ರಾಜಕುಮಾರ ರಣಜಿತ್ ಸಿಂಹಜಿ – ಬೇಸಿಂಗ್‍ಸ್ಟೋಕ್ ರಾಮಮೂರ್ತಿ

ಪ್ರಿಯರೇ, ಬಹಳಷ್ಟು ಭಾರತೀಯರ ರಕ್ತದಲ್ಲಿ ಕ್ರಿಕೆಟ್ಟಿನ ಪ್ರೀತಿ ಕಬ್ಬಿಣದ ಅಂಶಕ್ಕಿಂತ ಹೆಚ್ಚಿರಬೇಕು ಅಂದರೆ ತಪ್ಪಾಗಲಿಕ್ಕಿಲ್ಲ. ಅಂತರರಾಷ್ಟ್ರೀಯ ಪಂದ್ಯಗಳಂತೂ ಸರಿಯೇ, ದೇಶದೊಳಗಿನ ಐಪಿಎಲ್ ಸಹ ನಮ್ಮ ಕ್ರಿಕೆಟ್ ಹುಚ್ಚಿಗೆ ಸಾಲುವುದಿಲ್ಲ. ಈಗ ಟೀವಿ, ಇಂಟರ್ನೆಟ್ಟು, ಸ್ಟ್ರೀಮಿಂಗು ಇತ್ಯಾದಿಗಳಿಂದಾಗಿ ಪಂದ್ಯಾವಳಿಗಳು ಬಂದವೆಂದರೆ ಸಾಕು, ಎಲ್ಲರ ಮುಖವೂ ಮನವೂ ಅದರಲ್ಲೇ! ಈ ಆಟದ ಮತ್ತು ಈಚೆಗಿನದೇನೂ ಅಲ್ಲವಲ್ಲ, ಇದಕ್ಕೂ ಮೊದಲೇ ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಇತ್ಯಾದಿಗಳು ಇದ್ದವಲ್ಲ. ಆದರೆ ಈಗಿನಷ್ಟು ಅಕ್ಸೆಸಿಬಿಲಿಟಿ ಇರಲಿಲ್ಲವೆನ್ನಬಹುದು. ಈಗಿನಂತೆ ಆಗೂ ಸುಪರ್ ಸ್ಟಾರುಗಳು ಇದ್ದರು – ಡಬ್ಲೂ ಜಿ ಗ್ರೇಸ್, ಡಾನ್ ಬ್ರಾಡ್ಮನ್ ಇತ್ಯಾದಿ ಘಟಾನುಘಟಿಗಳು ಆಗಿಹೋಗಿದ್ದಾರೆ. ಅಂಥವರಲ್ಲಿ ಎದ್ದು ಕಾಣುವ ಒಬ್ಬ ಆಟಗಾರ, ಇಂಗ್ಲಿಷ್ ಕೌಂಟಿ ಮತ್ತು ಇಂಗ್ಲಂಡ್ ದೇಶದ ತಂಡದ ಪರವಾಗಿ ಆಡಿದ ’ರಾಜಕುಮಾರ’ ರಣಜಿತ್ ಸಿಂಹಜಿ, ಮೊತ್ತಮೊದಲ ಭಾರತೀಯ ಸಂಜಾತ ಆಟಗಾರ. ರಣಜಿ ಕಪ್ಪಿನಿಂದಾಗಿ ಭಾರತದಲ್ಲಿ ಅಮರನಾಗಿರುವ ಈ ಆಟಗಾರನ ಜೀವ ಇಂಗ್ಲಂಡಿನ ಕ್ರಿಕೆಟ್ಟಿನಲ್ಲಿ ಇತ್ತಂತೆ – ಈ ಬಗ್ಗೆ ಬರೆದಿರುವ ನಮ್ಮ ಅನಿವಾಸಿ ಗುಂಪಿನ ಬೇಸಿಂಗ್‍ಸ್ಟೋಕ್ ರಾಮಮೂರ್ತಿ ಅವರ ಲೇಖನ ಇಲ್ಲಿದೆ. ಈಗ ಅವರು ಬೇಸಿಂಗ್‍ಸ್ಟೋಕ್ ಬಿಟ್ಟು ಬೇರೆಡೆ ಬಂದಿದ್ದರೂ, (ಪುಟ್ಟಪ್ಪನವರ ಕುಪ್ಪಳಿಯಂತೆ) ಬೇಸಿಂಗ್‍ಸ್ಟೋಕ್ ಅವರನ್ನು ಬಿಡಲಿಕ್ಕಿಲ್ಲ. ಎಂದಿನಂತೆ ಓದಿ, ಪ್ರತಿಕ್ರಯಿಸಿ. ಧನ್ಯವಾದಗಳು – ಲಕ್ಷ್ಮೀನಾರಾಯಣ ಗುಡೂರ (ವಾರದ ’non-ಲೇಖಕ’ ಸಂಪಾದಕ).

ಸರ್ ಕೆ. ಎಸ್. ರಣಜಿತ್ ಸಿಂಹಜಿ (ರಣಜಿ)

ಭಾರತದಲ್ಲಿ ಈಗಿನ IPL ಮುಂಚೆ ರಣಜಿ ಟ್ರೋಫಿ ಅತ್ಯಂತ ಪ್ರಮುಖವಾದ ಕ್ರಿಕೆಟ್ ಪಂದ್ಯವಾಗಿತ್ತು. ೧೯ನೇ ಶತಮಾನದಲ್ಲಿ ಈಗಿನ ಮುಂಬೈ ನಗರದಲ್ಲಿ ಪಾರ್ಸಿ ಪಂಗಡದವರು ಮಾತ್ರ ಕ್ರಿಕೆಟ್ ಆಡುತ್ತಿದ್ದರು.  ನಂತರ ಇತರ ಪ್ರಾಂತ್ಯಗಳಲ್ಲೂ ಪ್ರಾರಂಭವಾಗಿ ೧೯೩೪ರಲ್ಲಿ ಅಂದಿನ ಕ್ರಿಕೆಟ್ ಸಂಸ್ಥೆಯ ಮುಖಂಡರಾಗಿದ್ದ ಅಂಥೋನಿ ಡಿ ಮೆಲ್ಲೋ ಅಂತರರಾಜ್ಯ ಸ್ಪರ್ಧೆ  ನಡೆಸುವುದಕ್ಕೆ ಸಲಹೆ ಕೊಟ್ಟರು.  ಅದು Cricket Championship of India ಹೆಸರಿನಿಂದ ಶುರುವಾಗಿ  ಪಟಿಯಾಲಾ ಮಹಾರಾಜರು  ಟ್ರೋಫಿಯನ್ನು ಕಾಣಿಕೆಯಾಗಿ ಕೊಟ್ಟ  ನಂತರ  ಈ ಪಂದ್ಯ “ರಣಜಿ ಟ್ರೋಫಿ” ಪಂದ್ಯ ಎಂದಾಯಿತು.  ಮೊದಲ ಸ್ಪರ್ಧೆ, ೪/೧೧/೧೯೩೪, ಮೈಸೂರ್ ಮತ್ತು ಮದ್ರಾಸ್ ರಾಜ್ಯದ ತಂಡದವರ ಮಧ್ಯೆ ನಡೆಯಿತು; ಅದರಲ್ಲಿ ಮದ್ರಾಸ್ ಗೆ ಜಯ ದೊರೆತಿತ್ತು. 

ಅನೇಕ ವರ್ಷ ಕೇಂಬ್ರಿಡ್ಜ್, ಸಸೆಕ್ಸ್ ಮತ್ತು ಇಂಗ್ಲೆಂಡ್ ದೇಶಕ್ಕೆ ಆಡಿದ ರಣಜಿತ್ ಸಿಂಹ ಭಾರತಕ್ಕೆ ಅಕ್ಟೊಬರ್ ೧೯೦೪ರಲ್ಲಿ ಹಿಂತಿರುಗಿದಾಗ ಕ್ರಿಕೆಟನ್ನು ಜನಪ್ರಿಯಗೊಳಿಸುವ ಪ್ರಯತ್ನ ಮಾಡಲಿಲ್ಲ, ಮತ್ತು ಅವರಿಗೆ ಈ ವಿಷಯದಲ್ಲಿ ಯಾವ ಆಸಕ್ತಿ ಸಹ ಇರಲಿಲ್ಲ. ಕೆಲವರು ಇದರ ವಿಚಾರವನ್ನು ಪ್ರಸ್ತಾಪಿಸಿದಾಗ "ನಾನು ಇಂಗ್ಲೆಂಡ್ ದೇಶಕ್ಕೆ ಆಡಿದವನು ಮಾತ್ರ" ಎಂಬ ಉದಾಸೀನದ ಉತ್ತರ ಕೊಟ್ಟನಂತೆ. ಈ ಕಾರಣದಿಂದ ಅನೇಕರು, ರಣಜಿಯನ್ನು "Father of Indian Cricket " ಅನ್ನುವುದು ಸರಿಯಲ್ಲ ಅನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದ ಕ್ರಿಕೆಟ್‍ನಲ್ಲಿ ಬಹಳ ದೊಡ್ಡ ಹೆಸರು ಗಳಿಸಿದ್ದ. ಇಂಗ್ಲೆಂಡ್ ನಲ್ಲಿ ರಣಜಿಯ ಹೆಸರು ಮನೆಮಾತಾಗಿತ್ತು ಮತ್ತು ಅವನು ಆಡುತ್ತಿದ್ದರೆ ಜನರು ಕಿಕ್ಕಿರಿದು ಸೇರುತ್ತಿದ್ದರು. ಇಂಗ್ಲಂಡ್ ದೇಶದ ತಂಡದಲ್ಲಿ ರಣಜಿ ಮೊಟ್ಟಮೊದಲ ಭಾರತೀಯ ಮೂಲದ ಆಟಗಾರನಾಗಿದ್ದ.

೧೮೮೮ರಲ್ಲಿ ಹದಿನಾರು ವಯಸ್ಸಿನ ಹುಡುಗ, ರಾಜಕೋಟನ ಶಾಲೆಯಲ್ಲಿ ಕ್ರಿಕೆಟ್ ಆಡಿದ ಅನುಭವ ಮಾತ್ರ ಇದ್ದು, ಓದುವುದಕ್ಕೆ ಕೇಂಬ್ರಿಡ್ಜ್ ವಿಶ್ಯವಿದ್ಯಾಲಯಕ್ಕೆ ಬಂದು ಕ್ರಿಕೆಟ್ ನಲ್ಲಿ ದೊಡ್ಡ ಹೆಸರು ಗಳಿಸಿದ್ದು ಆಶ್ಚರ್ಯದ ವಿಚಾರವೇ ಸರಿ. ಇಲ್ಲಿ ಅವನ ವರ್ಣರಂಜಿತ ಜೀವನ ಚರಿತ್ರೆಯ ಸಂಕ್ಷಿಪ್ತ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದ್ದೇನೆ.

ಇಂಗ್ಲೆಂಡ್ ನಲ್ಲಿ ರಣಜಿ, ರಾಜಕುಮಾರ (Prince) ಎಂದು ಹೇಳಿಕೊಂಡಿದ್ದರೂ, ಈತ ರಾಜಕುಮಾರನಾಗಿರಲಿಲ್ಲ, ಅಥವಾ ಯಾವ ಅರಮನೆಯಲ್ಲೊ ಬೆಳೆಯಲಿಲ್ಲ. ಹುಟ್ಟಿದ್ದು ೧೦/೦೯/೧೮೭೨ರಲ್ಲಿ ಪಶ್ಚಿಮ ಭಾರತದ ನವಾನಗರ ಪ್ರಾಂತ್ಯದ ಸದೋದಾರ್ ಎಂಬ ಸಣ್ಣ ಊರಿನಲ್ಲಿ. ತಂದೆ ಜೀವನ್ ಸಿಂಹಜಿ, ಅಲ್ಲಿನ ರಾಜ ವಿಭಾಜಿಗೆ ದೂರದ ಸಂಬಂಧ. ರಾಜನ ಮಗ ಕಲೋಭ ಈ ರಾಜ್ಯಕ್ಕೆ ಉತ್ತರಾಧಿಕಾರಿಯಾಗಬೇಕಾಗಿತ್ತು ಆದರೆ ಅವನ ನಡವಳಿಕೆ ಮತ್ತು ದುಷ್ಟತನದಿಂದ ಅವನನ್ನು ದೂರ ಮಾಡಿ, ಹತ್ತಿರ ಸಂಬಂಧವರ ಮನೆಯಿಂದ ಒಂದು ಗಂಡು ಮಗುವನ್ನು ಆಯ್ಕೆ ಮಾಡಿದರು. ಆದರೆ, ಅಂದಿನ ವದಂತಿಗಳ ಪ್ರಕಾರ, ಈ ಮಗು ಜ್ವರದಿಂದಲೋ ಅಥವಾ ವಿಷಪ್ರಯೋಗದಿಂದಲೋ ಕೆಲವೇ ತಿಂಗಳಲ್ಲಿ ತೀರಿಹೋಯಿತು. ಎರಡನೇ ಆಯ್ಕೆ ಜೀವನ್ ಸಿಂಹಜಿಯ ಎರಡನೇ ಮಗ ರಂಜಿತ್ ಸಿಂಹಜಿ. ಬ್ರಿಟಿಷ್ ಅಧಿಕಾರಿಗಳ ಒಪ್ಪಿಗೆ ಪಡೆದು ರಾಜಕೋಟೆಯಲ್ಲಿ ಇರುವ ರಾಜಕುಮಾರ್ ಕಾಲೇಜ್ ನಲ್ಲಿ ಇವನ ವಿದ್ಯಾಭ್ಯಾಸ ಮುಂದೆವರೆಯಿತು ಆದರೆ ಜೀವನ್ ಸಿಂಹಜಿ ಮನೆಯವರ ನಡವಳಿಕೆ ಮತ್ತು ದುರಾಸೆಗಳಿಂದ ರಣಜಿಯನ್ನು ಅಧಿಕೃತವಾಗಿ ದತ್ತು ಪುತ್ರನಾಗಿ ಮಾಡಲಿಲ್ಲ. ಆದರೂ ರಾಜನಿಂದ ಆರ್ಥಿಕ ಸಹಾಯ ಮತ್ತು ನೆರವು ಇತ್ತು. ಕೆಲವು ವರ್ಷಗಳ ನಂತರ ರಾಜನ ಪರಿವಾರದಲ್ಲಿದ್ದ ಒಬ್ಬಳಿಗೆ ಒಂದು ಗಂಡು ಮಗು ಹುಟ್ಟಿ ಅವನನ್ನು ಉತ್ತರಾಧಿಕಾರಿ ಎಂದು ಘೋಷಿಸಿದರು. ಈ ವಿಚಾರ ಬಹಳ ವಿವಾದಾತ್ಮಕವಾಗಿತ್ತು, ಕಾರಣ ಈ ಮಗುವಿನ ತಾಯಿ ರಾಜನ ರಾಣಿಯಾಗಿರಲಿಲ್ಲ; ಆಕೆ ವೇಶ್ಯೆ ಮತ್ತು ಮುಸಲ್ಮಾನ ಪಂಗಡಕ್ಕೆ ಸೇರಿದವಳು ಅನ್ನುವ ವದಂತಿಗಳು ಅನೇಕವಾಗಿತ್ತು.

ರಣಜಿ, ರಾಜಕುಮಾರ್ ಕಾಲೇಜ್ ನಲ್ಲಿ ಕ್ರಿಕೆಟ್ ಕಲಿತು ೧೮೮೪ರಲ್ಲಿ ಕಾಲೇಜ್ ನಾಯಕ ಆಗಿಯೂ ಆಯ್ಕೆ ಆದ. ಆ ಶಾಲೆಯ ಹೆಡ್ ಮಾಸ್ಟರ್ ಮಿ. ಮೆಕ್ನಾಟನ್ (Mr Macnaghten) ರಣಜಿ ಮತ್ತು ಇನ್ನಿಬ್ಬರನ್ನು ೧೮೮೮ರಲ್ಲಿ ಇಂಗ್ಲೆಂಡಿಗೆ ಕರೆದುಕೊಂಡು ಹೋಗಿ, ಕೇಂಬ್ರಿಡ್ಜ್ ನಲ್ಲಿ ಓದುವ ಉದ್ದೇಶದಿಂದ ಟ್ರಿನಿಟಿ ಕಾಲೇಜಿನ Chaplin ಅಥವಾ ಪಾದ್ರಿ ಆಗಿದ್ದ ರೆವ್. ಲೂಯಿ ಬೊರಿಸೊ (Rev Louis Borrisow) ಅನ್ನುವವರ ಮನೆಯಲ್ಲಿ ವಾಸವಾಗಿ ಇರುವುದಕ್ಕೆ ಏರ್ಪಾಡು ಮಾಡಿ ರಾಜೆಕೋಟೆಗೆ ಹಿಂತಿರಿಗಿದರು. ಇಂಗ್ಲೆಂಡ್‍ನ ವಾತಾವರಣ ರಣಜಿಗೆ ಹಿಡಿಸಲಿಲ್ಲ. ಆದರೂ ಕ್ರಿಕೆಟ್ ಆಡುವ ಮತ್ತು ಕೇಂಬ್ರಿಡ್ಜ್ ನಲ್ಲಿ ಓದುವ ಆಸೆ ಇತ್ತು. ಆದರೆ, ಕಾಲೇಜ್ ಪ್ರವೇಶಕ್ಕೆ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕಾಗಿತ್ತು. ಇದು ಸಾಧ್ಯವಾಗಲಿಲ್ಲ, ಆದರೂ ಇವನನ್ನು "ಸ್ಥಾನದ ಯುವಕ" ಅಂದರೆ, Youth of Position, ಎಂದು ಪರಿಗಣಿಸಿದ್ದರಿಂದ ಕಾಲೇಜಿಗೆ ಸೇರಲು ಸಾಧ್ಯವಾಯಿತು. ರಣಜಿ ಶಿಕ್ಷಣ ಬಗ್ಗೆ ಸಾಕಷ್ಟು ಗಮನ ಕೊಡಲಿಲ್ಲ, ಕ್ರಿಕೆಟ್ ಆಡುವುದರಲ್ಲಿ ಮಾತ್ರ ತೊಡಗಿಸಿಕೊಂಡ. ೧೮೯೨ರಲ್ಲಿ ಪ್ರತ್ಯೇಕ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು, ಮನೋರಂಜನೆಗೆ ಅದ್ದೂರಿಯಾಗಿ ಖರ್ಚು ಮಾಡಿ ತಾನು ರಾಜಮನೆತದವನು ಅನ್ನುವ ಭಾವನೆ ಕಲ್ಪಿಸಿದ. ಆದರೆ ಹಣ ಮಾತ್ರ ಸಾಲದಿಂದ!

ಇಂಗ್ಲೆಂಡ್ ಬಾರ್ ಪರೀಕ್ಷೆಗೆ ಇನ್ನಷ್ಟು ಹಣಸಹಾಯ ಬೇಕೆಂದು ವಿಭಾಜಿ ರಾಜನಿಗೆ ಮನವಿ ಮಾಡಿದಾಗ, ರಾಜ ಹಣ ಕಳಿಸಲು ಬಾರ್ ಪರೀಕ್ಷೆ ಮುಗಿದಂತೆ ಭಾರತಕ್ಕೆ ಹಿಂತಿರಿಗಬೇಕು ಅನ್ನುವ ಷರತ್ತು ಹಾಕಿದ. ಆದರೆ ರಣಜಿ ಈ ಪರೀಕ್ಷೆಯಲ್ಲಿ ಭಾಗವಹಿಸಲಿಲ್ಲ ಮತ್ತು ಹಣಕಾಸಿನ ಸಮಸ್ಯೆ ಬಗೆಹರಿಯಲಿಲ್ಲ.
೧೮೯೨/೩ ರಲ್ಲಿ ಕೇಂಬ್ರಿಡ್ಜ್ ತಂಡಕ್ಕೆ ಆಯ್ಕೆ ಆಗಿ ಹೆಸರುಮಾಡಿಕೊಂಡ.  ನಂತರ ಕೇಂಬ್ರಿಡ್ಜ್ Blue ಪ್ರಶಸ್ತಿ ಸಹ ದೊರಕಿತು.  ಭಾರತಕ್ಕೆ ಹಿಂತಿರುಗಲಿಲ್ಲವಾದ ಕಾರಣದಿಂದ ವಿಭಾಜಿ ಹಣ ಸಹಾಯವನ್ನು ನಿಲ್ಲಿಸಬೇಕಾಯಿತು.  ರಣಜಿ, ಹಲವಾರು ಬ್ರಿಟಿಷ್ ಅಧಿಕಾರಿಗಳ ಶಿಫಾರಸಿನಿಂದ ಇನ್ನಷ್ಟು ಹಣವನ್ನು ಸಾಲದ ರೂಪದಲ್ಲಿ ವಿಭಾಜಿ ಕೊಟ್ಟದ್ದು ಸ್ವಲ್ಪ ಸಮಾಧಾನವಾಯಿತು. 
    
ಕೇಂಬ್ರಿಡ್ಜ್  ತಂಡಕ್ಕೆ (೧೮೯೦-೧೮೯೩) ಆಡಿದ ನಂತರ ರಣಜಿ ಸಸೆಕ್ಸ್ (Sussex) ಕೌಂಟಿಗೆ ೧೮೯೫-೧೯೧೨ ವರೆಗೆ ಆಡಿ, ೧೮೯೯-೧೯೦೩ರಲ್ಲಿ ಕಾಪ್ಟನ್ ಸಹ ಆಗಿದ್ದ.  ಒಟ್ಟು ೩೦೦೦ ರನ್ನುಗಳನ್ನು ೧೮೯೯ ಮತ್ತು ೧೯೦೦ರ ಅವಧಿಯಲ್ಲಿ ಹೊಡದಿದ್ದ. 

ಆಸ್ಟ್ರೇಲಿಯಾ  ತಂಡ ೧೮೯೬ ನಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿತು (Ashes Series).  ಅನೇಕರು, ಲಾರ್ಡ್ಸ ಮೈದಾನದಲ್ಲಿ ನಡೆದ ಮೊದಲನೆಯ ಟೆಸ್ಟ್ ತಂಡದಲ್ಲಿ ರಣಜಿ ಅಡುತ್ತಾನೆ ಎಂದು ಊಹಿಸಿದ್ದರು.  ಆದರೆ MCC ಯ ಅಧ್ಯಕ್ಷ ಲಾರ್ಡ್ ಹ್ಯಾರಿಸ್ ಇದಕ್ಕೆ ಒಪ್ಪಲಿಲ್ಲ; ಕಾರಣ, ಜನಾಂಗೀಯ ತಾರತಮ್ಯ (Racial discrimination).  ಆದರೆ ಓಲ್ಡ್ ಟ್ರಾಫರ್ಡ್ (Old Trafford) ನಲ್ಲಿ ನಡೆದ ಎರಡನೆಯ ಟೆಸ್ಟ್ ನಲ್ಲಿ  ರಣಜಿ ತಂಡದಲ್ಲಿ ಸೇರಿದ್ದ.  ಇದಕ್ಕೆ ಮುಂಚೆ ರಣಜಿ ಆಡುವುದಕ್ಕೆ ಆಸ್ಟ್ರೇಲಿಯದ ಕ್ಯಾಪ್ಟನ್ ತನ್ನ ಅಭ್ಯಂತರ ಇಲ್ಲ ಎಂದ ಮೇಲೆ ರಣಜಿಯ ಆಯ್ಕೆ ಆಯಿತಂತೆ!  ಮೊಟ್ಟಮೊದಲನೆಯ ಬಾರಿಗೆ ಒಬ್ಬ ಭಾರತೀಯ ಪ್ರಜೆ ೧೬/೦೭/೧೮೯೬ ರಂದು ಇಂಗ್ಲೆಂಡ್ ದೇಶದ ತಂಡದಲ್ಲಿ ಭಾಗವಹಿಸಿದ್ದು.
 
ರಣಜಿ, ಮೊದಲನೆಯ ಇನ್ನಿಂಗ್ಸ್ ನಲ್ಲಿ ೬೨ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ೧೫೪ ಅಜೇಯ (not  out) ರನ್ನುಗಳನ್ನು ಮಾಡಿ ಇಂಗ್ಲೆಂಡ್ ತಂಡಕ್ಕೆ ಶಾಶ್ವತ ಆಟಗಾರನಾಗಿ ಸೇರಿದ.
  
೧೮೯೬ರಲ್ಲಿ ರಣಜಿ ಆರೋಗ್ಯ ಸ್ವಲ್ಪ ಹದಗೆಟ್ಟಿತ್ತು. ಈ ಸಮಯದಲ್ಲಿ, ಕ್ರಿಕೆಟ್ ಆಟದ ತನ್ನ ಅನುಭವ ಮತ್ತು ಆಡುವ ರೀತಿ ಬಗ್ಗೆ ಬರೆಯುವ ಯೋಚನೆ ಬಂತು.  ಅವನ ಸ್ನೇಹಿತರಾಗಿದ್ದ ಚಾರ್ಲ್ಸ್ ಫ್ರೈ ಮತ್ತು ಡಾಕ್ಟರ್ ಬಟ್ಲರ್ ನೆರವಿನಿಂದ ತನ್ನ Jubilee Book of Cricket ಪುಸ್ತಕ ಪ್ರಕಟಿಸಿದ.  ಇದೇ ವರ್ಷ ವಿಕ್ಟೋರಿಯಾ ರಾಣಿಯ ರಾಜ್ಯಭಾರದ ೨೫ನೇ ವರ್ಷದ (ರಜತ ಮಹೋತ್ಸವ, silver jubilee) ಮಹೋತ್ಸವ ಆದ್ದರಿಂದ ರಣಜಿಯ ಪುಸ್ತಕಕ್ಕೆ Jubilee ಹೆಸರು ಬಂದಿದ್ದು.
   
೧೮೯೭-೯೮ ನಲ್ಲಿ  ಆಸ್ಟ್ರೇಲಿಯ ಪ್ರವಾಸಕ್ಕೆ ಹೋದ ಇಂಗ್ಲೆಂಡ್ ಪಂಗಡದಲ್ಲಿ ರಣಜಿ ಸಹ ಸೇರಿದ್ದ.  ಮೊದಲನೆಯ ಟೆಸ್ಟ್ ನಲ್ಲಿ ಮಾಡಿದ ೧೭೫ ರನ್ನುಗಳು ಸೇರಿ ಒಟ್ಟು ೧೧೫೭ ರನ್ನುಗಳನ್ನು ಹೊಡೆದು ಆ ದೇಶದಲೂ ಜನಪ್ರಿಯನಾದ.  ರಣಜಿಯ ನೆಚ್ಚಿನ "leg glance" ವಿಧಾನ (technique) ಎಲ್ಲರ  ಮೆಚ್ಚಿಗೆಯನ್ನು ಪಡೆಯಿತು.
 
ಆಸ್ಟ್ರೇಲಿಯಾ ಪ್ರವಾಸ ಮುಗಿದಮೇಲೆ, ಇಂಗ್ಲೆಂಡ್ ತಂಡ ಕೊಲಂಬೊ ಮೂಲಕ ಬಂದಾಗ ರಣಜಿ ಅಲ್ಲೇ ಇಳಿದು ಭಾರತಕ್ಕೆ ಬಂದ.  ೧೮೯೬ ರಲ್ಲಿ ರಾಜ ವಿಭಾಜಿಯ ನಿಧನವಾದ ಮೇಲೆ ಉತ್ತರಾಧಿಕಾರಿಯಾಗಿದ್ದ ಹನ್ನೆರಡು ವರ್ಷದ ಜಸವಂತ್ ಸಿಂಹಜಿ ನವಾನಗರದ ಪಟ್ಟಕ್ಕೆ ಬಂದ.  ರಣಜಿಗೆ ತಾನು ರಾಜ್ಯವನ್ನು ಆಳುವ ಅವಕಾಶ ಕಳೆಯಿತು ಎನ್ನಿಸಿ ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ನಲ್ಲಿಯೇ ಇನ್ನೂ  ಹೆಸರು ಮಾಡುವ ನಿರ್ಧಾರಕ್ಕೆ ಬಂದಿದ್ದರೂ, ಜಸವಂತ್  ಸಿಂಹಜಿಯ ಉತ್ತರಾಧಿಕಾರದ ಮೇಲೆ ಸವಾಲನ್ನು ಹಾಕಿದ.  ಆದರೆ ಇದು ಯಶಸ್ವಿಯಾಗಲಿಲ್ಲ. ಅಷ್ಟೇ ಅಲ್ಲದೆ ವಿಭಾಜಿ ಇದ್ದಾಗ ಹಣ ಸಹಾಯವಿತ್ತು, ಈಗ ಅದೂ ನಿಲ್ಲುವಂತಿತ್ತು. 

ಅಧೃಷ್ಟಕ್ಕೆ ಪಾಟಿಯಾಲಾದ ಮಹಾರಾಜ ಮತ್ತು ಕ್ರಿಕೆಟ್ ಪ್ರೇಮಿ ರಾಜಿಂದರ್ ಸಿಂಗ್ ಅವರು ರಣಜಿಯ ನೆರವಿಗೆ ನಿಂತು ಹಣ ಸಹಾಯ ಮಾಡಿದ ನಂತರ ರಣಜಿ ಇಂಗ್ಲೆಂಡ್ ಗೆ ಹಿಂತಿರುಗಿ ಸಸೆಕ್ಸ್‌ನ ಕ್ಯಾಪ್ಟನ್ ಆದ ಮತ್ತು ಇಂಗ್ಲೆಂಡ್ ತಂಡಕ್ಕೂ ಸೇರಿದ.   ಆದರೆ ೧೯೦೦ ರಲ್ಲಿ ರಾಜಿಂದರ್ ಸಿಂಗರ ನಿಧನವಾದನಂತರ ರಣಜಿಯ ಆದಾಯ ಕುಸಿದು ದಿವಾಳಿತನವನ್ನು ಎದುರಿಸಬೇಕಾಯಿತು (bankruptcy).  ಇದನ್ನು ಪರಿಹರಿಸಲು ೧೯೦೧ ಡಿಸೆಂಬರ್ ನಲ್ಲಿ ಭಾರತಕ್ಕೆ ಹಿಂತಿರುಗಿ ಅನೇಕರನ್ನು ಭೇಟಿಮಾಡಿದ ಮೇಲೆ ಸ್ವಲ್ಪ ಮಟ್ಟಿಗೆ ರಣಜಿಯ ಆರ್ಥಿಕ ಸ್ಥಿತಿ ಕುದುರಿತು.  ೧೯೦೨ರಲ್ಲಿ ಇಂಗ್ಲೆಂಡ್ ನಲ್ಲಿ ಪುನಃ ಸಸೆಕ್ಸ್ ತಂಡದ ಕ್ಯಾಪ್ಟನ್ ಆದರೂ ಇವನ ಆಡುವ ರೀತಿ ಬದಲಾಗಿ  ಆಟದ ಶೈಲಿಯಿಂದ ಅನೇಕರಿಗೆ ನಿರಾಶೆಯಾಯಿತು.  ರಣಜಿಯ ಜೀವನಚರಿತ್ರಗಾರ (biographer) ಸೈಮನ್ ವೈಲ್ಡನ ಊಹೆಯ ಪ್ರಕಾರ ಇದಕ್ಕೆ ಮುಖ್ಯ ಕಾರಣ ರಣಜಿತ್ ಸಿಂಹನ ಕಠಿಣ ಆರ್ಥಿಕ ಪರಿಸ್ಥಿತಿ. 

ನವಾನಗರವನ್ನು ಆಳುವ ಇನ್ನೂ ಆಸೆ ಇಟ್ಟಿಕೊಂಡು ೧೯೦೪ರಲ್ಲಿ ಸ್ನೇಹಿತ ಆರ್ಚಿ ಮೆಕ್‍ಲಾರೆನ್ ಜೊತೆ ಭಾರತಕ್ಕೆ ಬಂದು, ಬ್ರಿಟಿಷ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರೂ ರಣಜಿಗೆ ಹೆಚ್ಚು ಬೆಂಬಲ ಸಿಗಲಿಲ್ಲ.  ಅದೂ ಅಲ್ಲದೆ ಮನ್ಸೂರ್ ಕುಚರ್ ಅನ್ನುವವನು ಕೊಟ್ಟ ಸಾಲ ಹಿಂತಿರುಗಿ ಪಡೆಯಲು ಬಾಂಬೆ ಹೈಕೋರ್ಟ್ ನಲ್ಲಿ ಮೊಕದ್ದಮೆ ಸಹ ಹಾಕಿದ್ದರಿಂದ ೧೯೦೬ರ ವರೆಗೆ ಇಂಗ್ಲೆಂಡ್ ಗೆ ಹಿಂತಿರುಗುವುದು ಸಾಧ್ಯವಾಗಲಿಲ್ಲ.
 
೧೪/೦೮/೧೯೦೬ ರಂದು ನವಾನಗರದ ರಾಜನಾಗಿದ್ದ ಜಸವಂತ್  ಸಿಂಹಜಿ ಜ್ವರ ಬಂದ ಕಾರಣದಿಂದ ನಿಧನನಾದ ಸುದ್ದಿ ಬಂತು.  ಜಸವಂತ್ ಸಿಂಹಜಿಯ ಆರೋಗ್ಯಕ್ಕೆ ಯಾವ ಸಮಸ್ಯೆ ಇರಲಿಲ್ಲ; ಅಂದಿನ ವದಂತಿಗಳ ಪ್ರಕಾರ ಈ ಸಾವು ವಿಷಪ್ರಯೋಗದಿಂದ ಉಂಟಾಯಿತು ಅನ್ನುವುದು ಅನೇಕರ ನಂಬಿಕೆ.  ಅದಾಗಿ ಆರು ತಿಂಗಳವರೆಗೆ ಬ್ರಿಟಿಷ್ ಅಧಿಕಾರಿಗಳು ಈ ರಾಜ್ಯದ ಹೊಸ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಿಲ್ಲ.  ನಾಲ್ಕು ಪ್ರಾತಿನಿಧ್ಯರು - ರಣಜಿ, ವಿಭಾಜಿಯ ಮೊಮ್ಮಗ ಲಕೋಭ ಮತ್ತು ಜಸವಂತ್ ಸಿಂಹಜಿಯ ತಾಯಿ, ಸರ್ಕಾರಕ್ಕೆ ಮನವಿ ಮಾಡಿದರು.  ಕೊನೆಗೆ ಬ್ರಿಟಿಷ್ ಅಧಿಕಾರಿಗಳು, ರಣಜಿಯ ಹಿನ್ನಲೆ  ನೋಡಿ ಅವನನ್ನು ಆಯ್ಕೆ ಮಾಡಿದರು.  ಹಲವಾರು ತಿಂಗಳ ನಂತರ, ೧೧/೦೩/೧೯೦೭ ರಂದು ರಣಜಿ Colonel His Highness Sir Ranjitsinhaji Vibhaji, Jam Sahib of Nawanagar ಆಗಿ  ಪಟ್ಟಕ್ಕೆ ಬಂದ. ಈ ಸ್ಥಾನಕ್ಕೆ ಬಂದಮೇಲೆ ಬಾಂಬೆ ಹೈ ಕೋರ್ಟ ನಲ್ಲಿದ್ದ ಮೊಕದ್ದಮೆಯನ್ನು ವಾಪಸ್ಸು ಪಡೆಯುವುದು ಸಾಧ್ಯವಾಯಿತು.
 
ಇವನ ರಾಜ್ಯದಲ್ಲಿ ಮಳೆ ಇಲ್ಲದೆ ಬರಗಾಲದಿಂದ ಜನರ ಪರಿಸ್ಥಿತಿ ಗಂಭೀರವಾಗಿತ್ತು, ಪರಿಹಾರ ಕೊಡುವುದಕ್ಕೆ ರಾಜ್ಯದ ಒಡವೆಗಳನ್ನು ಮಾರಬೇಕಾಯಿತು.  ಮತ್ತು ಇತರ ರಾಜ್ಯಗಳಿಂದ ಸಹಾಯ ಪಡೆದು ರಾಜ್ಯಕ್ಕೆ ಸೇರಿದ ಸಲಾಯ ಎಂಬ ಸಮುದ್ರ ತೀರದಲ್ಲಿ ಬಂದರು ಕಟ್ಟಿ ವ್ಯಾಪಾರಕ್ಕೆ ಅನುಕೂಲವಾಗುವಂತೆ ಮಾಡುವುದು ಮತ್ತು ಇತರ ಕಾಮಗಾರಿಕೆ ಕೆಲಸಗಳು ಪ್ರಾರಂಭ ವಾಯಿತು.  ಆದರೆ ರಣಜಿಗೆ ಆಡಳಿತದ ಅನುಭವ ಇರಲಿಲ್ಲವಾದ್ದರಿಂದ ಈ ಸುಧಾರಣೆಗಳನ್ನು ಜಾರಿಗೆ ತರುವುದು ಕಷ್ಟ ವಾಯಿತು.  ಇವನ ಆರೋಗ್ಯ ಬೇರೆ ಹದಗೆಟ್ಟಿತು ಮತ್ತು ಟೈಫಾಯಿಡ್  ಜ್ವರದಿಂದ ಕೆಲವು ತಿಂಗಳು ಹಾಸಿಗೆ ಹಿಡಿದಿದ್ದ.  ವೈದ್ಯರ ಸಲಹೆ ಮೇಲೆ ವಿಶ್ರಾಂತಿಗೆ ಇಂಗ್ಲೆಂಡ್ ನಲ್ಲಿ  ಕೆಲವು ತಿಂಗಳು ಕಳೆಯಲು ಹಿಂತಿರಿಗಿ  ಗ್ರಾಮಾಂತರದಲ್ಲಿ ದೊಡ್ಡ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು  ಹಲವಾರು ತಿಂಗಳು ಕಳೆದ.  ಆದರೆ ಸಾಲಗಾಲರ  ಕಾಟ ಮಾತ್ರ ತಪ್ಪಲಿಲ್ಲ, ಅನೇಕ ತಿಂಗಳು ಈ ಮನೆ ಬಾಡಿಗೆ ಕೊಡದೆ ಇದ್ದರಿಂದ, ಮಾಲೀಕ ಇಂಡಿಯಾ ಕಚೇರಿಗೆ ದೂರು ಸಹ ಕೊಟ್ಟ.  ತನ್ನ ರಾಜ್ಯದಿಂದ ದುಡ್ಡು ಬರುವ ಸಾದ್ಯೆತೆ ಇರಲಿಲ್ಲ, ಅಲ್ಲಿಯ ಬೊಕ್ಕಸ ಖಾಲಿಯಾಗಿತ್ತಲ್ಲ!  ೧೯೦೮ರಲ್ಲಿ ಪುನಃ ಕ್ರಿಕೆಟ್ ಆಡುವುದಕ್ಕೆ ಪ್ರಾರಂಭಿಸಿದ. ಸಮಯ ಸಿಕ್ಕಾಗ ರೆವ್. ಬೊರಿಸೊ ಅವರ ಮನೆಯಲ್ಲಿ ಇದ್ದು ಅವರ ಮಗಳು ಈಡಿತ್ ಅನ್ನು ಮದುವೆಯಾಗುವ ಪ್ರಯತ್ನ ಪಟ್ಟ.  ಆದರೆ ಅಂದಿನ ಸಮಾಜದ ನಿರ್ಬಂಧನೆಗಳಿಂದ ಇದು ಸಾಧ್ಯವಾಗಲಿಲ್ಲ ಮತ್ತು ಅವಳ ತಂದೆ ಈ ಸಂಬಂಧವನ್ನು ನಿರಾಕರಿಸಿದರಂತೆ.  ಕೊನೆಗೆ ೧೯೦೮ರಲ್ಲಿ ಭಾರತಕ್ಕೆ ಹಿಂತಿರುಗಿ ತನ್ನ ರಾಜ್ಯವನ್ನು ಆಳುವ ಪ್ರಯತ್ನ ಮಾಡಿದ.  ರಾಜ್ಯದ ಪರಿಸ್ಥಿತಿ ಇನ್ನೂ ಸುಧಾರಿಸಿರಲಿಲ್ಲ, ಬರಗಾಲ ಮತ್ತು ಕ್ಷಾಮ ಜನರನ್ನು ಕಾಡುತಿತ್ತು.  ತನ್ನ ಆದಾಯವನ್ನು ಹೆಚ್ಚುಮಾಡುವ ಸಮಯ ಅಲ್ಲದಿದ್ದರೂ, ಹೊಸ ತೆರಿಗೆಯನ್ನು ವಿಧಿಸಲು ಪ್ರಯತ್ನ ಪಟ್ಟ.  ಆದರೆ ಅಂದಿನ ಬ್ರಿಟಿಷ್ ಅಧಿಕಾರಿಗಳು ಇದನ್ನು ತಡೆದು ರಣಜಿ ಜೊತೆ ಚರ್ಚೆ ನಡಿಸಿ, ೩-೪ ವರ್ಷ ನವಾನಗರದಲ್ಲೇ ಇದ್ದು ರಾಜ್ಯವನ್ನು ಆಳುವುದಕ್ಕೆ ಸಲಹೆ ಕೊಟ್ಟರು, ಆದರೆ  ೧೯೧೨ರಲ್ಲಿ ರಣಜಿ ಪುನಃ ಇಂಗ್ಲೆಂಡ್ ಗೆ  ಹಿಂತಿರುಗಿ ಸಸೆಕ್ಸ್ ಕ್ರಿಕೆಟ್ ತಂಡಕ್ಕೆ  ಸೇರಿದ.  ಅನೇಕರಲ್ಲಿ ಮಾಡಿದ ಸಾಲದಿಂದ ತಪ್ಪಿಸಿಕೊಳ್ಳುವುದಕ್ಕೆ ಕಷ್ಟವಾಯಿತು.  ಕೆಲವರು ಇವನ ಮೇಲೆ ಮೊಕದ್ದಮೆ ಹಾಕಿದ್ದರೂ, ರಣಜಿ ಭಾರತದ ಒಬ್ಬ ರಾಜಮನೆತನದವನು ಆದ್ದರಿಂದ ಇಂಗ್ಲೆಂಡ್ ನ್ಯಾಯಾಲಯಕ್ಕೆ ಇವನ ಮೇಲೆ ಯಾವ ಹಿಡಿತ ಇಲ್ಲ ಎಂದು ಅವನ ವಕೀಲರು ವಾದ ಮಂಡಿಸಿದರು!  ಕೊನೆಗೆ ಹಾಗೂ ಹೀಗೂ ಮಾಡಿ ಕೆಲವರಿಗೆ ಸಾಲವನ್ನು ಹಿಂತಿರುಗಿಸಿ ೧೯೧೩ರಲ್ಲಿ ನವಾನಗರಕ್ಕೆ ಬಂದು ಆಳುವ ಪ್ರಯತ್ನ ಮಾಡಿದ.  ರಣಜಿ ಇಂಗ್ಲೆಂಡ್ನಲ್ಲಿ ಕ್ರಿಕೆಟ್ ಆಡುವುದರಲ್ಲಿ ಕಾಲ ಕಳೆಯುತ್ತಿದ್ದಾಗ ನವಾನಗರದ ಅಭಿವೃದ್ಧಿಯನ್ನು ಬ್ರಿಟಿಷ್ ಅಧಿಕಾರಿಗಳು ಕೈಗೆತ್ತಿಕೊಂಡು ರಾಜ್ಯದಲ್ಲಿ  ಬೇಕಾಗಿದ್ದ ಮೂಲ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದರು. 

೧೯೧೪ರಲ್ಲಿ ಮೊದಲನೆಯ ಮಹಾ ಯುದ್ಧ ಪ್ರಾರಂಭವಾದಾಗ ರಣಜಿ ತನ್ನ ರಾಜ್ಯದ ಸಂಪೂರ್ಣ ಬೆಂಬಲ ನೀಡಿ, ಇಂಗ್ಲೆಂಡಿನ ತನ್ನ ಮನೆಯನ್ನು ಆಸ್ಪತ್ರೆಯಾಗಿ ಉಪಯೋಗಿಸುವುದಕ್ಕೆ ಅನುಮತಿ ನೀಡಿದ.  ಇದಲ್ಲದೆ ೧೯೧೪ರಲ್ಲಿ ಬ್ರಿಟಿಷ್ ಸೈನ್ಯಕ್ಕೆ ಸೇರಿ ಗೌರವಾನ್ವಿತ ಮೇಜರ್ ಹುದ್ದೆಗೆ ಅರ್ಹನಾದ.  ಆದರೆ ಭಾರತೀಯ ರಾಜಮನೆತವರು  ಯುದ್ಧದಲ್ಲಿ ಭಾಗವಹಿವುದಕ್ಕೆ ಅನುಮತಿ ಇರಲಿಲ್ಲ.  ಅಲ್ಲದೇ  ಫ್ರಾನ್ಸ್ ದೇಶದ ಚಳಿ ತಡೆಯಲಾರದೆ ಇಂಗ್ಲೆಂಡ್ ನಲ್ಲಿ ಹಲವಾರು ತಿಂಗಳು ಕಳೆದು ೧೯೧೫ರಲ್ಲಿ ಭಾರತಕ್ಕೆ ಹಿಂತಿರುಗಿದ.  

ರಣಜಿ ೧೯೨೦ರಲ್ಲಿ ಕ್ರಿಕೆಟ್‍ನಿಂದ ನಿವೃತ್ತನಾದ.  ಸ್ನೇಹಿತರ ಜೊತೆಯಲ್ಲಿ ಬೇಟೆಗೆ ಹೋದಾಗ ಆದ ಅಪಘಾತದಿಂದ ಒಂದು ಕಣ್ಣು ಕಳೆದುಕೊಡಿದ್ದೂ ಒಂದು ಕಾರಣ.  ರಣಜಿ  ಕ್ರಿಕೆಟ್ ಆಡಿದ ಅವಧಿಯಲ್ಲಿ  ಒಟ್ಟು ೨೪೬೯೨ ರನ್ನುಗಳನ್ನು ಗಳಿಸಿದ, ಸರಾವರಿ ಮೊತ್ತ (batting  average) ೫೬.೩೭ರೊಂದಿಗೆ.  ಬಹಳ ವರ್ಷದ ನಂತರ ಸರ್ ಜೆಫ್ರಿ ಬಾಯ್ಕಾಟ್ ಈ ದಾಖಲೆಯನ್ನು ಮುರಿದರು (ಸರಾಸರಿ ೫೬.೮೩!)
 
ರಣಜಿಗೆ ತನ್ನಂತೆ ಇರುವ ಇತರ ರಾಜಮನೆತನದವರ ಹಿತಾಸಕ್ತಿಗಳನ್ನು ಬೆಂಬಲಿವುದು ಮಾತ್ರ ಗುರಿಯಾಗಿತ್ತು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಏನೂ ಆಸಕ್ತಿ ಇರಲಿಲ್ಲ.  ದೇಶದಲ್ಲಿ ಕ್ರಿಕೆಟ್ ಆಡುವುದಕ್ಕೆ ಇವನಿಂದ ಯಾರಿಗೂ ಉತ್ತೇಜನ ಸಿಗಲಿಲ್ಲ.  ಇವನ ಜೀವನ ಚರಿತ್ರೆ ಬರೆದ ಸೈಮನ್ ವಾಲ್ಡ್ ಅಭಿಪ್ರಾಯದಲ್ಲಿ ರಣಜಿಯ ಮನಸ್ಸು ನವಾನಗರದ  ಬದಲು ಇಂಗ್ಲೆಂಡ್ ಮೇಲಿತ್ತು,  (.. "he was more at home in England with his friends").  ಮಾಹೀರ್ ಬೋಸ್  ಬರೆದಿರುವ History of Indian cricket ಪುಸ್ತಕದಲ್ಲಿ, ರಣಜಿ ಭಾರತದ ಕ್ರಿಕೆಟ್ ಪಿತಾಮಹ ಅನ್ನುವುದು ಮೂರ್ಖತನ ಎಂದು ಟೀಕಿಸಿದ್ದಾರೆ. 

ರಣಜಿ ಜೀವನದಲ್ಲಿ ಬಹು ಭಾಗ,  ಕ್ರಿಕೆಟ್ ಆಡುವುದು ಮತ್ತು ಸಾಲಗಾರರಿಂದ ತಪ್ಪಿಸಿಕೊಳ್ಳುವುದು ಇದರಲ್ಲೇ ಕಳೆಯಿತು ಅಂದರೆ ತಪ್ಪಲಾಗರದು.  ಕೊನೆ ಕೊನೆಗೆ ಇವನಿಗೂ ಮತ್ತು ಬ್ರಿಟಿಷ್ ಅಧಿಕಾರಿಗಳಿಗೂ ಅನೇಕ ಭಿನ್ನಾಭಿಪ್ರಾಯಗಳಿದ್ದವು. 
ಇವನಿಗೆ ಮದುವೆ ಆದ ಯಾವ ದಾಖಲೆಗಳಿಲ್ಲ; ಆದರೆ ಇವನ ಹತ್ತಿರ ಸಂಬಂಧದವರ ಮಕ್ಕಳು ಇವನ ಆಶ್ರಯದಲ್ಲೇ ಬೆಳದರು.  ಅವರಲ್ಲೊಬ್ಬ ದುಲೀಪ್ ಸಿಂಹಜಿ ರಣಜಿಯ ಹಾಗೆ ಇಂಗ್ಲೆಂಡ್ ದೇಶದ ತಂಡದೊಂದಿಗೆ ಕ್ರಿಕೆಟ್ ಆಡಿದ.
 
0೨/೦೪/೧೯೩೩ ರಂದು ರಣಜಿ ಹೃದಯಾಘಾತದಿಂದ ನಿಧನನಾದ.  ರಣಜಿ ಟ್ರೋಫಿಯಿಂದ ಇವನ ಹೆಸರು ಇನ್ನೂ ಉಳಿದಿದೆಯಾದರೂ, ರಣಜಿತ್ ಸಿಂಹನಿಂದ ಆ ಕಾಲದಲ್ಲಿ ಭಾರತದಲ್ಲಿ ಕ್ರಿಕೆಟ್ ಅಭಿವೃದ್ಧಿಯೇನೂ ಆಗಲಿಲ್ಲ. 

- ರಾಮಮೂರ್ತಿ 
ಕಾಂಗಲ್ಟನ್, ಚೆಶೈರ್ 

Further reading:
•	Simon Wilde: Ranji, The strange Genius 
•	Mohir Bose: History of Indian cricket 
•	Wisden Cricketer's Almanack 

Photos: Wikimedia Commons

***********************************************************************************

ಮಾಚು-ಪೀಕ್ಚೂ ಚಾರಣ – ಅನ್ನಪೂರ್ಣಾ ಆನಂದ್

ಇತಿಹಾಸ:

ದಕ್ಷಿಣ ಅಮೇರಿಕಾ ಖಂಡದ ಪೆರು ದೇಶದಲ್ಲಿರುವ ಕುಸ್ಕೋ ನಗರದ ಬಳಿ ಇರುವ ಮಾಚು-ಪೀಕ್ಚೂ (Machu-Picchu), ಇಂಕಾ (Inca) ಜನಾಂಗದ ಧಾರ್ಮಿಕ ಸ್ಥಳ. ಇಂಕಾ ನಾಗರೀಕತೆ ಸುಮಾರು ೧೩ನೇ ಶತಮಾನದಲ್ಲಿ ಹುಟ್ಟಿ, ಬೆಳದು, ಉತ್ತುಂಗಕ್ಕೇರಿ, ಸ್ಪೇನ್ ದೇಶದ ಧಾಳಿಯಿಂದ (೧೬ನೇ ಶತಮಾನ) ಪತನಗೊಂಡ ಬಹುಪ್ರಸಿದ್ಧ ನಾಗರೀಕತೆ ಮತ್ತು ಜನಾಂಗ. ೧೩ನೇ ಶತಮಾನದಲ್ಲಿ, ಪ್ರಪಂಚದ ಬೇರೆಡೆಗಳಲ್ಲಿ ನಾಗರೀಕತೆ ಬಹಳ ಮುಂದಿದ್ದರೂ, ಈ ಜನಾಂಗ, ಇದೆಲ್ಲದರಿಂದ ದೂರವಿದ್ದು, ತನ್ನದೇ ಆದ ರೀತಿಯಲ್ಲಿ ಬೆಳೆಯಿತು! ಬೆಟ್ಟಗುಡ್ಡಗಳಲ್ಲೇ ವಾಸಮಾಡುತ್ತಿದ್ದ ಈ ಜನಾಂಗ, ಕಡಿದಾದ ಜಾಗಗಳಲ್ಲಿ ಮನೆ, ಹಳ್ಳಿ, ಊರುಗಳನ್ನು ಕಟ್ಟಿ, ಈ ಗುಡ್ಡಗಳಲ್ಲಿ, ಮೆಟ್ಟಿಲುಗಳನ್ನು ಮಾಡಿ ವ್ಯವಸಾಯವನ್ನು ಮಾಡುತ್ತಿದ್ದರು. ಈ ವ್ಯವಸಾಯ ಕ್ಷೇತ್ರಗಳಿಗೆ ಮಳೆ ಮತ್ತು ಈ ಗುಡ್ಡದಳಿಂದ ಕರಗಿ, ಹರಿದು ಬರುವ ಮಂಜಿನ ನೀರನ್ನುಪಯೋಗಿಸಿ ದವಸ-ಧಾನ್ಯಗಳನ್ನು ಬೆಳೆಯುತ್ತಿದ್ದರು. ಇಂಟಿ (ಸೂರ್ಯ) ಇವರ ಮುಖ್ಯ ದೇವರು. ತಮ್ಮ ರಾಜನನ್ನು ಅವರು ಸೂರ್ಯನ ಮಗನೆಂದು ಭಾವಿಸುತ್ತಿದ್ದರು. “ಕ್ವೆಚುವಾ” (Quechua) ಇವರು ಬಳಸುತ್ತಿದ್ದ ಭಾಷೆ (ಈಗಲೂ ಈ ಭಾಷೆಯನ್ನು ಬಳಸುವ ಜನರು ಅಲ್ಪ ಸ್ವಲ್ಪ ಇದ್ದಾರೆ).

ಪ್ರಯಾಣ:

ಈ ಇಂಕಾ ಜನರ ಧಾರ್ಮಿಕ ಸ್ಥಳವಾದ ಮಾಚು – ಪೀಕ್ಚೂವನ್ನು ಕುಸ್ಕೋ ನಗರದಿಂದ ತಲುಪಲು ಇರುವ ದಾರಿಯೇ ಇಂಕಾ ಟ್ರೈಲ್ (Inca Trail).  ೩೯ ಕಿಲೋ ಮೀಟರ್ (೨೪ ಮೈಲಿ) ಉದ್ದದ ಈ ಹಾದಿಯನ್ನು ಸುಮಾರು ೩ ಅಥವಾ ೪ ದಿನಗಳಲ್ಲಿ ನಡೆಯಬಹುದು. ಸುಮಾರು ೩೦೦೦ ಮೀಟರ್ ಎತ್ತರದಿಂದ ಪ್ರಾರಂಭವಾಗುವ ಈ ಹಾದಿ, ೪೨೧೫ ಮೀಟರ್ (ಈ ಹಾದಿಯ ಉತ್ತುಂಗ) ತಲುಪಿ, ಮತ್ತೆ ೨೪೩೦ ಮೀಟರಿಗೆ ಇಳಿದರೆ ಸಿಗುವುದೀ ಜಗತ್ಪ್ರಸಿದ್ದ ಸ್ಥಳ. ಹಾದಿಯಲ್ಲಿ ಬಹಳಷ್ಟು ಇಂಕಾ ವಸಾಹತುಗಳು (settlements ) ಕಾಣಸಿಗುತ್ತವೆ. ಕ್ಲೌಡ್ ಫಾರೆಸ್ಟ್ ಮೂಲಕ ಹೋಗುವಾಗಲಂತೂ ವಿಶಿಷ್ಟವಾದ ಮರ, ಗಿಡ, ಹಕ್ಕಿಗಳು ಕಾಣಸಿಗುತ್ತವೆ. ಪ್ರತಿ ತಿರುವು ಮುರುವೂ ಅವರ್ಣನೀಯ ಪ್ರಕೃತಿ ಸೌಂದರ್ಯದಿಂದ ತುಂಬಿದೆ! ಆಂಡಿಸ್ (andes ) ಪರ್ವತ ಶ್ರೇಣಿಯನ್ನು ನೋಡುವಾಗ “ಹುಲುಮಾನವ” ಎಂಬ ಉಕ್ತಿಯ ಅರ್ಥ ಮನದಟ್ಟಾಗುತ್ತದೆ!

ಈ ಇಂಕಾ ಟ್ರೈಲ್-ಅನ್ನು ನಡೆಯುವ ಆಸೆ ಬಹಳ ವರ್ಷಗಳಿಂದ ಇತ್ತು. ಈ ವರ್ಷದ ಜನವರಿಯಲ್ಲಿ ಇದರ ಬಗ್ಗೆ ಬಹಳಷ್ಟು ವಿಷಯ ಸಂಗ್ರಹಿಸಿ, ನಾನು, ನನ್ನ ಪತಿ ಆನಂದ್, “Exodus ” ಎಂಬ ಯು.ಕೆ ಕಂಪನಿಯ ಮೂಲಕ ಈ ಪ್ರಯಾಣವನ್ನು ಕೈಗೊಳ್ಳುವ ನಿರ್ಧಾರ ಮಾಡಿದೆವು. ಈ ರೀತಿಯ ಪ್ರವಾಸಗಳಿಗೆ ಕಂಪನಿಗಳ ಮೂಲಕ ಹೋಗುವುದು ಅನುಕೂಲ. ಕ್ಯಾಂಪ್ ಸೈಟ್ಸ್, ಟೆಂಟ್ಸ್, ಟಾಲೆಟ್ಸ್, ಊಟ, ತಿಂಡಿ – ಹೀಗೆ ಎಲ್ಲದರ ವ್ಯವಸ್ಥೆಯನ್ನು ಸುಸಜ್ಜಿತವಾಗಿ ಮಾಡುವುದದಿಂದ ಪ್ರಯಾಣದಲ್ಲಿ ಈ ಅವಶ್ಯಕತೆಗಳ ಬಗ್ಗೆ ಯೋಚನೆ ಮಾಡುವ ತಲೆನೋವು ತಪ್ಪುತ್ತದೆ. ಮೊದಲೇ ಕಷ್ಟಕರವಾದ ಪ್ರಯಾಣ, ಇದರ ಮಧ್ಯೆ ಈ ತಲೆಬಿಸಿ ಬೇಕೇ!

ಆಗಸ್ಟ್ ೨೫ರಿಂದ ೩೧ರ ವರೆಗೆ ಈ ಪ್ರಯಾಣವನ್ನು ನಾನು, ಆನಂದ್ ಮತ್ತೆ ನಮ್ಮೆರಡೂ ಮಕ್ಕಳು, ಮಾಡುವುದೆಂದು ನಿರ್ಧರಿಸಿದೆವು. ನಿಶ್ವಯಿಸಿದ ಕೆಲ ದಿನಗಳಲ್ಲೇ ನಾನು ಮತ್ತು ಆನಂದ್ ನಮ್ಮ ತಯಾರಿ ಪ್ರಾರಂಭಿಸಿದೆವು. ೪ ದಿನಗಳ ಕಾಲ ಸುಮಾರು ೭ – ೮ ಘಂಟೆ ನಡೆಯುವುದು ಅಷ್ಟು ಸುಲಭವಲ್ಲ! ತಯಾರಿಯಿಲ್ಲದೆ ಹೋದರೆ ಬಹಳ ಕಷ್ಟ! ಹಾಗಾಗಿ ವಾರಾಂತ್ಯದ ರಜೆಗಳಲ್ಲಿ ನಡೆಯಲು ಶುರು ಮಾಡಿದೆವು. ೩ ಘಂಟೆಗಳ ನಡಿಗೆಯಿಂದ ಪ್ರಾರಂಭಿಸಿ ೯  – ೧೦  ಘಂಟೆಗಳ ಕಾಲ ನಡೆಯುವಷ್ಟು ನಮ್ಮ ಕಾಲುಗಳಿಗೆ ಶಕ್ತಿ ಬಂತು. ಆತ್ಮಬಲ ಹೆಚ್ಚಿತು. Altitude  sickness ನಮ್ಮ ಕೈಲಿಲ್ಲ, ಅದು ದೇಹಪ್ರಕೃತಿಗೆ ಬಿಟ್ಟದ್ದು. ಆದರೆ ೪ ದಿನದ ನಡಿಗೆಯನ್ನು ಸಂಭಾಳಿಸಬಹುದೆಂಬ ಧೈರ್ಯ ಬಂತು.

ಆಗಸ್ಟ್ ೨೫ ನಾವು ಕುಸ್ಕೋ ನಗರವನ್ನು ತಲುಪಿದೆವು. ೩೩೯೯ ಮೀಟರ್ ಎತ್ತರದಲ್ಲಿರುವ ಈ ನಗರಕ್ಕೆ ಬಂದಿಳಿದ ಸ್ವಲ್ಪ ಹೊತ್ತಿನ್ಲಲಿ altitude ಅನುಭವವಾಗತೊಡಗಿತು – ತಲೆನೋವು, ಓಕರಿಕೆ, ಹಸಿವಾಗದಿರುವುದು, ಇತ್ಯಾದಿ. Diamox ಎಂಬ ಮಾತ್ರೆ ಈ ಅನುಭವಗಳನ್ನು ಹತೋಟಿಯಲ್ಲಿಡಲು ಬಹಳ ಉಪಯುಕ್ತ. ನಾನು ಆನಂದ್ ಈ ಮಾತ್ರೆಯನ್ನು (ಅರ್ಧ ಮಾತ್ರೆ) ದಿನಾ ತೆಗೆದುಕೊಳ್ಳಲು ಪ್ರಾರಂಭಿಸಿದೆವು. ನನ್ನ ಮಕ್ಕಳು ವಯಸ್ಸಿನಲ್ಲಿ ಚಿಕ್ಕವರಾದ್ದರಿಂದ ಅವರಿಗೆ ಮಾತ್ರೆಯ ಆವಶ್ಯಕತೆ ಬರಲಿಲ್ಲ. ಬರೀ ವಯಸ್ಸಲ್ಲ, ದೇಹಪ್ರಕೃತಿಯೂ ಇದಕ್ಕೆ ಕಾರಣ. ಕೆಲವರಿಗೆ ಈ ಅನುಭವವಾಗುವುದೇ ಇಲ್ಲ, ಕೆಲವರಿಗೆ ಸ್ವಲ್ಪ ಗೊತ್ತಾಗತ್ತೆ, ಮತ್ತೆ ಕೆಲವರಿಗೆ ಬಹಳಷ್ಟು ಕಷ್ಟವಾಗುತ್ತದೆ.

೨೫ರ ಸಾಯಂಕಾಲ ನಮ್ಮ ಗೈಡ್ ಎದ್ವಿನ್ಡ್ ನಮ್ಮನ್ನು ೫ ಘಂಟೆಗೆ ನಾವಿಳಿದುಕೊಂಡಿದ್ದ ಹೋಟೆಲಿನ ಲಾಬಿಯಲ್ಲಿ ಸಿಗಲು ತಿಳಿಸಿದ್ದರು. ಅಲ್ಲಿಗೆ ಹೋದಾಗ ನಮ್ಮ ಜೊತೆ ಈ ಪ್ರಯಾಣವನ್ನು ಮಾಡುವ ಮಿಕ್ಕ ೧೨ ಜನರನ್ನು ಸಂಧಿಸಿದೆವು. ಇಂಗ್ಲೆಂಡಿನ ಹಲವಾರು ಭಾಗಗಳಿಂದ ಬಂದ ಎಲ್ಲರ ಪರಿಚಯವಾದ ಮೇಲೆ, ಎದ್ವಿನ್ಡ್ ನಮ್ಮ ಪ್ರವಾಸದ ವಿವರಗಳನ್ನು ಸವಿಸ್ತಾರವಾಗಿ ತಿಳಿಸಿದರು

ಮುಂಬರುವ ೪ ದಿನಗಳ ದಿನಚರಿ – ಪ್ರತಿ ದಿನ ೬ ಘಂಟೆಗೆ ಏಳುವುದು. ಒಂದು ಬೋಗಣಿ ನೀರಲ್ಲಿ ಹಲ್ಲು ಉಜ್ಜಿ ಮುಖ ತೊಳೆಯುವುದು, ನಂತರ ಬಿಸಿ ಬಿಸಿ ಕಾಫೀ ಅಥವಾ ಟೀ. ೭ ಘಂಟೆಗೆ ತಿಂಡಿ ತಿಂದು, ಪ್ರಯಾಣಕ್ಕೆ ಬೇಕಾಗುವ ನೀರು ಮತ್ತು ಕೆಲವು ಉಪಾಹಾರಗಳನ್ನು (ಸೀರಿಯಲ್ ಬಾರ್ಸ್, ಹಣ್ಣು, ಚಾಕಲೇಟ್ ಇತ್ಯಾದಿ) ತೆಗೆದುಕೊಂಡು ನಡಿಗೆ ಶುರು. ಮಧ್ಯಾಹ್ನ ೧ ರಿಂದ ೨ ರ ನಡುವೆ ಊಟ, ಮತ್ತೆ ನಡಿಗೆ, ಸಾಯಂಕಾಲ ೪ ರಿಂದ ೫ ರೊಳಗೆ ಮುಂದಿನ campsite ತಲುಪುವುದು. ಅಲ್ಲಿ ರಾತ್ರಿ ಊಟ ಮತ್ತು ನಿದ್ದೆ. 

ಎದ್ವಿನ್ಡ್ ನಮ್ಮ ಹಾದಿಯ ನಕ್ಷೆಯನ್ನು ತೋರಿಸಿ, ಪ್ರತಿದಿನ ಎಷ್ಟು ನಡೆಯಬೇಕು, ಎಲ್ಲಿ ಇಳಿದುಕೊಳ್ಳುವುದು, ಹೇಗೆ ಈ ಕಷ್ಟಕರವಾದ ಪ್ರಯಾಣವನ್ನು ಸವೆಸಬಹುದು ಎಂದು ಬಹಳಷ್ಟು ಮಾಹಿತಿಯನ್ನು ಕೊಟ್ಟು, ೨೭ರ ಬೆಳಿಗ್ಗೆ  ೭ ಘಂಟೆಗೆ ನಾವೆಲ್ಲಾ ತಯಾರಾಗಿರಬೇಕೆಂದು ತಿಳಿಸಿ ಹೊರಟರು.

೨೬ ಆಗಸ್ಟ್ ನಾವು ಕುಸ್ಕೋ ನಗರದ ಇಂಕಾ ಸ್ಥಳಗಳಿಗೆ ಮತ್ತು ಸಂಗ್ರಹಾಲಯಕ್ಕೆ ಭೆಟ್ಟಿ ಕೊಟ್ಟೆವು. ಹಾಗೇ ಕುಸ್ಕೋ ನಗರದ ಮಾರುಕಟ್ಟೆ ಮತ್ತು ಇತರ ಪ್ರಮುಖ ಬೀದಿಗಳಲ್ಲಿ ಸುತ್ತಾಡಿ, ಮುಂದಿನ ದಿನದ ತಯಾರಿ ನಡೆಸಿ, ಊಟ ಮುಗಿಸಿ ಮಲಗಿದೆವು.

ಇಂಕಾ ಟ್ರೈಲ್ – ಡೇ ೧ (೩೩೯೯ – ೩೦೦೦ ಮೀಟರ್ ಎತ್ತರ, ೧೫ ಕಿಮಿ):

ಬೆಳಿಗ್ಗೆ ೬ ಘಂಟೆಗೆ ತಿಂಡಿ ಮುಗಿಸಿ, ೭ ಘಂಟೆಗೆ ನಾವು ೧೬ ಜನ, ನಮ್ಮ ಗೈಡ್ ಎದ್ವಿನ್ಡ್ ಜೊತೆಗೆ ಒಂದು ಬಸ್ ಹತ್ತಿದೆವು. ಸುಮಾರು ಒಂದು ಘಂಟೆಯ ಪ್ರಯಾಣವಾದಮೇಲೆ ಬಸ್ ನಿಲ್ಲಿಸಿ ನಮ್ಮೊಂದಿಗೆ ಬರುವ ಇನ್ನೊಬ್ಬ ಗೈಡ್ ಮತ್ತು ಸುಮಾರು ೨೦ ಜನ ಸಹಾಯಕರನ್ನು ಹತ್ತಿಸಿಕೊಂಡು, ಮತ್ತೆರಡು ಘಂಟೆ ಪ್ರಯಾಣದ ನಂತರ KM82 ತಲುಪಿದೆವು.

ಇಲ್ಲಿ ನಮ್ಮ ಸಹಾಯಕರ ಬಗ್ಗೆ ಕೆಲವು ಮಾಹಿತಿ ಕೊಡುವುದು ಅತ್ಯಗತ್ಯ.

ನಡೆಯುವ ೧೬ ಮಂದಿಗೆ, ೨ ಗೈಡ್ಸ್ ಮತ್ತೆ ಸುಮಾರು ೨೦ ಜನ ಸಹಾಯಕರು. ಇವರು ನಮ್ಮ ದಿನ ನಿತ್ಯದ ಆವಶ್ಯಕತೆಗಳನ್ನೆಲ್ಲಾ ಚಾಚೂ ತಪ್ಪದೆ ಪೂರೈಸಿದರು! ಅಡಿಗೆ ಮಾಡುವವರು, ಅವರಿಗೆ ಸಹಾಯ ಮಾಡುವವರು, ಟೆಂಟ್-ಗಳನ್ನು ಸಿದ್ಧಗೊಳಿಸುವವರು, ಪೋರ್ಟಬಲ್ ಟಾಯ್ಲೆಟ್ಟುಗಳನ್ನು ತೊಳೆದು ಶುಚಿಗೊಳಿಸುವುದು , ಊಟ ಬಡಿಸುವುದು,  ಹೀಗೆ ಹಲವು ಹತ್ತಾರು ಕೆಲಸಗಳನ್ನು ನಗುಮೊಗದಿಂದ ಮಾಡುವರು. ಇದಲ್ಲದೆ ಪ್ರತಿದಿನ ನಾವೆಲ್ಲಾ ಹೊರಟ ನಂತರ, ಟೆಂಟ್-ಗಳನ್ನೆಲ್ಲಾ ತೆಗೆದು, ಮಡಿಚಿ, ಅಡಿಗೆ ಸಾಮಗ್ರಿಗಳನ್ನೆಲ್ಲ ಒಟ್ಟುಗೂಡಿಸಿ, ನಮ್ಮ ೪ – ೫ ದಿನದ ಬಟ್ಟೆಗಳು ಮತ್ತು ಸ್ಲೀಪಿಂಗ್ ಬ್ಯಾಗ್-ಗಳಿದ್ದ (೭ ಕಿಲೋ) ಚೀಲಗಳನ್ನು ಹೊತ್ತು, ನಾವು ಹೋಗುವ ಹಾದಿಯೆಲ್ಲೇ, ನಮಗಿಂತ ಬೇಗ ಹೋಗಿ, ಮಧ್ಯಾಹ್ನದ ಕ್ಯಾಂಪ್ ಸೈಟ್-ನಲ್ಲಿ ಅಡಿಗೆಗೆ ಮತ್ತೆ ಎಲ್ಲ ಸಾಮಗ್ರಿಗಳನ್ನೂ ಅಣಿಮಾಡಿಕೊಂಡು, ನಮಗೆ ಅಡಿಗೆ ಮಾಡಿ, ಬಡಿಸಿ, ತಾವೂ ಊಟ ಮಾಡಿ, ಮತ್ತೆ ಎಲ್ಲವನ್ನೂ ಹೊತ್ತು ರಾತ್ರಿಯ campsite ತಲುಪಿ, ಎಲ್ಲರ ಟೆಂಟ್ ಹಾಕಿ, ನಮ್ಮ ಚೀಲಗಳನ್ನು ಇಟ್ಟು, ಮತ್ತೆ ರಾತ್ರಿಯ ಅಡಿಗೆ ಮಾಡುತ್ತಿದ್ದರು! ಅವರಿಲ್ಲದಿದ್ದರೆ ಈ ರೀತಿಯ ಪ್ರಯಾಣಮಾಡುವುದು ಅಸಾಧ್ಯವೆಂದೇ ಹೇಳಬಹುದು!

KM82 – ಇದು ನಮ್ಮ ಪ್ರಯಾಣದ ಮೊದಲ ಘಟ್ಟ. ೧೦.೩೦ ಹೊತ್ತಿಗೆ ನಾವೆಲ್ಲಾ ನಮ್ಮ ಪ್ರಯಾಣ ಪ್ರಾರಂಭಿಸಿದೆವು. ಮುಂದೆ ಸಿಕ್ಕಿದ ಚೆಕ್-ಪೋಸ್ಟ್-ನಲ್ಲಿ ನಮ್ಮ ಪಾಸ್-ಪೋರ್ಟ್ ತಪಾಸಣೆಯಾಯಿತು. ಮೊದಲ ದಿನದ ಹಾದಿ ಸ್ವಲ್ಪ ಸುಲಭವಾಗಿತ್ತು. ಹಾಗೇ ನಮ್ಮಲ್ಲಿ ಬಹಳ ಹುರುಪೂ ಇತ್ತು. ೧೬ ಜನರೂ ಮಾತಾಡಿಕೊಂಡು, “ I Spy..”, “word building” ಆಟಗಳನ್ನು ಆಡಿಕೊಂಡು ಹೊರಟೆವು. ಪರಿಚಯ ಸ್ನೇಹವಾಗಲು ಈ ಹಾದಿ ಅನುವುಮಾಡಿಕೊಟ್ಟಿತು ಅಂತಲೂ ಹೇಳಬಹುದು. ತಗ್ಗು ದಿಣ್ಣೆಗಳಿದ್ದ ಈ ಹಾದಿಯನ್ನು ಎಲ್ಲರೂ ಕಷ್ಟಪಡದೆ ಮುಗಿಸಿದೆವು. ಸುಮಾರು ೬ ಘಂಟೆಯ ಹೊತ್ತಿಗೆ “ವೈಲಬಂಬ” ಕ್ಯಾಂಪ್-ಸೈಟ್ ತಲುಪಿದೆವು. ಬಿಸಿ ಕಾಫಿ ಟೀ ನಮ್ಮನ್ನು ಕಾದಿತ್ತು. ಮೊದಲೇ ಹೇಳಿದಂತೆ ನಮ್ಮ ಸಹಾಯಕರು ಆಗಲೇ ಕ್ಯಾಂಪ್-ಸೈಟ್ ತಲುಪಿ ಎಲ್ಲ ವ್ಯವಸ್ಥೆಮಾಡಿದ್ದರು.

ಕಾಫೀ ಟೀ ಮುಗಿಸಿ ನಮ್ಮ ಟೆಂಟು ಗಳಲ್ಲಿ ಸೇರಿಕೊಂಡೆವು. ಇಬ್ಬರು ಮಲಗಬಹುದಾದ ಈ ಟೆಂಟ್-ಗಳು ಅಷ್ಟೇನೂ ದೊಡ್ಡದಿರುವುದಿಲ್ಲ. ಸ್ಲೀಪಿಂಗ್ ಬ್ಯಾಗ್ ಹಾಕಿ, ನಮ್ಮ ಬ್ಯಾಗ್ ಗಳನ್ನೂ ಇಟ್ಟರೆ, ಮಗ್ಗುಲು ಬದಲಿಸಲು ಸ್ವಲ್ಪ ಜಾಗವಿರುತ್ತದೆ ಅಷ್ಟೇ! ಅಂತಹ ಒಂದು ಟೆಂಟ್-ನಲ್ಲಿ ನಮ್ಮ ಸಾಮಗ್ರಿಗಳನ್ನು ಅಣಿಮಾಡಿಕೊಂಡೆವು. ಇಂತಹ ಚಾರಣಗಳಲ್ಲಿ ಸ್ನಾನದ ವ್ಯವಸ್ಥೆ ಇರುವುದಿಲ್ಲ. ವೆಟ್ ವೈಪ್ಸ್ ಉಪಯೋಗಿಸಿ ಮೈ ಒರೆಸಿಕೊಳ್ಳಬೇಕು ಅಷ್ಟೇ. ಅಂತೂ ಸ್ನಾನ ಮಾಡಿ ಬಟ್ಟೆ ಬದಲಾಯಿಸುವ ಹೊತ್ತಿಗೆ ಊಟಕ್ಕೆ ಕರೆ ಬಂತು. ಬಿಸಿ ಬಿಸಿ ಸೂಪ್, ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟ ಮತ್ತು ಕಾಫಿ ಟೀ. ರುಚಿಕರವಾದ ಮತ್ತು ಪೌಷ್ಟಿಕವಾದ ಆಹಾರ. ವೀಗನ್ ಊಟ ಕೂಡ ಇತ್ತು (ಮೊದಲೇ ಹೇಳಿದ್ದರಿಂದ). ಊಟದ ನಂತರ ಸ್ಲೀಪಿಂಗ್ ಬ್ಯಾಗ್ ಒಳಗೆ ತೂರಿ ನಿದ್ದೆ!

ಇಂಕಾ ಟ್ರೈಲ್ – ಡೇ ೨ (೩೦೦೦ – ೪೨೧೩ – ೪೫೦೮ ಮೀಟರ್ ಎತ್ತರ, ೧೨ ಕಿಮಿ):

ಇಂಕಾ ಟ್ರೈಲ್ – ಡೇ ೨ – (೩೦೦೦ – ೪೨೧೩ – ೪೫೦೮ ಮೀಟರ್ಸ್) – ೧೨ ಕಿಲೋಮೀಟರ್ಸ್ – ಮತ್ತೆ ೬ಕ್ಕೆ ಎದ್ದು, ೭ಕ್ಕೆ ತಯಾರಾಗಿ ನಡೆಯಲು ಶುರು ಮಾಡಿದೆವು. ಇಂದು ಅತಿ ಕಷ್ಟದ ದಿನ ಎಂಬುದರ ಅರಿವು ಎಲ್ಲರಿಗೂ ಇತ್ತು. ಈ ದಿನ, ನಮ್ಮ ಚಾರಣದ ಉತ್ತುಂಗಕ್ಕೇರಿ (highest point – “ಡೆಡ್ ವಿಮೆನ್ ಪಾಸ್”), ಇಳಿಯುವ ದಿನ! ಸುಮಾರು ೬೦೦೦ ಮೆಟ್ಟಿಲುಗಳನ್ನು ಅಷ್ಟು ಎತ್ತರದಲ್ಲಿ (altitude) ಹತ್ತುವುದು ಸುಲಭವಾಗಿರಲಿಲ್ಲ! ಆಮ್ಲಜನಕದ ವಿರಳತೆಯಿಂದ ಉಸಿರಾಡಲೇ ಕಷ್ಟವಾಗುವ ವಾತಾವರಣದಲ್ಲಿ ಈ ಹಾದಿ ಸವೆಸಲು ಕಷ್ಟವಿತ್ತು. ಗುಂಪಿನಲ್ಲಿದ್ದ ಕೆಲವು ಸದೃಢರು ಸರಾಗವಾಗಿ ನಡೆದರೂ. ಮಿಕ್ಕವರೆಲ್ಲ ನಿಧಾನವಾಗಿ, ನಮಗೆ ಸರಿಹೋಗುವ ವೇಗದಲ್ಲಿ, ಅಲ್ಲಲ್ಲಿ ವಿರಮಿಸುತ್ತಾ ಉತ್ತುಂಗವನ್ನು ತಲುಪಿದೆವು. ವಿರಮಿಸಿದಾಗ ಸುತ್ತಲೂ ಕಣ್ಣಾಡಿಸಿದರೆ, ದೂರ ದೂರಕ್ಕೆ ಕಾಣುವ ಆಂಡಿಸ್ ಪರ್ವತ ಶ್ರೇಣಿ, ರುದ್ರ ರಮಣೀಯ! ಪ್ರತಿ ತಿರುವೂ ಹೊಸ ನೋಟ ಹೊಸ ವಿಸ್ಮಯ! ನಮ್ಮ ಗುರಿ ತಲುಪಿದಾಗ ಆದ ಆ ಅನುಭವ, ಅನಿಸಿಕೆ, ಭಾವೋದ್ವೇಗ ವರ್ಣಿಸಲಸಾಧ್ಯ! ಒಂದು ರೀತಿಯ ಸಾರ್ಥಕತೆ, ವಿನಮ್ರತೆ ಮನಸ್ಸನ್ನು ಮತ್ತು ಕಣ್ಣನ್ನು ತುಂಬಿಸಿತ್ತು. ಹಲವಾರು ಫೋಟೋಗಳನ್ನು ಕ್ಲಿಕ್ಕಿಸಿ, ಪರ್ವತವನ್ನಿಳಿಯಲು ಪ್ರಾರಂಭಿಸಿದೆವು. “ಪಕಾಯ್ಮಯೋ” ಕ್ಯಾಂಪ್-ಸೈಟ್ ತಲಪುವ ಹೊತ್ತಿಗೆ ಎಲ್ಲರೂ ಸುಸ್ತಾಗಿದ್ದೆವು. ಆದರೆ ಬಹಳ ಕಠಿಣವಾದ ದಿನವನ್ನು ಮುಗಿಸಿದ ನಿರಾಳವಿತ್ತು ಎಲ್ಲರ ಮನದಲ್ಲಿ.

ಇಂಕಾ ಟ್ರೈಲ್ – ಡೇ ೩ – (೪೫೦೮ – ೩೫೮೦ ಮೀಟರ್ ಎತ್ತರ, ೧೨ ಕಿಮಿ):

ಈ ದಿನ ಹಾದಿ ಬಹಳ ಆಸಕ್ತಿದಾಯಕವಾಗಿತ್ತು. ಬಹಳಷ್ಟು ಇಂಕಾ ವಸಾಹತುಗಳನ್ನು ನೋಡಿದೆವು. ನಮ್ಮ ಗೈಡ್ ಎದ್ವಿನ್ಡ್, ಇಂಕಾ ಜನಾಂಗದ ರಾಜಕೀಯ, ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳನ್ನು ಬಹಳ ವಿವರವಾಗಿ, ಮನಮುಟ್ಟುವಂತೆ ವಿವರಿಸಿದರು. ಆಗಿನ ಕಾಲದಲ್ಲಿ ಕಲ್ಲಿನಿಂದ ಕಟ್ಟಿದ ಗೋಡೆಗಳು, ಮನೆಗಳು, ಬಹಳಷ್ಟು ಭೂಕಂಪಗಳನ್ನು ಎದುರಿಸಿಯೂ, ಇನ್ನೂ ಸ್ಥಿರವಾಗಿ ನಿಂತಿರುವುದು ಮಹದಾಶ್ಚರ್ಯ ಮತ್ತು ಇಂಕಾ ಜನಾಂಗದ ಕೌಶಲತೆಯನ್ನು ಎತ್ತಿ ತೋರಿಸುತ್ತದೆ. ಹಣದ ವಿನಿಮಯಕ್ಕಿಂತಾ ವಸ್ತುಗಳ ವಿನಿಮಯವೇ ಜಾಸ್ತಿ ಪ್ರಚಲಿತವಿತ್ತು. ಲಿಖಿತ ಭಾಷೆ ಇಲ್ಲದ್ದರಿಂದ, ದಾರದ ಗಂಟುಗಳಿಂದ ಲೆಖ್ಖವಿಡುತ್ತಿದ್ದರು ಮತ್ತು ಸಂದೇಶವನ್ನೂ ವಿನಿಮಯಿಸುತ್ತಿದ್ದರು ಎಂಬುದು ಕುತೂಹಲಹರ. ಈ ಐತಿಹಾಸಿಕ ಸ್ಥಳಗಳ ಮೂಲಕ ಹಾದು, ಸಂಜೆಯ ಹೊತ್ತಿಗೆ ಆ ದಿನದ ಕ್ಯಾಂಪ್-ಸೈಟ್ “ಪುಯುಪುಕಮಾರ್ಕ” ತಲುಪಿದೆವು.  

ಇಂಕಾ ಟ್ರೈಲ್ – ಡೇ ೪ (೩೫೮೦ – ೨೪೩೦ ಮೀಟರ್ ಎತ್ತರ, ೧೦ ಕಿಮಿ):

ಕಡೆಯ ದಿನ! ಸುಮಾರು ೫೦೦೦ ಮೆಟ್ಟಿಲುಗಳನ್ನು ಹತ್ತಿಳಿದೆವು. ಇಳಿಯುತ್ತಿದ್ದರಿಂದ ಉಸಿರಾಟ ಸ್ವಲ್ಪ ಸರಾಗವಾಗಿತ್ತು. ಆದರೆ ೩ ದಿನದ ಸತತ ನಡಿಗೆಯಿಂದ ಕಾಲುಗಳು ಸೋಲುತ್ತಿದ್ದವು! ಆದರೆ ಪ್ರಸಿದ್ಧ ಮಾಚು-ಪೀಕ್ಚುವನ್ನು ಕಣ್ಣಾರೆ ನೋಡುವ ಸಮಯ ಹತ್ತಿರವಾಗುತ್ತಿದೆಯೆಂಬ ಉತ್ಸಾಹ, ಸಂತೋಷ ಎಲ್ಲರಲ್ಲೂ. ಕೆಲವು ಘಂಟೆಗಳ ಕಾಲ ಕ್ಲೌಡ್ ಫಾರೆಸ್ಟ್ ಮೂಲಕ ನಡೆದಾಗ ಅಲ್ಲಿನ ವೈವಿಧ್ಯತೆಯನ್ನು ನೋಡುವ ಭಾಗ್ಯ ನಮ್ಮದಾಯಿತು. ಪಾಚಿ (moss) ಎಲ್ಲೆಲ್ಲೂ! ಅದೂ ಹಿಂದೆಂದೂ ನೋಡದ ಬಣ್ಣಗಳಲ್ಲಿ! ತಿಳಿ ಹಳದಿ ಇಂದ ಕಂದು ಬಣ್ಣದವರೆಗಿನ ಎಲ್ಲ ಬಣ್ಣಗಳೂ ಕಂಡವು! ಬಣ್ಣ ಬಣ್ಣದ ಆರ್ಕಿಡ್ ಗಳು ಕಣ್ಣು ಸೆಳೆದವು! ಹಾಗೆ ಥರಾವರೀ ಪಕ್ಷಿಗಳ ಚಿಲಿಪಿಲಿ ಮನಸ್ಸಿಗೆ ಆಹ್ಲಾದತಂದಿತು.  ಈ ದಿನಕ್ಕಾಗಿ ಕಾಯುತ್ತಿದ್ದ ನಾವೆಲ್ಲರೂ ಆನಂದದಿಂದ ಹೆಜ್ಜೆ ಹಾಕುತ್ತಾ “ಇಂಟಿ ಪುಂಕು” (sun gate ) ತಲುಪಿದೆವು. ಎದುರಿನ ಬೆಟ್ಟದಲ್ಲಿದ್ದ ಮಾಚು-ಪೀಕ್ಚು ರಮಣೀಯವಾಗಿ ಕಾಣಿಸುತ್ತಿತ್ತು. ಇಂಟರ್ನೆಟ್ ನಲ್ಲಿ ಸಿಗುವ ಮಾಚು-ಪೀಕ್ಚು ವಿನ ಬಹಳಷ್ಟು ಚಿತ್ರಗಳು ಈ ಜಾಗದಿಂದ ತೆಗೆದವೇ! ಮತ್ತೆ ಇಲ್ಲಿ ಬಹಳಷ್ಟು ಫೋಟೋಗಳನ್ನು ಕ್ಲಿಕ್ಕ್ಸಿದೆವು. ಈ ಅಸದಳ ದೃಶ್ಯವನ್ನು ಕಣ್ಣುತುಂಬಿಸಿಕೊಂಡು, ಮನಸ್ಸಿಲ್ಲದ ಮನಸ್ಸಿನಲ್ಲಿ ಆ ಜಾಗದಿಂದ ಹೊರಟೆವು, ಯಾಕಂದ್ರೆ, ಕೆಳಗೆ ೩ ಘಂಟೆಯ ಬಸ್ ಹತ್ತಬೇಕಿತ್ತು ಮತ್ತು ನಾವು ಇನ್ನೂ ಸುಮಾರು ೬ ಕಿಲೋಮೀಟರು ನಡೆಯಬೇಕಿತ್ತು! ಮತ್ತೆ ಸಾವಿರಾರು ಮೆಟ್ಟಿಲುಗಳನ್ನು ಇಳಿದು, ಅಂತೂ ಸರಿಯಾದ ಸಮಯಕ್ಕೆ ಬಸ್ ಹತ್ತಿ ಹೋಟೆಲ್ ತಲುಪಿದೆವು. ನಾಲ್ಕು ದಿನದ ನಂತರ  ಸ್ನಾನ  ಮಾಡಲು ಶವರ್, ಮಲಗಲು ಸರಿಯಾದ ಹಾಸಿಗೆ ಸಿಕ್ಕಿತು. ವಾಟ್ ಅ ಪ್ರಿವಿಲೇಜ್!

ಇಂಕಾ ಟ್ರೈಲ್ – ಡೇ ೫:

ಈ ದಿನ ಹೋಟೆಲಿನಿಂದ ಬಸ್ಸಿನಲ್ಲಿ ಮ್ಯಾಚು-ಪೀಕ್ಚು ತಲುಪಿದೆವು. ನಮ್ಮ ಗೈಡ್ ನಮಗಾಗಲೇ ನಮ್ಮ ಪ್ರವೇಶದ ಸಮಯವನ್ನು ಕಾದಿರಿಸಿದ್ದರು. ಒಳಗೆ ಹೋದರೆ ಇಂಕಾ ಜನಾಂಗದ ಅತಿ ದೊಡ್ಡ ವಸಾಹತು ನಮ್ಮ ಮುಂದೆ ವಿಜೃಂಭಿಸುತ್ತಿತ್ತು. ಗೈಡ್ ಎದ್ವಿನ್ಡ್ ಈ ಸ್ಥಳದ ವಿಷಯಗಳನ್ನು ಸವಿಸ್ತಾರವಾಗಿ ವಿವರಿಸಿ, ಆಗಿನ ರಾಜರ ಅರಮನೆ, ದೇವಸ್ಥಾನಗಳು, ಮನೆಗಳು, ಅವರಿದ್ದ ರೀತಿ, ನೀತಿಗಳನ್ನು ತಿಳಿಸಿದರು. ನಮ್ಮ ಪ್ರಶ್ನೆಗಳಿಗೆಲ್ಲ ಸಮರ್ಪಕವಾಗಿ ಉತ್ತರಿಸಿದರು. ಮಾಚು – ಪೀಕ್ಚೂವನ್ನು ಕಣ್ತುಂಬಿಸಿಕೊಂಡು ಅಲ್ಲಿಂದ ಹೊರಟೆವು. ಮಧ್ಯಾಹ್ನದ ಊಟವನ್ನು ಮಾಚು – ಪೀಕ್ಚೂ ಊರಿನಲ್ಲಿ ಮುಗಿಸಿ, ೩ ಘಂಟೆಗೆ ಟ್ರೈನ್ ಹತ್ತಿ “ಒಲಂಟಾಯ್ತೊಂಬಾ” ತಲುಪಿದೆವು. ಗಾಜಿನ ಛಾವಣಿ ಮತ್ತು ದೊಡ್ಡ ದೊಡ್ಡ ಗಾಜಿನ ಕಿಟಕಿಯ ಟ್ರೈನ್ ನಲ್ಲಿ ಹಿಂದಿರುಗುವಾಗ ಪ್ರಕೃತಿ ಸೌಂದರ್ಯ ಅತಿ ರಮಣೀಯ! ಟ್ರೈನ್ ಇಳಿದು ಬಸ್ ಹತ್ತಿ ೩ ಘಂಟೆ ಪ್ರಯಾಣ ಮಾಡಿ ಕುಸ್ಕೋ ನಗರವನ್ನು ತಲುಪಿದೆವು. ಚಾರಣ ಮುಗಿಸಿದ ಸಂತಸದೊಂದಿಗೆ, ಈ ೫ ದಿನ ಜೊತೆಯಾದ ಸ್ನೇಹಿತರನ್ನು ಬೀಳ್ಕೊಡುವ ಬೇಸರವೂ ಇತ್ತು! ಎಲ್ಲರಿಗೂ ವಿದಾಯ ಹೇಳಿ ಮನೆಗೆ ಮರಳಿದೆವು.

ಮಂಗಳ:

ಒಟ್ಟಿನಲ್ಲಿ ಒಂದು ಅವಿಸ್ಮರಣೀಯ ಅನುಭವ! ಸಮಯ ಮಾಡಿಕೊಂಡು ಖಂಡಿತ ಮಾಚು – ಪೀಕ್ಚೂವಿಗೆ ಭೆಟ್ಟಿಕೊಡಿ. ನಡೆಯುವ ಇಚ್ಛೆಯಿಲ್ಲದಿದ್ದರೆ ಟ್ರೈನ್ ನಲ್ಲಿ ಅನಾಯಾಸವಾಗಿ ಹೋಗಿ ಬರಬಹುದು. ಹಾಗೇ ಪೆರುವಿನಲ್ಲಿ ನೋಡಿವಂತಹ ಇನ್ನೂ ಬೇಕಾದಷ್ಟು ಜಾಗಗಳಿವೆ – ಲಿಮಾ (ರಾಜಧಾನಿ), ಅರಿಕ್ವಿಪ, ಕೊಲ್ಕಾ ಕಣಿವೆ, ಲೇಕ್ ಟಿಟಿಕಾಕಾ, ಎಲ್ಲಾ ನೋಡುವಂತಹ ಸ್ಥಳಗಳು. ೩ ಅಥವಾ ೪ ವಾರ ಆರಾಮಾಗಿ ಕಳಿಯಬಹುದು.  ಒಮ್ಮೆ ಹೋಗಿ ಬನ್ನಿ.