ಜಯದೇವ ಜಯದೇವ ಶ್ರೀ ಗಣಪತಿರಾಯ

ನಮಸ್ಕಾರ. ಅನಿವಾಸಿ ಬಳಗಕ್ಕೆಲ್ಲ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಹರನರಸಿ ಸಿರಿಗೌರಿ ಸರ್ವರಿಗೂ ಸನ್ಮಂಗಲವನ್ನುಂಟು ಮಾಡಲಿ.
“ಗಜಮುಖನೇ ಗಣಪತಿಯೇ ನಿನಗೆ ವಂದನೆ. ನಂಬಿದವರ ಪಾಲಿನ ಕಲ್ಪತರು ನೀನೇ” ಹೊರಗೆ ಮೃಣ್ಮಯನಾದರೂ ಚಿನ್ಮಯನಾದ ಈ ಮಹಾಭಾರತದ ಲಿಪಿಕಾರ ನಮ್ಮೆಲ್ಲರ ಹಣೆಯ ಲಿಪಿಯನ್ನೂ ನೇರ್ಪಾಗಿಸಲಿ. ವಿಘ್ನಗಳ ತರಿದು ವಿದ್ಯೆ-ಬುದ್ಧಿ- ಸಿದ್ಧೀಯನ್ನೀಯಲಿ.

~ ಸಂಪಾದಕಿ

“ನಡೀತದೇಳ್ರಿ”

ಈ ಶ್ರಾವಣ -ಭಾದ್ರಪದ ಮಾಸಗಳು ಬಂದೂ ಅಂದ್ರ ದಿವಶಿಗೌರಿ, ಮಂಗಳಗೌರಿ, ಸಂಪತ್ ಶುಕ್ರವಾರದ ಗಡಗಿ ಗೌರಿ, ಸ್ವರ್ಣಗೌರಿ,  ಜೇಷ್ಠಾಗೌರಿಯರ ಜೋಡಿ ಸೋಳಾ ಸೋಮವಾರದ ಈಶಪ್ಪ, ಪಂಚಮಿಯ ನಾಗಪ್ಪ, ಗೋಕುಲಾಷ್ಟಮಿಯ ಕಿಟ್ಟಪ್ಪ, ಚೌತಿಯ ಗಣಪ್ಪ, ಕಡೀಕೆ ಅನಂತ ಪದ್ಮನಾಭ ( ಇಷ್ಟರ ನಡಬರಕ ನಮ್ಮ ಮಂಚಾಲಿ ರಾಯರು)  ಹೀಂಗ ಸಾಲುಸಾಲಾಗಿ ಹಿಂಡುದೈವದ ಹಾಗೂ ಹಿಂಡು ದೈವದ ಗಂಡ ಉದ್ಧಂಡನ ಪೂಜೆ- ಪುನಸ್ಕಾರ , ಅವರುಗಳ ಹೆಸರಲ್ಲಿ  ತಂಬಿಟ್ಟು, ಅಂಟಿನುಂಡೆ, ಕರದವಲಕ್ಕಿ,  ಹೋಳಿಗೆ-ಕಡಬು, ಪಾಯಸ -ಪರಮಾನ್ನ -ಚಿತ್ರಾನ್ನಗಳ ಥರಾವರಿ ಭಕ್ಷ್ಯಭೋಜನಗಳ ಸಮಾರಾಧನೆ. ಒಟ್ಟನಾಗ ನಮ್ಮಂಥ ಗೃಹಿಣಿಯರು  ಮಾಡಿ,ಉಂಡುಟ್ಟು ಉಸ್  ಎಂದು ದಣಿಯುವ ಮಾಸಗಳಿವು. 

(ಅಂಡಜವಾಹನ ಅನಂತ ಮಹಿಮ
ಪುಂಡರಿಕಾಕ್ಷ ಶ್ರೀ ಪರಮ ಪಾವನ್ನ
ಹಿಂಡು ದೈವದ ಗಂಡ ಉದ್ಧಂಡ
ಪಾಂಡುರಂಗ ಶ್ರೀ ಪುರಂದರ ವಿಠ್ಠಲ)

‘ ಅದೆಲ್ಲ ಬರೋಬ್ಬರಿ..ಇದೇನೋ ‘ನಡೀತದೇಳ್ರಿ’ ನಡೀಯೂದೂ, ಏಳೂದು ಅಂದ್ರ ಏನು ಅಂತ ಹುಬ್ಬೇರಿಸಲಿಕ್ಹತ್ತೀರೇನು? ಹಾಂ ಅಂದಹಂಗ ಹತ್ತಿರೇನು ಅಂದಕೂಡಲೇ ನೆನಪಾತು, ನನ್ನ ಗೆಳತಿ ಒಬ್ಬಾಕಿ “ ಇದೇನವಾ ನಿಮ್ಮ ಉತ್ತರ ಕರ್ನಾಟಕದ ಭಾಷೆ ಇಳೀಲಿಕ್ಕೂ ಹತ್ತತಾರ, ಕೂಡಲಿಕ್ಕೂ ಹತ್ತತಾರ ,ಉಣಲಿಕ್ಕೆ, ಕುಡೀಲಿಕ್ಕೆ, ಓದಲಿಕ್ಕೆ, ಬರೀಲಿಕ್ಕೆ, ಮಲಗಲಿಕ್ಕೆ ಎಲ್ಲಕ್ಕೂ ಹತ್ತೂದೇ, ಏನರೇs ಹತ್ತತೀರಿ..ಎಷ್ಟರೇs ಹತ್ತತೀರಿ?” ಅಂತ ಕಾಲೆಳಿತಿರತಾಳ. ಈಗ ಇದೊಂದೇನೋ ಹೊಸಾದು ‘ನಡೀತದೇಳ್ರಿ’ ತಗೊಂಡು ಬಂದೀರಿ ಅಂತಿರೇನು ನೀವೂ? ತಡೀರಿ..ಅದನ್ನೇ ಹೇಳಲಿಕ್ಕೆ ಬರಲಿಕ್ಹತ್ತೀನಿ.

ಕಳೆದ ವಾರ ‘ ಬಪ್ಪಾ’ ನನ್ನು ಮನೆಗೆ ಕರೆತರಲು Wembley ಗೆ ಹೋಗಿದ್ವಿ. ಅಲ್ಲಿ ಅದೆಷ್ಟು ಥರಾವರಿ ಗಣಪತಿಗಳು, ಅದೇನು ಹೂ-ಹಣ್ಣು, ಪೂಜಾಸಾಮಗ್ರಿಗಳು, ಡೆಕಾರೇಶನ್ ಸಾಮಾನು, ಮಂಟಪ, ಲೈಟು..ಪ್ರತಿ ಅಂಗಡಿ ಕಿಕ್ಕಿರಿದು ತುಂಬಿತ್ತು. ಆಗ ನನ್ನ ತಲೆಯಲ್ಲಿ ಸುಳಿದಾಡಿದ ಭಾವಲಹರಿ ಏನೆಂದರೆ –‘ದೇವರೇ ಇಲ್ಲ’ ಅನ್ನೋ ವಾದದಸರಣಿಯಂತೆ ದೇವರು ಸುಳ್ಳಿರಬಹುದು ಆದರದನ್ನು ಆತುಕೊಂಡು ಬೆಳೆದು, ಹಬ್ಬಿದ ವೇದೋಪನಿಷತ್ತು, ರಾಮಾಯಣ-ಮಹಾಭಾರತ, ದಾಸ-ವಚನ ಸಾಹಿತ್ಯಗಳು, ಮಂತ್ರ-ತಂತ್ರ, ನಾಟ್ಯ-ಸಂಗೀತ- ಶಿಲ್ಪಕಲೆ, ಹಬ್ಬ-ಹರಿದಿನಗಳ ಆಚರಣೆ- ಸಡಗರ- ಸಂಭ್ರಮ ಇವೆಲ್ಲವುಗಳಂತೂ ಸತ್ಯಸ್ಯ ಸತ್ಯ. ಎಷ್ಟೆಲ್ಲ ಜನರಿಗೆ ಎಷ್ಟೆಲ್ಲ ರೀತಿಯ ಜೀವನೋಪಾಯಗಳು?! ‘ ಹುಟ್ಟಿಸಿದ ದೇವರು ಹುಲ್ಲು ಮೇಯಿಸಿಯಾನೆ?’
(ಇಲ್ಲಿ ದೇವರು ನಮ್ಮನ್ನು ಹುಟ್ಟಿಸಿದನೇ? ಅಥವಾ ನಾವು ಅವನನ್ನು ಹುಟ್ಟಿಸಿದೆವೇ ಎಂಬ ಮತ್ತೊಂದು ತರ್ಕಕ್ಕೂ ವಿಫುಲ ಅವಕಾಶವಿದೆಯಾದರೂ ಈಗದು ಬೇಡ.)

ಸರಿ, ಈಗ ಹಕೀಕತ್ತಿಗೆ ಬರತೀನಿ. ಅಲ್ಲಿದ್ದ ನೂರಾರು ಗಣಪತಿಗಳಲ್ಲಿ ಯಾವುದು ತರುವುದು ಎಂಬ ಸಮಸ್ಯೆ. Options ಹೆಚ್ಚಾದಷ್ಟೂ ಆಯ್ಕೆ ಕಷ್ಟ.’ಇದು ಬ್ಯಾಡ. ಮಡಿ-ಶಲ್ಯ ಮ್ಯಾಚಿಂಗ್ ಆಗವಲ್ತು’ ನನ್ನ ಅವಳಿಯ ರಾಗ. ‘ ಇದರಾಗ ಗಣಪ್ಪನ ಸೊಂಡಿ, ಇಲಿ ಅಪ್ಪಚ್ಚಿಯಾದ್ಹಂಗದ’ ಜವಳಿಯ ತಗಾದೆ. ‘ಇವಂಗ ಜನಿವಾರನೇ ಇಲ್ಲಲs’ ಅತ್ತೆಯವರ ಉವಾಚ. ‘ ಇವಾ ಬರಿಗೈಯಾಗಿದ್ದಾನ. ಕೈಯಾಗ ಆಯುಧ, ಮೋದಕ ಯಾವುದೂ ಇಲ್ಲ’ ಮಾವನವರ ಉದ್ಗಾರ , ‘ ಹೊಟ್ಟಿಗೆ ಹಾವೇ ಇಲ್ಲಲಾ, ಈಬತ್ತಿ ಬ್ಯಾರೆ ಹಚಗೊಂಡಾನ’ , ಒಬ್ಬ ಗಣಪ್ಪ ಮುಂದ ಬಾಗ್ಯಾನ, ಇನ್ನೊಬ್ಬ ಭಾಳ ಹಿಂದ ಒರಗ್ಯಾನ..ನೂರು ತಕರಾರು.ಅಂತೂ ಪೌಂಡ್ ಗಟ್ಟಲೇ ದುಡ್ಡು ಸುರಿದರೂ ಬೇಕಾದ ಗಣಪ್ಪ ಸಿಗವಲ್ಲ. ಇವರೆಲ್ಲರ ನಡುವ “ ಏಯ್ ಮ್ಯಾಚಿಂಗ್ ಇರದಿದ್ರೇನಾತು? ಚಂದೇ ಕಾಣಸತದ ನಡೀತದೇಳು, ಜನಿವಾರ ಇರದಿದ್ರೇನಾತು? ಹೆಂಗೂ ಪೂಜಾ ಟೈಮಿಗೆ ಹಾಕತೀವಲಾ ನಡೀತದೇಳ್ರಿ, clay ಲೇ ಒಂದ ಸಣ್ಣ ಮೋದಕಾ ಮಾಡಿ ಕೈಯಾಗಿಟ್ರಾತು, ನಡೀತದೇಳ್ರಿ , ಕಡಬು, ಮೋದಕಾ ತಿಂದು ಸ್ವಲ್ಪ ಹಿಂದ ಒರಗ್ಯಾನ ನಡೀತದೇಳ್ರಿ” ಅಂತ ನಾನು.

‘ಛಾ ಪುಡಿ ಇಲ್ಲ, ಕಾಫಿ ಮಾಡ್ಲಿ?’ ‘ನಡೀತದೇಳ್ರಿ’

‘ಸಾರು ಸ್ವಲ್ಪ ನೀರಾಗೇದ’ ‘ ನಡೀತದೇಳ್ರಿ’

‘ಪಲ್ಯ ಚೂರು ಉಪ್ಪಾಗೇದ.’ ‘ಸಪ್ಪಗಿನ ಅನ್ನ – ಚಪಾತಿ ಜೋಡಿ ನಡೀತದೇಳ್ರಿ.’

‘ ಹುಡುಗ ಚೂರು ಸಾದಗಪ್ಪ ಇದ್ದಾನ’ ‘ ಬಣ್ಣ ಏನಮಾಡತೀರಿ? ಸಂಸ್ಕಾರಿ ಇದ್ದಾನಲಾ ನಡೀತದೇಳ್ರಿ’

‘ ಹುಡಗಿಗೆ ಅಡಗಿ ಬರಂಗಿಲ್ಲ’ ‘ ಇವತ್ತ ನಾಳೆ ಅದೇನ ಮಹಾ? ಬೇಕಂದ್ರ ಯೂಟ್ಯೂಬ್ ನೋಡಿ ಕಲಿತಾಳ. ನಡೀತದೇಳ್ರಿ’

‘ ಬ್ಲೌಜ್ ಮೈಯಾಗ ಲೂಸ್ ಆಗೇದ’ ‘ ಸಧ್ಯಕ್ಕ ಒಂದ safety pin ಹಚಗೊಂಡ್ರಾತು. ನಡೀತದೇಳು’

‘ ಸೀರಿಗೆ ಕಲೆ ಹತ್ತೇದ’ ‘ ನಿರಿಗ್ಯಾಗ ಮುಚ್ಚಿಹೋಗತದ. ನಡೀತದೇಳು.’

‘ ಅಲ್ಲೆ ಮೂಲ್ಯಾಗೊಂಚೂರು ಕಸಾ ಅದ.’ ‘ ಮುಂಜಾನೆ ಬಳಿಯೂಣಂತ. ನಡೀತದೇಳ್ರಿ’

‘ ಮಳಿ ಬರೂ ಹಂಗ ಅದ’ ‘ ಛತ್ರಿ ತಗೊಂಡ ಹೋದ್ರಾತು. ನಡೀತದೇಳ್ರಿ’

‘ ಬಸ್ ಮಿಸ್ ಆತು.’ ‘ನಡೀತದೇಳ್ರಿ. ಶೇರಿಂಗ್ ಆಟೊ ಹತ್ತಿದ್ರಾತು.’

‘ ಮಗಗ ಮಾರ್ಕ್ಸ್ ಕಮ್ಮಿ ಬಂದಾವ.’ ‘ ನಡೀತದೇಳ್ರಿ ಮುಂದಿನ ಸಲಾ ಮೆಹನತ್ ಮಾಡತಾನ.’

‘ ಇವತ್ತ ಕೆಲಸದಕಿ ಬರಂಗಿಲ್ಲಂತ’ ‘ ನಡೀತದೇಳು.ಎಷ್ಟ ಬೇಕ ಅಷ್ಟ ಭಾಂಡಿ ತೊಳಕೊಂಡ್ರಾತು’

ಒಟ್ಟಿನಾಗ ಸಾರಾಂಶ ಏನಂದ್ರ ಈ ‘ನಡೀತದೇಳ್ರಿ’ ಬದುಕನ್ನು
ಸರಳವಾಗಿಸುವ, ಸಹ್ಯವಾಗಿಸುವ ದಿವ್ಯ ಮಂತ್ರ.
ಎತ್ತಿನಾಗೂ ಸೈ..ಕತ್ಯಾಗೂ (ಕತ್ತೆ) ಸೈ ಅಂತಾರಲಾ . ನಾ ಅಂಥಾ ಜಾತಿಯಕಿ ಅನಕೋರಿ. ಹೀಂಗೇ ಆಗಬೇಕು, ಹಂಗೇ ಆಗಬೇಕು ಅನ್ನದs ‘ ನಡೀತದೇಳ್ರಿ’ ಅಂತ ಕೆಲಸ ಸಾಗಿಸುವ ಗುಣ ಅಷ್ಟೇನೂ ಸರಳಲ್ಲ. ಅದಕ್ಕೂ ‘ ಸಾಧನಾ’ (ಸಿನೆಮಾ ತಾರೆ ಅಲ್ಲ ಮತ್ತ) ಬೇಕಾಗತದ ಅಂಬೂದು ನನ್ನ ಅಂಬೋಣ.
ಇನ್ನ ನೀವು ಇದನ್ನೋದಿ ಕಾಮೆಂಟ್ ಮಾಡದಿದ್ರೂ ‘ ನಡೀತದೇಳ್ರಿ’ ಅಂತ ಅನಕೊಂಡ ಬಿಡಬ್ಯಾಡ್ರಿ. ಯಾಕಂದ್ರ ನೀವು ಓದೂದು, ಬರಿಯೂದು , ಅನಿವಾಸಿಯನ್ನ ಬೆಳಸೂದು, ಬೆಳಗಸೂದು ಭಾಳ ಮಹತ್ವದ್ದ ಅದ. ಏನಂತೀರಿ?


ಗೋಕುಲಾಷ್ಟಮಿ ನನ್ನ ನೆನಪುಗಳು , ಅನುಭವಗಳು

 

ಕೃಷ್ಣ ಭಾರತೀಯರಿಗೆ ಅಪ್ಯಾಯಮಾನವಾದ ಭಗವಂತ. ಆತನ ತುಂಟತನ, ಶೌರ್ಯ, ಅಸಹಾಯಕರ ಸಹಾಯಕ್ಕೆ ಮುನ್ನುಗ್ಗುವ ಛಾತಿ, ಸಂಗೀತೋಪಾಸನೆ, ಭ್ರಾತೃ- ಮಿತ್ರ ಪ್ರೇಮ, ಹೆಂಗಳೆಯರ ಮನ ಸೆಳೆಯುವ – ಮನದಲ್ಲಿಳಿಯುವ ಚಾಕಚಕ್ಯತೆ, ಒಲಿದು ಬಂದವರಿಗೆ ತೋರುವ ಅಮಿತ ಪ್ರೇಮ, ಸಾಮ -ದಾನ-ದಂಡ-ಭೇದಗಳನ್ನು ಸಮಯಕ್ಕೊಪ್ಪುವಂತೆ ಉಪಯೋಗಿಸಬಲ್ಲ ಚಾಣಾಕ್ಷತೆ ಚುಂಬಕದಂತೆ ನಮ್ಮನ್ನು ಆಕರ್ಷಿಸುತ್ತವೆ. ಕೃಷ್ಣ ಕಥೆಗಳನ್ನು ಓದಿ ಬೆಳೆದ ನಮಗೆ ಇಂದಿಗೂ ಅವು ಮನದಲ್ಲಿ ಅಚ್ಚೊತ್ತಿವೆಯಲ್ಲದೇ ಅವನ ಎಷ್ಟೋ ಗುಣಗಳು ಅರಿವಿಲ್ಲದೇ ಸಂಕಷ್ಟದಲ್ಲಿ ನಮಗೆ ದಾರಿದೀಪವೂ ಆಗಿವೆ. ಈ ಸೋಮವಾರ ಈ ಭೂಮಿಯ ಮೇಲೆ ಸಾವಿರಾರು ವರ್ಷಗಳ ಹಿಂದೆ ನಡೆದಿದ್ದ ಶ್ರೀ ಕೃಷ್ಣನ ಜನ್ಮದಿನವಾಗಿತ್ತು (ಕೃಷ್ಣನ ಅಸ್ತಿತ್ವದ ಬಗ್ಗೆ ಪುರಾತತ್ವ ಇಲಾಖೆ ಪುರಾವೆಗಳನ್ನೊದಗಿಸಿದೆ, ಅದರ ಸತ್ಯಾಸತ್ಯತೆ ಈ ಲೇಖನದ ವ್ಯಾಪ್ತಿಗೆ ಮೀರಿದ್ದು). ಕೃಷ್ಣನ ಅರವತ್ನಾಲ್ಕು ಗುಣಗಳನ್ನು ಪ್ರತಿಫಲಿಸುವಂತೆ ಅವನ ಜನ್ಮದಿನವನ್ನು ಹಲವು ಬಗೆಗಳಲ್ಲಿ ಭಾರತದಲ್ಲಿ ಆಚರಿಸಲಾಗುತ್ತದೆ. ಹಳೆಯ ನೆನಪುಗಳನ್ನು ಮೆಲಕು ಹಾಕುತ್ತ ನಾನು ಅನುಭವಿಸಿದ ಈ ವಿಶಿಷ್ಟ ದಿನದ ಆಚರಣೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. 

ನಮ್ಮ ಮನೆಯಲ್ಲಿ ಗೋಕುಲಾಷ್ಟಮಿ ಹಿಂದಿನಿಂದಲೂ ಬಲು ಸಂಭ್ರಮದಿಂದ ಆಚರಿಸುತ್ತಿದ್ದೆವು. ನನ್ನ ತಂದೆ-ತಾಯಿಯರಿಬ್ಬರೂ ಶಿಕ್ಷಗರಾಗಿ, ಅಂಕೋಲೆಯಲ್ಲಿದ್ದರು. ನಮ್ಮಪ್ಪನಿಗೆ ತುಂಬ ಗೆಳೆಯರು. ಅವರಲ್ಲಿ ಅತಿ ಹತ್ತಿರದವದೆಂದರೆ ಹೊನ್ನೆಗುಂಡಿ ಮಾಷ್ಟ್ರು. ಹಾಡುವುದರಲ್ಲಿ, ನೃತ್ಯದಲ್ಲಿ, ಕೊಳಲು-ತಬಲಾ ನುಡಿಸುವುದರಲ್ಲಿ ನಿಪುಣರು. ಅವರು ನನಗೆ ಸಂಜೆ ಕೊಳಲು ನುಡಿಸಲು ಕಲಿಸಿದರೆ, ಶಾಲೆಯಲ್ಲಿ ಹಿಂದಿ ಕಲಿಸುತ್ತಿದ್ದರು. ನಮಗಾಗ ಗೋಕುಲಾಷ್ಟಮಿಗೆ ರಜೆ ಇರುತ್ತಿರಲಿಲ್ಲ. ಹಾಗಾಗಿ ನಮ್ಮ ಮನೆಯಲ್ಲಿ ಅನುಕೂಲ ಸಿಂಧುವಾಗಿ ಕೃಷ್ಣನ ಜನ್ಮ ೮-೯ ಘಂಟೆಗೇ ಆಗುತ್ತಿತ್ತು. ಮಾಷ್ಟ್ರಿಲ್ಲದೇ ನಮ್ಮ ಮನೆಯಲ್ಲಿ ಕೃಷ್ಣನ ಪೂಜೆ ಆಗುತ್ತಿರಲಿಲ್ಲ. ಅವರು ದಾಸರ ಪದಗಳನ್ನು ಹಾಡಿ, ನನ್ನ ಕೈಯ್ಯಲ್ಲೂ ಒಂದೆರಡು ಹಾಡುಗಳನ್ನ ಹಾಡಿಸಿ, ಕೊಳಲಿನಲ್ಲಿ ನುಡಿಸುತ್ತಿದ್ದರು. ಈ ಸಂಗೀತ ಸಮಾರಾಧನೆಯಿಲ್ಲದೆ ದೇವಕಿಯ ಪ್ರಸವ ವೇದನೆಯೇ ಆರಂಭವಾಗುತ್ತಿರಲಿಲ್ಲ.  ನಮ್ಮಮ್ಮ, ಶಾಲೆಯಲ್ಲಿ ಗೇಯ್ದು ಬಂದ ಮೇಲೆ ತರಹೇವಾರಿ ತಿಂಡಿಗಳನ್ನು (ಇಡ್ಲಿ, ಪಾಯಸ, ಚಕ್ಕುಲಿ, ಯರಿಯಪ್ಪ, ಉಂಡೆ, ಅವಲಕ್ಕಿ, ಇತರೆ) ಪೂಜೆಗೆ ಸರಿಯಾದ ಸಮಯಕ್ಕೆ ತಯ್ಯಾರಿ ಮಾಡಿಡುತ್ತಿದ್ದರು. ಆಗೆಲ್ಲ, ಹಿಂದೆ ದ್ರೌಪದಿಯನ್ನು ಪರಮಾತ್ಮ ಕಾಪಾಡಿದಂತೆ, ಅಮ್ಮನ ಹಿಂದೆ ನಿಂತು ಆತ ಎಲ್ಲವನ್ನೂ ಸುಸೂತ್ರವಾಗಿ ಮಾಡಿಸಿಕೊಟ್ಟನೇ ಎಂದೆನಿಸಿದ್ದೂ ಉಂಟು. ನನ್ನಕ್ಕನೂ ಸಾಕಷ್ಟು ಸಹಾಯ ಮಾಡುತ್ತಿದ್ದಳು. ಕೆಲವೊಮ್ಮೆ ಕೆಲಸದ ಒತ್ತಡದಲ್ಲಿ ಚಕ್ಕುಲಿ ಸುತ್ತು ಬರದೇ ಒದ್ದಾಡಿಸಿದಾಗ ಅಮ್ಮ ಸಹನೆ ಕಳೆದುಕೊಂಡದ್ದೂ ಇದೆ. ನನಗನಿಸುತ್ತೆ ಆ ದಿನ ಕೃಷ್ಣ ಇನ್ನ್ಯಾವುದೋ ಮನೆಯಲ್ಲಿ ಬ್ಯುಸಿ ಆಗಿದ್ದಿರಬಹುದು. ನಾವು ನಂತರ ದಾಂಡೇಲಿಗೆ ವರ್ಗವಾಗಿ ಹೋದಾಗ, ಸುದೈವದಿಂದ ಮಾಷ್ಟ್ರನ್ನೂ ಅಲ್ಲಿಗೆ ವರ್ಗ ಮಾಡಿದ್ದರು. ದಾಂಡೇಲಿಯಲ್ಲಿ ಮಾಷ್ಟ್ರು ತಮ್ಮೊಂದಿಗಿದ್ದ ಬಾಡಿಗೆ ಕೋಣೆಗಳ ಸಂಕೀರ್ಣದ ಗೆಳೆಯರನ್ನು ಸೇರಿಸಿ ಒಂದು ಸಂಗೀತ ಗುಂಪನ್ನು (ಇಲ್ಲಿಯ ಬ್ಯಾಂಡ್ ನಂತೆ) ಕಟ್ಟಿದರು. ಮಾಷ್ಟ್ರು ಪ್ರಮುಖ ಹಾಡುಗಾರ ಹಾಗೂ ಸವ್ಯಸಾಚಿ , ಚೇತನ್ ಮಾಮ್ ತಬಲಾ ವಾದಕ, ದತ್ ಮಾಮ್ ಹಾರ್ಮೋನಿಯಂ ಹಾಗೂ ನನ್ನದು ಕೊಳಲು. ಚೇತನ್ ಮಾಮ್ ಹಾಗೂ ದತ್ ಮಾಮ್ ಕೂಡ ಮಧುರವಾಗಿ ಹಾಡುತ್ತಿದ್ದರು. ನಮ್ಮ ಗೋಕುಲಾಷ್ಟಮಿಗೆ ಈಗ ಹೊಸ ಕಳೆ ಬಂದಿತ್ತು. ಒಮ್ಮೆ ಅವರ ಬಿಲ್ಡಿಂಗನಲ್ಲೇ ಇದ್ದ ಉತ್ತರ ಕರ್ನಾಟಕದವರೊಬ್ಬರು (ಅವರ ಹೆಸರು ಈಗ ಮರೆತು ಹೋಗಿದೆ) ಪೂಜೆಗೆ ಬಂದಿದ್ದರು. ಅವರು ಕಟ್ಟರ್ ಕೃಷ್ಣನ ಭಕ್ತ. ಅವರು ಶುರು ಮಾಡಿದ  ಭಜನೆ ಅಂದು ಮುಗಿಯಲೇ ಇಲ್ಲ. ಮಾರನೇ ದಿನ ಕೆಲಸಕ್ಕೆ ಹೋಗಬೇಕಾದವರೆಲ್ಲ ಕಂಗಾಲಾಗಿ ಹೋದರು. ಎಲ್ಲರ ಹೊಟ್ಟೆ ಚುರುಗುಟ್ಟುತ್ತಿತ್ತು. ಅಂದು ನಮ್ಮ ಗಮನವೆಲ್ಲ ಗಡಿಯಾರದತ್ತ ಇತ್ತೇ ಹೊರತು ಅವರ ನಾನ್-ಸ್ಟಾಪ್ ಭಜನೆಗಳತ್ತಲ್ಲ! ಅಂದು ಮಾತ್ರ ಕೃಷ್ಣ ನಮ್ಮ ಮನೆಯಲ್ಲಿ ಮಧ್ಯ ರಾತ್ರಿಗೆ ಹುಟ್ಟಿದ್ದ. ಎಂದಿಗೂ ಲಘು ಪ್ರಸವದಿಂದ ಹೊರಬರುತ್ತಿದ್ದ ದೇವಕಿ, ಅಂದು ತುಂಬಾ ನೋವು ಉಂಡಿರಬೇಕು. ಕೃಷ್ಣ ಪರಮಾತ್ಮನೂ ತಣ್ಣಗಿನ ಅನ್ನ ಉಣ್ಣ ಬೇಕಾಯ್ತು. ಗೋಕುಲಾಷ್ಟಮಿ ಎಂದರೆ ನನ್ನ ಕಣ್ಣ ಮುಂದೆ ಬರುವುದು ಈ ಚಿತ್ರಗಳು. 

ದಹಿ ಹಂಡಿ ಒಡೆಯಲು ಸಾಗುತ್ತಿರುವ ಗೋವಿಂದಗಳು

ಮುಂದೆ ನನ್ನ ಕರ್ಮ ಭೂಮಿ ಮುಂಬಯಿಗೆ ವರ್ಗಾಂತರವಾಯಿತು. ಇದೊಂದು ಬಹು ಸಂಸ್ಕೃತಿಗಳು ಒಂದಾಗುವ ಸಂಗಮ ಭೂಮಿ. ಇಲ್ಲಿಯ ದಹಿ ಹಂಡಿ (ಮೊಸರು ಕುಡಿಕೆ) ಸಂಪ್ರದಾಯ ಚಿರಪರಿಚಿತ. ಸ್ವತಃ ನೋಡದವರಿಗೂ ಇದರ ದರ್ಶನ ಹಿಂದಿ ಸಿನೆಮಾಗಳ ಮೂಲಕ ಆಗಿರುತ್ತದೆ. ಜಯಂತ್ ಕಾಯ್ಕಿಣಿಯವರು ತಮ್ಮ ಕಥೆಯಲ್ಲೂ ದಹಿ ಹಂಡಿ ಸಂಪ್ರದಾಯದ ಪ್ರಸ್ತಾವ ಮಾಡಿದ್ದಾರೆ. ದಹಿ ಹಂಡಿಯನ್ನು ಭಾರತದ ಇತರೆಡೆಗೂ ಆಚರಿಸುತ್ತಾರೆ, ಆದರೆ ಅವನ್ನು ನಾನು ನೋಡಿಲ್ಲ. ಹಾಗೆ ನೋಡಿದರೆ, ನನ್ನ ಈ ಸಲದ ಮುಂಬೈ ಪ್ರವಾಸದವರೆಗೂ ನಾನು ದಹಿ ಹಂಡಿ ನೋಡಿರಲಿಲ್ಲ. ತೀವ್ರ ಕೆಲಸದ ಒತ್ತಡದ ನಡುವೆ ಹೆಚ್ಚಿನ ಯಾವುದೇ ಹಬ್ಬ ಹರಿದಿನಗಳ ಆಚರಣೆಯಲ್ಲಿ ನಾವು ಪಾಲ್ಗೊಳ್ಳುತ್ತಿರಲಿಲ್ಲ; ಇದೊಂದು ನೆವವಾಗಿರಬಹುದು. ದಹಿ ಹಂಡಿ ಗೋಕುಲಾಷ್ಟಮಿಯ ಮಾರನೇ ದಿನ ಆಚರಿಸಲ್ಪಡುತ್ತದೆ. ಎತ್ತರದಲ್ಲಿ ಕಟ್ಟಿದ ಮೊಸರು ಕುಡಿಕೆಯನ್ನು ಮಾನವ ಶಿಖರವನ್ನು ಕಟ್ಟಿ ಗಡಿಗೆ ಒಡೆದವರಿಗೆ ಅದರೊಳಗಿನ ಇನಾಮು. ಈ ಸಾಹಸವನ್ನು ಮಾಡುವವರನ್ನು ಗೋವಿಂದ ಎಂದು ಕರೆಯುತ್ತಾರೆ. ನಗರದ ಮೂಲೆಮೂಲೆಗಳಿಂದ ಈ ಗೋವಿಂದ ಗುಂಪುಗಳು ತಾಲೀಮು ಮಾಡಿ ಸಿದ್ಧವಾಗಿ ಟ್ರಕ್ಕುಗಳಲ್ಲಿ, ಬೈಕುಗಳಲ್ಲಿ ತಂಡದ ಸಮವಸ್ತ್ರ ಧರಿಸಿ, ವಿವಿಧೆಡೆ ಕಟ್ಟಿದ ಮೊಸರು ಕುಡಿಕೆಗಳನ್ನು ಒಡೆಯುವ ಸವಾಲನ್ನು ಸ್ವೀಕರಿಸುತ್ತವೆ. ಕಟ್ಟುಮಸ್ತಾದ ಗಂಡಸರು ಶಿಖರದ ಅಡಿಪಾಯವಾಗಿದ್ದು, ಚುರುಕಾದ ತೆಳ್ಳಗಿನವನು ಶಿಖರದ ತುದಿ ಹತ್ತುವುದು ವಾಡಿಕೆ. ಈ ಕಾರ್ಯಕ್ರಮದ ವಾತಾವರಣಕ್ಕೆ ಬಣ್ಣ ಕಟ್ಟುವುದು ತಂಡದ ತಮಟೆ ಬಡಿತ (ಈಗ ಹೆಚ್ಚಾಗಿ ಸ್ನೇರ್ ಡ್ರಮ್), ಧ್ವನಿ ವರ್ಧಕದಲ್ಲಿ ಹರಿದು ಬರುವ ಸಂದರ್ಭೋಚಿತ ಹಾಡುಗಳು, ಕಿಕ್ಕಿರಿದು ನೆರೆಯುವ ಜನ ಸಮೂಹದ ಪ್ರೋತ್ಸಾಹದಾಯಕ ಉದ್ಗಾರಗಳು, ಶಿಳ್ಳೆಗಳು. ಮೊದಲು ಮುಂಬೈನ ಚಾಳುಗಳಲ್ಲಿ ನಡೆಯುತ್ತಿದ್ದ ಸ್ಪರ್ಧೆಗೆ ಈಗ ಹೊಸ ಆಯಾಮ ದೊರಕಿದೆ. ರಾಜಕಾರಣಿಗಳು ತಮ್ಮ ವಿಭಾಗದಲ್ಲಿ ಭಾರಿ ಮೊತ್ತದ ಬಹುಮಾನವನ್ನು ಕೊಡುತ್ತಾರೆ. ಮಡಿಕೆ ಮುಟ್ಟಲಾಗದಿದ್ದವರಿಗೂ ಬಹುಮಾನವಿದೆ. ಅಂಥವರು ಎಷ್ಟು ಮಜಲುಗಳನ್ನು ನಿರ್ಮಿಸಿದ್ದರು ಎಂಬುವುದರ ಮೇಲೆ ಬಹುಮಾನದ ಮೊತ್ತ ನಿರ್ಧರಿತವಾಗಿರುತ್ತದಂತೆ. ಸಿನೆಮಾಗಳಲ್ಲಿ ಚಾಳ್ ನಲ್ಲಿ ಎದುರು ಬದುರಿನ ಕಟ್ಟಡಗಳಿಗೆ ಮಡಿಕೆ ಕಟ್ಟಿದ್ದನ್ನು ಕಂಡು ಗೊತ್ತಿದ್ದ ನನಗೆ, ಈ ಸಲ ಕ್ರೇನಿಗೆ ಕಟ್ಟಿದ್ದ ಮಡಕೆ ನೋಡಿ ಆಶ್ಚರ್ಯವಾಯಿತು. ಇದು ದಹಿ ಹಂಡಿಗೆ ಆಗಿರುವ ಆಧುನಿಕತೆಯ ಒಂದು ಲೇಪ.  ಸುಮಾರು  ೩ ತಾಸುಗಳ ನಂತರವೂ ಯಾವ ತಂಡವೂ ಮಡಕೆ ಮುಟ್ಟಿದ್ದನ್ನು ಕಾಣದೆ ನಿರಾಸೆಯೂ ಆಯಿತು. ಮೋಜು, ಮಸ್ತಿ, ಆರೋಗ್ಯಕರ ಸ್ಪರ್ಧೆಯನ್ನು ಪ್ರೋತ್ಸಾಹಿಸುತ್ತಿದ್ದ ದಹಿ ಹಂಡಿ ನವ್ಯತೆಯ ಮೆರುಗಿನಲ್ಲಿ ತನ್ನ ವಿಶಿಷ್ಟತೆಯನ್ನು ಕಳೆದುಕೊಳ್ಳುತ್ತಿದೆಯೇ ಎಂದು ಖೇದವೆನಿಸಿತು. ೧೫-೨೦ ಮಜಲುಗಳನ್ನು ಕಟ್ಟುವ ಭರದಲ್ಲಿ, ಗೋವಿಂದರು ಬಿದ್ದು ಗುರುತರ ಗಾಯಕ್ಕೀಡಾಗುವುದು ಇಂದು ಅಪರೂಪವಲ್ಲ. ಕಳೆದ ವರ್ಷ ಸುಮಾರು ೨೦೦ ಜನ ದಹಿ ಹಂಡಿ ಕಾರ್ಯಕ್ರಮದಲ್ಲಿ ಅಪಘಾತಕ್ಕೀಡಾಗಿದ್ದರಂತೆ. ತುದಿಯೇರಲು ಚಿಕ್ಕವರಿಗೆ ಜಾಸ್ತಿ ಬೇಡಿಕೆ ಇರುವುದರಿಂದ ಮಕ್ಕಳೂ  ಅಪಘಾತಕ್ಕೆ ತುತ್ತಾಗುತ್ತಿದ್ದರು. ಅದರಿಂದಲೇ ಈಗ ಹೈಕೋರ್ಟ್ ೧೮ಕ್ಕ್ಕಿಂತ ಚಿಕ್ಕವರು ದಹಿ ಹಂಡಿಯಲ್ಲಿ ಪಾಲ್ಗೊಳ್ಳಬಾರದು ಎಂದು ನಿರ್ಬಂಧಿಸಿದೆ. 

ಕ್ರೇನಿಗೆ ಕಟ್ಟಿರುವ ಮೊಸರು ಕುಡಿಕೆ

ನಾನು ನನ್ನ ಮಾವನ ಮನೆಯಲ್ಲಿ ವಾಸ್ತವ್ಯ ಹೂಡಿದ್ದೆ. ಅವರ ಸೊಸೈಟಿಯಲ್ಲಿ ಸಾಕಷ್ಟು ಜನ ಗುಜರಾತಿಗಳು ನೆಲೆಸಿದ್ದಾರೆ. ಅವರಿಗೆ ಗೋಕುಲಾಷ್ಟಮಿ ದೊಡ್ಡ ಹಬ್ಬ. ಅವರ ಸಾಮೂಹಿಕ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುವ ವಿಶೇಷ ಅನುಭವ ನನಗಾಯಿತು. ಸುಮಾರು ೧೦:೩೦ಕ್ಕೆ ಕಾರ್ಯಕ್ರಮ ಆರಂಭವಾಗುತ್ತದೆ ಎಂದು ನನ್ನ ನಾದಿನಿ, ಅವಳ ಮಗಳೊಡನೆ ಕೆಳಗಿಳಿದೆ. ಕೆಲವು ಮಕ್ಕಳು ಕೃಷ್ಣ, ರಾಧೆಯ ದಿರಿಸಿನಲ್ಲಿ ಆಟವಾಡುತ್ತಿದ್ದು, ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು. ಮಹಿಳೆಯರು ಮ್ಯೂಸಿಕ್ ಪ್ಲೇಯರ್ನಲ್ಲಿ ಹರಿಯುತ್ತಿದ್ದ ಭಕ್ತಿಗೀತೆಗಳಿಗೆ ವರ್ತುಲಾಕಾರವಾಗಿ ತಿರುಗುತ್ತ ಗರಭಾ ನೃತ್ಯ ಮಾಡಿದರು. ಪಕ್ಕದಲ್ಲೇ ಮಕ್ಕಳಿಗಾಗಿ ದಹಿ ಹಂಡಿಯನ್ನೂ ಕಟ್ಟಿದ್ದರು. ಹನ್ನೆರಡಾಗುತ್ತಿದ್ದಂತೆ, ಮೇಲಿನ ಮನೆಯಿಂದ ಕೃಷ್ಣನಂತೆ ಅಲಂಕರಿಸಿದ ಮುದ್ದಾದ ಮಗುವನ್ನು ಬುಟ್ಟಿಯಲ್ಲಿ ಮಲಗಿಸಿ ತಲೆಯ ಮೇಲೆ ‘ಅಂದು’ ವಸುದೇವ ಹೊತ್ತುಕೊಂಡು ಬಂದಂತೆ ತಂದರು. ಹೊರಗಡೆ ಮಳೆ ಸುರಿಯುತ್ತಿತ್ತು. ಒಂದರ್ಥದಲ್ಲಿ ಕೃಷ್ಣನ ಜನ್ಮವನ್ನು  ಹೂಬೇಹೂಬು ನಿರ್ಮಿಸಿದಂತಿತ್ತು. ಆದರೆ ಇಲ್ಲಿ ದೇವಕಿಯೇ ಮಗನನ್ನು ಹೊತ್ತಿದ್ದಳು. ಕೃಷ್ಣನನ್ನು ತೊಟ್ಟಿಲಿಗೆ ಹಾಕಿ ತೂಗಿ, ಪೂಜೆ ಮಾಡಿದಮೇಲೆ ದಹಿ ಹಂಡಿ ಕಾರ್ಯಕ್ರಮ ಶುರುವಾಯಿತು. ಒಂದಾಳು ಎತ್ತರದಲ್ಲಿದ್ದ ಮಡಕೆಯನ್ನು ಹೆಚ್ಚು ಶ್ರಮ ಪಡದೇ ಮಕ್ಕಳು ಒಡೆದರು. ಅವರ ಉತ್ಸಾಹ, ಒಡೆದಾಗ ಪಟ್ಟ ಸಂಭ್ರಮ ಯಾವುದೇ ಆಧುನಿಕ ದಹಿಹಂಡಿಗಿಂತ ಅರ್ಥಪೂರ್ಣವೂ, ಮನೋಹರವೂ ಆಗಿತ್ತೆನ್ನುವುದರಲ್ಲಿ ಸಂದೇಹವಿಲ್ಲ. ಮಡಕೆಯಲ್ಲಿದ್ದ ಚಾಕಲೇಟುಗಳನ್ನು ನಾದಿನಿ ಮಗಳು ಹೆಕ್ಕಿ ತಂದಿದ್ದಳು. ಅವನ್ನು ಮೆಲ್ಲುತ್ತ ಮೇಲೆ ಫ್ಲ್ಯಾಟಿಗೆ ಬಂದಾಗ ಗಂಟೆ ಒಂದಾಗಿತ್ತು. ಸಾಕಷ್ಟು ವರ್ಷಗಳ ಮೇಲೆ ಗೋಕುಲಾಷ್ಟಮಿಯನ್ನು ಭಾರತದಲ್ಲಿ ಆಚರಿಸಿ ಆನಂದಿಸಿದ ತೃಪ್ತಿ ಮನದಲ್ಲಿತ್ತು. ಇದು ಎರಡನೇ ಬಾರಿ ಮಧ್ಯರಾತ್ರಿಯಲ್ಲಿ ಜನ್ಮಾಷ್ಟಮಿಯನ್ನು ಆಚರಿಸಿದ್ದು ಎನ್ನುವುದೂ ನೆನಪಾಯಿತು. 

-ರಾಂ