ಇಂದಿನ ’’ಅನಿವಾಸಿ”ಯ ವಿಶೇಷಾಂಕದಲ್ಲಿ ನಾಳೆ ನೂರು ತುಂಬಲಿರುವ ’ಕ್ಯಾಪ್ಟನ್ ಟಾಮ್” ಎಂದೇ ಹೆಸರುವಾಸಿಯಾದ ಒಬ್ಬ ಯೋಧನ ಬಗ್ಗೆ ಡಾ ಮುರಳಿ ಹತ್ವಾರ್ ಅವರು ಬರೆದ ಲೇಖನವನ್ನು ಪ್ರಕಟಿಸುತ್ತಿದ್ದೇವೆ.
ವೈದ್ಯರಾದ ಮುರಳಿ ಹತ್ವಾರ್ ಅವರು”ಅನಿವಾಸಿ’ಗೆ ಚಿರಪರಿಚಿತ ಕವಿ-ಬರಹಗಾರರು. ಸದ್ಯ ಲಂಡನ್ನಿನ
ಮುರಳಿ ಹತ್ವಾರ್
ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿದ್ದಾರೆ. ಕೋವಿಡ್ ಸೋಂಕಿದ ರೋಗಿಗಳ ಶುಶ್ರೂಷೆಗೆ ಸನ್ನದ್ಧರಾದ ಸಾವಿರಾರು ನ್ಯಾಷನಲ್ ಹೆಲ್ಥ್ ಸರ್ವಿಸ್ ಸೇವಕರಲ್ಲೊಬ್ಬರು. ಇಲ್ಲಿ ತಮ್ಮ ಕೋವಿಡ್ ಡೈರಿಯ ಪುಟವನ್ನೊಂದು ತೆರೆದಿಟ್ಟಿದ್ದಾರೆ. (ಸಂ)
ಜಿಮ್ಮರ್ ಫ್ರೇಮ್. ಮನೆಯ ಹಿಂದಿನ ಮೂವತ್ತಡಿ ಜಾಗ. ೯೯ ವರ್ಷಗಳು ತುಂಬಿ ಈ ಏಪ್ರಿಲ್ ೩೦ಕ್ಕೆ ನೂರಕ್ಕೆ ಕಾಲಿಡಲು ಕಾತರವಾಗಿರುವ, ಬೆನ್ನು ಬಾಗಿರುವ ಹಳೆಯ ದೇಹ. ಆದರೂ, ಕೊರೊನ ಮಾರಿಗೆ ಹೋರಾಡುತ್ತಿರುವ ಆರೋಗ್ಯ ಸೇವಕರಿಗೆ ಏನಾದರೂ ಮಾಡಬೇಕೆಂಬ ಉತ್ಸಾಹದ ಹಂಬಲ. ಹೊರಟೇಬಿಟ್ಟರು ತಮ್ಮ ಜಿಮ್ಮರ್ ಫ್ರೇಮ್ ಹಿಡಿದು ಮನೆಯ ಹಿಂದಿನ ಮೂವತ್ತಡಿಯ ಜಾಗದಲ್ಲಿ, ನೂರು ತುಂಬುವ ಮುನ್ನ ೧೦೦ ಲ್ಯಾಪ್ ನಡೆಯುವ ಛಲದಲ್ಲಿ ಕ್ಯಾಪ್ಟನ್ ಟಾಮ್: ಬೆಂಬಲಿಸುವ ಜನರಿಂದ ಒಂದು ಸಾವಿರ ಪೌಂಡ್ ಹಣ ಕೂಡಿಸಿ ಇಂಗ್ಲೆಂಡಿನ ಆರೋಗ್ಯ ಸೇವೆಯ ಒಂದು ಚಾರಿಟಿಗೆ ಕೊಡುವ ಹಿರಿಯ ಉದ್ದೇಶದಿಂದ.
ಕ್ಯಾಪ್ಟನ್ ಟಾಮ್ ಮೂರ್, ಸಿವಿಲ್ ಇಂಜಿನಿಯರ್ ತರಬೇತಿ ಪಡೆದು, ಎರಡನೇ ಮಹಾಯುದ್ಧದಲ್ಲಿ ಸೈನಿಕರಾಗಿ ಭಾರತ ಮತ್ತು ಬರ್ಮಾದಲ್ಲಿ ಕೆಲಸ ಮಾಡಿದ್ದ ಯೋಧ. ಈಗ ಕುಟುಂಬದೊಡನೆ ವಿಶ್ರಾಂತ ಜೀವನ. ವಯಸ್ಸಿನ ಭಾರಕ್ಕೆ ದೇಹ ಕುಸಿದಿದ್ದರೂ, ಮನಸ್ಸಿನಲ್ಲಿ ಕುಂದದ ಉತ್ಸಾಹ. ಏಪ್ರಿಲ್ ೮ಕ್ಕೆ ಶುರು ಮಾಡಿದರು ತಮ್ಮ ೧೦೦ ಲ್ಯಾಪಿನ ನಡಿಗೆ. ಪ್ರತಿ ದಿನ ಆದಷ್ಟು ಲ್ಯಾಪ್ ಮುಗಿಸಿ ಏಪ್ರಿಲ್ ೩೦ರ ಒಳಗೆ ಗುರಿ ಮುಟ್ಟುವ ಧ್ಯೇಯದಲ್ಲಿ. ಅವರು ೧೦೦೦ ಪೌಂಡ್ ದುಡ್ಡು ಒಟ್ಟು ಮಾಡಲು ಅವರ ಮೊಮ್ಮಕ್ಕಳ ಸಹಾಯದಿಂದ ವೆಬ್ಬಿನಲ್ಲಿ ಹಂಚಿಕೊಂಡಿದ್ದ ಸುದ್ದಿ, ಎಲ್ಲೆಡೆ ವೈರಲ್ಲಾಗಿ ಹಬ್ಬಿ ಒಂದೇ ದಿನಕ್ಕೆ £೭೦೦೦೦ ಸೇರಿದ್ದರಿಂದ, ಅವರು ಒಂದು ಮಿಲಿಯನ್ ಪೌಂಡಿನ ಹೊಸ ಗುರಿಯ ಗೆರೆ ಹಾಕಿದರು.
ಈ ಸಮಯಕ್ಕೆ ಲಂಡನ್ನಿನ ಹೆಚ್ಚಿನ ಆಸ್ಪತ್ರೆಗಳ ಹೆಚ್ಚಿನ ವಾರ್ಡ್ಗಳು ಕೊರೋನ ಪೀಡಿತರಿಂದ ತುಂಬಿಕೊಂಡಿದ್ದವು. ವೈದ್ಯರೂ, ನರ್ಸ್ಗಳೂ ಮುಖಕ್ಕೊಂದು ಮಾಸ್ಕು, ಮೈಮೇಲೊಂದು ಏಪ್ರಾನ್ ಹಾಕಿಕೊಂಡು, ಕೊರೋನಾದ ಆತಂಕವನ್ನ ಅವುಗಳಲ್ಲಿ ಮುಚ್ಚಿಟ್ಟು ಎಂದಿನಂತೆ ತಮ್ಮ ಕೆಲಸ ಮಾಡುತ್ತಿದ್ದರು. ಅಂತಹ ಒಂದು ವಾರ್ಡಿನ ಒಂದು ಬೆಡ್ಡಿನ ಮೇಲೆ ಮೂಗಿನಲ್ಲೊಂದು ಆಕ್ಸಿಜೆನ್ ನಳಿಗೆ ಇಟ್ಟುಕೊಂಡು ಮಲಗಿದ್ದು ೯೯ ವರ್ಷದ ಬೆಟ್ಟಿ. ಆಕೆಯದೂ ಧೀರ್ಘ ಜೀವನ. ಹಿಂದೆ ಏನು ಮಾಡಿದ್ದಳು ಎನ್ನುವ ವಿವರಗಳೆಲ್ಲ ಎಲ್ಲ ಆಕೆಯ ನೆನಪಿನ ಜೊತೆಗೆ ಕೆಲವು ವರ್ಷಗಳ ಹಿಂದೆ ಮರೆಯಾಗಿದ್ದವು. ಆಕೆಯನ್ನು ನೋಡಿಕೊಳ್ಳುತ್ತಿದ್ದ ಆಕೆಯ ತಂಗಿಯ ನೆನಪೂ ಸ್ವಲ್ಪ ಮಸುಕೇ. ಕರೋನ ಮುಟ್ಟುವವರೆಗೆ ಬೆಟ್ಟಿ ಜಿಮ್ಮರ್ ಫ್ರೇಮ್ ಹಿಡಿದು ಮನೆಯಲ್ಲಿ ಅಷ್ಟೋ-ಇಷ್ಟೋ ಓಡಾಡಿಕೊಂಡಿದ್ದಾಕೆ
ಆಸ್ಪತ್ರೆಯವರ ಆರೈಕೆಯಲ್ಲಿ ಬೆಟ್ಟಿ ಒಂದಷ್ಟು ಸುಧಾರಿಸಿದರೂ, ಮತ್ತೆ ಮೊದಲಿನ ಚೇತನ ಇರಲಿಲ್ಲ. ಮೂರನೆಯ ದಿನಕ್ಕೆ ಆಕ್ಸಿಜನ್ ನಳಿಗೆಯ ಸಹಾಯವೂ ಆಕೆಗೆ ಬೇಕಾಗಿರಲಿಲ್ಲ. ಆದರೂ ಬೆಡ್ಡಿನಿಂದ ಎದ್ದು ಕುಳಿತುಕೊಳ್ಳುವಷ್ಟು ಬಲ ಮತ್ತೆ ಬರಲಿಲ್ಲ. ಮತ್ತೆ ಒಂದೆರಡು ದಿನಕ್ಕೆ ಊಟ, ನೀರು ಸೇವಿಸುವದೂ ಕಡಿಮೆಯಾಯಿತು. ೯೯ ವರ್ಷಗಳ ಸುದೀರ್ಘ ಜೀವನದ ದೇಹವನ್ನ, ಟ್ಯೂಬುಗಳ ಸರಪಳಿಯಲ್ಲಿ ದಂಡಿಸುವದು ಉಚಿತವಲ್ಲ ಎನ್ನುವ ನಿರ್ಧಾರಕ್ಕೆ ಆಕೆಯ ಆರೈಕೆ ಮಾಡುತ್ತಿದ್ದ ವೈದ್ಯರ, ನರ್ಸ್ಗಳ ತಂಡ ಒಮ್ಮತದ ತೀರ್ಮಾನಕ್ಕೆ ಬಂದು, ಕೊನೆಯ ದಿನಗಳ ಕರುಣೆಯ ಆರೈಕೆಗೆಂದು ಕರುಣಾಶ್ರಯ (ಹಾಸ್ಪಿಸ್) ಒಂದಕ್ಕೆ ಕಳಿಸಿ ಕೊಟ್ಟರು. ೯೯ ವರ್ಷದ ಧೀರ್ಘ ಯಾನದ ಬೆಟ್ಟಿಯ ಜೀವನ ಕೊರೋನಾದ ದೆಸೆಯಿಂದ ನೂರರ ಬಾಗಿಲು ಮುಟ್ಟುವ ಮುನ್ನವೇ ಕೊನೆಯಾಗಲಿದೆ.
ಆದರೆ, ಬೆಟ್ಟಿಯಂತೆ ಸಾವಿರಾರು ಕೊರೋನ ರೋಗಿಗಳಿಗೆ ಆರೈಕೆ ನೀಡುತ್ತಿರುವವರಿಗೆ ಬೆಂಬಲ ನೀಡಲು, ನೂರು ಲ್ಯಾಪ್ಗಳ ಮುಗಿಸುವ ಕ್ಯಾಪ್ಟನ್ ಟಾಮ್ ತಮ್ಮ ಯತ್ನದಲ್ಲಿ ಯಾವುದೇ ತಡೆಯಿಲ್ಲದೆ ಮುಂದುವರಿದಿದ್ದರು. ಅವರ ಹೆಸರು ಮತ್ತು ಪ್ರಯತ್ನ ಇಷ್ಟರಲ್ಲಿ ಜಗತ್ತನ್ನೆಲ್ಲ ಸುತ್ತಿತ್ತು. ಅವರ ಒಂದು ಮಿಲಿಯನ್ ಪೌಂಡಿನ ಗುರಿ ಮೀರಿ ದಾನಿಗಳ ಹಣದ ಗುಡ್ಡ ಬೆಳೆದಿತ್ತು. ಆ ಲೇಖನ ಬರೆಯುವ ಹೊತ್ತಿಗೆ ಅದು 29 ಮಿಲಿಯನ್ ಪೌಂಡ್ ದಾಟಿದೆ.
ಕ್ಯಾಪ್ಟನ್ ಟಾಮ್ ತಮ್ಮ ೧೦೦ ಲ್ಯಾಪ್ ಗಳನ್ನ ಯಶಸ್ವಿಯಾಗಿ ಏಪ್ರಿಲ್ ೧೬ಕ್ಕೆ ಮುಗಿಸಿದ್ದಾರೆ. ತಮಗೆ ಸಿಕ್ಕ ಹೊಸ ಪ್ರಚಾರದಲ್ಲಿ ಸ್ನೇಹ, ಸಹಾಯದ ಜೀವನ ನಡೆಸಿ ಎನ್ನುವ ಅನುಭವದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವೈದ್ಯರು, ನರ್ಸ್ಗಳು ಕೊರೋನ ವಿರುದ್ಧ ಹೋರಾಡುತ್ತಿರುವ ಸೈನಿಕರು ಎಂದು ಹುರಿದುಂಬಿಸುತ್ತಿದ್ದಾರೆ. ಅದಲ್ಲದೆ, ಕೊರೋನ ಯಾವತ್ತೂ ಇರುವ ಮಾರಿಯಲ್ಲ. ಹೋರಾಡಿ, ಜಯಿಸಿ ಬರುವ ಹೊಸ ನಾಳೆಗಳತ್ತ ಮುಖ ಮಾಡೋಣ ಎನ್ನುವ ಗುಣಾತ್ಮಕ ಸಂದೇಶದಲ್ಲಿ, ಎಲ್ಲರಲ್ಲಿ ಆಶಾವಾದದ ಉತ್ಸಾಹವನ್ನು ತುಂಬುತ್ತಿದ್ದಾರೆ.
No 1 Chart topper
ಅವರನ್ನು ಸೇರಿಸಿಕೊಂಡು ಮೈಕೆಲ್ ಬಾಲ್ ಎನ್ನುವ ಹಾಡುಗಾರ ಹಾಡಿದ ‘ಯೂ ವಿಲ್ ನಾಟ್ ವಾಕ್ ಅಲೋನ್’ ಹಾಡು ಈ ವಾರ ಯುಕೆಯ ಚಾರ್ಟ್ ಗಳಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ. ಅವರ ಅದ್ಭುತ ಯಶಸ್ಸಿನ ಒಳಿತನದ ಕಾರ್ಯಕ್ಕೆ ನೈಟ್ ಹುಡ್ ಯಾಕೆ ಕೊಡಬಾರದು ಎಂದು ಹೆಚ್ಚಿನ ಜನ ಒತ್ತಾಯ ಮಾಡುತ್ತಿದ್ದಾರೆ; ಸಿಕ್ಕರೆ ಸಾಮಾನ್ಯರೊಬ್ಬರ ಅಸಾಧಾರಣ ಸಾಧನೆಗೆ ಮತ್ತು ಒಳ್ಳೆಯ ಕೆಲಸಕ್ಕೆ ಕೈಗೂಡಿಸುವ ಜನರನ್ನು ಸನ್ಮಾನಿಸಿದ ಹಾಗೆ.
ಇನ್ನೇನು ನೂರರ ಗೆರೆ ದಾಟಲಿರುವ ನಮ್ಮ ಈ ಹೊಸ ಹೀರೋ ಕ್ಯಾಪ್ಟನ್ ಟಾಮ್, ಇನ್ನೆನ್ನೆಂದಿಗೂ ಇತಿಹಾಸದ ನೆನಪಿನ ಮೈದಾನದಲ್ಲಿ ನಾಟ್ ಔಟೇ!
ಈ ವಾರ ಅನಿವಾಸಿಯಲ್ಲಿ ಎರಡು ಲೇಖನಗಳು ಮತ್ತು ಕಣ್ಣೋಟ. ಮೊದಲಿಗೆ, ಕಳೆದ ಶನಿವಾರ ಲೆಸ್ಟರ್ ನಲ್ಲಿ ನಡೆದ ಯುಗಾದಿ ಕಾರ್ಯಕ್ರಮದ ಸಂಕ್ಷಿಪ್ತ ವರದಿ. ಎರಡನೆಯದು, ಯೋಗಿಂದ್ರ ಮರವಂತೆಯವರ ಲೇಖನ.
ಎಂದಿನಂತೆ, ಕಣ್ಣೋಟದಲ್ಲಿ ಎರಡು ಚಿತ್ರಗಳು – ಈ ವಾರದ ಚಿತ್ರಗಳು ಮ್ಯಾಂಚೆಸ್ಟರ್ ನ ಶಾಂತಲಾ ರಾವ್ ತಮ್ಮ ಮೊಬೈಲ್ ಫೋನಿನಲ್ಲಿ ಸೆರೆ ಹಿಡಿದವು. ಮೊಬೈಲ್ ತಂತ್ರ ಬೆಳೆದಂತೆ, ಅದರ ಕ್ಯಾಮೆರಾ ಶಕ್ತಿಯೂ ಬೆಳೆದಿದೆ. ಅದರ ಎರಡು ಉದಾಹರಣೆ ಶಾಂತಲಾ ಅವರ ಫೋಟೋಗಳು. ಅದಕ್ಕೆ ಪೂರಕವಾಗಿ, ಧಾರವಾಡದ ಕನ್ನಡದಲ್ಲಿ ಅವರೇ ಬರೆದ ಹಿನ್ನೆಲೆ ಮತ್ತು ಅವರ ಅನಿಸಿಕೆ.
ಸವಿಗಾನದ ರಸದೌತಣ
ಬಾಳೆಎಲೆ. ಅನ್ನದ ಮೇಲೆ ಬಿಸಿ ಸಾರು. ಆಚೆ ಈಚೆ ಕೋಸುಂಬರಿ, ಪಲ್ಯ, ಹೋಳಿಗೆ, ಹಯಗ್ರೀವ; ಪೂರಿಯ ಜೋಡಿ ಮಾವಿನ ಶೀಕರಣೆ. ಮತ್ತೆ-ಮತ್ತೆ ಕೇಳಿ ಬಡಿಸುವ ಉಪಚಾರ. ಇನ್ನೇನು ಬೇಕು ಹೇಳಿ? ಕೈಯಾಯ್ತು, ಬಾಯಾಯ್ತು. ಬಾಳೆಎಲೆ ಕೀಸಿ-ಕೀಸಿ ಉಂಡವರೇ ಎಲ್ಲ. ನಮ್ಮದು ನಾಲ್ಕನೇ ಪಂಕ್ತಿಯಾದರೂ ಉಪಚಾರದಲ್ಲಿ ಅವಸರವಿರಲಿಲ್ಲ. ನಾವು ನೆಂಟರೂ ಅಲ್ಲ, ಇದು ಯಾರ ಮನೆ ಮದುವೆಯೂ ಅಲ್ಲ. ಇದು, ಕಳೆದ ಶನಿವಾರ (೨೭/೪/೧೯) ಇಂಗ್ಲೆಂಡಿನ ಮಧ್ಯ ಭಾಗದ ಲೆಸ್ಟರ್ ಊರಿನ ಕನ್ನಡಿಗರು ಆಯೋಜಿಸಿದ್ದ ಯುಗಾದಿ ಕಾರ್ಯಕ್ರಮದ ಮಧ್ಯಾಹ್ನದ ಊಟದ ಸಂಭ್ರಮ. ನೂರಾರು ಸಂತೃಪ್ತ ಮುಖಗಳಲ್ಲಿ ಆಯೋಜಕರ ಆಲೋಚನೆ, ಶ್ರಮ ಮತ್ತು ಆತಿಥ್ಯಕ್ಕೆ ಕೃತಜ್ಞತೆ ಸೂಸುತ್ತಿತ್ತು.
ಔತಣ ಹೊಟ್ಟೆಯ ಒತ್ತೊತ್ತಿ ತುಂಬಿದರೆ, ಕಣ್ಣು, ಕಿವಿ ತುಂಬಿದ್ದು, ಸ್ಥಳೀಯ ಕಲಾವಿದರ, ಬಹುವಿಧದ ನೃತ್ಯ, ಹಾಡುಗಳು. ಅದು ಮುಗಿಯುತ್ತಿದ್ದಂತೆ ಮತ್ತೆ ಹೊಟ್ಟೆಗೆ ಸಿಹಿ-ಕಾರ-ಕಾಪಿ. ಇವೆಲ್ಲ ಸಂಜೆಯ ಮುಖ್ಯ ಅಂಕಕ್ಕೆ ಪೀಠಿಕೆ.
ಅದು, ಕರ್ನಾಟಕದ ಇಂದಿನ ಅತಿ ಪ್ರಸಿದ್ಧ ಹಿನ್ನೆಲೆ ಗಾಯಕ ವಿಜಯ ಪ್ರಕಾಶ ಮತ್ತು ಅವರ ತಂಡದವರ ಹಾಡುಗಾರಿಕೆ. ಮೈಸೂರಿನಿಂದ ಮುಂಬೈಗೆ ಹಾರಿ, ಸಾವಿರಾರು ಜಾಹಿರಾತುಗಳ ಜಿಂಗಲ್ಸ್ ಹಾಡಿ, ಎ. ಆರ್. ರಹಮಾನರ ‘ಜೈ ಹೋ’ ಹಾಡಿನ ಮೊದಲ ಸಾಲು ಹಾಡಿ ವಿಶ್ವವಿಖ್ಯಾತರಾದ ವಿಜಯ ಪ್ರಕಾಶ್, ಹಿನ್ನೆಲೆ ಹಾಡು; ಟಿವಿ ಕಾರ್ಯಕ್ರಮಗಳ ನಿರೂಪಣೆ, ಜಡ್ಜ್, ಹೀಗೆ ಕನ್ನಡಿಗರ ಮನದಲ್ಲಿ ಬೆಳೆದಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ತಮ್ಮ ತಂದೆಯನ್ನು ಕಳೆದುಕೊಂಡರೂ, ಅವಶ್ಯ ಕ್ರಿಯೆಗಳೆಲ್ಲ ಮುಗಿದ ತಕ್ಷಣ, ಕಲೆಯನ್ನು ಹಂಚುವ ತಮ್ಮ ವೃತ್ತಿಯಲ್ಲಿ ಸಕ್ರಿಯರಾಗಿದ್ದಾರೆ. ಅದು ಅವರ ವೃತ್ತಿಪರತೆ. ಅಂದಿನ ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾದ ಬೆಂಗಳೂರಿನ ಓಗರ ರೆಡಿ ಫುಡ್ಸ್ ಮಾಲೀಕರು ಸಹ ಇತ್ತೀಚಿಗೆ ತಮ್ಮ ತಂದೆಯನ್ನು ಕಳೆದುಕೊಂಡರೂ, ವಿಜಯ ಪ್ರಕಾಶರ ಒತ್ತಾಸೆಗೆ ಒಪ್ಪಿ ಬಂದೆ ಎಂದು ಹೇಳಿಕೊಂಡರು. ಒಂದು ನಿಮಿಷ ಮೌನದೊಂದಿಗೆ ಅವರಿಬ್ಬರ ಶೋಕಕ್ಕೆ ಸಭೆ ಸ್ಪಂದಿಸಿದ್ದು ಸಮಯೋಚಿತವಾಗಿತ್ತು.
ಹಾಡಿನಲ್ಲಿ ವಿಜಯಪ್ರಕಾಶರ ಜೊತೆಗೆ ಅನುರಾಧ ಭಟ್ ಮತ್ತು ಶಶಿಕಲಾ ಇದ್ದರು. ಇವರಿಬ್ಬರೂ ಹಿನ್ನೆಲೆ ಗಾಯಕರಾಗಿ ಸಾಕಷ್ಟು ಹೆಸರು ಮಾಡಿದವರೇ. ಸುಮಾರು ಮೂರು ಗಂಟೆಗಳ ಕಾಲ ತಡೆಯಿಲ್ಲದೆ ಹರಿದ ಹಾಡುಗಳ ಮಳೆಯಲ್ಲಿ ಸಭಿಕರು ಕುಣಿದು, ಕುಪ್ಪಳಿಸುತ್ತ ನೆನೆದರು. ಲಘು ಹಾಸ್ಯದ ಮಾತುಗಳಲ್ಲಿ ಸಭಿಕರನ್ನು ಛೇಡಿಸುತ್ತ, ಉತ್ಸಾಹಿಸುತ್ತ ತನ್ನೊಂದಿಗೆ ಕರೆದೊಯ್ಯುತ್ತಿದ್ದ ವಿಜಯಪ್ರಕಾಶರ ಶೈಲಿ ಅವರ ಕಂಠದಷ್ಟೇ ಅಪೂರ್ವ.
ಬೇರೆ-ಬೇರೆ ಭಾಷೆಗಳ ಹಾಡುಗಳಲ್ಲಿ ಬೆಳೆದರೂ, ತನ್ನೊಳಗಿನ ಕನ್ನಡತನವನ್ನು ಮೆರೆಸುತ್ತಿರುವ ವಿಜಯಪ್ರಕಾಶ್ ಮತ್ತು ಬೇರೆ ಭಾಷೆ ಸಂಸ್ಕೃತಿಯ ದೇಶದಲ್ಲೂ ಕನ್ನಡತನವನ್ನ ಉಳಿಸಿ, ಬೆಳೆಸಿ, ಹಂಚುತ್ತಿರುವ ಸಭಿಕರ ನಡುವೆ ಹಾಡುಗಳಲ್ಲಿ ನಡೆದ ಸಂವಾದ ಮತ್ತು ಸ್ಪಂದನ, ಬಹಳ ವರ್ಷಗಳ ನಂತರ ತವರಿಗೆ ಮರಳಿದ ಅಕ್ಕ-ತಂಗಿಯರಿಬ್ಬರು ಯಾರಿಗೆ ಅಮ್ಮನ ಮೇಲಿನ ಪ್ರೀತಿ ಹೆಚ್ಚು ಎಂದು ವಾದಿಸಿದಂತಿತ್ತು. ಕಡೆಗೆ ಗೆದ್ದದ್ದು ಕನ್ನಡಮ್ಮನ ಪ್ರೀತಿ.
ತನ್ನಿಷ್ಟದ ಪ್ರಪಂಚವನ್ನು ಕಟ್ಟುವಲ್ಲಿ, ಪ್ರಕೃತಿಯೊಂದಿಗಿನ ಸಮರಸವ ಮರೆತು ಮೆರೆಯುತ್ತಿರುವ ಮಾನವ ತನಗೆ ಬಳುವಳಿಯಾಗಿ ದೊರೆತ ತನ್ನ ಸುತ್ತಲಿನ ಸಿರಿಯನ್ನು ಒಂದೊಂದಾಗಿ ನುಂಗುತ್ತಿದ್ದಾನೆ. ಮಾನವನ ಬುದ್ಧಿಗೆ ಯಂತ್ರಗಳ ಶಕ್ತಿ ಸಿಕ್ಕು ಅವು ಹೆಚ್ಚಿದಂತೆ, ಅವನ ಸಾವಿರಾರು ವರ್ಷಗಳ ಕಲ್ಪನೆಗಳಿಗೆ ರೆಕ್ಕೆ-ಪುಕ್ಕ ಸಿಕ್ಕಿ, ಕಳೆದ ಶತಮಾನದ ಆರಂಭಕ್ಕೆ ಮೊದಲು ಹಾರಿದ ಯಂತ್ರದ-ಹಕ್ಕಿ ಆಗಸದ ದಾರಿ ತೆರೆದು ಕೊಟ್ಟಿತು. ಅಲ್ಲಿಗೆ ಹಕ್ಕಿಗಳ ಸ್ವಚ್ಛಂದ ಹಾರಾಟದ ಕೊನೆಗೆ ನಾಂದಿಯಾಯಿತು. ಹಾರುವ ಜನ ಬೆಳೆದಷ್ಟೂ ಹೆಚ್ಚಿದ ವಿಮಾನಗಳು ನುಂಗಿದ ಹಕ್ಕಿಗಳ ಲೆಕ್ಕ ಇಲ್ಲ. ಹಾಗೆಯೇ, ದೊಡ್ಡ-ದೊಡ್ಡ ನಗರಗಳ ಎತ್ತೆತ್ತರದ ಕಟ್ಟಡಗಳು ಕೊಲ್ಲುತ್ತಿರುವ ಹಕ್ಕಿಗಳ ಲೆಕ್ಕವೂ. ಹೀಗೆ, ಮಾನವ ಮತ್ತು ಹಕ್ಕಿಯ ನಡುವಿನ ದ್ವಂದ್ವವನ್ನ ಯಂತ್ರದ-ಹಕ್ಕಿಯ ರೆಕ್ಕೆ ಹಿಡಿದು ಹೇಳುತ್ತಾ ಯೋಗೀಂದ್ರ ಮರವಂತೆ ಮತ್ತೊಮ್ಮೆ ಅನಿವಾಸಿಯತ್ತ ಹಾರಿದ್ದಾರೆ.
ಯೋಗೀಂದ್ರರು, ಬ್ರಿಸ್ಟಲ್ಲಿನ ದೊಡ್ಡ ವಿಮಾನ ತಯಾರಾಕ ಸಂಸ್ಥೆಯೊಂದರ ಉದ್ಯೋಗಿ. ಇವರ ಬರಹಗಳು ಕನ್ನಡದ ಪ್ರತಿಷ್ಠಿತ ದಿನ ಪತ್ರಿಕೆಗಳು, ವಾರ ಪತ್ರಿಕೆಗಳು, ಕೆಂಡಸಂಪಿಗೆ.ಕಾಮ್ ಗಳಲ್ಲಿ ಪ್ರಕಟವಾಗಿವೆ. ಇತ್ತೀಚಿಗೆ, ಉದಯವಾಣಿ ಯುಗಾದಿ ವಿಶೇಷಾಂಕದಲ್ಲಿ ಇವರ ಪ್ರಬಂಧವೊಂದಕ್ಕೆ ಬಹುಮಾನ ಸಿಕ್ಕಿದೆ.
_______________
ಇದು ಬ್ರಿಸ್ಟಲ್. ಇಲ್ಲೊಂದು ವಿಮಾನ ಕಚೇರಿ. ಅದರೊಳಗಿನ ಹಲವು ಕಟ್ಟಡಗಳು,ಅವುಗಳಲ್ಲಿ ಹಲವು ಕಿಟಕಿಗಳು.ಅವುಗಳಲ್ಲೊಂದು ಕಿಟಕಿಯ ಬಳಿ ಸದ್ಯಕ್ಕೆ ನಾನು. ಎಲ್ಲರ ಅನುಭವದ ಕಿಟಕಿಗಳ ಹಾಗಿನದೇ ಇದೂ ಒಂದು, ಹೊರಗಿನದನ್ನು ತೋರಿಸುವ ಕಾಣಿಸುವ ಕೇಳಿಸುವ ಕೆಲಸ ಇದಕ್ಕೆ, ಆದರೆ ಅವೆಲ್ಲವೂ ಒಂದು ಚೌಕಟ್ಟಿನೊಳಗೇ. ಎಷ್ಟು ತೋರಿಸುತ್ತದೆ ಎಷ್ಟು ಬಿಡುತ್ತದೆ ಎನ್ನುವುದಕ್ಕೆ ಒಂದು ಮಿತಿ ಪರಿಧಿ ಇದೆ. ಈ ಕಿಟಕಿಯಿಂದ ಹಕ್ಕಿಗಳಿಗಿಂತ ಹೆಚ್ಚು ವಿಮಾನಗಳೇ ಕಾಣಿಸುತ್ತವೋ ಕೇಳಿಸುತ್ತವೋ ಎನ್ನುವ ಅನುಮಾನ ನನಗೆ. ಇಲ್ಲಿ ಚಿತ್ರಗಳೂ ಕಾಣಿಸಬಲ್ಲವು ಸದ್ದುಗಳು ಕೇಳಿಸಬಲ್ಲವು. ವಿಮಾನಗಳು ಕಚೇರಿಯ ಆವರಣದೊಳಗೆ ಇರುವ ಇಳಿಯುವ ಪಥದಿಂದ (ರನ್ ವೆ) ಆಕಾಶವನ್ನು ಸರಸರನೆ ಹತ್ತಿ ಇಳಿಯುತ್ತಿರುತ್ತವೆ. ಯಾರು ಕಲಿಸಿದರೋ ಇವಕ್ಕೆ ಹತ್ತುವುದು ಇಳಿಯುವುದು. ಕಣ್ಣಿಗೆ ಕಾಣುವ ಕಬ್ಬಿಣದ ಏಣಿಯಲ್ಲಿ ಹತ್ತಿಳಿಯುವಾಗ ಎಡವುವ ನಾನು ಈ ವಿಮಾನಗಳು ಕಾಣದ ಗಾಳಿಯ ಮೆಟ್ಟಿಲುಗಳ ಮೇಲೆ ಪರಿಣತಿಯಲ್ಲಿ ಹತ್ತಿಳಿಯುವುದನ್ನು ಅವಕ್ಕಾಗಿ ನೋಡುತ್ತೆನೆ. ನಮ್ಮ ಕಂಪೆನಿಯ ಶಾಖೆಗಳು ಫ್ರಾನ್ಸ್, ಜರ್ಮನಿ ಸ್ಪೇನ್ ಗಳಲ್ಲಿ ಹಬ್ಬಿರುವುದರಿಂದ, ಅಲ್ಲಿಂದ ಇಲ್ಲಿ ಬರುವುದು ಇಲ್ಲಿನವರು ಅಲ್ಲಿ ಹೋಗುವುದು ವಿಮಾನಗಳ ಮೂಲಕವೇ ನಿತ್ಯವಿಧಿಯಂತೆ ನಡೆಯುತ್ತಿದೆ . ಆಸುಪಾಸಿನ ಕೆಲವು ಹವ್ಯಾಸಿ ವಿಮಾನ ಚಾಲಕರು ಪಾತಿದೋಣಿಯಂತಹ (ಸಣ್ಣ ದೋಣಿ) ಪುಟ್ಟ ವಿಮಾನ ತೆಗೆದುಕೊಂಡು ನಮ್ಮ ರನ್ ವೆ ಬಳಸಿ ಮೇಲೆ ನೆಗೆಯುತ್ತಾರೆ. ಬ್ರಿಸ್ಟಲ್ ನ ಪೊಲೀಸರು ಊರಿನ ಮೇಲೆ ಹದ್ದಿನ ಕಣ್ಣಿಡಲು ಬಳಸುವ ಹೆಲಿಕಾಪ್ಟರ್ ಗೆ ಕೂಡ ನಮ್ಮ ಕಚೇರಿಯೇ ನಿಲ್ದಾಣ. ಮತ್ತೆ ಅಪಘಾತ ತುರ್ತು ಚಿಕಿತ್ಸೆಗೆಂದು (air ambulance) ಬ್ರಿಸ್ಟಲ್ ನ ನಗರಸಭೆ ಬಳಸುವ ಹೆಲಿಕಾಪ್ಟರ್ ದಿನಕ್ಕೊಂದು ಬಾರಿಯಾದರೂ ಗಾಳಿಯನ್ನು ಕತ್ತರಿಸುತ್ತ ಸುತ್ತುತ್ತಿರುತ್ತದೆ. ರನ್ ವೆ ಸುತ್ತಲಿನ ವಿಶಾಲ ಬಯಲಿನ ಒಂದು ಮೂಲೆಯಲ್ಲಿ ಹದಿನಾರು ವರ್ಷಗಳ ಹಿಂದೆ (2003ರಲ್ಲಿ ) ಕೊನೆಯ ಹಾರಾಟ ಮುಗಿಸಿ ನಿವೃತ್ತಿಯ ನಿಟ್ಟುಸಿರು ಬಿಟ್ಟು “ಕಾಂಕರ್ಡ್” ಚಕ್ರಗಳನ್ನು ನೆಲದಲ್ಲಿ ಖಾಯಂ ಆಗಿ ಹೂತಿದೆ. ಬಾಣದ ಮಂಚದ ಮೇಲೆ ಮಲಗಿದ ಇಚ್ಚಾಮರಣಿಯ ಪರಿಸ್ಥಿತಿಯೇ ಅದರದು .”ಕಾಂಕರ್ಡ್” ವಿಮಾನ ನೋಡಲೆಂದೇ ಬಸ್ಸು ತುಂಬಿಸಿಕೊಂಡು ಪ್ರವಾಸ ಬರುವವರೂ ಇದ್ದಾರೆ. ಶಬ್ದದ ವೇಗದ ಎರಡು ಪಟ್ಟು ವೇಗದಲ್ಲಿ ಹಾರುತ್ತಿದ್ದ “ಕಾಂಕರ್ಡ್”ಗೆ ನಮ್ಮ ಕಚೇರಿಯಿಂದ ಹಾರಿ ಇಳಿಯುವ ಪುಟ್ಟ ವಿಮಾನಗಳ ನಡಿಗೆ ಓಟ ವೇಗ ನೋಡಿ ಬಿಳಿ ಮೀಸೆಯ ಅಡಿಯಲ್ಲಿ , ಕೆನ್ನೆಯ ಸುಕ್ಕಿನ ಒಳಗೆ ನಗೆ ಬರುವುದುಂಟು. ರನ್ ವೆ ಗೆ ಅತಿ ಹತ್ತಿರದ ಕಟ್ಟಡದ ಒಂದರಲ್ಲಿ ಕುಳಿತಿರುವ ನನಗೆ ವಿಮಾನಗಳ ಹೆಲಿಕಾಪ್ಟರ್ ಗಳ ರೆಕ್ಕೆಯ ಪಟಪಟ ಸದ್ದು ಕಿವಿಯಲ್ಲಿ ಗುಂಯ್ ಗುಟ್ಟುತ್ತಿರುತ್ತದೆ. ಇಲ್ಲಿ ನಾನು ಕೆಲಸ ಮಾಡಲು ಶುರು ಮಾಡಿದ ದಿನಗಳಲ್ಲಿ ಪ್ರತಿ ವಿಮಾನ ಏರಿ ಇಳಿಯುವಾಗ ಮಾಡುವ ಸದ್ದಿಗೆ ಇದೇನು ನಮ್ಮ ಕಟ್ಟಡದ ಮೇಲೆ ಎರಗಿತೋ ಏನೋ ಎಂದು ಹೆದರಿ ವಿಮಾನ ಇಳಿಯುವವರೆಗೂ ಕಣ್ಣು ಕಿವಿಗಳಲ್ಲೇ ಹಿಂಬಾಲಿಸುತ್ತಿದ್ದೆ. ನೂರಾರು ಏಕರೆಗಳಷ್ಟಿರುವ ಕಚೇರಿಯ ಮೇಲಿನ ಬಾನಿನಲ್ಲಿ ಹಾರಾಡಿಕೊಂಡು ಬದುಕಿರುವ ಹಕ್ಕಿಗಳ ಗುಂಪಿಗೆ ನಾವು ವಿಮಾನ ಹೆಲಿಕಾಪ್ಟರ್ಗಳೆನ್ನುವ ‘ಪಕ್ಷಿ’ ಗಳನ್ನು ಸೇರಿಸಿದ್ದೇವೆ. ಹಕ್ಕಿಗಳನ್ನು ದೂರದಿಂದ ನೋಡಿ ಕೇಳಿ ಗುರುತು ಹಿಡಿಯಬಲ್ಲ ಪಕ್ಷಿ ಶಾಸ್ತ್ರಜ್ಞರಂತೆಯೇ ವಿಮಾನಗಳ ಸದ್ದು ದೂರದ ನೋಟದಿಂದಲೇ ಇದು ಇಂತಹದ್ದು ಎಂದು ಹೇಳಬಲ್ಲವರಿದ್ದಾರೆ. ಮೊಂಡು ಮೂಗಿನವು, ಉದ್ದ ರೆಕ್ಕೆಯವು, ಡೊಳ್ಳು ಹೊಟ್ಟೆಯವು, ಅಗಲ ಬಾಲದವು ಹೀಗೆ ತರ ತರಹದ ವಿಮಾನ ಹಕ್ಕಿಗಳು! ವಿಧ ವಿಧದ ಹಕ್ಕಿಗಳ ವಿಶಿಷ್ಟ ಕೂಗಿನಂತೆ ಬೇರೆ ಬೇರೆ ತರದ ವಿಮಾನಗಳು ತಮ್ಮದೇ ಸದ್ದು ಕೇಕೆಗಳಿಂದ ಹತ್ತಿ ಇಳಿಯುತ್ತವೆ. ಹೊತ್ತಲ್ಲದ ಹೊತ್ತಿನಲ್ಲಿ ಇಳಿಯುವ, ಕಿವಿ ಹಿಡಿಯದಷ್ಟು ಸದ್ದು ಮಾಡುತ್ತಾ ಹಾರುವ ವಿಮಾನ, ಯಾವ ದಿಕ್ಕಿನಿಂದ ಯಾವ ದಿಕ್ಕಿಗೆ ಹೋರಾಟ ವಿಮಾನ ಎನ್ನುವುದನೆಲ್ಲ ನೋಡಿ ಶುಭ ಅಶುಭಗಳ ಶಕುನ ಹೇಳುವವರೂ ನಮ್ಮಲ್ಲಿ ತಯಾರಾಗಿದ್ದಾರೆ. ನಮ್ಮ ಕಲ್ಪನೆ ಏನೇ ಇದ್ದರೂ ಹಕ್ಕಿಗಳು ವಿಮಾನಗಳೂ ಸರಿ ಸುಮಾರಿಗೆ ಒಂದೇ ಸಂತತಿಯವು ಆಗಿ ಕಂಡರೂ ಹಕ್ಕಿಗಳು ವಿಮಾನಗಳನ್ನು ತಮ್ಮ ಗುಂಪಿಗೆ ಎಂದೂ ಸೇರಿಸಿಕೊಳ್ಳಲಿಕ್ಕಿಲ್ಲ ಎಂದು ಅನಿಸುತ್ತದೆ. ಅಥವಾ ವಿಮಾನಗಳು ಹಕ್ಕಿಗಳನ್ನು ತಮ್ಮವು ಎಂದು ಸ್ವೀಕರಿಸಲಿಕ್ಕಿಲ್ಲ .
ಮನುಷ್ಯನಿಗೆ ಹಾರಲು ಕಲಿಸಿದ್ದೇ ಹಕ್ಕಿಗಳು ಅಲ್ಲವೇ? ಅಲ್ಲವೆಂದು ಮನುಷ್ಯರು ಹೇಳಿದರೂ ಹಕ್ಕಿಗಳು ನಂಬಲಿಕ್ಕಿಲ್ಲ. ಶತಮಾನದ ಹಿಂದೆ ಮೊತ್ತಮೊದಲ ಬಾರಿಗೆ ಆಕಾಶಕ್ಕೆ ಹಾರಲು ಯತ್ನಿಸಿದ ಸಾಹಸಿಗಳು ಕನಸುಗಾರರು ದೊಡ್ಡ ರೆಕ್ಕೆಗಳನ್ನು ತಮ್ಮ ಎಡ ಬಲಗಳಿಗೆ ಕಟ್ಟಿಕೊಂಡು ನೆಗೆಯಲು ಯತ್ನಿಸಿದ್ದರು .ಅಂತಹವರಲ್ಲಿ ಹೆಚ್ಚಿನವರು ಹಾರದೇ ಬಿದ್ದರು, ಮತ್ತೆ ಕೆಲವರು ತುಸು ದೂರ ನೆಗೆದು ತೇಲಿದರು. ಕೆಲವು ಕಾಲದವರೆಗೆ ಈ ಪ್ರಯತ್ನ ಮುಂದುವರಿಯಿತು ಕೂಡ. ಇದು ರೈಟ್ ಸಹೋದರರ ಯಂತ್ರಚಾಲಿತ ವಿಮಾನ ಆಕಾಶವನ್ನು ಏರುವುದಕ್ಕಿಂತಲೂ ಮೊದಲಿನ ಕತೆ. ಒಂದು ನೈಸರ್ಗಿಕ ಸೃಷ್ಟಿಯಿಂದ ಸ್ಫೂರ್ತಿ ಪಡೆದ ಮನುಷ್ಯ ಕಷ್ಟಪಟ್ಟು ಹೊಡೆದ ನಕಲು – ವಿಮಾನ. ಎಷ್ಟು ಚಂದದ ನಕಲೇ ಆದರೂ ಅಸಲಿ ಆಗುವುದಿಲ್ಲವಲ್ಲ. ಹಕ್ಕಿಗಳ ಸುಲಲಿತ , ಸರಳ , ಪರಿಸರ-ಸ್ನೇಹಿ ಹಾರಾಟ ವಿಮಾನಗಳಿಗೆ ಎಂದೂ ದಕ್ಕಲಿಕ್ಕಿಲ್ಲ. ಜೊತೆಗೆ ವಿಮಾನಗಳು ಇದ್ದಷ್ಟು ದಿನವೂ ಅದರ ಆಘಾತ, ಸದ್ದು, ಮಾಲಿನ್ಯಗಳಿಗೆ ಅಂಜುತ್ತ ಹಕ್ಕಿಗಳು ಬದುಕಬೇಕಾಗಿರುವುದೂ ಅನಿವಾರ್ಯ. ಆದರೆ ಹಕ್ಕಿಗಳಿಂದಾಗಿ ವಿಮಾನಗಳ ಬದುಕೂ ಸುಭದ್ರ ಆಗಿ ಉಳಿದಿಲ್ಲ. ಹಕ್ಕಿಗಳು ಹಾರುವಷ್ಟು ದಿನವೂ ವಿಮಾನಗಳು ಜೀವ ಭಯದಲ್ಲಿ ತತ್ತರಿಸುತ್ತ ನಿಲ್ದಾಣಗಳಲ್ಲಿ ಏರಿ ಇಳಿಯುತ್ತವೆ. ಹಕ್ಕಿಗಳ ಆಘಾತ (bird strike) ವಿಮಾನಗಳಿಗೆ ಅತ್ಯಂತ ಮಾರಕವಾದದ್ದು. ಅರ್ಧ ಅಥವಾ ಒಂದು ಕೆಜಿ ತೂಕದ ಮಾಂಸದ ಮುದ್ದೆಯೋ ವಸ್ತುವೋ ಘಂಟೆಗೆ ನೂರೈವತ್ತು ಮೈಲಿವೇಗದಲ್ಲಿ ಬಂದು ಗಟ್ಟಿಯ ಲೋಹಕ್ಕೆ ಬಡಿದರೆ ಹಕ್ಕಿ ಸಾಯುವುದರ ಜೊತೆಗೆ ಲೋಹವೂ ಘಾಸಿಗೊಳ್ಳುತ್ತದೆ. ಹಕ್ಕಿಗಳು ಆಕಾಶದಲ್ಲೇ ನಿಂತು ರೆಕ್ಕೆ ಬಡಿಯುತ್ತಿದ್ದರೂ ವೇಗವಾಗಿ ಬರುವ ವಿಮಾನದ ಘಾತ ಹಕ್ಕಿಗೂ ವಿಮಾನಕ್ಕೂ ಎರಡಕ್ಕೂ ಆಪತ್ಕಾರಿಯೇ. ಹೀಗೆ ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ ಅಥವಾ ಹಕ್ಕಿಗಳ ಗುಂಪು ಛಿದ್ರವಾಗುವುದರ ಜೊತೆಗೆ ವಿಮಾನಕ್ಕೆ ಬಡಿದ ಜಗದಲ್ಲಿ ತೀವ್ರ ಆಘಾತವಾಗಿರುತ್ತದೆ. ವಿಮಾನಶಾಸ್ತ್ರದಲ್ಲಿ ಹಕ್ಕಿಗಳ ಆಘಾತದ ಅಧ್ಯಯನವೂ ಒಂದು ವಿಭಾಗ. ಹಕ್ಕಿಗಳ ಸಮೂಹ ಆಕಾಶಕ್ಕೆ ಏರುತ್ತಿರುವ ಅಥವಾ ನೆಲಕ್ಕೆ ಇಳಿಯುತ್ತಿರುವ ವಿಮಾನದ ರೆಕ್ಕೆಗೆ, ಎಂಜಿನ್ ಗೆ ಬಡಿದು ಅಪಘಾತಗೊಂಡ ವಿಮಾನಗಳ ಉದ್ದದ ಪಟ್ಟಿಯೇ ಇದೆ. ವಿಮಾನಗಳ ವಿನ್ಯಾಸದಲ್ಲಿ ಹಕ್ಕಿಗಳ ಗಾತ್ರ ತೂಕ ಬಗೆಯನ್ನು ಕಲ್ಪಿಸಿ ಲೆಕ್ಕಾಚಾರ ಮಾಡಿ ಒಂದು ವೇಳೆ ಹಾಗೊಂದು ಆಘಾತ ಆದರೆ ವಿಮಾನ ಎಷ್ಟು ತುರ್ತಾಗಿ ಸುರಕ್ಷಿತವಾಗಿ ನಿಲ್ದಾಣವನ್ನು ಸೇರಬಹುದು ಎನ್ನುವ ಪರಿಗಣನೆ ಇರುತ್ತದೆ .
ವಿಮಾನಗಳು ಆಕಾಶಕ್ಕೆ ಲಗ್ಗೆ ಇಟ್ಟ ಲಾಗಾಯ್ತಿನಿಂದ ವಿಮಾನದ ಆಘಾತಕ್ಕೋ, ಶಬ್ದಕ್ಕೋ ಅಥವಾ ವಿಮಾನ ಉಗುಳುವ ಹೊಗೆಗೋ ಬಲಿಯಾಗಿ ಉರುಳಿದ ಹಕ್ಕಿಗಳ ಲೆಕ್ಕ ಇಟ್ಟವರು ಒಬ್ಬರೂ ಇಲ್ಲ. ಅಥವಾ ಹಕ್ಕಿಗಳ ಹಕ್ಕುಗಳಿಗಾಗಿ ಹೋರಾಟ ಮಾಡಿದವರೂ ಯಾರೂ ಇಲ್ಲ. ಹಾರುವ ವಸ್ತು ವಿಷಯಗಳಲ್ಲೇ ಪರಿಪೂರ್ಣ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಹೊಂದಿದ ಹಕ್ಕಿಯೊಂದು ಹುಟ್ಟಲು ಮರದ ರೆಂಬೆಯ ಮೇಲೆ ಕುಳಿತು ಕಣ್ಣು ಮಿಟುಕಿಸಿ ಮಾತಾಡುವ ಒಂದು ಗಂಡು ಇನ್ನೊಂದು ಹೆಣ್ಣು ಹಕ್ಕಿಗಳ ನಡುವಿನ ಪ್ರೀತಿ ಸಾಕು. ಮತ್ತೆ ಅವುಗಳ ಸಹಜ ಸುಂದರ ಹಾರಾಟ ಶುರು ಆಗಲು ಬಲಿತ ರೆಕ್ಕೆಗಳು ಅವುಗಳ ಸುಲಲಿತ ಚಲನೆ ಅಷ್ಟೇ ಬೇಕು. ಹಕ್ಕಿಯೊಂದರ ಸಾಹಸಗಳನ್ನು ತಾನೂ ಮಾಡಬಲ್ಲೆ ಎಂದು ತೋರಿಸುವ ವಿಮಾನವೊಂದು ತಯಾರಾಗಲು ವರ್ಷಗಳ ಸಮಯ ಮತ್ತು ದುಡಿತ ಬೇಕು. ಮತ್ತೆ ಆ ವಿಮಾನಗಳು ನೆಗೆಯಲು ತೇಲಲು ಜ್ಞಾನ ವಿಜ್ಞಾನ ಪರೀಕ್ಷೆ ಲೆಕ್ಕಾಚಾರಗಳೂ ಬೇಕು. ಒಂದೇ ಮನೆತನದಲ್ಲಿ ಹುಟ್ಟಿದ ಹಕ್ಕಿಗಳು ಮತ್ತು ವಿಮಾನಗಳ ನಡುವೆ ಎಷ್ಟು ಹೋಲಿಕೆಗಳು ಹಾಗು ಎಷ್ಟು ವಿರೋಧಗಳು. ತಾವು ಹಾರುವುದನ್ನು ನೋಡುತ್ತಾ ತಮ್ಮಂತೆ ಹಾರುವ ಯಂತ್ರವನ್ನು ಮನುಷ್ಯರು ನಿರ್ಮಿಸುತ್ತಿದ್ದಾಗ ಹಕ್ಕಿಗಳಿಗೆ ಮುಂದೆ ತಮ್ಮ ಸಂಕುಲಕ್ಕೆ ಆ ಯಂತ್ರಗಳಿಂದ ಬರಬಹುದಾದ ಆಪತ್ತು ತಿಳಿದಿರಲಿಲ್ಲ. ವಿಮಾನವನ್ನು ಅಂದು ನಿರ್ಮಿಸಿದವರು ತಾವು ಅನುಕರಿಸಿದ ಗುರು, ಹಕ್ಕಿಗಳೇ ಮುಂದೆ ತಮ್ಮನ್ನು ಆಕಾಶದಲ್ಲಿ ಕಾಡಬಹುದು ಎಂದೂ ಅಂದುಕೊಂಡಿರಲಿಲ್ಲ.
ಈ ಜಗತ್ತಿನ ಚಲನ ವಲನ ಎಲ್ಲ ಆ ಸೂರ್ಯಾನ್ಮ್ಯಾಲೇ ನಿರ್ಭರ ಅಲ್ಲರೀ ? ಆ ಸೂರ್ಯಾ ತನ್ನ ಬೆಳ್ಕನಿಂದ ಈ ಭೂಮಿ ಮ್ಯಾಲೇ ಎಷ್ಟ್ ಛಂದ್ ಛಂದ ಬಣ್ಣ ಬಳೀತಾನೋ ಅಷ್ಟ ಛಂದ ಬಣ್ಣದ ಆಟಾ ಮುಗಿಲ್ನ್ಯಾಗ ಆಡ್ತಾನಾ.
ವಿ.ಸೂ: ಇಂದಿಗೆ ನನ್ನ ಲೆಕ್ಕದ ಮೂರು ತಿಂಗಳು ಮುಗಿಯಿತು. ಲೇಖನಗಳು, ಕವನಗಳು, ಅಭಿಪ್ರಾಯಗಳು, ಆಗಾಗ ಮೆಚ್ಚುಗೆಯ ಮಾತು, ಮತ್ತೆ, ಅಪರೂಪಕ್ಕೊಮ್ಮೆ, ಟೀಕೆಯ ಚುಚ್ಚುಗಳಲ್ಲಿ ನನ್ನನ್ನು ಸಲಹಿದ ಅನಿವಾಸಿ ಓದುಗರಿಗೆ ಮತ್ತು ಲೇಖಕ ಬಳಗಕ್ಕೆ ನನ್ನ ವಿನಮ್ರ ನಮನಗಳು. ಹಾಗೆಯೇ, ಈ ಅವಕಾಶ ಕೊಟ್ಟ ಮತ್ತು ಅಲ್ಲಲ್ಲಿ ಕಂಡ ತಪ್ಪುಗಳನ್ನು ಒಪ್ಪಾಗಿಸುವಲ್ಲಿ ತಾಳ್ಮೆಯಿಂದ ತಿದ್ದಿದ ಶ್ರೀವತ್ಸ ದೇಸಾಯಿ ಮತ್ತು ಇತರ ಹಿರಿಯ ಅನಿವಾಸಿ ಸಂಪಾದಕ ತಂಡಕ್ಕೆ ಧನ್ಯತೆಯ ನಮನಗಳು. ಅನಿವಾಸಿಯ ಈ ತಾಣ ಬೆಳೆಯಲಿ; ಬರುವ ದಿನಗಳಲ್ಲಿ ಯುಕೆಯಲ್ಲಿ ಕನ್ನಡವನ್ನು ಮುಂದಿನ ಪೀಳಿಗೆಗೆ ಕಲಿಸಿ, ಉಳಿಸುವಲ್ಲಿ ದೊಡ್ಡ ಪಾತ್ರ ವಹಿಸಲಿ ಎಂದು ಹಾರೈಸುತ್ತ … Good Bye for now.