ಸೀರೆಯೋಟ – ಶಾರದ ಸಕ್ರೆಮಠ್

ಅನಿವಾಸಿಯ ನೆಚ್ಚಿನ ಓದುಗರೇ !
ಈ ವಾರದ ‘ಹಸಿರು ಉಸಿರು’ ಪ್ರವರ್ಗದ ವಿಶೇಷ ಸಾಪ್ತಾಹಿಕ ಸಂಚಿಕೆಯಲ್ಲಿ ಕಳೆದ ಎರಡು ವರ್ಷಗಳಿಂದ ಓಟಗಾರ್ತಿ, ಟೆಲ್ಫೋರ್ಡ್ ನಿವಾಸಿಯಾದ ಶಾರದ ಸಕ್ರೆಮಠ್ ಅವರು ಸೀರೆಯಲ್ಲಿ ೫ಕಿ.ಮೀ , ೧೦ ಕಿ.ಮೀ ಮ್ಯಾರಥಾನ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಹೆಮ್ಮೆಯ ಕನ್ನಡತಿಯ ರೋಚಕ ಲೇಖನ ನಿಮ್ಮ ಮುಂದೆ. ಓದಿ ಪ್ರತಿಕ್ರಿಯಿಸಿ. -ಸವಿ.ಸಂ

ನನ್ನ ಹೆಸರು ಶಾರದ ಸಕ್ರೆಮಠ್. ಯುನೈಟೆಡ್ ಕಿಂಗ್ಡಂ ನ ಟೆಲ್ಫೋರ್ಡ್ ನಿವಾಸಿ. ಹಾಗೇರ್ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆಯಲ್ಲಿ ಸಹಾಯಕ ಲೆಕ್ಕಿಗಳಾಗಿ ಕೆಲಸ ಮಾಡುತ್ತಿದೇನೆ.

ಬಾಲ್ಯದಿಂದಲೂ ನಾನೋರ್ವ ಪರಿಸರ ಪ್ರೇಮಿಯಾಗಿದ್ದು ಧೀರ್ಘಚಾರಣ ಮಾಡುವುದೆಂದರೆ ಬಹುಉತ್ಸಾಹಿ. ಕರ್ನಾಟಕದ ಖ್ಯಾತ ಕವಿಗಳಾದ ಬೇ೦ದ್ರೆ ಅಜ್ಜರ ತವರೂರಾದ ಧಾರವಾಡ ಜಿಲ್ಲೆಯಲ್ಲಿರುವ ಕರ್ನಾಟಕ್ ಕಾಲೇಜ್ ಧಾರವಾಡ (KCD) ಒಳವಲಯದಲ್ಲಿ ಹಾಗು ಡಿ.ಸಿ ಕಾಂಪೌಂಡಿನೊಳಗೆ ಅಮ್ಮನೊಡಗೂಡಿ ಬಾಲ್ಯದಿಂದಲೂ ಧೀರ್ಘಚರಣಿಸಿದ್ದು ಇನ್ನೂ ಸವಿನೆನಪಾಗಿ ಉಳಿದಿವೆ. ಯಾವುದೇ ಸತ್ಕಾರ್ಯ ಪ್ರಾರಂಭಿಸಲು ಶ್ರೀಗಣೇಶನ ಆಶೀರ್ವಾದ ಅತ್ಯವಶ್ಯಕ ಅಲ್ಲವೇ? ಹಾಗಾಗಿ ನನ್ನ ಈ ಚಾರಣ ಪ್ರಾರಂಭಿಸಿದ್ದು KCD ವೃತ್ತದಲ್ಲಿರುವ ಗಣೇಶನ ದೇವಸ್ಥಾನದಿಂದ. ಪ್ರಾಕೃತಿಕ ಪರಿಸರದ ಆವರಣದಲ್ಲಿ ಚಾರಣಿಸುವುದರಿಂದ ದೈಹಿಕ ಚೈತನ್ಯ ಮತ್ತಷ್ಟು ಇಮ್ಮಡಿಯಾಗುವುದು.

ಚಿತ್ರ ಕೃಪೆ : ಶಾರದ ಸಕ್ರೆಮಠ್


ಮೊದಲು ಚಾರಣದಿಂದ ಪ್ರಾರಂಭಿಸಿ ನಂತರ ಓಡ ಬೇಕೆಂದು ನಿರ್ಧರಿಸಿದೆ. ಪ್ರಾರಂಭದಲ್ಲಿ ಕ್ಲಿಷ್ಟಕರವಾದರೂ ಅದನ್ನು ಸವಾಲಾಗಿ ತೆಗೆದುಕೊಂಡು ದಿಟ್ಟ ಮನಸ್ಸು ಮಾಡಿ ಪ್ರಥಮವಾಗಿ ಅಕ್ಟೋಬರ್,೨೦೧೯ ರಲ್ಲಿ ೫ಕಿ.ಮೀ ಓಟದ ಸಾಹಸಕ್ಕಿಳಿದು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದರಿಂದ ನನ್ನ ಆತ್ಮಸ್ತೈರ್ಯಮತ್ತಷ್ಟು ಹೆಚ್ಚು ಮಾಡಿತು. ತದ ನಂತರ ಕೊಂಚ ವಿಭಿನ್ನವಾಗಿ, ವಿಶೇಷವಾಗಿ ಮಾಡಬೇಕೆಂದು ಅನಿಸಿತು. ಹೇಗೆ ಎಂದು ಯೋಚನೆ ಮಾಡುವಾಗ ಹೊಳೆದದ್ದು ನನ್ನ ವಸ್ತ್ರಾಭೂಷಣ. ಓಡುವಾಗ ಸಾಮಾನ್ಯವಾಗಿ ಎಲ್ಲರೂ ಜಾಗಿಂಗ್ ವಸ್ತ್ರದಲ್ಲಿ ಓಡುತ್ತಾರೆ. ಹಾಗೆ ಮಾಡುತ್ತಿದ್ದವಳು ಸೀರೆಯಲ್ಲಿ ಮಾಡಬೇಕೆಂದು ಹೊಳಿಯಿತು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರಾಚೀನ ಕಾಲದಿಂದಲೂ ಸೀರೆ ನಾರಿಯ ಸಾಂಕೇತಿಕ ಮಹತ್ವದ ವಸ್ತ್ರವಾಗಿದ್ದು ಅದರದೆಯಾದ ವೈಶಿಷ್ಟ್ಯ ಹೊಂದಿದೆ.ಸೀರೆ ಉಡುವುದರಿಂದ ನಾರಿಯ ಸೌಂದರ್ಯ ಇಮ್ಮಡಿಯಾಗುವುದು. ಸೀರೆ ಉಡುವಾಗೆಲ್ಲ ತಾಯಿ,ತವರು ಹಾಗು ತಾಯ್ನಾಡಿನ ಹಂಬಲ ಹೆಚ್ಚಾಗುವುದು. ಸೀರೆ ಉಡುವುದೆಂದರೆ ಏನೋ ಸಂಭ್ರಮ ಸಡಗರ. ಅದರಲ್ಲೂ ಅಮ್ಮನ ಸೀರೆಯೆಂದರೆ ಏನೋ ಮನೋಲ್ಲಾಸ, ಮುದ ನೀಡುವುದು. ಅದರ ಸ್ಪರ್ಶವೇ ಅಮ್ಮ ನಮ್ಮೊಟ್ಟಿಗೆ ಇದ್ದಂತೆ. ತವರಿನ ಸವಿನೆನಪುಗಳು ಕಣ್ಣಮುಂದೆ ಬರುತ್ತವೆ. ನನಗೆ ಸೀರೆಯ ಮೇಲೆ ಅಪಾರ ಒಲವು. ಅದರಲ್ಲೂ ಇಳ್ಕಲ್ ಸೀರೆ, ರೇಷ್ಮೆ, ಮೈಸೂರು ರೇಷ್ಮೆ ಎಂದರೆ ತುಂಬ ಇಷ್ಟ.

ಚಿತ್ರ ಕೃಪೆ : ಶಾರದ ಸಕ್ರೆಮಠ್

ನಮ್ಮ ಭಾರತೀಯ ಇತಿಹಾಸದಲ್ಲಿ ಮಹಿಳೆಯರು ಸೀರೆಯುಟ್ಟು ಯುದ್ಧಭೂಮಿಯಲ್ಲಿ ಹೇಗೆ ಹೋರಾಡುಡ್ಡಿದ್ದಾರೆಂಬುದು ಅಚ್ಚರಿಗೊಳಿಸುವುದು. ಅದನ್ನು ವೀಕ್ಷಿಸುವುದೇ ರೋಚಕ. ಹಾಗಾಗಿ ನನಗೆ ಪ್ರೇರಣೆಯಾಗಿದ್ದು ಕರುನಾಡಿನ ವೀರ ಕಿತ್ತೂರು ರಾಣಿ ಚೆನ್ನಮ್ಮ.
ಹಾಗಾಗಿ ಮೊದಲು ಈ ಸೀರೆಯುಟ್ಟು ಪ್ರಸಿದ್ದವಾದ ಟೆಲ್ಫರ್ಡ್ ಪಾರ್ಕ್ ಓಟದಲ್ಲಿ ಇತರೆ ಮಹಿಳೆಯರೊಂದಿಗೆ ೫ ಕಿ.ಮೀ ಓಟ ಓಡುತ್ತಿದ್ದೆ. ದಿನದಿಂದ ದಿನಕ್ಕೆ ಉತ್ಸುಹಕಳಾಗಿ ಮಾಡುವಾಗ ನನಗೆ ಓಟದ ಆಯೋಜಕರಿಂದ ಹಾಗು ಸಹಓಟಗಾರ್ತಿಯರಿಂದ ಪ್ರಶಂಸೆ ಹಾಗು ಉತ್ತೇಜನ ದೊರೆಯುತ್ತಿತ್ತು. ನನ್ನ ಬಗ್ಗೆ ನನಗೇ ಹೆಮ್ಮೆಯೆನಿಸುತ್ತಿತ್ತು. ಏಕೆಂದರೆ ನಮ್ಮ ಟೆಲ್ಫೋರ್ಡ್ ನ ಸ್ಥಳೀಯ ಪತ್ರಿಕೆಯಲ್ಲಿ ಪ್ರತಿ ವಾರ ಪ್ರಕಟವಾಗುತ್ತಿತ್ತು.ಸತತ ಪಾರ್ಕ್ ಓಟದಿಂದ ಕರುನಾಡಿನ ಕಾವಿಡ್ ರಿಲೀಫ್ ಫಂಡ್ ಗಾಗಿ ಫಂಡ್ ಗಳನ್ನೂ ಸಹ ಸಂಗ್ರಹಿಸಿದೆ. ಅಲ್ಲದೆ ನಾನು ಓಡುವಾಗ ಸ್ಪೋರ್ಟ್ಸ್ ಇಂಗ್ಲೆಂಡ್ ತಂಡದವರು ನನ್ನನ್ನು ಗುರುತಿಸಿ ‘ THE GIRL CAN CAMPAIGN’ ಎಂಬ ಕಾರ್ಯಕ್ರಮಕ್ಕೆ ಸಂದರ್ಶನ ನೀಡಲು ಹುರಿದುಂಬಿಸಿದರು. ಈ ಲಕ್ಷ್ಯಗಳು ಪೂರ್ಣಗೊಳಿಸಿ ಯುನೈಟೆಡ್ ಕಿಂಗ್ಡಮ್ ನ ಪ್ರಖ್ಯಾತ ಮ್ಯಾರಥಾನ್ ಗಾಗಿ ಓಡಲು ನನ್ನ ಹೊಂಗನಸ್ಸಾಗಿತ್ತು . ಹಾಗಾಗಿ EDINBURGH MARATHON 2020 ಗಾಗಿ ನೋಂದಾಯಿಸಿ ನನ್ನ ಓಟ ಮತ್ತಷ್ಟು ವೈಶಿಷ್ಟ್ಯ , ವೈವಿಧ್ಯಮಯವಾಗಿರಲೆಂದು ಬರಿಗಾಲಿನಲ್ಲಿ ಅಭ್ಯಾಸ ಮಾಡಲಾರಂಭಿಸಿದೆ. ಇದರಿಂದ ನನ್ನ ಆತ್ಮಸ್ತೈರ್ಯ ಪ್ರಬಲವಾಗುತ್ತ ಹೋಯಿತು.

ಆದರೆ ಕೋವಿಡ್-19 ನ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಸರ್ವರಿಗೂ ಪ್ರಭಾವ ಬೀರಿದಂತೆ ಈ ಓಟಕ್ಕೂ ಸಹ ಕಡಿವಾಣ ಹಾಕಿತು. ಹಾಗಾಗಿ ಮೇ ೨೦೨೧ಕ್ಕೆ ಮುಂದೂಡಲಾಯಿತು. ನಾನು ಕುಗ್ಗದೆ ಇನ್ನಷ್ಟು ಅಭ್ಯಾಸ ಮಾಡತೊಡಗಿದೆ. ಇದಕ್ಕೆ ನನ್ನ ಪತಿ ಹಾಗು ಪುತ್ರನಿಂದ ಬೆಂಬಲ ಪ್ರತಿ ಬಾರಿ ದೊರಕುತ್ತಿತ್ತು. ಪುತ್ರನಂತೂ ನನ್ನ ೧೦ ಕಿ.ಮೀ ಸೀರೆಯೋಟದಲ್ಲಿ ನನ್ನ ಬದಿಯಲ್ಲಿ ತನ್ನ ಸೈಕಲ್ ನಲ್ಲಿ ಚಲಿಸಿ ಉತ್ತೇಜಿಸಿದ. EDINBURGH MARATHON ಓಟವು ವಸ್ತುತಃ ಓಟವಾಗಿ ಬದಲಾಗಿ ಸಹ ಓಟಗಾರರಿಲ್ಲದೆಯೇ ಏಕಾಏಕಿ ಓಡುವುವುದೆಂದು ನಿರ್ಧರಿಸಲಾಯಿತು .

ಚಿತ್ರ ಕೃಪೆ : ಶಾರದ ಸಕ್ರೆಮಠ್

ಆ ದಿನ ನಾನು ಕರುನಾಡ ಧ್ವಜದ ಸಾಂಕೇತಿಕ ಬಣ್ಣಗಳಾದ ಹಳದಿ ಹಾಗು ಕೆಂಪು ಬಣ್ಣದ ಸೀರೆಯನ್ನುಟ್ಟು ನಮ್ಮ ಮನೆಯ ಆಸುಪಾಸಿನಲ್ಲಿರುವ ತೋಟದ ಬೀದಿಗಳಲ್ಲಿ ಓಡಲಾರಂಭಿಸಿದೆ. ಅರ್ಧ ಮ್ಯಾರಥಾನ್ ನಂತರ ತುಂತುರು ಹನಿಗಳು ಪ್ರಾರಂಭವಾಯಿತು. ಆದರೂ ಕುಗ್ಗದೆ ಮುಂದುವರಿಸಿದೆ. ಈ ಪಯಣದುದ್ದಕ್ಕೂ ಪತಿ ಹಾಗು ಪುತ್ರನ ಆಗಾಗಿನ ಆರೈಕೆಯಿಂದ ಹುರಿದುಂಬಿಸಿದರು. ೪೨.೪ ಕಿ.ಮೀ ನ ಈ ಮ್ಯಾರಥಾನ್ ಅಂತೂ ಸ್ಪೂರ್ತಿದಾಯಕವಾಗಿ ಯಶಸ್ವಿಯಾಗಿ ೫ಗಂಟೆ ೫೦ನಿಮಿಷಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಿದೆ. ನಂತರ ನಮ್ಮ ಭಾರತ ದೇಶದ ತಿರಂಗ ಧ್ವಜ ಮೇಲೆತ್ತಿಡಿದು ಛಾಯಾಚಿತ್ರದ ಭಂಗಿಗೆ ಹೆಮ್ಮೆಯಿಂದ ನಿಂತೆ.
ನನ್ನ ಈ ಆತ್ಮಸ್ತೈರ್ಯ ನಮ್ಮ ಭಾರತೀಯ ಸಂಸ್ಕೃತಿಯೊಂದಿಗೆ ಮತ್ತಷ್ಟು ಸಾಹಸಗಳೊಂದಿಗೆ ಮುಗಿಲೇರುವ ಆಸೆ !!

ಸ್ನೇಹಿತರೆ ! ನಮ್ಮ ಸಂಸ್ಕೃತಿ ನಮ್ಮ ಹಿರಿಮೆ ನಮ್ಮ ಅಸ್ತಿತ್ವ .
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ !
ಜೈ ಕರ್ನಾಟಕ ಜೈ ಹಿಂದ್ .

ಶಾರದ ಸಕ್ರೆಮಠ್

  1. ಕೆಹನಾ ಕ್ಯಾ ಚಾಹತೇ ಹೋ? ಜೋ ಭೀ ಹೋ ಸೊಚ್ ಕೆ ಕಹೋ! ಅನುವಂತೆ ನೀವು ಮಂಥನ ನಡೆಸಿದ ಕುರುಹು ೨೪ ತಾಸು ತಡವಾಗಿ ಬರೆದಿದ್ದರ ಮೇಲೆಯೇ…

  2. ನೂರ್ ಇನಾಯತ್ ಖಾನ್ ಎನ್ನುವ ಮಹಿಳೆ ಟೀನೇಜ್ ಆಗುತ್ತಿದ್ದಂತೆಯೇ ತಂದೆಯನ್ನು ಕಳೆದುಕೊಂಡು ಜೀವನದಲ್ಲಿ ಅನೇಕ ಕಷ್ಟಗಳನ್ನೆದುರಿಸಿ ದೇಶಕ್ಕಾಗಿ ತನ್ನ ಜೀವವನ್ನೇ ತೆತ್ತ ಈ ಹುತಾತ್ಮಳ ಕಥೆ ನಿಜವಾಗಿಯೂ…

ಹಸಿರು ಮತ್ತು ಸಂಗೀತ – ವಿದ್ವಾನ್. ಶ್ರೀ .ಪ್ರಮೋದ್ ಪ್ರಸನ್ನಕುಮಾರ್ ರುದ್ರಪಟ್ನ

ಸನ್ಮಿತ್ರ ಓದುಗರೇ !!
ನಾದಮಯ ಈ ಪ್ರಕೃತಿಯೆಲ್ಲಾ … ಪ್ರಾಕೃತಿಕ ಸಂಗೀತ ಎಷ್ಟು ಮುದ ನೀಡುವುದೋ ಓರ್ವ ಸಂಗೀತ ವಾದಕನಿಗೆ ಪ್ರಕೃತಿಯ ಮಡಿಲಲ್ಲಿ ನುಡಿಸುವ ಸಂಗೀತ, ಆಡೋ ನೃತ್ಯವು ಮಗದಷ್ಟು ಮನೋಲ್ಲಾಸ ನೀಡುವುದು. ನಮ್ಮ ಈ ವಾರದ ಸಂಚಿಕೆಯಲ್ಲಿ ಯುನೈಟೆಡ್ ಕಿಂಗ್ಡಮ್ ನ ಲಂಡನ್ ನಿವಾಸಿಯಾದ ಖ್ಯಾತ ವೈಣಿಕರಾದ ವಿದ್ವಾನ್. ಶ್ರೀ .ಪ್ರಮೋದ್ ಪ್ರಸನ್ನಕುಮಾರ್ ರುದ್ರಪಟ್ನ ‘ಹಸಿರು ಮತ್ತು ಸಂಗೀತ ‘ ಎಂಬ ಶೀರ್ಷಿಕೆಯ ಒಂದು ಸಂಕ್ಷೀಪ್ತ ಲೇಖನ ನಿಮ್ಮ ಮುಂದಿಟ್ಟಿದ್ದಾರೆ . ಓದಿ ಪ್ರತಿಕ್ರಿಯಿಸಿ . – ಸವಿ. ಸಂ

ಲೇಖಕರ ಪರಿಚಯ

ವಿದ್ವಾನ್. ಆರ್.ಪಿ.ಪ್ರಮೋದ್ ಅವರು ಯುನೈಟೆಡ್ ಕಿಂಗ್ಡಮ್ ನ ಲಂಡನ್ ನಿವಾಸಿಯಾಗಿದ್ದು ಯು.ಕೆಯ ಹೆಸರಾಂತ ವೈಣಿಕರು. ಇವರು ಬಿ.ಇ ಪದವಿದಾರರಾಗಿದ್ದು ಒಂದು ಖಾಸಗಿ ಸಂಸ್ಥೆಯಲ್ಲಿ ಸಾಫ್ಟ್ವೇರ್ ಎಂಜಿನೀರ್ ಆಗಿ ಕೆಲಸ ಮಾಡುತಿದ್ದಾರೆ .
ರುದ್ರಪಟ್ಟಣದ ಸಂಗೀತದ ಮನೆತನದಿಂದ ಬಂದಿರುವ ವಿದ್ವಾನ್. ಆರ್.ಪಿ.ಪ್ರಮೋದ್ ರವರು ರುದ್ರಪಟ್ಟಣ ವೀಣಾ ಸಹೋದರರು ಎಂದೇ ಪ್ರಸಿದ್ದರಾಗಿದ್ದಾರೆ. ಈ ಸಹೋದರರು ಖ್ಯಾತ ಸಂಗೀತ ವಿದ್ವಾಂಸರಾದ ಕಂಚೀ ಕಾಮಕೋಟಿ ಪೀಠಂ ಆಸ್ಥಾನ ವಿದ್ವಾನ್ ಸುವರ್ಣ ಕರ್ನಾಟಕ ಚೇತನ R K ಪ್ರಸನ್ನ ಕುಮಾರ್ ರವರ ಸುಪುತ್ರರು.
ಈ ದ್ವಯರು – ಸಹೋದರರು ಖ್ಯಾತ ವೀಣಾ ವಾದಕರಾದ ಮೈಸೂರು ಅರಮನೆಯ ಆಸ್ಥಾನ ವಿದ್ವಾಂಸರಾಗಿದ್ದ “ವೈಣಿಕ ಪ್ರವೀಣ” ಶ್ರೀ. ಆರ್.ಎಸ್. ಕೇಶವ ಮೂರ್ತಿ ರವರ ಮೊಮ್ಮಕ್ಕಳು . ಇಬ್ಬರು 3 ಮತ್ತು 7 ನೇ ವಯಸ್ಸಿನಲ್ಲಿ ವೀಣೆ ನುಡಿಸಲು ಆರಂಭಿಸಿದರು.
ವಿದ್ವಾನ್. ಪ್ರಮೋದ್ 4 ನೇ ವಯಸ್ಸಿನಲ್ಲಿ ಕಿರುತೆರೆಯಲ್ಲಿ ಪಾದಾರ್ಪಣೆ ಮಾಡಿದರು.
ಸಹೋದರರು ತಮ್ಮ ವೀಣಾ ಯುಗಳ ವಾದನದ ಕಾರ್ಯಕ್ರಮವನ್ನು 2003 ರಲ್ಲಿ ಪ್ರಾರಂಭಿಸಿ, ಅನೇಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.
ಆಕಾಶವಾಣಿ, ಕನ್ನಡ ಸಂಸ್ಕೃತಿ ಇಲಾಖೆಯ ಯುವ ಸೌರಭ, ಹಲವು ಸಭೆಗಳು, ಟಿ.ವಿ ಚಾನೆಲ್‌ಗಳು, ಖಾಸಗಿ ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ದ್ವಂದ್ವ ವೀಣಾ ವಾದನದ ಕಛೇರಿಗಳನ್ನು ಸಹೋದರರು ನೀಡಿದ್ದಾರೆ. ಅವರು ಪ್ರತಿಷ್ಠಿತ cleavland ತ್ಯಾಗರಾಜ ಆರಾಧನಾ ಉತ್ಸವ, US ಹಾಗೂ ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್‌ಡಂನ ಇತರ ಪ್ರಸಿದ್ಧ ವೇದಿಕೆಗಳ ಪ್ರದರ್ಶನ ನೀಡಿದ್ದಾರೆ.
ಸಹೋದರರು ತಮ್ಮ ವಿಶಿಷ್ಟ ಶೈಲಿಯ ಪ್ರದರ್ಶನಕ್ಕಾಗಿ ಉತ್ತಮ ಮೆಚ್ಚುಗೆಯನ್ನು ಗಳಿಸಿದ್ದಾರೆ.
ಸಹೋದರರು ಶುಭೋದಯ ಟ್ರಸ್ಟ್‌ನಿಂದ “ನವೋದಯ ಪ್ರಶಸ್ತಿ” ಗೆ ಭಾಜನರಾಗಿದ್ದಾರೆ.
ಇವರ ಮುಖ್ಯ ಗುರಿ ಕುಟುಂಬಕ್ಕೆ ಹಾಗೂ ರಾಷ್ಟ್ರಕ್ಕೆ ಶ್ರೇಣಿ ತರುವುದು. ಭಾರತೀಯ ಸಂಸ್ಕೃತಿಯನ್ನು ಪ್ರಪಂಚದಾದ್ಯಂತ ಪ್ರಚಾರ ಮಾಡುವುದು.

🎼 🎼 🎼 🎼 🎼 🎼 🎼 🎼

ಹಸಿರು ಉಸಿರು !!
ಆಹಾ!! ಎಷ್ಟು ಸೊಗಸಾದ ಶೀರ್ಷಿಕೆ.ಈ ಭೂಮಿಯ ಸಕಲ ವಾಯು ಜೀವರಾಶಿಗಳ ಕಾರ್ಯ ಚಟುವಟಿಕೆಗಳ ಸುಲಲಿತ ಚಲನೆಗೆ, ಚಾಲನೆ ನೀಡುವ, ಉತ್ತೇಜನ ನೀಡುವ, ಅನರ್ಘ್ಯವಾದ ಅತ್ಯಮೂಲ್ಯವಾದ ಉಸಿರು ನೀಡುವ ಹಸಿರು ಸಿರಿಗೆ ನಮ್ಮ ಹೃದಯ ಪೂರ್ವಕ ಕೃತಜ್ಞತೆಗಳು. 
ಇಂತಹ ಸುಂದರ ಹಸಿರು ವನ ರಾಶಿಯಲ್ಲಿ ಸಂಗೀತ ಹಾಡುವುದಾಗಲಿ, ನುಡಿಸುವುದಾಗಲಿ, ಕೇಳುವುದಾಗಲಿ ಮಾಡಿದಾಗ ನಮ್ಮ ಮನಕೆ ಮುದ, ಮೋದ ಹಾಗೂ ಪ್ರಮೋದ ನೀಡುತ್ತದೆ. ಅಷ್ಟೇ ಅಲ್ಲದೆ ಈ ಪ್ರಶಾಂತವಾದ ಹಸಿರು ನೋಟ ಕಣ್ಮನ ಪ್ರಸನ್ನವಾಗಿಸುತ್ತದೆ. 


ಪರಿಸರ ಪ್ರೇಮಿಗಳಾದ ನಾವು, ಈ ಮನಮೋಹಕ ವಾತಾವರಣದಲ್ಲಿ ವೀಣಾವಾದನ ಮಾಡಿದಾಗ ವಿಶೇಷವಾದ ಅತಿಶಯವಾದ ಜ್ಞಾನ ಪಡೆಯಲು ಸಹಾಯ ಮಾಡುತ್ತದೆ. ದೈನಂದಿನ ತಾಪತ್ರಯಗಳ ನಡುವೆ, ಈ ರೀತಿಯ ಪ್ರಯೋಗಗಳು ನಮ್ಮೆಲ್ಲರ ಜೀವನದಲ್ಲಿ ಅತ್ಯವಶ್ಯಕ. 
ಇದರಲ್ಲಿ ಸಿಗುವ ಪರಿಪೂರ್ಣತೆ, ಸ್ವಚ್ಛವಾದ ಸ್ವಾತಿ ಮುತ್ತಿನ ಹಾಗೆ ನಮ್ಮ ಹೃನ್ಮನಗಳಿಗೆ ಧನ್ಯತಾ ಭಾವ ಉಂಟುಮಾಡುತ್ತದೆ. 


ನಮ್ಮೆಲ್ಲರ ಜೀವನಾಧಾರವಾಗಿರುವ ಹಸಿರಿನ ಜೊತೆಗೆ , ಅನಂತವಾದ ಸಂಗೀತವಾಗಲಿ, ನಾಟ್ಯವಾಗಲಿ ಅಥವಾ ಯಾವ ಕಲೆಯಾಗಲಿ ಆಸ್ವಾದಿಸಿದರೆ, ಕಷ್ಟ, ನೋವು, ಸಂಕಟ, ರೋಗ ರುಜಿನಗಳು ಗುಣವಾಗುತ್ತದೆ ಎಂಬುದು ಅನೇಕರ ಅನುಭವ. ಏಕೆಂದರೆ ಹಸಿರು ಮತ್ತು ಸಂಗೀತ , ರಸದೌತಣದೊಂದಿಗೆ ಚಿಕಿತ್ಸಕ ಶಕ್ತಿಯೂ ಹೌದು. ಈ ರಾಸಾನುಭವವನ್ನು ಸರಿಸೃಪಾದಿಯಾಗಿ ಎಲ್ಲಾ ಜೀವಿಗಳು ಆನಂದಿಸುತ್ತದೆ ಎಂಬ ಉಲ್ಲೇಖವಿದೆ.

 
‘ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿ ಗಾನ ರಸಂಫಣೀ’ ಎನ್ನುತ್ತಾರೆ,  ಅಂದರೆ ಮಕ್ಕಳು, ಪ್ರಾಣಿಗಳೂ, ಸರೀಸೃಪವಾದ ಹಾವೂ ಸಹ ಸಂಗೀತರಸ ಮಾಧುರ್ಯವನ್ನು ಸವಿಯುತ್ತವೆ.  


ಹಸಿರಲ್ಲಿ ಸಂಗೀತ ಎಂಬ ಪರಿಕಲ್ಪನೆಯನ್ನು ಹೊತ್ತುತಂದ ಅನಿವಾಸಿ ತಂಗುದಾಣದ ಪ್ರಸ್ತುತ ಸಂಪಾದಕಿಯಾದ ಶ್ರೀಮತಿ. ಸವಿತಾ ಸುರೇಶ್ ರವರಿಗೆ ನನ್ನ ಧನ್ಯವಾದಗಳು. 
ಭೂ ಪ್ರದೇಶದಲ್ಲಿ ಸುಮಾರು 25% ಶೇಖಡ ಭಾಗ ಹಸಿರಿನಿಂದ ತುಂಬಿದೆ ಎನ್ನಬಹುದು. ಈ ಹಸಿರನ್ನು ಉಳಿಸಿ ಮುಂದಿನ ಸಾವಿರಾರು ಪೀಳಿಗೆಗೆ ಅನುಕೂಲ ಮಾಡಿಕೊಡುವ ಬೃಹತ್ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.. 


ಹಸಿರು ಬೆಳೆಸೋಣ !!

ಪರಿಸರ ಉಳಿಸೋಣ !!

ಸಂಗೀತರಸ ಸವಿಯೋಣ !!

🎼 🎼 🎼 🎼 🎼 🎼 🎼 🎼

ಹಸಿರ ಬಸಿರಲ್ಲಿ ಓರ್ವ ವೈಣಿಕನಾಗಿ ಇನ್ನೋರ್ವ ವೈಣಿಕ ನನ್ನ ಸಹೋದರನಾದ ವಿದ್ವಾನ್. ಶ್ರೀ .ಪ್ರಶಾಂತ್ ಪ್ರಸನ್ನಕುಮಾರ್ ರುದ್ರಪಟ್ನ ಸಂಗಡ ಕೂಡಿ ಸಂಗೀತ ನುಡಿಸುದ ನಾಗಮಂಡಲ ಚಿತ್ರದ, ಸಿ. ಅಶ್ವಥ್ ಅವರ ಸಂಗೀತ ನಿರ್ದೇಶನದ , ಶ್ರೀಮತಿ. ಸಂಗೀತ್ ಕಟ್ಟಿ ಅವರ ಮೂಲ ಗಾಯನದ , ‘ಈ ಹಸಿರು ಸಿರಿಯಲಿ ‘ ಎಂಬ ಹಾಡನ್ನು ನುಡಿಸಿದ್ದೇವೆ . ವೀಕ್ಷಣೆಗಾಗಿ ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ .

ವಿಡಿಯೋ ಕೃಪೆ : ಧನ್ಯ ರಾಮನಾಥ್ ಹಾಗು ಸ್ವಾತಿ ಲಕ್ಷ್ಮೀಶ

-ವಿದ್ವಾನ್. ಶ್ರೀ .ಪ್ರಮೋದ್ ಪ್ರಸನ್ನಕುಮಾರ್ ರುದ್ರಪಟ್ನ