ಎಚ್ಚೆಸ್ವಿ ಎಂಬ ಜೀವಪರತೆ..ಭಾವದೊರತೆ

ಎಚ್ಚೆಸ್ವಿ ಕೆಲವು ಆತ್ಮೀಯ ನೆನಪುಗಳು

ಎಚ್ಚೆಸ್ವಿ ಅವರು ನನ್ನ ತಂದೆ ಜಿ ಎಸ್ ಎಸ್ ಅವರ ಪ್ರತಿಭಾವಂತ ಮತ್ತು ಆಪ್ತ ಶಿಷ್ಯರು. ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ   ಕನ್ನಡ ಎಂ.ಎ ವಿದ್ಯಾರ್ಥಿಯಾದ ಮೇಲೆ (1971-1973) ನಮ್ಮ ಕುಟುಂಬಕ್ಕೆ ಪರಿಚಿತರಾದರು. ಕುವೆಂಪು ಅವರಿಗೆ ವೆಂಕಣಯ್ಯ ನವರು ಹೇಗೋ, ಜಿ ಎಸ್ ಎಸ್ ಅವರಿಗೆ ಕುವೆಂಪು ಹೇಗೋ , ಹಾಗೆ ಎಚ್ಚೆಸ್ವಿ ಅವರಿಗೆ ಜಿ ಎಸ್ ಎಸ್ ಪೂಜ್ಯ ಗುರುಗಳು. ಅದು ಅನನ್ಯವಾದ ಗುರು ಶಿಷ್ಯ ಸಂಬಂಧ. ಅಲ್ಲಿ ಪರಸ್ಪರ ಪ್ರೀತಿ, ಗೌರವ, ಸಲಿಗೆ, ಗೆಳೆತನ ಒಂದು ಹದದಲ್ಲಿ  ಇರುವಂತಹ ಒಡನಾಟ. ಕುವೆಂಪು ಅವರ ಮಾತುಗಳನ್ನು ಉಲ್ಲೇಖಿಸುವುದಾದರೆ "ಅಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ. ಎಚ್ಚೆಸ್ವಿ ಅವರು ಜಿ ಎಸ್ ಎಸ್ ಅವರಿಗೆ ಹತ್ತಿರವಾದದ್ದು ಬರಿಯ ವಿದ್ಯಾರ್ಥಿ ದೆಸೆಯಿಂದಲ್ಲ, ಅದಕ್ಕೆ ಮುಖ್ಯಕಾರಣ ಎಚ್ಚೆಸ್ವಿ ಒಬ್ಬ ಸೃಜನಶೀಲ ಕವಿ, ಅವರು ಸ್ನೇಹಪರರು ಮತ್ತು ಮೃದು ಸ್ವಭಾವದವರು. ಗುರು ಶಿಷ್ಯರು ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ, ಕವಿಸಮ್ಮೇಳನಗಳಲ್ಲಿ ಒಟ್ಟಿಗೆ ಭಾಗವಹಿಸಿದವರು. ಒಬ್ಬರ ಕವಿತೆಯನ್ನು ಇನ್ನೊಬ್ಬರು ಮೆಚ್ಚಿಕೊಂಡವರು. ಕಾಲಕ್ರಮೇಣ ಎಚ್ಚೆಸ್ವಿ ಅವರು ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಅಧ್ಯಪಕರಾಗಿದ್ದಾಗ ನಾವು ವಾಸವಾಗಿದ್ದ ಬನಶಂಕರಿ ಎರಡನೆಹಂತದ ೧೮ನೇ ಮುಖ್ಯ ರಸ್ತೆಯಲ್ಲಿ, ಪಕ್ಕದಲ್ಲೇ ಅವರೂ, ಮಡದಿ ರಾಜಲಕ್ಷ್ಮಿ ಮತ್ತು ಮಕ್ಕಳ ಜೊತೆ ಒಂದು ಬಾಡಿಗೆ ಮನೆಯಲ್ಲಿ ಹಲವಾರು ವರ್ಷಗಳ ಅವಧಿಯಲ್ಲಿ ವಾಸವಾಗಿದ್ದರು. ಗುರು ಶಿಷ್ಯರು ಸಾಹಿತ್ಯ ಸಮ್ಮೇಳನಗಳ ನಡುವೆ ಹಲವಾರು ಪ್ರವಾಸವನ್ನು ಕೈಗೊಳ್ಳುತ್ತಿದ್ದರು, ಕೆಲವೊಮ್ಮೆ ಮಾರ್ನಿಂಗ್ ವಾಕ್ ಮಾಡುತ್ತಿದ್ದರು. ಸೂರ್ಯದಯವನ್ನು ಒಟ್ಟಿಗೆ ನಿಂತು ವೀಕ್ಷಿಸುತ್ತಿದ್ದರು. ಆ ವೇಳೆ ಎಚ್ಚೆಸ್ವಿ ಏನಾದರೂ ಹರಟೆಗೆ ತೊಡಗಿದರೆ, ಜಿ ಎಸ್ ಎಸ್ ಅವರು 'ಶುಶ್ ಸುಮ್ಮನಿರಿ ಸೂರ್ಯೋದಯವನ್ನು ನಿಶಬ್ದದಲ್ಲಿ ನೋಡೋಣ' ಎನ್ನುತ್ತಿದ್ದರಂತೆ! (ಇದರ ಬಗ್ಗೆ ಎಚ್ಚೆಸ್ವಿ ಅವರು ಒಂದು ಕಡೆ ಬರೆದಿದ್ದಾರೆ) ವಾಕಿಂಗ್ ಬಳಿಕ ಗುರು ಶಿಷ್ಯರು ಗಾಂಧಿಬಜಾರಿನ ವಿದ್ಯಾರ್ಥಿ ಭವನಕ್ಕೆ ತೆರಳಿ ಅಲ್ಲಿ ಮಸಾಲೆ ದೋಸೆ ಕಾಫಿ ಸವಿದು ಬರುತ್ತಿದ್ದರು. ಜಿ ಎಸ್ ಎಸ್ ಅವರೇ ವಿದ್ಯಾರ್ಥಿಭವನದ ಬಿಲ್ಲು ಕಟ್ಟುತ್ತಿದ್ದರೆಂದು ಎಚ್ಚೆಸ್ವಿ "ಬಿಲ್ಲೋಜ ಜಿ ಎಸ್ ಎಸ್ " ಎಂಬ ಬರಹದಲ್ಲಿ ಪ್ರಸ್ತಾಪಿಸಿದ್ದಾರೆ. ಸ್ವಾರಸ್ಯಕರವಾದ ಸಂಗತಿ ಎಂದರೆ ಗುರು ಶಿಷ್ಯರಿಬ್ಬರೂ ತಮ್ಮ ಪತ್ನಿಯರಿಗೆ ವಿದ್ಯಾರ್ಥಿ ಭವನಕ್ಕೆ ಹೋಗುತ್ತಿದ್ದೇವೆ ಎಂಬ ಸುಳಿವು ಕೊಡುತ್ತಿರಲಿಲ್ಲವಂತೆ. (ಹೋಟೆಲ್ಗೆ ಹೋಗಿ ಯಾಕೆ ತಿನ್ನ ಬೇಕು ಕೇಳಿದ್ದರೆ ಮನೆಯಲ್ಲೇ ಮಾಡಿಕೊಡುತ್ತಿದ್ದೆವಲ್ಲ ಎಂಬ ಮಡದಿಯ ಆಕ್ಷೇಪಣೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ) ನಮ್ಮ ಮನೆಯಲ್ಲಿ ಪ್ರತಿ ವರ್ಷ ಮೇ ತಿಂಗಳ ಕೊನೆಗೆ ಮಾವಿನ ಹಣ್ಣಿನ ಸೀಸನ್ ಮಧ್ಯದಲ್ಲಿ ಅಪ್ಪ, ಅವರ ಆತ್ಮೀಯ ಸಾಹಿತಿ ಮಿತ್ರರನ್ನು ಹೋಳಿಗೆ ಸೀಕರಣೆ ಊಟಕ್ಕೆ ಆಹ್ವಾನಿಸುತ್ತಿದ್ದರು, ಅದರಲ್ಲಿ ಎಚ್ಚೆಸ್ವಿ ಅವರು ಇದ್ದೇ ಇರುತ್ತಿದ್ದರು. ಅಪ್ಪ ಶುರುವಿನಲ್ಲಿ ಎಚ್ಚೆಸ್ವಿ ಅವರಿಗೆ ಹೇಗೆ ಹೋಳಿಗೆಗೆ ತುಪ್ಪಕಲೆಸಿ ನಂತರ ಸೀಕರಣೆಯನ್ನು ಕಿವುಚಿ ಒಂದು ಹದದಲ್ಲಿ ಮಿಕ್ಸ್ ಮಾಡಿ ತಿನ್ನಬೇಕು ಎಂಬುದನ್ನು ತಿಳಿಸಿಕೊಟ್ಟದ್ದನ್ನು ಎಚ್ಚೆಸ್ವಿ ತಮ್ಮ ಒಂದು ಬರಹದಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಗುರು ಶಿಷ್ಯರಿಬ್ಬರು ತಮ್ಮ ಕೃತಿಗಳನ್ನು ಪರಸ್ಪರ ವಿಮರ್ಶೆ ಮಾಡಿದ್ದಾರೆ. ಎಚ್ಚೆಸ್ವಿ ಅವರು 'ಜಿ ಎಸ್ ಎಸ್ ಬದುಕು ಬರಹ' ಎಂಬ ವಿಮರ್ಶೆ ಕೃತಿಯನ್ನು ೨೦೧೨ರಲ್ಲಿ ಪ್ರಕಟಿಸಿದ್ದಾರೆ. 'ಎಚ್ಚೆಸ್ವಿ ಸಮಗ್ರ ಕವಿತೆಗಳು' ಎಂಬ ಬೃಹತ್ ಕೃತಿಯನ್ನು ಎಚ್ಚೆಸ್ವಿ ಅವರು ಜಿ ಎಸ್ ಎಸ್ ಅವರಿಗೆ ಅರ್ಪಣೆಮಾಡಿರುವುದು ಆ ಗುರು ಶಿಷ್ಯರ ಅನ್ಯೋನ್ಯ ಸಂಬಂಧಕ್ಕೆ ಸಾಕ್ಷಿಯಾಗಿದೆ. ಜಿ ಎಸ್ ಎಸ್ ಅವರೂ ಎಚ್ಚೆಸ್ವಿ ಅವರ ಕೃತಿಗಳನ್ನು ಕುರಿತು ಅನೇಕ ಬರಹಗಳನ್ನು ಬರೆದಿದ್ದಾರೆ.

ವಾರಾಂತ್ಯ ಹತ್ತುಗಂಟೆಯ ನಂತರ ಎಚ್ಚೆಸ್ವಿ ನಮ್ಮ ಮನೆ ಬಾಗಿಲು ಬಡಿದಾಗ ನಾನು ಅಥವಾ ಅಮ್ಮ ಬಾಗಿಲು ತೆರದ ಕೂಡಲೇ 'ಮೇಷ್ಟ್ರು ಇದಾರ' ಎಂದು ಮುಗುಳ್ನಗುತ್ತಿದ್ದರು, 'ಬನ್ನಿ ಒಳಗೆ' ಎಂದಾಗ ಅವರು ನೇರವಾಗಿ ಅಪ್ಪನ ಲೈಬ್ರರಿ/ಸ್ಟಡಿ ಕೋಣೆಯೊಳಗೆ ಕೂತು ಅಪ್ಪನನ್ನು ಭೇಟೆಯಾಗುತ್ತಿದ್ದರು. ಈ ಗುರು ಶಿಷ್ಯರು ಗಂಟೆಗಟ್ಟಲೆ ಸಾಹಿತ್ಯ ಸಂವಾದದಲ್ಲಿ ತೊಡಗುತ್ತಿದ್ದರು. ಕೆಲವೊಮ್ಮೆ ಇವರ ಜೊತೆ ಸಿ ಅಶ್ವಥ್, ಸುಮತೀನ್ದ್ರ ನಾಡಿಗ, ಎಚ್ ಎಸ್ ರಾಘವೇಂದ್ರ ರಾವ್ ಮತ್ತಿತರು ಬಂದು ಸೇರಿಕೊಳ್ಳುತ್ತಿದ್ದರು. ಸಂವಾದ ಮುಗಿದನಂತರ ನಾನು ವೆರಾಂಡದಲ್ಲಿ ಅಥವಾ ಅಂಗಳದ ಗೇಟು ಹಾಕಲು ಬಂದಾಗ ಡಾಕ್ಟ್ರೇ ಹೇಗಿದ್ದೀರಾ, ಕ್ಲಿನಿಕ್ ಹೇಗೆ ನಡೀತಾಯಿದೆ ಇತ್ಯಾದಿ ಸಾಹಿತ್ಯದ ಆಚೆಯ ಮಾತುಗಳನ್ನು ಆಡುತ್ತಿದ್ದರು. ಯೌವ್ವನದಲ್ಲಿ ನನ್ನ ವೈದ್ಯಕೀಯ ವೃತ್ತಿ ನನ್ನನ್ನು ಆವರಿಸಿಕೊಂಡಿದ್ದು ನನಗೆ ಸಾಹಿತ್ಯದ ಬಗ್ಗೆ ಗಮನ ಕೊಡಲು ಸಮಯದ ಅವಕಾಶವೇ ಇರಲಿಲ್ಲ, ಸಾಹಿತ್ಯಾಸಕ್ತಿ ಹಿಂದೆಯೇ ಉಳಿದಿದ್ದ ಕಾಲವದು. ನಾನು ಮತ್ತು ಎಚ್ಚೆಸ್ವಿ ಸಾಹಿತ್ಯ ಸಂವಾದಕ್ಕೆ ತೊಡಗಿದ್ದು ನಾನು ಇಂಗ್ಲೆಂಡಿಗೆ ಬಂದಮೇಲೆ ಎನ್ನ ಬಹುದು. ಆ ಕಾಲಕ್ಕೆ ನನಗೆ ಸಾಹಿತ್ಯದಲ್ಲಿ ಆಸಕ್ತಿ ಉಂಟಾಗಿತ್ತು, ಓದಲು ಬರೆಯಲು ಸಮಯ ಮತ್ತು ಅವಕಾಶ ಎರಡು ದಕ್ಕಿದ್ದವು.

ಅಂದಹಾಗೆ ನನಗೆ ಎಚ್ಚೆಸ್ವಿ ಅವರ ಸಾಹಿತ್ಯ ಪರಿಚಯವಾದದ್ದು ಸುಗಮ ಸಂಗೀತದ ಮೂಲಕವೇ. ನನಗೆ ಅವರು ಹೆಚ್ಚು ಹತ್ತಿರವಾದದ್ದು ನಾನು ಕನ್ನಡದಲ್ಲಿ ಕವನಗಳನ್ನು ಪ್ರಬಂಧಗಳನ್ನು ರಚಿಸಲು ಶುರುವಾದಾಗ. ಈ ವೇಳೆಗೆ ಅಪ್ಪ ತೀರಿಕೊಂಡಿದ್ದರು. ಎಚ್ಚೆಸ್ವಿ ಅವರು ಇಂಗ್ಲೆಂಡಿಗೆ ಕನ್ನಡ ಬಳಗದ ಆಹ್ವಾನದ ಮೇರೆಗೆ ಇಲ್ಲಿ ಬಂದಾಗ ನಮ್ಮ ಬಾಂಧವ್ಯ ಹೆಚ್ಚಾಯಿತು. ನಾನು ಬೆಂಗಳೂರಿಗೆ ಹೋದಾಗ ಎಚ್ಚೆಸ್ವಿ, ಬಿ ಆರ್ ಲಕ್ಷ್ಮಣ ರಾವ್, ಡುಂಡಿರಾಜ್, ಜೋಗಿ ಇವರೊಡನೆ ಅನೇಕ ಕ್ಲಬ್ ಮತ್ತು ಹೋಟೆಲಿನಲ್ಲಿ ಭೋಜನ ಕೂಟಗಳಲ್ಲಿ ಒಡನಾಡುವ ಅವಕಾಶ ಒದಗಿ ಬಂತು. ವಿಸ್ಕಿ ಸೇವೆನಯಲ್ಲೂ ಎಚ್ಚೆಸ್ವಿ ಮಿತವಾಗಿ ಒಂದು ಪೆಗ್ ಸೇವಿಸಿ ನಂತರ ಎರಡನೇ ಪೆಗ್ಗಿಗೆ ಒತ್ತಾಯಿಸಿದಾಗ ಬೇಡವೆಂದು ‘ನನ್ನದು ಅದ್ವೈತ ಫಿಲಾಸಫಿ’ ಎಂದು ಹಾಸ್ಯ ಚಟಾಕಿಯನ್ನು ಹಾರಿಸುತ್ತಿದ್ದರು. ಎಚ್ಚೆಸ್ವಿ ಉತ್ತಮ ವಾಗ್ಮಿಗಳು, ಸಾಮಾನ್ಯವಾಗಿ ಅವರು ಸಭೆಗಳಲ್ಲಿ ಸುಮಾರು 15-20 ನಿಮಿಷಕ್ಕಿಂತ ಹೆಚ್ಚು ಮಾತನಾಡಿದ್ದನ್ನು ನಾನು ಕೇಳಿಲ್ಲ. ಆ ಮಿತವಾದ ಭಾಷಣದಲ್ಲಿ ಸರಳತೆ, ಸ್ಪಷ್ಟತೆ, ಪದಗಳ ಬಳಕೆ ಮತ್ತು ವಿಚಾರಗಳು ಸೊಗಸಾಗಿರುತ್ತಿತ್ತು. 'ನುಡಿದರೆ ಮುತ್ತಿನ ಹಾರದಂತಿರಬೇಕು' ಎಂಬ ವಚನದ ಸಾಲುಗಳು ನೆನಪಿಗೆ ಬರುತ್ತಿತ್ತು.

ನಾನು ಬರೆಯಲು ಶುರುಮಾಡಿದಾಗ ನನ್ನ ಕೋರಿಕೆಯ ಮೇಲೆ ಎಚ್ಚೆಸ್ವಿ ನನ್ನ ಎಲ್ಲ ಬರಹಗಳನ್ನು ಓದಿ, ಸೂಕ್ತ ಸಲಹೆಗಳನ್ನು ನೀಡಿ, ಪ್ರಕಟಿಸಲು ಉತ್ತೇಜನ ನೀಡುತ್ತಿದ್ದರು. ನನ್ನ ಚೊಚ್ಚಲ ಕವನ ಸಂಕಲನ 'ಇಂಗ್ಲೆಂಡಿನಲ್ಲಿ ಕನ್ನಡಿಗ' ಕೃತಿಗೆ ಮುನ್ನುಡಿಯನ್ನು ಬರೆದು, ನನ್ನ ‘ಪಯಣ’ ಕಾದಂಬರಿಗೆ ಬೆನ್ನುಡಿಯನ್ನು ಕೂಡ ಬರೆದುಕೊಟ್ಟರು. ನಾನು ಒಂದು ರೀತಿ ಅವರ ಶಿಷ್ಯನೂ ಹೌದು. ಅವರಿಗೆ ಕಾಣಿಕೆಯಾಗಿ ನನ್ನ ಇತ್ತೀಚಿನ 'ಮೊನಾಲೀಸಾ' ಎಂಬ ಕವನ ಸಂಕಲನವನ್ನು ಅವರಿಗೆ ಅರ್ಪಿಸಿದ್ದೇನೆ. ಎಚ್ಚೆಸ್ವಿ ಅವರು ಶೆಫೀಲ್ಡ್ ನಗರಕ್ಕೆ ಆಗಮಿಸಿ ಯುಕೆ ಕನ್ನಡ ಬಳಗದ ಆಶ್ರಯದಲ್ಲಿ ನಡೆದ 2013 ದೀಪಾವಳಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಅನಿವಾಸಿ ಸಾಹಿತ್ಯ ಅಂಗದ ಉದ್ಘಾಟನೆ ಮಾಡಿದ್ದನ್ನು ನಾನು ಸ್ಮರಿಸುತ್ತೇನೆ. ಈ ಸಾಹಿತ್ಯ ಅಂಗ ಈಗ ಎತ್ತರಕ್ಕೆ ಬೆಳದಿದೆ. ಆ ಸಂದರ್ಭದಲ್ಲಿ ಎಚ್ಚೆಸ್ವಿ ಅವರು ‘ಬೆಂಗಳೂರಿಗಿಂತ ಇಲ್ಲಿ ಹೆಚ್ಚು ಕನ್ನಡ ಕೇಳಿ ಬರುತ್ತಿದೆ’ ಎಂದು ಮಾತನಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳುತ್ತೇನೆ. ಆ ವಿಚಾರ ನಮ್ಮ ಯುಕೆ ಅನಿವಾಸಿ ಕನ್ನಡಿಗರಿಗೆ ಹೆಮ್ಮೆಯ ವಿಷಯ. ನನ್ನ ಮತ್ತು ಎಚ್ಚೆಸ್ವಿ ನಡುವಿನ ವಾಟ್ಸ್ ಆಪ್ ಸಂದೇಶಗಳನ್ನು ನೆನೆದು ಕೆಳಗೆ ಹಂಚಿಕೊಳ್ಳುತ್ತಿದ್ದೇನೆ. ಸಂದರ್ಭ; ನನ್ನ ‘ಪಯಣ’ ಎಂಬ ಕಾದಂಬರಿ ತಯಾರಾಗುತ್ತಿದ್ದ ಸಮಯ.

"ಪ್ರಿಯ ಡಾ.ಪ್ರಸಾದ್
ನಿಮ್ಮ ಕಾದಂಬರಿಯನ್ನು ಒಂದೇ ಪಟ್ಟಿನಲ್ಲಿ ಓದಿ ಆನಂದಿಸಿದೆ. ಇನ್ನು ನೀವು ವೈದ್ಯಕೀಯದೊಂದಿಗೆ ಸಾಹಿತ್ಯ ಕೃಷಿ ಯಲ್ಲೂ ತೊಡಗಬೇಕು. ಲೀಲಾ ಜಾಲವಾಗಿ, ಎಲ್ಲೂ ಓದುಗರ ಆಸಕ್ತಿ ಕುಂದದಂತೆ ಕಥೆಯನ್ನು ನಿರೂಪಿಸಿದ್ದೀರಿ. ನಾಯಿಯು ಇಲ್ಲಿ ನಮಗೆಲ್ಲ ಆಪ್ತವಾಗುತ್ತದೆ. ಅದರ ನೋವು ನಮ್ಮ ನೋವಾಗುತ್ತದೆ. ಮಕ್ಕಳಿಗೆ ನಾಯಿ ಯಾಕೆ ಪ್ರಿಯವಾಗುತ್ತದೆ ಎಂಬುದು ನನಗೆ ಈಗ ಮನದಟ್ಟಾಯಿತು. ಮುಗ್ಧತೆ ಮತ್ತು ಸಹಜ ಪ್ರೀತಿ ಎರಡು ಜೀವಕ್ಕೂ ಸಮಾನ. ಸಿನಿಮಾಕ್ಕೆ ಲಾಯಕ್ಕಾಗಿದೆ. ಸಿನಿಮೀಯ ಎನ್ನಿಸದು. ಇದೊಂದು ಲೋಕಪ್ರೀತಿಯ ಸಹಜ ಕಲಾಕೃತಿ"

"ಧನ್ಯವಾದಗಳು ಎಚ್ಚೆಸ್ವಿ ತುಂಬಾ ಖುಷಿಯಾಯಿತು. ಈ ಕೃತಿಗೆ ‘ಸಾರ್ಥಕ ಪಯಣ’ ಎಂಬ ಹೆಸರನ್ನು ಆಯ್ಕೆ ಮಾಡಿರುವೆ"

" ಹೆಸರು ತುಂಬಾ ಗದ್ಯಮಯ. ಯಾನ…ಅಷ್ಟೇ ಸಾಕು. ಅಥವಾ ಪಯಣ ಎಂದು ಇಡಬಹುದು"

“ಪಯಣ ಬಹುಶಃ ಸೂಕ್ತವಾಗಿರಬಹುದು. ‘ಯಾನ’ ಎನ್ನುವ ಹೆಸರಲ್ಲಿ ಭೈರಪ್ಪನವರ ಕಾದಂಬರಿ ಇದೆ. ನನ್ನ ಈ ಕಥೆ ಸರಳವಾಗಿರಬಹುದು"

"ಸರಳತೆ ಗುಣವೋ ದೋಷವೋ ಎಂಬ ವಾಗ್ವಾದ ಇನ್ನೂ ಬಗೆಹರಿದಿಲ್ಲ...!"


ಎಚ್ಚೆಸ್ವಿ ಅವರ ಹಲವಾರು ಬರಹಗಳಲ್ಲಿ, ಮಾತುಗಳಲ್ಲಿ ಸರಳತೆ ಇದ್ದುದನ್ನು ನಾವೆಲ್ಲಾ ಗಮನಿಸಿದ್ದೇವೆ. ಕಥೆ, ಕವನ ಸಂಕೀರ್ಣವಾಗಿರಬೇಕು, ಆಗ ಅದಕ್ಕೆ ಹೆಚ್ಚು ಬೆಲೆ, ಸರಳತೆ ಒಂದು ದೋಷ ಎಂಬ ನನ್ನಲ್ಲಿದ್ದ ಕಲ್ಪನೆಯ ಹಿನ್ನೆಲೆಯಲ್ಲಿ ಅವರ ಮಾತುಗಳು ಅರ್ಥಪೂರ್ಣವಾಗಿ ತೋರಿದವು. ಸರಳವಾಗಿ ಬರೆಯುವುದೂ ಒಂದು ಕಲೆ ಎಂಬ ಆಲೋಚನೆ ಮೂಡಿಬಂತು. ಎಚ್ಚೆಸ್ವಿ ಅವರು ಬಹಳ ಶ್ರದ್ಧಾವಂತರು. ಅವರು ಶೇಫಿಲ್ಡ್ ನಗರದ ನಮ್ಮ ಮನೆಯಲ್ಲಿ ಒಂದು ವಾರ ತಂಗಿದ್ದಾಗ ‘ಶೆಫೀಲ್ಡ್ ಕವಿತೆಗಳು’ ಎಂಬ ನೀಳ್ಗವನದ ರಚನೆಯಲ್ಲಿ ತೊಡಗಿದ್ದರು. ಅವರು ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಕುಳಿತು, ತೀಕ್ಷ್ಣ ಕವಿಸಮಯದಲ್ಲಿ ಮೂಡಿತ್ತಿದ್ದ ಸಾಲುಗಳನ್ನು ದಾಖಲಿಸುತ್ತಿದ್ದರು. ಮುಂದಕ್ಕೆ ‘ಶೆಫೀಲ್ಡ್ ಕವಿತೆಗಳು’ ಎಂಬ ಕೃತಿಯನ್ನು ಅವರು ಹೊರತಂದರು. ಆ ಕೃತಿಯನ್ನು ಕುರಿತು ‘ಎಚ್ಚೆಸ್ವಿ ಅವರ ಶೇಫಿಲ್ಡ್ ಕವಿತೆಗಳ ಬಗ್ಗೆ ಶೆಫೀಲ್ಡ್ ನಿವಾಸಿಯ ಅನಿಸಿಕೆಗಳು’ ಎಂಬ ಬರಹವನ್ನು ನಾನು ‘ಸಮಾಹಿತ’ ಎಂಬ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟಿಸಿದಾಗ ಎಚ್ಚೆಸ್ವಿ ಅವರು ಫೋನ್ ಮಾಡಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಆ ಕೃತಿಯನ್ನು ನನಗೆ ಮತ್ತು ನನ್ನ ಶ್ರೀಮತಿ ಪೂರ್ಣಿಮಾಗೆ ಅರ್ಪಣೆಮಾಡಿದ್ದು ಅದು ನನಗೆ ಅತ್ಯಂತ ಗೌರವದ ವಿಷಯ.
*
~ ಡಾ ಜಿ ಎಸ್ ಪ್ರಸಾದ್

ಎಚ್ಚೆಸ್ವಿಯವರ ಸಂದರ್ಶನ 

ಸಂದರ್ಶಕಿ – ಡಾ. ಪ್ರೇಮಲತಾ

‘ ಉರಿಯ ಉಯ್ಯಾಲೆ’ಯ  ಆಯ್ದ ಭಾಗಗಳು

~ ಚಿನ್ಮಯಿ

~ ಅಕ್ಷತಾ

ವಿದಾಯ ಹೇಳಬಹುದೇ ಇಷ್ಟು ಸುಲಭಕ್ಕೆ ನಿಮಗೆ? 

“ ಕಥೆ ಮುಗಿಯುವಾಗ ಚಡಪಡಿಕೆ ಪಾತ್ರಕ್ಕಷ್ಟೇ.
ಕೃತಿ ಮುಗಿದ ತೃಪ್ತಿ ಬರೆದವಗೆ.
ಇಷ್ಟು ದಿನ ಎಡೆಬಿಡದೇ ಬರೆದ ಬೆರಳಿಗೆ ಬಿಡುವು.
ಹೊರೆ ಇಳಿದ ಗೆಲುವು ಮುಖದೊಳಗೆ.”
( ಒಂದು ಕಥೆ – ಉತ್ತರಾಯಣ ಮತ್ತು...)
HSV ಹೋದರಂತೆ.. ಎಂಬ ಸುದ್ದಿ ಕೇಳಿದಾಗಿನಿಂದ ಅದೇನೋ ನನ್ನ ಮನದ ಭಾವಗಳೆಲ್ಲ ಹೆಪ್ಪುಗಟ್ಟಿದಂಥ ಅನುಭವ. ಎರಡಕ್ಷರದ ಶ್ರದ್ಧಾಂಜಲಿಯನ್ನೂ ಬರೆಯಲಾಗದ ಭಾವ ಜಡತೆ. ಬರೆದು ಮುಗಿಸಿಬಿಟ್ಟರೆ ಅದೆಲ್ಲಿ ಕವಿಯೊಡನೆಯ ಕೊನೆಯ ಋಣವೂ ಹರಿದುಕೊಂಡು ಬಿಡುತ್ತದೋ ಎನ್ನುವ ತಳಮಳ..ಆತಂಕ. ಬರೆಯದೇ ಹೋದರೆ ಅತೀ ಮಹತ್ವದ ಕಾರ್ಯವನ್ನೇನೋ ಬೇಕೆಂದೇ ಅಲಕ್ಷ್ಯ ಮಾಡುತ್ತಿರುವ ಚಡಪಡಿಕೆ..ಅಪರಾಧೀ ಭಾವ. ಅಂತೂ ಕೊನೆಗೂ ಪ್ರೀತಿಯ ಕಣ್ಣ ಕಂಬನಿಯಷ್ಟೇ ಅವರಿಗೆ ನಾವು ನೀಡಬಹುದಾದ ಕಾಣಿಕೆ.
ಜೀವ-ಜೀವನ ಪ್ರೀತಿ, ಜಗದ ಚೆಲುವು- ಒಲವು, ಅತೀ ಸೂಕ್ಷ್ಮ ಅಷ್ಟೇ ಬಲವತ್ತರವಾದ ಮಾನವ ಭಾವಲೋಕದ ಅನಾವರಣ, ತಾಳುವಿಕೆ, ಒಗ್ಗುವಿಕೆ ತನ್ಮೂಲಕ ಮಾಗುವಿಕೆ ಈ ಕವಿಯ ಸಾಹಿತ್ಯದ ಮುಖ್ಯ ಪ್ರತಿಪಾದನೆಗಳು. ಈ ಜೀವ ಜಗತ್ತಿನ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳಿಗೂ ಇವರು ಕಿವಿಯಾಗುತ್ತಾರೆ; ಕಣ್ಣಾಗುತ್ತಾರೆ; ದನಿಯಾಗುತ್ತಾರೆ; ಹಾಡಾಗುತ್ತಾರೆ. ‘ಶ್ರೀ ಸಂಸಾರಿ’ಯ ಶ್ರೀರಾಮಚಂದ್ರನನ್ನು, ‘ ಆಪ್ತ ಗೀತೆ’ ಯ ಶ್ರೀಕೃಷ್ಣನನ್ನು, ‘ ಬುದ್ಧ ಚರಣದ’ ತಥಾಗತನನ್ನು ಎಷ್ಟು ಮಣ್ಣಿನ ಮಕ್ಕಳನ್ನಾಗಿ ಮಾಡಿ ಮರ್ತ್ಯರಾದ ನಮಗೆ ಅವರೆಲ್ಲರನ್ನು ಅತ್ಯಾಪ್ತರಾಗಿಸುತ್ತಾರೆ.ಧನುರ್ಧಾರಿ ರಾಮನ ಹೆಗಲಮೇಲಿನ ಬಿಲ್ಲು-ಬಾಣ ಕೆಳಗಿಳಿಸಿ ಅಲ್ಲೊಂದು ಪುಟ್ಟ ಅಳಿಲನ್ನು ಕೂಡಿಸುತ್ತಾರೆ. ರಾಜಸೇವೆಗಷ್ಟೇ ಮಿಗಿಲಾದ ‘ ಪುಷ್ಪಕ’ ದಲ್ಲಿ ವಾನರ – ಭಲ್ಲೂಕಾದಿಗಳಿಗೂ ಸೀಟು ಕೊಡಿಸಿಬಿಡುತ್ತಾರೆ. ಗೊಲ್ಲರ ಹುಡುಗ ‘ ಯಾದವ’, ‘ಕಾದವ’, ‘ ಸೇವಕ’ , ಶ್ರಾವಕ’ ನಾದ ಕಥೆ ಬಣ್ಣಿಸುತ್ತಾರೆ. ಲೋಕದ ಕಣ್ಣಿಗೆ ಕೇವಲ ಹೆಣ್ಣಾದ ರಾಧೆಯನ್ನು ಕೃಷ್ಣನನ್ನು ಕಾಣಿಸುತ್ತಾರೆ. ದ್ರೌಪದಿ, ಪೃಥೆ, ಮಂಥರೆ, ಊರ್ಮಿಳೆಯರ ಎದೆಯಾಳಕ್ಕಿಳಿದು ಮಂಥನ ನಡೆಸುತ್ತಾರೆ; ಹೃದಯ ಸಮುದ್ರದ ಹಾಲಾಹಲ - ಸುಧಾರಸಗಳನ್ನು ಹೊರ ಚೆಲ್ಲುತ್ತಾರೆ. “ ಕೊಂದವನದಲ್ಲ ಕಾದವನದ್ದು ಹಕ್ಕಿಯ ಹಕ್ಕು” ಎಂದು ಹೇಳಿ ಬುದ್ಧನ ಶಾಂತಿ- ಕರುಣೆಗಳಲ್ಲಿ ಮನ ತೊಯ್ಯಿಸುತ್ತಾರೆ.
“ ತಾನು ಕರಗದೇ ಮಳೆ ಸುರಿಸುವುದೇ ಶ್ರಾವಣದ ಸಿರಿ ಮುಗಿಲು?”, ‘ ಹಸಿರ ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ’, ‘ ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ’, ‘ತಾನೇ ಕಡಲಾಗಲು ಹೊರಟ ಗಂಗೆಗೆ ಆಣೆಕಟ್ಟು ಕಟ್ಟುವರಾರು?’, ‘ ಎಣ್ಣೆ ಹುಯ್ಯುವುದಗ್ನಿ ಶಮನಕ್ಕೆ ದಾರಿಯೇ? ‘....ಎಂಥೆಂಥ ಅದ್ಭುತ ಸಾಲುಗಳನ್ನವರು ಕೊಟ್ಟಿದ್ದು..ಪಟ್ಟಿ ಮಾಡುತ್ತ ಹೋದರೆ ಬೆಳಗಾಗುತ್ತದೆ. ಅವರ ಜೀವನ ಹಾಗೂ ಕೃತಿಗಳ ಕಿರುಪರಿಚಯ ಇಂತಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗೆರೆ ಗ್ರಾಮದಲ್ಲಿ 1944ರ ಜೂನ್‌ 23ರಂದು ಜನಿಸಿದರು. ತಂದೆ ನಾರಾಯಣ ಭಟ್ಟರು, ತಾಯಿ ನಾಗರತ್ನಮ್ಮ.
ಪ್ರಾಥಮಿಕ ಶಿಕ್ಷಣ ಹೋದಿಗೆರೆ, ಹೊಳಲ್ಕೆರೆಗಳಲ್ಲಿ ಮುಗಿಸಿ ಕಾಲೇಜಿನ ವಿದ್ಯಾಭ್ಯಾಸ ಚಿತ್ರದುರ್ಗದಲ್ಲಿ ಮಾಡಿದರು. ಭದ್ರಾವತಿಯಲ್ಲಿ ಡಿಪ್ಲೊಮ ಪಡೆದು ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯ ಕ್ರಾಫ್ಟ್ ಟೀಚರ್‌ ಆಗಿ ಉದ್ಯೋಗ ಆರಂಭಿಸಿದರು.
ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ., ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ‘ಕನ್ನಡದಲ್ಲಿ ಕಥನ ಕವನಗಳು’ ಮಹಾಪ್ರಬಂಧ ಮಂಡಿಸಿ ಪಿಎಚ್‌.ಡಿ ಪದವಿ ಗಳಿಸಿದರು. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸುಮಾರು 30 ವರ್ಷ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಎಚ್ಚೆಸ್ವಿ ರಚಿಸಿದ ಮುಖ್ಯ ಕಾವ್ಯ ಕೃತಿಗಳು: ಸಿಂದಬಾದನ ಆತ್ಮಕಥೆ, ಕ್ರಿಯಾಪರ್ವ, ಒಣಗಿದ ಮರದ ಗಿಳಿಗಳು, ಋತುವಿಲಾಸ, ಎಷ್ಟೊಂದು ಮುಗಿಲು, ಅಮೆರಿಕದಲ್ಲಿ ಬಿಲ್ಲುಹಬ್ಬ, ವಿಮುಕ್ತಿ, ಭೂಮಿಯೂ ಒಂದು ಆಕಾಶ, ನದೀತೀರದಲ್ಲಿ, ಮೂವತ್ತು ಮಳೆಗಾಲ (ಸಮಗ್ರ ಕಾವ್ಯ). ಮಹಾಕಾವ್ಯ: ಬುದ್ಧ ಚರಣ
ನಾಟಕಗಳು: ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ (ಏಕಾಂಕ), ಚಿತ್ರಪಟ-ಅಗ್ನಿವರ್ಣ- ಉರಿಯ ಉಯ್ಯಾಲೆ, ಕಂಸಾಯಣ-ಊರ್ಮಿಳಾ-ಮಂಥರಾ, ಮೇಘಮಾನಸ (ಗೀತರೂಪಕ).
ಮಕ್ಕಳ ಸಾಹಿತ್ಯಕ್ಕೆ ಕೊಡುಗೆ: ಹಕ್ಕಿಸಾಲು, ಹೂವಿನಶಾಲೆ, ಸೋನಿ ಪದ್ಯಗಳು (ಕವಿತೆಗಳು) ಅಳಿಲು ರಾಮಾಯಣ ಮತ್ತು ಸುಣ್ಣದ ಸುತ್ತು, ಹೂವಿ ಮತ್ತು ಸಂಧಾನ, ಮುದಿದೊರೆ ಮತ್ತು ಮೂವರು ಮಕ್ಕಳು (ನಾಟಕಗಳು).
ಕಾದಂಬರಿ: ತಾಪಿ, ಕಥಾಸಂಕಲನ-ಬಾನಸವಾಡಿಯ ಬೆಂಕಿ, ಪುಟ್ಟಾಚಾರಿಯ ಮತಾಂತರ ಮತ್ತು ಇತರ ಕಥೆಗಳು. ವಿಮರ್ಶಾ ಸಂಪುಟ-ಆಕಾಶದ ಹಕ್ಕು.
ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕಿರುತೆರೆ–ಚಲನಚಿತ್ರ: ಚಿನ್ನಾರಿಮುತ್ತ, ಕೊಟ್ರೇಶಿಯ ಕನಸು, ಕ್ರೌರ್ಯ, ಮತದಾನ ಚಲನಚಿತ್ರಗಳಿಗೆ ಗೀತಸಾಹಿತ್ಯ, ಕೆಲವಕ್ಕೆ ಸಂಭಾಷಣೆಗಳನ್ನು ಬರೆದಿದ್ದಾರೆ. ಧಾರಾವಾಹಿಗಳಾದ ಯಾವ ಜನ್ಮದ ಮೈತ್ರಿ, ಸವಿಗಾನ, ಮುಕ್ತಗಳಿಗೆ ಶೀರ್ಷಿಕೆ ಗೀತೆ ರಚಿಸಿದ್ದಾರೆ.‌‌ ರಂಗಭೂಮಿ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು.
ಪ್ರಶಸ್ತಿಗಳು: 5 ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಮೈಸೂರು ಅನಂತಸ್ವಾಮಿ ಪ್ರಶಸ್ತಿಗಳು ಸೇರಿ ಇನ್ನೂ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.
ಕವಿಯ ಭೌತಿಕ ಶರೀರಕ್ಕೆ ಮಾತ್ರ ಕೊನೆ ಯಶ: ಕಾಯಕ್ಕಲ್ಲ ಎನ್ನುವುದು ಸರ್ವವಿದಿತ . ಅಕ್ಷರಗಳ ಅಕ್ಷಯವಾದ ಅಪೂರ್ವ ನಿಧಿಯನ್ನು ನಮಗಾಗಿ ಬಿಟ್ಟು ಹೋದ ನೆಚ್ಚಿನ ಕವಿಗೆ ಅಶ್ರುಪೂರ್ಣ ಭಾವನಮನ.
“ ಮುಳುಗಿದರೆ ಮುಳುಗಬೇಕೀ ರೀತಿ
ಹತ್ತು ಜನ ನಿಂತು ನೋಡುವ ಹಾಗೆ..
ಗೌರವ ಬೆರೆತ ಬೆರಗಲ್ಲಿ.
ಸೂರ್ಯ ಮುಳುಗುವ ಮುನ್ನ,
ಓಡೋಡಿ ಬರುವ ಜನ ಕೈ ಮುಗಿವ ಹಾಗೆ
ಮುಳುಗಲ್ಲಿ ಮುಳುಗಿ”
( ಆಗುಂಬೆಯ ಸೂರ್ಯಾಸ್ತ ).
ಓಂ ಶಾಂತಿರಸ್ತು
~ ಗೌರಿಪ್ರಸನ್ನ

ವಸುಧೇಂದ್ರ: ಕತೆಗಳಿಂದ ಕಾದಂಬರಿಗೆ

ಕತೆ

ನಾನು ಹತ್ತನೇ ಕ್ಲಾಸ್ ತನಕ ಕನ್ನಡ ಮಾಧ್ಯಮದಲ್ಲಿ ಓದಿದೆ. ನಮ್ಮೂರಲ್ಲಿ ಇಂಗ್ಲಿಷ್ ಮೀಡಿಯಂ ಕಾನ್ವೆಂಟ್ ಇತ್ತು, ಆದರೆ ಅಲ್ಲಿ ತಿಂಗಳಿಗೆ ಎಂಟು ರೂಪಾಯಿ ಫೀಸ್ ಇತ್ತು, ಅಷ್ಟು ಕೊಡಕ್ಕೆ ಆಗಲ್ಲ ಸರಕಾರಿ ಶಾಲೆಗೆ ಹೋಗು ಅಂತ ಕಳಿಸಿಬಿಟ್ರು. ಮಗು ಮುಂದೆ ಏನಾಗಬೇಕು ಏನು ಮಾಡಬೇಕು ಆ ಯೋಚನೆಗಳೇ ಇಲ್ಲ, ಸುಮ್ಮನೇ ಓದಬೇಕು, ಅಷ್ಟೇ.

ಮನೆಯಲ್ಲಿ ಸಾಹಿತ್ಯವನ್ನು ಓದುವಂತಹ ವಾತಾವರಣ, ನಮ್ಮ ತಾಯಿ ತುಂಬಾ ಓದೋರು, ಅವರು ಓದ್ತಾ ಇದ್ರೆ ನನಗೆ ಓದೋಕ್ಕೆ ಬಂತು. ನಮ್ಮ ಮನೆಯಲ್ಲಿ ದಿನಪತ್ರಿಕೆ ಕೂಡ ಸಾಧ್ಯವಿರಲಿಲ್ಲ, ಒಂಥರ ಬಡತನ. ಗ್ರಂಥಾಲಯದಿಂದ ತಂದು ಓದೋದು ಅಷ್ಟೇ.

ನಾನು ಲೇಖಕನಾಗುತ್ತೇನೆ ಎಂದು ಅಂದುಕೊಂಡಿರಲೇ ಇಲ್ಲ, ಸಾಫ್ಟ್ವೇರ್ನಲ್ಲಿ ಸೇರಿಕೊಂಡು ಮೂರು ವರ್ಷ ಆಗಿತ್ತು, ಏನು ಮಾಡ್ತಿಲ್ಲ, ಬರೀ ರೊಟೀನ್ ಮಾಡ್ತಾ ಇದ್ದೇನೆ ಅಂತ ಕಾಡೋಕೆ ಶುರುವಾಯಿತು. ಇದೇನು, ಬೆಳಿಗ್ಗೆ ಹೋಗೋದು, ರಾತ್ರಿ ಬರೋದು, ಹಿಂಗೆ ಆಗ್ತಿದೆಯಲ್ಲ, ನಂದೊಂದು ಐಡೆಂಟಿಟಿ ಬೇಕಲ್ಲ ಅಂತ ಹುಡುಕಾಟ ಶುರುವಾಯಿತು. ಐಡೆಂಟಿಟಿ ಕ್ರೈಸಿಸ್ ಅದು. ನನಗೆ ಏನ್ ಮಾಡಬಹುದು ನಾನು ಅಂದುಕೊಂಡಾಗ, ಬರೆಯಲು ಶುರು ಮಾಡಬೇಕು ಅನಿಸಿತು,

ಚಿಕ್ಕಂದಿನಲ್ಲಿ ಎಂಟೋ ಒಂಬತ್ತನೇ ಕ್ಲಾಸಲ್ಲಿ ಅಸೈನ್ಮೆಂಟ್-ಗೆ ಒಂದು ಕಥೆ ಬರೆದಿದ್ದೆ. ತುಂಬ ಚೆನ್ನಾಗಿದೆ ಎಂದು ಗುರುಗಳು ಹೇಳಿದ್ರು. ಅವಾಗ ಅದು ತರಂಗದಲ್ಲಿ ಪ್ರಕಟವಾಗಿತ್ತು. ಅದು ನನಗೆ ತಲೆಯಲ್ಲಿ ಇತ್ತು. ಕಥೆ ಬರೆಯೋಕೆ ಬರುತ್ತೆ, ಟ್ರೈ ಮಾಡೋಣ ಅಂತ ಮತ್ತೆ ಬರೆಯಲು ಶುರುಮಾಡಿದೆ.

ನನಗೆ ಯಾವ ಸಾಹಿತಿಗಳೂ ಗೊತ್ತಿರಲಿಲ್ಲ, ತರಂಗದಲ್ಲಿ ಅವಾಗ ಲೇಖಕರ ಅಡ್ರೆಸ್ ಹಾಕ್ತಾ ಇದ್ರು. ನನಗೆ ಯಾರು ಇಷ್ಟ ಆಗ್ತಾರೋ ಅವರಿಗೆ ಒಂದು ಲೆಟರ್ ಹಾಕಿ ನಾನು ಹಿಂಗೆ ಕಥೆ ಬರೆದಿದ್ದೀನಿ, ನೀವು ಓದ್ತೀರಾ, ಅಂದ್ರೆ, ಕಳಿಸಿಕೊಡಿ ಅಂದ್ರು, ಕಳಿಸಿಕೊಟ್ಟ ಮೇಲೆ, ಚೆನ್ನಾಗಿ ಬರೀತೀಯಾ, ಮುಂದುವರೆಸು ಅಂದರು. ಆ ಒಂದು ಭರವಸೆ ಸಿಕ್ಕ ತಕ್ಷಣ ನಾನು ಸಿಕ್ಕಾಪಟ್ಟೆ ಬರೆಯುತ್ತ ಹೋದೆ.

ಐಟಿನಲ್ಲಿ ೧೨ರಿಂದ ೧೪ ಗಂಟೆ ಕೆಲಸ ಮಾಡ್ತಿದ್ದರಿಂದ ಬರೆಯುವುದು ಕಷ್ಟ ಇತ್ತು. ನನಗೆ ಬರೆಯುವ ಸಮಯ ಸಿಕ್ಕಿದ್ದು ಇಂಗ್ಲೆಂಡ್ ನಲ್ಲಿ ಪೋಸ್ಟ್ ಮಾಡಿದಾಗ. ಇಂಗ್ಲಂಡಿನಲ್ಲಿ ಸರಿಯಾಗಿ ಐದುವರೆಗೆ ಕೆಲಸ ಮುಗಿಸಿಬಿಡ್ತಾರೆ. ಬೆಳಿಗ್ಗೆ ಒಂಬತ್ತರಿಂದ ಸಂಜೆ ಐದು ಗಂಟೆ ಆದ್ರೆ ಮುಗಿದು ಹೋಗ್ಬಿಡ್ತು. ನನಗೆ ಎಷ್ಟು ಫ್ರೀ ಟೈಮ್ ಇರ್ತಿತ್ತು ಅಂತಂದ್ರೆ ನನ್ನ ಪ್ಯಾಶನ್ ಕಾಡೋಕೆ ಶುರುವಾಯಿತು. ಅವಾಗ ಅದೇ ಇಂಟರ್ನೆಟ್ ಬಂದಿತ್ತು ಇಲ್ಲಿಂದ ನಾನು ಬರೆದು ಕಳಿಸಿಕೊಡ್ತಾ ಇದ್ದೆ, ಆ ತರ ಶುರುವಾಯಿತು. ದೆನ್ ಐ ಬಿಕೇಮ್ ವೆರಿ ಸೀರಿಯಸ್. ನಾನು ಇಂಗ್ಲಂಡಿನಲ್ಲಿದ್ದ ಮೂರು ನಾಲ್ಕು ವರ್ಷ ತುಂಬಾ ಬರೆದುಬಿಟ್ಟೆ. ಸುಮಾರು ಒಂದು ಮೂರು ಪುಸ್ತಕ ಬರೆದುಬಿಟ್ಟೆ. ಭಾಷಾಂತರ ಮಾಡಿದೆ. ಕಾನ್ಫಿಡೆನ್ಸ್ ಬಂತು.

ಪ್ರಕಟ ಮಾಡಕ್ಕೆ ಯಾರು ಮುಂದೆ ಬರಲಿಲ್ವಲ್ಲ! ಇಂಗ್ಲಂಡಿಂದ ಹೋಗಿದ್ದೀನಿ, ಬೇಕಾದಷ್ಟು ಹಣ ಗಳಿಸಿದ್ದೆ, ಹಣಕ್ಕೆ ಸಮಸ್ಯೆನೇ ಇರಲಿಲ್ಲ. ನಾನೇ ಪ್ರಕಟಣೆ ಶುರು ಮಾಡ್ಕೊಂಡೆ. ಪ್ರಕಾಶನ ಗೊತ್ತಿರಲಿಲ್ಲ. ಪ್ರಕಾಶನ ಶುರು ಮಾಡ್ಕೊಂಡೆ. ಭಾರತಕ್ಕೆ ಹೋದ ಮೇಲೆ ತುಂಬಾ ಓದುಗರು ಇದ್ದಾರೆ ನನಗೆ ಅಂತ ಗೊತ್ತಾಯ್ತು. ನಾನು ಪ್ರಕಟ ಮಾಡಿದ ಪುಸ್ತಕಗಳು ಆರು ತಿಂಗಳಲ್ಲಿ ಮುಗಿದು ಹೋಗಿಬಿಡುತ್ತಿತ್ತು. ಅದು ತುಂಬಾ ಚೆನ್ನಾಗಿ ಕೆಲಸ ಮಾಡಿತು. ಆಮೇಲೆ ಬೇರೆಯವರದೆಲ್ಲ ಪ್ರಕಾಶನ ಮಾಡೋಕೆ ಶುರು ಮಾಡಿದೆ. ಪ್ರಕಾಶನದಿಂದ ಬದುಕಬಲ್ಲೆ ಅಂತ ಗೊತ್ತಾಯ್ತು. ಬುಕ್ ಅರ್ನಿಂಗ್ಸ್ ನನಗೆ ಬೇಕಾದಷ್ಟು ಆಗುತ್ತೆ.

ಈ ಕಾರ್ಪೊರೇಟ್ ಮೈಂಡ್ ಸೆಟ್ ಮತ್ತು ಈ ಕಥೆ ಬರೆಯುವ ಮೈಂಡ್ ಸೆಟ್ ಎರಡು ಬೇರೆ ವಿರುದ್ಧಗಳು. ಕಾರ್ಪೊರೇಟ್-ನಲ್ಲಿ ಹಣನೇ ಮುಖ್ಯ. ಸಾಹಿತ್ಯದಲ್ಲಿ ಹಣಕ್ಕೆ ಅಷ್ಟು ಬೆಲೆನೇ ಇರಲ್ಲ ಸಾಹಿತ್ಯದಲ್ಲಿ ನೈತಿಕತೆಯೇ ಬೇರೆ. ಎರಡೂ ಪ್ರಪಂಚಕ್ಕೆ ಕ್ಲಾಶ್ ಆಗ್ತಾ ಇದೆ ತುಂಬಾ ಅನಿಸ್ತು. ಕಳೆದ ೧೦ ವರ್ಷ ಪೂರ್ತಿ ಬರವಣಿಗೆ, ಓದು ಮತ್ತು ತಿರುಗಾಟ. ಬೇಕಾದಷ್ಟು ತಿರುಗುತ್ತೀನಿ.

ಕಾದಂಬರಿ

ಹಿಂದೊಮ್ಮೆ ಹರಿಚಿತ್ತ ಸತ್ಯ ಅಂತ ಕಾದಂಬರಿಯನ್ನು ಬರೆದಿದ್ದೆ. ಅದು ಒಂದು ೧೬೦ ಪುಟದಷ್ಟು ಚಿಕ್ಕ ಕಾದಂಬರಿ. ವಿವೇಕ್ ಶಾನುಭಾಗ ಆಗ ದೇಶಕಾಲ ಅಂತ ಮ್ಯಾಗಸಿನ್ ತರ್ತಿದ್ದರು. ಒಂದು ಸ್ಪೆಷಲ್ ಎಡಿಷನ್-ಗೆ ನೀನು ಒಂದು ಕಾದಂಬರಿ ಬರ್ಕೊಡು ಅಂದರು. ನಾನು ಅಲ್ಲಿಯತನಕ ಕಾದಂಬರಿಯನ್ನು ಬರೆದಿರಲಿಲ್ಲ. ಆಗ ನಾನು ಕ್ಲಿನಿಕಲ್ ಡಿಪ್ರೆಶನ್-ನಲ್ಲಿದ್ದೆ. ಆ ಡಿಪ್ರೆಶನ್-ನಿಂದ ಹೊರಗೆ ಬರೋದಕ್ಕೆ ನೀವು ಒಂದು ಕಾದಂಬರಿ ಬರಿ, ಡಿಪ್ರೆಶನ್-ನಿಂದ ಹೊರಬರಲು ಸಹಾಯ ಮಾಡಬಹುದು ಅಂತ ಒಂಥರ ಬಲವಂತ ಮಾಡಿದರು. ಡಿಪ್ರೆಶನ್-ನಲ್ಲಿ ಏನು ಮಾಡೋಕೂ ಇಷ್ಟ ಆಗಲ್ಲ. ನಮ್ಮ ಅಕ್ಕ ಬಿಜಾಪುರದಲ್ಲಿ (ಈಗ ವಿಜಯಪುರ) ಇದ್ರು. ಬಿಜಾಪುರಕ್ಕೆ ಹೋಗಿ ಕೂತ್ಕೊಂಡು ಬರೆದೆ. ಜನಕ್ಕೆ ಇಷ್ಟ ಆಯಿತು.

ಅದು ನಮ್ಮ ತಂದೆ ತಾಯಿಯ ಕಥೆ. ಅವರದು ವಿಚಿತ್ರ ಕಥೆ.

ನನ್ನ ತಾಯಿ ಬಳ್ಳಾರಿಯಲ್ಲಿ ೧೦ನೇ ತರಗತಿಯವರೆಗೆ ಓದಿದ್ರು. ನಮ್ಮಪ್ಪ ಇದ್ದಿದ್ದು ಸೊಂಡೂರಲ್ಲಿ. ಸೊಂಡೂರು ಅಂದ್ರೆ ಹಳ್ಳಿ, ಬಳ್ಳಾರಿ ಪಟ್ಟಣ. ನನ್ನ ತಾಯಿಗೆ ಸೊಂಡೂರಿನಲ್ಲಿ ಜೀವನ ಮಾಡಲು ಇಷ್ಟ ಇರಲಿಲ್ಲ. ಅಷ್ಟೇ ಅಲ್ಲ, ನಮ್ಮ ತಂದೆಗೆ ಚಿಕ್ಕಂದಿನಿಂದ ತಲೆ ತುಂಬಾ ಬಿಳಿ ಕೂದಲು. ನಮ್ಮಮ್ಮ ನಮ್ಮಪ್ಪನನ್ನು ರಿಜೆಕ್ಟ್ ಮಾಡ್ಬಿಟ್ರು.

ನನ್ನ ಅಪ್ಪ ಬೇರೆ ಮದುವೆ ಮಾಡ್ಕೊಂಡ್ರು. ಅವರಿಗೆ ನಾಲ್ಕು ಮಕ್ಕಳಾದವು. ಒಂದ್ಸಲ ಇಡೀ ಕುಟುಂಬ ಇನ್ನಷ್ಟು ಕುಟುಂಬಗಳ ಜೊತೆ ಸೇರಿ ಹಂಪಿಗೆ ಹೋಗ್ತಾರೆ. ಅಲ್ಲಿ ತೆಪ್ಪದಲ್ಲಿ ಕೂತು ಹೋಗಬೇಕು. ಆಗ ಗಂಡಸರು ಏನು ಮಾಡಿದ್ರು ಅಂದ್ರೆ, ಹೆಂಗಸರು ಮಕ್ಕಳು ಮೊದಲು ಹೋಗ್ಬಿಡ್ಲಿ, ಆಮೇಲೆ ಗಂಡಸರು ಹೋಗೋಣ, ಅಂತ ಎಲ್ಲಾ ಹೆಂಗಸರು ಮಕ್ಕಳನ್ನ ಕಳಿಸಿಬಿಟ್ಟಿದ್ದಾರೆ.

ತೆಪ್ಪದಲ್ಲಿ ಹೋಗಬೇಕಾದರೆ, ತೆಪ್ಪದಲ್ಲಿದ್ದ ಎಲ್ಲ ಹೆಂಗಸರೂ ಮಕ್ಕಳೂ ಮುಳುಗಿ ಹೋಗಿದ್ದಾರೆ. ಅದರಲ್ಲಿ ಮೂರು ಮಕ್ಕಳು ಮತ್ತು ಹೆಂಡತಿ ಇದ್ದರು. ಮುಳುಗಿದವರೆಲ್ಲರೂ ಹೋಗಿಬಿಟ್ರು. ಅಲ್ಲಿದ್ದ ಅಷ್ಟೂ ಕುಟುಂಬಗಳು ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ. ಸುಮಾರು ೨೫-೩೦ ಜನ ಹೋಗ್ಬಿಟ್ರು. ಇದು ನಡೆದದ್ದು ೧೯೬೫ರಲ್ಲಿ.

ಅಪ್ಪನ ಜೊತೆ ಇದ್ದ ಒಬ್ಬಳು ಮಗಳು ಮಾತ್ರ ಉಳಿದುಕೊಂಡಿದ್ದು. ಅದೇನೋ, ಆ ತನಕ ನಮ್ಮ ತಾಯಿ ಹಂಗೆ ಉಳಿದುಕೊಂಡಿದ್ರು, ಏನೋ ಕಾರಣಕ್ಕಾಗಿ ಮದುವೆನೇ ಆಗಿರಲಿಲ್ಲ. ಇಲ್ಲದಿದ್ರೆ ನಾನು ಹುಟ್ಟುತ್ತಾನೆ ಇರಲಿಲ್ಲ. ಎರಡನೇ ಮದುವೆ ಆದ್ಮೇಲೆ ಆಮೇಲೆ ನಾವೆಲ್ಲ ಹುಟ್ಟಿದ್ದು. ಇಬ್ಬರು ೨೫ ವರ್ಷಕ್ಕಿಂತ ಹೆಚ್ಚು ತುಂಬಾ ಚೆನ್ನಾಗಿ ಸಂಸಾರ ಮಾಡಿದ್ರು.

ನನಗೆ ಅದು ಒಂತರ ವಿಚಿತ್ರ ಕಥೆ ಅನ್ಸೋದು. ಅದನ್ನೆಲ್ಲ ಸೇರಿಸಿ ಒಂದಿಷ್ಟು ಫಿಕ್ಷನೈಸ್ ಮಾಡಿ ಆ ಕಾಲಘಟ್ಟ ತಗೊಂಡು ಬಂದು ಬರೆದೆ. ನಾನು ಆ ಕಾದಂಬರಿಯನ್ನು ಬರೆದಾಗ ನಮ್ಮ ತಂದೆ ಇರಲಿಲ್ಲ. ನಮ್ಮ ಅಕ್ಕಂದರಿಗೆಲ್ಲ ಗೊತ್ತು. ನಮ್ಮ ಇಡೀ ಕುಟುಂಬಕ್ಕೆ ಗೊತ್ತು. ಆ ತೆಪ್ಪದ ಅಫಘಾಥದಲ್ಲಿ ಇನ್ನೂ ಅಷ್ಟೊಂದು ಕುಟುಂಬಗಳೂ ಇದ್ದವು. ಆ ಕಾದಂಬರಿಯನ್ನು ಓದಿ ಆ ಅಪಘಾತದಲ್ಲಿ ಸಾಕ್ಷಿಯಾಗಿದ್ದವರು, ಅದರೊಳಗೆ ನಮ್ಮಮ್ಮನೂ ತೀರ್ಕೊಂಡ್ರು, ಅಂತೆಲ್ಲ ಅವರ ಕತೆಗಳನ್ನು ಹೇಳಿದರು. ಎಷ್ಟೊಂದು ಕುಟುಂಬಗಳಿಗೆ ನಾನು ಆ ಕಾದಂಬರಿಯಿಂದಾಗಿ ಹತ್ತಿರನಾದೆ. ಅದು ಒಂದು ಅನುಭವ!