆಗೊಳಿಸುವಾಗ ದೈನ್ಯಭಾವದಿಂದ, “ನಾನೊಬ್ಬಳು ಹುಡುಗಿಯೆಂದು ನನ್ನ ಬಗ್ಗೆ ತಪ್ಪಾಗಿ ತಿಳಿಯುವುದಿಲ್ಲ ಎಂದು ಭಾವಿಸುತ್ತೇನೆ,” ಎನ್ನುತ್ತಾ ಮುಗಿಸಿದ್ದಳು. ಅಂದು ಐನಸ್ಟೈನನು ಆಕೆಗೆ ಬರೆದ ಆಶ್ವಾಸನೆಯ ಉತ್ತರದಲ್ಲಿ, ಆತನ ಅಸಾಮಾನ್ಯ ಬುದ್ಧಿವಂತಿಗೆ ಮತ್ತು ಲೋಕಜ್ಞಾನಗಳನ್ನು ಪ್ರತಿಬಿಂಬಿಸುವ ಮಾತುಗಳು ಇಂದಿಗೂ ಅನುರುಣಿಸುತ್ತದೆ: “ನೀನು ಒಬ್ಬಳು ಹುಡುಗಿ ಎನ್ನುವ ವಿಷಯದ ಬಗ್ಗೆ ನನಗೇನೂ ಆಕ್ಷೇಪಣೆಯಿಲ್ಲ; ಆದರೆ ಮುಖ್ಯ ವಿಷಯವೆಂದರೆ ಆ ಅಂಶದ ಕಡೆಗೆ ನೀನೂ ಕೂಡಾ ಗಮನಕೊಡಬಾರದು, ಆ ರೀತಿಯ ಕೀಳುಭಾವನೆಗೆ ಇಲ್ಲಿ ಯಾವ ಕಾರಣಗಳೂ ಇಲ್ಲ,” ಎಂದು ಬರೆದಿದ್ದ ಅವನ ಮಾತುಗಳ ಹಿಂದೆ, ಮಹಿಳೆಯರ ಬಗ್ಗೆ ಅವನಿಗಿದ್ದ ಗೌರವ ಮತ್ತು ವಿಶಾಲ ಮನೋಭಾವನೆಗಳು ವ್ಯಕ್ತವಾಗುತ್ತವೆ. ಆದಾಗ್ಯೂ, ಇಂತಹ ತಾರ್ಕಿಕ ಸಮರ್ಥನೆಗಳ ಹಿಂದೆ ಯಾವಾಗಲೂ ವಿವೇಚನೆ, ವಿವೇಕಗಳು ಇರುತ್ತವೆ ಎಂದು ಹೇಳಲಾಗದು.

ವಿಜ್ಞಾನದ ಇತಿಹಾಸಗಳ ಪುಟಗಳು, ಸ್ವತಃ ಈ ಪ್ರಪಂಚದ ಇತಿಹಾಸದಂತೆ, ಅಸಂಬದ್ಧ ಹಾಗೂ ಅಸಮತೆಗಳಿಂದ ಸುತ್ತುವರಿದ ಅಧಿಕಾರ ಮತ್ತು ಪ್ರಭಾವಗಳಿಂದ ತುಂಬಿಹೋಗಿವೆ. ಈ ಅಧಿಕಾರದ ದಮನಕಾರಿ ಪರಿಣಾಮಗಳ ಕಾರಣದಿಂದಲೇ, ಕೇವಲ ಬೆರಳೆಣಿಸುವಷ್ಟು ಮಹಿಳೆಯರು ಮಾತ್ರ ಇಂತಹ ವಿಜ್ಞಾನ ಪ್ರಪಂಚದಲ್ಲಿ, ತಮ್ಮ ಬುದ್ಧಿಶಕ್ತಿ, ದೃಢತೆ ಮತ್ತು ಅಸಾಮಾನ್ಯ ಪ್ರತಿಭೆಗಳ ಫಲವಾಗಿ ಉತ್ತುಂಗಕ್ಕೇರಲು ಸಾಧ್ಯವಾಗಿದೆ. ಇಂತಹ ಅತ್ಯುತ್ತಮರ ಸಾಲಿಗೆ ಸೇರಿದ್ದರೂ ಕೂಡಾ, ತನ್ನ ಪ್ರತಿಭೆ ಮತ್ತು ಬುದ್ದಿಶಕ್ತಿಗಳಿ ತಕ್ಕಷ್ಟು ಕೀರ್ತಿಯನ್ನು ಪಡೆಯದಿದ್ದ ಪ್ರಥಮಾನ್ವೇಷಕಿ ಮಹಿಳೆಯೇ ಆಸ್ಟ್ರಿಯಾ ದೇಶದ ಭೌತಶಾಸ್ತ್ರಜ್ಞೆ, ಲೀಸ ಮೈಟ್ನರ್ (ನವೆಂಬರ್ ೭, ೧೮೭೮-ಅಕ್ಟೋಬರ್ ೨೭, ೧೯೬೮). ಪರಮಾಣು ವಿದಳನ ಸಂಶೋಧನೆಯ (Atomic Fission) ತಂಡದ ನಾಯಕತ್ವ ವಹಿಸಿದ್ದ ಈಕೆಯನ್ನು, ಇದರ ಅನ್ವೇಷಣೆಯ ಸಲುವಾಗಿ ನೀಡಿದ ನೋಬೆಲ್ ಪಾರಿತೋಷಕದ ಹೆಸರಿನ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಸಣ್ಣ ಆಕೃತಿಯ ಈ ಯಹುದಿ ಮಹಿಳೆಯು, ಹಿಟ್ಲರನ ಸರ್ವಾಧಿಕಾರದಿಂದ ಪಾರಾಗಿ ತನ್ನ ಜೀವವನ್ನುಳಿಸಿಕೊಳ್ಳುವ ಸಲುವಾಗಿ, ತನ್ನ ದೇಶವನ್ನು ತೊರೆದಿದ್ದಳು. ಇವಳ ಬುದ್ದಿಮತ್ತೆ ಮತ್ತು ಸಾಹಸಗಳನ್ನು ಮೆಚ್ಚಿದ್ದ ಅಂದಿನ ಮಹಾಮೇಧಾವಿ ಐನಸ್ಟೈನ್, ಈಕೆಯನ್ನು “ಜರ್ಮನ್ ಭಾಷೆಯನ್ನಾಡುವ ನಮ್ಮ ಕಾಲದ ಮೇರಿ ಕ್ಯೂರಿ” ಎಂದು ಕೊಂಡಾಡಿದ್ದನು.

ಆಸ್ಟ್ರಿಯಾ ದೇಶದ, ವಿಯನ್ನಾ ನಗರದಲ್ಲಿ ಜನ್ಮತಳೆದ ಈಕೆ, ಸಣ್ಣ ವಯಸ್ಸಿನಲ್ಲೇ ಗಣಿತಶಾಸ್ತ್ರದಲ್ಲಿ ತನ್ನ ಪ್ರತಿಭೆಯನ್ನು ತೋರಿದ್ದಳು. ೧೯ನೆಯ ಶತಮಾನದ ಯೂರೋಪಿನಲ್ಲಿ, ಮಹಿಳೆಯರ ಕೌಶಲ್ಯ ಮತ್ತು ಬುದ್ದಿಮತ್ತೆಗಳಿಗೆ ಅಷ್ಟೇನೂ ಅವಕಾಶ ಮತ್ತು ಪ್ರಶಂಸೆಗಳು ದೊರಕುತ್ತಿರಲಿಲ್ಲ. ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿ ವಿಯನ್ನಾದಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದ ಆಕೆಗೆ, ಹಲವು ವರ್ಷಗಳ ನಂತರ, ವಿಶ್ವವಿದ್ಯಾಲಯಗಳು ಮಹಿಳೆಯರನ್ನು ಸೇರಿಸಿಕೊಳ್ಳಲು ಪ್ರಾರಂಭಿಸಿದ ಮೇಲೆ, ಭೌತಶಾಸ್ತ್ರದ ಪದವಿಯಲ್ಲಿ ಅಧ್ಯಯನ ಮಾಡಲು ಅವಕಾಶ ಸಿಕ್ಕಿತು. ಭೌತಶಾಸ್ತ್ರದಲ್ಲಿ ತನ್ನ ಭವಿಶ್ಯವನ್ನು ಹುಡುಕುತ್ತಾ, ಬರ್ಲಿನ್ ನಗರಕ್ಕೆ ಹೋದ ಮೈಟ್ನರಳಿಗೆ, ಅದೃಷ್ಟವಶಾತ್ ಪ್ರಸಿದ್ಧ ವಿಜ್ಞಾನಿ ಮ್ಯಾಕ್ಸ್ ಪ್ಲಾಂಕ್ ಅಂತಹ ಒಬ್ಬ ಸ್ನೇಹಿತ ಮತ್ತು ಓಟ್ಟೋ ಹಾನ್ ಎನ್ನುವ ಒಬ್ಬ ರಸಾಯನಶಾಸ್ತ್ರಜ್ಞನು ಸಹಭಾಗಿಯ ರೂಪದಲ್ಲಿ ದೊರಕಿದರು. ಅವರಿಬ್ಬರೂ ವಿಕಿರಣಶೀಲತೆಯ ಸಂಶೋಧನೆಯಲ್ಲಿ ಸಾಕಷ್ಟು ಹೆಸರನ್ನೂ ಗಳಿಸಿದ್ದರು.

೧೯೨೦ರ ದಶಕದಲ್ಲಿ, ಮೈಟ್ನರ್, ತಾನೆ ಸ್ವತಂತ್ರವಾಗಿ ಪರಮಾಣು ಭೌತಶಾಸ್ತ್ರದ ಸಂಶೋಧನೆಯನ್ನು ಪ್ರಾರಂಭಿಸಿ, ಆಗ ತಾನೆ ಮೊಳೆಯುತ್ತಿದ್ದ ಆ ಕ್ಷೇತ್ರದಲ್ಲಿ ತಾನೇ ಪ್ರಥಮಾನ್ವೇಷಕಿ ಎನ್ನುವ ಖ್ಯಾತಿಯನ್ನೂ ಪಡೆದಿದ್ದಳು. ಬರ್ಲಿನ್ ನಗರದ ಭೌತಶಾಸ್ತ್ರ ವಲಯದಲ್ಲಿ, ಐನಸ್ಟೈನನು ಆಕೆಯನ್ನು ಮೇರಿ ಕ್ಯೂರಿಗೆ ಹೋಲಿಸಿ ಪ್ರಶಂಸಿಸಿದ್ದ ಕಾರಣ, ಅಂದಿನ ಭೌತಶಾಸ್ತ್ರಜ್ಞರು ಆಕೆಯನ್ನು ಆ ದಿನಗಳ ಅತ್ಯುತ್ತಮ ಪ್ರಾಯೋಗಿಕ ವಿಜ್ಞಾನಿಯೆಂದು ಪರಿಗಣಿಸಿದ್ದರು. ಬಹಳ ನಾಚಿಕೆಯ ಸ್ವಭಾವದವಳಾಗಿದ್ದ ಆಕೆ, ಆತ್ಮವಿಶ್ವಾಸ ತುಂಬಿದ, ದೃಢಮನೋಭಾವದ ಪ್ರಾಧ್ಯಾಪಕಳಾಗಿ ಹೆಸರು ಗಳಿಸಿದ್ದಳು. ಅವಳ ಸೋದರ ಸಂಬಂಧಿಕರು ಅವಳನ್ನು, “ಕುಳ್ಳಕಾಯದ, ಶ್ಯಾಮಲವರ್ಣದ, ಬಲುಜೋರಿನ ಹೆಂಗಸು” ಎಂದು ಕುಚೋದ್ಯ ಮಾಡುತ್ತಿದ್ದರು. ಆದಾಗ್ಯೂ, ಅನೇಕ ಬಾರಿ ಆಕೆಯನ್ನು ಒಂದು ರೀತಿಯ ಅಸ್ಥಿರ ಮನೋಭಾವ ಕಾಡುತ್ತಿದ್ದು, ಆಕೆ ಜೀವನದಲ್ಲಿ ಮದುವೆಯಾಗಲಿಲ್ಲ, ಯಾವ ಪುರುಷನೊಡನೆಯೂ ಗಂಭೀರವಾದ ಪ್ರಣಯ ಸಂಬಂಧವನ್ನು ಬೆಳಸಲೇ ಇಲ್ಲ. ಆದರೂ ಕೂಡಾ, ಆಕೆಯ ಜೀವನ ಒಂದು ರೀತಿಯಲ್ಲಿ ಸಂಪೂರ್ಣವೆನಿಸಿದ್ದು, ಒಬ್ಬ ನಿಷ್ಠಾವಂತ ಸ್ನೇಹಿತೆಯೆನಿಸಿದ್ದ ಆಕೆಯ ಸುತ್ತಾ ಸದಾಕಾಲ “ಮಹಾನ್ ಮತ್ತು ಪ್ರೀತಿಯುಳ್ಳ ಜನರು ಇರುತ್ತಿದ್ದರು”. ಇಂತಹ ವ್ಯಕ್ತಿಗಳ ನಡುವೆ ಶೋಭಿಸುತ್ತಿದ್ದ ಲೀಸ ಮೈಟ್ನರ್ ತನ್ನ ಜೀವನವನ್ನು ವಿಜ್ಞಾನಕ್ಕೆ ಮುಡಿಪಾಗಿಟ್ಟಿದ್ದಳು. ವಿಜ್ಞಾನದ ಗೀಳು ಅವಳನ್ನು ಅದೆಷ್ಟು ಮರುಳುಮಾಡಿತ್ತೆಂದರೆ, ಆಕೆ ತಾಳ್ಮೆಯಿಂದ ಎಲ್ಲವನ್ನೂ ಎದುರಿಸುತ್ತಾ, ಸಕಲ ಅಡಚಣೆಗಳನ್ನೂ ಮೀರಿ, ವಿಜ್ಞಾನದೊಂದಿಗೆ ತನಗಿದ್ದ ಅನುರಕ್ತತೆಯನ್ನು ಬೆಳೆಸುತ್ತಾ ಮುನ್ನಡೆದಿದ್ದಳು. ೧೯೦೫ನೆಯ ಇಸವಿಯಲ್ಲಿ, ಆಸ್ಟ್ರಿಯಾ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದ ಮೈಟ್ನರ್, ಅಂದಿನ ಕಾಲಕ್ಕೆ ಅಂತಹ ಸಾಧನೆಯನ್ನು ಮಾಡಿದ್ದ ಬೆರಳೆನಿಸುವಷ್ಟು ಮಹಿಳೆಯರಲ್ಲಿ ಒಬ್ಬಳಾಗಿದ್ದಳು.

೨೯ ವಯಸ್ಸಿನ ಮೈಟ್ನರ್, ಬರ್ಲಿನ್ ನಗರಕ್ಕೆ ಬಂದಾಗ, ಜರ್ಮನಿಯ ವಿಶ್ವವಿದ್ಯಾಲಯಗಳು ಮಹಿಳೆಯರನ್ನು ಇನ್ನೂ ಒಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಹಾಗಾಗಿ, ಮ್ಯಾಕ್ಸ್ ಪ್ಲಾಂಕನ ಉಪನ್ಯಾಸಗಳಿಗೆ ಹಾಜರಾಗಲು, ಮೈಟ್ನರ್ ವಿಶೇಷವಾದ ಅನುಮತಿಯನ್ನು ಪಡೆಯಬೇಕಾಗಿತ್ತು. ೧೯೦೭ರ ಶರತ್ಕಾಲದಲ್ಲಿ, ಅವಳು ತನ್ನಂತೆಯೇ ವಿಕಿರಣಶೀಲತೆಯಲ್ಲಿ ಆಸಕ್ತಿಯುಳ್ಳ, ತನಗಿಂತಲೂ ೪ ತಿಂಗಳು ಕಿರಿಯವನಾಗಿದ್ದ, ಓಟ್ಟೋ ಹಾನ್ (Otto Hahn), ಎನ್ನುವ ಜರ್ಮನ್ ರಸಾಯನಶಾಸ್ತ್ರಜ್ಞನನ್ನು ಭೇಟಿಯಾದಳು. ಆಗಿನ ಸಮಯಕ್ಕೆ ಹೊರತು ಎನ್ನುವಂತಹ ವಿಶಾಲಮನೋಭಾವನೆಯನ್ನು ಹೊಂದಿದ್ದ ಹಾನ್, ಮಹಿಳೆಯೊಂದಿಗೆ ಸಂಶೋಧನೆ ನಡೆಸಲು ಯಾವ ಅಭ್ಯಂತರವನ್ನು ಹೊಂದಿರಲಿಲ್ಲ. ಆದರೆ, ಅಂದು ಮಹಿಳೆಯರಿಗೆ ಬರ್ಲಿನ್ ರಾಸಾಯನಿಕ ಪ್ರಯೋಗಾಲಯ ಸಂಸ್ಥೆಯಲ್ಲಿ ಒಳಗೆ ಪ್ರವೇಶಿಸಲು ಅನುಮತಿಯಿರಲಿಲ್ಲ. ಹಾಗಾಗಿ, ಮೈಟ್ನರ್ ಮತ್ತು ಹಾನ್, ಸಂಶೋಧನೆಯಲ್ಲಿ ಸಹಭಾಗಿತ್ವ ನಡೆಸಲು, ಅಲ್ಲಿನ ಮರಗೆಲಸದ ಅಂಗಡಿಯೊಂದರ ನೆಲಮಾಳಿಗೆಯನ್ನು ಪ್ರಯೋಗಾಲಯವಾಗಿ ಪರಿವರ್ತಿಸಿದ್ದ ಸ್ಥಳದಲ್ಲಿ ತಮ್ಮ ಪ್ರಯೋಗಗಳನ್ನು ನಡೆಸಬೇಕಾಗಿತ್ತು. “ಜೀವನದಲ್ಲಿ ಅಂದು ಮೆಟ್ಟಿಲುಗಳನ್ನು ಹತ್ತಿ ಮೇಲಕ್ಕೇರುವ ಅವಕಾಶ ಮತ್ತು ಅನುಮತಿಗಳು, ಕೇವಲ ಹಾನನಿಗೆ ಇತ್ತೇ ಹೊರತು, ಲೇಸ ಮೈಟ್ನರಳಿಗೆ ಇರಲಿಲ್ಲ”. ಇಂತಹ ಕಠೋರವಾದ ವಾಸ್ತವತೆ ರೂಪಕೋಕ್ತಿಯ ಪರಮಾವಧಿಯನ್ನೇ ಮೀರಿಸುವಂತಿತ್ತು.

ಈ ಇಬ್ಬರು ವಿಜ್ಞಾನಿಗಳ ನಡುವಿನ ಅಂತರವನ್ನು, ಅವರ ಅಭಿರುಚಿಗಳು ಮತ್ತು ವಿಜ್ಞಾನದ ಬಗ್ಗೆ ಅವರಿಗಿದ್ದ ಒಲವು ಕಡಿಮೆಮಾಡಿತ್ತು. ಭೌತಶಾಸ್ತ್ರದಲ್ಲಿ ಉತ್ತಮ ತರಬೇತಿ ಪಡೆದ ಮೈಟ್ನರ್, ಒಬ್ಬ ತಜ್ಞ ಗಣಿತಶಾಸ್ತ್ರಜ್ಞೆಯೂ ಆಗಿದ್ದಳು. ಹಾಗಾಗಿ, ಅವಳು ಕಲ್ಪನಾತ್ಮಕವಾಗಿ ಆಲೋಚಿಸುವ ಪ್ರತಿಭೆ ಇದ್ದು, ತನ್ನ ಕಲ್ಪನೆಗಳನ್ನು ಒರೆಹಚ್ಚಿನೋಡುವಂತಹ ಸೃಜನಶೀಲ ಪ್ರಯೋಗಗಳನ್ನು ಸರಾಗವಾಗಿ ವಿನ್ಯಾಸಮಾಡುವ ತಿಳುವಳಿಕೆ ಅವಳಲ್ಲಿತ್ತು. ರಸಾಯನಶಾಸ್ತ್ರದಲ್ಲಿ ಪಳಗಿದ್ದ ಹಾನನು, ಪ್ರಯೋಗಾಲಯದ ಅತಿಸೂಕ್ಷ್ಮ ಕಾರ್ಯಗಳಲ್ಲಿ ಶ್ರೇಷ್ಠತೆ ಉಳ್ಳವನಾಗಿದ್ದನು. ಸುಮಾರು ೩೦ ವರ್ಷಗಳ ಕಾಲ ಇವರಿಬ್ಬರೂ ಸಹಭಾಗಿತ್ವದಲ್ಲಿ ಕೆಲಸಮಾಡಿ, ವಿಕಿರಣಶೀಲತೆಯ ಸಂಶೋಧನಾ ಕಾರ್ಯದಲ್ಲಿ ಆದ್ಯಪ್ರವರ್ತಕ ವಿಜ್ಞಾನಿಗಳಾಗಿ ಕೀರ್ತಿಪಡೆದರು. ಅಂತಿಮವಾಗಿ ಮೈಟ್ನರ್, ಹಾನನಿಂದ ಮುಕ್ತಿಪಡೆದು, ೧೯೨೧ರಿಂದ, ೧೯೩೪ರ ನಡುವೆ, ತಾನೇ ಸ್ವತಂತ್ರವಾಗಿ ಸುಮಾರು ೫೬ ಸಂಶೋಧನಾ ಪ್ರಬಂಧಗಳನ್ನು ಬರೆದು ಪ್ರಕಟಿಸಿದ್ದಳು.

ಬರ್ಲಿನ್ನಿನಲ್ಲಿರುವ ಸ್ಮಾರಕ

ಈ ರೀತಿಯಲ್ಲಿ ಅವಳ ವೈಜ್ಞಾನಿಕ ವೃತ್ತಿಯು ಯಶಸ್ವಿಯಾಗಿ ಮುನ್ನಡೆದಿದ್ದ ಸಮಯದಲ್ಲೇ, ನಾಟ್ಝಿ ಜರ್ಮನರು, ಯೂರೋಪನ್ನು ಕಬಳಿಸಲು ಪ್ರಾರಂಭಿಸಿದ್ದರು. ಮೈಟ್ನರ್, ಹಾನ್ ಜೊತೆಗೆ ಕಾರ್ಯ ನಿರ್ವಹಿಸುತ್ತಿದ್ದ ಮೂರನೆಯ ಸಹಭಾಗಿ ವಿಜ್ಞಾನಿ, ಫ಼್ರಿಟ್ಝ್ ಸ್ಟ್ರಾಸ್ಮನ್ (Fritz Strassman), ಈ ನಾಟ್ಝಿಗಳ ಸಂಸ್ಥೆಯನ್ನು ಸೇರಲು ನಿರಾಕರಿಸಿ ಈಗಾಗಲೇ ತೊಂದರೆಯಲ್ಲಿ ಸಿಕ್ಕಿಕೊಂಡಿದ್ದನು. ೧೯೩೮ರಲ್ಲಿ ಈ ಮೂರು ಪ್ರತಿಭಾನ್ವಿತ ವಿಜ್ಞಾನಿಗಳು, ತಮ್ಮ ಅತ್ಯಂತ ಸೃಜನಶೀಲ ಪ್ರಯೋಗಗಳನ್ನು ನಡೆಸುತ್ತಿದ್ದಾಗಲೇ, ನಾಟ್ಝಿ ಸೇನೆಯವರು ಆಸ್ಟ್ರಿಯಾ ದೇಶವನ್ನು ಆಕ್ರಮಿಸಿಕೊಂಡರು. ಮೈಟ್ನರಳು ತನ್ನ ಯಹುದಿ ಪರಂಪರೆಯನ್ನು ಗೋಪ್ಯವಾಗಿಡಲು ನಿರಾಕರಿಸಿದಳು. ಆಗ ಅವಳ ಪಾಲಿಗೆ ಇದ್ದ ಒಂದೇ ಉಪಾಯವೆಂದರೆ, ಜರ್ಮನಿಯನ್ನು ತೊರೆದು ಬೇರೆ ದೇಶಕ್ಕೆ ಪಲಾಯನ ಮಾಡುವುದಾಗಿತ್ತು. ಆದರೆ ಅಷ್ಟು ಹೊತ್ತಿಗಾಗಲೇ, ನಾಟ್ಝಿ ಸರಕಾರವು, ಯಹುದಿ-ವಿರುದ್ಧವಾದ ಕಾನೂನನ್ನು ಜಾರಿಗೆ ತಂದು, ಜರ್ಮನಿಯಲ್ಲಿದ್ದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ದೇಶ ತೊರೆಯುವುದನ್ನು ಬಹಿಷ್ಕರಿಸಿದ್ದರು. ೧೯೩೮ರ ಜುಲೈ ೧೩ರಂದು, ಮೈಟ್ನರ್ ತನ್ನ ಸಹೋದ್ಯೋಗಿ ಹಾನ್ ಮತ್ತು ಇತರ ವಿಜ್ಞಾನಿ ಸ್ನೇಹಿತರ ಸಹಾಯದಿಂದ, ಕೂದಲೆಳೆಯಷ್ಟು ಅಂತರದಲ್ಲಿ ಉಪಾಯದಿಂದ ಜರ್ಮನಿಯ ಗಡಿಯನ್ನು ದಾಟಿ, ಹಾಲೆಂಡ್ ದೇಶಕ್ಕೆ ಹೊರಟುಹೋದಳು. ನಂತರ ಹಾಲೆಂಡಿನಿಂದಲೂ ಹೊರಟು, ಡೆನ್ಮಾರ್ಕ್ ದೇಶಕ್ಕೆ ವಲಸಿಗಳಾಗಿ ಪ್ರಯಾಣಮಾಡಿದಳು. ಅಲ್ಲಿ ತನ್ನ ಸ್ನೇಹಿತನಾಗಿದ್ದ ಪ್ರಸಿದ್ಧ ವಿಜ್ಞಾನಿ ನೀಲ್ಸ್ ಭೋರ್ ಕುಟುಂಬದೊಂದಿಗೆ ಸ್ವಲ್ಪಕಾಲ ವಾಸವಾಗಿದ್ದಳು. ಮುಂದೆ ಸ್ವೀಡನ್ನಿನ ನೋಬೆಲ್ ಭೌತಶಾಸ್ತ್ರ ಸಂಸ್ಥೆಯಲ್ಲಿ, ತನ್ನ ಖಾಯಂ ಆಗಿ ನೆಲಸಿದಳು.

ಅದೇ ರೀತಿಯಲ್ಲೇ, ಮೂರು ಶತಮಾನಗಳ ಹಿಂದೆ, ಗೆಲಿಲಿಯೋನಿಗೆ ವ್ಯಾಟಿಕನ್ ಚರ್ಚಿನ ಅಧಿಕಾರಿಗಳು ನೀಡಿದ ಕಿರುಕುಳವನ್ನು ಕಂಡಿದ್ದ ಡೆಸ್ಕಾರ್ಟೆಸನೂ ಸಹಾ, ಇದೇ ರೀತಿಯಲ್ಲೇ ಸ್ವೀಡನ್ನಿಗೆ ಪಲಾಯನಮಾಡಿದ್ದನಂತೆ! ಆ ವರ್ಷದ ನವೆಂಬರ್ ತಿಂಗಳಲ್ಲಿ, ಮೈಟ್ನರ್, ಹಾನ್ ಮತ್ತು ಸ್ಟ್ರಾಸ್ಮನ್ ಮೂವರೂ, ಗೋಪ್ಯವಾಗಿ ಕೋಪೆನಹೇಗಿನಲ್ಲಿ ಸಂಧಿಸಿ, ಹಾನ್ ಮತ್ತು ಸ್ಟ್ರಾಸ್ಮನ್ನರ ಪ್ರಯೋಗಗಳಲ್ಲಿ ದೊರೆತಿದ್ದ ಹಲವು ಅದ್ಭುತವಾದ ಫಲಿತಾಂಶಗಳನ್ನು ಚರ್ಚಿಸಿದರು. ಅವರ ಪ್ರಯೋಗಗಳಲ್ಲಿ, ಯುರೇನಿಯಮ್ ಪರಮಾಣುವಿನ ಬೀಜಕಣಕೇಂದ್ರವನ್ನು (Nucleus) (ಪರಮಾಣು ಸಂಖ್ಯೆ ೯೨), ಒಂದು ಒಂಟಿ ನ್ಯೂಟ್ರಾನ್ ಕಣದಿಂದ ಅಪ್ಪಳಿಸಿದಾಗ, ಅವರಿಗೆ ಪರಮಾಣು ಸಂಖ್ಯೆ ೮೮ರ ರೇಡಿಯಮ್ ಬೀಜಕಣಕೇಂದ್ರವು (Radium atomic number-88), ದೊರೆತಿತ್ತು. ಈ ಮಾಂತ್ರಿಕ ಪರಿವರ್ತನೆಯು ಅವರಿಗೆ ಭೌತಿಕವಾಗಿ ಅಸಾಧ್ಯವೆಂದು ತೋರಿತ್ತು. ಮಂದ ಗತಿಯಲ್ಲಿ ಚಲಿಸುವ, ಅಂತಹ ಒಂದು ಸಣ್ಣ ನ್ಯೂಟ್ರಾನ್ ಕಣವು, ಪರಮಾಣುವಿಂತಹ ದೃಢವಾದ ವಸ್ತುವನ್ನು ನುಚ್ಚುನೂರಾಗಿಸಿ, ಅದರ ಪರಮಾಣು ಸಂಖ್ಯೆಯನ್ನು ಕೆಳಕ್ಕಿಳಿಸಿ, ಅದರ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸಿ, ಅದನ್ನು ಒಂದು ಹೊಸ ಮೂಲಧಾತುವಿಗೆ ಬದಲಾಯಿಸುವ ಆ ಪ್ರಕ್ರಿಯೆಯು, ನಿಜಕ್ಕೂ ಒಂದು ಕಲ್ಪಿತ ಭ್ರಮಾಚಿತ್ರವೆನಿಸಿತ್ತು.

ಆ ಸಮಯದಲ್ಲಿ, ಮೈಟ್ನರ್ ಒಬ್ಬ ಅತ್ಯುತ್ತಮ ಭೌತಶಾಸ್ತ್ರಜ್ಞೆಯೆಂತಲೂ ಮತ್ತು ಹಾನನು ಒಬ್ಬ ಪ್ರಸಿದ್ಧ ರೇಡಿಯೋ-ರಸಾಯನಶಾಸ್ತ್ರಜ್ಞನೆನ್ನುವ ಪ್ರಖ್ಯಾತಿ ಪಡೆದಿದ್ದರು. ಮೈಟ್ನರ್ ಆಗ, ಆ ಪ್ರಯೋಗದ ರಾಸಾಯನಿಕ ಪ್ರಕ್ರಿಯೆಯು, ಭೌತಿಕವಾದ ಯಾವ ಆಧಾರದಿಂದಲೂ ಸಾಧ್ಯವಿಲ್ಲ, ಆದ್ದರಿಂದ ನೀನು ಮತ್ತೊಮ್ಮೆ ಈ ಪ್ರಯೋಗವನ್ನು ನಡೆಸು ಎಂದು ಸ್ಪಷ್ಟವಾಗಿ ಸಲಹೆ ನೀಡಿದಳು. ಈ ಅನಿರೀಕ್ಷಿತವಾದ ಫಲಿತಾಂಶಗಳಿಂದ ಸಂಪೂರ್ಣವಾಗಿ ದಿಗ್ಭ್ರಾಂತಳಾಗಿದ್ದ ಮೈಟ್ನರ್, ಇದರ ಬಗ್ಗೆ ತನ್ನ ಪರ್ಯಾಲೋಚನೆಯನ್ನು ಮುಂದುವರೆಸಿದಳು. ಕಡೆಗೆ ಕ್ರಿಸ್ಮಸ್ ಹಬ್ಬದಂದು ತನ್ನ ಸೋದರಳಿಯ ಮತ್ತು ಸಹಭಾಗಿ ರಾಬರ್ಟ್ ಫ಼್ರಿಷ್ ಜೊತೆಯಲ್ಲಿ ಹಿಮದ ಮೇಲೆ ನಡೆದಾಡುತ್ತಿದ್ದ ಸಮಯದಲ್ಲಿ ಅವಳಿಗೆ ಈ ಫಲಿತಾಂಶದ ಬಗ್ಗೆ ಸಾಕ್ಷಾತ್ಕಾರವಾಯಿತು. ಓಟ್ಟೋ ರಾಬರ್ಟ್ ಫ಼್ರಿಶ್, ತನ್ನ ಆತ್ಮಚರಿತ್ರೆಯಲ್ಲಿ ಆ ಘಟನೆಯ ಬಗ್ಗೆ ಬರೆಯುತ್ತಾ, ಯಾವ ರೀತಿಯಲ್ಲಿ ಮಹಿಳೆಯರು ವಿಜ್ಞಾನದಲ್ಲಿ ತಮ್ಮ ಪುರುಷ ಸಮಾನಸ್ಕಂದರಿಗಿಂತ ಪ್ರಗತಿ ಸಾಧಿಸುತ್ತಾರೆ ಎನ್ನುವ ಬಗ್ಗೆ, ಅನುದ್ದಿಶ್ಯವಾಗಿ ಒಂದು ಅತ್ಯಂತ ಪರಿಪೂರ್ಣವಾದ ರೂಪಕೋಕ್ತಿಯನ್ನು ನೀಡಿದ್ದಾನೆ: (“ನಾವು ಹಿಮದ ಮೇಲೆ ಹಾಗೇ ಅಡ್ಡಾಡುತ್ತಿದ್ದೆವು. ನಾನು ನೀರ್ಗಲ್ಲು-ಹಾವುಗೆಗಳನ್ನು ಧರಿಸಿದ್ದೆ, ಮೈಟ್ನರ್ ಕೇವಲ ತನ್ನ ಪಾದಗಳಲ್ಲಿಯೇ ಚಲಿಸುತ್ತಾ, ನಾನು ಹೀಗೆ ರಭಸವಾಗಿ ನಡೆದು ಮುಂದುವರೆಯುತ್ತೇನೆ ಎಂದಿದ್ದಳು”).

ತಮಗೆ ದೊರೆತಿದ್ದ ಅಸಂಬಂದ್ಧವಾದ ಫಲಿತಾಂಶಗಳನ್ನು ಪರಾಮರ್ಷಿಸುತ್ತಾ ಕಡೆಗೆ, ಮೈಟ್ನರ್ ಮತ್ತು ಫ಼್ರಿಶ್, ಆ ಪ್ರಕ್ರಿಯೆಯನ್ನು ಪರಮಾಣು ವಿದಳನವೆಂದು (Atomic Fission) ಕರೆಯಲು ತೀರ್ಮಾನಿಸಿದರು. ಆ ತಿಂಗಳ ಕೊನೆಯಲ್ಲಿ ಅವರು ಪ್ರಕಟಿಸಿದ ಪ್ರಬಂಧದ ೭ನೆಯ ಪ್ಯಾರಾದಲ್ಲಿ ಮೊದಲ ಬಾರಿಗೆ ಆ ಪದವನ್ನು ಬಳಸಿದ್ದರು. ಪರಮಾಣುವಿನ ನ್ಯೂಕ್ಲಿಯಸ್ ವಿಭಜನೆಯಾಗಿ, ಮತ್ತೊಂದು ನೂತನ ಮೂಲಧಾತುವಾಗಿ ಮಾರ್ಪಡುವ ವಿಚಾರವು ಅತ್ಯಂತ ತೀವ್ರವಾದ ಕಲ್ಪನೆಯಾಗಿತ್ತು. ಆ ಸಮಯಕ್ಕೆ ಆ ಚಿಂತನೆಯನ್ನು ಅರ್ಥಮಾಡಿಕೊಳ್ಳುವುದೇನೂ ಸುಲಭವಾದ ವಿಷಯವಾಗಿರಲಿಲ್ಲ. ಮೈಟ್ನರ್ ಈ ಪ್ರಕ್ರಿಯೆ ಹೇಗೆ ಸಂಭವಿಸುತ್ತದೆ ಎನ್ನುವುದಕ್ಕೆ ಮೊಟ್ಟಮೊದಲಬಾರಿ ತಿಳುವಳಿಕೆಯನ್ನು ನೀಡಿದ್ದಳು. ಪರಮಾಣು ವಿದಳನವು, ಮಾನವಕುಲದ ಇತಿಹಾಸದಲ್ಲಿ ಕಂಡುಹಿಡಿದ ಅತ್ಯಂತ ಅಪಾಯಕಾರಿ ಮತ್ತು ಶಕ್ತಿಶಾಲಿ ಅನ್ವೇಷಣೆಯೆಂದು ಸಾಬೀತಾಗುವುದರಲ್ಲಿತ್ತು, ಅಷ್ಟೇ ಅಲ್ಲದೆ, ಈ ಶೋಧನೆಯು ಉತ್ತಮ ಮತ್ತು ದುಷ್ಟ ಕಾರ್ಯಗಳಿಗೆ ತುತ್ತಾಗಬಹುದಾದ ಮಾನವನ ಉಭಯ ಸಾಮರ್ಥ್ಯಗಳನ್ನು ಹೊರಗೆಡುಹಿತ್ತು. ಮಾನವನ ಇತಿಹಾಸದಲ್ಲಿ ತಯಾರಾದ ಮಾರಣಾಂತಿಕ ಅಸ್ತ್ರಕ್ಕೆ ಬಲವಾದ ಅಡಿಪಾಯವನ್ನು ಹಾಕಿತ್ತು.

ಮೈಟ್ನರಳ ಈ ಅನ್ವೇಷಣೆಯು ಕೇವಲ ವೈಜ್ಞಾನಿಕವಾದ ಹಿತಾಸಕ್ತಿಯನ್ನು ಹೊಂದಿತ್ತು. ಆದರೆ, ಅದರ ಬಳಕೆಯನ್ನು ಮುಂದೇ ಅನೇಕ ವರ್ಷಗಳ ನಂತರ, ಮಾನವನ ಸರ್ವನಾಶದ ಕಾರ್ಯಕ್ಕೆ ನಡೆಸಿದರೂ ಕೂಡಾ, ಸಮಾಜ ಮಾತ್ರ ಅವಳನ್ನು, “ಪರಮಾಣು-ಬಾಂಬಿನ ಯಹುದಿ-ಮಾತೆ,” ಎಂದು ಕ್ರೂರವಾಗಿ ಉಲ್ಲೇಖಿಸಿತ್ತು. ಒಮ್ಮೆ ತನ್ನ ಅನ್ವೇಷಣೆಯ ನಿಯಮವನ್ನು ನಾಶಕಾರಿ ಕಾರ್ಯಕ್ಕೆ ಬಳಸಿದ್ದನ್ನು ಕಂಡ ಲೀಸ್ ಮೈಟ್ನರ್, ಮುಂದೆ ಪರಮಾಣು ಬಾಂಬಿನ ಕಾರ್ಯದಲ್ಲಿ ತಾನು ಭಾಗಿಯಾಗುವುದಿಲ್ಲವೆಂದು ಬಹಳ ನಿಷ್ಠುರವಾಗಿ ನುಡಿದು ಅದರಿಂದ ತನ್ನನ್ನು ದೂರವಿರಿಸಿಕೊಂಡಿದ್ದಳು. ಪ್ರಪಂಚದಲ್ಲಿ ಉಳಿದವರಂತೆ, ಅವಳೂ ಕೂಡಾ “ಪರಮಾಣು ಬಾಂಬಿನ ಪ್ರಯೋಗವು” ಮಾನವಕುಲದ ಇತಿಹಾಸದಲ್ಲಿ ಸಂಭವಿಸಿದ ಒಂದು ಚಿಂತಾಜನಕವಾದ ತಿರುವೆಂದು ಭಾವಿಸಿದ್ದಳು. ಮುಂದೆ ಅನೇಕ ವರ್ಷಗಳ ನಂತರ, ಈ ಮಹತ್ತರ ವೈಜ್ಞಾನಿಕ ಬೆಳವಣಿಗೆಯ ಮೂಲಕ, ಈ ಕಾಲಮಾನದ ಅಂತ್ಯವಾದ ಬಗ್ಗೆ ಕಹಿ-ಸಿಹಿ ಮಿಶ್ರಭಾವನೆಗಳ ವಿಷಾದವನ್ನು ವ್ಯಕ್ತಪಡಿಸಿದ್ದಳು. ಅವಳ ಸಂದೇಶದಲ್ಲಿ “ಮಹತ್ತರವಾದ ಸುಂದರ ವೈಜ್ಞಾನಿಕ ಅನ್ವೇಷಣೆಯ ದುರುಪಯೋಗವಾಗಿ, ಅದರಿಂದ ಭವಿಶ್ಯದಲ್ಲಿ ಮಾನವ ಪೀಳಿಗೆಯು ಹೆದರಿಕೆಯ ನೆರಳಿನಲ್ಲಿ ಜೀವಿಸುವಂತಾಗಬಾರದು”, ಎನ್ನುವ ಸಮ್ಮಿಶ್ರ ಭಾವನೆಗಳನ್ನು ವ್ಯಕ್ತಪಡಿಸಿದ್ದಳು.

ಪರಮಾಣು ವಿದಳನದ ಅವಿಷ್ಕಾರವು, ಮಾನವ ಸಂಶೋಧನೆಯ ಒಂದು ಸುಂದರವಾದ ಉದಾಹರಣೆಯಾಗಿದೆ. ಪ್ರಕೃತಿಯ ರಹಸ್ಯಗಳನ್ನು ಬೇಧಿಸುವಲ್ಲಿ ಮಾನವ ಗಳಿಸಿದ ಜಯಕ್ಕೆ ಹಾಗೂ ಸೃಜನಾತ್ಮಕ ಕ್ರಿಯೆಯ ವ್ಯಾಖ್ಯಾನಕ್ಕೆ ಒಂದು ಉತ್ತಮವಾದ ಪುರಾವೆಯಾಗಿದೆ. ಹಾನನ ಅಸಂಬದ್ಧವಾದ ಪ್ರಾಯೋಗಿಕ ಫಲಿತಾಂಶಗಳಿಗೆ, ಅರ್ಥವತ್ತಾದ ವಿವರಣೆ ನೀಡಿ, ಆ ಫಲಿತಾಂಶಗಳಲ್ಲಿ ಅಡಗಿದ್ದ, ಮಹೋನ್ನತವಾದ ತೊಡಕಿನ ತತ್ವವನ್ನು ಅನ್ವೇಷಿಸಿದ್ದ ಲೀಸ್ ಮೈಟ್ನರಳ ಅಭೂತಪೂರ್ವ ಒಳನೋಟದ ಫಲಿತಾಂಶವನ್ನು ಕದ್ದು ಪಲಾಯನ ಮಾಡಿದ ಹಾನನು, ಅವಳ ಹೆಸರನ್ನು ಉಲ್ಲೇಖಿಸದೆ, ಸಂಶೋಧನ ಪ್ರಬಂಧವನ್ನು ತನ್ನ ಹೆಸರಿನಲ್ಲಿ ಮಾತ್ರಾ ಪ್ರಕಟಿಸಿದನು. ವಯಕ್ತಿಕ ಮಾತ್ಸರ್ಯ ಮತ್ತು ರಾಜಕೀಯ ಹೇಡಿತನದ ವಿಶ್ವಾಸಘಾತ ಕೃತ್ಯವು ಮೈಟ್ನರಳ ಮನಸ್ಸಿಗೆ ಬಹಳ ಆಳವಾದ ಆಘಾತವನ್ನುಂಟು ಮಾಡಿತು. ಇದರ ಬಗ್ಗೆ ತನ್ನ ಸೋದರ ವಾಲ್ಟರನಿಗೆ ಪತ್ರದಲ್ಲಿ, “ನಮ್ಮ ಸಹಭಾಗಿತ್ವದಲ್ಲಿ ನಡೇದ ಸಂಶೋಧನೆಯ ಕಾರ್ಯ ಪ್ರಕಟವಾಗಿರುವುದು ನನಗೆ ಬಹಳ ಸಂತೋಷದ ವಿಷಯ. ಹಾನನಿಗೆ ಸಿಕ್ಕ ಮನ್ನಣೆ ನನ್ನಲ್ಲಿ ಹೆಮ್ಮೆಯುಂಟು ಮಾಡಿದೆ. ಆದರೆ ಈ ಕಾರ್ಯದಲ್ಲಿ ನನ್ನ ವೈಜ್ಞಾನಿಕ ಕೊಡುಗೆಗೆ ಯಾವ ಮನ್ನಣೆ ಗೌರವಗಳನ್ನು ನೀಡದ ಅವನ ಬಗ್ಗೆ ನನ್ನ ಮನದಲ್ಲಿ ಅಸಹ್ಯವಾದ ಭಾವನೆ ಮೂಡಿದೆ ಮತ್ತು ನನ್ನ ಆತ್ಮವಿಶ್ವಾಸ ಸಂಪೂರ್ಣವಾಗಿ ಕುಂದಿಹೋಗಿದೆ”, ಎಂದು ಬರೆದಿದ್ದಳು.

೧೯೪೪ರಲ್ಲಿ, ಪರಮಾಣು ವಿದಳನದ ಅವಿಷ್ಕಾರಕ್ಕೆ, ಕೇವಲ ಹಾನನಿಗೆ ನೋಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ನಾಝಿ ಜರ್ಮನಿಯ ಆಳ್ವಿಕೆಯಲ್ಲಿ ನಡೆದ ಇಂತಹ ದುಷ್ಕೃತ್ಯಗಳು ಮತ್ತು ಅದರ ಪರಿಣಾಮಗಳನ್ನು ಹೇರಳವಾಗಿ ಕಾಣಬಹುದು. ವೈಜ್ಞಾನಿಕ ಗುಣಲಕ್ಷಣಗಳ ಯಾವುದೇ ಮಾನದಂಡದಿಂದ ಅಳೆದರೂ, ಪರಮಾಣು ವಿದಳನದ ಸಂಶೋಧನೆಯಲ್ಲಿ, ಲೀಸ್ ಮೈಟ್ನರಳು ವಹಿಸಿದ ಪಾತ್ರ ಮತ್ತು ಕೊಡುಗೆಯ ಬಗ್ಗೆ ಯಾವುದೇ ಸಂದೇಹವಿರಲಿಲ್ಲ. ಪ್ರಕಟಿತ ದಾಖಲೆಗಳು ಮತ್ತು ವೈಯಕ್ತಿಕ ಪತ್ರವ್ಯವಹಾರಗಳನ್ನು ನೋಡಿದರೆ, ಲೀಸ್ ಮೈಟ್ನರಳು ಈ ಸಂಶೋಧನೆಯ ಎಲ್ಲಾ ಹಂತಗಳಲ್ಲೂ ಪ್ರಮುಖವಾದ ಪಾತ್ರ ವಹಿಸಿದ್ದಳೆಂಬುದು ಸ್ಪಷ್ಟವಾಗಿದೆ. ಮೈಟ್ನರಳು ನಾಝಿ ಜರ್ಮನಿಯಿಂದ ಬಲಾತ್ಕಾರವಾದ ಪಲಾಯನವಿಲ್ಲದಿದ್ದರೆ, ಅವಳ ಕೊಡುಗೆಯನ್ನು ಇಷ್ಟೊಂದು ಸುಲಭವಾಗಿ ಅಲಕ್ಷಿಸಲು ಸಾಧ್ಯವಿರಲಿಲ್ಲ. ಯಾವ ರಾಜಕೀಯ ವ್ಯವಸ್ಥೆಗಳು, ಮೈಟ್ನರಳನ್ನು ಜರ್ಮನಿಯಿಂದ ಓಡಿಹೋಗುವಂತೆ ಒತ್ತಾಯಿಸಿದವೋ, ಅದೇ ವರ್ಣನೀತಿಗಳು, ಹಾನ್ ಮತ್ತು ಸ್ಟ್ರಾಸ್ಮನ್ನಿನ ಸಂಶೋಧನೆಯ ಸಹಭಾಗಿತ್ವದ ಪ್ರಕಟಿತ ಪ್ರಬಂಧದಲ್ಲೂ ಅವಳ ಕೊಡುಗೆಯನ್ನು ಸಂಪೂರ್ಣವಾಗಿ ಅಳಿಸಿಹಾಕಿತ್ತು. ಈ ಅವಿಷ್ಕಾರ ನಡೆದ ಹಲವು ವಾರಗಳಲ್ಲೇ, ಹಾನನು ಈ ಸಂಶೋಧನೆಯ ಮೇಲೆ ತನ್ನ ಹಕ್ಕನ್ನು ಸ್ಥಾಪಿಸಿದನಲ್ಲದೇ, ಅದನ್ನು ಕೇವಲ ರಸಾಯನಶಾಸ್ತ್ರದ ಅವಿಷ್ಕಾರವೆಂದು ಘೋಷಿಸಿಕೊಂಡಿದ್ದನು. ಹ್ಯಾನ್ಸನ ಈ ಅಪ್ರಾಮಾಣಿಕತೆಯು ಈ ಅವಿಷ್ಕಾರದ ದಾಖಲೆಯನ್ನು ವಿರೂಪಗೊಳಿಸಿತಲ್ಲದೇ, ಇತಿಹಾಸದಲ್ಲಿ ಲೀಸ್ ಮೈಟ್ನರಳ ಹೆಸರು ಮತ್ತು ಸ್ಥಾನವನ್ನು ಸಂಪೂರ್ಣವಾಗಿ ಅಳಿಸಿಹಾಕಿತು. ಮುಂದೆ ಮೈಟ್ನರ್ ಅನೇಕ ಪುರಸ್ಕಾರಗಳನ್ನು ಪಡೆದಳು; ಅವಳ ಮರಣಾಂನಂತರ ಮೈಟ್ನೀರಿಯಮ್ ಎನ್ನುವ ರಾಸಾಯನಿಕ ಧಾತುವನ್ನು ಅವಳ ಹೆಸರಿನಿಂದ ಕರೆದರು; ಆದರೂ, ಅವಳ ವೈಜ್ಞಾನಿಕ ವೃತ್ತಿಯಲ್ಲಿ ಸಾಧಿಸಿದ ಅದ್ಭುತವಾದ ಸಾಧನೆಯೊಂದಕ್ಕೆ ಅರ್ಹವಾದ ಮನ್ನಣೆ ದೊರಕಲಿಲ್ಲ. ಇಲ್ಲಿ ನೋಬೆಲ್ ಪುರಸ್ಕಾರ ಸಮಿತಿ ಮತ್ತೊಮ್ಮೆ ಎಡವಿತಲ್ಲದೇ, ಅರ್ಹವಾದ ಮಹಿಳೆಯ ಸಾಧನೆಯನ್ನು ಗುರ್ತಿಸಲಿಲ್ಲ. ತನ್ನ ವೈಜ್ಞಾನಿಕ ಶಿಕ್ಷಣವನ್ನು ಮುಂದುವರೆಸಲು ಪ್ರತಿಕೂಲವಾದ ಅಡಚಣೆಗಳನ್ನು ಎದುರಿಸಿದ್ದಳು; ನಾಝಿ ಶೋಷಣೆಯಲ್ಲಿ ಬದುಕುಳಿದಿದ್ದಳು; ದೇಶಭ್ರಷ್ಟತೆಯ ದುಃಖವನ್ನು ಅನುಭವಿಸಿದ್ದಳು; ಈ ಎಲ್ಲಾ ಅನ್ಯಾಯಗಳಿಗಿಂತಲೂ, ನೋಬೆಲ್ ಸಮಿತಿಯಿಂದಾದ ಅನ್ಯಾಯ ಆಕೆಯನ್ನು ಬಹಳವಾಗಿ ಕಾಡಿತ್ತು.

ಆಕೆ ತನ್ನ ಆತ್ಮಚರಿತ್ರೆಯನ್ನು ಬರೆಯಲಿಲ್ಲ; ಇತರರಿಗೆ ಬರೆಯುವ ಅಧಿಕಾರವನ್ನೂ ನೀಡಲಿಲ್ಲ; ತನ್ನ ಜೀವನದ ಹೋರಾಟದ ಬಗ್ಗೆ ಬಹಳ ಅಪರೂಪವಾಗಿ ಮಾತನಾಡಿದ್ದ ಆಕೆಯನ್ನು, ಇಳಿಯ ವಯಸ್ಸಿನಲ್ಲಿ ಅಭದ್ರತೆ ಮತ್ತು ಪ್ರತ್ಯೇಕತೆಗಳು ತೀವ್ರವಾಗಿ ಕಾಡಿದ್ದವು. ಒಬ್ಬ ಮಹಾನ್ ವಿಜ್ಞಾನಿಯಾಗಿದ್ದ ಲೀಸ್ ಮೈಟ್ನರ್, ತನ್ನ ಸಂಶೋಧನೆಯ ಎಲ್ಲಾ ವಿವರಗಳನ್ನು ಬಹಳ ನಿಖರವಾಗಿ ದಾಖಲಿಸಿದ್ದಳು. ಇಂತಹ ಶ್ರೀಮಂತವಾದ ಸಂಗ್ರಹದಿಂದ, ಆಕೆ ಜೀವನದಲ್ಲಿ ಎದುರಿಸಿದ ಅಸಾಧಾರಣವಾದ ಕಷ್ಟ-ನಷ್ಟಗಳ ಬಗ್ಗೆ ವಿವರಗಳು ದೊರಕಿವೆ. ನೋಬೆಲ್ ಸಮಿತಿಯ ಬಹಿಷ್ಕಾರವೊಂದೇ ಅಲ್ಲ, ಅವಳು ಬರ್ಲಿನ್ ಪ್ರಯೋಗಾಲಯದಲ್ಲಿ ಬಳಸಿದ್ದ ವಿದಳನ ಉಪಕರಣವನ್ನು ಮುಂದೆ ಬರ್ಲಿನ್ನಿನ ಮ್ಯೂಸಿಯಮ್ಮಿನಲ್ಲಿ ಇಟ್ಟಾಗಲೂ, ಸುಮಾರು ೩೫ ವರ್ಷಗಳ ಕಾಲ, ಅವಳ ಹೆಸರನ್ನು ಎಲ್ಲೂ ನಮೂದಿಸಿರಲಿಲ್ಲ.

ನೋಬೆಲ್ ಸಮಿತಿಯ ಈ ಲಿಂಗ ಬೇಧ ನೀತಿಯ ಅನ್ಯಾಯಕ್ಕೆ ಒಳಗಾದ ಮಹಿಳೆ ಕೇವಲ ಮೈಟ್ನರ್ ಒಬ್ಬಳೇ ಅಲ್ಲಾ, ಮುಂದೆ ೫೦ ಮತ್ತು ೬೦ರ ದಶಕದಲ್ಲಿ, ಡಾರ್ಕ್ ಮ್ಯಾಟರ್ ಅಸ್ತಿತ್ವವನ್ನು ದೃಢ ಪಡಿಸಿದ ವೆರಾ ರೂಬಿನ್, ಪಲ್ಸಾರ್ ಅನ್ವೇಷಣೆಯಲ್ಲಿ ನಿಖರವಾದ ಪಾತ್ರ ವಹಿಸಿದ ಜೋಸಲೀನ್ ಬೆಲ್ ಜೊತೆಗೂ ಇಂತಹುದೇ ರೀತಿಯಲ್ಲಿ ವರ್ತಿಸಿದ ನೋಬೆಲ್ ಸಮಿತಿ, ಇತಿಹಾಸದ ಪುಟಗಳಲ್ಲಿ ಕುರೂಪದ ದಾಖಲೆಯನ್ನು ಸೃಷ್ಟಿಸಿದರು. ಈ ಎಲ್ಲಾ ಸನ್ನಿವೇಶಗಳಲ್ಲೂ, ವೈಜ್ಞಾನಿಕ ಮನೋಭಾವನೆ ಮತ್ತು ನ್ಯಾಯದ ನೆರಳು ಕಾಣಸಿಗುವುದಿಲ್ಲ. ಜಾನಾ ಲೆವಿನ್, ಒಬ್ಬ ಭೌತಶಾಸ್ತ್ರಜ್ಞೆ ಮತ್ತು ಕಾದಂಬರಿ ಲೇಖಕಿ, ತಾನು ಬರೆದ ಅತ್ಯುತ್ತಮ ಪ್ರಬಂಧವೊಂದರಲ್ಲಿ, “ವಿಜ್ಞಾನಿಗಳು ತಮ್ಮ ಜೀವನವನ್ನೆಲ್ಲಾ ಬ್ರಹ್ಮಾಂಡದ ತನಿಖೆಯ ಸಂಶೋಧನೆಯಲ್ಲಿ ವಿನಿಯೋಗಿಸುವುದು, ಕೇವಲ ಒಂದು ಪ್ರಶಸ್ತಿಗಾಗಿ ಅಲ್ಲಾ, ಆದರೆ, ಮಹತ್ತರವಾದ ಅನ್ವೇಷಣೆಯೊಂದನ್ನು ನಡೆಸಿದಾಗ ಅದಕ್ಕೆ ನ್ಯಾಯವಾದ ಪುರಸ್ಕಾರ ಪಡೆಯುವುದು ಅವರ ಆಜನ್ಮಸಿದ್ಧ ಹಕ್ಕು; ಕೇವಲ ಮಹಿಳೆ ಎಂಬ ಕಾರಣದಿಂದಾಗಿ ಅದರಿಂದ ವಂಚಿತರಾಗುವುದು ಅತ್ಯಂತ ವಿಷಾದನೀಯ ಹಾಗೂ ಅವಮಾನಕರ ಸಂಗತಿ”, ಎಂದು ಬರೆಯುತ್ತಾಳೆ. ಏನಾದರೇನು, ಈ ೨೧ನೆಯ ಶತಮಾನದಲ್ಲೂ ಇನ್ನೂ ಮಹಿಳೆಯರ ವಿರುದ್ಧ ಇಂತಹ ದೌರ್ಜನ್ಯಗಳು ಅವ್ಯಾಹತವಾಗಿ ಜರಗುತ್ತಲೇ ಇವೆ. ಅದು ವಿಜ್ಞಾನವೊಂದೇ ಏನು, ಸಮಾಜದ ಎಲ್ಲಾ ರಂಗಗಳಲ್ಲೂ ಇಂದಿಗೂ ನಡೆಯುತ್ತಿರುವುದು ಮಾನವ ಸಂತತಿಗೆ ಅವಮಾನ!